೦೦೦ ಸೂ ಕಮಲಮುಖಿ ...{Loading}...
ಸೂ. ಕಮಲಮುಖಿ ನಡೆತಂದಳಂದಿನ
ಕಮಲೆಯೆನೆ ಪಾಂಚಾಲಸುತೆ ನಿಜ
ರಮಣರನು ನೋಡಿದಳು ಪೃಥ್ವೀಪಾಲ ಪಂಕ್ತಿಯಲಿ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಪಾಂಚಾಲನ ಮಗಳು ಕಮಲಮುಖಿಯಾದ ದ್ರೌಪದಿ, ಆ ದಿನದ ಲಕ್ಷ್ಮೀ ಎನ್ನುವಂತೆ ಸಭೆಗೆ ಬಂದಳು. ಸೇರಿದ್ದ ಭೂಪಾಲರ ಸಾಲಿನಲ್ಲಿ ತನ್ನ ಭಾವೀ ಪತಿಗಳನ್ನು ನೋಡಿದಳು.
ಮೂಲ ...{Loading}...
ಸೂ. ಕಮಲಮುಖಿ ನಡೆತಂದಳಂದಿನ
ಕಮಲೆಯೆನೆ ಪಾಂಚಾಲಸುತೆ ನಿಜ
ರಮಣರನು ನೋಡಿದಳು ಪೃಥ್ವೀಪಾಲ ಪಂಕ್ತಿಯಲಿ
೦೦೧ ಅರಸ ಕೇಳ್ ...{Loading}...
ಅರಸ ಕೇಳ್ ನಾಂದೀಮುಖದ ವಿ
ಸ್ತರಣವಾದುದು ಪೂರ್ವವೇದಿಯ
ವರ ನಿಗಮ ನಿರ್ಘೋಷ ಘಾತಿಸಿತಖಳ ಕಲ್ಮಷವ
ಮರುದಿವಸ ಮಹಿಳಾಶಿರೋಮಣಿ
ಪರಮಸೌಭಾಗ್ಯದ ಸಮುದ್ರದ
ಸಿರಿಯ ಪರಿಣಯವೆಂದು ಸಾರಿತು ಪಾಳಯಂಗಳಲಿ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾಂದೀಶ್ರಾದ್ಧ ವಿಸ್ತಾರವಾಗಿ ನೆರವೇರಿತು. ಯಜ್ಞಕುಂಡದ ಮುಂದಿರುವ ಜಗಲಿಯಲ್ಲಿ ನಡೆದ ವೇದಘೋಷ ಎಲ್ಲ ಪಾಪಗಳನ್ನು ನಾಶಮಾಡಿತು. ಮಾರನೆಯ ದಿನ “ಅತ್ಯುತ್ತಮ ಮಂಗಳದ ಸಮುದ್ರದಿಂದುದ್ಭವಿಸಿದ ಲಕ್ಷ್ಮಿಯ ಹಾಗಿರುವ ದ್ರೌಪದಿಯ ಪರಿಣಯ” ಎಂದು ಎಲ್ಲ ಪಾಳೆಯಗಳಲ್ಲಿಯೂ ಡಂಗುರ ಹೊಡೆದು ಸಾರಿದರು.
ಪದಾರ್ಥ (ಕ.ಗ.ಪ)
ನಾಂದೀಮುಖ-ನಾಂದೀಶ್ರಾದ್ಧ (ಶುಭಕಾರ್ಯಕ್ಕೆ ಮೊದಲು ಮಾಡುವ ನಾಂದೀಕರ್ಮದಲ್ಲಿ ಆವಾಹಿಸಲ್ಪಡುವ ಪಿತೃವರ್ಗ), ಪೂರ್ವವೇದಿ-ಯಜ್ಞ ಕುಂಡದ ಮುಂಭಾಗದಲ್ಲಿರುವ ಜಗಲಿ, ನಿರ್ಘೋಷ-ದೊಡ್ಡಶಬ್ದ, ಘಾತಿಸಿತು-ನಾಶಮಾಡಿತು, ಕಲ್ಮಷ-ಪಾಪ, ಸೌಭಾಗ್ಯ-ಮಂಗಳ, ಸಿರಿ-ಲಕ್ಷ್ಮಿ
ಮೂಲ ...{Loading}...
ಅರಸ ಕೇಳ್ ನಾಂದೀಮುಖದ ವಿ
ಸ್ತರಣವಾದುದು ಪೂರ್ವವೇದಿಯ
ವರ ನಿಗಮ ನಿರ್ಘೋಷ ಘಾತಿಸಿತಖಳ ಕಲ್ಮಷವ
ಮರುದಿವಸ ಮಹಿಳಾಶಿರೋಮಣಿ
ಪರಮಸೌಭಾಗ್ಯದ ಸಮುದ್ರದ
ಸಿರಿಯ ಪರಿಣಯವೆಂದು ಸಾರಿತು ಪಾಳಯಂಗಳಲಿ ॥1॥
೦೦೨ ತಿಗುರ ಗೆಲುವುದು ...{Loading}...
ತಿಗುರ ಗೆಲುವುದು ವಶ್ಯ ತಿಲಕಾ
ದಿಗಳನಿಡುವುದು ಮೋಹನದ ಮ
ದ್ದುಗಳ ಮಾಯೆಯ ಬೀಸುವುದು ಸೂಸುವುದು ಸೊಗಸುಗಳ
ಹಗಲು ಕಾಹಿನ ರೂಹುಗಳ ಗಾ
ಹುಗಳ ಮೆರೆವುದು ಮನ್ಮಥನ ಕಾ
ಳಗದ ಖಾಡಾಖಾಡಿಯೆಂದರು ಹೊಯ್ದು ಡಂಗುರವ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಸುಗಂಧದ್ರವ್ಯವನ್ನು ಲೇಪಿಸಿಕೊಳ್ಳುವುದು, ಹಣೆಯಲ್ಲಿ ಆಕರ್ಷಿಸುವ ಬೊಟ್ಟುಗಳನ್ನಿಟ್ಟುಕೊಳ್ಳುವುದು, ಮೋಹಕವಾದ ಔಷಧಿಗಳಿಂದ ಭ್ರಮೆಯನ್ನು ಆವರಿಸುವಂತೆ ಮಾಡುವುದು, ಮುಂತಾದವುಗಳಿಂದ ಚೆಲುವನ್ನು ಪ್ರದರ್ಶಿಸಿ, ಅತಿಶಯವಾದ ರೂಪಗಳಲ್ಲಿ ಮೆರೆಯಿರಿ, ನಾಳೆಯದಿನದ ನಿರೀಕ್ಷಯಲ್ಲಿರಿ, ನಾಳೆ ಮನ್ಮಥನೊಡನೆ ಸಮರ (ದ್ರೌಪದಿಯನ್ನು ಪಡೆದುಕೊಳ್ಳಲು ಅವಕಾಶ) ಎಂದು ಡಂಗುರ ಹೊಡೆದು ಸಾರಿದರು.
ಪದಾರ್ಥ (ಕ.ಗ.ಪ)
ತಿಗುರು-ಸುಗಂಧ ದ್ರವ್ಯ, ಗೆಲು-ಲೇಪಿಸು, ವಶ್ಯ-ಆಕರ್ಷಿಸುವ, ತಿಲಕ-ಹಣೆಯಲ್ಲಿಡುವ ಬೊಟ್ಟು, ಮೋಹನ-ಮೋಹಕ, ಮದ್ದು-ಔಷಧಿ, ಮಾಯೆ-ಭ್ರಮೆ, ಬೀಸು-ಆವರಿಸು, ಸೊಗಸು-ಚೆಲುವು, ಸೂಸು-ಕಾಣಿಸಿಕೊಳ್ಳು, ಕಾಹು-ರಕ್ಷೆ, ರೂಹು-ರೂಪು, ಗಾಹು-ಕೃತಕ, ಖಾಡಾಖಾಡಿ-ಪೈಪೋಟಿ
ಮೂಲ ...{Loading}...
ತಿಗುರ ಗೆಲುವುದು ವಶ್ಯ ತಿಲಕಾ
ದಿಗಳನಿಡುವುದು ಮೋಹನದ ಮ
ದ್ದುಗಳ ಮಾಯೆಯ ಬೀಸುವುದು ಸೂಸುವುದು ಸೊಗಸುಗಳ
ಹಗಲು ಕಾಹಿನ ರೂಹುಗಳ ಗಾ
ಹುಗಳ ಮೆರೆವುದು ಮನ್ಮಥನ ಕಾ
ಳಗದ ಖಾಡಾಖಾಡಿಯೆಂದರು ಹೊಯ್ದು ಡಂಗುರವ ॥2॥
೦೦೩ ಹರಸಿಕೊಣ್ಡರು ನಿಖಿಳ ...{Loading}...
ಹರಸಿಕೊಂಡರು ನಿಖಿಳ ಪೃಥ್ವೀ
ಶ್ವರರು ಮಾಯಾಪುರದ ಕಾಂಚೀ
ಪುರದ ಜಾಳಾಂಧರದ ವಿವಿಧಸ್ಥಾನ ದೇವರಿಗೆ
ಕರಿಮುಖನ ಕಜ್ಜಾಯದಲಿ ಸ
ತ್ಕರಿಸಿ ಸಂಶಯ ಭೇದವರ್ಗದ
ಹರುಷದಲಿ ಹೊರವಂಟರೊಬ್ಬರನೊಬ್ಬರುರವಣಿಸಿ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲ್ಲ ಭೂಮೀಶ್ವರರು ಮಾಯಾಪುರ, ಕಾಂಚೀಪುರ, ಜಾಲಂಧರ ಮೊದಲಾದ ಸ್ಥಳಗಳ ದೇವರಲ್ಲಿ ಹರಸಿಕೊಂಡರು. ಗಜಾನನಿಗೆ ಕಜ್ಜಾಯವನ್ನು ಸಮರ್ಪಿಸಿ (ಬೇರೆಯವರಿಗೆ ದ್ರೌಪದಿ ಒಲಿಯುವುದು ಸಾಧ್ಯವೇ? ಎಂದು )ತಮ್ಮ ತಮ್ಮಲ್ಲೇ ಸಂದೇಹಪಡುತ್ತಾ ಸಂತೋಷದಲ್ಲಿ ಪ್ರತಿಯೊಬ್ಬರೂ ತಮ್ಮ ಬಿಡಾರಗಳಿಂದ ಸಂಭ್ರಮಿಸಿ ಹೊರಹೊರಟರು.
ಟಿಪ್ಪನೀ (ಕ.ಗ.ಪ)
ಕಾಂಚೀಪುರ-ಚತುರ್ಮುಖ ವಿಷ್ಣು ಪ್ರೀತಿಗಾಗಿ ಒಂದು ಯಜ್ಞವನ್ನು ಆರಂಭಿಸಿದ ಆಗ ದೇವಶಿಲ್ಪಿಯಾದ ವಿಶ್ವಕರ್ಮ ಯಜ್ಞಾರ್ಥವಾಗಿ ನೆರೆಯತಕ್ಕವರ ವಸತಿಗಾಗಿ ಒಂದು ಪಟ್ಟಣವನ್ನು ನಿರ್ಮಿಸಿದ. ಇದೇ ಕಾಂಚೀಪುರ. ಈಗ ಈ ಪಟ್ಟಣ ಶಿವಕಂಚಿ, ವಿಷ್ಣು ಕಂಚಿ ಎಂಬುದಾಗಿ ಎರಡು ಭಾಗವಾಗಿದೆ. ಶಿವಕಂಚಿಯಲ್ಲಿ ಏಕಾಮ್ರೇಶ್ವರ ದೇವಸ್ಥಾನವೂ, 18 ಶಕ್ತಿ ಪೀಠಗಳಲ್ಲಿ ಒಂದು ಎಂಬುದಾಗಿ ಪ್ರಖ್ಯಾತಿವೆತ್ತ ಕಾಮಾಕ್ಷೀ ದೇವಿಯ ಮಂದಿರವೂ ಇದೆ. ವಿಷ್ಣುಕಂಚಿಯಲ್ಲಿ ಶ್ರೀವರದರಾಜ ಸ್ವಾಮಿ ದೇವಾಲಯವಿದೆ. ಮೋಕ್ಷದಾಯಕಗಳೆಂದು ಸ್ಮೃತಿ ಪುರಾಣಾದಿಗಳಲ್ಲಿ ಪ್ರಸಿದ್ಧಿ ಹೊಂದಿದ ಏಳು ಪಟ್ಟಣಗಳಲ್ಲಿ ಇದು ಒಂದು.
ಜಾಲಾಂಧರ-ತ್ರಿಗರ್ತದೇಶ-ಭರತ ಖಂಡದ ವಾಯುವ್ಯ ಪ್ರಾಂತ್ಯದಲ್ಲಿದೆ.
ಮೂಲ ...{Loading}...
ಹರಸಿಕೊಂಡರು ನಿಖಿಳ ಪೃಥ್ವೀ
ಶ್ವರರು ಮಾಯಾಪುರದ ಕಾಂಚೀ
ಪುರದ ಜಾಳಾಂಧರದ ವಿವಿಧಸ್ಥಾನ ದೇವರಿಗೆ
ಕರಿಮುಖನ ಕಜ್ಜಾಯದಲಿ ಸ
ತ್ಕರಿಸಿ ಸಂಶಯ ಭೇದವರ್ಗದ
ಹರುಷದಲಿ ಹೊರವಂಟರೊಬ್ಬರನೊಬ್ಬರುರವಣಿಸಿ ॥3॥
೦೦೪ ಉಬ್ಬು ಮುರಿದುದು ...{Loading}...
ಉಬ್ಬು ಮುರಿದುದು ರಾಯರೊಬ್ಬರ
ನೊಬ್ಬರೀಕ್ಷಿಸಿ ಚೆಲುವಿನಲಿ ಸಿರಿ
ಗೊಬ್ಬಿನಲಿ ಸಾಹಸಿಕೆಯಲಿ ಸೇನಾ ಸಮುದ್ರದಲಿ
ಒಬ್ಬರೊಬ್ಬರಸೂಯೆಯೊಬ್ಬರ
ನೊಬ್ಬರಳುಕಿಸುವದಟುಗಂಗಳ
ಹಬ್ಬದಲಿ ಮನ ಸಂಚು ತಪ್ಪಿತಸಾಧ್ಯ ಚಿಂತೆಯಲಿ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜರು ಒಬ್ಬರನ್ನೊಬ್ಬರು ನೋಡಿದ ಮೇಲೆ, ಸೌಂದರ್ಯದಲ್ಲಿ ಸಂಪತ್ತಿನ ಕೊಬ್ಬಿನಲ್ಲಿ, ಪರಾಕ್ರಮದಲ್ಲಿ ಸೇನಾಬಲದಲ್ಲಿ ತಾವೇ ಹೆಚ್ಚೆಂದು ಹೇಳಿಕೊಳ್ಳುತ್ತಿದ್ದ ಗರ್ವ ಮುರಿಯಿತು. ಒಬ್ಬರ ಮೇಲೊಬ್ಬರಿಗೆ ಅಸೂಯೆ, ಒಬ್ಬರನ್ನೊಬ್ಬರು ಅಂಜಿಸುವ ಜರೆಯುವ ಕಣ್ಣುಗಳ ನೋಟ, ಅಸಾಧ್ಯ ಚಿಂತೆಯಿಂದ ಅವರ ಮನಸ್ಸಿನ ಹಂಚಿಕೆ ತಪ್ಪಿತು.
ಪದಾರ್ಥ (ಕ.ಗ.ಪ)
ಉಬ್ಬು-ಗರ್ವ, ಅಳುಕಿಸು-ಅಂಜಿಸು, ಅದಟು-ಮದ, ಸಂಚು-ಹಂಚಿಕೆ
ಮೂಲ ...{Loading}...
ಉಬ್ಬು ಮುರಿದುದು ರಾಯರೊಬ್ಬರ
ನೊಬ್ಬರೀಕ್ಷಿಸಿ ಚೆಲುವಿನಲಿ ಸಿರಿ
ಗೊಬ್ಬಿನಲಿ ಸಾಹಸಿಕೆಯಲಿ ಸೇನಾ ಸಮುದ್ರದಲಿ
ಒಬ್ಬರೊಬ್ಬರಸೂಯೆಯೊಬ್ಬರ
ನೊಬ್ಬರಳುಕಿಸುವದಟುಗಂಗಳ
ಹಬ್ಬದಲಿ ಮನ ಸಂಚು ತಪ್ಪಿತಸಾಧ್ಯ ಚಿಂತೆಯಲಿ ॥4॥
೦೦೫ ಹೋರೆಗರ ಹೊಳ್ಳಿರಿತ ...{Loading}...
ಹೋರೆಗರ ಹೊಳ್ಳಿರಿತ ಜೋಯಿಸ
ರಾರುಭಟೆಗಳ ಬಿಂಕ ಮಾಂತ್ರಿಕ
ರೋರೆಮುಸುಕಿನ ಜಾಳುಜಪವೀ ನೃಪರ ಚಾಳೈಸೆ
ಪೂರವಿಪ ಪುಳಕಂಗಳಲಿ ಸಿಂ
ಗಾರಿಗಳು ಸೀವರಿಸದೈತಂ
ದೋರಣಿಸಿದರು ಸಾಲ ಶೋಭಿತ ಸಿಂಹಪೀಠದಲಿ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜ್ಯೋತಿಷಿಗಳ ವ್ಯರ್ಥಾಲಾಪ, ಜೋಯಿಸರ ಅಬ್ಬರದ ಪ್ರತಿಷ್ಠೆ, ಮಾಂತ್ರಿಕರು ಓರೆಮುಸುಕಿನಲ್ಲಿ ಮಾಡುವ ಪೊಳ್ಳು ಜಪವು, ಈ ರಾಜರುಗಳನ್ನು ಚಲಿಸುವಂತೆ ಮಾಡಿತು. ಆ ಶೃಂಗಾರಿಗಳು ಪುಳಕಿತಗೊಂಡು, ಹಿಮ್ಮೆಟ್ಟದೆ ಸಭೆಗೆ ಬಂದು ಸಾಲಾಗಿ ಅಲಂಕೃತವಾಗಿದ್ದ ಸಿಂಹಾಸನಗಳಲ್ಲಿ ಕುಳಿತುಕೊಂಡರು.
ಪದಾರ್ಥ (ಕ.ಗ.ಪ)
ಹೋರೆಗ-ಜ್ಯೋತಿಷಿ, ಹೋರಾಶಾಸ್ತ್ರವನ್ನು ಬಲ್ಲವನು, ಬಿಂಕ-ಪ್ರತಿಷ್ಠೆ, ಜಾಳು-ಪೊಳ್ಳು, ಚಾಳೈಸು-ಚಲಿಸುವಂತೆ ಮಾಡು, ಸೀವರಿಸದೆ-ಹಿಮ್ಮೆಟ್ಟದೆ, ಶೋಭಿತ-ಅಲಂಕೃತವಾಗಿದ್ದ
ಸಿಂಹಪೀಠ-ಸಿಂಹಾಸನ, ಓರಣಿಸು-ಸಾಲುಗೊಳ್ಳು
ಮೂಲ ...{Loading}...
ಹೋರೆಗರ ಹೊಳ್ಳಿರಿತ ಜೋಯಿಸ
ರಾರುಭಟೆಗಳ ಬಿಂಕ ಮಾಂತ್ರಿಕ
ರೋರೆಮುಸುಕಿನ ಜಾಳುಜಪವೀ ನೃಪರ ಚಾಳೈಸೆ
ಪೂರವಿಪ ಪುಳಕಂಗಳಲಿ ಸಿಂ
ಗಾರಿಗಳು ಸೀವರಿಸದೈತಂ
ದೋರಣಿಸಿದರು ಸಾಲ ಶೋಭಿತ ಸಿಂಹಪೀಠದಲಿ ॥5॥
೦೦೬ ಕೌರವರು ಯಾದವರು ...{Loading}...
ಕೌರವರು ಯಾದವರು ಸಹಿತೀ
ಧಾರುಣಿ ಕ್ಷತ್ರಿಯರ ವಂಶದ
ವೀರಪಾರ್ಥಿವವಿತತಿ ಕುಳ್ಳಿರ್ದುದು ಸರಾಗದಲಿ
ಸಾರೆ ಸೋದರ ಸಚಿವ ಮಂತ್ರಿ ಕು
ಮಾರ ಚಾಮರ ಹಡಪದೊಳಪರಿ
ವಾರ ಬಳಸಿತುವೊಬ್ಬರೊಬ್ಬರ ಸುತ್ತು ವಳಯದಲಿ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವರು ಯಾದವರ ಸಹಿತ ಈ ಭೂಮಂಡಲದ ಕ್ಷತ್ರಿಯ ವಂಶದ ವೀರಕ್ಷತ್ರಿಯ ಸಮೂಹದಲ್ಲಿ ನಿರಾತಂಕದಿಂದ ಕುಳಿತಿದ್ದರು. ಇವರ ಸಮೀಪದಲ್ಲಿ ಸೋದರ, ಅಮಾತ್ಯ, ಮಂತ್ರಿಕುಮಾರರು, ಚಾಮರ ಹಡಪದವರು, ಆ ಒಬ್ಬೊಬ್ಬರ ಸುತ್ತುವಲಯದಲ್ಲಿಯೂ ಒಳಪರಿವಾರದವರು ಸುತ್ತುವರಿದಿದ್ದರು.
ಪದಾರ್ಥ (ಕ.ಗ.ಪ)
ಪಾರ್ಥಿವ-ಕ್ಷತ್ರಿಯ, ವಿತತಿ-ಸಮೂಹ, ಸರಾಗ-ನಿರಾತಂಕ, ಸಾರೆ-ಸಮೀಪ, ಬಳಸು-ಸುತ್ತುವರಿ
ಮೂಲ ...{Loading}...
ಕೌರವರು ಯಾದವರು ಸಹಿತೀ
ಧಾರುಣಿ ಕ್ಷತ್ರಿಯರ ವಂಶದ
ವೀರಪಾರ್ಥಿವವಿತತಿ ಕುಳ್ಳಿರ್ದುದು ಸರಾಗದಲಿ
ಸಾರೆ ಸೋದರ ಸಚಿವ ಮಂತ್ರಿ ಕು
ಮಾರ ಚಾಮರ ಹಡಪದೊಳಪರಿ
ವಾರ ಬಳಸಿತುವೊಬ್ಬರೊಬ್ಬರ ಸುತ್ತು ವಳಯದಲಿ ॥6॥
೦೦೭ ಅಙ್ಕೆಯಿದು ಪಾರ್ಥಿವರ ...{Loading}...
ಅಂಕೆಯಿದು ಪಾರ್ಥಿವರ ವಿಭವಾ
ಲಂಕೃತಿಯನದನೇನ ಹೇಳುವೆ
ನಂಕವಿದು ಕಳನೇರಿತಾಹವವೆನಗೆ ತನಗೆನುತ
ಶಂಕರಾರಿಯ ಮಸೆದಲಗು ಮಾ
ರಂಕದುಬ್ಬಿನ ಜಂಕೆಯಂಕೆಯ
ಬಿಂಕವನು ವಿಸ್ತರಿಸುವೆನು ನರನಾಥ ಕೇಳ್ ಎಂದ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದು ಕ್ಷತ್ರಿಯರ ಠೀವಿ. ಅವರ ವೈಭವದ ಅಲಂಕಾರಗಳನ್ನು ಏನೆಂದು ವಿವರಿಸುವುದು ? “ಯುದ್ಧಕ್ಕೆ ರಣರಂಗ ಸಿದ್ಧವಾಗಿದೆ. ಈ ಯುದ್ಧ ನನಗೆ ತನಗೆ” ಎಂದು ತವಕಿಸುತ್ತಿದ್ದರು. ಮನ್ಮಥನ ಹರಿತವಾದ ಬಾಣ, ಪ್ರತಿಸ್ಪರ್ಧಿಯ ಉತ್ಸಾಹದ ಅಬ್ಬರದ ಠೀವಿಯ ಬೆಡಗನ್ನು ವಿವರಿಸುವೆನು ಕೇಳು ಎಂದು ಜನಮೇಜಯನಿಗೆ ವೈಶಂಪಾಯನು ಹೇಳಿದನು.
ಪದಾರ್ಥ (ಕ.ಗ.ಪ)
ಅಂಕೆ-ಠೀವಿ, ಕಳ-ರಣರಂಗ, ಅಂಕ-ಯುದ್ಧ, ಶಂಕರಾರಿ-ಮನ್ಮಥ, ಮಸೆ-ಹರಿತ, ಅಲಗು-ಬಾಣ, ಮಾರಂಕ-ಪ್ರತಿಸ್ಪರ್ಧಿ, ಉಬ್ಬು-ಉತ್ಸಾಹ, ಜಂಕೆ-ಅಬ್ಬರ, ಬಿಂಕ-ಬೆಡಗು
ಮೂಲ ...{Loading}...
ಅಂಕೆಯಿದು ಪಾರ್ಥಿವರ ವಿಭವಾ
ಲಂಕೃತಿಯನದನೇನ ಹೇಳುವೆ
ನಂಕವಿದು ಕಳನೇರಿತಾಹವವೆನಗೆ ತನಗೆನುತ
ಶಂಕರಾರಿಯ ಮಸೆದಲಗು ಮಾ
ರಂಕದುಬ್ಬಿನ ಜಂಕೆಯಂಕೆಯ
ಬಿಂಕವನು ವಿಸ್ತರಿಸುವೆನು ನರನಾಥ ಕೇಳೆಂದ ॥7॥
೦೦೮ ತರಿಸು ಧನುವನು ...{Loading}...
ತರಿಸು ಧನುವನು ಯಂತ್ರಮತ್ಸ್ಯವ
ನಿರಿಸು ತಳುವದೆ ತಂಗಿಯನಲಂ
ಕರಿಸು ದಂಡಿಗೆಯಿಂದ ತಾ ತೋರಿಸು ಮಹೀಶ್ವರರ
ವರನ ವರಿಸಲಿ ಲಗ್ನವಿದೆ ಹ
ತ್ತಿರೆಯೆನುತ ಪಾಂಚಾಲಭೂಪತಿ
ಕರೆದು ಧೃಷ್ಟದ್ಯುಮ್ನನನು ಬೆಸಸಿದನು ಬೇಗದಲಿ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಚಾಲರಾಜನು ಧೃಷ್ಟದ್ಯುಮ್ನನನ್ನು ಕರೆದು “ಧನುಸ್ಸನ್ನು ತರಿಸು, ಮತ್ಸ್ಯಯಂತ್ರವನ್ನು ಇರಿಸು, ತಡಮಾಡದೆ ತಂಗಿ ದ್ರೌಪದಿಯನ್ನು ಅಲಂಕರಿಸು. ಪಲ್ಲಕ್ಕಿಯ ಮೇಲೆ ಅವಳನ್ನು ಕರೆತಂದು ಸಭೆಯಲ್ಲಿನ ಭೂಪತಿಗಳನ್ನು ತೋರಿಸು. ತನ್ನ ವರನನ್ನು ವರಿಸಲಿ, ಹತ್ತಿರದಲ್ಲಿ ಲಗ್ನವಿದೆ” ಎಂದು ಆಜ್ಞಾಪಿಸಿದನು.
ಪದಾರ್ಥ (ಕ.ಗ.ಪ)
ತಳುವದೆ-ತಡಮಾಡದೆ, ದಂಡಿಗೆ-ಪಲ್ಲಕ್ಕಿ, ಬೆಸಸು-ಆಜ್ಞಾಪಿಸು
ಮೂಲ ...{Loading}...
ತರಿಸು ಧನುವನು ಯಂತ್ರಮತ್ಸ್ಯವ
ನಿರಿಸು ತಳುವದೆ ತಂಗಿಯನಲಂ
ಕರಿಸು ದಂಡಿಗೆಯಿಂದ ತಾ ತೋರಿಸು ಮಹೀಶ್ವರರ
ವರನ ವರಿಸಲಿ ಲಗ್ನವಿದೆ ಹ
ತ್ತಿರೆಯೆನುತ ಪಾಂಚಾಲಭೂಪತಿ
ಕರೆದು ಧೃಷ್ಟದ್ಯುಮ್ನನನು ಬೆಸಸಿದನು ಬೇಗದಲಿ ॥8॥
೦೦೯ ಅರಸನಾಜ್ಞೆಯ ಮೇಲೆ ...{Loading}...
ಅರಸನಾಜ್ಞೆಯ ಮೇಲೆ ಶತ ಸಾ
ವಿರ ನಿತಂಬಿನಿಯರು ಕುಮಾರಿಯ
ಹೊರೆಗೆ ಬಂದರು ತಿಗುರಿದರು ಕುಂಕುಮದಲವಯವವ
ಅರಸಿ ಮಜ್ಜನ ಮಾಡಿ ನೂತನ
ವರದುಕೂಲವನುಟ್ಟು ಸಖಿಯರ
ತರದ ನೆಲನುಗ್ಗಡಣೆಯಲಿ ಬಂದಳು ನಿಜಾಲಯಕೆ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನ ಅನುಮತಿಯ ಪ್ರಕಾರ ಒಂದು ಲಕ್ಷ ಸುಂದರಿಯರು ರಾಜಕುಮಾರಿಯ ಬಳಿಗೆ ಬಂದರು. ಅವಳ ಅಂಗಗಳಿಗೆ ಕುಂಕುಮ ಕೇಸರಿಯ ಲೇಪನ ಮಾಡಿದರು. ಆಮೇಲೆ ಅವಳು ಸ್ನಾನ ಮಾಡಿ ಹೊಸದಾದ ಶ್ರೇಷ್ಠ ಪಟ್ಟೆವಸ್ತ್ರವನ್ನು ಉಟ್ಟು ಸಖಿಯರ ಸಮೂಹದ ಹೆಜ್ಜೆಯ ಸಪ್ಪಳದೊಂದಿಗೆ ತನ್ನ ಮನೆಗೆ ಬಂದಳು.
ಪದಾರ್ಥ (ಕ.ಗ.ಪ)
ಶತಸಾವಿರ-ಲಕ್ಷ, ನಿತಂಬಿನಿ-ಸುಂದರಿ, ತಿಗುರು-ಲೇಪಿಸು, ದುಕೂಲ-ಪಟ್ಟೆವಸ್ತ್ರ, ತರ-ಸಮೂಹ, ನೆಲನುಗ್ಗಡಣೆ-ಹೆಜ್ಜೆಯ ಸಪ್ಪಳ
ಮೂಲ ...{Loading}...
ಅರಸನಾಜ್ಞೆಯ ಮೇಲೆ ಶತ ಸಾ
ವಿರ ನಿತಂಬಿನಿಯರು ಕುಮಾರಿಯ
ಹೊರೆಗೆ ಬಂದರು ತಿಗುರಿದರು ಕುಂಕುಮದಲವಯವವ
ಅರಸಿ ಮಜ್ಜನ ಮಾಡಿ ನೂತನ
ವರದುಕೂಲವನುಟ್ಟು ಸಖಿಯರ
ತರದ ನೆಲನುಗ್ಗಡಣೆಯಲಿ ಬಂದಳು ನಿಜಾಲಯಕೆ ॥9॥
೦೧೦ ಹೊರೆಯ ಸಖಿಯರ ...{Loading}...
ಹೊರೆಯ ಸಖಿಯರ ನೋಟ ಮೈಯಲಿ
ಹರಿದು ಬಳಲದು ಚಿತ್ತವೀಕೆಯ
ಧರಿಸಿ ಕುಸಿಯದು ಕಿವಿಗಳಿಗೆ ಮೆಲ್ನುಡಿಯ ಸವಿಸವಿದು
ಅರುಚಿಯಾಗದು ನಾಸಿಕವು ಮೈ
ಪರಿಮಳದ ಪೂರದಲಿ ಗಂಧಾಂ
ತರಕೆ ನೆರೆಯದು ರೂಪವೇನೆಂಬೆನು ನಿತಂಬಿನಿಯ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಮೀಪದಲ್ಲಿದ್ದ ಸಖಿಯರ ದೃಷ್ಟಿಯು ಅವಳ ಶರೀರದ ತುಂಬ ವ್ಯಾಪಿಸಿದರೂ ಅವರ ದೃಷ್ಟಿ ಆಯಾಸಗೊಳ್ಳದು. ಅವರ ಚಿತ್ತ ಈಕೆಯಲ್ಲಿ ನೆಲಸಿದರೂ ಕುಗ್ಗಲಿಲ್ಲ. ಅವಳ ಮೃದುವಾದ ಮಾತುಗಳನ್ನು ಕೇಳಿ ಅವರ ಕಿವಿಗಳಿಗೆ ಅರುಚಿಯಾಗಲಿಲ್ಲ. ಅವಳ ಅಂಗಾಂಗದಿಂದ ಪೂರ್ಣ ಸುವಾಸನೆಯು ಹರಿಯುತ್ತಿರಲು ಬೇರೆ ಯಾವ ಗಂಧವನ್ನೂ ಮೂಸಲೂ ಯಾರ ಮೂಗೂ ಬಯಸುತ್ತಿರಲಿಲ್ಲ. ಆ ಸುಂದರಿಯ ರೂಪವನ್ನು ಏನೆಂದು ವರ್ಣಿಸುವುದು !
ಪದಾರ್ಥ (ಕ.ಗ.ಪ)
ಹೊರೆ-ಸಮೀಪ, ಹರಿ-ವ್ಯಾಪಿಸು, ನೋಟ-ದೃಷ್ಟಿ, ಕುಸಿ-ಕುಗ್ಗು, ಮೆಲ್ನುಡಿ-ಮೃದುವಾದ ಮಾತು, ಪೂರ-ಪೂರ್ಣ
ಮೂಲ ...{Loading}...
ಹೊರೆಯ ಸಖಿಯರ ನೋಟ ಮೈಯಲಿ
ಹರಿದು ಬಳಲದು ಚಿತ್ತವೀಕೆಯ
ಧರಿಸಿ ಕುಸಿಯದು ಕಿವಿಗಳಿಗೆ ಮೆಲ್ನುಡಿಯ ಸವಿಸವಿದು
ಅರುಚಿಯಾಗದು ನಾಸಿಕವು ಮೈ
ಪರಿಮಳದ ಪೂರದಲಿ ಗಂಧಾಂ
ತರಕೆ ನೆರೆಯದು ರೂಪವೇನೆಂಬೆನು ನಿತಂಬಿನಿಯ ॥10॥
೦೧೧ ಮೊಲೆಗಳಲಿ ಸಿಲುಕಿದೊಡೆ ...{Loading}...
ಮೊಲೆಗಳಲಿ ಸಿಲುಕಿದೊಡೆ ನೋಟಕೆ
ಬಳಿಕ ಪುನರಾವರ್ತಿಯೇ ಕಂ
ಗಳಿಗೆ ಕಾಮಿಸಿದರೆಯು ನಿಮಿಷಕೆ ಸಮಯವೆಲ್ಲಿಹುದು
ಲಲಿತ ಮೈಕಾಂತಿಗಳೊಳದ್ದರೆ
ಮುಳುಗಿ ತೆಗೆವವರಾರು ಜಘನ
ಸ್ಥಳಕೆ ಮುರಿದರೆ ಮರಳುದಲೆ ಕಂಗಳಿಗೆ ಹುಸಿಯೆಂದ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಕೆಯ ಎದೆಯಲ್ಲಿ ನೆಟ್ಟ ದೃಷ್ಟಿಯನ್ನು ಕೀಳಲಾಗುವುದೇ! ಒಂದು ಪಕ್ಷ ಕಣ್ಣುಗಳು ದೃಷ್ಟಿ ತೆಗೆಯಲು ಬಯಸಿದರೆಯು ರೆಪ್ಪೆ ಮುಚ್ಚಿ ತೆರೆಯಲು ಸಮಯವೆಲ್ಲಿದೆ? ಅದೇ ದೃಷ್ಟಿ ಅವಳ ಸುಂದರ ಶರೀರದ ಪ್ರಕಾಶದಲ್ಲಿ ಮುಳುಗಿದರೆ ಮರಳಿ ತೆಗೆಯುವುದು ಯಾರಿಗೆ ಸಾಧ್ಯ. ದೃಷ್ಟಿಯು ನಿತಂಬದ ಸ್ಥಳಕ್ಕೆ ತಿರುಗಿದರೆ ಕಣ್ಣುಗಳು ಅಲ್ಲಿಂದ ಹಿಂತಿರುಗುವುದು ಸುಳ್ಳು.
ಪದಾರ್ಥ (ಕ.ಗ.ಪ)
ಸಿಲುಕು-ಸೇರಿಸು,
ಕಾಮಿಸು-ಬಯಸು,
ನಿಮಿಷ-ರೆಪ್ಪೆ,
ಜಘನ-ನಿತಂಬ,
ಹುಸಿ-ವ್ಯರ್ಥ
ಮರಳುದಲೆ- ಹಿಂತಿರುಗುವುದು
ಪಾಠಾನ್ತರ (ಕ.ಗ.ಪ)
ಮರಳದಲೆ –> ಮರಳುದಲೆ
ಡಾ. ಎ.ವಿ.ಪ್ರಸನ್ನ
ಮೂಲ ...{Loading}...
ಮೊಲೆಗಳಲಿ ಸಿಲುಕಿದೊಡೆ ನೋಟಕೆ
ಬಳಿಕ ಪುನರಾವರ್ತಿಯೇ ಕಂ
ಗಳಿಗೆ ಕಾಮಿಸಿದರೆಯು ನಿಮಿಷಕೆ ಸಮಯವೆಲ್ಲಿಹುದು
ಲಲಿತ ಮೈಕಾಂತಿಗಳೊಳದ್ದರೆ
ಮುಳುಗಿ ತೆಗೆವವರಾರು ಜಘನ
ಸ್ಥಳಕೆ ಮುರಿದರೆ ಮರಳುದಲೆ ಕಂಗಳಿಗೆ ಹುಸಿಯೆಂದ ॥11॥
೦೧೨ ಹೊಲಬುಗೆಡವೇ ಹೊಳೆವ ...{Loading}...
ಹೊಲಬುಗೆಡವೇ ಹೊಳೆವ ವಕ್ಷ
ಸ್ಥಳದೊಳಗೆ ಜನದೃಷ್ಟಿ ನಳಿತೋ
ಳ್ಗಳಲಿ ಸೆಳ್ಳುಗುರೋಳಿಯಲಿ ಕೆಂದಳದ ಶೋಭೆಯಲಿ
ಸುಳಿದಡಲ್ಲಿಯೆ ನಿಲುವು ದಶನಾ
ವಳಿಯ ಬಿಂಬಾಧರದ ಕದಪಿನ
ಚೆಲುವಿಕೆಗೆ ನರರಾಲಿ ನೆರೆಯವು ನೃಪತಿ ಕೇಳ್ ಎಂದ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನರ ದೃಷ್ಟಿ, ಅವಳ ಎದೆಯಲ್ಲಿ, ಕೋಮಲವಾದ ತೋಳುಗಳಲ್ಲಿ ಚೂಪಾದ ಉಗುರುಗಳಲ್ಲಿ, ಕೆಂಪಾದ ಅಂಗೈ ಮತ್ತು ಅಂಗಾಲುಗಳ ಕಾಂತಿಯಲ್ಲಿ ಆವರಿಸಿದರೆ ಅಲ್ಲಿಯೇ ನಿಲ್ಲುವುದು. ಅವಳ ದಂತಪಂಕ್ತಿಗಳ, ಕೆಂಪಾದ ತುಟಿಗಳ ಹಾಗೂ ಕಪೋಲಗಳ ಸೌಂದರ್ಯ ಸವಿಯಲು ಮಾನವರ ಕಣ್ಣುಗಳು ಸಮರ್ಥವಾಗದು.
ಪದಾರ್ಥ (ಕ.ಗ.ಪ)
ಹೊಲಬು-ದಾರಿ, ವಕ್ಷಸ್ಥಳ-ಎದೆ, ನಳಿತೋಳ್ಗಳು-ಕೋಮಲವಾದ ತೋಳ್ಗಳು, ಸೆಳ್ಳುಗುರು-ಚೂಪಾದ ಉಗುರು, ಕೆಂದಳ-ಕೆಂಪಾದ ಅಂಗೈ, ಶೋಭೆ-ಕಾಂತಿ, ದಶನಾವಳಿ-ದಂತಪಂಕ್ತಿ, ಬಿಂಬಾಧರ-ತೊಂಡೆಹಣ್ಣಿನಂತೆ ಕೆಂಪಾದ ತುಟಿ, ಕದಪು-ಕಪೋಲ, ನೆರೆ-ಸಮರ್ಥ, ಆಲಿ-ಕಣ್ಣು
ಮೂಲ ...{Loading}...
ಹೊಲಬುಗೆಡವೇ ಹೊಳೆವ ವಕ್ಷ
ಸ್ಥಳದೊಳಗೆ ಜನದೃಷ್ಟಿ ನಳಿತೋ
ಳ್ಗಳಲಿ ಸೆಳ್ಳುಗುರೋಳಿಯಲಿ ಕೆಂದಳದ ಶೋಭೆಯಲಿ
ಸುಳಿದಡಲ್ಲಿಯೆ ನಿಲುವು ದಶನಾ
ವಳಿಯ ಬಿಂಬಾಧರದ ಕದಪಿನ
ಚೆಲುವಿಕೆಗೆ ನರರಾಲಿ ನೆರೆಯವು ನೃಪತಿ ಕೇಳೆಂದ ॥12॥
೦೧೩ ಅಸಿಯ ನಡುವಿನ ...{Loading}...
ಅಸಿಯ ನಡುವಿನ ನಿಮ್ನ ನಾಭಿಯ
ಮಸುಳ ಬಾಸೆಯ ತೋರ ಮೊಲೆಗಳ
ಮಿಸುಪ ತೊಡೆಗಳ ಚಾರು ಜಂಘೆಯ ಚರಣಪಲ್ಲವದ
ಎಸಳುಗಂಗಳ ತೊಳಗಿ ಬೆಳಗುವ
ಮುಸುಡ ಕಾಂತಿಯ ಮುರಿದ ಕುರುಳಿನ
ಬಿಸಜ ಗಂಧಿಯ ರೂಪನಭಿವರ್ಣಿಸುವಡರಿದೆಂದ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಣ್ಣದಾದ ಸೊಂಟ, ನಿಮ್ನನಾಭಿ, ನಸುಗಪ್ಪಾದ ಬಾಸೆ, ದಪ್ಪಮೊಲೆಗಳು, ಹೊಳೆಯುವ ತೊಡೆಗಳು, ಸುಂದರದ ಕಿರುದೊಡೆ, ಚಿಗುರಿನಂತ ಪಾದಗಳು, ತಾವರೆದಳದಂತಿರುವ ವಿಶಾಲವಾದ ಕಣ್ಣುಗಳು, ಅತಿಯಾಗಿ ಪ್ರಕಾಶಿಸುವ ಮುಖದ ಕಾಂತಿ, ಸುರುಳಿತಲೆಗೂದಲು, - ಇವುಗಳಿಂದ ಶೋಭಿಸುವ ಕಮಲಗಂಧಿ ದ್ರೌಪದಿಯ ರೂಪವನ್ನು ವರ್ಣಿಸುವುದು ಅಸಾಧ್ಯ.
ಪದಾರ್ಥ (ಕ.ಗ.ಪ)
ಅಸಿಯ-ಸಣ್ಣದಾದ, ಮಸುಳ-ನಸುಗಪ್ಪು, ಬಾಸೆ-ಎದೆಯ ಮಧ್ಯಭಾಗದಿಂದ ಹೊಕ್ಕುಳವರೆಗಿರುವ ರೇಖಾಕೃತಿಯ ತೆಳುಕೂದಲಿನ ಸಾಲು, ತೋರ-ದಪ್ಪ, ಜಂಘೆ-ಕಿರುದೊಡೆ, ಮುಸುಡ-ಮುಖ, ಎಸಳುಗಂಗಳು-ತಾವರೆಯದಳದಂತಿರುವ ಕಣ್ಣುಗಳು, ತೊಳಗಿಬೆಳಗುವ-ಅತಿಯಾಗಿ ಪ್ರಕಾಶಿಸುವ, ಬಿಸಜ-ಕಮಲ, ಅರಿದು-ಅಸಾಧ್ಯವಾದದ್ದು
ಮೂಲ ...{Loading}...
ಅಸಿಯ ನಡುವಿನ ನಿಮ್ನ ನಾಭಿಯ
ಮಸುಳ ಬಾಸೆಯ ತೋರ ಮೊಲೆಗಳ
ಮಿಸುಪ ತೊಡೆಗಳ ಚಾರು ಜಂಘೆಯ ಚರಣಪಲ್ಲವದ
ಎಸಳುಗಂಗಳ ತೊಳಗಿ ಬೆಳಗುವ
ಮುಸುಡ ಕಾಂತಿಯ ಮುರಿದ ಕುರುಳಿನ
ಬಿಸಜ ಗಂಧಿಯ ರೂಪನಭಿವರ್ಣಿಸುವಡರಿದೆಂದ ॥13॥
೦೧೪ ಪೂಸುವರೆ ಕತ್ತುರಿ ...{Loading}...
ಪೂಸುವರೆ ಕತ್ತುರಿ ಜವಾಜಿಗ
ಳೈಸಲೇ ಪರಿಮಳವು ಪೂಸದೆ
ಸೂಸಿ ದೆಸೆ ಕಂಪಿಡುತ ಮಘಮಘಿಸುವಳು ಯೋಜನವ
ಈ ಸಮಸ್ತ ಮನುಷ್ಯಧರ್ಮದ
ದೋಷ ಗರ್ಭಿತ ಧಾತುಗಳ ವಿ
ನ್ಯಾಸವೇ ದ್ರೌಪದಿಯ ಭಾವದ ಭಂಗಿ ಬೇರೆಂದ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುವಾಸನೆಗೆ ಕಸ್ತೂರಿ, ಪುನುಗುಗಳನ್ನು ಲೇಪಿಸಬೇಕಲ್ಲವೇ ! ಈಕೆ ಪರಿಮಳವನ್ನು ಲೇಪಿಸದೆಯೇ ಯೋಜನ ದೂರದ ದಿಕ್ಕುಗಳಲ್ಲಿ ಸುಗಂಧವನ್ನು ಹರಡಿ ಕಂಪನ್ನು ಬೀರುವಳು. ಈ ಎಲ್ಲ ಮನುಷ್ಯ ಧರ್ಮದ ಕಲುಷಿತವಾದ ಸಪ್ತಧಾತುಗಳ ರಚನೆಯೇ ದ್ರೌಪದಿಯದು ? ಅವಳ ಸ್ವರೂಪದ ರೀತಿಯೇ ಬೇರೆ.
ಪದಾರ್ಥ (ಕ.ಗ.ಪ)
ಪೂಸು-ಲೇಪಿಸು, ಪರಿಮಳ-ಸುವಾಸನೆ, ಜವಾಜಿ-ಪುನುಗು, ಸೂಸು-ಹರಡು, ಮಘಮಘಿಸು-ಕಂಪನ್ನು ಬೀರು, ಧಾತು-ಸಪ್ತಧಾತುಗಳು, ದೋಷ-ಕಲುಷಿತ, ವಿನ್ಯಾಸ-ರಚನೆ, ಭಾವ-ಸ್ವರೂಪ, ಭಂಗಿ-ರೀತಿ.
ಪಾಠಾನ್ತರ (ಕ.ಗ.ಪ)
‘ದೋಷಗರ್ವಿತ’ಕ್ಕಿಂತ ‘ದೋಷಗರ್ಭಿತ’ ಅಂದರೆ ‘ಕಲುಷಿತವಾದ’ ಅನ್ನುವ ಪಾಠಾಂತರ ಸಮಂಜಸವೆನ್ನಿಸುತ್ತದೆ.
ಆದಿ ಪರ್ವ, ಮೈ.ವಿ.ವಿ
ಟಿಪ್ಪನೀ (ಕ.ಗ.ಪ)
ಸಪ್ತ ಧಾತುಗಳು : ರಸ, ರಕ್ತ, ಮಾಂಸ, ಮೇದಸ್ಸು, ಅಸ್ಥಿ, ಮಜ್ಜೆ, ಶುಕ್ರ
- ಶ್ರೀವತ್ಸ ನಿಘಂಟು, ಪುಸ್ತಕ ಪ್ರಾಧಿಕಾರ, 1999
ಮೂಲ ...{Loading}...
ಪೂಸುವರೆ ಕತ್ತುರಿ ಜವಾಜಿಗ
ಳೈಸಲೇ ಪರಿಮಳವು ಪೂಸದೆ
ಸೂಸಿ ದೆಸೆ ಕಂಪಿಡುತ ಮಘಮಘಿಸುವಳು ಯೋಜನವ
ಈ ಸಮಸ್ತ ಮನುಷ್ಯಧರ್ಮದ
ದೋಷ ಗರ್ಭಿತ ಧಾತುಗಳ ವಿ
ನ್ಯಾಸವೇ ದ್ರೌಪದಿಯ ಭಾವದ ಭಂಗಿ ಬೇರೆಂದ ॥14॥
೦೧೫ ಬೆರಳ ಚೆಲ್ವಿಕೆಯಿನ್ದ ...{Loading}...
ಬೆರಳ ಚೆಲ್ವಿಕೆಯಿಂದ ಮುದ್ರಿಕೆ
ಮೆರೆಯೆ ಪಾಡಗ ನೇವುರಂಗಳು
ಕರ ಚರಣ ಸೌಂದರ್ಯದಲಿ ಬಲುಮೊಲೆಯ ಢಾಳದಲಿ
ಕೊರಳ ಮುತ್ತಿನ ಹಾರ ಸುಮನೋ
ಹರದ ಕದಪುಗಳಿಂದ ಕರ್ಣಾ
ಭರಣವೊಪ್ಪಿದವೇನನೆಂಬೆನು ರೂಪನಂಗನೆಯ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವಳ ಬೆರಳಸೌಂದರ್ಯದಿಂದ ಬೆರಳಲ್ಲಿ ತೊಟ್ಟ ಉಂಗುರ ಶೋಭಿಸಿತು. ಕಾಲುಬಳೆ, ನೂಪುರಗಳು ಅವಳ ಕರಚರಣಗಳ ಚೆಲುವಿಕೆಯಿಂದ, ಕೊರಳಲ್ಲಿರುವ ಮುತ್ತಿನ ಹಾರ ಅವಳ ಬಲು ಮೊಲೆಯ ಅಂದದಿಂದ, ಅತ್ಯಂತ ಚೆಲುವಾದ ಕಪೋಲಗಳಿಂದ ಕಿವಿಗಳ ಆಭರಣಗಳು ಪ್ರಕಾಶಿಸಿದುವು.
ಪದಾರ್ಥ (ಕ.ಗ.ಪ)
ಮುದ್ರಿಕೆ-ಉಂಗುರ, ಪಾಡಗ-ಕಾಲುಬಳೆ, ನೇವುರ-ನೂಪುರ, ಢಾಳ-ಅಂದ, ಸುಮನೋಹರ-ಅತ್ಯಂತ ಚೆಲುವು, ಒಪ್ಪು-ಪ್ರಕಾಶಿಸು
ಮೂಲ ...{Loading}...
ಬೆರಳ ಚೆಲ್ವಿಕೆಯಿಂದ ಮುದ್ರಿಕೆ
ಮೆರೆಯೆ ಪಾಡಗ ನೇವುರಂಗಳು
ಕರ ಚರಣ ಸೌಂದರ್ಯದಲಿ ಬಲುಮೊಲೆಯ ಢಾಳದಲಿ
ಕೊರಳ ಮುತ್ತಿನ ಹಾರ ಸುಮನೋ
ಹರದ ಕದಪುಗಳಿಂದ ಕರ್ಣಾ
ಭರಣವೊಪ್ಪಿದವೇನನೆಂಬೆನು ರೂಪನಂಗನೆಯ ॥15॥
೦೧೬ ಎಸೆವಧರ ರಾಗದಲಿ ...{Loading}...
ಎಸೆವಧರ ರಾಗದಲಿ ಮಿಗೆ ರಂ
ಜಿಸುವವೋಲ್ ಮಾಣಿಕ್ಯ ಮೆರೆದವು
ದಶನ ದೀಧಿತಿಯಿಂದ ಥಳಥಳಿಸಿದವು ಮುತ್ತುಗಳು
ಮಿಸುಪ ದೇಹಚ್ಛವಿಗಳಲಿ ಢಾ
ಳಿಸುವವೋಲ್ ಭೂಷಣದ ಹೇಮ
ಪ್ರಸರ ಮೆರೆದವು ಹೊಗಳೆ ಕವಿ ಯಾರಬುಜಲೋಚನೆಯ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶೋಭಿಸುವ ಅವಳ ತುಟಿಯ ಬಣ್ಣದಿಂದ ಪ್ರಕಾಶಿಸುವಂತೆ ಮಾಣಿಕ್ಯಗಳು ಮೆರೆದವು. ದಂತದ ಕಾಂತಿಯಿಂದ ಮುತ್ತುಗಳು ಹೊಳೆದುವು. ಪ್ರಕಾಶಿಸುವ ದೇಹದಕಾಂತಿಯಲ್ಲಿ ಹೊಳೆಯುವಂತೆ ಅವಳು ಧರಿಸಿದ ಆಭರಣಗಳ ಚಿನ್ನದ ಹರಡುವಿಕೆ ಶೋಭಿಸಿದುವು. ಕಮಲ ಲೋಚನೆಯ ಸೌಂದರ್ಯವನ್ನು ಹೊಗಳುವ ಕವಿ ಯಾರಿದ್ದಾನೆ ?
ಪದಾರ್ಥ (ಕ.ಗ.ಪ)
ಅಧರ-ತುಟಿ, ರಾಗ-ಬಣ್ಣ, ದೀಧಿತಿ-ಕಾಂತಿ, ಥಳಥಳಿಸು-ಹೊಳೆ, ಮಿಸುವ-ಪ್ರಕಾಶಿಸುವ, ಛವಿ-ಕಾಂತಿ, ಢಾಳ-ಹೊಳಪು ,
ಭೂಷಣ-ಆಭರಣ, ಪ್ರಸರ-ಹರಡುವಿಕೆ, ಹೇಮ-ಚಿನ್ನ
ಮೂಲ ...{Loading}...
ಎಸೆವಧರ ರಾಗದಲಿ ಮಿಗೆ ರಂ
ಜಿಸುವವೋಲ್ ಮಾಣಿಕ್ಯ ಮೆರೆದವು
ದಶನ ದೀಧಿತಿಯಿಂದ ಥಳಥಳಿಸಿದವು ಮುತ್ತುಗಳು
ಮಿಸುಪ ದೇಹಚ್ಛವಿಗಳಲಿ ಢಾ
ಳಿಸುವವೋಲ್ ಭೂಷಣದ ಹೇಮ
ಪ್ರಸರ ಮೆರೆದವು ಹೊಗಳೆ ಕವಿ ಯಾರಬುಜಲೋಚನೆಯ ॥16॥
೦೧೭ ಪರಿಮಳದ ಪರಮಾಣುಗಳ ...{Loading}...
ಪರಿಮಳದ ಪರಮಾಣುಗಳ ಸಂ
ವರಿಸಿ ಮುಕ್ತಾಫಲದ ಕೆಂದಾ
ವರೆಯ ಮರಿ ದುಂಬಿಗಳ ವರ್ಣಾಂತರವನಳವಡಿಸಿ
ಸರಸ ವೀಣಾ ಧ್ವನಿಯ ಹಂಸೆಯ
ಗರುವ ಗತಿಗಳನಾಯ್ದು ಮನ್ಮಥ
ವರವಿರಿಂಚಿಯೆ ಸೃಜಿಸಿದನು ಪಾಂಚಾಲ ನಂದನೆಯ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪರಿಮಳದ ಪರಮಾಣುಗಳನ್ನು ಸಜ್ಜುಗೊಳಿಸಿ, ಮುತ್ತುಗಳ, ಕೆಂಪಾದ ಕಮಲಗಳ, ಮರಿದುಂಬಿಗಳ ಬೇರೆ ಬೇರೆ ಬಣ್ಣಗಳನ್ನು ಅಳವಡಿಸಿ, ರಸವತ್ತಾದ ವೀಣೆಯ ಧ್ವನಿಯನ್ನೂ, ಹಂಸದ ಗಂಭೀರ ನಡಿಗೆಯನ್ನು ಆರಿಸಿಕೊಂಡು ಅವುಗಳಿಂದ ಆ ಶ್ರೇಷ್ಠನಾದ ಮನ್ಮಥ ಬ್ರಹ್ಮನೇ ಪಾಂಚಾಲ ಪುತ್ರಿಯಾದ ದ್ರೌಪದಿಯನ್ನು ಸೃಷ್ಟಿ ಮಾಡಿದನು.
ಪದಾರ್ಥ (ಕ.ಗ.ಪ)
ಸಂವರಿಸು-ಸಜ್ಜುಗೊಳಿಸು, ಮುಕ್ತಾಫಲ-ಮುತ್ತುಗಳು, ಸರಸ-ರಸವತ್ತಾದ, ಗರುವ-ಗಂಭೀರ, ಗತಿ-ನಡಿಗೆ
ಮೂಲ ...{Loading}...
ಪರಿಮಳದ ಪರಮಾಣುಗಳ ಸಂ
ವರಿಸಿ ಮುಕ್ತಾಫಲದ ಕೆಂದಾ
ವರೆಯ ಮರಿ ದುಂಬಿಗಳ ವರ್ಣಾಂತರವನಳವಡಿಸಿ
ಸರಸ ವೀಣಾ ಧ್ವನಿಯ ಹಂಸೆಯ
ಗರುವ ಗತಿಗಳನಾಯ್ದು ಮನ್ಮಥ
ವರವಿರಿಂಚಿಯೆ ಸೃಜಿಸಿದನು ಪಾಂಚಾಲ ನಂದನೆಯ ॥17॥
೦೧೮ ಸರಸ ಲಾವಣ್ಯಾಮ್ಬುಮಯ ...{Loading}...
ಸರಸ ಲಾವಣ್ಯಾಂಬುಮಯ ತನು
ಸರಸಿಯಲಿ ಮುಳುಗಿರ್ದ ಯೌವನ
ಕರಿಯ ಕುಂಭಸ್ಥಳವೊ ವಿಪುಳ ಪಯೋಧರ ದ್ವಯವೊ
ತರಳ ನಯನವೊ ಶಫರಿಗಳೊ ತಾ
ವರೆಯೊ ಮುಖವೋ ತುಂಬಿಗಳೊ ನಿರಿ
ಗುರುಳುಗಳೊ ಮಣಿಗಣವೊ ರದನವೊ ಚಿತ್ರವಾಯ್ತೆಂದ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮನೋಹರವಾದ, ಕಾಂತಿ ತುಂಬಿದ ದೇಹವೆಂಬ ಸರೋವರದಲ್ಲಿ ಮುಳುಗಿದ್ದ ಜವ್ವನದ ಆನೆಗಳ ಗಂಡ ಸ್ಥಳವೋ ಅನ್ನುವಂತೆ ಅವಳ ದೊಡ್ಡ ಪಯೋಧರ ದ್ವಯಗಳು, ಮೀನುಗಳೋ ಅನ್ನುವಂತೆ ಅವಳ ಚಂಚಲ ಕಣ್ಣುಗಳು, ಕಮಲ ಪುಷ್ಪವೋ ಅನ್ನುವಂತೆ ಅವಳ ಮುಖವು, ತುಂಬಿಗಳೋ ಅನ್ನುವಂತೆ ಅವಳ ಚೆಲುವಾದ ಗುಂಗುರು ಕೂದಲು, ರತ್ನಗಳ ಸಮೂಹವೋ ಅನ್ನುವಂತೆ ಅವಳ ದಂತಗಳು - ಇಂಥಹ ಅವಳ ಸೌಂದರ್ಯ ಆಶ್ಚರ್ಯಕರವಾಗಿತ್ತು.
ಪದಾರ್ಥ (ಕ.ಗ.ಪ)
ಸರಸ-ಮನೋಹರ, ಕುಂಭಸ್ಥಳ-ಗಂಡ ಸ್ಥಳ, ಶಫರಿ-ಮೀನು, ನಿರಿಗುರುಳು-ಚೆಲುವಾದ ಗುಂಗುರು ಕೂದಲು, ಮಣಿ-ರತ್ನ, ರದನ-ದಂತ
ಮೂಲ ...{Loading}...
ಸರಸ ಲಾವಣ್ಯಾಂಬುಮಯ ತನು
ಸರಸಿಯಲಿ ಮುಳುಗಿರ್ದ ಯೌವನ
ಕರಿಯ ಕುಂಭಸ್ಥಳವೊ ವಿಪುಳ ಪಯೋಧರ ದ್ವಯವೊ
ತರಳ ನಯನವೊ ಶಫರಿಗಳೊ ತಾ
ವರೆಯೊ ಮುಖವೋ ತುಂಬಿಗಳೊ ನಿರಿ
ಗುರುಳುಗಳೊ ಮಣಿಗಣವೊ ರದನವೊ ಚಿತ್ರವಾಯ್ತೆಂದ ॥18॥
೦೧೯ ರಾಜಸೂಯದ ಕರ್ತೃವೋಲ್ ...{Loading}...
ರಾಜಸೂಯದ ಕರ್ತೃವೋಲ್ ಜಿತ
ರಾಜ ಮಂಡಲವಾಯ್ತು ಮುಖವಿದು
ರಾಜರಾಜನ ಪೋಲ್ದುದಳಕಾವೇಷ್ಟಿ ತತ್ವದಲಿ
ರಾಜನುದ್ಯಾನದವೊಲಾಸ್ಯ ಸ
ರೋಜವಾಯ್ತು ತಮಾಲಪತ್ರ ವಿ
ರಾಜಿತವು ಜನಮೇಜಯ ಕ್ಷಿತಿಪಾಲ ಕೇಳ್ ಎಂದ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ದ್ರೌಪದಿಯ ಮುಖವು ರಾಜಸೂಯಯಾಗಕ್ಕೆ ದೀಕ್ಷಿತನಾಗುವವನಂತೆ, ಸಮಸ್ತ ರಾಜರನ್ನು ಗೆಲ್ಲುವಂತಹುದಾಯ್ತು (ರಾಜ ಶಬ್ದಕ್ಕೆ ‘ಚಂದ್ರ’ ಎಂಬ ಅರ್ಥವೂ ಇರುವುದರಿಂದ, ಮುಖ ಸೌಂದರ್ಯವು ಚಂದ್ರಮಂಡಲದ ಸೊಬಗನ್ನೇ ಸೋಲಿಸಿತು ಎಂದೂ ಅರ್ಥವಾಗುತ್ತದೆ) ಅಲಕಾವತಿಯಿಂದ ಆವರಿಸಲ್ಪಟ್ಟುದರಿಂದ (ಸೊಂಪಾದ ಮುಂಗುರುಳು ಕವಿದಿದ್ದುದರಿಂದ) ಕುಬೇರನಂತೆ ಸೌಂದರ್ಯ ನಿಧಿಯಿಂದ ಕೂಡಿತ್ತು. ನಿರ್ಮಲವಾದ ನೀರಿನಿಂದ ತುಂಬಿರುವ ಸರೋವರದಂತಿದ್ದ ಮುಖ ಮಂಡಲವು, ಆ ಕುಬೇರನ ಕ್ರೀಡಾವನದ ಚೈತ್ರ ರಥದಂತೆ ಹೊಂಗೆ ಮರದ ಎಲೆಯ ಆಕೃತಿಯುಳ್ಳ ತಿಲಕದಿಂದ ಅಲಂಕರಿಸಲ್ಪಟ್ಟು ಶೋಭಿಸಿತು.
ಪದಾರ್ಥ (ಕ.ಗ.ಪ)
ಜಿತ-ಗೆಲ್ಲಲ್ಪಟ್ಟುದು, ರಾಜ-ಚಂದ್ರ, ರಾಜರಾಜ-ಕುಬೇರ, ಅಲಕ-ಮುಂಗುರುಳು, ಆಸ್ಯ-ಮುಖ,
ತಮಾಲಪತ್ರ-ಹೊಂಗೆಮರದ ಎಲೆ, ಹೊಂಗೆಮರದ ಎಲೆಯಂತಿರುವ ತಿಲಕ
ಟಿಪ್ಪನೀ (ಕ.ಗ.ಪ)
ಈ ಪದ್ಯದ ಆಶಯ : ರಾಜಸೂಯಯಾಗದ ಕರ್ತೃತ್ವದ ಅರ್ಹತೆ ಪಡೆಯಬೇಕಾದರೆ ಭೂಮಂಡಲದ ರಾಜರೆಲ್ಲರನ್ನೂ ಗೆಲ್ಲಬೇಕು ಹಾಗೂ ಅವರಿಂದ ಅಪಾರ ನಿಧಿಯನ್ನು ಶೇಖರಿಸಬೇಕು - ಕವಿಯು ಇಲ್ಲಿ ‘ರಾಜ’, ‘ರಾಜಮಂಡಲ’, ‘ರಾಜರಾಜ’ ‘ಅಲಕಾವೇಷ್ಟಿ’, ಇತ್ಯಾದಿ ಉಪಮಾನಗಳನ್ನು ಬಳಸಿರುವುದರಿಂದ, ಮುಖ ಮಂಡಲದ ಲಾವಣ್ಯ ನಿಧಿಯು ಚಂದ್ರನ ಪ್ರಕಾಶವನ್ನು ಸೋಲಿಸಿ, ಕುಬೇರನ ಐಶ್ವರ್ಯವನ್ನು ಮೀರಿಸುತ್ತ, ಸ್ವಯಂವರ ಮಂಟಪದಲ್ಲಿ ನೆರೆದಿದ್ದ ರಾಜರೆಲ್ಲರನ್ನೂ ಜಯಿಸಿ ಬಿಟ್ಟಿತು ಎಂದು ಚಮತ್ಕಾರಕವಾಗಿ ವರ್ಣಿಸಿದ್ದಾನೆ.
ಇಲ್ಲಿ ವ್ಯಕ್ತವಾಗುವ ಮತ್ತೊಂದು ಸ್ವಾರಸ್ಯಾಂಶವು ಹೀಗಿದೆ : ಧರ್ಮರಾಜನು ದ್ರೌಪದಿಯ ವಿವಾಹದ ನಂತರ, ತನ್ನ ತಮ್ಮಂದಿರ ಸಹಾಯದಿಂದ ನಡೆಸಿದ ದಿಗ್ವಿಜಯ, ನಿಧಿಸಂಪಾದನೆ, ರಾಜಸೂಯ ಇತ್ಯಾದಿ ಮಹತ್ಕಾರ್ಯಗಳನ್ನು ದ್ರೌಪದಿಯ ಸ್ವಯಂವರ ಮಂಟಪ ಪ್ರವೇಶದಲ್ಲಿಯೇ ತನ್ನ ಸೌಂದರ್ಯ ಪ್ರಭಾವದಿಂದ ಸಾಧಿಸಿಬಿಟ್ಟಳೆಂಬ ಇಂಗಿತವನ್ನು ಕವಿಯು ಚಮತ್ಕಾರಿಕವಾಗಿ ಸ್ರಚಿಸಿದ್ದಾನೆಂದು ಸಕಾರಣವಾಗಿ ಊಹಿಸುವುದು ಅಸಾಧುವೆನಿಸಲಾರದು.
ಮೂಲ ...{Loading}...
ರಾಜಸೂಯದ ಕರ್ತೃವೋಲ್ ಜಿತ
ರಾಜ ಮಂಡಲವಾಯ್ತು ಮುಖವಿದು
ರಾಜರಾಜನ ಪೋಲ್ದುದಳಕಾವೇಷ್ಟಿ ತತ್ವದಲಿ
ರಾಜನುದ್ಯಾನದವೊಲಾಸ್ಯ ಸ
ರೋಜವಾಯ್ತು ತಮಾಲಪತ್ರ ವಿ
ರಾಜಿತವು ಜನಮೇಜಯ ಕ್ಷಿತಿಪಾಲ ಕೇಳೆಂದ ॥19॥
೦೨೦ ಜನಪ ಕೇಳುಪಲಾಲಿತಾಞ್ಜನ ...{Loading}...
ಜನಪ ಕೇಳುಪಲಾಲಿತಾಂಜನ
ವೆನೆ ಜಿತಾಕ್ಷವಿಪಕ್ಷವಾದುವು
ವಿನುತ ಕರ್ಣಪ್ರಣಯಗಳು ವೃಷಸೇನ ವೈರದಲಿ
ಜನ ವಿಡಂಬನ ತಾರಕಾ ಮಂ
ಡನ ಕದರ್ಥಿತ ಕುಮುದವೆನೆ ಲೋ
ಚನ ಯುಗಳವೊಪ್ಪಿದವು ವರ ಪಾಂಚಾಲನಂದನೆಯ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೇಷ್ಠಳಾದ ದ್ರುಪದ ಕುಮಾರಿಯ ಎರಡು ಕಣ್ಣುಗಳು, ಕಾಡಿಗೆಯಿಂದ ಪೋಷಿತವಾಗಿ , ಈಶ್ವರನ ದ್ವೇಷಿಯಾದ ಮನ್ಮಥನಿಂದ ಪ್ರೇರಿತವಾಗಿದೆಯೋ ಎನ್ನುವಂತೆ ಕಿವಿಗಳನ್ನು ಪ್ರೀತಿಸಿ ಮುಂದುವರಿಯುತ್ತ ಜಿತೇಂದ್ರಿಯರಾದ ಮುನಿಗಳಿಗೂ ಶತ್ರುಗಳಂತಾದವು. ಜನರನ್ನು ಮರುಳುಗೊಳಿಸುವ ಅವು ಮುಖವೆಂಬ ಚಂದ್ರನಿಗೆ ಪ್ರಿಯವಾದ ಕನ್ನೈದಿಲೆಗಳೋ ಎಂಬಂತೆ ಶೋಭಿಸಿದುವು.
ಪದಾರ್ಥ (ಕ.ಗ.ಪ)
ಉಪಲಾಲಿತ-ಪ್ರೀತಿಸಲ್ಪಟ್ಟ, ಅಂಜನ-ಕಾಡಿಗೆ, ಜಿತಾಕ್ಷ-ಜಿತೇಂದ್ರಿಯ, ವಿಪಕ್ಷ-ಶತ್ರು, ಲೋಚನ-ಕಣ್ಣು, ಕುಮುದ-ಕನ್ನೈದಿಲೆ,
ಟಿಪ್ಪನೀ (ಕ.ಗ.ಪ)
ವಿಶೇಷ ಟಿಪ್ಪಣಿ
- ವೃಷ ಸೇನನು ಕರ್ಣನ ಮಗ. ಆತನಿಗೆ ವೈರಿಗಳಾದವರು ಕರ್ಣನಿಗೆ ಪ್ರಿಯರಾಗುವುದು ಅಸಂಭವ ಆದರೆ ಕವಿಯು ತನ್ನ ಚಾತುರ್ಯದಿಂದ ಅದನ್ನು ಸಂಭವನೀಯವೆನಿಸಿದ್ದಾನೆ.
- ದ್ರೌಪದಿಯು ಮನ್ಮಥನ ಜಯಧ್ವಜ ಸ್ವರೂಪಳು (ಹರನೂಳಿಗದ ಹೆಚ್ಚಾಳು ಮಕರ ಧ್ವಜನ ಮೌಳಿಗಡ ಆದಿ ಸಂ 11 ಪದ್ಯ 2) ಮನ್ಮಥನಿಗೂ ಈಶ್ವರನಿಗೂ ಬದ್ಧ ವೈರ ಆದುದರಿಂದ ಈಶ್ವರ ಭಕ್ತರಾದ ಮುನಿಗಳ ಮೇಲೆ ಮನ್ಮಥನಿಗೆ ದ್ವೇಷವುಂಟಾಗುವುದು ಸ್ವಾಭಾವಿಕ. ಮನ್ಮಥನ ಹೂ ಬಿಲ್ಲಿನಂತೆ ಸುಂದರ ರೇಖಾ ವಿನ್ಯಾಸವಾಗಿ ದ್ರೌಪದಿಯ ಕಣ್ಣುಗಳಿಂದ ಕಿವಿಗಳನ್ನು ಚುಂಬಿಸುವಂತೆ ಅಲಂಕಾರವಾಗಿ ಎಳೆದಿದ್ದ ಕಾಡಿಗೆಯು ಕಿತ್ತಡಿಗಳೆನಿಸಿದ ಮುನಿಗಳಿಗೆ ಮುನಿದು, ಕಾಡಿಸಿ, ಅವರು ಅಡಿ ಕೀಳುವಂತೆ ಮಾಡಿತು. ಅಂತೆಯೇ ಮುಖವೆಂಬ ಚಂದ್ರಮಂಡಲಕ್ಕೆ ಪ್ರಿಯವಾದ ಕನ್ನೈದಿಲೆಗಳಂತೆ ಅವಳ ಕಣ್ಣುಗಳು ಶೋಭಿಸಿದುವು.
- “ಉಪಲಾಲಿತಾಂಜನವೆನೆ ಜಿತಾಕ್ಷವಿಪಕ್ಷವಾದವು”
ಕಾಡಿಗೆಯಿಂದ ಲಾಲಿಸಲ್ಪಟ್ಟ ಕಣ್ಣುಗಳ ನೋಟಕ್ಕೆ ಮರುಳಾಗಿ ಶರಣಾಗಿ ದ್ರೌಪದಿಯನ್ನು ಬಯಸಿ ಬಂದ ಕಣ್ಣುಗಳು ಸೋತು ಅವಳ ಕಣ್ಣುಗಳನ್ನು ಹೊಂದಲಾರದೆ ಬೇರೆಯಾದವು.
ಆ ದ್ರೌಪದಿಯ ಕಣ್ಣುಗಳಾದರೋ ಕರ್ಣಾಭಿಮುಖವಾಗಿ ಬೆಳೆಯುತ್ತಿದ್ದವು. (ವೃಷಸೇನೋಭ್ರುವೋರ್ಮಧ್ಯೆ)-ಹುಬ್ಬುಗಳ ನಡುವಿನ ಮೂಗಿನ ಮೇಲ್ಭಾಗವಿಲ್ಲದಿದ್ದರೆ ಆ ಎರಡೂ ಕಣ್ಣುಗಳು ಪರಸ್ಪರ ಆಕರ್ಷಿಸಲ್ಪಟ್ಟು ಒಂದಾಗುತ್ತಿದ್ದವೋ ಏನೋ !
ಅಂಜನ ದೀಪ್ತವಾದ ಇವಳ ಕಣ್ಣು ಎಂಥ ಸಂಯಮಿಯೂ ಕಣ್ಣು ಗುಡ್ಡೆ ಸಿಕ್ಕಿಕೊಂಡವನಂತೆ ಅವಳನ್ನೇ ನೋಡತೊಡಗಬೇಕು ಎಂಬಂತಿದೆ. ಕಿವಿವರೆಗೆ ತೂಗಿರುವ ಕಣ್ಣು, ಜ್ಞಾನ ಬುದ್ಧಿಗಳಿಗೆ ವೈರಿ. ಏಕೆಂದರೆ ಎಲ್ಲ ಮರ್ಯಾದೆ, ಸಾಮಾಜಿಕ ನಡವಳಿಕೆಗಳನ್ನು ಮೀರಿ ನಿಂತು ಮೈಮರೆತು ಅವರೆಲ್ಲ ದ್ರೌಪದಿಯನ್ನೇ ನಟ್ಟಕಣ್ಣಿನಿಂದ ನೋಡುತ್ತಿದ್ದಾರೆ ನೋಡಿದ ಜನಗಳ ಕುಮುದ (ಅಸಂತೋಷ) ಹೋಗಲಾಡಿಸುವಂತೆ ಆ ಕಣ್ಣು ಹೊಳೆಯುತ್ತಿವೆ. (ಅ.ರಾ. ಮಿತ್ರ)
ಮೂಲ ...{Loading}...
ಜನಪ ಕೇಳುಪಲಾಲಿತಾಂಜನ
ವೆನೆ ಜಿತಾಕ್ಷವಿಪಕ್ಷವಾದುವು
ವಿನುತ ಕರ್ಣಪ್ರಣಯಗಳು ವೃಷಸೇನ ವೈರದಲಿ
ಜನ ವಿಡಂಬನ ತಾರಕಾ ಮಂ
ಡನ ಕದರ್ಥಿತ ಕುಮುದವೆನೆ ಲೋ
ಚನ ಯುಗಳವೊಪ್ಪಿದವು ವರ ಪಾಂಚಾಲನಂದನೆಯ ॥20॥
೦೨೧ ಏನನೆಮ್ಬೆನು ಮನಸಿಜನ ...{Loading}...
ಏನನೆಂಬೆನು ಮನಸಿಜನ ಮದ
ದಾನೆಯನು ಮನ್ಮಥನ ರತ್ನ ನಿ
ಧಾನವನು ಟಿಪ್ಪಣವನಂಗಜ ಮಂತ್ರ ಸೂತ್ರಕದ
ಮಾನಿನಿಯರಧಿದೈವವನು ಸು
ಜ್ಞಾನಕನ್ಯಾ ಮಾತೃಭವನ
ಸ್ಥಾನವನು ಮೂಲೋಕ ಮೋಹನ ವಶ್ಯ ಚಿತ್ರಕವ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮನ್ಮಥನ ಸೊಕ್ಕಿದ ಆನೆಯೋ, ಮನ್ಮಥನ ರತ್ನ ನಿಧಿಯೋ, ಮನ್ಮಥನ ಮಂತ್ರ ಸೂತ್ರದ ವ್ಯಾಖ್ಯಾನವೋ, ಸ್ತ್ರೀಯರ ಮುಖ್ಯದೇವತೆಯೋ ಸುಜ್ಞಾನ ಕನ್ಯೆಯ ತಾಯಿಮನೆಯೋ, ಮೂರು ಲೋಕಗಳನ್ನು ಮೋಹಕಗೊಳಿಸಿ ಅಧೀನಗೊಳಿಸಬಹುದಾದ ಚಿತ್ರವೋ ಎನ್ನಿಸಿದ ದ್ರೌಪದಿಯನ್ನು ಏನೆಂದು ವರ್ಣಿಸಲಿ.
ಪದಾರ್ಥ (ಕ.ಗ.ಪ)
ಮನಸಿಜ-ಮನ್ಮಥ, ಮದದಾನೆ-ಸೊಕ್ಕಿದ ಆನೆ, ನಿಧಾನ-ನಿಧಿ, ಟಿಪ್ಪಣ-ವ್ಯಾಖ್ಯಾನ, ಅಂಗಜ-ಮನ್ಮಥ, ಮಾನಿನಿ-ಸ್ತ್ರೀ ,
ಮಾತೃಭವನ ಸ್ಥಾನ-ತಾಯಿಮನೆ, ವಶ್ಯ-ಅಧೀನ ಗೊಳಿಸಬಹುದಾದ, ಚಿತ್ರಕ-ಚಿತ್ರ
ಮೂಲ ...{Loading}...
ಏನನೆಂಬೆನು ಮನಸಿಜನ ಮದ
ದಾನೆಯನು ಮನ್ಮಥನ ರತ್ನ ನಿ
ಧಾನವನು ಟಿಪ್ಪಣವನಂಗಜ ಮಂತ್ರ ಸೂತ್ರಕದ
ಮಾನಿನಿಯರಧಿದೈವವನು ಸು
ಜ್ಞಾನಕನ್ಯಾ ಮಾತೃಭವನ
ಸ್ಥಾನವನು ಮೂಲೋಕ ಮೋಹನ ವಶ್ಯ ಚಿತ್ರಕವ ॥21॥
೦೨೨ ನಾರಿಯನು ಸಂಸಾರಸುಖ ...{Loading}...
ನಾರಿಯನು ಸಂಸಾರಸುಖ ಸಾ
ಕಾರಿಯನು ಜನ ನಯನ ಕಾರಾ
ಗಾರಿಯನು ಮುನಿಧೈರ್ಯ ಸರ್ವಸ್ವಾಪಹಾರಿಯನು
ಧೀರರಿಗೆ ಮಾರಂಕವನು ವರ
ಪಾರಿಕಾಂಕ್ಷಿಯ ಚಿತ್ತಚೌರ್ಯ ವಿ
ಹಾರಿಯನು ದ್ರೌಪದಿಯನಭಿವರ್ಣಿಸುವಡಾರೆಂದ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಂಸಾರ ಸುಖದ ಸಾಕಾರವೋ ಎನ್ನುವಂತಿರುವವಳು, ಜನರ ದೃಷ್ಟಿಯನ್ನು ಸೆರೆಯಾಗಿಸುವವಳು, ಮುನಿಗಳ ಧೈರ್ಯ ಸರ್ವಸ್ವವನ್ನು ಅಪಹರಣ ಮಾಡುವವಳು, ಧೈರ್ಯಶಾಲಿಗಳಿಗೆ ಪ್ರತಿಯುದ್ಧವನ್ನು ಕೊಡುವವಳು, ಶ್ರೇಷ್ಠರಾದ ಮುನಿಗಳ ಚಿತ್ತವನ್ನು ಕದಿಯುವ ವಿಹಾರಿ ದ್ರೌಪದಿಯನ್ನು ವಿಶೇಷವಾಗಿ ವರ್ಣಿಸುವುದಕ್ಕೆ ಯಾರಿಗೆ ಸಾಧ್ಯ ?
ಪದಾರ್ಥ (ಕ.ಗ.ಪ)
ಸಾಕಾರಿ-ಆಕಾರವುಳ್ಳದ್ದು, ಕಾರ್ಯಾಗಾರ-ಸೆರೆಮನೆ, ಧೀರ-ಧೈರ್ಯಶಾಲಿ, ಮಾರಂಕ-ಪ್ರತಿಯುದ್ಧ, ಪಾರಿಕಾಂಕ್ಷಿ-ಬ್ರಹ್ಮಜ್ಞಾನ ಬಯಸುವವನು, ಮುನಿ
ಮೂಲ ...{Loading}...
ನಾರಿಯನು ಸಂಸಾರಸುಖ ಸಾ
ಕಾರಿಯನು ಜನ ನಯನ ಕಾರಾ
ಗಾರಿಯನು ಮುನಿಧೈರ್ಯ ಸರ್ವಸ್ವಾಪಹಾರಿಯನು
ಧೀರರಿಗೆ ಮಾರಂಕವನು ವರ
ಪಾರಿಕಾಂಕ್ಷಿಯ ಚಿತ್ತಚೌರ್ಯ ವಿ
ಹಾರಿಯನು ದ್ರೌಪದಿಯನಭಿವರ್ಣಿಸುವಡಾರೆಂದ ॥22॥
೦೨೩ ನಳಿನಮುಖಿಯರ ಸಕಲಸೃಷ್ಟಿಗೆ ...{Loading}...
ನಳಿನಮುಖಿಯರ ಸಕಲಸೃಷ್ಟಿಗೆ
ಕಳಸವಿದು ಸೌಂದರ್ಯ ವಸನದ
ವಿಲಸವಿದು ರತಿರಮಣವೈಭವ ರತ್ನಕೋಶವಿದು
ಲಲನೆಯರ ಸೀಮಂತಮಣಿ ಜಗ
ದೊಳಗೆ ಚೆಲುವಿನಕಣಿ ತಪೋಧನ
ಕಳಭರಿಗೆ ಸೃಣಿಯೆನಲು ಮೆರೆದುದು ರೂಪವಂಗನೆಯ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಕಲ ಕಮಲಮುಖಿಯರ ಸೃಷ್ಟಿಗೆ ಇದು ಕಳಸ, ಸೌಂದರ್ಯ ವಸ್ತ್ರದ ವಿಲಾಸ ಇದು, ಮನ್ಮಥನ ವೈಭವ, ರತ್ನಗಳಿಂದ ತುಂಬಿದ ಭಂಡಾರ ಇದು. ಸ್ತ್ರೀಯರ ಶಿರೋಮಣಿ, ಜಗತ್ತಿನ ಸೌಂದರ್ಯದ ಕಾಣ್ಕೆ, ಋಷಿಗಳೆಂಬ ಮರಿಯಾನೆಗಳಿಗೆ ಅಂಕುಶ ಎನ್ನುವಂತೆ ದ್ರೌಪದಿಯ ರೂಪು ಶೋಭಿಸಿದುದು.
ಪದಾರ್ಥ (ಕ.ಗ.ಪ)
ವಸನ-ವಸ್ತ್ರ, ವಿಲಸ-ವಿಲಾಸ, ರತಿರಮಣ-ಮನ್ಮಥ, ಕೋಶ-ಭಂಡಾರ, ಸೀಮಂತಮಣಿ-ಬೈತಲೆಯ ಆಭರಣ, ಕಣಿ-ಕಾಣ್ಕೆ, ತಪೋಧನ-ಋಷಿ, ಕಳಭ-ಮರಿಯಾನೆ, ಸೃಣಿ-ಅಂಕುಶ, ಮೆರೆ-ಶೋಭಿಸು
ಮೂಲ ...{Loading}...
ನಳಿನಮುಖಿಯರ ಸಕಲಸೃಷ್ಟಿಗೆ
ಕಳಸವಿದು ಸೌಂದರ್ಯ ವಸನದ
ವಿಲಸವಿದು ರತಿರಮಣವೈಭವ ರತ್ನಕೋಶವಿದು
ಲಲನೆಯರ ಸೀಮಂತಮಣಿ ಜಗ
ದೊಳಗೆ ಚೆಲುವಿನಕಣಿ ತಪೋಧನ
ಕಳಭರಿಗೆ ಸೃಣಿಯೆನಲು ಮೆರೆದುದು ರೂಪವಂಗನೆಯ ॥23॥
೦೨೪ ಹೊಳೆ ಹೊಳೆದುದಾಭರಣ ...{Loading}...
ಹೊಳೆ ಹೊಳೆದುದಾಭರಣ ರತ್ನಾ
ವಳಿಯರುಚಿ ತನ್ಮಣಿ ರುಚಿಯ ಮು
ಕ್ಕುಳಿಸಿತಂಗಚ್ಛವಿ ತದಂಗ ಪ್ರಭೆಯನಡಹಾಯ್ದು
ಥಳಥಳಿಸಿದುದು ವದನ ಮುಖ ಮಂ
ಡಲದ ಕಾಂತಿಯನೊದೆದು ಕಂಗಳ
ಬೆಳಗು ವಿಸಟಂಬರಿದದೇನೆಂಬೆನು ನಿತಂಬಿನಿಯ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಭರಣಗಳು ಪ್ರಕಾಶಿಸಿದುವು. ಮುತ್ತಿನ ಹಾರದ ಕಾಂತಿ ಹಾಗೂ ಅದರಲ್ಲಿನ ರತ್ನಗಳ ಕಾಂತಿಯನ್ನು ಅವಳ ದೇಹದ ಕಾಂತಿ ತಿರಸ್ಕರಿಸಿದುವು. ಆ ದೇಹದ ಪ್ರಕಾಶವನ್ನು ತಡೆದು ಅವಳ ಮುಖ ಹೊಳೆಯಿತು. ಆ ದುಂಡಾದ ಮುಖದ ಕಾಂತಿಯನ್ನು ಮೆಟ್ಟಿ ಅವಳ ಕಣ್ಣುಗಳ ಪ್ರಕಾಶ ಎಲ್ಲೆಲ್ಲೂ ವ್ಯಾಪಿಸಿದುವು, ಅಂಥಹ ಸುಂದರಿಯನ್ನು ಏನೆಂದು ವರ್ಣಿಸಲಿ ?
ಪದಾರ್ಥ (ಕ.ಗ.ಪ)
ಹೊಳೆ-ಪ್ರಕಾಶಿಸು, ರತ್ನಾವಳಿ-ಮುತ್ತಿನಹಾರ, ರುಚಿ-ಕಾಂತಿ, ಛವಿ-ಕಾಂತಿ, ಪ್ರಭೆ-ಪ್ರಕಾಶ, ಅಡಹಾಯ್ದು-ತಡೆದು, ವಿಸಂಟಬರಿ-ವ್ಯಾಪಿಸು
ಮೂಲ ...{Loading}...
ಹೊಳೆ ಹೊಳೆದುದಾಭರಣ ರತ್ನಾ
ವಳಿಯರುಚಿ ತನ್ಮಣಿ ರುಚಿಯ ಮು
ಕ್ಕುಳಿಸಿತಂಗಚ್ಛವಿ ತದಂಗ ಪ್ರಭೆಯನಡಹಾಯ್ದು
ಥಳಥಳಿಸಿದುದು ವದನ ಮುಖ ಮಂ
ಡಲದ ಕಾಂತಿಯನೊದೆದು ಕಂಗಳ
ಬೆಳಗು ವಿಸಟಂಬರಿದದೇನೆಂಬೆನು ನಿತಂಬಿನಿಯ ॥24॥
೦೨೫ ಕಙ್ಗಳಲಿ ಕುಡಿಮೇಳ ...{Loading}...
ಕಂಗಳಲಿ ಕುಡಿಮೇಳ ಹುಬ್ಬಿನ
ಹೊಂಗಿನಲಿ ಭಂಜವಣೆ ಭಾವದ
ಭಂಗಿಯಲಿ ಪತಿಕರಣೆ ಸಕಲ ಸಖೀ ಕದಂಬದಲಿ
ಇಂಗಿತದ ಬಿರಿಮುಗುಳ ಪರಿಮಳ
ವಂಗಹಾರ ವಿಲಾಸವಿಭ್ರಮ
ಭಂಗಿಗಳು ಬಿಬ್ಬೋಕ ಲಲಿತಾದಿಗಳು ದ್ರೌಪದಿಯ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವಳ ಕಣ್ಣುಗಳಲ್ಲಿ ಓರೆನೋಟಗಳ ಸಂಗಮ, ಹುಬ್ಬುಗಳು ದೊಡ್ಡದಾಗಿ ಬಾಗಿರುವಿಕೆ, ಮನಸ್ಸಿನ ರೀತಿ, ಮನೋಗತದ ಅರಳು ಮೊಗ್ಗಿನ ಸುಗಂಧ, ಅಭಿನಯ ಮುದ್ರೆ, ವಿಲಾಸ, ವಿಭ್ರಮ, ಬಿಬ್ಬೋಕ, ಲಲಿತ ಮೊದಲಾದ ಹೆಣ್ಣಿನ ಸ್ವಭಾವ ಜನ್ಯ ಅಲಂಕಾರಗಳ ದ್ರೌಪದಿಯನ್ನು ಎಲ್ಲ ಸಖಿಯರ ಸಮೂಹದಲ್ಲಿ ಮೆಚ್ಚಿಕೆ ಪಡೆಯಿತು.
ಪದಾರ್ಥ (ಕ.ಗ.ಪ)
ಕುಡಿಮೇಳ-ಓರೆನೋಟಗಳ ಸಂಗಮ, ಹೊಂಗು-ದೊಡ್ಡದಾಗು, ಭಂಜವಣೆ-ಬಾಗುವಿಕೆ, ಪತಿಕರಣೆ-ಮೆಚ್ಚಿಕೆ, ಕದಂಬ-ಸಮೂಹ, ಇಂಗಿತ-ಮನೋಗತ, ಬಿರಿಮುಗುಳು-ಅರಳುಮೊಗ್ಗು, ಅಂಗಹಾರ-ಅಭಿನಯದ ಮುದ್ರೆ
ಟಿಪ್ಪನೀ (ಕ.ಗ.ಪ)
ಅಂಗಹಾರ-ಸ್ತ್ರೀಯರ ಹತ್ತು ಸ್ವಭಾವಜನ್ಯ ಅಲಂಕಾರಗಳು - ಲೀಲಾ, ವಿಲಾಸ, ವಿಚ್ಛಿತ್ತಿ, ವಿಭ್ರಮ, ಕಿಲಕಿಂಚಿತ, ಮೊಟ್ಟಾಯಿತ, ಕುಟ್ಟಮಿತ, ಬಿಬ್ಬೋಕ, ಲಲಿತ, ವಿಹೃತ
ನೋಡಿ ಲಾಸ್ಯರಂಜನ- ಸಿಂಹೇಂದ್ರ ಭೂಪಾಲ
ಮೂಲ ...{Loading}...
ಕಂಗಳಲಿ ಕುಡಿಮೇಳ ಹುಬ್ಬಿನ
ಹೊಂಗಿನಲಿ ಭಂಜವಣೆ ಭಾವದ
ಭಂಗಿಯಲಿ ಪತಿಕರಣೆ ಸಕಲ ಸಖೀ ಕದಂಬದಲಿ
ಇಂಗಿತದ ಬಿರಿಮುಗುಳ ಪರಿಮಳ
ವಂಗಹಾರ ವಿಲಾಸವಿಭ್ರಮ
ಭಂಗಿಗಳು ಬಿಬ್ಬೋಕ ಲಲಿತಾದಿಗಳು ದ್ರೌಪದಿಯ ॥25॥
೦೨೬ ವರವಸನ್ತನ ಬರವು ...{Loading}...
ವರವಸಂತನ ಬರವು ಜಾಜಿಯ
ಬಿರಿಮುಗುಳು ಮರಿದುಂಬಿಗಳ ನಯ
ಸರದದನಿ ಕರಿಕಳಭಲೀಲೆ ನವೇಕ್ಷು ರಸಧಾರೆ
ಮೆರೆವವೋಲ್ ಹೊಸಹೊಗರ ಜವ್ವನ
ಸಿರಿಯ ಜೋಡಣೆ ಜನಮನವನಾ
ವರಿಸಿದುದು ನಿಪ್ಪಸರದಲಿ ಪಾಂಚಾಲ ನಂದನೆಯ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೇಷ್ಠ ವಸಂತಋತುವಿನ ಬರವು, ಜಾಜಿಯ ಮೊಗ್ಗಿನ ಅರಳುವಿಕೆ, ಮರಿದುಂಬಿಗಳ ಮಧುರವಾದ ಧ್ವನಿ, ಮರಿಯಾನೆಯ ಕ್ರೀಡೆ, ಹೊಸದಾದ ಕಬ್ಬಿನ ರಸಧಾರೆ,-ಇವು ಮನೋಹರವಾಗಿ ಮೆರೆಯುವಂತೆ, ಪಾಂಚಾಲನ ಪುತ್ರಿ ದ್ರೌಪದಿಯ ಹೊಸಕಾಂತಿ ಯೌವನಸಿರಿಯೊಂದಿಗೆ ಸೇರಿ ಜನರ ಮನಸ್ಸನ್ನು ಸಂಭ್ರಮದಲ್ಲಿ ವ್ಯಾಪಿಸಿತು.
ಪದಾರ್ಥ (ಕ.ಗ.ಪ)
ನಯಸರ-ಮಧುರ, ಕರಿಕಳಭ-ಮರಿಯಾನೆ, ಲೀಲೆ-ಕ್ರೀಡೆ, ಇಕ್ಷು-ಕಬ್ಬು, ಹೊಗರು-ಕಾಂತಿ, ನಿಪ್ಪಸರ-ಸಂಭ್ರಮ, ಆವರಿಸು-ವ್ಯಾಪಿಸು
ಮೂಲ ...{Loading}...
ವರವಸಂತನ ಬರವು ಜಾಜಿಯ
ಬಿರಿಮುಗುಳು ಮರಿದುಂಬಿಗಳ ನಯ
ಸರದದನಿ ಕರಿಕಳಭಲೀಲೆ ನವೇಕ್ಷು ರಸಧಾರೆ
ಮೆರೆವವೋಲ್ ಹೊಸಹೊಗರ ಜವ್ವನ
ಸಿರಿಯ ಜೋಡಣೆ ಜನಮನವನಾ
ವರಿಸಿದುದು ನಿಪ್ಪಸರದಲಿ ಪಾಂಚಾಲ ನಂದನೆಯ ॥26॥
೦೨೭ ಆರತಿಗಳೆತ್ತಿದರು ಬಳಿಕು ...{Loading}...
ಆರತಿಗಳೆತ್ತಿದರು ಬಳಿಕು
ಪ್ಪಾರತಿಯ ಹಾಯ್ಕಿದರು ಮುತ್ತಿನ
ಸಾರ ಸೇಸೆಯ ಸೂಸಿ ಹರಸಿ ಸುವಾಸಿನೀನಿಕರ
ಚಾರುಮುಕುರವ ನೋಡಿ ನಿಂದಳು
ಭಾರಣೆಯ ಗರುವಾಯಿಯಲಿ ಜಂ
ಬೀರಫಲವನು ಕೊಂಡಳಂಗನೆ ವಿಪ್ರಮಂತ್ರದಲಿ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುಮಂಗಲಿಯ ಸಮೂಹದವರು, ದ್ರೌಪದಿಗೆ ಆರತಿಗಳನ್ನು ಎತ್ತಿದರು. ದೃಷ್ಟಿ ದೋಷ ಪರಿಹಾರಕ್ಕಾಗಿ ಉಪ್ಪಿನ ಆರತಿಯನ್ನು ಎತ್ತಿ ಹಾಕಿದರು. ಶ್ರೇಷ್ಠವಾದ ಮುತ್ತಿನ ಮಂಗಳಾಕ್ಷತೆಯನ್ನು ಚೆಲ್ಲಿ ಹಾರೈಸಿದರು. ಆ ಬಳಿಕ ವಿಪ್ರರ ಮಂತ್ರ ಘೋಷ ಮೆರೆಯುತ್ತಿರಲು, ಸುಂದರವಾದ ಕನ್ನಡಿಯನ್ನು ನೋಡಿ ನಿಂತಳು. ಘನತೆಯ ಸೊಗಸಿನಲ್ಲಿ ನಿಂಬೆಹಣ್ಣನ್ನು ವಿಪ್ರರ ಮಂತ್ರದೊಂದಿಗೆ ದ್ರೌಪದಿ ಕೈಕೊಂಡಳು.
ಪದಾರ್ಥ (ಕ.ಗ.ಪ)
ಸುವಾಸಿನಿ-ಸುಮಂಗಲಿ, ಉಪ್ಪಾರತಿ-ದೃಷ್ಟಿ ದೋಷ ಪರಿಹಾರಕ್ಕಾಗಿ ಎತ್ತುವ ಉಪ್ಪಿನ ಆರತಿ, ಸೇಸೆ-ಮಂಗಳಾಕ್ಷತೆ, ಮುಕುರ-ಕನ್ನಡಿ, ಭಾರಣೆ-ಘನತೆ, ಗರುವಾಯಿ-ಸೊಗಸು, ಜಂಬೀರಫಲ-ನಿಂಬೆಹಣ್ಣು
ಮೂಲ ...{Loading}...
ಆರತಿಗಳೆತ್ತಿದರು ಬಳಿಕು
ಪ್ಪಾರತಿಯ ಹಾಯ್ಕಿದರು ಮುತ್ತಿನ
ಸಾರ ಸೇಸೆಯ ಸೂಸಿ ಹರಸಿ ಸುವಾಸಿನೀನಿಕರ
ಚಾರುಮುಕುರವ ನೋಡಿ ನಿಂದಳು
ಭಾರಣೆಯ ಗರುವಾಯಿಯಲಿ ಜಂ
ಬೀರಫಲವನು ಕೊಂಡಳಂಗನೆ ವಿಪ್ರಮಂತ್ರದಲಿ ॥27॥
೦೨೮ ಮುನ್ದೆ ಪಾಯವಧಾರು ...{Loading}...
ಮುಂದೆ ಪಾಯವಧಾರು ಸತಿಯರ
ಸಂದಣಿಯ ಸಾಲಿನಲಿ ದಂಡಿಗೆ
ಗಿಂದುಮುಖಿ ಬಂದಳು ಸಿತಾಬ್ಜಕೆ ಲಕ್ಷ್ಮಿಯಂದದಲಿ
ಹಿಂದೆ ಮುಂದಿಕ್ಕೆಲದ ನಾರೀ
ವೃಂದ ನೆರೆದುದು ವೀರ ಪಟಹದ
ದುಂದುಭಿಯ ಡಂಬರದ ರವವಳ್ಳಿರಿದುದಂಬರವ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಂದುಗಡೆ ಸ್ತ್ರೀ ಸಮೂಹದ ಸಾಲು ಕೊಂಡಾಟದ ನುಡಿಗಳನ್ನು ಘೋಷಿಸುತ್ತಿರಲು, ಚಂದ್ರಮುಖಿಯಾದ ದ್ರೌಪದಿ, ಶ್ವೇತಕಮಲಕ್ಕೆ ಲಕ್ಷ್ಮಿ ಬರುವಂತೆ ಪಲ್ಲಕ್ಕಿಗೆ ಬಂದಳು. ಹಿಂದೆ ಮುಂದೆ, ಎರಡೂ ಪಕ್ಕಗಳಲ್ಲಿ ಸ್ತ್ರೀ ಸಮೂಹ ಸೇರಿತು, ರಣವಾದ್ಯ ನಗಾರಿ, ಭೇರಿಗಳ ಆಡಂಬರದ ಶಬ್ದ ಗಗನವನ್ನೂ ನಡುಗಿಸಿತು.
ಮೂಲ ...{Loading}...
ಮುಂದೆ ಪಾಯವಧಾರು ಸತಿಯರ
ಸಂದಣಿಯ ಸಾಲಿನಲಿ ದಂಡಿಗೆ
ಗಿಂದುಮುಖಿ ಬಂದಳು ಸಿತಾಬ್ಜಕೆ ಲಕ್ಷ್ಮಿಯಂದದಲಿ
ಹಿಂದೆ ಮುಂದಿಕ್ಕೆಲದ ನಾರೀ
ವೃಂದ ನೆರೆದುದು ವೀರ ಪಟಹದ
ದುಂದುಭಿಯ ಡಂಬರದ ರವವಳ್ಳಿರಿದುದಂಬರವ ॥28॥
೦೨೯ ಸಾಲಝಲ್ಲರಿ ಮುಸುಕಿದವು ...{Loading}...
ಸಾಲಝಲ್ಲರಿ ಮುಸುಕಿದವು ಸಮ
ಪಾಳಿಯಲಿ ಸೀಗುರಿಗಳಾಡಿದ
ವಾಲಿಯವಗಾಹಿಸದು ನೆಲನೆನಿತನಿತು ವಳಯದಲಿ
ಬಾಲೆಯರ ಮುಗ್ಧೆಯರನತಿ ಘಾ
ತಾಳೆಯರ ಕಡೆಗಣ್ಣ ಢಾಳದ
ಚಾಳೆಯರ ಚದುರೆಯರನಲ್ಲದೆ ಕಾಣೆ ನಾನೆಂದ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಲ್ಲಕ್ಕಿಯ ಸುತ್ತಲ ಪ್ರದೇಶದಲ್ಲಿ ನೆಲವೆಷ್ಟಿತ್ತೋ ಅಷ್ಟೂ ಪ್ರದೇಶದಲ್ಲಿ ಸಾಲುಸಾಲಾಗಿ ಮಕರ ತೋರಣಗಳು ಆವರಿಸಿದುವು. ಸಮಾನವಾದ ಸಾಲಿನಲ್ಲಿ ಚಾಮರಗಳು ಆಡಿದುವು. ಅವುಗಳ ನಡುವೆ ಕಣ್ಣಿನ ನೋಟ ತೂರಿ ಹೋಗದಾಯಿತು. ಬಾಲಕಿಯರು, ಕಪಟವನ್ನು ತಿಳಿಯದವರು, ಅತಿವಂಚಕಿಯರು, ಓರೆನೋಟದ ಕಾಂತಿಯ ಚಮತ್ಕಾರದ ನಡಗೆಯವರು, ಜಾಣೆಯರು ಇವರನ್ನಲ್ಲದೆ ಬೇರೆಯಾರನ್ನು ಅಲ್ಲಿ ಕಾಣುವ ಹಾಗಿಲ್ಲ.
ಪದಾರ್ಥ (ಕ.ಗ.ಪ)
ಝಲ್ಲರಿ-ಮಕರ ತೋರಣ, ಸೀಗುರಿ-ಚಾಮರ, ಘಾತಾಳೆ-ವಂಚಕಿ, ಢಾಳ-ಕಾಂತಿ, ಚಾಳೆಯ-ಚಮತ್ಕಾರದ ನಡಗೆ, ಚದುರೆ-ಜಾಣೆ
ಮೂಲ ...{Loading}...
ಸಾಲಝಲ್ಲರಿ ಮುಸುಕಿದವು ಸಮ
ಪಾಳಿಯಲಿ ಸೀಗುರಿಗಳಾಡಿದ
ವಾಲಿಯವಗಾಹಿಸದು ನೆಲನೆನಿತನಿತು ವಳಯದಲಿ
ಬಾಲೆಯರ ಮುಗ್ಧೆಯರನತಿ ಘಾ
ತಾಳೆಯರ ಕಡೆಗಣ್ಣ ಢಾಳದ
ಚಾಳೆಯರ ಚದುರೆಯರನಲ್ಲದೆ ಕಾಣೆ ನಾನೆಂದ ॥29॥
೦೩೦ ನಿರಿದಲೆಯ ಚೊಲ್ಲೆಯದ ...{Loading}...
ನಿರಿದಲೆಯ ಚೊಲ್ಲೆಯದ ತುಂಬಿಯ
ಮರಿಗುರುಳ ಬೈತಲೆಯ ಮುತ್ತಿನ
ಹೆರೆನೊಸಲ ನಿಡು ಹುಬ್ಬುಗಳ ಢಾಳಿಸುವ ಕದಪುಗಳ
ತುರುಗೆವೆಯ ನಿಟ್ಟೆಸಳುಗಂಗಳ
ಮೆರೆವ ಸುಲಿಪಲ್ಲುಗಳೆಸೆವ ನು
ಣ್ಗೊರಳ ನಳಿತೋಳುಗಳ ನೀರೆಯರೈದಿತೊಗ್ಗಿನಲಿ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುಂಬಿಮರಿಯಂತೆ ಕಪ್ಪಾಗಿರುವ ತುರುಬಿನ ಕೊನೆಯ ಗುಂಗುರು ಕೂದಲಿನ ತಲೆ, ಮುತ್ತಿನ ಬೈತಲೆ ಆಭರಣದ, ವಿಶಾಲವಾದ ಹಣೆಯ, ಉದ್ದವಾದ ಹುಬ್ಬುಗಳು, ಕಾಂತಿಯುಕ್ತವಾದ ಕಪೋಲಗಳು ದಟ್ಟವಾದ ಕಣ್ಣಿನ ರೆಪ್ಪೆಗಳು, ವಿಶಾಲವಾದ ದಳದಂತೆ ಕಣ್ಣುಗಳು, ಹೊಳೆಯುವ ಶುಭ್ರವಾದ ಹಲ್ಲುಗಳು, ಶೋಭಿಸುವ ನುಣುಪಾದ ಕುತ್ತಿಗೆ, ಮೃದುವಾದ ತೋಳುಗಳು ಇವುಗಳಿಂದ ಪ್ರಕಾಶಿಸುವ ಸುಂದರಿಯರು ಒಟ್ಟಾಗಿ ನಡೆದರು.
ಪದಾರ್ಥ (ಕ.ಗ.ಪ)
ಚೊಲ್ಲೆಯ-ತುರುಬಿನ ಕೊನೆ, ನಿರಿದಲೆ-ಗುಂಗುರು ಕೂದಲಿನ ತಲೆ, ನೊಸಲು-ಹಣೆ, ತುರುಗೆವೆ-ದಟ್ಟವಾದ ಕಣ್ಣಿನ ರೆಪ್ಪೆ,
ಸುಲಿಪಲ್ಲು-ಶುಭ್ರವಾದ ಹಲ್ಲು, ನುಣ್ಗೊರಳು-ನುಣುಪಾದ ಕುತ್ತಿಗೆ, ನೀರೆಯರು-ಸುಂದರಿಯರು
ಮೂಲ ...{Loading}...
ನಿರಿದಲೆಯ ಚೊಲ್ಲೆಯದ ತುಂಬಿಯ
ಮರಿಗುರುಳ ಬೈತಲೆಯ ಮುತ್ತಿನ
ಹೆರೆನೊಸಲ ನಿಡು ಹುಬ್ಬುಗಳ ಢಾಳಿಸುವ ಕದಪುಗಳ
ತುರುಗೆವೆಯ ನಿಟ್ಟೆಸಳುಗಂಗಳ
ಮೆರೆವ ಸುಲಿಪಲ್ಲುಗಳೆಸೆವ ನು
ಣ್ಗೊರಳ ನಳಿತೋಳುಗಳ ನೀರೆಯರೈದಿತೊಗ್ಗಿನಲಿ ॥30॥
೦೩೧ ತೋರ ಮೊಲೆಗಳ ...{Loading}...
ತೋರ ಮೊಲೆಗಳ ನಲಿವ ನಡು ಪೊರ
ವಾರಗಳ ನುಣ್ದೊಡೆಯ ಕಿರುದೊಡೆ
ಯೋರಣದ ಹಾವುಗೆಯ ಹೆಜ್ಜೆಯ ಹಂಸೆಗಳ ಗತಿಯ
ನೀರೆಯರ ಮೈಗಂಪುಗಳ ತನಿ
ಸೂರೆಗೆಳಸುವ ತುಂಬಿಗಳ ಕೈ
ವಾರಗಳ ಕಡು ಗರುವೆಯರ ನೆರೆದುದು ಸಖೀನಿವಹ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದಪ್ಪಮೊಲೆಗಳು, ಬಳುಕುವ ಸೊಂಟ, ಜಘನಗಳು, ನುಣುಪಾದ ತೊಡೆ, ಕಿರುತೊಡೆಗಳು , ಅಚ್ಚುಕಟ್ಟಾದ ಪಾದುಕೆಯನ್ನು ಮೆಟ್ಟಿ ಹಂಸಗತಿಯಿಂದ ನಡೆಯುವ, ಸುಂದರಿಯರ ಮೈಯ ಸುಗಂಧದ ಸವಿಯನ್ನು ಲೂಟಿ ಮಾಡಲು ಬಂದೆರಗುವ ತುಂಬಿಗಳನ್ನು ನಿವಾರಿಸಿಕೊಳ್ಳುವ ಅತಿ ಚೆಲುವೆಯರ ಸಖೀ ಸಮೂಹ ಸೇರಿದುದು.
ಪದಾರ್ಥ (ಕ.ಗ.ಪ)
ಪೊರವಾರ-ಜಘನ, ಹಾವುಗೆ-ಪಾದುಕೆ, ನೀರೆ-ಸುಂದರಿ, ತನಿ-ಸವಿ, ಸೂರೆಗೆಳಸು-ಲೂಟಿ ಮಾಡ ಬಯಸು, ಗರುವೆ-ಚೆಲುವೆ
ಮೂಲ ...{Loading}...
ತೋರ ಮೊಲೆಗಳ ನಲಿವ ನಡು ಪೊರ
ವಾರಗಳ ನುಣ್ದೊಡೆಯ ಕಿರುದೊಡೆ
ಯೋರಣದ ಹಾವುಗೆಯ ಹೆಜ್ಜೆಯ ಹಂಸೆಗಳ ಗತಿಯ
ನೀರೆಯರ ಮೈಗಂಪುಗಳ ತನಿ
ಸೂರೆಗೆಳಸುವ ತುಂಬಿಗಳ ಕೈ
ವಾರಗಳ ಕಡು ಗರುವೆಯರ ನೆರೆದುದು ಸಖೀನಿವಹ ॥31॥
೦೩೨ ಕೀಲ ಕಡಗದ ...{Loading}...
ಕೀಲ ಕಡಗದ ವಜ್ರಲಹರಿಯ
ಜೋಲೆಯದ ಕಂಕಣದ ರವೆಯದ
ತೋಳಬಂದಿಯ ಕೊರಳ ತ್ರಿಸರದ ಬೆರಳ ಮುದ್ರಿಕೆಯ
ನೀಲ ರತುನದ ಪದಕ ಮಾಣಿಕ
ದೋಲೆಗಳ ಮೂಗುತಿಯ ಮುತ್ತಿನ
ಮೇಲು ಶೃಂಗಾರದ ಸಖೀಜನ ಸಂದಣಿಸಿತಲ್ಲಿ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೈ ಬಳೆಗಳು, ವಜ್ರಕಾಂತಿಯ ತೂಗಾಡುವ ಬಳೆಗಳ ಶಬ್ದದ, ತೋಳಿಗೆ ಹಾಕಿಕೊಂಡ ಆಭರಣಗಳು, ಮೂರು ಎಳೆಗಳಿಂದ ಕೂಡಿದ ಕೊರಳಿನ ಸರ, ಬೆರಳಲ್ಲಿನ ಉಂಗುರ, ನೀಲರತ್ನದ ಪದಕ, ಮಾಣಿಕ್ಯದ ಓಲೆಗಳು, ಮುತ್ತಿನ ಮೂಗುತಿ - ನಾನಾ ಬಗೆಯ ಆಭರಣಗಳನ್ನಿಟ್ಟು ಮೇಲು ಶೃಂಗಾರದಿಂದ ಸಖೀ ಸಮೂಹ ಅಲ್ಲಿ ಗುಂಪು ಗೂಡಿತು.
ಪದಾರ್ಥ (ಕ.ಗ.ಪ)
ಕಡಗ-ಕೈಬಳೆ,
ಜೋಲೆಯ-ತೂಗಾಡುವ,
ತ್ರಿಸರ-ಮೂರು ಎಳೆಯ ಸರ,
ಮುದ್ರಿಕೆ-ಉಂಗುರ,
ಸಂದಣಿಸು-ಗುಂಪುಗೂಡು
ಮೂಲ ...{Loading}...
ಕೀಲ ಕಡಗದ ವಜ್ರಲಹರಿಯ
ಜೋಲೆಯದ ಕಂಕಣದ ರವೆಯದ
ತೋಳಬಂದಿಯ ಕೊರಳ ತ್ರಿಸರದ ಬೆರಳ ಮುದ್ರಿಕೆಯ
ನೀಲ ರತುನದ ಪದಕ ಮಾಣಿಕ
ದೋಲೆಗಳ ಮೂಗುತಿಯ ಮುತ್ತಿನ
ಮೇಲು ಶೃಂಗಾರದ ಸಖೀಜನ ಸಂದಣಿಸಿತಲ್ಲಿ ॥32॥
೦೩೩ ವಿಲಸದೇಕಾವಳಿಯ ಮುತ್ತಿನ ...{Loading}...
ವಿಲಸದೇಕಾವಳಿಯ ಮುತ್ತಿನ
ತಿಲಕ ಸೂಡಗ ಪಾಯವಟ್ಟದ
ಲಲಿತ ಬಂಧದ ವಜ್ರಲಹರಿಯ ತಾರಕಾವಳಿಯ
ಹೊಳೆವ ಕಾಂಚಿಯ ಕಿಂಕಿಣಿಯ ಸಂ
ಕುಲದ ನೇವುರ ವೀರ ಮುದ್ರಾ
ವಳಿಯ ಚರಣಾಭರಣದಬಲೆಯರೈದಿತೊಗ್ಗಿನಲಿ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚೆಲುವಿನ ಒಂದೆಳೆಯ ಸರ, ಮುತ್ತಿನ ತಿಲಕ, ಕಡಗ, ಕಾಲಿನ ಆಭರಣಗಳ ಸುಂದರ ಜೋಡಣೆಯ, ವಜ್ರಕಾಂತಿಯ ನಕ್ಷತ್ರದಂತೆ ಹೊಳೆಯುವ ಸರಗಳ, ಪ್ರಕಾಶಿಸುವ ಡಾಬಿನ ಗೆಜ್ಜೆಗಳ ಸಮೂಹ ನೂಪುರ, ಉಂಗುರ ಮೊದಲಾದ ಆಭರಣಗಳನ್ನು ತೊಟ್ಟಿರುವ ಹೆಂಗಸರು ಸಂತೋಷದಿಂದ ಬಂದರು.
ಪದಾರ್ಥ (ಕ.ಗ.ಪ)
ಏಕಾವಳಿ-ಒಂದೆಳೆಯಸರ, ಸೂಡಗ-ಕಡಗ, ಪಾಯವಟ್ಟ-ಕಾಲಿನ ಆಭರಣ, ಬಂಧ-ಜೋಡಣೆ, ಕಾಂಚಿ-ಡಾಬು, ಕಿಂಕಿಣಿ-ಗೆಜ್ಜೆ, ನೇವುರ-ನೂಪುರ, ಒಗ್ಗು-ಸಂತೋಷ
ಮೂಲ ...{Loading}...
ವಿಲಸದೇಕಾವಳಿಯ ಮುತ್ತಿನ
ತಿಲಕ ಸೂಡಗ ಪಾಯವಟ್ಟದ
ಲಲಿತ ಬಂಧದ ವಜ್ರಲಹರಿಯ ತಾರಕಾವಳಿಯ
ಹೊಳೆವ ಕಾಂಚಿಯ ಕಿಂಕಿಣಿಯ ಸಂ
ಕುಲದ ನೇವುರ ವೀರ ಮುದ್ರಾ
ವಳಿಯ ಚರಣಾಭರಣದಬಲೆಯರೈದಿತೊಗ್ಗಿನಲಿ ॥33॥
೦೩೪ ಭ್ರೂಲತೆಯ ಬಿಲುಗಳ ...{Loading}...
ಭ್ರೂಲತೆಯ ಬಿಲುಗಳ ಕಟಾಕ್ಷದ
ಕೋಲ ಹೊದೆಗಳ ಬಾಸೆಗಳ ಕರ
ವಾಳಿಗಳ ಕತ್ತುರಿಯ ತಿಲಕದ ಹರಿಗೆ ಹಲಗೆಗಳ
ತೋಳುಗಳ ಲೌಡಿಗಳ ಸೆಳ್ಳುಗು
ರೋಳಿಗಳ ಸುರಗಿಗಳ ಮನ್ಮಥ
ನಾಳು ನಡೆದುದು ದ್ರೌಪದಿಯ ದಂಡಿಗೆಯ ಬಳಸಿನಲಿ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹುಬ್ಬಿನ ಬಳ್ಳಿಯೆಂಬ ಬಿಲ್ಲುಗಳು, ಓರೆನೋಟವೆಂಬ ಬಾಣದ ಬತ್ತಳಿಕೆಗಳು, ರೋಮರಾಜಿಯೆಂಬ ಖಡ್ಗಗಳು, ಕಸ್ತೂರಿ ತಿಲಕದ ಗುರಾಣಿಗಳು. ತೋಳುಗಳೆಂಬ ಕಬ್ಬಿಣದ ಆಯುಧಗಳು, ಚೂಪಾದ ಉಗುರುಗಳೆಂಬ ಕಠಾರಿಗಳು ಈ ಪರಿಯ ಆಯುಧಗಳನ್ನು ಧರಿಸಿದ ಮನ್ಮಥನ ಸೈನ್ಯ ದ್ರೌಪದಿಯ ಪಲ್ಲಕ್ಕಿಯ ಸುತ್ತಲೂ ನಡೆಯಿತು.
ಪದಾರ್ಥ (ಕ.ಗ.ಪ)
ಭ್ರೂಲತೆ-ಹುಬ್ಬಿನ ಬಳ್ಳಿ, ಕಟಾಕ್ಷ-ಓರೆನೋಟ, ಕೋಲಹೊದೆ-ಬಾಣಗಳ ಬತ್ತಳಿಕೆ, ಬಾಸೆ-ರೋಮರಾಜಿ, ಕರವಾಳಿ-ಖಡ್ಗ,
ಹರಿಗೆ-ಗುರಾಣಿ, ಲೌಡಿ-ಕಬ್ಬಿಣದ ಆಯುಧ, ಸೆಳ್ಳು-ಚೂಪಾದ, ಸುರಗಿ-ಕಠಾರಿ
ಮೂಲ ...{Loading}...
ಭ್ರೂಲತೆಯ ಬಿಲುಗಳ ಕಟಾಕ್ಷದ
ಕೋಲ ಹೊದೆಗಳ ಬಾಸೆಗಳ ಕರ
ವಾಳಿಗಳ ಕತ್ತುರಿಯ ತಿಲಕದ ಹರಿಗೆ ಹಲಗೆಗಳ
ತೋಳುಗಳ ಲೌಡಿಗಳ ಸೆಳ್ಳುಗು
ರೋಳಿಗಳ ಸುರಗಿಗಳ ಮನ್ಮಥ
ನಾಳು ನಡೆದುದು ದ್ರೌಪದಿಯ ದಂಡಿಗೆಯ ಬಳಸಿನಲಿ ॥34॥
೦೩೫ ತೋರ ಮೊಲೆಗಳ ...{Loading}...
ತೋರ ಮೊಲೆಗಳ ದಂತಿ ಘಟೆಗಳ
ಚಾರು ಜಘನದ ಜೋಡಿಸಿದ ಹೊಂ
ದೇರುಗಳ ಸುಳಿಗುರುಳುಗಳ ಝಲ್ಲರಿಯ ಝಾಡಿಗಳ
ಚಾರುನಯನದ ಚಪಲಗತಿಗಳ
ವಾರುವಂಗಳ ಮೇಲು ವಸನದ
ಸಾರ ಸಿಂಧದ ಸೇನೆ ನಡೆದುದು ಸತಿಯ ಬಳಸಿನಲಿ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತೋರ ಮೊಲೆಗಳೇ ಆನೆಗಳ ಪಡೆ, ಸುಂದರ ಜಘನವೇ ಜೋಡಿಸಿದ ಚಿನ್ನದ ತೇರುಗಳು, ಗುಂಗುರು ಕೂದಲುಗಳೇ ಕಾಂತಿಯುಕ್ತವಾದ ಮಕರ ತೋರಣಗಳು, ಸುಂದರ ಕಣ್ಣುಗಳ ಚಂಚಲತೆಯೇ ಕುದುರೆಗಳು, ಶುಭ್ರವಾದ ಮೇಲು ವಸ್ತ್ರಗಳೇ ಪತಾಕೆಗಳು-ಈ ರೀತಿಯ ಸೇನೆ ದ್ರೌಪದಿಯ ಸುತ್ತುವರಿದು ನಡೆಯಿತು.
ಪದಾರ್ಥ (ಕ.ಗ.ಪ)
ದಂತಿ-ಆನೆ, ಘಟೆ-ಪಡೆ, ಝಾಡಿ-ಕಾಂತಿ, ಝಲ್ಲರಿ-ಮಕರ ತೋರಣ, ವಾರುವ-ಕುದುರೆ, ಸಿಂಧ-ಪತಾಕೆ, ಬಳಸು-ಸುತ್ತುವರಿ
ಮೂಲ ...{Loading}...
ತೋರ ಮೊಲೆಗಳ ದಂತಿ ಘಟೆಗಳ
ಚಾರು ಜಘನದ ಜೋಡಿಸಿದ ಹೊಂ
ದೇರುಗಳ ಸುಳಿಗುರುಳುಗಳ ಝಲ್ಲರಿಯ ಝಾಡಿಗಳ
ಚಾರುನಯನದ ಚಪಲಗತಿಗಳ
ವಾರುವಂಗಳ ಮೇಲು ವಸನದ
ಸಾರ ಸಿಂಧದ ಸೇನೆ ನಡೆದುದು ಸತಿಯ ಬಳಸಿನಲಿ ॥35॥
೦೩೬ ಯತಿಗಳಿಗೆ ಮೊನೆದೋರಿ ...{Loading}...
ಯತಿಗಳಿಗೆ ಮೊನೆದೋರಿ ತಣಿಸದು
ವ್ರತಿಗಳಿಗೆ ಬೀರುತ ಸಮಾಧಿ
ಸ್ಥಿತರ ಮೂಗಿನ ಮೇ¯ಡಾಯಧ ಧಾರೆಗಳನೆಳೆದು
ಶ್ರುತಿವಿಹಿತ ಸತ್ಕರ್ಮಿಗಳ ದೀ
ಕ್ಷಿತರ ಮತಿಯಲಿ ತಮ್ಮ ಮುದ್ರಾಂ
ಕಿತವನೊತ್ತುತ ಮೀರಿ ನಡೆದುದು ಯುವತಿಜನ ಕಟಕ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತರುಣಿಯರ ಸಮೂಹ, ಯತಿಗಳಿಗೂ, ತಪಸ್ವಿಗಳಿಗೂ ಅಡ್ಡಿಯನ್ನು ಉಂಟು ಮಾಡಿ ತೃಪ್ತಿ ಪಡದಾಯ್ತು. ಸಮಾಧಿಯಲ್ಲಿ ನೆಲಸಿದವರ ಮೂಗಿನ ಮೇಲೆ ಖಡ್ಗದ ಧಾರೆಗಳನ್ನೆಳೆಯಿತು. ವೇದವಿಹಿತವಾದ ಸತ್ಕರ್ಮಿಗಳ ಮತ್ತು ದೀಕ್ಷಿತರ ಬುದ್ಧಿಯಲ್ಲಿ ತಮ್ಮ ಮುದ್ರಾಂಕಿತವನ್ನು ಒತ್ತಿ ಯುವತಿಯರ ಸಮೂಹ ಮುಂದೆ ನಡೆಯಿತು.
ಪದಾರ್ಥ (ಕ.ಗ.ಪ)
ಮೊನೆದೋರಿ-ಅಡ್ಡಿಯನ್ನುಂಟು ಮಾಡಿ,
ಅಡಾಯುಧ-ಖಡ್ಗ,
ಕಟಕ-ಸಮೂಹ
ಮೂಲ ...{Loading}...
ಯತಿಗಳಿಗೆ ಮೊನೆದೋರಿ ತಣಿಸದು
ವ್ರತಿಗಳಿಗೆ ಬೀರುತ ಸಮಾಧಿ
ಸ್ಥಿತರ ಮೂಗಿನ ಮೇ¯ಡಾಯಧ ಧಾರೆಗಳನೆಳೆದು
ಶ್ರುತಿವಿಹಿತ ಸತ್ಕರ್ಮಿಗಳ ದೀ
ಕ್ಷಿತರ ಮತಿಯಲಿ ತಮ್ಮ ಮುದ್ರಾಂ
ಕಿತವನೊತ್ತುತ ಮೀರಿ ನಡೆದುದು ಯುವತಿಜನ ಕಟಕ ॥36॥
೦೩೭ ಆರು ನಿಲುವರು ...{Loading}...
ಆರು ನಿಲುವರು ಸಮ್ಮುಖಕೆ ಮದ
ನಾರಿಯರ್ಧದ ನಾರಿ ಹರಿ ತಾ
ಹೇರುರದ ಹೆಂಗುಸುರೆ ಬೊಮ್ಮನು ಮಗಳ ಮೊರೆಗೇಡಿ
ಘೋರವದು ಸುರಪತಿಯ ಕಥೆ ಮೈ
ಯಾರೆ ಹೊತ್ತನು ಮದನ ಮುದ್ರಾ
ಧಾರಿಯೆಂಬವೊಲೊದರಿದವು ಮುಂಗುಡಿಯ ಕಹಳೆಗಳು ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಯಾರು ಇವರ ಎದುರು ನಿಲ್ಲುವರು ? ಮನ್ಮಥನ ವೈರಿಯಾದ ಶಿವ ಅರ್ಧನಾರಿ ! ಹರಿಯು ತಾನೇ ವಿಶಾಲವಕ್ಷ ಸ್ಥಳದಲ್ಲಿ ಹೆಣ್ಣನ್ನು ಧರಿಸಿರುವವನು ! (ಮೋಹಿನಿಯ ಅವತಾರ ತಾಳಿದವನು?) ಬ್ರಹ್ಮನು ಮಗಳ ಸಂಬಂಧವನ್ನು ಹಾಳು ಮಾಡಿದವನು. ದೇವೇಂದ್ರನ ಕಥೆಯಂತು ಭಯಂಕರವಾದುದು ಮೈಯ್ಯೆಲ್ಲ ಮದನ ಮುದ್ರಾಧಾರಿಯವನು” ಎನ್ನುವಂತೆ ಮುಂದಿನ ಕಹಳೆಗಳು ಶಬ್ದ ಮಾಡಿದವು.
ಪದಾರ್ಥ (ಕ.ಗ.ಪ)
ಮದನ-ಮನ್ಮಥ, ಹೇರುರ-ವಿಶಾಲವಕ್ಷ ಸ್ಥಳ, ಮೊರೆಗೇಡಿ-ಸಂಬಂಧ ಹಾಳು ಮಾಡಿದವನು, ಮುಂಗುಡಿ-ಮುಂದಿನ, ಒದರು-ಶಬ್ದ
ಮೂಲ ...{Loading}...
ಆರು ನಿಲುವರು ಸಮ್ಮುಖಕೆ ಮದ
ನಾರಿಯರ್ಧದ ನಾರಿ ಹರಿ ತಾ
ಹೇರುರದ ಹೆಂಗುಸುರೆ ಬೊಮ್ಮನು ಮಗಳ ಮೊರೆಗೇಡಿ
ಘೋರವದು ಸುರಪತಿಯ ಕಥೆ ಮೈ
ಯಾರೆ ಹೊತ್ತನು ಮದನ ಮುದ್ರಾ
ಧಾರಿಯೆಂಬವೊಲೊದರಿದವು ಮುಂಗುಡಿಯ ಕಹಳೆಗಳು ॥37॥
೦೩೮ ಪಸರಿಸಿತು ತಮ್ಬೆಲರು ...{Loading}...
ಪಸರಿಸಿತು ತಂಬೆಲರು ಬೀತುದು
ಬಿಸಿಲ ಬಿಂಕ ಸರೋಜ ಸಂತತಿ
ಮಸುಳಿದವು ಮದವೇರಿ ಮೆರೆದವು ತಾರಕಾ ನಿವಹ
ಒಸರಿದವು ಶಶಿಕಾಂತ ನೈದಿಲ
ಹಸರ ಹರಿದುದು ಚಕ್ರವಾಕದ
ಬೆಸುಗೆ ಸಡಲಿತು ಚಾರು ಚಂದ್ರಾನನೆಯ ಬರವಿನಲಿ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುಂದರ ಚಂದ್ರಮುಖಿಯಾದ ದ್ರೌಪದಿಯು ಬರುತ್ತಿರಲು, ತಂಪಾದ ಗಾಳಿ ಪ್ರಸರಿಸಿತು. ಬಿಸಿಲಿನ ಅತಿಶಯತೆ ಕೊನೆಗಂಡಿತು. ಕಮಲ ಪುಷ್ಪಗಳ ಸಮೂಹ ಮಂಕಾದವು. ನಕ್ಷತ್ರ ಸಮೂಹ ಅತಿ ಸಂತೋಷದಿಂದ ಪ್ರಕಾಶಿಸಿದುವು. ಚಂದ್ರಕಾಂತ ಶಿಲೆಗಳು ದ್ರವಿಸಿದುವು. ನೈದಿಲೆಯ ಪುಷ್ಪಗಳು ಹರಡಿ ವ್ಯಾಪಿಸಿದುವು. ಚಕ್ರವಾಕಪಕ್ಷಿಗಳ ಅಪ್ಪುಗೆ ಸಡಿಲಗೊಂಡಿತು.
ಪದಾರ್ಥ (ಕ.ಗ.ಪ)
ಪಸರಿಸು-ಪ್ರಸರಿಸು, ತಂಬೆಲರು-ತಂಪಾದ ಗಾಳಿ, ಬಿಂಕ-ಅತಿಶಯತೆ, ಬೀತುದು-ಕೊನೆಗಂಡಿತು, ಮಸುಳು-ಮಂಕಾಗು,
ಒಸರು-ದ್ರವಿಸು, ಹಸರ-ಹರಡು, ಬೆಸುಗೆ-ಹೊಂದಿಕೆ
ಟಿಪ್ಪನೀ (ಕ.ಗ.ಪ)
ದ್ರೌಪದಿಯ ಪ್ರವೇಶದಿಂದಾದ ಅವಳ ಮುಖದರ್ಶನವನ್ನು ಚಂದ್ರೋದಯಕ್ಕೆ ಹೋಲಿಸಿ ಪರಿಣಾಮಗಳನ್ನು ಸಮೀಕರಿಸಿ ಸ್ವಾರಸ್ಯವಗಿ ವಿವರಿಸಿದ್ದಾನೆ.
ಮೂಲ ...{Loading}...
ಪಸರಿಸಿತು ತಂಬೆಲರು ಬೀತುದು
ಬಿಸಿಲ ಬಿಂಕ ಸರೋಜ ಸಂತತಿ
ಮಸುಳಿದವು ಮದವೇರಿ ಮೆರೆದವು ತಾರಕಾ ನಿವಹ
ಒಸರಿದವು ಶಶಿಕಾಂತ ನೈದಿಲ
ಹಸರ ಹರಿದುದು ಚಕ್ರವಾಕದ
ಬೆಸುಗೆ ಸಡಲಿತು ಚಾರು ಚಂದ್ರಾನನೆಯ ಬರವಿನಲಿ ॥38॥
೦೩೯ ಹೊಳೆವ ಕಙ್ಗಳ ...{Loading}...
ಹೊಳೆವ ಕಂಗಳ ಬೆಳಗಿನಲಿ ಕ
ತ್ತಲಿಸಿದವು ಕಾಮುಕರ ಮುಖ ತನು
ವಳಯ ಕಾಂತಿಯ ತಂಪಿನಲಿ ಬಾಡಿದವು ಬುದ್ಧಿಗಳು
ಲಲಿತ ವಿಭ್ರಮದಿಂದಹಂಕೃತಿ
ಶಿಲೆಗಳೊಡೆದವು ಮೋಹನದ ಹೊ
ಯ್ಲೊಳಗೆ ಹೊಳೆದಡಗಿದವು ಚಿತ್ತ ಮಹಾಮಹೀಶ್ವರರ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಕೆಯ ಹೊಳೆಯುತ್ತಿರುವ ಕಣ್ಣುಗಳ ಬೆಳಕಿನಲ್ಲಿ ವಿಷಯಲಂಪಟರ ಮುಖ ಕಾಣದಂತಾದುವು. ಅವಳ ಶರೀರದ ಕಾಂತಿಯ ತಂಪಿನಲ್ಲಿ ಅವರ ಬುದ್ಧಿಗಳು ಕುಗ್ಗಿದುವು. ಆಕೆಯ ಸುಂದರ ಬೆಡಗಿನಿಂದ ಅಹಂಕಾರ ಶಿಲೆಗಳು ಒಡೆದವು, ಆಕೆಯ ಮೋಹಕ ಚೆಲುವಿನಾಘಾತದಿಂದ ಮಹಾಮಹೀಶ್ವರರ ಚಿತ್ತಗಳು ಹೊಳೆದು ಅಡಗಿಕೊಂಡವು.
ಪದಾರ್ಥ (ಕ.ಗ.ಪ)
ಕಾಮುಕ-ವಿಷಯಲಂಪಟ, ವಿಭ್ರಮ-ಬೆಡಗು, ಕತ್ತಲಿಸು-ಕಾಣದಂತಾಗು.
ಟಿಪ್ಪನೀ (ಕ.ಗ.ಪ)
ಮೊದಲು ಕಪ್ಪು ಬಣ್ಣದ ಯಮುನಾ ನದಿಯ ಪ್ರವಾಹವನ್ನು ನಂತರ ಬಿಳಿಯ ಬಣ್ಣದ ಗಂಗಾ ನದಿಯ ಪ್ರವಾಹವನ್ನೂ ಹೋಲಿಸಿ ನಂತರ ಅವೆರಡರೆ ಸಂಗಮವನ್ನು ಇಲ್ಲಿ ಕವಿ ಸ್ವಾರಸ್ಯವಗಿ ವರ್ಣಿಸಿದ್ದಾನೆ.
ಮೂಲ ...{Loading}...
ಹೊಳೆವ ಕಂಗಳ ಬೆಳಗಿನಲಿ ಕ
ತ್ತಲಿಸಿದವು ಕಾಮುಕರ ಮುಖ ತನು
ವಳಯ ಕಾಂತಿಯ ತಂಪಿನಲಿ ಬಾಡಿದವು ಬುದ್ಧಿಗಳು
ಲಲಿತ ವಿಭ್ರಮದಿಂದಹಂಕೃತಿ
ಶಿಲೆಗಳೊಡೆದವು ಮೋಹನದ ಹೊ
ಯ್ಲೊಳಗೆ ಹೊಳೆದಡಗಿದವು ಚಿತ್ತ ಮಹಾಮಹೀಶ್ವರರ ॥39॥
೦೪೦ ತರುಣಿಯರ ನವ ...{Loading}...
ತರುಣಿಯರ ನವ ನೀಲ ಮಣಿಗಳ
ಕುರುಳ ಕಬರಿಯ ಭರದ ವರ ಕ
ತ್ತುರಿಯ ತಿಲಕದ ಕಾಳಿಕೆಯ ಘನ ಕಾಂತಿಗಳ ಲಹರಿಗಳ
ಕೊರಳ ಹಾರದ ಕರ್ಣಪೂರದ
ಸರದ ಮೌಕ್ತಿಕ ರುಚಿಯ ಯಮುನಾ
ಸುರನದಿಯ ಸಂಗದಲಿ ಮುಳುಗಿತು ಸಕಲ ನೃಪನಿಕರ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ತರುಣಿಯರ ಹೊಸ ನೀಲಮಣಿಗಳಂಥ ಗುಂಗುರು ಕೂದಲಿನ ಕೇಶಪಾಶದ ಭರ, ಕಸ್ತೂರಿ ತಿಲಕ ಇವುಗಳಿಂದ ಹೊಮ್ಮಿದ ಕಪ್ಪು ಬಣ್ಣದ ಕಾಂತಿಯ ಪ್ರವಾಹ ಮತ್ತು ಕೊರಳಲ್ಲಿನ ಹಾರ, ಕಿವಿಯ ಆಭರಣ, ಕಂಠಾಭರಣದ ಮುತ್ತಿನ ಕಾಂತಿಯ ಪ್ರವಾಹ, - ಈ ಯಮುನಾ ಗಂಗಾ ನದಿಗಳ ಸಂಗಮದಲ್ಲಿ ಎಲ್ಲ ರಾಜ ಸಮೂಹವು ಮುಳುಗಿ ಹೋಯಿತು.
ಪದಾರ್ಥ (ಕ.ಗ.ಪ)
ಕುರುಳು-ಗುಂಗುರು ಕೂದಲು, ಕಬರಿ-ಕೇಶಪಾಶ, ಕಾಳಿಕೆ-ಕಪ್ಪು, ಕರ್ಣಪೂರ-ಕಿವಿಯ ಆಭರಣ, ಸರ-ಕಂಠಾಭರಣ, ಮೌಕ್ತಿಕ-ಮುತ್ತು
ಮೂಲ ...{Loading}...
ತರುಣಿಯರ ನವ ನೀಲ ಮಣಿಗಳ
ಕುರುಳ ಕಬರಿಯ ಭರದ ವರ ಕ
ತ್ತುರಿಯ ತಿಲಕದ ಕಾಳಿಕೆಯ ಘನ ಕಾಂತಿಗಳ ಲಹರಿಗಳ
ಕೊರಳ ಹಾರದ ಕರ್ಣಪೂರದ
ಸರದ ಮೌಕ್ತಿಕ ರುಚಿಯ ಯಮುನಾ
ಸುರನದಿಯ ಸಂಗದಲಿ ಮುಳುಗಿತು ಸಕಲ ನೃಪನಿಕರ ॥40॥
೦೪೧ ಪರಿಮಳಕೆ ಮಿಗೆ ...{Loading}...
ಪರಿಮಳಕೆ ಮಿಗೆ ಕವಿವ ತುಂಬಿಗೆ
ಕೆರಳುವರು ಹುಬ್ಬಿನಲಿ ಪದ ನೇ
ವುರದ ನುಣ್ದನಿಗೆಳಸಿ ಮುತ್ತುವ ರಾಜಹಂಸೆಗಳ
ಹೊರೆಯ ಕೆಳದಿಗೆ ದೂರುವರು ಕೈ
ಯರಗಿಳಿಗೆ ತಮ್ಮಧರಬಿಂಬದ
ಮುರಿವರಿದು ಮುಖದಿರುಹುವರು ಮುಗ್ಧಾಂಗನಾನಿವಹ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುವಾಸನೆಗೆ ಹೆಚ್ಚಾಗಿ ಮುಸುಕಿದ ದುಂಬಿಗಳ ಮೇಲೆ ಹುಬ್ಬುಗಂಟಿಕ್ಕಿ ಕೋಪವನ್ನು ಪ್ರದರ್ಶಿಸುವರು. ಕಾಲಿನ ನೂಪುರದ ಮೃದು ಸ್ವರಕ್ಕೆ ಆಕರ್ಷಿತವಾಗಿ ಮುತ್ತುವ ರಾಜಹಂಸೆಗಳ ಬಗ್ಗೆ ಪಕ್ಕದ ಗೆಳತಿಗೆ ಚಾಡಿಹೇಳುವರು. ಕೈಯಲ್ಲಿರುವ ಅರಗಿಣಿ ತಮ್ಮ ಅಧರ ಬಿಂಬದ ಕಡೆಗೆ ತಿರುಗಿದ್ದನ್ನು ತಿಳಿದು ಆ ಮುಗ್ಧ ಸ್ತ್ರೀಯರ ಸಮೂಹ ಮುಖವನ್ನು ತಿರುಗಿಸಿತು.
ಪದಾರ್ಥ (ಕ.ಗ.ಪ)
ಕವಿ-ಮುಸುಕು, ಕೆರಳು-ಕೋಪಿಸು, ಹೊರೆ-ಪಕ್ಕ, ಕೆಳದಿ-ಗೆಳತಿ, ದೂರು-ಚಾಡಿ ಹೇಳು
ಮೂಲ ...{Loading}...
ಪರಿಮಳಕೆ ಮಿಗೆ ಕವಿವ ತುಂಬಿಗೆ
ಕೆರಳುವರು ಹುಬ್ಬಿನಲಿ ಪದ ನೇ
ವುರದ ನುಣ್ದನಿಗೆಳಸಿ ಮುತ್ತುವ ರಾಜಹಂಸೆಗಳ
ಹೊರೆಯ ಕೆಳದಿಗೆ ದೂರುವರು ಕೈ
ಯರಗಿಳಿಗೆ ತಮ್ಮಧರಬಿಂಬದ
ಮುರಿವರಿದು ಮುಖದಿರುಹುವರು ಮುಗ್ಧಾಂಗನಾನಿವಹ ॥41॥
೦೪೨ ಕಙ್ಗಳೋರೆಯ ಢಾಳಿಸುವ ...{Loading}...
ಕಂಗಳೋರೆಯ ಢಾಳಿಸುವ ಹಾ
ಸಂಗಿಗಳ ಬಿಗುಹಿನ ದುಹಾರದ
ಭಂಗಿಗಳ ಬಲು ವಿಟರ ಕರಣದ ಸಾರಿಗಳ ಸೆರೆಯ
ಮುಂಗುಡಿಯ ನಿಜನಾರಿಯರ ಕವಿ
ವಂಗವಣೆಗಳ ಜೂಜುಗಾತಿಯ
ರಂಗನೆಯ ದಂಡಿಗೆಯ ಬಳಿವಿಡಿದರು ವಿದಗ್ಧೆಯರು ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಓರೆಗಣ್ಣಿನ ಕಾಂತಿಯೆಂಬ ಪಗಡೆಯ ದಾಳೆಗಳಿಂದಲೂ, ಠೀವಿಯೆಂಬ ದುಹಾರದಿಂದಲೂ, ತಮ್ಮ ಹೆಚ್ಚಿನ ರೂಪಿನಿಂದ ಕಾಮುಕರ ಮನಸ್ಸೆಂಬ ಪಗಡೆ ಕಾಯಿಗಳನ್ನು ಸೆರೆ ಹಿಡಿಯುವುದರಿಂದಲೂ, ಮುಂದಿರುವ ಸ್ತ್ರೀಯರನ್ನು ಆಕ್ರಮಿಸುವ ರೀತಿಗಳಲ್ಲಿ ಜೂಜುಗಾತಿಯರಾದ ಪ್ರೌಢೆಯರು ದ್ರೌಪದಿಯ ಪಲ್ಲಕ್ಕಿಯನ್ನು ಸುತ್ತುವರಿದರು.
ಪದಾರ್ಥ (ಕ.ಗ.ಪ)
ಹಾಸಂಗಿ-ಪಗಡೆಯದಾಳ,
ಬಿಗುಹು-ಠೀವಿ,
ವಿಟ-ಕಾಮುಕ,
ಕರಣ-ಮನಸ್ಸು,
ಸಾರಿ-ಪಗಡೆಕಾಯಿ,
ಅಂಗವಣೆ-ರೀತಿ,
ವಿದಗ್ಧೆ-ಪ್ರೌಢೆ
ದುಹಾರ= ?
ಮೂಲ ...{Loading}...
ಕಂಗಳೋರೆಯ ಢಾಳಿಸುವ ಹಾ
ಸಂಗಿಗಳ ಬಿಗುಹಿನ ದುಹಾರದ
ಭಂಗಿಗಳ ಬಲು ವಿಟರ ಕರಣದ ಸಾರಿಗಳ ಸೆರೆಯ
ಮುಂಗುಡಿಯ ನಿಜನಾರಿಯರ ಕವಿ
ವಂಗವಣೆಗಳ ಜೂಜುಗಾತಿಯ
ರಂಗನೆಯ ದಂಡಿಗೆಯ ಬಳಿವಿಡಿದರು ವಿದಗ್ಧೆಯರು ॥42॥
೦೪೩ ಹಾವುಗೆಯ ಸೀಗುರಿಯ ...{Loading}...
ಹಾವುಗೆಯ ಸೀಗುರಿಯ ವರಚಮ
ರಾವಳಿಯ ಕರ್ಪೂರಗಂಧದ
ಹೂವುಗಳ ಕತ್ತುರಿಯ ಸಾದುಜವಾಜಿ ಕುಂಕುಮದ
ತೀವಿದನುಪಮ ಭಾಜನ ವ್ಯಜ
ನಾವಳಿಯ ಕನ್ನಡಿಯ ವಿವಿಧ ಸ
ಖೀ ವಿಳಾಸಿನಿಯರ ಕದಂಬಕವೈದಿತೊಗ್ಗಿನಲಿ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾದುಕೆ,, ಚಾಮರಗಳ ಸಾಲು, ಕರ್ಪೂರ, ಗಂಧ, ಹೂವು, ಕಸ್ತೂರಿ, ಪರಿಮಳದ್ರವ್ಯ, ಪುನುಗು, ಕುಂಕುಮಗಳನ್ನು ತುಂಬಿದ ಅನುಪಮವಾದ ಭಾಂಡಗಳು, ಬೀಸಣಿಗೆಯ ಸಾಲು, ಕನ್ನಡಿ ಇವನ್ನು ಹಿಡಿದ ಸುಂದರಿಯರಾದ ಗೆಳತಿಯರ ಗುಂಪು ಒಟ್ಟಾಗಿ ಬಂದಿತು.
ಪದಾರ್ಥ (ಕ.ಗ.ಪ)
ಹಾವುಗೆ-ಪಾದುಕೆ, ಸಾದು-ಪರಿಮಳ ದ್ರವ್ಯ, ಜವಾಜಿ-ಪುನುಗು, ತೀವು-ತುಂಬು, ಭಾಜನ-ಭಾಂಡ, ವಿಳಾಸಿನಿ-ಸುಂದರಿ
ಮೂಲ ...{Loading}...
ಹಾವುಗೆಯ ಸೀಗುರಿಯ ವರಚಮ
ರಾವಳಿಯ ಕರ್ಪೂರಗಂಧದ
ಹೂವುಗಳ ಕತ್ತುರಿಯ ಸಾದುಜವಾಜಿ ಕುಂಕುಮದ
ತೀವಿದನುಪಮ ಭಾಜನ ವ್ಯಜ
ನಾವಳಿಯ ಕನ್ನಡಿಯ ವಿವಿಧ ಸ
ಖೀ ವಿಳಾಸಿನಿಯರ ಕದಂಬಕವೈದಿತೊಗ್ಗಿನಲಿ ॥43॥
೦೪೪ ಧರಣಿಪತಿ ಕೇಳಖಿಳ ...{Loading}...
ಧರಣಿಪತಿ ಕೇಳಖಿಳ ಪೃಥ್ವೀ
ಶ್ವರರ ಬಹಳಾಸ್ಥಾನದಲಿ ಮೋ
ಹರಿಸಿದರು ಮೋಹನದ ಮೋಡಾಮೋಡಿಯಬಲೆಯರು
ಅರಸುಗಳ ನಿಡುನೋಟವಲ್ಲಿಯ
ಗರುವೆಯರ ನಸುನೋಟ ತಮ್ಮೊಳು
ಬೆರಸಿ ಹೊಯ್ದಾಡಿದವು ಖಾಡಾಖಾಡಿಯಂದದಲಿ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ದೊಡ್ಡ ಆಸ್ಥಾನದಲ್ಲಿ ಸ್ತ್ರೀಯರು ಎಲ್ಲ ಪೃಥ್ವೀಶ್ವರರನ್ನು ಮರಳುಗೊಳಿಸುವ ಅಂದವಾದ ವೈಖರಿಯಲ್ಲಿ ಮುತ್ತಿಗೆ ಹಾಕಿದರು. ರಾಜರುಗಳ ದೀರ್ಘ ನೋಟ, ಅಲ್ಲಿಯ ಚೆಲುವೆಯರ ನಸುನೋಟಗಳು ಒಂದರೊಡನೊಂದು ಸೇರಿ ಸ್ಪರ್ಧೆಯ ರೀತಿಯಲ್ಲಿ ಹೊಡೆದಾಡಿದುವು.
ಪದಾರ್ಥ (ಕ.ಗ.ಪ)
ಮೋಹನ-ಮರುಳುಮಾಡುವಂತಹ, ಮೋಹರಿಸು-ಮುತ್ತಿಗೆ ಹಾಕು, ಮೋಡಾಮೋಡಿ-ಅಂದವಾದ ವೈಖರಿ, ಖಾಡಾಖಾಡಿ-ಸ್ಪರ್ಧೆ
ಮೂಲ ...{Loading}...
ಧರಣಿಪತಿ ಕೇಳಖಿಳ ಪೃಥ್ವೀ
ಶ್ವರರ ಬಹಳಾಸ್ಥಾನದಲಿ ಮೋ
ಹರಿಸಿದರು ಮೋಹನದ ಮೋಡಾಮೋಡಿಯಬಲೆಯರು
ಅರಸುಗಳ ನಿಡುನೋಟವಲ್ಲಿಯ
ಗರುವೆಯರ ನಸುನೋಟ ತಮ್ಮೊಳು
ಬೆರಸಿ ಹೊಯ್ದಾಡಿದವು ಖಾಡಾಖಾಡಿಯಂದದಲಿ ॥44॥
೦೪೫ ದಾಯ ತಪ್ಪಿತು ...{Loading}...
ದಾಯ ತಪ್ಪಿತು ಗರುವರಾಟ ವಿ
ಡಾಯಗೆಟ್ಟಿತು ವಿಟರನೋಟ ನ
ವಾಯಿಕಾರರ ಕೂಟ ಕುಸಿದುದು ಮಾರ ಶರಹತಿಗೆ
ಘಾಯವಡೆದುದು ಧೃತಿಯಘಾಟ ನ
ವಾಯಿ ಹೆಚ್ಚಿತು ಮತ್ತೆ ಬೇಟ ವ
ರಾಯತಾಕ್ಷಿಯ ಕೂಟಕೆಳಸುವ ಚದುರ ಭೂಮಿಪರ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗರ್ವಿತರ ಆಟದ ಗರ ತಪ್ಪಿತು. ಕಾಮುಕರ ನೋಟದ ಸಂಭ್ರಮ ಕೆಟ್ಟಿತು. ವಿಲಾಸಿಗಳ ಸೇರಿಕೆ ಹಿಮ್ಮೆಟ್ಟಿದುದು. ಮನ್ಮಥನ ಬಾಣದ ಪೆಟ್ಟಿಗೆ ಧೈರ್ಯದ ತೀವ್ರತೆ ಗಾಯಗೊಂಡಿತು. ಶ್ರೇಷ್ಠಳಾದ ವಿಶಾಲಕಣ್ಣುಳ್ಳ ಸುಂದರಿಯನ್ನು ಸೇರುವ ಚೆಲುವ ರಾಜರುಗಳ ಬಯಕೆ ಮತ್ತೆ ಹೆಚ್ಚಿತು .
ಪದಾರ್ಥ (ಕ.ಗ.ಪ)
ದಾಯ-ಗರ, ವಿಡಾಯ-ಸಂಭ್ರಮ, ನವಾಯಿಕಾರರು-ವಿಲಾಸಿಗಳು, ಧೃತಿ-ಧೈರ್ಯ, ಘಾಟ-ತೀವ್ರತೆ, ವರ-ಶ್ರೇಷ್ಠ, ಆಯತಾಕ್ಷಿ-ವಿಶಾಲವಾದ ಕಣ್ಣುಳ್ಳವಳು, ಚದುರ-ಚೆಲುವ, ಕೂಟ-ಸೇರಿಕೆ, ಎಳಸು-ಬಯಸು
ಮೂಲ ...{Loading}...
ದಾಯ ತಪ್ಪಿತು ಗರುವರಾಟ ವಿ
ಡಾಯಗೆಟ್ಟಿತು ವಿಟರನೋಟ ನ
ವಾಯಿಕಾರರ ಕೂಟ ಕುಸಿದುದು ಮಾರ ಶರಹತಿಗೆ
ಘಾಯವಡೆದುದು ಧೃತಿಯಘಾಟ ನ
ವಾಯಿ ಹೆಚ್ಚಿತು ಮತ್ತೆ ಬೇಟ ವ
ರಾಯತಾಕ್ಷಿಯ ಕೂಟಕೆಳಸುವ ಚದುರ ಭೂಮಿಪರ ॥45॥
೦೪೬ ಕೆಲಕಡೆಯ ಕೆಳದಿಯರ ...{Loading}...
ಕೆಲಕಡೆಯ ಕೆಳದಿಯರ ಕಂಗಳ
ಹೊಳಹು ದುವ್ವಾಳಿಯಲಿ ಸುಮತಿ
ಸ್ಖಲಿತ ಕೆಂಧೂಳಿಯಲಿ ಮಾಸಿತು ಮನದ ಮಡಿವರ್ಗ
ಒಳಗೆಯೊತ್ತುವ ಧಗೆಯ ಹೊರಗಣ
ತಳಿತ ಬಿಮ್ಮಿನ ನಗೆಯ ನೃಪ ಮಂ
ಡಲದ ಮೌಳಿಯನೇನನೆಂಬೆನು ರಾಯ ಕೇಳ್ ಎಂದ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಕ್ಕದಲ್ಲಿದ್ದ ಗೆಳತಿಯರ ಕಣ್ಣಿನ ಕಾಂತಿಯ ಆಕ್ರಮಣದಲ್ಲಿ ಒಳ್ಳೆಯ ಬುದ್ಧಿಯು ಜಾರಿ ಮನವೆಂಬ ಶುಭ್ರವಸ್ತ್ರಗಳು ಕೆಂಪಾದ ಧೂಳಿನಿಂದ ಹೊಲಸಾಯ್ತು. ಒಳಗಿನಿಂದ ಒತ್ತುತ್ತಿರುವ ಧಗೆ, ಹೊರಗೆ ಗರ್ವದ ನಗೆಯಿಂದ ಕೂಡಿದ ಗುಂಪಿನಲ್ಲಿದ್ದ ರಾಜರ ಪ್ರಮುಖರ ಸ್ಥಿತಿಯನ್ನು ಏನೆಂದು ಹೇಳಲಿ ?
ಪದಾರ್ಥ (ಕ.ಗ.ಪ)
ಹೊಳಹು-ಕಾಂತಿ, ದುವ್ವಾಳಿ-ಆಕ್ರಮಣ, ಸ್ಖಲಿತ-ಜಾರಿ, ಮಡಿವರ್ಗ-ಶುಭ್ರವಸ್ತ್ರಗಳು, ತಳಿತ-ಕೂಡಿದ, ಬಿಮ್ಮು-ಗರ್ವ, ಮೌಳಿ-ಪ್ರಮುಖ, ಮಂಡಲ-ಗುಂಪು
ಮೂಲ ...{Loading}...
ಕೆಲಕಡೆಯ ಕೆಳದಿಯರ ಕಂಗಳ
ಹೊಳಹು ದುವ್ವಾಳಿಯಲಿ ಸುಮತಿ
ಸ್ಖಲಿತ ಕೆಂಧೂಳಿಯಲಿ ಮಾಸಿತು ಮನದ ಮಡಿವರ್ಗ
ಒಳಗೆಯೊತ್ತುವ ಧಗೆಯ ಹೊರಗಣ
ತಳಿತ ಬಿಮ್ಮಿನ ನಗೆಯ ನೃಪ ಮಂ
ಡಲದ ಮೌಳಿಯನೇನನೆಂಬೆನು ರಾಯ ಕೇಳೆಂದ ॥46॥
೦೪೭ ಚೆಲುವಿಕೆಯ ಚೈತನ್ಯವೋ ...{Loading}...
ಚೆಲುವಿಕೆಯ ಚೈತನ್ಯವೋ ಪರಿ
ಮಳದ ಪುತ್ಥಳಿಯೋ ಲತಾಂಗಿಯ
ಸುಳಿವೊ ಲಾವಣ್ಯೈಕರಸ ಸಾಕಾರ ವಿಭ್ರಮವೊ
ಲಲಿತಶೃಂಗಾರಾಬ್ಧಿ ಮಥನೋ
ಚ್ಚಲಿತ ಸುಧೆಯೋ ಸಾಧಕರಿಗಿದು
ಫಲಿಸಿದರೆ ಕೃತಕೃತ್ಯರವರೆಂದುದು ಸುರಸ್ತೋಮ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಲ್ಲಕ್ಕಿಯನ್ನೇರಿ ಬರುತ್ತಿರುವ ದ್ರೌಪದಿಯನ್ನು ಕಂಡ ದೇವತೆಗಳ ಸಮೂಹ, “ಸೌಂದರ್ಯದ ಚೈತನ್ಯವೋ, ಸುಗಂಧದ ಪ್ರತಿಮೆಯೋ, ಕೋಮಲೆಯ ಸಂಚಾರವೋ, ಸೌಂದರ್ಯ ರಸವೇ ಆಕೃತಿಯಾಗಿ ತೋರುವ ಬೆಡಗೋ, ಮನೋಹರವಾದ ಶೃಂಗಾರ ಸಮುದ್ರವನ್ನು ಮಥನ ಮಾಡಿದಾಗ ಚಿಮ್ಮಿದ ಅಮೃತವೋ, ಆಶಿಸುವ ಸಾಧಕರಿಗೆ ಇದು ಕೈಗೂಡಿದರೆ, ಅವರು ಕೃತಾರ್ಥರು” ಎಂದು ಪ್ರಶಂಸಿಸಿದರು.
ಪದಾರ್ಥ (ಕ.ಗ.ಪ)
ಚೆಲುವು-ಸೌಂದರ್ಯ, ಪುತ್ಥಳಿ-ಪ್ರತಿಮೆ, ಲತಾಂಗಿ- ಕೋಮಲೆ, ಸಾಕಾರ-ಆಕಾರವುಳ್ಳ, ವಿಭ್ರಮ-ಬೆಡಗು, ಉಚ್ಚಲಿತ-ಚಿಮ್ಮುವ, ಸುಧೆ-ಅಮೃತ, ಕೃತಕೃತ್ಯ-ಕೃತಾರ್ಥ, ಫಲಿಸು-ಕೈಗೂಡು
ಮೂಲ ...{Loading}...
ಚೆಲುವಿಕೆಯ ಚೈತನ್ಯವೋ ಪರಿ
ಮಳದ ಪುತ್ಥಳಿಯೋ ಲತಾಂಗಿಯ
ಸುಳಿವೊ ಲಾವಣ್ಯೈಕರಸ ಸಾಕಾರ ವಿಭ್ರಮವೊ
ಲಲಿತಶೃಂಗಾರಾಬ್ಧಿ ಮಥನೋ
ಚ್ಚಲಿತ ಸುಧೆಯೋ ಸಾಧಕರಿಗಿದು
ಫಲಿಸಿದರೆ ಕೃತಕೃತ್ಯರವರೆಂದುದು ಸುರಸ್ತೋಮ ॥47॥
೦೪೮ ಈಕೆಯನ್ದುದಿಸಿದರೆ ಮದನಂ ...{Loading}...
ಈಕೆಯಂದುದಿಸಿದರೆ ಮದನಂ
ಗೇಕೆ ದೇಹತ್ಯಾಗವಹುದು ಪಿ
ನಾಕಿ ತಾ ವೈರಾಗ್ಯದಲಿ ಹೊಗುವನೆ ತಪೋವನವ
ಸಾಕು ಗೌತಮಮುನಿಯ ಮುಳಿಸಿನ
ಕಾಕು ನುಡಿ ಫಲಿಸುವುದೆಯೆನುತಾ
ನಾಕಪತಿ ರಂಭಾದಿ ಸತಿಯರ ನೋಡಿದನು ನಗುತ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಈಕೆ ಅಂದು ಹುಟ್ಟಿದ್ದರೆ ಮನ್ಮಥನಿಗೆ ದೇಹತ್ಯಾಗೆ ಏಕಾಗುತ್ತಿತ್ತು ? ಪಿನಾಕಪಾಣಿಯಾದ ಶಿವ ವೈರಾಗ್ಯದಲ್ಲಿ ತಪೋವನಕ್ಕೆ ಪ್ರವೇಶಿಸುತ್ತಿದ್ದನೇ ? ಗೌತಮ ಮಹರ್ಷಿಯ ಕೋಪದ ಕೆಟ್ಟ ಮಾತು ಕೈಗೂಡುತ್ತಿತ್ತೇ ?” ಎಂದು ಹೇಳುತ್ತ ದೇವೇಂದ್ರನು ರಂಭೆಯೇ ಮೊದಲಾದ ಅಪ್ಸರಸ್ತ್ರೀಯರನ್ನು ನಗುತ್ತ ನೋಡಿದನು.
ಪದಾರ್ಥ (ಕ.ಗ.ಪ)
ಪಿನಾಕಿ-ಪಿನಾಕ ಎಂಬ ತ್ರಿಶೂಲವನ್ನು ಹಿಡಿದವನು, ಶಿವ ಹೊಗು-ಪ್ರವೇಶಿಸು, ಮುಳಿಸು-ಕೋಪ, ಕಾಕು-ಕೆಟ್ಟ, ಫಲಿಸು-ಕೈಗೂಡು, ನಾಕಪತಿ-ಸ್ವರ್ಗದ ಒಡೆಯ, ದೇವೇಂದ್ರ
ಮೂಲ ...{Loading}...
ಈಕೆಯಂದುದಿಸಿದರೆ ಮದನಂ
ಗೇಕೆ ದೇಹತ್ಯಾಗವಹುದು ಪಿ
ನಾಕಿ ತಾ ವೈರಾಗ್ಯದಲಿ ಹೊಗುವನೆ ತಪೋವನವ
ಸಾಕು ಗೌತಮಮುನಿಯ ಮುಳಿಸಿನ
ಕಾಕು ನುಡಿ ಫಲಿಸುವುದೆಯೆನುತಾ
ನಾಕಪತಿ ರಂಭಾದಿ ಸತಿಯರ ನೋಡಿದನು ನಗುತ ॥48॥
೦೪೯ ತನ್ದರಾ ಪಾಞ್ಚಾಲೆಯನು ...{Loading}...
ತಂದರಾ ಪಾಂಚಾಲೆಯನು ಹೊ
ನ್ನಂದಣದಲಾಸ್ಥಾನ ಸೀಮೆಗೆ
ಮುಂದೆ ಸಿಂಹಾಸನದ ಸಾಲ ಮಹಾಮಹೀಶ್ವರರ
ಸಂದಣಿಯಲವರವರನಿವರಿವ
ರೆಂದು ವಿವರಿಸಬೇಕೆನುತ ನೃಪ
ನಂದನನು ಹೊದ್ದಿದನು ಕಮಲಾನನೆಯ ದಂಡಿಗೆಯ ॥49॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಚಾಲೆಯನ್ನು ಚಿನ್ನದ ಪಲ್ಲಕ್ಕಿಯಲ್ಲಿ ಆಸ್ಥಾನ ಪ್ರದೇಶಕ್ಕೆ ಕರೆತಂದರು. ಮುಂದೆ ಸಾಲಾಗಿ ಸಿಂಹಾಸನದಲ್ಲಿ ಮಂಡಿಸಿದ್ದ ಶ್ರೇಷ್ಠ ಭೂಮೀಶ್ವರರ ಸಮೂಹದಲ್ಲಿ ಒಬ್ಬೊಬ್ಬರ ಪರಿಚಯವನ್ನೂ ವಿವರಿಸಿ ತಿಳಿಸಬೇಕೆಂದು ರಾಜಕುಮಾರ ಧೃಷ್ಟದ್ಯುಮ್ನನು ಕಮಲಮುಖಿ ದ್ರೌಪದಿಯ ಪಲ್ಲಕ್ಕಿಯ ಸಮೀಪಕ್ಕೆ ಬಂದನು.
ಪದಾರ್ಥ (ಕ.ಗ.ಪ)
ಪಾಂಚಾಲೆ-ದ್ರೌಪದಿ, ಅಂದಣ-ಪಲ್ಲಕ್ಕಿ, ಸೀಮೆ-ಪ್ರದೇಶ, ಮಹಾ-ಶ್ರೇಷ್ಠ, ಹೊದ್ದು-ಸಮೀಪಿಸು
ಪಾಠಾನ್ತರ (ಕ.ಗ.ಪ)
ದೃಪ - ನೃಪ
ಮೈ.ವಿ.ವಿ. ಆದಿಪರ್ವ
ಮೂಲ ...{Loading}...
ತಂದರಾ ಪಾಂಚಾಲೆಯನು ಹೊ
ನ್ನಂದಣದಲಾಸ್ಥಾನ ಸೀಮೆಗೆ
ಮುಂದೆ ಸಿಂಹಾಸನದ ಸಾಲ ಮಹಾಮಹೀಶ್ವರರ
ಸಂದಣಿಯಲವರವರನಿವರಿವ
ರೆಂದು ವಿವರಿಸಬೇಕೆನುತ ನೃಪ
ನಂದನನು ಹೊದ್ದಿದನು ಕಮಲಾನನೆಯ ದಂಡಿಗೆಯ ॥49॥
೦೫೦ ತಙ್ಗಿ ನೋಡೌ ...{Loading}...
ತಂಗಿ ನೋಡೌ ತಾಯೆ ನಿನ್ನಯ
ಕಂಗಳೊಲಿವರೆ ಚಿತ್ತವಾರ್ಧಿತ
ರಂಗದಲಿ ತೂಗುವರೆ ತೋರುವೆನವನಿಪಾಲಕರ
ಇಂಗಿತದಲವರಂತರಂಗವ
ನಂಗವಟ್ಟದ ಬಳಕೆಯನು ಬಹಿ
ರಂಗದಲಿ ನೀನರಿಯೆನುತ ನುಡಿದನು ನಿಜಾನುಜೆಗೆ ॥50॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ತಂಗೀ, ನೋಡು ತಾಯಿ, ನಿನ್ನ ಕಣ್ಣುಗಳು ಇಷ್ಟಪಡುವುದಾದರೆ, ನಿನ್ನ ಮನೋಸಾಗರದ ಲಹರಿಯಲ್ಲಿ ತುಲನೆ ಮಾಡುವುದಾದರೆ ಭೂಪಾಲಕರನ್ನು ತೋರಿಸುತ್ತೇನೆ. ಇಂಗಿತದಿಂದ ಅವರ ಅಂತರಂಗವನ್ನು ಬಹಿರಂಗದಲ್ಲಿ ಅವರ ದೇಹ ಸೌಷ್ಠವದ ರೀತಿಯನ್ನು ನೀನು ತಿಳಿಯುವೆಯಂತೆ” ಎಂದು ತನ್ನ ತಂಗಿ ದ್ರೌಪದಿಗೆ ಧೃಷ್ಟದ್ಯುಮ್ನ ಹೇಳಿದನು.
ಪದಾರ್ಥ (ಕ.ಗ.ಪ)
ಒಲಿ-ಇಷ್ಟಪಡು, ವಾರ್ಧಿ-ಸಮುದ್ರ, ತರಂಗ-ಲಹರಿ, ತೂಗು-ತುಲನೆಮಾಡು, ಅಂಗವಟ್ಟ-ಸೌಷ್ಠವ, ಬಳಕೆ-ರೀತಿ, ಅರಿ-ತಿಳಿ, ಅನುಜೆ-ತಂಗಿ
ಮೂಲ ...{Loading}...
ತಂಗಿ ನೋಡೌ ತಾಯೆ ನಿನ್ನಯ
ಕಂಗಳೊಲಿವರೆ ಚಿತ್ತವಾರ್ಧಿತ
ರಂಗದಲಿ ತೂಗುವರೆ ತೋರುವೆನವನಿಪಾಲಕರ
ಇಂಗಿತದಲವರಂತರಂಗವ
ನಂಗವಟ್ಟದ ಬಳಕೆಯನು ಬಹಿ
ರಂಗದಲಿ ನೀನರಿಯೆನುತ ನುಡಿದನು ನಿಜಾನುಜೆಗೆ ॥50॥
೦೫೧ ಈತ ದುರ್ಯೋಧನ ...{Loading}...
ಈತ ದುರ್ಯೋಧನ ಮಹೀಶ್ವರ
ನೀತ ದುಶ್ಯಾಸನನು ದುರ್ಜಯ
ನೀತ ದುಶ್ಯಳನೀತ ದುಸ್ಸಹನೀತ ಚಿತ್ರರಥ
ಈತ ದುರ್ಮದನೀತ ಚಿತ್ರಕ
ನೀತಗಳು ಕುರುವಂಶದಲಿ ವಿ
ಖ್ಯಾತರಬಲೆ ನಿರೀಕ್ಷಿಸಾ ಧೃತರಾಷ್ಟ್ರನಂದನರ ॥51॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈತ ದುರ್ಯೋಧನ ಮಹೀಶ್ವರ, ಈತ ದುಶ್ಯಾಸನ, ಈತ ದುರ್ಜಯ, ಈತ ದುಶ್ಯಳ, ಈತ ದುಸ್ಸಹ, ಈತ ಚಿತ್ರರಥ, ಈತ ದುರ್ಮದ, ಈತ ಚಿತ್ರಕ. ಇವರುಗಳು ಕುರುವಂಶದಲ್ಲಿ ಹೆಸರಾದ ಧೃತರಾಷ್ಟ್ರನ ಮಕ್ಕಳು. ಇವರನ್ನು ನೋಡು.
ಪದಾರ್ಥ (ಕ.ಗ.ಪ)
ವಿಖ್ಯಾತ-ಹೆಸರಾದ, ನಂದನರು-ಮಕ್ಕಳು
ಟಿಪ್ಪನೀ (ಕ.ಗ.ಪ)
ದುರ್ಯೋಧನ : ಧೃತರಾಷ್ಟ್ರ ಗಾಂಧಾರಿಯರ ನೂರು ಮಕ್ಕಳಲ್ಲಿ ಹಿರಿಯವನು. ಅಂಗಬಲ, ಅರ್ಥಬಲ, ಅಧಿಕಾರಬಲ, ಜನಬಲ ಎಲ್ಲ ಇದ್ದರೂ ಮತ್ಸತಭಾವದ ಬೆಂಕಿಯಲ್ಲಿ ವ್ಯಕ್ತಿತ್ವವನ್ನು ಸುಟ್ಟುಕೊಂಡವನೀತ. ಮಹಾಪ್ರತಾಪಶಾಲಿ, ಕಾರ್ಯಶೀಲ ಆದರೆ ಛಲವಾದಿ ಮತ್ಸರಗ್ರಸ್ತ, ಸ್ವಾರ್ಥಿ ಮತ್ತು ಮುಂಗೋಪಿ. ಈತ ದಕ್ಷ ಆಡಳಿತಗಾರ, ಪ್ರಜಾವತ್ಸಲ, ಆತ್ಮವಿಶ್ವಾಸಿ. ಆದರೂ ಕೃತ್ರಿಮಮಾರ್ಗಗಳಿಂದ ಗೆಲುವನ್ನು ಪಡೆಯಲು ಬಯಸಿದವನು. ಮುರಿದೇನೆಯೇ ಹೊರತು ಮಣಿಯುವುದಿಲ್ಲ ಎಂದು ಹೆಮ್ಮೆಯಿಮದ ಹೇಳಿಕೊಳ್ಳುತ್ತಿದ್ದ ಆತ್ಮಾಭಿಮಾನಿ. ಆದರೆ ಅಷ್ಟೇ ಅಹಂಕಾರಿ. ತನ್ನನ್ನು ನಂಬಿದವರಿಗೆಲ್ಲ ಅಂದರೆ ತಂದೆ ತಾಯಿ, ತಮ್ಮಂದಿರು, ಸೈನಿಕರು, ಗೆಳೆಯರಿಗೆಲ್ಲ ಸುಖದ ಸ್ವರ್ಗವನ್ನು ತೋರಿಸಿ ಪತನದ ಪಾತಾಳಕ್ಕೆ ಕೆಡವಿದವನು. ಪಾಂಡವರ ಪ್ರಶಂಸೆಯನ್ನಾಗಲಿ, ಏಳಿಗೆಯನ್ನಾಗಲಿ ಸಹಿಸದವನು. ಅವನು ಕರ್ಣನನ್ನು ಬೆಳೆಸಿದ್ದರ ಹಿಂದೆ ಈ ಮಾತ್ಸರ್ಯದ ಧ್ವನಿಯೇ ಇದೆ. ತಂದೆತಾಯಿಗಳನ್ನು ತನ್ನ ದಾರಿಗೆ ತರಲು ಇವನು ಆಗಾಗ ಯಶಸ್ವಿಯಾಗಿ ಬಳಸಿದ ತಂತ್ರವೆಂದರೆ ಆತ್ಮಹತ್ಯೆಯ ಹೆದರಿಕೆ.
ಕೌರವ-ಪಾಂಡವರ ವಿದ್ಯಾಪ್ರದರ್ಶನ ಕಾಲದಲ್ಲೇ ಈ ಮಾತ್ಸರ್ಯ ಭಾವ ಮುಗಿಲು ಮುಟ್ಟುತ್ರದೆ. ಅದಕ್ಕೂ ಮುನ್ನ ಆಟದ ಕಾಲದಲ್ಲೇ ಭೀಮನಿಗೆ ವಿಷಯ ಲಗ್ಗುಡಗೆ ತಿನ್ನಿಸುವ, ಹಾವಿನಿಂದ ಕಚ್ಚಿಸುವ, ನೀರಲ್ಲಿ ಮುಳುಗಿಸುವ ಆರಂಭಿಕ ಯತ್ನಗಳನ್ನು ಕೌರವ ಮಾಡಿದ. ಮುಂದೆ ಇದನ್ನೇ ಮುಂದುವರಿಸಿ ಅರಗಿನ ಮನೆಯಲ್ಲಿ ಪಾಂಡವರನ್ನೆಲ್ಲ ಸುಡುವ ಸಂಚು ನಡೆಸಿದ. ಕೊನೆಯಲ್ಲಿ ಶಕುನಿಯ ಸಹಾಯ ಪಡೆದು ಧರ್ಮರಾಜನನ್ನು ಜೂಜಿಗೆ ಕರೆದು ಸೋಲಿಸಿ ಕಾಡಿಗೆ ಅಟ್ಟುವ ಮಟ್ಟಕ್ಕೆ ಹೋದ. ದ್ರೌಪದಿಯನ್ನು ರಾಜಸಭೆಯಲ್ಲೇ ಅವಮಾನಿಸಿದ. ಮುಂದೆ ಪಾಂಡವರು ಕಾಡಿನಲ್ಲೂ ಸುಖವಾಗಿರಲು ಬಿಡಬಾರದೆಂದು ದುರ್ವಾಸರನ್ನು ಕಳಿಸಿದ, ಘೋಷಯಾತ್ರೆಯ ನೆವದಿಂದ ತಾನೇ ಅವರಿರುವಲ್ಲಿಗೆ ಹೋದ. ಕೊನೆಗೆ ಅವರು ವಿರಾಟನಗರಲ್ಲಿದ್ದಾರೆಂದು ಸರಿಯಾಗಿ ಊಹಿಸಿ ಸೇನಾಸಮೇತನಾಗಿ ಗೋಗ್ರಹಣದ ನೆಪ ಹೂಡಿ ವಿರಾಟನಗರಕ್ಕೆ ಮುತ್ತಿಗೆ ಹಾಕಿದ. ಆದರೆ ಅವನ ದುರದೃಷ್ಟ. ಅವನಿಗೆ ಪ್ರಚಂಡ ಪರಾಭವವೂ ಆಯಿತು. ಪಾಂಡವರ ಅಜ್ಞಾತವಾಸವೂ ಮುಗಿದುಹೋಗಿತ್ತು.
ಇಷ್ಟಾದರೂ ದುರ್ಯೋದನನು ಜನಪ್ರಿಯ ನಾಯಕನೆಂಬುದನ್ನು ಅವನ ಬಳಿಗೆ ಬಂದ ಹನ್ನೊಂದು ಅಕ್ಷೋಹಿಣೀ ಸೇನೆಯೇ ಹೇಳುತ್ತದೆ. ಪಾಂಡವರ ಸೋದರಮಾವನಾದ ಶಲ್ಯನಂಥವನೂ ಕೌರವನ ಬಲಗೆ ಬಿದ್ದನೆಂದ ಮೇಲೆ ಅವನ ವ್ಯಕ್ತಿತ್ವದ ಆಕರ್ಷಕ ಶಕ್ತಿ ತಿಳಿಯುತ್ತದೆ. ಅಲ್ಲದೆ ಅವನ ನಡತೆಯನ್ನು ಮೆಚ್ಚದ ಭೀಷ್ಮ, ದ್ರೋಣ, ಕೃಪಾದಿಗಳು ಕೂಡ ಅವನ ಸೇನೆಯನ್ನು ಬಿಟ್ಟು ಹೋಗಲಿಲ್ಲ ಎಂದರೆ ಅವನ ಸಂಘಟನಾ ಶಕ್ತಿ ಯಾವ ಮಟ್ಟದ್ದೆಂಬುದು ಗೊತ್ತಾಗುತ್ರದೆ. ಅರ್ಧರಾಜ್ಯವಿರಲಿ ಐದು ಊರುಗಳನ್ನೂ ಕೊಡುವುದಿಲ್ಲ ಎಂದು ಘೋಷಿಸುವಷ್ಟು ಕೆಚ್ಚು ಆತನಲ್ಲಿತ್ತು. ಆದುದರಿಂದ ಯುದ್ಧ ಸಿದ್ಧತೆ ಮಾಡಿಕೊಂಡ. ಸಂಧಾನಕ್ಕೆ ಬಂದ ಕೃಷ್ಣನನ್ನು ಬಂಧಿಸಿ ಅವಮಾನಗೊಳಿಸಲು ಹೋಗಿ ಸೋತ. ಯುದ್ಧಭೂಮಿಯಲ್ಲಿ ಸೋಲು ಹತ್ತಿರ ಬಂದಂತೆಲ್ಲ ತನ್ನ ಕಡೆಯ ವೀರರನ್ನು ಅವಹೇಳನ ಮಾಡುವ ಪದ್ಧತಿಯನ್ನು ಯುದ್ಧದ ಮೊದಲ ದಿನದಿಂದಲೇ ಆರಂಭಿಸಿದ್ದ. ಅವನ ಕ್ರೂರವಾದ ಬಾಯಿಗೆ ಸಿಕ್ಕದ ಯಾವ ಕೌರವ ನಾಯಕರೂ ಇಲ್ಲ. ತನ್ನ ಹುಚ್ಚಿನಿಂದಾಗಿ ಸಮಸ್ತ ಬಲವನ್ನು ಬಲಿಕೊಡಬೇಕಾಯಿತು. ಎಲ್ಲ ಕಳೆದುಕೊಂಡು ತಲೆ ಮರೆಸಿಕೊಳ್ಳಬೇಕಾಯಿತು. ಪಾಂಡವರು ಪತ್ತೆ ಹಚ್ಚಿ ಕೆಣಕಿದಾಗ ಕೊಳದಿಂದ ಎದ್ದು ಬರಬೇಕಾಯಿತು. ಅನಂತರ ವೀರಾವೇಶದಿಂದ ಭೀಮನೊಂದಿಗೆ ಹೋರಾಡಿ ವೀgಮರಣವನ್ನು ಪಡೆದ.
ದುರ್ಯೋಧನ ಆಡಳಿತದ ಬಗೆಗೆ ಯಾರೂ ಚಕಾರವೆತ್ತಿಲ್ಲ. ಪ್ರಜೆಗಳು ಅವನ ರಾಜ್ಯದಲ್ಲಿ ಸುಖವಾಗಿದ್ದರು. ಆದರೆ ಪಾಂಡವರ ಏಳಿಗೆಯನ್ನು ಸಹಿಸದ ಅವನ ಸ್ವಾರ್ಥಬುದ್ಧಿ ಹೀಗೆ ಆತ್ಮವಿನಾಶಕವಾಯಿತು.
ಮೂಲ ...{Loading}...
ಈತ ದುರ್ಯೋಧನ ಮಹೀಶ್ವರ
ನೀತ ದುಶ್ಯಾಸನನು ದುರ್ಜಯ
ನೀತ ದುಶ್ಯಳನೀತ ದುಸ್ಸಹನೀತ ಚಿತ್ರರಥ
ಈತ ದುರ್ಮದನೀತ ಚಿತ್ರಕ
ನೀತಗಳು ಕುರುವಂಶದಲಿ ವಿ
ಖ್ಯಾತರಬಲೆ ನಿರೀಕ್ಷಿಸಾ ಧೃತರಾಷ್ಟ್ರನಂದನರ ॥51॥
೦೫೨ ನೋಡಳವರನು ನುಡಿಸಳೀತನ ...{Loading}...
ನೋಡಳವರನು ನುಡಿಸಳೀತನ
ಕೂಡೆ ಭಾವದೊಳಿವರ ಕೊಡಹೀ
ಡಾಡಿದಳಲಾಯೆನುತ ಧೃಷ್ಟದ್ಯುಮ್ನ ನಸುನಗುತ
ನೋಡು ತಂಗಿ ವಿರಾಟನುತ್ತರ
ಗೂಡಿ ಕೀಚಕರನು ಶ್ರುತಾಯುಧ
ಮೂಡಣರಸುಗಳನು ರವಿಧ್ವಜ ರೋಚ ಮಾನಕರ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿ ಅವರನ್ನು ದೃಷ್ಟಿಸಲಿಲ್ಲ, ಇವನ ಜೊತೆಗೆ ಮಾತಾಡಿಸಲಿಲ್ಲ. ದ್ರೌಪದಿಯ ಅಭಿಪ್ರಾಯವನ್ನು ತಿಳಿದ ಧೃಷ್ಟದ್ಯುಮ್ನನು, “ಇವರನ್ನು ಕೊಡಹಿ ಈಡಾಡಿದಳಲಾ !” ಎಂದು ಮನಸ್ಸಿನಲ್ಲಿ ಅಂದುಕೊಂಡು ನಸುನಗುತ್ತ, “ಉತ್ತರನೊಂದಿಗೆ ಇರುವ ವಿರಾಟ ಮಹಾರಾಜನನ್ನು, ಕೀಚಕರನ್ನು, ಶ್ರುತಾಯುಧ, ರವಿಧ್ವಜ, ರೋಚಮಾನಕರು, ಪೂರ್ವದಿಕ್ಕಿನ ಅರಸುಗಳನ್ನು ನೋಡು ತಂಗಿ” ಎಂದು ಮುಂದಿನ ರಾಜರುಗಳನ್ನು ತೋರಿಸಿದನು.
ಪದಾರ್ಥ (ಕ.ಗ.ಪ)
ನೋಡು-ದೃಷ್ಟಿಸು, ಭಾವ-ಅಭಿಪ್ರಾಯ, ಮೂಡಣ-ಪೂರ್ವ
ಟಿಪ್ಪನೀ (ಕ.ಗ.ಪ)
ವಿರಾಟ-ಮತ್ಸ್ಯದೇಶದ ಅರಸು, ಹಿರಿಯ ಹೆಂಡತಿ ಸುರಥೆಯೆಂಬುವಳಲ್ಲಿ ಶ್ವೇತ, ಶಂಖರೆಂಬ ಪುತ್ರರನ್ನು ಪಡೆದ. ಕೇಕಯನೆಂಬ ಸೂತರಾಜನ ಪುತ್ರಿ ಸುದೇಷ್ಣೆಯಲ್ಲಿ ಭೂಮಿಂಜಯ (ಉತ್ತರಕುಮಾರ) ನೆಂಬ ಮಗನನ್ನು ಪಡೆದ.
ಕೀಚಕರು-ಕೇಕಯ ರಾಜನಿಂದ ಮಾಲವಿಯಲ್ಲಿ ಜನಿಸಿದವರು. ಇವರು 10 ಮಂದಿ ಒಡಹುಟ್ಟಿದವರು. ಸುದೇಷ್ಣೆ ಇವರ ಸೋದರಿ ಇವರು ವಿರಾಟರಾಜನಲ್ಲಿಯೇ ಇರುತ್ತಿದ್ದರು. ಕೀಚಕ ವಿರಾಟನ ಸೇನಾಪತಿಯಾಗಿದ್ದ. ಮಹಾಬಲಶಾಲಿ.
ಶ್ರುತಾಯುಧ-ಕಳಿಂಗ ದೇಶದ ಅರಸು, ವರುಣನಿಂದ ಪರ್ಣಾಶಾ ನದಿಯಲ್ಲಿ ಜನಿಸಿದವ, ದುರ್ಯೋಧನಪಕ್ಷದವ.
ರೋಚಮಾನ-ಒಬ್ಬ ಕ್ಷತ್ರಿಯ ರಾಜ. ಅಶ್ವಗ್ರೀವನೆಂಬ ಮಹಾನ್ ರಾಕ್ಷಸನ ಅಂಶದಿಂದ ಜನ್ಮವೆತ್ತಿದ್ದನು.
ರವಿಧ್ವಜ-ಸೌವೀರ ದೇಶದ ಒಬ್ಬ ರಾಜಕುಮಾರ, ಇವನು ಜಯದ್ರಥನ ರಥದ ಹಿಂದೆ ಕೈಯಲ್ಲಿ ಧ್ವಜ ಹಿಡಿದುಕೊಂಡು ಹೋಗುತ್ತಿದ್ದನು.
ಮೂಲ ...{Loading}...
ನೋಡಳವರನು ನುಡಿಸಳೀತನ
ಕೂಡೆ ಭಾವದೊಳಿವರ ಕೊಡಹೀ
ಡಾಡಿದಳಲಾಯೆನುತ ಧೃಷ್ಟದ್ಯುಮ್ನ ನಸುನಗುತ
ನೋಡು ತಂಗಿ ವಿರಾಟನುತ್ತರ
ಗೂಡಿ ಕೀಚಕರನು ಶ್ರುತಾಯುಧ
ಮೂಡಣರಸುಗಳನು ರವಿಧ್ವಜ ರೋಚ ಮಾನಕರ ॥52॥
೦೫೩ ನೀಲಚಿತ್ರಾಯುಧನು ದಕ್ಷಿಣ ...{Loading}...
ನೀಲಚಿತ್ರಾಯುಧನು ದಕ್ಷಿಣ
ಚೋಳ ಕೇರಳ ಪಾಂಡ್ಯ ಧರಣೀ
ಪಾಲಕರೊಳೀ ಚಂದ್ರಸೇನ ಸಮುದ್ರ ಸೇನಕರು
ಲೋಲನಯನೆ ಕಳಿಂಗಧರಣೀ
ಪಾಲನೀತನು ಚೇಕಿತಾನ ನೃ
ಪಾಲನೀತನು ಭಾನುದತ್ತಮಹೀಶ ನೋಡೆಂದ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀಲ, ಚಿತ್ರಾಯುಧ, ದಕ್ಷಿಣದ ಚೋಳ, ಕೇರಳ, ಪಾಂಡ್ಯ ಧರಣೀಶ್ವರರು, ಚಂದ್ರಸೇನ, ಸಮುದ್ರ ಸೇನರು, ಇವರು. ಈತ ಕಳಿಂಗ ಧರಣೀಪಾಲನು, ಈತನು ಚೇಕಿತಾನ ನೃಪಾಲನು ಈತ ಭಾನುದತ್ತ ಮಹೀಶ. ಇವರುಗಳನ್ನು ನೋಡು ಎಂದು ದ್ರೌಪದಿಗೆ ತೋರಿಸಿದನು.
ಪದಾರ್ಥ (ಕ.ಗ.ಪ)
ನೀಲ-ಒಬ್ಬ ಅರಸು, ಅನೂಪದೇಶದಲ್ಲಿ ರಾಜ್ಯಭಾರ ಮಾಡುತ್ತಿದ್ದ ಕಾರ್ತವೀರ್ಯಾರ್ಜುನನ ವಂಶದವ.
ಚಿತ್ರಾಯುಧ-ಒಬ್ಬ ಅರಸು, ಒಬ್ಬ ಮಹಾರಥ, ಭಾರತ ಯುದ್ಧದಲ್ಲಿ ಪಾಂಡವರ ಪಕ್ಷವನ್ನು ಸೇರಿದ್ದ.
ಚಂದ್ರಸೇನ-ಒಬ್ಬ ರಾಜಕುಮಾರ ಬಂಗಾಲದ ರಾಜಾ ಸಮುದ್ರ ಸೇನನ ಪುತ್ರ.
ಸಮುದ್ರಸೇನ-ಒಬ್ಬವ ಕ್ಷತ್ರಿಯ ರಾಜ. ಇವನು ಏಳನೆಯ ಕಾಲೇಯನೆಂಬ ಹೆಸರಿನ ದೈತ್ಯನ ಅಂಶದಿಂದ ಹುಟ್ಟಿದವನು. ಇವನು ಧರ್ಮ ಮತ್ತು ಅರ್ಥ ತತ್ತ್ವಗಳ ಜ್ಞಾನಿಯಾಗಿದ್ದನು. ಸಮುದ್ರದವರೆಗೆ ಪೂರ್ಣ ಭೂಮಿಯ ಮೇಲೆ ಇವನ ಪ್ರಸಿದ್ಧಿ ಇತ್ತು.
ಕಳಿಂಗ-ಚಂದ್ರವಂಶದ ಯಯಾತಿ ರಾಜನ ಮಗನಾದ ಅನುವೆಂಬ ರಾಜನ ವಂಶದಲ್ಲಿ ಬಲಿರಾಜನ ಹೆಂಡತಿಯಾದ ಸುದೇಷ್ಣೆಯಲ್ಲಿ ದೀರ್ಘತಮನೆಂಬ ಮಹರ್ಷಿಯಿಂದ ಜನಿಸಿದವ. ಇವನು ಸ್ಥಾಪಿಸಿದ ದೇಶ ಕಳಿಂಗ ದೇಶ. ಇದು ಉತ್ಕಲದಲ್ಲಿ ವೈತರಣೀ ನದಿಯ ದಕ್ಷಿಣಕ್ಕೂ ಕೃಷ್ಣಾನದಿಯ ಉತ್ತರಕ್ಕೂ ಇದೆ.
ಚೇಕಿತಾನ-ವೃಷ್ಣಿವಂಶದ ಯಾದವ. ಪಾಂಡವಪಕ್ಷದ ಒಬ್ಬ ಮಹಾರಥಿ.
ಭಾನುದತ್ತ-ಇವನು ಶಕುನಿಯ ಸಹೋದರ.
ಟಿಪ್ಪನೀ (ಕ.ಗ.ಪ)
ನೀಲ-ಒಬ್ಬ ಅರಸು, ಅನೂಪದೇಶದಲ್ಲಿ ರಾಜ್ಯಭಾರ ಮಾಡುತ್ತಿದ್ದ ಕಾರ್ತವೀರ್ಯಾರ್ಜುನನ ವಂಶದವ.
ಚಿತ್ರಾಯುಧ-ಒಬ್ಬ ಅರಸು, ಒಬ್ಬ ಮಹಾರಥ, ಭಾರತ ಯುದ್ಧದಲ್ಲಿ ಪಾಂಡವರ ಪಕ್ಷವನ್ನು ಸೇರಿದ್ದ.
ಚಂದ್ರಸೇನ-ಒಬ್ಬ ರಾಜಕುಮಾರ ಬಂಗಾಲದ ರಾಜಾ ಸಮುದ್ರ ಸೇನನ ಪುತ್ರ.
ಸಮುದ್ರಸೇನ-ಒಬ್ಬ ಕ್ಷತ್ರಿಯ ರಾಜ. ಇವನು ಏಳನೆಯ ಕಾಲೇಯನೆಂಬ ಹೆಸರಿನ ದೈತ್ಯನ ಅಂಶದಿಂದ ಹುಟ್ಟಿದವನು. ಇವನು ಧರ್ಮ ಮತ್ತು ಅರ್ಥ ತತ್ತ್ವಗಳ ಜ್ಞಾನಿಯಾಗಿದ್ದನು. ಸಮುದ್ರದವರೆಗೆ ಪೂರ್ಣ ಭೂಮಿಯ ಮೇಲೆ ಇವನ ಪ್ರಸಿದ್ಧಿ ಇತ್ತು.
ಕಳಿಂಗ-ಚಂದ್ರವಂಶದ ಯಯಾತಿ ರಾಜನ ಮಗನಾದ ಅನುವೆಂಬ ರಾಜನ ವಂಶದಲ್ಲಿ ಬಲಿರಾಜನ ಹೆಂಡತಿಯಾದ ಸುದೇಷ್ಣೆಯಲ್ಲಿ ದೀರ್ಘತಮನೆಂಬ ಮಹರ್ಷಿಯಿಂದ ಜನಿಸಿದವ. ಇವನು ಸ್ಥಾಪಿಸಿದ ದೇಶ ಕಳಿಂಗ ದೇಶ. ಇದು ಉತ್ಕಲದಲ್ಲಿ ವೈತರಣೀ ನದಿಯ ದಕ್ಷಿಣಕ್ಕೂ ಕೃಷ್ಣಾನದಿಯ ಉತ್ತರಕ್ಕೂ ಇದೆ.
ಚೇಕಿತಾನ-ವೃಷ್ಣಿವಂಶದ ಯಾದವ. ಪಾಂಡವಪಕ್ಷದ ಒಬ್ಬ ಮಹಾರಥಿ.
ಭಾನುದತ್ತ-ಇವನು ಶಕುನಿಯ ಸಹೋದರ.ಯಾದವರಲ್ಲಿ ಹಲವಾರು ಗುಂಪುಗಳಿವೆ. ವೃಷ್ಣಿಗಳದು ಒಂದು ಪ್ರಸಿದ್ಧ ಗುಂಪು. ಚೇಕಿತಾನನು ಈ ವೃಷ್ಣಿ ವಂಶದ ಒಬ್ಬ ದೊರೆ. ತನ್ನಂತೆಯೇ ವಾಷ್ರ್ಣೇಯನಾಗಿದ್ದ ಕೃಷ್ಣನ ಮೇಲೆ ಈತನಿಗೆ ಅಪಾರ ಭಕ್ತಿ. ಕೃಷ್ಣನ ಸ್ನೇಹಿತರಾದ ಪಾಂಡವರ ಮೇಲೆ ಈತನಿಗೆ ಪ್ರೀತಿಯಿದ್ದುದು ಸಹಜವಾಗಿದೆ. ಚೇಕಿತಾನನು ದ್ರೌಪದೀ ಸ್ವಯಂವರ ಮಂಟಪದಲ್ಲಿ ಹಾಜರಿದ್ದ. ಮುಂದೆ ಇಂದ್ರಪ್ರಸ್ಥದಲ್ಲಿ ಮಯನು ನಿರ್ಮಿಸಿಕೊಟ್ಟ ಭವ್ಯ ಅರಮನೆಗೆ ಧರ್ಮರಾಯನು ಪ್ರವೇಶ ಮಾಡಿದಾಗ ಹಾಜರಿದ್ದ ದೊರೆಗಳಲ್ಲಿ ಚೇಕಿತಾನನೂ ಒಬ್ಬ. ರಾಜಸೂಯ ಯಾಗದಲ್ಲಿ ಚೇಕಿತಾನನು ಧರ್ಮರಾಯನಿಗೆ ಸೊಗಸಾದ ಬತ್ತಳಿಕೆಯನ್ನು ಉಡುಗೊರೆಯಾಗಿ ಕೊಟ್ಟನೆಂದು ಹೇಳಲಾಗಿದೆ. ಮುಂದೆ ಮಹಾಭಾರತ ಯುದ್ಧದಲ್ಲಿ ‘ಚೇಕಿತಾನನು ಪಾಂಡವರೊಂದಿಗೆ ಸೇರಿ ಸುಶರ್ಮ ಕೃಪ ಚಿತ್ರಸೇನ ಅನುವಿಂದ ದ್ರೋಣ ಮೊದಲಾದವರೊಂದಿಗೆ ಹೋರಾಡಿ ಕೊನೆಗೆ ದುರ್ಯೋಧನನಿಂದ ಹತನಾದನೆಂದು ಶಲ್ಯಪರ್ವದಲ್ಲಿ ಹೇಳಲಾಗಿದೆ.
ಯುದ್ಧ ಮುಗಿದ ನಂತರ ಒಂದು ದಿನ ವೇದವ್ಯಾಸರು ಗಂಗಾತೀರದಲ್ಲಿ ನಿಂತು ಯುದ್ಧದಲ್ಲಿ ಮಡಿದ ವೀರರನ್ನೆಲ್ಲ ಆಹ್ವಾನಿಸಿದಾಗ ಮೇಲೆದ್ದು ಬಂದವರಲ್ಲಿ ಚೇಕಿತಾನನೂ ಒಬ್ಬನಾಗಿದ್ದನೆಂದು ಪುತ್ರದರ್ಶನ ಪರ್ವ ಹೇಳುತ್ತದೆ.
ಪಾಂಚಾಲ ದೇಶದ ರಾಜಕುಮಾರನಾದ ಈತನ ಸೋದರ ಉತ್ತಮೌಜಸ. ಇಬರಿಬ್ಬರೂ ಪಾಂಡವ ಪಕ್ಷದಲ್ಲಿದ್ದು ಹೋರಾಡಿದರು. ಯುಧಾಮನ್ಯುವು ಮಹಾಭಾರತ ಯುದ್ಧದಲ್ಲಿ ಅರ್ಜುನನ ಅಂಗರಕ್ಷಕನಾಗಿದ್ದ. ಉತ್ತಮೌಜಸನೂ ಅಷ್ಟೆ. ಯುದ್ಧದ ಕೊನೆಯ ದಿನ ರಾತ್ರಿ ಯುಧಾಮನ್ಯುವು ಅಶ್ವತ್ಥಾಮನಿಂದ ಹತನಾದನೆಂದು ಸೌಪ್ತಿಕ ಪರ್ವದಲ್ಲಿ ಹೇಳಲಾಗಿದೆ. ಸಹಜವಾಗಿ ಪಾಂಡವ ಪಕ್ಷಪಾತಿಯಾಗಿದ್ದ ಈತ ಪಾಂಡವರೆಲ್ಲರಿಗೆ ಪ್ರಿಯಾಗಿದ್ದ. ಅಪ್ರತಿಮ ಹೋರಾಟಗಾರನಾಗಿದ್ದ ಈತನ ಅದ್ಭುತ ಕುದುರೆಗಳು ರೂಪದಲ್ಲಿ ಮತ್ತು ಸತ್ತ್ವದಲ್ಲಿ ಅದ್ವಿತೀಯವಾಗಿದ್ದು ತುಂಬ ಆಕರ್ಷಕವಾಗಿದ್ದುವಂತೆ!
ಶ್ರುತಾಯುಧ - ವರಗಳನ್ನು ಕೋರಿ ಪಡೆಯುವವರಿದ್ದಾರೆ. ಆದರೆ ವರಪ್ರದಾತರು ಕೊಡುವ ಎಚ್ಚರಿಕೆಗಳನ್ನು ಸರಿಯಾಗಿ ಪಾಲಿಸದಿದ್ದರೆ ಎಂಥ ಅನಾಹುತವಾಗುತ್ತದೆ ಎಂಬುದಕ್ಕೆ ಶ್ರುತಾಯುಧನ ಕಥೆ ಒಂದು ಉದಾಹರಣೆ ದ್ರೋಣ ಪರ್ವದ ಸೈಂಧವ ವಧಾ ಪ್ರಕರಣದಲ್ಲಿ ಈತನ ಪ್ರಸಕ್ತಿಯಿದೆ. ಶ್ರುತಾಯುದ
ಮೂಲ ...{Loading}...
ನೀಲಚಿತ್ರಾಯುಧನು ದಕ್ಷಿಣ
ಚೋಳ ಕೇರಳ ಪಾಂಡ್ಯ ಧರಣೀ
ಪಾಲಕರೊಳೀ ಚಂದ್ರಸೇನ ಸಮುದ್ರ ಸೇನಕರು
ಲೋಲನಯನೆ ಕಳಿಂಗಧರಣೀ
ಪಾಲನೀತನು ಚೇಕಿತಾನ ನೃ
ಪಾಲನೀತನು ಭಾನುದತ್ತಮಹೀಶ ನೋಡೆಂದ ॥53॥
೦೫೪ ಇತ್ತಲೀಕ್ಷಿಸು ಪೌಣ್ಡ್ರಕನ ...{Loading}...
ಇತ್ತಲೀಕ್ಷಿಸು ಪೌಂಡ್ರಕನ ಭಗ
ದತ್ತನನು ಕಾಂಭೋಜನನು ಹರ
ದತ್ತನನು ವರಹಂಸ ಡಿಬಿಕರ ಮಾದ್ರಭೂಪತಿಯ
ಇತ್ತಲು ಜರಾಸಂಧ ಮಣಿಮಾ
ನಿತ್ತ ಸಹದೇವನು ಬೃಹದ್ರಥ
ನಿತ್ತಲೀತನು ದಂಡಧಾರಕ ನೃಪನು ನೋಡೆಂದ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇತ್ತ ಕಡೆ ನೋಡು, ಪೌಂಡ್ರಕ, ಭಗದತ್ತ, ಕಾಂಭೋಜ, ಹರದತ್ತ, ಹಂಸ ಡಿಬಿಕರು ಮಾದ್ರ ಭೂಪತಿಯಾದ ಜರಾಸಂಧನನ್ನು. ಮಣಿಮಾನ, ಸಹದೇವರು ಇವರು. ಬೃಹದ್ರಥ ಈ ಕಡೆ, ಇವನು ದಂಡಧಾರಕನೃಪ-ಇವರೆಲ್ಲರನ್ನು ನೋಡೆಂದು ಧೃಷ್ಟದ್ಯುಮ್ನ ತೋರಿಸಿದ.
ಟಿಪ್ಪನೀ (ಕ.ಗ.ಪ)
ಪೌಂಡ್ರಕ - ಪುಂಡ್ರ ವಂಗ ದೇಶಗಳ ಅಧಿಪತಿಯಾದ ಪೌಂಡ್ರಕ ವಾಸುದೇವನಿಗೆ ತಾನು ಶ್ರೀಕೃಷ್ಣನಿಗೆ ಯಾವ ‘ವಿಧದಲ್ಲೂ ಕಡಿಮೆಯಿಲ್ಲ ಎಂಬ ಅಹಂಭಾವವಿತ್ತು. ಈತನ ರಾಜ್ಯಕ್ಕೆ ಕರೂಷವೆಂದೂ ಹೆಸರಿತ್ತು. ಕೃಷ್ಣನು ಈ ರಾಜ್ಯದ ಮೇಲೆ ದಂಡೆತ್ತಿ ಹೋಗಿ ಗೆದ್ದಿದ್ದ. ಈ ಪೌಂಡ್ರಕನು ಶ್ರೀಕೃಷ್ಣನಂತೆಯೇ ಶಂಖ, ಚಕ್ರ, ಗದಾಧಾರಿಯಾಗಿರುತ್ತಿದ್ದ. ಶ್ರೀಕೃಷ್ಣನ ವೇಷ ಭೂಷಣಗಳನ್ನೂ ಅನುಕರಿಸುತ್ತಿದ್ದ. ಇವನು ಜರಾಸಂಧನ ವಿಷಯವಾಗಿ ಆದಿಪರ್ವ ಮತ್ತು ಸಭಾಪರ್ವಗಳಲ್ಲಿ ಪ್ರಸಕ್ತಿಯಿದೆ.
ಮೂಲ ...{Loading}...
ಇತ್ತಲೀಕ್ಷಿಸು ಪೌಂಡ್ರಕನ ಭಗ
ದತ್ತನನು ಕಾಂಭೋಜನನು ಹರ
ದತ್ತನನು ವರಹಂಸ ಡಿಬಿಕರ ಮಾದ್ರಭೂಪತಿಯ
ಇತ್ತಲು ಜರಾಸಂಧ ಮಣಿಮಾ
ನಿತ್ತ ಸಹದೇವನು ಬೃಹದ್ರಥ
ನಿತ್ತಲೀತನು ದಂಡಧಾರಕ ನೃಪನು ನೋಡೆಂದ ॥54॥
೦೫೫ ಭೂರಿಭೂರಿಶ್ರವನು ದಕ್ಷಿಣ ...{Loading}...
ಭೂರಿಭೂರಿಶ್ರವನು ದಕ್ಷಿಣ
ವೀರಬಾಹ್ಲಿಕ ವಿಂಧ್ಯ ಚಿತ್ರ ಭ
ಗೀರಥನು ನೃಪವರ ಜಯದ್ರಥ ಶಿಬಿ ಶ್ರುತಾಯುಧರು
ವೀರ ವೃದ್ಧಕ್ಷತ್ರ ಸೃಂಜಯ
ಚಾರು ಭುಜಬಲ ಸೋಮದತ್ತ ಮ
ಹೀರಮಣರಿವರಿತ್ತಲಿದೆ ತರಳಾಕ್ಷಿ ನೋಡೆಂದ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈತ ಭೂರಿ, ಭೂರಿಶ್ರವ. ಇವರು ದಕ್ಷಿಣದ ವೀರ ಬಾಹ್ಲಿಕ, ವಿಂಧ್ಯ, ಚಿತ್ರ, ಭಗೀರಥರು. ಇವರು ನೃಪ ಶ್ರೇಷ್ಠ ಜಯದ್ರಥ, ಶಿಬಿ, ಶ್ರುತಾಯುಧರು. ವೀರರಾದ ವೃದ್ಧಕ್ಷತ್ರ, ಸೃಂಜಯ ಸೋಮದತ್ತ-ಇವರು ಬಹುಭುಜಬಲ ಸಮರ್ಥರಾದ ಮಹೀರಮಣರು - ಚಂಚಲವಾದ ಕಣ್ಣುಳ್ಳ ದ್ರೌಪದಿಯೇ ನೋಡೆಂದು ಧೃಷ್ಟದ್ಯುಮ್ನನು ತೋರಿಸಿದನು.
ಟಿಪ್ಪನೀ (ಕ.ಗ.ಪ)
ಭೂರಿ-ಇವನು ಕುರುವಂಶದ ಸೋಮದತ್ತನ ಪುತ್ರ. ಇವನ ಇಬ್ಬರು ತಮ್ಮಂದಿರ ಹೆಸರು ಭೂರಿಶ್ರವ ಮತ್ತು ಶಲನೆಂದಾಗಿತ್ತು.
ಬಾಹ್ಲಿಕ-ಕುರುವಂಶದ ಮಹಾರಾಜ ಪ್ರತೀಪನ ಪುತ್ರ. ದೇವಾಪಿ ಮತ್ತು ಶಾಂತನುವಿನ ಸಹೋದರ. ಇವನು ಮಹಾರಥಿ ವೀರನಾಗಿದ್ದನು. ಇವನ ತಾಯಿಯ ಹೆಸರು ಸುನಂದಾ. ಈಕೆ ಶಿಬಿದೇಶದ ರಾಜಕುಮಾರಿ.
ಜಯದ್ರಥ-ಸಿಂಧು ದೇಶದ ಅರಸನಾದ ವೃದ್ಧಕ್ಷತ್ರನ ಮಗ. ಧೃತರಾಷ್ಟ್ರನ ಮಗಳಾದ ದುಶ್ಯಲೆಯನ್ನು ಮದುವೆಯಾಗಿದ್ದ.
ಶಿಬಿ-ಚಂದ್ರವಂಶದ ಉಶೀನರ ರಾಜನ ಮಗ.
ವೃದ್ಧಕ್ಷತ್ರ-ಇವನು ಸಿಂಧು ದೇಶದ ರಾಜ, ಜಯದ್ರಥನ ತಂದೆ,
ಸೋಮದತ್ತ-ಚಂದ್ರವಂಶದ ಪ್ರತೀಪರಾಜನ ಮಗನಾದ ಬಾಹ್ಲೀಕ ರಾಜನ ಮಗ. ಈತನಿಗೆ ಭೂರಿ, ಭೂರಿಶ್ರವ, ಶಲ ಎಂಬುದಾಗಿ ಮೂವರು ಪುತ್ರರು.ಮಹಾಭಾರತದಲ್ಲಿ ಬರುವ ಒಬ್ಬ ಪ್ರಸಿದ್ಧ ವ್ಯಕ್ತಿ. ಈತ ಮಹಾರಥ ಎಂದು ಬಣ್ಣಿಸಲಾಗಿದೆ. ಇವನು ಪಾಂಚಾಲ ವಂಶದವನು. ಯುಧಿಷ್ಠಿರನ ಮಿತ್ರವರ್ಗದವನು. ಮಹಾಭಾರತದ ಯುದ್ಧಲ್ಲಿ ಪಾಂಡವರ ಪಕ್ಷವನ್ನು ವಹಿಸಿ ಕೌರವರ ವಿರುದ್ಧ ಹೋರಾಡಿ ಅನೇಕರೊಂದಿಗೆ ಕಾದು ಕೊನೆಗೆ ಕರ್ಣನಿಂದ ಹತನಾದವನು (ವಧ್ಯಮಾನೆ ಸಮರೇ ಸೂತ್ರಪುತ್ರೇಣ). ಇವನು ತನ್ನ ಜೀವಮಾನದಲ್ಲೇ ಮೀನು ತಿಂದಿರಲಿಲ್ಲ ಎಂದು ಹೇಳಲಾಗಿದೆ. (ಇದರಿಂದ ಸಾಧಿಸಿದ್ದೇನು ಎಂಬ ಪ್ರಶ್ನೆ ಹಾಗೆ ಉಳಿಯುತ್ತದೆ) ಒಂದು ದೀರ್ಘ ಯಾಗವನ್ನು ಮಾಡಿ ನಾರದ ಪರ್ವತರ ಕರುಣೆಯಿಂದ ಸುವರ್ಣಷ್ಠೀವಿ ಎಂಬ ಮಗನನ್ನು ಪಡೆದನೆಂದು ಶಾಂತಿಪರ್ವದಲ್ಲಿ ಹೇಳಲಾಗಿದೆ. ಈ ಹುಡುಗ ಚಿಕ್ಕವಯಸ್ಸಿನಲ್ಲಿಯೇ ಅಸಾಧಾರಣ ಪ್ರತಿಭೆಯ ಯತಿಯಾಗಿ ಬೆಳಗಿದನಂತೆ. ಇವನ ತೀವ್ರ ತಪಸ್ಸಿಗೆ ಹೆದರಿದ ದೇವೇಂದ್ರನು ಅನೇಕ ಕ್ರೂರ ಪ್ರಾಣಿಗಳ ರೂಪ ಧರಿಸಿ ಸೃಂಜಯನ ಮಗನನ್ನು ಹೆದರಿಸಲು ನೋಡಿದ. ಏನೂ ಸಾಗದಿದ್ದಾಗ ಕೊನೆಗೆ ತನ್ನ ವಜ್ರಾಯುಧವನ್ನೇ ಇವನ ಮೇಲೆ ಪ್ರಯೋಗಿಸಿದ. ಆದರೆ ಆ ತಪಸ್ವಿಗೆ ಏನೂ ಆಗಲಿಲ್ಲ!
ಸೃಂಜಯನ ಮಗ ಸುವರ್ಣಷ್ಠಿವಿಗೆ ಐದು ವರ್ಷ ವಯಸ್ಸು ಆಗಿದ್ದಾಗ ಒಮ್ಮೆ ತಾಯಿಯೊಂದಿಗೆ ಗಂಗಾ ನದಿಯ ತೀರದಲ್ಲಿ ನಡೆದುಕೊಂಡು ಹೋಗುತ್ತಿದ್ದ. ಆಗ ಇಂದ್ರ ಕಳಿಸಿದ ಹುಲಿ ಅವನ ಮೇಲೆ ಆಕ್ರಮಣ ಮಾಡಿ ಕೊಂದು ಹಾಕಿತು. ತಾಯಿಯ ದುಃಖವನ್ನು ಸಹಿಸಲಾರದ ಸೃಂಜಯನೂ ರೋದಿಸಿ ಕೊನೆಗೆ ತನ್ನ ನೆಚ್ಚಿನ ನಾರದನನ್ನು ಸ್ಮರಿಸಿದ. ನಾರದನು ಎಲ್ಲ ಸಂಗತಿ ತಿಳಿದು ಸೃಂಜಯನ್ನು ಸಮಾಧಾನಪಡಿಸಿ ದೇವೇಂದ್ರನನ್ನು ಒಲಿಸಿ ಮಗುವನ್ನು ಹಿಂದಕ್ಕೆ ತರಿಸಿಕೊಟ್ಟನೆಂದು ಮಹಾಭಾರತದ ಶಾಂತಿ ಪರ್ವ ವಿವರಿಸುತ್ತದೆ. ಹೀಗೆ ಸೇಡಿನ ಬುದ್ಧಿಯನ್ನು ಪ್ರದರ್ಶಿಸದೆ ದೇವೇಂದ್ರನನ್ನು ಒಲಿಸಿಕೊಂಡು ತನ್ನ ಪ್ರತಿಭಾವಂತ ಪುತ್ರನನ್ನು ಮರಳಿ ಪಡೆದ ಸಾಹಸ ಸೃಂಜಯನದು.
ದೇವೇಂದ್ರನು ಪ್ರತಿಭಾವಂತರನ್ನು ಕಂಡರೆ ಮುಂದೆ ತನ್ನ ಪೀಠಕ್ಕೆ ಏರಬಹುದು ಎಂಬ ಅಸೂಯೆಯಿಂದ ಅಂಥವರನ್ನೆಲ್ಲ ನಾಶ ಮಾಡಲು ಹೊರಡುತ್ತಿದ್ದ. ಯಾವುದೇ ಕ್ರಮವನ್ನು ಅನುಸರಿಸುವುದಕ್ಕೂ ಅವನು ಹೇಸುತ್ತಿರಲಿಲ್ಲ ಎನ್ನುವುದಕ್ಕೆ ಹಲವಾರು ಪ್ರಕರಣಗಳಲ್ಲಿ ಸುವರ್ಣಷ್ಠಿವಿಯ ಕಥೆಯೂ ಒಂದು ಪ್ರಬಲ ಪ್ರಮಾಣವಾಗಿ ನಿಲ್ಲುತ್ತದೆ.
ಮೂಲ ...{Loading}...
ಭೂರಿಭೂರಿಶ್ರವನು ದಕ್ಷಿಣ
ವೀರಬಾಹ್ಲಿಕ ವಿಂಧ್ಯ ಚಿತ್ರ ಭ
ಗೀರಥನು ನೃಪವರ ಜಯದ್ರಥ ಶಿಬಿ ಶ್ರುತಾಯುಧರು
ವೀರ ವೃದ್ಧಕ್ಷತ್ರ ಸೃಂಜಯ
ಚಾರು ಭುಜಬಲ ಸೋಮದತ್ತ ಮ
ಹೀರಮಣರಿವರಿತ್ತಲಿದೆ ತರಳಾಕ್ಷಿ ನೋಡೆಂದ ॥55॥
೦೫೬ ಈತ ರುಕ್ಮಾಙ್ಗದ ...{Loading}...
ಈತ ರುಕ್ಮಾಂಗದ ಜಯದ್ಬಲ
ನೀತ ಶ್ರುತಸೇನಾಚ್ಯುತಾಯುಧ
ರೀತಗಳು ನಿಯತಾಯು ದೀರ್ಘೋದರ ಮಹೋದರರು
ಈತ ದಮಘೋಷಾತ್ಮಜನು ವಿ
ಖ್ಯಾತ ಶಿಶುಪಾಲನು ಮಹಾಬಲ
ನೀತನಶ್ವತ್ಥಾಮ ಸೌಬಲನೀತ ನೋಡೆಂದ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈತ ರುಕ್ಮಾಂಗದ, ಈತ ಜಯದ್ಬಲ, ಇವರುಗಳು ಶ್ರುತಸೇನ, ಅಚ್ಯುತಾಯುಧರು ನಿಯತಾಯು, ದೀರ್ಘೋದರ ಮಹೋದರರು. ಈತ ದಮಘೋಷನ ಮಗ ಪ್ರಖ್ಯಾತ ಶಿಶುಪಾಲನು. ಮಹಾಪರಾಕ್ರಮಿಯಾದ ಅಶ್ವತ್ಥಾಮನು ಈತನು. ಈತ ಸೌಬಲ-ಇವರುಗಳನ್ನು ನೋಡು.
ಟಿಪ್ಪನೀ (ಕ.ಗ.ಪ)
ಶಿಶುಪಾಲ - ಸಭಾಪರ್ವದಲ್ಲಿ ಶ್ರೀಕೃಷ್ಣನಿಗೆ ರಾಜಸೂಯ ಯಾಗದ ಸಂದರ್ಭದಲ್ಲಿ ಅಗ್ರ ಪೂಜೆ ಸಲ್ಲಿಸುವುದರ ವಿರುದ್ಧ ಉಗ್ರವಾದ ಧ್ವನಿಯೆತ್ತಿದವನು ಶಿಶುಪಾಲ. ಇವನ ಕೃಷ್ಣದ್ವೇಷ ಯಾವ ಪ್ರಮಾಣದ್ದೆಂಬುದು ಇಲ್ಲಿ ತಿಳಿದುಬರುತ್ತದೆ. ಕೃಷ್ಣನನ್ನು ಕೆಣಕುವ ನೆಪದಲ್ಲಿ ಇಡೀ ಸಭೆಯ ಭೀಷ್ಮಾದಿ ಹಿರಿಯರನ್ನೆಲ್ಲಾ ಶಿಶುಪಾಲನು ಮೂರ್ಖರೆಂದು ಕರೆಯುತ್ತಾನೆ. ಕೊನೆಗೆ ಕೃಷ್ಣನ ಮೇಲೆ ಯುದ್ಧ ನಿಶ್ಚಯಿಸಿ ಯುದ್ಧದಲ್ಲಿ ಸಾಯುತ್ತಾನೆ ರುಕ್ಮಾಂಗದ-ಮಹಾರಾಜ ಶಲ್ಯನ ಪುತ್ರ. ಇವನು ತನ್ನ ತಂದೆ ಮತ್ತು ಸಹೋದರ ರುಕ್ಮರಥನೊಂದಿಗೆ ದ್ರೌಪದೀ ಸ್ವಯಂವರಕ್ಕೆ ಬಂದಿದ್ದನು.
ಮೂಲ ...{Loading}...
ಈತ ರುಕ್ಮಾಂಗದ ಜಯದ್ಬಲ
ನೀತ ಶ್ರುತಸೇನಾಚ್ಯುತಾಯುಧ
ರೀತಗಳು ನಿಯತಾಯು ದೀರ್ಘೋದರ ಮಹೋದರರು
ಈತ ದಮಘೋಷಾತ್ಮಜನು ವಿ
ಖ್ಯಾತ ಶಿಶುಪಾಲನು ಮಹಾಬಲ
ನೀತನಶ್ವತ್ಥಾಮ ಸೌಬಲನೀತ ನೋಡೆಂದ ॥56॥
೦೫೭ ಭೂತಳದ ರವಿಯನ್ತೆ ...{Loading}...
ಭೂತಳದ ರವಿಯಂತೆ ಹೊಳೆಹೊಳೆ
ವಾತ ಕರ್ಣನು ತನುಜರೀತಂ
ಗೀತಗಳು ವೃಷಸೇನನಗ್ಗದ ಚಿತ್ರಸೇನಕರು
ಈತನಾಹನೆ ನೋಡೆನಲು ಭಾ
ವಾತಿಶಯ ಸಂಬಂಧ ಭಾವದೊ
ಳೀತನನು ನೋಡಿದಳು ತಿರುಹಿದಳಬಲೆ ಲೋಚನವ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಭೂಮಂಡಲದ ಸೂರ್ಯನಂತೆ ಪ್ರಕಾಶಿಸುತ್ತಿರುವಾತನು ಕರ್ಣನು. ಈತನಿಗೆ ವೃಷಸೇನ, ಶ್ರೇಷ್ಠ ಚಿತ್ರಸೇನಕರು ಮಕ್ಕಳು ಈತನಾಗಬಹುದೇ ನೋಡು” ಎಂದು ಹೇಳಲು ದ್ರೌಪದಿಯು ಅತಿಶಯವಾದ ಮನಸ್ಸಿನ ಸ್ಥಿತಿಯಿಂದ ಸಂಬಂಧಭಾವದಲ್ಲಿ ಈತನನ್ನು ನೋಡಿದಳು. ನೋಡಿ ಕಣ್ಣುಗಳನ್ನು ಅತ್ತ ತಿರುಗಿಸಿದಳು.
ಪದಾರ್ಥ (ಕ.ಗ.ಪ)
ಭಾವ-ಮನಸ್ಸಿನ ಸ್ಥಿತಿ, ತಿರುಹು-ತಿರುಗಿಸು, ಲೋಚನ-ಕಣ್ಣು, ವೃಷಸೇನ-ಕರ್ಣನ ಮಗ, ದುರ್ಯೋಧನನ ಸೇನೆಯ ಒಬ್ಬ ಶ್ರೇಷ್ಠರಥಿಕ, ಚಿತ್ರಸೇನ-ಕರ್ಣನ ಮಕ್ಕಳಲ್ಲಿ ಒಬ್ಬ.
ಮೂಲ ...{Loading}...
ಭೂತಳದ ರವಿಯಂತೆ ಹೊಳೆಹೊಳೆ
ವಾತ ಕರ್ಣನು ತನುಜರೀತಂ
ಗೀತಗಳು ವೃಷಸೇನನಗ್ಗದ ಚಿತ್ರಸೇನಕರು
ಈತನಾಹನೆ ನೋಡೆನಲು ಭಾ
ವಾತಿಶಯ ಸಂಬಂಧ ಭಾವದೊ
ಳೀತನನು ನೋಡಿದಳು ತಿರುಹಿದಳಬಲೆ ಲೋಚನವ ॥57॥
೦೫೮ ಉಕ್ಕಿದಾ ಕಿವಿವೇಟ ...{Loading}...
ಉಕ್ಕಿದಾ ಕಿವಿವೇಟ ಕಣ್ ಬೇ
ಟಕ್ಕೆ ತಂದುದು ಕಂಗಳೀಕೆಯ
ಮುಕ್ಕುಳಿಸಿ ಮೈ ಸೋಂಕಿನಲಿ ಲಟಕಟಸಿದುದು ಹೃದಯ
ಸಿಕ್ಕಿತಳಲಿಗೆ ಸೋತು ಸೊಕ್ಕಿನ
ಚುಕ್ಕಿಯೋ ಚಾಪಳವೊ ಸಿದ್ಧಿಯೊ
ಅಕ್ಕಜವೋ ತಾನೆನುತ ಚಿಂತಿಸಿತಾ ನೃಪವ್ರಾತ ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಿಂದೆ ಇವಳ ಬಗ್ಗೆ ಕೇಳಿ ಕೇಳಿ ಉಂಟಾಗಿದ್ದ ಮೋಹದ ಉತ್ಸಾಹ ಕಣ್ಣಿಂದ ಈಕೆಯನ್ನು ನೋಡಬೇಕೆಂಬ ಒಲುಮೆಯಾಯ್ತು. ಕಣ್ಣುಗಳು ಈಕೆಯನ್ನು ಮುಕ್ಕುಳಿಸಿ ಕುಡಿಯಲು, ಅವಳ ದೇಹ ಸ್ಪರ್ಶಕ್ಕಾಗಿ ಹೃದಯ ಚಡಪಡಿಸಿತು. ಮನಸ್ಸು ಸೋತು ದುಃಖಕ್ಕೆ ಸಿಕ್ಕಿತು. ಅಹಂಕಾರದ ಚಿಹ್ನೆಯೋ, ಚಂಚಲತೆಯೋ, ಸಿದ್ಧಿಯೋ, ಬೆರಗೋ ಎಂದು ರಾಜಸಮೂಹ ಚಿಂತಿಸುತ್ತಿತ್ತು.
ಪದಾರ್ಥ (ಕ.ಗ.ಪ)
ಉಕ್ಕು-ಹೆಚ್ಚಾಗು, ಕಿವಿವೇಟ-ಕೇಳುವುದರಿಂದಾಗುವ ಮೋಹ, ಕಣ್ ಬೇಟ-ಕಂಡಕೂಡಲೇ ಮೋಹಿಸುವುದು, ಲಟಕಟಿಸು-ಚಡಪಡಿಸು, ಚುಕ್ಕಿ-ಚಿಹ್ನೆ, ಚಾಪಳ-ಚಂಚಲತೆ, ಅಕ್ಕಜ-ಬೆರಗು
ಮೂಲ ...{Loading}...
ಉಕ್ಕಿದಾ ಕಿವಿವೇಟ ಕಣ್ ಬೇ
ಟಕ್ಕೆ ತಂದುದು ಕಂಗಳೀಕೆಯ
ಮುಕ್ಕುಳಿಸಿ ಮೈ ಸೋಂಕಿನಲಿ ಲಟಕಟಸಿದುದು ಹೃದಯ
ಸಿಕ್ಕಿತಳಲಿಗೆ ಸೋತು ಸೊಕ್ಕಿನ
ಚುಕ್ಕಿಯೋ ಚಾಪಳವೊ ಸಿದ್ಧಿಯೊ
ಅಕ್ಕಜವೋ ತಾನೆನುತ ಚಿಂತಿಸಿತಾ ನೃಪವ್ರಾತ ॥58॥
೦೫೯ ಇತ್ತ ನೋಡೌ ...{Loading}...
ಇತ್ತ ನೋಡೌ ತಂಗಿ ಯದು ಭೂ
ಪೋತ್ತಮನನಮರಾರಿ ಕದಳೀ
ಮತ್ತ ದಂತಿಯ ನಿಖಿಳ ನಿಗಮಾವಳಿ ಶಿರೋಮಣಿಯ
ಉತ್ತರೋತ್ತರ ರಮ್ಯಮೂರ್ತಿಯ
ನುತ್ತಮಾಮಲ ಕೀರ್ತಿಯನು ಮನ
ಹತ್ತುವಡೆ ಹಳಿವಿಲ್ಲ ಕೃಷ್ಣನ ವರಿಸು ನೀನೆಂದ ॥59॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃಷ್ಟದ್ಯುಮ್ನನು ಮುಂದುವರೆಸಿ “ಇತ್ತ ನೋಡಮ್ಮಾ ತಂಗಿ, ಈ ಯದುಭೂಪರಲ್ಲಿ ಶ್ರೇಷ್ಠನಾದವನನ್ನು. ರಾಕ್ಷಸರು ಎಂಬ ಬಾಳೆಯವನಕ್ಕೆ ಮದಿಸಿದ ಆನೆಯಿದ್ದಂತೆ ಇವನು. ಸಕಲ ವೇದ ಸಮೂಹಕ್ಕೆ ರತ್ನಪ್ರಾಯನು. ಶ್ರೇಯಸ್ಸಿನ ಸುಂದರ ಮೂರ್ತಿಯು. ಅವನ ಉನ್ನತವಾದ ನಿರ್ಮಲವಾದ ಕೀರ್ತಿಯು ಮನಮುಟ್ಟುವುದಾದರೆ ದೋಷವಿಲ್ಲ. ನೀನು ಕೃಷ್ಣನನ್ನು ಸ್ವೀಕರಿಸು” ಎಂದು ಹೇಳಿದನು.
ಪದಾರ್ಥ (ಕ.ಗ.ಪ)
ಅಮರಾರಿ-ರಾಕ್ಷಸರು, ಕದಳಿ-ಬಾಳೆ, ಮತ್ತದಂತಿ-ಮದಿಸಿದ ಆನೆ, ಉತ್ತರೋತ್ತರ-ಶ್ರೇಯಸ್ಸು, ಉತ್ತಮ-ಉನ್ನತ, ಅಮಲ-ನಿರ್ಮಲ, ಹತ್ತು-ಮುಟ್ಟು, ಹಳಿವು-ದೋಷ, ವರಿಸು-ಸ್ವೀಕರಿಸು
ಮೂಲ ...{Loading}...
ಇತ್ತ ನೋಡೌ ತಂಗಿ ಯದು ಭೂ
ಪೋತ್ತಮನನಮರಾರಿ ಕದಳೀ
ಮತ್ತ ದಂತಿಯ ನಿಖಿಳ ನಿಗಮಾವಳಿ ಶಿರೋಮಣಿಯ
ಉತ್ತರೋತ್ತರ ರಮ್ಯಮೂರ್ತಿಯ
ನುತ್ತಮಾಮಲ ಕೀರ್ತಿಯನು ಮನ
ಹತ್ತುವಡೆ ಹಳಿವಿಲ್ಲ ಕೃಷ್ಣನ ವರಿಸು ನೀನೆಂದ ॥59॥
೦೬೦ ಮದನನಯ್ಯನು ಮೂಜಗವ ...{Loading}...
ಮದನನಯ್ಯನು ಮೂಜಗವ ಮಾ
ಡಿದನ ತಾತನು ರೂಪ ವಿಭವವ
ನಿದರೊಳಗೆ ನೀ ನೋಡಿಕೋ ಯಾದವ ಶಿರೋಮಣಿಯ
ಸುದತಿಯರ ಸೇರುವೆಗಳನು ನೋ
ಡಿದರೆ ಧಾರುಣಿ ಲಕ್ಷ್ಮಿ ಕೃಷ್ಣನ
ಪದಯುಗವನೋಲೈಸುತಿಹರಬುಜಾಕ್ಷಿ ಕೇಳ್ ಎಂದ ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಈ ಯಾದವ ಶಿರೋಮಣಿಯು ಮನ್ಮಥನ ತಂದೆ. ಮೂರುಲೋಕವನ್ನು ಸೃಷ್ಟಿಸಿದ ಬ್ರಹ್ಮನ ತಂದೆ. ಈತನ ರೂಪವೈಭವವನ್ನು ಇದರೊಳಗೆ ನೀನು ನೋಡಿಕೊಳ್ಳಬಹುದು. ಸುಂದರಿಯರ ಒಡನಾಟ ನೋಡಿದರೆ, ಭೂದೇವಿ, ಲಕ್ಷ್ಮೀದೇವಿಯರು ಕೃಷ್ಣನ ಚರಣ ದ್ವಂದ್ವಗಳ ಸೇವೆ ಮಾಡುತ್ತಿರುವರು. ಕಮಲಾಕ್ಷಿ, ಈತನಾಗಬಹುದೇ ನೋಡು” ಎಂದು ಧೃಷ್ಟದ್ಯುಮ್ನನು ಕೇಳಿದನು.
ಪದಾರ್ಥ (ಕ.ಗ.ಪ)
ಸುದತಿ-ಸುಂದರಿ, ವಿಭವ-ವೈಭವ, ಸೇರುವೆ-ಒಡನಾಟ, ಓಲೈಸು-ಸೇವೆ ಮಾಡು, ಅಬುಜಾಕ್ಷಿ-ಕಮಲಾಕ್ಷಿ
ಪಾಠಾನ್ತರ (ಕ.ಗ.ಪ)
ಸೇರುವೆಗಳ - ಸೇರುವೆಗಳನು : ಆದಿಪರ್ವ, ಮೈ.ವಿ.ವಿ.- ಡಾ. ಕೆ.ಆರ್.ಶೇಷಗಿರಿ
ಮೂಲ ...{Loading}...
ಮದನನಯ್ಯನು ಮೂಜಗವ ಮಾ
ಡಿದನ ತಾತನು ರೂಪ ವಿಭವವ
ನಿದರೊಳಗೆ ನೀ ನೋಡಿಕೋ ಯಾದವ ಶಿರೋಮಣಿಯ
ಸುದತಿಯರ ಸೇರುವೆಗಳನು ನೋ
ಡಿದರೆ ಧಾರುಣಿ ಲಕ್ಷ್ಮಿ ಕೃಷ್ಣನ
ಪದಯುಗವನೋಲೈಸುತಿಹರಬುಜಾಕ್ಷಿ ಕೇಳೆಂದ ॥60॥
೦೬೧ ಎನಲು ಭಕುತಿಯ ...{Loading}...
ಎನಲು ಭಕುತಿಯ ಭಾವರಸದಲಿ
ನೆನೆದು ಹೊಂಪುಳಿವೋಗಿ ರೋಮಾಂ
ಚನದ ಮೈಯುಬ್ಬಿನಲಿ ತನು ಪುಳಕಾಂಬು ಪೂರದಲಿ
ಮನದೊಳಗೆ ವಂದಿಸಿದಳೆನಗೀ
ತನಲಿ ಗುರುಭಾವನೆಯ ಮತಿ ಸಂ
ಜನಿಸಿತೇನೆಂದರಿಯೆನೆಂದಳು ಕಮಲಮುಖಿ ನಗುತ ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಣ್ಣನ ಮಾತು ಕೇಳಿ ದ್ರೌಪದಿಯು ಭಕ್ತಿಯ ಮನಸ್ಸಿನ ಆನಂದದಲ್ಲಿ ಮುಳುಗಿ ಪುಳಕಿತಳಾಗಿ ರೋಮಾಂಚನದ ಹಿಗ್ಗಿನಲ್ಲಿ, ಅವಳ ದೇಹವು ರೋಮಾಂಚನದ ನೀರಿನ ಪ್ರವಾಹದಲ್ಲಿ ನೆನೆದವು. ಮನಸ್ಸಿನಲ್ಲೇ ಕೃಷ್ಣನನ್ನು ವಂದಿಸಿದಳು. “ನನಗೆ ಈತನಲ್ಲಿ ಗುರುಭಾವನೆಯ ಬುದ್ಧಿ ಹುಟ್ಟಿತು. ಏಕೆಂದು ನನಗೆ ತಿಳಿಯದು” ಎಂದು ಕಮಲಮುಖಿಯು ನಗುತ್ತ ಹೇಳಿದಳು.
ಪದಾರ್ಥ (ಕ.ಗ.ಪ)
ಹೊಂಪುಳಿ-ಪುಲಕಿತ, ಮೈಯುಬ್ಬು-ಹಿಗ್ಗು, ಪುಳಕಾಂಬು-ರೋಮಾಂಚನದ ನೀರು, ಪೂರ-ಪ್ರವಾಹ, ಸಂಜನಿಸಿತು-ಹುಟ್ಟಿತು
ಮೂಲ ...{Loading}...
ಎನಲು ಭಕುತಿಯ ಭಾವರಸದಲಿ
ನೆನೆದು ಹೊಂಪುಳಿವೋಗಿ ರೋಮಾಂ
ಚನದ ಮೈಯುಬ್ಬಿನಲಿ ತನು ಪುಳಕಾಂಬು ಪೂರದಲಿ
ಮನದೊಳಗೆ ವಂದಿಸಿದಳೆನಗೀ
ತನಲಿ ಗುರುಭಾವನೆಯ ಮತಿ ಸಂ
ಜನಿಸಿತೇನೆಂದರಿಯೆನೆಂದಳು ಕಮಲಮುಖಿ ನಗುತ ॥61॥
೦೬೨ ಹಿರಿಯನೀ ಕೃಷ್ಣಙ್ಗೆ ...{Loading}...
ಹಿರಿಯನೀ ಕೃಷ್ಣಂಗೆ ನೀಲಾಂ
ಬರನು ನೋಡಾದೊಡೆ ಮುರಾರಿಯ
ಹಿರಿಯ ಮಗನನು ಲೋಕಮೂರರ ಬಂಧಿಕಾರನನು
ಹರನ ಕಣ್ಣಿಗೆ ಬಗೆಯನೆಂಬೀ
ಬಿರುದು ಮನ್ಮಥನೀತನೀತನ
ವರ ತನುಜನನಿರುದ್ಧನಿದು ಯದುರಾಜಕುಲವೆಂದ ॥62॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಈ ಕೃಷ್ಣನಿಗೆ ಹಿರಿಯನಾದವನು ಬಲರಾಮ. ನೋಡು, ಆಗುವ ಹಾಗಿದ್ದರೆ. ಇಗೋ ಈತನು ಕೃಷ್ಣನ ಹಿರಿಯ ಮಗ ಮೂರು ಲೋಕವನ್ನೂ ಸೆರೆ ಹಿಡಿಯುವ ಸೌಂದರ್ಯ ಇವನದು. ಹರನ ಕಣ್ಣಿಗೆ ಹೆದರದ ಮನ್ಮಥನೆಂಬ ಎಂಬ ಬಿರುದುಳ್ಳ ಮನ್ಮಥ ಈತ ನೋಡು. ಈತನ ಶ್ರೇಷ್ಠ ಮಗ ಅನಿರುದ್ಧನು. ಇವರೆಲ್ಲ ಯಾದವ ಕುಲದ ಪ್ರಮುಖರು.
ಪದಾರ್ಥ (ಕ.ಗ.ಪ)
ನೀಲಾಂಬರ-ಬಲರಾಮ, ಬಂಧಿಕಾರ-ಸೆರೆಹಿಡಿಯುವ, ಬಗೆ-ವಿಚಾರಿಸು, ತನುಜ-ಮಗ
ಟಿಪ್ಪನೀ (ಕ.ಗ.ಪ)
ಬಲರಾಮ-ವಸುದೇವನಿಂದ ದೇವಕಿಯ ಗರ್ಭವನ್ನು ಸೇರಿ ಬಳಿಕ ಮಾಯೆಯಿಂದ ರೋಹಿಣಿಯ ಗರ್ಭಕ್ಕೆ ಸಂಕ್ರಮಿಸಿ ರೋಹಿಣಿಯಿಂದ ಜನಿಸಿದವನು. ಬಲಾಧಿಕನಾದುದರಿಂದ ಬಲ, ಬಲದೇವನೆಂತಲೂ, ಬಲಾಧಿಕನೂ ಮನೋಹರನೂ ಆದುದರಿಂದ ಬಲರಾಮನೆಂತಲೂ ಹೆಸರು. ಇವನ ಆಯುಧಗಳು ಮುಸಲ (ಒನಕೆ), ಹಲ (ನೇಗಿಲು) ಗಳಾಗಿದ್ದುದರಿಂದ ಮುಸಲೀ, ಹಲೀ ಎಂತಲೂ, ಒಂದು ಗರ್ಭದಿಂದ ಮತ್ತೊಂದು ಗರ್ಭಕ್ಕೆ ಸಂಕ್ರಮಿಸಿದ ಕಾರಣ ಸಂಕರ್ಷಣನೆಂದೂ, ನೀಲಿಯ ಪಟ್ಟೆ ವಸ್ತ್ರ ಇವನಿಗೆ ಅತ್ಯಂತ ಪ್ರಿಯವಾದ್ದರಿಂದ ನೀಲಾಂಬರನೆಂದೂ ಹೆಸರು. ರೋಹಿಣಿಯ ಮಗನಾದ್ದರಿಂದ ರೌಹಿಣೀಯ.
ಪ್ರದ್ಯುಮ್ನ-ಕೃಷ್ಣನಿಂದ ರುಕ್ಮಿಣಿಯಲ್ಲಿ ಜನಿಸಿದವನು. ಮನ್ಮಥನ ಅವತಾರ, ಸನತ್ಕುಮಾರಾಂಶ ಸಂಭೂತ.
ಅನಿರುದ್ಧ-ಪ್ರದ್ಯುಮ್ನನ ಮಗ. ಇವನ ತಾಯಿ ರುಕ್ಮವತಿ.
ಮೂಲ ...{Loading}...
ಹಿರಿಯನೀ ಕೃಷ್ಣಂಗೆ ನೀಲಾಂ
ಬರನು ನೋಡಾದೊಡೆ ಮುರಾರಿಯ
ಹಿರಿಯ ಮಗನನು ಲೋಕಮೂರರ ಬಂಧಿಕಾರನನು
ಹರನ ಕಣ್ಣಿಗೆ ಬಗೆಯನೆಂಬೀ
ಬಿರುದು ಮನ್ಮಥನೀತನೀತನ
ವರ ತನುಜನನಿರುದ್ಧನಿದು ಯದುರಾಜಕುಲವೆಂದ ॥62॥
೦೬೩ ಸಾರಣನು ಕಲಿ ...{Loading}...
ಸಾರಣನು ಕಲಿ ಸಾಂಬನೀತನು
ಚಾರು ದೀಪಕನೀತನಮಲಾ
ಕ್ರೂರ ಸತ್ಯಕನೀತ ಸಾತ್ಯಕಿ ಈತ ಕೃತವರ್ಮ
ಸಾರಮೌಂಜಸನೀತನೀತ ವಿ
ದೂರಣಾದಿ ಸಮಸ್ತ ಯಾದವ
ವೀರರಿದಸಂಖ್ಯಾತ ಕೃಷ್ಣ ಕುಮಾರರಿವರೆಂದ ॥63॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈತ ಸಾರಣನು, ಈತ ವೀರಸಾಂಬನು, ಈತ ಸುಂದರ ದೀಪಕನು ಈತನು ನಿರ್ಮಲನಾದ ಅಕ್ರೂರ, ಈತ ಸತ್ಯಕ, ಈತ ಸಾತ್ಯಕಿ, ಈತ ಕೃತವರ್ಮ, ಈತನು ಸಾರಮೌಂಜಸನು, ಈತ ವಿದೂರಣ - ಇವರೇ ಮೊದಲಾದ ಸಮಸ್ತ ಯಾದವವೀರರು ಅಸಂಖ್ಯಾತರು, ಇವರು ಕೃಷ್ಣನ ಮಕ್ಕಳು ಎಂದು ದ್ರೌಪದಿಗೆ ಧೃಷ್ಟದ್ಯುಮ್ನನು ನೆರೆದಿದ್ದ ಅರಸರುಗಳನ್ನು ತೋರಿಸಿದನು.
ಟಿಪ್ಪನೀ (ಕ.ಗ.ಪ)
ಸಾರಣ - ಮಹಾಭಾರತ ಭಾಗವತ ಹಾಗೂ ಪುರಾಣಗಳಲ್ಲಿ ಈತನ ವ್ಯಕ್ತಿತ್ವ ಹಂಚಿಹೋಗಿದೆ. ಸಾರಣನು ವಸುದೇವನ ಮಗ. ವಸುದೇವನ ತಂದೆ ಶೂರಸೇನ, ಶೂರಶೇನನ ತಂದೆತಾಯಿಯರು ದೇವಮೀಢ ಮತ್ತು ಮಾರಿಷ. ಹೀಗೆ ಈ ಯದುವಂಶದ ಚರಿತ್ರೆಯನ್ನು ಗುರುತಿಸಬಹುದು.
ವಸುದೇವನು ಶ್ರೀಕೃಷ್ಣನ ತಂದೆ ಎಂಬುದು ಲೋಕವಿದಿತವಾದ ಸಂಗತಿಯಾಗಿದೆ. ವಸುದೇವ-ದೇವಕಿಯರ ಮಗ ಶ್ರೀಕೃಷ್ಣ. ವಸುದೇವನಿಗೆ ದೇವಕಿಯಲ್ಲದೇ ದೇವಕನ ಆರು ಹೆಣ್ಣುಮಕ್ಕಳೂ ಪತ್ನಿಯರಾಗಿದ್ದರು. ಈ ಪತ್ನಿಯರೇ ಅಲ್ಲದೆ ಮದಿರೆ, ಪೌರವಿ ರೋಹಿಣೀ ಕೌಸಲ್ಯ ಮೊದಲಾದ ಪತ್ನಿಯರೂ ಇದ್ದರು. ಕುಂತಿ ಇವನ ಸೋದರಿ. ರೋಹಿಣಿಯಿಂದ ಬಲರಾಮ, ಗದ, ದುರ್ಮದ, ವಿಫುಲ ಧ್ರುವ ಮೊದಲಾದ ಮಕ್ಕಳಲ್ಲದೆ ದೇವಕಿಯಿಂದ ಸಾರಣ ಎಂಬ ಮಗನೂ ಇದ್ದ. ಪೌರವಿಯಿಂದ ಸುಭದ್ರೆ ಹುಟ್ಟಿದಳು. ಮದಿರೆಯಿಂದ ನಂದ, ಉಪನಂದರು. ಹೀಗೆ ವಸುದೇವ ಅಸಂಖ್ಯ ಪತ್ನಿಯರನ್ನು ಹೊಂದಿದ್ದ. ಅವನ ಅಸಂಖ್ಯಪುತ್ರರಲ್ಲಿ ಸಾರಣನೂ ಒಬ್ಬ.
ಈ ಸಾರಣನು ಸುಭದ್ರೆ ಅರ್ಜುನರ ಮದುವೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ. ಯದುಗಳು ಕೊಟ್ಟ ವಧು ಕಾಣಿಕೆಯನ್ನು ಹಸ್ತಿನಾಪುರಕ್ಕೆ ತೆಗೆದುಕೊಂಡುಹೋಗಿ ಒಪ್ಪಿಸಿ ಬಂದವನು ಸಾರಣ (ಆದಿಪರ್ವ 220-32) ಧರ್ಮರಾಯನು ನಡೆಸಿದ ರಾಜಸೂಯಯಾಗದಲ್ಲಿ ಭಾಗಿಯಾಗಿದ್ದ. ಗೆಳೆಯರೊಂದಿಗೆ ವಿಶ್ವಾಮಿತ್ರನನ್ನು ವಂಚಿಸಲು ಹೋಗಿ ಶಾಪಕ್ಕೆ ಗುರಿಯಾಗುವಂತೆ ಮಾಡಿದನೆಂದು ಮೌಸಲಪರ್ವದ ಮೊದಲ ಅಧ್ಯಾಯದಲ್ಲಿ ಹೇಳಲಾಗಿದೆ ರಾಜಸೂಯಯಾಗದಿಂದ ಹಿಂದಿರುಗಿ ಬಂದ ಮೇಲೆ ಶ್ರೀಕೃಷ್ಣ ಸೌಭರಾಜನಾದ ಸಾಲ್ವನ ಮೇಲೆ ದಂಡೆತ್ತಿಹೋದಾಗ ಸಾರಣನು ಶ್ರೀಕೃಷ್ಣನ ಸಹಾಯಕ್ಕೆ ನಿಂತಿದ್ದನೆಂದು ಹೇಳಲಾಗಿದೆ. ಯುಧಿಷ್ಠಿರನು ನಡೆಸಿದ ಅಶ್ವಮೇದಯಾಗದಲ್ಲಿ ಈತ ಕೃಷ್ಣನೊಂದಿಗೆ ಭಾಗವಹಿಸಿದ್ದನೆಂದು ಅಶ್ವಮೇಧ ಪರ್ವ ಹೇಳುತ್ತದೆ. ಮಹಾಭಾರತ ಯುದ್ಧದಲ್ಲಿ ಈತನು ಭಾಗವಹಿಸದಂತೆ ಕಂಡುಬರುವುದಿಲ್ಲ.
ಇತರ ಯಾದವರಂತೆ ಸಾರಣನ ಸಾವು ಕೂಡ ಶಾಪದಿಂದಲೇ ಘಟಿಸಿದೆ. ದ್ವಾರಕೆಯ ಸಮೀಪದ ಪಿಂಡಾರಕ ಕ್ಷೇತ್ರದಿಂದ ಕಶ್ಯಪ ಕಣ್ವ ದುರ್ವಾಸ ನಾರದ ಮೊದಲಾದ ತಪೋಧನರು ಬಂದರು. ಅಲ್ಲಿ ವಿಹಾರಪರರಾಗಿದ್ದ ಸಾರಣ, ಸಾಂಬ, ಗದ ಮೊದಲಾದ ಯದುವೀರರು ಚೇಷ್ಟೆ ಮಾಡಿದುದುದನ್ನು ಆಗಲೇ ಹೇಳಲಾಗಿದೆ. ಕುಪಿತರಾದ ಋಷಿಗಳು ‘‘ಬಲರಾಮ-ಶ್ರೀಕೃಷ್ಣರನ್ನುಳಿದು ನೀವೆಲ್ಲ ಒನಕೆಯಿಂದಲೇ ಕಡಿದಾಡಿ ಸಾಯುವಿರಿ’’ ಎಂದು ಶಾಪವಿತ್ತರು. ಹೀಗೆ ಅನವಶ್ಯಕವಾಗಿ ಶಾಪವನ್ನು ತಂದುಕೊಂಡು ಹೊಡೆದಾಡಿ ಸತ್ತವರ ಪೈಕಿ ಸಾರಣನೂ ಒಬ್ಬನೆಂದು ಹೇಳಬೇಕಾಗಿದೆ. ವಸುದೇವನ ಮಕ್ಕಳಾದ ಶ್ರೀಕೃಷ್ಣ ಮತ್ತು ಬಲರಾಮರು ಯದುವಂಶದ ಕೀರ್ತಿಯನ್ನು ಎತ್ತಿಹಿಡಿದರೆ ಅವರ ತಮ್ಮಂದಿರು ಮತ್ತು ಮಕ್ಕಳು ಆ ಕೀರ್ತಿಗೆ ಮಸಿ ಬಳಿಯುವ ಕಾರ್ಯವನ್ನು ಮಾಡಿರುವುದು ದುರಂತದ ಸಂಗತಿಯಾಗಿದೆ.
ಸಾಂಬ-ಶ್ರೀಕೃಷ್ಣನಿಂದ ಜಾಂಬವತಿಯ ಗರ್ಭದಲ್ಲಿ ಹುಟ್ಟಿದ ಒಬ್ಬ ಯಾದವ ವೀರ.
ಅಕ್ರೂರ-ಯದುವಂಶದೊಳಗಿರುವ ಸಾತ್ವತವಂಶದ ಶ್ವಫಲ್ಕನ ಪುತ್ರ, ತಾಯಿ ಗಾಂದಿನಿ ಕಂಸನ ಅಷ್ಟ ಮಂತ್ರಗಳಲ್ಲಿ ಒಬ್ಬ ಆಹುಕನ ಮಗಳಾದ ಭುತನುವನ್ನು ಮದುವೆಯಾಗಿದ್ದನು. ಕಂಸನ ಅಪ್ಪಣೆಯಂತೆ ಬಲರಾಮ ಕೃಷ್ಣರನ್ನು ಮಧುರೆಗೆ ಕರೆತರುವಾಗ ಯಮುನೆಯಲ್ಲಿ ಸ್ನಾನ ಮಾಡುತ್ತಿದ್ದ ಅಕ್ರೂರನಿಗೆ ಕೃಷ್ಣ ತನ್ನ ದಿವ್ಯರೂಪವನ್ನೂ ತೋರಿದನು.
ಸತ್ಯಕ-ಯದುವಂಶದ ಶಿನಿಯೆಂಬುವನ ಮಗ. ಈತನ ಮಗ ಸಾತ್ಯಕಿ.
ಸಾತ್ಯಕಿ-ಯದುವಂಶದ ಶಿನಿರಾಜನ ಮಗನಾದ ಸತ್ಯಕನ ಮಗನಾದ ಯುಯುಧಾನನಿಗೆ ಈ ಹೆಸರು ಸಲ್ಲುತ್ತದೆ. ಈತ ವೃಷ್ಣಿ ಕುಲಭೂಷಣ, ಸತ್ಯ ಪ್ರತಿಜ್ಞೆ ಮತ್ತು ಶತ್ರುಮರ್ದನ ವೀರನಾಗಿದ್ದನು.
ಕೃತವರ್ಮ-ಯದುಕುಲದ ಭೋಜವಂಶದ ಅರಸನಾದ ಹೃದಿಕನ ಐದು ಮಂದಿ ಪುತ್ರರಲ್ಲಿ ಮೂರನೆಯವನು. ಹಾರ್ದಿಕನೆಂಬುದು ಇವನ ನಾಮಾಂತರ.
ಮೂಲ ...{Loading}...
ಸಾರಣನು ಕಲಿ ಸಾಂಬನೀತನು
ಚಾರು ದೀಪಕನೀತನಮಲಾ
ಕ್ರೂರ ಸತ್ಯಕನೀತ ಸಾತ್ಯಕಿ ಈತ ಕೃತವರ್ಮ
ಸಾರಮೌಂಜಸನೀತನೀತ ವಿ
ದೂರಣಾದಿ ಸಮಸ್ತ ಯಾದವ
ವೀರರಿದಸಂಖ್ಯಾತ ಕೃಷ್ಣ ಕುಮಾರರಿವರೆಂದ ॥63॥
೦೬೪ ಜಗವನಿನ್ದ್ರಿಯ ಕರಣ ...{Loading}...
ಜಗವನಿಂದ್ರಿಯ ಕರಣ ವಿಷಯಾ
ದಿಗಳನೆಲ್ಲವನೆತ್ತಿ ಮುಖದಲಿ
ತೆಗೆದು ಶ್ರುತಿಶಿರದಮಲ ತತ್ವವನರಸುವಂದದಲಿ
ಬಗೆಯ ಬಯಕೆಯ ಸೊಗಸುಗಳ ದಾ
ಯಿಗನನರಸುತ ಕುಡಿತೆಗಣ್ಣಲಿ
ಮೊಗೆದು ಸೂಸಿದಳಂಬುಜಾನನೆಯಖಿಳ ನೃಪಜನವ ॥64॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಜಗತ್ತನ್ನು, ಇಂದ್ರಿಯ, ಮನಸ್ಸು ವಿಷಯಾದಿಗಳನ್ನು ಯುಕ್ತಿಯಲ್ಲಿ ಹೊರತೆಗೆದಿಟ್ಟು, ವೇದಗಳ ಶಿರೋಪ್ರಾಯವಾದ ಪವಿತ್ರ ತತ್ತ್ವವನ್ನು ಹುಡುಕುವ ರೀತಿಯಲ್ಲಿ, ತನ್ನ ಮನಸ್ಸಿನ ಅಪೇಕ್ಷೆಯ ಚೆಂದದ ಪುಣ್ಯಶಾಲಿಯನ್ನು ಹುಡುಕುತ್ತ ಕಮಲಾನನೆ ದ್ರೌಪದಿಯು ಆ ಎಲ್ಲ ರಾಜಸಮೂಹವನ್ನು ಬೊಗಸೆಗಣ್ಣಿನಲ್ಲಿ ತುಂಬಿಕೊಂಡು ಹೊರಚೆಲ್ಲಿದಳು.
ಪದಾರ್ಥ (ಕ.ಗ.ಪ)
ಕರಣ-ಮನಸ್ಸು, ವಿಷಯಾದಿಗಳು-ಶಬ್ದ, ಸ್ಪರ್ಶ, ರೂಪ, ರಸ-ಗಂಧ, ಮುಖ-ಯುಕ್ತಿ, ಬಗೆ-ಮನಸ್ಸು, ದಾಯಿಗ-ಪುಣ್ಯಶಾಲಿ, ಕುಡಿತೆಗಣ್ಣು-ಬೊಗಸೆಗಣ್ಣು, ಮೊಗೆದು-ತುಂಬಿಕೊಂಡು , ಸೂಸು-ಹೊರಚೆಲ್ಲು
ಮೂಲ ...{Loading}...
ಜಗವನಿಂದ್ರಿಯ ಕರಣ ವಿಷಯಾ
ದಿಗಳನೆಲ್ಲವನೆತ್ತಿ ಮುಖದಲಿ
ತೆಗೆದು ಶ್ರುತಿಶಿರದಮಲ ತತ್ವವನರಸುವಂದದಲಿ
ಬಗೆಯ ಬಯಕೆಯ ಸೊಗಸುಗಳ ದಾ
ಯಿಗನನರಸುತ ಕುಡಿತೆಗಣ್ಣಲಿ
ಮೊಗೆದು ಸೂಸಿದಳಂಬುಜಾನನೆಯಖಿಳ ನೃಪಜನವ ॥64॥
೦೬೫ ಕೆಲರು ಮಧುರಾಪಾಙ್ಗದಲಿ ...{Loading}...
ಕೆಲರು ಮಧುರಾಪಾಂಗದಲಿ ಕಂ
ಗಳ ಮರೀಚಿಯ ಬೆಳಗಿನಲಿ ಕೆಲ
ರೆಳೆನಗೆಯ ಮಿಂಚಿನಲಿ ಸಖಿಯರ ಮೇಳವಾತಿನಲಿ
ಲಲನೆ ನೋಡಿದಳೆಂದು ಸೊಗಸಿನ
ಲೊಲಿವ ಸಖಿಯರಿಗೆಂದಳೆಂದೊಳ
ಗೊಳಗೆ ಬೆರೆತರು ಬಯಲು ಮಧುವಿನ ಬಾಯ ಸವಿಗಳಲಿ ॥65॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೆಲವರು ಮನೋಹರವಾದ ಕಡೆಗಣ್ಣಿನಲ್ಲಿ ತಮ್ಮನ್ನು ನೋಡಿದಳೆಂದೂ, ಕೆಲವರು ಕಣ್ಣುಗಳ ಕಾಂತಿಯ ಬೆಳಕಿನಲ್ಲಿ ತಮ್ಮನ್ನು ಕಂಡಳೆಂದೂ, ಕೆಲವರು ಮಂದಹಾಸದ ಪ್ರಕಾಶದಲ್ಲಿ ಗೆಳತಿಯರ ಜೊತೆ ಸೇರಿ ತಮ್ಮನ್ನು ನೋಡಿದಳೆಂದೂ, ಕೆಲವರು ಸಂತೋಷದಲ್ಲಿ ತಮ್ಮ ಬಗ್ಗೆ ಪ್ರೀತಿಸುವ ಗೆಳತಿಯರಿಗೆ ಹೇಳಿದಳೆಂದೂ ಭಾವಿಸಿಕೊಂಡು ತಮ್ಮೊಳಗೊಳಗೆ ದೊರಕದ ಜೇನಿನ ರುಚಿಯ ಅನುಭವದಲ್ಲಿ ಸಂಭ್ರಮಿಸಿದರು.
ಪದಾರ್ಥ (ಕ.ಗ.ಪ)
ಅಪಾಂಗ-ಕಡೆಗಣ್ಣು, ಮರೀಚಿ-ಕಾಂತಿ, ಮಿಂಚು-ಪ್ರಕಾಶ, ಎಳನಗೆ-ಮಂದಹಾಸ, ಮೇಳವಾತಿನಲಿ-ಜೊತೆಸೇರಿ,
ಮೂಲ ...{Loading}...
ಕೆಲರು ಮಧುರಾಪಾಂಗದಲಿ ಕಂ
ಗಳ ಮರೀಚಿಯ ಬೆಳಗಿನಲಿ ಕೆಲ
ರೆಳೆನಗೆಯ ಮಿಂಚಿನಲಿ ಸಖಿಯರ ಮೇಳವಾತಿನಲಿ
ಲಲನೆ ನೋಡಿದಳೆಂದು ಸೊಗಸಿನ
ಲೊಲಿವ ಸಖಿಯರಿಗೆಂದಳೆಂದೊಳ
ಗೊಳಗೆ ಬೆರೆತರು ಬಯಲು ಮಧುವಿನ ಬಾಯ ಸವಿಗಳಲಿ ॥65॥
೦೬೬ ಗರುವೆಯಿಙ್ಗಿತವರಿದು ...{Loading}...
ಗರುವೆಯಿಂಗಿತವರಿದು ದಂಡಿಗೆ
ಮುರಿದೊಡನೆಯೈತಂದುದೀಕೆಯ
ನೆರವಿ ಕಳುಹುತ ಕಂಗಳಲಿ ಕರಣೇಂದ್ರಿಯಂಗಳಲಿ
ಬರಿಯ ಡಿಂಬದ ಡೊಂಬಿನಲಿ ಕೇ
ಸರಿಯ ಪೀಠವನಿಳಿಯದಿರ್ದರು
ಧರಣಿಪರು ಮುರವೈರಿ ಗಂಗಾಸೂನು ಹೊರತಾಗಿ ॥66॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಚಲುವೆಯ ಅಭಿಪ್ರಾಯವನ್ನು ತಿಳಿದು ಪಲ್ಲಕ್ಕಿ ಹಿಂತಿರುಗಿತು. ಅದರೊಡನೆಯೆ, ಪರಿವಾರದ ಗುಂಪು ಆಕೆಯನ್ನು ಹಿಂಬಾಲಿಸಿತು. ಕೃಷ್ಣ ಮತ್ತು ಗಂಗಾಪುತ್ರನಾದ ಭೀಷ್ಮರನ್ನು ಹೊರತುಪಡಿಸಿ ಉಳಿದ ಧರಣೀಪತಿಗಳು ಕಣ್ಣುಗಳಿಂದಲೂ ಮನಸೇಂದ್ರಿಯಗಳಿಂದಲೂ ಆಕೆಯನ್ನು ಕಳಿಸಿಕೊಡುತ್ತ ಬರಿಯ ಶರೀರ ಮಾತ್ರವಾಗಿ ತೋರಿಕೆಯವೇಷದಲ್ಲಿ ಸಿಂಹಾಸನವನ್ನು ಇಳಿಯದೆ ಮಂಡಿಸಿದ್ದರು.
ಪದಾರ್ಥ (ಕ.ಗ.ಪ)
ಗರುವೆ-ಚೆಲುವೆ, ಇಂಗಿತ-ಅಭಿಪ್ರಾಯ, ನೆರವಿ-ಗುಂಪು, ಡಿಂಬ-ಶರೀರ, ಡೊಂಬ-ತೋರಿಕೆಯ ವೇಷ, ಮುರವೈರಿ-ಕೃಷ್ಣ, ಗಂಗಾಸೂನು-ಭೀಷ್ಮ, ಮುರ-ನರಕಾಸುರನ ಪರಿವಾರದ ಒಬ್ಬ ರಾಕ್ಷಸ, ಶ್ರೀಕೃಷ್ಣನಿಂದ ಮಡಿದ.
ಮೂಲ ...{Loading}...
ಗರುವೆಯಿಂಗಿತವರಿದು ದಂಡಿಗೆ
ಮುರಿದೊಡನೆಯೈತಂದುದೀಕೆಯ
ನೆರವಿ ಕಳುಹುತ ಕಂಗಳಲಿ ಕರಣೇಂದ್ರಿಯಂಗಳಲಿ
ಬರಿಯ ಡಿಂಬದ ಡೊಂಬಿನಲಿ ಕೇ
ಸರಿಯ ಪೀಠವನಿಳಿಯದಿರ್ದರು
ಧರಣಿಪರು ಮುರವೈರಿ ಗಂಗಾಸೂನು ಹೊರತಾಗಿ ॥66॥
೦೬೭ ಮಡಿಸಿದೆಲೆ ಬೆರಳೊಳಗೆ ...{Loading}...
ಮಡಿಸಿದೆಲೆ ಬೆರಳೊಳಗೆ ಬಾಯೊಳ
ಗಡಸಿದೆಲೆ ಬಾಯೊಳಗೆ ಸಚಿವರ
ನುಡಿಯ ಕೇಳರು ಸುಳಿಯ ಕಾಣರು ಲೋಚನಾಗ್ರದಲಿ
ಕಡುಮುಳಿದ ಕಂದರ್ಪ ಶರವವ
ಘಡಿಸಿ ಕೈಗಳ ನೋಡಿ ನೃಪರೆವೆ
ಮಿಡುಕದಿರ್ದರು ಬೆರಳ ಮೂಗಿನ ಹೊತ್ತ ದುಗುಡದಲಿ ॥67॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿಯ ಸೌಂದರ್ಯಕ್ಕೆ ಮರುಳಾಗಿ ಮೈಮರೆತ ನೃಪಸಮೂಹವು, ಬೆರಳಲ್ಲಿ ಮಡಿಸಿದ ಎಲೆ ಬೆರಳೊಳಗೆಯೇ, ಬಾಯೊಳಗೆ ಒತ್ತಿ ಒಳಸೇರಿಸಿದ ಎಲೆ ಬಾಯೊಳಗೇ, ಬಾಯಿಗಿಡದೇ ಅಗಿಯದೇ ಹಾಗೆಯೇ ಕುಳಿತಿತ್ತು. ಮಂತ್ರಿಗಳ ಮಾತು ಕಿವಿಗೆ ಕೇಳಿಸದು. ಕಣ್ಣಿನ ಮುಂದೆ ಸುಳಿಯುವವರು ಕಾಣದಾದರು. ಅತಿ ಕೋಪಿಸಿಕೊಂಡ ಮನ್ಮಥನ ಬಾಣದಿಂದ ಭಂಗಿತರಾಗಿ, ರೆಪ್ಪೆ ಅಲ್ಲಾಡಿಸದೆ, ಮೂಗಿನ ಮೇಲೆ ಬೆರಳಿಟ್ಟು ಚಿಂತೆಯನ್ನು ಹೊತ್ತು ಕುಳಿತಿದ್ದರು.
ಪದಾರ್ಥ (ಕ.ಗ.ಪ)
ಮುಳಿ-ಕೋಪಿಸು, ಕಂದರ್ಪ-ಮನ್ಮಥ, ಅವಘಡಿಸಿ-ಭಂಗಿಸಿ, ಎವೆ-ರೆಪ್ಪೆ, ಮಿಡುಕು-ಅಲ್ಲಾಡು, ದುಗುಡ-ಚಿಂತೆ
ಮೂಲ ...{Loading}...
ಮಡಿಸಿದೆಲೆ ಬೆರಳೊಳಗೆ ಬಾಯೊಳ
ಗಡಸಿದೆಲೆ ಬಾಯೊಳಗೆ ಸಚಿವರ
ನುಡಿಯ ಕೇಳರು ಸುಳಿಯ ಕಾಣರು ಲೋಚನಾಗ್ರದಲಿ
ಕಡುಮುಳಿದ ಕಂದರ್ಪ ಶರವವ
ಘಡಿಸಿ ಕೈಗಳ ನೋಡಿ ನೃಪರೆವೆ
ಮಿಡುಕದಿರ್ದರು ಬೆರಳ ಮೂಗಿನ ಹೊತ್ತ ದುಗುಡದಲಿ ॥67॥
೦೬೮ ರಾಯನೆನ್ದನು ಸಕಲಧರಣೀ ...{Loading}...
ರಾಯನೆಂದನು ಸಕಲಧರಣೀ
ರಾಯರನು ಮನ್ನಿಸದೆ ಮರಳಿದ
ಳಾಯತಾಕ್ಷಿ ಮಹಾಸ್ವಯಂವರದಲಿ ಮಹಾದೇವ
ಜೊಯಿಸರ ಹೋರೆಗರ ಹೇಳಿಕೆ
ಹೋಯಿತೇ ಹೊಳ್ಳಾಗಿ ಪಾಂಡವ
ರಾಯರನು ತೋರಿಸನೆ ಗದುಗಿನ ವೀರ ನಾರಯಣ ॥68॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮಹಾ ಸ್ವಯಂವರದಲ್ಲಿ ಈ ಚೆಲುವೆ ಸಕಲ ಭೂಮಂಡಲದ ರಾಜರನ್ನು ಗೌರವಿಸದೆ ಹಿಂತಿರುಗಿದಳು. ಜೋಯಿಸರ, ಜ್ಯೋತಿಷಿಗಳ ಸಂದೇಶ ನಿಷ್ಪ್ರಯೋಜಕವಾಗಿ ಹೋಯಿತೇ ! ವೀರನಾರಾಯಣನು ಪಾಂಡವ ರಾಯರನ್ನು ತೋರಿಸಲಿಲ್ಲವಲ್ಲ” ಎಂದು ದ್ರುಪದಮಹಾರಾಜನು ಚಿಂತಿಸಿದನು.
ಪದಾರ್ಥ (ಕ.ಗ.ಪ)
ಮನ್ನಿಸು-ಗೌರವಿಸು, ಆಯತಾಕ್ಷಿ-ವಿಶಾಲವಾದ ಕಣ್ಣುಳ್ಳವಳು, ಚೆಲುವೆ,
ಹೋರೆಗ-ಜ್ಯೋತಿಷಿ, ಹೇಳಿಕೆ-ಸಂದೇಶ, ಹೊಳ್ಳು-ನಿಷ್ಪ್ರಯೋಜಕ.
ಮೂಲ ...{Loading}...
ರಾಯನೆಂದನು ಸಕಲಧರಣೀ
ರಾಯರನು ಮನ್ನಿಸದೆ ಮರಳಿದ
ಳಾಯತಾಕ್ಷಿ ಮಹಾಸ್ವಯಂವರದಲಿ ಮಹಾದೇವ
ಜೊಯಿಸರ ಹೋರೆಗರ ಹೇಳಿಕೆ
ಹೋಯಿತೇ ಹೊಳ್ಳಾಗಿ ಪಾಂಡವ
ರಾಯರನು ತೋರಿಸನೆ ಗದುಗಿನ ವೀರ ನಾರಯಣ ॥68॥