೧೦

೦೦೦ ಸೂಚನೆ ...{Loading}...

ಸೂಚನೆ : ಅಗ್ರಪೂಜಾವ್ಯಾಜಮುಖದಲಿ
ವಿಗ್ರಹದ ಶಿಶುಪಾಲಶಿರ ಗಗ
ನಾಗ್ರದಲಿ ಕುಣಿದಾಡಲೆಸೆದನು ವೀರ ನಾರಯಣ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ಸಹದೇವನ ವಚೋಗ್ರ
ವ್ಯಾಳ ವಿಷವೇಡೆಯಲಿ ಸಿಲುಕಿತು ಮನ ಮಹೀಶ್ವರರ
ಸೂಳು ನೆನಹಿನ ಸುಳಿಮನದ ಸಮ
ಪಾಳಿ ಕೋಪದಲಳಿದ ಮೌನದ
ಮೇಲು ಬುದ್ಧಿಯ ಜೋಡಿ ಬೇರೊಂದಾಯ್ತು ಭಾವದಲಿ ॥1॥

೦೦೨ ಕಿವಿವಳೆಯ ಮೋರೆಗಳ ...{Loading}...

ಕಿವಿವಳೆಯ ಮೋರೆಗಳ ಮುಷ್ಟಿಯ
ಬವರಿಗಳ ಕಡೆಗಣ್ಣ ಸನ್ನೆಯ
ಸವಡಿಗೈಗಳ ನಂಬುಗೆಯ ಮನಮನದ ಬೆಸುಗೆಗಳ
ಅವಸರದ ಮೈತ್ರಿಗಳ ಮಂತ್ರಿ
ಪ್ರವರ ವಚನೋಪೇಕ್ಷೆಗಳ ರಣ
ದವಕದಲಿ ಕಳವಳಿಸುತಿರ್ದುದು ಕೂಡೆ ನೃಪಕಟಕ ॥2॥

೦೦೩ ಪರಿಣತರ ನುಡಿಗಳನು ...{Loading}...

ಪರಿಣತರ ನುಡಿಗಳನು ಕಿವಿಯೋ
ಕರಿಸಿದವು ದುರುದುಂಬಿಗಳ ಬಾ
ಹಿರರ ನುಡಿಗಳನಡಿಗಡಿಗೆ ಕುಡಿಕುಡಿದು ತೇಗಿದವು
ಕರೆಸಿದರು ಖೂಳರನು ನೀತಿಯ
ಗರುವರನು ನೂಕಿದರು ರಾಯನ
ಪರಮ ಯಾಗವವನಳಿಯಲನುವಾಯಿತ್ತು ನೃಪಕಟಕ ॥3॥

೦೦೪ ನೀವು ಪರಿಯನ್ತೇಕೆ ...{Loading}...

ನೀವು ಪರಿಯಂತೇಕೆ ನಿಮ್ಮವ
ರಾವಲೇ ನಿಮ್ಮಾಳು ಕುದುರೆಗೆ
ನಾವಲೇ ದಳಪತಿಗಳಿವದಿರ ಯಜ್ಞಮಂಟಪವ
ಆವ ಬೇಗದಲುರುಹುವೆನು ಚಿ
ತ್ತಾವಧಾನವ ಮಾಡಿಯೆಂದು ನೃ
ಪಾವಳಿಯ ಶಿಶುಪಾಲ ಸಂತೈಸಿದನು ಸಾಮದಲಿ ॥4॥

೦೦೫ ಧರಣಿಪರ ಸನ್ನೆಯಲಿ ...{Loading}...

ಧರಣಿಪರ ಸನ್ನೆಯಲಿ ಬಲ ಸಂ
ವರಿಸಿತಾಚೆಯಲಿತ್ತ ಸಾತ್ಯಕಿ
ನರ ವೃಕೋದರ ನಕುಲ ಧೃಷ್ಟದ್ಯುಮ್ನ
ಮೊದಲಾದ ಕರಿತುರಗ ರಥಪತ್ತಿಗಳ ಸಂ
ವರಣೆ ತಳಿತುದ ಕಂಡು ಮೂಗಿನ
ಬೆರಳ ಬೆರಗಿನಲೊಲೆದು ಭೀಷ್ಮಂಗೆಂದನಾ ಭೂಪ ॥5॥

೦೦೬ ಈಸು ಪೌರುಷ ...{Loading}...

ಈಸು ಪೌರುಷ ದೈವ ಘಟನೆಯೊ
ಳೀಸು ಪರಿಯಂತಾಯ್ತು ಯಜ್ಞದ
ಮೀಸಲಳಿಯದೆ ನಡೆದುದಿನ್ನೆಗ ನಿಮ್ಮ ಕರುಣದಲಿ
ಈ ಸಮಸ್ತ ನೃಪಾಲಜನ ವಾ
ರಾಶಿ ಮೇರೆಯನೊದೆವುತಿದೆ ನಿಮ
ಗೇಸು ಭಾರವಿದೆಂದು ಬಿನ್ನವಿಸಿದನು ಭೀಷ್ಮಂಗೆ ॥6॥

೦೦೭ ಕಾದುವರೆ ನಮ್ಮುತ್ಸವಕೆ ...{Loading}...

ಕಾದುವರೆ ನಮ್ಮುತ್ಸವಕೆ ನೆರ
ವಾದವರು ಸೈರಿಸುವರಗ್ಗದ
ಯಾದವೇಂದ್ರನ ನಿಂದೆ ಮೇಲಧ್ವರ ವಿಸಂಘಟನ
ಈ ದುರಂತದ ಚಿಂತೆಯಲಿ ಬೇ
ಳಾದುದೆನ್ನಯ ಚಿತ್ತವದ್ದೆನು
ಖೇದ ಪಂಕದೊಳೆನ್ನನುದ್ಧರಿಸೆಂದನಾ ಭೂಪ ॥7॥

೦೦೮ ಅಞ್ಜದಿರು ಭಯ ...{Loading}...

ಅಂಜದಿರು ಭಯ ಬೇಡ ನರರಿಗೆ
ನಂಜು ಪಥ್ಯವೆ ಗಿಳಿಯ ಮರಿಗಳು
ಮಂಜರನ ಮೇಲ್ವಾಯ್ದು ಬದುಕುವವೇ ಮಹೀಪತಿಯೆ
ಮಂಜು ಮಧ್ಯಾಹ್ನದ ದಿನೇಶನ
ನೆಂಜಲಿಸುವುದೆ ಕುಪಿತ ಸಿಂಹವ
ನಂಜಿಸುವವೇ ನಾಯ್ಗಳೆಂದನು ಭೂಪತಿಗೆ ಭೀಷ್ಮ ॥8॥

೦೦೯ ಬಗುಳುವಿವದಿರು ಹರಿಯ ...{Loading}...

ಬಗುಳುವಿವದಿರು ಹರಿಯ ಬಡಿ ಹೋ
ರಿಗಳಲಾ ಜಗವರಿಯದೇ ಜ
ಳ್ಳುಗಳ ಜೋಡಿಯ ಜಂಜಡಕೆ ನೀ ಜರುಗುವೈ ಭೂಪ
ಉಗಿವನಿನಿಬರ ಜೀವವನು ಜೊ
ತ್ತಗೆಯಲೀ ಶಿಶುಪಾಲ ನಾಯನು
ತೆಗೆದು ಕಟ್ಟುವನಸುರಮರ್ದನನೆಂದನಾ ಭೀಷ್ಮ ॥9॥

೦೧೦ ಜಗವ ಹೂಡುವ ...{Loading}...

ಜಗವ ಹೂಡುವ ಹೊರೆವ ಬಲುಗೈ
ಯಗಧರಂಗೀ ನೃಪರ ಕುರಿವಿಂ
ಡುಗಳ ಕುಮ್ಮರಿಗಡಿತಕಾವುದು ಬೇಕು ಭುಜಸತ್ವ
ಬಗೆವುದೇ ಬಲುಗಡಲು ಮಂಜಿನ
ಮುಗಿಲವಳೆಯನು ಚೈದ್ಯ ಭೂಪನ
ಜಗದ ಭಂಡನನೀ ಜನಾರ್ದನ ಗಣಿಸುವನೆಯೆಂದ ॥10॥

೦೧೧ ಎಲೆ ನಪುಂಸಕ ...{Loading}...

ಎಲೆ ನಪುಂಸಕ ಭೀಷ್ಮ ಸುಡು ಬೈ
ಗುಳಿನ ಭಂಡನು ನೀನಲಾ ಗೋ
ಕುಲದ ಗರ್ವನ ಗುಣವ ಕಂಡಿತುಗೊಂಡೆ ಬೇಸರದೆ
ಹಳಿವಿನಲಿ ಹೆಮ್ಮೆಯನು ಕುಂದಿನ
ಕುಲದೊಳಗ್ಗಳಿಕೆಯನು ತಮದಲಿ
ಬೆಳಗ ಬಣ್ಣಿಸುತಿಹೆ ನಿರಂತರವೆಂದನಾ ಚೈದ್ಯ ॥11॥

೦೧೨ ಅವಗುಣದಲುದ್ಭಾವಿಸುವೆ ಗುಣ ...{Loading}...

ಅವಗುಣದಲುದ್ಭಾವಿಸುವೆ ಗುಣ
ನಿವಹವನು ರಾಜಾಧಮರು ಯಾ
ದವರು ಪೂಜಾರುಹರೆ ಸುಡು ಸುಡು ನಿನ್ನ ನಾಲಗೆಯ
ಸವಿನುಡಿಯ ದುವ್ರ್ಯಸನಿ ತೊಂಡಿನ
ತವರುಮನೆ ಬಾಹಿರರಿಗಾಶ್ರಯ
ಭವನ ಖಳರಧಿದೈವ ಭೀಷ್ಮನ ಕೊಲುವರಿಲ್ಲೆಂದ ॥12॥

೦೧೩ ಇವನು ಗಡ ...{Loading}...

ಇವನು ಗಡ ಚಿಕ್ಕಂದು ಮೊಲೆಗೊ
ಟ್ಟವಳ ಹಿಂಡಿದ ಗಂಡ ಬಂಡಿಯ
ಜವಳಿಗಾಲಲಿ ಮುರಿದನೈ ಮಾಯಾ ಸಮರ್ಥನಲೆ
ಸವಡಿ ಮರ ನೆಗ್ಗಿದವು ಗಡ ಮೈ
ಯವುಚಿದರೆ ಬಲುಗತ್ತೆ ಗೂಳಿಯ
ನಿವ ವಿಭಾಡಿಸಿದನೆ ಮಹಾದ್ಭುತವೆಂದನಾ ಚೈದ್ಯ ॥13॥

೦೧೪ ಹಕ್ಕಿ ಹರಿಣಿಯ ...{Loading}...

ಹಕ್ಕಿ ಹರಿಣಿಯ ತರಿದ ಗಡ ಕೈ
ಯಿಕ್ಕಿದರೆ ಕಡುಗುದುರೆಯನು ನೆಲ
ಕಿಕ್ಕಿದನೆ ನೆರೆ ಹೇಳು ಹೇಳಾ ಕೃಷ್ಣನಾಳ್ತನವ
ಹೊಕ್ಕು ಹೆಬ್ಬಾವಿನ ಬಸುರ ಸೀ
ಳಿಕ್ಕಿದನೆ ಯಾದವನ ಪೌರುಷ
ವಕ್ಕಜವಲಾ ಭೀಷ್ಮ ತೂಪಿರಿಯೆಂದನಾ ಚೈದ್ಯ ॥14॥

೦೧೫ ಗಾಳಿಯನು ಘಲ್ಲಿಸಿದ ...{Loading}...

ಗಾಳಿಯನು ಘಲ್ಲಿಸಿದ ಕರುವಿನ
ಕಾಲ ಹಿಡಿದೊಗೆದನು ಗಡುರಗನ
ಮೇಲೆ ಕುಣಿದಾಡಿದನು ಗಡ ಹಾವಡಿಗ ವಿದ್ಯೆಯಲಿ
ಖೂಳ ಗೋವರ ಹಳ್ಳಿಯಲಿ ಕ
ಟ್ಟಾಳಲಾ ಬಳಿಕೇನು ಪೃಥ್ವೀ
ಪಾಲರೀತಗೆ ಸರಿಯೆ ದಿಟ ದಿಟವೆಂದನಾ ಚೈದ್ಯ ॥15॥

೦೧೬ ಏಳು ದಿನ ...{Loading}...

ಏಳು ದಿನ ಪರಿಯಂತ ಮೊರಡಿಯ
ಮೇಲುಗೊಡೆಯನು ಹಿಡಿದು ಬಲು ಮಳೆ
ಗಾಲವನು ಮಾಣಿಸಿದ ಗಡ ಹರಹರ ವಿಶೇಷವಲ
ಹೇಳು ಹೇಳಿಂದ್ರಂಗೆ ಮಾಡಿದ
ಕೂಳ ರಾಶಿಯನೊಬ್ಬನೇ ಕೈ
ಮೇಳವಿಸಿದನೇ ಕಂದನಾಣೆ ವಿಚಿತ್ರವಾಯ್ತೆಂದ ॥16॥

೦೧೭ ಅಸಗನನು ಕೆಡೆ ...{Loading}...

ಅಸಗನನು ಕೆಡೆ ತಿವಿದು ಕಂಸನ
ವಸನವೆಲ್ಲವ ಸೆಳೆದ ಗಡ ಮಾ
ಣಿಸಿದನೈ ದಿಟ ಘಟ್ಟಿವಳ್ತಿಯ ಮೈಯ ಮೂಹೊರಡ
ಮಸಗಿ ಬೀಸುವ ಕಂಸನಾನೆಯ
ನಸು ಬಡಿದ ಗಡ ಮಲ್ಲರನು ಮ
ರ್ದಿಸಿದನೇ ಡೊಳ್ಳಾಸದಲಿ ಡಾವರಿಗನಹನೆಂದ ॥17॥

೦೧೮ ಆದರಿವನನು ತುತಿಸುವೊಡೆ ...{Loading}...

ಆದರಿವನನು ತುತಿಸುವೊಡೆ ಮೇ
ಲಾದ ಕಷ್ಟವನೇನ ಹೇಳುವೆ
ನೀ ದುರಾತ್ಮಕ ಸಾಕಿದೊಡೆಯನನಿರಿದ ಸಬಳವಲೆ
ಸೋದರಿಯಲಾ ಕೃಷ್ಣನವ್ವೆ ವಿ
ವಾದವೇ ಸಾಕಿದನಲಾ ಕೈ
ಗಾದನೇ ಕಂಸಂಗೆ ಮುನಿವುದಿದಾವ ಘನವೆಂದ ॥18॥

೦೧೯ ಆದರಿಸಿ ಬಣ್ಣಿಸಿದೆ ...{Loading}...

ಆದರಿಸಿ ಬಣ್ಣಿಸಿದೆ ನಾಚದೆ
ಯಾದವನ ಕೌಳಿಕ ಪರಾಕ್ರಮ
ವಾದಿಯಾದ ಸಮಸ್ತ ಗುಣ ವಿಸ್ತಾರ ವೈಭವವ
ಆದರಾ ಗೋವಳರ ಹೆಂಡಿರ
ಹಾದರದ ಹೆಕ್ಕಳವ ಬಣ್ಣಿಸ
ದಾದೆ ನಿನಗೇಕಕಟ ನಾಚಿಕೆಯೆಂದನಾ ಚೈದ್ಯ ॥19॥

೦೨೦ ಓಡಿ ಕೊಲಿಸಿದ ...{Loading}...

ಓಡಿ ಕೊಲಿಸಿದ ಕಾಲಯವನನು
ಮೂಡಿದವೆ ಹುಲು ಕಲುಗಳಕಟಾ
ವೋಡುಕುಳಿ ಹೋದಲ್ಲಿ ಮಗಧನ ರಾಜಕಾರ್ಯದಲಿ
ಆಡಲರಿಯೆ ವಿಜಾತಿರತ್ನದ
ಖೋಡಿಗಳ ಹಳಿವಾತನೇ ಹರಿ
ತೋಡಿ ಬಡಿಸುವೆ ಕಿವಿಗರೋಚಕವಾಯ್ತು ತೆಗೆಯೆಂದ ॥20॥

೦೨೧ ಕಪಟದಲಿ ಭೀಮಾರ್ಜುನರು ...{Loading}...

ಕಪಟದಲಿ ಭೀಮಾರ್ಜುನರು ಸಹಿ
ತುಪಚಿತ ದ್ವಿಜವೇಷದಲಿ ನಿ
ಷ್ಕಪಟ ಮಗಧನ ಮನೆಯನದ್ವಾರದಲಿ ಹೊಕ್ಕರಲ
ಕೃಪಣರಿವದಿರು ವಿಪ್ರವೇಷದ
ಲಪಸದರು ಕಾದಿದರು ಭೀಷ್ಮಗೆ
ಜಪವಲಾ ಕಂಸಾರಿ ಮಾಡಿದ ಕಷ್ಟ ಕೃತಿಯೆಂದ ॥21॥

೦೨೨ ಬೆರವನಗ್ಗದ ಮಾಗಧೇನ್ದ್ರನ ...{Loading}...

ಬೆರವನಗ್ಗದ ಮಾಗಧೇಂದ್ರನ
ಮುರಿದ ಮುರುಕಕೆ ಭೀಮನಾತನ
ಸೆರೆಯ ಮನೆಯಲಿ ಸಿಕ್ಕಿದವನೀಪಾಲ ಪಂತಿಗಳ
ಸೆರೆಯನಿವ ಬಿಡಿಸಿದನು ಗಡ ಬೊ
ಬ್ಬಿರಿವ ಪೌರುಷವೇಕೆ ಕಡೆಯಲಿ
ಕರುಬುವವರಾವೈಸಲೇ ನಿಮಗೆಂದನಾ ಚೈದ್ಯ ॥22॥

೦೨೩ ಕೇಳಿ ಕಿಡಿಕಿಡಿಗೆದರಿ ...{Loading}...

ಕೇಳಿ ಕಿಡಿಕಿಡಿಗೆದರಿ ತನು ರೋ
ಮಾಳಿ ತಳಿದುದು ರೋಷವಹ್ನಿ
ಜ್ವಾಲೆ ಝಳಪಿಸೆ ಜಡಿದವರುಣಚ್ಛವಿಯಲಕ್ಷಿಗಳು
ಸೂಳುರಿಯ ನಿಡುಸುಯ್ಲು ಕಬ್ಬೊಗೆ
ಜಾಳಿಗೆಯಲೇಕಾವಳಿಯ ಮು
ಕ್ತಾಳಿ ಕಂದಿತು ಖತಿಯ ಮೊನೆಯಲಿ ಮಸಗಿದನು ಭೀಮ ॥23॥

೦೨೪ ಸೆರಗ ಸಂವರಿಸಿದನು ...{Loading}...

ಸೆರಗ ಸಂವರಿಸಿದನು ಮಕುಟವ
ನುರುಗದಂತಿರೆ ಮುರುಹಿ ಸಚಿವಂ
ಗರುಹಿದನು ಸನ್ನೆಯಲಿ ಸಮರಕೆ ಚಾಪ ಮಾರ್ಗಣವ
ಹೊರಗೆ ಸಂವರಿಸಿರಲಿ ದಳ ಕೈ
ಮರೆಯ ಬೇಡ ಸುನೀತನನು ನಾ
ವ್ತರುಬಿ ನಿಂದಾಕ್ಷಣದಲೊದಗುವುದೆಂದು ಸೂಚಿಸಿದ ॥24॥

೦೨೫ ಪವನ ತನಯನ ...{Loading}...

ಪವನ ತನಯನ ಖತಿಯ ಝಾಡಿಯ
ಹವಣ ಕಂಡರು ಮಸಗಿದರು ಯಾ
ದವರ ಪಡೆಯಲಿ ಸಾಂಬ ಸಾತ್ಯಕಿ ಕಾಮ ಕೃತವರ್ಮ
ತವ ತವಗೆ ಪಾಂಚಾಲ ಕೇಕಯ
ನಿವಹ ಪಾಂಡವ ಸುತರು ಮೊದಲಾ
ದವಗಡೆಯರನುವಾಗೆ ಗಜಬಜವಾಯ್ತು ನಿಮಿಷದಲಿ ॥25॥

೦೨೬ ಸೆಳೆದಡಾಯುಧವುತ್ತರೀಯವ ...{Loading}...

ಸೆಳೆದಡಾಯುಧವುತ್ತರೀಯವ
ನಿಳುಹಿ ಮುಂಗೈಯಲಿ ವೃಕೋದರ
ಮೊಳಗುವನುವನು ಕಂಡು ಧಿಮ್ಮನೆ ಭೀಷ್ಮನಡಹಾಯ್ದು
ಸೆಳೆದು ಕೊಂಡನು ಖಡುಗವನು ಭುಜ
ವಳಯದಿಂದವುಚಿದನು ತೋಟಿಯ
ತೊಳಸುಗರ ಹೊಯ್ ಹೊಯ್ಯೆನುತ ಗರ್ಜಿಸಿದನಾ ಭೀಷ್ಮ ॥26॥

೦೨೭ ನೆರಹಿದಿರಿ ಚತುರಾಬ್ಧಿ ...{Loading}...

ನೆರಹಿದಿರಿ ಚತುರಾಬ್ಧಿ ವಳೆಯದ
ಧರಣಿಪಾಲ ಸಮುದ್ರವನು ಕಾ
ಹುರುವ ಮಾಡಿದರಕಟ ಕೆಡದೇ ರಾಜಸೂಯ ಮಖ
ಧರಧುರದ ದುವ್ರ್ಯಸನಿಗಳನಿ
ಟ್ಟೊರಸಿ ತೆಗೆ ನಿನ್ನವರನೆನುತು
ಬ್ಬರವ ಮಾಣಿಸಿ ಹೂಣೆಗರ ಹೊಯ್ಸಿದನು ಕಲಿ ಭೀಷ್ಮ ॥27॥

೦೨೮ ಬಿಡುಬಿಡೆಲೆ ಗಾಙ್ಗೇಯ ...{Loading}...

ಬಿಡುಬಿಡೆಲೆ ಗಾಂಗೇಯ ಭೀಮನ
ಕಡಿದು ಪೂರ್ಣಾಹುತಿಯನಗ್ನಿಗೆ
ಬಡಿಸಿ ಕೊಡುವೆನು ಸ್ವಾಮಿದ್ರೋಹಿಯ ಕರುಳ ದಂಡೆಗಳ
ಮುಡಿಸುವೆನು ಜಯಸಿರಿಗೆ ನೋಡೆ
ನ್ನೊಡನೆ ಮೇಳವೆ ದಕ್ಷಯಜ್ಞದ
ಮೃಡನ ಮರೆಸುವೆನೆನುತ ಮಿಗೆ ಬೊಬ್ಬಿರಿದನಾ ಚೈದ್ಯ ॥28॥

೦೨೯ ಬಿಡು ಬಿಡಕಟಾ ...{Loading}...

ಬಿಡು ಬಿಡಕಟಾ ಭೀಷ್ಮ ದರ್ಪದಿ
ಕಡುಜರೆದ ಕಳವಳದ ಕುನ್ನಿಗೆ
ಕುಡಿಸುವೆನು ದಿವ್ಯಾಸ್ತ್ರವಿಶಿಖ ವಿಶೇಷದೌಷಧಿಯ
ತಡೆದು ತನ್ನನು ರಾಜಕಾರ್ಯವ
ಕೆಡೆಸಿದೆಯಲಾ ದಕ್ಷಯಜ್ಞದ
ಮೃಡನ ಮುರುಕವ ಕಾಬೆನೆನುತೊಡೆಮುರುಚಿದನು ಭೀಮ ॥29॥

೦೩೦ ಮತ್ತೆ ಹಿಡಿದನು ...{Loading}...

ಮತ್ತೆ ಹಿಡಿದನು ಪವನಜನ ಬಾ
ಗೊತ್ತಿದನು ಮರುಳೇ ಸುರೌಘದ
ತುತ್ತು ಗಂಟಲಲಿಳಿವುದೇ ಗಜಬಜವ ಮಾಡಿದರೆ
ತೆತ್ತಿಗನು ಹರಿ ಯಜ್ಞರಿಪುಗಳ
ಮೃತ್ಯುವರಿಯಾ ನೀನು ಮೀರುವ
ದುತ್ತಮಿಕೆಯಲ್ಲೆನುತ ಮಿಗೆ ತಿಳುಹಿದನು ಗಾಂಗೇಯ ॥30॥

೦೩೧ ಇವನ ಕೊಲುವೆನು ...{Loading}...

ಇವನ ಕೊಲುವೆನು ಮಿಕ್ಕ ಭೂಪರ
ನಿವಹವನು ಮನ್ನಿಸುವೆನೆನೆ ನೀ
ನಿವನ ಕೊಲುವುದಸಾಧ್ಯವೀತನ ನಿಜವನರಿಯೆಯಲ
ಇವ ಹಿರಣ್ಯಾಕ್ಷಕ ಕಣಾ ಮರು
ಭವದೊಳಗೆ ದಶವದನನಿವ ಸಂ
ಭವಿಸಿದನು ಶಿಶುಪಾಲವೆಸರಲಿ ಭೀಮ ಕೇಳ್ ಎಂದ ॥31॥

೦೩೨ ಜನಿಸಿದಾಗಳೆ ಭಾಳದಲಿ ...{Loading}...

ಜನಿಸಿದಾಗಳೆ ಭಾಳದಲಿ ಲೋ
ಚನ ಚತುರ್ಭುಜನಾದನದ್ಭುತ
ನಿನದದಲಿ ನೆಲ ಬಿರಿಯಲೊದರಿದನಂದು ಬಾಲ್ಯದಲಿ
ತನತನಗೆ ಜನ ಬೆದರಿತೀತನ
ಮನೆಗೆ ನಾರದ ಬಂದನೀತನ
ಜನನಿ ಬಿನ್ನಹ ಮಾಡಿದಳು ಶಿಶುಪಾಲ ಸಂಗತಿಯ ॥32॥

೦೩೩ ಆತನೆನ್ದನು ತಾಯೆ ...{Loading}...

ಆತನೆಂದನು ತಾಯೆ ಶಿಶು ವಿ
ಖ್ಯಾತನಹ ನೀನಾರ ಹಸ್ತದೊ
ಳೀತನನು ಕೊಟ್ಟಾಗಲಡಗುವವಕ್ಷಿ ಭುಜಯುಗಳ
ಆತನೀತನ ಮೃತ್ಯುವಿದು ಸಂ
ಭೂತ ನಿಶ್ಚಯವೆಂದು ಶಿಶುವಿನ
ಮಾತೆಯನು ಸಂತೈಸಿ ನಾರದನಡರಿದನು ನಭವ ॥33॥

೦೩೪ ಇವನ ಕಾಣಲು ...{Loading}...

ಇವನ ಕಾಣಲು ಬಂದರವನಿಪ
ರವರವರ ಕೈಗಳಲಿ ತಾಯ್ತಂ
ದಿವನನಿತ್ತಳು ಮಾಣವಿವನಧಿಕಾಕ್ಷಿ ಬಾಹುಗಳು
ಇವನ ತಾಯ್ ತಮ್ಮತ್ತೆಯೆಂದು
ತ್ಸವದೊಳೀ ಮುರವೈರಿ ಬರಲಂ
ದಿವನ ತಂದಿವನವ್ವೆ ಕೊಟ್ಟಳು ಹರಿಯ ಹಸ್ತದಲಿ ॥34॥

೦೩೫ ಆಗಳಿವನಧಿಕಾಕ್ಷಿ ಬಾಹುವು ...{Loading}...

ಆಗಳಿವನಧಿಕಾಕ್ಷಿ ಬಾಹುವು
ನೀಗಿದೊಡನಿವನವ್ವೆ ಕಂಡು
ಬ್ಬೇಗದಲಿ ಕಮಲಾಕ್ಷನಂಘ್ರಿಯಲೆರಗಿ ಕೈ ಮುಗಿದು
ಮೇಗರೆಯ ಮಾತಲ್ಲ ಬಾಲಕ
ನಾಗುಹೋಗಿನ ಕೊರತೆ ನಿನ್ನನು
ತಾಗುವುದು ನೀ ಸೈರಿಸೆಂದಭಯವನು ಬೇಡಿದಳು ॥35॥

೦೩೬ ಸೈರಿಸುವೆನಪರಾಧ ಶತವ ...{Loading}...

ಸೈರಿಸುವೆನಪರಾಧ ಶತವ ಕು
ಮಾರಕನ ತಾ ಕೊಲ್ಲೆನೆಂದೀ
ಶೌರಿ ಭಾಷೆಯ ಮಾಡಿ ಹಿಂಗಿದನಿವನ ತಾಯೊಡನೆ
ಆರಿವನ ಮರಣಕ್ಕೆ ಮೊದಲು ಮು
ರಾರಿಯೋ ನೀನೋ ವಿಚಾರಿಸು
ವೀರ ಮಾರುತಿಯೆನಲು ಕೇಳಿದನಂದು ಶಿಶುಪಾಲ ॥36॥

೦೩೭ ಎಲವೊ ಗೋಪಕುಮಾರನೆನ್ನನು ...{Loading}...

ಎಲವೊ ಗೋಪಕುಮಾರನೆನ್ನನು
ಕೊಲುವನೇ ತಾನಿವನ ಕೈಯ್ಯಿಂ
ದಳಿವವನೆ ಶಿವ ಶಿವ ವಿಕಾರಿಯನೇನ ಮಾಡುವೆನು
ಗಳಹ ಭೀಷ್ಮ ವೃಕೋದರನ ಮೈ
ವಳಿಯ ಭಟನೋ ಮೇಣು ನೀ ಗೋ
ವಳರ ಹಳ್ಳಿಯ ಭಟ್ಟನೋ ಹೇಳೆಂದನಾ ಚೈದ್ಯ ॥37॥

೦೩೮ ಈ ಕುರುಕ್ಷಿತಿಪಾಲರಲಿ ...{Loading}...

ಈ ಕುರುಕ್ಷಿತಿಪಾಲರಲಿ ನೀ
ನಾಕೆವಾಳನು ಗಡ ವಯಃಪರಿ
ಪಾಕವುಳ್ಳವನೀಸು ಕಾಲದಲೋದಿದರಿತವಿದೆ
ಕಾಕನುರೆ ಕೊಂಡಾಡಿ ಗೊಲ್ಲರ
ಗೋಕುಲದ ಗೋಪಪ್ರಸಂಗ
ವ್ಯಾಕರಣ ಪಾಂಡಿತ್ಯ ಮೆರೆದುದು ಭೀಷ್ಮ ನಿನಗೆಂದ ॥38॥

೦೩೯ ಇದು ಮಹಾ ...{Loading}...

ಇದು ಮಹಾ ಮಖವಿಲ್ಲಿ ಪೂಜ್ಯನು
ಯದುಗಳರಸನು ಭಟ್ಟನಿಲ್ಲಿಗೆ
ನದಿಯ ಮಗನಿಲ್ಲಿಗೆ ಸದಸ್ಯರು ನಾರದಾದಿಗಳು
ಹುದಿದ ಮರುಭೂಮಿಯಲಿ ಮಾನ್ಯನು
ಖದಿರನಿಲ್ಲಿಗೆ ಗೂಗೆ ಕೋಗಿಲೆ
ಮುದಿನರಿಗಳಿಲ್ಲಿಗೆ ಸಭಾಸದರೆಂದನಾ ಚೈದ್ಯ ॥39॥

೦೪೦ ನೀನಲಾ ಧರ್ಮಜ್ಞನನ್ದಾ ...{Loading}...

ನೀನಲಾ ಧರ್ಮಜ್ಞನಂದಾ
ಮಾನಿನಿಯರ ವಿವಾಹದಲಿ ನೀ
ನೇನ ಮಾಡಿದೆ ಬೇಸರಿಸಿ ಬಳಲಿಸಿದೆ ಬಾಲಕಿಯ
ಏನ ಹೇಳುವೆನೊಂದು ಹಂಸನು
ಮಾನಸದ ತೀರದಲಿ ಪಕ್ಷಿವಿ
ತಾನದಲಿ ಧರ್ಮಜ್ಞನಾಯ್ತಾ ಹಂಸ ನೀನೆಂದ ॥40॥

೦೪೧ ನುಡಿಗಳಲಿ ಸದ್ಧರ್ಮ ...{Loading}...

ನುಡಿಗಳಲಿ ಸದ್ಧರ್ಮ ಸಂಗತಿ
ನಡವಳಿಯಲನ್ಯಾಯವೆಂದೇ
ಕೆಡಹಿದವು ಹಂಸೆಯನು ನಾನಾ ವಿಹಗ ಸಂದೋಹ
ನುಡಿವುದಿಲ್ಲದೆ ಮೇಣು ನಯದಲಿ
ನಡೆದುದಿಲ್ಲೆಲೆ ಭೀಷ್ಮ ನಿನ್ನನು
ಕಡಿದು ಭೂತಕೆ ಬಡಿಸಿದರೆ ಕೃತಕೃತ್ಯನಹೆನೆಂದ ॥41॥

೦೪೨ ಕಳೆದ ಕಾಲದ ...{Loading}...

ಕಳೆದ ಕಾಲದ ವೃದ್ಧ ಮೇಲ
ಗ್ಗಳದ ನಿಯಮವ್ರತ ಶ್ರುತಿ ಸ್ಮೃತಿ
ಗಳಲಿ ಪರಿಣತನೆಂಬೆ ಕಡೆಯಲಿ ಗೋಪನಂದನನ
ಬೆಳವಿಗೆಯ ಮಾಡಿದೆ ಮಹೀ ಮಂ
ಡಲದ ರಾಯರನಕಟ ಲಜ್ಜಾ
ಕುಳರ ಮಾಡಿದೆ ಭಂಡ ಫಡ ಹೋಗೆಂದನಾ ಚೈದ್ಯ ॥42॥

೦೪೩ ಪರಗುಣ ಸ್ತುತಿ ...{Loading}...

ಪರಗುಣ ಸ್ತುತಿ ನಿಂದೆಗಳು ಹಿರಿ
ಯರಿಗೆ ಸಾಮ್ಯವೆ ನಿನ್ನ ಜಿಹ್ವೆಗೆ
ವರ ಗುಣಸ್ತವದಿಂದ ಮೇಣ್ಕಂಡೂತಿ ಹರಿವಹರೆ
ಹಿರಿಯರಿದೆಲಾ ಕಣ್ವ ಪೌಲಾಂ
ಗಿರಸ ಜೈಮಿನಿ ಯಾಜ್ಞವಲ್ಕ್ಯರು
ವರ ಸುಪೈಕದೊಳಧಿಕರಿದೆಲಾ ಭೀಷ್ಮ ಕೇಳ್ ಎಂದ ॥43॥

೦೪೪ ನಾವು ಮೊದಲಲಿ ...{Loading}...

ನಾವು ಮೊದಲಲಿ ನಮ್ಮೊಳಗೆ ಕುಂ
ದಾವುದೇತಕೆ ಹೊಗಳೆಯಿವರಲ
ದಾವಕೊರತೆ ಯುಧಿಷ್ಠಿರನ ನೀನೇಕುಪೇಕ್ಷಿಸಿದೆ
ಈ ವೃಕೋದರ ಪಾಥರ್ರನು ಸಹ
ದೇವ ನಕುಲರನೇಕೆ ಹೊಗಳೆಯ
ದಾವ ಗುಣನಿಧಿಯೆಂದು ಕೃಷ್ಣನ ಬಣ್ಣಿಸಿದೆಯೆಂದ ॥44॥

೦೪೫ ಗರುವನಲ್ಲಾ ಕೌರವೇಶ್ವರ ...{Loading}...

ಗರುವನಲ್ಲಾ ಕೌರವೇಶ್ವರ
ನರಸಲಾ ಬಾಹ್ಲಿಕನು ರಾಯರ
ಗುರುವಲಾ ಕೊಂಡಾಡಲಾಗದೆ ಚಾಪ ಧೂರ್ಜಟಿಯ
ಗುರುಸುತನು ಸಾಮಾನ್ಯನೇ ಸಂ
ಗರಭಯಂಕರನಲ್ಲವೇ ವಿ
ಸ್ತರಿಸಲಾಗದೆ ನಿನ್ನ ಕೃಷ್ಣನ ಹವಣೆಯಿವರೆಂದ ॥45॥

೦೪೬ ಕವಚ ಕುಣ್ಡಲ ...{Loading}...

ಕವಚ ಕುಂಡಲ ಸಹಿತ ತಾನುದು
ಭವಿಸನೇ ಶೌರ್ಯಾದಿ ಗುಣದಲಿ
ಭುವನದಲಿ ಭಾರಾಂಕ ವೀರರು ಪಡಿಯೆ ಕರ್ಣಂಗೆ
ಇವನನೇಕಗ್ಗಳಿಸೆ ಭೂರಿ
ಶ್ರವನ ಹೊಗಳೆ ಜಯದ್ರಥನು ನಿ
ನ್ನವನ ಹವಣೇ ಶಲ್ಯ ಮುನಿಯನೆ ನಿನಗೆ ಹೇಳೆಂದ ॥46॥

೦೪೭ ಕುಲದಲಧಿಕರು ಶೌರ್ಯದಲಿ ...{Loading}...

ಕುಲದಲಧಿಕರು ಶೌರ್ಯದಲಿ ವೆ
ಗ್ಗಳರು ಶೀಲದಲುನ್ನತರು ನಿ
ರ್ಮಲಿನರಾಚಾರದಲಿ ಕೋವಿದರಖಿಳ ಕಳೆಗಳಲಿ
ಇಳೆಯ ವಲ್ಲಭರನಿಬರನು ನೀ
ಕಳೆದು ನೊಣ ನೆರೆ ಹೂತ ವನವನು
ಹಳಿದು ಹಗಿನಿಂಗೆರಗುವವೊಲಾಯ್ತೆಂದನಾ ಚೈದ್ಯ ॥47॥

೦೪೮ ಘನನಲಾ ಭಗದತ್ತ ...{Loading}...

ಘನನಲಾ ಭಗದತ್ತ ಕಾಂಭೋ
ಜನು ಪದಸ್ಥನಲಾ ವಿರಾಟನ
ತನುಜನೀ ಪಾಂಚಾಲ ಕೇಕಯರೀ ಮಹೀಭುಜರು
ವಿನುತರಲ್ಲಾ ದಂತವಕ್ರನು
ನಿನಗೆ ಕಿರುಕುಳನೇ ಜರಾಸಂ
ಧನ ಸುತನ ನೀನೇಕೆ ಬಣ್ಣಿಸೆ ಭೀಷ್ಮ ಹೇಳೆಂದ ॥48॥

೦೪೯ ದ್ರುಮನ ಕಿಮ್ಪುರುಷಾಧಿಪನ ...{Loading}...

ದ್ರುಮನ ಕಿಂಪುರುಷಾಧಿಪನ ವಿ
ಕ್ರಮವ ಬಣ್ಣಿಸಲಾಗದೇ ಭೂ
ರಮಣರಿದೆಲಾ ಮಾಳವಂಗ ಕಳಿಂಗ ಕೌಸಲರು
ವಿಮಳರಿನಿಬರನುಳಿದು ಕೃಷ್ಣ
ಭ್ರಮೆ ಹಿಡಿದುದೈ ನಿನಗೆ ನಿನ್ನ
ಕ್ರಮದ ಭಣಿತೆಯ ಕರ್ಮಬೀಜವನರಿಯೆ ನಾನೆಂದ ॥49॥

೦೫೦ ಕುಮತಿ ಕೇಳ್ ...{Loading}...

ಕುಮತಿ ಕೇಳ್ ಬೊಬ್ಬುಲಿಯ ಬನದಲಿ
ರಮಿಸುವುದೆ ಕಳಹಂಸ ಮಾಯಾ
ಭ್ರಮಿತರಲಿ ಯಾಚಿಸುವನೇ ವರಯೋಗಿ ನಿಜಪದವ
ಸಮರ ಪಟುಭಟ ದರ್ಪಪಿತ್ತ
ಭ್ರಮ ವಿಸಂಸ್ಥುಲ ಚಪಳಚಿತ್ತ
ಸ್ಥಿಮಿತ ಭೂಪರ ಬಗೆವನೇ ತಾನೆಂದನಾ ಭೀಷ್ಮ ॥50॥

೦೫೧ ಖತಿಯ ಹಿಡಿದುದು ...{Loading}...

ಖತಿಯ ಹಿಡಿದುದು ಸಕಲ ರಾಜ
ಪ್ರತತಿಗಳು ದುರ್ಮಾರ್ಗಮಾನ
ವ್ಯತಿಕರದೊಳುಬ್ಬೆದ್ದರನಿಬರು ಜಲಧಿ ಘೋಷದಲಿ
ಕ್ರತುವ ಜಲದಲಿ ಕದಡು ಗಂಗಾ
ಸುತನ ಹೊಯ್ ಕಟವಾಯ ಕೊಯ್ ನಿ
ಶ್ಚಿತ ಘಟಾಗ್ನಿಯಲಿವನ ಸುಡಿಯೆಂದುದು ನೃಪವ್ರಾತ ॥51॥

೦೫೨ ಬರಿಯ ಮಾತನೆ ...{Loading}...

ಬರಿಯ ಮಾತನೆ ಮೆರೆದು ಕಾರ್ಯದ
ಕೊರತೆಯಾದರೆ ನಾಯ್ಗಳೊರಲಿದ
ತೆರನಹುದಲೇ ತೋರಿರೈ ನೀವ್ನಿಮ್ಮ ಪೌರುಷವ
ಇರಿದು ನೀವ್ಕೊಲಲಾರದಿದ್ದರೆ
ನೆರೆಘಟಾಗ್ನಿಯೊಳುರುಹದಿದ್ದಿರೆ
ಕೆರಹು ನಿಮ್ಮಯ ಬಾಯಲೆಂದನು ಭೂಪರಿಗೆ ಭೀಷ್ಮ ॥52॥

೦೫೩ ನೆರೆದ ನರಿಗಳ ...{Loading}...

ನೆರೆದ ನರಿಗಳ ಮಧ್ಯದಲಿ ಕೇ
ಸರಿಯ ಮನ್ನಿಸುವಂತೆ ಕೃಷ್ಣನ
ಚರಣವನು ಪೂಜಿಸಿದೆವಘ್ರ್ಯಾರುಹನು ಮುರವೈರಿ
ಜರಡುಗಳು ನೀವೀ ಜನಾರ್ದನ
ನೊರೆಗೆ ಬಹರೇ ಪ್ರೀತಿಯೇನೀ
ಪರಿ ವಿಷಾದವೆ ಹೋಗಿಯೆಂದನು ಭೂಪರಿಗೆ ಭೀಷ್ಮ ॥53॥

೦೫೪ ಅಣಕಿಸುವರೆನ್ನೊಡನೆ ಹಿರಿಯು ...{Loading}...

ಅಣಕಿಸುವರೆನ್ನೊಡನೆ ಹಿರಿಯು
ಬ್ಬಣವ ತೆಗೆಯಿರಿ ಈ ಮುರಾರಿಯ
ಕೆಣಕಲಾಪರೆ ಕರೆದು ನೋಡಿ ವೃಥಾಭಿಮಾನದಲಿ
ಹಣುಕಿ ಬಾಯ್ಬಡಿದೇನಹುದು ಕೈ
ಗುಣವ ತೋರಿರೆ ಸಾವಿರೊಳ್ಳೆಗೆ
ಮಣಿವನೇ ವಿಹಗೇಂದ್ರನೆಂದನು ಭೂಪರಿಗೆ ಭೀಷ್ಮ ॥54॥

೦೫೫ ಶಿವಶಿವಾ ಮುದುಗೂಗೆ ...{Loading}...

ಶಿವಶಿವಾ ಮುದುಗೂಗೆ ಮೆಚ್ಚುದು
ರವಿಯನೆಲವೋ ಭೀಷ್ಮ ನಿಲು ಮಾ
ಧವನ ಮರ್ದಿಸಿ ನಿನಗೆ ಜೋಡಿಸುವೆನು ಮಹಾನಳನ
ಯುವತಿಯರು ಹಾರುವರು ಹುಲು ಪಾಂ
ಡವರು ಪತಿಕರಿಸಿದರೆ ನೀನಿಂ
ದೆವಗೆ ಮಾನ್ಯನೆ ಕೃಷ್ಣ ಸಿಂಹಾಸನವನಿಳಿಯೆಂದ ॥55॥

೦೫೬ ನಿನಗೆ ಮೊದಲೊಳು ...{Loading}...

ನಿನಗೆ ಮೊದಲೊಳು ನಿಶಿತ ವಿಶಿಖದ
ಮೊನೆಯೊಳರ್ಚಿಸಿ ಬಳಿಕ ಭೀಷ್ಮನ
ಘನ ಘಟಾನಳಕುಂಡದೊಳ್ಸ್ವಾಹಾಸ್ವಧಾಹುತಿಯ
ಅನುಕರಿಸಿ ಬಳಿಕಿನಲಿ ಕುಂತೀ
ತನಯರೈವರ ರಕುತ ಘೃತದಲಿ
ವಿನುತ ರೋಷಾಧ್ವರವ ರಚಿಸುವೆನೆಂದನಾ ಚೈದ್ಯ ॥56॥

೦೫೭ ಎನ್ದು ಚಾಪವ ...{Loading}...

ಎಂದು ಚಾಪವ ತರಿಸಿ ಚಪ್ಪರ
ದಿಂದ ಹೊರವಡುತವನಿಪಾಲಕ
ವೃಂದವನು ಕೈವೀಸಿದನು ಕರೆ ಗೋಕುಲೇಶ್ವರನ
ಇಂದಲೇ ರಿಪುರುಧಿರ ಪಾನಾ
ನಂದಕೃತಮದಶಾಕಿನೀಸ್ವ
ಚ್ಛಂದ ಲೀಲಾ ನೃತ್ಯದರ್ಶನವೆಂದನಾ ಚೈದ್ಯ ॥57॥

೦೫೮ ಡಾವರಿಸಿದುದು ವಿವಿಧ ...{Loading}...

ಡಾವರಿಸಿದುದು ವಿವಿಧ ವಾದ್ಯವಿ
ರಾವವಬುಜೋದ್ಭವನ ಭವನವ
ನಾ ವಿಗಡ ಭಟಕಟಕವಿದ್ದುದು ಬಲಿದ ಬೊಬ್ಬೆಯಲಿ
ಗೋವಳನ ಬರಹೇಳು ಧರೆಯಲಿ
ದೇವ ಗಡ ಬರಹೇಳು ತೋರಾ
ಕಾವವರ ತಾ ಕೊಲುವೆನೆಂದೊದರಿದನು ಕಲಿ ಚೈದ್ಯ ॥58॥

೦೫೯ ಮಿನಗುದುಟಿಗಳ ವಿಕಲ ...{Loading}...

ಮಿನಗುದುಟಿಗಳ ವಿಕಲ ಮಂತ್ರದ
ಬಿನುಗುಗಳ ಕೈಯಾಹುತಿಗೆ ಕರೆ
ದನಿಮಿಷರ ಪಲ್ಲಟದ ವಿಚಲಿತ ಸೂಕ್ತಿಮಯ ನಿನದ
ತನಿ ಭಯದ ತರಳಾಕ್ಷಿಗಳ ದು
ರ್ಮನದ ಮೋಡಿಯ ಮೊಗದ ಬರಿದೇ
ತೊನೆವ ಗಡ್ಡದ ಮುನಿಗಳಿದ್ದರು ಬಲಿದ ಬೆರಗಿನಲಿ ॥59॥

೦೬೦ ಹಲ್ಲಣಿಸಿದುದು ಯಾದವರ ...{Loading}...

ಹಲ್ಲಣಿಸಿದುದು ಯಾದವರ ಪಡೆ
ಘಲ್ಲಣೆಯ ಘರ್ಘರದ ಘೋಷದ
ಭುಲ್ಲಣೆಯ ಗಂಭೀರ ಭೇರಿಯ ಬಹಳ ರಭಸದಲಿ
ನಿಲ್ಲದಿಳೆ ಪದಹತಿಗೆನಲು ಬಲ
ವೆಲ್ಲ ಭೀಮನ ಸನ್ನೆಯಲಿ ರಣ
ಮಲ್ಲರೊಡ್ಡಿತು ಹೊರಗೆ ನೃಪ ಮೋಹರದ ಬಾಹೆಯಲಿ ॥60॥

೦೬೧ ಮುನಿಗಳಞ್ಜದಿರಞ್ಜದಿರಿ ಪರಿ ...{Loading}...

ಮುನಿಗಳಂಜದಿರಂಜದಿರಿ ಪರಿ
ಜನಕೆ ಗಜಬಜ ಬೇಡ ಯಾದವ
ಜನಪರುಬ್ಬಟೆ ನಿಲಲಿ ಸೈರಿಸಿ ಪಾಂಡುಸುತರೆನುತ
ಮೊನೆ ನಗೆಯ ಸಿರಿಮೊಗದ ನೆಗಹಿದ
ಜನದಭಯ ಹಸ್ತಾಂಬುಜದ ಹರಿ
ವಿನುತ ಸಿಂಹಾಸನವನಿಳಿದಾ ಧುರಕೆ ಹೊರವಂಟ ॥61॥

೦೬೨ ಅನ್ದಿನಲಿ ಶಿಶುಪಾಲಕನ ...{Loading}...

ಅಂದಿನಲಿ ಶಿಶುಪಾಲಕನ ತಾ
ಯ್ಬಂದು ಮಗನಪರಾಧ ಶತದಲಿ
ಕಂದಲಾಗದು ಚಿತ್ತವೆಂದಳು ನಮ್ಮನನುಸರಿಸಿ
ಇಂದು ಖತಿಯಿಲ್ಲೆಮಗೆ ಸೈರಿಸ
ಬಂದುದಿಲ್ಲವಗೆರಡು ತಪ್ಪಿನೊ
ಳೆಂದು ಮುರಹರ ನಗುತ ನುಡಿದನು ನಾರದಾದ್ಯರಿಗೆ ॥62॥

೦೬೩ ಈ ಮಹಾ ...{Loading}...

ಈ ಮಹಾ ಯಜ್ಞವನು ಕೆಡಿಸುವೆ
ನೀ ಮಹೀಶನ ಮುರಿವೆನೆಂದೇ
ವೈಮನಸ್ಯದಿ ಬಗೆದು ಮೊನೆ ಮಾಡಿದನು ನುಡಿಯೆರಡ
ತಾಮಸನ ತರಿದಖಿಳ ಭೂತ
ಸ್ತೋಮ ತುಷ್ಟಿಯ ಕೀರ್ತಿ ಫಲಿಸಲಿ
ಯೀ ಮಹಾಶರಕೆನುತ ಕೊಂಡನು ದಿವ್ಯಕಾರ್ಮುಕವ ॥63॥

೦೬೪ ಝಙ್ಕೆ ಮಿಗೆ ...{Loading}...

ಝಂಕೆ ಮಿಗೆ ಹೊರವಂಟುದೆಡ ಬಲ
ವಂಕದಲಿ ಯದುಸೇನೆ ಪಾಂಡವ
ರಂಕೆಯಲಿ ದಳ ಜೋಡಿಸಿತು ಝಳಪಿಸುವ ಕೈದುಗಳ
ಮುಂಕುಡಿಯ ಮೋಹರದ ದಳ ನಿ
ಶ್ಯಂಕೆಯಲಿ ಜೋಡಿಸಿತು ಭೂಪರ
ಬಿಂಕ ಬೀತುದು ಭೀತಿ ಹೂತುದು ಹುದುಗಿತಾಟೋಪ ॥64॥

೦೬೫ ತೊಲಗಿದನು ಕುರುರಾಯ ...{Loading}...

ತೊಲಗಿದನು ಕುರುರಾಯ ಪಾಂಡವ
ರೊಳಗೆ ತಪ್ಪಿಲ್ಲೆನುತ ಮಿಗೆ ಕುರು
ತಿಲಕನಾವಡೆಯೆನುತ ಬಳಿವಿಡಿದರು ನೃಪಾಲಕರು
ಕಲಿ ಜಯದ್ರಥ ಮಾದ್ರಪತಿ ಸೌ
ಬಲ ಕಳಿಂಗ ಕರೂಷ ನೃಪ ಕೌ
ಸಲರು ತಿರುಗಿತು ಬೇರೆ ಭಗದತ್ತಾದಿಗಳು ಸಹಿತ ॥65॥

೦೬೬ ಚೆಲ್ಲಿತೀ ನೃಪಯೂಥ ...{Loading}...

ಚೆಲ್ಲಿತೀ ನೃಪಯೂಥ ಜಾರಲಿ
ಜಳ್ಳುಗಳು ಜಲಜಾಕ್ಷನ ಪ್ರತಿ
ಮಲ್ಲ ತಾನೇ ಸಾಲದೇ ಹಾರುವೆನೆ ಕೆಲಬಲನ
ಖುಲ್ಲರಾಯರು ನಿಲಲಿ ಗೊಲ್ಲರ
ಹಳ್ಳಿಗಾರನ ಕೂಡೆ ಬಿರುದಿನ
ಕಲ್ಲಿಗಳ ತಮ್ಮೆದೆಯಲೊತ್ತಲಿಯೆಂದನಾ ಚೈದ್ಯ ॥66॥

೦೬೭ ಎನುತ ಖಳನಿದಿರಾಗಿ ...{Loading}...

ಎನುತ ಖಳನಿದಿರಾಗಿ ಮಧುಮ
ರ್ದನನ ಹಳಚಿದನಸುರರಿಪುವಿನ
ಮೊನೆಗಣೆಯಲೇ ಮುಳುಗಿದನು ಬಳಿಕಾ ಮುಹೂರ್ತದಲಿ
ದನುಜ ವೈರಿಯ ಮುಸುಕಿದನು ತನ
ತನಗೆ ನೋಟಕವಾಯ್ತು ಭೂಪತಿ
ಜನ ಸುನೀತ ಮುರಾರಿಗಳ ಕೌತೂಹಲಾಹವಕೆ ॥67॥

೦೬೮ ಬಿಡುವ ತೊಡಚುವ ...{Loading}...

ಬಿಡುವ ತೊಡಚುವ ಸಂಧಿಸುವ ಜೇ
ವಡೆವ ಹೂಡುವ ತಾಗಿಸುವ ಹಿಳು
ಕಿಡುವ ಹರಿಕುವ ಬೆಸುವ ಭೇದಿಸುವ ಸಮ ಚಾಪಳವ
ನುಡಿವ ಕವಿ ಯಾರೈ ಬರಿಯ ಬಾ
ಯ್ಬಡಿಕನೆ ಶಿಶುಪಾಲನೀ ಪರಿ
ನಡೆವುದೇಕೈ ಹರಿಯೊಡನೆ ಸಮಬೆಸನ ಬಿಂಕದಲಿ ॥68॥

೦೬೯ ಸೋತನೈ ಹರಿಯೆನ್ದು ...{Loading}...

ಸೋತನೈ ಹರಿಯೆಂದು ಚೈದ್ಯನ
ಬೂತುಗಳು ಬಣ್ಣಿಸಿದರೀ ನಿ
ರ್ಭೀತ ಯಾದವ ಸೈನ್ಯವಿದ್ದುದು ಹರುಷ ಕೇಳಿಯಲಿ
ಈತ ರಾವಣ ಮುನ್ನ ಭುವನ
ಖ್ಯಾತನೆಂದಮರರು ವಿಮಾನ
ವ್ರಾತದಲಿ ನೆರೆ ನೋಡುರ್ತಿರ್ದುದು ಸಮರ ಸಂಭ್ರಮವ ॥69॥

೦೭೦ ಧರಣಿಪತಿ ಕೇಳ್ ...{Loading}...

ಧರಣಿಪತಿ ಕೇಳ್ ಕೃಷ್ಣ ಶಿಶುಪಾ
ಲರ ಮಹಾ ಸಂಗ್ರಾಮ ಮಧ್ಯದೊ
ಳುರಿದುದಿಳೆ ಹೊಗೆದುದು ದಿಶಾವಳಿ ಧೂಮಕೇತುಗಳು
ತರಣಿ ಮಂಡಲ ಮಾಲೆಗಳು ವಿ
ಸ್ತರಿಸಿತಾಕಾಶದಲಿ ಪರ್ವದ
ಲುರವಣಿಸಿದನು ರಾಹು ಚಂದ್ರಾದಿತ್ಯ ಮಂಡಲವ ॥70॥

೦೭೧ ನಡುಗಿತವನಿಯಕಾಲದಲಿ ಬರ ...{Loading}...

ನಡುಗಿತವನಿಯಕಾಲದಲಿ ಬರ
ಸಿಡಿಲು ಸುಳಿದುದು ಹಗಲು ತಾರೆಗ
ಳಿಡಿದವಭ್ರದಲಿಳೆಗೆ ಸುರಿದುದು ರುಧಿರಮಯ ವರ್ಷ
ಮಿಡುಕಿದವು ಪ್ರತಿಮೆಗಳು ಶಿಖರದಿ
ನುಡಿದು ಬಿದ್ದುದು ಕಳಶ ಹೆಮ್ಮರ
ವಡಿಗಡಿಗೆ ಕಾರಿದವು ರುಧಿರವನರಸ ಕೇಳ್ ಎಂದ ॥71॥

೦೭೨ ನೆಳಲು ಸುತ್ತಲು ...{Loading}...

ನೆಳಲು ಸುತ್ತಲು ಸುಳಿದುದಿನಮಂ
ಡಳಕೆ ಕಾಳಿಕೆಯಾಯ್ತು ಫಲದಲಿ
ಫಲದ ಬೆಳವಿಗೆ ಹೂವಿನಲಿ ಹೂವಾಯ್ತು ತರುಗಳಲಿ
ತಳಿತ ಮರನೊಣಗಿದವು ಕಾಷ್ಠಾ
ವಳಿಗಳುರೆ ತಳಿತವು ತಟಾಕದ
ಸಲಿಲವುಕ್ಕಿತು ಪಾಂಡುಪುತ್ರರ ಪುರದ ವಳಯದಲಿ ॥72॥

೦೭೩ ಬೆದರಿದನು ಯಮಸೂನು ...{Loading}...

ಬೆದರಿದನು ಯಮಸೂನು ಭಯದಲಿ
ಗದಗದಿಸಿ ನಾರದನ ಕೇಳಿದ
ನಿದನಿದೇನೀ ಪ್ರಕೃತಿ ವಿಕೃತಿಯ ಸಕಳ ಚೇಷ್ಟೆಗಳು
ಇದು ಕಣಾ ಚೈದ್ಯಾದಿಗಳ ವಧೆ
ಗುದುಭವಿಸಿದುದಲೇ ಮುರಾರಿಯೊ
ಳುದಯಿಸುವವುತ್ಪಾತ ಚೇಷ್ಟೆಗಳೆಂದನಾ ಮುನಿಪ ॥73॥

೦೭೪ ಈ ನೆಗಳಿದುತ್ಪಾತ ...{Loading}...

ಈ ನೆಗಳಿದುತ್ಪಾತ ಶಾಂತಿ ವಿ
ಧಾನವೇನೆನೆ ಕೃಷ್ಣ ಚೇಷ್ಟೆಯೆ
ಹಾನಿ ವೃದ್ಧಿ ವಿನಾಶವಭ್ಯುದಯ ಪ್ರಪಂಚದಲಿ
ಮಾನನಿಧಿಯೇ ವೇದಸೂಕ್ತ ವಿ
ಧಾನದಲಿ ಪರಿಹಾರ ವಿಶ್ವ
ಕ್ಸೇನಮಯವೀ ಲೋಕ ಯಾತ್ರೆಗಳೆಂದನಾ ಮುನಿಪ ॥74॥

೦೭೫ ಆ ಹರಿಯೆ ...{Loading}...

ಆ ಹರಿಯೆ ನಿಮಗಿಂದು ಜೀವ
ಸ್ನೇಹಿತನು ನಿಮಗಾವ ಚಿಂತೆ ವಿ
ಮೋಹ ಚೇಷ್ಟೆಗಳಿವನ ವಧೆಗೋ ಬಲ್ಲರಾರಿದನು
ಊಹಿಸಲು ಬೇಡೆಂದು ಮುನಿಪತಿ
ಗಾಹಿನಲಿ ತಿಳುಹಿದನು ಘನ ಸ
ನ್ನಾಹರೆಚ್ಚಾಡಿದರು ಶಿಶುಪಾಲಕ ಮುರಾಂತಕರು ॥75॥

೦೭೬ ಕಾದಿದರು ವಿವಿಧಾಸ್ತ್ರ ...{Loading}...

ಕಾದಿದರು ವಿವಿಧಾಸ್ತ್ರ ವಿದ್ಯಾ
ಭೇದದಲಿ ರಥಭಂಗ ಚಾಪ ವಿ
ಭೇದ ಶಸ್ತ್ರಾಸ್ತ್ರೌಘ ಸಂಹರಣ ಪ್ರಪಂಚದಲಿ
ಈ ದುರಾತ್ಮನ ನಿಲಿಸಿ ನಿಮಿಷದೊ
ಳಾ ದಯಾಂಬುಧಿ ತುಡುಕಿದನು ತ್ರೈ
ವೇದಮಯಮೂರ್ತಿತ್ರಯಾತ್ಮಕ ವರ ಸುದರ್ಶನವ ॥76॥

೦೭೭ ಬೆಸಸಿದನು ಚಕ್ರವನು ...{Loading}...

ಬೆಸಸಿದನು ಚಕ್ರವನು ಧಾರಾ
ವಿಸರಧೂತ ಪರಿಸ್ಫುಲಿಂಗ
ಪ್ರಸರ ತೇಜಃಕಣ ಪರಿಷ್ಕೃತ ನವ್ಯ ಶತಭಾನು
ದೆಸೆ ದೆಸೆಗೆ ದುವ್ವಾಳಿಸುವ ಬೆಳ
ಗೆಸೆಯೆ ಬಂದು ಸುನೀತ ಕಂಠದ
ಬೆಸುಗೆ ಬಿಡಲೆರಗಿದುದು ಹಾಯ್ದುದು ತಲೆ ನಭಸ್ಥಳಕೆ ॥77॥

೦೭೮ ಹರಿಗೊರಳ ಚೌಧಾರೆಯಲಿ ...{Loading}...

ಹರಿಗೊರಳ ಚೌಧಾರೆಯಲಿ ಧುರು
ಧುರಿಸಿ ನೂಕಿತು ರಕುತವದರೊಳು
ಮಿರುಪ ತೇಜಃಪುಂಜವುಕ್ಕಿತು ಹೊದರ ಹೊಳಹಿನಲಿ
ತುರುಗುವೆಳಗಿನ ಜೋಕೆಯಲಿ ಜಗ
ವರಿಯೆ ಬಂದು ಮುರಾರಿಯುಂಘ್ರಿಯೊ
ಳೆರಗಿ ನಿಂದುದು ನಿಜನೆಲೆಗೆ ವಿಜಯಾಭಿಧಾನದಲಿ ॥78॥

೦೭೯ ತಗ್ಗಿತುರು ಕಳಕಳ ...{Loading}...

ತಗ್ಗಿತುರು ಕಳಕಳ ವಿಷಾದದ
ಸುಗ್ಗಿ ಬೀತುದು ರಾಯರೀಚೆಯ
ಮಗ್ಗುಲಲಿ ಮೇಳೈಸಿ ಮೆರೆದರು ಮತ್ತೆ ಬಾಂಧವರು
ನೆಗ್ಗಿದವು ನೆನಹವನ ಸಖಿಗಳು
ಮುಗ್ಗಿದರು ಹುರುಡಿನ ವಿಘಾತಿಯ
ಲಗ್ಗಿಗರು ಹಣುಗಿದರು ಶಿಶುಪಾಲಾವಸಾನದಲಿ ॥79॥

೦೮೦ ಈಸು ಹಿರಿದಿಲ್ಲೆನ್ದು ...{Loading}...

ಈಸು ಹಿರಿದಿಲ್ಲೆಂದು ಕೆಲಬರು
ಲೇಸ ಮಾಡಿದನಸುರರಿಪುವಿವ
ನೀಸು ಬಾಹಿರನೆಂದರಿಯೆವಾವೆಂದು ಕೆಲಕೆಲರು
ಐಸಲೇ ಕೃಷ್ಣಂಗೆ ಮುನಿದವ
ರೇಸುದಿನ ಬದುಕುವರು ಲೇಸಾ
ಯ್ತಾ ಸುನೀತಂಗೆಂದು ನಗುತಿರ್ದುದು ನೃಪಸ್ತೋಮ ॥80॥

೦೮೧ ಗೋಳಿಡುತ ಬನ್ದೆರಗಿದರು ...{Loading}...

ಗೋಳಿಡುತ ಬಂದೆರಗಿದರು ಶಿಶು
ಪಾಲ ತನುಜರು ಕೃಷ್ಣನಂಘ್ರಿಗೆ
ಲಾಲಿಸಿದನನಿಬರನು ಸಂತೈಸಿದನು ಕರುಣದಲಿ
ಮೇಲುಪೋಗಿನ ವಿಧಿ ವಿಹಿತ ಕ
ರ್ಮಾಳಿಗಳ ಮಾಳ್ದವನ ಮಗಗೆ ಕೃ
ಪಾಳು ಪಟ್ಟದ ಸೇಸೆದಳಿದನು ವೀರನಾರಯಣ ॥81॥

+೧೦ ...{Loading}...