೧೩

೦೦೦ ಸೂಚನೆ ವೀತರಾಗದ್ವೇಷಭಯನನ ...{Loading}...

ಸೂಚನೆ : ವೀತರಾಗದ್ವೇಷಭಯನನ
ಜಾತಶತ್ರುವನಕಟ ಕಪಟ
ದ್ಯೂತದಲಿ ಕುರುರಾಯ ಗೆಲಿದನು ಧರ್ಮನಂದನನ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ಪಾಂಡವ ನೃಪರನರಮನೆ
ಬೀಳುಗೊಂಡುದು ವಿಳಸದಿಂದ್ರಪ್ರಸ್ಥಪುರ ಸಹಿತ
ಮೇಲೆ ನೆಗಳುವ ದುರ್ನಿಮಿತ್ತವ
ನಾಲಿಸಿದರೇ ದೈವದೋಷ ನಿ
ಮೀಲಿತಾಂತಃಕರಣ ಹತರೈತಂದರಿಭಪುರಿಗೆ ॥1॥

೦೦೨ ಹರಡೆ ಕೆದರಿತು ...{Loading}...

ಹರಡೆ ಕೆದರಿತು ಬಲದಲುದಯದ
ಲುರಿಯಲೊದರಿತು ಹಸುಬನೆಡದಲಿ
ಕರಿಯ ಹಕ್ಕಿಯ ತಾರುಹಂಗನ ವಾಮದುಡಿಕೆಗಳ
ನರಿಗಳೊದರಿದವಿದಿರಿನಲಿ ಮೋ
ಹರವ ಮೊಲನಡಹಾಯ್ದವಾನೆಗ
ಳರಚಿ ಕೆಡೆದವು ಮುಗ್ಗಿದವು ರಥವಾಜಿಗಳು ನೃಪರ ॥2॥

೦೦೩ ಶಕುನಗತಿ ಸಾಮಾನ್ಯವಿದು ...{Loading}...

ಶಕುನಗತಿ ಸಾಮಾನ್ಯವಿದು ಕಂ
ಟಕದ ನೆಲೆ ಜನ್ಮದಲಿ ಸಪ್ತಾ
ಧಿಕದೊಳಿದ್ದರು ಸೌರಿ ಗುರು ಭೌಮಾಬ್ಜಬಾಂಧವರು
ವಿಕಳದೆಸೆ ನಿಮ್ಮಡಿಗೆ ವೈರಿ
ಪ್ರಕರಕುನ್ನತದೆಸೆ ಮಹೀಪಾ
ಲಕಶಿರೋಮಣಿ ಪುರಕೆ ಮರಳೆಂದರುಮಹೀಸುರರು ॥3॥

೦೦೪ ಮರಳಲಹುದೈ ದೈವವಿಕ್ಕಿದ ...{Loading}...

ಮರಳಲಹುದೈ ದೈವವಿಕ್ಕಿದ
ಕೊರಳುಗಣ್ಣಿಯ ಕುಣಿಕೆಯಾರಲಿ
ಹರಿವುದೈ ಮನ್ನಿಸಿದನೇ ಮೌಹೂರ್ತಕರ ನುಡಿಯ
ಕರೆಸುವನು ಧೃತರಾಷ್ಟ್ರ ನಮಗೀ
ನರಿ ಮೊಲಂಗಳ ಹಕ್ಕಿ ಹರಿಣೆಯ
ಕರಹವೇಗುವವೆಂದು ಜರೆದನು ಶಕುನ ಕೋವಿದರ ॥4॥

೦೦೫ ಹರಿದರರಸಾಳುಗಳು ರಾಯನ ...{Loading}...

ಹರಿದರರಸಾಳುಗಳು ರಾಯನ
ಬರವನರುಹಿದರಂಧ ಭೂಪತಿ
ಪುರದೊಳಗೆ ಗುಡಿಗಟ್ಟಿಸಿದನತ್ಯಧಿಕ ಹರ್ಷದಲಿ
ಸುರನದೀಜ ದ್ರೋಣ ಗೌತಮ
ಗುರುಜ ಕರ್ಣ ಜಯದ್ರಥಾದಿಗ
ಳುರು ವಿಭವದಿಂದಿದಿರುಗೊಂಡರು ಹೊಗಿಸಿದರು ಪುರವ ॥5॥

೦೦೬ ಸೇನೆ ಬಿಟ್ಟುದು ...{Loading}...

ಸೇನೆ ಬಿಟ್ಟುದು ಪುರದ ಬಹಿರು
ದ್ಯಾನ ವೀಧಿಗಳೊಳಗೆ ಕುಂತೀ
ಸೂನುಗಳು ಸುಮ್ಮಾನ ಮಿಗೆ ನಡೆತಂದರಿಭಪುರಿಗೆ
ಆ ನಗರದೊತ್ತೊತ್ತೆಗಳನಾ
ಮಾನಿನಿಯರುಪ್ಪಾರತಿಯನವ
ರಾನನೇಂದುಪ್ರಭೆ ವಿಭಾಡಿಸೆ ಬಿಸಿಲ ಬೇಗೆಗಳ ॥6॥

೦೦೭ ಪೌರ ನಾರೀಜನದ ...{Loading}...

ಪೌರ ನಾರೀಜನದ ತಳಿಗೆಗ
ಳಾರತಿಯ ಸೇಸೆಗಳ ಲಾಜೆಯ
ತೋರ ಮುತ್ತಿನ ಮಳೆಯ ಮಂಗಳರವದ ಕಳಕಳದ
ಓರಣದ ತೋರಣದ ಗುಡಿಗಳ
ಚಾರು ವೀಧಿಗಳೊಳಗೆ ಬಂದರು
ಭೂರಮಣರುತ್ಸಾಹದಲಿ ಧೃತರಾಷ್ಟ್ರನರಮನೆಗೆ ॥7॥

೦೦೮ ಇಳಿದರಾನೆಯನಮಳ ರತ್ನಾ ...{Loading}...

ಇಳಿದರಾನೆಯನಮಳ ರತ್ನಾ
ವಳಿಯ ಕಾಣಿಕೆಗಳನು ಸುರಿದರು
ಖಳ ಶಿರೋಮಣಿಗೆರಗಿದರು ಧೃತರಾಷ್ಟ ಭೂಪತಿಗೆ
ಕುಲತಿಲಕ ಬಾ ಕಂದ ಭರತಾ
ವಳಿವನದ ಮಾಕಂದ ಧರ್ಮ
ಸ್ಥಳ ಲತಾವಳಿ ಕಂದ ಬಾಯೆಂದಪ್ಪಿದನು ನೃಪನ ॥8॥

೦೦೯ ಬಾ ಮಗನೆ ...{Loading}...

ಬಾ ಮಗನೆ ರಿಪುರಾಯಮನ್ಮಥ
ಭೀಮ ಬಾರೈ ಭೀಮ ರಣನಿ
ಸ್ಸೀಮ ಫಲುಗುಣ ಬಾ ನಕುಲ ಸಹದೇವ ಬಾಯೆನುತ
ಪ್ರೇಮರಸದಲಿ ಬೇರೆಬೇರು
ದ್ದಾಮ ಭುಜನಪ್ಪಿದನು ಚಿತ್ತದ
ತಾಮಸದ ತನಿ ಬೀಜ ಮುಸುಕಿತು ಹರ್ಷ ರಚನೆಯಲಿ ॥9॥

೦೧೦ ಹರಸಿದನು ಕಾಣಿಕೆಯ ...{Loading}...

ಹರಸಿದನು ಕಾಣಿಕೆಯ ಕೊಂಡೈ
ವರ ಮಹಾಸತಿಯನು ಕುಮಾರರ
ನರಸಿಯರನನಿಬರ ವಚೋರಚನೆಯಲಿ ಮನ್ನಿಸಿದ
ಅರಸ ಗಾಂಧಾರಿಯನು ವಂದಿಸಿ
ದರುಶನವ ಕೊಡು ಹೋಗೆನಲು ಕಡು
ಹರುಷ ಮಿಗಲೈತಂದರಾ ಗಾಂಧಾರಿಯರಮನೆಗೆ ॥10॥

೦೧೧ ಬನ್ದು ಕಾಣಿಕೆ ...{Loading}...

ಬಂದು ಕಾಣಿಕೆ ಕೊಟ್ಟು ವಂದಿಸಿ
ನಿಂದರೈವರು ತನ್ನ ಕೆಳದಿಯ
ರಿಂದ ತರಿಸಿದಳಾರತಿಯನುಪ್ಪಾರತಿಯನೊಲಿದು
ಚಂದ ಮಿಗೆ ಸಾವಿರದ ಸಂಖ್ಯೆಯ
ರಿಂದುಮುಖಿಯರ ತಳಿಗೆಯಾರತಿ
ಸಂದಣಿಸಿದವು ಜಯಸಬುದ ಝೋಂಪಿಸಿದುದಂಬರವ ॥11॥

೦೧೨ ಅರಸಿ ಕಾಣಿಸಿಕೊಣ್ಡಳೀ ...{Loading}...

ಅರಸಿ ಕಾಣಿಸಿಕೊಂಡಳೀ ನೃಪ
ರರಸಿಯನು ಸುಕುಮಾರಕರನವ
ರರಸಿಯರ ಸಖಿಯರ ವಿಳಾಸಿನಿಯರ ಪಸಾಯ್ತೆಯರ
ತರಿಸಿ ಕೊಟ್ಟನು ಬೇರೆ ಬೇರನಿ
ಬರಿಗೆ ಉಡುಗೊರೆ ಗಂಧಮಾಲ್ಯಾ
ಭರಣವನು ರಾಜೋಪಚಾರ ವಿಳಾಸ ವಿಭವದಲಿ ॥12॥

೦೧೩ ಬೀಳುಕೊಟ್ಟಳು ಬಳಿಕ ...{Loading}...

ಬೀಳುಕೊಟ್ಟಳು ಬಳಿಕ ಕುರು ನೃಪ
ನಾಲಯಕೆ ಕರೆದೊಯ್ದು ಕುಂತಿಯ
ಕಾಲಿಗೆರಗಿದನಿವರನುಚಿತೋಕ್ತಿಯಲಿ ಮನ್ನಿಸಿದ
ಬಾಲಮೃಗವೊಳಗಾಯ್ತಲಾ ತೊಡು
ಕೋಲನೆಂದರು ನಗುತ ಮನದಲಿ
ಕೌಳಿಕದ ಕುಹಕಿಗಳು ಕೌರವರಾಯ ಶಕುನಿಗಳು ॥13॥

೦೧೪ ಖಳರ ಹೃದಯದ ...{Loading}...

ಖಳರ ಹೃದಯದ ಕಾಳಕೂಟದ
ಹುಳುಕ ಬಲ್ಲರೆ ಮಾನ್ಯರವದಿರ
ಲಲಿತ ಮಧುರ ವಚೋವಿಳಾಸಕೆ ಮರುಳಗೊಂಡರಲೈ
ಅಳುಪಿದರೆ ಮಧುಕರನ ಮರಿ ಬೊ
ಬ್ಬುಲಿಯ ವನದೊಳಗೇನಹುದು ನೃಪ
ತಿಲಕರಿದ್ದರು ಬೇರೆ ರಚಿಸಿದ ರಾಜಭವನದಲಿ ॥14॥

೦೧೫ ಬನ್ದು ಕಣ್ಡುದು ...{Loading}...

ಬಂದು ಕಂಡುದು ನಿಖಿಳ ಪುರಜನ
ವಂದು ಕಾಣಿಕೆಗೊಟ್ಟು ಕೌರವ
ನಂದನರು ಸಚಿವರು ಪಸಾಯ್ತರು ನಿಯೋಗಿ ಮಂತ್ರಿಗಳು
ಸಂದಣಿಸಿದುದು ಕವಿ ಗಮಕಿ ನಟ
ವಂದಿ ಮಾಗಧ ಮಲ್ಲ ಗಾಯಕ
ವೃಂದ ದೀನಾನಾಥರೋಲಗಿಸಿದರು ಧರ್ಮಜನ ॥15॥

೦೧೬ ಆ ದಿವಸವನು ...{Loading}...

ಆ ದಿವಸವನು ಮಧುರ ಗೇಯ ನಿ
ನಾದದಲಿ ಕವಿ ವಾದಿ ವಾಗ್ಮಿ ವಿ
ನೋದದದಲಿ ನೂಕಿದರು ಮಜ್ಜನ ಭೋಜನಾದಿಯಲಿ
ಆದುದುತ್ಸಹವಂದಿನಿರುಳು ದಿ
ನಾದಿಯಲಿ ಕಂಡನು ಕನಸ ಪ್ರಾ
ಸಾದ ಶಿಖರವು ಮುರಿದು ಬಿದ್ದುದನಡವಿ ಮಧ್ಯದಲಿ ॥16॥

೦೧೭ ಅರಸನುಪ್ಪವಡಿಸಿದನವನೀ ಶ್ವರ ...{Loading}...

ಅರಸನುಪ್ಪವಡಿಸಿದನವನೀ
ಶ್ವರ ವಿಹಿತ ಸತ್ಕ್ರಿಯೆಗಳನು ವಿ
ಸ್ತರಿಸಿದನು ದುಃಸ್ವಪ್ನಕುಂತವಿಭಿನ್ನಚೇತನನು
ಕರೆಸಿ ಧೌಮ್ಯನಿಗರುಹಲತಿ ದು
ಸ್ತರದ ಕನಸಿದು ಶಾಂತಿ ಕರ್ಮವ
ಪುರದೊಳಗೆ ವಿರಚಿಸುವೆನಂಜದಿರೆಂದನಾ ಮುನಿಪ ॥17॥

೦೧೮ ಪುರದೊಳೆಲ್ಲಿಯ ಶಾನ್ತಿ ...{Loading}...

ಪುರದೊಳೆಲ್ಲಿಯ ಶಾಂತಿ ನಾರದ
ನೊರೆದನುತ್ಪಾತ ಪ್ರಬಂಧದ
ಹೊರಿಗೆಯನು ನಿಮ್ಮೈಶ್ವರಿಯ ವಿಧ್ವಂಸಕರವೆಂದು
ಇರುಳು ನಾನಾ ಸ್ವಪ್ನ ಕಾನನ
ಗಿರಿ ಪರಿಭ್ರಮಣೈಕ ಚಿಂತಾ
ಭರಿತನಾದೆನು ದೈವಕೃತ ಉಪಭೋಗ್ಯವೆನಗೆಂದ ॥18॥

೦೧೯ ಜನಪ ಕಳುಹಿದ ...{Loading}...

ಜನಪ ಕಳುಹಿದ ದೂತರಿವರರ
ಮನೆಗೆ ಬಂದರು ಜೀಯ ಧೃತರಾ
ಷ್ಟ್ರನ ಸಮಯವಾಯಿತ್ತು ನಿಮ್ಮಡಿ ಬಿಜಯ ಮಾಡುವುದು
ಎನಲು ತನ್ನ ಕುಮಾರರನು ತ
ನ್ನನುಜರನು ಸಚಿವ ಪ್ರಧಾನರ
ನನಿಬರನು ಕರೆಸಿದನು ನೃಪ ಹೊರವಂಟನರಮನೆಯ ॥19॥

೦೨೦ ಬನ್ದು ಧೃತರಾಷ್ಟ್ರನ ...{Loading}...

ಬಂದು ಧೃತರಾಷ್ಟ್ರನ ಪದಾಬ್ಜಕೆ
ವಂದಿಸಿದೊಡೆನ್ನಾನೆ ಬಾರೈ
ತಂದೆ ಬಾರೆಂದೆಳೆದು ಕುಳ್ಳಿರಿಸಿದನು ಮಂಚದಲಿ
ನಂದನರು ಭೀಮಾರ್ಜುನಾದಿಗ
ಳಂದು ಪರಿವೇಷ್ಟಿಸಿದರಿತ್ತಲು
ಕಂದು ಹೃದಯದ ಕೌರವೇಂದ್ರನ ಹದನ ಕೇಳ್ ಎಂದ ॥20॥

೦೨೧ ಕರೆಸಿದನು ಶಕುನಿಯನು ...{Loading}...

ಕರೆಸಿದನು ಶಕುನಿಯನು ಕರ್ಣಂ
ಗರುಹಿದನು ಸೈಂಧವನನೆಕ್ಕಟಿ
ಗರೆದು ಹೇಳಿದ ಕೃತ್ರಿಮದ ಹಾಸಂಗಿಗಳ ರಚಿಸಿ
ಹರಸಿಕೊಂಡರು ಗಣಪ ಯಕ್ಷೇ
ಶ್ವರಿ ಕಳಾವತಿ ದುರ್ಗಿ ಭುವನೇ
ಶ್ವರಿಗಳಿಗೆ ವಿವಿಧೋಪಚಾರದ ಬಲಿ ವಿಧಾನದಲಿ ॥21॥

೦೨೨ ದ್ಯೂತ ಸಿದ್ಧಿಯ ...{Loading}...

ದ್ಯೂತ ಸಿದ್ಧಿಯ ಮಂತ್ರ ವರ ವಿ
ದ್ಯಾತಿಶಯ ವಿಚ್ಛೇದ ರಕ್ಷ ವಿ
ಧೂತ ರಿಪುಮತಿ ಯಂತ್ರ ಪರಸನ್ಮೋಹನೌಷಧಿಯ
ಈತಗಳು ಮೇಳವಿಸಿದರು ನಿ
ರ್ಭೀತರಿವರಿದನೆತ್ತ ಬಲ್ಲರು
ಕೈತವದ ಕಣಿ ಕೌರವೇಶ್ವರ ಬಂದನರಮನೆಗೆ ॥22॥

೦೨೩ ಚಿತವಿಸಿದಿರೆ ಬೊಪ್ಪ ...{Loading}...

ಚಿತವಿಸಿದಿರೆ ಬೊಪ್ಪ ಮಯನಿವ
ಗಿತ್ತ ಸಭೆಯದು ದೇವನಿರ್ಮಿತ
ವೆತ್ತ ಮಾನವ ಕರ್ಮವೆತ್ತಲು ಸರಿಸವಲ್ಲದಕೆ
ಇತ್ತ ನಿಮ್ಮಡಿ ಮಾಡಿಸಿದ ಸಭೆ
ಯತ್ತ ಬಿಜಯಂಗೈದು ನೋಡಿದ
ಡುತ್ತಮವಲಾಯೆಂದನಾ ದುರ್ಯೋಧನನು ನಗುತ ॥23॥

೦೨೪ ಆ ಸಭೆಯ ...{Loading}...

ಆ ಸಭೆಯ ನೋಡುವೆವು ಶಿಲ್ಪದ
ದೇಸಿಗಾರರ ಕೈಮೆಗಳು ಲೇ
ಸೈಸಲೇ ಬೇರೇನು ಮಾನುಷ ದೈವಕೃತಿಯೆಂದು
ಈಸು ಸಂಪ್ರಿಯ ನಮ್ಮಲುಂಟೇ
ಲೇಸೆನುತ ನೃಪನೆದ್ದು ಕೈಗೊಡ
ಲಾ ಸಭೆಗೆ ಧೃತರಾಷ್ಟ್ರ ಬಂದನು ರಾಜಗಣ ಸಹಿತ ॥24॥

೦೨೫ ಬಿಗಿದ ನೀಲದ ...{Loading}...

ಬಿಗಿದ ನೀಲದ ಸರಿಯ ನೆಲಗ
ಟ್ಟುಗಳ ವೈಡೂರಿಯದ ಮಣಿ ಭಿ
ತ್ತಿಗಳ ವಜ್ರದ ವೇದಿಗಳ ವಿದ್ರುಮದ ಲೋವೆಗಳ
ಝಗೆಯ ಲಹರಿಯ ಜಾಳಿಗೆಯ ಪ
ಚ್ಚೆಗಳ ಪಾಗಾರದ ಸುರತ್ನಾ
ಳಿಗಳಲೆಸೆದುದು ರಾಜಸಭೆ ತತ್ಕ್ರೋಶ ಮಾತ್ರದಲಿ ॥25॥

೦೨೬ ಕವಿದವರುಣಾಂಶುಗಳ ಲಹರಿಯ ...{Loading}...

ಕವಿದವರುಣಾಂಶುಗಳ ಲಹರಿಯ
ಲವಣಿ ಲಾವಣಿಗೆಯಲಿ ನೀಲ
ಚ್ಛವಿಯ ದೀಧಿತಿ ಝಳಪಿಸಿತು ದೆಸೆದೆಸೆಯ ಭಿತ್ತಿಗಳ
ತಿವಿದವೆಳ ಮುತ್ತುಗಳ ಚಂದ್ರಿಕೆ
ಜವಳಿಸಿದವೊಂದೊಂದನೌಕಿದ
ವವಿರಳಿತ ಮಣಿ ಕಿರಣ ವೇಣೀಬಂಧ ಬಂಧುರದಿ ॥26॥

೦೨೭ ಅಲ್ಲಿ ವಿಮಳೋದ್ಯಾನ ...{Loading}...

ಅಲ್ಲಿ ವಿಮಳೋದ್ಯಾನ ವೀಧಿಗ
ಳಲ್ಲಿ ತಾವರೆಗೊಳದ ರಚನೆಗ
ಳಲ್ಲಿ ಹಂಸ ಮಯೂರ ಮಧುಕರ ಶುಕ ಪಿಕಾನೀಕ
ಅಲ್ಲಿ ಕೇಳೀ ಶೈಲ ಹಿಮ ಗೃಹ
ವಲ್ಲಿ ವಿವಿಧ ವಿಲಾಸ ರಚನೆಗ
ಳಲ್ಲಿ ಹೊಯ್ಕೈಯೆನಿಸಿ ಮೆರೆದುದು ಪಾಂಡವರ ಸಭೆಯ ॥27॥

೦೨೮ ಸ್ಥಳವನೇ ಜಲವೆನ್ದು ...{Loading}...

ಸ್ಥಳವನೇ ಜಲವೆಂದು ನಿರ್ಮಳ
ಜಲವನೇ ಸ್ಥಳವೆಂದು ಬಾಗಿಲ
ನೆಳಲ ಭಿತ್ತಿಯ ಹಾಯ್ದು ಬಾಗಿಲ ಭಿತ್ತಿಯೆಂದುಳಿದು
ಕಳವಳಿಸುವನೆ ಧರ್ಮಸುತನಾ
ಕೊಳನನೇ ಕೊಳನೆಂದು ಬಾಗಿಲ
ನೆಳಲ ಹೊಗಳುತ ಬಂದು ಹೊಕ್ಕನು ಬಹಳ ಚೌಕಿಗೆಯ ॥28॥

೦೨೯ ಕೆಲಸದಲಿ ಶಿಲ್ಪದಲಿ ...{Loading}...

ಕೆಲಸದಲಿ ಶಿಲ್ಪದಲಿ ರತ್ನಾ
ವಳಿಯಘಾಟ ನವಾಯಿಯಲಿ ಸಭೆ
ಯಿಳೆಗಪೂರ್ವವಲಾ ಮಹಾದೇವೆಂತು ರಚಿಸಿದರೊ
ವಿಳಸದಾಯವ್ಯಯದ ವಿಶ್ರುತ
ವಳಯದುನ್ನತ ವಾಸ್ತು ಲಕ್ಷಣ
ದೊಳಗೆ ಸೇರಿದುದೆಂದು ನೃಪ ಕೊಂಡಾಡಿದನು ಸಭೆಯ ॥29॥

೦೩೦ ಸೂಸಕದ ಮುತ್ತುಗಳು ...{Loading}...

ಸೂಸಕದ ಮುತ್ತುಗಳು ತಾರಾ
ರಾಶಿಗಳ ಹಬ್ಬುಗೆಯ ನೀಲದ
ಹಾಸರೆಗಳೇ ಹೋಲುತಿದ್ದವು ಗಗನ ಮಂಡಲವ
ಸೂಸಕಂಗಳ ಮುರಿದ ಮುತ್ತಿನ
ದೇಶಿಕಾತಿಯರಾನನೇಂದುಗ
ಳಾ ಸುಧಾಕರವೆನಲು ಗೆಲಿದುದು ಸಭೆ ನಭಸ್ಥಳವ ॥30॥

೦೩೧ ಗುರು ನದೀಸುತ ...{Loading}...

ಗುರು ನದೀಸುತ ಕರ್ಣ ಸೈಂಧವ
ಗುರುತನುಜ ಭಗದತ್ತ ಬಾಹ್ಲಿಕ
ನುರು ಯವನ ಸಂವೀರ ಕೌಸಲ ಚೈದ್ಯ ಮಾಗಧರು
ಅರಸುಗಳು ನಾನಾ ದಿಗಂತದ
ಧರಣಿಪರು ಸಚಿವರು ಪಸಾಯ್ತರು
ನೆರೆದುದಂದಿನ ದಿವಸದೋಲಗದೊಡ್ಡು ಚೆಲುವಾಯ್ತು ॥31॥

೦೩೨ ಧರಣಿಪತಿ ಕೇಳೊನ್ದು ...{Loading}...

ಧರಣಿಪತಿ ಕೇಳೊಂದು ಹರಿಯಂ
ತರ ವಿಶಾಲ ಮಹಾಸಭಾ ವಿ
ಸ್ತರಣದಲಿ ತೆರಹ ಕಾಣೆನು ತೀವಿತವನಿಪರು
ಹೊರಗೆ ರಥಿಕರು ರಾಹುತರು ಜೋ
ಧರು ಪದಾತಿಗಳಿದ್ದುದಂದಿನ
ಸಿರಿ ಸುರೇಂದ್ರನ ಪಾಡಿಗೈಮಡಿ ಹತ್ತು ಮಡಿಯೆಂದ ॥32॥

೦೩೩ ಒನ್ದು ಕಡೆಯಲಿ ...{Loading}...

ಒಂದು ಕಡೆಯಲಿ ಕವಡಿಕೆಯ ಜೂ
ಜೊಂದು ಕಡೆಯಲಿ ಗದ್ಯಪದ್ಯವ
ದೊಂದು ಕಡೆಯಲಿ ವಾರವಧುಗಳ ಸಾರಸಂಗೀತ
ಒಂದು ಕಡೆಯಲಿ ತರ್ಕ ಗೋಷ್ಠಿಯ
ದೊಂದು ಕಡೆಯಲಿ ಕೌರವೇಂದ್ರನ
ಮುಂದೆ ಜಡಿದುದು ರಭಸ ಹಾಸಂಗಿಗಳ ಸಾರಿಗಳ ॥33॥

೦೩೪ ಆಡಲರಿವನು ಗಡ ...{Loading}...

ಆಡಲರಿವನು ಗಡ ಯುದಿಷ್ಠಿರ
ನಾಡುವರೆ ಬರಹೇಳು ಮೇಣ್ತಾ
ನೋಡುತಿರಲಾವಾಡುವೆವು ಸಭೆಯಲಿ ವಿನೋದದಲಿ
ಖೋಡಿಯಿಲ್ಲದ ಸರಸ ನೆತ್ತವ
ನಾಡಲರಿಯದ ನೃಪತಿ ಮೃಗವೆಂ
ದಾಡುತಿಹರರಿವವರು ತಾವಲ್ಲೆಂದನಾ ಶಕುನಿ ॥34॥

೦೩೫ ಅಹುದು ಹೊಲ್ಲೆಹವಾವುದಾಡಲು ...{Loading}...

ಅಹುದು ಹೊಲ್ಲೆಹವಾವುದಾಡಲು
ಬಹುದು ಸುಜನರ ಕೂಡೆ ನೀವೇ
ಕುಹಕ ವಿದ್ಯಾಸಾರ್ವಭೌಮರು ಶಕುನಿ ಕೌರವರು
ಸುಹೃದಯರಿಗತಿ ಕುಟಿಲರಲಿ ನಿ
ಸ್ಪೃಹರಿಗತಿ ರಾಗಿಗಳೊಡನೆ ದು
ಸ್ಸಹ ಕಣಾ ಸಮ್ಮೇಳವೆಂದನು ಧರ್ಮಸುತ ನಗುತ ॥35॥

೦೩೬ ನೀವು ಸುಹೃದಯರಿನ್ದು ...{Loading}...

ನೀವು ಸುಹೃದಯರಿಂದು ದುರ್ಜನ
ರಾವು ನೀವ್ನೀರಾಗಿಗಳು ರಾ
ಗಾವಲಂಬರು ನಾವಲೇ ನೀವರಿಯಿರೇ ನಿಜವ
ನೀವು ನಾವೆಂಬೀ ಪೃಥಗ್ಭಾ
ವಾವಲಂಬನವೇಕೆ ನಿಮ್ಮಲಿ
ನಾವು ನಮ್ಮಲಿ ನೀವೆಯೆಂದನು ನಗುತ ಕುರುರಾಯ ॥36॥

೦೩೭ ಇರಲಿ ಬಾನ್ಧವರಿದರೊಳೆರಡಿ ...{Loading}...

ಇರಲಿ ಬಾಂಧವರಿದರೊಳೆರಡಿ
ಟ್ಟಿರದೆ ನಿಲಲದು ಲೇಸಲಾ ವಿ
ಸ್ತರಿಸಲೇಕೈ ದ್ಯೂತ ದುವ್ರ್ಯಸನ ಪ್ರಪಂಚವಿದು
ತರುಣ ವಿಟ ಚಾರಣ ಕುಶೀಲಕ
ಭರತ ಗಣಿಕಾಯೋಗ್ಯ ವಿಷಯಕೆ
ಗರುವರೊಲಿವರೆಯೆಂದನಾ ಕುರುಪತಿಗೆ ಯಮಸೂನು ॥37॥

೦೩೮ ದ್ಯೂತವಿದು ...{Loading}...

ದ್ಯೂತವಿದು ದುವ್ರ್ಯಸನವೆಂಬವ
ನೀತಿವಿದನೇ ಶ್ರೋತ್ರಿಯರಿಗ
ಖ್ಯಾತಿಯದು ಯತಿಗಳಿಗೆ ಮೇಣ್ ರಣಭೀತ ಭೂಪರಿಗೆ
ದ್ಯೂತ ಮೃಗಯಾ ಸ್ತ್ರೀವ್ಯಸನ ನೃಪ
ಜಾತಿಗೋಸುಗವಾದವಿದರ ರ
ಸಾತಿಶಯವರಿಯದವ ನರಮೃಗವೆಂದನಾ ಶಕುನಿ ॥38॥

೦೩೯ ಅರಸ ಕೇಳ್ ...{Loading}...

ಅರಸ ಕೇಳ್ ಕಾಳಗಕೆ ಜೂಜಿಗೆ
ಕರೆದಡೋಸರಿಸಿದೊಡೆ ಬಳಿಕವ
ಗರುವನೇ ಕ್ಷತ್ರಿಯರೊಳಗೆ ನೃಪಧರ್ಮ ನೀನರಿಯ
ಕರೆದೆವಾವ್ ಜೂಜಿಂಗೆ ಬೇಕೇ
ಧರಣಿಪತಿ ಬಾ ರಾಜಧರ್ಮವ
ನೊರಸುವರೆ ನಿಲ್ಲೆಂದುಪೇಕ್ಷಿಸಿ ನುಡಿದನಾ ಶಕುನಿ ॥39॥

೦೪೦ ರಾಜಧರ್ಮವಿದಹುದು ಕಳವಿನ ...{Loading}...

ರಾಜಧರ್ಮವಿದಹುದು ಕಳವಿನ
ಜೂಜು ಧರ್ಮದ ಮಗನೊ ಮೊಮ್ಮಗನೊ
ಬೀಜವಾವುದು ನಿಮ್ಮ ಕಪಟದ್ಯೂತ ನಿರ್ಣಯಕೆ
ರಾಜ ಪರಿಪಾಟಿಗಳ ಪಂಥದ
ಜೂಜ ಬಲ್ಲರೆ ಕರೆಯಿ ಬಾರದ
ಡಾ ಜನಾರ್ದನನಾಣೆಯೆಂದನು ಧರ್ಮನಂದನನು ॥40॥

೦೪೧ ಭೂರಮಣ ಕೇಳಖಿಳ ...{Loading}...

ಭೂರಮಣ ಕೇಳಖಿಳ ನೃಪ ಸಂ
ಹಾರಬೀಜದ ಕರ್ಮಫಲ ಸಂ
ಸ್ಕಾರವಳ್ಳೆಯನಿರಿದು ನೂಕಿತು ಧರ್ಮನಂದನನ
ಧೀರನಲ್ಲಾ ಧರ್ಮಶಾಸ್ತ್ರ ವಿ
ಚಾರ ಸಾರಜ್ಞಾನ ನಿಷ್ಠೆಯೊ
ಳೋರೆಯುಂಟೆ ದ್ಯೂತಕೇಳಿಗೆ ಮಾಡಿದನು ಮನವ ॥41॥

೦೪೨ ಇನ್ದುವದನೆಗೆ ದಕ್ಷಿಣಾಕ್ಷಿ ...{Loading}...

ಇಂದುವದನೆಗೆ ದಕ್ಷಿಣಾಕ್ಷಿ
ಸ್ಪಂದವಾಯಿತು ಭೀಮ ಪಾರ್ಥರಿ
ಗಂದು ಕೆತ್ತಿತು ಹೃದಯ ವಾಮ ಭುಜಾಕ್ಷಿಗಳು ಸಹಿತ
ಕಂದಿದುವು ಮೋರೆಗಳು ಗಂಗಾ
ನಂದನ ದ್ರೋಣಾದಿ ಸುಜನರಿ
ಗಂದವೇರಿತು ಮುಸುಡು ಶಕುನಿ ಸುಯೋಧನಾದಿಗಳ ॥42॥

೦೪೩ ಕುರುಪತಿಯ ಕೃತಪುಣ್ಯ ...{Loading}...

ಕುರುಪತಿಯ ಕೃತಪುಣ್ಯ ಬೀಜಾಂ
ಕುರದ ಕಾಲ ದಿಗಂತದವನೀ
ಶ್ವರ ಸಮೂಹ ಚಮೂನಿಬರ್ಹಣ ಸೂಚನಾ ಸಮಯ
ಅರಸ ಕೇಳ್ ಕುಂತೀಕುಮಾರರ
ಸಿರಿಯ ದುಗುಡದ ಹೊತ್ತು ಮಿಗೆ ಗ
ಬ್ಬರಿಸಿತೈ ಧರ್ಮಜನ ಗಾಢದ ಬುದ್ಧಿಪರ್ವತವ ॥43॥

೦೪೪ ವ್ಯಸನತೃಷ್ಣೆಯು ಕೀಳು ...{Loading}...

ವ್ಯಸನತೃಷ್ಣೆಯು ಕೀಳು ಚಿತ್ತದ
ಮಿಸುನಿಯೊಳು ಬೆರೆಸಿತು ಸುಬುದ್ದಿಯ
ರಸವು ಹಾರಿತು ಹುದಿದ ರಾಗದ್ವೇಷ ವಹ್ನಿಯಲಿ
ಮುಸುಡ ತಿರುಹಿತು ತಿಳಿವು ಲಜ್ಜೆಯ
ದೆಸೆಗೆ ದುರ್ಘಟವಾಯ್ತು ಪರಿಭವ
ದೊಸಗೆಯನು ಸೂಚಿಸಿತು ಲಕ್ಷ್ಮಿಗೆ ಧರ್ಮಜನ ಹೃದಯ ॥44॥

೦೪೫ ಹಲವು ಮಾತಿನಲೇನು ...{Loading}...

ಹಲವು ಮಾತಿನಲೇನು ಭೂಪತಿ
ಕೆಲಕೆ ಸಿಲುಕಿದನವದಿರೊಡ್ಡಿದ
ಬಲೆಗೆ ಬಂದನು ನೆತ್ತ ಸಾರಿಯ ಗುರಿಯ ಗದ್ದುಗೆಗೆ
ಕೆಲದಲನುಜರು ವಾಮದಲಿ ಮಣಿ
ವಳಯ ಮಂಚದಲಂಧನೃಪನಿದಿ
ರಲಿ ಸುಯೋಧನ ಕರ್ಣ ಶಕುನಿ ಜಯದ್ರಥಾದಿಗಳು ॥45॥

೦೪೬ ಹಲಗೆಯಿಕ್ಕಿತು ಹೊನ್ನ ...{Loading}...

ಹಲಗೆಯಿಕ್ಕಿತು ಹೊನ್ನ ಸಾರಿಗ
ಳಿಳುಹಿದವು ಹೇಳೊಡ್ಡವನು ಕಳ
ಕಳವ ನಿಲ ಹೇಳೆನುತ ಹಾಸಂಗಿಗಳ ಹೊಸೆಹೊಸೆದು
ನೆಲಕೆ ಹಾಯ್ಕಿದನಡಿಗಡಿಗೆ ಮಂ
ಡಳಿಸಿ ಸಾರಿಯ ಹೂಡಿ ಕುರುಪತಿ
ಗೆಲಿದ ಹೋಗೆಂದೊದರುತಿದ್ದನು ತೊಡೆಯನಪ್ಪಳಿಸಿ ॥46॥

೦೪೭ ಆಟವಾರಮ್ಭಿಸದು ಬರಿ ...{Loading}...

ಆಟವಾರಂಭಿಸದು ಬರಿ ಬೊ
ಬ್ಬಾಟವೇತಕೆ ವಿಜಯಸಿರಿ ವಾ
ಚಾಟರಿಗೆ ಮೆಚ್ಚುವಳೆ ತೋರಾ ದ್ಯೂತ ಕೌಶಲವ
ತೋಟಿ ಬೇಕೆ ಕೈಯ ಹೊಯ್
ಬೂತಾಟ ಬೇಡೆನೆ ಧರ್ಮನಂದನ
ನಾಟವೊಳ್ಳಿತು ಬಲ್ಲೆನೆಂದನು ಶಕುನಿ ನಸುನಗುತ ॥47॥

೦೪೮ ಎನ್ನ ಲೆಕ್ಕಕೆ ...{Loading}...

ಎನ್ನ ಲೆಕ್ಕಕೆ ಶಕುನಿ ಭೂಪತಿ
ನಿನ್ನೊಡನೆ ಕೈಹೊಯ್ದನೊಡ್ಡವ
ನೆನ್ನೊಡನೆ ಹೇಳೆಂದು ನುಡಿದನು ಕೌರವರರಾಯ
ನಿನ್ನೊಳಾಗಲಿ ನಿನ್ನ ಮಾವನೆ
ಮುನ್ನ ಬರಲಿದಕೇನೆನುತ ಸಂ
ಪನ್ನ ಶಠರೊಡನಳವಿಗೊಟ್ಟವನೀಶನಿಂತೆಂದ ॥48॥

೦೪೯ ಹೇಮ ಭಾರದ ...{Loading}...

ಹೇಮ ಭಾರದ ವಿಮಲ ರತುನ
ಸ್ತೋಮವಿದೆ ಪಣವೆನಲು ಕೌರವ
ಭೂಮಿಪತಿಯೊಡ್ಡಿದನು ಧರ್ಮಜ ಹೆಸರಿಸಿದ ಧನವ
ಆ ಮಹಿಪ ಶಕುನಿಗಳು ಸಾರಿ
ಗ್ರಾಮವನು ಕೆದರಿದರು ದ್ಯೂತದ
ತಾಮಸದಲುಬ್ಬೆದ್ದುದಿಬ್ಬರ ಕರಣವೃತ್ತಿಗಳು ॥49॥

೦೫೦ ದುಗನ ಹಾಯಿಕು ...{Loading}...

ದುಗನ ಹಾಯಿಕು ತನಗೆ ಹಾಯ್ಕಿ
ತ್ತಿಗನವೆಂಬಬ್ಬರದ ಹಾಸಂ
ಗಿಗಳ ಬೊಬ್ಬೆಯ ಸಾರಿಗಳ ಮಣಿ ಖಟಿಲ ನಿಸ್ವನವ
ಉಗಿವ ಸೆರೆಗಳ ಬಳಿ ದುಹಾರದ
ಬಿಗುಹುಗಳ ಬೀದಿಗಳ ತಳಿ ಸಾ
ರಿಗಳ ಧಾಳಾಧೂಳಿ ಮಸಗಿತು ಭೂಪ ಕೇಳ್ ಎಂದ ॥50॥

೦೫೧ ರಾಯ ಸೋತನು ...{Loading}...

ರಾಯ ಸೋತನು ಶಕುನಿ ಬೇಡಿದ
ದಾಯ ತಹ ಹಮ್ಮಿಗೆಯಲೊದಗಿದ
ವಾಯತದ ಕೃತ್ರಿಮವಲೇ ಕೌರವರ ಸಂಕೇತ
ಆಯಿತೀ ಹಲಗೆಯನು ಕೌರವ
ರಾಯ ಗೆಲಿದನು ಮತ್ತೆ ಪಣವೇ
ನಾಯಿತೆಂದನು ಶಕುನಿ ಯಮನಂದನನನೀಕ್ಷಿಸುತ ॥51॥

೦೫೨ ಕನಕಮಯ ರಥವೆರಡು ...{Loading}...

ಕನಕಮಯ ರಥವೆರಡು ಸಾವಿರ
ಮೊನೆಗೆ ಹೂಡಿದವೆಂಟು ಸಾವಿರ
ವಿನುತ ವಾಜಿಗಳೊಡ್ಡವೆಂದನು ಧರ್ಮನಂದನನು
ಜನಪತಿಗೆ ತಾನೈಸಲೇ ಹಾ
ಯ್ಕೆನುತ ಸಾರಿಯ ಕೆದರಿದನು ದು
ರ್ಜನರಿಗೊಲಿದುದು ದೈವಗತಿ ಬೊಬ್ಬಿರಿದನಾ ಶಕುನಿ ॥52॥

೦೫೩ ಸೋತೆಯರಸಾ ನಿನಗೆ ...{Loading}...

ಸೋತೆಯರಸಾ ನಿನಗೆ ಜೂಜಿನ
ಭೀತಿಯುಂಟೇ ಮಾಣು ಮೇಣ್ ನಿ
ರ್ಭೀತನೇ ನುಡಿ ಮೇಲಣೊಡ್ಡವ ಹಲವು ಮಾತೇನು
ಕಾತರಿಸಬೇಡೆನಲು ಫಡ ಪಣ
ಭೀತನೇ ತಾನಕಟೆನುತ ಕುಂ
ತೀತನುಜನೊಡ್ಡಿದನು ಸಾವಿರ ಮತ್ತಗಜ ಘಟೆಯ ॥53॥

೦೫೪ ಆದವೆಮಗಿವು ಗಜ ...{Loading}...

ಆದವೆಮಗಿವು ಗಜ ಘಟೆಗಳೆಂ
ದಾ ದುರಾತ್ಮಕನಾಡಿದನು ದು
ರ್ಭೇದವಿವದಿರ ಕಪಟ ಮಂತ್ರವನಾವನರಿವವನು
ಆದುದರಸಗೆ ಸೋಲವಿನ್ನೇ
ನಾದುದೈ ಭೂಪತಿಯೆ ಗಜಘಟೆ
ತೀದವೇ ಮೇಲೇನು ಪಣವುಂಟೆಂದನಾ ಶಕುನಿ ॥54॥

೦೫೫ ಫಡ ದರಿದ್ರನೆ ...{Loading}...

ಫಡ ದರಿದ್ರನೆ ತಾನು ತನ್ನಯ
ಮಡದಿಯರ ಕೆಳದಿಯರು ಸಾವಿರ
ಮಡಿ ಸುಯೋಧನ ರಾಜಭವನದ ವಾರನಾರಿಯರ
ನುಡಿಯಬೇಕೇ ಧರ್ಮಸುತ ನಿ
ಮ್ಮಡಿಗಳೊಡ್ಡಿದ ಬಳಿಕ ಗೆಲಿದವ
ರೊಡವೆಯೈಸಲೆ ಹಾಯ್ಕು ಹಾಯ್ಕುಂದೊದರಿದನು ಶಕುನಿ ॥55॥

೦೫೬ ಏನನಾಡಿದಡೇನು ಫಲ ...{Loading}...

ಏನನಾಡಿದಡೇನು ಫಲ ದೈ
ವಾನುಕೂಲ್ಯದ ಕುಣಿಕೆ ಬೇರಹು
ದಾ ನರೇಂದ್ರನ ಸಾರಿ ಸೋತುದು ನಿಮಿಷ ಮಾತ್ರದಲಿ
ಆ ನಿರೂಢಿಯ ಹತ್ತು ಸಾವಿರ
ಮಾನಿನಿಯರನು ಮತ್ತೆ ಸೋತನು
ಮಾನನಿಧಿಯೇ ಮತ್ತೆ ಪಣವೇನೆಂದನಾ ಶಕುನಿ ॥56॥

೦೫೭ ಅರಸಿಯರ ಮೈಗಾಹುಗಳ ...{Loading}...

ಅರಸಿಯರ ಮೈಗಾಹುಗಳ ಕಿಂ
ಕರರು ಸಾವಿರವಿದೆ ಪಣವು ನಿ
ಮ್ಮರಸನಲಿ ಪಣವೇನೆನಲು ನೀವೇನನೊಡ್ಡಿದಿರಿ
ಮರಳಿ ಬೆಸಗೊಳಬೇಡ ನಮ್ಮಲಿ
ಬರಹವದು ಹಾಯ್ಕೆನುತ ಸಾರಿಯ
ಬೆರಸಿ ತಿವಿದಾಡಿದನು ಹೆಕ್ಕಳವಿಕ್ಕಿದನು ಶಕುನಿ ॥57॥

೦೫೮ ಅರಸ ಸೋತೈ ...{Loading}...

ಅರಸ ಸೋತೈ ನಾರಿಯರ ಜಯ
ಮರಳಿತಿತ್ತಲು ಮನಕೆ ಭೀತಿಯ
ಬೆರಕೆಯುಳ್ಳಡೆ ಬಿಟ್ಟುಕಳೆ ಪೈಸರಕೆ ಸಮಯವಿದು
ಅರಸು ಪಂಥದ ವಾಸಿ ಮನಕು
ಬ್ಬರಿಸುವೊಡೆ ಪಣವೇನು ಹೇಳೈ
ಧರಣಿಪಾಲಯೆನುತ್ತ ರಿಂಗಣಗುಣಿದನಾ ಶಕುನಿ ॥58॥

೦೫೯ ಎಲವೊ ಸೌಬಲ ...{Loading}...

ಎಲವೊ ಸೌಬಲ ಪಾಂಡುವಿನ ಮ
ಕ್ಕಳು ಕಣಾ ಚತುರಂಬುನಿಧಿ ಮೇ
ಖಲೆಯ ಉತ್ತರ ಕುರು ನರೇಂದ್ರರ ಸೀಮೆಪರಿಯಂತ
ನೆಲವಿದೆಮ್ಮದು ನೃಪರೊಳಗೆ ನಾ
ವುಳಿದು ಧರಣಿಪರಾರು ರಥ ಸಂ
ಕುಳವನೊಡ್ಡುವೆನೊಂದು ಬಾರಿಗೆ ಹತ್ತು ಸಾವಿರವ ॥59॥

೦೬೦ ಈ ರಥಕೆ ...{Loading}...

ಈ ರಥಕೆ ನಾಲ್ವತ್ತು ಸಾವಿರ
ವಾರುವಂಗಳ ಕೂಟವಾ ಪರಿ
ವಾರವಿದೆಲಾ ರಪಣವೆಂದನು ಸುಬಲತನಯಂಗೆ
ವೀರನಹೆಯೈ ಧರಣಿಪತಿ ತೆಗೆ
ಸಾರಿಗಳ ಬಿಡು ಸೆರೆಯ ಬಿಗಿದು ದು
ಹಾರದಲಿ ನೀ ಸೋತೆ ಹೋಗೆಂದೊದರಿದನು ಶಕುನಿ ॥60॥

೦೬೧ ಆವ ಕೌಳಿಕ ...{Loading}...

ಆವ ಕೌಳಿಕ ಮಂತ್ರತಂತ್ರದ
ಡಾವರದ ಡೊಳ್ಳಾಸವಿಕ್ಕಿದ
ದೀವಸದ ಬೇಳುವೆಯನೇನೆಂಬೆನು ಮಹೀಪತಿಯ
ಆವ ವಸ್ತುವನರಸನೊಡ್ಡುವ
ನಾವ ವಹಿಲದಾತ ಸೋಲಿಸಿ
ಕೈವಳಿಸಿದನೊ ಬಲ್ಲನಾವವನೆಂದನಾ ಮುನಿಪ ॥61॥

೦೬೨ ಅರಸ ನೀಗಿದೆ ...{Loading}...

ಅರಸ ನೀಗಿದೆ ಹತ್ತು ಸಾವಿರ
ವರ ರಥವನಿನ್ನೇನು ಸಾಕೀ
ಸರಲಿ ನಿಲುವುದು ವಿತ್ತವುಂಟೇ ಮತ್ತೆ ಹೇಳೆನಲು
ಮರುಳೆ ಸೌಬಲ ಚಿತ್ರರಥನೀ
ನರಗೆ ಕೊಟ್ಟನು ತೇಜಿಗಳ ತಿ
ತ್ತಿರಿಯ ಬಣ್ಣದ ಹತ್ತು ಸಾವಿರ ತುರಗವಿವೆಯೆಂದ ॥62॥

೦೬೩ ಆಡಿದನು ನೃಪನಾ ...{Loading}...

ಆಡಿದನು ನೃಪನಾ ಕ್ಷಣಕೆ ಹೋ
ಗಾಡಿದನು ಖೇಚರರ ಖಾಡಾ
ಖಾಡಿಯಲಿ ಝಾಡಿಸಿದ ಹಯವನು ಹತ್ತು ಸಾವಿರವ
ಹೂಡಿದನು ಸಾರಿಗಳ ಮರಳಿ
ನ್ನಾಡುವರೆ ಪಣವಾವುದೈ ಮಾ
ತಾಡಿಯೆನೆ ಮನದಲಿ ಮಹೀಪತಿ ಧನವ ಚಿಂತಿಸಿದ ॥63॥

೦೬೪ ಅಗಣಿತದ ಧನವವುಣ್ಟು ...{Loading}...

ಅಗಣಿತದ ಧನವವುಂಟು ಹಾಸಂ
ಗಿಗಳ ಹಾಯಿತು ಸೋತ ವಸ್ತುವ
ತೆಗೆವೆನೀಗಳೆ ಶಕುನಿ ನೋಡಾ ತನ್ನ ಕೌಶಲವ
ದುಗುಣ ಹಲಗೆಗೆ ಹತ್ತು ಮಡಿ ರೇ
ಖೆಗೆ ಗಜಾಶ್ವನಿಕಾಯ ರಥ ವಾ
ಜಿಗಳು ಸಹಿತಿದೆ ಸಕಲ ಸೈನಿಕವೆಂದನಾ ಭೂಪ ॥64॥

೦೬೫ ಆಯಿತಿದು ಪಣವಹುದಲೇ ...{Loading}...

ಆಯಿತಿದು ಪಣವಹುದಲೇ ನೃಪ
ಹಾಯಿಕಾ ಹಾಸಂಗಿಗಳ ಸಾ
ಹಾಯ ಕುರುಪತಿಗಿಲ್ಲ ಕೃಷ್ಣಾದಿಗಳು ನಿನ್ನವರು
ದಾಯ ಕಂದೆರೆವರೆ ಸುಯೋಧನ
ರಾಯನುಪಚಿತಪುಣ್ಯವಕಟಾ
ದಾಯವೇ ಬಾಯೆಂದು ಮಿಗೆ ಬೊಬ್ಬಿರಿದನಾ ಶಕುನಿ ॥65॥

೦೬೬ ಮತ್ತೆ ಹೇಳುವುದೇನ ...{Loading}...

ಮತ್ತೆ ಹೇಳುವುದೇನ ಸೋಲವ
ಬಿತ್ತಿ ಬೆಳೆದನು ಭೂಪನವರಿಗೆ
ತೆತ್ತನೈ ಸರ್ವಸ್ವ ಧನವನು ಸಕಲ ಸೈನಿಕವ
ಮತ್ತೆ ಪಣವೇನೆನಲು ಬಳಿಕರು
ವತ್ತು ಸಾವಿರ ಕರಿಕಳಭವೆಂ
ಬತ್ತು ಸಾವಿರ ತುರಗ ಶಿಶುಗಳನೊಡ್ಡಿದನು ಭೂಪ ॥66॥

೦೬೭ ಅರಸ ಕೇಳೀ ...{Loading}...

ಅರಸ ಕೇಳೀ ತುರಗವೀ ರಥ
ಕರಿ ನಿಕರವೀ ಸೈನ್ಯ ಹಸ್ತಿನ
ಪುರಿಗೆ ಬಂದುದು ತಮ್ಮ ಕೂಡೆ ವಿನೋದಕೇಳಿಯಲಿ
ಕುರುಪತಿಯ ವಶವಾಯ್ತು ಬಳಿಕಿನ
ಮರಿಗುದುರೆ ಮರಿಯಾನೆಗಳನು
ಚ್ಚರಿಸಿ ಸಾರಿಯ ಸೋಕಿದಾಗಲೆ ಸೋತನಾ ಭೂಪ ॥67॥

೦೬೮ ಅಕಟ ಸಾಲದೆ ...{Loading}...

ಅಕಟ ಸಾಲದೆ ಜೂಜು ನಿರ್ಬಂ
ಧಕವೆ ಶಿವಶಿವ ತಾನಿದೆತ್ತಣ
ಶಕುನಿಯೆತ್ತಣ ಭರತಕುಲದ ಮಹಾ ಮಹೀಶ್ವರರು
ವಿಕಳ ಚೇಷ್ಟೆಯದೇನು ವೃದ್ಧ
ಪ್ರಕರಕಿದು ವಿಳಸವೆ ವಿಘಾತಿಗೆ
ಸಕಲಜನ ಸಮ್ಮತವೆಯೆಂದನು ಖಾತಿಯಲಿ ವಿದುರ ॥68॥

೦೬೯ ವರ ಪುರೂರವ ...{Loading}...

ವರ ಪುರೂರವ ನಹುಷನವನೀ
ಶ್ವರತಿಲಕ ದುಷ್ಯಂತ ಕುರು ಸಂ
ವರಣನಮಲ ಯಯಾತಿಯಾದಿ ಪರಂಪರಾಗತದ
ಭರತ ಕುಲವಿದರೊಳಗೆ ವಂಶೋ
ದ್ಧರರಿಳೆಯ ಬೆಳಗಿದರು ನೀನವ
ತರಿಸಿ ತಂದೈ ತೊಡಕನೆಂದನು ಖಾತಿಯಲಿ ವಿದುರ ॥69॥

೦೭೦ ಸೋಲ ಮೆಚ್ಚಿದುದಿವರನೊಡ್ಡದ ...{Loading}...

ಸೋಲ ಮೆಚ್ಚಿದುದಿವರನೊಡ್ಡದ
ಮೇಲೆ ಹೇರಿದುದೊಡ್ಡವೀಗಳು
ಮೇಲುಗೈ ನೀನಾದೆ ಕುಸಿದರು ಪಾಂಡುನಂದನರು
ಸೋಲವಿದು ಕಾಲಾಂತಕನ ಮೈ
ಸಾಲ ಸಾರಿದೆನಕಟ ಸಾಕಿ
ನ್ನೇಳು ಕೌರವ ನೃಪತಿಯೆಂದನು ಖಾತಿಯಲಿ ವಿದುರ ॥70॥

೦೭೧ ಗೆಲಿದ ಧನವಕ್ಕುವುದೆ ...{Loading}...

ಗೆಲಿದ ಧನವಕ್ಕುವುದೆ ಸೋತವ
ರಳುಕಿದವರೇ ಪಾಂಡುಪುತ್ರರ
ಬಲುಹ ಬೆಸಗೊಳ್ಳಾ ತದೀಯ ಶ್ರವಣ ದೃಷ್ಟಿಗಳ
ಎಲೆ ಸುಯೋಧನ ವಿಷದ ಮಧುರವು
ಕೊಲುವುದೋ ಮನ್ನಿಸುವುದೋ ಕ
ಕ್ಕುಲಿತೆಗಿದು ಕಡೆಹಾರವಾಗಲಿ ಸಾಕು ತೆಗೆಯೆಂದ ॥71॥

೦೭೨ ಗೆಲಿದ ದರ್ಪದ ...{Loading}...

ಗೆಲಿದ ದರ್ಪದ ದಡ್ಡಿ ತೆಗೆ ಸೌ
ಬಲನ ಬೀಳ್ಕೊಡು ನಿಖಿಲ ಬಾಂಧವ
ಕುಲಸಹಿತಲೀ ಮಧುರ ವಚನದಲಿವರ ಸಂತೈಸು
ನೆಲನನೇಕಚ್ಛತ್ರದಲಿ ಹದ
ಗೊಳಿಸು ಬದುಕುವರಿದು ನಿಜಾನ್ವಯ
ದುಳಿವು ಬೆಸಗೊಳು ಬೇಹ ಹಿರಿಯರನೆಂದನಾ ವಿದುರ ॥72॥

೦೭೩ ಖೂಳನೆಮ್ಬೆನೆ ಸಕಲ ...{Loading}...

ಖೂಳನೆಂಬೆನೆ ಸಕಲ ಕಲೆಗಳ
ಬಾಳುಮನೆ ಗಡ ನಿನ್ನ ಬುದ್ಧಿ ವಿ
ಶಾಲಮತಿ ನೀನೆಂಬೆನೇ ಜಗದಜ್ಞರಧಿದೈವ
ಕೇಳಿದೊಡೆ ಮೇಣಹಿತ ಹಿತವನು
ಹೇಳುವುದು ಪಾಂಡಿತ್ಯ ನಿನ್ನನು
ಕೇಳಿದವರಾರೆಂದು ಜರೆದನು ಕೌರವರಾಯ ॥73॥

೦೭೪ ಹಿತವ ನೀನವರಿಗೆ ...{Loading}...

ಹಿತವ ನೀನವರಿಗೆ ಕುಟುಂಬ
ಸ್ಥಿತಿ ವಿಡಂಬಕೆ ನಾವು ಕುಂತೀ
ಸುತರೊಡನೆ ಸಮ್ಮೇಳವೆಮ್ಮೊಳು ವೈಮನಸ್ಯಗತಿ
ಕೃತಕ ಮಾರ್ಗದ ಮೋಡಿಯಲಿ ಪರಿ
ಚಿತನು ನೀನಲ್ಲಕ್ಷ ವಿಮಲ
ಕ್ರತು ವಿಧಾನವನಕ್ಷ ದೀಕ್ಷಿತರರಿವರಿದನೆಂದ ॥74॥

೦೭೫ ನೀ ಹಿತವನೈ ...{Loading}...

ನೀ ಹಿತವನೈ ಶಕುನಿ ರಾಜ
ದ್ರೋಹಿಯೈ ಹುಸಿಯಲ್ಲ ನೀನೇ
ಹೋಹುದೈ ನಿನಗಾವುದಭಿಮತವಾ ದಿಗಂತರಕೆ
ಐಹಿಕಾಮುಷ್ಮಿಕದ ವಿಭವೋ
ತ್ಸಾಹ ನಿಸ್ಪೃಹರಾವಲೇ ಸಂ
ದೇಹವೇ ನೀವರಿವಿರೆಂದನು ತೂಗಿ ತುದಿವೆರಳ ॥75॥

೦೭೬ ಗುರುಗಳುಸುರರು ...{Loading}...

ಗುರುಗಳುಸುರರು ಭೀಷ್ಮರೆಮ್ಮನು
ಕೆರಳಿಚರು ಕೃಪ ನುಡಿಯನಯ್ಯನ
ಕೊರಳು ಕೊಂಕದು ಬಾಹ್ಲಿಕನ ಮನ ನೋಯದಿನ್ನೆಬರ
ಹಿರಿಯರಿವರೇನಜ್ಞರೇ ನೀ
ಪರಮತತ್ವಜ್ಞಾನಿಯೇ ಕಾ
ತರಿಸದಿರು ನೀನೆಂದು ಟಕ್ಕರಿಗಳೆದನಾ ಭೂಪ ॥76॥

೦೭೭ ಇವರ ಜನಪಾಧ್ವರವನಡಹಾ ...{Loading}...

ಇವರ ಜನಪಾಧ್ವರವನಡಹಾ
ಯ್ದವನನಾಗಳೆ ದೇವಕೀಸುತ
ಸವರಿದನು ನಮ್ಮೀ ವಿನೋದದ್ಯೂತ ಸಂಪದದ
ಸವನ ವಿಘ್ನವಿಕಾರಿಯನು ಪರಿ
ಭವಿಸುವವರನು ಕಾಣೆ ಶಿವಯೆಂ
ದವವನಿಪತಿ ನಿಜ ಹುಬ್ಬಿನಲಿ ಹೂಳಿದನು ಪರಿಚರರ ॥77॥

೦೭೮ ಮಣಿಯೆ ನೀನಿಲ್ಲೀಯನರ್ಥವ ...{Loading}...

ಮಣಿಯೆ ನೀನಿಲ್ಲೀಯನರ್ಥವ
ಕುಣಿಕೆಗೊಳಿಸಿದ ನೀ ಸಹಿತ ನಿ
ನ್ನೆಣೆಗಳಹ ಸೈಂಧವನನೀ ರಾಧೇಯ ಶಕುನಿಗಳ
ರಣದೊಳಗೆ ಭೀಮಾರ್ಜುನರ ಮಾ
ರ್ಗಣದ ಧಾರೆಗೆ ವೀರನಾರಾ
ಯಣನೆ ಸೇರಿಸಿಕೊಡುವನರಿದಿರುಯೆಂದನಾ ವಿದುರ ॥78॥

+೧೩ ...{Loading}...