೦೫

೦೦೦ ಸೂಚನೆ ನಡೆದು ...{Loading}...

ಸೂಚನೆ : ನಡೆದು ವಿವಿಧ ದ್ವೀಪ ಪತಿಗಳ
ಜಡಿದು ಕಪ್ಪವ ಕೊಂಡು ತೆಂಕಣ
ಕಡಲ ವಳಯದ ನೃಪರ ಗೆಲಿದನು ಸಹದೇವ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ಸಹದೇವನ ಸಗಾಡಿಕೆ
ಯಾಳುತನವಿವರಾರ ಹವಣಲ್ಲೆಂಬ ತೆರನಾಯ್ತು
ಆಳು ನಡೆದುದು ತೆಂಕಣವನೀ
ಪಾಲರೀತನ ಬಿರಿಸಿಗೀತನ
ದಾಳಿಗೀತನ ದೆಸೆಗೆ ದೆಸೆಗೆಟ್ಟುದು ದಿಗಂತದಲಿ ॥1॥

೦೦೨ ಶೂರಸೇನನ ಸದೆದು ...{Loading}...

ಶೂರಸೇನನ ಸದೆದು ನೆರೆ ಭಂ
ಡಾರವೆಲ್ಲವ ಕೊಂಡು ತೆಂಕಣ
ವೀರಮತ್ಸ್ಯನ ಗೆಲಿದು ಸರ್ವಸ್ವಾಪಹಾರದಲಿ
ಭೂರಿ ಬಲನಹ ದಂತವಕ್ತ್ರನ
ವಾರಣಾಶ್ವ ರಥಂಗಳನು ಕೊಂ
ಡಾರುಭಟೆಯಲಿ ಮುಂದೆ ನಡೆದನು ತೆಂಕಮುಖವಾಗಿ ॥2॥

೦೦೩ ಖಳ ನಿಶಾಚರ ...{Loading}...

ಖಳ ನಿಶಾಚರ ಕೋಟಿಗಳನರೆ
ಗಳಿಗೆಯೊಳಗಾಕ್ರಮಿಸಿದನು ಮಂ
ಡಳಿಕ ಮನ್ನೆಯರಾಂಪರೇ ಚತುರಂಗ ಪದಹತಿಗೆ
ಹೊಳೆತಡಿಯ ಗಿರಿ ದುರ್ಗ ವಿಪಿನ
ಸ್ಥಳದ ಧರಣಿಪರಿದಿರುವಂದ
ಗ್ಗಳೆಯ ಗಜ ರಥ ಹಯ ಸಹಿತ ತೆತ್ತರು ಸುವಸ್ತುಗಳ ॥3॥

೦೦೪ ಬನ್ದು ಕುನ್ತೀಬೋಜ ...{Loading}...

ಬಂದು ಕುಂತೀಬೋಜ ಮೊಮ್ಮನ
ಮಂದಿರದ ಸುಕ್ಷೇಮ ಕುಶಲವ
ನಂದು ಕೇಳಿದು ಕೊಟ್ಟನತಿಶಯ ಸಾರವಸ್ತುಗಳ
ಮುಂದೆ ಚರ್ಮಣ್ವತಿಯ ಜಂಭಕ
ನಂದನನನಪ್ಪಳಿಸಿ ಗಜ ಹಯ
ವೃಂದವನು ಕೊಂಡೆತ್ತಿ ಬಿಟ್ಟನವಂತಿ ದೇಶದಲಿ ॥4॥

೦೦೫ ತರುಬಿದರೆ ವಿನ್ದಾನುವಿನ್ದರ ...{Loading}...

ತರುಬಿದರೆ ವಿಂದಾನುವಿಂದರ
ಮುರಿದು ಕಪ್ಪವ ಕೊಂಡು ಭೀಷ್ಮಕ
ನರಪತಿಯ ಗೆಲಿದಲ್ಲಿ ಮನ್ನಿಸಿಕೊಂಡನುಚಿತದಲಿ
ಬರಬರಲು ಕುಂತಲ ನೃಪನನಾ
ಕರಿಸಿ ಕಪ್ಪವ ಕೊಂಡು ಖಳ ತಿ
ತ್ತಿರಿ ಕಿಳೀಂದ್ರಕರೆಂಬ ಬೇಡರ ಧುರದೊಳೋಡಿಸಿದ ॥5॥

೦೦೬ ಉರವಣಿಸಿ ದಳ ...{Loading}...

ಉರವಣಿಸಿ ದಳ ತುಂಗಭದ್ರಾ
ವರ ನದಿಯನುತ್ತರಿಸಿ ಪಂಪಾ
ಸರದ ತಡಿಯಲಿ ಬಿಟ್ಟನಾ ವಿರುಪಾಕ್ಷ ಸೀಮೆಯಲಿ
ಗಿರಿಚರರ ವನಚರರ ಬಿಂಕವ
ನೊರಸಿ ಕಿಷ್ಕಿಂಧಾದ್ರಿಯಲಿ ಸಂ
ಚರಿಸಿ ಬಿಟ್ಟುದು ಕಟಕ ಬಹುವಿಧ ವಾದ್ಯ ರಭಸದಲಿ ॥6॥

೦೦೭ ಕೇಳಿದನು ಕಿಷ್ಕಿನ್ಧ ...{Loading}...

ಕೇಳಿದನು ಕಿಷ್ಕಿಂಧ ಗಿರಿಯ ವಿ
ಶಾಲ ಶೃಂಗವನು ನೆರೆ ಘನ ನಿ
ಸ್ಸಾಳ ಮೊಳಗಿದರೊಡನೆ ಮೊಳಗಿತು ಗಿರಿ ಗುಹಾ ನಿಕರ
ಆಳಿದೆತ್ತಣದೆನುತ ಕಪಿಬಲ
ಜಾಲ ನೆರೆದುದು ಮುರಿದು ತರು ಶಾ
ಖಾಳಿಗಳ ಕೈದುಗಳ ಕೈಯಲಿ ತರುಬಿದರು ಬಲವ ॥7॥

೦೦೮ ಕವಿದುದೀ ಚತುರಙ್ಗಬಲ ...{Loading}...

ಕವಿದುದೀ ಚತುರಂಗಬಲ ಸಂ
ತವಿಸಿ ಲಗ್ಗೆಯ ಮಾಡಿ ವಾನರ
ನಿವಹದಲಿ ಕರೆದುದು ಶರಾಳಿಯ ಸುಭಟ ಮೇಘಚಯ
ತಿವಿದರಂಬಿನ ಸೋನೆಗಳುಕದೆ
ಸವಡಿ ಮರನಲಿ ಸದೆದು ಹೊಕ್ಕುದು
ರವಿಸುತನ ಸಂತತಿ ಸುಷೇಣನು ವೀರ ವೃಷಸೇನ ॥8॥

೦೦೯ ದೊರೆಗೆ ದೊರೆಯಿದಿರಾಗಿ ...{Loading}...

ದೊರೆಗೆ ದೊರೆಯಿದಿರಾಗಿ ಕಾದಿತು
ತೆರಳದಿದು ದಿನವೇಳು ಪರಿಯಂ
ತರ ವಿಘಾತಿಯೊಳೊದಗೆ ಮೆಚ್ಚಿದರುಭಯ ವಾನರರು
ಅರಸ ನೀನಾರೆನೆ ಯುಧಿಷ್ಠಿರ
ನರಪತಿಯ ಕಥೆವೇಳೆ ಕೊಟ್ಟರು
ಪರಮ ವಸ್ತು ಪ್ರಚಯವನು ಮಾದ್ರೀ ಕುಮಾರಂಗೆ ॥9॥

೦೧೦ ತೆರಳುತಲ್ಲಿಮ್ ಬಳಿಕ ...{Loading}...

ತೆರಳುತಲ್ಲಿಂ ಬಳಿಕ ತೆಂಕಣ
ನರಪತಿಗಳಾನುವರೆ ಸೇನೆಯ
ಖುರಪುಟಕೆ ನುಗ್ಗಾಗಿ ತೆತ್ತರು ಸಕಲ ವಸ್ತುಗಳ
ಉರವಣಿಸಿ ಬಲನಡೆದು ನದಿಗಳ
ನರಸಿ ಕಾವೇರಿಯಲಿ ಬಿಟ್ಟುದು
ಹರಿದುದಲ್ಲಿಂ ಧಾಳಿ ಘನ ಮಾಹಿಷ್ಮತೀ ಪುರಕೆ ॥10॥

೦೧೧ ಧಾಳಿಯೆನಲಿದಿರಾಗಿ ಹೊರವಂ ...{Loading}...

ಧಾಳಿಯೆನಲಿದಿರಾಗಿ ಹೊರವಂ
ಟಾಳು ತಾಗಿದುದಲ್ಲಿಗಧಿಪತಿ
ನೀಲನೆಂಬಾತನು ಮಹಾಹವವಾಯ್ತು ಚೂಣಿಯಲಿ
ಹೇಳಲದ್ಭುತವುರಿದುದಧಿಕ
ಜ್ವಾಲೆಯಲಿ ಚತುರಂಗಬಲ ಹರ
ಭಾಳನಯನ ಕವಾಟ ತೆರೆದಂತಾಯ್ತು ನಿಮಿಷದಲಿ ॥11॥

೦೧೨ ಉರಿ ಸಮುದ್ರದೊಳದ್ದುದೋ ...{Loading}...

ಉರಿ ಸಮುದ್ರದೊಳದ್ದುದೋ ಮೋ
ಹರವು ತೆಗೆ ತೆಗೆ ಕುನ್ನಿಗಳ ಕಾ
ತರಿಸಿಲೀಯದಿರಾನೆ ಮುರಿಯಲಿ ಹೊಕ್ಕ ಕುದುರೆಗಳು
ಮರಳಿಚಲಿ ತೇರುಗಳ ಸೂತರ
ಕರೆದು ವಾಘೆಯ ಸೆಳೆ ಪದಾತಿಯ
ತಿರುಗ ಹೊಯ್‍ಹೊಯ್ಯೆನುತ ಮಿಗೆ ಗಜರಿದನು ಸಹದೇವ ॥12॥

೦೧೩ ರಾಯದಳವೇಕುರಿದುದೇನಿದ ...{Loading}...

ರಾಯದಳವೇಕುರಿದುದೇನಿದ
ರಾಯಸವು ಹೊಸತಾಯ್ತು ವೈಶಂ
ಪಾಯ ಮುನಿ ಹೇಳೆನಲು ನಗುತಿಂತೆಂದನಾ ಮುನಿಪ
ರಾಯ ಕೇಳೈ ಪೂರ್ವದಲಿ ಕಮ
ಲಾಯತಾಕ್ಷಿಯರುಂಟು ಹಲಬರು
ವಾಯುಸಖ ಪರದಾರ ಗಮನವ ಮೆಚ್ಚಿದನು ಬಳಿಕ ॥13॥

೦೧೪ ಪಾವಕ ದ್ವಿಜ ...{Loading}...

ಪಾವಕ ದ್ವಿಜ ವೇಷದಲಿ ಬಂ
ದಾ ವಧುಗಳಡನಿರಲು ನಗರವ
ಕಾವವರು ಹಾದರವ ಹಿಡಿದರು ಹವ್ಯವಾಹನನ
ಕೋವಿದರ ಮುಂದಿಕ್ಕಿದರೆ ಧ
ರ್ಮಾವಲಂಬನ ಶಾಸ್ತ್ರಗಳನು
ದ್ಭಾವಿಸಲು ಭುಗಿಲೆಂದು ತೋರಿದನಗ್ನಿ ನಿಜತನುವ ॥14॥

೦೧೫ ಧರಣಿಸುರರಲಿ ಸುಪ್ರಧಾನರು ...{Loading}...

ಧರಣಿಸುರರಲಿ ಸುಪ್ರಧಾನರು
ವೆರಸಿ ಬಂದಗ್ನಿಯ ಪದತ್ರಯ
ಕೆರಗಿ ಕೋಪಸ್ತಂಭವನು ಮಾಡಿದರು ದೈನ್ಯದಲಿ
ಪುರದಲದು ಮೊದಲಾಗಿ ಕಾಮಿನಿ
ಯರಿಗೆ ಹಾದರ ಸಲುವುದಿದು ವಿ
ಸ್ತರಣವೆಂದು ಕೃಶಾನು ವರವನು ಕೊಟ್ಟನಾ ನೃಪಗೆ ॥15॥

೦೧೬ ಅದುವೆ ಮೊದಲಾಗೀಗಳಲ್ಲಿಯ ...{Loading}...

ಅದುವೆ ಮೊದಲಾಗೀಗಳಲ್ಲಿಯ
ಸುದತಿಯರು ಸ್ವಚ್ಛಂದ ಚಾರಿಯ
ರಿದರಿನಾ ನೃಪತಿಗೆ ಸಹಾಯವನಗ್ನಿ ಮಾಡುವನು
ಇದನರಿತು ಸಹದೇವನುಪವಾ
ಸದಲಿ ಮಿಂದು ಕುಶಾಗ್ರ ಸಂಸ್ತರ
ಣದಲಿ ಪವಡಿಸಿ ಬೇಡಿಕೊಂಡನು ವಹ್ನಿ ಸೂಕ್ತದಲಿ ॥16॥

೦೧೭ ಯಾಗವಿದು ನಿನಗೋಸುಗವೆ ...{Loading}...

ಯಾಗವಿದು ನಿನಗೋಸುಗವೆ ನೃಪ
ಯಾಗ ಸಿದ್ಧಿಗೆ ಬಂದೆವಲ್ಲದೆ
ಮೇಗೆ ತಾನರಿಯದೆ ಧನಾಶೆಯಲಿವನ ಮುರಿಯವಲೆ
ಈಗ ನೀನಡ್ಡೈಸಲೆಮ್ಮಯ
ಯಾಗವಳಿಯಲಿ ನಿನಗೆ ಮಾಣಲಿ
ಯಾಗ ಪೌರೋಹಿತ್ಯವೆಂದನು ನಗುತ ಸಹದೇವ ॥17॥

೦೧೮ ಎನ್ದು ನಾನಾವಿಧ ...{Loading}...

ಎಂದು ನಾನಾವಿಧ ವರ ಸ್ತುತಿ
ಯಿಂದ ಹೊಗಳಿದರಗ್ನಿ ಮೆಚ್ಚಿದ
ನಿಂದು ಬಿಡಿಯೆನೆ ಬಿಟ್ಟೆನೀತನ ಮಾರಿದೆನು ನಿನಗೆ
ಎಂದು ಶಿಖಿ ಹಿಮ್ಮೆಟ್ಟಲಾ ದಳ
ಮುಂದೆ ನಡೆದುದು ನೀಲ ಪುರದಲಿ
ಸಂದಣಿಸಿ ಬಳಿಕಾತನೀತನ ಕಂಡು ಪೊಡವಂಟ ॥18॥

೦೧೯ ತೆತ್ತನವ ಸರ್ವಸ್ವವನು ...{Loading}...

ತೆತ್ತನವ ಸರ್ವಸ್ವವನು ತಾ
ನೆತ್ತಿ ಬಂದನು ಕೂಡೆ ಬಳಿಕಿನೊ
ಳುತ್ತರೋತ್ತರವಾಯ್ತು ಸಹದೇವನಿಗೆ ದಿಗ್ವಿಜಯ
ಮತ್ತೆ ಸಹ್ಯಾಚಲದ ಕೊಳ್ಳದ
ಗುತ್ತರಿನ ಭೂಪರ ವಿಭಾಡಿಸಿ
ಸುತ್ತಿ ಬಂದಾದರಿಸಿದನು ತದ್ಗಿರಿನಿವಾಸಿಗಳ ॥19॥

೦೨೦ ಇಳಿದು ಕೊಙ್ಕಣ ...{Loading}...

ಇಳಿದು ಕೊಂಕಣ ಗೌಳವರ ಕೇ
ರಳರ ಸದೆದು ಮಹಾಘ್ರರತ್ನಾ
ವಳಿಯ ಹೇರಿಸಿದನು ಸುಚಿತ್ರಾಂಬರವಿಲೇಪನವ
ಜಲಧಿಯಂತದ್ರ್ವೀಪ ಪತಿಗಳ
ಕುಲವ ಶೋಧಿಸಿ ಚೋಳ ಪಾಂಡ್ಯರ
ದಳವ ಧಟ್ಟಿಸಿ ಕೊಂಡನನುಪಮ ಸಾರವಸ್ತುಗಳ ॥20॥

೦೨೧ ಕಳುಹಿದನು ಮಿಗೆಯಾಪ್ತ ...{Loading}...

ಕಳುಹಿದನು ಮಿಗೆಯಾಪ್ತ ಪತ್ರಾ
ವಳಿಯ ತನುಜನ ಬಳಿಗೆ ತತ್‍ಕ್ಷಣ
ದೊಳಗೆ ಹೇಳಿಕೆಯಾಯ್ತು ಪರಿವಾರಕೆ ಘಟೋತ್ಕಚನ
ತಿಳಿದ ಕಾರಿರುಳೆರಕವೋ ಮೇಣ್
ಖಳ ಜನದ ಹೃದಯಾಂಧಕಾರದ
ಹೊಳಕೆಯೋ ತಾನೆನುತಿರಲು ನಡೆತಂದನಾ ದನುಜ ॥21॥

೦೨೨ ಪಾಳೆಯವ ಹೊಕ್ಕನು ...{Loading}...

ಪಾಳೆಯವ ಹೊಕ್ಕನು ಘಟೋತ್ಕಚ
ನಾಳು ಸಹಿತಯ್ಯಂಗೆ ನಮಿಸಿದ
ನೂಳಿಗವ ಹೇಳೆನಗೆ ಬೆಸಸಾ ರಾಜಕಾರಿಯವ
ವೀಳೆಯವ ತಾಯೆನಲು ನಗುತ ವಿ
ಶಾಲ ವಿನಯಕೆಮೆಚ್ಚಿದನು ಬಲು
ದೋಳಿನಲಿ ಸೆಳೆದಪ್ಪಿ ಮುಂಡಾಡಿದನು ನಂದನನ ॥22॥

೦೨೩ ಮಗನೆ ಲಙ್ಕೆಗೆ ...{Loading}...

ಮಗನೆ ಲಂಕೆಗೆ ಪೋಗು ಮಾನವ
ರಿಗೆ ಮಹೋದಧಿ ಗಮ್ಯವಲ್ಲತಿ
ವಿಗಡತನ ಬೇಡಲ್ಲಿ ವಿನಯದಲೆನ್ನು ಕಾರಿಯವ
ಸೊಗಸಿತೇ ಸಾಮದಲಿ ಕಪ್ಪವ
ತೆಗೆವುದವಗಡಿಸಿದರೆ ಬಳಿಕ
ಲ್ಲಿಗೆ ಶರಾಳಿಗಳಿವೆ ವಿಘಾತಿಗೆ ದೋಷವಿಲ್ಲೆಂದ ॥23॥

೦೨೪ ಎನೆ ಹಸಾದವ ...{Loading}...

ಎನೆ ಹಸಾದವ ಹಾಯ್ಕಿ ಭೀಮನ
ತನಯ ಕಳುಹಿಸಿಕೊಂಡು ತೆಂಕಲು
ಮನದಿ ಮುನ್ನವೆ ಬಂದ ರಾಮೇಶ್ವರದ ಶಿವ ಗೃಹಕೆ
ವಿನಯ ಮಿಗೆ ಪೊಡವಂಟು ರಘು ನಂ
ದನನ ಕೀರ್ತಿಸ್ತಂಭಡಂಬರ
ವೆನಿಪ ಸೇತುವ ಕಂಡು ನಡೆದನು ತೆಂಕ ಮುಖವಾಗಿ ॥24॥

೦೨೫ ತೋರಿತತಿ ದೂರದಲಿ ...{Loading}...

ತೋರಿತತಿ ದೂರದಲಿ ಲಂಕೆಯ
ಮೂರು ಶಿಖರದ ದುರ್ಗವುದಧಿಗೆ
ಮಾರುದದಿಯೆನೆ ಮೆರೆದುದಂದು ಮಣಿಪ್ರಭಾವದಲಿ
ನೂರು ಯೋಜನ ಸೇತು ಮೂಲವ
ಮೀರಿ ನಡೆದನು ಬಡಗವಾಗಿಲ
ಕೀಲಿದಗಳಿನ ಪಡಿಮಗವ ದಾಟಿದನು ವಹಿಲದಲಿ ॥25॥

೦೨೬ ಕೇರಿ ಕೇರಿಗಳೊಳಗೆ ...{Loading}...

ಕೇರಿ ಕೇರಿಗಳೊಳಗೆ ನಿಜ ಪರಿ
ವಾರ ಸಹಿತ ವೃಕೋದರಾತ್ಮಜ
ನಾರಿವನು ತಾನಾರೆನಲು ನಡೆತಂದನೊಲವಿನಲಿ
ವೀರ ದಾನವ ವರ್ಗದಲಿ ಬಹ
ತೋರಹತ್ತನ ಕಂಡಪೂರ್ವ ವಿ
ಕಾರಿ ಮಾನಿಸನಲ್ಲೆನುತ ಮುತ್ತಿದುದು ಪೌರಜನ ॥26॥

೦೨೭ ಬನ್ದನರಮನೆಗಾಗಿ ಬಾಗಿಲ ...{Loading}...

ಬಂದನರಮನೆಗಾಗಿ ಬಾಗಿಲ
ಮುಂದಣೆಡ ಬಲ ಹೇಮ ವೇದಿಯ
ಸಂದಣಿಯ ಜನ ನೋಡಲೆಂದನು ದೋರಪಾಲರಿಗೆ
ಇಂದು ನಾವುತ್ತರದ ಭೂಮಿಪ
ರಿಂದ ಬಂದೆವು ಪೇಳು ನಿಜಪತಿ
ಗೆಂದಡವ ಬಂದನು ವಿಭೀಷಣ ದೇವನೋಲಗಕೆ ॥27॥

೦೨೮ ಜೀಯ ಬಿನ್ನಹ ...{Loading}...

ಜೀಯ ಬಿನ್ನಹ ಬಂದನುತ್ತರ
ರಾಯನಟ್ಟಿದ ದೂತನೆನೆ ತ
ಪ್ಪಾಯಿತೇ ಹೊಗಿಸೆನಲು ಕರೆದನು ಕಲಿ ಘಟೋತ್ಕಚನ
ವಾಯು ತನುಜನ ಸುತನು ತನ್ನ ಪ
ಸಾಯತರು ಸಹಿತೊಳಗೆ ಹೊಕ್ಕು ನ
ವಾಯೆಯಲಿ ನಡೆತಂದು ಕಾಣಿಕೆ ಕೊಟ್ಟು ಪೊಡವಂಟ ॥28॥

೦೨೯ ಬಿಗಿದ ಮರಕತ ...{Loading}...

ಬಿಗಿದ ಮರಕತ ಮಣಿಯ ನೆಲಗ
ಟ್ಟುಗಳ ಹವಳದ ಹಲಗೆಗಳ ಮಾ
ಳಿಗೆಯ ವೈಡೂರ್ಯದ ಕವಾಟದ ವಜ್ರಭಿತ್ತಿಗಳ
ಹೊಗರಿಡುವ ಹರಿ ನೀಲಮಣಿ ವೇ
ದಿಗಳ ಮುತ್ತಿನ ಲಂಬಳದ ಲೋ
ವೆಗಳ ಕಾಂತಿಯ ಲಳಿಯ ಲಹರಿಯೊಳೆದ್ದನಮರಾರಿ ॥29॥

೦೩೦ ಇತ್ತ ಬಾರೈ ...{Loading}...

ಇತ್ತ ಬಾರೈ ಕುಳ್ಳಿರೆತ್ತಣ
ದೆತ್ತ ಬರವಾರಟ್ಟಿದರು ನೀ
ವೆತ್ತಣವರೇನೆಂದು ನಿಮ್ಮಭಿದಾನವೇನಹುದು
ಬಿತ್ತರಿಸಿ ಹೇಳೆನಲು ಕೈಮುಗಿ
ವುತ್ತ ನುಡಿದನು ರಾವಣಾನುಜ
ಚಿತ್ತವಿಪುದೆಮ್ಮಖಿಳ ಪೂರ್ವೋತ್ತರದ ಸಗತಿಯು ॥30॥

೦೩೧ ಸೋಮ ವಂಶದಲರಸುಗಳು ...{Loading}...

ಸೋಮ ವಂಶದಲರಸುಗಳು ನಿ
ಸ್ಸೀಮರಿದ್ದರು ಪಲಬರದರೊಳು
ಭೂಮಿಗಧಿಪಪತಿ ಪಾಂಡುವಾತಂಗೈವರಾತ್ಮಜರು
ಆ ಮಹೀಪತಿ ಧರ್ಮನಂದನ
ಭೀಮ ಫಲುಗುಣ ನಕುಲನಲ್ಲಿ ಸ
ನಾಮ ಸಹದೇವಾಖ್ಯನಿನಿಬರು ಚಿತ್ತವಿಸಿಯೆಂದ ॥31॥

೦೩೨ ಅರಸನೆನ್ದರೆ ಸಕಲ ...{Loading}...

ಅರಸನೆಂದರೆ ಸಕಲ ಧರ್ಮಕೆ
ಕರಚರಣವಾದಂತೆಯಾತನ
ಕಿರಿಯರಿಹರು ಚತುರ್ವಿಧೋಪಾಯ ಸ್ವರೂಪದಲಿ
ಸುರಮುನಿಯ ಮತದಿಂದ ಯಾಗೋ
ತ್ಕರ್ಷಕಾದುದು ಬುದ್ಧಿ ಜನಪಾ
ಧ್ವರದ ದಿಗ್ವಿಜಯಾಭಿಸಂಧಿಗೆ ಮಾಡಿದನು ಮನವ ॥32॥

೦೩೩ ಬಡಗಲರ್ಜುನನುತ್ತರಾಬ್ಧಿಯ ...{Loading}...

ಬಡಗಲರ್ಜುನನುತ್ತರಾಬ್ಧಿಯ
ತಡಿಯ ನೆಲ ಪರಿಯಂತವಸ್ತುವ
ಜಡಿದು ತಂದನು ಮೂಡಲಾವರಿಸಿದನು ಕಲಿ ಭೀಮ
ಪಡುವಲರ್ಜುನನನುಜ ತೆಂಕಣ
ಕಡೆಗೆ ಸಹದೇವಾಖ್ಯನೀ ಪರಿ
ನಡೆವುತಿದ್ದುದು ತಾ ಘಟೋತ್ಕಚ ಭೀಮಸುತನೆಂದ ॥33॥

೦೩೪ ಅರಸನೊನ್ದು ನಿಮಿತ್ತ ...{Loading}...

ಅರಸನೊಂದು ನಿಮಿತ್ತ ದೇಶಾಂ
ತರ ಪರಿಭ್ರಮಣದಲಿ ವಿಪಿನಾಂ
ತರದೊಳಿರೆಬಂದನು ಹಿಡಿಂಬಕನೆಂಬನಸುರಪತಿ
ಕೆರಳಿಚಿದೊಡಾ ಭೀಮನಾತನ
ನೊರಸಿದನು ಖಳನನುಜೆಯಾತಂ
ಗರಸಿಯಾದಳು ಸತಿ ಹಿಡಿಂಬಿಕೆ ಮಾತೆ ತನಗೆಂದ ॥34॥

೦೩೫ ಇನಿಬರಿಗೆಪತಿ ದೇವಕೀ ...{Loading}...

ಇನಿಬರಿಗೆಪತಿ ದೇವಕೀ ನಂ
ದನನಘಾಸುರಮಥನ ಮಧು ಸೂ
ದನ ಮುರಾಂತಕ ದೈತ್ಯ ಮರ್ದನ ಭಕ್ತಸುರಧೇನು
ಮುನಿಹೃದಯ ಪರ್ಯಂಕ ಕರುಣಾ
ವನಧಿ ರಾವಣ ಕಂಠ ಕಾನನ
ಘನ ಪರಶುವೀಕೃಷ್ಣನೈವರ ಜೀವ ಸಖನೆಂದ ॥35॥

೦೩೬ ಕ್ರತುವಿದಸುರಾರಾತಿಗೀ ಕ್ರತು ...{Loading}...

ಕ್ರತುವಿದಸುರಾರಾತಿಗೀ ಕ್ರತು
ಪತಿ ಯುಧಿಷ್ಠಿರ ದೂತ ನಾನಿದ
ರತಿಶಯವ ನೀ ಬಲ್ಲೆಯೆನೆ ನೋಡಿದನು ತನ್ನವರ
ಹಿತವಿದಿದರಿಂದಧಿಕ ಪುಣ್ಯ
ಪ್ರತತಿಯುಂಟೇ ರಾಮಚಂದ್ರನ
ವಿತತಿ ಕೀರ್ತಿ ತ್ರೇತೆಯೀ ದ್ವಾಪರದಲಾಯ್ತೆಂದ ॥36॥

೦೩೭ ತಾವು ಮತ್ರ್ಯರು ...{Loading}...

ತಾವು ಮತ್ರ್ಯರು ಪೂರ್ವಯುಗದವ
ರಾವು ತಮ್ಮಂತರವ ನೋಡದೆ
ದೇವರೆದೆದಲ್ಲಣದ ಲಂಕೆಯ ತಾವನೀಕ್ಷಿಸದೆ
ಆವುದುಚಿತಾನುಚಿತವೆಂಬುದ
ಭಾವಿಸದ ಗರ್ವಿತರ ನೋಡಿ
ನ್ನಾವ ಸದರವೊ ನಾವೆನುತ ಗರ್ಜಿಸಿತು ಖಳನಿಕರ ॥37॥

೦೩೮ ನೊಸಲಿನಲಿ ಕಣ್ಣುಳ್ಳ ...{Loading}...

ನೊಸಲಿನಲಿ ಕಣ್ಣುಳ್ಳ ದೇವನು
ವೊಸೆದು ಲಂಕಾ ದ್ವೀಪಸೀಮೆಗೆ
ಮಿಸುಕಲಮ್ಮನು ಬಂದು ಕಂಡವರಿಲ್ಲ ಪಟ್ಟಣವ
ಬಿಸಜಸಂಭವನಾದಿ ದೇವ
ಪ್ರಸರ ಮಿಗೆ ನಡುಗುತ್ತಲಿಪ್ಪುದು
ನುಸಿಗಳಹ ಮಾನವರ ಪಾಡೇನೆನುತ ಗರ್ಜಿಸಿತು ॥38॥

೦೩೯ ಕಾಳಗದೊಳಿನ್ದೆಮಗೆ ದಿವಿಜೇಂ ...{Loading}...

ಕಾಳಗದೊಳಿಂದೆಮಗೆ ದಿವಿಜೇಂ
ದ್ರಾಳಿಯಲಿ ಸಮಭಟರ ಕಾಣೆವು
ಮೇಳವೇ ಮಝಪೂತು ಮತ್ರ್ಯರ ಸಹಸವೆಮ್ಮೊಡನೆ
ತೋಳನಳವಿಗೆ ಮಲೆತ ಕುರಿಗಳ
ಜಾಲದಂತಿಹುದೆಂದು ಮಂದಕ
ರಾಳಮತಿಗಳು ನಗಲು ಕಂಡನು ಕಲಿ ಘಟೋತ್ಕಚನು ॥39॥

೦೪೦ ನಾಲಗೆಯ ನೆಣಗೊಬ್ಬುಗಳಲಿ ...{Loading}...

ನಾಲಗೆಯ ನೆಣಗೊಬ್ಬುಗಳಲಿ ಛ
ಡಾಲಿಸಿದರೇನಹುದು ಸಭೆಯಲಿ
ಕಾಳಗದೊಳಿದಿರಾರು ಭೀಮಾರ್ಜುನರ ಭಾರಣೆಗೆ
ಆಳುತನವಂತಿರಲಿ ವೈಷ್ಣವ
ಮೌಳಿ ಬೆಸಸಲಿ ಕೇಳ್ವೆನೆನೆ ಕ
ಟ್ಟಾಳುಗಳ ದೇವನು ವಿಭೀಷಣ ನಗುತಲಿಂತೆಂದ ॥40॥

೦೪೧ ಕಾಲವಾವುದು ತನ್ನ ...{Loading}...

ಕಾಲವಾವುದು ತನ್ನ ಶಕ್ತಿಯ
ಕೀಳು ಮೇಲಾವುದು ಸಹಾಯದ
ಮೇಲು ಸೆರಗೇನೆಂದು ನೋಡದೆ ಬಯಲ ಗರ್ವದಲಿ
ಸೋಲುವುದು ಜಗವಿಹಪರದ ಗತಿ
ಕಾಳಹುದು ಖಳರರಿಯರದನು
ಬ್ಬೇಳುವರು ಬರಿದೆಂದು ಜರೆದನು ತನ್ನ ಮಂತ್ರಿಗಳ ॥41॥

೦೪೨ ಅದರಿನೀ ದ್ವಾಪರದಲೀ ...{Loading}...

ಅದರಿನೀ ದ್ವಾಪರದಲೀ ಹರಿ
ಯುದಯಿಸಿದನಾ ಕಾಲದಲಿ ಸಲ
ಹಿದನು ನಮ್ಮನು ಹಿಡಿದದನಿವರನು ವರ್ತಮಾನದಲಿ
ಪದದ ದರ್ಪದಲಂಬುಜಾಕ್ಷನ
ಪದವ ಮರೆದರೆ ಪಾತಕದ ದು
ರ್ಗದಲಿ ಕೆಡಹನೆ ನಮ್ಮನೆಂದು ವಿಭೀಷಣನು ನುಡಿದ ॥42॥

೦೪೩ ತರಿಸಿದನು ಭಣ್ಡಾರದಲಿ ...{Loading}...

ತರಿಸಿದನು ಭಂಡಾರದಲಿ ಪರಿ
ಪರಿಯ ಪೆಟ್ಟಿಗೆಗಳನು ಕಂಠಾ
ಭರಣ ಕಂಕಣ ವಜ್ರ ಮಾಣಿಕ ಮರಕತಾವಳಿಯ
ಚರಣ ನೂಪುರ ಝಳವಟಿಗೆಯುಂ
ಗುರ ಕಿರೀಟಾಂಗದ ಸುಕರ್ಣಾ
ಭರಣವನು ತೆಗೆಸಿದನು ಭೀಮಕುಮಾರ ನೋಡೆನುತ ॥43॥

೦೪೪ ನೀಲಮಣಿ ಕಾನ್ತಿಗಳ ...{Loading}...

ನೀಲಮಣಿ ಕಾಂತಿಗಳ ಹೊಯ್ಲಲಿ
ಕಾಳ ರಜನಿಯೊಲಾಯ್ತು ಮುತ್ತಿನ
ಢಾಳ ಢವಳಿಸಲಾಯ್ತು ಚಂದ್ರಿಕರ ತನುವ ಡೊಕ್ಕರಿಸಿ
ಮೇಗೆ ಹೊಂಬಿಸಿಲಾಯ್ತು ಮಾಣಿಕ
ದೇಳಗೆಯ ಲಹರಿಯಲಿ ವರ ರ
ತ್ನಾಳಿ ರುಚಿಯಲಿ ಚಂಡಿಯಾಯಿತು ದಿವಸವಂದಿನಲಿ ॥44॥

೦೪೫ ತೆಗೆಸಿದನು ಗಜದನ್ತಮಯ ...{Loading}...

ತೆಗೆಸಿದನು ಗಜದಂತಮಯ ಪೆ
ಟ್ಟಿಗೆಗಳನು ಕರ್ಪುರದ ತವಲಾ
ಯಿಗಳ ಹವಳದ ಮಂಚವನು ಮಣಿಖಚಿತ ರಚನೆಗಳ
ಬಿಗಿದ ವಜ್ರಪ್ರಭೆಯ ಹೊನ್ನಾ
ಯುಗದ ಖಡ್ಗ ಕಠಾರಿಗಳ ಝಗ
ಝಗಿಪ ಹೊಂಗೆಲಸದ ವಿಚಿತ್ರದ ಜೋಡು ಸೀಸಕವ ॥45॥

೦೪೬ ಗುಳವ ರೆಞ್ಚೆಯ ...{Loading}...

ಗುಳವ ರೆಂಚೆಯ ಹಕ್ಕರಿಕೆ ಹ
ಲ್ಲಳವ ಮಣಿ ಕಾಂಚನಮಯಂಗಳ
ಕೆಲಸ ಗತಿಗಳ ಹೇಮರೇಖೆಯ ವಿವಿಧ ಚಿತ್ರಗಳ
ಬಿಳಿಯ ಚೌರಿಯ ಹೊರೆಗಳುರು ಹ
ತ್ತಳದ ಕಟ್ಟಿಗೆ ಬೇಂಟೆಗಳ ಹದ
ವಿಲು ತದೀಯ ಶರಾಳಿಗಳ ತಂದಿಳುಹಿದರು ಚರರು ॥46॥

೦೪೭ ಬಲಮುರಿಯ ಶಙ್ಖಗಳ ...{Loading}...

ಬಲಮುರಿಯ ಶಂಖಗಳ ಗಂಧದ
ಬಲು ಹೊರೆಯ ಕೃಷ್ಣಾಗರುವಿನೊ
ಟ್ಟಿಲ ಸುರಂಗಿನ ಪಟ್ಟಿಪಟ್ಟಾವಳಿಯ ದಿಂಡುಗಳ
ಪುಲಿದೊಗಲ ಕೃಷ್ಣಾಜಿನಂಗಳ
ಹೊಳೆವ ಹೊಂಗೊಪ್ಪರಿಗೆ ಚಿತ್ರಾ
ವಳಿಯ ಸತ್ತಿಗೆ ಹೇಮಘಟ ಸಂತತಿಯನೊಟ್ಟಿದರು ॥47॥

೦೪೮ ಕೀಳಿಸಿದನರಮನೆಯ ಹೇಮದ ...{Loading}...

ಕೀಳಿಸಿದನರಮನೆಯ ಹೇಮದ
ತಾಳ ಮರ ಹದಿನಾಲ್ಕನಧ್ವರ
ಶಾಲೆಯಿದಿರಲಿ ತೋರಣ ಸ್ತಂಭಂಗಳಹವೆಂದು
ಮೇಲೆ ರಾಕ್ಷಸ ಟಂಕದಚ್ಚಿನ
ಜಾಳಿಗೆಗಳನು ತರಿಸಿ ಕಟ್ಟಿಸಿ
ಮೇಲು ಮುದ್ರೆಗಳಿಕ್ಕಿದವು ಕರೆಸಿದನು ಹೊರೆಯವರ ॥48॥

೦೪೯ ಕುಲಗಿರಿಯನೊಡೆ ಮೀಟಿ ...{Loading}...

ಕುಲಗಿರಿಯನೊಡೆ ಮೀಟಿ ತಮ್ಮಯ
ತಲೆಯೊಳಾನುವ ಕರ್ಕಶಾಂಗದ
ಕಲುದಲೆಯ ಹೇರೊಡಲ ಮಿಡುಕಿನ ಕಾಳ ರಕ್ಕಸರು
ಸೆಳೆದು ಹೊತ್ತರು ಹೊರೆಯನಿವರಿ
ಟ್ಟಳಿಸಿ ಹೊರವಂಟರು ವಿಭೀಷಣ
ಕಳುಹಿದನು ಪವಮಾನ ಸುತ ನಂದನನ ಸತ್ಕರಿಸಿ ॥49॥

೦೫೦ ದನುಜನಬ್ಧಿಯ ದಾಟಿ ...{Loading}...

ದನುಜನಬ್ಧಿಯ ದಾಟಿ ಸಹದೇ
ವನ ಸಮೀಪಕೆ ಬಂದು ರಾವಣ
ನನುಜ ಮಾಡಿದ ಬಹಳ ಸತ್ಕಾರವನು ಬಿನ್ನವಿಸಿ
ಅನಿಬರನು ಕಾಣಿಸಿದನಾ ಕಾಂ
ಚನಮಯದ ಹೊರೆ ಲಕ್ಕ ಸಂಖ್ಯೆಗ
ಳನುಪಮಿತ ರಕ್ಕಸರ ಕಂಡಂಜಿದುದು ನೃಪಕಟಕ ॥50॥

೦೫೧ ಲಾಲಿಸಿದನಾ ಖಳರನೆತ್ತಿತು ...{Loading}...

ಲಾಲಿಸಿದನಾ ಖಳರನೆತ್ತಿತು
ಪಾಳೆಯವು ನಡೆತಂದು ಪಯಣದ
ಮೇಲೆ ಪಯಣವನೈದಿ ಬಂದನು ತಮ್ಮ ಪಟ್ಟಣಕೆ
ಮೇಲೊಗುವ ಸುಮ್ಮಾನ ಸಿರಿಯ ಚ
ಢಾಳದಲಿ ತಂದಖಿಳ ವಸ್ತುವ
ನಾಲಯದೊಳೊಪ್ಪಿಸಿದನವನೀಪತಿಗೆ ಸಹದೇವ ॥51॥

+೦೫ ...{Loading}...