೦೯

೦೦೦ ಸೂಚನೆ ದೇವ ...{Loading}...

ಸೂಚನೆ: ದೇವ ದೇವನನುಪನಿಷತ್ಕಾಂ
ತಾವಳಿಯ ಕಮನೀಯನನು ರಾ
ಜೀವಪೀಠನ ಪಿತನನಭಿವರ್ಣಿಸಿದನಾ ಭೀಷ್ಮ॥

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ವಿರಚಿತ ಪದಯುಗ ಪ್ರ
ಕ್ಷಾಳನಾಚಮನೀಯ ತತ್ಪರಿಶುದ್ಧಭಾವದಲಿ
ಆಲಲಿತ ತಲ್ಪದ ಯಶೋದಾ
ಬಾಲಕಂಗಭಿನಮಿಸಿ ನಿಮಿಷ ನಿ
ಮೀಲಿತಾಕ್ಷನು ಕಂದೆರೆದು ಮುನಿಜನಕೆ ಕೈಮುಗಿದು ॥1॥

೦೦೨ ವರ ಋಷಿಗಳಾಜ್ಞೆಯಲಿ ...{Loading}...

ವರ ಋಷಿಗಳಾಜ್ಞೆಯಲಿ ವಿಶ್ವಂ
ಭರನ ವಿಷಯೀಕರಿಸಿ ರಾಜಾ
ಧ್ವರಸಮರ್ಥನ ಭವವಿನಾಶನ ಸುಪ್ರಯೋಜಕನ
ಅರಿವ ತೆರದಿಂದೆನ್ನ ಮತಿ ಗೋ
ಚರಿಸಿದುದ ಹೇಳುವೆನು ಕೃಷ್ಣನ
ಪರಮ ಲೀಲಾ ಲಲಿತ ಚರಿತವನೆಂದನಾ ಭೀಷ್ಮ ॥2॥

೦೦೩ ಘನ ರಜೋಗುಣದಲ್ಲಿ ...{Loading}...

ಘನ ರಜೋಗುಣದಲ್ಲಿ ಚತುರಾ
ನನ ತಮೋಗುಣದಲ್ಲಿ ಶಂಕರ
ನೆನಿಸಿ ಸತ್ವಗುಣಾನುಗತಿಯಲಿ ವಿಷ್ಣುವೆಂದೆನಿಸಿ
ಘನಜಗನ್ಮಯನಾಗಿ ಸರ್ವಾ
ತ್ಮನು ಮಹೇಶ್ವರನೆನಿಪನೀತನ
ನೆನಹನೀತನ ನಿಜವನರಿವ ಮಹಾತ್ಮರಾರೆಂದ ॥3॥

೦೦೪ ಈತನವ್ಯಕ್ತನು ವಿಚಾರಿಸ ...{Loading}...

ಈತನವ್ಯಕ್ತನು ವಿಚಾರಿಸ
ಲೀತನಮಲವ್ಯಕ್ತಲಿಂಗನ
ಜಾತನವ್ಯಯನಪ್ರಮೇಯನಗಮ್ಯನದ್ವಿತಯ
ಈತ ಚೈತನ್ಯಾತ್ಮ ನಿರ್ಗುಣ
ನೀತ ಗುಣಸಂಯೋಗಿ ಸರ್ವದ
ನೀತ ಚಿನ್ಮಯನೀತನ ಹರಿಯೆಂದನಾ ಭೀಷ್ಮ ॥4॥

೦೦೫ ಜಲನಿಧಿಯ ಬುದ್ಬುದ ...{Loading}...

ಜಲನಿಧಿಯ ಬುದ್ಬುದ ತರಂಗಾ
ವಳಿಗಳಾ ಜಲಧಿಯಲಿ ತೋರುವ
ವಳಿವವಿ ವೈಕುಂಠ ವಿಮಲಜ್ಞಾನ ಜಲಧಿಯಲಿ
ಹೊಳೆವುದಳಿವುದು ವಿಶ್ವವೀತನ
ಸುಳಿವು ತೋರುವದಿಲ್ಲ ಮಾಯಾ
ಲಲನೆಯಿಕ್ಕಿದ ಮದ್ದು ಜೀವರಿಗೆಂದನಾ ಭೀಷ್ಮ ॥5॥

೦೦೬ ಭೂತ ಜನನಸ್ಥಿತಿಗೆ ...{Loading}...

ಭೂತ ಜನನಸ್ಥಿತಿಗೆ ಕಾರಣ
ನೀತನೀತಂಗಿಲ್ಲ ಕಾರಣ
ನೀತಜಾಗ್ರತ್‍ಸ್ವಪ್ನಸುಪ್ತಿಗಳೆಂಬವಸ್ಥೆಗಳ
ಆ ತುರಿಯ ನಾತುರಿಯ ತುರಿಯಾ
ತೀತ ಲಕ್ಷಣ ನಿತ್ಯನಿರ್ಮಳ
ನೀತನಮಳವ್ಯಕ್ತಿ ಚಿನ್ಮಯನೆಂದನಾ ಭೀಷ್ಮ ॥6॥

೦೦೭ ಭ್ರಾಮಕದೊಳೀ ವಿಷಯಸೌಖ್ಯದ ...{Loading}...

ಭ್ರಾಮಕದೊಳೀ ವಿಷಯಸೌಖ್ಯದ
ರಾಮಣೀಯಕದೊಳಗೆ ಮುಳುಗಿ ನಿ
ರಾಮಯನು ಪರತತ್ವಮಯನಚ್ಯುತನು ತಾನಾದ
ಈ ಮುಕುಂದನ ಮರೆದು ಕರ್ಮ ವಿ
ರಾಮದಲಿ ಕುದಿದವರು ಮಾಯಾ
ಕಾಮಿನಿಯ ಕೈ ಮಸಕದಲಿ ಮರುಳಾಗದಿರರೆಂದ ॥7॥

೦೦೮ ಇರದೆ ತಿಲದಲಿ ...{Loading}...

ಇರದೆ ತಿಲದಲಿ ತೈಲ ಕಾಷ್ಠದೊ
ಳೆರವ ತಹರೇ ಹುತವಹನನೇ
ನರಿಯಬಾರದೆ ವಿಷ್ಣು ಚೈತನ್ಯಾತ್ಮನೆಂಬುದನು
ಹೊರಗೊಳಗೆ ಸಂಸ್ಥೂಲ ಸೂಕ್ಷೋ
ತ್ಕರದೊಳಗೆ ಹರಿಯುಳಿಯೆ ವಿಶ್ವವ
ಹೊರೆವ ಹೊಂದಿಪರುಂಟೆ ಹೊರಬಿಗರೆಂದನಾ ಭೀಷ್ಮ ॥8॥

೦೦೯ ಹೂಹೆಗಳು ಹೊಯ್ದಾಡವೇ ...{Loading}...

ಹೂಹೆಗಳು ಹೊಯ್ದಾಡವೇ ನಿ
ರ್ವಾಹ ಸೂತ್ರದ ಕುಣಿಕೆಗಾರನ
ಗಾಹಿನಲಿ ತಜ್ಜಗದ ಜೀವದ ಸುಕೃತ ದುಷ್ಕ್ರತವ
ಓಹರಿಕೆಯಲಿ ತಂದು ಭವದಲಿ
ಸೋಹಿಸುಳಿಸುವನೀ ಚರಾಚರ
ಜೋಹವಿದು ನಿಜಲೀಲೆಯೀ ಹರಿಗೆಂದನಾ ಭೀಷ್ಮ ॥9॥

೦೧೦ ಈತನಚ್ಯುತನಲ್ಲೆನಿಸಿ ವಿಪ ...{Loading}...

ಈತನಚ್ಯುತನಲ್ಲೆನಿಸಿ ವಿಪ
ರೀತ ಮಿಥ್ಯಾಜ್ಞಾನ ತೋರಿದ
ಡೀತನಲಿ ತಪ್ಪೇನು ನಿಜ ಪರಮಾತ್ಮನೆನಿಸಿದರೆ
ಭೀತನೊಬ್ಬನು ಕನಸಿನಲಿ ತ
ನ್ನಾ ತಲೆಯ ತಾನರಿದು ಪಿಡಿದುದ
ನೇತರಿಂದಲಿ ಕಂಡನೈ ಶಿಶುಪಾಲ ಕೇಳ್ ಎಂದ ॥10॥

೦೧೧ ಭ್ರಮೆಯ ಭುಜಗನೆ ...{Loading}...

ಭ್ರಮೆಯ ಭುಜಗನೆ ರಜ್ಜುವೊ ಜಂ
ಗಮವೊ ಕಲ್ಪಿತ ಪುರುಷನಾತ್ಮನೊ
ವಿಮಲ ಸಂವಿದ್ರೂಪನಾತ್ಮನೊ ಜೀವ ಪರಮನಲಿ
ಕಮಲನಾಭನೆ ನಿಜವೊ ವಿಶ್ವ
ಕ್ರಮವೆ ನಿಜವೊ ಚೈದ್ಯ ಭೂಪತಿ
ಕುಮತಿ ಕಪಿಗೇಕಮಲ ಮಾಣಿಕವೆಂದನಾ ಭೀಷ್ಮ ॥11॥

೦೧೨ ತೋರುವೀ ಮಹದಾದಿ ...{Loading}...

ತೋರುವೀ ಮಹದಾದಿ ಭೂತದೊ
ಳೋರು ಗುಡಿಸದೆ ನಿಂದ ಮುವ್ವ
ತ್ತಾರು ತತ್ವದೊಳೀತನೇ ಮಣಿಗಣದ ಗುಣದಂತೆ
ತೋರುವೀ ತೋರಿಕೆಯ ತುಷವನು
ತೂರಿದರೆ ಮೇಣ್ ವಿಶ್ವಮುಖದಲಿ
ತೋರಿ ತೋರದೆ ಮೆರೆವನೀ ಹರಿಯೆಂದನಾ ಭೀಷ್ಮ ॥12॥

೦೧೩ ಸ್ವೇದಜಾಣ್ಡೋದ್ಭಿಜ ಜರಾಯುಜ ...{Loading}...

ಸ್ವೇದಜಾಂಡೋದ್ಭಿಜ ಜರಾಯುಜ
ಭೇದವಾದ ಚತುರ್ವಿಧದ ಭೂ
ತೋದರನ ತದ್ಭೂತಮಯ ತದ್ಭೂತ ಭಾವನನ
ವಾದಗೊಳ್ಳದ ಬಹಳ ವಸ್ತುವ
ನೀ ದುರಾತ್ಮಕನೆತ್ತ ಬಲ್ಲನು
ಬೀದಿಯಲಿ ಬಿದ್ದವನು ಬೊಮ್ಮವಿದೆಂದನಾ ಭೀಷ್ಮ ॥13॥

೦೧೪ ನೆಳಲು ಜಲದಲಿ ...{Loading}...

ನೆಳಲು ಜಲದಲಿ ನಡುಗಲಿನ ಮಂ
ಡಲಕೆ ಕಂಪವೆ ಧೂಮಶಿಖಿ ಕು
ಪ್ಪಳಿಸಿದರೆ ಕಂದುವದೆ ನಭ ಕೆಂಧೂಳಿಯೊಡೆಮುರಿದು
ಸುಳಿದರನಿಲನ ತೊಳೆವರೇ ನರ
ರೊಳಗೆ ನರ ರೂಪದಲಿ ಜನಿಸಿದ
ರೊಳಗು ಡಿಳ್ಳವೆ ಪರಮ ಸುಖನಿಧಿಗೆಂದನಾ ಭೀಷ್ಮ ॥14॥

೦೧೫ ಗುಣಮಯದ ಗರುವಾಯಿಯಲಿ ...{Loading}...

ಗುಣಮಯದ ಗರುವಾಯಿಯಲಿ ಝೇ
ವಣಿಗೆಗೊಂಬನು ಭೂತದಿಂದ್ರಿಯ
ಗಣದೊಡನೆ ನಿಜ ಪೌರುಷದಲೊದಗಿದ ಪವಾಡಿಗಳ
ಗುಣವ ಝಾಡಿಸಿದರೆ ಸಮಷ್ಟಿಯ
ಹಣಿತದಲಿ ಮುರಿದಿದಿರನಗಲಕೆ
ಕುಣಿವ ಚೌಪಟ ಬೊಮ್ಮಗಜವಿದನರಿವರಾರೆಂದ ॥15॥

೦೧೬ ಕೊಲೆಯ ಕವತೆಯ ...{Loading}...

ಕೊಲೆಯ ಕವತೆಯ ಕನಸಿನಲಿ ಕಳ
ವಳಿಸಿದರೆ ದಿಟವೇ ಮನೋರಥ
ಫಲವನನುಭವಿಸಿದರೆಯನುಭವ ಸಿದ್ಧವೇ ತನಗೆ
ಹೊಳೆವ ಜಗದಲಿ ಹೊಳೆದು ತನ್ನೊಳ
ಗಳಿದು ತಾನಾಗುಳಿದ ಬೊಮ್ಮಕೆ
ಹಳಿವು ಹೊರುವುದೆ ನಿತ್ಯಶುದ್ಧನೊಳೆಂದನಾ ಭೀಷ್ಮ ॥16॥

೦೧೭ ನೋಟ ಸುತ್ತಲು ...{Loading}...

ನೋಟ ಸುತ್ತಲು ಬೇಹುದೇ ಹರಿ
ದಾಟವಗಲಕೆ ಬಳಕೆಯಲಿ ಮಾ
ತಾಟ ಸುಳಿವಿನೊಳಗ್ಗಳದ ಹಿಡಿಬಂಧಿ ಹರಹಿನಲಿ
ಬೇಟದಲಿ ಮೂವಣ್ಣದಾಬೆಯ
ಕೂಟದಲಿ ಕುರುಹಾಗಿ ಮಿಗೆ ನಿ
ರ್ಲೋಟಿಸುವ ನಿಜ ದಿಟ್ಟ ಬೊಮ್ಮವಿದೆಂದನಾ ಭೀಷ್ಮ ॥17॥

೦೧೮ ಭೂತ ಭವ್ಯ ...{Loading}...

ಭೂತ ಭವ್ಯ ಭವತ್ಪ್ರಧಾನ
ಖ್ಯಾತ ತತ್ವಪ್ರಕೃತಿ ಪೂರುಷ
ನೀತ ಸಚ್ಚಿನ್ಮಾತ್ರನೀತನು ಪರಶಿವಾತ್ಮಕನು
ಸೋತ ನುಡಿ ಮನದೊಡನೆ ಮರಳಿದ
ಡಾತ ಸತ್ಯಜ್ಞಾನಮಯ ನಿ
ರ್ಧೂತ ಮಾಯಾತೀತನೀ ಹರಿಯೆಂದನಾ ಭೀಷ್ಮ ॥18॥

೦೧೯ ಯಜ್ಞದಧಿಪತಿಯೀತನೀತನು ...{Loading}...

ಯಜ್ಞದಧಿಪತಿಯೀತನೀತನು
ಯಜ್ಞಪುರುಷನು ಸ್ರುಕ್ ಸ್ರುವಾದೀ
ಯಜ್ಞ ಸಾಧನನೀತನೀತನು ಮಂತ್ರ ಕಾಲಾತ್ಮ
ಯಜ್ಞವೀತನು ಕರ್ಮವೀತನು
ಯಜ್ಞದಲಿ ಯಜಮಾನನೀತನು
ಯಜ್ಞಫಲವೀ ದೇವಕೀ ಸುತನೆಂದನಾ ಭೀಷ್ಮ ॥19॥

೦೨೦ ದೆಸೆ ಪರಿಚ್ಛೇದಿಸದ ...{Loading}...

ದೆಸೆ ಪರಿಚ್ಛೇದಿಸದ ನುಡಿ ಹವ
ಣಿಸದ ಕಲ್ಪ ಸಹಸ್ರ ಕೋಟಿಯೊ
ಳಸಮಸೆಯ ಮಾಡದ ಮಹತ್ವದೊಳುರು ಮಹತ್ವದಲಿ
ಎಸೆವನಣುವಿಂಗಣುವೆನಿಸಿ ನಿ
ರ್ಮಿಸಿ ವಿಭಾಡಿಸಿ ಬರವಳಿದು ಹೆ
ಚ್ಚಿಸಿ ಮುರಿದನೀ ಜಗವನೀ ಹರಿಯೆಂದನಾ ಭೀಷ್ಮ ॥20॥

೦೨೧ ಒನ್ದೆನಿಸಿ ತೋರುವನು ...{Loading}...

ಒಂದೆನಿಸಿ ತೋರುವನು ಎರಡರೊ
ಳೊಂದಿ ಮೆರೆವನು ಮೂರು ನೆಲೆಯಲಿ
ನಿಂದು ನಾಲ್ಕನು ಬಳಸಿ ವಿಭುವಾಗೈದು ಠಾಣದಲಿ
ಹಿಂದೆ ಮುಂದೆಡಬಲದ ಬಹು ವಿಧ
ದಿಂದ ಮಾಯಾ ಗುಪ್ತನಾಗಿ ಮು
ಕುಂದ ತೋರುವನೀತನಂತೆಯನರಿವರಾರೆಂದ ॥21॥

೦೨೨ ದ್ವಿಜರು ಮುಖದಲಿ ...{Loading}...

ದ್ವಿಜರು ಮುಖದಲಿ ಭೂಪರೀತನ
ಭುಜದಲಾದರು ನಿಖಿಳ ವೈಶ್ಯ
ವ್ರಜ ಘನೋರುಗಳಿಂದ ಶೂದ್ರರು ಪಾದಪದ್ಮದಲಿ
ದ್ವಿಜಪತಿಸ್ಸ್ವಾಂತದಲಿ ವರವಾ
ರಿಜಸಖನು ಕಣ್ಣಿನಲಿ ವದನಾಂ
ಬುಜದಲಿಂದ್ರಾದಿಗಳು ಜನಿಸಿದರೆಂದನಾ ಭೀಷ್ಮ ॥22॥

೦೨೩ ಗಗನವೀತನ ನಾಭಿ ...{Loading}...

ಗಗನವೀತನ ನಾಭಿ ದಶದಿ
ಕ್ಕುಗಳು ಕಿವಿ ಫಣಿಲೋಕ ವಿಮಳಾಂ
ಘ್ರಿಗಳು ಧ್ರುವನಿಂ ಮೇಲು ಭಾಗ ಮುರಾಂತಕನ ಮುಕುಟ
ಗಗನ ಮಣಿ ಶಂಕರ ವಿರಿಂಚಾ
ದಿಗಳು ದೇವನ ರೋಮ ಕೂಪದೊ
ಳಗಣಿತಾಮರ ನಿಕರವಿಹುದಿದನರಿವರಾರೆಂದ ॥23॥

೦೨೪ ಪ್ರಳಯದಲಿ ಧರೆ ...{Loading}...

ಪ್ರಳಯದಲಿ ಧರೆ ಕರಗುವುದು ಜಲ
ದೊಳಗೆ ತಜ್ಜಲವಡಗುವುದು ಶಿಖಿ
ಯೊಳಗೆ ತತ್ಪಾವಕನು ಪವನನೊಳಾತನಭ್ರದಲಿ
ಬಳಿಕ ಹಂಸತ್ವದಲಿ ಗಗನವೆ
ನಿಲುಗು ಹಮ್ಮು ಮಹತ್ವದಲಿ ಮಹ
ದಳಿವು ಮಾಯೆಯೊಳಾಕೆಯಡಗುವಳೀತನಂಘ್ರಿಯಲಿ ॥24॥

೦೨೫ ಧರಣಿ ತಾನೈವತ್ತು ...{Loading}...

ಧರಣಿ ತಾನೈವತ್ತು ಕೋಟಿಯ
ಹರಹು ಭೂಮಿಗೆ ಹತ್ತು ಮಡಿ ಖ
ರ್ಪರ ಕಟಾಹವದಕ್ಕೆ ದಶಗುಣ ದಶ ಗುಣೋತ್ತರದ
ಪರಿವಿಡಿಯಲುದಕಾಗ್ನಿ ರವಿ ಪು
ಷ್ಕರದ ಹಮ್ಮು ಮಹತ್ವ ಸಪ್ತಾ
ವರಣವೀ ಬ್ರಹ್ಮಾಂಡವೀತನ ರೋಮ ರೋಮದಲಿ ॥25॥

೦೨೬ ದೇವರಙ್ಗೋಪಾಙ್ಗದಲಿ ವೇ ...{Loading}...

ದೇವರಂಗೋಪಾಂಗದಲಿ ವೇ
ದಾವಳಿಗಳುಚ್ಛ್ವ್ವಾಸದಲಿ ತೀ
ರ್ಥಾವಳಿಗಳಂಘ್ರಿ ದ್ವಯಾಂಬುಜ ಮಾಕರಂದದಲಿ
ಪಾವನಕೆ ಪಾವನನು ಜೀವರ
ಜೀವನನು ಮೃತ್ಯುವಿಗೆ ಮೃತ್ಯುವಿ
ದಾವ ಲೆಕ್ಕದೊಳೀತನಹನೆಂದರಿವರಾರೆಂದ ॥26॥

೦೨೭ ವಿಶ್ವಶಿಲ್ಪದ ಕುಶಲ ...{Loading}...

ವಿಶ್ವಶಿಲ್ಪದ ಕುಶಲ ಹಸ್ತನು
ವಿಶ್ವರಕ್ಷೆಯು ಮಂತ್ರವಾದಿಯು
ವಿಶ್ವ ಸಮಿಧೆಗಳಗ್ನಿ ಕಾರ್ಯದ ಬೊಮ್ಮಚಾರಿ ವಟು
ವಿಶ್ವನಾಟಕ ಸೂತ್ರಧಾರನು
ವಿಶ್ವ ವಿಸ್ಮಯದೈಂದ್ರ ಜಾಲಕ
ವಿಶ್ವದಂತಸ್ಸ್ಯೂತ ಚೇತನನೀತ ನೋಡೆಂದ ॥27॥

೦೨೮ ಇರಲಿರಲು ಕಲ್ಪಾವಸಾನಕೆ ...{Loading}...

ಇರಲಿರಲು ಕಲ್ಪಾವಸಾನಕೆ
ಬಿರಿದುದೀ ಬ್ರಹ್ಮಾಂಡ ಬಹಿರಾ
ವರಣ ಜಲವೀ ಜಲದೊಳೊಂದಾಯ್ತೇಕ ರೂಪಾಗಿ
ಹರಿ ವಿನೋದದಲೊಬ್ಬನೇ ಸಂ
ಚರಿಸುತ್ತಿದ್ದನು ಬಳಿಕ ಕಾಲಾಂ
ತರದೊಳಗೆ ಮಧು ಕೈಟಭರು ಜನಿಸಿದರು ಕರ್ಣದಲಿ ॥28॥

೦೨೯ ಲೀಲೆಯಲಿ ಬಳಿಕವದಿರೊಡನೆ ...{Loading}...

ಲೀಲೆಯಲಿ ಬಳಿಕವದಿರೊಡನೆ ವಿ
ತಾಳಿಸಿತು ಮನ ಕಾದಿದರು ಬಲು
ಕಾಳಗವನವರಿತ್ತ ವರದಲಿ ಹಿಡಿದು ದಾನವರ
ಸೀಳಿ ಬಿಸುಟನು ಖಳರ ಮೇದ
ಸ್ಸಾಳಿ ಮುಳುಗಿತು ಜಲದೊಳದರಿಂ
ಮೇಲುವೆಸರಾಯ್ತಿಳೆಗೆ ಮೇದಿನಿಯೆಂಬ ನಾಮದಲಿ ॥29॥

೦೩೦ ಆ ಮಧುವನಾ ...{Loading}...

ಆ ಮಧುವನಾ ಕೈಟಭನ ಮುರಿ
ದೀ ಮಹಾತ್ಮಕನೊಡನೆ ವಾದಿಸು
ವೀ ಮರುಳನೇನೆಂಬೆನೈ ಶಿಶುಪಾಲ ಬಾಲಕನ
ಕಾಮರಿಪು ಕಲ್ಪಾಂತ ವಹ್ನಿ
ವ್ಯೋಮರೂಪನುದಾರ ಸಗುಣ ಸ
ನಾಮ ಚಿನ್ಮಯನೀತನೀತನನರಿವರಾರೆಂದ ॥30॥

೦೩೧ ಶ್ರುತಿ ಪುರಾಣ ...{Loading}...

ಶ್ರುತಿ ಪುರಾಣ ಸಮಸ್ತ ಶಾಸ್ತ್ರ
ಸ್ಮೃತಿ ವಿಭಾಗಾರ್ಥಕೆ ವಸಿಷ್ಠನ
ಸುತ ಸುತನಲೀ ವಿಮಲ ವೇದವ್ಯಾಸ ನಾಮದಲಿ
ವ್ರತಿಜನೋತ್ತಮನುದಿಸಿದನು ಯದು
ಪತಿ ಕಣಾ ತಾನೀತನೀ ದು
ರ್ಮತಿಗೆ ಗಮ್ಯವೆ ಗರುವ ದೈವದ ಗಾಢಗತಿಯೆಂದ ॥31॥

೦೩೨ ಮನುವರಿವನಜ ಬಲ್ಲನೀಶ್ವರ ...{Loading}...

ಮನುವರಿವನಜ ಬಲ್ಲನೀಶ್ವರ
ನೆನೆವ ನಾರದ ಮುನಿಪ ವರ್ಣಿಪ
ಮನದಿ ಸನಕ ಸನತ್ಸುಜಾತಾದ್ಯರಿಗಿದೇ ವ್ಯಸನ
ಮುನಿಗಳಿಗೆ ಮುಕ್ತರಿಗೆ ಕರ್ಮದ
ಕಣಿಗಳಿಗೆ ಕೋವಿದರಿಗಿದೆ ಜೀ
ವನವಿದೇ ಗತಿ ಪರಮ ವೈಷ್ಣವ ತತ್ವವಿದೆಯೆಂದ ॥32॥

೦೩೩ ವೇದಕೀಸುಬ್ಬಸ ವಿರಿಞ್ಚ ...{Loading}...

ವೇದಕೀಸುಬ್ಬಸ ವಿರಿಂಚ ಸು
ರಾದಿಗಳು ಕಿಗ್ಗಡಲಲಿರೆ ಸನ
ಕಾದಿ ಮುನಿಗಳು ತಡಿಯಲಿದ್ದರು ತೆರೆಯ ಹೊಯ್ಲಿನಲಿ
ವಾದಿಗಳ ದುಸ್ತರ್ಕ ನಸಿದುದು
ನಾದದಲಿ ದುಸ್ತರ ಮುರಾರಿ ಮ
ಹೋದಧಿಯನೀ ಬಣಗು ದಾನವ ಭಂಗಿಸುವನೆಂದ ॥33॥

೦೩೪ ಅಕಟ ನಿರ್ಗುಣ ...{Loading}...

ಅಕಟ ನಿರ್ಗುಣ ತತ್ವವಿದೆ ನಾ
ಟಕದ ಬಹುರೂಪಿನಲಿ ವಿಶ್ವಾ
ತ್ಮಕ ಪರಾನಂದೈಕರಸವಿದೆ ಮನೆಯ ಕೇರಿಯಲಿ
ಪ್ರಕಟ ಮಾಯಾ ಗುಪ್ತ ಪರಮಾ
ತ್ಮಕ ಮಹಾನಿಧಿ ಸಭೆಯೊಳಿರುತಿರೆ
ವಿಕಳ ಮತಿಗಳು ವೀಚುಗೆಡುವರು ಶಿವ ಶಿವಾಯೆಂದ ॥34॥

೦೩೫ ನಿರವಯವ ತತ್ವೈಕ ...{Loading}...

ನಿರವಯವ ತತ್ವೈಕ ರಸವಿದೆ
ನರ ಮನೋಹರ ರೂಪಿನಲಿ ವ್ಯವ
ಹರಣ ಸಂಜ್ಞಾರಹಿತವಿದೆ ಕೃಷ್ಣಾಭಿಧಾನದಲಿ
ಭರಿತ ಬಹಳ ಬ್ರಹ್ಮವಿಲ್ಲಿಯೆ
ಧರಣಿಯಲಿ ಸಂಚರಿಸುತಿದೆ ಮುರ
ಹರನ ತತ್ವರಹಸ್ಯ ಮುದ್ರೆಯನರಿವರಾರೆಂದ ॥35॥

೦೩೬ ಏಕೆ ಕನ್ನಡಿ ...{Loading}...

ಏಕೆ ಕನ್ನಡಿ ಕುರುಡರಿಗೆ ತಾ
ನೇಕೆ ಸಾಳಗ ಶುದ್ಧ ಬಧಿರರಿ
ಗೇಕೆ ಮೂರ್ಖ ಸಮಾಜದಲಿ ಸಾಹಿತ್ಯ ಸನ್ನಾಹ
ಏಕೆ ಖಳರಿಗೆ ನಯ ವಿಧಾನ
ವ್ಯಾಕರಣ ಪಾಂಡಿತ್ಯ ಘಡ ಲೋ
ಕೈಕ ಪಾತಕನೆಂದು ನುಡಿದನು ಜರೆದು ದಾನವನ ॥36॥

೦೩೭ ಹೊಗಳಿ ದಣಿಯವು ...{Loading}...

ಹೊಗಳಿ ದಣಿಯವು ವೇದತತಿ ಕೈ
ಮುಗಿದು ದಣಿಯರು ಕಮಲಭವ ಭವ
ರೊಗುಮಿಗೆಯ ಮಾನಸ ಸಮಾಧಿಯ ಸಾರ ಸತ್ವದಲಿ
ಬಗೆದು ದಣಿಯರು ಯೋಗಿಗಳು ಕೈ
ಮುಗುಚಿ ದಣಿಯರು ಕರ್ಮಿಗಳು ಮೂ
ಜಗದ ದೈವದ ದೈವ ಕೃಷ್ಣನ ಬೈವನಿವನೆಂದ ॥37॥

೦೩೮ ಈತ ಕಾಣಿರೆ ...{Loading}...

ಈತ ಕಾಣಿರೆ ಘನ ಚರಾಚರ
ಚೇತನತ್ವದಿ ವಿಹಿತ ಬೀಜ
ವ್ರಾತವನು ತುಂಬಿದನು ಪಡಗಿನೊಳೌಕಿ ಬಾಲ್ಯದಲಿ
ಆತ ತಮನೆಂಬಸುರನನು ಕರ
ಘಾತಿಯಿಂದವೆ ಕೆಡಹಿ ವೇದವ
ನೀತ ತಂದನು ಮತ್ಸ್ಯರೂಪಿನೊಳೆಂದನಾ ಭೀಷ್ಮ ॥38॥

೦೩೯ ಖೂಳ ನಾಯ್ಗಳು ...{Loading}...

ಖೂಳ ನಾಯ್ಗಳು ಬಲ್ಲರೇ ಶಿಶು
ಪಾಲಕಾದಿ ದೊಠಾರರೀ ಗೋ
ಪಾಲ ಕಾಣಿರೆ ಕೂರ್ಮವೇಷವ ಧರಿಸಿ ಮೇದಿನಿಯ
ಸಾಲ ಹೆಡೆಯಲಿ ಹೊತ್ತ ಪನ್ನಗ
ಪಾಲಕನನಾ ಮಂದರದ ಕಡ
ಗೋಲನಾಂತ ಮಹಾತ್ಮನೀತನನರಿವರಾರೆಂದ ॥39॥

೦೪೦ ಇವನ ಪಾಡೇ ...{Loading}...

ಇವನ ಪಾಡೇ ಮುನ್ನ ಕೃತಯುಗ
ದವರೊಳಧಿಕ ಹಿರಣ್ಯಲೋಚನ
ನವನಿಯನು ಕೊಂಡೋಡಿ ಹೊಕ್ಕನು ಘನ ರಸಾತಳವ
ಅವನ ಬೆಂಬತ್ತಿದನು ಯಜ್ಞ
ಪ್ರವರ ದೇಹನು ವೇದಮಯ ನಿ
ರ್ಭವ ವಿಮೋಹನ ಘನ ವರಾಹನೆ ಕೃಷ್ಣ ತಾನೆಂದ ॥40॥

೦೪೧ ತೂಳಿದನು ದಣ್ಡೆಯಲಿ ...{Loading}...

ತೂಳಿದನು ದಂಡೆಯಲಿ ದೈತ್ಯನ
ಸೀಳಿದನು ದಿಕ್ಕರಿ ಫಣೀಂದ್ರರ
ಮೇಲೆ ಧರಣಿಯ ನಿಲಿಸಿದನು ಸಂತವಿಸಿದನು ಜಗವ
ಹೇಳಲಜ ರುದ್ರಾಮರೇಂದ್ರರ
ತಾಳಿಗೆಗಳೊಣಗಿದವು ಭಂಗಿ ಛ
ಡಾಳಿಸಿತಲಾ ಚೈದ್ಯ ಭೂಪತಿಗೆಂದನಾ ಭೀಷ್ಮ ॥41॥

೦೪೨ ಆ ಹಿರಣ್ಯಾಕ್ಷನ ...{Loading}...

ಆ ಹಿರಣ್ಯಾಕ್ಷನ ಸಹೋದರ
ನೀ ಹರಿಯನವಗಡಿಸಿ ದೈವ
ದ್ರೋಹಿ ಬಹುವಿಧ ವ್ಯಥೆಗಳಲಿ ಬೇಸರಿಸಿದನು ಮಗನ
ಆಹವದಲಚ್ಯುತ ಮುಕುಂದ ಮ
ಹಾಹಿತಲ್ಪ ಮಹೇಂದ್ರವಂದ್ಯ
ತ್ರಾಹಿಯೆಂದನವರತ ತುತಿಸಿದನಂದು ಪ್ರಹ್ಲಾದ ॥42॥

೦೪೩ ಕಾದುದೀತನ ನಾಮವಾ ...{Loading}...

ಕಾದುದೀತನ ನಾಮವಾ ಪ್ರ
ಹ್ಲಾದನಾಸರು ಬೇಸರನು ಬಳಿ
ಕೀ ದಯಾಂಬುಧಿ ದನುಜಪತಿ ದಿಟ್ಟಿಸಿದ ಕಂಬದಲಿ
ಆದುದಾವಿರ್ಭಾವ ಸಿಡಿಲಿನ
ಸೋದರದ ಕಣ್ಣುಗಳ ಭಾಳದ
ಬೀದಿಗಿಚ್ಚಿನ ರೌದ್ರದಲಿ ನರಸಿಂಹ ರೂಪಾಗಿ ॥43॥

೦೪೪ ಉಗುರೊಳಸುರನ ಕರುಳ ...{Loading}...

ಉಗುರೊಳಸುರನ ಕರುಳ ದಂಡೆಯ
ನುಗಿದು ಕೊರಳಲಿ ಹಾಯ್ಕಿ ದೈತ್ಯನ
ಮಗನ ಪತಿಕರಿಸಿದನು ತತ್ಕ್ರೋಧಾಗ್ನಿ ಪಲ್ಲವಿಸಿ
ಭುಗಿ ಭುಗಿಲ್ ಭುಗಿಲೆಂದು ಕಬ್ಬೊಗೆ
ನೆಗೆಯಲುರಿ ಹೊಡೆದಬುಜಜಾಂಡದ
ಬಗರಗೆಯ ಭೇದಿಸಿತು ಈತನ ಕೆಣಕಬೇಡೆಂದ ॥44॥

೦೪೫ ತ್ರೇತೆಯಲಿ ಬಲಿರಾಜ್ಯ ...{Loading}...

ತ್ರೇತೆಯಲಿ ಬಲಿರಾಜ್ಯ ಭುವನ
ಖ್ಯಾತವಾಯ್ತು ತದಶ್ವಮೇಧದೊ
ಳೀತ ವಾಮನನಾಗಿ ಯಾಚಿಸಿದನು ಪದತ್ರಯವ
ಭೂತಳವನಲ್ಲಿಂದ ಬಳಿಕ
ಪ್ರೀತಿಯಲಿ ಕಮಲಜ ಕಟಾಹೋ
ದ್ಭೂತ ಚರಣದೊಳಳೆಯಲಾದುದು ಧರಣಿ ಪದಯುಗಕೆ ॥45॥

೦೪೬ ನೆರೆಯದೀ ನೆಲ ...{Loading}...

ನೆರೆಯದೀ ನೆಲ ನೆಗಹಿದಂಘ್ರಿಗೆ
ಮುರಿದುದಬುಜ ಭವಾಂಡ ಖರ್ಪರ
ದೊರತೆ ಬಹಿರಾವರಣ ಜಲ ಗಂಗಾಭಿಧಾನದಲಿ
ಎರಗಿತೀ ಗೋವಿಂದನಾರೆಂ
ದರಿಯೆಲಾ ಹರಿಯೊಡನೆ ಜಂಬುಕ
ನೊರಲಿದರೆ ನಾನೇನ ಹೇಳುವೆನೆಂದನಾ ಭೀಷ್ಮ ॥46॥

೦೪೭ ರಾಯ ಕೇಳೈ ...{Loading}...

ರಾಯ ಕೇಳೈ ವಿಮಲ ದತ್ತಾ
ತ್ರೇಯವೆಸರಲಿ ಧರ್ಮವನು ಪೂ
ರಾಯದಲಿ ಪಲ್ಲವಿಸಿದನು ಹೈಹಯನ ರಾಜ್ಯದಲಿ
ಬಾಯಿಬಡಿಕರು ಬಗುಳಿದರೆ ಹರಿ
ಯಾಯತಿಕೆ ಪಾಸಟಿಯೆ ನಿಗಮದ
ಬಾಯ ಬೀಯಗವೀ ಮುಕುಂದನನರಿವರಾರೆಂದ ॥47॥

೦೪೮ ಮಿಡುಕಿದರೆ ರಾವಣನ ...{Loading}...

ಮಿಡುಕಿದರೆ ರಾವಣನ ಸೆರೆಯಲಿ
ಕೆಡೆಹಿದನಲಾ ಕಾರ್ತವೀರ್ಯನ
ಕಡುಹನಾನುವ ದಿಟ್ಟರುಂಟೇ ದೇವ ದೈತ್ಯರಲಿ
ತೊಡಕಿದರೆ ಬಳಿಕಾ ನೃಪನ ತೋ
ಳಡವಿಗಡಿದು ಮಹೀಶ ವಂಶವ
ತಡೆಗಡಿದನೀ ಕೊಡಲಿಕಾರನ ತೋಟಿ ಬೇಡೆಂದ ॥48॥

೦೪೯ ಖರನ ತ್ರಿಶಿರನ ...{Loading}...

ಖರನ ತ್ರಿಶಿರನ ದೂಷಣಾದ್ಯರ
ಶಿರವ ಚೆಂಡಾಡಿದನು ಘನ ಸಾ
ಗರವ ಕಟ್ಟಿದ ಕಟ್ಟಡಯಿದಲಾ ಕಾಣದೇ ಲೋಕ
ಹರಿಬವೋ ಮೇಣ್ ಪೌರುಷವೊ ಮ
ತ್ಸರವೊ ಮೇಣ್ ಮಾರಾಂಕವೋ ಹುಲು
ಮೊರಡಿ ಸೆಣಸುವುದೇ ಸುರಾದ್ರಿಯೊಳೆಂದನಾ ಭೀಷ್ಮ ॥49॥

೦೫೦ ಆವುದನ್ತರವಿವಗೆ ಹಿನ್ದಣ ...{Loading}...

ಆವುದಂತರವಿವಗೆ ಹಿಂದಣ
ರಾವಣನೊಳವಗಡಿಸಿಯಾತನ
ಮಾವನನು ಮುರಿದವನ ತಂಗಿಯ ಮೂಗ ಭಂಗಿಸಿದ
ದೇವ ದಲ್ಲಣನಿಂದ್ರವಿಜಯ ಸು
ರಾವಳಿಯ ದೆಸೆಪಟರೆನಿಪ ದೈ
ತ್ಯಾವಳಿಯ ಕಡಿ ಖಂಡದೊಟ್ಟಿಲ ರಾಮ ನೋಡೆಂದ ॥50॥

೦೫೧ ಹರ ಗಿರಿಯನೊಡಯೆತ್ತಿದುಬ್ಬಟೆ ...{Loading}...

ಹರ ಗಿರಿಯನೊಡಯೆತ್ತಿದುಬ್ಬಟೆ
ಯರಸಲಾ ದಶವದನನಾತನ
ಶಿರದುಪಾರವನಿಟ್ಟು ದಣಿಸನೆ ದೆಸೆಯ ದೇವಿಯರ
ಬರಡನಿವನೀ ದೈವದೊಡನು
ಬ್ಬರಿಸಿದೊಡೆಯೀ ಇಬ್ಬರಭ್ಯಂ
ತರವನಿವರರಿಯರೆ ಮುನೀಂದ್ರರು ಶಿವ ಶಿವಾಯೆಂದ ॥51॥

೦೫೨ ಹಿನ್ದೆ ಕೃತಯುಗ ...{Loading}...

ಹಿಂದೆ ಕೃತಯುಗ ಸಮಯದಲಿ ಸುರ
ವೃಂದದೊಡನಸುರರಿಗೆ ಕೊಂಡೆಯ
ದಿಂದ ಮಸೆಮಸೆದಂಕವಾಯಿತು ಖಳನ ಕಾಳಗಕೆ
ಬಂದುದಾ ತೆತ್ತೀಸ ಕೋಟಿಗ
ಳೊಂದು ದೆಸೆ ಜಂಭಾದಿ ದಾನವ
ರೊಂದು ದೆಸೆ ಹೊಯ್ದಾಡಿತೇನೆಂಬೆನು ಮಹಾದ್ಭುತವ ॥52॥

೦೫೩ ಆವರೊಳಗ್ಗದ ಕಾಲನೇಮಿ ...{Loading}...

ಆವರೊಳಗ್ಗದ ಕಾಲನೇಮಿ
ಪ್ರವರನಮರವಿಭಾಡ ವರ ದಾ
ನವಶಿರೋಮಣಿ ದಿವಿಜನಾಯಕ ಶರಭಭೇರುಂಡ
ಬವರದಲಿ ಶಕ್ರಾಗ್ನಿ ಯಮ ಶಶಿ
ರವಿ ಕುಬೇರ ಸಮೀರಣಾದ್ಯರ
ಸವರಿ ಸಪ್ತಾಂಗವನು ಕೊಂಡನು ಮೇಘವಾಹನನ ॥53॥

೦೫೪ ರಣದೊಳೋಡಿದ ಸುರನಿಕರ ...{Loading}...

ರಣದೊಳೋಡಿದ ಸುರನಿಕರ ಘ
ಲ್ಲಣೆಯನಿಕ್ಕಿತು ಹರಿಗೆ ಕರೆ ಹ
ಲ್ಲಣಿಸು ಗರುಡನನೆಂದು ಹೊರವಂಟನು ಮುರಧ್ವಂಸಿ
ಕೆಣಕಿದನು ದಾನವನನಾಗಳೆ
ಹಣಿದವನ ಹೊಯ್ದಮಳ ಚಕ್ರದ
ಗೊಣೆಯದಲಿ ಮೆರೆಸಿದನು ತಲೆಯನು ದಿವಿಜ ನಗರಿಯಲಿ ॥54॥

೦೫೫ ಆ ಮಹಾಸುರ ...{Loading}...

ಆ ಮಹಾಸುರ ಕಾಲನೇಮಿ ಸ
ನಾಮನೀ ಕಾಲದಲಿ ಯಾದವ
ಭೂಮಿಯಲಿ ಜನಿಸಿದನಲೇ ಕಂಸಾಭಿಧಾನದಲಿ
ಈ ಮರುಳು ಹವಣೇ ತದೀಯ
ಸ್ತೋಮ ಧೇನುಕ ಕೇಶಿ ವತ್ಸ ತೃ
ಣಾಮಯರು ಹಲರಿಹರು ದುಷ್ಪರಿವಾರ ಕಂಸನಲಿ ॥55॥

೦೫೬ ಸೇದಿದನು ಪೂತನಿಯಸುವನವ ...{Loading}...

ಸೇದಿದನು ಪೂತನಿಯಸುವನವ
ಳಾದರಿಸಿ ಮೊಲೆವಾಲನೂಡಿಸೆ
ಪಾದತಳ ಸೋಕಿನಲಿ ತೊಟ್ಟಿಲ ಬಂಡಿ ನುಗ್ಗಾಯ್ತು
ಸೇದಿ ಕಟ್ಟಿದ್ದೊರಳನೆಳೆದರೆ
ಬೀದಿಯಲಿ ಮರ ಮುರಿದುದೀ ಕರು
ಗಾದವನ ಕೈಯಿಂದ ಮಡಿದುದು ಕಂಸ ಪರಿವಾರ ॥56॥

೦೫೭ ಕೇಶಿ ಧೇನುಕ ...{Loading}...

ಕೇಶಿ ಧೇನುಕ ವತ್ಸ ಲಂಬ ಬ
ಕಾಸುರನು ತೃಣವರ್ತನಘನೆಂ
ಬಾ ಸಮರ್ಥರ ಸೀಳಿ ಬಿಸುಟನು ಬಾಲಕೇಳಿಯಲಿ
ಗಾಸಿಯಾದುದು ದಂತಿ ಮಲ್ಲರ
ದೇಸು ಘನ ಮಾವನನು ಮರ್ದಿಸಿ
ಮೀಸಲಳಿಯದ ದಿವಿಜ ಕನ್ನೆಯರೊಡನೆ ಜೋಡಿಸಿದ ॥57॥

೦೫೮ ಇವನ ಹವಣೇ ...{Loading}...

ಇವನ ಹವಣೇ ತ್ರಿಪುರಹತ ದಾ
ನವರು ಶುಂಭ ನಿಶುಂಭವೆಸರಿಂ
ದವನಿಯಲಿ ಜನಿಸಿದರು ನಭದಲಿ ರಚಿಸಿದರು ಪುರವ
ಅವದಿರುರೆಯಾಳಿದರು ನಿರ್ಜರ
ನಿವಹವನು ಬಳಿಕವರನೊಂದೇ
ಬವರದಲಿ ಕೆಡಹಿದನು ಕೃಷ್ಣನನರಿವರಾರೆಂದ ॥58॥

೦೫೯ ಮುರನ ನರಕನ ...{Loading}...

ಮುರನ ನರಕನ ಹಂಸ ಡಿಬಿಕರ
ವರ ಸೃಗಾಲನ ದಂತವಕ್ರನ
ದುರುಳ ಪೌಂಡ್ರಕ ಪಂಚಜನ ಶುಂಭನ ನಿಶುಂಭಕನ
ಅರಿ ಹಯಗ್ರೀವಕನ ಸಾಲ್ವನ
ನೊರಸಿದನಲಾ ನಿನ್ನ ಪಾಡಿನ
ದುರುಳರೇ ದೈತ್ಯೇಂದ್ರರೀತನ ಕೆಣಕಿದವರೆಂದ ॥59॥

೦೬೦ ತೋಳು ಸಾವಿರವಮರಪತಿ ...{Loading}...

ತೋಳು ಸಾವಿರವಮರಪತಿ ತೆರು
ವಾಳಿನೊಕ್ಕಲು ಕಂತುಕದ ವೈ
ಹಾಳಿ ಪಾತಾಳದಲಿ ಸಪ್ತದ್ವೀಪ ಮನೆ ತನಗೆ
ಶೂಲಿ ಬಾಗಿಲ ಕಾಯ್ವನೀಸು ಚ
ಡಾಳಿಸಿದ ಸಿರಿಯಾರಿಗಾತನ
ತೋಳಡವಿಯನು ನಿನ್ನೆ ತರಿದನು ಕೃಷ್ಣ ನೋಡೆಂದ ॥60॥

೦೬೧ ಆ ಯುಗದಲಾ ...{Loading}...

ಆ ಯುಗದಲಾ ಯುಗದಲನಿಬರು
ಬೀಯವಾದರು ದೈತ್ಯ ದಾನವ
ರೀ ಯುಗದಲೆನಿತಸುರರನಿಬರು ದುಷ್ಟ ದಾನವರು
ರಾಯರನಿಬರು ದಿವಿಜ ರಾಯನ
ಲಾಯದಲಿ ಲಂಬಿಸಿದರಾ ತರು
ವಾಯ ನಿನಗೀಗಳೆ ವಿಘಾತದೊಳೆಂದನಾ ಭೀಷ್ಮ ॥61॥

೦೬೨ ಇಙ್ಗಿತದಲರಿವುದು ಮಹಾತ್ಮರಿ ...{Loading}...

ಇಂಗಿತದಲರಿವುದು ಮಹಾತ್ಮರಿ
ಗಂಗವಿದು ಮಧ್ಯಮರು ಕರ್ಣ ಪ
ಥಂಗಳಲಿ ಗೋಚರಿಸಲರಿವುದು ಲೋಕ ವೃತ್ತಿಯಿದು
ಕಂಗಳಲಿ ಕಂಡರಿವರಧಮರು
ಕಂಗಳಲಿ ಕಿವಿಗಳಲಿ ಮೇಣ್ ಹರಿ
ಯಿಂಗಿತವನರಿಯದ ಜಡಾತ್ಮನು ಚೈದ್ಯ ನೃಪನೆಂದ ॥62॥

೦೬೩ ಎಲೆ ಪಿತಾಮಹ ...{Loading}...

ಎಲೆ ಪಿತಾಮಹ ನೀವು ನಿಗಮ
ಸ್ಥಳ ರಹಸ್ಯವನುಪನಿಷತ್ಸಂ
ಕುಳ ವಚೋಭಿಪ್ರಾಯ ಪೀಯೂಷವನು ಬೀರಿದರೆ
ಖಳರಿಗತಿ ದರ್ಪಜ್ವರ ಪ್ರ
ಜ್ವಲಿತರಿಗೆ ಸೊಗಸುವುದೆ ಬೆಳದಿಂ
ಗಳು ವಿಯೋಗಿಗೆ ವಿಷಮವೆಂದನು ನಗುತ ಸಹದೇವ ॥63॥

೦೬೪ ಕೇಳಿರೈ ನೆರೆದಖಿಳ ...{Loading}...

ಕೇಳಿರೈ ನೆರೆದಖಿಳ ಧರಣೀ
ಪಾಲರಿಗೆ ಕೈ ಮುಗಿದೆವೀ ಗೋ
ಪಾಲನೆಮ್ಮಾಚಾರ್ಯ್ಸನೆಮ್ಮಯ ತಂದೆ ಗುರುವೆಮಗೆ
ಲಾಲಿಸಿದೆವರ್ಚಿಸಿದೆವೀತನ
ಮೇಲೆ ಮುಳಿಸುಂಟಾದೊಡೆನ್ನೊಡ
ನೇಳಲಾತನ ಗಂಡನೆಂದೊದೆದನು ಮಹೀತಳವ ॥64॥

೦೬೫ ಚೆಲ್ಲಿದವು ಸಹದೇವ ...{Loading}...

ಚೆಲ್ಲಿದವು ಸಹದೇವ ಶಿರದಲಿ
ಮಲ್ಲಿಗೆಯ ಮೊಗ್ಗೆಗಳ ಮಳೆ ನಭ
ದಲ್ಲಿ ದನಿಯಾಯ್ತುಹುದಲೇ ಸಹದೇವ ಲೇಸೆನುತ
ಭುಲ್ಲವಿಸಿದರು ಋಷಿಗಳಪ್ರತಿ
ಮಲ್ಲದೈವದ ನೆಲೆಯನರಿಯದ
ಖುಲ್ಲ ಭೂಪರು ಮಸಗಿದರು ಗುಜುಗುಜಿನ ಗಾಢದಲಿ ॥65॥

+೦೯ ...{Loading}...