೦೦೦ ಸೂಚನೆ ವೀತರಾಗದ್ವೇಷಭಯನನ ...{Loading}...
ಸೂಚನೆ : ವೀತರಾಗದ್ವೇಷಭಯನನ
ಜಾತಶತ್ರುವನಕಟ ಕಪಟ
ದ್ಯೂತದಲಿ ಕುರುರಾಯ ಗೆಲಿದನು ಧರ್ಮನಂದನನ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂ: ರಾಗ ದ್ವೇಷ ಭಯಗಳನ್ನು ಗೆದ್ದಂತಹ, ಅಜಾತ ಶತ್ರುವೆನಿಸಿದಂತಹ ಧರ್ಮನಂದನನನ್ನು ಕುರುರಾಜ ಮೋಸದ ಜೂಜಿನಲ್ಲಿ ಗೆದ್ದುಬಿಟ್ಟ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಸೂಚನೆ : ವೀತರಾಗದ್ವೇಷಭಯನನ
ಜಾತಶತ್ರುವನಕಟ ಕಪಟ
ದ್ಯೂತದಲಿ ಕುರುರಾಯ ಗೆಲಿದನು ಧರ್ಮನಂದನನ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಪಾಂಡವ ನೃಪರನರಮನೆ
ಬೀಳುಗೊಂಡುದು ವಿಳಸದಿಂದ್ರಪ್ರಸ್ಥಪುರ ಸಹಿತ
ಮೇಲೆ ನೆಗಳುವ ದುರ್ನಿಮಿತ್ತವ
ನಾಲಿಸಿದರೇ ದೈವದೋಷ ನಿ
ಮೀಲಿತಾಂತಃಕರಣ ಹತರೈತಂದರಿಭಪುರಿಗೆ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವ ರಾಜರುಗಳನ್ನು ಇಂದ್ರಪ್ರಸ್ಥ ನಗರದೊಡನೆ ಅವರ ಅರಮನೆಯೂ ಬೀಳ್ಕೊಂಡಿತು. ಅವರ ಪ್ರಯಾಣ ಸಮಯದಲ್ಲಿ ಹಲವು ದುಶ್ಶಕುನಗಳಾದವು. ಆದರೆ ದೈವ ದೋಷದಿಂದ ಅವರ ಅಂತಃಕರಣ ಮುಚ್ಚಿಹೋಗಿದ್ದರಿಂದ ಅವರು ಅವನ್ನು ಲೆಕ್ಕಿಸಲೇ ಇಲ್ಲ. ವಿಧಿಹತರಾಗಿ ಹಸ್ತಿನಾವತಿಗೆ ಬಂದು ಸೇರಿದರು.
ಪದಾರ್ಥ (ಕ.ಗ.ಪ)
ನೆಗಳುವ-ಸಂಭವಿಸುವ
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಪಾಂಡವ ನೃಪರನರಮನೆ
ಬೀಳುಗೊಂಡುದು ವಿಳಸದಿಂದ್ರಪ್ರಸ್ಥಪುರ ಸಹಿತ
ಮೇಲೆ ನೆಗಳುವ ದುರ್ನಿಮಿತ್ತವ
ನಾಲಿಸಿದರೇ ದೈವದೋಷ ನಿ
ಮೀಲಿತಾಂತಃಕರಣ ಹತರೈತಂದರಿಭಪುರಿಗೆ ॥1॥
೦೦೨ ಹರಡೆ ಕೆದರಿತು ...{Loading}...
ಹರಡೆ ಕೆದರಿತು ಬಲದಲುದಯದ
ಲುರಿಯಲೊದರಿತು ಹಸುಬನೆಡದಲಿ
ಕರಿಯ ಹಕ್ಕಿಯ ತಾರುಹಂಗನ ವಾಮದುಡಿಕೆಗಳ
ನರಿಗಳೊದರಿದವಿದಿರಿನಲಿ ಮೋ
ಹರವ ಮೊಲನಡಹಾಯ್ದವಾನೆಗ
ಳರಚಿ ಕೆಡೆದವು ಮುಗ್ಗಿದವು ರಥವಾಜಿಗಳು ನೃಪರ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀರುಹಕ್ಕಿ ಹರಡೆ ಬಲಭಾಗದಲ್ಲಿ ಹಾರಿತು. ಉದಯದಲ್ಲಿ ಉರಿ ಎಂಬ ಗಿಡದಲ್ಲಿದ್ದ ಹಸುಬ ಹಕ್ಕಿ ಎಡಭಾಗದಲ್ಲಿ ಕೂಗ ತೊಡಗಿತು. ಕರಿಯ ಹಕ್ಕಿ ತಾರದಲ್ಲಿ ಕೂಗಿತು. ಹಂಗ ಎಡದಲ್ಲಿ ದುಡುಕಿತು. ಎದುರಿನಲ್ಲಿ ನರಿಗಳು ಊಳಿಟ್ಟುವು. ಮುಂದೆ ನಡೆಯುತ್ತಿದ್ದ ಸೈನ್ಯಕ್ಕೆ ಮೊಲ ಅಡ್ಡಲಾಗಿ ಹಾಯ್ದು ಹೋಯಿತು. ಆನೆಗಳು ಅರಚಿ ಕೆಳಗೆ ಬಿದ್ದವು. ರಥದ ಕುದುರೆಗಳು ಮುಗ್ಗರಿಸಿದುವು.
ಪದಾರ್ಥ (ಕ.ಗ.ಪ)
ಹರಡೆ-ಒಂದು ಜಾತಿಯ ನೀರು ಹಕ್ಕಿ, ಹಸುಬ-ಒಂದು ಜಾತಿಯ ಹಕ್ಕಿ, ಹಂಗ-ಕಳಿಂಗ ಪಕ್ಷಿ, ಶಕುನನುಡಿವ ಹಕ್ಕಿ, ವಾಮದುಡಿಕೆ-ಎಡಭಾಗ ಅದುರುವುದು, ಮುಗ್ಗು-ಮುಗ್ಗರಿಸು
ಉರಿ - ಒಂದು ಬಗೆಯ ಗಿಡ
ಮೂಲ ...{Loading}...
ಹರಡೆ ಕೆದರಿತು ಬಲದಲುದಯದ
ಲುರಿಯಲೊದರಿತು ಹಸುಬನೆಡದಲಿ
ಕರಿಯ ಹಕ್ಕಿಯ ತಾರುಹಂಗನ ವಾಮದುಡಿಕೆಗಳ
ನರಿಗಳೊದರಿದವಿದಿರಿನಲಿ ಮೋ
ಹರವ ಮೊಲನಡಹಾಯ್ದವಾನೆಗ
ಳರಚಿ ಕೆಡೆದವು ಮುಗ್ಗಿದವು ರಥವಾಜಿಗಳು ನೃಪರ ॥2॥
೦೦೩ ಶಕುನಗತಿ ಸಾಮಾನ್ಯವಿದು ...{Loading}...
ಶಕುನಗತಿ ಸಾಮಾನ್ಯವಿದು ಕಂ
ಟಕದ ನೆಲೆ ಜನ್ಮದಲಿ ಸಪ್ತಾ
ಧಿಕದೊಳಿದ್ದರು ಸೌರಿ ಗುರು ಭೌಮಾಬ್ಜಬಾಂಧವರು
ವಿಕಳದೆಸೆ ನಿಮ್ಮಡಿಗೆ ವೈರಿ
ಪ್ರಕರಕುನ್ನತದೆಸೆ ಮಹೀಪಾ
ಲಕಶಿರೋಮಣಿ ಪುರಕೆ ಮರಳೆಂದರುಮಹೀಸುರರು ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಶಕುನಗತಿ ಸಾಮಾನ್ಯವಾಗಿ ಕಂಟಕಕ್ಕೆ ನೆಲೆ. ಜನ್ಮ ನಕ್ಷತ್ರಕ್ಕೆ ಸಪ್ತಾಧಿಕದಲ್ಲಿ ಶನಿ, ಗುರು, ಮಂಗಳ, ಸೂರ್ಯ ಇದ್ದಾರೆ. ನಿಮಗೆ ಇದು ಕೆಟ್ಟ ದೆಸೆ ಶತ್ರುಗಳಿಗೆ ಉನ್ನತ ದೆಸೆ. ರಾಜರ ಶಿರೋಮಣಿಯೆ ನಿನ್ನ ಪಟ್ಟಣಕ್ಕೆ ಹಿಂತಿರುಗು ಎಂದು ವಿಪ್ರರು ಹೇಳಿದರು.
ಪದಾರ್ಥ (ಕ.ಗ.ಪ)
ಸೌರಿ-ಶನಿ, ಭೌಮ-ಮಂಗಳಗ್ರಹ
ಮೂಲ ...{Loading}...
ಶಕುನಗತಿ ಸಾಮಾನ್ಯವಿದು ಕಂ
ಟಕದ ನೆಲೆ ಜನ್ಮದಲಿ ಸಪ್ತಾ
ಧಿಕದೊಳಿದ್ದರು ಸೌರಿ ಗುರು ಭೌಮಾಬ್ಜಬಾಂಧವರು
ವಿಕಳದೆಸೆ ನಿಮ್ಮಡಿಗೆ ವೈರಿ
ಪ್ರಕರಕುನ್ನತದೆಸೆ ಮಹೀಪಾ
ಲಕಶಿರೋಮಣಿ ಪುರಕೆ ಮರಳೆಂದರುಮಹೀಸುರರು ॥3॥
೦೦೪ ಮರಳಲಹುದೈ ದೈವವಿಕ್ಕಿದ ...{Loading}...
ಮರಳಲಹುದೈ ದೈವವಿಕ್ಕಿದ
ಕೊರಳುಗಣ್ಣಿಯ ಕುಣಿಕೆಯಾರಲಿ
ಹರಿವುದೈ ಮನ್ನಿಸಿದನೇ ಮೌಹೂರ್ತಕರ ನುಡಿಯ
ಕರೆಸುವನು ಧೃತರಾಷ್ಟ್ರ ನಮಗೀ
ನರಿ ಮೊಲಂಗಳ ಹಕ್ಕಿ ಹರಿಣೆಯ
ಕರಹವೇಗುವವೆಂದು ಜರೆದನು ಶಕುನ ಕೋವಿದರ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈಗ ಹಿಂತಿರುಗುವುದಕ್ಕೆ ಆಗುತ್ತದೆಯೇ ? ಇದು ದೈವವೇ ಇಕ್ಕಿದ ಹಗ್ಗದ ಕುಣಿಕೆ ! ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ?
ಯುಧಿಷ್ಠಿರ ಮೌಹೂರ್ತಿಕರ ಮಾತನ್ನು ಗೌರವಿಸಲೇ ಇಲ್ಲ. ನಮ್ಮನ್ನು ಕರೆಸುತ್ತಿರುವವನು ಧೃತರಾಷ್ಟ್ರ. ಈ ನರಿ, ಮೊಲಗಳ, ಹಕ್ಕಿ
ಹರಿಣಗಳ ಕರೆ ನಮ್ಮನ್ನೇನು ಮಾಡೀತು ಎಂದು ಶಕುನ ಪಂಡಿತರ ಮಾತನ್ನು ತಿರಸ್ಕರಿಸಿಬಿಟ್ಟ !
ಪದಾರ್ಥ (ಕ.ಗ.ಪ)
ಕರಹ-ಕರೆ, ಕೂಗು
ಮೂಲ ...{Loading}...
ಮರಳಲಹುದೈ ದೈವವಿಕ್ಕಿದ
ಕೊರಳುಗಣ್ಣಿಯ ಕುಣಿಕೆಯಾರಲಿ
ಹರಿವುದೈ ಮನ್ನಿಸಿದನೇ ಮೌಹೂರ್ತಕರ ನುಡಿಯ
ಕರೆಸುವನು ಧೃತರಾಷ್ಟ್ರ ನಮಗೀ
ನರಿ ಮೊಲಂಗಳ ಹಕ್ಕಿ ಹರಿಣೆಯ
ಕರಹವೇಗುವವೆಂದು ಜರೆದನು ಶಕುನ ಕೋವಿದರ ॥4॥
೦೦೫ ಹರಿದರರಸಾಳುಗಳು ರಾಯನ ...{Loading}...
ಹರಿದರರಸಾಳುಗಳು ರಾಯನ
ಬರವನರುಹಿದರಂಧ ಭೂಪತಿ
ಪುರದೊಳಗೆ ಗುಡಿಗಟ್ಟಿಸಿದನತ್ಯಧಿಕ ಹರ್ಷದಲಿ
ಸುರನದೀಜ ದ್ರೋಣ ಗೌತಮ
ಗುರುಜ ಕರ್ಣ ಜಯದ್ರಥಾದಿಗ
ಳುರು ವಿಭವದಿಂದಿದಿರುಗೊಂಡರು ಹೊಗಿಸಿದರು ಪುರವ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಜನ ಸೇವಕರು ಧಾವಿಸಿ ಹೋಗಿ ಆ ಅಂಧರಾಜನಿಗೆ ರಾಜನ ಆಗಮನವನ್ನು ತಿಳಿಸಿದರು. ಕೌರವರು ಅತ್ಯಂತ ಹರ್ಷದಿಂದ ನಗರದಲ್ಲೆಲ್ಲ ಗುಡಿತೋರಣಗಳನ್ನು ಕಟ್ಟಿಸಿದರು. ಭೀಷ್ಮ ದ್ರೋಣ ಕೃಪ ಅಶ್ವತ್ಥಾಮ ಕರ್ಣ ಜಯದ್ರಥ ಮೊದಲಾದವರು ವೈಭವದಿಂದ ಬಂದು ಎದುರುಗೊಂಡರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಹರಿದರರಸಾಳುಗಳು ರಾಯನ
ಬರವನರುಹಿದರಂಧ ಭೂಪತಿ
ಪುರದೊಳಗೆ ಗುಡಿಗಟ್ಟಿಸಿದನತ್ಯಧಿಕ ಹರ್ಷದಲಿ
ಸುರನದೀಜ ದ್ರೋಣ ಗೌತಮ
ಗುರುಜ ಕರ್ಣ ಜಯದ್ರಥಾದಿಗ
ಳುರು ವಿಭವದಿಂದಿದಿರುಗೊಂಡರು ಹೊಗಿಸಿದರು ಪುರವ ॥5॥
೦೦೬ ಸೇನೆ ಬಿಟ್ಟುದು ...{Loading}...
ಸೇನೆ ಬಿಟ್ಟುದು ಪುರದ ಬಹಿರು
ದ್ಯಾನ ವೀಧಿಗಳೊಳಗೆ ಕುಂತೀ
ಸೂನುಗಳು ಸುಮ್ಮಾನ ಮಿಗೆ ನಡೆತಂದರಿಭಪುರಿಗೆ
ಆ ನಗರದೊತ್ತೊತ್ತೆಗಳನಾ
ಮಾನಿನಿಯರುಪ್ಪಾರತಿಯನವ
ರಾನನೇಂದುಪ್ರಭೆ ವಿಭಾಡಿಸೆ ಬಿಸಿಲ ಬೇಗೆಗಳ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈನ್ಯ ನಗರದ ಹೊರಗೇ ಉದ್ಯಾನದ ಬೀದಿಗಳಲ್ಲಿ ಬೀಡುಬಿಟ್ಟಿತು. ಕುಂತಿಯ ಮಕ್ಕಳು ಸುಮ್ಮಾನದಿಂದ ಊರೊಳಕ್ಕೆ ನಡೆದುಕೊಂಡು ಬಂದರು. ನಗರದೊಳಗೆ ಜನ ಗುಂಪುಗುಂಪಾಗಿ ಇವರನ್ನು ನೋಡಲು ಸೇರಿದರು. ಸ್ತ್ರೀಯರು ಇವರಿಗೆ ಉಪ್ಪಾರತಿಯನ್ನು ಎತ್ತಿದರು. ಅವರ ಮುಖಗಳಲ್ಲಿನ ಬೆಳದಿಂಗಳ ಪ್ರಭೆ ಇವರಿಗೆ ಉಂಟಾಗಿದ್ದ ಬಿಸಿಲ ಬೇಗೆಗಳನ್ನೆಲ್ಲ ನಾಶಮಾಡಿತು.
ಪದಾರ್ಥ (ಕ.ಗ.ಪ)
ಉಪ್ಪಾರತಿ -ಉಪ್ಪಿನ ಅರತಿ
ವಿಭಾಡಿಸು -ನಾಶ ಮಾಡು
ಮೂಲ ...{Loading}...
ಸೇನೆ ಬಿಟ್ಟುದು ಪುರದ ಬಹಿರು
ದ್ಯಾನ ವೀಧಿಗಳೊಳಗೆ ಕುಂತೀ
ಸೂನುಗಳು ಸುಮ್ಮಾನ ಮಿಗೆ ನಡೆತಂದರಿಭಪುರಿಗೆ
ಆ ನಗರದೊತ್ತೊತ್ತೆಗಳನಾ
ಮಾನಿನಿಯರುಪ್ಪಾರತಿಯನವ
ರಾನನೇಂದುಪ್ರಭೆ ವಿಭಾಡಿಸೆ ಬಿಸಿಲ ಬೇಗೆಗಳ ॥6॥
೦೦೭ ಪೌರ ನಾರೀಜನದ ...{Loading}...
ಪೌರ ನಾರೀಜನದ ತಳಿಗೆಗ
ಳಾರತಿಯ ಸೇಸೆಗಳ ಲಾಜೆಯ
ತೋರ ಮುತ್ತಿನ ಮಳೆಯ ಮಂಗಳರವದ ಕಳಕಳದ
ಓರಣದ ತೋರಣದ ಗುಡಿಗಳ
ಚಾರು ವೀಧಿಗಳೊಳಗೆ ಬಂದರು
ಭೂರಮಣರುತ್ಸಾಹದಲಿ ಧೃತರಾಷ್ಟ್ರನರಮನೆಗೆ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪುರದ ನಾರೀ ಜನರೆಲ್ಲ ತಳಿಗೆಗಳಲ್ಲಿ ಆರತಿಯೆತ್ತಿದರು. ಅಕ್ಷತೆಯ ಕಾಳುಗಳನ್ನು ಅರಳನ್ನೂ ದೊಡ್ಡ ಮುತ್ತುಗಳನ್ನೂ ಮಳೆಯಂತೆ
ಯುಧಿಷ್ಠಿರನ ಮೇಲೆ ಸುರಿಸಿದರು. ಎಲ್ಲೆಲ್ಲೂ ಮಂಗಳ ಗೀತಗಳ ರವ ಕೇಳಿಬರುತ್ತಿತ್ತು. ಎಲ್ಲೆಲ್ಲೂ ಓರಣವಾಗಿ ಗುಡಿ ತೋರಣಗಳನ್ನು
ಕಟ್ಟಿದ್ದರು. ಆ ಐವರು ರಾಜಪುತ್ರರೂ ಉತ್ಸಾಹದಿಂದ ಆ ಬೀದಿಗಳಲ್ಲಿ ಹಾದು ಧೃತರಾಷ್ಟ್ರನ ಅರಮನೆಗೆ ಬಂದರು.
ಪದಾರ್ಥ (ಕ.ಗ.ಪ)
ಸೇಸೆ-ಅಕ್ಷತೆಕಾಳು, ಲಾಜೆ-ಅರಳು
ಮೂಲ ...{Loading}...
ಪೌರ ನಾರೀಜನದ ತಳಿಗೆಗ
ಳಾರತಿಯ ಸೇಸೆಗಳ ಲಾಜೆಯ
ತೋರ ಮುತ್ತಿನ ಮಳೆಯ ಮಂಗಳರವದ ಕಳಕಳದ
ಓರಣದ ತೋರಣದ ಗುಡಿಗಳ
ಚಾರು ವೀಧಿಗಳೊಳಗೆ ಬಂದರು
ಭೂರಮಣರುತ್ಸಾಹದಲಿ ಧೃತರಾಷ್ಟ್ರನರಮನೆಗೆ ॥7॥
೦೦೮ ಇಳಿದರಾನೆಯನಮಳ ರತ್ನಾ ...{Loading}...
ಇಳಿದರಾನೆಯನಮಳ ರತ್ನಾ
ವಳಿಯ ಕಾಣಿಕೆಗಳನು ಸುರಿದರು
ಖಳ ಶಿರೋಮಣಿಗೆರಗಿದರು ಧೃತರಾಷ್ಟ ಭೂಪತಿಗೆ
ಕುಲತಿಲಕ ಬಾ ಕಂದ ಭರತಾ
ವಳಿವನದ ಮಾಕಂದ ಧರ್ಮ
ಸ್ಥಳ ಲತಾವಳಿ ಕಂದ ಬಾಯೆಂದಪ್ಪಿದನು ನೃಪನ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆನೆಯಿಂದ ಇಳಿದರು. ಆ ಖಳಶಿರೋಮಣಿಯಾದ ಧೃತರಾಷ್ಟ್ರನ ಮುಂದೆ ರತ್ನಾವಳಿಯ ಕಾಣಿಕೆಗಳನ್ನು ಸುರಿದರು. ಕಾಲಿಗೆ ಎರಗಿದರು. ಧೃತರಾಷ್ಟ್ರ “ಕುಲತಿಲಕ ಬಾ ಕಂದ, ಭರತಾವಳಿ ವನದ ಮಾಕಂದ, ಧರ್ಮಸ್ಥಳ ಲತಾವಳಿ ಕಂದ ಬಾ” ಎನ್ನುತ್ತಾ
ಯುಧಿಷ್ಠಿರನನ್ನು ಬಗೆಬಗೆಯಾಗಿ ಮುದ್ದಿಸಿ ಅಪ್ಪಿಕೊಂಡ.
ಪದಾರ್ಥ (ಕ.ಗ.ಪ)
ಮಾಕಂದ - ಮಾವಿನಮರ
ಲತಾವಳೀಕಂದ- ಲತೆಗಳಿಗೆ ಆಶ್ರಯವಾಗಿರುವ ಮರ
ಮೂಲ ...{Loading}...
ಇಳಿದರಾನೆಯನಮಳ ರತ್ನಾ
ವಳಿಯ ಕಾಣಿಕೆಗಳನು ಸುರಿದರು
ಖಳ ಶಿರೋಮಣಿಗೆರಗಿದರು ಧೃತರಾಷ್ಟ ಭೂಪತಿಗೆ
ಕುಲತಿಲಕ ಬಾ ಕಂದ ಭರತಾ
ವಳಿವನದ ಮಾಕಂದ ಧರ್ಮ
ಸ್ಥಳ ಲತಾವಳಿ ಕಂದ ಬಾಯೆಂದಪ್ಪಿದನು ನೃಪನ ॥8॥
೦೦೯ ಬಾ ಮಗನೆ ...{Loading}...
ಬಾ ಮಗನೆ ರಿಪುರಾಯಮನ್ಮಥ
ಭೀಮ ಬಾರೈ ಭೀಮ ರಣನಿ
ಸ್ಸೀಮ ಫಲುಗುಣ ಬಾ ನಕುಲ ಸಹದೇವ ಬಾಯೆನುತ
ಪ್ರೇಮರಸದಲಿ ಬೇರೆಬೇರು
ದ್ದಾಮ ಭುಜನಪ್ಪಿದನು ಚಿತ್ತದ
ತಾಮಸದ ತನಿ ಬೀಜ ಮುಸುಕಿತು ಹರ್ಷ ರಚನೆಯಲಿ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ ಬಾ ಮಗನೆ ರಿಪುರಾಜರೆಂಬ ಮನ್ಮಥನಿಗೆ ಹಣೆಗಣ್ಣನಂತಿರುವ ಭೀಮ ಬಾರಯ್ಯ, ರಣನಿಸ್ಸೀಮನಾದ ಅರ್ಜುನನೇ ಬಾ,
ನಕುಲ ಬಾ, ಸಹದೇವ ಬಾ, ಎಂದು ಪ್ರೇಮರಸದಿಂದ ಒಬ್ಬೊಬ್ಬರನ್ನು ಪ್ರತ್ಯೇಕವಾಗಿ ಕರೆದು ತನ್ನ ದೀರ್ಘ ಬಾಹುಗಳಿಂದ ತೆಗೆದಪ್ಪಿಕೊಂಡನು. ಹರ್ಷದ ಅಭಿವ್ಯಕ್ತಿಯಲ್ಲಿ ಅವನ ಚಿತ್ತದಲ್ಲಿದ್ದ ತಮಸ್ಸಿನ ಬೀಜ ಮುಚ್ಚಿ ಹೋಯಿತು.
ಪದಾರ್ಥ (ಕ.ಗ.ಪ)
ರಿಪುರಾಯ ಮನ್ಮಥಭೀಮ - ರಿಪುರಾಯನೆಂಬ ಮನ್ಮಥನಿಗೆ ಈಶ್ವರನಂತಿರುವವನು. (ಮನ್ಮಥನನ್ನು ಹಣೆಗಣ್ಣಿನಿಂದ ಸುಟ್ಟ) ಶಿವ
ಮೂಲ ...{Loading}...
ಬಾ ಮಗನೆ ರಿಪುರಾಯಮನ್ಮಥ
ಭೀಮ ಬಾರೈ ಭೀಮ ರಣನಿ
ಸ್ಸೀಮ ಫಲುಗುಣ ಬಾ ನಕುಲ ಸಹದೇವ ಬಾಯೆನುತ
ಪ್ರೇಮರಸದಲಿ ಬೇರೆಬೇರು
ದ್ದಾಮ ಭುಜನಪ್ಪಿದನು ಚಿತ್ತದ
ತಾಮಸದ ತನಿ ಬೀಜ ಮುಸುಕಿತು ಹರ್ಷ ರಚನೆಯಲಿ ॥9॥
೦೧೦ ಹರಸಿದನು ಕಾಣಿಕೆಯ ...{Loading}...
ಹರಸಿದನು ಕಾಣಿಕೆಯ ಕೊಂಡೈ
ವರ ಮಹಾಸತಿಯನು ಕುಮಾರರ
ನರಸಿಯರನನಿಬರ ವಚೋರಚನೆಯಲಿ ಮನ್ನಿಸಿದ
ಅರಸ ಗಾಂಧಾರಿಯನು ವಂದಿಸಿ
ದರುಶನವ ಕೊಡು ಹೋಗೆನಲು ಕಡು
ಹರುಷ ಮಿಗಲೈತಂದರಾ ಗಾಂಧಾರಿಯರಮನೆಗೆ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ ಧೃತರಾಷ್ಟ್ರ ಕಾಣಿಕೆಯನ್ನು ಸ್ವೀಕರಿಸಿ ಆ ಐವರ ಮಹಾಸತಿಯಾದ ದ್ರೌಪದಿಯನ್ನು, ಕುಮಾರರ ಅರಸಿಯರನ್ನೂ ಹರಸಿದ. ಅಷ್ಟು ಮಂದಿಯನ್ನು ಯಥೋಚಿತವಾದ ಮಾತುಗಳಿಂದ ಆದರಿಸಿದ. ಅನಂತರ ಯುಧಿಷ್ಠಿರನಿಗೆ “ಗಾಂಧಾರಿಗೆ ನಮಿಸಿ ದರ್ಶನ ಕೊಡು ಹೋಗು” ಎಂದ. ಯುಧಿಷ್ಠಿರ ಮಹಾ ಸಂತೋಷದಿಂದ ತನ್ನ ಪರಿವಾರದೊಡನೆ ಗಾಂಧಾರಿಯ ಅರಮನೆಗೆ ಬಂದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಹರಸಿದನು ಕಾಣಿಕೆಯ ಕೊಂಡೈ
ವರ ಮಹಾಸತಿಯನು ಕುಮಾರರ
ನರಸಿಯರನನಿಬರ ವಚೋರಚನೆಯಲಿ ಮನ್ನಿಸಿದ
ಅರಸ ಗಾಂಧಾರಿಯನು ವಂದಿಸಿ
ದರುಶನವ ಕೊಡು ಹೋಗೆನಲು ಕಡು
ಹರುಷ ಮಿಗಲೈತಂದರಾ ಗಾಂಧಾರಿಯರಮನೆಗೆ ॥10॥
೦೧೧ ಬನ್ದು ಕಾಣಿಕೆ ...{Loading}...
ಬಂದು ಕಾಣಿಕೆ ಕೊಟ್ಟು ವಂದಿಸಿ
ನಿಂದರೈವರು ತನ್ನ ಕೆಳದಿಯ
ರಿಂದ ತರಿಸಿದಳಾರತಿಯನುಪ್ಪಾರತಿಯನೊಲಿದು
ಚಂದ ಮಿಗೆ ಸಾವಿರದ ಸಂಖ್ಯೆಯ
ರಿಂದುಮುಖಿಯರ ತಳಿಗೆಯಾರತಿ
ಸಂದಣಿಸಿದವು ಜಯಸಬುದ ಝೋಂಪಿಸಿದುದಂಬರವ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಂದು ಕಾಣಿಕೆಯನ್ನು ಕೊಟ್ಟು ಎಲ್ಲರೂ ವಂದಿಸಿ ನಿಂತುಕೊಂಡರು. ಗಾಂಧಾರಿ ತನ್ನ ಸಖಿಯರಿಂದ ಆರತಿಯನ್ನು ತರಿಸಿ ಉಪ್ಪಾರತಿಯನ್ನು ಎತ್ತಿಸಿದಳು. ಸುಂದರವಾಗಿ ಕಾಣುವಂತೆ ಸಾವಿರಾರು ಸಂಖ್ಯೆಯ ಚಂದ್ರಮುಖಿಯರು ಸಡಗರದಿಂದ ತಳಿಗೆಯ ಆರತಿಯನ್ನೆತ್ತಿದರು. ಅವರ ಜಯಜಯ ಶಬ್ದ ಆಕಾಶಕ್ಕೆಲ್ಲ ತುಂಬಿತು.
ಪದಾರ್ಥ (ಕ.ಗ.ಪ)
ಸಬುದ- ಶಬ್ದ
ಝೋಂಪಿಸು - ತಾಗು , ವ್ಯಾಪಿಸು
ಮೂಲ ...{Loading}...
ಬಂದು ಕಾಣಿಕೆ ಕೊಟ್ಟು ವಂದಿಸಿ
ನಿಂದರೈವರು ತನ್ನ ಕೆಳದಿಯ
ರಿಂದ ತರಿಸಿದಳಾರತಿಯನುಪ್ಪಾರತಿಯನೊಲಿದು
ಚಂದ ಮಿಗೆ ಸಾವಿರದ ಸಂಖ್ಯೆಯ
ರಿಂದುಮುಖಿಯರ ತಳಿಗೆಯಾರತಿ
ಸಂದಣಿಸಿದವು ಜಯಸಬುದ ಝೋಂಪಿಸಿದುದಂಬರವ ॥11॥
೦೧೨ ಅರಸಿ ಕಾಣಿಸಿಕೊಣ್ಡಳೀ ...{Loading}...
ಅರಸಿ ಕಾಣಿಸಿಕೊಂಡಳೀ ನೃಪ
ರರಸಿಯನು ಸುಕುಮಾರಕರನವ
ರರಸಿಯರ ಸಖಿಯರ ವಿಳಾಸಿನಿಯರ ಪಸಾಯ್ತೆಯರ
ತರಿಸಿ ಕೊಟ್ಟನು ಬೇರೆ ಬೇರನಿ
ಬರಿಗೆ ಉಡುಗೊರೆ ಗಂಧಮಾಲ್ಯಾ
ಭರಣವನು ರಾಜೋಪಚಾರ ವಿಳಾಸ ವಿಭವದಲಿ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸಿ ದ್ರೌಪದಿಯು ದುರ್ಯೋಧನಾದಿಗಳ ಅರಸಿಯರನ್ನೂ ಅವರ ಕುಮಾರರನ್ನೂ ಅವರ ಅರಸಿಯರನ್ನೂ ಕಂಡಳು.
ಅವರ ಸಖಿಯರ, ವಿಲಾಸಿನಿಯರ, ಪಸಾಯ್ತರ ಯೋಗಕ್ಷೇಮ ವಿಚಾರಿಸಿದಳು. ಎಲ್ಲರಿಗೂ ಬೇರೆ ಬೇರೆಯಾಗಿ ಉಡುಗೊರೆ ಗಂಧ, ಮಾಲ್ಯಾಭರಣಗಳನ್ನು ತರಿಸಿ ಕೊಟ್ಟು ವೈಭವದಿಂದ ರಾಜೋಪಚಾರ ಮಾಡಿದಳು.
ಪದಾರ್ಥ (ಕ.ಗ.ಪ)
ಮಾಲ್ಯ - ಹೂವಿನ ಹಾರ
ಮೂಲ ...{Loading}...
ಅರಸಿ ಕಾಣಿಸಿಕೊಂಡಳೀ ನೃಪ
ರರಸಿಯನು ಸುಕುಮಾರಕರನವ
ರರಸಿಯರ ಸಖಿಯರ ವಿಳಾಸಿನಿಯರ ಪಸಾಯ್ತೆಯರ
ತರಿಸಿ ಕೊಟ್ಟನು ಬೇರೆ ಬೇರನಿ
ಬರಿಗೆ ಉಡುಗೊರೆ ಗಂಧಮಾಲ್ಯಾ
ಭರಣವನು ರಾಜೋಪಚಾರ ವಿಳಾಸ ವಿಭವದಲಿ ॥12॥
೦೧೩ ಬೀಳುಕೊಟ್ಟಳು ಬಳಿಕ ...{Loading}...
ಬೀಳುಕೊಟ್ಟಳು ಬಳಿಕ ಕುರು ನೃಪ
ನಾಲಯಕೆ ಕರೆದೊಯ್ದು ಕುಂತಿಯ
ಕಾಲಿಗೆರಗಿದನಿವರನುಚಿತೋಕ್ತಿಯಲಿ ಮನ್ನಿಸಿದ
ಬಾಲಮೃಗವೊಳಗಾಯ್ತಲಾ ತೊಡು
ಕೋಲನೆಂದರು ನಗುತ ಮನದಲಿ
ಕೌಳಿಕದ ಕುಹಕಿಗಳು ಕೌರವರಾಯ ಶಕುನಿಗಳು ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಾಂಧಾರಿಯ ಬಳಿಯಿಂದ ಬೀಳ್ಕೊಂಡ ಮೇಲೆ ದುರ್ಯೋಧನ ಅವರನ್ನು ತನ್ನ ಅರಮನೆಗೆ ಕರೆದುಕೊಂಡು ಹೋದ. ಕುಂತಿಯ ಕಾಲಿಗೆ ಎರಗಿದ. ಅನಂತರ ದುರ್ಯೊಧನ ಪಾಂಡವರನ್ನು ಉಚಿತವಾದ ಮಾತುಗಳಿಂದ ಸತ್ಕರಿಸಿದ. ವಂಚಕರೂ ದುಷ್ಟರೂ ಆದ ದುರ್ಯೋಧನ ಶಕುನಿಗಳು ಮನಸ್ಸಿನಲ್ಲೇ ನಗುತ್ತಾ ‘ಜಿಂಕೆಯ ಮರಿ ಸಿಕ್ಕಿ ಹಾಕಿಕೊಂಡಿತಲ್ಲಾ ಇನ್ನೇನು ಬಾಣ ಹೊಡೆಯಲು ಸಜ್ಜು ಮಾಡಿಕೊ’ ಎಂದು ಕೊಂಡರು.
ಪದಾರ್ಥ (ಕ.ಗ.ಪ)
ಕೋಲು-ಬಾಣ, ಕೌಳಿಕದ-ಮೋಸದ
ಮೂಲ ...{Loading}...
ಬೀಳುಕೊಟ್ಟಳು ಬಳಿಕ ಕುರು ನೃಪ
ನಾಲಯಕೆ ಕರೆದೊಯ್ದು ಕುಂತಿಯ
ಕಾಲಿಗೆರಗಿದನಿವರನುಚಿತೋಕ್ತಿಯಲಿ ಮನ್ನಿಸಿದ
ಬಾಲಮೃಗವೊಳಗಾಯ್ತಲಾ ತೊಡು
ಕೋಲನೆಂದರು ನಗುತ ಮನದಲಿ
ಕೌಳಿಕದ ಕುಹಕಿಗಳು ಕೌರವರಾಯ ಶಕುನಿಗಳು ॥13॥
೦೧೪ ಖಳರ ಹೃದಯದ ...{Loading}...
ಖಳರ ಹೃದಯದ ಕಾಳಕೂಟದ
ಹುಳುಕ ಬಲ್ಲರೆ ಮಾನ್ಯರವದಿರ
ಲಲಿತ ಮಧುರ ವಚೋವಿಳಾಸಕೆ ಮರುಳಗೊಂಡರಲೈ
ಅಳುಪಿದರೆ ಮಧುಕರನ ಮರಿ ಬೊ
ಬ್ಬುಲಿಯ ವನದೊಳಗೇನಹುದು ನೃಪ
ತಿಲಕರಿದ್ದರು ಬೇರೆ ರಚಿಸಿದ ರಾಜಭವನದಲಿ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಾನ್ಯರಾದ ಪಾಂಡವರು ಆ ದುಷ್ಟರ ಹೃದಯದಲ್ಲಿದ್ದ ಕಾಲಕೂಟದ ವಿಷ ಎಂತಹದೆಂದು ಬಲ್ಲರೆ ? ಅವರ ಕೋಮಲವಾದ ಮಧುರವಾದ ಮಾತುಗಳ ವಿಲಾಸಕ್ಕೆ ಮರುಳಾಗಿಬಿಟ್ಟರಲ್ಲಾ ! ದುಂಬಿಯ ಮರಿ ಜಾಲಿ ಮರಗಳ ಕಾಡಿಗೆ ಬಂದು ಸವಿಜೇನಿಗಾಗಿ ಆಸೆ ಪಟ್ಟರೆ ಏನು ಪ್ರಯೋಜನ ? ಹಾಗೆ ಯುಧಿಷ್ಠಿರಾದಿಗಳು ತಮಗಾಗಿಯೇ ಪ್ರತ್ಯೇಕವಾಗಿ ಏರ್ಪಡಿಸಿದ್ದ ರಾಜಭವನದಲ್ಲಿ ಉಳಿದುಕೊಂಡರು.
ಪದಾರ್ಥ (ಕ.ಗ.ಪ)
ಅಳುಪು-ಆಸೆಪಡು, ಬೊಬ್ಬುಲಿ-ಗೊಬ್ಬಳಿ, ಜಾಲಿ
ಮೂಲ ...{Loading}...
ಖಳರ ಹೃದಯದ ಕಾಳಕೂಟದ
ಹುಳುಕ ಬಲ್ಲರೆ ಮಾನ್ಯರವದಿರ
ಲಲಿತ ಮಧುರ ವಚೋವಿಳಾಸಕೆ ಮರುಳಗೊಂಡರಲೈ
ಅಳುಪಿದರೆ ಮಧುಕರನ ಮರಿ ಬೊ
ಬ್ಬುಲಿಯ ವನದೊಳಗೇನಹುದು ನೃಪ
ತಿಲಕರಿದ್ದರು ಬೇರೆ ರಚಿಸಿದ ರಾಜಭವನದಲಿ ॥14॥
೦೧೫ ಬನ್ದು ಕಣ್ಡುದು ...{Loading}...
ಬಂದು ಕಂಡುದು ನಿಖಿಳ ಪುರಜನ
ವಂದು ಕಾಣಿಕೆಗೊಟ್ಟು ಕೌರವ
ನಂದನರು ಸಚಿವರು ಪಸಾಯ್ತರು ನಿಯೋಗಿ ಮಂತ್ರಿಗಳು
ಸಂದಣಿಸಿದುದು ಕವಿ ಗಮಕಿ ನಟ
ವಂದಿ ಮಾಗಧ ಮಲ್ಲ ಗಾಯಕ
ವೃಂದ ದೀನಾನಾಥರೋಲಗಿಸಿದರು ಧರ್ಮಜನ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ದಿನ ಪುರದ ಜನರೆಲ್ಲರೂ ಬಂದು ಧರ್ಮರಾಯನನ್ನು ಕಂಡು ಕಾಣಿಕೆ ಕೊಟ್ಟು ಹೋದರು. ಕೌರವನ ಮಕ್ಕಳು ಸಚಿವರು ಸಾಮಂತರು, ನಿಯೋಗಿಗಳು, ಮಂತ್ರಿಗಳು ಒಟ್ಟೊಟ್ಟಿಗೆ ಬಂದು ಕಂಡು ಹೋದರು. ಕವಿಗಳು ಗಮಕಿಗಳು ನಟರು ವಂದಿ ಮಾಗಧರು ಮಲ್ಲರು ಗಾಯಕರು. ಕಡೆಗೆ ದೀನರು ಅನಾಥರು ಸಹ ಬಂದು ಧರ್ಮಜನನ್ನು ಓಲಗಿಸಿದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಬಂದು ಕಂಡುದು ನಿಖಿಳ ಪುರಜನ
ವಂದು ಕಾಣಿಕೆಗೊಟ್ಟು ಕೌರವ
ನಂದನರು ಸಚಿವರು ಪಸಾಯ್ತರು ನಿಯೋಗಿ ಮಂತ್ರಿಗಳು
ಸಂದಣಿಸಿದುದು ಕವಿ ಗಮಕಿ ನಟ
ವಂದಿ ಮಾಗಧ ಮಲ್ಲ ಗಾಯಕ
ವೃಂದ ದೀನಾನಾಥರೋಲಗಿಸಿದರು ಧರ್ಮಜನ ॥15॥
೦೧೬ ಆ ದಿವಸವನು ...{Loading}...
ಆ ದಿವಸವನು ಮಧುರ ಗೇಯ ನಿ
ನಾದದಲಿ ಕವಿ ವಾದಿ ವಾಗ್ಮಿ ವಿ
ನೋದದದಲಿ ನೂಕಿದರು ಮಜ್ಜನ ಭೋಜನಾದಿಯಲಿ
ಆದುದುತ್ಸಹವಂದಿನಿರುಳು ದಿ
ನಾದಿಯಲಿ ಕಂಡನು ಕನಸ ಪ್ರಾ
ಸಾದ ಶಿಖರವು ಮುರಿದು ಬಿದ್ದುದನಡವಿ ಮಧ್ಯದಲಿ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುಧಿಷ್ಠಿರಾದಿಗಳು ಆ ದಿನವನ್ನು ಮಧುರ ಸಂಗೀತವನ್ನು ಆಲಿಸುತ್ತಾ, ಕವಿ ವಾದಿ ವಾಗ್ಮಿಗಳ ವಿನೋದದಿಂದ ಕಳೆದರು. ಮಾರನೆಯ ಬೆಳಗಿನ ಜಾವದಲ್ಲಿ ಯುಧಿಷ್ಠಿರ ಅರಮನೆಯ ಶಿಖರ ಮುರಿದು ಕಾಡಿನ ನಡುವೆ ಬಿದ್ದಂತೆ ಕೆಟ್ಟ ಕನಸನ್ನು ಕಂಡನು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಆ ದಿವಸವನು ಮಧುರ ಗೇಯ ನಿ
ನಾದದಲಿ ಕವಿ ವಾದಿ ವಾಗ್ಮಿ ವಿ
ನೋದದದಲಿ ನೂಕಿದರು ಮಜ್ಜನ ಭೋಜನಾದಿಯಲಿ
ಆದುದುತ್ಸಹವಂದಿನಿರುಳು ದಿ
ನಾದಿಯಲಿ ಕಂಡನು ಕನಸ ಪ್ರಾ
ಸಾದ ಶಿಖರವು ಮುರಿದು ಬಿದ್ದುದನಡವಿ ಮಧ್ಯದಲಿ ॥16॥
೦೧೭ ಅರಸನುಪ್ಪವಡಿಸಿದನವನೀ ಶ್ವರ ...{Loading}...
ಅರಸನುಪ್ಪವಡಿಸಿದನವನೀ
ಶ್ವರ ವಿಹಿತ ಸತ್ಕ್ರಿಯೆಗಳನು ವಿ
ಸ್ತರಿಸಿದನು ದುಃಸ್ವಪ್ನಕುಂತವಿಭಿನ್ನಚೇತನನು
ಕರೆಸಿ ಧೌಮ್ಯನಿಗರುಹಲತಿ ದು
ಸ್ತರದ ಕನಸಿದು ಶಾಂತಿ ಕರ್ಮವ
ಪುರದೊಳಗೆ ವಿರಚಿಸುವೆನಂಜದಿರೆಂದನಾ ಮುನಿಪ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುಧಿಷ್ಠಿರ ರಾಜ ಎದ್ದ. ರಾಜರಿಗೆ ವಿಹಿತವಾದ ಎಲ್ಲ ಕ್ರಿಯೆಗಳನ್ನು ಮಾಡಿದ. ದುಃಸ್ವಪ್ನದ ದೆಸೆಯಿಂದ ಅವನ ಮನಸ್ಸು ವ್ಯಾಕುಲಗೊಂಡಿತ್ತು. ಧೌಮ್ಯರನ್ನು ಕರೆಸಿ ಅವನಿಗೆ ಹೇಳಿಕೊಂಡ. ಅವರು “ಇದು ಬಹಳ ಕೆಟ್ಟ ಕನಸು. ಇದಕ್ಕೆ ಉಪಶಾಂತಿಯ ಕಾರ್ಯವನ್ನು ನಮ್ಮ ಪಟ್ಟಣದಲ್ಲಿ ನೆರವೇರಿಸುತ್ತೇನೆ, ಅಂಜಬೇಡ” ಎಂದರು.
ಪದಾರ್ಥ (ಕ.ಗ.ಪ)
ಉಪ್ಪವಡಿಸು-ಮೇಲೇಳು
ದುಃಸ್ವಪ್ನಕುಂತವಿಭಿನ್ನಚೇತನನು - ದುಃಸ್ವಪ್ನದ ದೆಸೆಯಿಂದ ಚಿತ್ತವ್ಯಾಕುಲನಾದವನು
ಟಿಪ್ಪನೀ (ಕ.ಗ.ಪ)
ದುಃಸ್ವಪ್ನಕುಂತವಿಭಿನ್ನಚೇತನನು - ಇದೊಂದು ರೂಪಕಲಂಕಾರ.
ದುಃಸ್ವಪ್ನವೆಂಬ ಕುಂತ ( ಈಟಿ) ದಿಂದ ತಿವಿಯಲ್ಪಟ್ಟಿದ್ದರಿಂದ ಗಾಯಗೊಂಡ ಮನಸ್ಸುಳ್ಳವನಾಗಿ
ಮೂಲ ...{Loading}...
ಅರಸನುಪ್ಪವಡಿಸಿದನವನೀ
ಶ್ವರ ವಿಹಿತ ಸತ್ಕ್ರಿಯೆಗಳನು ವಿ
ಸ್ತರಿಸಿದನು ದುಃಸ್ವಪ್ನಕುಂತವಿಭಿನ್ನಚೇತನನು
ಕರೆಸಿ ಧೌಮ್ಯನಿಗರುಹಲತಿ ದು
ಸ್ತರದ ಕನಸಿದು ಶಾಂತಿ ಕರ್ಮವ
ಪುರದೊಳಗೆ ವಿರಚಿಸುವೆನಂಜದಿರೆಂದನಾ ಮುನಿಪ ॥17॥
೦೧೮ ಪುರದೊಳೆಲ್ಲಿಯ ಶಾನ್ತಿ ...{Loading}...
ಪುರದೊಳೆಲ್ಲಿಯ ಶಾಂತಿ ನಾರದ
ನೊರೆದನುತ್ಪಾತ ಪ್ರಬಂಧದ
ಹೊರಿಗೆಯನು ನಿಮ್ಮೈಶ್ವರಿಯ ವಿಧ್ವಂಸಕರವೆಂದು
ಇರುಳು ನಾನಾ ಸ್ವಪ್ನ ಕಾನನ
ಗಿರಿ ಪರಿಭ್ರಮಣೈಕ ಚಿಂತಾ
ಭರಿತನಾದೆನು ದೈವಕೃತ ಉಪಭೋಗ್ಯವೆನಗೆಂದ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇನ್ನು ಪಟ್ಟಣದಲ್ಲಿ ಎಲ್ಲಿ ಉಪಶಾಂತಿಯ ಕಾರ್ಯ ? ಹಿಂದೆ ಉತ್ಪಾತಗಳು ನಡೆದಾಗ ನಿಮ್ಮ ಐಶ್ವರ್ಯವೆಲ್ಲ ವಿಧ್ವಂಸವಾಗುತ್ತದೆಂದು ನಾರದರು ಹೇಳಿದ್ದರು. ರಾತ್ರಿ ನಾನು ಅನೇಕ ಸ್ಪಪ್ನಗಳನ್ನು ಕಂಡೆ. ಅಲ್ಲಿ ಬೆಟ್ಟ ಕಾಡುಗಳಲ್ಲಿ ಅಲೆಯುತ್ತಿದ್ದೆ. ಅದೇ ಚಿಂತೆಯಲ್ಲಿ ಮುಳುಗಿದ್ದೆ. ವಿಧಿ ತಂದೊಡ್ಡಿದುದನ್ನು ನಾವು ಅನುಭವಿಸಲೇಬೇಕಲ್ಲವೇ ?” ಎಂದ ಯುಧಿಷ್ಠಿರ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಪುರದೊಳೆಲ್ಲಿಯ ಶಾಂತಿ ನಾರದ
ನೊರೆದನುತ್ಪಾತ ಪ್ರಬಂಧದ
ಹೊರಿಗೆಯನು ನಿಮ್ಮೈಶ್ವರಿಯ ವಿಧ್ವಂಸಕರವೆಂದು
ಇರುಳು ನಾನಾ ಸ್ವಪ್ನ ಕಾನನ
ಗಿರಿ ಪರಿಭ್ರಮಣೈಕ ಚಿಂತಾ
ಭರಿತನಾದೆನು ದೈವಕೃತ ಉಪಭೋಗ್ಯವೆನಗೆಂದ ॥18॥
೦೧೯ ಜನಪ ಕಳುಹಿದ ...{Loading}...
ಜನಪ ಕಳುಹಿದ ದೂತರಿವರರ
ಮನೆಗೆ ಬಂದರು ಜೀಯ ಧೃತರಾ
ಷ್ಟ್ರನ ಸಮಯವಾಯಿತ್ತು ನಿಮ್ಮಡಿ ಬಿಜಯ ಮಾಡುವುದು
ಎನಲು ತನ್ನ ಕುಮಾರರನು ತ
ನ್ನನುಜರನು ಸಚಿವ ಪ್ರಧಾನರ
ನನಿಬರನು ಕರೆಸಿದನು ನೃಪ ಹೊರವಂಟನರಮನೆಯ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರ ರಾಜ ಕಳಿಸಿದಂತಹ ದೂತರು ಯುಧಿಷ್ಠಿರನಿದ್ದ ಅರಮನೆಗೆ ಬಂದು, ದೇವ ಈಗ ಧೃತರಾಷ್ಟ್ರರಿಗೆ ಸಮಯವಾಗಿದೆ.
ತಾವು ದಯಮಾಡಿಸಬೇಕು ಎಂದರು. ಯುಧಿಷ್ಠಿರ ಆ ಕೂಡಲೆ ತನ್ನ ಕುಮಾರರನ್ನು ಅನುಜರನ್ನು ಸಚಿವ ಪ್ರಧಾನರನ್ನೂ ಕರೆಸಿ,
ಅಲ್ಲಿಂದ ಹೊರಟ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಜನಪ ಕಳುಹಿದ ದೂತರಿವರರ
ಮನೆಗೆ ಬಂದರು ಜೀಯ ಧೃತರಾ
ಷ್ಟ್ರನ ಸಮಯವಾಯಿತ್ತು ನಿಮ್ಮಡಿ ಬಿಜಯ ಮಾಡುವುದು
ಎನಲು ತನ್ನ ಕುಮಾರರನು ತ
ನ್ನನುಜರನು ಸಚಿವ ಪ್ರಧಾನರ
ನನಿಬರನು ಕರೆಸಿದನು ನೃಪ ಹೊರವಂಟನರಮನೆಯ ॥19॥
೦೨೦ ಬನ್ದು ಧೃತರಾಷ್ಟ್ರನ ...{Loading}...
ಬಂದು ಧೃತರಾಷ್ಟ್ರನ ಪದಾಬ್ಜಕೆ
ವಂದಿಸಿದೊಡೆನ್ನಾನೆ ಬಾರೈ
ತಂದೆ ಬಾರೆಂದೆಳೆದು ಕುಳ್ಳಿರಿಸಿದನು ಮಂಚದಲಿ
ನಂದನರು ಭೀಮಾರ್ಜುನಾದಿಗ
ಳಂದು ಪರಿವೇಷ್ಟಿಸಿದರಿತ್ತಲು
ಕಂದು ಹೃದಯದ ಕೌರವೇಂದ್ರನ ಹದನ ಕೇಳ್ ಎಂದ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನ ಬಳಿ ಬಂದು ಅವನ ಪಾದಗಳಿಗೆ ವಂದಿಸಲು, ಅವನು “ಎನ್ನಾನೆ ಬಾರಯ್ಯ ತಂದೆ ಬಾ” ಎಂದು ಮಂಚದ ಮೇಲೆ ತನ್ನ ಪಕ್ಕಕ್ಕೇ ಎಳೆದು ಕುಳ್ಳಿರಿಸಿಕೊಂಡ. ಮಕ್ಕಳು ಮತ್ತು ಭೀಮಾರ್ಜುನಾದಿಗಳೂ ಅವರ ಸುತ್ತಲೂ ಸೇರಿದರು. ದುಷ್ಟ ಹೃದಯದ ಕೌರವೇಂದ್ರನ ಆಗಿನ ಸ್ಥಿತಿಯನ್ನು ಕೇಳಿ.
ಪದಾರ್ಥ (ಕ.ಗ.ಪ)
ಪರಿವೇಷ್ಟಿಸು-ಸುತ್ತುಗಟ್ಟು
ಮೂಲ ...{Loading}...
ಬಂದು ಧೃತರಾಷ್ಟ್ರನ ಪದಾಬ್ಜಕೆ
ವಂದಿಸಿದೊಡೆನ್ನಾನೆ ಬಾರೈ
ತಂದೆ ಬಾರೆಂದೆಳೆದು ಕುಳ್ಳಿರಿಸಿದನು ಮಂಚದಲಿ
ನಂದನರು ಭೀಮಾರ್ಜುನಾದಿಗ
ಳಂದು ಪರಿವೇಷ್ಟಿಸಿದರಿತ್ತಲು
ಕಂದು ಹೃದಯದ ಕೌರವೇಂದ್ರನ ಹದನ ಕೇಳೆಂದ ॥20॥
೦೨೧ ಕರೆಸಿದನು ಶಕುನಿಯನು ...{Loading}...
ಕರೆಸಿದನು ಶಕುನಿಯನು ಕರ್ಣಂ
ಗರುಹಿದನು ಸೈಂಧವನನೆಕ್ಕಟಿ
ಗರೆದು ಹೇಳಿದ ಕೃತ್ರಿಮದ ಹಾಸಂಗಿಗಳ ರಚಿಸಿ
ಹರಸಿಕೊಂಡರು ಗಣಪ ಯಕ್ಷೇ
ಶ್ವರಿ ಕಳಾವತಿ ದುರ್ಗಿ ಭುವನೇ
ಶ್ವರಿಗಳಿಗೆ ವಿವಿಧೋಪಚಾರದ ಬಲಿ ವಿಧಾನದಲಿ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಕಡೆ ದುರ್ಯೋಧನ ಶಕುನಿಯನ್ನು ಕರೆಸಿದ. ಕರ್ಣನಿಗೆ ತಿಳಿಸಿದ. ಸೈಂಧವನನ್ನೂ ಏಕಾಂತಕ್ಕೆ ಕರೆಸಿಕೊಂಡು ಹೇಳಿದ. ಕೃತಕ ದಾಳಗಳನ್ನು ಸಿದ್ಧಮಾಡಿಸಿ ಇಟ್ಟುಕೊಂಡ. ಬಲಿಯ ವಿಧಾನವನ್ನನುಸರಿಸಿ ನಾನಾ ಬಗೆಯ ಉಪಚಾರಗಳಿಂದ ಗಣಪತಿ, ಯಕ್ಷೇಶ್ವರಿ,
ಕಲಾವತಿ, ದುರ್ಗಿ, ಭುವನೇಶ್ವರಿಗಳಿಗೆ ಪೂಜೆಯನ್ನು ಸಲ್ಲಿಸಿ ಹರಕೆಯನ್ನು ಹೊತ್ತ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಕರೆಸಿದನು ಶಕುನಿಯನು ಕರ್ಣಂ
ಗರುಹಿದನು ಸೈಂಧವನನೆಕ್ಕಟಿ
ಗರೆದು ಹೇಳಿದ ಕೃತ್ರಿಮದ ಹಾಸಂಗಿಗಳ ರಚಿಸಿ
ಹರಸಿಕೊಂಡರು ಗಣಪ ಯಕ್ಷೇ
ಶ್ವರಿ ಕಳಾವತಿ ದುರ್ಗಿ ಭುವನೇ
ಶ್ವರಿಗಳಿಗೆ ವಿವಿಧೋಪಚಾರದ ಬಲಿ ವಿಧಾನದಲಿ ॥21॥
೦೨೨ ದ್ಯೂತ ಸಿದ್ಧಿಯ ...{Loading}...
ದ್ಯೂತ ಸಿದ್ಧಿಯ ಮಂತ್ರ ವರ ವಿ
ದ್ಯಾತಿಶಯ ವಿಚ್ಛೇದ ರಕ್ಷ ವಿ
ಧೂತ ರಿಪುಮತಿ ಯಂತ್ರ ಪರಸನ್ಮೋಹನೌಷಧಿಯ
ಈತಗಳು ಮೇಳವಿಸಿದರು ನಿ
ರ್ಭೀತರಿವರಿದನೆತ್ತ ಬಲ್ಲರು
ಕೈತವದ ಕಣಿ ಕೌರವೇಶ್ವರ ಬಂದನರಮನೆಗೆ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ಯೂತ ಸಿದ್ಧಿಯ ಮಂತ್ರ, ಎದುರು ಪಕ್ಷದವರ ವಿದ್ಯಾತಿಶಯವನ್ನು ವಿಚ್ಛೇದಿಸುವ ಮತ್ತು ಅವರ ಬುದ್ಧಿಯನ್ನು ಮಂಕಾಗಿಸುವಂತಹ ಯಂತ್ರ, ಎದುರಾಳಿಗಳನ್ನು ಮೈಮರೆಯುವಂತೆ ಮಾಡುವ ಸಮ್ಮೋಹನೌಷಧಿಗಳು-ಇವನ್ನೆಲ್ಲ
ಸಿದ್ಧಪಡಿಸಿಕೊಂಡರು. ನಿರ್ಭೀತರಾದ ಪಾಂಡವರಿಗೆ ಇದೆಲ್ಲ ಹೇಗೆ ತಿಳಿದೀತು ! ಮೋಸದ ಗಣಿಯಾದ ಕೌರವೇಶ್ವರ ಅಪ್ಪನ ಅರಮನೆಗೆ ಬಂದ.
ಪದಾರ್ಥ (ಕ.ಗ.ಪ)
ಕೈತವದ ಕಣಿ-ಮೋಸದ ಗಣಿ
ಮೂಲ ...{Loading}...
ದ್ಯೂತ ಸಿದ್ಧಿಯ ಮಂತ್ರ ವರ ವಿ
ದ್ಯಾತಿಶಯ ವಿಚ್ಛೇದ ರಕ್ಷ ವಿ
ಧೂತ ರಿಪುಮತಿ ಯಂತ್ರ ಪರಸನ್ಮೋಹನೌಷಧಿಯ
ಈತಗಳು ಮೇಳವಿಸಿದರು ನಿ
ರ್ಭೀತರಿವರಿದನೆತ್ತ ಬಲ್ಲರು
ಕೈತವದ ಕಣಿ ಕೌರವೇಶ್ವರ ಬಂದನರಮನೆಗೆ ॥22॥
೦೨೩ ಚಿತವಿಸಿದಿರೆ ಬೊಪ್ಪ ...{Loading}...
ಚಿತವಿಸಿದಿರೆ ಬೊಪ್ಪ ಮಯನಿವ
ಗಿತ್ತ ಸಭೆಯದು ದೇವನಿರ್ಮಿತ
ವೆತ್ತ ಮಾನವ ಕರ್ಮವೆತ್ತಲು ಸರಿಸವಲ್ಲದಕೆ
ಇತ್ತ ನಿಮ್ಮಡಿ ಮಾಡಿಸಿದ ಸಭೆ
ಯತ್ತ ಬಿಜಯಂಗೈದು ನೋಡಿದ
ಡುತ್ತಮವಲಾಯೆಂದನಾ ದುರ್ಯೋಧನನು ನಗುತ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀವು ಗಮನಿಸಿದಿರಾ ಅಪ್ಪ ! ಮಯನು ಇವರಿಗೆ ರಚಿಸಿಕೊಟ್ಟ ಸಭೆ ದೇವ ನಿರ್ಮಿತ. ನಮ್ಮದು ಮಾನವ ಕೃತ. ಅದೆಲ್ಲಿ ಇದೆಲ್ಲಿ, ಒಂದಕ್ಕೊಂದು ಸರಿಸಮವಲ್ಲ. ಇಲ್ಲಿ ನೀವು ಕಟ್ಟಿಸಿದ ಸಭೆಯ ಕಡೆ ದಯಮಾಡಿಸಿ ಅದನ್ನು ನೋಡಿದರೆ ಒಳ್ಳೆಯದಲ್ಲವೇ ? ಎಂದು ದುರ್ಯೋಧನ ನಕ್ಕ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಚಿತವಿಸಿದಿರೆ ಬೊಪ್ಪ ಮಯನಿವ
ಗಿತ್ತ ಸಭೆಯದು ದೇವನಿರ್ಮಿತ
ವೆತ್ತ ಮಾನವ ಕರ್ಮವೆತ್ತಲು ಸರಿಸವಲ್ಲದಕೆ
ಇತ್ತ ನಿಮ್ಮಡಿ ಮಾಡಿಸಿದ ಸಭೆ
ಯತ್ತ ಬಿಜಯಂಗೈದು ನೋಡಿದ
ಡುತ್ತಮವಲಾಯೆಂದನಾ ದುರ್ಯೋಧನನು ನಗುತ ॥23॥
೦೨೪ ಆ ಸಭೆಯ ...{Loading}...
ಆ ಸಭೆಯ ನೋಡುವೆವು ಶಿಲ್ಪದ
ದೇಸಿಗಾರರ ಕೈಮೆಗಳು ಲೇ
ಸೈಸಲೇ ಬೇರೇನು ಮಾನುಷ ದೈವಕೃತಿಯೆಂದು
ಈಸು ಸಂಪ್ರಿಯ ನಮ್ಮಲುಂಟೇ
ಲೇಸೆನುತ ನೃಪನೆದ್ದು ಕೈಗೊಡ
ಲಾ ಸಭೆಗೆ ಧೃತರಾಷ್ಟ್ರ ಬಂದನು ರಾಜಗಣ ಸಹಿತ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಆ ಸಭೆಯನ್ನು ನಾವು ನೋಡುತ್ತೇವೆ. ಶಿಲ್ಪ ಕೌಶಲವುಳ್ಳವರು ಮಾಡಿದ ಕೃತಿ ಉತ್ತಮವಾಗಿಯೇ ಇರುತ್ತದಲ್ಲವೇ ? ಮನುಷ್ಯಕೃತ ದೈವಕೃತ ಎಂದು ಅದರಲ್ಲಿ ವ್ಯತ್ಯಾಸವೆಲ್ಲಿಯದು ಎಂದ. ಅದಕ್ಕೆ ಸುಯೋಧನ, ಇಷ್ಟೊಂದು ಪ್ರೀತಿ ನಮ್ಮ ಮೇಲೆ ಇದೆಯಲ್ಲಾ " ಎಂದು ಕೈ ನೀಡಿ ಯುಧಿಷ್ಠಿರನನ್ನು ಎಬ್ಬಿಸಿದ. ಧೃತರಾಷ್ಟ್ರನೂ ಸೇರಿ ಎಲ್ಲರೂ ಅತ್ತ ಹೊರಟರು.
ಪದಾರ್ಥ (ಕ.ಗ.ಪ)
ಸಂಪ್ರಿಯ-ಪ್ರೀತಿ
ಮೂಲ ...{Loading}...
ಆ ಸಭೆಯ ನೋಡುವೆವು ಶಿಲ್ಪದ
ದೇಸಿಗಾರರ ಕೈಮೆಗಳು ಲೇ
ಸೈಸಲೇ ಬೇರೇನು ಮಾನುಷ ದೈವಕೃತಿಯೆಂದು
ಈಸು ಸಂಪ್ರಿಯ ನಮ್ಮಲುಂಟೇ
ಲೇಸೆನುತ ನೃಪನೆದ್ದು ಕೈಗೊಡ
ಲಾ ಸಭೆಗೆ ಧೃತರಾಷ್ಟ್ರ ಬಂದನು ರಾಜಗಣ ಸಹಿತ ॥24॥
೦೨೫ ಬಿಗಿದ ನೀಲದ ...{Loading}...
ಬಿಗಿದ ನೀಲದ ಸರಿಯ ನೆಲಗ
ಟ್ಟುಗಳ ವೈಡೂರಿಯದ ಮಣಿ ಭಿ
ತ್ತಿಗಳ ವಜ್ರದ ವೇದಿಗಳ ವಿದ್ರುಮದ ಲೋವೆಗಳ
ಝಗೆಯ ಲಹರಿಯ ಜಾಳಿಗೆಯ ಪ
ಚ್ಚೆಗಳ ಪಾಗಾರದ ಸುರತ್ನಾ
ಳಿಗಳಲೆಸೆದುದು ರಾಜಸಭೆ ತತ್ಕ್ರೋಶ ಮಾತ್ರದಲಿ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀಲದ ರಾಶಿಯನ್ನು ಅಳವಡಿಸಿದ ನೆಲಗಟ್ಟುಗಳು, ವೈಡೂರ್ಯದ ಮಣಿ ಖಚಿತವಾದ ಗೋಡೆಗಳು, ವಜ್ರ ಖಚಿತವಾದ ವೇದಿಕೆಗಳು, ಹವಳದಿಂದ ಕೂಡಿದ ಲೋವೆಗಳು. ಕಾಂತಿಯ ಲಹರಿಯನ್ನು ಹೊರಚೆಲ್ಲುತ್ತಿರುವ ಪಚ್ಚೆಗಳಿಂದ ನಿರ್ಮಿಸಿದ ಜಾಳಂಧ್ರಗಳು ಬಗೆಬಗೆಯ ನಾನಾ ಶ್ರೇಷ್ಠ ರತ್ನಗಳಿಂದ ಕೂಡಿದ ಪ್ರಾಕಾರ ಇವುಗಳಿಂದ ಶೋಭಿಸುತ್ತಿದ್ದ ಆ ಸಭೆ ಒಂದು ಕ್ರೋಶದಷ್ಟು ವಿಸ್ತಾರವಾಗಿತ್ತು.
ಪದಾರ್ಥ (ಕ.ಗ.ಪ)
ವಿದ್ರುಮ-ಹವಳ, ಲೋವೆ-ಇಳಿಜಾರಾದ ಸೂರು, ಝಗೆಯ ಲಹರಿ-ಕಾಂತಿಯ ಅಲೆ, ಜಾಳಿಗೆ-ಜಾಳಂದ್ರ, ಪಾಗಾರ-ಪ್ರಾಕಾರ, ಕ್ರೋಶ-ದೂರದ ಅಳತೆ, ಹರದಾರಿ
ಸರಿ -ರಾಶಿ
ಮೂಲ ...{Loading}...
ಬಿಗಿದ ನೀಲದ ಸರಿಯ ನೆಲಗ
ಟ್ಟುಗಳ ವೈಡೂರಿಯದ ಮಣಿ ಭಿ
ತ್ತಿಗಳ ವಜ್ರದ ವೇದಿಗಳ ವಿದ್ರುಮದ ಲೋವೆಗಳ
ಝಗೆಯ ಲಹರಿಯ ಜಾಳಿಗೆಯ ಪ
ಚ್ಚೆಗಳ ಪಾಗಾರದ ಸುರತ್ನಾ
ಳಿಗಳಲೆಸೆದುದು ರಾಜಸಭೆ ತತ್ಕ್ರೋಶ ಮಾತ್ರದಲಿ ॥25॥
೦೨೬ ಕವಿದವರುಣಾಂಶುಗಳ ಲಹರಿಯ ...{Loading}...
ಕವಿದವರುಣಾಂಶುಗಳ ಲಹರಿಯ
ಲವಣಿ ಲಾವಣಿಗೆಯಲಿ ನೀಲ
ಚ್ಛವಿಯ ದೀಧಿತಿ ಝಳಪಿಸಿತು ದೆಸೆದೆಸೆಯ ಭಿತ್ತಿಗಳ
ತಿವಿದವೆಳ ಮುತ್ತುಗಳ ಚಂದ್ರಿಕೆ
ಜವಳಿಸಿದವೊಂದೊಂದನೌಕಿದ
ವವಿರಳಿತ ಮಣಿ ಕಿರಣ ವೇಣೀಬಂಧ ಬಂಧುರದಿ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೆಂಪು ಕಿರಣಗಳು ಅಲೆಅಲೆಯಾಗಿ ಕವಿದು ಹೊಳೆಯುತ್ತಿದ್ದುವು. ನೀಲವರ್ಣದ ಕಾಂತಿ ದಿಗ್ಭಿತ್ತಿಗಳಲ್ಲೆಲ್ಲ ದಟ್ಟವಾಗಿ ಹರಡಿ ಶೋಭಿಸುತ್ತಿತ್ತು. ಎಳೆಯ ಮುತ್ತುಗಳಿಂದ ಹೊರಹೊಮ್ಮುತ್ತಿದ್ದ ಬೆಳದಿಂಗಳು ಚಿಮ್ಮುತ್ತಿತ್ತು. ಈ ಬೆಳಕುಗಳು ಜೋಡಿ ಜೋಡಿಯಾಗಿ ಬೆರೆಯುತ್ತಿದ್ದುವು, ಒಂದನ್ನೊಂದು ಅದುಮುತ್ತಿದ್ದುವು. ಮಣಿಕಿರಣಗಳು ಅವಿರಳವಾಗಿ ಜಡೆ ಹಾಕಿದಂತೆ ಒಂದರೊಳಗೊಂದು
ಹೆಣೆದುಕೊಂಡು ಮನೋಹರವಾಗಿ ಕಾಣುತ್ತಿದ್ದವು.
ಪದಾರ್ಥ (ಕ.ಗ.ಪ)
ಲವಣಿ-ಕಾಂತಿ,
ಲಾವಣಿಗೆ-ರಾಶಿ
ದೀಧಿತಿ -ಹೊಳಪು
ಜವಳಿಸಿದವು -ಬೆರೆತವು
ಅವಿರಳಿತ - ಹೇರಳವಾಗಿದ್ದ
ಮೂಲ ...{Loading}...
ಕವಿದವರುಣಾಂಶುಗಳ ಲಹರಿಯ
ಲವಣಿ ಲಾವಣಿಗೆಯಲಿ ನೀಲ
ಚ್ಛವಿಯ ದೀಧಿತಿ ಝಳಪಿಸಿತು ದೆಸೆದೆಸೆಯ ಭಿತ್ತಿಗಳ
ತಿವಿದವೆಳ ಮುತ್ತುಗಳ ಚಂದ್ರಿಕೆ
ಜವಳಿಸಿದವೊಂದೊಂದನೌಕಿದ
ವವಿರಳಿತ ಮಣಿ ಕಿರಣ ವೇಣೀಬಂಧ ಬಂಧುರದಿ ॥26॥
೦೨೭ ಅಲ್ಲಿ ವಿಮಳೋದ್ಯಾನ ...{Loading}...
ಅಲ್ಲಿ ವಿಮಳೋದ್ಯಾನ ವೀಧಿಗ
ಳಲ್ಲಿ ತಾವರೆಗೊಳದ ರಚನೆಗ
ಳಲ್ಲಿ ಹಂಸ ಮಯೂರ ಮಧುಕರ ಶುಕ ಪಿಕಾನೀಕ
ಅಲ್ಲಿ ಕೇಳೀ ಶೈಲ ಹಿಮ ಗೃಹ
ವಲ್ಲಿ ವಿವಿಧ ವಿಲಾಸ ರಚನೆಗ
ಳಲ್ಲಿ ಹೊಯ್ಕೈಯೆನಿಸಿ ಮೆರೆದುದು ಪಾಂಡವರ ಸಭೆಯ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಲ್ಲಿ ಮನೋಹರವಾದ ಉದ್ಯಾನದ ಬೀದಿಗಳು, ತಾವರೆ ಕೊಳದ ರಚನೆಗಳು, ಹಂಸ, ನವಿಲು, ದುಂಬಿ, ಕೋಗಿಲೆ, ಇವುಗಳ ಕ್ರೀಡೆ, ಅಲ್ಲಲ್ಲಿ ಶೈಲಗಳು, ಹಿಮಗೃಹಗಳು, ಹಾಗೆಯೇ ಎಲ್ಲೆಲ್ಲೂ ನಾನಾ ವಿಲಾಸ ಮಯವಾದ ರಚನೆಗಳೂ ಇದ್ದು ಪಾಂಡವರ ಸಭೆಗೆ ಸರಿಸಮಾನವಂತೆ ಕೌರವರ ಸಭೆ ಶೋಭಿಸುತ್ತಿತ್ತು.
ಪದಾರ್ಥ (ಕ.ಗ.ಪ)
ಹೊಯ್ಕೈಯ್-ಸರಿಸಮಾನ
ಕೇಳೀ - ಕ್ರೀಡೆ
ಮೂಲ ...{Loading}...
ಅಲ್ಲಿ ವಿಮಳೋದ್ಯಾನ ವೀಧಿಗ
ಳಲ್ಲಿ ತಾವರೆಗೊಳದ ರಚನೆಗ
ಳಲ್ಲಿ ಹಂಸ ಮಯೂರ ಮಧುಕರ ಶುಕ ಪಿಕಾನೀಕ
ಅಲ್ಲಿ ಕೇಳೀ ಶೈಲ ಹಿಮ ಗೃಹ
ವಲ್ಲಿ ವಿವಿಧ ವಿಲಾಸ ರಚನೆಗ
ಳಲ್ಲಿ ಹೊಯ್ಕೈಯೆನಿಸಿ ಮೆರೆದುದು ಪಾಂಡವರ ಸಭೆಯ ॥27॥
೦೨೮ ಸ್ಥಳವನೇ ಜಲವೆನ್ದು ...{Loading}...
ಸ್ಥಳವನೇ ಜಲವೆಂದು ನಿರ್ಮಳ
ಜಲವನೇ ಸ್ಥಳವೆಂದು ಬಾಗಿಲ
ನೆಳಲ ಭಿತ್ತಿಯ ಹಾಯ್ದು ಬಾಗಿಲ ಭಿತ್ತಿಯೆಂದುಳಿದು
ಕಳವಳಿಸುವನೆ ಧರ್ಮಸುತನಾ
ಕೊಳನನೇ ಕೊಳನೆಂದು ಬಾಗಿಲ
ನೆಳಲ ಹೊಗಳುತ ಬಂದು ಹೊಕ್ಕನು ಬಹಳ ಚೌಕಿಗೆಯ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸ್ಥಳವನ್ನೇ ಜಲವೆಂದು ನಿರ್ಮಲ ಜಲವನ್ನೇ ಸ್ಥಳವೆಂದು, ಬಾಗಿಲ ಪ್ರತಿಬಿಂಬವನ್ನೇ ಬಾಗಿಲೆಂದು ತಿಳಿದು ಗೋಡೆಯನ್ನು ಹಾಯ್ದು ನಿಜವಾದ ಬಾಗಿಲನ್ನು ಗೋಡೆಯೆಂದು ತಿಳಿದು ತಡವರಿಸಿ ಕಳವಳಗೊಳ್ಳುವನೇ ಧರ್ಮಸುತನು ? ಅವನು ನಿಜವಾದ ಕೊಳವನ್ನೇ ಕೊಳವೆಂದು, ಬಾಗಿಲನ್ನೇ ಬಾಗಿಲೆಂದು ಅರಿತು ಅವುಗಳ ರಚನಾ ಕೌಶಲವನ್ನು ಮೆಚ್ಚಿ ಹೊಗಳುತ್ತಾ ಅಂಗಳಗಳನ್ನು
ದಾಟಿ ಬಂದ.
ಪದಾರ್ಥ (ಕ.ಗ.ಪ)
ಪಾಠಾನ್ತರ (ಕ.ಗ.ಪ)
ಭಿತ್ತಿಯೆಂದಿಳಿದು –> ಭಿತ್ತಿಯೆಂದುಳಿದು
ಮೂಲ ...{Loading}...
ಸ್ಥಳವನೇ ಜಲವೆಂದು ನಿರ್ಮಳ
ಜಲವನೇ ಸ್ಥಳವೆಂದು ಬಾಗಿಲ
ನೆಳಲ ಭಿತ್ತಿಯ ಹಾಯ್ದು ಬಾಗಿಲ ಭಿತ್ತಿಯೆಂದುಳಿದು
ಕಳವಳಿಸುವನೆ ಧರ್ಮಸುತನಾ
ಕೊಳನನೇ ಕೊಳನೆಂದು ಬಾಗಿಲ
ನೆಳಲ ಹೊಗಳುತ ಬಂದು ಹೊಕ್ಕನು ಬಹಳ ಚೌಕಿಗೆಯ ॥28॥
೦೨೯ ಕೆಲಸದಲಿ ಶಿಲ್ಪದಲಿ ...{Loading}...
ಕೆಲಸದಲಿ ಶಿಲ್ಪದಲಿ ರತ್ನಾ
ವಳಿಯಘಾಟ ನವಾಯಿಯಲಿ ಸಭೆ
ಯಿಳೆಗಪೂರ್ವವಲಾ ಮಹಾದೇವೆಂತು ರಚಿಸಿದರೊ
ವಿಳಸದಾಯವ್ಯಯದ ವಿಶ್ರುತ
ವಳಯದುನ್ನತ ವಾಸ್ತು ಲಕ್ಷಣ
ದೊಳಗೆ ಸೇರಿದುದೆಂದು ನೃಪ ಕೊಂಡಾಡಿದನು ಸಭೆಯ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೆಲಸದಲ್ಲಿ, ಶಿಲ್ಪದಲ್ಲಿ, ರತ್ನಾವಳಿಯ ಜೋಡಣೆಯಲ್ಲಿ, ಎಲ್ಲದರ ಅತಿಶಯ ನವೀನತೆಯಲ್ಲಿ ಸಭೆ ಈ ಭೂಮಂಡಲಕ್ಕೇ ಅಪೂರ್ವವಾಗಿದೆ. ಮಹಾದೇವ ! ಹೇಗೆ ರಚಿಸಿದರೋ ಈ ಭವನವನ್ನು. ಆಯ, ವ್ಯಯ, ವಿಶ್ರುತ ವಲಯ ಇವುಗಳ ಪರಿಗಣನೆಯಿಂದ ಶ್ರೇಷ್ಠವಾದ ವಾಸ್ತು ಲಕ್ಷಣಗಳನ್ನು ಒಳಗೊಂಡಿದೆ. ಎಂದು ಧರ್ಮರಾಜ ಆ ಸಭೆಯನ್ನು ಕೊಂಡಾಡಿದ.
ಪದಾರ್ಥ (ಕ.ಗ.ಪ)
ಅಘಾಟ- ಅತಿಶಯ
ಮೂಲ ...{Loading}...
ಕೆಲಸದಲಿ ಶಿಲ್ಪದಲಿ ರತ್ನಾ
ವಳಿಯಘಾಟ ನವಾಯಿಯಲಿ ಸಭೆ
ಯಿಳೆಗಪೂರ್ವವಲಾ ಮಹಾದೇವೆಂತು ರಚಿಸಿದರೊ
ವಿಳಸದಾಯವ್ಯಯದ ವಿಶ್ರುತ
ವಳಯದುನ್ನತ ವಾಸ್ತು ಲಕ್ಷಣ
ದೊಳಗೆ ಸೇರಿದುದೆಂದು ನೃಪ ಕೊಂಡಾಡಿದನು ಸಭೆಯ ॥29॥
೦೩೦ ಸೂಸಕದ ಮುತ್ತುಗಳು ...{Loading}...
ಸೂಸಕದ ಮುತ್ತುಗಳು ತಾರಾ
ರಾಶಿಗಳ ಹಬ್ಬುಗೆಯ ನೀಲದ
ಹಾಸರೆಗಳೇ ಹೋಲುತಿದ್ದವು ಗಗನ ಮಂಡಲವ
ಸೂಸಕಂಗಳ ಮುರಿದ ಮುತ್ತಿನ
ದೇಶಿಕಾತಿಯರಾನನೇಂದುಗ
ಳಾ ಸುಧಾಕರವೆನಲು ಗೆಲಿದುದು ಸಭೆ ನಭಸ್ಥಳವ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತೂಗುಬಿಟ್ಟಿದ್ದ ಮುತ್ತಿನ ಗೊಂಚಲುಗಳು ಆಗಸದಲ್ಲಿ ಹಬ್ಬಿರುವ ನಕ್ಷತ್ರ ರಾಶಿಗಳನ್ನು ಹೋಲುತ್ತಿದ್ದುವು. ನೀಲದ ಹಾಸುಗಲ್ಲುಗಳು
ಆಕಾಶಮಂಡಲವನ್ನು ಹೋಲುತ್ತಿದ್ದುವು. ಮುತ್ತಿನ ಸರಗಳನ್ನು ಸುತ್ತಲೂ ತಿರುಗಿಸಿ ಧರಿಸಿಕೊಂಡಿದ್ದ ದೇಶಿಕಾತಿಯರ ಮುಖಗಳು ಚಂದ್ರನಂತಿದ್ದವು. ಹಾಗಾಗಿ ಸಭೆ ನಭಸ್ಥಳವನ್ನು ಮೀರಿಸಿತು.
ಪದಾರ್ಥ (ಕ.ಗ.ಪ)
ಸೂಸಕ-ಕುಚ್ಚು, ಹಾಸರೆ-ಹಾಸುಗಲ್ಲು, ದೇಶಕಾತಿ-ನಾಡಚೆಲುವೆ
ಸುಧಾಕರ - ಚಂದ್ರ
ನಭಸ್ಥಳ - ಅಕಾಶ
ಮೂಲ ...{Loading}...
ಸೂಸಕದ ಮುತ್ತುಗಳು ತಾರಾ
ರಾಶಿಗಳ ಹಬ್ಬುಗೆಯ ನೀಲದ
ಹಾಸರೆಗಳೇ ಹೋಲುತಿದ್ದವು ಗಗನ ಮಂಡಲವ
ಸೂಸಕಂಗಳ ಮುರಿದ ಮುತ್ತಿನ
ದೇಶಿಕಾತಿಯರಾನನೇಂದುಗ
ಳಾ ಸುಧಾಕರವೆನಲು ಗೆಲಿದುದು ಸಭೆ ನಭಸ್ಥಳವ ॥30॥
೦೩೧ ಗುರು ನದೀಸುತ ...{Loading}...
ಗುರು ನದೀಸುತ ಕರ್ಣ ಸೈಂಧವ
ಗುರುತನುಜ ಭಗದತ್ತ ಬಾಹ್ಲಿಕ
ನುರು ಯವನ ಸಂವೀರ ಕೌಸಲ ಚೈದ್ಯ ಮಾಗಧರು
ಅರಸುಗಳು ನಾನಾ ದಿಗಂತದ
ಧರಣಿಪರು ಸಚಿವರು ಪಸಾಯ್ತರು
ನೆರೆದುದಂದಿನ ದಿವಸದೋಲಗದೊಡ್ಡು ಚೆಲುವಾಯ್ತು ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ದಿನ ಅಲ್ಲಿ ನಡೆದ ಓಲಗದಲ್ಲಿ ದ್ರೋಣ, ಭೀಷ್ಮ, ಕರ್ಣ, ಸೈಂಧವ, ಅಶ್ವತ್ಥಾಮ, ಭಗದತ್ತ, ಬಾಹ್ಲಿಕ, ಯವನ, ಸಂವೀರ, ಕೌಸಲ, ಚೈದ್ಯ, ಮಾಗಧ ಮೊದಲಾದ ಅರಸರು, ನಾನಾ ದಿಗಂತದ ರಾಜರುಗಳು ಸಚಿವರು ಪಸಾಯ್ತರು ನೆರೆದಿದ್ದು ತುಂಬ ವೈಭವಯುತವಾಗಿದ್ದಿತು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಗುರು ನದೀಸುತ ಕರ್ಣ ಸೈಂಧವ
ಗುರುತನುಜ ಭಗದತ್ತ ಬಾಹ್ಲಿಕ
ನುರು ಯವನ ಸಂವೀರ ಕೌಸಲ ಚೈದ್ಯ ಮಾಗಧರು
ಅರಸುಗಳು ನಾನಾ ದಿಗಂತದ
ಧರಣಿಪರು ಸಚಿವರು ಪಸಾಯ್ತರು
ನೆರೆದುದಂದಿನ ದಿವಸದೋಲಗದೊಡ್ಡು ಚೆಲುವಾಯ್ತು ॥31॥
೦೩೨ ಧರಣಿಪತಿ ಕೇಳೊನ್ದು ...{Loading}...
ಧರಣಿಪತಿ ಕೇಳೊಂದು ಹರಿಯಂ
ತರ ವಿಶಾಲ ಮಹಾಸಭಾ ವಿ
ಸ್ತರಣದಲಿ ತೆರಹ ಕಾಣೆನು ತೀವಿತವನಿಪರು
ಹೊರಗೆ ರಥಿಕರು ರಾಹುತರು ಜೋ
ಧರು ಪದಾತಿಗಳಿದ್ದುದಂದಿನ
ಸಿರಿ ಸುರೇಂದ್ರನ ಪಾಡಿಗೈಮಡಿ ಹತ್ತು ಮಡಿಯೆಂದ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಮಹಾಸಭೆಯ ವಿಸ್ತಾರ ಒಂದು ಹರಿಯ ಅಂತರ, ಅಷ್ಟು ವಿಶಾಲವಾದ ಪ್ರದೇಶದಲ್ಲಿಯೂ ನಡುವೆ ಅವಕಾಶ ಕೊಡದಂತೆ ರಾಜರುಗಳು ತುಂಬಿದ್ದರು. ಹೊರಗೆ ರಥಿಕರು, ರಾಹುತರು, ಯೋಧರು, ಪದಾತಿಗಳು ಇದ್ದರು. ಅಂದಿನ ವೈಭವವನ್ನು ಗಮನಿಸಿದರೆ ಸುರೇಂದ್ರನ ಸಭೆಗೆ ಐದರಷ್ಟು, ಹತ್ತರಷ್ಟು ಎನ್ನುವಂತಿತ್ತು.
ಪದಾರ್ಥ (ಕ.ಗ.ಪ)
ಹರಿ -ವಿಸ್ತಾರದ ಒಂದು ಪ್ರಮಾಣ
ಮೂಲ ...{Loading}...
ಧರಣಿಪತಿ ಕೇಳೊಂದು ಹರಿಯಂ
ತರ ವಿಶಾಲ ಮಹಾಸಭಾ ವಿ
ಸ್ತರಣದಲಿ ತೆರಹ ಕಾಣೆನು ತೀವಿತವನಿಪರು
ಹೊರಗೆ ರಥಿಕರು ರಾಹುತರು ಜೋ
ಧರು ಪದಾತಿಗಳಿದ್ದುದಂದಿನ
ಸಿರಿ ಸುರೇಂದ್ರನ ಪಾಡಿಗೈಮಡಿ ಹತ್ತು ಮಡಿಯೆಂದ ॥32॥
೦೩೩ ಒನ್ದು ಕಡೆಯಲಿ ...{Loading}...
ಒಂದು ಕಡೆಯಲಿ ಕವಡಿಕೆಯ ಜೂ
ಜೊಂದು ಕಡೆಯಲಿ ಗದ್ಯಪದ್ಯವ
ದೊಂದು ಕಡೆಯಲಿ ವಾರವಧುಗಳ ಸಾರಸಂಗೀತ
ಒಂದು ಕಡೆಯಲಿ ತರ್ಕ ಗೋಷ್ಠಿಯ
ದೊಂದು ಕಡೆಯಲಿ ಕೌರವೇಂದ್ರನ
ಮುಂದೆ ಜಡಿದುದು ರಭಸ ಹಾಸಂಗಿಗಳ ಸಾರಿಗಳ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಂದು ಕಡೆಯಲ್ಲಿ ಮೋಸದ ಜೂಜು ನಡೆಯುತ್ತಿತ್ತು. ಒಂದು ಕಡೆ ಗದ್ಯ, ಪದ್ಯಗಳು. ಇನ್ನೊಂದು ಕಡೆ ವಾರಾಂಗನೆಯರ ಸಾರವತ್ತಾದ ಸಂಗೀತ, ಒಂದು ಕಡೆಯಲ್ಲಿ ತರ್ಕಗೋಷ್ಠಿ. ಇನ್ನೊಂದು ಕಡೆ ಆ ಕೌರವೇಂದ್ರನ ಎದುರಿನಲ್ಲೇ ಪಗಡೆಕಾಯಿ ದಾಳಗಳ ರಭಸದಿಂದ ಕೂಡಿದ ಪಗಡೆಯ ಜೂಜು ನಡೆಯುತ್ತಿತ್ತು.
ಪದಾರ್ಥ (ಕ.ಗ.ಪ)
ಕವಡಿಕೆ - ಮೋಸ
ವಾರವಧು - ವೇಶ್ಯಾ ಸ್ತ್ರೀ
ಹಾಸಂಗಿ -ಪಗಡೆಯ ದಾಳ
ಸಾರಿ -ಪಗಡೆಯ ಕಾಯಿ
ಮೂಲ ...{Loading}...
ಒಂದು ಕಡೆಯಲಿ ಕವಡಿಕೆಯ ಜೂ
ಜೊಂದು ಕಡೆಯಲಿ ಗದ್ಯಪದ್ಯವ
ದೊಂದು ಕಡೆಯಲಿ ವಾರವಧುಗಳ ಸಾರಸಂಗೀತ
ಒಂದು ಕಡೆಯಲಿ ತರ್ಕ ಗೋಷ್ಠಿಯ
ದೊಂದು ಕಡೆಯಲಿ ಕೌರವೇಂದ್ರನ
ಮುಂದೆ ಜಡಿದುದು ರಭಸ ಹಾಸಂಗಿಗಳ ಸಾರಿಗಳ ॥33॥
೦೩೪ ಆಡಲರಿವನು ಗಡ ...{Loading}...
ಆಡಲರಿವನು ಗಡ ಯುದಿಷ್ಠಿರ
ನಾಡುವರೆ ಬರಹೇಳು ಮೇಣ್ತಾ
ನೋಡುತಿರಲಾವಾಡುವೆವು ಸಭೆಯಲಿ ವಿನೋದದಲಿ
ಖೋಡಿಯಿಲ್ಲದ ಸರಸ ನೆತ್ತವ
ನಾಡಲರಿಯದ ನೃಪತಿ ಮೃಗವೆಂ
ದಾಡುತಿಹರರಿವವರು ತಾವಲ್ಲೆಂದನಾ ಶಕುನಿ ॥34॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಗಡೆಯಾಡಲು ತಿಳಿದಿದ್ದಾನಲ್ಲವೆ ಯುಧಿಷ್ಠಿರ, ಆಡುವ ಹಾಗಿದ್ದರೆ ಬರಹೇಳು. ಇಲ್ಲದಿದ್ದರೆ ಅವನು ನೋಡುತ್ತಿರಲಿ ನಾವು ಆಡುತ್ತೇವೆ ವಿನೋದವಾಗಿ, ಸಭೆಯಲ್ಲಿ ದುರುಳುತನವಿಲ್ಲದೆ ಸರಸವಾಗಿ ಪಗಡೆಯಾಟವನ್ನು ಆಡಲರಿಯದಿದ್ದ ರಾಜನಿದ್ದರೆ
ಅವನು ಮೃಗಕ್ಕೆ ಸಮಾನವೆಂದು ಮಾತನಾಡುತ್ತಾರೆ. ಆದರೆ ಇದನ್ನು ನಾವು ಹೇಳುತ್ತಿಲ್ಲ. ಎಂದ ಆ ಶಕುನಿ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಆಡಲರಿವನು ಗಡ ಯುದಿಷ್ಠಿರ
ನಾಡುವರೆ ಬರಹೇಳು ಮೇಣ್ತಾ
ನೋಡುತಿರಲಾವಾಡುವೆವು ಸಭೆಯಲಿ ವಿನೋದದಲಿ
ಖೋಡಿಯಿಲ್ಲದ ಸರಸ ನೆತ್ತವ
ನಾಡಲರಿಯದ ನೃಪತಿ ಮೃಗವೆಂ
ದಾಡುತಿಹರರಿವವರು ತಾವಲ್ಲೆಂದನಾ ಶಕುನಿ ॥34॥
೦೩೫ ಅಹುದು ಹೊಲ್ಲೆಹವಾವುದಾಡಲು ...{Loading}...
ಅಹುದು ಹೊಲ್ಲೆಹವಾವುದಾಡಲು
ಬಹುದು ಸುಜನರ ಕೂಡೆ ನೀವೇ
ಕುಹಕ ವಿದ್ಯಾಸಾರ್ವಭೌಮರು ಶಕುನಿ ಕೌರವರು
ಸುಹೃದಯರಿಗತಿ ಕುಟಿಲರಲಿ ನಿ
ಸ್ಪೃಹರಿಗತಿ ರಾಗಿಗಳೊಡನೆ ದು
ಸ್ಸಹ ಕಣಾ ಸಮ್ಮೇಳವೆಂದನು ಧರ್ಮಸುತ ನಗುತ ॥35॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹೌದು ಅದರಲ್ಲಿ ತಪ್ಪೇನು! ಸಜ್ಜನರಾದರೆ ಅವರೊಡನೆ ಆಡಬಹುದು. ಶಕುನಿ ದುರ್ಯೋಧನಾದಿಗಳಾದರೋ ಕುಹಕ ವಿದ್ಯೆಯಲ್ಲಿ ಸಾರ್ವಭೌಮರಾಗಿರುವವರು. ಒಳ್ಳೆಯ ಹೃದಯವುಳ್ಳವರಿಗೆ ದುರ್ಮತಿಗಳೊಡನೆ, ನಿಸ್ಪೃಹರಾದವರಿಗೆ. ರಾಗಿಗಳೊಡನೆ ಸಮ್ಮೇಳ
ದುಷ್ಕರವಾದುದು ಕಣಯ್ಯ ! ಎಂದು ಧರ್ಮರಾಯ ಹೇಳಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಅಹುದು ಹೊಲ್ಲೆಹವಾವುದಾಡಲು
ಬಹುದು ಸುಜನರ ಕೂಡೆ ನೀವೇ
ಕುಹಕ ವಿದ್ಯಾಸಾರ್ವಭೌಮರು ಶಕುನಿ ಕೌರವರು
ಸುಹೃದಯರಿಗತಿ ಕುಟಿಲರಲಿ ನಿ
ಸ್ಪೃಹರಿಗತಿ ರಾಗಿಗಳೊಡನೆ ದು
ಸ್ಸಹ ಕಣಾ ಸಮ್ಮೇಳವೆಂದನು ಧರ್ಮಸುತ ನಗುತ ॥35॥
೦೩೬ ನೀವು ಸುಹೃದಯರಿನ್ದು ...{Loading}...
ನೀವು ಸುಹೃದಯರಿಂದು ದುರ್ಜನ
ರಾವು ನೀವ್ನೀರಾಗಿಗಳು ರಾ
ಗಾವಲಂಬರು ನಾವಲೇ ನೀವರಿಯಿರೇ ನಿಜವ
ನೀವು ನಾವೆಂಬೀ ಪೃಥಗ್ಭಾ
ವಾವಲಂಬನವೇಕೆ ನಿಮ್ಮಲಿ
ನಾವು ನಮ್ಮಲಿ ನೀವೆಯೆಂದನು ನಗುತ ಕುರುರಾಯ ॥36॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- . “ನೀವು ಉತ್ತಮಹೃದಯದವರು, ಇಂದು ನಾವೇ ದುರ್ಜನರು. ನೀವು ವೈರಾಗ್ಯವಂತರು. ನಾವು ರಾಗಾವಲಂಬರು. ನಿಮಗೇ ತಿಳಿದಿದೆ ನಿಜವೇನೆಂದು. ನೀವು ನಾವು ಎಂಬ ಪ್ರತ್ಯೇಕತಾಭಾವನೆಯೇಕೆ? ನಿಮ್ಮಲ್ಲಿ ನಾವು ನಮ್ಮಲ್ಲಿ ನೀವು, ಎಲ್ಲರೂ ಒಂದೇ ಎಂದು ದುರ್ಯೋಧನ ಹೇಳಿದ.
ಪದಾರ್ಥ (ಕ.ಗ.ಪ)
ನೀರಾಗಿಗಳು-ರಾಗರಹಿತ
ಪೃಥಗ್ಭಾವ - ಪ್ರತ್ಯೇಕ ಎಂಬ ಭಾವ
ಮೂಲ ...{Loading}...
ನೀವು ಸುಹೃದಯರಿಂದು ದುರ್ಜನ
ರಾವು ನೀವ್ನೀರಾಗಿಗಳು ರಾ
ಗಾವಲಂಬರು ನಾವಲೇ ನೀವರಿಯಿರೇ ನಿಜವ
ನೀವು ನಾವೆಂಬೀ ಪೃಥಗ್ಭಾ
ವಾವಲಂಬನವೇಕೆ ನಿಮ್ಮಲಿ
ನಾವು ನಮ್ಮಲಿ ನೀವೆಯೆಂದನು ನಗುತ ಕುರುರಾಯ ॥36॥
೦೩೭ ಇರಲಿ ಬಾನ್ಧವರಿದರೊಳೆರಡಿ ...{Loading}...
ಇರಲಿ ಬಾಂಧವರಿದರೊಳೆರಡಿ
ಟ್ಟಿರದೆ ನಿಲಲದು ಲೇಸಲಾ ವಿ
ಸ್ತರಿಸಲೇಕೈ ದ್ಯೂತ ದುವ್ರ್ಯಸನ ಪ್ರಪಂಚವಿದು
ತರುಣ ವಿಟ ಚಾರಣ ಕುಶೀಲಕ
ಭರತ ಗಣಿಕಾಯೋಗ್ಯ ವಿಷಯಕೆ
ಗರುವರೊಲಿವರೆಯೆಂದನಾ ಕುರುಪತಿಗೆ ಯಮಸೂನು ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇರಲಿ ಬಾಂಧವರು ಯಾವ ಭೇದಭಾವಗಳೂ ಇಲ್ಲದೆ ಒಟ್ಟಾಗಿ ಇರಲಿ ಎಂಬುದು ಒಳ್ಳೆಯದೇ ಅಲ್ಲವೇ ? ಇನ್ನೂ ಇದನ್ನು ಬಿಡಿಸಿ ಹೇಳಬೇಕಾದ ಅಗತ್ಯವೆಲ್ಲಿದೆ ? ಜೂಜು ದುಶ್ಚಟದ ಪ್ರಪಂಚಕ್ಕೆ ಸೇರಿದುದು. ತರುಣರು ವಿಟರು, ಚಾರಣರು, ಕೆಟ್ಟ ನಡತೆಯವರಾದ ನಟರು, ವೇಶ್ಯೆಯರು ಇಂಥವರಿಗೆ ಅದು ಯೋಗ್ಯವೇ ಹೊರತು ಮಾನ್ಯರು ಘನವಂತರು ಅದಕ್ಕೆ ಒಲಿಯುತ್ತಾರೆಯೇ ? ಎಂದು ಯುಧಿಷ್ಠಿರ ಕುರುಪತಿಗೆ ಉತ್ತರಿಸಿದ.
ಪದಾರ್ಥ (ಕ.ಗ.ಪ)
ಚಾರಣರು - ಹೊಗಳುಭಟರು
ಕುಶೀಲಕ - ಚಾರಿತ್ರ್ಯಹೀನ
ಭರತ- ನರ್ತಕ
ಮೂಲ ...{Loading}...
ಇರಲಿ ಬಾಂಧವರಿದರೊಳೆರಡಿ
ಟ್ಟಿರದೆ ನಿಲಲದು ಲೇಸಲಾ ವಿ
ಸ್ತರಿಸಲೇಕೈ ದ್ಯೂತ ದುವ್ರ್ಯಸನ ಪ್ರಪಂಚವಿದು
ತರುಣ ವಿಟ ಚಾರಣ ಕುಶೀಲಕ
ಭರತ ಗಣಿಕಾಯೋಗ್ಯ ವಿಷಯಕೆ
ಗರುವರೊಲಿವರೆಯೆಂದನಾ ಕುರುಪತಿಗೆ ಯಮಸೂನು ॥37॥
೦೩೮ ದ್ಯೂತವಿದು ...{Loading}...
ದ್ಯೂತವಿದು ದುವ್ರ್ಯಸನವೆಂಬವ
ನೀತಿವಿದನೇ ಶ್ರೋತ್ರಿಯರಿಗ
ಖ್ಯಾತಿಯದು ಯತಿಗಳಿಗೆ ಮೇಣ್ ರಣಭೀತ ಭೂಪರಿಗೆ
ದ್ಯೂತ ಮೃಗಯಾ ಸ್ತ್ರೀವ್ಯಸನ ನೃಪ
ಜಾತಿಗೋಸುಗವಾದವಿದರ ರ
ಸಾತಿಶಯವರಿಯದವ ನರಮೃಗವೆಂದನಾ ಶಕುನಿ ॥38॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ದ್ಯೂತವೆಂಬುದು ದುವ್ರ್ಯಸನವೆಂದು ಹೇಳುವವನು ನೀತಿಯನ್ನು ಬಲ್ಲವನೇ ? ಶ್ರೋತ್ರಿಯರಿಗೆ ಯತಿಗಳಿಗೆ ಯುದ್ಧಕ್ಕೆ ಭಯಪಡುವಂತಹ ರಾಜರಿಗೆ ಅಖ್ಯಾತಿಯದು ಅಷ್ಟೆ. ದ್ಯೂತ, ಬೇಟೆ, ಸ್ತ್ರೀವ್ಯಸನ, ಕ್ಷತ್ರಿಯ ರಾಜರಿಗಾಗಿಯೇ ಸೃಷ್ಟಿಯಾದುದು. ಇದರ ರಸಾತಿಶಯವನ್ನು ಅರಿಯದವನು ನರಪಶು, ಮನುಷ್ಯನಾಗಿದ್ದೂ ಮೃಗಕ್ಕೆ ಸಮಾನ ಎಂದ ಶಕುನಿ.
ಪದಾರ್ಥ (ಕ.ಗ.ಪ)
ದುವ್ರ್ಯಸನ-ದುಶ್ಚಟ, ಮೃಗಯಾ-ಬೇಟೆ
ಮೂಲ ...{Loading}...
ದ್ಯೂತವಿದು ದುವ್ರ್ಯಸನವೆಂಬವ
ನೀತಿವಿದನೇ ಶ್ರೋತ್ರಿಯರಿಗ
ಖ್ಯಾತಿಯದು ಯತಿಗಳಿಗೆ ಮೇಣ್ ರಣಭೀತ ಭೂಪರಿಗೆ
ದ್ಯೂತ ಮೃಗಯಾ ಸ್ತ್ರೀವ್ಯಸನ ನೃಪ
ಜಾತಿಗೋಸುಗವಾದವಿದರ ರ
ಸಾತಿಶಯವರಿಯದವ ನರಮೃಗವೆಂದನಾ ಶಕುನಿ ॥38॥
೦೩೯ ಅರಸ ಕೇಳ್ ...{Loading}...
ಅರಸ ಕೇಳ್ ಕಾಳಗಕೆ ಜೂಜಿಗೆ
ಕರೆದಡೋಸರಿಸಿದೊಡೆ ಬಳಿಕವ
ಗರುವನೇ ಕ್ಷತ್ರಿಯರೊಳಗೆ ನೃಪಧರ್ಮ ನೀನರಿಯ
ಕರೆದೆವಾವ್ ಜೂಜಿಂಗೆ ಬೇಕೇ
ಧರಣಿಪತಿ ಬಾ ರಾಜಧರ್ಮವ
ನೊರಸುವರೆ ನಿಲ್ಲೆಂದುಪೇಕ್ಷಿಸಿ ನುಡಿದನಾ ಶಕುನಿ ॥39॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಧರ್ಮರಾಜ ಕೇಳು, ಜೂಜಿಗೆ ಯಾರಾದರೂ ಕರೆದರೆ ಕ್ಷತ್ರಿಯನಾದವನು ಹಿಂಜರಿದರೆ ಅವನನ್ನು ಗೌರವಾನ್ವಿತನೆನ್ನುತ್ತಾರೆಯೇ ? ರಾಜಧರ್ಮ ನಿನಗೆ ತಿಳಿಯದೇ ನಾವು ನಿನ್ನನ್ನು ಜೂಜಿಗೆ ಕರೆದವುÉ. ನಿನಗೆ ಇಚ್ಛೆಯಿದ್ದರೆ ಬಾ. ರಾಜಧರ್ಮವನ್ನು ಹಾಳುಮಾಡುವೆನು ಎನ್ನುವುದಾದರೆ ನಿಲ್ಲು ಬರಬೇಡ” ಎಂದು ಉಪೇಕ್ಷೆಯಿಂದ ಮಾತನಾಡಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಅರಸ ಕೇಳ್ ಕಾಳಗಕೆ ಜೂಜಿಗೆ
ಕರೆದಡೋಸರಿಸಿದೊಡೆ ಬಳಿಕವ
ಗರುವನೇ ಕ್ಷತ್ರಿಯರೊಳಗೆ ನೃಪಧರ್ಮ ನೀನರಿಯ
ಕರೆದೆವಾವ್ ಜೂಜಿಂಗೆ ಬೇಕೇ
ಧರಣಿಪತಿ ಬಾ ರಾಜಧರ್ಮವ
ನೊರಸುವರೆ ನಿಲ್ಲೆಂದುಪೇಕ್ಷಿಸಿ ನುಡಿದನಾ ಶಕುನಿ ॥39॥
೦೪೦ ರಾಜಧರ್ಮವಿದಹುದು ಕಳವಿನ ...{Loading}...
ರಾಜಧರ್ಮವಿದಹುದು ಕಳವಿನ
ಜೂಜು ಧರ್ಮದ ಮಗನೊ ಮೊಮ್ಮಗನೊ
ಬೀಜವಾವುದು ನಿಮ್ಮ ಕಪಟದ್ಯೂತ ನಿರ್ಣಯಕೆ
ರಾಜ ಪರಿಪಾಟಿಗಳ ಪಂಥದ
ಜೂಜ ಬಲ್ಲರೆ ಕರೆಯಿ ಬಾರದ
ಡಾ ಜನಾರ್ದನನಾಣೆಯೆಂದನು ಧರ್ಮನಂದನನು ॥40॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ದ್ಯೂತ ರಾಜಧರ್ಮವೇ ಹೌದು. ಮೋಸದ ಜೂಜು ಧರ್ಮದ ಮಗನೋ ಮೊಮ್ಮಗನೋ ? ನಿಮ್ಮ ಈ ಕಪಟ ದ್ಯೂತವನ್ನು ನಿರ್ಣಯಿಸುವುದಕ್ಕೆ ಯಾವುದು ಆಧಾರ ? ಕ್ಷತ್ರಿಯರ ಪದ್ಧತಿಗೆ ಅನುಗುಣವಾದ ಜೂಜನ್ನು ನೀವು ಬಲ್ಲಿರಾದರೆ ನೀವು ಕರೆಯಿರಿ. ಆಗ ನಾನು ಬರದಿದ್ದರೆ ಜನಾದರ್ನನ ಮೇಲೆ ಆಣೆ ಎಂದ ಯುಧಿಷ್ಠಿರ.
ಪದಾರ್ಥ (ಕ.ಗ.ಪ)
ಮೂಲ ...{Loading}...
ರಾಜಧರ್ಮವಿದಹುದು ಕಳವಿನ
ಜೂಜು ಧರ್ಮದ ಮಗನೊ ಮೊಮ್ಮಗನೊ
ಬೀಜವಾವುದು ನಿಮ್ಮ ಕಪಟದ್ಯೂತ ನಿರ್ಣಯಕೆ
ರಾಜ ಪರಿಪಾಟಿಗಳ ಪಂಥದ
ಜೂಜ ಬಲ್ಲರೆ ಕರೆಯಿ ಬಾರದ
ಡಾ ಜನಾರ್ದನನಾಣೆಯೆಂದನು ಧರ್ಮನಂದನನು ॥40॥
೦೪೧ ಭೂರಮಣ ಕೇಳಖಿಳ ...{Loading}...
ಭೂರಮಣ ಕೇಳಖಿಳ ನೃಪ ಸಂ
ಹಾರಬೀಜದ ಕರ್ಮಫಲ ಸಂ
ಸ್ಕಾರವಳ್ಳೆಯನಿರಿದು ನೂಕಿತು ಧರ್ಮನಂದನನ
ಧೀರನಲ್ಲಾ ಧರ್ಮಶಾಸ್ತ್ರ ವಿ
ಚಾರ ಸಾರಜ್ಞಾನ ನಿಷ್ಠೆಯೊ
ಳೋರೆಯುಂಟೆ ದ್ಯೂತಕೇಳಿಗೆ ಮಾಡಿದನು ಮನವ ॥41॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯನೇ ಕೇಳು, “ಅಖಿಳ ರಾಜರ ಸಂಹಾರಕ್ಕೆ ಬೀಜ ಪ್ರಾಯವಾದ ಕರ್ಮಫಲದ ಸಂಸ್ಕಾರ ಯುಧಿಷ್ಠಿರನ ಪಕ್ಕೆಗಳನ್ನು ಇರಿದು ಅವನನ್ನು ಜೂಜಿಗೆ ಮುಂದೆ ನೂಕಿತು. ಅವನೇನು ಧೀರನಲ್ಲವೇ ? ಅವನು ಧರ್ಮಶಾಸ್ತ್ರ ವಿಚಾರದ ಸಾರವನ್ನು ಬಲ್ಲವನಲ್ಲವೇ ? ಅವನ ನಿಷ್ಠೆಯಲ್ಲಿ ಓರೆಕೊರೆಯುಂಟೇ ? ಆದರೂ ಜೂಜಿನ ಆಟಕ್ಕೆ ಮನಸ್ಸು ಮಾಡಿದ.”
ಪದಾರ್ಥ (ಕ.ಗ.ಪ)
ಮೂಲ ...{Loading}...
ಭೂರಮಣ ಕೇಳಖಿಳ ನೃಪ ಸಂ
ಹಾರಬೀಜದ ಕರ್ಮಫಲ ಸಂ
ಸ್ಕಾರವಳ್ಳೆಯನಿರಿದು ನೂಕಿತು ಧರ್ಮನಂದನನ
ಧೀರನಲ್ಲಾ ಧರ್ಮಶಾಸ್ತ್ರ ವಿ
ಚಾರ ಸಾರಜ್ಞಾನ ನಿಷ್ಠೆಯೊ
ಳೋರೆಯುಂಟೆ ದ್ಯೂತಕೇಳಿಗೆ ಮಾಡಿದನು ಮನವ ॥41॥
೦೪೨ ಇನ್ದುವದನೆಗೆ ದಕ್ಷಿಣಾಕ್ಷಿ ...{Loading}...
ಇಂದುವದನೆಗೆ ದಕ್ಷಿಣಾಕ್ಷಿ
ಸ್ಪಂದವಾಯಿತು ಭೀಮ ಪಾರ್ಥರಿ
ಗಂದು ಕೆತ್ತಿತು ಹೃದಯ ವಾಮ ಭುಜಾಕ್ಷಿಗಳು ಸಹಿತ
ಕಂದಿದುವು ಮೋರೆಗಳು ಗಂಗಾ
ನಂದನ ದ್ರೋಣಾದಿ ಸುಜನರಿ
ಗಂದವೇರಿತು ಮುಸುಡು ಶಕುನಿ ಸುಯೋಧನಾದಿಗಳ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ದ್ರೌಪದಿಗೆ ಬಲಗಣ್ಣದುರಿತು. ಭೀಮಾರ್ಜುನರಿಗೆ ಎಡಗಣ್ಣುಗಳ ಜೊತೆಗೆ ಹೃದಯ ಅದುರಿತು. ಭೀಷ್ಮದ್ರೋಣಾದಿ ಸಜ್ಜನರ ಮುಖ ಬಾಡಿತು. ಶಕುನಿ ಸುಯೋಧನಾದಿಗಳ ಮುಖ ಅಂದವೇರಿತು.
ಪದಾರ್ಥ (ಕ.ಗ.ಪ)
ದಕ್ಷಿಣಾಕ್ಷಿ-ಬಲಗಣ್ಣು, ವಾಮ-ಎಡ
ಮೂಲ ...{Loading}...
ಇಂದುವದನೆಗೆ ದಕ್ಷಿಣಾಕ್ಷಿ
ಸ್ಪಂದವಾಯಿತು ಭೀಮ ಪಾರ್ಥರಿ
ಗಂದು ಕೆತ್ತಿತು ಹೃದಯ ವಾಮ ಭುಜಾಕ್ಷಿಗಳು ಸಹಿತ
ಕಂದಿದುವು ಮೋರೆಗಳು ಗಂಗಾ
ನಂದನ ದ್ರೋಣಾದಿ ಸುಜನರಿ
ಗಂದವೇರಿತು ಮುಸುಡು ಶಕುನಿ ಸುಯೋಧನಾದಿಗಳ ॥42॥
೦೪೩ ಕುರುಪತಿಯ ಕೃತಪುಣ್ಯ ...{Loading}...
ಕುರುಪತಿಯ ಕೃತಪುಣ್ಯ ಬೀಜಾಂ
ಕುರದ ಕಾಲ ದಿಗಂತದವನೀ
ಶ್ವರ ಸಮೂಹ ಚಮೂನಿಬರ್ಹಣ ಸೂಚನಾ ಸಮಯ
ಅರಸ ಕೇಳ್ ಕುಂತೀಕುಮಾರರ
ಸಿರಿಯ ದುಗುಡದ ಹೊತ್ತು ಮಿಗೆ ಗ
ಬ್ಬರಿಸಿತೈ ಧರ್ಮಜನ ಗಾಢದ ಬುದ್ಧಿಪರ್ವತವ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಿಂದೆ ದುರ್ಯೋಧನ ಮಾಡಿದ್ದ ಪುಣ್ಯದ ಬೀಜ ಚಿಗುರೊಡೆಯುವ ಈ ಕಾಲ. ದಿಗಂತದವರೆಗೂ ವ್ಯಾಪಿಸಿರುವ ರಾಜರ ಸಮೂಹದ ಸೇನೆಗಳೆಲ್ಲ ವಿನಾಶ ಹೊಂದುತ್ತವೆಯೆಂದು ಸೂಚಿಸುವ ಕಾಲವಾಯಿತು. ಅದೇ ಕುಂತೀಕುಮಾರರ ಅದೃಷ್ಟಲಕ್ಷ್ಮಿಯ ದುಃಖದ ಕಾಲ. ಇಂತಹ ಕಾಲ ಧರ್ಮರಾಜನ ಧೃಢವಾಗಿದ್ದ ಬುದ್ಧಿಪರ್ವತವನ್ನು ಸೀಳಿಬಿಟ್ಟಿತು!
ಪದಾರ್ಥ (ಕ.ಗ.ಪ)
ಚಮೂ-ಸೈನ್ಯ, ಗಬ್ಬರಿಸು-ಸೀಳು, ನಿಬರ್ಹಣ-ನಾಶ
ಸಿರಿ -ಅದೃಷ್ಟಲಕ್ಷ್ಮಿ
ಮೂಲ ...{Loading}...
ಕುರುಪತಿಯ ಕೃತಪುಣ್ಯ ಬೀಜಾಂ
ಕುರದ ಕಾಲ ದಿಗಂತದವನೀ
ಶ್ವರ ಸಮೂಹ ಚಮೂನಿಬರ್ಹಣ ಸೂಚನಾ ಸಮಯ
ಅರಸ ಕೇಳ್ ಕುಂತೀಕುಮಾರರ
ಸಿರಿಯ ದುಗುಡದ ಹೊತ್ತು ಮಿಗೆ ಗ
ಬ್ಬರಿಸಿತೈ ಧರ್ಮಜನ ಗಾಢದ ಬುದ್ಧಿಪರ್ವತವ ॥43॥
೦೪೪ ವ್ಯಸನತೃಷ್ಣೆಯು ಕೀಳು ...{Loading}...
ವ್ಯಸನತೃಷ್ಣೆಯು ಕೀಳು ಚಿತ್ತದ
ಮಿಸುನಿಯೊಳು ಬೆರೆಸಿತು ಸುಬುದ್ದಿಯ
ರಸವು ಹಾರಿತು ಹುದಿದ ರಾಗದ್ವೇಷ ವಹ್ನಿಯಲಿ
ಮುಸುಡ ತಿರುಹಿತು ತಿಳಿವು ಲಜ್ಜೆಯ
ದೆಸೆಗೆ ದುರ್ಘಟವಾಯ್ತು ಪರಿಭವ
ದೊಸಗೆಯನು ಸೂಚಿಸಿತು ಲಕ್ಷ್ಮಿಗೆ ಧರ್ಮಜನ ಹೃದಯ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ಯೂತವ್ಯಸನದ ಗೀಳು ಕೀಳುಚಿತ್ತವೆಂಬ ಬಂಗಾರದಲ್ಲಿ ಬೆರೆಯಿತು. ರಾಗ-ದ್ವೇಷವೆಂಬ ಬೆಂಕಿಯಲ್ಲಿ ಸುಬುದ್ಧಿ ಎಂಬ ರಸ ಆವಿಯಾಗಿ ಹಾರಿಹೋಯಿತು. ತಿಳಿವು ಮುಖ ತಿರುಗಿಸಿ ಬಿಟ್ಟಿತು. ಲಜ್ಜೆ ಎಂಬುದು ಚೂರುಚೂರಾಯಿತು. ಧರ್ಮಜನ ಹೃದಯವು ಲಕ್ಷ್ಮಿಗೆ ಅವಮಾನದ ಸ್ರೋತವನ್ನು ತಿಳಿಸಿತು.
ಪದಾರ್ಥ (ಕ.ಗ.ಪ)
ಮಿಸುನಿ - ಚಿನ್ನ
ವ್ಯಸನ- ಗೀಳು
ತೃಷ್ಣೆ- ದಾಹ
ಹುದಿದ - ಅಡಗಿದ
ದುರ್ಘಟ - ಚೂರುಚೂರಾಯಿತು.
ಮೂಲ ...{Loading}...
ವ್ಯಸನತೃಷ್ಣೆಯು ಕೀಳು ಚಿತ್ತದ
ಮಿಸುನಿಯೊಳು ಬೆರೆಸಿತು ಸುಬುದ್ದಿಯ
ರಸವು ಹಾರಿತು ಹುದಿದ ರಾಗದ್ವೇಷ ವಹ್ನಿಯಲಿ
ಮುಸುಡ ತಿರುಹಿತು ತಿಳಿವು ಲಜ್ಜೆಯ
ದೆಸೆಗೆ ದುರ್ಘಟವಾಯ್ತು ಪರಿಭವ
ದೊಸಗೆಯನು ಸೂಚಿಸಿತು ಲಕ್ಷ್ಮಿಗೆ ಧರ್ಮಜನ ಹೃದಯ ॥44॥
೦೪೫ ಹಲವು ಮಾತಿನಲೇನು ...{Loading}...
ಹಲವು ಮಾತಿನಲೇನು ಭೂಪತಿ
ಕೆಲಕೆ ಸಿಲುಕಿದನವದಿರೊಡ್ಡಿದ
ಬಲೆಗೆ ಬಂದನು ನೆತ್ತ ಸಾರಿಯ ಗುರಿಯ ಗದ್ದುಗೆಗೆ
ಕೆಲದಲನುಜರು ವಾಮದಲಿ ಮಣಿ
ವಳಯ ಮಂಚದಲಂಧನೃಪನಿದಿ
ರಲಿ ಸುಯೋಧನ ಕರ್ಣ ಶಕುನಿ ಜಯದ್ರಥಾದಿಗಳು ॥45॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಲವು ಮಾತುಗಳಿಂದ ಏನು ಪ್ರಯೋಜನ ? ಧರ್ಮರಾಜ ಪಕ್ಕದಲ್ಲಿಯೇ ಅವರು ಒಡ್ಡಿದ ಬಲೆಯೊಳಕ್ಕೆ ಸಿಕ್ಕಿಹಾಕಿಕೊಂಡ. ಪಗಡೆಕಾಯಿ ದಾಳಗಳಿದ್ದ ಗದ್ದುಗೆಯ ಕಡೆಗೆ ಬಂದ. ಪಕ್ಕದಲ್ಲಿ ತಮ್ಮಂದಿರು ಎಡಗಡೆ ರತ್ನಖಚಿತ ಮಂಚದಲ್ಲಿ ಅಂಧನೃಪತಿ. ಎದುರುಗಡೆ ಸುಯೋಧನ, ಶಕುನಿ, ಜಯದ್ರಥ ಮೊದಲಾವದರು ಹೀಗೆ ಎಲ್ಲರೂ ದ್ಯೂತಕ್ಕೆ ಸಜ್ಜಾಗಿ ಕುಳಿತರು.
ಪದಾರ್ಥ (ಕ.ಗ.ಪ)
ನೆತ್ತ -ಪಗಡೆ
ಸಾರಿ -ದಾಳ
ಮೂಲ ...{Loading}...
ಹಲವು ಮಾತಿನಲೇನು ಭೂಪತಿ
ಕೆಲಕೆ ಸಿಲುಕಿದನವದಿರೊಡ್ಡಿದ
ಬಲೆಗೆ ಬಂದನು ನೆತ್ತ ಸಾರಿಯ ಗುರಿಯ ಗದ್ದುಗೆಗೆ
ಕೆಲದಲನುಜರು ವಾಮದಲಿ ಮಣಿ
ವಳಯ ಮಂಚದಲಂಧನೃಪನಿದಿ
ರಲಿ ಸುಯೋಧನ ಕರ್ಣ ಶಕುನಿ ಜಯದ್ರಥಾದಿಗಳು ॥45॥
೦೪೬ ಹಲಗೆಯಿಕ್ಕಿತು ಹೊನ್ನ ...{Loading}...
ಹಲಗೆಯಿಕ್ಕಿತು ಹೊನ್ನ ಸಾರಿಗ
ಳಿಳುಹಿದವು ಹೇಳೊಡ್ಡವನು ಕಳ
ಕಳವ ನಿಲ ಹೇಳೆನುತ ಹಾಸಂಗಿಗಳ ಹೊಸೆಹೊಸೆದು
ನೆಲಕೆ ಹಾಯ್ಕಿದನಡಿಗಡಿಗೆ ಮಂ
ಡಳಿಸಿ ಸಾರಿಯ ಹೂಡಿ ಕುರುಪತಿ
ಗೆಲಿದ ಹೋಗೆಂದೊದರುತಿದ್ದನು ತೊಡೆಯನಪ್ಪಳಿಸಿ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಲಗೆಯನ್ನಿಟ್ಟರು. ಚಿನ್ನದ ಪಗಡೆಕಾಯಿಗಳನ್ನು ಇಳಿಸಿದರು. ಶಕುನಿ, ಹೇಳು ಒಡ್ಡವನ್ನು ಜೂಜಿಗೆ ಒಡ್ಡುವ ಪಣವನ್ನು, ಕಳಕಳ ಗದ್ದಲವನ್ನು ನಿಲ್ಲಿಸಲು ಹೇಳು ಎಂದು ದಾಳಗಳನ್ನು ಕೈಗಳಲ್ಲಿ ಹೊಸೆದು ಹೊಸೆದು ನೆಲಕ್ಕೆ ಹಾಕುವುದು. ಮತ್ತೆ ಮತ್ತೆ ಸುತ್ತಲೂ
ಕಾಯಿಗಳನ್ನು ನಡೆಸುವುದು. “ಕುರುಪತಿ ಗೆದ್ದ, ಹೋಗು !” ಎಂದು ತೊಡೆ ತಟ್ಟಿಕೊಂಡು ಕೂಗುತ್ತಿದ್ದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಹಲಗೆಯಿಕ್ಕಿತು ಹೊನ್ನ ಸಾರಿಗ
ಳಿಳುಹಿದವು ಹೇಳೊಡ್ಡವನು ಕಳ
ಕಳವ ನಿಲ ಹೇಳೆನುತ ಹಾಸಂಗಿಗಳ ಹೊಸೆಹೊಸೆದು
ನೆಲಕೆ ಹಾಯ್ಕಿದನಡಿಗಡಿಗೆ ಮಂ
ಡಳಿಸಿ ಸಾರಿಯ ಹೂಡಿ ಕುರುಪತಿ
ಗೆಲಿದ ಹೋಗೆಂದೊದರುತಿದ್ದನು ತೊಡೆಯನಪ್ಪಳಿಸಿ ॥46॥
೦೪೭ ಆಟವಾರಮ್ಭಿಸದು ಬರಿ ...{Loading}...
ಆಟವಾರಂಭಿಸದು ಬರಿ ಬೊ
ಬ್ಬಾಟವೇತಕೆ ವಿಜಯಸಿರಿ ವಾ
ಚಾಟರಿಗೆ ಮೆಚ್ಚುವಳೆ ತೋರಾ ದ್ಯೂತ ಕೌಶಲವ
ತೋಟಿ ಬೇಕೆ ಕೈಯ ಹೊಯ್
ಬೂತಾಟ ಬೇಡೆನೆ ಧರ್ಮನಂದನ
ನಾಟವೊಳ್ಳಿತು ಬಲ್ಲೆನೆಂದನು ಶಕುನಿ ನಸುನಗುತ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇನ್ನೂ ಆಟ ಸರಿಯಾಗಿ ಪ್ರಾರಂಭವೇ ಆಗಲಿಲ್ಲ. ಸುಮ್ಮನೆ ಬೊಬ್ಬೆ ಹಾಕುವುದೇತಕ್ಕೆ ? ವಿಜಯಸಿರಿ ಬಾಯಿಬಡುಕರನ್ನು ಮೆಚ್ಚುವಳೆ ? ನಿನ್ನ ದ್ಯೂತ ಕೌಶಲವನ್ನು ತೋರಿಸಯ್ಯ ! ಹೋರಾಟ ಬೇಕೆ, ಕೈಮೇಲೆ ಕೈ ಹೊಯ್, ಕುಚೋದ್ಯ ಬೇಡ ಎಂದು ಧರ್ಮರಾಯನು ಹೇಳಲು ಅದಕ್ಕ ಶಕುನಿಯು ಧರ್ಮನಂದನ ಚೆನ್ನಾಗಿ ಆಡುತ್ತಾನೆ. ನಾನು ಬಲ್ಲೆ ಎಂದು ನಗುತ್ತಾ ಹೇಳಿzನು.
ಪದಾರ್ಥ (ಕ.ಗ.ಪ)
ವಾಚಾಟ-ಮಾತುಗಾರ, ಬೂತಾಟ-ಕುಚೋದ್ಯ
ಪಾಠಾನ್ತರ (ಕ.ಗ.ಪ)
ವೇತಕೆ –> ಬೇಡೆನೆ
ಮೂಲ ...{Loading}...
ಆಟವಾರಂಭಿಸದು ಬರಿ ಬೊ
ಬ್ಬಾಟವೇತಕೆ ವಿಜಯಸಿರಿ ವಾ
ಚಾಟರಿಗೆ ಮೆಚ್ಚುವಳೆ ತೋರಾ ದ್ಯೂತ ಕೌಶಲವ
ತೋಟಿ ಬೇಕೆ ಕೈಯ ಹೊಯ್
ಬೂತಾಟ ಬೇಡೆನೆ ಧರ್ಮನಂದನ
ನಾಟವೊಳ್ಳಿತು ಬಲ್ಲೆನೆಂದನು ಶಕುನಿ ನಸುನಗುತ ॥47॥
೦೪೮ ಎನ್ನ ಲೆಕ್ಕಕೆ ...{Loading}...
ಎನ್ನ ಲೆಕ್ಕಕೆ ಶಕುನಿ ಭೂಪತಿ
ನಿನ್ನೊಡನೆ ಕೈಹೊಯ್ದನೊಡ್ಡವ
ನೆನ್ನೊಡನೆ ಹೇಳೆಂದು ನುಡಿದನು ಕೌರವರರಾಯ
ನಿನ್ನೊಳಾಗಲಿ ನಿನ್ನ ಮಾವನೆ
ಮುನ್ನ ಬರಲಿದಕೇನೆನುತ ಸಂ
ಪನ್ನ ಶಠರೊಡನಳವಿಗೊಟ್ಟವನೀಶನಿಂತೆಂದ ॥48॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂಪತಿ, ನನ್ನ ಪರವಾಗಿ ಶಕುನಿ ಆಡುತ್ತಾನೆ. ನಿನ್ನ ಪಣವೇನೆಂದು ನನ್ನೊಡನೆ ಹೇಳು ಎಂದನು. ಅದಕ್ಕೆ ಯುಧಿಷ್ಠಿರ “ನೀನು ಬಾ ಅಥವ ನಿನ್ನ ಮಾವನೇ ಬರಲಿ ಬರಲಿ ಅದಕ್ಕೇನು” ಎಂದು ಹೇಳಿ ದುರ್ಯೋಧನ ನುರಿತ ಆ ವಂಚಕರಿಗೆ ಅವಕಾಶಮಾಡಿಕೊಟ್ಟು ಆಟಕ್ಕೆ ತೊಡಗಿದ.
ಪದಾರ್ಥ (ಕ.ಗ.ಪ)
ಅಳವಿಗೊಡು-ಅವಕಾಶ ಮಾಡಿಕೊಡು
ಮೂಲ ...{Loading}...
ಎನ್ನ ಲೆಕ್ಕಕೆ ಶಕುನಿ ಭೂಪತಿ
ನಿನ್ನೊಡನೆ ಕೈಹೊಯ್ದನೊಡ್ಡವ
ನೆನ್ನೊಡನೆ ಹೇಳೆಂದು ನುಡಿದನು ಕೌರವರರಾಯ
ನಿನ್ನೊಳಾಗಲಿ ನಿನ್ನ ಮಾವನೆ
ಮುನ್ನ ಬರಲಿದಕೇನೆನುತ ಸಂ
ಪನ್ನ ಶಠರೊಡನಳವಿಗೊಟ್ಟವನೀಶನಿಂತೆಂದ ॥48॥
೦೪೯ ಹೇಮ ಭಾರದ ...{Loading}...
ಹೇಮ ಭಾರದ ವಿಮಲ ರತುನ
ಸ್ತೋಮವಿದೆ ಪಣವೆನಲು ಕೌರವ
ಭೂಮಿಪತಿಯೊಡ್ಡಿದನು ಧರ್ಮಜ ಹೆಸರಿಸಿದ ಧನವ
ಆ ಮಹಿಪ ಶಕುನಿಗಳು ಸಾರಿ
ಗ್ರಾಮವನು ಕೆದರಿದರು ದ್ಯೂತದ
ತಾಮಸದಲುಬ್ಬೆದ್ದುದಿಬ್ಬರ ಕರಣವೃತ್ತಿಗಳು ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಚಿನ್ನದ ಹೊರೆ ಹಾಗೂ ನಿರ್ಮಲವಾದ ರತ್ನಗಳ ರಾಶಿ ಇದೇ ಪಣ” ಎಂದು ಯುಧಿಷ್ಠಿರ ಘೋಷಿಸಿದ. ಅವನು ಹೇಳಿದಷ್ಟೇ ಧನವನ್ನು ಕೌರವನೂ ಒಡ್ಡಿದ. ಧರ್ಮಜ ಶಕುನಿಯರು ಪಗಡೆ ಕಾಯಿಗಳನ್ನು ಕೆದರಿದರು. ದ್ಯೂತದ ತಾಮಸದ ಕಾರಣದಿಂದ ಇಬ್ಬರ ಇಂದ್ರಿಯ ಪ್ರವೃತ್ತಿಗಳೂ ಉದ್ವಿಗ್ನಗೊಂಡಿದ್ದವು.
ಪದಾರ್ಥ (ಕ.ಗ.ಪ)
ಸಾರಿಗ್ರಾಮ -ಪಗಡೆ ಕಾಯಿಗಳ ಗುಂಪು
ಕೆದರು - ಓಡಾಡಿಸು
ಕರಣವೃತ್ತಿ -ಇಂದ್ರಿಯ ಪ್ರಜ್ಞೆ
ಮೂಲ ...{Loading}...
ಹೇಮ ಭಾರದ ವಿಮಲ ರತುನ
ಸ್ತೋಮವಿದೆ ಪಣವೆನಲು ಕೌರವ
ಭೂಮಿಪತಿಯೊಡ್ಡಿದನು ಧರ್ಮಜ ಹೆಸರಿಸಿದ ಧನವ
ಆ ಮಹಿಪ ಶಕುನಿಗಳು ಸಾರಿ
ಗ್ರಾಮವನು ಕೆದರಿದರು ದ್ಯೂತದ
ತಾಮಸದಲುಬ್ಬೆದ್ದುದಿಬ್ಬರ ಕರಣವೃತ್ತಿಗಳು ॥49॥
೦೫೦ ದುಗನ ಹಾಯಿಕು ...{Loading}...
ದುಗನ ಹಾಯಿಕು ತನಗೆ ಹಾಯ್ಕಿ
ತ್ತಿಗನವೆಂಬಬ್ಬರದ ಹಾಸಂ
ಗಿಗಳ ಬೊಬ್ಬೆಯ ಸಾರಿಗಳ ಮಣಿ ಖಟಿಲ ನಿಸ್ವನವ
ಉಗಿವ ಸೆರೆಗಳ ಬಳಿ ದುಹಾರದ
ಬಿಗುಹುಗಳ ಬೀದಿಗಳ ತಳಿ ಸಾ
ರಿಗಳ ಧಾಳಾಧೂಳಿ ಮಸಗಿತು ಭೂಪ ಕೇಳ್ ಎಂದ ॥50॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನನಗೆ ದುಗವನ್ನು ಹಾಕು. ಎಂದು ಒಬ್ಬರೆಂದರೆ, ನನಗೆ ಇತ್ತಿಗವನ್ನು ಹಾಕು ಎಂದೊಬ್ಬರು ಹೀಗೆ ಅಬ್ಬರ ನಡೆಯುವುದರ ಜೊತೆಗೆ ದಾಳಗಳನ್ನೂ ಹೊಸೆಯುವ ಶಬ್ದ. ಕಾಯಿಗಳನ್ನು ನಡೆಸುವಾಗಿನ ಖಣಿಖಟಿಯ ಶಬ್ದಗಳು ಕೇಳುತ್ತಿತ್ತು. ಜೋರಾಗಿ ಕೂಗುತ್ತಿದ್ದುದರಿಂದ ಉಬ್ಬಿದ ಗಂಟಲಿನ ನರಗಳನ್ನು, ಪಗಡೆಯ ದಾಳಗಳನ್ನು ಉರುಳಿಸುವ ಖಟ ಖಟ ಶಬ್ದ ಇವುಗಳ ಅಬ್ಬರ ಹೆಚ್ಚಾಯಿತು.
ಪದಾರ್ಥ (ಕ.ಗ.ಪ)
ಉಗಿವ ಸೆರೆ - ಜೋರಾಗಿ ಕೂಗುವಾಗ ಉಬ್ಬುವ ಗಂಟಲಿನ ನರ
(ಉದ್ಯೋಗ ಪರ್ವದ " ಕೊರಳ ಸೆರೆ ಹಿಗ್ಗಿದುದು " ನೆನಪಿಸಿಕೊಳ್ಳಬಹುದು.)
ದುಹಾರ -?
ಬೀದಿಗಳು - ಹಾಸಿನಲ್ಲಿರುವ ಕಾಯಿ ನಡೆಯಬೇಕಾದ ಮಾರ್ಗ
ಟಿಪ್ಪನೀ (ಕ.ಗ.ಪ)
ಪಗಡೆಯ ಆಟದಲ್ಲಿ ಎರಡು ದಾಳಗಳಿರುತ್ತವೆ. ಅವು ನಾಲ್ಕು ಮುಖಗಳನ್ನು ಹೊಂದಿದ್ದು ಅವುಗಳ ಮೇಲೆ ವೃತ್ತಾಕಾರದ ಅಥವ ಚುಕ್ಕಿ ರೂಪದ ಚಿತ್ರಗಳಿರುತ್ತವೆ. ಎರಡೂ ದಾಳಗಳನ್ನು ಉರುಳಿಸಿದಾಗ ಕಾಣಿಸುವ ಮುಖಗಳ ಮೇಲೆ ಇರುವ ವೃತ್ತ ಅಥವಾ ಚುಕ್ಕಿಗಳನ್ನು ಎಣಿಸಿದರೆ ಬರುವ ಸಂಖ್ಯೆಯನ್ನು ಗರ ಎನ್ನುತ್ತಾರೆ.
ಪಗಡೆಯ ಆಟದಲ್ಲಿ ದಾಳಗಳನ್ನು ಉರುಳಿಸಿದಾಗ ಬೀಳುವ ಗರಗಳಿಗೆ ಕೆಲವು ಪದಗಳಿವೆ ಅವುಗಳ ವಿವರ ಹೀಗಿದೆ.
ಪಗಡೆ = ಎರಡು ದಾಳಗಳ ಪೈಕಿ ಒಂದರಲ್ಲಿ ಒಂದು ಎಂಬ ಸಂಖ್ಯೆಯನ್ನ ಸೂಚಿಸುವ ಗರ
ದುಗ: ಎರಡೂ ದಾಳಗಳಲ್ಲಿ ಒಂದು ಎಂಬ ಸಂಖ್ಯೆಯನ್ನ ಸೂಚಿಸುವ ಗರ. ಒಟ್ಟು ಮೊತ್ತ ಎರಡಾಗುತ್ತದೆ.
ಇತ್ತಿಗ : ಎರಡೂ ದಾಳಗಳಲ್ಲಿ ಮೂರು ಎಂಬ ಸಂಖ್ಯೆಯನ್ನ ಸೂಚಿಸುವ ಗರ. ಒಟ್ಟು ಮೊತ್ತ ಆರು ಎಂದಾಗುತ್ತದೆ.
ಮಿಕ್ಕ ಗರಗಳನ್ನು ಅವುಗಳ ಸಂಖ್ಯೆಯಿಂದಲೇ ಗುರುತಿಸಲಾಗುತ್ತದೆ. ಆರು ಮೂರು( ಒಂದು ದಾಳದಲ್ಲಿ ಆರು, ಇನ್ನೊಂದರಲ್ಲಿ ಮೂರು) , ಹತ್ತು, ಆರು ಒಂದು( ಒಂದು ದಾಳದಲ್ಲಿ ಆರು, ಇನ್ನೊಂದರಲ್ಲಿ ಒಂದು) ಇತ್ಯಾದಿ.
ಮೂಲ ...{Loading}...
ದುಗನ ಹಾಯಿಕು ತನಗೆ ಹಾಯ್ಕಿ
ತ್ತಿಗನವೆಂಬಬ್ಬರದ ಹಾಸಂ
ಗಿಗಳ ಬೊಬ್ಬೆಯ ಸಾರಿಗಳ ಮಣಿ ಖಟಿಲ ನಿಸ್ವನವ
ಉಗಿವ ಸೆರೆಗಳ ಬಳಿ ದುಹಾರದ
ಬಿಗುಹುಗಳ ಬೀದಿಗಳ ತಳಿ ಸಾ
ರಿಗಳ ಧಾಳಾಧೂಳಿ ಮಸಗಿತು ಭೂಪ ಕೇಳೆಂದ ॥50॥
೦೫೧ ರಾಯ ಸೋತನು ...{Loading}...
ರಾಯ ಸೋತನು ಶಕುನಿ ಬೇಡಿದ
ದಾಯ ತಹ ಹಮ್ಮಿಗೆಯಲೊದಗಿದ
ವಾಯತದ ಕೃತ್ರಿಮವಲೇ ಕೌರವರ ಸಂಕೇತ
ಆಯಿತೀ ಹಲಗೆಯನು ಕೌರವ
ರಾಯ ಗೆಲಿದನು ಮತ್ತೆ ಪಣವೇ
ನಾಯಿತೆಂದನು ಶಕುನಿ ಯಮನಂದನನನೀಕ್ಷಿಸುತ ॥51॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯ ಸೋತ. ಶಕುನಿ ಬೇಡಿದ ಗರಗಳು ಸುಲಭವಾಗಿ ಒದಗಿದ್ದರಿಂದ ಅವರು ಅಹಂಕರಗೊಂಡರು. ಕೃತ್ರಿಮವೇ ಕೌರವರ ಸಂಕೇತವಲ್ಲವೇ? ಆಯಿತು, ಈ ಹಲಗೆಯನ್ನು ಕೌರವ ರಾಜನೇ ಗೆದ್ದ. ಮುಂದಿನ ಆಟಕ್ಕೆ ಪಣವೇನೆಂದು ಶಕುನಿ ಯಮನಂದನನ್ನು ನೋಡುತ್ತಾ ಕೇಳಿದ.
ಪದಾರ್ಥ (ಕ.ಗ.ಪ)
ದಾಯ - ಗರ.
ಹಮ್ಮಿಗೆ - ಜಂಭ, ಅಹಂಕಾರ
ಆಯತ - ಸುಲಭವಾಗಿ
ಮೂಲ ...{Loading}...
ರಾಯ ಸೋತನು ಶಕುನಿ ಬೇಡಿದ
ದಾಯ ತಹ ಹಮ್ಮಿಗೆಯಲೊದಗಿದ
ವಾಯತದ ಕೃತ್ರಿಮವಲೇ ಕೌರವರ ಸಂಕೇತ
ಆಯಿತೀ ಹಲಗೆಯನು ಕೌರವ
ರಾಯ ಗೆಲಿದನು ಮತ್ತೆ ಪಣವೇ
ನಾಯಿತೆಂದನು ಶಕುನಿ ಯಮನಂದನನನೀಕ್ಷಿಸುತ ॥51॥
೦೫೨ ಕನಕಮಯ ರಥವೆರಡು ...{Loading}...
ಕನಕಮಯ ರಥವೆರಡು ಸಾವಿರ
ಮೊನೆಗೆ ಹೂಡಿದವೆಂಟು ಸಾವಿರ
ವಿನುತ ವಾಜಿಗಳೊಡ್ಡವೆಂದನು ಧರ್ಮನಂದನನು
ಜನಪತಿಗೆ ತಾನೈಸಲೇ ಹಾ
ಯ್ಕೆನುತ ಸಾರಿಯ ಕೆದರಿದನು ದು
ರ್ಜನರಿಗೊಲಿದುದು ದೈವಗತಿ ಬೊಬ್ಬಿರಿದನಾ ಶಕುನಿ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎರಡು ಸಾವಿರ ಕನಕಮಯ ರಥಗಳು ಮತ್ತು ಅವುಗಳಿಗೆ ಹೂಡಿದ ಶ್ರೇಷ್ಠಮಟ್ಟದ ಕುದುರೆಗಳು ಎಂಟುಸಾವಿರ ನನ್ನ ಪಣ ಎಂದ ಧರ್ಮನಂದನ. ಈ ಸಲ ನಮ್ಮ ರಾಜನಿಗಲ್ಲವೇ ಬರುವುದು. ಹಾಕು ದಾಳಗಳನ್ನು ಎನ್ನುತ್ತಾ ಶಕುನಿ ಕಾಯಿಗಳನ್ನು ಚದುರಿಸಿದ. ದೈವಗತಿ ದುರ್ಜನರಿಗೆ ಒಲಿಯಿತು. ಶಕುನಿ ಗೆಲುವಿನಿಂದ ಬೊಬ್ಬೆ ಹಾಕಿದ.
ಪದಾರ್ಥ (ಕ.ಗ.ಪ)
ಒಡ್ಡ - ಪಣ
ಮೂಲ ...{Loading}...
ಕನಕಮಯ ರಥವೆರಡು ಸಾವಿರ
ಮೊನೆಗೆ ಹೂಡಿದವೆಂಟು ಸಾವಿರ
ವಿನುತ ವಾಜಿಗಳೊಡ್ಡವೆಂದನು ಧರ್ಮನಂದನನು
ಜನಪತಿಗೆ ತಾನೈಸಲೇ ಹಾ
ಯ್ಕೆನುತ ಸಾರಿಯ ಕೆದರಿದನು ದು
ರ್ಜನರಿಗೊಲಿದುದು ದೈವಗತಿ ಬೊಬ್ಬಿರಿದನಾ ಶಕುನಿ ॥52॥
೦೫೩ ಸೋತೆಯರಸಾ ನಿನಗೆ ...{Loading}...
ಸೋತೆಯರಸಾ ನಿನಗೆ ಜೂಜಿನ
ಭೀತಿಯುಂಟೇ ಮಾಣು ಮೇಣ್ ನಿ
ರ್ಭೀತನೇ ನುಡಿ ಮೇಲಣೊಡ್ಡವ ಹಲವು ಮಾತೇನು
ಕಾತರಿಸಬೇಡೆನಲು ಫಡ ಪಣ
ಭೀತನೇ ತಾನಕಟೆನುತ ಕುಂ
ತೀತನುಜನೊಡ್ಡಿದನು ಸಾವಿರ ಮತ್ತಗಜ ಘಟೆಯ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- U
“ಧರ್ಮರಾಜಾ ! ನೀನು ಸೋತೆ. ನಿನಗೇನಾದರೂ ಭಯವಾದರೆ ಹೇಳು, ಜೂಜನ್ನು ನಿಲ್ಲಿಸಿ ಬಿಡೋಣ. ನಿರ್ಭೀತನಾಗಿದ್ದರೆ
ಮುಂದಿನ ಪಣವನ್ನು ಹೇಳು. ಹಲವು ಮಾತುಗಳೇಕೆ, ನೀನೇನೂ ಕಾತರಗೊಳ್ಳಬೇಡ” ಎಂದು ಶಕುನಿ ಎನ್ನಲು ಧರ್ಮರಾಯನು “ಫಡ, ನಾನು ಪಣವೊಡ್ಡುವುದಕ್ಕೆ ಭಯಪಟ್ಟವನೇ ಅಕಟಾ !” ಎನ್ನುತ್ತಾ ಸಾವಿರ ಮತ್ತಗಜಗಳ ಘಟೆಯನ್ನೇ ಪಣವಾಗಿ ಒಡ್ಡಿದ.
ಪದಾರ್ಥ (ಕ.ಗ.ಪ)
ಮತ್ತಗಜಘಟೆ- ಮದಿಸಿದ ಆನೆಗಳ ಸಮೂಹ
ಮೂಲ ...{Loading}...
ಸೋತೆಯರಸಾ ನಿನಗೆ ಜೂಜಿನ
ಭೀತಿಯುಂಟೇ ಮಾಣು ಮೇಣ್ ನಿ
ರ್ಭೀತನೇ ನುಡಿ ಮೇಲಣೊಡ್ಡವ ಹಲವು ಮಾತೇನು
ಕಾತರಿಸಬೇಡೆನಲು ಫಡ ಪಣ
ಭೀತನೇ ತಾನಕಟೆನುತ ಕುಂ
ತೀತನುಜನೊಡ್ಡಿದನು ಸಾವಿರ ಮತ್ತಗಜ ಘಟೆಯ ॥53॥
೦೫೪ ಆದವೆಮಗಿವು ಗಜ ...{Loading}...
ಆದವೆಮಗಿವು ಗಜ ಘಟೆಗಳೆಂ
ದಾ ದುರಾತ್ಮಕನಾಡಿದನು ದು
ರ್ಭೇದವಿವದಿರ ಕಪಟ ಮಂತ್ರವನಾವನರಿವವನು
ಆದುದರಸಗೆ ಸೋಲವಿನ್ನೇ
ನಾದುದೈ ಭೂಪತಿಯೆ ಗಜಘಟೆ
ತೀದವೇ ಮೇಲೇನು ಪಣವುಂಟೆಂದನಾ ಶಕುನಿ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಗಜಘಟೆಗಳೂ ನಮಗೇ ಸೇರಿದವು. ಎಂದು ಮೊದಲೇ ಹೇಳಿಕೊಂಡು ಆ ದುಷ್ಟ ಆಡಿದ. ಇವರ ಕಪಟ ಮಂತ್ರ ಭೇದಿಸಲಸಾಧ್ಯವಾದುದು. ಅದರ ರಹಸ್ಯವನ್ನು ಯಾರು ತಿಳಿಯಲು ಸಾಧ್ಯ ? ಧರ್ಮರಾಜನಿಗೆ ಸೋಲುಂಟಾಯಿತು. ಶಕುನಿ ಧರ್ಮರಾಜನನ್ನು ಮತ್ತೆ ಕೆಣಕಿದ “ಇನ್ನೇನಾಯಿತಪ್ಪ ರಾಜ, ಗಜಘಟೆಯೆಲ್ಲ ಮುಗಿದವೇ ? ನಿನಗೆ ಪಣ ಒಡ್ಡಲು ಇನ್ನೇನಿದೆ ?” ಎಂದು ಕೇಳಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಆದವೆಮಗಿವು ಗಜ ಘಟೆಗಳೆಂ
ದಾ ದುರಾತ್ಮಕನಾಡಿದನು ದು
ರ್ಭೇದವಿವದಿರ ಕಪಟ ಮಂತ್ರವನಾವನರಿವವನು
ಆದುದರಸಗೆ ಸೋಲವಿನ್ನೇ
ನಾದುದೈ ಭೂಪತಿಯೆ ಗಜಘಟೆ
ತೀದವೇ ಮೇಲೇನು ಪಣವುಂಟೆಂದನಾ ಶಕುನಿ ॥54॥
೦೫೫ ಫಡ ದರಿದ್ರನೆ ...{Loading}...
ಫಡ ದರಿದ್ರನೆ ತಾನು ತನ್ನಯ
ಮಡದಿಯರ ಕೆಳದಿಯರು ಸಾವಿರ
ಮಡಿ ಸುಯೋಧನ ರಾಜಭವನದ ವಾರನಾರಿಯರ
ನುಡಿಯಬೇಕೇ ಧರ್ಮಸುತ ನಿ
ಮ್ಮಡಿಗಳೊಡ್ಡಿದ ಬಳಿಕ ಗೆಲಿದವ
ರೊಡವೆಯೈಸಲೆ ಹಾಯ್ಕು ಹಾಯ್ಕುಂದೊದರಿದನು ಶಕುನಿ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೆರಳಿದ ಯುಧಿಷ್ಠಿರ “ಫಡ, ದರಿದ್ರನೇ ನಾನು ? ನನ್ನ ಮಡದಿಯರ ಗೆಳತಿಯರು ಸುಯೋಧನನ ರಾಜಭವನದಲ್ಲಿರುವ ವಾರನಾರಿಯರ ಸಾವಿರದಷ್ಟು ಇದ್ದಾರೆ. ಅವರನ್ನು ಒಡ್ಡಲೇ ?” ಎಂದ. ಅದಕ್ಕೆ ಶಕುನಿ “ನೀವು ಒಡ್ಡಿದ ಮೇಲೆ ಯಾರು ಗೆಲ್ಲುತ್ತಾರೋ
ಅವರಿಗೆ ಸೇರಿದವರಲ್ಲವೇ ಇವರೆಲ್ಲ?” ಎಂದು ಕೇಳಿ ಖಚಿತಪಡಿಸಿಕೊಂಡ. “ಹಾಕು ಹಾಕು ದಾಳಗಳನ್ನ” ಎಂದು ಕೂಗಿಕೊಂಡ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಫಡ ದರಿದ್ರನೆ ತಾನು ತನ್ನಯ
ಮಡದಿಯರ ಕೆಳದಿಯರು ಸಾವಿರ
ಮಡಿ ಸುಯೋಧನ ರಾಜಭವನದ ವಾರನಾರಿಯರ
ನುಡಿಯಬೇಕೇ ಧರ್ಮಸುತ ನಿ
ಮ್ಮಡಿಗಳೊಡ್ಡಿದ ಬಳಿಕ ಗೆಲಿದವ
ರೊಡವೆಯೈಸಲೆ ಹಾಯ್ಕು ಹಾಯ್ಕುಂದೊದರಿದನು ಶಕುನಿ ॥55॥
೦೫೬ ಏನನಾಡಿದಡೇನು ಫಲ ...{Loading}...
ಏನನಾಡಿದಡೇನು ಫಲ ದೈ
ವಾನುಕೂಲ್ಯದ ಕುಣಿಕೆ ಬೇರಹು
ದಾ ನರೇಂದ್ರನ ಸಾರಿ ಸೋತುದು ನಿಮಿಷ ಮಾತ್ರದಲಿ
ಆ ನಿರೂಢಿಯ ಹತ್ತು ಸಾವಿರ
ಮಾನಿನಿಯರನು ಮತ್ತೆ ಸೋತನು
ಮಾನನಿಧಿಯೇ ಮತ್ತೆ ಪಣವೇನೆಂದನಾ ಶಕುನಿ ॥56॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಏನಾಡಿ ಏನು ಪ್ರಯೋಜನ ? ದೈವಾನುಕೂಲದ ಕುಣಿಕೆಯೇ ಬೇರೆ. ಧರ್ಮರಾಜನ ಪಗಡೆಯ ಕಾಯಿಗಳು ನಿಮಿಷ ಮಾತ್ರದಲ್ಲಿ ಆ ಆಟವನ್ನು ಸೋತವು. ಪ್ರಸಿದ್ಧರಾಗಿದ್ದ ಹತ್ತು ಸಾವಿರ ಮಾನಿನಿಯರನ್ನು ಸೋತ ನಂತರ, ಶಕುನಿ “ಮಾನ ನಿಧಿಯೇ, ಮತ್ತೆ ಪಣವೇನು?” ಎಂದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಏನನಾಡಿದಡೇನು ಫಲ ದೈ
ವಾನುಕೂಲ್ಯದ ಕುಣಿಕೆ ಬೇರಹು
ದಾ ನರೇಂದ್ರನ ಸಾರಿ ಸೋತುದು ನಿಮಿಷ ಮಾತ್ರದಲಿ
ಆ ನಿರೂಢಿಯ ಹತ್ತು ಸಾವಿರ
ಮಾನಿನಿಯರನು ಮತ್ತೆ ಸೋತನು
ಮಾನನಿಧಿಯೇ ಮತ್ತೆ ಪಣವೇನೆಂದನಾ ಶಕುನಿ ॥56॥
೦೫೭ ಅರಸಿಯರ ಮೈಗಾಹುಗಳ ...{Loading}...
ಅರಸಿಯರ ಮೈಗಾಹುಗಳ ಕಿಂ
ಕರರು ಸಾವಿರವಿದೆ ಪಣವು ನಿ
ಮ್ಮರಸನಲಿ ಪಣವೇನೆನಲು ನೀವೇನನೊಡ್ಡಿದಿರಿ
ಮರಳಿ ಬೆಸಗೊಳಬೇಡ ನಮ್ಮಲಿ
ಬರಹವದು ಹಾಯ್ಕೆನುತ ಸಾರಿಯ
ಬೆರಸಿ ತಿವಿದಾಡಿದನು ಹೆಕ್ಕಳವಿಕ್ಕಿದನು ಶಕುನಿ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತನ್ನ ಅರಸಿಯರ ಮೈಗಾವಲಿಗೆ ಇರುವ ಕಿಂಕರರು ಸಾವಿರ ಮಂದಿಯಿದ್ದಾರೆ. ಅವರನ್ನೇ ಪಣವಾಗಿ ಒಡ್ಡಿದ್ದೇನೆ , ನಿಮ್ಮ ಅರಸು ಒಡ್ಡಿದ ಪಣವೇನು ? ಎಂದು ಕೇಳಿದ ಧರ್ಮಜ. ಅದಕ್ಕೆ ಶಕುನಿ “ನೀನೇನನ್ನು ಒಡ್ಡುವೆಯೋ ಅದನ್ನೇ ಇವನು ಒಡ್ಡುವುದು. ಆ ಬಗ್ಗೆ ನೀವು ಮತ್ತೆ ಮತ್ತೆ ಕೇಳುವ ಅಗತ್ಯವೇ ಇಲ್ಲ. ಇದು ಬರೆದಿಟ್ಟ ಬರಹ. ದಾಳಗಳನ್ನು ಹಾಕು” ಎನ್ನುತ್ತಾ ಪಗಡೆ ಕಾಯಿಗಳನ್ನೆಲ್ಲ ಬೆರೆಸಿ ತಿವಿದಾಡಿದ. ಹೆಕ್ಕಳವಿಕ್ಕಿದ.
ಪದಾರ್ಥ (ಕ.ಗ.ಪ)
ಹೆಕ್ಕಳವಿಕ್ಕಿದ-ಮೆರೆದಾಡಿದ.
ತಿವಿದಾಡಿದ- ಕೈಗಳನ್ನು ವೇಗವಾಗಿ ಆಡಿಸಿದ.
ಮೂಲ ...{Loading}...
ಅರಸಿಯರ ಮೈಗಾಹುಗಳ ಕಿಂ
ಕರರು ಸಾವಿರವಿದೆ ಪಣವು ನಿ
ಮ್ಮರಸನಲಿ ಪಣವೇನೆನಲು ನೀವೇನನೊಡ್ಡಿದಿರಿ
ಮರಳಿ ಬೆಸಗೊಳಬೇಡ ನಮ್ಮಲಿ
ಬರಹವದು ಹಾಯ್ಕೆನುತ ಸಾರಿಯ
ಬೆರಸಿ ತಿವಿದಾಡಿದನು ಹೆಕ್ಕಳವಿಕ್ಕಿದನು ಶಕುನಿ ॥57॥
೦೫೮ ಅರಸ ಸೋತೈ ...{Loading}...
ಅರಸ ಸೋತೈ ನಾರಿಯರ ಜಯ
ಮರಳಿತಿತ್ತಲು ಮನಕೆ ಭೀತಿಯ
ಬೆರಕೆಯುಳ್ಳಡೆ ಬಿಟ್ಟುಕಳೆ ಪೈಸರಕೆ ಸಮಯವಿದು
ಅರಸು ಪಂಥದ ವಾಸಿ ಮನಕು
ಬ್ಬರಿಸುವೊಡೆ ಪಣವೇನು ಹೇಳೈ
ಧರಣಿಪಾಲಯೆನುತ್ತ ರಿಂಗಣಗುಣಿದನಾ ಶಕುನಿ ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮತ್ತೆ ಶಕುನಿಯದೇ ಗೆಲುವು. “ಅರಸ, ನೀನು ಸೋತೆ, ನಾರಿಯರನ್ನೆಲ್ಲ ಈ ಕಡೆಗೆ ಗೆದ್ದಾಯಿತು. ನಿನ್ನ ಮನಸ್ಸಿಗೇನಾದರೂ ಭೀತಿ ಸೇರಿಕೊಂಡಿದ್ದರೆ ಈ ಜೂಜನ್ನು ಬಿಟ್ಟು ಹೋಗು. ಹಿಮ್ಮೆಟ್ಟುವುದಕ್ಕೆ ಇದು ತಕ್ಕ ಸಮಯ. ಕ್ಷತ್ರಿಯರಿಗೆ ಇರಬೇಕಾದ ಸಂಪ್ರದಾಯ, ಗೌರವ ನಿನ್ನ ಮನಸ್ಸಿಗೆ ಉಕ್ಕಿ ಬರುವವಂತಿದ್ದರೆ ಹೇಳಯ್ಯಾ ರಾಜಾ, ನಿನ್ನ ಪಣವೇನು?” ಎಂದು ಕೇಳುತ್ತಾ ಶಕುನಿ ಕುಣಿದಾಡಿಬಿಟ್ಟ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಅರಸ ಸೋತೈ ನಾರಿಯರ ಜಯ
ಮರಳಿತಿತ್ತಲು ಮನಕೆ ಭೀತಿಯ
ಬೆರಕೆಯುಳ್ಳಡೆ ಬಿಟ್ಟುಕಳೆ ಪೈಸರಕೆ ಸಮಯವಿದು
ಅರಸು ಪಂಥದ ವಾಸಿ ಮನಕು
ಬ್ಬರಿಸುವೊಡೆ ಪಣವೇನು ಹೇಳೈ
ಧರಣಿಪಾಲಯೆನುತ್ತ ರಿಂಗಣಗುಣಿದನಾ ಶಕುನಿ ॥58॥
೦೫೯ ಎಲವೊ ಸೌಬಲ ...{Loading}...
ಎಲವೊ ಸೌಬಲ ಪಾಂಡುವಿನ ಮ
ಕ್ಕಳು ಕಣಾ ಚತುರಂಬುನಿಧಿ ಮೇ
ಖಲೆಯ ಉತ್ತರ ಕುರು ನರೇಂದ್ರರ ಸೀಮೆಪರಿಯಂತ
ನೆಲವಿದೆಮ್ಮದು ನೃಪರೊಳಗೆ ನಾ
ವುಳಿದು ಧರಣಿಪರಾರು ರಥ ಸಂ
ಕುಳವನೊಡ್ಡುವೆನೊಂದು ಬಾರಿಗೆ ಹತ್ತು ಸಾವಿರವ ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲವೋ ಶಕುನಿ, ನಾವು ಪಾಂಡುವಿನ ಮಕ್ಕಳು ಕಣಯ್ಯಾ ! ಚತುಸ್ಸಾಗರಗಳೇ ಒಡ್ಯಾಣದಂತಿರುವ, ಉತ್ತರಕುರು ರಾಜರ ಎಲ್ಲೆಯವರೆಗೆ ಇರುವ ಈ ಭೂಮಂಡಲ ನಮ್ಮದು. ರಾಜರಲ್ಲಿ ನಮಗೆ ಸಮಾನರಾದ ರಾಜರು ಬೇರೆ ಯಾರಿದ್ದಾರೆ ? ಒಂದೇ ಸಲಕ್ಕೆ ಹತ್ತು ಸಾವಿರ ರಥಗಳನ್ನು ಪಣವಾಗಿ ಒಡ್ಡುತ್ತೇನೆ” ಎಂದು ಯುಧಿಷ್ಠಿರ ಹೇಳಿದ.
ಪದಾರ್ಥ (ಕ.ಗ.ಪ)
ಮೇಖಲೆ-ಒಡ್ಯಾಣ
ಮೂಲ ...{Loading}...
ಎಲವೊ ಸೌಬಲ ಪಾಂಡುವಿನ ಮ
ಕ್ಕಳು ಕಣಾ ಚತುರಂಬುನಿಧಿ ಮೇ
ಖಲೆಯ ಉತ್ತರ ಕುರು ನರೇಂದ್ರರ ಸೀಮೆಪರಿಯಂತ
ನೆಲವಿದೆಮ್ಮದು ನೃಪರೊಳಗೆ ನಾ
ವುಳಿದು ಧರಣಿಪರಾರು ರಥ ಸಂ
ಕುಳವನೊಡ್ಡುವೆನೊಂದು ಬಾರಿಗೆ ಹತ್ತು ಸಾವಿರವ ॥59॥
೦೬೦ ಈ ರಥಕೆ ...{Loading}...
ಈ ರಥಕೆ ನಾಲ್ವತ್ತು ಸಾವಿರ
ವಾರುವಂಗಳ ಕೂಟವಾ ಪರಿ
ವಾರವಿದೆಲಾ ರಪಣವೆಂದನು ಸುಬಲತನಯಂಗೆ
ವೀರನಹೆಯೈ ಧರಣಿಪತಿ ತೆಗೆ
ಸಾರಿಗಳ ಬಿಡು ಸೆರೆಯ ಬಿಗಿದು ದು
ಹಾರದಲಿ ನೀ ಸೋತೆ ಹೋಗೆಂದೊದರಿದನು ಶಕುನಿ ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಈ ರಥಗಳ ಜೊತೆಗೆ ನಲವತ್ತು ಸಾವಿರ ಕುದುರೆಗಳು, ಅವುಗಳಿಗೆ ಸಂಬಂಧಿಸಿದ ಪರಿವಾರಗಳನ್ನೂ ಪಣವಾಗಿ ಒಡ್ಡಿದ್ದೇನೆ”
ಎಂದ. ಹೇಗೂ ಎಲ್ಲವೂ ತನಗೆ ಬರುತ್ತದೆಂದು ಭರವಸೆಯಿದ್ದ ಶಕುನಿ “ನೀನು ವೀರನಯ್ಯಾ ರಾಜ ! ತೆಗಿ, ಕಾಯಿಗಳನ್ನು ಬಿಡು ಎಂದು ಉಬ್ಬಿಸಿ, ದಾಳ ಹಾಕಿದ ಮೇಲೆ ಗಂಟಲಿನ ನರ ಬಿಗಿದು ದುಹಾರದಲಿ “ನೀ ಸೋತೆ ಹೋಗು” ಎಂದು ಕೂಗಿದ.
ಪದಾರ್ಥ (ಕ.ಗ.ಪ)
ವಾರುವ-ಕುದುರೆ,
ರಪಣ-ಪಣ
ದುಹಾರ - ?
ಸೆರೆ -ಗಂಟಲಿನ ನರ
ಮೂಲ ...{Loading}...
ಈ ರಥಕೆ ನಾಲ್ವತ್ತು ಸಾವಿರ
ವಾರುವಂಗಳ ಕೂಟವಾ ಪರಿ
ವಾರವಿದೆಲಾ ರಪಣವೆಂದನು ಸುಬಲತನಯಂಗೆ
ವೀರನಹೆಯೈ ಧರಣಿಪತಿ ತೆಗೆ
ಸಾರಿಗಳ ಬಿಡು ಸೆರೆಯ ಬಿಗಿದು ದು
ಹಾರದಲಿ ನೀ ಸೋತೆ ಹೋಗೆಂದೊದರಿದನು ಶಕುನಿ ॥60॥
೦೬೧ ಆವ ಕೌಳಿಕ ...{Loading}...
ಆವ ಕೌಳಿಕ ಮಂತ್ರತಂತ್ರದ
ಡಾವರದ ಡೊಳ್ಳಾಸವಿಕ್ಕಿದ
ದೀವಸದ ಬೇಳುವೆಯನೇನೆಂಬೆನು ಮಹೀಪತಿಯ
ಆವ ವಸ್ತುವನರಸನೊಡ್ಡುವ
ನಾವ ವಹಿಲದಾತ ಸೋಲಿಸಿ
ಕೈವಳಿಸಿದನೊ ಬಲ್ಲನಾವವನೆಂದನಾ ಮುನಿಪ ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯಾವ ಕುಟಿಲ ಮಂತ್ರ ತಂತ್ರಗಳ ವಿಸ್ತೃತ ವಂಚನೆಯಿಂದಾದುದೋ ಈ ಧರ್ಮರಾಜನ ಉದ್ಧಟತನ. ಅದರ ಆಟೋಪವನ್ನು ಏನೆಂದು ಹೇಳಲಿ? ಯಾವ ವಸ್ತುವನ್ನು ಇವನು ಒಡ್ಡುತ್ತಿದ್ದಾನೋ, ಒಡ್ಡಿದಷ್ಟೇ ಶೀಘ್ರವಾಗಿ ಆ ವಸ್ತುವನ್ನು ಕೈವಶ ಮಾಡಿಕೊಂಡು ಬಿಡುತ್ತಿದ್ದ ಆ ಶಕುನಿ ! ಅವನ ಚಾಕಚಕ್ಯತೆಯನ್ನು ಬಲ್ಲವರಾರು ? ಎಂದು ವೈಶಂಪಾಯನ ಜನಮೇಜಯನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಕೌಳಿಕ-ಮೋಸ,
ಡಾವರದ ಡೊಳ್ಳಾಸ-ತವಕದಿಂದ ಕೂಡಿದ ವಂಚನೆ,
ದೀವಸ-ಉದ್ಧಟತನ
ಬೇಳುವೆ-ಆಟೋಪ
ವಹಿಲ-ಶೀಘ್ರ,
ಕೈವಳಿಸು-ಕೈವಶಮಾಡಿಕೊ
ಮೂಲ ...{Loading}...
ಆವ ಕೌಳಿಕ ಮಂತ್ರತಂತ್ರದ
ಡಾವರದ ಡೊಳ್ಳಾಸವಿಕ್ಕಿದ
ದೀವಸದ ಬೇಳುವೆಯನೇನೆಂಬೆನು ಮಹೀಪತಿಯ
ಆವ ವಸ್ತುವನರಸನೊಡ್ಡುವ
ನಾವ ವಹಿಲದಾತ ಸೋಲಿಸಿ
ಕೈವಳಿಸಿದನೊ ಬಲ್ಲನಾವವನೆಂದನಾ ಮುನಿಪ ॥61॥
೦೬೨ ಅರಸ ನೀಗಿದೆ ...{Loading}...
ಅರಸ ನೀಗಿದೆ ಹತ್ತು ಸಾವಿರ
ವರ ರಥವನಿನ್ನೇನು ಸಾಕೀ
ಸರಲಿ ನಿಲುವುದು ವಿತ್ತವುಂಟೇ ಮತ್ತೆ ಹೇಳೆನಲು
ಮರುಳೆ ಸೌಬಲ ಚಿತ್ರರಥನೀ
ನರಗೆ ಕೊಟ್ಟನು ತೇಜಿಗಳ ತಿ
ತ್ತಿರಿಯ ಬಣ್ಣದ ಹತ್ತು ಸಾವಿರ ತುರಗವಿವೆಯೆಂದ ॥62॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಕುನಿ ಯುಧಿಷ್ಠಿರನನ್ನು ಮತ್ತೆ ಕೆಣಕಿದ. “ಅರಸ, ಹತ್ತು ಸಾವಿರ ಶ್ರೇಷ್ಠವಾದ ರಥಗಳನ್ನು ಕಳೆದುಕೊಂಡೆ. ಇನ್ನೇನು, ಸಾಕು, ಇಷ್ಟಕ್ಕೇ ನಿಲ್ಲಿಸು. ಇನ್ನೂ ಸಂಪತ್ತು ಇದೆಯೋ ಹೇಳು” ಎಂದ. ಅದಕ್ಕೆ ಯುಧಿಷ್ಠಿರ ಮರುಳೇ ಶಕುನಿ, ಚಿತ್ರರಥನು ನಮ್ಮ ಅರ್ಜುನನಿಗೆ ಕೊಟ್ಟ ತಿತ್ತಿರಿಯ ಬಣ್ಣದ ಹತ್ತು ಸಾವಿರ ಕುದುರೆಗಳಿವೆ." ಎಂದು ಹೆಳಿದ
ಪದಾರ್ಥ (ಕ.ಗ.ಪ)
ತಿತ್ತಿರಿ- ಕವಜಿಗದ ಹಕ್ಕಿ , ಒಂದು ಬಗೆಯ ಮರ
ಮೂಲ ...{Loading}...
ಅರಸ ನೀಗಿದೆ ಹತ್ತು ಸಾವಿರ
ವರ ರಥವನಿನ್ನೇನು ಸಾಕೀ
ಸರಲಿ ನಿಲುವುದು ವಿತ್ತವುಂಟೇ ಮತ್ತೆ ಹೇಳೆನಲು
ಮರುಳೆ ಸೌಬಲ ಚಿತ್ರರಥನೀ
ನರಗೆ ಕೊಟ್ಟನು ತೇಜಿಗಳ ತಿ
ತ್ತಿರಿಯ ಬಣ್ಣದ ಹತ್ತು ಸಾವಿರ ತುರಗವಿವೆಯೆಂದ ॥62॥
೦೬೩ ಆಡಿದನು ನೃಪನಾ ...{Loading}...
ಆಡಿದನು ನೃಪನಾ ಕ್ಷಣಕೆ ಹೋ
ಗಾಡಿದನು ಖೇಚರರ ಖಾಡಾ
ಖಾಡಿಯಲಿ ಝಾಡಿಸಿದ ಹಯವನು ಹತ್ತು ಸಾವಿರವ
ಹೂಡಿದನು ಸಾರಿಗಳ ಮರಳಿ
ನ್ನಾಡುವರೆ ಪಣವಾವುದೈ ಮಾ
ತಾಡಿಯೆನೆ ಮನದಲಿ ಮಹೀಪತಿ ಧನವ ಚಿಂತಿಸಿದ ॥63॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಆಟವನ್ನು ಆಡಿದ, ಆ ಕ್ಷಣವೇ, ಖೇಚರರೊಡನೆ ಖಾಡಾಖಾಡಿ ಯುದ್ಧಮಾಡಿ ಅವರಿಂದ ಗೆದ್ದು ತಂದಿದ್ದ ಹತ್ತು ಸಾವಿರ
ಕುದುರೆಗಳನ್ನು ಸೋತುಬಿಟ್ಟ. ಶಕುನಿ ಮತ್ತೆ ಸಾರಿಗಳನ್ನು ಜೋಡಿಸಿ “ಮತ್ತೆ ಆಡುವುದಾದರೆ ಒಡ್ಡುವ ಪಣವಾವುದಯ್ಯ ? ಮಾತಾಡಿ”
ಎನ್ನಲು ಯುಧಿಷ್ಠಿರ ತನ್ನಲ್ಲಿದ್ದ ಹಣವನ್ನು ಕುರಿತು ಚಿಂತಿಸಿದ.
ಪದಾರ್ಥ (ಕ.ಗ.ಪ)
ಝಾಡಿಸಿದ-ಒದ್ದುಬಿಟ್ಟ
ಮೂಲ ...{Loading}...
ಆಡಿದನು ನೃಪನಾ ಕ್ಷಣಕೆ ಹೋ
ಗಾಡಿದನು ಖೇಚರರ ಖಾಡಾ
ಖಾಡಿಯಲಿ ಝಾಡಿಸಿದ ಹಯವನು ಹತ್ತು ಸಾವಿರವ
ಹೂಡಿದನು ಸಾರಿಗಳ ಮರಳಿ
ನ್ನಾಡುವರೆ ಪಣವಾವುದೈ ಮಾ
ತಾಡಿಯೆನೆ ಮನದಲಿ ಮಹೀಪತಿ ಧನವ ಚಿಂತಿಸಿದ ॥63॥
೦೬೪ ಅಗಣಿತದ ಧನವವುಣ್ಟು ...{Loading}...
ಅಗಣಿತದ ಧನವವುಂಟು ಹಾಸಂ
ಗಿಗಳ ಹಾಯಿತು ಸೋತ ವಸ್ತುವ
ತೆಗೆವೆನೀಗಳೆ ಶಕುನಿ ನೋಡಾ ತನ್ನ ಕೌಶಲವ
ದುಗುಣ ಹಲಗೆಗೆ ಹತ್ತು ಮಡಿ ರೇ
ಖೆಗೆ ಗಜಾಶ್ವನಿಕಾಯ ರಥ ವಾ
ಜಿಗಳು ಸಹಿತಿದೆ ಸಕಲ ಸೈನಿಕವೆಂದನಾ ಭೂಪ ॥64॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಲೆಕ್ಕವಿಲ್ಲದಷ್ಟು ಹಣವಿದೆ ನನ್ನಲ್ಲಿ. ದಾಳಗಳನ್ನು ಹಾಕು. ನಾನು ಇದುವರೆಗೆ ಸೋತ ವಸ್ತುಗಳನ್ನೆಲ್ಲ ಈ ಸಾರಿ ಹಿಂದಕ್ಕೆ ಪಡೆದು ಬಿಡುತ್ತೇನೆ. ನನ್ನ ಕೌಶಲವನ್ನು ನೋಡು ಶಕುನಿ ! ಒಂದು ಹಲಗೆಗೆ ದ್ವಿಗುಣದಷ್ಟು, ಒಂದು ರೇಖೆಗೆ ಹತ್ತು ಮಡಿಯಷ್ಟು ಆನೆ ಕುದುರೆಗಳ ಸಮೂಹ, ಕುದುರೆಗಳ ಸಮೇತ ರಥಗಳ, ಸಕಲ ಸೈನ್ಯವೂ ಸೇರಿದೆ. ಇದೇ ಪಣ” ಎಂದ ಯುಧಿಷ್ಠಿರ.
ಪದಾರ್ಥ (ಕ.ಗ.ಪ)
ರೇಖೆ - ದಾಳದಲ್ಲಿ ಗರವನ್ನು ಗುರುತಿಸುವ ಗೆರೆಗಳು
ಹಲಗೆ - ಪಗಡೆಯ ಹಲಗೆ ( ಒಂದು ಹಲಗೆ ಎಂದರೆ ಒಂದು ಆಟ.)
ಮೂಲ ...{Loading}...
ಅಗಣಿತದ ಧನವವುಂಟು ಹಾಸಂ
ಗಿಗಳ ಹಾಯಿತು ಸೋತ ವಸ್ತುವ
ತೆಗೆವೆನೀಗಳೆ ಶಕುನಿ ನೋಡಾ ತನ್ನ ಕೌಶಲವ
ದುಗುಣ ಹಲಗೆಗೆ ಹತ್ತು ಮಡಿ ರೇ
ಖೆಗೆ ಗಜಾಶ್ವನಿಕಾಯ ರಥ ವಾ
ಜಿಗಳು ಸಹಿತಿದೆ ಸಕಲ ಸೈನಿಕವೆಂದನಾ ಭೂಪ ॥64॥
೦೬೫ ಆಯಿತಿದು ಪಣವಹುದಲೇ ...{Loading}...
ಆಯಿತಿದು ಪಣವಹುದಲೇ ನೃಪ
ಹಾಯಿಕಾ ಹಾಸಂಗಿಗಳ ಸಾ
ಹಾಯ ಕುರುಪತಿಗಿಲ್ಲ ಕೃಷ್ಣಾದಿಗಳು ನಿನ್ನವರು
ದಾಯ ಕಂದೆರೆವರೆ ಸುಯೋಧನ
ರಾಯನುಪಚಿತಪುಣ್ಯವಕಟಾ
ದಾಯವೇ ಬಾಯೆಂದು ಮಿಗೆ ಬೊಬ್ಬಿರಿದನಾ ಶಕುನಿ ॥65॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಯ್ತು, ನಿನ್ನ ಪಣವಲ್ಲವೇ ? ರಾಜ, ದಾಳಗಳನ್ನು ಉರುಳಿಸು, ಕೌರವನಿಗೆ ನೆರವು ನೀಡುವವರಿಲ್ಲ. ಕೃಷ್ಣನೇ ಮೊದಲಾದವರು
ನಿನ್ನ ಕಡೆಗೆ ಸೇರಿಬಿಟ್ಟಿದ್ದಾರೆ. ಈ ಗರವೇನಾದರೂ ಕಣ್ಣು ತೆರೆದರೆ ಅದು ಸುಯೋಧನ ರಾಜನು ಮಾಡಿದ ಪುಣ್ಯ ! ಅಯ್ಯೋ ಗರವೇ ಬಾ ! ಎಂದು ಶಕುನಿ ಬೊಬ್ಬಿರಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಆಯಿತಿದು ಪಣವಹುದಲೇ ನೃಪ
ಹಾಯಿಕಾ ಹಾಸಂಗಿಗಳ ಸಾ
ಹಾಯ ಕುರುಪತಿಗಿಲ್ಲ ಕೃಷ್ಣಾದಿಗಳು ನಿನ್ನವರು
ದಾಯ ಕಂದೆರೆವರೆ ಸುಯೋಧನ
ರಾಯನುಪಚಿತಪುಣ್ಯವಕಟಾ
ದಾಯವೇ ಬಾಯೆಂದು ಮಿಗೆ ಬೊಬ್ಬಿರಿದನಾ ಶಕುನಿ ॥65॥
೦೬೬ ಮತ್ತೆ ಹೇಳುವುದೇನ ...{Loading}...
ಮತ್ತೆ ಹೇಳುವುದೇನ ಸೋಲವ
ಬಿತ್ತಿ ಬೆಳೆದನು ಭೂಪನವರಿಗೆ
ತೆತ್ತನೈ ಸರ್ವಸ್ವ ಧನವನು ಸಕಲ ಸೈನಿಕವ
ಮತ್ತೆ ಪಣವೇನೆನಲು ಬಳಿಕರು
ವತ್ತು ಸಾವಿರ ಕರಿಕಳಭವೆಂ
ಬತ್ತು ಸಾವಿರ ತುರಗ ಶಿಶುಗಳನೊಡ್ಡಿದನು ಭೂಪ ॥66॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮತ್ತೆ ಹೇಳಬೇಕಾದದ್ದೇನು, ಯುಧಿಷ್ಠಿರ ಸೋಲನ್ನೇ ಬಿತ್ತಿದ, ಸೋಲನ್ನೇ ಬೆಳೆದ. ತನ್ನ ಸರ್ವಸ್ವಧನವನ್ನೂ ಸಮಸ್ತ ಸೈನ್ಯವನ್ನು ಅವರಿಗೆ ತೆತ್ತಾಯಿತು. ಮತ್ತೆ ಶಕುನಿ ಪಣವೇನೆಂದು ಹೇಳಲು ಯುಧಿಷ್ಠಿರ ರಾಜ ಅರವತ್ತು ಸಾವಿರ ಆನೆ ಮರಿಗಳನ್ನೂ, ಎಂಬತ್ತು ಸಾವಿರ ಕುದುರೆಮರಿಗಳನ್ನು ಪಣವಾಗಿ ಒಡ್ಡಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಮತ್ತೆ ಹೇಳುವುದೇನ ಸೋಲವ
ಬಿತ್ತಿ ಬೆಳೆದನು ಭೂಪನವರಿಗೆ
ತೆತ್ತನೈ ಸರ್ವಸ್ವ ಧನವನು ಸಕಲ ಸೈನಿಕವ
ಮತ್ತೆ ಪಣವೇನೆನಲು ಬಳಿಕರು
ವತ್ತು ಸಾವಿರ ಕರಿಕಳಭವೆಂ
ಬತ್ತು ಸಾವಿರ ತುರಗ ಶಿಶುಗಳನೊಡ್ಡಿದನು ಭೂಪ ॥66॥
೦೬೭ ಅರಸ ಕೇಳೀ ...{Loading}...
ಅರಸ ಕೇಳೀ ತುರಗವೀ ರಥ
ಕರಿ ನಿಕರವೀ ಸೈನ್ಯ ಹಸ್ತಿನ
ಪುರಿಗೆ ಬಂದುದು ತಮ್ಮ ಕೂಡೆ ವಿನೋದಕೇಳಿಯಲಿ
ಕುರುಪತಿಯ ವಶವಾಯ್ತು ಬಳಿಕಿನ
ಮರಿಗುದುರೆ ಮರಿಯಾನೆಗಳನು
ಚ್ಚರಿಸಿ ಸಾರಿಯ ಸೋಕಿದಾಗಲೆ ಸೋತನಾ ಭೂಪ ॥67॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಕುದುರೆಗಳು, ರಥಗಳು, ಆನೆಗಳು ಸೈನ್ಯ ಎಲ್ಲವೂ ಯುಧಿಷ್ಠಿರನ ಜೊತೆಯಲ್ಲೇ ವಿನೋದವಾಗಿ ವಿಹರಿಸಿಕೊಂಡು ಹಸ್ತಿನಾಪುರಕ್ಕೆ ಬಂದವು. ಎಲ್ಲವೂ ಈಗ ಕುರುಪತಿಯ ವಶವಾಗಿ ಬಿಟ್ಟಿತು. ಅನಂತರ ಮರಿ ಕುದುರೆಗಳನ್ನು ಮರಿಯಾನೆಗಳನ್ನೂ ಪಣವಾಗಿ ಒಡ್ಡಿ ಪಗಡೆಯ ಕಾಯಿಗಳನ್ನು ಮುಟ್ಟುತ್ತಿದ್ದಂತೆಯೇ ಸೋತುಬಿಟ್ಟ !.
ಪದಾರ್ಥ (ಕ.ಗ.ಪ)
ಮೂಲ ...{Loading}...
ಅರಸ ಕೇಳೀ ತುರಗವೀ ರಥ
ಕರಿ ನಿಕರವೀ ಸೈನ್ಯ ಹಸ್ತಿನ
ಪುರಿಗೆ ಬಂದುದು ತಮ್ಮ ಕೂಡೆ ವಿನೋದಕೇಳಿಯಲಿ
ಕುರುಪತಿಯ ವಶವಾಯ್ತು ಬಳಿಕಿನ
ಮರಿಗುದುರೆ ಮರಿಯಾನೆಗಳನು
ಚ್ಚರಿಸಿ ಸಾರಿಯ ಸೋಕಿದಾಗಲೆ ಸೋತನಾ ಭೂಪ ॥67॥
೦೬೮ ಅಕಟ ಸಾಲದೆ ...{Loading}...
ಅಕಟ ಸಾಲದೆ ಜೂಜು ನಿರ್ಬಂ
ಧಕವೆ ಶಿವಶಿವ ತಾನಿದೆತ್ತಣ
ಶಕುನಿಯೆತ್ತಣ ಭರತಕುಲದ ಮಹಾ ಮಹೀಶ್ವರರು
ವಿಕಳ ಚೇಷ್ಟೆಯದೇನು ವೃದ್ಧ
ಪ್ರಕರಕಿದು ವಿಳಸವೆ ವಿಘಾತಿಗೆ
ಸಕಲಜನ ಸಮ್ಮತವೆಯೆಂದನು ಖಾತಿಯಲಿ ವಿದುರ ॥68॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಯ್ಯೋ ಸಾಲದೆ ಇಷ್ಟು ಹೊತ್ತು ಆಡಿದ ಜೂಜು, ಇದೇನು ನಿರ್ಬಂಧಕವಾದುದೇ ? ಶಿವಶಿವಾ ! ಎಲ್ಲಿನ ಶಕುನಿ, ಎಲ್ಲಿನ ಭರತಂಶದ ಶ್ರೇಷ್ಠ ರಾಜರುಗಳು ! ಏನಿದು ದುಷ್ಟಚೇಷ್ಟೆ. ವೃದ್ಧರಾದವರಿಗೆ ಇದೇನು ವಿಲಾಸವೇ? ಈ ವಿನಾಶಕ್ಕೆ ಈ ಸಕಲ ಜನರೂ ಸಮ್ಮತಿಸಿದ್ದಾರೆಯೇ ?” ಎಂದು ವಿದುರ ಕೋಪದಿಂದ ಹೇಳಿದ.
ಪದಾರ್ಥ (ಕ.ಗ.ಪ)
ವೃದ್ಧಪ್ರಕರ- ಹಿರಿಯರ ಸಮೂಹ
ವಿಳಸ - ಸಂತೋóಷ
ಮೂಲ ...{Loading}...
ಅಕಟ ಸಾಲದೆ ಜೂಜು ನಿರ್ಬಂ
ಧಕವೆ ಶಿವಶಿವ ತಾನಿದೆತ್ತಣ
ಶಕುನಿಯೆತ್ತಣ ಭರತಕುಲದ ಮಹಾ ಮಹೀಶ್ವರರು
ವಿಕಳ ಚೇಷ್ಟೆಯದೇನು ವೃದ್ಧ
ಪ್ರಕರಕಿದು ವಿಳಸವೆ ವಿಘಾತಿಗೆ
ಸಕಲಜನ ಸಮ್ಮತವೆಯೆಂದನು ಖಾತಿಯಲಿ ವಿದುರ ॥68॥
೦೬೯ ವರ ಪುರೂರವ ...{Loading}...
ವರ ಪುರೂರವ ನಹುಷನವನೀ
ಶ್ವರತಿಲಕ ದುಷ್ಯಂತ ಕುರು ಸಂ
ವರಣನಮಲ ಯಯಾತಿಯಾದಿ ಪರಂಪರಾಗತದ
ಭರತ ಕುಲವಿದರೊಳಗೆ ವಂಶೋ
ದ್ಧರರಿಳೆಯ ಬೆಳಗಿದರು ನೀನವ
ತರಿಸಿ ತಂದೈ ತೊಡಕನೆಂದನು ಖಾತಿಯಲಿ ವಿದುರ ॥69॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಶ್ರೇಷ್ಠರಾದ ಪುರೂರವ, ನಹುಷ, ಅವನೀಶ್ವರ ತಿಲಕನಾದ ದುಷ್ಯಂತ, ಕುರು ಸಂವರಣ, ಶ್ರೇಷ್ಠನಾದ ಯಯಾತಿ ಇವರೇ ಮೊದಲಾದವರಿಂದ ಪರಂಪರಾಗತವಾಗಿ ಬಂದುದು ಈ ಭರತವಂಶ. ಇದರಲ್ಲಿ ವಂಶೋದ್ಧಾರಕರು ಈ ಪೃಥ್ವಿಯನ್ನು ಬೆಳಗಿದರು. ನೀನು ಹುಟ್ಟಿ ಬಂದು ಇದಕ್ಕೆ ತೊಡಕನ್ನುಂಟು ಮಾಡಿದೆಯಲ್ಲೋ" ಎಂದು ವಿದುರ ದುರ್ಯೋಧನನಿಗೆ ಕೋಪದಿಂದ ಹೇಳಿದನು.
ಪದಾರ್ಥ (ಕ.ಗ.ಪ)
ಮೂಲ ...{Loading}...
ವರ ಪುರೂರವ ನಹುಷನವನೀ
ಶ್ವರತಿಲಕ ದುಷ್ಯಂತ ಕುರು ಸಂ
ವರಣನಮಲ ಯಯಾತಿಯಾದಿ ಪರಂಪರಾಗತದ
ಭರತ ಕುಲವಿದರೊಳಗೆ ವಂಶೋ
ದ್ಧರರಿಳೆಯ ಬೆಳಗಿದರು ನೀನವ
ತರಿಸಿ ತಂದೈ ತೊಡಕನೆಂದನು ಖಾತಿಯಲಿ ವಿದುರ ॥69॥
೦೭೦ ಸೋಲ ಮೆಚ್ಚಿದುದಿವರನೊಡ್ಡದ ...{Loading}...
ಸೋಲ ಮೆಚ್ಚಿದುದಿವರನೊಡ್ಡದ
ಮೇಲೆ ಹೇರಿದುದೊಡ್ಡವೀಗಳು
ಮೇಲುಗೈ ನೀನಾದೆ ಕುಸಿದರು ಪಾಂಡುನಂದನರು
ಸೋಲವಿದು ಕಾಲಾಂತಕನ ಮೈ
ಸಾಲ ಸಾರಿದೆನಕಟ ಸಾಕಿ
ನ್ನೇಳು ಕೌರವ ನೃಪತಿಯೆಂದನು ಖಾತಿಯಲಿ ವಿದುರ ॥70॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೋಲು ಈ ಪಾಂಡವರನ್ನು ಮೆಚ್ಚಿಕೊಂಡಿತು, ಅವರು ಒಡ್ಡದ ಮೇಲೆ ಒಡ್ಡವನ್ನು ಹೇರಿ ಸೋತರು. ನೀನೇ ಎಲ್ಲವನ್ನು ಗೆದ್ದು ಮೇಲುಗೈಯಾದೆ. ಪಾಂಡುನಂದನರು ಕುಸಿದರು. ಈ ಸೋಲು ಎಂಬುದು ಕಾಲ ಯಮನ ಮೈಸಾಲ. ನಾಳೆ ನೀವು ತೀರಿಸಲೇ ಬೇಕಾಗುತ್ತದೆ. ನಾನು ಸಾರಿ ಹೇಳುತ್ತಿದ್ದೇನೆ. ಅಯ್ಯೋ, ಸಾಕು ಇನ್ನು ಏಳು ಕೌರವ ನೃಪತಿ ! ಎಂದು ವಿದುರ ಕೋಪದಿಂದ ಹೇಳಿದ
ಪದಾರ್ಥ (ಕ.ಗ.ಪ)
ಸೋಲ- ಸೋಲು
ಮೂಲ ...{Loading}...
ಸೋಲ ಮೆಚ್ಚಿದುದಿವರನೊಡ್ಡದ
ಮೇಲೆ ಹೇರಿದುದೊಡ್ಡವೀಗಳು
ಮೇಲುಗೈ ನೀನಾದೆ ಕುಸಿದರು ಪಾಂಡುನಂದನರು
ಸೋಲವಿದು ಕಾಲಾಂತಕನ ಮೈ
ಸಾಲ ಸಾರಿದೆನಕಟ ಸಾಕಿ
ನ್ನೇಳು ಕೌರವ ನೃಪತಿಯೆಂದನು ಖಾತಿಯಲಿ ವಿದುರ ॥70॥
೦೭೧ ಗೆಲಿದ ಧನವಕ್ಕುವುದೆ ...{Loading}...
ಗೆಲಿದ ಧನವಕ್ಕುವುದೆ ಸೋತವ
ರಳುಕಿದವರೇ ಪಾಂಡುಪುತ್ರರ
ಬಲುಹ ಬೆಸಗೊಳ್ಳಾ ತದೀಯ ಶ್ರವಣ ದೃಷ್ಟಿಗಳ
ಎಲೆ ಸುಯೋಧನ ವಿಷದ ಮಧುರವು
ಕೊಲುವುದೋ ಮನ್ನಿಸುವುದೋ ಕ
ಕ್ಕುಲಿತೆಗಿದು ಕಡೆಹಾರವಾಗಲಿ ಸಾಕು ತೆಗೆಯೆಂದ ॥71॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜೂಜಿನಲ್ಲಿ ಗೆದ್ದ ಹಣ ಜೀರ್ಣವಾಗುತ್ತದೆಯೇ ? ಸೋತ ಪಾಂಡವರು ಅಂಜಿದವರಾಗುತ್ತಾರೆಯೇ ? ಪಾಂಡುಪುತ್ರರ ಸಾಮಥ್ರ್ಯವೆಂತಹುದೆಂದು ಅವರ ಕಣ್ಣುಕಿವಿಗಳನ್ನು ನೋಡಿ ತಿಳಿಯಯ್ಯ. ಎಲೆ ಸುಯೋಧನ, ವಿಷವೂ ಸಿಹಿಯಾಗಿದ್ದ ಮಾತ್ರಕ್ಕೆ
ಕೊಲ್ಲುವುದೋ ಉಳಿಸುವುದೋ ? ನಿಮ್ಮ ಜೂಜಿನ ಬೆಂಬಲಕ್ಕೆ ಇದೇ ಕೊನೆಯಾಗಲಿ. ಸಾಕು ತೆಗೆ.
ಪದಾರ್ಥ (ಕ.ಗ.ಪ)
ಅಕ್ಕುವುದೇ-ಜೀರ್ಣವಾಗುದೇ ?
ಬಲುಹು-ಸಾಮಥ್ರ್ಯ,
ಕಕ್ಕುಲಿತೆ -ವ್ಯಾಮೋಹ
ಕಡೆಹಾರ- ಕಡೆಯದಾಗಲಿ
ಮೂಲ ...{Loading}...
ಗೆಲಿದ ಧನವಕ್ಕುವುದೆ ಸೋತವ
ರಳುಕಿದವರೇ ಪಾಂಡುಪುತ್ರರ
ಬಲುಹ ಬೆಸಗೊಳ್ಳಾ ತದೀಯ ಶ್ರವಣ ದೃಷ್ಟಿಗಳ
ಎಲೆ ಸುಯೋಧನ ವಿಷದ ಮಧುರವು
ಕೊಲುವುದೋ ಮನ್ನಿಸುವುದೋ ಕ
ಕ್ಕುಲಿತೆಗಿದು ಕಡೆಹಾರವಾಗಲಿ ಸಾಕು ತೆಗೆಯೆಂದ ॥71॥
೦೭೨ ಗೆಲಿದ ದರ್ಪದ ...{Loading}...
ಗೆಲಿದ ದರ್ಪದ ದಡ್ಡಿ ತೆಗೆ ಸೌ
ಬಲನ ಬೀಳ್ಕೊಡು ನಿಖಿಲ ಬಾಂಧವ
ಕುಲಸಹಿತಲೀ ಮಧುರ ವಚನದಲಿವರ ಸಂತೈಸು
ನೆಲನನೇಕಚ್ಛತ್ರದಲಿ ಹದ
ಗೊಳಿಸು ಬದುಕುವರಿದು ನಿಜಾನ್ವಯ
ದುಳಿವು ಬೆಸಗೊಳು ಬೇಹ ಹಿರಿಯರನೆಂದನಾ ವಿದುರ ॥72॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗೆದ್ದ ಗರ್ವದ ಪರದೆಯನ್ನು ಪಕ್ಕಕ್ಕೆ ಸರಿಸು. ಶಕುನಿಯನ್ನು ಕಳಿಸಿಬಿಡು. ಸಮಸ್ತ ಬಾಂಧವರೊಡನೆ ಸೇರಿ ಪ್ರೀತಿಯ ಮಾತುಗಳಿಂದ ಸಮಾಧಾನ ಪಡಿಸು. ನೆಲವನ್ನು ಒಂದೇ ಛತ್ರದ ಅಡಿಯಲ್ಲಿ ನಡೆವಂತೆ ಏರ್ಪಡಿಸು. ಚೆನ್ನಾಗಿ ಬದುಕಬೇಕಾದರೆ ಇದೇ ದಾರಿ. ಇದರಿಂದಲೇ ನಿನ್ನ ವಂಶದ ಉಳಿವು. ನಿನಗೆ ಬೇಕಾದ ಹಿರಿಯರನ್ನು ಕೇಳಿ ನೋಡು.
ಪದಾರ್ಥ (ಕ.ಗ.ಪ)
ದಡ್ಡಿ-ಪರದೆ
ಮೂಲ ...{Loading}...
ಗೆಲಿದ ದರ್ಪದ ದಡ್ಡಿ ತೆಗೆ ಸೌ
ಬಲನ ಬೀಳ್ಕೊಡು ನಿಖಿಲ ಬಾಂಧವ
ಕುಲಸಹಿತಲೀ ಮಧುರ ವಚನದಲಿವರ ಸಂತೈಸು
ನೆಲನನೇಕಚ್ಛತ್ರದಲಿ ಹದ
ಗೊಳಿಸು ಬದುಕುವರಿದು ನಿಜಾನ್ವಯ
ದುಳಿವು ಬೆಸಗೊಳು ಬೇಹ ಹಿರಿಯರನೆಂದನಾ ವಿದುರ ॥72॥
೦೭೩ ಖೂಳನೆಮ್ಬೆನೆ ಸಕಲ ...{Loading}...
ಖೂಳನೆಂಬೆನೆ ಸಕಲ ಕಲೆಗಳ
ಬಾಳುಮನೆ ಗಡ ನಿನ್ನ ಬುದ್ಧಿ ವಿ
ಶಾಲಮತಿ ನೀನೆಂಬೆನೇ ಜಗದಜ್ಞರಧಿದೈವ
ಕೇಳಿದೊಡೆ ಮೇಣಹಿತ ಹಿತವನು
ಹೇಳುವುದು ಪಾಂಡಿತ್ಯ ನಿನ್ನನು
ಕೇಳಿದವರಾರೆಂದು ಜರೆದನು ಕೌರವರಾಯ ॥73॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಿನ್ನನ್ನು ಖೂಳನೆನ್ನೋಣವೇ, ನೀನು ಸಕಲ ವಿದ್ಯೆಗಳಿಗೂ ನೆಲೆ ಮನೆಯಲ್ಲವೇ? ವಿಶಾಲಮತಿ ಎಂದು ಹೇಳೋಣವೆಂದರೆ ಜಗತ್ತಿನ ಅಜ್ಞರಿಗೆಲ್ಲ ನೀನು ಅಧಿದೇವತೆ. ಕೇಳಿದರೆ ಮಾತ್ರ ಹಿತಾಹಿತಗಳನ್ನು ಹೇಳುವುದು ಪಾಂಡಿತ್ಯ. ಈಗ ನಿನ್ನನ್ನು ಕೇಳಿದವರಾರು ? ಎಂದು ದುರ್ಯೋಧನ ವಿದುರನನ್ನು ಜರೆದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಖೂಳನೆಂಬೆನೆ ಸಕಲ ಕಲೆಗಳ
ಬಾಳುಮನೆ ಗಡ ನಿನ್ನ ಬುದ್ಧಿ ವಿ
ಶಾಲಮತಿ ನೀನೆಂಬೆನೇ ಜಗದಜ್ಞರಧಿದೈವ
ಕೇಳಿದೊಡೆ ಮೇಣಹಿತ ಹಿತವನು
ಹೇಳುವುದು ಪಾಂಡಿತ್ಯ ನಿನ್ನನು
ಕೇಳಿದವರಾರೆಂದು ಜರೆದನು ಕೌರವರಾಯ ॥73॥
೦೭೪ ಹಿತವ ನೀನವರಿಗೆ ...{Loading}...
ಹಿತವ ನೀನವರಿಗೆ ಕುಟುಂಬ
ಸ್ಥಿತಿ ವಿಡಂಬಕೆ ನಾವು ಕುಂತೀ
ಸುತರೊಡನೆ ಸಮ್ಮೇಳವೆಮ್ಮೊಳು ವೈಮನಸ್ಯಗತಿ
ಕೃತಕ ಮಾರ್ಗದ ಮೋಡಿಯಲಿ ಪರಿ
ಚಿತನು ನೀನಲ್ಲಕ್ಷ ವಿಮಲ
ಕ್ರತು ವಿಧಾನವನಕ್ಷ ದೀಕ್ಷಿತರರಿವರಿದನೆಂದ ॥74॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀನು ಅವರಿಗೆ ಹಿತವಂತ. ನಮ್ಮ ಕುಟುಂಬದವನಾಗಿ ಅದನ್ನು ಅವಹೇಳನ ಮಾಡುವಂತೆ ಕುಂತೀಸುತರೊಡನೆ ನಿನ್ನ ಹೊಂದಾಣಿಕೆ, ನಮ್ಮಲ್ಲಿ ನಿನಗೆ ದ್ವೇಷ, ಕುಟಿಲ ಮಾರ್ಗದ ಕ್ರಮದಲ್ಲಿ ನೀನು ಪರಿಚಿತನಲ್ಲ. ಅಕ್ಷವೆಂಬ ಶ್ರೇಷ್ಠ ಯಜ್ಞ ವಿಧಾನವನ್ನು ಅಕ್ಷದೀಕ್ಷಿತರು ಮಾತ್ರ ಅರಿತಿರುವರು.
ಪದಾರ್ಥ (ಕ.ಗ.ಪ)
ಅಕ್ಷದೀಕ್ಷಿತರು - ಪಗಡೆಯ ಆಟದಲ್ಲಿ ನಿರತರಾದವರು, ಪರಿಣತರು.
ವಿಡಂಬ - ಅವಹೇಳನ
ಸಮ್ಮೇಳ - ಸ್ನೇಹ
ಕ್ರತು -ಯಜ್ಞ
ಮೂಲ ...{Loading}...
ಹಿತವ ನೀನವರಿಗೆ ಕುಟುಂಬ
ಸ್ಥಿತಿ ವಿಡಂಬಕೆ ನಾವು ಕುಂತೀ
ಸುತರೊಡನೆ ಸಮ್ಮೇಳವೆಮ್ಮೊಳು ವೈಮನಸ್ಯಗತಿ
ಕೃತಕ ಮಾರ್ಗದ ಮೋಡಿಯಲಿ ಪರಿ
ಚಿತನು ನೀನಲ್ಲಕ್ಷ ವಿಮಲ
ಕ್ರತು ವಿಧಾನವನಕ್ಷ ದೀಕ್ಷಿತರರಿವರಿದನೆಂದ ॥74॥
೦೭೫ ನೀ ಹಿತವನೈ ...{Loading}...
ನೀ ಹಿತವನೈ ಶಕುನಿ ರಾಜ
ದ್ರೋಹಿಯೈ ಹುಸಿಯಲ್ಲ ನೀನೇ
ಹೋಹುದೈ ನಿನಗಾವುದಭಿಮತವಾ ದಿಗಂತರಕೆ
ಐಹಿಕಾಮುಷ್ಮಿಕದ ವಿಭವೋ
ತ್ಸಾಹ ನಿಸ್ಪೃಹರಾವಲೇ ಸಂ
ದೇಹವೇ ನೀವರಿವಿರೆಂದನು ತೂಗಿ ತುದಿವೆರಳ ॥75॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನೀನು ಹಿತಕಾರಿಯಯ್ಯ ! ಶಕುನಿ ರಾಜದ್ರೋಹಿಯಯ್ಯ ! ಸುಳ್ಳಲ್ಲ. ನೀನೇ ಹೋಗಯ್ಯ ಯಾವ ದಿಗಂತರಕ್ಕೆ ಹೋಗಬೇಕೆನ್ನಿಸುತ್ತದೆಯೋ ಅಲ್ಲಿಗೆ ! ಈ ಲೋಕ ಮತ್ತು ಪರಲೋಕಗಳ ಐಶ್ವರ್ಯದ ಕುರಿತು ನಾವು ವಿರಾಗಿಗಳೆಂದು ಸಂದೇಹವೇ ? “ಎಂದು ದುರ್ಯೋಧನ ತನ್ನ ತುದಿ ಬೆರಳನ್ನು ತೂಗಿ ಟೀಕಿಸಿದ.
ಪದಾರ್ಥ (ಕ.ಗ.ಪ)
ಐಹಿಕ-ಇಹ ಲೋಕಕ್ಕೆ ಸಂಬಂಧಿಸಿದ,
ಆಮುಷ್ಮಿಕ-ಪರಲೋಕಕ್ಕೆ ಸಂಬಂಧಿಸಿದ
ಮೂಲ ...{Loading}...
ನೀ ಹಿತವನೈ ಶಕುನಿ ರಾಜ
ದ್ರೋಹಿಯೈ ಹುಸಿಯಲ್ಲ ನೀನೇ
ಹೋಹುದೈ ನಿನಗಾವುದಭಿಮತವಾ ದಿಗಂತರಕೆ
ಐಹಿಕಾಮುಷ್ಮಿಕದ ವಿಭವೋ
ತ್ಸಾಹ ನಿಸ್ಪೃಹರಾವಲೇ ಸಂ
ದೇಹವೇ ನೀವರಿವಿರೆಂದನು ತೂಗಿ ತುದಿವೆರಳ ॥75॥
೦೭೬ ಗುರುಗಳುಸುರರು ...{Loading}...
ಗುರುಗಳುಸುರರು ಭೀಷ್ಮರೆಮ್ಮನು
ಕೆರಳಿಚರು ಕೃಪ ನುಡಿಯನಯ್ಯನ
ಕೊರಳು ಕೊಂಕದು ಬಾಹ್ಲಿಕನ ಮನ ನೋಯದಿನ್ನೆಬರ
ಹಿರಿಯರಿವರೇನಜ್ಞರೇ ನೀ
ಪರಮತತ್ವಜ್ಞಾನಿಯೇ ಕಾ
ತರಿಸದಿರು ನೀನೆಂದು ಟಕ್ಕರಿಗಳೆದನಾ ಭೂಪ ॥76॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದುವರೆಗೂ ದ್ರೋಣರೂ ಮಾತನಾಡಲಿಲ್ಲ. ಭೀಷ್ಮರು ನಮ್ಮನ್ನು ಕೆರಳಿಸಲಿಲ್ಲ. ಕೃಪ ಮಾತನಾಡಲಿಲ್ಲ. ಅಯ್ಯನ ಕೊರಳು ಅಲುಗಲಿಲ್ಲ. ಬಾಹ್ಲಿಕನ ಮನಸ್ಸು ನೋಯಲಿಲ್ಲ. ಇವರೆಲ್ಲ ಹಿರಿಯರಲ್ಲವೇ ? ಇವರೇನು ತಿಳಿಯದವರೇ ? ನೀನು ಪರಮತತ್ತ್ವಜ್ಞಾನಿಯಾಗಿ ಬಿಟ್ಟೆ ! ನೀನು ಕಾತುರಗೊಳ್ಳಬೇಡ ಎಂದು ಹಳಿದು ಮಾತನಾಡಿದ.
ಪದಾರ್ಥ (ಕ.ಗ.ಪ)
ಟಕ್ಕರಿಗಳೆ-ಹಳಿ
ಮೂಲ ...{Loading}...
ಗುರುಗಳುಸುರರು ಭೀಷ್ಮರೆಮ್ಮನು
ಕೆರಳಿಚರು ಕೃಪ ನುಡಿಯನಯ್ಯನ
ಕೊರಳು ಕೊಂಕದು ಬಾಹ್ಲಿಕನ ಮನ ನೋಯದಿನ್ನೆಬರ
ಹಿರಿಯರಿವರೇನಜ್ಞರೇ ನೀ
ಪರಮತತ್ವಜ್ಞಾನಿಯೇ ಕಾ
ತರಿಸದಿರು ನೀನೆಂದು ಟಕ್ಕರಿಗಳೆದನಾ ಭೂಪ ॥76॥
೦೭೭ ಇವರ ಜನಪಾಧ್ವರವನಡಹಾ ...{Loading}...
ಇವರ ಜನಪಾಧ್ವರವನಡಹಾ
ಯ್ದವನನಾಗಳೆ ದೇವಕೀಸುತ
ಸವರಿದನು ನಮ್ಮೀ ವಿನೋದದ್ಯೂತ ಸಂಪದದ
ಸವನ ವಿಘ್ನವಿಕಾರಿಯನು ಪರಿ
ಭವಿಸುವವರನು ಕಾಣೆ ಶಿವಯೆಂ
ದವವನಿಪತಿ ನಿಜ ಹುಬ್ಬಿನಲಿ ಹೂಳಿದನು ಪರಿಚರರ ॥77॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವರ ರಾಜಸೂಯಯಾಗಕ್ಕೆ ಅಡ್ಡ ಬಂದವನನ್ನು ಆಗಲೇ ದೇವಕೀಸುತ ಸವರಿಹಾಕಿಬಿಟ್ಟ. ನಮ್ಮ ಈ ವಿನೋದದ್ಯೂತ ಸಂಪದದ ಯಜ್ಞಕ್ಕೆ ಬಂದ ಈ ವಿಘ್ನಕಾರಿಯನ್ನು ಪರಿಭವಿಸುವವರನ್ನು ನೋಡಲಿಲ್ಲ, ಶಿವಾ ! ಎಂದು ತನ್ನ ಹುಬ್ಬಿನಿಂದಲೇ ಸೇವಕರನ್ನು ಹೂಳಿಬಿಟ್ಟ !(?)
ಪದಾರ್ಥ (ಕ.ಗ.ಪ)
ಜನಪಾಧ್ವರ - ರಾಜಸೂಯ ಯಾಗ
ಸವನ - ಯಾಗ
ಮೂಲ ...{Loading}...
ಇವರ ಜನಪಾಧ್ವರವನಡಹಾ
ಯ್ದವನನಾಗಳೆ ದೇವಕೀಸುತ
ಸವರಿದನು ನಮ್ಮೀ ವಿನೋದದ್ಯೂತ ಸಂಪದದ
ಸವನ ವಿಘ್ನವಿಕಾರಿಯನು ಪರಿ
ಭವಿಸುವವರನು ಕಾಣೆ ಶಿವಯೆಂ
ದವವನಿಪತಿ ನಿಜ ಹುಬ್ಬಿನಲಿ ಹೂಳಿದನು ಪರಿಚರರ ॥77॥
೦೭೮ ಮಣಿಯೆ ನೀನಿಲ್ಲೀಯನರ್ಥವ ...{Loading}...
ಮಣಿಯೆ ನೀನಿಲ್ಲೀಯನರ್ಥವ
ಕುಣಿಕೆಗೊಳಿಸಿದ ನೀ ಸಹಿತ ನಿ
ನ್ನೆಣೆಗಳಹ ಸೈಂಧವನನೀ ರಾಧೇಯ ಶಕುನಿಗಳ
ರಣದೊಳಗೆ ಭೀಮಾರ್ಜುನರ ಮಾ
ರ್ಗಣದ ಧಾರೆಗೆ ವೀರನಾರಾ
ಯಣನೆ ಸೇರಿಸಿಕೊಡುವನರಿದಿರುಯೆಂದನಾ ವಿದುರ ॥78॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ನೀನು ಬಗ್ಗುವುದಿಲ್ಲ. ಇಲ್ಲಿ ಈ ಅನರ್ಥಕ್ಕೆ ಕಾರಣನಾದ ನಿನ್ನ ಸಹಿತ ನಿನ್ನ ಗೆಳೆಯರಾದ ಸೈಂಧವ, ಕರ್ಣ ಶಕುನಿಗಳೊಡಗೂಡಿ ನಿನ್ನನ್ನು ಮುಂದೆ ಯುದ್ಧದಲ್ಲಿ ಭೀಮಾರ್ಜುನರ ಹರಿತವಾದ ಬಾಣಕ್ಕೆ ವೀರನಾರಾಯಣನು ಗುರಿಯಾಗಿಸುವನು ! ತಿಳಿದಿರು.” ಎಂದು ವಿದುರ ಹೇಳಿದ.
ಪದಾರ್ಥ (ಕ.ಗ.ಪ)
ಮಾರ್ಗಣ-ಬಾಣ
ಕುಣಿಕೆಗೊಳಿಸು - ಅಣಿಗೊಳಿಸು, ಕಾರಣನಾಗು
ಮೂಲ ...{Loading}...
ಮಣಿಯೆ ನೀನಿಲ್ಲೀಯನರ್ಥವ
ಕುಣಿಕೆಗೊಳಿಸಿದ ನೀ ಸಹಿತ ನಿ
ನ್ನೆಣೆಗಳಹ ಸೈಂಧವನನೀ ರಾಧೇಯ ಶಕುನಿಗಳ
ರಣದೊಳಗೆ ಭೀಮಾರ್ಜುನರ ಮಾ
ರ್ಗಣದ ಧಾರೆಗೆ ವೀರನಾರಾ
ಯಣನೆ ಸೇರಿಸಿಕೊಡುವನರಿದಿರುಯೆಂದನಾ ವಿದುರ ॥78॥