೦೦೦ ಸೂ ಸಕಲ ...{Loading}...
ಸೂ. ಸಕಲ ರಾಜ್ಯವನುಳಿದಿವರು ಕಾ
ಮ್ಯಕ ಮಹಾಕಾನನದೊಳಗೆ ಕೀ
ಚಕ ಕುಲಾಂತಕ ಕೆಡಹಿದನು ಕಿಮ್ಮೀರ ದಾನವನ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಸಮಸ್ತ ರಾಜ್ಯವನ್ನು ಬಿಟ್ಟು ಪಾಂಡವರು ಹೊರಟ ಮೇಲೆ ಭೀಮಸೇನನು ಕಾಮ್ಯಕವನದಲ್ಲಿ ಕಿಮ್ಮೀರ ರಾಕ್ಷಸನನ್ನು ಕೊಂದನು.
ಪಾಠಾನ್ತರ (ಕ.ಗ.ಪ)
- ವನ -> ಕಾನನ ಆಧಾರ : ‘ಕ’ ಪ್ರತಿ ಅರಣ್ಯ ಪರ್ವ, ಮೈ.ವಿ.ವಿ
ಮೂಲ ...{Loading}...
ಸೂ. ಸಕಲ ರಾಜ್ಯವನುಳಿದಿವರು ಕಾ
ಮ್ಯಕ ಮಹಾಕಾನನದೊಳಗೆ ಕೀ
ಚಕ ಕುಲಾಂತಕ ಕೆಡಹಿದನು ಕಿಮ್ಮೀರ ದಾನವನ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಗಂಗಾತೀರದಲಿ ಭೂ
ಪಾಲಕರು ಗುರು ಭೀಷ್ಮ ವಿದುರಾದ್ಯಖಿಳ ಬಾಂಧವರ
ಬೀಳುಗೊಟ್ಟರು ಗಜಪುರದ ಜನ
ಜಾಲವನು ಕಳುಹಿದರು ಗಂಗಾ
ಕೂಲದುತ್ತರ ಭಾಗದಲಿ ಮಾಡಿದರು ವಿಶ್ರಮವ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ರಾಜನಾದ ಜನಮೇಜಯನೆ ಕೇಳು. ಗಂಗೆಯ ತೀರದಲ್ಲಿ ಪಾಂಡವರು ಭೀಷ್ಮ, ದ್ರೋಣ, ವಿದುರಾದಿಗಳನ್ನು, ಬಂಧು ಬಾಂಧವರನ್ನು ಬೀಳ್ಗೊಟ್ಟು, ಹಸ್ತಿನಾವತಿಯ ಪ್ರಜೆಗಳನ್ನು ಕಳುಹಿಸಿ ನದಿಯ ಉತ್ತರ ಭಾಗದಲ್ಲಿ ನಿಂತರು’.
ಪಾಠಾನ್ತರ (ಕ.ಗ.ಪ)
- ವಿಕ್ರಮನ -> ವಿಶ್ರಮವ ಎಂದು ತಿದ್ದಿದೆ.
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಗಂಗಾತೀರದಲಿ ಭೂ
ಪಾಲಕರು ಗುರು ಭೀಷ್ಮ ವಿದುರಾದ್ಯಖಿಳ ಬಾಂಧವರ
ಬೀಳುಗೊಟ್ಟರು ಗಜಪುರದ ಜನ
ಜಾಲವನು ಕಳುಹಿದರು ಗಂಗಾ
ಕೂಲದುತ್ತರ ಭಾಗದಲಿ ಮಾಡಿದರು ವಿಶ್ರಮವ ॥1॥
೦೦೨ ನಿಲಿಸೆ ನಿಲ್ಲದೆ ...{Loading}...
ನಿಲಿಸೆ ನಿಲ್ಲದೆ ಬಂದರರಸನ
ಬಳಿಯಲಗ್ಗದ ಮಂಡಲೇಶ್ವರ
ರೊಲಿದು ಸಾಕಿದ ರಾಜಪುತ್ರರು ಹಲವು ಮನ್ನಣೆಯ
ಬಲುಭಟರು ಬಾಹತ್ತರದ ನಿ
ಶ್ಚಲ ನಿಯೋಗಿಗಳಾಶ್ರಮಿಗಳ
ಗ್ಗಳೆಯ ವಿಪ್ರಸ್ತೋಮ ಬಂದುದು ಕೋಟಿ ಸಂಖ್ಯೆಯಲಿ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬರಬೇಡಿ ಎಂದು ನಿಲ್ಲಿಸಿದರೂ ನಿಲ್ಲದೆ, ಅರಸನ ಬಳಿಯಲ್ಲಿ ಶ್ರೇಷ್ಠ ಮಂಡಲೇಶ್ವರರೂ, ಪ್ರೀತಿಯಿಂದ ಸಲಹಿದ ರಾಜಪುತ್ರರೂ, ಗೌರವವುಳ್ಳ ಭಟರುಗಳೂ, ಎಪ್ಪತ್ತೆರಡು ನಿಯೋಗಿಗಳು, ಮುನಿಗಳು, ಶ್ರೇಷ್ಠರಾದ ಬ್ರಾಹ್ಮಣರೂ ಅಧಿಕ ಸಂಖ್ಯೆಯಲ್ಲಿ ಬಂದರು.
ಮೂಲ ...{Loading}...
ನಿಲಿಸೆ ನಿಲ್ಲದೆ ಬಂದರರಸನ
ಬಳಿಯಲಗ್ಗದ ಮಂಡಲೇಶ್ವರ
ರೊಲಿದು ಸಾಕಿದ ರಾಜಪುತ್ರರು ಹಲವು ಮನ್ನಣೆಯ
ಬಲುಭಟರು ಬಾಹತ್ತರದ ನಿ
ಶ್ಚಲ ನಿಯೋಗಿಗಳಾಶ್ರಮಿಗಳ
ಗ್ಗಳೆಯ ವಿಪ್ರಸ್ತೋಮ ಬಂದುದು ಕೋಟಿ ಸಂಖ್ಯೆಯಲಿ ॥2॥
೦೦೩ ತಿರುಗಿ ಕಣ್ಡನು ...{Loading}...
ತಿರುಗಿ ಕಂಡನು ಭೂಮಿ ಭಾರದ
ನೆರವಿಯನು ಗಲ್ಲದಲಿ ಕರವಿ
ಟ್ಟರಸ ತಲೆದೂಗಿದನು ಸುಯ್ದನು ಬೈದು ದುಷ್ಕೃತವ
ಧರಣಿ ಸೇರಿದುದಹಿತರಿಗೆ ಕರಿ
ತುರಗ ರಥವೆಮಗಿಲ್ಲ ವಿಪಿನದ
ಪರಿಭವಣೆಗಿವರೇಕೆ ಬೆಸಗೊಳು ಭೀಮ ನೀನೆಂದ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಸಂಖ್ಯವಾದ ಜನಜಾಲವನ್ನು ಧರ್ಮರಾಯನು ನೋಡಿ ಗಲ್ಲಕ್ಕೆ ಕೈಯಿಟ್ಟು, ತಲೆದೂಗಿದನು. ನಿಟ್ಟುಸಿರು ಬಿಡುತ್ತಾ, ತನ್ನ ದುರ್ವಿಧಿಯನ್ನು ಹಳಿದನು. ಶತ್ರುಗಳಿಗೆ ಭೂಮಿ ಸೇರಿತು. ಆನೆ ಕುದುರೆ ರಥಗಳೂ ನಮಗಿಲ್ಲವಾಯಿತು. ಕಾಡಿನ ಅಲೆದಾಟವನ್ನು ಅನುಭವಿಸಲು ಇವರೇಕೆ ಬಂದರು ? ಕೇಳು ಎಂದು ಭೀಮನಿಗೆ ಸೂಚಿಸಿದನು.
ಪದಾರ್ಥ (ಕ.ಗ.ಪ)
ಪರಿಭವಣೆ-ಅಲೆದಾಟ
ಮೂಲ ...{Loading}...
ತಿರುಗಿ ಕಂಡನು ಭೂಮಿ ಭಾರದ
ನೆರವಿಯನು ಗಲ್ಲದಲಿ ಕರವಿ
ಟ್ಟರಸ ತಲೆದೂಗಿದನು ಸುಯ್ದನು ಬೈದು ದುಷ್ಕೃತವ
ಧರಣಿ ಸೇರಿದುದಹಿತರಿಗೆ ಕರಿ
ತುರಗ ರಥವೆಮಗಿಲ್ಲ ವಿಪಿನದ
ಪರಿಭವಣೆಗಿವರೇಕೆ ಬೆಸಗೊಳು ಭೀಮ ನೀನೆಂದ ॥3॥
೦೦೪ ನಿಲ್ಲಿರೈ ದ್ವಿಜ ...{Loading}...
ನಿಲ್ಲಿರೈ ದ್ವಿಜ ನಿಕರ ಕಳುಹಿಸಿ
ಕೊಳ್ಳಿರೈ ಪುರವರ್ಗ ನೇಮವ
ಕೊಳ್ಳಿರೈ ಪರಿವಾರ ಮಕ್ಕಳತಂದೆ ಮೊದಲಾಗಿ
ಎಲ್ಲಿ ಮೆಳೆ ಮರಗಾಡು ಪಲ್ಲವ
ಫುಲ್ಲಫಲ ಪಾನೀಯ ಪೂರಿತ
ವಲ್ಲಿ ರಾಯನ ಸೆಜ್ಜೆಯರಮನೆಯೆಂದನಾ ಭೀಮ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಬ್ರಾಹ್ಮಣರೇ ನಿಲ್ಲಿ, ಪಟ್ಟಣದ ಜನಗಳು ಬೀಳುಕೊಳ್ಳಿ, ಮಕ್ಕಳ ತಂದೆಯಂದಿರು ಮೊದಲಾದವರು ಪರಿವಾರ ಸಹಿತ ಹಿಂದಿರುಗಿ. ಎಲ್ಲಿ ಬಿದಿರುಮೆಳೆ, ಚಿಗುರಿದ, ಅರಳಿದ, ಹೂಬಿಟ್ಟ ಮರಗಳ ಕಾಡು, ನೀರಿನಿಂದ ತುಂಬಿದ ಸರೋವರಗಳಿರುವುವೋ ಅಲ್ಲಿಯೇ ಧರ್ಮರಾಯನ ಅಂತಃಪುರ, ಅರಮನೆ ಎಂದು ಭೀಮ ಹೇಳಿದ.
ಪದಾರ್ಥ (ಕ.ಗ.ಪ)
ಬಾಹತ್ತರ-ಎಪ್ಪತ್ತೆರಡು
ಮೂಲ ...{Loading}...
ನಿಲ್ಲಿರೈ ದ್ವಿಜ ನಿಕರ ಕಳುಹಿಸಿ
ಕೊಳ್ಳಿರೈ ಪುರವರ್ಗ ನೇಮವ
ಕೊಳ್ಳಿರೈ ಪರಿವಾರ ಮಕ್ಕಳತಂದೆ ಮೊದಲಾಗಿ
ಎಲ್ಲಿ ಮೆಳೆ ಮರಗಾಡು ಪಲ್ಲವ
ಫುಲ್ಲಫಲ ಪಾನೀಯ ಪೂರಿತ
ವಲ್ಲಿ ರಾಯನ ಸೆಜ್ಜೆಯರಮನೆಯೆಂದನಾ ಭೀಮ ॥4॥
೦೦೫ ಅವನಿಪತಿ ಚಿತ್ತವಿಸು ...{Loading}...
ಅವನಿಪತಿ ಚಿತ್ತವಿಸು ಬಹಳಾ
ರ್ಣವವ ಹೊಗು ಹಿಮಗಿರಿಯಲಿರು ಭೂ
ವಿವರ ಗತಿಯಲಿ ಗಮಿಸು ಗಾಹಿಸು ಗಹನ ಗಹ್ವರವ
ಎವಗೆ ನೀನೇ ಜೀವ ನೀನೇ
ವಿವಿಧ ಧನ ಗತಿ ನೀನೆ ಮತಿ ನೀ
ನವಗಡಿಸ ಬೇಡಕಟ ಕೃಪೆ ಮಾಡೆಂದುದಖಿಳಜನ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ದೊರೆಯೇ, ಲಾಲಿಸಬೇಕು. ನೀನು ದೊಡ್ಡ ಸಾಗರವನ್ನು ಹೊಕ್ಕರೂ, ಹಿಮಾಲಯಕ್ಕೆ ಹೋದರೂ, ಭೂಮಿಯ ಯಾವ ಕಡೆ ಹೋದರೂ, ಘೋರವಾದ ಗುಹೆಗಳನ್ನು ಹೊಕ್ಕರೂ ನೀನೇ ನಮಗೆ ಜೀವ, ನೀನೇ ನಮಗೆ ಸಂಪತ್ತು. ನೀನೇ ಗತಿ, ನೀನೇ ಮತಿ. ನೀನು ನಮ್ಮನ್ನು ವಿರೋಧಿಸಬೇಡ ಕೃಪೆಮಾಡು’ ಎಂದು ಎಲ್ಲರೂ ವಿನಂತಿಸಿದರು.
ಪದಾರ್ಥ (ಕ.ಗ.ಪ)
ಗಹ್ವರ-ಅರಣ್ಯ, ಗುಹೆ
ಮೂಲ ...{Loading}...
ಅವನಿಪತಿ ಚಿತ್ತವಿಸು ಬಹಳಾ
ರ್ಣವವ ಹೊಗು ಹಿಮಗಿರಿಯಲಿರು ಭೂ
ವಿವರ ಗತಿಯಲಿ ಗಮಿಸು ಗಾಹಿಸು ಗಹನ ಗಹ್ವರವ
ಎವಗೆ ನೀನೇ ಜೀವ ನೀನೇ
ವಿವಿಧ ಧನ ಗತಿ ನೀನೆ ಮತಿ ನೀ
ನವಗಡಿಸ ಬೇಡಕಟ ಕೃಪೆ ಮಾಡೆಂದುದಖಿಳಜನ ॥5॥
೦೦೬ ತುಮ್ಬಿದನು ಕಮ್ಬನಿಯನಕಟ ...{Loading}...
ತುಂಬಿದನು ಕಂಬನಿಯನಕಟ ವಿ
ಡಂಬಿಸಿತೆ ವಿಧಿಯೆನ್ನನಿನಿಬರ
ನಂಬಿಸುವ ಪರಿಯೆಂತು ವಸನಗ್ರಾಸವಾಸದಲಿ
ತುಂಬಿ ಸಿರಿಗೆಡಹಿಯೊಳಲಕುಮಿಯ
ಮುಂಬಿಗನೊಳಪದೆಸೆಯ ಕುಂತದ
ಚುಂಬಿಗನೊಳೇನುಂಟು ಫಲವೆಂದರಸ ಬಿಸುಸುಯ್ದ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನು ಕಣ್ಣು ನೀರು ತುಂಬಿಕೊಂಡನು. ನನ್ನನ್ನು ವಿಧಿಯೂ ಈ ರೀತಿ ಅಪಹಾಸ್ಯ ಮಾಡಿತೆ. ಇನ್ನು ಇವರೆಲ್ಲರನ್ನು ಬಟ್ಟೆ, ಊಟ, ವಸತಿಗಳಿಲ್ಲವೆಂದು ನಂಬಿಸುವ ಪರಿ ಹೇಗೆ. ಸಂಪತ್ತನ್ನು ಕಳೆದುಕೊಂಡು, ದರಿದ್ರ ಲಕ್ಷ್ಮಿಯನ್ನು ಬೆನ್ನಿಗೆ ಕಟ್ಟಿಕೊಂಡವನೂ ಅಪಖ್ಯಾತಿಯೆಂಬ ಭರ್ಜಿಯಿಂದ ಚುಚ್ಚಲ್ಪಟ್ಟವನೂ ಆದ ನನ್ನನ್ನು ಅನುಸರಿಸುವುದರಲ್ಲಿ ಏನು ಫಲವಿದೆ ಎಂದು ನಿಟ್ಟುಸಿರುಬಿಟ್ಟ.
ಪದಾರ್ಥ (ಕ.ಗ.ಪ)
ಕುಂತ-ಆಯುಧ, ಮುಂಬಿಗ-ಮುಂದಿರುವವನು, ಕುಂತ -ಭರ್ಜಿ
ಮೂಲ ...{Loading}...
ತುಂಬಿದನು ಕಂಬನಿಯನಕಟ ವಿ
ಡಂಬಿಸಿತೆ ವಿಧಿಯೆನ್ನನಿನಿಬರ
ನಂಬಿಸುವ ಪರಿಯೆಂತು ವಸನಗ್ರಾಸವಾಸದಲಿ
ತುಂಬಿ ಸಿರಿಗೆಡಹಿಯೊಳಲಕುಮಿಯ
ಮುಂಬಿಗನೊಳಪದೆಸೆಯ ಕುಂತದ
ಚುಂಬಿಗನೊಳೇನುಂಟು ಫಲವೆಂದರಸ ಬಿಸುಸುಯ್ದ ॥6॥
೦೦೭ ಖೇದವೇಕೆಲೆ ನೃಪತಿ ...{Loading}...
ಖೇದವೇಕೆಲೆ ನೃಪತಿ ಹರುಷ ವಿ
ಷಾದದಲಿ ಸುಖ ದುಃಖದಲಿ ನುತಿ
ವಾದ ಪರಿವಾದದಲಿ ಸಮಬುದ್ಧಿಗಳಲಾ ದ್ವಿಜರು
ಈ ದುರಂತದ ಚಿಂತೆ ಬೇಡೆಲೆ
ದ್ವಾದಶಾತ್ಮನ ಭಜಿಸಿದರೆ ಭ
ಕ್ಷ್ಯಾದಿ ಬಹುವಿಧದನ್ನ ಸಿದ್ಧಿಪುದೆಂದನಾ ಧೌಮ್ಯ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಅರಸನೇ, ಯಾಕೆ ದುಃಖಿಸುವೆ ? ಬ್ರಾಹ್ಮಣರು ಸುಖ ದುಃಖಗಳಲ್ಲಿ, ಸ್ತುತಿನಿಂದೆಗಳಲ್ಲಿ ಸಮಚಿತ್ತವುಳ್ಳವರು. ಈ ದುರಂತಕ್ಕಾಗಿ ನೀನು ಚಿಂತಿಸಬೇಡ. ಸೂರ್ಯದೇವನನ್ನು ಪ್ರಾರ್ಥಿಸಿದರೆ ಬಹುವಿಧವಾದ ಭಕ್ಷ್ಯಾನ್ನಗಳು ದೊರೆಯುತ್ತವೆ’, ಎಂದು ಧೌಮ್ಯನು ಹೇಳಿದನು.
ಪದಾರ್ಥ (ಕ.ಗ.ಪ)
ದ್ವಾದಶಾತ್ಮ-ಸೂರ್ಯ
ಮೂಲ ...{Loading}...
ಖೇದವೇಕೆಲೆ ನೃಪತಿ ಹರುಷ ವಿ
ಷಾದದಲಿ ಸುಖ ದುಃಖದಲಿ ನುತಿ
ವಾದ ಪರಿವಾದದಲಿ ಸಮಬುದ್ಧಿಗಳಲಾ ದ್ವಿಜರು
ಈ ದುರಂತದ ಚಿಂತೆ ಬೇಡೆಲೆ
ದ್ವಾದಶಾತ್ಮನ ಭಜಿಸಿದರೆ ಭ
ಕ್ಷ್ಯಾದಿ ಬಹುವಿಧದನ್ನ ಸಿದ್ಧಿಪುದೆಂದನಾ ಧೌಮ್ಯ ॥7॥
೦೦೮ ಧರಣಿಪತಿ ಕೇಳ್ ...{Loading}...
ಧರಣಿಪತಿ ಕೇಳ್ ಧೌಮ್ಯ ವಚನಾಂ
ತರದೊಳಮರನದೀ ವಿಗಾಹನ
ಪರಮಪಾವನ ಕರಣನೀಕ್ಷಿಸಿ ತರಣಿಮಂಡಲವ
ಮುರುಹಿ ಮೂಲಾಧಾರ ಪವನನ
ನುರು ಸುಷುಮ್ನೆಗೆ ನೆಗಹಿ ನಿಚ್ಚಟ
ವರ ಸಮಾಧಿಯಲಿನನ ಮೆಚ್ಚಿಸಿದನು ಮಹೀಪಾಲ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯ ಅರಸನೇ ಕೇಳು, ಧೌಮ್ಯನು ಹೇಳಿದಂತೆ, ಧರ್ಮರಾಯನು ಗಂಗಾ ನದಿಯಲ್ಲಿ ಮುಳುಗಿ ಸ್ನಾನ ಮಾಡಿ ಪರಮಪಾವನ ಶರೀರನಾಗಿ ಸೂರ್ಯಮಂಡಲವನ್ನು ನೋಡುತ್ತಾ, ಮೂಲಾಧಾರದ ವಾಯುವನ್ನು ಸುಷುಮ್ನೆಯಲ್ಲಿ ನೆಲೆಗೊಳಿಸಿ, ನಿಶ್ಚಲನಾಗಿ ಸಮಾಧಿಸ್ಥಿತಿಯಲ್ಲಿ ಸೂರ್ಯನನ್ನು ಮೆಚ್ಚಿಸಿದನು.
ಪದಾರ್ಥ (ಕ.ಗ.ಪ)
ವಿಗಾಹನ-ನದಿಯಲ್ಲಿ ಮುಳುಗುವುದು (ಸ್ನಾನ ಮಾಡುವುದು)
ಟಿಪ್ಪನೀ (ಕ.ಗ.ಪ)
ಮೂಲಾಧಾರ: ಯೋಗಶಾಸ್ತ್ರದ ಪ್ರಕಾರ ದೇಹದಲ್ಲಿ ಇರುವ ಆರು ಚಕ್ರಗಳಲ್ಲಿ ಮೊದಲನೆಯದು. ( ಉಳಿದ ಐದು: ಸ್ವಾಧಿಷ್ಠಾನ, ಮಣಿಪೂರ, ಅನಾಹತ, ವಿಶುದ್ಧ, ಆಜ್ಞಾ)
ಸುಷುಮ್ನಾ : ಯೋಗಶಾಸ್ತ್ರದ ಪ್ರಕಾರ ದೇಹದ ಮೂರು ನಾಡಿಗಳಲ್ಲಿ ಒಂದು (ಉಳಿದೆರಡು : ಇಡಾ, ಪಿಂಗಳಾ)
ಮೂಲ ...{Loading}...
ಧರಣಿಪತಿ ಕೇಳ್ ಧೌಮ್ಯ ವಚನಾಂ
ತರದೊಳಮರನದೀ ವಿಗಾಹನ
ಪರಮಪಾವನ ಕರಣನೀಕ್ಷಿಸಿ ತರಣಿಮಂಡಲವ
ಮುರುಹಿ ಮೂಲಾಧಾರ ಪವನನ
ನುರು ಸುಷುಮ್ನೆಗೆ ನೆಗಹಿ ನಿಚ್ಚಟ
ವರ ಸಮಾಧಿಯಲಿನನ ಮೆಚ್ಚಿಸಿದನು ಮಹೀಪಾಲ ॥8॥
೦೦೯ ವರವ ಕೊಟ್ಟೆನು ...{Loading}...
ವರವ ಕೊಟ್ಟೆನು ನಿನಗೆ ಹೇಮದ
ಚರುಕವಿದೆ ವಿವಿಧಾನ್ನ ಪಾನೋ
ತ್ಕರದ ತವನಿಧಿ ನಿನ್ನ ವಧು ಬಾಣಸನ ಕರಣದಲಿ
ವಿರಚಿಸಲಿ ಬಳಿಕುಣಲಿ ಶತ ಸಾ
ವಿರವನಂತವು ನೀವು ಬಳಿಕಂ
ಬುರುಹಮುಖಿ ಮರುದಿವಸವೀ ಪರಿಯೆಂದನಾ ದ್ಯುಮಣಿ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿನಗೆ ವರವನ್ನು ಕೊಟ್ಟಿದ್ದೇನೆ ಇಗೋ ಈ ಸ್ವರ್ಣ ಪಾತ್ರೆಯಿದೆ. ಇದು ವಿವಿಧ ರೀತಿಯ ಅನ್ನಪಾನಗಳ ಅಕ್ಷಯ ಪಾತ್ರೆ. ನಿನ್ನ ಹೆಂಡತಿ ಇದನ್ನು ಉಪಯೋಗಿಸಿ ಅಡುಗೆಯನ್ನು ಸಿದ್ಧಗೊಳಿಸಲಿ. ಬಳಿಕ ಲಕ್ಷಾಧಿಕ ಸಂಖ್ಯೆಯ ಜನರು ಊಟಮಾಡಲಿ ಆ ನಂತರ ನೀವು ಅದರ ನಂತರ ದ್ರೌಪದಿ ಊಟ ಮಾಡಲಿ. ಪ್ರತಿದಿನವೂ ಇದೇ ಕ್ರಮವೆಂದು ಸೂರ್ಯ ಹೇಳಿದ.
ಪದಾರ್ಥ (ಕ.ಗ.ಪ)
ಚರುಕ-ಪಾತ್ರೆ
ತವನಿಧಿ - ಅಕ್ಷಯ ಪಾತ್ರೆ
ಟಿಪ್ಪನೀ (ಕ.ಗ.ಪ)
ಅಕ್ಷಯಪಾತ್ರೆ - ಇದೊಂದು ತಾಮ್ರದ ಪಾತ್ರೆ, ‘‘ತಾಮ್ರಸ್ಯ ಪಿಠರಂ ಪಾತ್ರಂ ಮಯಾ ದತ್ರಾ ನರಾಧಿಪ.’’ ಎಂದು ಸೂರ್ಯನೇ ಬಂದು ಧರ್ಮರಾಯನಿಗೆ ಕೊಟ್ಟದ್ದು. ಅರಣ್ಯಪರ್ವದಲ್ಲಿ ಬರುವ ಈ ಅಕ್ಷಯ ಪಾತ್ರೆಯ ಪ್ರಸಂಗವು ಮೂಲಭಾರತದಲ್ಲಿ ಇಲ್ಲವೆಂದೂ ಎಲ್ಲಿಂದಲೋ ಬಂದು ಸೇರಿಕೊಂಡಿದೆಯೆಂದೂ ಹೇಳುತ್ತಾರೆ. ಈ ಭಾಗ ಪ್ರಕ್ಷೇಪ ಎನ್ನಲು ಹಲವಾರು ಇತರ ಆಧಾರಗಳಿವೆ. ವನಪರ್ವದ ಹಲವಾರು ಕಡೆಗಳಲ್ಲಿ ಕಾಡಿನ ಆಹಾರ ಮುಗಿಯುತ್ತಾ ಬಂದದ್ದರಿಂದ ಪಾಂಡವರು ಜಾಗ ಬದಲಾಯಿಸಬೇಕಾಯಿತು ಎಂಬ ವಿವರಣೆ ಇದೆ. ಆಹಾರಕ್ಕೆಂದು ಪಾಂಡವರು ಬೇಟೆಗೆ ಹೋದ ಪ್ರಸಂಗಗಳೂ ಇವೆ. ಒಂದು ಕಡೆಯಂತೂ ಧರ್ಮರಾಯನ ಕನಸಿನಲ್ಲಿ ಆ ಕಾಡಿನ ಪ್ರಾಣಿಗಳೇ ಬಂದು ತಮ್ಮ ವಂಶ ಕ್ಷೀಣಿಸುತ್ತಿದೆಯೆಂದೂ ಅದನ್ನು ಕೊನೆಗಾಣಿಸಬಾರದೆಂದು ಬೇಡಿಕೊಂಡವು ಎಂಬ ಮಾತಿದೆ. ಆದ್ದರಿಂದ ಅಕ್ಷಯಪಾತ್ರೆಯದು ಒಂದು ಸುಂದರ ಕವಿ ಕಲ್ಪನೆಯೆಂದೂ ಈಚೆಗೆ ಮಹಾಭಾರತಕ್ಕೆ ಸೇರಿರಬಹುದೆಂದೂ ಊಹಿಸಲಾಗಿದೆ. ಹಾಗೆಯೇ ದುರ್ವಾಸಾತಿಥ್ಯವೂ ಪ್ರಕ್ಷೇಪ ಎಂದು ಹೇಳುತ್ತಾರೆ.
ಈಗ ಕಥಾ ಭಾಗಕ್ಕೆ ಬರೋಣ. ವೈಭವದಿಂದ ಬದುಕಿ ಸಾವಿರಾರು ಜನಕ್ಕೆ ಅನ್ನದಾನ ಮಾಡುತ್ತಿದ್ದ ಧರ್ಮರಾಯನು ಎಲ್ಲವನ್ನೂ ಜೂಜಿನಲ್ಲಿ ಕಳೆದುಕೊಂಡು ಕಾಡಿಗೆ ಹೋಗಬೇಕಾದ ಸ್ಥಿತಿ ಬಂದಿತು. ಕೆಲವರು ಪ್ರಜೆಗಳು ಅವನ ಹಿಂದೆಯೇ ಬಂದರು. ತಮಗೆ ಆಹಾರ ವಸತಿ ಪೂರೈಸಬೇಕಾಗಿಲ್ಲ. ನಮ್ಮ ಯೋಗ್ಷಕ್ಷೇಮವನ್ನು ನಾವು ನೋಡಿಕೊಂಡು ನಿನ್ನ ಬಳಿಯೇ ಇರುತ್ತೇವೆ ಎಂದರು. ಆದರೆ ಆ ಸಾಧು ಜನರಿಗೆ ಅನ್ನ ಒದಗಿಸುವ ಕೆಲಸ ತನ್ನದು, ಅದನ್ನು ಹೇಗೆ ಪೂರೈಸುವುದು? ಎಂಬ ಚಿಂತೆಯಿಂದ ಧೌಮ್ಯರ ಸಲಹೆ ಕೇಳಿದ. ಆಗ ಧೌಮ್ಯರು ಸೂರ್ಯೋಪಾಸನೆ ಮಾಡಿ ಅಕ್ಷಯ ಪಾತ್ರೆಯನ್ನು ಪಡೆಯುವಂತೆ ಸ್ರಚಿಸಿದರು. ಅವರ ಸಲಹೆಯಂತೆ ಧರ್ಮರಾಯನು ಗಂಗಾನದಿಯಲ್ಲಿ ನಿಂತು ಆಚಮನ ಮಾಡಿ ನಿಷ್ಠೆಯಿಂದ ಏಕಾಗ್ರಚಿತ್ರದಿಂದ, ಸೂರ್ಯನ ಅಷ್ಟೋತ್ತರ ಶತನಾಮಗಳನ್ನು ಜಪಿಸಿದ. ‘‘ತ್ವಂ ಭಾನೋ ಜಗತಶ್ಚಕ್ಷುಃ’’ ಎಂದು ಆರಂಭವಾಗುವ ಪ್ರಸಿದ್ಧ ಸೂರ್ಯಸ್ತುತಿಯ ಶ್ಲೋಕಗಳನ್ನು ಧರ್ಮರಾಯ ಹೇಳುತ್ತ ಸೂರ್ಯ ಪೂಜೆ ಮಾಡಿದ. ಸೂರ್ಯನು ತೃಪ್ತನಾಗಿ ತಾಮ್ರದ ಅಕ್ಷಯಪಾತ್ರೆಯನ್ನು ಕೊಟ್ಟ (ಇದನ್ನು ಕುಮಾರವ್ಯಾಸನು ಚಿನ್ನದ ಪಾತ್ರ ಎಂದಿದ್ದಾನೆ). ಇದನನು ಮಹಾನಸ (ಅಡಿಗೆಮನೆ)ದಲ್ಲಿ ಇಟ್ಟು ದ್ರೌಪದಿಯು ಪೂಜಿಸಬೇಕಾಗಿತ್ತು. ಬೆಳಗಿನಿಂದ ಸಂಜೆಯವರೆU ಅಂದರೆ ದ್ರೌಪದಿಯು ಸಂಜೆ ಊಟ ಮಾಡುವವರೆಗೆ ಈ ಪಾತ್ರೆಯಿಂದ ಅನ್ನ ಭಕ್ಷ್ಯ ಪೇಯ ಚೋಷ್ಯ ಫಲ ಮುಂತಾದ ಎಲ್ಲ ಬಗೆಯ ಆಹಾರವನ್ನೂ, ತರಕಾರಿಗಳನ್ನೂ ಅಕ್ಷಯವಾಗಿ ಪಡೆಬಯಬಹುದಿತ್ತು. ‘‘ಹನ್ನೆರಡು ವರ್ಷಗಳ ಕಾಲ ನಿಮಗೆ ಬೇಕಾದ ಚತುರ್ವಿದ ಆಹಾರವು ಯಥೇಚ್ಛವಾಗಿ ದೊರಕುವಂತಾಗಲಿ’’ ಎಂದು ಸ್ವಯಂ ಸೂರ್ಯನೇ ಹೇಳಿದ್ದ. ಅಷ್ಟೇ ಅಲ್ಲ, ‘‘ವನವಾಸ ಅಜ್ಞಾತನವಾಸಗಳ ನಂತರ ನಿನಗೆ ಮತ್ತೆ ರಾಜ್ಯವು ಪ್ರಾಪ್ತವಾಗುತ್ತದೆ’’ ಎಂದೂ ಹೇಳಿದ. ಇದನ್ನು ತಿಳಿದ ಕೌರವನು ದ್ರೌಪದಿಯ ಊಟವಾದ ನಂತರ ಅವಳ ಮನೆಗೆ ಹೋಗಿ ಆಹಾರವನ್ನು ಬೇಡುವಂತೆ ದುರ್ವಾಸನನ್ನು ಕಳಿಸಿದ್ದು, ಅನಂತರ ಶ್ರೀಕೃಷ್ಣನು ಆ ಪಾತ್ರೆಯಲ್ಲಿ ಆಹಾರ ಬರಿಸಿ ಪಾಂಡವರನ್ನು ಕಾಪಾಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ. ದುರ್ವಾಸಾತಿಥ್ಯ ಎಂಬ ಪ್ರಸಿದ್ಧ ಕಥಾಖಂಡವು ಈ ವಿಷಯವನ್ನು ವಿಸ್ತಾರವಾಗಿ ಚಿತ್ರಿಸಿದೆ.
ಮೂಲ ...{Loading}...
ವರವ ಕೊಟ್ಟೆನು ನಿನಗೆ ಹೇಮದ
ಚರುಕವಿದೆ ವಿವಿಧಾನ್ನ ಪಾನೋ
ತ್ಕರದ ತವನಿಧಿ ನಿನ್ನ ವಧು ಬಾಣಸನ ಕರಣದಲಿ
ವಿರಚಿಸಲಿ ಬಳಿಕುಣಲಿ ಶತ ಸಾ
ವಿರವನಂತವು ನೀವು ಬಳಿಕಂ
ಬುರುಹಮುಖಿ ಮರುದಿವಸವೀ ಪರಿಯೆಂದನಾ ದ್ಯುಮಣಿ ॥9॥
೦೧೦ ಭೂಮಿಪತಿ ಭುಲ್ಲವಿಸಿದನು ...{Loading}...
ಭೂಮಿಪತಿ ಭುಲ್ಲವಿಸಿದನು ನಿ
ಸ್ಸೀಮ ಸಂತೋಷದಲಿ ಸುಜನ
ಸ್ತೋಮ ರಕ್ಷಣಕಾದ ನಿರ್ವಾಹದ ನಿರೂಢಿಯಲಿ
ಆ ಮುನೀಂದ್ರಂಗೆರಗಿ ಬಳಿಕೀ
ಭಾಮಿನಿಯ ಕರೆದೀ ಹದನ ಸು
ಪ್ರೇಮದಿಂದರುಹಿದನು ತನ್ನ ಸಹೋದರವ್ರಜಕೆ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುಜನ ಸಮೂಹದ ರಕ್ಷಣೆಗಾಗಿ ಒದಗಿದ (ಈ ಭೋಜನ) ನಿರ್ವಹಣೆಯ ಕ್ರಮದಿಂದ ಅಪಾರ ಸಂತೋಷದಿಂದ, ಧರ್ಮರಾಯನು ಉಬ್ಬಿದನು. ಧೌಮ್ಯನಿಗೆ ವಂದಿಸಿ, ದ್ರೌಪದಿಯನ್ನು ಹಾಗೂ ತಮ್ಮಂದಿರನ್ನು ಹತ್ತಿರ ಕರೆದು ಈ ವಿಚಾರವನ್ನು ಪ್ರೀತಿಯಿಂದ ತಿಳಿಸಿದನು.
ಪದಾರ್ಥ (ಕ.ಗ.ಪ)
ಭುಲ್ಲವಿಸು-ಉಬ್ಬು, ಉತ್ಸಾಹಿಸು, ವ್ರಜ -ಸಮೂಹ , ನಿರೂಢಿ- ಕಾರ್ಯ,ಕೆಲಸ
ಮೂಲ ...{Loading}...
ಭೂಮಿಪತಿ ಭುಲ್ಲವಿಸಿದನು ನಿ
ಸ್ಸೀಮ ಸಂತೋಷದಲಿ ಸುಜನ
ಸ್ತೋಮ ರಕ್ಷಣಕಾದ ನಿರ್ವಾಹದ ನಿರೂಢಿಯಲಿ
ಆ ಮುನೀಂದ್ರಂಗೆರಗಿ ಬಳಿಕೀ
ಭಾಮಿನಿಯ ಕರೆದೀ ಹದನ ಸು
ಪ್ರೇಮದಿಂದರುಹಿದನು ತನ್ನ ಸಹೋದರವ್ರಜಕೆ ॥10॥
೦೧೧ ಇವರು ತಿರುಗಿದರಿತ್ತಲಡವಿಯ ...{Loading}...
ಇವರು ತಿರುಗಿದರಿತ್ತಲಡವಿಯ
ಭವಣಿಗೆಯ ಭಾರಾಂಕ ಭಾಷೆಯ
ಲವಿರಳಿತ ಜನಜಾಲ ಸಹಿತಾರಣ್ಯ ಮಾರ್ಗದಲಿ
ಅವನಿಪತಿ ಕೇಳತ್ತಲಾ ಕೌ
ರವನ ನಗರಿಗೆ ಪಾರಿಕಾಂಕ್ಷಿ
ಪ್ರವರನೊಬ್ಬನು ಬಂದು ಹೊಕ್ಕನು ರಾಜಮಂದಿರವ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೊಟ್ಟಮಾತಿಗೆ ಅನುಗುಣವಾಗಿ ಪಾಂಡವರು ತಮ್ಮ ಜೊತೆಗಿರುವ ಅಸಂಖ್ಯಾತ ಜನರೊಂದಿಗೆ ಅರಣ್ಯ ಮಾರ್ಗದಲ್ಲಿ ಪರಿಭ್ರಮಿಸಿ ತಿರುಗಾಡಿದರು. ಜನಮೇಜಯನೇ ಕೇಳು ಅತ್ತ ಕೌರವನ ನಗರಕ್ಕೆ ಮುನಿಶ್ರೇಷ್ಠನೊಬ್ಬನು ಬಂದು ಅರಮನೆಯನ್ನು ಪ್ರವೇಶಿಸಿದನು.
ಪದಾರ್ಥ (ಕ.ಗ.ಪ)
ಪಾರಿಕಾಂಕ್ಷಿ-ಮುನಿ , ಭವಣಿಗೆ -ಬವಣಿಗೆ , ತಿರುಗಾಟ, ಸಂಚಾರ
ಮೂಲ ...{Loading}...
ಇವರು ತಿರುಗಿದರಿತ್ತಲಡವಿಯ
ಭವಣಿಗೆಯ ಭಾರಾಂಕ ಭಾಷೆಯ
ಲವಿರಳಿತ ಜನಜಾಲ ಸಹಿತಾರಣ್ಯ ಮಾರ್ಗದಲಿ
ಅವನಿಪತಿ ಕೇಳತ್ತಲಾ ಕೌ
ರವನ ನಗರಿಗೆ ಪಾರಿಕಾಂಕ್ಷಿ
ಪ್ರವರನೊಬ್ಬನು ಬಂದು ಹೊಕ್ಕನು ರಾಜಮಂದಿರವ ॥11॥
೦೧೨ ಮುನಿಯ ಸತ್ಕರಿಸಿದನು ...{Loading}...
ಮುನಿಯ ಸತ್ಕರಿಸಿದನು ಕೌರವ
ಜನಪನಾ ಋಷಿಮುಖ್ಯನೀತನ
ವಿನಯ ರಚನೆಗೆ ಮೆಚ್ಚಿ ನುಡಿದನು ರಾಜಕಾರಿಯವ
ನಿನಗದೊಂದೇ ಕೊರತೆ ಪಾಂಡವ
ಜನಪರನು ಜೂಜಿನಲಿ ಸೋಲಿಸಿ
ಕನಲಿಸಿದೆಯದರಿಂದ ಬಲುಗೇಡಹುದು ನಿನಗೆಂದ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಮುನಿಯನ್ನು ಕೌರವನು ಸತ್ಕರಿಸಿದನು. ಆ ಋಷಿಯು ದುರ್ಯೋಧನನ ವಿನಯದ ನಡವಳಿಕೆಗೆ ಮೆಚ್ಚಿ ರಾಜಕಾರ್ಯವನ್ನು ನುಡಿಯುತ್ತಾ, ‘ಪಾಂಡವರನ್ನು ಜೂಜಿನಲ್ಲಿ ಸೋಲಿಸಿ ಸಂಕಟಕ್ಕೆ ಈಡು ಮಾಡಿರುವುದೊಂದೇ ನಿನಗೆ ಕೊರತೆ. ಇದರಿಂದ ನಿನಗೆ ತುಂಬಾ ತೊಂದರೆಯುಂಟಾಗುತ್ತದೆ’ ಎಂದು ಹೇಳಿದನು.
ಮೂಲ ...{Loading}...
ಮುನಿಯ ಸತ್ಕರಿಸಿದನು ಕೌರವ
ಜನಪನಾ ಋಷಿಮುಖ್ಯನೀತನ
ವಿನಯ ರಚನೆಗೆ ಮೆಚ್ಚಿ ನುಡಿದನು ರಾಜಕಾರಿಯವ
ನಿನಗದೊಂದೇ ಕೊರತೆ ಪಾಂಡವ
ಜನಪರನು ಜೂಜಿನಲಿ ಸೋಲಿಸಿ
ಕನಲಿಸಿದೆಯದರಿಂದ ಬಲುಗೇಡಹುದು ನಿನಗೆಂದ ॥12॥
೦೧೩ ಹೋದ ಕೃತಿಯನ್ತಿರಲಿ ...{Loading}...
ಹೋದ ಕೃತಿಯಂತಿರಲಿ ಸಾಕಿ
ನ್ನಾದರೆಯು ಕೌಂತೇಯರನು ಕರೆ
ದಾದರಸಿ ಕೊಡು ಧರೆಯನೆನೆ ಖೊಪ್ಪರಿಸಿ ಖಾತಿಯಲಿ
ಹೊಯ್ದು ತೊಡೆಯನು ಹಗೆಗೆ ಕೊಡುವೆನೆ
ಮೇದಿನಿಯನೆನೆ ರೋಷ ಶಿಖಿಯಲಿ
ಕಾದುದೀತನ ಹೃದಯ ಶಪಿಸಿದನಂದು ಮೈತ್ರೇಯ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಆದುದು ಆಗಿಹೋಯಿತು, ಇನ್ನು ಮುಂದಾದರೂ ಪಾಂಡವರನ್ನು ಕರೆಸಿ ಅವರನ್ನು ಆದರಿಸಿ ಭೂಮಿಯನ್ನು ಕೊಡು’ ಎಂದು ಹೇಳಲು, ಕೌರವನು ರೋಷದಿಂದ ಥಟ್ಟನೆ ಮೇಲಕ್ಕೆದ್ದು ತನ್ನ ತೊಡೆಯನ್ನು ತಟ್ಟಿ ‘ಭೂಮಿಯನ್ನು ಶತ್ರುವಿಗೆ ಕೊಡುವುದುಂಟೇ’ ಎನ್ನಲು ಮೈತ್ರೇಯನು ಸಿಟ್ಟಿನಿಂದ ಶಪಿಸಿದನು.
ಪದಾರ್ಥ (ಕ.ಗ.ಪ)
ಖೊಪ್ಪರಿಸಿ-ಜಿಗಿದು
ಟಿಪ್ಪನೀ (ಕ.ಗ.ಪ)
ಮೈತ್ರೇಯ ಶಾಪ - ಮೈತ್ರೇಯರು ಮಹಾತಪಸ್ವಿಗಳು. ‘ಪಾರಿಕಾಂಕ್ಷ ಪ್ರವರ’ ಎಂದು ಕುಮಾರವ್ಯಾಸ ಇವರನ್ನು ಪ್ರಶಂಶಿಸಿದ್ಧನೆ. ಮೈತ್ರೇಯರು ಧರ್ಮರಾಯನ ಆಸ್ಥಾನದಲ್ಲಿಯೂ ಸ್ವಲ್ಪಕಾಲ ಇದ್ದರು. ಕುಶಾರವ ಮತ್ತು ಮಿತ್ರೆ ಈ ದಂಪತಿಗಳ ಮಗ ಮೈತ್ರೇಯ. ವೇದವ್ಯಾಸರೊಂದಿಗೆ ಧರ್ಮಜಿಜ್ಞಾಸೆ ನಡೆಸಿದ ಪ್ರಚಂಡರೆಂದು ಅನುಶಾಸನ ಪರ್ವದಲ್ಲಿ ಹೇಳಲಾಗಿದೆ. ಅರಣ್ಯಪರ್ವದಲ್ಲಿ ಇವರ ಪ್ರವೇಶವಿದೆ. ಕಾಡಿನಲ್ಲಿರುವ ಪಾಂಡವರನ್ನು ಕೊಲ್ಲಬೇಕೆಂದು ಕೌರವ ದುಶ್ಯಾಸನ, ಕರ್ಣ, ಶಕುನಿ ಹೊರಟಾಗ ವೇದವ್ಯಾಸರೇ ಅಡ್ಡ ಬಂದು ಅದನ್ನು ತಪ್ಪಿಸಿ ‘‘ಮೈತ್ರೇಯರು ಬರುತ್ತಾರೆ, ಅವರ ಮಾತು ಕೇಳು’’ ಎಮದು ಧೃತರಾಷ್ಟ್ರನಿಗೆ ಹೇಳಿಹೋದರು.
ಮೈತ್ರೇಯರು ಧೃತರಾಷ್ಟ್ರನ ಬಳಿಗೆ ಬಂದಾಗ ಕೌರವನೂ ಅಲ್ಲಿಯೇ ಇದ್ದ. ಕೌರವನು ಮೋಸದ ಜೂಜಿನಲ್ಲಿ ಗೆದ್ದಿರುವುದರಿಂದ ಒಳ್ಳೆಯದಾಗುವುದಿಲ್ಲವೆಂದೂ, ಕೂಡಲೇ ಪಾಂಡವರನ್ನು ಹಿಂದಕ್ಕೆ ಕರೆಸಬೇಕೆಂದೂ ಕಾಮ್ಯಕ ವನದಲ್ಲಿರುವ ಪಾಂಡವರನ್ನು ತಾನು ಕಂಡು ಬಂದಿರುವುದಾಗಿಯೂ ಹೇಳಿದ ಮೈತ್ರೇಯರು ಈಗ ಸಂಧಿ ಮಾಡಿಕೊಳ್ಳದಿದ್ದರೆ ಮುಂದೆ ಕೌರವರಿಗೆ ಉಳಿಗಾಲವಿಲ್ಲ ಎಂಬ ಭವಿಷ್ಯ ವಚನವನ್ನು ಹೇಳಿದರು. ಆದರೆ ಆಶ್ಚರ್ಯವೆಂದರೆ ಮೈತ್ರೇಯರು ಅಷ್ಟು ದೀರ್ಘಕಾಲ ಮಾತಾಡಿದರೂ ಧೃತರಾಷ್ಟ್ರ ಬಾಯಿ ಬಿಡಲಿಲ್ಲ. ಕೌರವನ ಕಡೆಗೆ ತಿರುಗಿದರೆ ಅವನೂ ಕೂಡ ಮಾತಾಡದೆ ತನ್ನ ತೊಡೆಗಳನ್ನು ಜೋರಾಗಿ ಕುಟ್ಟಿಕೊಳ್ಳುತ್ತ, ಕಾಲಿನಿಂದ ನೆಲವನ್ನು ಧಟ್ಟಿಸುತ್ತ ತಿರಸ್ಕಾರ ಭಂಗಿಯಲ್ಲಿ ನಗುತ್ತ ಕುಳಿತಿದ್ದ. ಸಿಟ್ಟಿಗೆದ್ದ ಮೈತ್ರೇಯರು ವಿಧಿಯಿಂದ ಪ್ರೇರಿತರಾಗಿ ಹೀಗೆಂದು ಶಾಪ ಕೊಟ್ಟರು:
‘‘ಯಸ್ಮಾತ್ ತ್ವಂ ಮಾಮನಾದೃತ್ಯನೇಮಾಂವಾಚಂ ಚಿಕೀರ್ಷಸಿ
ತಸ್ಮಾದಸ್ಯಾಭಿಮಾನಸ್ಯ ಸದ್ಯಃ ಫಲಮವಾಪ್ನುಹಿ
ತ್ವದಭಿದ್ರೋಹ ಸಂಯುಕ್ತಂ ಯುದ್ದ ಮುತ್ಪತ್ಯಸ್ಯತೇ ಮಹತ್
ತತ್ರಭೀಮೋ ಗಧಾಘಾತೈಃ ತವೋರುಂ ಭೇತ್ಸ್ಯತೇ ಬಲೀ’’
ಅಯ್ಯಾ ‘‘ಕೌರವ, ನೀನು ನನ್ನನ್ನು ಅನಾದರಿಂದ ಕಂಡಿದ್ದು, ನನ್ನ ಮಾತನ್ನು ಕೇಳುತ್ತಿಲ್ಲ. ಇದರ ಫಲವನ್ನು ಅನುಭವಿಸು. ನಿನ್ನ ದ್ರೋಹದ ಕಾರಣದಿಂದ ಭಾರಿಯ ಸಮರವಾಗುತ್ತದೆ. ಅಲ್ಲಿ ಬಲಶಾಲಿಯಾದ ಭೀಮಸೇನನು ನಿನ್ನ ತೊಡೆಯನ್ನು ಮುರಿಯುತ್ತಾನೆ.’’
ತಪಸ್ವಿಗಳ ಸ್ವಭಾವ ತಿಳಿದಿದ್ದರೂ ಅವರನ್ನು ಅವಮರ್ಯಾದೆಯಿಂದ ಕಂಡ ಅವಿನೀತನಾದ ದುರ್ಯೋಧನ ತಾನಾಗಿ ಈ ಶಾಪ ತಂದುಕೊಂಡಿದ್ದಾನೆ. ‘ಮುನಿ’ ಎಂದ ಮೇಲೆ ಕೇಳಬೇಕೆ? ತಮ್ಮ ಬಗೆಗೆ ಕೆಟ್ಟದಾಗಿ ನಡೆದುಕೊಂಡವರ ಮೇಲೆ ಮುನಿದು ಶಾಪವಿತ್ತಿರುವುದು ಅವರ ಸ್ವಭಾವಕ್ಕೆ ಸಹಜವಾಗಿದೆ.
ಮೂಲ ...{Loading}...
ಹೋದ ಕೃತಿಯಂತಿರಲಿ ಸಾಕಿ
ನ್ನಾದರೆಯು ಕೌಂತೇಯರನು ಕರೆ
ದಾದರಸಿ ಕೊಡು ಧರೆಯನೆನೆ ಖೊಪ್ಪರಿಸಿ ಖಾತಿಯಲಿ
ಹೊಯ್ದು ತೊಡೆಯನು ಹಗೆಗೆ ಕೊಡುವೆನೆ
ಮೇದಿನಿಯನೆನೆ ರೋಷ ಶಿಖಿಯಲಿ
ಕಾದುದೀತನ ಹೃದಯ ಶಪಿಸಿದನಂದು ಮೈತ್ರೇಯ ॥13॥
೦೧೪ ತೊಡೆಗಳನು ಕಲಿಭೀಮ ...{Loading}...
ತೊಡೆಗಳನು ಕಲಿಭೀಮ ಬವರದೊ
ಳುಡಿದು ಕೆಡಹಲಿಯೆಂದು ಶಾಪವ
ಕೊಡಲು ಮುನಿಪನ ಸಂತವಿಟ್ಟನು ಬಂದು ಧೃತರಾಷ್ಟ್ರ
ತೊಡೆಗೆ ಬಂದುದು ತೋಟಿ ಸಾಕಿ
ನ್ನೊಡಬಡಿಸಿ ಫಲವಿಲ್ಲ ನಮ್ಮಯ
ನುಡಿಗೆ ಮರುಮಾತಿಲ್ಲೆನುತ ಮುನಿ ಸರಿದನಾಶ್ರಮಕೆ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಿನ್ನ ತೊಡೆಗಳನ್ನು ಭೀಮಸೇನ ಯುದ್ಧದಲ್ಲಿ ಪುಡಿ ಮಾಡಿ ಕೆಡವಲಿ’ ಎಂದು ಶಪಿಸಲು, ಧೃತರಾಷ್ಟ್ರ ಬಂದು ಸಮಾಧಾನ ಮಾಡಿದನು. ‘ತೊಡೆಗೆ ಆಪತ್ತು ಬಂದಾಯಿತು. ಇನ್ನು ಸಾಕು ನಮ್ಮನ್ನು ಒಪ್ಪಿಸಿ ಫಲವಿಲ್ಲ. ನಮ್ಮ ಮಾತಿಗೆ ಪ್ರತಿಯಿಲ್ಲ’ ಎಂದು ಹೇಳಿ ಮೈತ್ರೇಯನು ಆಶ್ರಮಕ್ಕೆ ಹಿಂದಿರುಗಿದನು.
ಪದಾರ್ಥ (ಕ.ಗ.ಪ)
ಬವರ-ಯುದ್ಧ, ತೋಟಿ-ಆಪತ್ತು
ಮೂಲ ...{Loading}...
ತೊಡೆಗಳನು ಕಲಿಭೀಮ ಬವರದೊ
ಳುಡಿದು ಕೆಡಹಲಿಯೆಂದು ಶಾಪವ
ಕೊಡಲು ಮುನಿಪನ ಸಂತವಿಟ್ಟನು ಬಂದು ಧೃತರಾಷ್ಟ್ರ
ತೊಡೆಗೆ ಬಂದುದು ತೋಟಿ ಸಾಕಿ
ನ್ನೊಡಬಡಿಸಿ ಫಲವಿಲ್ಲ ನಮ್ಮಯ
ನುಡಿಗೆ ಮರುಮಾತಿಲ್ಲೆನುತ ಮುನಿ ಸರಿದನಾಶ್ರಮಕೆ ॥14॥
೦೧೫ ಆ ಮಹಾಮುನಿ ...{Loading}...
ಆ ಮಹಾಮುನಿ ಶಾಪ ಭಯವನು
ಭೀಮಸೇನನ ಬಲುಹ ನೆನೆ ನೆನೆ
ದಾ ಮನಸ್ಸಿನ ಬೇಗೆಯಲಿ ಬೆದೆಬೆಂದು ಬೇಸರಲಿ
ಭೂಮಿಪತಿ ಕರೆಸಿದನು ವಿದುರನ
ನಾ ಮಹಾಜ್ಞಾನಿಯನು ಮುನಿಪನ
ತಾಮಸವನರುಹಿದೊಡೆ ಬಳಿಕಿಂತೆಂದನಾ ವಿದುರ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಮಹಾ ಮುನಿಯ ಶಾಪ ಭಯವನ್ನು, ಭೀಮಸೇನನ ಶಕ್ತಿಯನ್ನು ಧೃತರಾಷ್ಟ್ರನು ನೆನೆನೆನೆದು ಮನಸ್ಸಿನಲ್ಲಿ ನೊಂದುಕೊಂಡನು. ಮಹಾಜ್ಞಾನಿಯಾದ ವಿದುರನನ್ನು ಕರೆಸಿ, ಅವನಲ್ಲಿ ಮುನಿಶಾಪ ವಿಚಾರವನ್ನು ತಿಳುಹಲು, ವಿದುರನು ಹೀಗೆಂದನು.
ಪದಾರ್ಥ (ಕ.ಗ.ಪ)
É
ಮೂಲ ...{Loading}...
ಆ ಮಹಾಮುನಿ ಶಾಪ ಭಯವನು
ಭೀಮಸೇನನ ಬಲುಹ ನೆನೆ ನೆನೆ
ದಾ ಮನಸ್ಸಿನ ಬೇಗೆಯಲಿ ಬೆದೆಬೆಂದು ಬೇಸರಲಿ
ಭೂಮಿಪತಿ ಕರೆಸಿದನು ವಿದುರನ
ನಾ ಮಹಾಜ್ಞಾನಿಯನು ಮುನಿಪನ
ತಾಮಸವನರುಹಿದೊಡೆ ಬಳಿಕಿಂತೆಂದನಾ ವಿದುರ ॥15॥
೦೧೬ ತಪ್ಪದಿದು ನಿನ್ನಾತಗಳು ...{Loading}...
ತಪ್ಪದಿದು ನಿನ್ನಾತಗಳು ಭುಜ
ದರ್ಪ ತೀವ್ರ ಜ್ವರದ ವಿಕಳರು
ನೊಪ್ಪಿತಾದೆ ಸುಯೋಧನಾದ್ಯರು ಜನಿಸಲೀ ಧರೆಗೆ
ತಪ್ಪುವುದೆ ಋಷಿವಾಕ್ಯ ಸಂಧಿಯೊ
ಳಪ್ಪಿಕೊಳು ಪಾಂಡವರನಲ್ಲದ
ರಪ್ಪಿಕೊಂಬಳು ಮೃತ್ಯು ನಿನ್ನ ಕುಮಾರಕರನೆಂದ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಮೈತ್ರೇಯನ ಶಾಪವಾಕ್ಯ ತಪ್ಪುವುದಿಲ್ಲ. ನಿನ್ನವರು ಬಾಹುಬಲದ ಸೊಕ್ಕು ಮಿತಿ ಮೀರಿದ ಬುದ್ಧಗೇಡಿಗಳು. ದುರ್ಯೋಧನಾದಿಗಳು ಈ ಲೋಕಕ್ಕೆ ಹುಟ್ಟಿ ಬಂದದರಿಂದ ನೀನು ಹಗುರನಾದೆ. ನೀನು ಪಾಂಡವರನ್ನು ಸಂಧಾನದಿಂದ ಅಪ್ಪಿಕೊಂಡರೆ ಸರಿ, ಇಲ್ಲವಾದರೆ ನಿನ್ನ ಮಕ್ಕಳನ್ನು ಮೃತ್ಯುದೇವತೆಯೇ ಅಪ್ಪಕೊಳ್ಳುತ್ತಾಳೆ’ ಎಂದನು.
ಪದಾರ್ಥ (ಕ.ಗ.ಪ)
ನೊಪ್ಪಿತ-ಲಘು , ಹಗುರ
ಪಾಠಾನ್ತರ (ಕ.ಗ.ಪ)
ನಿನ್ನಾತಗಳ>ನಿನ್ನಾತಗಳು
ವಿಕಳರ>ವಿಕಳರು, ನೊಪ್ಪಿತಾದೆ>ನೊಪ್ಪಿತಾದ
ಮೂಲ ...{Loading}...
ತಪ್ಪದಿದು ನಿನ್ನಾತಗಳು ಭುಜ
ದರ್ಪ ತೀವ್ರ ಜ್ವರದ ವಿಕಳರು
ನೊಪ್ಪಿತಾದೆ ಸುಯೋಧನಾದ್ಯರು ಜನಿಸಲೀ ಧರೆಗೆ
ತಪ್ಪುವುದೆ ಋಷಿವಾಕ್ಯ ಸಂಧಿಯೊ
ಳಪ್ಪಿಕೊಳು ಪಾಂಡವರನಲ್ಲದ
ರಪ್ಪಿಕೊಂಬಳು ಮೃತ್ಯು ನಿನ್ನ ಕುಮಾರಕರನೆಂದ ॥16॥
೦೧೭ ಎನಲು ಕಿಡಿಕಿಡಿಯೋಗಿ ...{Loading}...
ಎನಲು ಕಿಡಿಕಿಡಿಯೋಗಿ ಕೌರವ
ಜನಪನೀತನ ಬೈದು ಕುಂತೀ
ತನುಜರಲಿ ಬಾಂಧವನಲಾ ಹೋಗವರ ಹೊರೆಗೆಂದು
ಮುನಿದು ಗರ್ಜಿಸೆ ಜೀಯ ಕರ ಲೇ
ಸೆನುತ ಮನದುಬ್ಬಿನಲಿ ಪಾಂಡವ
ಜನಪರಿಹ ಕಾಮ್ಯಕ ವನಾಂತರಕೈದಿದನು ವಿದುರ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿದುರನು ಹಾಗೆನ್ನಲು ಧೃತರಾಷ್ಟ್ರನು ಕಿಡಿಕಿಡಿಯಾಗಿ ‘ನೀನು ಕೌಂತೇಯರಿಗೆ ಬಂಧು ತಾನೇ ? ಅಲ್ಲಿಗೇ ಹೋಗು’ ಎಂದು ಸಿಟ್ಟಿನಿಂದ ವಿದುರನನ್ನು ಬೈದನು. ಅದಕ್ಕೆ ‘ಹಾಗೇ ಆಗಲಿ’ ಎಂದು ಸಂತೋಷದಿಂದಲೇ ವಿದುರನು ಪಾಂಡವರಿರುವ ಕಾಮ್ಯಕವನಕ್ಕೆ ಬಂದನು.
ಮೂಲ ...{Loading}...
ಎನಲು ಕಿಡಿಕಿಡಿಯೋಗಿ ಕೌರವ
ಜನಪನೀತನ ಬೈದು ಕುಂತೀ
ತನುಜರಲಿ ಬಾಂಧವನಲಾ ಹೋಗವರ ಹೊರೆಗೆಂದು
ಮುನಿದು ಗರ್ಜಿಸೆ ಜೀಯ ಕರ ಲೇ
ಸೆನುತ ಮನದುಬ್ಬಿನಲಿ ಪಾಂಡವ
ಜನಪರಿಹ ಕಾಮ್ಯಕ ವನಾಂತರಕೈದಿದನು ವಿದುರ ॥17॥
೦೧೮ ಇದಿರುಗೊಣ್ಡರು ಹಿರಿದು ...{Loading}...
ಇದಿರುಗೊಂಡರು ಹಿರಿದು ಮನ್ನಿಸಿ
ವಿದುರನನು ಕೊಂಡಾಡಿ ಗುರು ನೃಪ
ನದಿಜ ಧೃತರಾಷ್ಟ್ರಾದಿಗಳ ಸುಕ್ಷೇಮ ಕುಶಲಗಳ
ವಿದುರನಾಗಮನ ಪ್ರಪಂಚದ
ಹದನನೆಲ್ಲವ ಕೇಳಿದರು ಹೇ
ಳಿದನು ನಿಜ ವೃತ್ತಾಂತವನು ವಿದುರಂಗೆ ಯಮಸೂನು ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನು ವಿದುರನನ್ನು ಸ್ವಾಗತಿಸಿ, ಹಿರಿದಾಗಿ ಗೌರವಿಸಿ, ಅವನನ್ನು ಕೊಂಡಾಡಿ ದ್ರೋಣ, ದುರ್ಯೋಧನ, ಭೀಷ್ಮ, ಧೃತರಾಷ್ಟ್ರಾದಿಗಳ ಕುಶಲವನ್ನು ವಿಚಾರಿಸಿದನು. ವಿದುರನ ಆಗಮನದ ಸಂಗತಿಗಳೆಲ್ಲವನ್ನು ಕೇಳಿದನು ಮತ್ತು ಧರ್ಮರಾಯನು ತಮ್ಮ ವೃತ್ತಾಂತವೆಲ್ಲವನ್ನೂ ವಿದುರನಿಗೆ ಹೇಳಿದನು.
ಮೂಲ ...{Loading}...
ಇದಿರುಗೊಂಡರು ಹಿರಿದು ಮನ್ನಿಸಿ
ವಿದುರನನು ಕೊಂಡಾಡಿ ಗುರು ನೃಪ
ನದಿಜ ಧೃತರಾಷ್ಟ್ರಾದಿಗಳ ಸುಕ್ಷೇಮ ಕುಶಲಗಳ
ವಿದುರನಾಗಮನ ಪ್ರಪಂಚದ
ಹದನನೆಲ್ಲವ ಕೇಳಿದರು ಹೇ
ಳಿದನು ನಿಜ ವೃತ್ತಾಂತವನು ವಿದುರಂಗೆ ಯಮಸೂನು ॥18॥
೦೧೯ ಇತ್ತಲೀ ವಿದುರನ ...{Loading}...
ಇತ್ತಲೀ ವಿದುರನ ವಿಯೋಗದ
ಚಿತ್ತದಂತಸ್ತಾಪದಲಿ ನೃಪ
ಮತ್ತೆ ದೂತರ ಕಳುಹಿ ಕರೆಸಿದನಾತನನು ಪುರಕೆ
ಹೆತ್ತಮಕ್ಕಳ ಬಿಡು ಪೃಥಾಸುತ
ರತ್ತ ತಿರುಗೆನೆ ಖಾತಿಗೊಂಡೆನು
ಮತ್ತೆ ಮುನಿಯದಿರೆಂದು ವಿದುರನನಪ್ಪಿದನು ನೃಪತಿ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿದುರನು ಪಾಂಡವರ ಕಡೆಗೆ ಹೋದ ಮೇಲೆ ಧೃತರಾಷ್ಟ್ರನಿಗೆ ತುಂಬಾ ಬೇಸರವಾಯಿತು. ದೂತರನ್ನು ಕಳುಹಿಸಿ ಅವನನ್ನು ಮತ್ತೆ ಹಿಂದಕ್ಕೆ ಕರೆಸಿಕೊಂಡನು. ‘ಹೆತ್ತ ಮಕ್ಕಳನ್ನು ಬಿಟ್ಟು, ಕುಂತೀಪುತ್ರರ ಪರವಾಗಿರು’ ಎಂದಾಗ ಕೋಪಗೊಂಡೆನು, ನೀನು ಇನ್ನು ಪುನಃ ಮುನಿಯ ಬೇಡ ಎಂದು ವಿದುರನನ್ನು ಧೃತರಾಷ್ಟ್ರ ಆಲಿಂಗಿಸಿದನು.
ಮೂಲ ...{Loading}...
ಇತ್ತಲೀ ವಿದುರನ ವಿಯೋಗದ
ಚಿತ್ತದಂತಸ್ತಾಪದಲಿ ನೃಪ
ಮತ್ತೆ ದೂತರ ಕಳುಹಿ ಕರೆಸಿದನಾತನನು ಪುರಕೆ
ಹೆತ್ತಮಕ್ಕಳ ಬಿಡು ಪೃಥಾಸುತ
ರತ್ತ ತಿರುಗೆನೆ ಖಾತಿಗೊಂಡೆನು
ಮತ್ತೆ ಮುನಿಯದಿರೆಂದು ವಿದುರನನಪ್ಪಿದನು ನೃಪತಿ ॥19॥
೦೨೦ ಆವ ವನದಲಿ ...{Loading}...
ಆವ ವನದಲಿ ಪಾಂಡುಸುತರಿಗೆ
ತಾವು ನಿನಗೇನೆಂದರನಿಬರ
ನಾವ ವನದಲಿ ಕಂಡೆ ಕೂಡೆನಿತುಂಟು ಪರಿವಾರ
ಆವುದಭಿಮತ ಭೀಮಸೇನನ
ಭಾವವೇನು ಯುಧಿಷ್ಠಿರಾರ್ಜುನ
ರಾವ ಭಂಗಿಯಲಿದ್ದರೆಂದನು ನಗುತ ಧೃತರಾಷ್ಟ್ರ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಪಾಂಡುಸುತರು ಯಾವ ವನದಲ್ಲಿದ್ದಾರೆ ? ಅವರು ನಿನಗೆ ಏನು ಹೇಳಿದರು ? ಅವರೆಲ್ಲರನ್ನೂ ಯಾವ ಅರಣ್ಯದಲ್ಲಿ ಕಂಡೆ ? ಅವರೊಂದಿಗೆ ಎಷ್ಟು ಜನರಿದ್ದಾರೆ ? ಭೀಮಸೇನನ ಅಭಿಪ್ರಾಯವೇನು ? ಧರ್ಮರಾಯ ಅರ್ಜುನರ ಭಾವನೆಗಳು ಹೇಗಿವೆ ?’ ಎಂದು ಧೃತರಾಷ್ಟ್ರನು ನಗುತ್ತಲೇ ವಿಚಾರಿಸಿದನು.
ಮೂಲ ...{Loading}...
ಆವ ವನದಲಿ ಪಾಂಡುಸುತರಿಗೆ
ತಾವು ನಿನಗೇನೆಂದರನಿಬರ
ನಾವ ವನದಲಿ ಕಂಡೆ ಕೂಡೆನಿತುಂಟು ಪರಿವಾರ
ಆವುದಭಿಮತ ಭೀಮಸೇನನ
ಭಾವವೇನು ಯುಧಿಷ್ಠಿರಾರ್ಜುನ
ರಾವ ಭಂಗಿಯಲಿದ್ದರೆಂದನು ನಗುತ ಧೃತರಾಷ್ಟ್ರ ॥20॥
೦೨೧ ಅರಸ ಕೇಳ್ ...{Loading}...
ಅರಸ ಕೇಳ್ ಗಂಗಾ ನದಿಯನು
ತ್ತರಿಸಿದವರಿಗೆ ಕಮಲಮಿತ್ರನ
ಕರುಣವಾಯಿತು ಕನಕಪಾತ್ರೆಯೊಳಕ್ಷಯಾನ್ನದಲಿ
ಪರಿಕರದ ಪರುಟವಣೆಯಲಿ ಸಾ
ವಿರದ ಶತಸಂಖ್ಯಾತ ಧರಣೀ
ಸುರ ನಿಯೋಗಿಗಳಾಪ್ತಜನ ಸಹಿತೈದಿದರು ವನವ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಅರಸನೇ ಕೇಳು ಗಂಗಾನದಿಯನ್ನು ದಾಟಿದ ಮೇಲೆ ಅವರಿಗೆ ಸೂರ್ಯದೇವರ ಅನುಗ್ರಹದಿಂದ ಅಕ್ಷಯ ಪಾತ್ರೆ ದೊರಕಿತು. ನೂರು ಸಾವಿರದ ಸಂಖ್ಯೆಯ ಬ್ರಾಹ್ಮಣರು, ನಿಯೋಗಿಗಳೊಂದಿಗೆ ಆಪ್ತ ಜನರ ಸಹಿತ ಧರ್ಮರಾಯನು ವನ ಪ್ರವೇಶ ಮಾಡಿದನು.
ಪದಾರ್ಥ (ಕ.ಗ.ಪ)
ನಿಯೋಗಿಗಳು-ಅಧಿಕಾರಿಗಳು
ಮೂಲ ...{Loading}...
ಅರಸ ಕೇಳ್ ಗಂಗಾ ನದಿಯನು
ತ್ತರಿಸಿದವರಿಗೆ ಕಮಲಮಿತ್ರನ
ಕರುಣವಾಯಿತು ಕನಕಪಾತ್ರೆಯೊಳಕ್ಷಯಾನ್ನದಲಿ
ಪರಿಕರದ ಪರುಟವಣೆಯಲಿ ಸಾ
ವಿರದ ಶತಸಂಖ್ಯಾತ ಧರಣೀ
ಸುರ ನಿಯೋಗಿಗಳಾಪ್ತಜನ ಸಹಿತೈದಿದರು ವನವ ॥21॥
೦೨೨ ಜನಪ ಕೇಳ್ ...{Loading}...
ಜನಪ ಕೇಳ್ ಕಿಮ್ಮೀರನೆಂಬವ
ನನಿಮಿಷರಿಗುಬ್ಬಸದ ಖಳನಾ
ತನ ವಿಭಾಡಿಸಿ ಹೊಕ್ಕರವರಾರಣ್ಯ ಮಂದಿರವ
ದನುಜನೇ ಕಿಮ್ಮೀರನಾತನ
ನನಿಲಜನೊ ಫಲುಗುಣನೊ ಕೊಂದಾ
ತನು ಯುಧಿಷ್ಠಿರನೋ ಸವಿಸ್ತರವಾಗಿ ಹೇಳೆಂದ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೊರೆಯೆ, ಕೇಳು ಅನಂತರ ದೇವತೆಗಳಿಗೆ ಸಂಕಟ ನೀಡುತ್ತಿದ್ದ ಕಿಮ್ಮೀರನೆಂಬ ದಾನವನನ್ನು ಕೊಂದು ಅವರು ಅರಣ್ಯವನ್ನು ಹೊಕ್ಕರು ಎಂದು ವಿದುರ ಹೇಳಿದ. ಅದಕ್ಕೆ ಧೃತರಾಷ್ಟ್ರನು - ‘ಕಿಮ್ಮೀರನೆಂಬವನು ರಾಕ್ಷಸನೆ ? ಅವನನ್ನು ಕೊಂದವನು ಭೀಮನೋ, ಅರ್ಜುನನೋ, ಧರ್ಮಜನೋ - ವಿವರವಾಗಿ ಹೇಳೆಂದು ಕೇಳಿದ.
ಮೂಲ ...{Loading}...
ಜನಪ ಕೇಳ್ ಕಿಮ್ಮೀರನೆಂಬವ
ನನಿಮಿಷರಿಗುಬ್ಬಸದ ಖಳನಾ
ತನ ವಿಭಾಡಿಸಿ ಹೊಕ್ಕರವರಾರಣ್ಯ ಮಂದಿರವ
ದನುಜನೇ ಕಿಮ್ಮೀರನಾತನ
ನನಿಲಜನೊ ಫಲುಗುಣನೊ ಕೊಂದಾ
ತನು ಯುಧಿಷ್ಠಿರನೋ ಸವಿಸ್ತರವಾಗಿ ಹೇಳೆಂದ ॥22॥
೦೨೩ ಅರಸ ಕೇಳನ್ದೇಕಚಕ್ರದೊ ...{Loading}...
ಅರಸ ಕೇಳಂದೇಕಚಕ್ರದೊ
ಳೊರೆಸಿದನಲಾ ಭೀಮನಾತಗೆ
ಹಿರಿಯನೀ ಕಿಮ್ಮೀರ ಬಾಂಧವನಾ ಹಿಡಂಬಕಗೆ
ಧರಣಿಪಾಲನ ಸಪರಿವಾರದ
ಬರವ ಕಂಡನು ತನ್ನ ತಮ್ಮನ
ಹರಿಬವನು ಮರಳಿಚುವೆನೆನುತಿದಿರಾದನಮರಾರಿ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸ ಕೇಳು, ಹಿಂದೆ ಏಕಚಕ್ರನಗರದಲ್ಲಿ ಭೀಮನು ಕೊಂದ ಬಕಾಸುರನ ಅಣ್ಣನೇ ಇವನು. ಹಿಡಿಂಬಾಸುರನಿಗೆ ಬಂಧುವೆನಿಸಿದ ಕಿಮ್ಮೀರನೆಂಬ ರಾಕ್ಷಸನು, ಧರ್ಮರಾಯನು ಸಪರಿವಾರವಾಗಿ ಬರುವುದನ್ನು ಕಂಡು, ತಮ್ಮನಿಗಾದ ಅನ್ಯಾಯವನ್ನು ತೀರಿಸುತ್ತೇನೆಂದು ಅವರಿಗೆ ಎದುರಾದನು.
ಪದಾರ್ಥ (ಕ.ಗ.ಪ)
ಹರಿಬ - ಮುಯ್ಯಿ, ಸೇಡು
ಟಿಪ್ಪನೀ (ಕ.ಗ.ಪ)
ಕಿಮ್ಮೀರ (ಕಿರ್ಮೀರ) - ಕಿರ್ಮೀರನ ವಿಷಯ ಮಹಾಭಾರತದ ಅರಣ್ಯ ಪರ್ವದಲ್ಲಿ ಬರುತ್ತದೆ. ಇವನು ಹಿಡಿಂಬನ ನಚಿಟ. ಭೀಮನಿಂದ ಹತನಾದ ಬಕಾಸುರ ತಮ್ಮ. ಇವನಿಗೆ ಭೀಮನ ಮೇಲೆ ಕೋಪವಿತ್ತು. ಆದುದರಿಂದ ಕಾಮ್ಯಕವನಕ್ಕೆ ಪಾಂಡವರು ಬಂದಾಗ ಭೀಮನನ್ನು ಕೊಲ್ಲಲು ಮುನ್ನುಗ್ಗಿದ. ಇದು ಕುಮಾರವ್ಯಾಸನ ವರ್ಣನೆಯಾದರೆ ವ್ಯಾಸಭಾರತದ ಪಾಠ ಸ್ವಲ್ಪ ಭಿನ್ನವಾಗಿದೆ. ಪಾಂಡವರು ಜೂಜಿನಲ್ಲಿ ಸೋತ ಮೇಲೆ ಕಾಮ್ಯಕವನದಲ್ಲಿದ್ದರು. ಅರ್ಜುನನು ವ್ಯಾಸರ ಸಲಹೆಯಂತೆ ಪಾಶುಪತಾಸ್ತ್ರ ಸಂಪಾದನೆಗೆಂದು ಇಂದ್ರಕೀಲ ಪರ್ವತಕ್ಕೆ ಹೋಗಿದ್ದ. ಭೀಮನು ಬೇಟೆಗೆ ಹೋಗಿದ್ದ ಈ ಸಮಯವನ್ನು ಸಾಧಿಸಿ ಬಕಸೋದರ ಕಿಮ್ಮೀರನು ಪಾಂಡವರನ್ನು ತುರುಬಿಹೊತ್ತುಕೊಂಡು ಹೋಗುತ್ತಾನೆ. ಭೀಮನಿಗೆ ದಾರಿಯಲ್ಲಿ ದುಶ್ಯಕುನವಾಗಿದ್ದರಿಂದ ಅವನು ಹಿಂದಿರುತ್ತಾನೆ. ದಾರಿಯಲ್ಲಿ ಕಿಮ್ಮೀರನನ್ನು ಸಂಧಿಸುತ್ತಾನೆ. ಅವನೊಂದಿಗೆ ಹೋರಾಡಿ ರಾಕ್ಷಸನನ್ನು ಕೊಲ್ಲುತ್ತಾನೆ. ಇನ್ನೊಂದು ಕಡೆ ವನಪರ್ವದಲ್ಲಿ ಪಾಂಡವರೆಲ್ಲ ಒಟ್ಟಿಗೆ ಇದ್ದಾಗ ಅರ್ಧರಾತ್ರಿಯಲ್ಲಿ ಕಿಮ್ಮೀರನು ಪಾಂಡವರ ಮೇಲೆ ಬಿದ್ದನೆಂದು ಹೇಳಲಾಗಿದೆ.
ಕಿಮ್ಮೀರ ಮಹಾಭಯಂಕರ ವ್ಯಕ್ತಿ. ಅವನಿಗೆ ಎಂಟು ದಾಡೆಗಳು. ವರ್ಷಾಕಾಲದ ಮೋಡಕ್ಕೆ ವ್ಯಾಸರು ಅವನನ್ನು ಹೋಲಿಸುತ್ತಾರೆ. ಮಹಾಬಲಿಷ್ಠರಾದ ಕಿಮ್ಮೀರನನ್ನು ಭೀಮಸೇನನು ಕೊಂದನೆಂಬ ಸಂಗತಿ ತಿಳಿದು ಧೃತರಾಷ್ಟ್ರಾದಿಗಳಿಗೆ ತಳಮಳವಾಗುತ್ತದೆ.
ಮೂಲ ...{Loading}...
ಅರಸ ಕೇಳಂದೇಕಚಕ್ರದೊ
ಳೊರೆಸಿದನಲಾ ಭೀಮನಾತಗೆ
ಹಿರಿಯನೀ ಕಿಮ್ಮೀರ ಬಾಂಧವನಾ ಹಿಡಂಬಕಗೆ
ಧರಣಿಪಾಲನ ಸಪರಿವಾರದ
ಬರವ ಕಂಡನು ತನ್ನ ತಮ್ಮನ
ಹರಿಬವನು ಮರಳಿಚುವೆನೆನುತಿದಿರಾದನಮರಾರಿ ॥23॥
೦೨೪ ಇವರು ಮೂರೇ ...{Loading}...
ಇವರು ಮೂರೇ ದಿನಕೆ ಕಾಮ್ಯಕ
ವನ ಮಹಾಶ್ರಮಕಾಗಿ ಬರೆ ದಾ
ನವನು ದಾರಿಯ ಕಟ್ಟಿ ನಿಂದನು ಕೈಯ ಮುಷ್ಟಿಯಲಿ
ಅವನ ಕಂಗಳ ಕೆಂಪಿನಲಿ ಮೇ
ಣವನ ದಾಡೆಯ ಬೆಳಗಿನಲಿ ಖಳ
ನವಯವವ ಕಂಡಳುಕಿ ನಿಂದರು ಮುಂಗುಡಿಯ ಭಟರು ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರು ಕಾಮ್ಯಕವನಕ್ಕಾಗಿ ಮೂರೇ ದಿವಸಗಳಲ್ಲಿ ಬರಲು, ಆ ರಾಕ್ಷಸನು ದಾರಿಯನ್ನು ಅಡ್ಡಗಟ್ಟಿದನು. ಕೆಂಪು ಕಣ್ಣುಗಳು, ಕೋರೆದಾಡೆಗಳ ಕಾಂತಿಯಲ್ಲಿ ಅವನ ಅಂಗಾಂಗಗಳನ್ನು ಕಂಡು ಮುಂದೆ ಇದ್ದ ಭಟರು ಭಯಭೀತರಾದರು.
ಪದಾರ್ಥ (ಕ.ಗ.ಪ)
ಮುಂಗುಡಿಯ-ಮುಂದೆ ಇದ್ದ
ಮೂಲ ...{Loading}...
ಇವರು ಮೂರೇ ದಿನಕೆ ಕಾಮ್ಯಕ
ವನ ಮಹಾಶ್ರಮಕಾಗಿ ಬರೆ ದಾ
ನವನು ದಾರಿಯ ಕಟ್ಟಿ ನಿಂದನು ಕೈಯ ಮುಷ್ಟಿಯಲಿ
ಅವನ ಕಂಗಳ ಕೆಂಪಿನಲಿ ಮೇ
ಣವನ ದಾಡೆಯ ಬೆಳಗಿನಲಿ ಖಳ
ನವಯವವ ಕಂಡಳುಕಿ ನಿಂದರು ಮುಂಗುಡಿಯ ಭಟರು ॥24॥
೦೨೫ ಮುನ್ದೆ ಘೋರಾರಣ್ಯವಿದೆ ...{Loading}...
ಮುಂದೆ ಘೋರಾರಣ್ಯವಿದೆ ಸುರ
ಬಂದಿಕಾರನ ಕಾಹಿನಲಿ ಕಾ
ಳಿಂದಿಯುದರದ ಮೊಬ್ಬಿನಂತಿದೆ ತೀವ್ರತರ ತಿಮಿರ
ಇಂದಿನಿರುಳಲಿ ಬದುಕಿದೊಡೆ ಸಾ
ವೆಂದಿಗೆಮಗಿಲ್ಲೆನುತ ಭಯದಲಿ
ನಿಂದುದಲ್ಲಿಯದಲ್ಲಿ ಪಾಂಡುಕುಮಾರ ಪರಿವಾರ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಈ ರಾಕ್ಷಸನ ರಕ್ಷೆಯಲ್ಲಿ ಮುಂದೆ ಘೋರವಾದ ಅಡವಿಯಿದೆ. ಕಾಳಿಂದಿಯ ಗರ್ಭದ ಕತ್ತಲೆಯಂತೆ ತೀವ್ರವಾದ ಕತ್ತಲೆಯಿದೆ. ಈ ರಾತ್ರಿಯಲ್ಲಿ ನಾವು ಬದುಕಿ ಉಳಿದರೆ ಮುಂದೆ ಸಾವೇ ಬರಲಾರದು’. ಎಂದು ಭಯದಿಂದ ಪಾಂಡವ ಪರಿವಾರವು ಅಲ್ಲೇ ನಿಂತಿತು.
ಮೂಲ ...{Loading}...
ಮುಂದೆ ಘೋರಾರಣ್ಯವಿದೆ ಸುರ
ಬಂದಿಕಾರನ ಕಾಹಿನಲಿ ಕಾ
ಳಿಂದಿಯುದರದ ಮೊಬ್ಬಿನಂತಿದೆ ತೀವ್ರತರ ತಿಮಿರ
ಇಂದಿನಿರುಳಲಿ ಬದುಕಿದೊಡೆ ಸಾ
ವೆಂದಿಗೆಮಗಿಲ್ಲೆನುತ ಭಯದಲಿ
ನಿಂದುದಲ್ಲಿಯದಲ್ಲಿ ಪಾಂಡುಕುಮಾರ ಪರಿವಾರ ॥25॥
೦೨೬ ಅಡಿಗಡಿಗೆ ಮಾನಿಸರ ...{Loading}...
ಅಡಿಗಡಿಗೆ ಮಾನಿಸರ ಸೊಗಡವ
ಗಡಿಸುತಿದೆ ಬರಹೇಳು ನೆತ್ತರ
ಗುಡಿಹಿಗೈನೆಯರೆಲ್ಲಿ ಶಾಕಿನಿ ಡಾಕಿನೀ ನಿಕರ
ತಡೆಯಬೇಡೋ ತಿನ್ನೆನುತ ಬೊ
ಬ್ಬಿಡುತ ಖಳನುರುಬಿದನು ರಾಯನ
ಮಡದಿ ಹೊಕ್ಕಳು ಮರೆಯನರ್ಜುನ ಭೀಮ ಧರ್ಮಜರ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮನುಷ್ಯರ ವಾಸನೆ ಅಡಿಗಡಿಗೆ ಬರುತ್ತಿದೆ. ರಕ್ತ ಪಿಪಾಸುಗಳಾದ ಕ್ಷುದ್ರರಾದ, ಸೇವಕಿಯರಾದ ಶಾಕಿನಿ ಡಾಕಿನಿಯರ ಸಮೂಹವನ್ನು ಬರಹೇಳು. ‘ತಡೆಯಬೇಡಿ, ತಿನ್ನಿ ತಿನ್ನಿ’ ಎಂದು ಬೊಬ್ಬೆ ಹಾಕುತ್ತಾ ರಾಕ್ಷಸನು ಮುಂದೆ ಬರಲು, ದ್ರೌಪದಿಯು ಭೀಮಾರ್ಜುನ ಧರ್ಮಜರ ಮರೆಯಲ್ಲಿ ನಿಂತಳು.
ಪದಾರ್ಥ (ಕ.ಗ.ಪ)
ಮಾನಿಸ-ಮನುಷ್ಯ, ಕೈನೆ-ಕ್ಷುದ್ರ ಹೆಂಗಸು,
ಮೂಲ ...{Loading}...
ಅಡಿಗಡಿಗೆ ಮಾನಿಸರ ಸೊಗಡವ
ಗಡಿಸುತಿದೆ ಬರಹೇಳು ನೆತ್ತರ
ಗುಡಿಹಿಗೈನೆಯರೆಲ್ಲಿ ಶಾಕಿನಿ ಡಾಕಿನೀ ನಿಕರ
ತಡೆಯಬೇಡೋ ತಿನ್ನೆನುತ ಬೊ
ಬ್ಬಿಡುತ ಖಳನುರುಬಿದನು ರಾಯನ
ಮಡದಿ ಹೊಕ್ಕಳು ಮರೆಯನರ್ಜುನ ಭೀಮ ಧರ್ಮಜರ ॥26॥
೦೨೭ ಎಲೆಲೆ ರಾಕ್ಷಸ ...{Loading}...
ಎಲೆಲೆ ರಾಕ್ಷಸ ಭೀತಿ ಹೋಗದೆ
ನಿಲು ನಿಲೆಲವೋ ನಿಮಿಷಮಾತ್ರಕೆ
ಗೆಲುವರರಸುಗಳೆನುತ ಮುನಿ ರಕ್ಷೋಘ್ನ ಸೂಕ್ತವನು
ಹಲವು ವಿಧದಲಿ ಜಪಿಸಿ ದಿಗು ಮಂ
ಡಲದ ಬಂಧವ ರಚಿಸಿ ಜನ ಸಂ
ಕುಲವ ಸಂತೈಸಿದನು ಧೌಮ್ಯನು ಮುಂದೆ ಭೂಪತಿಯ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಷ್ಟರಲ್ಲಿ ‘ಎಲಾ, ರಾಕ್ಷಸ, ಭೀತಿಗೊಳ್ಳದೇ ನಿಲ್ಲು. ಅರೆಕ್ಷಣದಲ್ಲಿ ಅರಸುಗಳು ನಿನ್ನನ್ನು ಗೆಲ್ಲುತ್ತಾರೆ’ ಎಂದು ಧೌಮ್ಯನು ರಕ್ಷೋಘ್ನ ಮಂತ್ರವನ್ನು ಜಪಿಸಿ, ದಿಗ್ಬಂಧನವನ್ನು ರಚಿಸಿ, ಧರ್ಮರಾಯನ ಮುಂದೆ ಎಲ್ಲರನ್ನೂ ಸಂತೈಸಿದನು.
ಟಿಪ್ಪನೀ (ಕ.ಗ.ಪ)
ಧೌಮ್ಯ ಮಹರ್ಷಿ - ಪರಿಚಯವು ಸ್ನೇಹಕ್ಕೆ ತಿರುಗಿ ಆಜನ್ಮ ಪರ್ಯಂತ ಉಳಿದುಕೊಂಡು ಬಂದುದಕ್ಕೆ ಧೌಮ್ಯರ ಕಥೆಯೇ ಸಾಕ್ಷಿ. ಪಾಂಡವರಿಗೆ ಧರ್ಮತತ್ವವನ್ನು ತಿಳಿದ ಪವಿತ್ರ ಚರಿತ್ರನಾದ ಒಬ್ಬ ಪುರೋಹಿತನ ಕೊರತೆಯಿದೆ ಎಂದು ಅಂಗಾರಪರ್ಣನೆಂಬ ಗಂಧರ್ವಮಿತ್ರನು ಹೇಳಿದನು. ಆತನ ಸಲಹೆಯಂತೆ ಪಾಂಡವರು ಸಮೀಪದಲ್ಲಿಯೇ ‘ಉತ್ಕಟ’ ಎಂಬ ಪುಣ್ಯತೀರ್ಥದಲ್ಲಿ ತಪಸ್ಸು ಮಾಡುತ್ತಿದ್ದ ಧೌಮ್ಯರನ್ನು ಸಂದರ್ಶಿಸಿ ಬೇಡಿಕೊಂಡರು.
ಆಚಾರ್ಯ ಬೃಹಸ್ಪತಿಗೆ ಸಮಾನರಾಗಿದ್ದ ಧೌಮ್ಯರು ಒಪ್ಪಿಕೊಂಡು ಪಾಂಡವರೊಂದಿಗೆ ಪಾಂಚಾಲನಗರಿಗೆ ಬಂದರು. ಹೀಗೆ ದ್ರೌಪದೀ ಸ್ವಯಂವರದ ಸಂದರ್ಭದಲ್ಲಿ ಪಾಂಡವರ ಕೈಹಿಡಿದ ಈ ವೇದವೇದಾಂಗ ನಿಪುಣ ಧೌಮ್ಯರು ಮುಂದೆ ಪಾಂಡವರು ಅಜ್ಞಾತವಾಸಕ್ಕೆಂದು ತೆರಳುವವರೆಗೆ ಅವರ ಜೊತೆಯಲ್ಲಿಯೇ ಇದ್ದು ಅವರನ್ನು ಮುನ್ನಡೆಸಿದರು.
ರಾಜಸೂಯದ ಸಂದರ್ಭದಲ್ಲಿ ಜಗತ್ತಿನ ಎಲ್ಲ ಶ್ರೇಷ್ಠ ತಪಸ್ವಿಗಳನ್ನು ಧರ್ಮರಾಯನು ಬರಮಾಡಿಕೊಂಡಿದ್ದು ಧೌಮ್ಯರ ಸಹಾಯದಿಂದ. ಕೇವಲ ಋಷಿಯ ತಮ್ಮನಾದ ಧೌಮ್ಯರು ಪಾಂಡವರನ್ನು ಒಬ್ಬೊಬ್ಬರಾಗಿ ದ್ರೌಪದಿ ವರಿಸುವಾಗ ಪುರೋಹಿತರಾಗಿದ್ದುದೇ ಅಲ್ಲದೆ, ಪಾಂಡವರ ಮಕ್ಕಳಿಗೆಲ್ಲ ಜಾತಕರ್ಮಾಧಿಗಳನ್ನು ನೆರವೇರಿಸಿದರು. ರಾಜಸೂಯಯಾಗದ ಮುಖ್ಯ ಪುರೋಹಿತರಾಗಿದ್ದರು.
ಸುಖದ ಕಾಲದಲ್ಲಿ ಮಾತ್ರವಲ್ಲದೆ ಪಾಂಡವರು ರಾಜ್ಯಭ್ರಷ್ಟರಾಗಿ ವನವಾಸಕ್ಕೆಂದು ತೆರಳಿದಾಗ ಕೂಡ ಧೌಮ್ಯರು ಪಾಂಡವರ ಕೈಬಿಡಲಿಲ್ಲ. ಇದು ಅವರ ಕರ್ತವ್ಯನಿಷ್ಠೆಯನ್ನು ಸ್ರಚಿಸುವಂಥ ಒಂದು ಆದರ್ಶಸಂಕಲ್ಪ.
ಪಾಂಡವರಿಗೆ ಕೆಡುಕಾಗದಂತೆ ರಕ್ಷೋಘ್ನ ಸೂಕ್ತವನ್ನು ಪಠಿಸುತ್ತ ಹೊರಡುತ್ತಿದ್ದ ಧೌಮ್ಯರು ಮಹಾ ನೀತಿಪಾಠಕರೂ ವಿಜ್ಞಾನಿಗಳೂ ಆಗಿದ್ದರು. ವನವಾಸದ 163ನೇ ಅಧ್ಯಾಯದಲ್ಲಿ ಅವರು ಸೂರ್ಯ, ಚಂದ್ರರನ್ನು ಕುರಿತು ಅವರ ಚಲನೆಯನ್ನು ಕುರಿತು ಹೇಳಿದ ಸಂಗತಿಗಳು ಸ್ಮರಣೀಯವಾಗಿದೆ. ಕಾಡಿನಲ್ಲಿ ಸಂಚರಿಸುತ್ತಿದ್ದಾಗ ಕಿಮ್ಮೀರ ದಾನವನ ಮಯಾಜಾಲವನ್ನು ಭೇದಿಸಿದ ಕೀರ್ತಿಯೂ ಇವರದೇ ಆಗಿದೆ. ಶಾಚಿತಿಪ್ರಿಯರೂ ಅಹಿಂಸಾವಾದಿಗಳೂ ಆಗಿದ್ದ ಧೌಮ್ಯರು ಜಯದ್ರಥನು ದ್ರೌಪದಿಯನ್ನು ಕದ್ದೊಯ್ಯುತ್ತಿದ್ದಾಗ ತಮ್ಮ ಶಕ್ತಿಮೀರಿ ಅವನೊಂದಿಗೆ ಹೋರಾಡಿದರು.
ಪಾಂಡವರು ವಿರಾಟನಗರಕ್ಕೆ ಹೋದ ಮೇಲೆ ಧೌಮ್ಯರು ಪಾಟಿಯಾಲ ರಾಜ್ಯಕ್ಕೆ ಹೋಗಿದ್ದರು. ಅಲ್ಲಿ ಕೂಡ ಅವರು ಅಗ್ನಷ್ಟೋಮ ಯಾಗ ಮಾಡುತ್ತ ಪಾಂಡವರಿಗೆ ರಕ್ಷಾಕವಚವಾಗಿ ನಿಂತಿದ್ದರು.
ಮಹಾಭಾರತ ಯುದ್ಧಾನಂತರ ಕ್ಷತ್ರಿಯ ವೀರರೆಲ್ಲರಿಗೆ ಶ್ರಾದ್ಧ ಕರ್ಮಗಳನ್ನು ಮಾಡಿಸಿದ ಧೌಮ್ಯರು ಧರ್ಮರಾಯನ ಪಟ್ಟಾಭಿಷೇಕದ ನಂತರ ಧರ್ಮರಾಯನಿಗೆ ಬೋಧಿಸಿದ ರಾಜಧರ್ಮದ ರಹಸ್ಯವು ಅನುಶಾಸನ ಪರ್ವದ 127ನೇ ಅಧ್ಯಾಯದಲ್ಲಿ ವರ್ಣಿತವಾಗಿದೆ. ಧರ್ಮರಾಯನು ಧರ್ಮನಿಷ್ಠನೂ ಸಚಿವಾದ ಕುಶಲನೂ ಮಹಾಜ್ಞಾನಿಯೂ ಆಗಿದ್ದ ಬೆಳೆದದ್ದು ಧೌಮ್ಯರ ಸಂಪರ್ಕ ಭಾಗ್ಯದಿಂದ ಎಂಬುದನ್ನು ಮರೆಯುವಂತಿಲ್ಲ
ಮೂಲ ...{Loading}...
ಎಲೆಲೆ ರಾಕ್ಷಸ ಭೀತಿ ಹೋಗದೆ
ನಿಲು ನಿಲೆಲವೋ ನಿಮಿಷಮಾತ್ರಕೆ
ಗೆಲುವರರಸುಗಳೆನುತ ಮುನಿ ರಕ್ಷೋಘ್ನ ಸೂಕ್ತವನು
ಹಲವು ವಿಧದಲಿ ಜಪಿಸಿ ದಿಗು ಮಂ
ಡಲದ ಬಂಧವ ರಚಿಸಿ ಜನ ಸಂ
ಕುಲವ ಸಂತೈಸಿದನು ಧೌಮ್ಯನು ಮುಂದೆ ಭೂಪತಿಯ ॥27॥
೦೨೮ ಆರು ನೀವ್ ...{Loading}...
ಆರು ನೀವ್ ನಡುವಿರುಳು ಪಾಂಡು ಕು
ಮಾರರಾವೆನಲಿತ್ತಲೇನು ವಿ
ಚಾರ ಬಂದಿರಿ ಹೇಳಿ ನೀವಾ ಬಕ ಹಿಡಿಂಬಕರ
ವೈರಿಗಳಲಾ ಹೊಲ್ಲೆಹೇನು ವಿ
ಕಾರಿಗಳನೊಡಹೊಯ್ದು ಶೋಣಿತ
ವಾರಿಯೋಕುಳಿಯಾಡ ಬೇಹುದೆನುತ್ತ ಖಳ ಜರೆದ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಈ ನಡು ರಾತ್ರಿಯಲ್ಲಿ ಯಾರು ನೀವು’ ಎಂದಾಗ ‘ನಾವು ಪಾಂಡವರು’ ಎಂದು ಉತ್ತರಿಸಿದರು. ‘ಏನು ಕಾರಣದಿಂದ ಬಂದಿರಿ? ನೀವು ಆ ಬಕ ಹಿಡಿಂಬಕರ ಶತ್ರುಗಳಲ್ಲವೇ ? ತಪ್ಪಿಲ್ಲ ಹೇಳಿ. ದುರಾಚಾರಿಗಳಾದ ನಿಮ್ಮನ್ನು ಹೊಡೆದು ರಕ್ತದೋಕುಳಿಯಾಡಬೇಕು’ ಎಂದು ರಾಕ್ಷಸನು ಬೈದನು.
ಮೂಲ ...{Loading}...
ಆರು ನೀವ್ ನಡುವಿರುಳು ಪಾಂಡು ಕು
ಮಾರರಾವೆನಲಿತ್ತಲೇನು ವಿ
ಚಾರ ಬಂದಿರಿ ಹೇಳಿ ನೀವಾ ಬಕ ಹಿಡಿಂಬಕರ
ವೈರಿಗಳಲಾ ಹೊಲ್ಲೆಹೇನು ವಿ
ಕಾರಿಗಳನೊಡಹೊಯ್ದು ಶೋಣಿತ
ವಾರಿಯೋಕುಳಿಯಾಡ ಬೇಹುದೆನುತ್ತ ಖಳ ಜರೆದ ॥28॥
೦೨೯ ಮಿಡಿದನುರ್ಜುನ ಧನುವನಾತನ ...{Loading}...
ಮಿಡಿದನುರ್ಜುನ ಧನುವನಾತನ
ಜಡಿದು ನಿಂದನು ಭೀಮನಸುರನ
ಕೆಡಹಿ ಕಾಮ್ಯಕ ವನದ ಭೂಮಿಯ ಭೂತ ಸಂತತಿಗೆ
ಬಡಿಸುವೆನು ನೀ ಸೈರಿಸೆನುತವ
ಗಡಿಸಿದನು ಕಲಿ ಭೀಮನಂತ್ಯದ
ಸಿಡಿಲು ಸೆರೆ ಬಿಟ್ಟಂತೆ ಬೊಬ್ಬಿಡುತೆದ್ದನಮರಾರಿ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಷ್ಟರಲ್ಲಿ ಅರ್ಜುನನು ಬಿಲ್ಲನ್ನು ಝೇಂಕರಿಸಿದನು. ಭೀಮನಾದರೋ ಸರಿಸಿ, ‘ಈ ದೈತ್ಯನನ್ನು ನೆಲಕ್ಕೆ ಬಡಿದು ಕಾಮ್ಯಕವನದ ಭೂತಗಳಿಗೆ ಉಣಬಡಿಸುತ್ತೇನೆ ನೀನು ಸೈರಿಸು’ ಎಂದು ಅರ್ಜುನನನ್ನು ಹಿಂದಕ್ಕೆ ಕಳಿಸಿದನು. ಪ್ರಳಯಕಾಲದ ಸಿಡಿಲು ಮೋಡಗಳ ಸೆರೆಯಿಂದ ಹೊರಬರುವಾಗ ಶಬ್ದಮಾಡುವಂತೆ ಬೊಬ್ಬಿಡುತ್ತಾ ಭೀಮನ ಪಾಲಿಗೆ ಮೃತ್ಯುವೋ ಎನ್ನುವಂತಹ ದೈತ್ಯನು ಎದ್ದನು.
ಮೂಲ ...{Loading}...
ಮಿಡಿದನುರ್ಜುನ ಧನುವನಾತನ
ಜಡಿದು ನಿಂದನು ಭೀಮನಸುರನ
ಕೆಡಹಿ ಕಾಮ್ಯಕ ವನದ ಭೂಮಿಯ ಭೂತ ಸಂತತಿಗೆ
ಬಡಿಸುವೆನು ನೀ ಸೈರಿಸೆನುತವ
ಗಡಿಸಿದನು ಕಲಿ ಭೀಮನಂತ್ಯದ
ಸಿಡಿಲು ಸೆರೆ ಬಿಟ್ಟಂತೆ ಬೊಬ್ಬಿಡುತೆದ್ದನಮರಾರಿ ॥29॥
೦೩೦ ಎಮ್ಬೆನೇನನು ಪವನಜನ ...{Loading}...
ಎಂಬೆನೇನನು ಪವನಜನ ಕೈ
ಕೊಂಬ ದೈತ್ಯನೆ ಹೆಮ್ಮರನ ಹೆ
ಗ್ಗೊಂಬ ಮುರಿದನು ಸವರಿದನು ಶಾಖೋಪಶಾಖೆಗಳ
ತಿಂಬೆನಿವನನು ತಂದು ತನ್ನ ಹಿ
ಡಿಂಬಕನ ಹಗೆ ಸಿಲುಕಿತೇ ತಾ
ನಂಬಿದುದು ನೆರೆ ದೈವವೆನುತಿದಿರಾದನಮರಾರಿ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಏನು ಹೇಳಲಿ ! ಭೀಮನನ್ನು ಎದುರಿಸುವ ರಾಕ್ಷಸನೇ ಇವನು ! ಕಿಮ್ಮೀರನು ಹೆಮ್ಮರದ ದೊಡ್ಡ ಕೊಂಬೆಯೊಂದನ್ನು ಮುರಿದು, ಶಾಖೋಪಶಾಖೆಗಳನ್ನು ಸವರುತ್ತಾ, ಇವನನ್ನು ತಿಂದು ಹಾಕುತ್ತೇನೆ. ತಾನು ನಂಬಿದ ದೈವವೇ ತನ್ನ ಬಂಧುವಾದ ಹಿಡಿಂಬನ ಶತ್ರುವನ್ನು ನನ್ನ ಮುಂದೆ ತಂದು ಸಿಕ್ಕಿಸಿತೇ, ಎಂದು ಆ ದೈತ್ಯನು ಇದಿರಾದ.
ಮೂಲ ...{Loading}...
ಎಂಬೆನೇನನು ಪವನಜನ ಕೈ
ಕೊಂಬ ದೈತ್ಯನೆ ಹೆಮ್ಮರನ ಹೆ
ಗ್ಗೊಂಬ ಮುರಿದನು ಸವರಿದನು ಶಾಖೋಪಶಾಖೆಗಳ
ತಿಂಬೆನಿವನನು ತಂದು ತನ್ನ ಹಿ
ಡಿಂಬಕನ ಹಗೆ ಸಿಲುಕಿತೇ ತಾ
ನಂಬಿದುದು ನೆರೆ ದೈವವೆನುತಿದಿರಾದನಮರಾರಿ ॥30॥
೦೩೧ ಹೊಯಿದನವನುರವಣಿಸಿ ಮುರಿದೊಳ ...{Loading}...
ಹೊಯಿದನವನುರವಣಿಸಿ ಮುರಿದೊಳ
ಹೊಯಿದು ಹೊಕ್ಕನು ಭೀಮನೆಲವೋ
ಕಯಿದು ಮರನೇ ಸೆಳೆಗೆ ಸೆಡೆವುದೆ ಭದ್ರ ಮದದಂತಿ
ಕಯಿದುವಿಲ್ಲಾ ತರಿಸಿಕೊಡುವೆನ
ಡಾಯುಧವ ಬಿಡು ಸರಳನೆನುತವ
ಹೊಯಿದು ಹುರಿಯೋಹುರಿಯೆನುತ ಗಹಗಹಿಸಿದನು ಭೀಮ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಕ್ಷಸನು ಮೇಲೆ ಬಿದ್ದು ಭೀಮನನ್ನು ಹೊಡೆದನು. ಭೀಮನು ಹಿಮ್ಮೆಟ್ಟಿ ಪುನಃ ಮುನ್ನುಗ್ಗಿ, ಎಲವೋ ನಿನಗೆ ಆಯುಧವೆಂದರೆ ಮರವೋ ! ಮರದ ಕೊಂಬೆಗೆ ಮದಿಸಿದ ಆನೆಯು ಹೆದರುತ್ತದೆಯೆ ? ಆಯುಧವಿಲ್ಲದಿದ್ದರೆ ಖಡ್ಗವನ್ನು, ಬಾಣವನ್ನು ತರಿಸಿಕೊಡುತ್ತೇನೆ ಎನ್ನುತ್ತಾ ಖಳನನ್ನು ಹೊಡೆದು ಹುರಿ ಹುರಿ ! ಎನ್ನುತ್ತಾ ಭೀಮ ಗಹಗಹಿಸಿದ.
ಪದಾರ್ಥ (ಕ.ಗ.ಪ)
ಹುರಿ ಹುರಿ - ಭೇಷ್ ಭೇಷ್ ಎಂಬ ಕೊಂಡಾಟದ ಮಾತು, ಕೈದು - ಆಯುಧ
ಮೂಲ ...{Loading}...
ಹೊಯಿದನವನುರವಣಿಸಿ ಮುರಿದೊಳ
ಹೊಯಿದು ಹೊಕ್ಕನು ಭೀಮನೆಲವೋ
ಕಯಿದು ಮರನೇ ಸೆಳೆಗೆ ಸೆಡೆವುದೆ ಭದ್ರ ಮದದಂತಿ
ಕಯಿದುವಿಲ್ಲಾ ತರಿಸಿಕೊಡುವೆನ
ಡಾಯುಧವ ಬಿಡು ಸರಳನೆನುತವ
ಹೊಯಿದು ಹುರಿಯೋಹುರಿಯೆನುತ ಗಹಗಹಿಸಿದನು ಭೀಮ ॥31॥
೦೩೨ ಮುರುಕಿಸುವ ಪವನಜನ ...{Loading}...
ಮುರುಕಿಸುವ ಪವನಜನ ನೆತ್ತಿಯ
ನೆರಗಿದನು ಬಳಿಕವನ ಹೊಯ್ಲಿನ
ಬಿರುಸಿನಯ್ಯನೊ ಸಿಡಿಲ ಶಿಷ್ಯನೊ ವಜ್ರಕರ ಹತಿಯೊ
ಕರಗಿದಾ ಮಯಣಾಮಯಗಳಿಂ
ದೆರದ ಕಾಹಿನ ಕರುವೆನಲು ಕು
ಕ್ಕುರಿಸಲಸುರನನಿಕ್ಕಿದನು ಚಾಪಲ ಚಪೇಟದಲಿ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುರುಕಿಸುವ ಗರ್ವಿಸುತ್ತಿದ್ದ ಭೀಮಸೇನನ ನೆತ್ತಿಯ ಮೇಲೆ ಪ್ರಹರಿಸಿದಾಗ ಅವನ ಏಟಿಗೆ ಮಿಗಿಲಾದ ರೀತಿಯ ಹೊಡೆತದ ಅಪ್ಪನೋ ಸಿಡಿಲಿನ ಶಿಷ್ಯನೋ ವಜ್ರಮುಷ್ಟಿಯ ಆಘಾತವೋ ಎಂಬ ರೀತಿಯಲ್ಲಿ, ಭೀಮನು ತನ್ನ ಬಿಚ್ಚಿದ ಅಂಗೈಯಿಂದ ರಾಕ್ಷಸನನ್ನು ಹೊಡೆದನು. ಆಗ ಕಿಮ್ಮೀರನು ಅರಣ್ಯವನ್ನು ಕಾಯಲು ನಿಲ್ಲಿಸಿದ್ದ ಮೇಣದ ಬೆದರು ಗೊಂಬೆಯೊಂದು ಕರಗಿ ನೆಲಕ್ಕೆ ಕುಕ್ಕರಿಸಿ ಬೀಳುವಂತೆ ಬಿದ್ದನು.
ಪದಾರ್ಥ (ಕ.ಗ.ಪ)
ಚಾಪಲ-ಚಪಲತೆಯಿಂದ ಕೂಡಿದ, ವೇಗವಾದ, ಚಪೇಟ-ಬಿಚ್ಚಿದ ಅಂಗೈ
ಪಾಠಾನ್ತರ (ಕ.ಗ.ಪ)
ಮಯಣಾಮದಿಗಳಿಂ>ಮಯಣಾಮಯಗಳಿಂ ನೋಡಿ ಉದ್ಯೋಗ ಪರ್ವ ಸಂಧಿ - 8, ಪದ್ಯ 13
ಮೂಲ ...{Loading}...
ಮುರುಕಿಸುವ ಪವನಜನ ನೆತ್ತಿಯ
ನೆರಗಿದನು ಬಳಿಕವನ ಹೊಯ್ಲಿನ
ಬಿರುಸಿನಯ್ಯನೊ ಸಿಡಿಲ ಶಿಷ್ಯನೊ ವಜ್ರಕರ ಹತಿಯೊ
ಕರಗಿದಾ ಮಯಣಾಮಯಗಳಿಂ
ದೆರದ ಕಾಹಿನ ಕರುವೆನಲು ಕು
ಕ್ಕುರಿಸಲಸುರನನಿಕ್ಕಿದನು ಚಾಪಲ ಚಪೇಟದಲಿ ॥32॥
೦೩೩ ಡೆಣ್ಡಣಿಸಿ ಸುರವೈರಿ ...{Loading}...
ಡೆಂಡಣಿಸಿ ಸುರವೈರಿ ಧೊಪ್ಪನೆ
ದಿಂಡುಗೆಡೆದನು ನೀಲಶೈಲದ
ದಂಡಿಗಾರನ ದೇಹಗರ್ತದ ರಕ್ತನಿರ್ಜರದ
ದೊಂಡೆಗರುಳಿನ ಬಾಯ ಜೋಲಿನ
ಕುಂಡಲಿತ ಕರ ಜಂಘೆಗಳ ಬಿಡು
ಮಂಡೆಗೆದರಿದ ಖಳನ ಕಂಡುದು ಭೂಸುರವ್ರಾತ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಂಪಿಸುತ್ತಾ ರಾಕ್ಷಸನು ಧೊಪ್ಪನೆ ಬಿದ್ದನು. ನೀಲಾಚಲದಂತಹ ದೇಹ, ರಕ್ತ ಕಾರುವ ಗಂಟಲು, ಸುರುಳಿಯಾಕಾರದ ಕರುಳುಗಳು, ಇಳಿಬಿದ್ದ ಬಾಯಿಯ, (ತುಟಿಗಳ), ಜರ್ಜರಿತವಾದ ಕೈಕಾಲುಗಳು, ಕೆದರಿದ ತಲೆಗೂದಲುಗಳಿಂದ ಕೂಡಿದ ರಾಕ್ಷಸನನ್ನು ಬ್ರಾಹ್ಮಣರು ನೋಡಿದರು.
ಪದಾರ್ಥ (ಕ.ಗ.ಪ)
ಡೆಂಡಣಿಸು-ಕಂಪಿಸು, ದಂಡಿಗಾರ - ಸಮಾನವಾದವನು
ಮೂಲ ...{Loading}...
ಡೆಂಡಣಿಸಿ ಸುರವೈರಿ ಧೊಪ್ಪನೆ
ದಿಂಡುಗೆಡೆದನು ನೀಲಶೈಲದ
ದಂಡಿಗಾರನ ದೇಹಗರ್ತದ ರಕ್ತನಿರ್ಜರದ
ದೊಂಡೆಗರುಳಿನ ಬಾಯ ಜೋಲಿನ
ಕುಂಡಲಿತ ಕರ ಜಂಘೆಗಳ ಬಿಡು
ಮಂಡೆಗೆದರಿದ ಖಳನ ಕಂಡುದು ಭೂಸುರವ್ರಾತ ॥33॥
೦೩೪ ಅರಸ ಹೇಳುವುದೇನು ...{Loading}...
ಅರಸ ಹೇಳುವುದೇನು ಹೋರಿದ
ನರೆಗಳಿಗೆ ಕೊಂಡಾಡಿ ಬಳಿಕಿ
ಟ್ಟೊರೆಸಿ ಹುಡಿಯಲಿ ಹೂಳಿದನು ಕಿಮ್ಮೀರ ದಾನವನ
ಬೆರೆಸಿತೀ ವಿಪ್ರೌಘವೀ ಮುನಿ
ವರಿಯರೀ ಕಾಮಿನಿಯರೀ ನೃಪ
ವರನ ಪರಿಕರವಾ ಮಹಾಕಾಮ್ಯಕ ವನಾಂತರವ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನೇ, ಏನು ಹೇಳುವುದು ! ಅರೆಗಳಿಗೆ ಕಾಲ ಲಘುವಾಗಿ ಹೊಡೆದಾಡಿ, ನಂತರ ಹೋರಾಡಿ, ಕಿಮ್ಮೀರ ದಾನವನನ್ನು ಧೂಳಿನ ಹುಡಿಯಲ್ಲಿ ಒರೆಸಿ ಹೊರಳಿಸಿದನು. ವಿಪ್ರರು, ಮುನಿಗಳು, ಸ್ತ್ರೀಯರು, ನೃಪತಿಯ ಪರಿವಾರದೊಡನೆ ಮಹಾಕಾಮ್ಯಕವನವನ್ನು ಸೇರಿಕೊಂಡರು.
ಮೂಲ ...{Loading}...
ಅರಸ ಹೇಳುವುದೇನು ಹೋರಿದ
ನರೆಗಳಿಗೆ ಕೊಂಡಾಡಿ ಬಳಿಕಿ
ಟ್ಟೊರೆಸಿ ಹುಡಿಯಲಿ ಹೂಳಿದನು ಕಿಮ್ಮೀರ ದಾನವನ
ಬೆರೆಸಿತೀ ವಿಪ್ರೌಘವೀ ಮುನಿ
ವರಿಯರೀ ಕಾಮಿನಿಯರೀ ನೃಪ
ವರನ ಪರಿಕರವಾ ಮಹಾಕಾಮ್ಯಕ ವನಾಂತರವ ॥34॥
೦೩೫ ತಳಿರು ಬಿಟ್ಟುದು ...{Loading}...
ತಳಿರು ಬಿಟ್ಟುದು ಕೂಡೆ ಹರಹಿನ
ಹಳುವದೊಳ್ ದ್ವಿಜವರ್ಗ ರಚಿಸಿದ
ತಳಿರ ಗುಡಿಗಳ ಪರ್ಣಶಾಲೆಯ ಭದ್ರಭವನಿಕೆಯ
ಮೆಳೆಯ ಮಂಟಪ ಹೊದರುದುರುಗಲು
ನೆಳಲ ಚೌಕಿಗೆ ವಿಪುಳ ವಟ ಸಂ
ಕುಲದೊಳೋಲಗ ಶಾಲೆ ಮೆರೆದುದು ಧರ್ಮನಂದನನ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೂಡಲೇ ಸಸ್ಯಗಳ ಚಿಗುರುಗಳನ್ನು ತಂದು ಇಡಲಾಯಿತು. ಆ ವನದಲ್ಲಿ ಬ್ರಾಹ್ಮಣವರ್ಗವು ರಚಿಸಿದ ಪರ್ಣಕುಟೀರದ, ಭವನಗಳ, ಬಿದಿರು ಮೆಳೆಗಳ ಮಂಟಪದ ಎಲೆ ಹುಲ್ಲು ಮುಂತಾದ ಸಸ್ಯರಾಶಿಗಳ ನೆರಳಿನ ಗುಡಿಗಳು ವಿಶಾಲವಾದ ವಟವೃಕ್ಷಗಳ ನಡುವೆ ಧರ್ಮರಾಯನ ಓಲಗಶಾಲೆಯು ಶೋಭಿಸಿತು.
ಮೂಲ ...{Loading}...
ತಳಿರು ಬಿಟ್ಟುದು ಕೂಡೆ ಹರಹಿನ
ಹಳುವದೊಳ್ ದ್ವಿಜವರ್ಗ ರಚಿಸಿದ
ತಳಿರ ಗುಡಿಗಳ ಪರ್ಣಶಾಲೆಯ ಭದ್ರಭವನಿಕೆಯ
ಮೆಳೆಯ ಮಂಟಪ ಹೊದರುದುರುಗಲು
ನೆಳಲ ಚೌಕಿಗೆ ವಿಪುಳ ವಟ ಸಂ
ಕುಲದೊಳೋಲಗ ಶಾಲೆ ಮೆರೆದುದು ಧರ್ಮನಂದನನ ॥35॥
೦೩೬ ಆ ಸಕಲ ...{Loading}...
ಆ ಸಕಲ ಸಾಮ್ರಾಜ್ಯಲಕ್ಷ್ಮಿ ವಿ
ಳಾಸದರಮನೆಗಳನು ಮರೆಸಿದು
ದೀ ಶರಭ ಶಾರ್ದೂಲ ಸೇವಿತ ಘೋರ ಕಾಂತಾರ
ಆ ಸುಧಾಕಲಿತಾನ್ನವೇ ಫಲ
ರಾಸಿಯಾದುದು ಗೇಯರಸ ವಿ
ನ್ಯಾಸವೇ ಮಧು ಮಕ್ಷಿಕವ್ರಜ ಜಂಬುಕಧ್ವಾನ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶರಭ ಶಾರ್ದೂಲಗಳಿಂದ ಕೂಡಿದ ಘೋರಕಾನನವೇ ಸಾಮ್ರಾಜ್ಯಲಕ್ಷ್ಮಿಯ ವಿಲಾಸವೈಭವದ ಅರಮನೆಗಳನ್ನು ಮರೆಸಿತು. ಹಣ್ಣುಹಂಪಲುಗಳೇ ಅಮೃತಾನ್ನಕ್ಕೆ ಸಮಾನವಾಯಿತು. ದುಂಬಿ, ನರಿಗಳ ಕೂಗೇ ಸಂಗೀತವಾಯಿತು.
ಪದಾರ್ಥ (ಕ.ಗ.ಪ)
ಮಧುಮಕ್ಷಿಕ-ದುಂಬಿ
ಮೂಲ ...{Loading}...
ಆ ಸಕಲ ಸಾಮ್ರಾಜ್ಯಲಕ್ಷ್ಮಿ ವಿ
ಳಾಸದರಮನೆಗಳನು ಮರೆಸಿದು
ದೀ ಶರಭ ಶಾರ್ದೂಲ ಸೇವಿತ ಘೋರ ಕಾಂತಾರ
ಆ ಸುಧಾಕಲಿತಾನ್ನವೇ ಫಲ
ರಾಸಿಯಾದುದು ಗೇಯರಸ ವಿ
ನ್ಯಾಸವೇ ಮಧು ಮಕ್ಷಿಕವ್ರಜ ಜಂಬುಕಧ್ವಾನ ॥36॥
೦೩೭ ದಿನಪ ಕೃಪೆ ...{Loading}...
ದಿನಪ ಕೃಪೆ ಮಾಡಿದನಲೇ ಕಾಂ
ಚನಮಯದ ಭಾಂಡವನು ಬಳಿಕಾ
ವನಜಮುಖಿ ಮಾಡಿದ ಸುಪಾಕದ ಷಡುರಸಾನ್ನದಲಿ
ಮುನಿಜನಕೆ ಪರಿಜನಕೆ ಭೂಸುರ
ಜನಕೆ ತುಷ್ಟಿಯ ಮಾಡಿ ಭೂಪತಿ
ವನದೊಳಿದ್ದನು ವೀರ ನಾರಾಯಣನ ಕರುಣದಲಿ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚಿನ್ನದ ಪಾತ್ರೆಯನ್ನು ಸೂರ್ಯದೇವನು ಅನುಗ್ರಹಿಸಿದ ಅನಂತರ, ಅದರಲ್ಲೇ ದ್ರೌಪದಿಯು ಮಾಡಿದ, ಷಡುರಸೋಪೇತವಾದ ಅಡುಗೆ ಪಾಕದಿಂದ ಸಮಸ್ತ ಮುನಿಜನ-ಪರಿಜನರನ್ನೂ ಯುಧಿಷ್ಠಿರ ಸಂತೃಪ್ತಿಗೊಳಿಸಿ, ವೀರನಾರಾಯಣನ ಕೃಪೆಯಿಂದ ವನದಲ್ಲಿ ವಾಸವಾಗಿದ್ದನು.
ಮೂಲ ...{Loading}...
ದಿನಪ ಕೃಪೆ ಮಾಡಿದನಲೇ ಕಾಂ
ಚನಮಯದ ಭಾಂಡವನು ಬಳಿಕಾ
ವನಜಮುಖಿ ಮಾಡಿದ ಸುಪಾಕದ ಷಡುರಸಾನ್ನದಲಿ
ಮುನಿಜನಕೆ ಪರಿಜನಕೆ ಭೂಸುರ
ಜನಕೆ ತುಷ್ಟಿಯ ಮಾಡಿ ಭೂಪತಿ
ವನದೊಳಿದ್ದನು ವೀರ ನಾರಾಯಣನ ಕರುಣದಲಿ ॥37॥