೦೭

೦೦೦ ಸೂಚನೆ ಸಕಲ ...{Loading}...

ಸೂಚನೆ: ಸಕಲ ಋಷಿ ಮುಖ್ಯರು ಮಹೀ ಪಾ
ಲಕರು ನೆರೆದರು ವಿಶ್ವಭೂತ
ಪ್ರಕರ ದಣಿದುದು ಧರ್ಮಪುತ್ರನ ರಾಜಸೂಯದಲಿ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ದೂತರು ಹರಿದರವನೀ
ಪಾಲರಿಗೆ ಋಷಿಗಳಿಗೆ ಭೂಸುರ ವೈಶ್ಯ ಶೂದ್ರರಿಗೆ
ಹೇಳಲೇನದುಬುತವನಂಬುಧಿ
ವೇಲೆಯಲಿ ಮಧ್ಯದ ಸಮಸ್ತ ಜ
ನಾಳಿ ನೆರೆದುದು ವಿಲಸದಿಂದ್ರಪ್ರಸ್ಥ ನಗರಿಯಲಿ ॥1॥

೦೦೨ ಚೋಳ ಸಿಂಹಳ ...{Loading}...

ಚೋಳ ಸಿಂಹಳ ಪಾಂಡ್ಯ ಕೇರಳ
ಮಾಳವಾಂಧ್ರ ಕರೂಷ ಬರ್ಬರ
ಗೌಳ ಕೋಸಲ ಮಂಗಧ ಕೇಕಯ ಹೂಣ ಸೌವೀರ
ಲಾಳ ಜೋನೆಗೆ ಜೀನ ಕುರು ನೇ
ಪಾಳ ಶಿಖಿ ಕಾಶ್ಮೀರ ಬೋಟ ವ
ರಾಳ ವರ ದೇಶಾಧಿಪತಿಗಳು ಬಂದರೊಗ್ಗಿನಲಿ ॥2॥

೦೦೩ ಭೂರಿ ಭೂರಿಶ್ರವನು ...{Loading}...

ಭೂರಿ ಭೂರಿಶ್ರವನು ಬಾಹ್ಲಿಕ
ಶೂರಸೇನೆ ಕಳಿಂಗ ಸಲೆ ಗಾಂ
ಧಾರ ಸೌಬಲ ಸೋಮದತ್ತ ಸುಷೇಣ ಭಗದತ್ತ
ವೀರ ಪೌಂಡ್ರಕನೇಕಲವ್ಯ ಸು
ರಾರಿಗಳು ಶಿಶುಪಾಲ ಯವನ ಕು
ಮಾರ ಪೌರವ ದಂತವಕ್ರರು ಬಂದರೊಗ್ಗಿನಲಿ ॥3॥

೦೦೪ ಸಕಳ ದಳ ...{Loading}...

ಸಕಳ ದಳ ಮೇಳಾಪದಲಿ ಭೀ
ಷ್ಮಕನು ರುಕ್ಮನು ಚಿತ್ರರಥ ಸಾ
ಲ್ವಕನು ರೋಹಿತ ರೋಚಮಾನ ಸಮುದ್ರಸೇನಕರು
ಪ್ರಕಟ ಬಲರುತ್ತರ ದಿಶಾ ಪಾ
ಲಕರು ಕುರು ಪರಿಯಂತ ರಾಜ
ಪ್ರಕರ ನೆರದುದು ವಿಲಸದಿಂದ್ರಪ್ರಸ್ಥ ನಗರಿಯಲಿ ॥4॥

೦೦೫ ದ್ರುಪದ ಧೃಷ್ಟದ್ಯುಮ್ನ ...{Loading}...

ದ್ರುಪದ ಧೃಷ್ಟದ್ಯುಮ್ನ ರಣಲೋ
ಲುಪ ಯುಧಾಮನ್ಯೂತ್ತಮೌಂಜಸ
ರುಪಚಿತರು ಬಂದರು ಸಗಾಢದಲಿವರ ಬಾಂಧವರು
ಕೃಪ ಜಯದ್ರಥ ಭೀಷ್ಮ ಮಾದ್ರಾ
ಧಿಪತಿ ಕರ್ಣ ದ್ರೋಣ ಮೊದಲಾ
ದಪರಿಮಿತ ಬಲ ಸಹಿತ ಕೌರವರಾಯ ನಡೆತಂದ ॥5॥

೦೦೬ ಗುರುತನೂಜ ಸುಶರ್ಮ ...{Loading}...

ಗುರುತನೂಜ ಸುಶರ್ಮ ವಂಗೇ
ಶ್ವರ ಬೃಹದ್ರಥ ಭೀಮರಥ ದು
ರ್ಮರುಷಣರು ವರ ಭಾನುದತ್ತ ವಿಕರ್ಣ ದುಸ್ಸಹರು
ವರ ವಿವಿಂಶತಿ ದೀರ್ಘಭುಜ ದು
ರ್ದರುಶ ದುರ್ಜಯ ಶಂಕು ಕರ್ಣಾ
ದ್ಯರು ಸಹಿತ ದುಶ್ಶಾಸನನು ಹೊರವಂಟನರಮನೆಯ ॥6॥

೦೦೭ ಬನ್ದರೈ ಚತುರಙ್ಗದವನಿಪ ...{Loading}...

ಬಂದರೈ ಚತುರಂಗದವನಿಪ
ವೃಂದವವರುಚಿತ ಮಿಗಿಲಿದಿ
ರ್ವಂದು ಭೀಷ್ಮ ದ್ರೋಣ ಕೃಪ ಧೃತರಾಷ್ಟ್ರರಿಗೆ ನಮಿಸಿ
ವಂದನೀಯರಿಗೆರಗಿ ಸಮರಿಗೆ
ನಿಂದು ಕುಶಲಕ್ಷೇಮ ಸಂಗತಿ
ಯಿಂದ ಸತ್ಕರಿಸಿದನು ನೃಪ ವಿದುರಾದಿ ಬಾಂಧವರ ॥7॥

೦೦೮ ಜನಪ ಕೇಳೀಚೆಯಲಿ ...{Loading}...

ಜನಪ ಕೇಳೀಚೆಯಲಿ ಬಂದುದು
ಮುನಿಗಳಾಂಗಿರ ಕಣ್ವ ಭೃಗು ಜೈ
ಮಿನಿ ಸುಮಂತ ವಸಿಷ್ಠ ಶೌನಕ ಗಾಗ್ರ್ಯ ಬೃಹದಶ್ವ
ಸನಕ ಶುಕ ಜಾಬಾಲಿ ತಿತ್ತಿರಿ
ವಿನುತ ಮಾರ್ಕಾಂಡೇಯ ಮುದ್ಗಲ
ತನಯ ರೋಮಶ ಕುತ್ಸವತ್ಸರು ಶೈಬ್ಯ ನಾರದರು ॥8॥

೦೦೯ ಚ್ಯವನ ಗೌತಮ ...{Loading}...

ಚ್ಯವನ ಗೌತಮ ವೇಣುಜಂಘ
ಪ್ರವರ ಕೌಶಿಕ ಸತ್ಯತಪ ಭಾ
ರ್ಗವ ಸುಮಾಲಿ ಸುಮಿತ್ರ ಕಾಶ್ಯಪ ಯಾಜ್ಞವಲ್ಕ್ಯ ಋಷಿ
ಪವನಭಕ್ಷಕ ದೀರ್ಘತಪ ಗಾ
ಲವನು ಶಿತ ಶಾಂಡಿಲ್ಯ ಮಾಂಡ
ವ್ಯ ವರರೆಂಬ ಮಹಾ ಮುನೀಂದ್ರರು ಬಂದರೊಗ್ಗಿನಲಿ ॥9॥

೦೧೦ ದೇಶ ದೇಶಾನ್ತರದ ...{Loading}...

ದೇಶ ದೇಶಾಂತರದ ವಿದ್ಯಾ
ಭ್ಯಾಸಿಗಳು ಮೊದಲಾಗಿ ವರ್ಣ ನಿ
ವಾಸಿಗಳು ಫಲಮೂಲ ದಧಿ ಘೃತ ದುಗ್ಧ ಭಾರದಲಿ
ಆ ಸಮಸ್ತ ಮಹೀತಳದ ಧನ
ರಾಶಿ ಜನ ಸಂತತಿಯನೇಕ ನಿ
ವಾಸದಲಿ ನೆರೆ ಕಾಣಲಾಯಿತು ನೃಪತಿ ಕೇಳ್ ಎಂದ ॥10॥

೦೧೧ ವಿಕಳ ವಾಮನ ...{Loading}...

ವಿಕಳ ವಾಮನ ಮೂಕ ಬಧಿರಾಂ
ಧಕರು ಮಾಗಧ ಸೂತ ವಂದಿ
ಪ್ರಕರ ಮಲ್ಲ ಮಹೇಂದ್ರಜಾಲಿ ಮಹಾಹಿತುಂಡಿತರು
ಸುಕವಿ ತಾರ್ಕಿಕ ವಾಗ್ಮಿ ವೈತಾ
ಳಿಕ ಸುಗಾರಕ ಕಥಕ ಮಾರ್ದಂ
ಗಿಕರು ನೆರೆದುದು ನಿಖಿಳ ಯಾಚರ ನಿಕರ ಸಂದಣಿಸಿ ॥11॥

೦೧೨ ಕರೆಸಿ ಭೀಷ್ಮಙ್ಗೆರಗಿ ...{Loading}...

ಕರೆಸಿ ಭೀಷ್ಮಂಗೆರಗಿ ನುಡಿದನು
ಧರಣಿಪತಿ ಬಾಲಕರು ನಾವ
ಧ್ವರವಿದಗ್ಗದ ರಾಜಸೂಯ ಮಹಾ ಮಹೀಶ್ವರರು
ನೆರೆದುದಖಿಳ ದ್ವೀಪ ಜನವಾ
ದರಿಸಲರಿಯೆನು ಹೆಚ್ಚು ಕುಂದಿನ
ಕುರುಡನೀಕ್ಷಿಸಲಾಗದೆಂದನು ಮುಗಿದು ಕರಯುಗವ ॥12॥

೦೧೩ ಚಿನ್ತೆಯೇಕೈ ಕೃಷ್ಣನಾರೆಂ ...{Loading}...

ಚಿಂತೆಯೇಕೈ ಕೃಷ್ಣನಾರೆಂ
ದೆಂತು ಕಂಡೆ ಚತುರ್ದಶಾಂಶದ
ತಂತು ರೂಪನು ತಾನೆಯೆನ್ನದೆ ನಿನಗೆ ಶ್ರುತಿವಚನ
ತಂತುವಿನ ಪಟ ಮೃತ್ತಿಕೆಯ ಘಟ
ದಂತೆ ಜಗವೀತನಲಿ ತೋರ್ಕು ಮು
ರಾಂತಕನ ಸುಯ್ಧಾನ ನಿನಗಿರಲಂಜಲೇಕೆಂದ ॥13॥

೦೧೪ ಕರೆಸು ಧೌಮ್ಯಾದಿಗಳನಿಲ್ಲಿಯ ...{Loading}...

ಕರೆಸು ಧೌಮ್ಯಾದಿಗಳನಿಲ್ಲಿಯ
ಪರುಠವವ ಮಾಡೆಂದು ಭೀಷ್ಮನು
ಗುರುಸಹಿತ ಕೈಕೊಂಡನೆಲ್ಲರ ಮೇಲುನೋಟವನು
ಅರಸ ಕೇಳ್ ಧೃತರಾಷ್ಟ್ರ ಬಾಹ್ಲಿಕ
ವರ ಬೃಹದ್ರಥ ಸೋಮದತ್ತರು
ಪರಮ ಪೂಜ್ಯರು ಮಾನನೀಯರು ಯಜ್ಞವಾಟದಲಿ ॥14॥

೦೧೫ ಸವನ ಸಾಧನ ...{Loading}...

ಸವನ ಸಾಧನ ಸರ್ವ ಸಂಭಾ
ರವನು ಧೌಮ್ಯನು ತರಿಸಿ ಕೊಡಿಸುವ
ನವನಿಪತಿಗಳ ಪಾರುಪತ್ಯದ ನೋಟ ಸಂಜಯಗೆ
ವಿವಿಧ ಋಷಿ ಯಾಜ್ಞಿಕರು ಮಾಂತ್ರಿಕ
ನಿವಹ ಸಹದೇವಂಗೆ ಭೋಜ್ಯ
ಪ್ರವರದಧಿಕಾರದ ನಿಯೋಗ ಯುಯುತ್ಸುವಿನ ಮೇಲೆ ॥15॥

೦೧೬ ನೆರೆದ ಭೂಸುರ ...{Loading}...

ನೆರೆದ ಭೂಸುರ ತತಿಯನೂಟಕೆ
ಕರೆಸಿ ಕುಳ್ಳಿರಿಸುವನು ಸಾತ್ಯಕಿ
ಭರದಿನೆಂಜಲ ತೆಗೆಸಿ ಸಾರಿಸುವುದು ವಿಕರ್ಣಂಗೆ
ಅರಸ ಕೇಳ್ ಭೋಜನದ ಸಮನಂ
ತರದ ವೀಳೆಯ ಗಂಧ ಮಾಲ್ಯಾಂ
ಬರವನೀವಧಿಕಾರ ದುಶ್ಶಾಸನನ ವಶವಾಯ್ತು ॥16॥

೦೧೭ ವಿತತ ಭೂಸುರ ...{Loading}...

ವಿತತ ಭೂಸುರ ದಕ್ಷಿಣೆಗೆ ಗುರು
ಸುತ ನಿಯೋಗ ಸಮಸ್ತ ರತ್ನ
ಪ್ರತತಿಗಳನಾರೈದು ತರಿಸುನವನಾ ಕೃಪಾಚಾರ್ಯ
ಘೃತವು ದಧಿ ಮಧು ತೈಲ ಕತ್ತುರಿ
ಸಿತಲವಣ ಸಂಭಾರ ಶಾಕೋ
ಚಿತ ಸುವಸ್ತುವ ಕೊಡುವ ಕೊಂಬಾರೈಕೆ ವಿದುರಂಗೆ ॥17॥

೦೧೮ ಅರಸ ಕೇಳೈ ...{Loading}...

ಅರಸ ಕೇಳೈ ಪಾಕಶಾಲೆಯ
ಹಿರಿಯ ಹಂತಿಗಳಲಿ ಚತುರ್ದಶ
ಕರಿ ಘಟೆಗಳೆಡೆಯಾಡುವುವು ಸಂಭಾರವನು ಹೇರಿ
ಹರಿವ ರಜತ ದ್ರೋಣಿಯಲಿ ಸುರಿ
ಸುರಿದು ಸೇದುವ ರಾಟಳಂಗಳೊ
ಳೆರೆವ ಘೃತ ಮಧು ತೈಲ ಧಾರಾ ರಚನೆ ಚೆಲುವಾಯ್ತು ॥18॥

೦೧೯ ಧರಣಿಪತಿ ಕೇಳ್ ...{Loading}...

ಧರಣಿಪತಿ ಕೇಳ್ ಶೂದ್ರ ಮೊದಲಾ
ಗಿರೆಸಮಸ್ತ ಪ್ರಜೆ ವಿಧಾವಂ
ತರಿಗೆ ಭೋಜನ ಗಂಧ ಮಾಲ್ಯಾಂಬರ ವಿಲೇಪನದ
ಉರು ನಿಯೋಗಿಗಳಿಂದ್ರಸೇನನು
ವರ ವಿಶೋಕನು ರುಗ್ಮನತಿ ಬಂ
ಧುರ ಸಮೀರ ಪತಾಕಸೇನನು ಸೂತರೈವರಿಗೆ ॥19॥

೦೨೦ ಅರಸ ಕೇಳೈ ...{Loading}...

ಅರಸ ಕೇಳೈ ಬಳಿಕ ಪೃಥ್ವೀ
ಶ್ವರರಿಗಭಿನವ ಗಜ ರಥಾವಳಿ
ತುರಗ ಶಸ್ತ್ರಾಸ್ತ್ರಗಳನೀವ ನಿಯೋಗ ಕರ್ಣನದು
ಕರೆಕರೆದು ಯೋಗ್ಯಾತಿಶಯವರಿ
ವರಿದು ಯೋಷಿಜ್ಜನಕೆ ಮಾದ್ರೇ
ಶ್ವರನು ಕೊಡುವವನಾದನಧಿಕೋತ್ಸವದ ಸಿರಿಮಿಗಿಲು ॥20॥

೦೨೧ ಸಕಲ ಮಣಿ ...{Loading}...

ಸಕಲ ಮಣಿ ಕಾಂಚನ ದುಕೂಲ
ಪ್ರಕರವೀ ದುರಿಯೋಧನನ ವಶ
ನಕುಲನವರವರುಚಿತ ವೃತ್ತಿಯ ಮಧುರ ವಚನದಲಿ
ಪ್ರಕಟಿಸುವನವನಿವರ ಸೇನಾ
ನಿಕರದಾರೈಕೆಗಳು ಪಾಂಚಾ
ಲಕನಿಗಾದುದು ರಂಜಿಸಿತು ಪರಿಪಾಟಿಯೊಡ್ಡವಣೆ ॥21॥

೦೨೨ ಆದುದನುಪಮ ಕುಣ್ಡವನ್ತ ...{Loading}...

ಆದುದನುಪಮ ಕುಂಡವಂತ
ರ್ವೇದಿಯ ಸಮೀಪದಲಿ ಹೊರೆಗಳ
ಶೋಧಿಸಿಧ್ಮ ಕುಶಂಗಳಾ ಸ್ಥಂಡಿಲದ ಸೀಮೆಯಲಿ
ಆದರಿಸಿ ಪರಿಚಾರಕರು ಸಂ
ಪಾದಿಸಿದ ಘೃತ ಚರು ಪುರೋಡಾ
ಶಾದಿ ಸಂಭಾರೌಘವನುವಾಯಿತ್ತು ನಿಮಿಷದಲಿ ॥22॥

೦೨೩ ಕರೆಸಿದರು ಋತ್ವಿಕ್ಕುಗಳನ ...{Loading}...

ಕರೆಸಿದರು ಋತ್ವಿಕ್ಕುಗಳನ
ಧ್ವರಿಯನಾದನು ಯಾಜ್ಞವಲ್ಕ್ಯನು
ವರ ಸುಮಿತ್ರಾಂಗಿರಸರುಗಳುದ್ಗಾತೃ ಹೋತೃಗಳು
ಪರಮ ಜೈಮಿನಿ ಕಣ್ವ ಕಠ ತಿ
ತ್ತಿರಿಗಳಾಗ್ನೀಧ್ರಾದಿ ರಾಜಾ
ಧ್ವರ ನಿಯೋಗಿಗಳಾಯ್ತು ವೇದವ್ಯಾಸನಾಜ್ಞೆಯಲಿ ॥23॥

೦೨೪ ಆ ಸದಸ್ಯತ್ವವನು ...{Loading}...

ಆ ಸದಸ್ಯತ್ವವನು ವೇದ
ವ್ಯಾಸ ಕೈಕೊಂಡನು ಮುನೀಂದ್ರ ಮ
ಹಾ ಸಮಾಜದ ಬಯಕೆಗಾ ಶಾಂಡಿಲ್ಯ ನಾರದರು
ಭೂಸುರರು ಸಾಮಾಜಿಕರು ಧರ
ಣೀಶ ಯಜ್ಞೋಪಕ್ರಮದ ವಿ
ನ್ಯಾಸದಲಿ ಬಂದನು ಯುಧಿಷ್ಟಿರಷ್ಠಿರನಚ್ಚ್ಯುತನ ಹೊರೆಗೆ ॥24॥

೦೨೫ ದೇವ ನಿನ್ನಯ ...{Loading}...

ದೇವ ನಿನ್ನಯ ಕರುಣದಲಿ ಸಕ
ಳಾವನೀಪತಿ ವಿಜಯ ಬಹಳಾ
ರ್ಥಾವಲಂಬನವೀ ಮಖ ಪ್ರಾರಂಭ ವಿಸ್ತಾರ
ಈ ವಿಜಯ ವೈಭವವೆಮಗೆ ಸಂ
ಭಾವಿತವೆ ವರ ರಾಜಸೂಯಕೆ
ದೇವ ದೀಕ್ಷಿತನಾಗು ನೀನೆಂದೆರಗಿದನು ಪದಕೆ ॥25॥

೦೨೬ ಮಣಿದು ಹಿಡಿದೆತ್ತಿದನು ...{Loading}...

ಮಣಿದು ಹಿಡಿದೆತ್ತಿದನು ರಾಯನ
ಹಣೆಯನನುಪಮ ಕರುಣ ನಿಧಿ ಕಡು
ಗುಣಿಯೆ ಬಾಯೆನ್ನಾನೆ ಬಾಯೆಂದಪ್ಪಿ ಮೈದಡವಿ
ಗುಣವಹುದು ನಿನಗಿಂದುಕುಲ ದಿನ
ಮಣಿಯೆ ದೀಕ್ಷಿತನಾಗು ಮದವಾ
ರಣನೆ ದೀಕ್ಷಿತನಾಗೆನುತ ಬೋಳೈಸಿದನು ಹರಸಿ ॥26॥

೦೨೭ ಎನೆ ಹಸಾದವೆನುತ್ತ ...{Loading}...

ಎನೆ ಹಸಾದವೆನುತ್ತ ಯಮನಂ
ದನನು ವೈಶಾಖದ ಚತುರ್ದಶಿ
ದಿನದಲುತ್ತರ ಪೂರ್ವವೇದಿ ವರಾಭ್ಯುದೈಕದಲಿ
ವಿನುತ ಪುಣ್ಯಾಹದ ಮಹಾವಾ
ಚನೆಯ ನಿಗಮ ಪವಿತ್ರ ಜಲ ಪಾ
ವನನು ಮರುದಿನ ಯಜ್ಞ ದೀಕ್ಷಿತನಾದನೊಲವಿನಲಿ ॥27॥

೦೨೮ ಹುದಿದ ನವನೀತಾನುಲೇಪದ ...{Loading}...

ಹುದಿದ ನವನೀತಾನುಲೇಪದ
ಹೊದೆದ ಕೃಷ್ಣಾಜಿನದ ಹಸ್ತಾ
ಗ್ರದಲೆಸೆವ ಸಾರಂಗ ಶೃಂಗದ ಯಾಜಮಾನ್ಯದಲಿ
ಉದಧಿಗೊರೆಗಟ್ಟುವ ಚತುರ್ವೇ
ದದ ಮಹಾ ಘೋಷದಲಿ ಮಖ ಕುಂ
ಡದ ತದಂತರ್ವೇದಿಗೈತಂದನು ಮಹೀಪಾಲ ॥28॥

೦೨೯ ನೆರೆದುದವನೀಪಾಲ ಜನ ...{Loading}...

ನೆರೆದುದವನೀಪಾಲ ಜನ ಸಾ
ಗರ ಬಹಿರ್ವೇದಿಯ ಮಹಾ ಚ
ಪ್ಪರದೊಳಗೆ ತಂತಮ್ಮ ಸಿಂಹಾಸನ ಸಗಾಢದಲಿ
ಪರಮ ಋಷಿಗಳ ವೇದಘೋಷೋ
ತ್ಕರ ನೃಪಾಧ್ವರ ವಿಷಯ ತರ್ಕ
ಸ್ಫುರಣ ಕೋಳಾಹಳದ ಕಳಕಳ ತುಂಬಿತಂಬರವ ॥29॥

೦೩೦ ಚರು ತಿಲದ ...{Loading}...

ಚರು ತಿಲದ ರಾಶಿಗಳು ಸ್ರುಕ್ ಸ್ರುವ
ಬರುಹಿಗಳ ಬಲು ಹೊರೆಗಳಾಜ್ಯೋ
ತ್ಕರದ ಪತ್ರಾವಳಿಯ ನಿರ್ಮಳ ಸಾರ ಸಮಿಧೆಗಳ
ಪರಿವಳೆಯದಾಮೀಕ್ಷೆಗಳ ಪರಿ
ಕರದ ವಿವಿಧ ದ್ರವ್ಯಮಯ ಬಂ
ಧುರದಲೆಸೆದುದು ಯಜ್ಞವಾಟಿಕೆ ರಾಜಸೂಯದಲಿ ॥30॥

೦೩೧ ಬಳಸಿದರು ಪರಿಮಥ್ಯಮಾನಾ ...{Loading}...

ಬಳಸಿದರು ಪರಿಮಥ್ಯಮಾನಾ
ನಳನನಗ್ಗದ ಸುಪ್ರಣೀತಾ
ನಳನನಾಹವನೀಯ ಗಾರುಹಪತ್ಯ ದಕ್ಷಿಣದ
ಜ್ವಲಿತವೆನೆ ಮೃಗಚರ್ಮವೀಜನ
ವಳಯದೊಳು ಪ್ರಾಗ್ವಂಶದಲಿ ಪರಿ
ಮಿಳಿತವಾಯ್ತು ಸದಸ್ಯ ಋತ್ವಿಜ್ಞರ ವಿಧಾನದಲಿ ॥31॥

೦೩೨ ಏವಮೇವಾಸ್ಮಾತ್ತದಿತಿ ಸಂ ...{Loading}...

ಏವಮೇವಾಸ್ಮಾತ್ತದಿತಿ ಸಂ
ಭಾವನೀಯಮಿದಂ ಚ ನೈತ
ನ್ನೈವಮಿದಮೇವಂ ಚ ಶ್ರುತಿ ಸಂಸಿದ್ಧಮಿದಮೆನಲು
ಕೋವಿದರ ಕಳಕಳಿಕೆಯನ್ಯೋ
ನ್ಯಾವಮರ್ದದ ರಭಸವೀ ಭೂ
ಪಾವಳಿಗಳಪಹಾಸ್ಯ ಘೋಷಕೆ ಕವಚವಾಯ್ತೆಂದ ॥32॥

೦೩೩ ವ್ಯಾಹೃತಿಯ ಶಿಕ್ಷಾಕ್ಷತದ ...{Loading}...

ವ್ಯಾಹೃತಿಯ ಶಿಕ್ಷಾಕ್ಷತದ ವಿಮ
ಳಾಹುತಿ ಸ್ವಾಹಾವಷಟ್ಕೃತಿ
ಸೋಹಿ ತಂದುದು ಸುರರ ಸುಹವಿರ್ಭಾಗ ಭೋಗಿಗಳ
ಲೋಹಿತಾಶ್ವನ ರಚನೆಯೊಳು ಹರಿ
ಸಾಹರಿಯೊಳುಬ್ಬೆದ್ದವರ್ಚಿಗ
ಳಾಹ ಸಪ್ತಕವೋ ಸಹಸ್ರಕವೆನಿಸಿ ಪೊಸತಾಯ್ತು ॥33॥

೦೩೪ ತ್ರಿದಿವವನು ತುಡುಕಿತು ...{Loading}...

ತ್ರಿದಿವವನು ತುಡುಕಿತು ಹವಿರ್ಗಂ
ಧದ ಗಢಾವಣೆ ಧೂತ ಧೂಮನ
ತುದಿ ತಪೋಲೋಕದಲಿ ತಳತುದು ಸತ್ಯ ಲೋಕದಲಿ
ತ್ರಿದಶರುರೆ ಬಾಯಾಡಿಸಿದರ
ಗ್ಗದ ಧ್ರುವಾದಿಗಳನು ಸುತೃಪ್ತಿಯ
ಹೊದರುದೇಗಿನ ಹೊಟ್ಟೆ ನೂಕಿತು ಹರಿಹಯಾದಿಗಳ ॥34॥

೦೩೫ ದಣಿದುದಲ್ಲಿ ಸುರೌಘವೀ ...{Loading}...

ದಣಿದುದಲ್ಲಿ ಸುರೌಘವೀ ದ
ಕ್ಷಿಣೆಯಲೂಟದಲಾದರಣೆ ಮ
ನ್ನಣೆಯಲವನೀಸುರರು ಹಿಗ್ಗಿದರಿಲ್ಲಿ ಪಿರಿದಾಗಿ
ಎಣಿಸಬಹುದೇ ಭೋಜನದ ಸಂ
ದಣಿಯನೀಸೈಸೆಂದು ಭಾರಾಂ
ಕಣದ ಭೂರಿಯ ವಿವರವನು ಬಣ್ಣಿಸುವರಾರೆಂದ ॥35॥

೦೩೬ ವೇದ ವೇದಾಙ್ಗದ ...{Loading}...

ವೇದ ವೇದಾಂಗದ ರಹಸ್ಯ ವಿ
ವಾದ ತರ್ಕಸ್ಮೃತಿಗಳಂತ
ರ್ವೇದಿಯಲಿ ಘನಲಹರಿ ಮಸಗಿತು ತಂತ್ರ ಸಂತತಿಯ
ಆದುದತ್ತಲು ಗದ್ಯ ಪದ್ಯ ವಿ
ನೋದ ನರ್ತನ ವಾದ್ಯ ಸಂಗೀ
ತಾದಿ ಸಕಲ ಕಲಾನುರಂಜನೆ ರಾಜವರ್ಗದಲಿ ॥36॥

೦೩೭ ಆ ಋಷಿಗಳಾ ...{Loading}...

ಆ ಋಷಿಗಳಾ ಕ್ಷತ್ರ ಜನದಾ
ಭೂರಿ ನಿಕರದ ವೇದಶಾಸ್ತ್ರ ವಿ
ಚಾರಣರ ಚಾರಣರ ಸಂಗೀತಾದಿ ಕಳಕಳದ
ಆರುಭಟೆ ಮಥಿತಾಂಬುನಿಧಿಯೊಡ
ನಾರುವವೊಲುಬ್ಬೆದ್ದ ಬಲು ಜ
ರ್ಝಾರವೆನೆ ಜಡಿದುದು ಯುಧಿಷ್ಠಿರ ರಾಜಸೂಯದಲಿ |37॥

೦೩೮ ಏಳು ದಿನ ...{Loading}...

ಏಳು ದಿನ ಪರಿಯಂತ ಗಳಿಗೆಗೆ
ಮೇಲೆ ಮೇಲಧ್ವರದ ಲಕ್ಷ್ಮಿ ಛ
ಡಾಳಿಸಿತು ಚತುರ್ದಶ ಲೋಕ ಚೇತನವ
ಕೇಳಿದೈ ಜನಮೇಜಯ ಕ್ಷಿತಿ
ಪಾಲ ಸುರಲೋಕದಲಿ ಪಾಂಡುವಿ
ನೋಲಗಕೆ ಬಹ ಬಣಗು ಸುರರಿಗೆ ಸಮಯವಿಲ್ಲೆಂದ ॥38॥

೦೩೯ ಎವಗೆ ತವಗೆನ್ದೀ ...{Loading}...

ಎವಗೆ ತವಗೆಂದೀ ಹವಿರ್ಭಾ
ಗವನು ಮುತ್ತಿತು ದೇವತತಿ ಸುರ
ಯುವತಿಯರೊಳೂರ್ವಸಿ ತಿಲೋತ್ತಮೆ ರಂಭೆ ಮೇನಕೆಯು
ದಿವಿಜರೊಳ ಹಸುಗೆಗಳ ಲೆಕ್ಕದ
ಸವಬೆಸನ ಸವಿವಾಯ ತುತ್ತಿನ
ತವಕಿಗರು ಹೊಯ್ದಾಡಿದರು ಸಭೆಯಲಿ ಸುರೇಶ್ವರನ ॥39॥

೦೪೦ ಈತನಾರೈ ಪಾಣ್ಡುನನ್ದನ ...{Loading}...

ಈತನಾರೈ ಪಾಂಡುನಂದನ
ನೀತ ಕಾಣಿರೆ ಪಾಂಡುವಿನ ಸುತ
ನೀತನೆ ದಿಟ ಪಾಂಡುವಿನ ಮಗನೀತನೇಯೆನುತ
ಪೂತು ಧರ್ಮಜ ಪೂತು ಧರ್ಮಜ
ಪೂತು ಧರ್ಮಜಯೆನುತ ರಾಜ
ವ್ರಾತ ಹೊಗಳಿತು ನಹುಷ ನಳ ನೃಗ ದಶರಥಾದಿಗಳು ॥40॥

೦೪೧ ಏನ ಹೇಳುವುದರಸ ...{Loading}...

ಏನ ಹೇಳುವುದರಸ ಯಜ್ಞ ವಿ
ಧಾನದಭಿಷೇಕಾದಿ ಸಮಯೋ
ದ್ದಾನವಾಯ್ತರಸಂಗೆ ಸುರ ದುಂದುಭಿಯ ರಭಸದಲಿ
ಆ ನಿರಂತರ ತುಷ್ಟಿಗಳ ವೈ
ಮಾನಿಕರ ಸಂದಣಿ ನವೀನ ವಿ
ತಾನವಾಯಿತು ಭೂರಿ ಭಾರತ ವರುಷದಗಲದಲಿ ॥41॥

೦೪೨ ವರ ಸದಸ್ಯಾದಿಗಳ ...{Loading}...

ವರ ಸದಸ್ಯಾದಿಗಳ ದಕ್ಷಿಣೆ
ಬರಹಕಿಮ್ಮಡಿ ನೂರುಮಡಿ ಸಾ
ವಿರದ ಮಡಿ ವರ ಹೇಮ ವಸ್ತ್ರಾಭರಣ ಗೋವ್ರಜವ
ಅರಸನಿತ್ತನು ಮಖ ನಿಯೋಗೋ
ತ್ಕರರಿಗನುಪಮ ಭೂರಿ ಜನಕಾ
ದರಿಸಿ ಕೊಟ್ಟನು ಹೊತ್ತು ನಡೆದುದು ಸಕಲ ಜನ ಧನವ ॥42॥

೦೪೩ ತಲೆಹೊರೆಯಲಡಕಿದರು ಹೆಗಲಲಿ ...{Loading}...

ತಲೆಹೊರೆಯಲಡಕಿದರು ಹೆಗಲಲಿ
ಕೆಲರು ಶಿಷ್ಯರ ನೆತ್ತಿಯಲಿ ಕೆಲ
ಕೆಲರು ಹೊರಿಸಿತು ದೇಶ ದೇಶದ ಸಕಲ ಭೂಸುರರು
ಲಲಿತ ರತ್ನಾಭರಣ ಗೋ ಸಂ
ಕುಲದ ಸೂರೆಯನೇನನೆಂಬೆನು
ಸಲೆ ದಣಿದುದಾ ಸಕಲ ಜಾತಿ ಜನೇಶ ಯಜ್ಞದಲಿ ॥43॥

೦೪೪ ಕಳೆದವಗಣಿತ ಕಲ್ಪ ...{Loading}...

ಕಳೆದವಗಣಿತ ಕಲ್ಪ ವಿದರೊಳ
ಗಳಿವನರಿಯದರಿಬ್ಬರೇ ಮುನಿ
ತಿಲಕ ಮಾರ್ಕಂಡೇಯ ರೋಮಶರೀ ಮಹಾಧ್ವರದ
ಸುಳಿವನಾರಲಿ ಕಂಡರವನಿಪ
ರೊಳಗೆನುತ ಮನವುಕ್ಕಿ ನಾರದ
ನೊಲಿದು ನುಡಿದನು ತನ್ನ ಹೇಳಿಕೆ ಸಫಲವಾಯ್ತೆಂದು ॥44॥

೦೪೫ ಸುರರಿಗಾದುದು ತುಷ್ಟಿ ...{Loading}...

ಸುರರಿಗಾದುದು ತುಷ್ಟಿ ಧರಣೀ
ಸುರ ಮುನೀಂದ್ರರಿಗಾಯ್ತು ಶೂದ್ರರ
ನೆರವಿಗಾ ಚಂಡಾಲ ಪರಿಯಂತಾಯ್ತು ಸತ್ಕಾರ
ಧರಣಿಪಾಲಕರಿದೆ ಚತುಸ್ಸಾ
ಗರದ ತಡಿ ಪರಿಯಂತ ವಿಶ್ವಂ
ಭರೆಯ ಮಾನ್ಯರ ಮನ್ನಿಸೆಂದನು ಭೂಪತಿಗೆ ಭೀಷ್ಮ ॥45॥

೦೪೬ ಸ್ನಾತಕ ಪ್ರಿಯ ...{Loading}...

ಸ್ನಾತಕ ಪ್ರಿಯ ಋತ್ವಿಗಾಚಾ
ರ್ಯಾತಿಶಯ ಗುರು ನೃಪರು ಸಹಿತೀ
ಭೂತಳದೊಳಿಂತಾರು ಮಾನಿಸರಘ್ರ್ಯಯೋಗ್ಯರಲೆ
ಪ್ರೀತಿಯಲಿ ನೀನಘ್ರ್ಯವನು ವಿ
ಖ್ಯಾತರಿಗೆ ಮಾಡೆನಲು ಮನ್ನಣೆ
ಯಾತನಾರೆನೆ ವೀರನಾರಾಯಣನ ತೋರಿಸಿದ ॥46॥

+೦೭ ...{Loading}...