೦೦೦ ಸೂ ರಾಯಸಭೆ ...{Loading}...
ಸೂ. ರಾಯಸಭೆ ನಗಲೈದಿ ಯಂತ್ರದ
ದಾಯವನು ನೆರೆ ಗೆಲಿದು ನಿರ್ಜರ
ರಾಯನಂದನ ಕಾದಿ ಗೆಲಿದನು ಸಕಲ ರಿಪುನೃಪರ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ರಾಜನ ಸಭೆ (ಅಪಹಾಸ್ಯ ಮಾಡಿ) ನಗುತ್ತಿರಲು, ದೇವೇಂದ್ರನ ಪುತ್ರನಾದ ಅರ್ಜುನನು ವೇದಿಕೆಗೆ ಹೋಗಿ ಯಂತ್ರದ ಪಣವನ್ನು ಸಂಭ್ರಮದಲ್ಲಿ ಗೆದ್ದು ಎಲ್ಲ ಶತ್ರುರಾಜರೊಂದಿಗೆ ಕಾದಾಡಿ ಗೆದ್ದನು.
ಪದಾರ್ಥ (ಕ.ಗ.ಪ)
ದಾಯ-ಪಣ, ನೆರೆ-ಸಂಭ್ರಮ, ನಿರ್ಜರರಾಯ-ದೇವತೆಗಳ ಒಡೆಯ (ಇಂದ್ರ)
ಮೂಲ ...{Loading}...
ಸೂ. ರಾಯಸಭೆ ನಗಲೈದಿ ಯಂತ್ರದ
ದಾಯವನು ನೆರೆ ಗೆಲಿದು ನಿರ್ಜರ
ರಾಯನಂದನ ಕಾದಿ ಗೆಲಿದನು ಸಕಲ ರಿಪುನೃಪರ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಪಾಂಚಾಲಿಯ ಮನೋರಥ
ಶಾಲೆಯಲಿ ಸಾರಿದರಲೈ ಸಭೆಯಲಿ ಮಹೀಸುರರ
ಏಳಿ ಭುಜಬಲವುಳ್ಳವರು ವಿ
ಪ್ರಾಳಿಯಲಿ ಬಿಲುವಿಡಿದು ಯಂತ್ರದ
ಕೋಲುಗಳ ಕೇವಣಿಪುದೆಂದರು ಹೊಯ್ದು ಡಂಗುರವ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಚಾಲ ದೇಶದ ರಾಜನ ಮಗಳು ದ್ರೌಪದಿಯ ಇಷ್ಟಾರ್ಥ ನೆರವೇರುವ ಸ್ವಯಂವರ ಮಂಟಪದಲ್ಲಿ ವಿಪ್ರರ ಸಭೆಯಲ್ಲಿ ಡಂಗುರ ಹೊಡೆದು ಈ ರೀತಿ ಸಾರಿದರು “ಎದ್ದೇಳಿ, ವಿಪ್ರಸಮೂಹದಲ್ಲಿ ಭುಜಬಲವುಳ್ಳವರು. ಬಿಲ್ಲನ್ನು ಹಿಡಿದು ಬಾಣವನ್ನು ಹೂಡಿ ಯಂತ್ರವನ್ನು ಕೀಲಿಸಬಹುದು”.
ಪದಾರ್ಥ (ಕ.ಗ.ಪ)
ಕೋಲು-ಬಾಣ, ಕೇವಣಿಪುದು-ಕೀಲಿಸುವುದು
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಪಾಂಚಾಲಿಯ ಮನೋರಥ
ಶಾಲೆಯಲಿ ಸಾರಿದರಲೈ ಸಭೆಯಲಿ ಮಹೀಸುರರ
ಏಳಿ ಭುಜಬಲವುಳ್ಳವರು ವಿ
ಪ್ರಾಳಿಯಲಿ ಬಿಲುವಿಡಿದು ಯಂತ್ರದ
ಕೋಲುಗಳ ಕೇವಣಿಪುದೆಂದರು ಹೊಯ್ದು ಡಂಗುರವ ॥1॥
೦೦೨ ಬೆರಸುವರು ಪಾರ್ಥಿವರು ...{Loading}...
ಬೆರಸುವರು ಪಾರ್ಥಿವರು ಪಾರ್ಥಿವ
ವರರೊಡನೆ ತದಲಾಭ ಪಕ್ಷಾಂ
ತರಕೆ ಪಾರ್ಥಿವ ಸುತೆಯನೀವುದು ವಿಪ್ರಜಾತಿಯಲಿ
ಪುರುಷರನುಲೋಮದಲಿ ಕನ್ಯಾ
ವರಣವಹುದು ವಿಲೋಮದಲಿ ವಿ
ಸ್ತರಿಸಲೇಕಿದ ನೀವು ಬಲ್ಲಿರಿ ಶಾಸ್ತ್ರನಿರ್ಣಯವ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕ್ಷತ್ರಿಯರು ಕ್ಷತ್ರಿಯರೊಡನೆ ಸಂಬಂಧ ಬೆಳಸುವರು. ಅದು ಪ್ರಾಪ್ತಿಯಾಗದಿದ್ದ ಪಕ್ಷದಲ್ಲಿ ಕ್ಷತ್ರಿಯ ಪುತ್ರಿಯನ್ನು ಬ್ರಾಹ್ಮಣ ಜಾತಿಯ ವರನಿಗೆ ಕೊಡುವುದು. ಪುರುಷರು ಅನುಲೋಮಕ್ರಮದಲ್ಲಿಯೂ, ಕನ್ಯೆಯರು ವಿಲೋಮದಲ್ಲಿಯೂ ವಿವಾಹ ಮಾಡಿಕೊಳ್ಳಬಹುದು. ಇದನ್ನು ವಿಸ್ತರಿಸುವುದೇಕೆ ? ಶಾಸ್ತ್ರ ನಿಶ್ಚಯವನ್ನು ನೀವೇ ಬಲ್ಲಿರಿ.
ಪದಾರ್ಥ (ಕ.ಗ.ಪ)
ಪಾರ್ಥಿವ-ಕ್ಷತ್ರಿಯ, ಲಾಭ-ಪ್ರಾಪ್ತಿ, ಅನುಲೋಮ-ಯಥಾಕ್ರಮ, ವಿಲೋಮ-ಪ್ರತಿಕೂಲಕ್ರಮ, ನಿರ್ಣಯ-ನಿಶ್ಚಯ
ಮೂಲ ...{Loading}...
ಬೆರಸುವರು ಪಾರ್ಥಿವರು ಪಾರ್ಥಿವ
ವರರೊಡನೆ ತದಲಾಭ ಪಕ್ಷಾಂ
ತರಕೆ ಪಾರ್ಥಿವ ಸುತೆಯನೀವುದು ವಿಪ್ರಜಾತಿಯಲಿ
ಪುರುಷರನುಲೋಮದಲಿ ಕನ್ಯಾ
ವರಣವಹುದು ವಿಲೋಮದಲಿ ವಿ
ಸ್ತರಿಸಲೇಕಿದ ನೀವು ಬಲ್ಲಿರಿ ಶಾಸ್ತ್ರನಿರ್ಣಯವ ॥2॥
೦೦೩ ಎನ್ದು ಸಾರಿದ ...{Loading}...
ಎಂದು ಸಾರಿದ ದನಿಯನಾ ದ್ವಿಜ
ವೃಂದವಾಲಿಸಿ ನಮಗಿದೇಕರ
ವಿಂದವದನೆಯ ತೊಡಕು ತೆಗೆ ನಾವಾರು ಧನುವಾರು
ಬಂದ ದಕ್ಷಿಣೆ ಮೃಷ್ಟಭೋಜನ
ದಿಂದ ತುಷ್ಟರು ನಾವು ನಮಗಿದ
ರಿಂದ ಬಹ ದುಷ್ಕೀರ್ತಿ ಬರಲೆಂದುದು ಬುಧವ್ರಾತ ॥3॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆಂದು ಸಾರಿದ ಡಂಗುರದ ಧ್ವನಿಯನ್ನು ವಿಪ್ರರ ಸಮೂಹವು ಕೇಳಿ, “ನಮಗೆ ಕಮಲಮುಖಿಯ ತೊಂದರೆ ಏತಕ್ಕೆ ? ನಾವು ಯಾರು ? ಧನುಸ್ಸು ಎಲ್ಲಿಯದು ? ಸಿಕ್ಕಿದ ದಕ್ಷಿಣೆ ಮತ್ತು ಮೃಷ್ಟಾನ್ನ ಭೋಜನದಿಂದ ನಾವು ತೃಪ್ತರು. ನಮಗೆ ಇದರಿಂದ ಬರುವ ಅಪಕೀರ್ತಿ ಬರಲಿ” ಎಂದು ಪಂಡಿತರ ಸಮೂಹ ಹೇಳಿತು.
ಪದಾರ್ಥ (ಕ.ಗ.ಪ)
ತೊಡಕು-ತೊಂದರೆ, ತುಷ್ಟರು-ತೃಪ್ತರು, ದುಷ್ಕೀರ್ತಿ-ಅಪಕೀರ್ತಿ, ಬುಧ-ಪಂಡಿತ
ಮೂಲ ...{Loading}...
ಎಂದು ಸಾರಿದ ದನಿಯನಾ ದ್ವಿಜ
ವೃಂದವಾಲಿಸಿ ನಮಗಿದೇಕರ
ವಿಂದವದನೆಯ ತೊಡಕು ತೆಗೆ ನಾವಾರು ಧನುವಾರು
ಬಂದ ದಕ್ಷಿಣೆ ಮೃಷ್ಟಭೋಜನ
ದಿಂದ ತುಷ್ಟರು ನಾವು ನಮಗಿದ
ರಿಂದ ಬಹ ದುಷ್ಕೀರ್ತಿ ಬರಲೆಂದುದು ಬುಧವ್ರಾತ ॥3॥
೦೦೪ ವಚನಶೂರರು ನಾವು ...{Loading}...
ವಚನಶೂರರು ನಾವು ಪಾರ್ಥಿವ
ನಿಚಯವೇ ಭುಜ ಶೂರರನಿಬರ
ನಚಲ ಧನು ಭಂಗಿಸಿತು ನಮಗೀ ವಿದ್ಯೆ ವೈದಿಕವೆ
ಉಚಿತವಲ್ಲಿದು ನಮ್ಮ ಸಾಹಸ
ರಚನೆಯನು ನೋಡುವರೆ ಪಂಡಿತ
ನಿಚಯವಿದಿರಲಿ ನಿಲಲಿ ತೋರುವೆವಲ್ಲಿ ವಿಸ್ಮಯವ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಂಡಿತರ ಸಮೂಹವು ಮುಂದುವರೆದು, “ನಾವು ಮಾತಿನಲ್ಲಿ ಧೀರರು. ಕ್ಷತ್ರಿಯ ಸಮೂಹವೋ ಭುಜ ಪರಾಕ್ರಮಿಗಳು. ಅಷ್ಟೂ ಜನರನ್ನು ಚಲಿಸಲಾರದ ಧನುಸ್ಸು ಸೋಲಿಸಿತು. ನಮಗೆ ಈ ವಿದ್ಯೆಯೇನು ವೇದಗಳಿಗೆ ಸಂಬಂಧಿಸಿದುದೆ ? ಇದು ಯೋಗ್ಯವಲ್ಲ. ನಮ್ಮ ಶೌರ್ಯದ ಸಿದ್ಧತೆಯನ್ನು ನೋಡುವುದಾದರೆ ಪಂಡಿತ ಸಮೂºವು ಎದುರು ನಿಲ್ಲಲಿ. ಅಲ್ಲಿ ಆಶ್ಚರ್ಯವನ್ನು ತೋರಿಸುತ್ತೇವೆ” ಎಂದು ಹೇಳಿತು.
ಪದಾರ್ಥ (ಕ.ಗ.ಪ)
ಶೂರ-ಧೀರ, ವೈದಿಕ-ವೇದಕ್ಕೆ ಸಂಬಂಧಿಸಿದುದು, ಉಚಿತ-ಯೋಗ್ಯ, ಸಾಹಸ-ಶೌರ್ಯ, ರಚನೆ-ಸಿದ್ಧತೆ, ವಿಸ್ಮಯ-ಆಶ್ಚರ್ಯ, ನಿಚಯ-ಸಮೂಹ
ಮೂಲ ...{Loading}...
ವಚನಶೂರರು ನಾವು ಪಾರ್ಥಿವ
ನಿಚಯವೇ ಭುಜ ಶೂರರನಿಬರ
ನಚಲ ಧನು ಭಂಗಿಸಿತು ನಮಗೀ ವಿದ್ಯೆ ವೈದಿಕವೆ
ಉಚಿತವಲ್ಲಿದು ನಮ್ಮ ಸಾಹಸ
ರಚನೆಯನು ನೋಡುವರೆ ಪಂಡಿತ
ನಿಚಯವಿದಿರಲಿ ನಿಲಲಿ ತೋರುವೆವಲ್ಲಿ ವಿಸ್ಮಯವ ॥4॥
೦೦೫ ಸಾಙ್ಗ ವೇದ ...{Loading}...
ಸಾಂಗ ವೇದ ಪದಕ್ರಮದ ಸ
ರ್ವಾಂಗ ವಿಷಯದಲಖಿಳ ಪೌರಾ
ಣಂಗಳಲಿ ಮೀಮಾಂಸೆಯೊಳ್ ಸ್ಮೃತಿ ತರ್ಕ ಶಾಸ್ತ್ರದಲಿ
ಭಂಗಿಸುವೆವೀ ದ್ರೌಪದಿಯನಾ
ವಂಗದಲಿ ವಾತ್ಸ್ಯಾಯನಾದಿಯು
ಪಾಂಗ ವಿದ್ಯದಲೆಮ್ಮ ನೋಡೆಂದುದು ಬುಧಸ್ತೋಮ ॥5॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಷಡಂಗಗಳಿಂದ ಕೂಡಿದ ವೇದದಲ್ಲಿ, ಪದಕ್ರಮಾದಿ ಎಲ್ಲ ವಿಧಗಳಲ್ಲಿ, ಎಲ್ಲ ಪುರಾಣಗಳಲ್ಲಿ, ಮೀಮಾಂಸೆಯಲ್ಲಿ, ಸ್ಮೃತಿ, ತರ್ಕ ಶಾಸ್ತ್ರಗಳಲ್ಲಿ ಯಾವ ರೀತಿಯಲ್ಲಿ ಬೇಕಾದರೂ ಪರೀಕ್ಷಿಸಲಿ. ಈ ದ್ರೌಪದಿಯನ್ನು ಸೋಲಿಸುತ್ತೇವೆ. ವಾತ್ಸಾಯನಾದಿ ಒಳವಿಭಾಗಗಳ ವಿದ್ಯೆಯಲ್ಲಿ ಬೇಕಾದರೆ ನಮ್ಮನ್ನು ಪರೀಕ್ಷಿಸಲಿ ಎಂದಿತು ಪಂಡಿತರ ಸಮೂಹವು.
ಪದಾರ್ಥ (ಕ.ಗ.ಪ)
ಸಾಂಗ-ಷಡಂಗ, ಉಪಾಂಗ-ಒಳವಿಭಾಗ
ಟಿಪ್ಪನೀ (ಕ.ಗ.ಪ)
ಷಡಂಗ-ಶಿಕ್ಷೆ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ, ಕಲ್ಪ,
ಅಷ್ಟಾದಶ ಪುರಾಣಗಳು-ಮತ್ಸ್ಯ, ಮಾರ್ಕಂಡೇಯ, ಭವಿಷ್ಯ, ಭಾಗವತ, ಬ್ರಹ್ಮ, ಬ್ರಹ್ಮಾಂಡ, ಬ್ರಹ್ಮ ವೈವರ್ತ, ವಾಮನ, ವಾಯು, ವಿಷ್ಣು, ವರಾಹ, ಅಗ್ನಿ, ನಾರದ, ಪದ್ಮ, ಲಿಂಗ, ಗರುಡ, ಕೂರ್ಮ, ಸ್ಕಂದ,
ಅಷ್ಟಾದಶ ಸ್ಮೃತಿಕಾರರು-ವಿಷ್ಣು, ಪರಾಶರ, ದಕ್ಷ, ಸಚಿವರ್ತ, ವ್ಯಾಸ, ಹಾರೀತ, ಶಾತಾತಪ, ವಸಿಷ್ಠ, ಯಮ, ಆಪಸ್ತಂಭ, ಗೌತಮ, ದೇವಲ, ಶಂಖ, ಲಿಖಿತ, ಭಾರದ್ವಾಜ, ಉಶನ, ಅತ್ರಿ, ಶೌನಕ, ಯಾಜ್ಞವಲ್ಕ್ಯ
ಮೂಲ ...{Loading}...
ಸಾಂಗ ವೇದ ಪದಕ್ರಮದ ಸ
ರ್ವಾಂಗ ವಿಷಯದಲಖಿಳ ಪೌರಾ
ಣಂಗಳಲಿ ಮೀಮಾಂಸೆಯೊಳ್ ಸ್ಮೃತಿ ತರ್ಕ ಶಾಸ್ತ್ರದಲಿ
ಭಂಗಿಸುವೆವೀ ದ್ರೌಪದಿಯನಾ
ವಂಗದಲಿ ವಾತ್ಸ್ಯಾಯನಾದಿಯು
ಪಾಂಗ ವಿದ್ಯದಲೆಮ್ಮ ನೋಡೆಂದುದು ಬುಧಸ್ತೋಮ ॥5॥
೦೦೬ ಭರತದಲಿ ವೈದ್ಯದಲಿ ...{Loading}...
ಭರತದಲಿ ವೈದ್ಯದಲಿ ಕಾವ್ಯ ಸು
ವಿರಚಿತಾಲಂಕಾರದಲಿ ಗಜ
ತುರಗ ಲಕ್ಷಣದಲಿ ಸಮಾಹಿತ ಮಂತ್ರ ತಂತ್ರದಲಿ
ಸರಸ ಕವಿತಾರಚನೆಯಲಿ ವಿ
ಸ್ತರದುಪನ್ಯಾಸದಲಿ ಭೂಪತಿ
ಕರೆಸಿ ನೋಡಲಿ ನಮ್ಮನೆಂದರು ದ್ವಿಜರು ತಮತಮಗೆ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭರತಮುನಿಯ ನಾಟ್ಯ ಶಾಸ್ತ್ರದಲ್ಲಿ, ವೈದ್ಯಶಾಸ್ತ್ರದಲ್ಲಿ, ಕಾವ್ಯಾಲಂಕಾರ ರಚನೆಯಲ್ಲಿ, ಗಜತುರಗ ಲಕ್ಷಣ ಶಾಸ್ತ್ರಗಳಲ್ಲಿ, ವ್ಯವಸ್ಥೆಗೊಳಿಸಿದ ಮಂತ್ರ ತಂತ್ರಗಳಲ್ಲಿ, ರಸವತ್ತಾದ ಕವಿತೆಗಳ ರಚನೆಯಲ್ಲಿ, ವಿಸ್ತಾರವಾಗಿ ಉಪನ್ಯಾಸ ಮಾಡುವುದರಲ್ಲಿ ಮಹಾರಾಜ ನಮ್ಮನ್ನು ಕರೆಸಿ ನೋಡಲಿ ಎಂದು ತಮ್ಮತಮ್ಮಲ್ಲೇ ವಿಪ್ರರು ಅಂದುಕೊಂಡರು.
ಪದಾರ್ಥ (ಕ.ಗ.ಪ)
ಭರತ-ಭರತಮುನಿಯ ನಾಟ್ಯಶಾಸ್ತ್ರ, ಸಮಾಹಿತ-ವ್ಯವಸ್ಥೆಗೊಳಿಸಿದ.
ಮೂಲ ...{Loading}...
ಭರತದಲಿ ವೈದ್ಯದಲಿ ಕಾವ್ಯ ಸು
ವಿರಚಿತಾಲಂಕಾರದಲಿ ಗಜ
ತುರಗ ಲಕ್ಷಣದಲಿ ಸಮಾಹಿತ ಮಂತ್ರ ತಂತ್ರದಲಿ
ಸರಸ ಕವಿತಾರಚನೆಯಲಿ ವಿ
ಸ್ತರದುಪನ್ಯಾಸದಲಿ ಭೂಪತಿ
ಕರೆಸಿ ನೋಡಲಿ ನಮ್ಮನೆಂದರು ದ್ವಿಜರು ತಮತಮಗೆ ॥6॥
೦೦೭ ಅಲ್ಲದಿರ್ದರೆ ಶೋಧಿಸಿದ ...{Loading}...
ಅಲ್ಲದಿರ್ದರೆ ಶೋಧಿಸಿದ ತನಿ
ಬೆಲ್ಲವಿಕ್ಕಿದ ಹೂರಿಗೆಯ ಮೆದೆ
ಯಲ್ಲಿ ಪರಡಿಯ ಶಾವಿಗೆಯ ಪರಿಪರಿಯ ಪಾಯಸದ
ಪುಲ್ಲಿಗೆಯ ತತ್ಸವಿಯ ಮಂಡಿಗೆ
ಯಲ್ಲಿ ನವಘೃತ ಸೂಪದಂಶಕ
ದಲ್ಲಿ ನೋಡಲಿ ನಮ್ಮನೆಂದುದು ಧೂರ್ತ ವಟುನಿಕರ ॥7॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದಲ್ಲದಿದ್ದರೆ, ಶುದ್ಧಿ ಮಾಡಿದ ಸಿಹಿಬೆಲ್ಲವನ್ನು ಒಳಗಿಟ್ಟ ಪೂರಿಯ ರಾಶಿಯಲ್ಲಿ, ಪದಡಿ, ಗೋಧಿಯ ಸೇವಿಗೆ, ಶಾವಿಗೆ ಮೊದಲಾದ ಬಗೆ ಬಗೆಯ ಪಾಯಸಗಳಲ್ಲಿ, ಹೋಳಿಗೆಯ ಹಾಗೂ ಅದೇ ಸವಿಯ ಮಂಡಿಗೆಗಳಲ್ಲಿ, ಹೊಸದಾದ ತುಪ್ಪ, ಸಾರು, ತೊವ್ವೆ, ಮುಂತಾದ ವ್ಯಂಜನ ಪದಾರ್ಥಗಳಲ್ಲಿ, ಉಪ್ಪಿನಕಾಯಿಯಲ್ಲಿ ನಮ್ಮ ಪರಾಕ್ರಮವನ್ನು ನೋಡಲಿ ಎಂದು ತುಂಟ ವಟು ಸಮೂಹವು ಹೇಳಿತು.
ಪದಾರ್ಥ (ಕ.ಗ.ಪ)
ತನಿ-ಸಿಹಿ, ಹೂರಿಗೆ-ಪೂರಿಗೆ, ಮೆದೆ-ರಾಶಿ, ಪುಲ್ಲಿಗೆ-ಹೋಳಿಗೆ, ಘೃತ-ತುಪ್ಪ, ಸೂಪ-ಸಾರು, ತೊವ್ವೆ ಮುಂತಾದ ವ್ಯಂಜನ ಪದಾರ್ಥಗಳು,\
ದಂಶಕ-ಉಪ್ಪಿನಕಾಯಿ, ಧೂರ್ತ-ತುಂಟ, ಪರಡಿ-ಗೋಧಿಯ ಸೇವಿಗೆ
ಮೂಲ ...{Loading}...
ಅಲ್ಲದಿರ್ದರೆ ಶೋಧಿಸಿದ ತನಿ
ಬೆಲ್ಲವಿಕ್ಕಿದ ಹೂರಿಗೆಯ ಮೆದೆ
ಯಲ್ಲಿ ಪರಡಿಯ ಶಾವಿಗೆಯ ಪರಿಪರಿಯ ಪಾಯಸದ
ಪುಲ್ಲಿಗೆಯ ತತ್ಸವಿಯ ಮಂಡಿಗೆ
ಯಲ್ಲಿ ನವಘೃತ ಸೂಪದಂಶಕ
ದಲ್ಲಿ ನೋಡಲಿ ನಮ್ಮನೆಂದುದು ಧೂರ್ತ ವಟುನಿಕರ ॥7॥
೦೦೮ ರಸದ ಹೊರಲೇಪದಲಿ ...{Loading}...
ರಸದ ಹೊರಲೇಪದಲಿ ಹುದುಗಿದ
ಮಿಸುನಿಯಂತಿರೆ ಜೀವಭಾವ
ಪ್ರಸರದೊಳಗವಲಂಬಿಸಿದ ಪರಮಾತ್ಮನಂದದಲಿ
ಎಸೆವ ವಿಪ್ರಾಕಾರದಲಿ ರಂ
ಜಿಸುವ ಭೂಪತಿ ತತ್ಸಭಾಸ
ದ್ವಿಸರಮಧ್ಯದೊಳಿರ್ದು ಕೇಳಿದನೀ ಮಹಾಧ್ವನಿಯ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೊರಗಿನ ಪಾದರಸದ ಲೇಪನದ ಒಳಗೆ ಸೇರಿಕೊಂಡಿರುವ ಬಂಗಾರದಂತೆಯೂ, ಜೀವಭಾವವು ಹರಡಿ ವ್ಯಾಪಿಸಿರುವಾಗ ಅದರೊಳಗೆ ಅದನ್ನವಲಂಬಿಸಿ ನೆಲೆಸಿರುವ ಪರಮಾತ್ಮನಂತೆಯೂ, ಶೋಭಿಸುವ ಬ್ರಾಹ್ಮಣ ವೇಷದಲ್ಲಿ ಪ್ರಕಾಶಿಸುವ ಧರ್ಮರಾಜನು ಆ ಸಭೆಯ ಸದ್ವಿಜರ ಮಧ್ಯದೊಳಿದ್ದು ಈ ಮಹಾಧ್ವನಿಯನ್ನು ಕೇಳಿದನು.
ಪದಾರ್ಥ (ಕ.ಗ.ಪ)
ರಸ-ಪಾದರಸ, ಮಿಸುನಿ-ಬಂಗಾರ, ಪ್ರಸರ-ವ್ಯಾಪಿಸು, ಎಸೆ-ಶೋಭಿಸು, ರಂಜಿಸು-ಪ್ರಕಾಶಿಸು
ಟಿಪ್ಪನೀ (ಕ.ಗ.ಪ)
ರಸದ ಹೊರಲೇಪದಲಿ ಹುದುಗಿದ ಮಿಸುನಿ
ಇಬ್ಬರು ಇದಕ್ಕೆ ಟಿಪ್ಪಣಿಗಳನ್ನು ಒದಗಿಸಿದ್ದಾರೆ.
- ಬೇರೆ ಸಂಯುಕ್ತಗಳ ಜೊತೆಗಿರುವ ಚಿನ್ನವನ್ನು ಶುಭ್ರರೂಪದಲ್ಲಿ ಪಡೆಯಲು ಆ ಸಂಯುಕ್ತವನ್ನು ಪಾದರಸದೊಂದಿಗೆ ಬೆರೆಸಿದರೆ ಪಾದರಸವು ಮಿಕ್ಕೆಲ್ಲ ಕಶ್ಮಲಗಳನ್ನು ನಿರ್ಮೂಲ ಮಾಡಿ ಚಿನ್ನದ ಮೇಲೆ ಸುತ್ತಿಕೊಂಡು ಗೋಳಾಕಾರದ ಮಣಿ ಅಥವಾ ಉಂಡೆಯ ರೂಪು ತಳೆಯುತ್ತದೆ. ನಂತರ ಅದನ್ನು ಬೆಂಕಿಯ ಮೂಲಕ ಕಾಯಿಸಿದರೆ ಪಾದರಸವು ಆವಿಯಾಗಿ ಕೇವಲ ಚಿನ್ನ ಉಳಿದುಕೊಳ್ಳುತ್ತದೆ.
- ಹೆಚ್ ಆರ್ ಮಂಜುನಾಥ್ - ಈ ಉಪಮೆಯಲ್ಲಿ ರಸ ಎನ್ನುವುದು ಪಾದರಸ ಕುರಿತದ್ದು, ಮಿಸುನಿ ಎಂದರೆ ಬಂಗಾರ. ರಸದ ಹೊರಲೇಪದಲಿ ಹುದುಗಿದ ಎಂದರೆ ಪಾದರಸಕ್ಕೆ ಅಂಟಿಕೊಂಡಿರುವುದು. ಈ ಸಂದರ್ಭ ವಾಸ್ತವವಾಗಿ ಮೆಕ್ಕಲು ಚಿನ್ನವನ್ನು ಅಂದರೆ ನದಿ, ಹೊಳೆಗಳು ಸಾಗಿಸಿದ ಶೇಷದೊಡನೆ ಬೆರತಿರುವ ಚಿನ್ನಕ್ಕೆ ಅನ್ವಯಿಸುತ್ತದೆ. ಇದು ಚಿನ್ನವನ್ನು ಜಾಲಿಸಿ ತೆಗೆಯುವ ಜಲಗಾರರು (ಜಾಲಗಾರರು) ಬಳಸುವ ತಂತ್ರ. ಮೂಲ ಚಿನ್ನ ಇತರ ಖನಿಜಗಳೊಡನೆ ಜನಿಸುವ ಹಂತದಲ್ಲೇ ಬೆರೆತ್ತಿರುತ್ತವೆ. ಅದು ಸಹಜನಿತ ಚಿನ್ನ. ನದಿಯಲ್ಲಿ ಕೊಚ್ಚಿ ತಂದ ಚಿನ್ನ ದ್ವಿತೀಯಕ ಹುಟ್ಟಿನದು. ಅಂದರೆ ಅದು ಮೆಕ್ಕಲು ಚಿನ್ನ.
ಚಿನ್ನದ ರೇಕುಗಳು ಅತಿ ಸೂಕ್ಷ್ಮವಾದ್ದರಿಂದ ಶೇಷವನ್ನು ಜಾಲಾಡಿ ಅಂತಿಮದಲ್ಲಿ ಉಳಿಯುವ ಗಸಿಗೆ ಪಾದರಸ ಹಾಕಿದರೆ ಚಿನ್ನ ಅದಕ್ಕೆ ಅಂಟಿಕೊಳ್ಳುತ್ತದೆ. ಅನಂತರ ಪಾದರಸವನ್ನು ಬಾಷ್ಪೀಕರಿಸಿದಾಗ ಚಿನ್ನ ಉಳಿಯುತ್ತದೆ. ಈಗಲೂ ಕರ್ನಾಟಕದ ಅನೇಕ ಭಾಗಗಳಲ್ಲಿ ವಿಶೇಷವಾಗಿ ಗದುಗಿನ ಸುತ್ತಮುತ್ತ ಸ್ವರ್ಣಭರಿತ ಶಿಲೆಗಳ ಮೇಲೆ ಹರಿಯುವ ನದಿ, ಹಳ್ಳಗಳಲ್ಲಿ ಈ ತಂತ್ರ ಅನುಸರಿಸಿ ಚಿನ್ನ ತೆಗೆಯುವುದುಂಟು.
ಗದುಗು ಬಹು ಹಿಂದಿನಿಂದ ಮೆಕ್ಕಲು ಚಿನ್ನಕ್ಕೆ ಹೆಸರುವಾಸಿ. ಈ ಪ್ರಾಂತ್ಯದಲ್ಲಿ 12ನೇ ಶತಮಾನದಲ್ಲಿ ಜಾಲಗಾರರು ಚಿನ್ನ ಸೋಸುತ್ತಿದ್ದ ಉದ್ಯಮವನ್ನು ತಿಳಿಸುವ ಶಾಸನವೊಂದು ದೊರೆತಿದೆ. ಆ ಕಾಲಘಟ್ಟದಲ್ಲಿ ಜರಗಿನ ತೆರೆ ಎಂಬ ಕರವನ್ನು ಚಿನ್ನ ಸೋಸುವ ಉದ್ಯಮಕ್ಕೆ ಹಾಕಲಾಗುತ್ತಿತ್ತು. ಅದರ ಮೇಲ್ಚಿಚಾರಕ ಜರಗಿನ ತೆರೆಯ ಅಧಿಕಾರಿ. ಗದುಗು ತಾಲ್ಲೂಕಿನ ಕುರ್ತಕೋಟಿಯ ವಿರೂಪಾಕ್ಷ ದೇವಾಲಯದ ಕಂಬದಲ್ಲಿ ದೇವರ ಸೇವೆಗೆಂದು ಜರಗಿನ ತೆರೆಯಲ್ಲಿ ಒಂದು ದೋಣಿಯ ತೆರೆಯನ್ನು ಬಿಡಲಾಗಿದೆ ಎಂದು ನಮೂದಿಸಿರುವ ಶಾಸನವಿದೆ. (ಬೊಂಬಾಯಿ ಕರ್ನಾಟಕ ಶಾಸನ-200, ಕ್ರಿ.ಶ. 1926),
ಗದುಗಿನ ಕಪ್ಪತ್ತಗುಡ್ಡದ ಪ್ರದೇಶ ಚಿನ್ನಭರಿತವಾದ್ದು. ಶಿರಹಟ್ಟಿ ತಾಲ್ಲೂಕನ್ನೊಳಗೊಂಡು ದಕ್ಷಿಣದಲ್ಲಿ ತುಂಗಭದ್ರಾ ನದಿಯವರೆಗೂ ಸುಮಾರು 60 ಕಿ.ಮೀ. ದೂರ ಹಾಯುವ ಬೆಟ್ಟದಸಾಲು ಸ್ವರ್ಣಭರಿತ ಶಿಲೆಯಿಂದ ಕೂಡಿದೆ. ಕ್ರಿ.ಶ. 1840ರಲ್ಲಿ ದೋಣಿ ಮತ್ತು ಸುರಟೂರಿನ ತೊರೆಗಳಿಂದ ವರ್ಷಕ್ಕೆ ಸುಮಾರು ಆರು ಕಿಲೋ ಗ್ರಾಂ ಚಿನ್ನವನ್ನು ಸೋಸಿ ತೆಗೆಯುತ್ತಿದ್ದ ವರದಿ ಇದೆ. ಕಪ್ಪತ್ತಗುಡ್ಡದ ಪಶ್ಚಿಮಕ್ಕೆ ಮಾಲಿಂಗಪುರ, ಹೊಸೂರು, ಶಿರೂರು, ಎಲೆಶಿರೂರು ಇಲ್ಲಿ ವ್ಯಾಪಕವಾದ ಗಣಿ ಕಾರ್ಯಾಚರಣೆಯನ್ನು ಮಾಡಿ ಸುಮಾರು 527 ಕಿ.ಗ್ರಾಂ. ಚಿನ್ನವನ್ನು ಪಡೆಯಲಾಗಿದೆ. 1874ರಲ್ಲೂ ಕಪ್ಪತ್ತಮಲ್ಲಯ್ಯನ ವiಠವಿರುವ ಬಳಿ ಹರಿಯುವ ಹಳ್ಳದಲ್ಲಿ ಜಾಲಗಾರರ ತಂಡಗಳು ಚಿನ್ನವನ್ನು ಸೋಸುತ್ತಿದ್ದವು. ಮರದ ಹಲಗೆಗಳನ್ನು ತಟ್ಟೆಗಳನ್ನಾಗಿ ಬಳಸಿ ಮಳೆ ನಿಂತ ನಂತರ ಚಿನ್ನವನ್ನು ಸೋಸಲು ಸುತ್ತಮುತ್ತಲಿನ ಜನ ಬರುತ್ತಿದ್ದುದನ್ನು ಬ್ರೂಸ್ಫೂಟ್ ಎಂಬ ವಿಜ್ಞಾನಿ 1882ರಲ್ಲಿ ವರದಿಮಾಡಿದ್ದಾನೆ. ಚಿನ್ನ ಸೋಸುವ ಇಲ್ಲಿನ ಜನರ ಕಲೆಗಾರಿಕೆಯನ್ನು ಬ್ರಿಟನ್ನಿನ ಗಣಿತಜ್ಞ ಸ್ಕೋಲ್ಟ್ ಎಂಬಾತ ಮೆಚ್ಚಿ ಕಪ್ಪತ್ತಗುಡ್ಡದ ಜಾಲಗಾರರ ನೈಪುಣ್ಯವನ್ನು ಆಸ್ಟ್ರೇಲಿಯದಲ್ಲಿ ಚಿನ್ನದ ನೂಕುನುಗ್ಗಲಾದಾಗ ಅಲ್ಲಿಗೆ ಬಂದಿದ್ದ ಚೀನದ ಜಾಲಗಾರರ ನೈಪುಣ್ಯಕ್ಕಿಂತ ಅತಿ ಹೆಚ್ಚಿನದೆಂದು ಹೊಗಳಿದ್ದಾನೆ.
- ಟಿ.ಆರ್. ಅನಂತರಾಮು
ಮೂಲ ...{Loading}...
ರಸದ ಹೊರಲೇಪದಲಿ ಹುದುಗಿದ
ಮಿಸುನಿಯಂತಿರೆ ಜೀವಭಾವ
ಪ್ರಸರದೊಳಗವಲಂಬಿಸಿದ ಪರಮಾತ್ಮನಂದದಲಿ
ಎಸೆವ ವಿಪ್ರಾಕಾರದಲಿ ರಂ
ಜಿಸುವ ಭೂಪತಿ ತತ್ಸಭಾಸ
ದ್ವಿಸರಮಧ್ಯದೊಳಿರ್ದು ಕೇಳಿದನೀ ಮಹಾಧ್ವನಿಯ ॥8॥
೦೦೯ ನೋಡಿದನು ತಮ್ಮನನು ...{Loading}...
ನೋಡಿದನು ತಮ್ಮನನು ಸನ್ನೆಯ
ಮಾಡಿದಡೆ ಕೈಕೊಂಡನವನಿಪ
ಗೂಡಿ ಕುಂತಿಗೆ ಭೀಮಸೇನಂಗೆರಗಿ ಮನದೊಳಗೆ
ಕೂಡೆ ಕುಳ್ಳಿರ್ದಖಿಳ ವಿಪ್ರರ
ನೋಡಿ ಮೆಲ್ಲನೆ ಧೋತ್ರ ದರ್ಭೆಯ
ಗೂಡ ಸಂವರಿಸುತ್ತ ಸಭೆಯಿಂದೆದ್ದನಾ ಪಾರ್ಥ ॥9॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಜನು ತಮ್ಮ ಪಾರ್ಥನನ್ನು ನೋಡಿದನು. ಸಂಜ್ಞೆ ಮಾಡಿದರೆ ಅದನ್ನರಿತುಕೊಂಡು ಪಾರ್ಥನು ಕುಂತಿ, ಧರ್ಮರಾಯ, ಭೀಮಸೇನರಿಗೆ ಮನಸ್ಸಿನಲ್ಲೆ ನಮಸ್ಕಾರ ಮಾಡಿದನು. ಜೊತೆಗೆ ಕುಳಿತಿದ್ದ ಎಲ್ಲ ವಿಪ್ರರನ್ನು ನೋಡಿ, ಮೆಲ್ಲನೆ ಧೋತ್ರವನ್ನೂ ದರ್ಭೆಯ ಗೂಡನ್ನು ಸರಿಪಡಿಸಿಕೊಳ್ಳುತ್ತಾ ಸಭೆಯಿಂದ ಪಾರ್ಥನು ಎದ್ದನು.
ಪದಾರ್ಥ (ಕ.ಗ.ಪ)
ಸನ್ನೆ-ಸಂಜ್ಞೆ, ಸಂವರಿಸು-ಸಜ್ಜುಗೊಳಿಸು
ಮೂಲ ...{Loading}...
ನೋಡಿದನು ತಮ್ಮನನು ಸನ್ನೆಯ
ಮಾಡಿದಡೆ ಕೈಕೊಂಡನವನಿಪ
ಗೂಡಿ ಕುಂತಿಗೆ ಭೀಮಸೇನಂಗೆರಗಿ ಮನದೊಳಗೆ
ಕೂಡೆ ಕುಳ್ಳಿರ್ದಖಿಳ ವಿಪ್ರರ
ನೋಡಿ ಮೆಲ್ಲನೆ ಧೋತ್ರ ದರ್ಭೆಯ
ಗೂಡ ಸಂವರಿಸುತ್ತ ಸಭೆಯಿಂದೆದ್ದನಾ ಪಾರ್ಥ ॥9॥
೦೧೦ ಏನು ...{Loading}...
ಏನು ಸಿದ್ಧಿಯುಪಾಧ್ಯರೆದ್ದಿರಿ
ದೇನು ಧನುವಿಂಗಲ್ಲಲೇ ತಾ
ನೇನು ಮನದಂಘವಣೆ ಬಯಸಿದಿರೇ ನಿತಂಬಿನಿಯ
ವೈನತೇಯನ ವಿಗಡಿಸಿದ ವಿಷ
ವೇನು ಸದರವೊ ಹಾವಡಿಗರಿಗಿ
ದೇನು ನಿಮ್ಮುತ್ಸಾಹವೆಂದುದು ಧೂರ್ತವಟುನಿಕರ ॥10॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವನೆದ್ದುದನ್ನು ಧೂರ್ತ ವಟುಗಳು ಕಂಡು, “ಏನು ? ಸಿದ್ಧಿಯ ಉಪಾಧ್ಯರೇ, ಎದ್ದು ಬಿಟ್ಟಿರಿ ? ಧನುಸ್ಸಿಗೋಸ್ಕರ ಅಲ್ಲವಷ್ಟೆ ? ಮತ್ತೆ ತಮ್ಮ ಮನಸ್ಸಿನಲ್ಲಿನ ಇಂಗಿತವೇನು ? ಸುಂದರಿಯನ್ನು ಬಯಸಿದಿರಾ ? ಗರುಡನನ್ನೇ ಹೆದರಿಸುವ ವಿಷ ಸಾಮಾನ್ಯ ಹಾವಾಡಿಗರಿಗೆ ಸುಲಭವೇ ? ಇದೇನು ನಿಮ್ಮುತ್ಸಾಹ ?” ಎಂದು ಚೇಷ್ಟೆ ಮಾಡಿದರು.
ಪದಾರ್ಥ (ಕ.ಗ.ಪ)
ಅಂಘವಣೆ-ಇಂಗಿತ, ವೈನತೇಯ-ಗರುಡ, ಸದರ-ಸುಲಭ, ವಿಗಡಿಸು-ಹೆದರಿಸು
ಟಿಪ್ಪನೀ (ಕ.ಗ.ಪ)
ಈ ಪದ್ಯದ ಆರಂಭದಲ್ಲಿ ಏನಿ ಎಂಬ ಪ್ರಯೋಗವಿರುವುದಾಗಿ ತೀನಂಶ್ರೀ ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಪ್ರಯೋಗ ಏನಿ ಎಂಬ ಬಹುವಚನ/ಗೌರವವಚನದ ರೂಪವಾದ ಏನಿಂ ಎಂಬುದರಿಂದ ಬಂದಿದೆ ಎಂದು ತಿಳಿಸಿದ್ದಾರೆ.
ಅಧಿಕೃತ ಪಾಠದಲ್ಲಿ ಏನು ಎಂಬ ರೂಪವನ್ನೇ ಉಳಿಸಿಕೊಳ್ಳಲಾಗಿದೆ. ಈ ರೂಪ ಮತ್ತೆ ಕುಮಾರವ್ಯಾಸ ಭಾರತದ ಅರಣ್ಯಪರ್ವದಲ್ಲಿಯೂ, ಹರಿಹರನ ನಂಬಿಯಣ್ಣನ ರಗಳೆಯಲ್ಲಿಯೂ ಬರುತ್ತದೆ. ಲಕ್ಷ್ಮೀಶನ ಜೈಮಿನಿ ಭಾರತದಲ್ಲಿಯೂ ಇದು ಕಾಣಬರುತ್ತದೆ. ಎಂದು ತಿಳಿಸುವ ತೀ.ನಂ.ಶ್ರೀ “ಇವುಗಳಿಂದಾಗಿ ನಡುಗನ್ನಡದಲ್ಲಿ ಈ ರೂಪ ಪ್ರಚುರವಾಗಿದ್ದಿತೆಂದು ನಂಬಬಹುದು” -ಎಂದು ಅಭಿಪ್ರಾಯಪಟ್ಟಿದ್ದಾರೆ.
ತೀ.ನಂ.ಶ್ರೀ. ಸಮಗ್ರ ಗದ್ಯ - ಪುಟ 415-417
ಮೂಲ ...{Loading}...
ಏನು ಸಿದ್ಧಿಯುಪಾಧ್ಯರೆದ್ದಿರಿ
ದೇನು ಧನುವಿಂಗಲ್ಲಲೇ ತಾ
ನೇನು ಮನದಂಘವಣೆ ಬಯಸಿದಿರೇ ನಿತಂಬಿನಿಯ
ವೈನತೇಯನ ವಿಗಡಿಸಿದ ವಿಷ
ವೇನು ಸದರವೊ ಹಾವಡಿಗರಿಗಿ
ದೇನು ನಿಮ್ಮುತ್ಸಾಹವೆಂದುದು ಧೂರ್ತವಟುನಿಕರ ॥10॥
೦೧೧ ಮದುವೆ ಬೇಕೇ ...{Loading}...
ಮದುವೆ ಬೇಕೇ ಶ್ರೋತ್ರಿಯ ಸ್ತೋ
ಮದಲಿ ಕನ್ಯಾರ್ಥಿಗಳು ನಾವೆಂ
ಬುದು ನಿಜಾನ್ವಯ ವಿದ್ಯೆಯಲಿ ಕೊಡುವುದು ಪರೀಕ್ಷೆಗಳ
ಮದುವೆಯಹುದಿದು ಸೌಖ್ಯಪುಣ್ಯ
ಪ್ರದವು ಭೂದೇವರಿಗೆ ನೀವ್ ನೆನೆ
ದುದು ಭಗೀರಥಯತ್ನವೆಂದುದು ಭೂಸುರವ್ರಾತ ॥11॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಲ್ಲಿದ್ದ ವಿಪ್ರರ ಸಮೂಹ, “ಮದುವೆ ಬೇಕೆ ನಿಮಗೆ ? ಬೇಕಾಗಿದ್ದರೆ, ವೇದವನ್ನರಿತ ಬ್ರಾಹ್ಮಣ ಸಮೂಹದಲ್ಲಿ ‘ನಾವು ಕನ್ಯಾರ್ಥಿಗಳು’ ಎಂದು ತಿಳಿಸುವುದು. ವಂಶಾನುಗತವಾಗಿ ಬಂದ ಬ್ರಾಹ್ಮಣೋಚಿತ ವಿದ್ಯೆಗಳಲ್ಲಿ ಪರೀಕ್ಷೆಗಳನ್ನು ಕೊಡುವುದು. ಹಾಗೆ ಮಾಡಿದರೆ ಮದುವೆಯಾಗುತ್ತದೆ. ಇದು ಬ್ರಾಹ್ಮಣರಿಗೆ ಸೌಖ್ಯ ಹಾಗೂ ಪುಣ್ಯವನ್ನು ಉಂಟು ಮಾಡುತ್ತದೆ. ಅದು ಬಿಟ್ಟು ನೀವು ಯೋಚಿಸಿರುವುದು ಭಗೀರಥ ಯತ್ನವೇ ಸರಿ” ಎಂದು ಹೇಳಿತು.
ಪದಾರ್ಥ (ಕ.ಗ.ಪ)
ಶ್ರೋತ್ರಿಯ-ವೇದವನ್ನರಿತ ಬ್ರಾಹ್ಮಣ, ಅನ್ವಯ-ವಂಶ
ಪಾಠಾನ್ತರ (ಕ.ಗ.ಪ)
ನೀ - ನೀವ್
ಆದಿಪರ್ವ -ಮೈ.ವಿ.ವಿ.
ಮೂಲ ...{Loading}...
ಮದುವೆ ಬೇಕೇ ಶ್ರೋತ್ರಿಯ ಸ್ತೋ
ಮದಲಿ ಕನ್ಯಾರ್ಥಿಗಳು ನಾವೆಂ
ಬುದು ನಿಜಾನ್ವಯ ವಿದ್ಯೆಯಲಿ ಕೊಡುವುದು ಪರೀಕ್ಷೆಗಳ
ಮದುವೆಯಹುದಿದು ಸೌಖ್ಯಪುಣ್ಯ
ಪ್ರದವು ಭೂದೇವರಿಗೆ ನೀವ್ ನೆನೆ
ದುದು ಭಗೀರಥಯತ್ನವೆಂದುದು ಭೂಸುರವ್ರಾತ ॥11॥
೦೧೨ ನೀವು ಸೈರಿಸಿ ...{Loading}...
ನೀವು ಸೈರಿಸಿ ನಿಮ್ಮ ಕಾರು
ಣ್ಯಾವಲೋಕನವುಂಟಲೇ ಸ
ದ್ಭಾವದಲಿ ನೀವ್ ರಚಿಸಿದಾಶೀರ್ವಾದ ಶಕ್ತಿಯಲಿ
ನಾವು ವಿಜಯರು ಚಾಪಯಂತ್ರವಿ
ದಾವ ಘನವೆಂದರ್ಜುನನ ಸಂ
ಭಾವನೋಕ್ತಿಗೆ ನಿಲ್ಲದವರೊದರಿದರು ತಮತಮಗೆ ॥12॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಮಾತುಗಳನ್ನು ಕೇಳಿ ಅರ್ಜುನನು “ನೀವು ಸಮಾಧಾನ ತಾಳಿ. ನಿಮ್ಮ ಕರುಣೆಯ ದೃಷ್ಟಿ ಇರುವುದಲ್ಲವೇ ? ಒಳ್ಳೆಯ ಭಾವನೆಯಿಂದ ನೀವು ಮಾಡಿದ ಆಶೀರ್ವಾದ ಶಕ್ತಿಯಿಂದ ನಾವು ಜಯಶಾಲಿಗಳು. ಚಾಪಯಂತ್ರವಿದು ಯಾವ ದೊಡ್ಡದು ?” ಎಂದು ನುಡಿದ ಉಚಿತವಾದ ಮಾತಿಗೆ ಸಹಿಸದೆ ತಮ್ಮ ತಮ್ಮಲ್ಲೆ ಕೂಗಾಡಿದರು.
ಪದಾರ್ಥ (ಕ.ಗ.ಪ)
ಸೈರಿಸು-ಸಮಾಧಾನತಾಳು, ಅವಲೋಕನ-ದೃಷ್ಟಿ, ಘನ-ದೊಡ್ಡದು, ಸಂಭಾವನ-ಉಚಿತ, ಒದರು-ಕೂಗು
ಮೂಲ ...{Loading}...
ನೀವು ಸೈರಿಸಿ ನಿಮ್ಮ ಕಾರು
ಣ್ಯಾವಲೋಕನವುಂಟಲೇ ಸ
ದ್ಭಾವದಲಿ ನೀವ್ ರಚಿಸಿದಾಶೀರ್ವಾದ ಶಕ್ತಿಯಲಿ
ನಾವು ವಿಜಯರು ಚಾಪಯಂತ್ರವಿ
ದಾವ ಘನವೆಂದರ್ಜುನನ ಸಂ
ಭಾವನೋಕ್ತಿಗೆ ನಿಲ್ಲದವರೊದರಿದರು ತಮತಮಗೆ ॥12॥
೦೧೩ ಕ್ರಮಿತರವಧರಿಸಿದರೆ ಶುದ್ಧ ...{Loading}...
ಕ್ರಮಿತರವಧರಿಸಿದರೆ ಶುದ್ಧ
ಭ್ರಮಿತ ಮೂಲನ ಹಿರಿಯ ವಿಷ್ಣು
ಕ್ರಮಿತರೇ ದೀಕ್ಷಿತರೆ ಧನುವಿಗೆ ಯತ್ನ ಮಾಡಿದಿರೆ
ಕ್ರಮವೆ ತಾನಿದು ಕ್ಷತ್ರಿಯರನಾ
ಕ್ರಮಿಸುವುದು ಸದ್ಧರ್ಮವೇ ಉ
ದ್ಭ್ರಮಿತನಿವ ನೆರೆ ಹಳಿವ ತಹನೀ ಶ್ರೋತ್ರಿಯರ ಸಭೆಗೆ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರುಗಳು ಮುಂದುವರೆಸಿ “ಕ್ರಮಾಂತವಾಗಿ ವೇದಾಧ್ಯಯನ ಮಾಡಿದವರು ಬರಿಯ ಭ್ರಮೆಗೊಳಗಾದವನ ಮಾತನ್ನು ಕೇಳಿದಿರಾ ? ಹಿರಿಯ ವಿಷ್ಣು ಕ್ರಮಿತರೇ, ದೀಕ್ಷಿತರೇ ಧನುಸ್ಸಿಗೆ ಪ್ರಯತ್ನ ಮಾಡುತ್ತಿದ್ದಾನಲ್ಲ ! ಇದು ರೀತಿಯೆ ? ಕ್ಷತ್ರಿಯರಿಗೆ ಮೀಸಲಾದ ಕ್ಷೇತ್ರವನ್ನು ಆಕ್ರಮಿಸುವುದು ಒಳ್ಳೆಯ ಧರ್ಮವೇ ? ಭ್ರಾಂತಿಗೊಂಡವನಿವನು ವೇದಾಧ್ಯಯನ ಮಾಡಿದವರ ಸಭೆಗೆ ನಿಂದೆಯನ್ನು ತರುತ್ತಾನೆ” ಎಂದು ಮುಂತಾಗಿ ತಮ್ಮ ತಮ್ಮಲ್ಲೆ ಆಡಿಕೊಂಡರು.
ಪದಾರ್ಥ (ಕ.ಗ.ಪ)
ಕ್ರಮಿತರು-ಕ್ರಮಾಂತವಾಗಿ ವೇದಾಧ್ಯಯನ ಮಾಡಿದವರು, ಭ್ರಮಿತ-ಭ್ರಮೆಗೊಳಗಾದವನು, ಶುದ್ಧ-ಬರಿಯ, ಉದ್ಭ್ರಮಿತ-ಭ್ರಾಂತಿಗೊಂಡವ,
ಮೂಲ ...{Loading}...
ಕ್ರಮಿತರವಧರಿಸಿದರೆ ಶುದ್ಧ
ಭ್ರಮಿತ ಮೂಲನ ಹಿರಿಯ ವಿಷ್ಣು
ಕ್ರಮಿತರೇ ದೀಕ್ಷಿತರೆ ಧನುವಿಗೆ ಯತ್ನ ಮಾಡಿದಿರೆ
ಕ್ರಮವೆ ತಾನಿದು ಕ್ಷತ್ರಿಯರನಾ
ಕ್ರಮಿಸುವುದು ಸದ್ಧರ್ಮವೇ ಉ
ದ್ಭ್ರಮಿತನಿವ ನೆರೆ ಹಳಿವ ತಹನೀ ಶ್ರೋತ್ರಿಯರ ಸಭೆಗೆ ॥13॥
೦೧೪ ಕೆಲರು ಹೋಗದಿರೆನ್ದು ...{Loading}...
ಕೆಲರು ಹೋಗದಿರೆಂದು ಜರೆದರು
ಕೆಲರು ತಾನೇ ಬಲ್ಲನೆಂದರು
ಕೆಲರು ನುಡಿದರು ವಿಪ್ರಸಭೆಗಪಹಾಸ್ಯವಹುದೆಂದು
ಕೆಲರು ತಪ್ಪೇನೆಂದು ಕಳೆದರು
ಕೆಲರು ಭದ್ರಕಾರನೀತಂ
ಗಳುಕುವುದು ಧನು ಭಾಗ್ಯಮುಖನೆಂದುದು ಬುಧಸ್ತೋಮ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿಪ್ರಸಮೂಹದಲ್ಲಿ, ಕೆಲವರು ಹೋಗಬೇಡೆಂದು ನಿಂದಿಸಿದರು. ಕೆಲವರು “ನಾವು ಹೇಳುವುದೇನು ? ಅವನು ತಾನೇ ಬಲ್ಲ. ಬೇಕಾದ್ದು ಮಾಡಿಕೊಳ್ಳಲಿ” ಎಂದರು. ಕೆಲವರು “ಇವನಿಂದ ವಿಪ್ರಸಭೆಗೆ ಅಪಹಾಸ್ಯವಾಗುತ್ತದೆ” ಎಂದರು. ಕೆಲವರು “ಇದರಲ್ಲೇನು ತಪ್ಪು?” ಎಂದು ಪ್ರಶ್ನೆ ಮಾಡಿಬಿಟ್ಟರು. ಕೆಲವರು, “ಇವನು ಸುಂದರಾಂಗನಿದ್ದಾನೆ ಇವನಿಗೆ ಧನುಸ್ಸು ಹೆದರುವುದು. ಇವನು ಅದೃಷ್ಟ ಶಾಲಿಯಿದ್ದಾನೆ” ಎಂದು ನುಡಿದರು.
ಪದಾರ್ಥ (ಕ.ಗ.ಪ)
ಭದ್ರಾಕಾರ-ಸುಂದರವಾದ ರೂಪ, ಭಾಗ್ಯ-ಅದೃಷ್ಟ
ಮೂಲ ...{Loading}...
ಕೆಲರು ಹೋಗದಿರೆಂದು ಜರೆದರು
ಕೆಲರು ತಾನೇ ಬಲ್ಲನೆಂದರು
ಕೆಲರು ನುಡಿದರು ವಿಪ್ರಸಭೆಗಪಹಾಸ್ಯವಹುದೆಂದು
ಕೆಲರು ತಪ್ಪೇನೆಂದು ಕಳೆದರು
ಕೆಲರು ಭದ್ರಕಾರನೀತಂ
ಗಳುಕುವುದು ಧನು ಭಾಗ್ಯಮುಖನೆಂದುದು ಬುಧಸ್ತೋಮ ॥14॥
೦೧೫ ತೊಟ್ಟ ಹೊಸ ...{Loading}...
ತೊಟ್ಟ ಹೊಸ ಯಜ್ಞೋಪವೀತದ
ಮಟ್ಟಿ ನೊಸಲಲಿ ಕುಶೆಯ ಕರಡಿಗೆ
ಕಟ್ಟಿಯಿರುಕಿದ ಕಕ್ಷೆ ಬೆರಳಲಿ ಮುರಿದ ದರ್ಭೆಗಳ
ಉಟ್ಟ ಬಾಸರ ಬಳಲುಗಚ್ಚೆಯ
ನಟ್ಟಹಾಸದ ಜನದ ನಗೆಗಳ
ನಟ್ಟವಿಗನೋಸರಿಸಿ ಸಭೆಯಲಿ ಮೆಲ್ಲನೈತಂದ ॥15॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ವಿಪ್ರಸಮೂಹದಲ್ಲಿ ಮಾತನಾಡುತ್ತಿರುವಾಗ, ಅರ್ಜುನನು ಸಭೆಯಲ್ಲಿ ಮೆಲ್ಲಮೆಲ್ಲನೆ ಮುಂದಕ್ಕೆ ನಡೆಯ ತೊಡಗಿದನು. ಹೊಸ ಜನಿವಾರವನ್ನು ಧರಿಸಿದ್ದಾನೆ. ಹಣೆಯಲ್ಲಿ ಮೃತ್ತಿಕೆ ಹಚ್ಚಿಕೊಂಡಿದ್ದಾನೆ. ದರ್ಭೆಯ ಬುಟ್ಟಿಯನ್ನು ಕಟ್ಟಿ ಕಂಕುಳಲ್ಲಿ ತುರುಕಿ ಕೊಂಡಿದ್ದಾನೆ. ಬೆರಳಲ್ಲಿ ದರ್ಭೆಗಳ ಪವಿತ್ರ ಮೆರೆಯುತ್ತಿದೆ. ಶುಭವಸ್ತ್ರದ ಕಟ್ಟಿದ ಕಚ್ಚೆ ಜೋತಾಡುತ್ತಿದೆ. ನಾಟ್ಯಾಚಾರ್ಯನಂತೆ ಕಾಣುತ್ತಿದ್ದಾನೆ. ಈ ವೇಷದಿಂದ ಧನುಸ್ಸನ್ನೆತ್ತಲು ಹೋಗುತ್ತಿರುವ ಇವನನ್ನು ಕಂಡು ಸುತ್ತಮುತ್ತಲ ಜನರು ತುಂಬ ಗಟ್ಟಿಯಾಗಿ ನಗುತ್ತಿದ್ದರೆ ಲಕ್ಷಿಸದೆ ಪಕ್ಕಕ್ಕೆ ಸರಿಸಿ ಮೆಲ್ಲನೆ ಮುಂದುವರಿದನು.
ಪದಾರ್ಥ (ಕ.ಗ.ಪ)
ಮಟ್ಟಿ-ಮೃತ್ತಿಕೆ, ಕುಶೆ-ದರ್ಭೆ, ಕರಡಿಗೆ-ಬಿದಿರಿನಲ್ಲಿ ಹೆಣೆದ ಬುಟ್ಟಿ, ಕಕ್ಷೆ-ಕಂಕುಳು, ಬಾಸರ-ಶುಭ್ರವಸ್ತ್ರ, ಬಳಲುಗಚ್ಛೆ-ಜೋತಾಡುವಂತೆ ಕಟ್ಟಿದ ಕಚ್ಚೆ , ಅಟ್ಟಹಾಸ-ತುಂಟ ಗಟ್ಟಿಯಾದ ನಗು, ಓಸರಿಸಿ-ಪಕ್ಕಕ್ಕೆ ಸರಿಸಿ, ನಟ್ಟುವಿಗ-ನಾಟ್ಯಾಚಾರ್ಯ
ಮೂಲ ...{Loading}...
ತೊಟ್ಟ ಹೊಸ ಯಜ್ಞೋಪವೀತದ
ಮಟ್ಟಿ ನೊಸಲಲಿ ಕುಶೆಯ ಕರಡಿಗೆ
ಕಟ್ಟಿಯಿರುಕಿದ ಕಕ್ಷೆ ಬೆರಳಲಿ ಮುರಿದ ದರ್ಭೆಗಳ
ಉಟ್ಟ ಬಾಸರ ಬಳಲುಗಚ್ಚೆಯ
ನಟ್ಟಹಾಸದ ಜನದ ನಗೆಗಳ
ನಟ್ಟವಿಗನೋಸರಿಸಿ ಸಭೆಯಲಿ ಮೆಲ್ಲನೈತಂದ ॥15॥
೦೧೬ ತಿರುಗಿ ಕಣ್ಡರು ...{Loading}...
ತಿರುಗಿ ಕಂಡರು ಸಕಲ ಪೃಥ್ವೀ
ಶ್ವರರು ಗಹಗಹಿಸಿದರಿದೇನರೆ
ಮರುಳೊ ಜಡನೋ ವಿಪ್ರವೇಷಚ್ಛನ್ನ ಸುರಪತಿಯೊ
ಮರುಳುಗಳು ತಾವಕಟ ಮದನನ
ಸರಳ ಮರುಮೊನೆಗಾವನಂತಃ
ಕರಣ ನೆರೆ ಕಳವಳಿಸದೆಂದರು ನೆರೆದ ಸಭೆಯೊಳಗೆ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇತ್ತ ತಿರುಗಿ ಎಲ್ಲ ಪೃಥ್ವೀಶ್ವರರು ನೋಡಿದರು. ಇವನು ಧನುಸ್ಸನ್ನು ಎತ್ತಲು ಹೋಗುತ್ತಿರುವುದನ್ನು ನೋಡಿ ಗಹಗಹಿಸಿ ನಕ್ಕರು . “ಇದೇನಿದು ? ಇವನೇನು ಅರೆ ಮರುಳನೋ ? ಜಡನೋ ? ವಿಪ್ರ ವೇಷದಿಂದ ಮೈಮರೆಸಿ ಕೊಂಡಿರುವ ದೇವೇಂದ್ರನೋ ? ಅಯ್ಯೋ ನಾವೇ ಮರುಳುಗಳು, ಮನ್ಮಥನ ಬಾಣಕ್ಕೆ ಗುರಿಯಾಗಿ ಯಾರ ಮನಸ್ಸು ತಾನೆ ಕಳವಳಿಸದೆ ಇರುತ್ತದೆ ?” ಎಂದು ಹಾಸ್ಯ ವಿವೇಕ ಮಿಶ್ರವಾಗಿ ಸಭೆಯಲ್ಲಿ ಮಾತಾಡಿಕೊಂಡರು.
ಪದಾರ್ಥ (ಕ.ಗ.ಪ)
ಮದನ-ಮನ್ಮಥ, ಅಂತಃಕರಣ-ಮನಸ್ಸು, ವಿಪ್ರವೇಷಚ್ಛನ್ನ-ಬ್ರಾಹ್ಮಣ ವೇಷದಿಂದ ಮರೆಸಿಕೊಂಡವನು, ಮರುಮೊನೆ-ನಾಟಿಕೊಂಡು ಹೊರಗೆ ಕಾಣುವ ತುದಿ
ಮೂಲ ...{Loading}...
ತಿರುಗಿ ಕಂಡರು ಸಕಲ ಪೃಥ್ವೀ
ಶ್ವರರು ಗಹಗಹಿಸಿದರಿದೇನರೆ
ಮರುಳೊ ಜಡನೋ ವಿಪ್ರವೇಷಚ್ಛನ್ನ ಸುರಪತಿಯೊ
ಮರುಳುಗಳು ತಾವಕಟ ಮದನನ
ಸರಳ ಮರುಮೊನೆಗಾವನಂತಃ
ಕರಣ ನೆರೆ ಕಳವಳಿಸದೆಂದರು ನೆರೆದ ಸಭೆಯೊಳಗೆ ॥16॥
೦೧೭ ಧನು ತನಗೆ ...{Loading}...
ಧನು ತನಗೆ ನೆಗಹಲ್ಕೆ ಕೃಷ್ಣಾ
ಜಿನವೊ ಸಾಲಗ್ರಾಮದೇವರೊ
ವಿನುತ ತುಳಸಿಯೊ ಕುಶವೊ ದರ್ಭೆಯೊ ಸಮಿಧೆಗಳ ಹೊರೆಯೊ
ನೆನೆದ ತಿಲವೋ ಮೇಣಿದೌಪಾ
ಸನದ ಕೊಳವಿಯೊ ಬಣಗು ವಿಪ್ರನ
ನೆನಹ ನೋಡಿರೆ ಘನವಲಾ ದ್ರೌಪದಿಯ ಸೌಭಾಗ್ಯ ॥17॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮತ್ತೆ ಹಾಸ್ಯದ ಲಹರಿ ಹರಿಯತೊಡಗಿತು. “ಧನುಸ್ಸು ಎತ್ತುವುದಕ್ಕೆ ಇವನಿಗೆ ಅದೇನು ಕೃಷ್ಣಾಜಿನವೋ ? ಸಾಲಗ್ರಾಮ ದೇವರೋ ? ಸ್ತುತಿಸಲ್ಪಡುವ ತುಳಸಿಯೋ ? ದರ್ಭೆಯೋ ? ಸಮಿತ್ತುಗಳ ಹೊರೆಯೋ ? ನೆನಸಿದ ಎಳ್ಳೋ ? ಅಥವ ಇದು ಔಪಾಸನಕೊಳವಿಯೋ ? ಏನೆಂದು ತಿಳಿದುಕೊಂಡಿದ್ದಾನೆ. ಈ ಕೈಲಾಗದ ವಿಪ್ರನ ಆಲೋಚನೆ ನೋಡಿದಿರಾ ? ಆಹಾ ! ದ್ರೌಪದಿಯ ಸೌಭಾಗ್ಯ ಬಹಳ ದೊಡ್ಡದು! " ಎಂದು ನಕ್ಕು ಮರುಗಿದರು.
ಪದಾರ್ಥ (ಕ.ಗ.ಪ)
ಕುಶ, ದರ್ಭೆ-ಹೋಮ ಹವನಾದಿಗಳಲ್ಲಿ ಉಪಯೋಗಿಸುವ ಒಂದು ಬಗೆಯ ಪವಿತ್ರವಾದ ಹುಲ್ಲು, ಸಮಿಧೆ-ಸಮಿತ್ತು (ಹೋಮ ಸಾಮಗ್ರಿ; ಅತ್ತಿ, ಅರಳಿ ಮುಂತಾದ ಮರಗಳ ಒಣಗಿದ ಕೊನೆ), ಬಣಗು-ಕೈಲಾಗದ.
ಮೂಲ ...{Loading}...
ಧನು ತನಗೆ ನೆಗಹಲ್ಕೆ ಕೃಷ್ಣಾ
ಜಿನವೊ ಸಾಲಗ್ರಾಮದೇವರೊ
ವಿನುತ ತುಳಸಿಯೊ ಕುಶವೊ ದರ್ಭೆಯೊ ಸಮಿಧೆಗಳ ಹೊರೆಯೊ
ನೆನೆದ ತಿಲವೋ ಮೇಣಿದೌಪಾ
ಸನದ ಕೊಳವಿಯೊ ಬಣಗು ವಿಪ್ರನ
ನೆನಹ ನೋಡಿರೆ ಘನವಲಾ ದ್ರೌಪದಿಯ ಸೌಭಾಗ್ಯ ॥17॥
೦೧೮ ಅಙ್ಗವಿದು ಗಜ ...{Loading}...
ಅಂಗವಿದು ಗಜ ತುರಗ ಶಸ್ತ್ರಾ
ಸ್ತ್ರಂಗಳರಿತವು ನಮಗೆ ವಿಪ್ರಂ
ಗಂಗ ವೇದಪುರಾಣ ತರ್ಕಸ್ಮೃತಿ ಸುವಿದ್ಯೆಗಳು
ಅಂಗವಂಗಿಗಸಾಧ್ಯವಾದುದ
ನಂಗಿಗೊಡಬಡುವುದೆ ದ್ವಿಜಾತಿಗೆ
ಸಂಗತಾನುಷ್ಠಾನಪರವೆಂದುದು ನೃಪಸ್ತೋಮ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜರ ಸಮೂಹ ಮಾತನಾಡುತ್ತ, “ಗಜ, ತುರಗ, ಶಸ್ತ್ರಗಳ ಜ್ಞಾನ ಇರುವ ನಮಗೆ ಧನುಸ್ಸನ್ನು ಪ್ರಯತ್ನಿಸುವುದು ರೀತಿಯಾಗಿದೆ. ವಿಪ್ರರಿಗೆ ವೇದ, ಪುರಾಣ, ತರ್ಕ, ಸ್ಮೃತಿಗಳ ಒಳ್ಳೆಯ ವಿದ್ಯೆಗಳು ಕ್ರಮವಾಗಿರುತ್ತದೆ. ಯಾರಿಗೆ ಯಾವುದು ವಿಹಿತವಾಗಿದೆಯೋ ಅದು ಅವರಿಗೆ ಅಸಾಧ್ಯವಾಗಿರುವಾಗ, ವಿಹಿತವಾಗಿಲ್ಲದಿರುವ ಹೊರಗಿನವರಿಗೆ ಅದು ಅಳವಟ್ಟೀತೆ ? ಇದು ಬ್ರಾಹ್ಮಣರಿಗೆ ಹೊಂದಿಕೆಯಿಲ್ಲದ ನಡವಳಿಕೆ” ಎಂದು ಟೀಕಿಸಿದರು.
ಮೂಲ ...{Loading}...
ಅಂಗವಿದು ಗಜ ತುರಗ ಶಸ್ತ್ರಾ
ಸ್ತ್ರಂಗಳರಿತವು ನಮಗೆ ವಿಪ್ರಂ
ಗಂಗ ವೇದಪುರಾಣ ತರ್ಕಸ್ಮೃತಿ ಸುವಿದ್ಯೆಗಳು
ಅಂಗವಂಗಿಗಸಾಧ್ಯವಾದುದ
ನಂಗಿಗೊಡಬಡುವುದೆ ದ್ವಿಜಾತಿಗೆ
ಸಂಗತಾನುಷ್ಠಾನಪರವೆಂದುದು ನೃಪಸ್ತೋಮ ॥18॥
೦೧೯ ಲಹರಿ ಮಸಗಿದುದತ್ತ ...{Loading}...
ಲಹರಿ ಮಸಗಿದುದತ್ತ ಕಾಂತಾ
ಬಹಳಪಾರಾವಾರ ಹುಬ್ಬಿನ
ವಿಹೃತಿಗಳ ತೆರೆಮಾಲೆಗಳ ಬೆಳುನಗೆಯ ಬುದುಬುದದ
ಗಹಗಹಿಕೆ ಮಿಗೆ ಅಟ್ಟಹಾಸದ
ರಹಣಿಗಳ ರಭಸದ ವಿಡಂಬದ
ವಿಹರಣದಚಲ ದೃಷ್ಟಿಗಳ ಮರಿಮೀನ ಹೊಳಹುಗಳ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅತ್ತ ಕಡೆ ದೊಡ್ಡ ಸಮುದ್ರದಂತಿರುವ ಸ್ತ್ರೀಸಮೂಹದ ಹುಬ್ಬಿನ ವಿಕಾರಗಳ ತೆರೆಮಾಲೆಗಳು ಅಲೆಗಳು ವ್ಯಾಪಿಸಿದುವು. ನೀರ ಮೇಲಿನ ಗುಳ್ಳೆಗಳಂತೆ ಅವರ ಮುಖದಿಂದ ಪ್ರಸನ್ನ ನಗೆ ಎದ್ದವು. ತುಂಬ ಗಟ್ಟಿಯಾದ ಗಹಗಹಿಕೆಯ ನಗುವಿನ ಮೊರೆತ ಕೇಳಿಸಿತು. ಹೊಳೆಯುವ ಚಂಚಲ ದೃಷ್ಟಿಗಳ ಮರಿಮೀನುಗಳ ಕಾಂತಿ ಗೋಚರಿಸಿತು. ನಗೆಯ ಲಹರಿ ಉಕ್ಕಿ ಹರಿಯಿತು.
ಪದಾರ್ಥ (ಕ.ಗ.ಪ)
ಪಾರಾವಾರ-ಸಮುದ್ರ, ವಿಹೃತಿ-ವಿಕಾರ, ಬೆಳುನಗೆ-ಪ್ರಸನ್ನ ನಗೆ, ಬುದುಬುದ-ನೀರ ಮೇಲಿನ ಗುಳ್ಳೆಗಳು, ವಿಡಂಬನ-ಹೊಳೆಯುವ, ಹೊಳಹು-ಕಾಂತಿ
ಮೂಲ ...{Loading}...
ಲಹರಿ ಮಸಗಿದುದತ್ತ ಕಾಂತಾ
ಬಹಳಪಾರಾವಾರ ಹುಬ್ಬಿನ
ವಿಹೃತಿಗಳ ತೆರೆಮಾಲೆಗಳ ಬೆಳುನಗೆಯ ಬುದುಬುದದ
ಗಹಗಹಿಕೆ ಮಿಗೆ ಅಟ್ಟಹಾಸದ
ರಹಣಿಗಳ ರಭಸದ ವಿಡಂಬದ
ವಿಹರಣದಚಲ ದೃಷ್ಟಿಗಳ ಮರಿಮೀನ ಹೊಳಹುಗಳ ॥19॥
೦೨೦ ಇತ್ತ ನೋಡೌ ...{Loading}...
ಇತ್ತ ನೋಡೌ ತಾಯೆ ಹಾರುವ
ರತ್ತ ಗಡ್ಡದುಪಾಧ್ಯರನು ತಾ
ವೆತ್ತುವರು ಗಡ ಧನುವನೆಸುವರು ಗಡ ತಿಮಿಂಗಿಲನ
ಹೊತ್ತುಗಳೆವರೆ ಲೇಸು ಬಳಿಕಿ
ನ್ನುತ್ತಮರಲಾ ವಿಪ್ರರೆನೆ ತಲೆ
ಗುತ್ತಿ ನಾಚಿದಳುಂಗುಟದೊಳೌಕುತ ಮಹೀತಳವ ॥20॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇತ್ತ ನೋಡಮ್ಮಾ ತಾಯೇ ಬ್ರಾಹ್ಮಣರ ಕಡೆಗೆ ಗಡ್ಡದುಪಾಧ್ಯರನ್ನು ! ಅವರು ಧನುಸ್ಸು ಎತ್ತುತ್ತಾರಂತೆ. ತಿಮಿಂಗಲವನ್ನು ಹೊಡೆಯುತ್ತಾರಂತೆ. ಕಾಲ ಕಳೆಯುವುದಕ್ಕೆ ಒಳ್ಳೆಯದಾಯಿತು. ಇದಕ್ಕಿನ್ನು ಬ್ರಾಹ್ಮಣರು ಉತ್ತಮರಲ್ಲವೇ ?” ಎಂದು ಸಖಿಯರು ಹಾಸ್ಯ ಮಾಡಿದರು. ಅದಕ್ಕೆ ದ್ರೌಪದಿ ತಲೆತಗ್ಗಿಸಿ ಉಂಗುಷ್ಠದಲ್ಲಿ ನೆಲವನ್ನು ಒತ್ತುತ್ತ ನಾಚಿದಳು.
ಪದಾರ್ಥ (ಕ.ಗ.ಪ)
ಹಾರುವ-ಬ್ರಾಹ್ಮಣ, ತಲೆಗುತ್ತಿ-ತಲೆತಗ್ಗಿಸಿ, ಹೊತ್ತುಗಳೆ- ಕಾಲ ಕಳೆ, ಉಂಗುಟ-ಉಂಗುಷ್ಟ, ಕಾಲಿನ ಹೆಬ್ಬೆರಳು, ಮಹೀತಳ-ನೆಲ
ಟಿಪ್ಪನೀ (ಕ.ಗ.ಪ)
ಅಪರೂಪವೆನಿಸುವ ಒಂದು ಶೃಂಗಾರ ಭಾವ ಇಲ್ಲಿದೆ. ಕ್ಷತ್ರಿಯರಾದರೆ ಸದಾ ಯುದ್ಧರಂಗದಲ್ಲಿ ಕಾಲಕಳೆಯ ಬೇಕಾಗಿ ಬಂದು ಅವರ ಪತ್ನಿಯರಗೆ ಪತಿಯ ಸಹವಾಸ ಅಪರೂಪ ಎನಿಸುವ ಸಂದರ್ಭಗಳಿರುತ್ತವೆ. ಬ್ರಾಹ್ಮಣರಿಗೆ ಅಂಥ ಅನಿವಾರ್ಯಗಳೇನೂ ಇರುವುದಿಲ್ಲ ಎಂದು ಕವಿ ಸೂಚಿಸುತ್ತಿದ್ದಾನೆ.
ಮೂಲ ...{Loading}...
ಇತ್ತ ನೋಡೌ ತಾಯೆ ಹಾರುವ
ರತ್ತ ಗಡ್ಡದುಪಾಧ್ಯರನು ತಾ
ವೆತ್ತುವರು ಗಡ ಧನುವನೆಸುವರು ಗಡ ತಿಮಿಂಗಿಲನ
ಹೊತ್ತುಗಳೆವರೆ ಲೇಸು ಬಳಿಕಿ
ನ್ನುತ್ತಮರಲಾ ವಿಪ್ರರೆನೆ ತಲೆ
ಗುತ್ತಿ ನಾಚಿದಳುಂಗುಟದೊಳೌಕುತ ಮಹೀತಳವ ॥20॥
೦೨೧ ಎಲವೊ ಮಟ್ಟಿಯ ...{Loading}...
ಎಲವೊ ಮಟ್ಟಿಯ ಮದನ ದರ್ಭೆಯ
ತಿಲದ ಮನ್ಮಥ ವಿಮಲ ಧೋತ್ರದ
ತಳಿರುಗಾಸೆಯ ಕಾಮ ಕೃಷ್ಣಾಜಿನದ ಕಂದರ್ಪ
ನಳಿನಮುಖಿಯನು ವರಿಸು ಬಾ ನಿನ
ಗಳವಡುವನೆಲೆಯಕ್ಕ ಕೇಳೌ
ತಲೆವಿಡಿವೆವಾವ್ನೋಡುಯೆಂದರು ನಗುತ ಚಪಲೆಯರು ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮತ್ತೆ ಕೆಲವು ಚಂಚಲ ಸ್ವಭಾವದವರು, ನಗು ನಗುತ್ತ ಅರ್ಜುನನನ್ನು ಕುರಿತು “ಎಲವೋ ಮೃತ್ತಿಕೆ ಪೂಸಿರುವ ಮದನಾ ! ದರ್ಭೆಯ ಎಳ್ಳಿನ ಮನ್ಮಥ ! ಶುಭ್ರವಾದ ಧೋತ್ರವನ್ನುಟ್ಟ ತಳಿರುಗಾಸೆಯ ಕಾಮಾ ! ಕೃಷ್ಣಾಜಿನದ ಕಂದರ್ಪ ! ಕಮಲಮುಖಿಯನ್ನು ವರಿಸು ಬಾ! ಎಲೆ ಅಕ್ಕ ಕೇಳವ್ವ ನಿನಗಿವನು ಅಳವಡುತ್ತಾನೆ. ಬೇಕಾದರೆ ನಾವು ಅವನನ್ನು ನಿನಗೆ ಹಿಡಿದು ಕೊಡುತ್ತೇವೆ, ನೋಡು” ಎಂದು ದ್ರೌಪದಿಯ ಸಖಿಯರು ನುಡಿದರು.
ಪದಾರ್ಥ (ಕ.ಗ.ಪ)
ಚಪಲೆ-ಚಂಚಲ ಸ್ವಭಾವದವಳು, ಕಂದರ್ಪ-ಮನ್ಮಥ, ಮಟ್ಟಿ-ಮಣ್ಣು, ತಿಲ-ಎಳ್ಳು
ಮೂಲ ...{Loading}...
ಎಲವೊ ಮಟ್ಟಿಯ ಮದನ ದರ್ಭೆಯ
ತಿಲದ ಮನ್ಮಥ ವಿಮಲ ಧೋತ್ರದ
ತಳಿರುಗಾಸೆಯ ಕಾಮ ಕೃಷ್ಣಾಜಿನದ ಕಂದರ್ಪ
ನಳಿನಮುಖಿಯನು ವರಿಸು ಬಾ ನಿನ
ಗಳವಡುವನೆಲೆಯಕ್ಕ ಕೇಳೌ
ತಲೆವಿಡಿವೆವಾವ್ನೋಡುಯೆಂದರು ನಗುತ ಚಪಲೆಯರು ॥21॥
೦೨೨ ಅದೆ ಹಲಾಯುಧ ...{Loading}...
ಅದೆ ಹಲಾಯುಧ ನೋಡು ವಿಪ್ರೌ
ಘದಲಿ ಪಾರ್ಥನ ಬರವು ಮೇಘದ
ಹೊದರುಗಳ ಹರಿದಶ್ವನಂತಿರೆ ವಿಪ್ರವೇಷದಲಿ
ವಿದಿತವೇ ವಸುದೇವನಾಣೆಂ
ದುದಕೆ ತಪ್ಪದಲೈ ಸಭಾ ಮ
ಧ್ಯದಲಿ ಬರುತಿರ್ಪಾತನರ್ಜುನನೆಂದನಸುರಾರಿ ॥22॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಶ್ರೀಕೃಷ್ಣನು ಅಣ್ಣನನ್ನು ಕುರಿತು, “ಬಲರಾಮಾ, ಅದೇ ನೋಡು. ವಿಪ್ರರ ಸಮೂಹದಲ್ಲಿ ಪಾರ್ಥನ ಬರುವಿಕೆಯನ್ನು. ಮೋಡಗಳ ಗುಂಪಿನೊಳಗಿನ ಸೂರ್ಯನಂತೆ ವಿಪ್ರವೇಷದಲ್ಲಿ ಮೈಮರೆಸಿಕೊಂಡು ಬರುತ್ತಿದ್ದಾನೆ. " ನಾನು ವಸುದೇವನಾಣೆÂಗೂ ಎಂದು ಹೇಳಿದ್ದು ತಪ್ಪ ಲಿಲ್ಲ “. ಸಭಾ ಮಧ್ಯದಲ್ಲಿ ಬರುತ್ತಿರುವವನು ಅರ್ಜುನ” ಎಂದನು ಅಸುರಾರಿ.
ಪದಾರ್ಥ (ಕ.ಗ.ಪ)
ಹಲಾಯುಧ-ಬಲರಾಮ (ನೇಗಿಲನ್ನು ಆಯುಧವಾಗಿ ಉಳ್ಳವನು), ಓಘ-ಸಮೂಹ, ಹರಿದಶ್ವ-ಸೂರ್ಯ, ವಿದಿತ-ನಿಜ, ಅಸುರಾರಿ-ಕೃಷ್ಣ (ರಾಕ್ಷಸರ ಶತ್ರು), ಹೊದರು-ಗುಂಪು
ಮೂಲ ...{Loading}...
ಅದೆ ಹಲಾಯುಧ ನೋಡು ವಿಪ್ರೌ
ಘದಲಿ ಪಾರ್ಥನ ಬರವು ಮೇಘದ
ಹೊದರುಗಳ ಹರಿದಶ್ವನಂತಿರೆ ವಿಪ್ರವೇಷದಲಿ
ವಿದಿತವೇ ವಸುದೇವನಾಣೆಂ
ದುದಕೆ ತಪ್ಪದಲೈ ಸಭಾ ಮ
ಧ್ಯದಲಿ ಬರುತಿರ್ಪಾತನರ್ಜುನನೆಂದನಸುರಾರಿ ॥22॥
೦೨೩ ಜನಪನೋ ಭೀಮಾದಿಗಳೊ ...{Loading}...
ಜನಪನೋ ಭೀಮಾದಿಗಳೊ ತ
ಜ್ಜನನಿಯೋ ತಾವೆಲ್ಲ ಭೂಸುರ
ಜನದ ಸಾಮೀಪ್ಯದಲಿ ಸಭೆಯೊಳಗಿರ್ದರೆನೆ ಕೇಳ್ದು
ನಿನಗಿದೆಂತವರರಿತವರಗಿನ
ಮನೆಗೆ ತಪ್ಪಿದರೆಂತು ಶಿವ ನೀ
ನೆನಿತು ಮಾಯಾಸಿದ್ಧನೆಂದನು ನಗುತ ಬಲರಾಮ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮಹಾರಾಜ , ಭೀಮಾದಿಗಳು , ಅವರ ತಾಯಿ ಅವರೆಲ್ಲ ವಿಪ್ರ ಜನರ ಮಧ್ಯದಲ್ಲಿ ಸಭೆಯೊಳಗಿದ್ದಾರೆ ಎಂದು ಕೃಷ್ಣ ಹೇಳಲು, “ನಿನಗೆ ಅವರ ಬಗ್ಗೆ ಇದೆಲ್ಲ ಹೇಗೆ ತಿಳಿಯಿತು ? ಅವರು ಅರಗಿನ ಮನೆಯಿಂದ ಹೇಗೆ ತಪ್ಪಿಸಿಕೊಂಡು ಹೊರಟರು ? ಶಿವಶಿವಾ, ನೀನು ಅದೆಷ್ಟು ಇಂದ್ರಜಾಲದಲ್ಲಿ ನಿಪುಣನಿದ್ದೀಯೋ ?” ಎಂದನು ನಗುತ್ತ ಬಲರಾಮ.
ಪದಾರ್ಥ (ಕ.ಗ.ಪ)
ಮಾಯಾಸಿದ್ಧ-ಇಂದ್ರಜಾಲದಲ್ಲಿ ನಿಪುಣ
ಮೂಲ ...{Loading}...
ಜನಪನೋ ಭೀಮಾದಿಗಳೊ ತ
ಜ್ಜನನಿಯೋ ತಾವೆಲ್ಲ ಭೂಸುರ
ಜನದ ಸಾಮೀಪ್ಯದಲಿ ಸಭೆಯೊಳಗಿರ್ದರೆನೆ ಕೇಳ್ದು
ನಿನಗಿದೆಂತವರರಿತವರಗಿನ
ಮನೆಗೆ ತಪ್ಪಿದರೆಂತು ಶಿವ ನೀ
ನೆನಿತು ಮಾಯಾಸಿದ್ಧನೆಂದನು ನಗುತ ಬಲರಾಮ ॥23॥
೦೨೪ ಅವನಿಪತಿ ಕೇಳಿತ್ತಲೀ ...{Loading}...
ಅವನಿಪತಿ ಕೇಳಿತ್ತಲೀ ಪಾ
ರ್ಥಿವರ ಪರಿಹಾಸವನು ಕಾಂತಾ
ನಿವಹದಲಿ ನಿಬ್ಬರದ ನುಡಿಗಳನಾ ಮಹೀಸುರರ
ವಿವಿಧ ಕಟು ಮಧುರೋಕ್ತಿ ವಿನ್ಯಾ
ಸವನು ಕೇಳುತ ಮುಗುಳು ನಗೆಯಲಿ
ನವಮದದ್ವಿಪಗತಿಯ ಗರುವಾಯಿಯಲಿ ನಡೆತಂದ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇತ್ತ ಕ್ಷತ್ರಿಯರ ಅಣಕವನ್ನೂ, ಸ್ತ್ರೀ ಸಮೂಹದ ಅತಿಶಯವಾದ ಮಾತುಗಳನ್ನು ಆ ಬ್ರಾಹ್ಮಣರ ಪರಿಪರಿಯ ತೀಕ್ಷ್ಣ ಹಾಗೂ ಹಿತಕರವಾದ ಮಾತುಗಳ ರಚನೆಯನ್ನೂ ಕೇಳುತ್ತ ಮಂದಹಾಸದಲ್ಲಿ ಹೊಸದಾಗಿ ಮದವೇರಿದ ಆನೆಯ ಗತಿಯಂತೆ ಠೀವಿಯಿಂದ ಅರ್ಜುನನು ನಡೆತಂದನು.
ಪದಾರ್ಥ (ಕ.ಗ.ಪ)
ಪರಿಹಾಸ-ಅಣಕ, ನಿಬ್ಬರ-ಅತಿಶಯ, ಕಟು-ತೀಕ್ಷ್ಣ, ಮಧುರ-ಹಿತಕರ, ವಿನ್ಯಾಸ-ರಚನೆ, ಮುಗುಳುನಗೆ-ಮಂದಹಾಸ, ದ್ವಿಪ-ಆನೆ, ಗತಿ-ಗಮನ, ಗರುವಾಯಿ-ಠೀವಿ
ಮೂಲ ...{Loading}...
ಅವನಿಪತಿ ಕೇಳಿತ್ತಲೀ ಪಾ
ರ್ಥಿವರ ಪರಿಹಾಸವನು ಕಾಂತಾ
ನಿವಹದಲಿ ನಿಬ್ಬರದ ನುಡಿಗಳನಾ ಮಹೀಸುರರ
ವಿವಿಧ ಕಟು ಮಧುರೋಕ್ತಿ ವಿನ್ಯಾ
ಸವನು ಕೇಳುತ ಮುಗುಳು ನಗೆಯಲಿ
ನವಮದದ್ವಿಪಗತಿಯ ಗರುವಾಯಿಯಲಿ ನಡೆತಂದ ॥24॥
೦೨೫ ಇವನ ಗತಿ ...{Loading}...
ಇವನ ಗತಿ ಮುಖಚೇಷ್ಟೆ ಭಾವೋ
ತ್ಸವ ವಿಲಾಸವುಪೇಕ್ಷೆ ಭರವಂ
ಘವಣೆ ಗರುವಿಕೆ ಗಮಕಭಾವವಭೀತಿ ಭುಲ್ಲವಣೆ
ಇವನ ವಿಮಲಕ್ಷತ್ರ ವಿಕ್ರಮ
ವಿವನ ಕೊಂಡಯತನವಿವೇ ಸಾ
ಕಿವನಘಾಟದ ವೀರನೆಂದರು ವೀರರರ್ಜುನನ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೀರರಾದವರು ಅರ್ಜುನನ್ನು ಗಮನಿಸಿ ನೋಡಿ “ಇವನ ನಡಿಗೆ, ಮುಖಸನ್ನೆ, ಮನಸ್ಸಿನ ಸಂಭ್ರಮ, ಚೆಲುವು, ಅಲಕ್ಷ್ಯಭಾವ, ಸಾಮಥ್ರ್ಯದ ಹೆಚ್ಚಳ, ಹಿರಿಮೆ, ಠೀವಿ, ಭಯವಿಲ್ಲದ ಭಾವನೆ, ಉಬ್ಬುವಿಕೆ, ಇವನ ಪವಿತ್ರವಾದ ಕ್ಷತ್ರಿಯ ಪರಾಕ್ರಮ, ಇವನ ದರ್ಪ - ಇವುಗಳೇ ಸಾಕು ಇವನು ಅತಿಶಯದ ವೀರನೆನ್ನಲು” ಎಂದರು.
ಪದಾರ್ಥ (ಕ.ಗ.ಪ)
ಗತಿ-ನಡಿಗೆ, ಚೇಷ್ಟೆ-ಸನ್ನೆ, ಭಾವೋತ್ಸವ-ಮನಸ್ಸಿನ ಸಂಭ್ರಮ, ವಿಲಾಸ-ಚೆಲುವು, ಉಪೇಕ್ಷೆ-ಅಲಕ್ಷ್ಯಭಾವ, ಅಂಘವಣೆ-ಸಾಮಥ್ರ್ಯ, ಭರ-ಹೆಚ್ಚಳ, ಗರುವಿಕೆ-ಹಿರಿಮೆ, ಗಮಕ-ಠೀವಿ, ಭುಲ್ಲವಣೆ-ಉಬ್ಬುವಿಕೆ, ಕೊಂಡೆಯತನ-ದರ್ಪ, ಅಘಾಟ-ಅತಿಶಯ
ಪಾಠಾನ್ತರ (ಕ.ಗ.ಪ)
(ಸಾಕಿವನು ಘಾಟದ) ಇದರ ಬದಲು (ಸಾಕಿವನಘಾಟದ) ಎಂಬ ಪಾಠಾಂತರ ಸಮಂಜಸವೆನಿಸುತ್ತದೆ. ಕಾರಣ, ಘಾಟವೆನ್ನುವುದಕ್ಕೆ ಸಾಂದರ್ಭಿಕ ಅರ್ಥ ಇರುವುದಿಲ್ಲ. ಅಘಾಟ ಎಂದರೆ ಅತಿಶಯ ಎಂಬ ಅರ್ಥ ಇದೆ.
ಆದಿ ಪರ್ವ, ಮೈ.ವಿ.ವಿ.
ಮೂಲ ...{Loading}...
ಇವನ ಗತಿ ಮುಖಚೇಷ್ಟೆ ಭಾವೋ
ತ್ಸವ ವಿಲಾಸವುಪೇಕ್ಷೆ ಭರವಂ
ಘವಣೆ ಗರುವಿಕೆ ಗಮಕಭಾವವಭೀತಿ ಭುಲ್ಲವಣೆ
ಇವನ ವಿಮಲಕ್ಷತ್ರ ವಿಕ್ರಮ
ವಿವನ ಕೊಂಡಯತನವಿವೇ ಸಾ
ಕಿವನಘಾಟದ ವೀರನೆಂದರು ವೀರರರ್ಜುನನ ॥25॥
೦೨೬ ಬರುತ ಭೀಷ್ಮ ...{Loading}...
ಬರುತ ಭೀಷ್ಮ ದ್ರೋಣ ಕೃಪರಿಂ
ಗೆರಗಿದನು ಮನದೊಳಗೆ ಯಾದವ
ರರಸ ಹಂತಿಯ ಹರಿಯನಭಿವಂದಿಸಿದನಕ್ಷಿಯಲಿ
ಸುರಪತಿಗೆ ಗುಹ ಗಣಪ ದಿಕ್ಪಾ
ಲರಿಗೆ ರುದ್ರಾದಿತ್ಯ ವಸುಮು
ಖ್ಯರಿಗೆ ಮಣಿದನು ಬಂದನಗ್ಗದ ಚಾಪವಿದ್ದೆಡೆಗೆ ॥26॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬರುತ್ತಿರುವಾಗ ಪಾರ್ಥನು ಭೀಷ್ಮ ದ್ರೋಣ ಕೃಪರಿಗೆ ಮನಸ್ಸಿನಲ್ಲೇ ನಮಸ್ಕರಿಸಿದನು. ಯಾದವರರಸರ ಸಾಲಿನಲ್ಲಿದ್ದ ಕೃಷ್ಣನನ್ನು ಕಣ್ಣಿನಲ್ಲೇ ನಮಸ್ಕರಿಸಿದನು. ಇಂದ್ರ, ಷಣ್ಮುಖ, ಗಣಪತಿ, ದಿಕ್ಪಾಲಕರು, ರುದ್ರ, ಆದಿತ್ಯ, ವಸುಗಳು ಇವರೇ ಮೊದಲಾದ ದೇವತೆಗಳಿಗೆ ನಮಸ್ಕರಿಸಿದನು. ಶ್ರೇಷ್ಠವಾದ ಬಿಲ್ಲಿದ್ದ ಕಡೆಗೆ ಬಂದನು.
ಪದಾರ್ಥ (ಕ.ಗ.ಪ)
ಹಂತಿ-ಸಾಲು, ಅಭಿವಂದಿಸು-ನಮಸ್ಕರಿಸು, ಅಗ್ಗ-ಶ್ರೇಷ್ಠವಾದ, ಗುಹ-ಷಣ್ಮುಖ, ಮಣಿ-ನಮಸ್ಕರಿಸು
ಮೂಲ ...{Loading}...
ಬರುತ ಭೀಷ್ಮ ದ್ರೋಣ ಕೃಪರಿಂ
ಗೆರಗಿದನು ಮನದೊಳಗೆ ಯಾದವ
ರರಸ ಹಂತಿಯ ಹರಿಯನಭಿವಂದಿಸಿದನಕ್ಷಿಯಲಿ
ಸುರಪತಿಗೆ ಗುಹ ಗಣಪ ದಿಕ್ಪಾ
ಲರಿಗೆ ರುದ್ರಾದಿತ್ಯ ವಸುಮು
ಖ್ಯರಿಗೆ ಮಣಿದನು ಬಂದನಗ್ಗದ ಚಾಪವಿದ್ದೆಡೆಗೆ ॥26॥
೦೨೭ ಮೊದಲಲಮ್ಬುಜಭವನನಾ ಮ ...{Loading}...
ಮೊದಲಲಂಬುಜಭವನನಾ ಮ
ಧ್ಯದಲಿ ಮಧುಸೂದನನನಾ ಬಿಲು
ದುದಿಯಲಾಹ್ವಾನಿಸಿದನಗ್ಗದ ನೀಲಲೋಹಿತನ
ಇದು ಮಹಾಭೂಮಿಪರ ಬಿಂಕವ
ನೊದೆದ ಧನುವೇ ಪೂತುರೆನುತೆ
ತ್ತಿದನು ಬಾಗೊತ್ತಿದನು ಕೊರಳಿಗೆ ತೊಡಿಸಿದನು ತಿರುವ ॥27॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿಲ್ಲಿನ ಮೊದಲಲ್ಲಿ ಬ್ರಹ್ಮನನ್ನೂ, ಮಧ್ಯದಲ್ಲಿ ವಿಷ್ಣುವನ್ನೂ, ತುದಿಯಲ್ಲಿ ಶ್ರೇಷ್ಠ ಶಿವನನ್ನೂ ಆಹ್ವಾನಿಸಿದನು. “ಇದು ಶ್ರೇಷ್ಠ ಭೂಪತಿಗಳ ಗರ್ವವನ್ನು ಮೆಟ್ಟಿದ ಧನುಸ್ಸು, ಪೂತುರೇ” ಎನುತ್ತ ಅದನ್ನು ಕೈಗೆತ್ತಿಕೊಂಡು ಬಾಗಿಸಿ ಒತ್ತಿದನು. ಅದರ ಕೊರಳಿಗೆ ಹೆದೆಯನ್ನು ತೊಡಿಸಿದನು.
ಪದಾರ್ಥ (ಕ.ಗ.ಪ)
ಅಂಬುಜಭವ-ಕಮಲದಲ್ಲಿ ಹುಟ್ಟಿದವನು, ಬ್ರಹ್ಮನು.
ಮಧುಸೂದನ-ಮಧುವೆಂಬ ರಕ್ಕಸನನ್ನು ನಾಶಮಾಡಿದವನು, ವಿಷ್ಣು,
ನೀಲಲೋಹಿತ-ನೀಲಕಂಠ, ಶಿವ,
ಬಿಂಕ-ಗರ್ವ,
ಒದೆ-ಮೆಟ್ಟು, ತಿರು-ಹೆದೆ
ಮೂಲ ...{Loading}...
ಮೊದಲಲಂಬುಜಭವನನಾ ಮ
ಧ್ಯದಲಿ ಮಧುಸೂದನನನಾ ಬಿಲು
ದುದಿಯಲಾಹ್ವಾನಿಸಿದನಗ್ಗದ ನೀಲಲೋಹಿತನ
ಇದು ಮಹಾಭೂಮಿಪರ ಬಿಂಕವ
ನೊದೆದ ಧನುವೇ ಪೂತುರೆನುತೆ
ತ್ತಿದನು ಬಾಗೊತ್ತಿದನು ಕೊರಳಿಗೆ ತೊಡಿಸಿದನು ತಿರುವ ॥27॥
೦೨೮ ಹೊಯ್ದ ತಿರುವನು ...{Loading}...
ಹೊಯ್ದ ತಿರುವನು ಸೆಳೆದು ಕಿವಿವರೆ
ಗೊಯ್ದನಿದು ಹದವಿಲ್ಲಲಾ ಬಿಲು
ಹೊಯ್ದುದಕಟಾ ಬರಿದೆ ಹೆದರಿತು ಮಾಗಧಾದಿಗಳು
ಕೈದೆಗೆದರಿದರೊಳಗೆ ಹೆಸರೆನ
ಗೈದಬೇಕೆಂದೈಸಲೇಯೆನು
ತೈದು ಬಾಣವ ಕೊಂಡು ಯಂತ್ರದ ಹೊಳಹನೀಕ್ಷಿಸಿದ ॥28॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತೊಡಿಸಿದ ಹೆದೆಯನ್ನು ಮಿಡಿದು ಕಿವಿಯವರೆಗೆ ಎಳೆದನು “ಇದು ಯೋಗ್ಯವಾದ ಬಿಲ್ಲೇ ಅಲ್ಲ. ಅಯ್ಯೋ ಬಿಲ್ಲು ಹೊಡೆಯಿತು ಎಂದು ಸುಮ್ಮನೆ ಮಾಗಧಾದಿಗಳು ಹೆದರಿಬಿಟ್ಟರು. ನನಗೆ ಹೆಸರು ಬರಬೇಕೆಂದು ಅವರೆಲ್ಲ ಇದರಲ್ಲಿ ಹಿಮ್ಮೆಟ್ಟಿದರೆಂದು ಕಾಣುತ್ತದೆ ಅಲ್ಲವೆ !” ಎನ್ನುತ್ತ ಐದು ಬಾಣಗಳನ್ನು ತೆಗೆದುಕೊಂಡು ಯಂತ್ರದ ಕಾಂತಿಯನ್ನು ನೋಡಿದನು.
ಪದಾರ್ಥ (ಕ.ಗ.ಪ)
ಸೆಳೆ-ಎಳೆ, ಕೈದೆಗೆ-ಹಿಮ್ಮೆಟ್ಟು, ಹೊಳಹು-ಕಾಂತಿ
ಮೂಲ ...{Loading}...
ಹೊಯ್ದ ತಿರುವನು ಸೆಳೆದು ಕಿವಿವರೆ
ಗೊಯ್ದನಿದು ಹದವಿಲ್ಲಲಾ ಬಿಲು
ಹೊಯ್ದುದಕಟಾ ಬರಿದೆ ಹೆದರಿತು ಮಾಗಧಾದಿಗಳು
ಕೈದೆಗೆದರಿದರೊಳಗೆ ಹೆಸರೆನ
ಗೈದಬೇಕೆಂದೈಸಲೇಯೆನು
ತೈದು ಬಾಣವ ಕೊಂಡು ಯಂತ್ರದ ಹೊಳಹನೀಕ್ಷಿಸಿದ ॥28॥
೦೨೯ ತೂಗಿ ಕಿವಿವರೆಗುಗಿದು ...{Loading}...
ತೂಗಿ ಕಿವಿವರೆಗುಗಿದು ಯಂತ್ರವ
ತಾಗಿಸಿದನಂಬಿನಲಿ ಪಾರ್ಥನ
ಲಾಗು ವೇಗವನಾರು ಬಲ್ಲರು ಯಂತ್ರಭೇದದಲಿ
ಜಾಗು ಧಣು ಧಣು ಪೂತು ಕಾರ್ಮುಕ
ಯೋಗಸಿದ್ಧನೆ ಮಝರೆ ಕೋದಂ
ಡಾಗಮ ತ್ರಿಪುರಾರಿಯೆಂದುದು ವಂದಿ ಸಂದೋಹ ॥29॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತೂಗಿ ಕಿವಿಯವರೆಗೆ ಸೆಳೆದು ಬಾಣವನ್ನು ಯಂತ್ರದಲ್ಲಿ ನಾಟಿಸಿದನು. ಯಂತ್ರ ಭೇದಿಸುವುದರಲ್ಲಿ ಪಾರ್ಥನ ಅತಿಶಯವಾದ ಕೈಚಳಕವನ್ನು ಯಾರು ಬಲ್ಲರು ? ಜಾಗು, ಧಣುಧಣು, ಪೂತು ! ಧನುರ್ವಿದ್ಯೆಯ ಸಿದ್ಧನೇ ! ಮಝರೇ ಧನುರ್ವೇದದ ತ್ರಿಪುರಾರಿ! ಎಂದು ಸ್ತುತಿ ಪಾಠಕರ ಸಮೂಹ ಉದ್ಘೋಷಿಸಿತು.
ಪದಾರ್ಥ (ಕ.ಗ.ಪ)
ತಾಗಿಸು-ನಾಟಿಸು, ಲಾಗುವೇಗ-ಅತಿಶಯವಾದ ಕೈಚಳಕ, ಕಾರ್ಮುಕಯೋಗ-ಧನುರ್ವಿದ್ಯೆ, ಕೋದಂಡಾಗಮ-ಧನುರ್ವೇದ, ತ್ರಿಪುರಾರಿ-ಶಿವ, ವಂದಿ-ಸ್ತುತಿಪಾಠಕರು, ಸಂದೋಹ-ಸಮೂಹ
ಮೂಲ ...{Loading}...
ತೂಗಿ ಕಿವಿವರೆಗುಗಿದು ಯಂತ್ರವ
ತಾಗಿಸಿದನಂಬಿನಲಿ ಪಾರ್ಥನ
ಲಾಗು ವೇಗವನಾರು ಬಲ್ಲರು ಯಂತ್ರಭೇದದಲಿ
ಜಾಗು ಧಣು ಧಣು ಪೂತು ಕಾರ್ಮುಕ
ಯೋಗಸಿದ್ಧನೆ ಮಝರೆ ಕೋದಂ
ಡಾಗಮ ತ್ರಿಪುರಾರಿಯೆಂದುದು ವಂದಿ ಸಂದೋಹ ॥29॥
೦೩೦ ಆಯೆನುತ ಬೊಬ್ಬಿರಿದು ...{Loading}...
ಆಯೆನುತ ಬೊಬ್ಬಿರಿದು ವಿಪ್ರ ನಿ
ಕಾಯ ಕುಣಿದುದು ಕಮಲಮುಖಿ ನಿ
ರ್ದಾಯದಲಿ ಸೇರಿದಳು ಹಾರುವಗೆನುತ ಹರುಷದಲಿ
ಆ ಯುವತಿಜನ ಜಲಧಿ ಮಸಗಿತು
ಬಾಯ ಮೌನದ ಬೆರಳ ಮೂಗಿನ
ರಾಯರಿದ್ದರು ಬಿಗಿದ ಬೆರಗಿನ ಹೊತ್ತ ದುಗುಡದಲಿ ॥30॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿಪ್ರಸಮೂಹ ಇದನ್ನು ನೋಡಿ “ಕಮಲಮುಖಿ ಸುಲಭದಲ್ಲಿ ಬ್ರಾಹ್ಮಣನಿಗೆ ಸೇರಿದಳು” ಎನ್ನುತ್ತ ಸಂತೋಷದಲ್ಲಿ ಕೂಗಾಡಿ ಕುಣಿಯಿತು. ಆ ಯುವತಿಜನಸಾಗರ ವಿಜೃಂಭಿಸಿತು. ಮಾತಾಡದೆ ಮೌನವಾಗಿ, ಮೂಗಿನ ಮೇಲೆ ಬೆರಳಿಟ್ಟು, ಆವರಿಸಿದ ಆಶ್ಚರ್ಯದೊಂದಿಗೆ, ಚಿಂತೆಯನ್ನು ಹೊತ್ತ ರಾಜರು ಕುಳಿತಿದ್ದರು.
ಪದಾರ್ಥ (ಕ.ಗ.ಪ)
ನಿರ್ದಾಯ-ಸುಲಭ, ಹಾರುವ-ಬ್ರಾಹ್ಮಣ, ಜಲಧಿ-ಸಾಗರ, ಮಸಗು-ವಿಜೃಂಭಿಸು, ಬಿಗಿದ-ಆವರಿಸಿದ, ಬೆರಗು-ಆಶ್ಚರ್ಯ, ದುಗುಡ-ಚಿಂತೆ
ಮೂಲ ...{Loading}...
ಆಯೆನುತ ಬೊಬ್ಬಿರಿದು ವಿಪ್ರ ನಿ
ಕಾಯ ಕುಣಿದುದು ಕಮಲಮುಖಿ ನಿ
ರ್ದಾಯದಲಿ ಸೇರಿದಳು ಹಾರುವಗೆನುತ ಹರುಷದಲಿ
ಆ ಯುವತಿಜನ ಜಲಧಿ ಮಸಗಿತು
ಬಾಯ ಮೌನದ ಬೆರಳ ಮೂಗಿನ
ರಾಯರಿದ್ದರು ಬಿಗಿದ ಬೆರಗಿನ ಹೊತ್ತ ದುಗುಡದಲಿ ॥30॥
೦೩೧ ಮೊಳಗಿದವು ನಿಸ್ಸಾಳ ...{Loading}...
ಮೊಳಗಿದವು ನಿಸ್ಸಾಳ ತತಿ ಹೆ
ಕ್ಕಳದ ಪೆರ್ಚಿನೊಳಲ್ಲಿ ದಿವಿಜಾ
ವಳಿಯ ದುಂದುಭಿ ರವದಲುಬ್ಬಿದ ಸಾಧುವಾದಗಳ
ಕಳಕಳದ ಕೊಲ್ಲಣಿಗೆಯಲಿ ಪೂ
ವಳೆಯ ಪೂರದ ಹರಹಿನಲಿ ಜನ
ಮುಳುಗಿತದ್ಭುತ ರಭಸವಳ್ಳಿರಿದುದು ಜಗತ್ರಯವ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಧಿಕ ಸಂತೋಷದಲ್ಲಿ ಭೇರೀ ವಾದ್ಯಗಳು ಅಬ್ಬರಿಸಿದುವು. ಮೇಲೆ ದೇವತೆಗಳ ಸಮೂಹ ದುಂದುಭಿ ಧ್ವನಿ ಮಾಡಿತು. ಉತ್ಸಾಹದ “ಸಾಧು, ಸಾಧು” ಎಂಬ ಸಾಧುವಾದದ ಕಲಕಲಧ್ವನಿ ಸಂದಣಿಯಲ್ಲಿ ವ್ಯಾಪಿಸಿತು. ಹೂಮಳೆಯ ಮಹಾಪೂರದಲ್ಲಿ ಜನ ಮುಳುಗಿತು. ಅದ್ಭುತದ ಆರ್ಭಟವು ಮೂರು ಲೋಕವನ್ನು ವ್ಯಾಪಿಸಿತು.
ಪದಾರ್ಥ (ಕ.ಗ.ಪ)
ಮೊಳಗು-ಅಬ್ಬರಿಸು, ರವ-ಧ್ವನಿ, ಉಬ್ಬು-ಉತ್ಸಾಹ, ಕೊಲ್ಲಣಿಗೆ-ಸಂದಣಿ, ಹರಹು-ವಿಸ್ತಾರ, ರಭಸ-ಆರ್ಭಟ
ಮೂಲ ...{Loading}...
ಮೊಳಗಿದವು ನಿಸ್ಸಾಳ ತತಿ ಹೆ
ಕ್ಕಳದ ಪೆರ್ಚಿನೊಳಲ್ಲಿ ದಿವಿಜಾ
ವಳಿಯ ದುಂದುಭಿ ರವದಲುಬ್ಬಿದ ಸಾಧುವಾದಗಳ
ಕಳಕಳದ ಕೊಲ್ಲಣಿಗೆಯಲಿ ಪೂ
ವಳೆಯ ಪೂರದ ಹರಹಿನಲಿ ಜನ
ಮುಳುಗಿತದ್ಭುತ ರಭಸವಳ್ಳಿರಿದುದು ಜಗತ್ರಯವ ॥31॥
೦೩೨ ಕಿತ್ತ ಸುರಗಿಯ ...{Loading}...
ಕಿತ್ತ ಸುರಗಿಯ ವೀರ ಭಟರರು
ವತ್ತು ಸಾವಿರವೈದಿ ಪಾರ್ಥನ
ಸುತ್ತು ಮುತ್ತಿದರಂಗ ರಕ್ಷಣೆಗರಸನಾಜ್ಞೆಯಲಿ
ಇತ್ತ ಮಹಿಳಾಜನದ ಮೌಳಿಯ
ಮುತ್ತು ಕುಸುಮಾಯುಧನ ಥಟ್ಟಿನ
ಮತ್ತ ಗಜವೈತಂದಳಲ್ಲಿಗೆ ದ್ರೌಪದಾದೇವಿ ॥32॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನ ಅಪ್ಪಣೆಯ ಪ್ರಕಾರ ಅರವತ್ತು ಸಾವಿರ ವೀರಭಟರು ಕತ್ತಿಯನ್ನು ಹಿಡಿದು ದೇಹ ರಕ್ಷಣೆಗಾಗಿ ಪಾರ್ಥನ ಸುತ್ತು ಆವರಿಸಿದರು. ಇತ್ತ ಕಡೆ, ಮಹಿಳಾ ಜನರ ತಲೆಗಳಲ್ಲಿ ಧರಿಸಿದ ಮುತ್ತು, ಮನ್ಮಥನ ಸೈನ್ಯದ ಮದಿಸಿದ ಗಜ ಎನ್ನಿಸಿಕೊಂಡ ದ್ರೌಪದಿಯು ಅಲ್ಲಿಗೆ ನಡೆತಂದಳು.
ಪದಾರ್ಥ (ಕ.ಗ.ಪ)
ಸುರಗಿ-ಕತ್ತಿ, ಮೌಳಿ-ತಲೆ, ಕುಸುಮಾಯುಧ-ಪುಷ್ಪವನ್ನು ಆಯುಧವನ್ನಾಗಿ ಮಾಡಿಕೊಂಡವನು, ಮನ್ಮಥ,
ಥಟ್ಟು-ಸೈನ್ಯ
ಮೂಲ ...{Loading}...
ಕಿತ್ತ ಸುರಗಿಯ ವೀರ ಭಟರರು
ವತ್ತು ಸಾವಿರವೈದಿ ಪಾರ್ಥನ
ಸುತ್ತು ಮುತ್ತಿದರಂಗ ರಕ್ಷಣೆಗರಸನಾಜ್ಞೆಯಲಿ
ಇತ್ತ ಮಹಿಳಾಜನದ ಮೌಳಿಯ
ಮುತ್ತು ಕುಸುಮಾಯುಧನ ಥಟ್ಟಿನ
ಮತ್ತ ಗಜವೈತಂದಳಲ್ಲಿಗೆ ದ್ರೌಪದಾದೇವಿ ॥32॥
೦೩೩ ತೊಲತೊಲಗು ಮನ್ಮಥನ ...{Loading}...
ತೊಲತೊಲಗು ಮನ್ಮಥನ ಹೊಗರಿ
ಟ್ಟಲಗು ಬರುತಿದೆ ಸಾರು ಸಾರೆಂ
ದುಲಿದು ಕಂಚುಕಿ ನಿಕರ ಹೊಯ್ದುದು ಮುಂದೆ ಸಂದಣಿಯ
ನಳಿನಮುಖಿ ದಂಡಿಗೆಯೊಳೈತಂ
ದಿಳಿದಳೀತನ ಹೊರೆಯೊಳಾಗಳೆ
ಕಳಕಳದಲೊಳತೋಟಿ ಮಸಗಿತು ಹರುಷ ಲಜ್ಜೆಯಲಿ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ತೊಲಗು, ತೊಲಗು, ಮನ್ಮಥನ ಕಾಂತಿಯುಕ್ತ ಖಡ್ಗ ಬರುತ್ತಿದೆ. ಅತ್ತ ಸಾರು, ಸಾರು ಎಂದು ಅಂತಃಪುರದ ಅಧಿಕಾರಿಗಳ ಸಮೂಹ ಮುಂದಿನ ಗುಂಪನ್ನು ಚದುರಿಸಿತು. ಕಮಲಮುಖಿಯಾದ ದ್ರೌಪದಿ ಪಲ್ಲಕ್ಕಿಯಲ್ಲಿ ಬಂದು ಈತನ ಪಕ್ಕದಲ್ಲಿ ಇಳಿದಳು. ಆ ಕ್ಷಣವೆ ಅವಳಲ್ಲಿ ಮನಸ್ಸಿನಲ್ಲಿ ಹರುಷ ನಾಚಿಕೆಗಳ ಹೊಯ್ದಾಟ ಪ್ರಕಟವಾಯ್ತು.
ಪದಾರ್ಥ (ಕ.ಗ.ಪ)
ಹೊಗರು-ಕಾಂತಿ, ಅಲಗು-ಖಡ್ಗ, ಕಂಚುಕಿ-ಅಂತಃಪುರದ ಅಧಿಕಾರಿ,
ಸಂದಣಿ-ಗುಂಪು, ಹೊರೆ-ಪಕ್ಕ, ಒಳತೋಟ-ಒಳಜಗಳ, ಮಸಗು-ಪ್ರಕಟವಾಗು
ಮೂಲ ...{Loading}...
ತೊಲತೊಲಗು ಮನ್ಮಥನ ಹೊಗರಿ
ಟ್ಟಲಗು ಬರುತಿದೆ ಸಾರು ಸಾರೆಂ
ದುಲಿದು ಕಂಚುಕಿ ನಿಕರ ಹೊಯ್ದುದು ಮುಂದೆ ಸಂದಣಿಯ
ನಳಿನಮುಖಿ ದಂಡಿಗೆಯೊಳೈತಂ
ದಿಳಿದಳೀತನ ಹೊರೆಯೊಳಾಗಳೆ
ಕಳಕಳದಲೊಳತೋಟಿ ಮಸಗಿತು ಹರುಷ ಲಜ್ಜೆಯಲಿ ॥33॥
೦೩೪ ಲಲಿತ ಮಧುರಾಪಾಙ್ಗದಲಿ ...{Loading}...
ಲಲಿತ ಮಧುರಾಪಾಂಗದಲಿ ಮು
ಕ್ಕುಳಿಸಿ ತಣಿಯವು ಕಂಗಳುಬ್ಬಿದ
ಪುಳಕ ಜಲದಲಿ ಮುಳುಗಿ ಮೂಡಿತು ಮೈ ನಿತಂಬಿನಿಯ
ತಳಿತ ಲಜ್ಜಾಭರಕೆ ಕುಸಿದ
ವ್ವಳಿಸಿತಂತಃಕರಣವಾಂಗಿಕ
ಲುಳಿತಸಾತ್ವಿಕ ಭಾವವವಗಡಿಸಿತ್ತು ಮಾನಿನಿಯ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವಳ ಸುಂದರವಾದ, ಮನೋಹರವಾದ ಕಡೆಗಣ್ಣಿನಲ್ಲಿ ಅವನನ್ನು ಎಷ್ಟು ನೋಡಿದರೂ ಕಣ್ಣುಗಳು ತೃಪ್ತಿಯಾಗಲಿಲ್ಲ. ಉತ್ಸಾಹದ ರೋಮಾಂಚ ಜಲದಲ್ಲಿ ಸುಂದರಿಯ ಮೈ ಮೂಡಿ ಮುಳುಗಿತು. ಒತ್ತರಿಸಿ ಬಂದ ನಾಚಿಕೆಯ ರಭಸಕ್ಕೆ ಮನಸ್ಸು ತಗ್ಗಿತು. ಶರೀರದಲ್ಲೆಲ್ಲಾ ವ್ಯಾಪಿಸಿದ ಸಾತ್ವಿಕ ಭಾವವು ಸುಂದರಿಯನ್ನು ಸೋಲಿಸಿತು.
ಪದಾರ್ಥ (ಕ.ಗ.ಪ)
ಲಲಿತ-ಸುಂದರ, ಮಧುರ-ಮನೋಹರ, ಅಪಾಂಗ-ಕಡೆಗಣ್ಣು, ತಣಿ-ತೃಪ್ತಿ, ಪುಳಕ-ರೋಮಾಂಚ, ಕುಸಿ-ತಗ್ಗು, ಅವ್ವಳಿಸು-ಪೀಡಿಸು, ಆಂಗಿಕ-ಶರೀರಕ್ಕೆ ಸಂಬಂಧಿಸಿದ, ಲುಳಿತ-ವ್ಯಾಪಿಸಿದ, ಅವಗಡಿಸು-ಸೋಲಿಸು
ಮೂಲ ...{Loading}...
ಲಲಿತ ಮಧುರಾಪಾಂಗದಲಿ ಮು
ಕ್ಕುಳಿಸಿ ತಣಿಯವು ಕಂಗಳುಬ್ಬಿದ
ಪುಳಕ ಜಲದಲಿ ಮುಳುಗಿ ಮೂಡಿತು ಮೈ ನಿತಂಬಿನಿಯ
ತಳಿತ ಲಜ್ಜಾಭರಕೆ ಕುಸಿದ
ವ್ವಳಿಸಿತಂತಃಕರಣವಾಂಗಿಕ
ಲುಳಿತಸಾತ್ವಿಕ ಭಾವವವಗಡಿಸಿತ್ತು ಮಾನಿನಿಯ ॥34॥
೦೩೫ ಧರಣಿಪತಿ ಕೇಳ್ ...{Loading}...
ಧರಣಿಪತಿ ಕೇಳ್ ಬಹಳ ಲಜ್ಜಾ
ಭರದ ಭಯದಲಿ ಬೆಮರಿಡುತ ಕುಚ
ಭರದಿ ಮೇಲುದು ಜಾರೆ ಜೋಡಿಸಿ ನಿಮಿರಿ ನಡನಡುಗಿ
ತರುಣಿ ನಿಜತನು ಪರಿಮಳದಲುರೆ
ಹೊರೆದ ಹೂವಿನ ದಂಡೆಯನು ನಿಜ
ವರನ ಕೊರಳಲಿ ಹಾಯ್ಕಿದಳು ಜಯವೆನೆ ಸುರಸ್ತೋಮ ॥35॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾಚಿಕೆಯ ಭಾರದ ಭಯದಲ್ಲಿ ಬೆವರಿಡುತ್ತ, ಕುಚಗಳ ಅಲುಗಾಟದಲ್ಲಿ ಜಾರುವ ಸೆರಗನ್ನು ಸರಿಪಡಿಸಿಕೊಳ್ಳುತ್ತ, ನೆಟ್ಟಗಾಗಿಸಿಕೊಳ್ಳುತ್ತ ನಡನಡುಗುತ್ತ, ದ್ರೌಪದಿ, ತನ್ನ ದೇಹದ ಪರಿಮಳವನ್ನೂ ಸೂಸುತ್ತಿರುವ ಹೂವಿನ ಮಾಲೆಯನ್ನು ತನ್ನ ವರನ ಕೊರಳಲ್ಲಿ ಹಾಕಿದಳು. ದೇವತೆಗಳ ಸಮೂಹ ಜಯ ಜಯವೆಂದಿತು.
ಪದಾರ್ಥ (ಕ.ಗ.ಪ)
ಭರ-ಭಾರ, ಮೇಲುದು-ಸೆರಗು, ನಿಮಿರು-ನೆಟ್ಟಗಾಗು, ದಂಡೆ-ಮಾಲೆ, ಹೊರೆದ-ಲೇಪಿಸಿದ
ಮೂಲ ...{Loading}...
ಧರಣಿಪತಿ ಕೇಳ್ ಬಹಳ ಲಜ್ಜಾ
ಭರದ ಭಯದಲಿ ಬೆಮರಿಡುತ ಕುಚ
ಭರದಿ ಮೇಲುದು ಜಾರೆ ಜೋಡಿಸಿ ನಿಮಿರಿ ನಡನಡುಗಿ
ತರುಣಿ ನಿಜತನು ಪರಿಮಳದಲುರೆ
ಹೊರೆದ ಹೂವಿನ ದಂಡೆಯನು ನಿಜ
ವರನ ಕೊರಳಲಿ ಹಾಯ್ಕಿದಳು ಜಯವೆನೆ ಸುರಸ್ತೋಮ ॥35॥
೦೩೬ ಕೊರಳ ಹೂವಿನ ...{Loading}...
ಕೊರಳ ಹೂವಿನ ದಂಡೆಯಲಿ ನಿಜ
ಕರದ ಭಾರಿಯ ಧನುವಿನಲಿ ತನು
ಪರಿಮಳದ ನಿಟ್ಟೆಸಳುಗಂಗಳ ಕೆಲದ ಯುವತಿಯಲಿ
ವರನ ಪರಿ ಹೊಸತಾಯ್ತು ಹೊತ್ತನು
ಹರನ ಹಗೆ ಹಾರುವಿಕೆಯನು ನ
ಮ್ಮರಸಿ ನೆರೆ ಹಾರುವತಿಯೆಂದರು ನಗುತ ಚಪಲೆಯರು ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೊರಳಲ್ಲಿ ಹೂವಿನ ಮಾಲೆ, ತನ್ನ ಕೈಯಲ್ಲಿ ಭಾರಿಯ ಧನುಸ್ಸು, ಪಕ್ಕದಲ್ಲಿ ತನು ಪರಿಮಳದ, ವಿಶಾಲ ಹೂವಿನ ದಳದಂತ ಕಣ್ಣುಳ್ಳ ಯುವತಿ-ಈ ಮೂರೂ ಸೇರಿ ವರನ ರೀತಿ ಹೊಸದಾಯ್ತು. “ಹರನ ಶತ್ರುವಾದ ಮನ್ಮಥ ಬ್ರಾಹ್ಮಣಿಕೆಯನ್ನು ಹೊತ್ತನು. ನಮ್ಮ ರಾಣಿ ಬ್ರಾಹ್ಮಣ ಸ್ತ್ರೀಯಾದಳು” ಎಂದು ಚಪಳೆಯರು ನಕ್ಕರು.
ಪದಾರ್ಥ (ಕ.ಗ.ಪ)
ನಿಟ್ಟೆಸಳು-ವಿಶಾಲ ಹೂವಿನದಳ, ಹಾರುವಿಕೆ-ಬ್ರಾಹ್ಮಣಿಕೆ, ಹಾರುವತಿ-ಬ್ರಾಹ್ಮಣಸ್ತ್ರೀ, ಚಪಳೆ-ಚಂಚಲ ಸ್ವಭಾವದವಳು
ಮೂಲ ...{Loading}...
ಕೊರಳ ಹೂವಿನ ದಂಡೆಯಲಿ ನಿಜ
ಕರದ ಭಾರಿಯ ಧನುವಿನಲಿ ತನು
ಪರಿಮಳದ ನಿಟ್ಟೆಸಳುಗಂಗಳ ಕೆಲದ ಯುವತಿಯಲಿ
ವರನ ಪರಿ ಹೊಸತಾಯ್ತು ಹೊತ್ತನು
ಹರನ ಹಗೆ ಹಾರುವಿಕೆಯನು ನ
ಮ್ಮರಸಿ ನೆರೆ ಹಾರುವತಿಯೆಂದರು ನಗುತ ಚಪಲೆಯರು ॥36॥
೦೩೭ ಜನಪ ಕೇಳೈ ...{Loading}...
ಜನಪ ಕೇಳೈ ಯುವತಿಯೊಡನ
ರ್ಜುನನ ತಂದರು ರಾಜಮಂದಿರ
ಕನಿಮಿಷಾವಳಿ ಹರಿದುದಭ್ರದೊಳಮರಪತಿ ಸಹಿತ
ಮನದಸೂಯದ ಮುಖದ ದುಗುಡದ
ವಿನತ ಮಕುಟದ ಕೈಯ ಗಲ್ಲದ
ಕನಲಿಕೆಯ ಕೊನರುಗಳ ಕೌರವರಾಯ ಖತಿಗೊಂಡ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಕೂಡಲೇ, ಯುವತಿಯೊಡನೆ ಅರ್ಜುನನನ್ನು ಅರಮನೆಗೆ ಕರೆತಂದರು. ಆಕಾಶದಲ್ಲಿ ನೆರೆದ ದೇವತೆಗಳ ಸಮೂಹ ದೇವೇಂದ್ರ ಸಹಿತವಾಗಿ ಅಲ್ಲಿಂದ ಚೆದರಿತು. ಇತ್ತ ಸ್ವಯಂವರ ಮಂಟಪದಲ್ಲಿ, ಮನದಲ್ಲಿ ಅಸೂಯೆಯೂ, ಮುಖದಲ್ಲಿ ಚಿಂತೆಯೂ ವ್ಯಾಪಿಸಿರಲು, ಕಿರೀಟದ ತಲೆಯನ್ನು ಬಾಗಿಸಿ, ಕೈಯ ಮೇಲೆ ಗಲ್ಲವನ್ನೊರಗಿಸಿ ಕುಳಿತ, ಅಧಿಕ ಕೋಪದ ಕೌರವರಾಯನು ಭುಗಿಲೆದ್ದನು.
ಪದಾರ್ಥ (ಕ.ಗ.ಪ)
ಅನಿಮಿಷಾವಳಿ-ದೇವತೆಗಳ ಸಮೂಹ, ಹರಿದುದು-ಚೆದರಿತು, ವಿನತ-ಬಾಗಿದ, ಕನಲಿಕೆ-ಕೋಪ, ಕೊನರು-ಅಧಿಕ, ಖತಿ-ಕೋಪ
ಮೂಲ ...{Loading}...
ಜನಪ ಕೇಳೈ ಯುವತಿಯೊಡನ
ರ್ಜುನನ ತಂದರು ರಾಜಮಂದಿರ
ಕನಿಮಿಷಾವಳಿ ಹರಿದುದಭ್ರದೊಳಮರಪತಿ ಸಹಿತ
ಮನದಸೂಯದ ಮುಖದ ದುಗುಡದ
ವಿನತ ಮಕುಟದ ಕೈಯ ಗಲ್ಲದ
ಕನಲಿಕೆಯ ಕೊನರುಗಳ ಕೌರವರಾಯ ಖತಿಗೊಂಡ ॥37॥
೦೩೮ ಏನು ಹದ ...{Loading}...
ಏನು ಹದ ಪಾಂಚಾಲ ಮಾಡಿದ
ಮಾನಭಂಗವ ಕಂಡಿರೇ ಕಾ
ನೀನ ಶಕುನಿ ಜಯದ್ರಥಾಶ್ವತ್ಥಾಮ ಮೊದಲಾದ
ಮಾನನಿಧಿಗಳು ಕಂಡಿರೇ ಮದ
ದಾನೆಗಳು ನೀವ್ಕಂಡಿರೇ ಹದ
ನೇನೆನುತ ಕುರುರಾಯ ಮೂದಲಿಸಿದನು ತನ್ನವರ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇದೇನು ಕ್ರಮ ? ಪಾಂಚಾಲನು ಮಾಡಿದ ಮಾನಭಂಗವನ್ನು ಕಂಡಿರಾ ? ಕರ್ಣ, ಶಕುನಿ, ಜಯದ್ರಥ, ಅಶ್ವತ್ಥಾಮ ಮೊದಲಾದ ಅಭಿಮಾನಿಗಳು ನೋಡಿದಿರಾ ? ಮದದಾನೆಗಳೆನ್ನಿಸಿದ ನೀವು ಕಂಡಿರಾ ? ನಿಮ್ಮ ನಿಲವು ಏನು ?” ಎಂದು ಕುರುರಾಯ ತನ್ನವರನ್ನು ಮೂದಲಿಸಿದನು.
ಪದಾರ್ಥ (ಕ.ಗ.ಪ)
ಹದ-ಕ್ರಮ, ನಿಲವು
ಪಾಠಾನ್ತರ (ಕ.ಗ.ಪ)
ಕಾನೀನ- ಕರ್ಣಾನು ( ‘ರ’ ಪ್ರತಿಯಲ್ಲಿದೆ ಎಂಬ ಸೂಚನೆ ಇದೆ. ಮೈ.ವಿ.ವಿ. ಆದಿಪರ್ವ ಸಂ. ಡಾ. ಕೆ ಆರ್ ಶೇಷಗಿರಿ
ಟಿಪ್ಪನೀ (ಕ.ಗ.ಪ)
ಕಾನೀನ ಎನ್ನುವ ಪಾಠ ಇಲ್ಲಿಗೆ ಉಚಿತವಲ್ಲ. ಏಕೆಂದರೆ ಕಾನೀನ ಎಂದು ದುರ್ಯೋಧನ ಕರ್ಣನನ್ನು ಕರೆದನೆಂದರೆ ಕರ್ಣನ ಪೂರ್ವ ವೃತ್ತಾಂತ ಎಲ್ಲರಿಗೂ ತಿಳಿದಿದೆ ಎಂದಾಗುತ್ತದೆ. ಹೀಗಾಗಿ ಬಿಟ್ಟರೆ ಮುಂದೆ ಬರುವ ಕರ್ಣಭೇದನ , ಕುಂತಿ-ಕರ್ಣರ ಭೇಟಿ ಮುಂತಾದ ಪ್ರಸಂಗಗಳಿಗೆ ಯಾವ ಅರ್ಥವೂ ಇಲ್ಲದೇ ಹೋಗುತ್ತ್ತದೆ.
ಮೂಲ ...{Loading}...
ಏನು ಹದ ಪಾಂಚಾಲ ಮಾಡಿದ
ಮಾನಭಂಗವ ಕಂಡಿರೇ ಕಾ
ನೀನ ಶಕುನಿ ಜಯದ್ರಥಾಶ್ವತ್ಥಾಮ ಮೊದಲಾದ
ಮಾನನಿಧಿಗಳು ಕಂಡಿರೇ ಮದ
ದಾನೆಗಳು ನೀವ್ಕಂಡಿರೇ ಹದ
ನೇನೆನುತ ಕುರುರಾಯ ಮೂದಲಿಸಿದನು ತನ್ನವರ ॥38॥
೦೩೯ ಹಳೆಯ ಹುಲು ...{Loading}...
ಹಳೆಯ ಹುಲು ಧನುವಿದನು ಹಾರುವ
ಸೆಳೆದ ಗಡ ಕೌಳಿಕದ ಯಂತ್ರವ
ಗೆಲಿದ ಗಡ ಗರುವಾಯಿಗೆಡಿಸಿದ ಗಡ ಮಹೀಶ್ವರರ
ನಳಿನಮುಖಿ ಹಾಯ್ಕಿದಳು ಗಡ ತಿರು
ಕುಳಿಯ ಕೊರಳಲಿ ದಂಡೆಯನು ನೀ
ವೊಲಿದು ಮದುವೆಯ ಮಾಡಿಯೆಂದನು ಬೈದು ಭೂಮಿಪರ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಳೆಯದಾದ, ಕ್ಷುಲ್ಲಕವಾದ ಧನುಸ್ಸು. ಇದನ್ನು ಬ್ರಾಹ್ಮಣ ಸೆಳೆದನಲ್ಲವೇ ? ಕಪಟದ ಯಂತ್ರವನ್ನು ಗೆದ್ದನಲ್ಲವೇ ? ಗೆದ್ದು ಭೂಮೀಶ್ವರರ ಘನತೆಯನ್ನು ಕೆಡಿಸಿದನಲ್ಲವೇ ? ಕಮಲಮುಖಿ ತಿರುಪೆಯವನ ಕೊರಳಲ್ಲಿ ಮಾಲೆಯನ್ನು ಹಾಕಿದಳಲ್ಲವೇ ? ಇನ್ನು ನೀವು ಹೋಗಿ ಪ್ರೀತಿಯಿಂದ ಮದುವೆ ಮಾಡಿಯೆಂದು ಭೂಪತಿಗಳನ್ನು ಬೈದನು.
ಪದಾರ್ಥ (ಕ.ಗ.ಪ)
ಹುಲು-ಕ್ಷುಲ್ಲಕ, ಕೌಳಿಕ-ಕಪಟ, ಗರುವಾಯಿ-ಘನತೆ, ತಿರುಕುಳಿ-ತಿರುಪೆಯವ
ಮೂಲ ...{Loading}...
ಹಳೆಯ ಹುಲು ಧನುವಿದನು ಹಾರುವ
ಸೆಳೆದ ಗಡ ಕೌಳಿಕದ ಯಂತ್ರವ
ಗೆಲಿದ ಗಡ ಗರುವಾಯಿಗೆಡಿಸಿದ ಗಡ ಮಹೀಶ್ವರರ
ನಳಿನಮುಖಿ ಹಾಯ್ಕಿದಳು ಗಡ ತಿರು
ಕುಳಿಯ ಕೊರಳಲಿ ದಂಡೆಯನು ನೀ
ವೊಲಿದು ಮದುವೆಯ ಮಾಡಿಯೆಂದನು ಬೈದು ಭೂಮಿಪರ ॥39॥
೦೪೦ ಭಣ್ಡರೋ ನೀವ್ ...{Loading}...
ಭಂಡರೋ ನೀವ್ ನೆರೆದ ಧರಣೀ
ಮಂಡಲೇಶ್ವರರಕಟ ನಿಮ್ಮಯ
ಹೆಂಡಿರನು ಬಳುವಳಿಯ ಕೊಡಿ ಹಾರುವನ ಹೆಂಡತಿಗೆ
ಗಂಡುಗಲಿಗಳ ನಿಮ್ಮನನಿಬರ
ಕಂಡುಪೇಕ್ಷಿಸಿ ಯಾಚಕನ ಕೈ
ಕೊಂಡಳಿದಕೇನುಂಟು ಮನದಲಿ ವಾಸಿ ನಿಮಗೆಂದ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇಲ್ಲಿ ಸೇರಿರುವ ಭೂಮಂಡಲೇಶ್ವರರು ನೀವೆಲ್ಲ ಲಜ್ಜೆಗೇಡಿಗಳೇ ಸರಿ. ನಿಮ್ಮ ಹೆಂಡಿರನ್ನು ಬ್ರಾಹ್ಮಣನ ಹೆಂಡತಿಗೆ ಉಡುಗೊರೆಯಾಗಿ ಕೊಡಿ. ಅತ್ಯಂತ ಪರಾಕ್ರಮಿಗಳಾದ ನಿಮ್ಮ ಪ್ರತಿಯೊಬ್ಬರನ್ನು ನೋಡಿ ಕಡೆಗಾಣಿಸಿ ಯಾಚಕನನ್ನು ಕೈಕೊಂಡಳು. ಇದಕ್ಕೆ ನಿಮಗೆ ಮನಸ್ಸಿನ ಅಭಿಪ್ರಾಯ ಏನು ?” ಎಂದು ಎಲ್ಲ ಭೂಮಿಪತಿಗಳನ್ನು ಬೈದು ನುಡಿದನು.
ಪದಾರ್ಥ (ಕ.ಗ.ಪ)
ಭಂಡ-ಲಜ್ಜೆಗೇಡಿ, ಬಳುವಳಿ-ಉಡುಗೊರೆ, ಗಂಡುಗಲಿ-ಅತ್ಯಂತ ಪರಾಕ್ರಮಿ, ಉಪೇಕ್ಷಿಸು-ಕಡೆಗಾಣಿಸು, ಯಾಚಕ-ಬೇಡುವವ, ವಾಸಿ-ಭಾಷೆ
ಮೂಲ ...{Loading}...
ಭಂಡರೋ ನೀವ್ ನೆರೆದ ಧರಣೀ
ಮಂಡಲೇಶ್ವರರಕಟ ನಿಮ್ಮಯ
ಹೆಂಡಿರನು ಬಳುವಳಿಯ ಕೊಡಿ ಹಾರುವನ ಹೆಂಡತಿಗೆ
ಗಂಡುಗಲಿಗಳ ನಿಮ್ಮನನಿಬರ
ಕಂಡುಪೇಕ್ಷಿಸಿ ಯಾಚಕನ ಕೈ
ಕೊಂಡಳಿದಕೇನುಂಟು ಮನದಲಿ ವಾಸಿ ನಿಮಗೆಂದ ॥40॥
೦೪೧ ವಾಸಿಗಳನರಸುವಡೆ ದ್ರುಪದನ ...{Loading}...
ವಾಸಿಗಳನರಸುವಡೆ ದ್ರುಪದನ
ಮೀಸಲಡಗನು ಹದ್ದು ಕಾಗೆಗೆ
ಸೂಸಿ ವಿಪ್ರನ ಬಡಿದು ಬಿಡುವುದು ಮತ್ತೆ ತಿರಿದುಣಲಿ
ಆ ಸರೋಜಾನನೆಯ ನಮ್ಮ ವಿ
ಲಾಸಿನಿಯ ವೀಧಿಯಲಿ ಕೂಡುವ
ದೈಸಲೇಯೆನುತೊಡನೊಡನೆ ಗರ್ಜಿಸಿತು ನೃಪನಿಕರ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಭಿಪ್ರಾಯವನ್ನು ಕೇಳುವುದಾದರೆ , ಮೀಸಲಾಗಿರುವ ದ್ರುಪದನ ಮಾಂಸವನ್ನು ಹದ್ದು ಕಾಗೆಗಳಿಗೆ ಚೆಲ್ಲಿ, ಆ ಬ್ರಾಹ್ಮಣನನ್ನು ಬಡಿದುಬಿಟ್ಟುಬಿಡುವುದು. ಮತ್ತೆ ಬೇಡಿ ತಿನ್ನಲಿ. ಆ ಕಮಲಾನನೆಯನ್ನು ತಂದು ನಮ್ಮ ವೇಶ್ಯಾ ಬೀದಿಯಲ್ಲಿ ಸೇರಿಸುವುದಷ್ಟೆ” ಎನುತ್ತ ಒಟ್ಟಾಗಿ ನೃಪ ಸಮೂಹ ಆರ್ಭಟಿಸಿತು.
ಪದಾರ್ಥ (ಕ.ಗ.ಪ)
ವಾಸಿ-ಅಭಿಪ್ರಾಯ, ಮೀಸಲು-ಮುಡಿಪು, ಅಡಗು-ಮಾಂಸ, ಸೂಸಿ-ಚೆಲ್ಲಿ, ತಿರಿ-ಬೇಡು, ವಿಲಾಸಿನಿ-ವೇಶ್ಯೆ, ವೀಧಿ-ಬೀದಿ, ಗರ್ಜಿಸು-ಆರ್ಭಟಿಸು
ಮೂಲ ...{Loading}...
ವಾಸಿಗಳನರಸುವಡೆ ದ್ರುಪದನ
ಮೀಸಲಡಗನು ಹದ್ದು ಕಾಗೆಗೆ
ಸೂಸಿ ವಿಪ್ರನ ಬಡಿದು ಬಿಡುವುದು ಮತ್ತೆ ತಿರಿದುಣಲಿ
ಆ ಸರೋಜಾನನೆಯ ನಮ್ಮ ವಿ
ಲಾಸಿನಿಯ ವೀಧಿಯಲಿ ಕೂಡುವ
ದೈಸಲೇಯೆನುತೊಡನೊಡನೆ ಗರ್ಜಿಸಿತು ನೃಪನಿಕರ ॥41॥
೦೪೨ ಏಳಿ ಹತ್ತಲಿ ...{Loading}...
ಏಳಿ ಹತ್ತಲಿ ಲಗ್ಗೆ ಪದಹತ
ಧೂಳಿಯಲಿ ಹಿರಿಯಗಳಿನಗಲವ
ಹೂಳಿ ಕಳೆಯಲಿ ಹರಿದು ಹತ್ತಲಿ ತೆನೆಯ ಸರಿಸದಲಿ
ಕೋಲು ಗುಂಡಿನ ಹತಿಗೆ ಹುರಿಯೊಡೆ
ದಾಳ ಹೊಯ್ ಹೊಯ್ಯೆನುತ ಸಕಲ ನೃ
ಪಾಳಿ ಗರ್ಜಿಸಿ ಮುತ್ತಿದುದು ಪಾಂಚಲಪಟ್ಟಣವ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎದ್ದೇಳಿ, ಆರಂಭವಾಗಲಿ ಆಕ್ರಮಣ. ಕಾಲ್ದುಳಿತದ ಧೂಳಿನಿಂದ ಅಗಲವಾದ ಕಂದಕ ಮುಚ್ಚಿ ಹೋಗಲಿ. ನಮ್ಮ ಸೈನಿಕರು ನುಗ್ಗಿ ಕೋಟೆ ಗೋಡೆಯ ಉನ್ನತ ಭಾಗವನ್ನು ಹತ್ತಲಿ. ಬಾಣ, ಗುಂಡುಗಳ ಏಟಿಗೆ ಧೈರ್ಯಗೆಡುವವರನ್ನು ಹೊಡೆ ಹೊಡೆ” ಎನ್ನುತ್ತ ಎಲ್ಲ ನೃಪಸಮೂಹ ಆರ್ಭಟಿಸಿ ಪಾಂಚಾಲ ಪಟ್ಟಣವನ್ನು ಮುತ್ತಿತು.
ಪದಾರ್ಥ (ಕ.ಗ.ಪ)
ಲಗ್ಗೆ-ಆಕ್ರಮಣ, ಹತ್ತಲಿ-ಆರಂಭವಾಗಲಿ, ಅಗಳು-ಕಂದಕ, ತೆನೆ-ಕೋಟೆ ಗೋಡೆಯ ಉನ್ನತ ಭಾಗ, ಕೋಲು-ಬಾಣ
ಮೂಲ ...{Loading}...
ಏಳಿ ಹತ್ತಲಿ ಲಗ್ಗೆ ಪದಹತ
ಧೂಳಿಯಲಿ ಹಿರಿಯಗಳಿನಗಲವ
ಹೂಳಿ ಕಳೆಯಲಿ ಹರಿದು ಹತ್ತಲಿ ತೆನೆಯ ಸರಿಸದಲಿ
ಕೋಲು ಗುಂಡಿನ ಹತಿಗೆ ಹುರಿಯೊಡೆ
ದಾಳ ಹೊಯ್ ಹೊಯ್ಯೆನುತ ಸಕಲ ನೃ
ಪಾಳಿ ಗರ್ಜಿಸಿ ಮುತ್ತಿದುದು ಪಾಂಚಲಪಟ್ಟಣವ ॥42॥
೦೪೩ ಕೂಡೆ ಗಜಬಜವಾಯ್ತು ...{Loading}...
ಕೂಡೆ ಗಜಬಜವಾಯ್ತು ಹರಿದುದು
ನಾಡಿಗಾವಳಿ ವಿಪ್ರಸಭೆ ತೆಗೆ
ದೋಡಿತೀ ಪಾಂಡವರು ಬಂದು ಕುಲಾಲಭವನದಲಿ
ನೋಡುತಿರ್ದರು ಲಗ್ಗೆಯಬ್ಬರ
ವೀಡಿರಿದುದು ದಿಗಂತವನು ಕೈ
ಮಾಡಿ ಕೋಟೆಯನಿಳಿದು ಬೆರಸಿದರಾಳುವೇರಿಯಲಿ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಕೂಡಲೇ ಸಭೆಯಲ್ಲಿ ಗದ್ದಲವಾಯ್ತು ನಾಡಿನ ಜನರ ಗುಂಪು ಚೆದರಿತು. ವಿಪ್ರ ಸಭೆ ಹೊರದೆಗೆದು ಓಡಿತು. ಪಾಂಡವರು ಕುಂಬಾರನ ಮನೆಗೆ ಬಂದು ಇದನ್ನೆಲ್ಲ ನೋಡುತ್ತಿದ್ದರು. ಮುತ್ತಿಗೆಯ ಆರ್ಭಟ ದಿಗಂತವನ್ನು ವ್ಯಾಪಿಸಿದುದು. ಮುತ್ತಿಗೆ ಹಾಕಿದ ವೀರರು ಕೈಮಾಡಿ ಕೋಟೆಯನ್ನು ಇಳಿದು ಕೋಟೆಯ ಗೋಡೆಯನ್ನು ಸೇರಿದರು.
ಪದಾರ್ಥ (ಕ.ಗ.ಪ)
ಗಜಬಜ-ಗದ್ದಲ, ಗಾವಳಿ-ಜನರ ಗುಂಪು, ಕುಲಾಲ-ಕುಂಬಾರ, ಈಡಿರಿ-ವ್ಯಾಪಿಸು, ಆಳುವೇರಿ-ಕೋಟೆಯ ಗೋಡೆ, ಬೆರಸು-ಸೇರು
ಮೂಲ ...{Loading}...
ಕೂಡೆ ಗಜಬಜವಾಯ್ತು ಹರಿದುದು
ನಾಡಿಗಾವಳಿ ವಿಪ್ರಸಭೆ ತೆಗೆ
ದೋಡಿತೀ ಪಾಂಡವರು ಬಂದು ಕುಲಾಲಭವನದಲಿ
ನೋಡುತಿರ್ದರು ಲಗ್ಗೆಯಬ್ಬರ
ವೀಡಿರಿದುದು ದಿಗಂತವನು ಕೈ
ಮಾಡಿ ಕೋಟೆಯನಿಳಿದು ಬೆರಸಿದರಾಳುವೇರಿಯಲಿ ॥43॥
೦೪೪ ಹಲ್ಲಣಿಸಿದರು ಹೊಗುವ ...{Loading}...
ಹಲ್ಲಣಿಸಿದರು ಹೊಗುವ ಚೂಣಿಯ
ಚೆಲ್ಲ ಬಡಿದರು ಸರಿಸಕಡರುವ
ಬಿಲ್ಲ ಬಿರುದರ ಮೆಟ್ಟಿ ತಿವಿದರು ಸಾಲ ಸಬಳಿಗರು
ಝಲ್ಲರಿಯ ಝೂಡಿಗಳ ವಾದ್ಯದ
ಘಲ್ಲಣೆಯ ದಳ ನೆರೆದುದಲ್ಲಿಯ
ದಲ್ಲಿ ಮುತ್ತಿಗೆ ತೆಗೆಸಿದರು ಪಾಂಚಾಲನಾಯಕರು ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದನ್ನರಿತ ಪಾಂಚಾಲ ನಾಯಕರು ಸಿದ್ಧವಾದರು. ಪ್ರವೇಶಿಸುವ ಮುಂಭಾಗದ ಸೈನ್ಯವನ್ನು ಚೆದರಿ ಹೋಗುವಂತೆ ಹೊಡೆದರು. ಹತ್ತಿರಕ್ಕೆ ಬಂದು ಆಕ್ರಮಿಸುವ ಬಿಲ್ಲಿನ ಬಿರುದರನ್ನು ಸಾಲುಗಟ್ಟಿ ಈಟಿಯನ್ನು ಹಿಡಿದುಕೊಂಡು ನಿಂತವರು ಮೆಟ್ಟಿ ತಿವಿದರು. ರಣವಾದ್ಯಗಳ ಭಯಂಕರ ಶಬ್ದದ ಸೈನ್ಯ ಸೇರಿದುದು. ಪಾಂಚಾಲ ನಾಯಕರು ಅಲ್ಲಲ್ಲಿಯೇ ಮುತ್ತಿಗೆ ತೆಗೆಸಿದರು.
ಪದಾರ್ಥ (ಕ.ಗ.ಪ)
ಹಲ್ಲಣಿಸು-ಸಿದ್ಧವಾಗು, ಹೊಗು-ಪ್ರವೇಶಿಸು, ಚೂಣಿ-ಮುಂಭಾಗದ ಸೈನ್ಯ, ಚೆಲ್ಲಬಡಿ-ಚೆದರಿಹೋಗುವಂತೆ ಹೊಡೆ, ಸರಿಸ-ಸಮೀಪ, ಅಡರು-ಆಕ್ರಮಿಸು, ಘಲ್ಲಣೆ-ಭಯಂಕರಶಬ್ದ
ಮೂಲ ...{Loading}...
ಹಲ್ಲಣಿಸಿದರು ಹೊಗುವ ಚೂಣಿಯ
ಚೆಲ್ಲ ಬಡಿದರು ಸರಿಸಕಡರುವ
ಬಿಲ್ಲ ಬಿರುದರ ಮೆಟ್ಟಿ ತಿವಿದರು ಸಾಲ ಸಬಳಿಗರು
ಝಲ್ಲರಿಯ ಝೂಡಿಗಳ ವಾದ್ಯದ
ಘಲ್ಲಣೆಯ ದಳ ನೆರೆದುದಲ್ಲಿಯ
ದಲ್ಲಿ ಮುತ್ತಿಗೆ ತೆಗೆಸಿದರು ಪಾಂಚಾಲನಾಯಕರು ॥44॥
೦೪೫ ಚೂಣಿ ಮುರಿದೈತರಲು ...{Loading}...
ಚೂಣಿ ಮುರಿದೈತರಲು ಬಹಳ
ಕ್ಷೋಣಿಯಲಿ ಕುರುಪತಿಯ ಥಟ್ಟಿನ
ಹೂಣಿಗರು ಹುರಿಗೊಂಡು ಕವಿದರು ಕರ್ಣ ಮೊದಲಾಗಿ
ಸಾಣೆಯಲಗಿನ ಸರಿಗೆ ಪರಬಲ
ವಾಣೆಯಿಟ್ಟವೊಲಡಿ ಮಿಡುಕದ
ಕ್ಷೀಣ ಬಲವೋಸರಿಸಿ ತೆಗೆದುದು ದ್ರುಪದಪರಿವಾರ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಂಭಾಗದ ಸೈನ್ಯ ಹಿಂತಿರುಗಿ ಬರಲು, ಕುರುಪತಿಯ ಸೈನ್ಯದಲ್ಲಿ ಕರ್ಣನೇ ಮೊದಲಾದ ಸಾಹಸಿಗರು ಉತ್ಸಾಹಗೊಂಡು ವಿಶಾಲ ಭೂಮಿಯಲ್ಲಿ ಮುತ್ತಿದರು. ಅವರ ಸಾಣೆ ಹಿಡಿದು ಹರಿತಗೊಳಿಸಿದ ಆಯುಧದ ಅಂಚಿನ ಸಮಕ್ಕೆ ಶತ್ರುಸೈನ್ಯ ಪ್ರತಿಜ್ಞೆ ಮಾಡಿದಂತೆ ಅಡಿಯಿಡಲಾರದೆ ನಷ್ಟವಾಗಿ ದ್ರುಪದ ಪರಿವಾರದ ಸೈನ್ಯವು ಹಿಂಜರಿದು ಹಿಂದಕ್ಕೆ ಸರಿಯಿತು.
ಪದಾರ್ಥ (ಕ.ಗ.ಪ)
ಕ್ಷೋಣಿ-ಭೂಮಿ, ಹೂಣಿಗರು-ಸಾಹಸಿಗರು, ಹುರಿ-ಉತ್ಸಾಹ, ಸಾಣೆ-ಸಾಣೆ ಹಿಡಿದು ಹರಿತಗೊಳಿಸಿದ ಆಯುಧ, ಪರಬಲ-ಶತ್ರುಸೈನ್ಯ, ಕ್ಷೀಣ-ನಷ್ಟ, ಓಸರಿಸಿ-ಹಿಂಜರಿದು
ಮೂಲ ...{Loading}...
ಚೂಣಿ ಮುರಿದೈತರಲು ಬಹಳ
ಕ್ಷೋಣಿಯಲಿ ಕುರುಪತಿಯ ಥಟ್ಟಿನ
ಹೂಣಿಗರು ಹುರಿಗೊಂಡು ಕವಿದರು ಕರ್ಣ ಮೊದಲಾಗಿ
ಸಾಣೆಯಲಗಿನ ಸರಿಗೆ ಪರಬಲ
ವಾಣೆಯಿಟ್ಟವೊಲಡಿ ಮಿಡುಕದ
ಕ್ಷೀಣ ಬಲವೋಸರಿಸಿ ತೆಗೆದುದು ದ್ರುಪದಪರಿವಾರ ॥45॥
೦೪೬ ಮೊದಲ ಲಗ್ಗೆಯ ...{Loading}...
ಮೊದಲ ಲಗ್ಗೆಯ ಧೂಳಿಯೇ ದ್ರೌ
ಪದಿಯ ಬೈತಲೆಗಮಲ ಸಿಂಧೂ
ರದ ಸುವಿಸ್ತರವಾಗದಿರ್ದಡೆ ರಾಯನಾಣೆನುತ
ಮದಮುಖರು ಮುಂಕೊಂಡು ದುರ್ಗವ
ಬೆದರಿಸಿತು ಬೇರೇನು ದ್ರುಪದನ
ಸದನ ಸೀಮೆಯ ಬೆರಸಿ ಹೊಯ್ದರು ರಾಜಬೀದಿಯಲಿ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮೊದಲ ಮುತ್ತಿಗೆಯ ಧೂಳಿಯೇ ದ್ರೌಪದಿಯ ಬೈತಲೆಗೆ ಪವಿತ್ರವಾದ ಸಿಂಧೂರದಂತೆ ಚೆನ್ನಾಗಿ ವ್ಯಾಪಿಸದಿದ್ದರೆ ಕೌರವರಾಯನ ಮೇಲೆ ಆಣೆ” ಎನುತ್ತ ಗರ್ವಿಷ್ಠರು ಮುಂದೆ ಸಾಗಿ ಕೋಟೆಯನ್ನು ಹೆದರಿಸಿತು. ದ್ರುಪದನ ಅರಮನೆಯ ಪ್ರವೇಶವನ್ನು ಸೇರಿ ರಾಜಬೀದಿಯಲ್ಲಿ ಹೊಯ್ದಾಡತೊಡಗಿದರು.
ಪದಾರ್ಥ (ಕ.ಗ.ಪ)
ಮದಮುಖರು-ಗರ್ವಿಷ್ಠರು, ಮುಂಕೊಂಡು-ಮುಂದೆ ಸಾಗಿ, ಸದನ-ಅರಮನೆ, ಸೀಮೆ-ಪ್ರದೇಶ, ಬೆರಸು-ಸೇರು
ಮೂಲ ...{Loading}...
ಮೊದಲ ಲಗ್ಗೆಯ ಧೂಳಿಯೇ ದ್ರೌ
ಪದಿಯ ಬೈತಲೆಗಮಲ ಸಿಂಧೂ
ರದ ಸುವಿಸ್ತರವಾಗದಿರ್ದಡೆ ರಾಯನಾಣೆನುತ
ಮದಮುಖರು ಮುಂಕೊಂಡು ದುರ್ಗವ
ಬೆದರಿಸಿತು ಬೇರೇನು ದ್ರುಪದನ
ಸದನ ಸೀಮೆಯ ಬೆರಸಿ ಹೊಯ್ದರು ರಾಜಬೀದಿಯಲಿ ॥46॥
೦೪೭ ಏಳು ಮನ್ನೆಯ ...{Loading}...
ಏಳು ಮನ್ನೆಯ ಗಂಡನಾಗು ನೃ
ಪಾಲ ಮದುವೆಯ ಮನೆಗೆ ರಾಯರ
ಧಾಳಿ ಬಿದ್ದಿನವಾಯ್ತು ನಡೆ ಸಂತೈಸು ಬೀಯಗರ
ಏಳೆನಲು ಕಳಕಳವನರ್ಜುನ
ಕೇಳಿದನು ಹೊದೆಯಂಬುಗಳ ತರ
ಹೇಳೆನುತ ಕವಿದೆಚ್ಚು ಮುರಿದನು ಭಟರ ಮುಂಗುಡಿಯ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಏಳು, ಮುಖಂಡರನ್ನು ಮೀರಿಸುವ ಶೂರನಾಗು, ಮಹಾರಾಜಾ ಮದುವೆಯ ಮನೆಗೆ ರಾಜರ ಮುತ್ತಿಗೆ ಆತಿಥ್ಯಕ್ಕೆ ಬಂದಿದೆ. ನಡೆ ಬೀಗರನ್ನು ಸಮಾಧಾನಪಡಿಸು ಏಳು” ಎಂದು ಹೇಳಲು ಅರ್ಜುನನು ಕೋಲಾಹಲವನ್ನು ಕೇಳಿದನು. “ಬತ್ತಳಿಕೆಯಲ್ಲಿರುವ ಬಾಣಗಳನ್ನು ತರಹೇಳು” ಎಂದು ತರಿಸಿಕೊಂಡು ಮುಂಚೂಣಿಯಲ್ಲಿದ್ದ ಸೈನಿಕರನ್ನು ಮುತ್ತಿ ಬಾಣಪ್ರಯೋಗ ಮಾಡಿ ಹಿಂತಿರುಗಿಸಿದನು.
ಪದಾರ್ಥ (ಕ.ಗ.ಪ)
ಮನ್ನೆಯ ಗಂಡ-ಮುಖಂಡರನ್ನು ಮೀರಿಸುವ ಶೂರ, ಬಿದ್ದಿನ-ಆತಿಥ್ಯ, ಸಂತೈಸು-ಸಮಾಧಾನಪಡಿಸು, ಕಳಕಳ-ಕೋಲಾಹಲ, ಹೊದೆ-ಬತ್ತಳಿಕೆ, ಎಚ್ಚು-ಬಾಣಪ್ರಯೋಗ ಮಾಡು, ಮುಂಗುಡಿ-ಮುಂಚೂಣಿ
ಮೂಲ ...{Loading}...
ಏಳು ಮನ್ನೆಯ ಗಂಡನಾಗು ನೃ
ಪಾಲ ಮದುವೆಯ ಮನೆಗೆ ರಾಯರ
ಧಾಳಿ ಬಿದ್ದಿನವಾಯ್ತು ನಡೆ ಸಂತೈಸು ಬೀಯಗರ
ಏಳೆನಲು ಕಳಕಳವನರ್ಜುನ
ಕೇಳಿದನು ಹೊದೆಯಂಬುಗಳ ತರ
ಹೇಳೆನುತ ಕವಿದೆಚ್ಚು ಮುರಿದನು ಭಟರ ಮುಂಗುಡಿಯ ॥47॥
೦೪೮ ಅದು ಬಳಿಕ ...{Loading}...
ಅದು ಬಳಿಕ ಕಲ್ಪಾಂತ ಮೇಘದ
ಮೊದಲ ಮಳೆಯೆನೆ ಕವಿದುದಂಬಿನ
ಹೊದರು ಹುದುಗಿತು ರಾಯದಳರೌಕುಳದ ರಕ್ತದಲಿ
ಕೆದರಿದರು ಕರ್ಣಾದಿಗಳು ನೆರೆ
ಬೆದರಿದರು ಮತ್ತೊಂದು ದೆಸೆಯಲಿ
ಸದೆದು ಹೊಕ್ಕನು ಭೀಮ ಭಾರಿಯ ಮರನ ಕೊಂಬಿನಲಿ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ನಂತರ, ಕಲ್ಪಾಂತ್ಯದ ಮೋಡದಿಂದ ಸುರಿದ ಮೊದಲ ಮಳೆಯೆನ್ನುವಂತೆ ಅರ್ಜುನನು ಬಿಟ್ಟ ಬಾಣದ ರಾಶಿ ಕೌರವರಾಯನ ಸೈನ್ಯವನ್ನು ಮುತ್ತಿ ಅಧಿಕ ರಕ್ತದಲ್ಲಿ ಮುಚ್ಚಿತು. ಕರ್ಣಾದಿಗಳು ಚೆದರಿದರು ಹಾಗೂ ಹೆದರಿದರು. ಮತ್ತೊಂದು ಕಡೆಯಲ್ಲಿ ಭೀಮನು ದೊಡ್ಡ ಮರದ ಕೊಂಬೆಯಿಂದ ಬಡಿಯುತ್ತ ಪ್ರವೇಶಿಸಿದನು.
ಪದಾರ್ಥ (ಕ.ಗ.ಪ)
ಹೊದರು-ರಾಶಿ, ಹುದುಗು-ಮುಚ್ಚು, ರೌಕುಳ-ಹೆಚ್ಚಳ, ಕೆದರು-ಚೆದರು, ಸದೆ-ಬಡಿ
ಮೂಲ ...{Loading}...
ಅದು ಬಳಿಕ ಕಲ್ಪಾಂತ ಮೇಘದ
ಮೊದಲ ಮಳೆಯೆನೆ ಕವಿದುದಂಬಿನ
ಹೊದರು ಹುದುಗಿತು ರಾಯದಳರೌಕುಳದ ರಕ್ತದಲಿ
ಕೆದರಿದರು ಕರ್ಣಾದಿಗಳು ನೆರೆ
ಬೆದರಿದರು ಮತ್ತೊಂದು ದೆಸೆಯಲಿ
ಸದೆದು ಹೊಕ್ಕನು ಭೀಮ ಭಾರಿಯ ಮರನ ಕೊಂಬಿನಲಿ ॥48॥
೦೪೯ ತರುಬಿದನು ಮಾದ್ರೇಶ ...{Loading}...
ತರುಬಿದನು ಮಾದ್ರೇಶ ಪವನಜ
ನುರುಬೆಯನು ಫಲುಗುಣನ ಬಾಣವ
ಮುರಿಯೆನುತ ರಾಧೇಯನಿರಿದನು ಸಿಂಹ ನಾದದಲಿ
ಕರುಬರೋ ಘನ ಯಂತ್ರ ಭೇದಿಯ
ನರಿದು ಕಾಡುವ ಕುರುಡರೋ ನೀ
ವಿರಿತಕಂಘೈಸಿದಿರೆನುತ ಕೈಕೊಂಡನಾ ಭೀಮ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಮಾದ್ರೇಶನು ಮುಂದೆ ಬಂದು ಭೀಮನು ರಭಸದಿಂದ ಬರುವುದನ್ನು ಅಡ್ಡಗಟ್ಟಿದನು. ‘ಫಲುಗುಣನ ಬಾಣವನ್ನು ಕತ್ತರಿಸು’ ಎನ್ನುತ್ತ ಸಿಂಹನಾದದಲ್ಲಿ ಕರ್ಣನು ಅರ್ಜುನನನ್ನು ತಿವಿದನು. “ನೀವು ಮತ್ಸರದವರೋ ! ಆ ದೊಡ್ಡ ಯಂತ್ರವನ್ನು ಭೇದಿಸಿದಾತನನ್ನು ತಿಳಿದೂ ಪೀಡಿಸುವ ಕುರುಡರೋ ! ನೀವು ಹೊಡೆತಕ್ಕೆ ಆಸೆಪಟ್ಟಿರಿ’ ಎನುತ್ತ ಭೀಮನು ಹೋರಾಟಕ್ಕಿಳಿದನು.
ಪದಾರ್ಥ (ಕ.ಗ.ಪ)
ಉರುಬು-ರಭಸ, ತರುಬು-ಅಡ್ಡಗಟ್ಟು, ಇರಿ-ತಿವಿ, ಮುರಿ-ಕತ್ತರಿಸು, ಕರುಬು-ಮತ್ಸರಪಡು, ಅಂಘೈಸು-ಆಸೆ ಪಡು
ಮೂಲ ...{Loading}...
ತರುಬಿದನು ಮಾದ್ರೇಶ ಪವನಜ
ನುರುಬೆಯನು ಫಲುಗುಣನ ಬಾಣವ
ಮುರಿಯೆನುತ ರಾಧೇಯನಿರಿದನು ಸಿಂಹ ನಾದದಲಿ
ಕರುಬರೋ ಘನ ಯಂತ್ರ ಭೇದಿಯ
ನರಿದು ಕಾಡುವ ಕುರುಡರೋ ನೀ
ವಿರಿತಕಂಘೈಸಿದಿರೆನುತ ಕೈಕೊಂಡನಾ ಭೀಮ ॥49॥
೦೫೦ ತುರಗ ರಥ ...{Loading}...
ತುರಗ ರಥ ಸಾರಥಿಗಳನು ಹೊ
ಯ್ದೊರಸಿದನು ಪವಮಾನಸುತನು
ಬ್ಬರದ ಭಯದಲಿ ಶಲ್ಯ ಹಿಮ್ಮೆಟ್ಟಿದನು ಹಿನ್ನೆಲೆಗೆ
ನರನ ಶರಹತಿಗಳುಕಿ ಮೋರೆಯ
ಮುರುಹಿದನು ಕಲಿ ಕರ್ಣನವರಿದು
ಸರಿಯೆ ವಿಪ್ರರು ನಮ್ಮ ವಿಗ್ರಹಕೆಂದು ಖಾತಿಯಲಿ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಲ್ಯನ ಕುದುರೆ, ರಥ, ಸಾರಥಿಗಳನ್ನು ಭೀಮನು ಹೊಡೆದೊರಸಿ ಹಾಕಿದನು. ಅತಿಶಯದ ಭಯದಲ್ಲಿ ಶಲ್ಯನು ಹಿಂಭಾಗಕ್ಕೆ ಸರಿದನು. ಪಾರ್ಥನ ಬಾಣದ ಹೊಡೆತಕ್ಕೆ ಹೆದರಿ, ಅವರುಗಳು, ವಿಪ್ರರು ನಮ್ಮೊಡನೆ ಯುದ್ಧಕ್ಕೆ ಸಮವೇ ? ಎನುತ್ತ ಕಲಿಕರ್ಣನು ಕೋಪದಲ್ಲಿ ಯುದ್ಧದಿಂದ ಮುಖ ತಿರುಗಿಸಿದನು.
ಪದಾರ್ಥ (ಕ.ಗ.ಪ)
ಪವಮಾನಸುತ-ವಾಯುಪುತ್ರ ಭೀಮ, ನರ-ಅರ್ಜುನ, ಹಿಮ್ಮೆಟ್ಟು-ಹಿಂದಕ್ಕೆ ಸರಿ, ಹಿನ್ನೆಲೆ-ಹಿಂಭಾಗ, ಮುರುಹು-ತಿರುಗಿಸು
ಮೂಲ ...{Loading}...
ತುರಗ ರಥ ಸಾರಥಿಗಳನು ಹೊ
ಯ್ದೊರಸಿದನು ಪವಮಾನಸುತನು
ಬ್ಬರದ ಭಯದಲಿ ಶಲ್ಯ ಹಿಮ್ಮೆಟ್ಟಿದನು ಹಿನ್ನೆಲೆಗೆ
ನರನ ಶರಹತಿಗಳುಕಿ ಮೋರೆಯ
ಮುರುಹಿದನು ಕಲಿ ಕರ್ಣನವರಿದು
ಸರಿಯೆ ವಿಪ್ರರು ನಮ್ಮ ವಿಗ್ರಹಕೆಂದು ಖಾತಿಯಲಿ ॥50॥
೦೫೧ ಅರಸ ನಡೆ ...{Loading}...
ಅರಸ ನಡೆ ದ್ರುಪದನ ಕಪಾಲದ
ಲಿರಲಿ ಮಾನಚ್ಯುತಿ ಮಹೀಸುರ
ವರರೊಡನೆ ಖತಿಯೇಕೆ ತೆಗೆವುದು ಹಸ್ತಿನಾಪುರಕೆ
ನೆರಹುವುದು ನೃಪವರ್ಗವನು ಬಂ
ದೊರಸುವುದು ದ್ರುಪದನ ಲಲಾಟದ
ಬರಹವನು ಕೇಳ್ ಎಂದು ನುಡಿದನು ಕರ್ಣ ಕುರುಪತಿಗೆ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅರಸಾ, ನಡೆ, ಹೋಗೋಣ. ದ್ರುಪದನ ತಲೆಯಲ್ಲಿ ಹೊತ್ತಿರಲಿ ಮಾನಚ್ಯುತಿಯ ಹೊಣೆ. ಬ್ರಾಹ್ಮಣರ ಮೇಲೆ ಏಕೆ ಕೋಪಮಾಡಿಕೊಳ್ಳುವುದು ? ಹಸ್ತಿನಾಪುರಕ್ಕೆ ಹೋಗೋಣ, ನೃಪವರ್ಗವನ್ನು ಸೇರಿಸೋಣ. ಆಮೇಲೆ ಬಂದು ದ್ರುಪದನ ಹಣೆಬರಹವನ್ನು ಒರಸಿ ಹಾಕೋಣ ಕೇಳು” ಎಂದು ಕರ್ಣ ದುರ್ಯೋಧನನಿಗೆ ಸಲಹೆ ಮಾಡಿದನು.
ಪದಾರ್ಥ (ಕ.ಗ.ಪ)
ಕಪಾಲ-ತಲೆಬುರುಡೆ, ಖತಿ-ಕೋಪ, ನೆರಹು-ಸೇರಿಸು, ಲಲಾಟ-ಹಣೆ
ಮೂಲ ...{Loading}...
ಅರಸ ನಡೆ ದ್ರುಪದನ ಕಪಾಲದ
ಲಿರಲಿ ಮಾನಚ್ಯುತಿ ಮಹೀಸುರ
ವರರೊಡನೆ ಖತಿಯೇಕೆ ತೆಗೆವುದು ಹಸ್ತಿನಾಪುರಕೆ
ನೆರಹುವುದು ನೃಪವರ್ಗವನು ಬಂ
ದೊರಸುವುದು ದ್ರುಪದನ ಲಲಾಟದ
ಬರಹವನು ಕೇಳೆಂದು ನುಡಿದನು ಕರ್ಣ ಕುರುಪತಿಗೆ ॥51॥
೦೫೨ ಅಹುದು ಕರ್ಣನ ...{Loading}...
ಅಹುದು ಕರ್ಣನ ಮಾತು ತೆಗೆಯಲಿ
ಬಹಳ ಬಲವೀ ಹೊತ್ತಿನಲಿ ರಣ
ವಿಹಿತವಲ್ಲೌಕಿದಡೆ ತಪ್ಪದು ವಿಪ್ರವಧೆ ತಮಗೆ
ಮಹಿಮೆ ಮೀಸಲು ಹೋಗದೀಸರ
ಲಹಿತ ದರ್ಪವ ಮುಂದೆ ನೋಡಲು
ಬಹುದೆನುತ ತಿರುಗಿದನು ಕುರುಪತಿ ಹಸ್ತಿನಾಪುರಿಗೆ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹೌದು, ಕರ್ಣನ ಮಾತು ಸರಿ, ನಮ್ಮ ಬಹಳ ಬಲ ಹೊರಡಲಿ. ಈ ಸಮಯದಲ್ಲಿ ಯುದ್ಧವು ಯೋಗ್ಯವಲ್ಲ. ನುಗ್ಗಿ ಹೊಡೆದರೆ ನಮಗೆ ವಿಪ್ರವಧೆ ತಪ್ಪುವುದಿಲ್ಲ. ಇಷ್ಟರಲ್ಲಿ ನಮ್ಮ ಮಹಿಮೆಯ ಮುಡಿಪು ಹೋಗುವುದಿಲ್ಲ. ಶತ್ರುವಿನ ದರ್ಪವನ್ನು ಮುಂದೆ ನೋಡಿಕೊಳ್ಳಬಹುದು” ಎಂದು ನಿಶ್ಚಯಿಸಿ ಕುರುಪತಿ ಹಸ್ತಿನಾಪುರಿಗೆ ತಿರುಗಿ ಹೊರಟನು.
ಪದಾರ್ಥ (ಕ.ಗ.ಪ)
ವಿಹಿತ-ಯೋಗ್ಯ, ಮೀಸಲು-ಮುಡಿಪು, ಅಹಿತ-ಶತ್ರು
ಮೂಲ ...{Loading}...
ಅಹುದು ಕರ್ಣನ ಮಾತು ತೆಗೆಯಲಿ
ಬಹಳ ಬಲವೀ ಹೊತ್ತಿನಲಿ ರಣ
ವಿಹಿತವಲ್ಲೌಕಿದಡೆ ತಪ್ಪದು ವಿಪ್ರವಧೆ ತಮಗೆ
ಮಹಿಮೆ ಮೀಸಲು ಹೋಗದೀಸರ
ಲಹಿತ ದರ್ಪವ ಮುಂದೆ ನೋಡಲು
ಬಹುದೆನುತ ತಿರುಗಿದನು ಕುರುಪತಿ ಹಸ್ತಿನಾಪುರಿಗೆ ॥52॥