೦೦೦ ಸೂ ವೀರ ...{Loading}...
ಸೂ : ವೀರ ಕುಂತೀತನುಜರಿರುಳಂ
ಗಾರವರ್ಮನ ಗೆಲಿದು ಹೊಕ್ಕರು
ಧಾರುಣೀಸುರ ವೇಷದಲಿ ಪಾಂಚಾಲಪಟ್ಟಣವ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ವೀರರಾದ ಕುಂತಿಯ ಮಕ್ಕಳು ಆ ರಾತ್ರಿಯಲ್ಲಿ ಅಂಗಾರವರ್ಮನನ್ನು ಗೆದ್ದು ವಿಪ್ರ ವೇಷದಲ್ಲಿ ಪಾಂಚಾಲರಾಜನ ಪಟ್ಟಣವನ್ನು ಪ್ರವೇಶಿಸಿದರು.
ಪದಾರ್ಥ (ಕ.ಗ.ಪ)
ಧಾರುಣೀಸುರ-ವಿಪ್ರ, ಇರುಳು-ರಾತ್ರಿ, ಹೊಕ್ಕರು-ಪ್ರವೇಶಿಸಿದರು
ಟಿಪ್ಪನೀ (ಕ.ಗ.ಪ)
ಅಂಗಾರವರ್ಮ-ಅಙÁರಪರ್ಣ ಎಂಬುದು ಮೂಲಸಂಸ್ಕೃತಭಾರತದಲ್ಲಿನ ಹೆಸರು. ಕಶ್ಯಪನಿಂದ ಮುನಿಯೆಂಬ ಹೆಂಡತಿಯಲ್ಲಿ ಜನಿಸಿದ ದೇವಗಂಧರ್ವರಲ್ಲಿ ಒಬ್ಬ. ಕುಬೇರನ ಆಪ್ತಮಿತ್ರ. ಒಮ್ಮೆ ಈತನು ತನ್ನ ಮಡದಿಯಾದ ಕುಂಭೀನಸಿಯೊಂದಿಗೆ ಪರಿವಾರ ಸಮೇತನಾಗಿ ಗಂಗೆಯಲ್ಲಿ ರಾತ್ರಿಯ ವೇಳೆ ಜಲಕ್ರೀಡೆಯಾಡುತ್ತಿದ್ದ. ಪಾಂಡವರು ಏಕಚಕ್ರನಗರದಿಂದ ದ್ರೌಪದೀ ಸ್ವಯಂವರಕ್ಕಾಗಿ ಹೋಗುತ್ತ್ತಿದ್ದಾಗ, ಅವರನ್ನು ಅಡ್ಡಹಾಕಿ ಅರ್ಜುನನಿಂದ ಸೋತು, ಶರಣಾಗತನಾಗಿ ಅರ್ಜುನನಿಗೆ ಚಾಕ್ಷುಷೀವಿದ್ಯೆಯನ್ನು (ಸಂಮೋಹನಾಸ್ತ್ರ) ಉಪದೇಶಿಸಿದ. ಧೌಮ್ಯಚಾರ್ಯರನ್ನು ಪುರೋಹಿತರನ್ನಾಗಿ ಸ್ವೀಕರಿಸುವಂತೆ ಪಾಂಡವರಿಗೆ ಹೇಳಿದ. ಅರ್ಜುನನ ಬಾಣಾಗ್ನಿಯಿಂದ ದಗ್ಧವಾದ ತನ್ನ ರಥವನ್ನು ಗಂಧರ್ವ ಮಹಿಮೆಯಿಂದ ಚಿತ್ರರತ್ನಮಯವನ್ನಾಗಿಸಿ, ಅದಕ್ಕೆ ಚಿತ್ರರಥವೆಂಬ ಹೆಸರಿಟ್ಟು, ತನ್ನ ಹೆಸರನ್ನೂ ಚಿತ್ರರಥನೆಂಬುದಾಗಿ ಮಾರ್ಪಡಿಸಿಕೊಂಡು ಗಂಧರ್ವ ಲೋಕಕ್ಕೆ ತೆರಳಿದನು.
ಪಾಂಚಾಲ-ಪಂಚಾಲ ದೇಶಾಧಿಪತಿಯಾದ ಅರಸರಿಗೆಲ್ಲ ಈ ಹೆಸರು ಸಲ್ಲುತ್ತದೆ. ಆದರೆ ಭಾರತದಲ್ಲಿ ಈ ಶಬ್ದ ದ್ರುಪದ, ಅಥವಾ ಆತನ ಮಗನಾದ ಧೃಷ್ಟದ್ಯುಮ್ನನನ್ನು ಮಾತ್ರವೇ sಸೂಚಿಸುತ್ತದೆ.
ಮೂಲ ...{Loading}...
ಸೂ : ವೀರ ಕುಂತೀತನುಜರಿರುಳಂ
ಗಾರವರ್ಮನ ಗೆಲಿದು ಹೊಕ್ಕರು
ಧಾರುಣೀಸುರ ವೇಷದಲಿ ಪಾಂಚಾಲಪಟ್ಟಣವ
೦೦೧ ಅರಸ ಕೇಳೈ ...{Loading}...
ಅರಸ ಕೇಳೈ ಕಲಿಬಕಾಸುರ
ಮರಣಸಮನಂತರದೊಳಾ ಪುರ
ವರದೊಳಿರ್ದರು ವಿಮಲ ವಿಪ್ರಸ್ತೋಮದೊಡಗೂಡಿ
ವರುಷ ತುಂಬಿತು ನಮ್ಮ ಹಸ್ತಿನ
ಪುರವ ಹೊರವಂಟಂದಿನಲಿಯೆಂ
ದರಸ ಕುಂತೀದೇವಿಗೆಂದನು ಧರ್ಮಸುತ ನಗುತ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶೂರನಾದ ಬಕಾಸುರನ ಮರಣದ ತರುವಾಯ ಪಾಂಡವರು ಆ ಶ್ರೇಷ್ಠ ಪಟ್ಟಣದಲ್ಲಿ ನಿರ್ಮಲರಾದ ಬ್ರಾಹ್ಮಣ ಸಮೂಹದೊಂದಿಗೆ ಇದ್ದರು. ಒಂದು ದಿನ ಧರ್ಮಸುತನು ನಗುತ್ತ “ನಮ್ಮ ಹಸ್ತಿನಪುರವನ್ನು ಬಿಟ್ಟು ಹೊರಟಿದ್ದು ಇಂದಿಗೆ ಒಂದು ವರುಷ ಪೂರ್ಣವಾಯಿತು” ಎಂದು ಕುಂತೀದೇವಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಸಮನಂತರ-ತರುವಾಯ, ಸ್ತೋಮ-ಸಮೂಹ, ತುಂಬು-ಪೂರ್ಣವಾಗು
ಮೂಲ ...{Loading}...
ಅರಸ ಕೇಳೈ ಕಲಿಬಕಾಸುರ
ಮರಣಸಮನಂತರದೊಳಾ ಪುರ
ವರದೊಳಿರ್ದರು ವಿಮಲ ವಿಪ್ರಸ್ತೋಮದೊಡಗೂಡಿ
ವರುಷ ತುಂಬಿತು ನಮ್ಮ ಹಸ್ತಿನ
ಪುರವ ಹೊರವಂಟಂದಿನಲಿಯೆಂ
ದರಸ ಕುಂತೀದೇವಿಗೆಂದನು ಧರ್ಮಸುತ ನಗುತ ॥1॥
೦೦೨ ಆ ಸಮಯದಲಿ ...{Loading}...
ಆ ಸಮಯದಲಿ ಬಂದನೊಬ್ಬನು
ಭೂಸುರನು ಸಕುತೂಹಲನು ಬಹು
ದೇಶಪರಿಯಟಣ ಪ್ರವಾಸಾಭ್ಯಾಸ ಶಿಕ್ಷೆಯಲಿ
ಗ್ರಾಸ ಯಾಚಕನಾಗಿ ತಮ್ಮ ನಿ
ವಾಸದಲಿ ಸಲೆ ತುಷ್ಟನಾದ ಮ
ಹೀಸುರನ ಮಾತಾಡಿಸಿದನಂದರಸ ವಿನಯದಲಿ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಸಮಯಕ್ಕೆ ಸರಿಯಾಗಿ, ಕುತೂಹಲದಿಂದ ಕೂಡಿದ ವಿದ್ಯೆಗಾಗಿ ನಾನಾ ದೇಶಗಳನ್ನು ಸಂಚರಿಸುತ್ತಿದ್ದ ಬ್ರಾಹ್ಮಣನೊಬ್ಬನು ಯಾಚಕನಾಗಿ ಅಲ್ಲಿಗೆ ಬಂದನು. ಆಹಾರ ಬೇಡುವವನಾಗಿ ತಮ್ಮ ಮನೆಗೆ ಬಂದು ತೃಪ್ತನಾದ ಬ್ರಾಹ್ಮಣನನ್ನು ಧರ್ಮರಾಯನು ವಿನಯದಿಂದ ಮಾತನಾಡಿಸಿದನು.
ಪದಾರ್ಥ (ಕ.ಗ.ಪ)
ಭೂಸುರ-ಬ್ರಾಹ್ಮಣ, ಪರಿಯಟಣ-ತಿರುಗಾಡು, ಶಿಕ್ಷೆ-ವಿದ್ಯೆ, ಗ್ರಾಸ-ಆಹಾರ, ಯಾಚಕ-ಬೇಡುವವ, ತುಷ್ಟ-ತೃಪ್ತ
ಟಿಪ್ಪನೀ (ಕ.ಗ.ಪ)
ಮಹೀಸುರನ ಮಾತಾಡಿಸಿದನಂದರಸ ದ ಪಾಠಾಂತರಗಳಲ್ಲಿ “ಪರಾಶಿತಧ್ವಶ್ರಮದ ನುಡಿಸಿದನರಸ” ಎಂದರೆ ತೊಲಗಿಸಲ್ಪಟ್ಟ ಮಾರ್ಗಾಯಾಸವುಳ್ಳವನನ್ನು ಎಂದರ್ಥವಾಗುತ್ತದೆ. ಈ ಪಾಠ ಮೂಲಪಾಠವಾಗಿರಬಹುದೆಂದು ತೋರುತ್ತದೆ ಎಂದು ಡಿ.ಎಲ್.ಎನ್ ಅಬಿಪ್ರಾಯಪಡುತ್ತಾರೆ (ಕನ್ನಡ ಗ್ರಂಥ ಸಂಪಾದನೆ - ಡಿ.ಎಲ್.ಎನ್. ಪುಟ 130)
ಮೂಲ ...{Loading}...
ಆ ಸಮಯದಲಿ ಬಂದನೊಬ್ಬನು
ಭೂಸುರನು ಸಕುತೂಹಲನು ಬಹು
ದೇಶಪರಿಯಟಣ ಪ್ರವಾಸಾಭ್ಯಾಸ ಶಿಕ್ಷೆಯಲಿ
ಗ್ರಾಸ ಯಾಚಕನಾಗಿ ತಮ್ಮ ನಿ
ವಾಸದಲಿ ಸಲೆ ತುಷ್ಟನಾದ ಮ
ಹೀಸುರನ ಮಾತಾಡಿಸಿದನಂದರಸ ವಿನಯದಲಿ ॥2॥
೦೦೩ ಎತ್ತಣಿನ್ದಲಿ ಬರವು ...{Loading}...
ಎತ್ತಣಿಂದಲಿ ಬರವು ಬಳಿಕಿ
ನ್ನೆತ್ತ ಗಮನವು ಪೂರ್ವ ಸುಕೃತವ
ಹೊತ್ತುದಿಂದಿನ ದಿವಸವಿದೆಲಾ ಸುಜನ ಸಂಸರ್ಗ
ಉತ್ತರೋತ್ತರ ಸಿದ್ಧಿಯಿಲ್ಲಿಂ
ದಿತ್ತಲೆಮಗೆನೆ ಹಸ್ತಿನಾಪುರ
ದತ್ತಣಿಂದವೆ ಬಂದೆವಾವುದು ದೇಶ ನಿಮಗೆಂದ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲ್ಲಿಂದ ಬಂದಿರಿ ? ಯಾವ ಕಡೆಗೆ ಹೋಗುವಿರಿ ? ಪೂರ್ವ ಪುಣ್ಯದಿಂದ ಈ ದಿವಸ ನಮಗೆ ಸಜ್ಜನರ ಒಡನಾಟ ಪ್ರಾಪ್ತವಾಗಿದೆ. ಇನ್ನು ಮುಂದೆ ನಮಗೆ ಹೆಚ್ಚು ಹೆಚ್ಚಾದ ಅಭಿವೃದ್ಧಿಯು ಫಲಿಸುತ್ತದೆ” ಎಂದು ಧರ್ಮಜ ಹೇಳಲು, “ನಾವು ಹಸ್ತಿನಾಪುರದಿಂದ ಬಂದೆವು. ನಿಮ್ಮದು ಯಾವ ದೇಶ ?” ಎಂದು ಬ್ರಾಹ್ಮಣನು ಕೇಳಿದನು.
ಪದಾರ್ಥ (ಕ.ಗ.ಪ)
ಎತ್ತಣಿಂದ-ಯಾವ ಕಡೆಯಿಂದ, ಬರವು-ಬರವಿಕೆ, ಗಮನ-ಹೋಗುವಿಕೆ, ಸುಕೃತ-ಪುಣ್ಯ, ಹೊತ್ತು-ಪ್ರಾಪ್ತ, ಸಂಸರ್ಗ-ಒಡನಾಟ, ಉತ್ತರೋತ್ತರ-ಹೆಚ್ಚು ಹೆಚ್ಚಾದ ಅಭಿವೃದ್ಧಿ
ಮೂಲ ...{Loading}...
ಎತ್ತಣಿಂದಲಿ ಬರವು ಬಳಿಕಿ
ನ್ನೆತ್ತ ಗಮನವು ಪೂರ್ವ ಸುಕೃತವ
ಹೊತ್ತುದಿಂದಿನ ದಿವಸವಿದೆಲಾ ಸುಜನ ಸಂಸರ್ಗ
ಉತ್ತರೋತ್ತರ ಸಿದ್ಧಿಯಿಲ್ಲಿಂ
ದಿತ್ತಲೆಮಗೆನೆ ಹಸ್ತಿನಾಪುರ
ದತ್ತಣಿಂದವೆ ಬಂದೆವಾವುದು ದೇಶ ನಿಮಗೆಂದ ॥3॥
೦೦೪ ನಾವು ನಿಮ್ಮೋಪಾದಿಯಲಿ ...{Loading}...
ನಾವು ನಿಮ್ಮೋಪಾದಿಯಲಿ ತೀ
ರ್ಥಾವಲೋಕನಪರರು ಭಿಕ್ಷಾ
ಜೀವಿಗಳು ನೀವೇಸು ದಿನ ಗಜಪುರವ ಹೊರವಂಟು
ಅವನಲ್ಲಿಗೆ ಪತಿ ಯುಧಿಷ್ಠಿರ
ದೇವನೋ ದುರ್ಯೋಧನನೊ ಬಳಿ
ಕಾವುದುಂಟು ವಿಶೇಷ ಕೌರವ ಪಾಂಡುತನಯರಲಿ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಾವು ನಿಮ್ಮ ರೀತಿಯಲ್ಲಿ ತೀರ್ಥಕ್ಷೇತ್ರಗಳ ದರ್ಶನದಲ್ಲಿ ಆಸಕ್ತರು. ನಾವು ಭಿಕ್ಷೆ ಬೇಡಿ ಜೀವಿಸುವವರು.
ನೀವು ಹಸ್ತಿನಪುರವನ್ನು ಬಿಟ್ಟು ಎಷ್ಟು ದಿನಗಳಾದವು ? ಯಾರು ಅಲ್ಲಿಗೆ ಒಡೆಯನು ? ಯುಧಿಷ್ಠಿರ ದೇವನೋ ? ದುರ್ಯೋಧನನೋ ? ಕೌರವ ಪಾಂಡವರ ವಿಷಯವಾಗಿ ಮತ್ತೇನಾದರು ವಿಶೇಷವುಂಟೇನು ?” ಎಂದು
ಧರ್ಮರಾಜನು ಕೇಳಿದನು.
ಪದಾರ್ಥ (ಕ.ಗ.ಪ)
ಗಜಪುರ-ಹಸ್ತಿನಪುರ, ಪತಿ-ಒಡೆಯ
ಮೂಲ ...{Loading}...
ನಾವು ನಿಮ್ಮೋಪಾದಿಯಲಿ ತೀ
ರ್ಥಾವಲೋಕನಪರರು ಭಿಕ್ಷಾ
ಜೀವಿಗಳು ನೀವೇಸು ದಿನ ಗಜಪುರವ ಹೊರವಂಟು
ಅವನಲ್ಲಿಗೆ ಪತಿ ಯುಧಿಷ್ಠಿರ
ದೇವನೋ ದುರ್ಯೋಧನನೊ ಬಳಿ
ಕಾವುದುಂಟು ವಿಶೇಷ ಕೌರವ ಪಾಂಡುತನಯರಲಿ ॥4॥
೦೦೫ ಮರುಳುಗಳೊ ನೀವ್ ...{Loading}...
ಮರುಳುಗಳೊ ನೀವ್ ಮೇಣು ನಮ್ಮನು
ಮರುಳು ಮಾಡುವ ಪರಿಯೊ ಪಾಂಡವ
ರರಗು ಮನೆಯಲಿ ಬೆಂದರಿದು ಲೋಕಪ್ರಸಿದ್ಧವಲೆ
ಅರಸು ಕೌರವರಾಯನಾತನ
ಸಿರಿಯನಾತನ ಬಲುಹನಾತನ
ಪರಿಯನಭಿವರ್ಣಿಸುವಡರಿಯೆನು ವಿಪ್ರ ಕೇಳ್ ಎಂದ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನೀವು ಭ್ರಮೆಗೊಳಗಾದವರೋ ? ಅಥವಾ ನಮ್ಮನ್ನು ಭ್ರಾಂತಿಗೊಳಿಸುವ ರೀತಿಯೋ ? ಪಾಂಡವರು ಅರಗಿನ
ಮನೆಯಲ್ಲಿ ಸುಟ್ಟು ಹೋದರು. ಇದು ಲೋಕಪ್ರಸಿದ್ದವಾಗಿದೆಯಲ್ಲಾ ! ಹಸ್ತಿನಪುರಕ್ಕೆ ಕೌರವರಾಯನು ಅರಸಾಗಿದ್ದಾನೆ.
ಅತಿಶಯವಾದ ಅವನ ಸಂಪತ್ತನ್ನು, ಅವನ ಶಕ್ತಿಯನ್ನು, ಅವನ ರೀತಿಯನ್ನು ವರ್ಣಿಸುವುದಕ್ಕೆ ನನಗೆ ಸಾಧ್ಯವಿಲ್ಲ, ಕೇಳು”
ಎಂದು ಬ್ರಾಹ್ಮಣನು ಹೇಳಿದನು.
ಪದಾರ್ಥ (ಕ.ಗ.ಪ)
ಮರುಳು-ಭ್ರಮೆ, ಭ್ರಾಂತಿ, ಪರಿ-ರೀತಿ, ಸಿರಿ-ಸಂಪತ್ತು, ಬಲುಹು-ಶಕ್ತಿ, ಅಭಿವರ್ಣಿಸು-ಅತಿಶಯವಾಗಿ ವರ್ಣಿಸು
ಮೂಲ ...{Loading}...
ಮರುಳುಗಳೊ ನೀವ್ ಮೇಣು ನಮ್ಮನು
ಮರುಳು ಮಾಡುವ ಪರಿಯೊ ಪಾಂಡವ
ರರಗು ಮನೆಯಲಿ ಬೆಂದರಿದು ಲೋಕಪ್ರಸಿದ್ಧವಲೆ
ಅರಸು ಕೌರವರಾಯನಾತನ
ಸಿರಿಯನಾತನ ಬಲುಹನಾತನ
ಪರಿಯನಭಿವರ್ಣಿಸುವಡರಿಯೆನು ವಿಪ್ರ ಕೇಳೆಂದ ॥5॥
೦೦೬ ಅಕಟ ಪಾಣ್ಡವರಳಿದರೇ ...{Loading}...
ಅಕಟ ಪಾಂಡವರಳಿದರೇ ಬಾ
ಧಕರೆ ಪರರಿಗೆ ಲೇಸಿನಲಿ ಕಂ
ಟಕವು ದುಗ್ಧ ವಿಷಂಗಳಲಿ ಹಾಲಿಂಗೆ ಹಾನಿಯಲೆ
ವಿಕಳ ಪುಣ್ಯರು ನಿಲಲಿ ಕುರು ರಾ
ಜಕದೊಳಗೆ ಭೀಷ್ಮಾದಿ ವೃದ್ಧ
ಪ್ರಕರ ಗುರುಸುತ ಗುರು ಕೃಪಾದ್ಯರು ಕುಶಲರೇಯೆಂದ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಯ್ಯೋ ! ಪಾಂಡವರು ನಾಶವಾದರೆ ? ಅವರು ಉಳಿದವರಿಗೆ ತೊಂದರೆ ಕೊಡುವವರೇ ? ಒಳ್ಳೆಯದರಲ್ಲಿ ವಿಘ್ನವು ತಲೆದೋರಿತೇ ? ಹಾಲು ವಿಷಗಳಲ್ಲಿ ಹಾಲಿಗೇ ತೊಂದರೆಯಲ್ಲವೇ ? ಪುಣ್ಯಹೀನರು! ಅವರ ವಿಚಾರ ಹಾಗಿರಲಿ.
ಕುರುರಾಜರ ಗುಂಪಿನಲ್ಲಿ ಭೀಷ್ಮರೇ ಮೊದಲಾದ ವೃದ್ಧರು, ಗುರು, ಕೃಪ ಮೊದಲಾದವರು ಕ್ಷೇಮವೇ ?
ಹೇಳಿ” ಎಂದು ಧರ್ಮರಾಜನು ಕೇಳಿದನು.
ಪದಾರ್ಥ (ಕ.ಗ.ಪ)
ಅಳಿ-ನಾಶ, ಕಂಟಕ-ವಿಘ್ನ, ದುಗ್ಧ-ಹಾಲು, ರಾಜಕ-ಗುಂಪು
ಪಾಠಾನ್ತರ (ಕ.ಗ.ಪ)
ದುಗ್ಧ ವಿಷಂಗಳಲಿ ಹಾವಿಂಗೆ ಹಾನಿಯಲೆ - ಇದಕ್ಕೆ ಸಮಂಜಸ ಅರ್ಥವಿಲ್ಲದ ಕಾರಣ, “ದುಗ್ಧವಿಷಂಗಳಲಿ ಹಾಲಿಂಗೆ ಹಾನಿಯಲೆ” ಅಂದರೆ, ಹಾಲಿಗೆ ವಿಷಬೆರಸಿದರೂ, ವಿಷಕ್ಕೆ ಹಾಲನ್ನು ಸೇರಿಸಿದರೂ, ಹಾಲಿಗೇ ಕೆಡಕು ಅನ್ನುವ ಅರ್ಥದಲ್ಲಿ ಸಮಂಜಸ ಪಾಠಾಂತರವೆನಿಸುತ್ತದೆ. ಅಲ್ಲದೆ, ‘ರ’ ಪ್ರತಿಯ “ದುಗುಡವು ಸಂಗದಲಿ ಸಂಸಾರ ಹಾನಿಯಲೆ” ಪಾಠಾಂತರವನ್ನೂ ದುಃಖದೊಂದಿಗಿನ ಸಂಸಾರ ಹಾನಿಯಾಗುತ್ತದೆ ಎಂಬ ಅರ್ಥದಲ್ಲಿ ಪರಿಗಣಿಸಬಹುದಾಗಿದೆ.
ಮೂಲ ...{Loading}...
ಅಕಟ ಪಾಂಡವರಳಿದರೇ ಬಾ
ಧಕರೆ ಪರರಿಗೆ ಲೇಸಿನಲಿ ಕಂ
ಟಕವು ದುಗ್ಧ ವಿಷಂಗಳಲಿ ಹಾಲಿಂಗೆ ಹಾನಿಯಲೆ
ವಿಕಳ ಪುಣ್ಯರು ನಿಲಲಿ ಕುರು ರಾ
ಜಕದೊಳಗೆ ಭೀಷ್ಮಾದಿ ವೃದ್ಧ
ಪ್ರಕರ ಗುರುಸುತ ಗುರು ಕೃಪಾದ್ಯರು ಕುಶಲರೇಯೆಂದ ॥6॥
೦೦೭ ಗುರುಸುತಾದಿ ಸಮಸ್ತ ...{Loading}...
ಗುರುಸುತಾದಿ ಸಮಸ್ತ ಪರಿಜನ
ಪುರಜನಕೆ ಸುಕ್ಷೇಮ ದ್ರುಪದನ
ವರ ಕುಮಾರಿಯ ಮದುವೆ ಗಡ ಪಾಂಚಾಲ ನಗರದಲಿ
ನೆರವುತಿದೆ ನಾನಾ ದಿಗಂತದ
ಧರಣಿಪತಿಗಳು ಭೂರಿಯಲಿ ಮಿಗೆ
ಭರಿತ ದಕ್ಷಿಣೆ ಮೃಷ್ಟ ಭೋಜನವುಂಟು ನಮಗೆಂದ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಶ್ವತ್ಥಾಮ ಮೊದಲಾದ ಸಕಲ ಪರಿವಾರವೂ, ಪುರಜನವೂ ಕ್ಷೇಮವಾಗಿದ್ದಾರೆ. ಪಾಂಚಾಲ ನಗರದಲ್ಲಿ ದ್ರುಪದನ ಶ್ರೇಷ್ಠ ಕುಮಾರಿಯ ಮದುವೆ ಅಲ್ಲವೆ. ನಾನಾ ದಿಕ್ಕುಗಳ ತುದಿಗಳಿಂದ ರಾಜರುಗಳು ಅಧಿಕವಾಗಿ ಬಂದು ಸೇರುತ್ತಿದ್ದಾರೆ. ನಮಗೆ ಹೆಚ್ಚಾದ ದಕ್ಷಿಣೆ, ರುಚಿಕರವಾದ ಊಟವೂ ಉಂಟು” ಎಂದು ಆ ಬ್ರಾಹ್ಮಣನು ಹೇಳಿದನು.
ಪದಾರ್ಥ (ಕ.ಗ.ಪ)
ಪರಿಜನ-ಪರಿವಾರ, ಭೂರಿ-ಅಧಿಕ, ಭರಿತ-ತುಂಬಿದ, ಮಿಗೆ-ಹೆಚ್ಚಾಗಿ, ಮೃಷ್ಟ ಭೋಜನ-ರುಚಿಕರವಾದ ಊಟ
ಮೂಲ ...{Loading}...
ಗುರುಸುತಾದಿ ಸಮಸ್ತ ಪರಿಜನ
ಪುರಜನಕೆ ಸುಕ್ಷೇಮ ದ್ರುಪದನ
ವರ ಕುಮಾರಿಯ ಮದುವೆ ಗಡ ಪಾಂಚಾಲ ನಗರದಲಿ
ನೆರವುತಿದೆ ನಾನಾ ದಿಗಂತದ
ಧರಣಿಪತಿಗಳು ಭೂರಿಯಲಿ ಮಿಗೆ
ಭರಿತ ದಕ್ಷಿಣೆ ಮೃಷ್ಟ ಭೋಜನವುಂಟು ನಮಗೆಂದ ॥7॥
೦೦೮ ಸಾರವಿದು ನೃಪಕನ್ನಿಕೆಗೆ ...{Loading}...
ಸಾರವಿದು ನೃಪಕನ್ನಿಕೆಗೆ ವರ
ನಾರು ಲಗ್ನವದೆಂದು ಬಳಿಕಾ
ರಾರು ಬಂದರು ಭೂಪತಿಗಳಿದನೆಂದು ಕೇಳಿದಿರಿ
ಭೂರಿಯಲಿ ನಮಗುಂಟೆ ಮೃಷ್ಟ್ಟಾ
ಹಾರ ದಕ್ಷಿಣೆ ನಮ್ಮಭೀಷ್ಟ ವಿ
ಹಾರ ವಾರ್ತೆಯಿದೆಂದು ಧರ್ಮಜ ನುಡಿದನಾ ದ್ವಿಜಗೆ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇದು ಸಾರವತ್ತಾದ ಸುದ್ದಿ . ರಾಜಕನ್ಯೆಗೆ ವರ ಯಾರು ? ಲಗ್ನ ಯಾವತ್ತು ? ಯಾವ ಯಾವ ರಾಜರು ಬಂದರು ? ಈ ವಿಚಾರವನ್ನು ನೀವು ಯಾವತ್ತು ಕೇಳಿದಿರಿ ? ನಮಗೂ ರುಚಿಕರವಾದ ಆಹಾರ, ಹೆಚ್ಚಿನ ದಕ್ಷಿಣೆ ದೊರೆಯುತ್ತದಲ್ಲವೇ ? ನಮ್ಮ ಅಪೇಕ್ಷೆಯ ಸಂತೋಷದ ವರ್ತಮಾನ ಇದಾಗಿದೆ” ಎಂದು ಧರ್ಮಜ ಬ್ರಾಹ್ಮಣನಿಗೆ ನುಡಿದನು.
ಪದಾರ್ಥ (ಕ.ಗ.ಪ)
ಅಭೀಷ್ಟ-ಅಪೇಕ್ಷೆ
ಮೂಲ ...{Loading}...
ಸಾರವಿದು ನೃಪಕನ್ನಿಕೆಗೆ ವರ
ನಾರು ಲಗ್ನವದೆಂದು ಬಳಿಕಾ
ರಾರು ಬಂದರು ಭೂಪತಿಗಳಿದನೆಂದು ಕೇಳಿದಿರಿ
ಭೂರಿಯಲಿ ನಮಗುಂಟೆ ಮೃಷ್ಟ್ಟಾ
ಹಾರ ದಕ್ಷಿಣೆ ನಮ್ಮಭೀಷ್ಟ ವಿ
ಹಾರ ವಾರ್ತೆಯಿದೆಂದು ಧರ್ಮಜ ನುಡಿದನಾ ದ್ವಿಜಗೆ ॥8॥
೦೦೯ ಇವರು ಕಪಟೋಪಾಧ್ಯರೆಮ್ಬುದ ...{Loading}...
ಇವರು ಕಪಟೋಪಾಧ್ಯರೆಂಬುದ
ನವನು ಬಲ್ಲನೆ ಭೂಮಿದೇವ
ಪ್ರವರನೈಸಲೆಯೆಂದು ಬಗೆದನು ಧರ್ಮನಂದನನ
ಅವನಿಯಲಿ ಪಾತಾಳದಲಿ ಸುರ
ಭವನದಲಿ ಪಾಂಚಾಲ ತನುಜೆಗೆ
ಯುವತಿಯರು ಸರಿಯಲ್ಲವೆಂಬುದ ಕೇಳ್ದೆವಾವೆಂದ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವರು ಕಪಟದ ಉಪಾಧ್ಯರೆಂಬುದನ್ನು ಅವನು ತಿಳಿದವನೆ ? ಧರ್ಮನಂದನನನ್ನು ಬ್ರಾಹ್ಮಣ ಶ್ರೇಷ್ಠನೆಂದೇ ತಿಳಿದನು. ಸ್ವರ್ಗ ಮತ್ರ್ಯ ಪಾತಾಳಗಳಲ್ಲಿ ಪಾಂಚಾಲ ಪುತ್ರಿಗೆ ಯಾವ ಯುವತಿಯರೂ ಸಮರಲ್ಲ ಎಂಬುದನ್ನು ನಾವು ಕೇಳಿದ್ದೇವೆ ಎಂದನು, ಆ ಬ್ರಾಹ್ಮಣ.
ಪದಾರ್ಥ (ಕ.ಗ.ಪ)
ಬಲ್ಲನೆ-ತಿಳಿಯನೆ, ಭೂಮಿದೇವ-ಬ್ರಾಹ್ಮಣ, ಪ್ರವರ-ಶ್ರೇಷ್ಠ, ಅವನಿ-ಮತ್ರ್ಯ, ಸುರಭವನ-ಸ್ವರ್ಗ, ತನುಜೆ-ಪುತ್ರಿ, ಸರಿ-ಸಮ
ಮೂಲ ...{Loading}...
ಇವರು ಕಪಟೋಪಾಧ್ಯರೆಂಬುದ
ನವನು ಬಲ್ಲನೆ ಭೂಮಿದೇವ
ಪ್ರವರನೈಸಲೆಯೆಂದು ಬಗೆದನು ಧರ್ಮನಂದನನ
ಅವನಿಯಲಿ ಪಾತಾಳದಲಿ ಸುರ
ಭವನದಲಿ ಪಾಂಚಾಲ ತನುಜೆಗೆ
ಯುವತಿಯರು ಸರಿಯಲ್ಲವೆಂಬುದ ಕೇಳ್ದೆವಾವೆಂದ ॥9॥
೦೧೦ ಈಕೆಗೆಣೆಯಹ ವರನನೀ ...{Loading}...
ಈಕೆಗೆಣೆಯಹ ವರನನೀ ನರ
ಲೋಕದಲಿ ತಾ ಕಾಣೆನರ್ಜುನ
ನೀ ಕುಮಾರಿಯ ರಮಣನೆಂದೇ ಮನದ ಸಂಕಲ್ಪ
ಈಕೆಯಪದೆಸೆಯುದಯದಲಿ ಕುಂ
ತೀಕುಮಾರಕರನಲ ಮುಖದಲಿ
ನಾಕದಲಿ ನೆಲೆಗೊಂಡರೆಂದುಮ್ಮಳಿಸುವನು ದ್ರುಪದ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ರಾಜಕುಮಾರಿಗೆ ಸಮಾನನಾದ ವರನನ್ನು ಈ ಮಾನವಲೋಕದಲ್ಲಿ ನಾನು ನೋಡಿಲ್ಲ. ಅರ್ಜುನನು ಈ ಕುಮಾರಿಯ ಪತಿಯೆಂದೇ ಮನಸ್ಸಿನ ಸಂಕಲ್ಪ. ಈಕೆಯ ದುರದೃಷ್ಟದ ಆರಂಭದಲ್ಲಿ ಕುಂತೀಪುತ್ರರು ಬೆಂಕಿಯ ಮೂಲಕ ಸ್ವರ್ಗವಾಸಿಗಳಾದರೆಂದು ದ್ರುಪದ ದುಃಖಿಸುವನು.
ಪದಾರ್ಥ (ಕ.ಗ.ಪ)
ಎಣಿ-ಸಮಾನ, ರಮಣ-ಪತಿ, ಅಪದೆಸೆ-ದುರದೃಷ್ಟ, ಅನಲ-ಬೆಂಕಿ, ನಾಕ-ಸ್ವರ್ಗ, ಉಮ್ಮಳ-ದುಃಖ
ಮೂಲ ...{Loading}...
ಈಕೆಗೆಣೆಯಹ ವರನನೀ ನರ
ಲೋಕದಲಿ ತಾ ಕಾಣೆನರ್ಜುನ
ನೀ ಕುಮಾರಿಯ ರಮಣನೆಂದೇ ಮನದ ಸಂಕಲ್ಪ
ಈಕೆಯಪದೆಸೆಯುದಯದಲಿ ಕುಂ
ತೀಕುಮಾರಕರನಲ ಮುಖದಲಿ
ನಾಕದಲಿ ನೆಲೆಗೊಂಡರೆಂದುಮ್ಮಳಿಸುವನು ದ್ರುಪದ ॥10॥
೦೧೧ ಜ್ವಲನ ನೆರೆ ...{Loading}...
ಜ್ವಲನ ನೆರೆ ನುಂಗಿದನೊ ಮೇಣೆಂ
ಜಲಿಸಿ ಬಿಟ್ಟನೊ ಬಲ್ಲನಾವನು
ಕಲು ಹೃದಯನೈ ಕಮಲಭವನೀ ಪಾಂಡುನಂದನರ
ಸುಳಿವ ಸೈರಿಸನಕಟ ಹೂಹೆಗ
ಳಳಿವ ಹರೆಯವೆ ಶಿವಶಿವಾಯೆಂ
ದಳಲುದೊರೆಯಲಿ ಮುಳುಗಿ ಮೂಡುವ ದ್ರುಪದಪತಿಯೆಂದ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಗ್ನಿಯು ಅವರನ್ನು ನುಂಗಿದನೋ ? ಅಥವಾ ಎಂಜಲು ಮಾಡಿ ಬಿಟ್ಟನೋ ? ಕಂಡವರು ಯಾರು ? ಕಲ್ಲು ಹೃದಯದವನಯ್ಯಾ, ಆ ಬ್ರಹ್ಮ ! ಅಯ್ಯೋ ! ಪಾಂಡುವಿನ ಮಕ್ಕಳ ಸುಳುಹನ್ನು ಸಹಿಸುವವನಲ್ಲ ಅವನು. ಮಕ್ಕಳು ಸಾಯುವ ಪ್ರಾಯವೆ ? ಶಿವ ಶಿವಾ ! ಎಂದು ದ್ರುಪದರಾಜ ದುಃಖದ ಹೊಳೆಯಲ್ಲಿ ಮುಳುಗೇಳುತ್ತಿದ್ದಾನೆ, ಎಂದು ಬ್ರಾಹ್ಮಣನು ಹೇಳಿದನು.
ಪದಾರ್ಥ (ಕ.ಗ.ಪ)
ಜ್ವಲನ-ಅಗ್ನಿ, ಸುಳಿವು-ಸುಳುಹು, ಹೂಹೆಗಳು-ಮಕ್ಕಳು, ಅಳಿ-ಸಾಯು, ಹರೆಯ-ಪ್ರಾಯ, ಅಳಲು-ದುಃಖ
ಮೂಲ ...{Loading}...
ಜ್ವಲನ ನೆರೆ ನುಂಗಿದನೊ ಮೇಣೆಂ
ಜಲಿಸಿ ಬಿಟ್ಟನೊ ಬಲ್ಲನಾವನು
ಕಲು ಹೃದಯನೈ ಕಮಲಭವನೀ ಪಾಂಡುನಂದನರ
ಸುಳಿವ ಸೈರಿಸನಕಟ ಹೂಹೆಗ
ಳಳಿವ ಹರೆಯವೆ ಶಿವಶಿವಾಯೆಂ
ದಳಲುದೊರೆಯಲಿ ಮುಳುಗಿ ಮೂಡುವ ದ್ರುಪದಪತಿಯೆಂದ ॥11॥
೦೧೨ ಅರಸ ಕೇಳ್ವನು ...{Loading}...
ಅರಸ ಕೇಳ್ವನು ಸಕಲ ದೈವ
ಜ್ಞರಲುಪಶ್ರುತಿಗಳಲಿ ಋಷಿಗಳ
ಪರಮಸಿದ್ಧಾಂತದಲಿ ಮಂತ್ರಾವೇಶ ವಚನದಲಿ
ಧರೆಯೊಳೀಗಳು ಪಾಂಡುಸುತ ಸಂ
ಚರಣೆಯುಂಟದು ಸತ್ಯವೆಂದುಪ
ಚರಿಸಿ ನುಡಿದು ಪುರೋಹಿತನು ಸಂತವಿಸುವನು ನೃಪನ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನು ಎಲ್ಲ ಜೋಯಿಸರನ್ನು ಕೇಳುತ್ತಾನೆ. ದೈವಜ್ಞರಲ್ಲ್ಲಿ, ಋಷಿಗಳ ಅತ್ಯುತ್ತಮವಾದ ತತ್ತ್ವಗಳಲ್ಲಿ, ವೈದಿಕ ವಾಕ್ಯಗಳ ಸ್ಫೂರ್ತಿಮಾತುಗಳಲ್ಲಿ ಈ ಎಲ್ಲ ರೀತಿಗಳಿಂದ ವಿಚಾರಿಸಿದಾಗ “ಈಗಲೂ ಪಾಂಡುಸುತರ ಸಂಚಾರ ಈ ಭೂಮಿಯ ಮೇಲಿದೆಯೆಂದು, ಇದು ಸತ್ಯವೆಂದು ಉಪಚರಿಸಿ ಮಾತನಾಡಿ, ಪುರೋಹಿತನು ಮಹಾರಾಜನನ್ನು ಸಮಾಧಾನಪಡಿಸುವನು.
ಪದಾರ್ಥ (ಕ.ಗ.ಪ)
ದೈವಜ್ಞರು-ಜೋಯಿಸರು, ಉಪಶ್ರುತಿ-ಭವಿಷ್ಯ, ಸಿದ್ಧಾಂತ-ತತ್ತ್ವ, ಆವೇಶ-ಸ್ಫೂರ್ತಿ, ಸಂಚರಣೆ-ಸಂಚಾರ, ಸಂತವಿಸು-ಸಮಾಧಾನಪಡಿಸು
ಮೂಲ ...{Loading}...
ಅರಸ ಕೇಳ್ವನು ಸಕಲ ದೈವ
ಜ್ಞರಲುಪಶ್ರುತಿಗಳಲಿ ಋಷಿಗಳ
ಪರಮಸಿದ್ಧಾಂತದಲಿ ಮಂತ್ರಾವೇಶ ವಚನದಲಿ
ಧರೆಯೊಳೀಗಳು ಪಾಂಡುಸುತ ಸಂ
ಚರಣೆಯುಂಟದು ಸತ್ಯವೆಂದುಪ
ಚರಿಸಿ ನುಡಿದು ಪುರೋಹಿತನು ಸಂತವಿಸುವನು ನೃಪನ ॥12॥
೦೧೩ ಸರಸಿಜಾನನೆ ನೋಡಿ ...{Loading}...
ಸರಸಿಜಾನನೆ ನೋಡಿ ನೃಪರಲಿ
ವರಿಸುವಳು ವಲ್ಲಭನನೆಂದುಪ
ಚರಿಸುವನು ಸವಿವಾತುಗಳ ಸಾರಾಯ ಸೋನೆಯಲಿ
ಬರಿಸುವುದು ಬಹುದೇಶ ಭೂಮೀ
ಶ್ವರರನವರೊಳು ಪುಣ್ಯದಲಿ ಗೋ
ಚರಿಸರೇ ಗರುವೆಯರ ದೇವಿಗೆ ಪಾಂಡುಸುತರೆಂದ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಮಲಮುಖಿಯಾದ ದ್ರೌಪದಿಯು ನೆರೆದ ಎಲ್ಲ ರಾಜರಲ್ಲಿ ಪತಿಯನ್ನು ಆರಿಸುವಳು. ಬಹಳ ದೇಶಗಳಿಂದ ಭೂಮೀಶ್ವರರನ್ನು ಬರಮಾಡಿಕೋ. ಅವರಲ್ಲಿ ಪುಣ್ಯವಶಾತ್ ಚೆಲುವೆಯಾದ ದ್ರೌಪದಿಗೆ ಪಾಂಡುವಿನ ಮಕ್ಕಳು ಕಾಣಿಸಿಕೊಳ್ಳದಿರುವರೆ ? ಎಂದು ಪುರೋಹಿತನು ಮಾಧುರ್ಯದ, ಸಾರವತ್ತಾದ ಮಾತುಗಳ ವೃಷ್ಟಿಯಲ್ಲಿ ದ್ರುಪದನನ್ನು ಆರೈಕೆ ಮಾಡುವನು.
ಪದಾರ್ಥ (ಕ.ಗ.ಪ)
ಸರಸಿಜಾನನೆ-ಕಮಲಮುಖಿ, ವಲ್ಲಭ-ಪತಿ, ಸವಿ-ಮಾಧುರ್ಯ, ಸಾರಾಯ-ಸಾರವತ್ತಾದ, ಸೋನೆ-ವೃಷ್ಟಿ, ಗರುವೆ-ಚೆಲುವೆ, ಗೋಚರಿಸು-ಕಾಣಿಸು, ಉಪಚರಿಸು-ಆರೈಕೆ
ಮೂಲ ...{Loading}...
ಸರಸಿಜಾನನೆ ನೋಡಿ ನೃಪರಲಿ
ವರಿಸುವಳು ವಲ್ಲಭನನೆಂದುಪ
ಚರಿಸುವನು ಸವಿವಾತುಗಳ ಸಾರಾಯ ಸೋನೆಯಲಿ
ಬರಿಸುವುದು ಬಹುದೇಶ ಭೂಮೀ
ಶ್ವರರನವರೊಳು ಪುಣ್ಯದಲಿ ಗೋ
ಚರಿಸರೇ ಗರುವೆಯರ ದೇವಿಗೆ ಪಾಂಡುಸುತರೆಂದ ॥13॥
೦೧೪ ಆದೊಡೀ ಮಗುವಿನ ...{Loading}...
ಆದೊಡೀ ಮಗುವಿನ ಮಹಾ ಪು
ಣ್ಯೋದಯದ ಫಲವೈಸಲೇ ಬರೆ
ಮೇದಿನೀಶ್ವರರೆಲ್ಲರಿಗೆ ಲೇಖಾರ್ಥ ಸಂಗತಿಯ
ಸೋದರರು ಸಹಿತಾ ಸುಯೋಧನ
ನಾದಿಯಾದ ಸಮಸ್ತನೃಪರು ವಿ
ವಾದವಿಲ್ಲದೆ ಬರಲಿ ಕಟ್ಟಿಸು ಪಾವುಡವನೆಂದ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಾಗಾಗುವುದಾದರೆ, ಈ ಮಗುವಿನ ಮಹಾಪುಣ್ಯೋದಯದ ಫಲವೇ ಅಲ್ಲವೇ ! ಭೂಮಿಯ ಎಲ್ಲ ರಾಜರಿಗೂ ಸ್ವಯಂವರದ ಸಂಗತಿಯನ್ನು ತಿಳಿಸುವ ಬರೆಹವನ್ನು ಬರೆಸು. ಸೋದರರೊಂದಿಗೆ ಸುಯೋಧನನೇ ಮೊದಲಾದ ಎಲ್ಲ ರಾಜರೂ ಯಾವ ಚರ್ಚೆಯೂ ಇಲ್ಲದೇ ಬರಲಿ. ಉಡುಗೊರೆಗಳನ್ನು ಹೊಂದಿಸು ಎಂದು ದ್ರುಪದ ಮಹಾರಾಜನು ಆಜ್ಞೆ ಮಾಡಿದನು.
ಪದಾರ್ಥ (ಕ.ಗ.ಪ)
ಮೇದಿನಿ-ಭೂಮಿ, ಈಶ್ವರ-ಒಡೆಯ, ಅರ್ಥ-ವಸ್ತು, ಸಂಗತಿ-ವಿಷಯ, ಲೇಖ-ಬರೆಹ, ವಿವಾದ-ಚರ್ಚೆ, ಪಾವುಡ-ಉಡುಗೊರೆ, ಕಟ್ಟಿಸು-ಹೊಂದಿಸು
ಮೂಲ ...{Loading}...
ಆದೊಡೀ ಮಗುವಿನ ಮಹಾ ಪು
ಣ್ಯೋದಯದ ಫಲವೈಸಲೇ ಬರೆ
ಮೇದಿನೀಶ್ವರರೆಲ್ಲರಿಗೆ ಲೇಖಾರ್ಥ ಸಂಗತಿಯ
ಸೋದರರು ಸಹಿತಾ ಸುಯೋಧನ
ನಾದಿಯಾದ ಸಮಸ್ತನೃಪರು ವಿ
ವಾದವಿಲ್ಲದೆ ಬರಲಿ ಕಟ್ಟಿಸು ಪಾವುಡವನೆಂದ ॥14॥
೦೧೫ ಬರೆದ ವೋಲೆಗಳಖಿಳ ...{Loading}...
ಬರೆದ ವೋಲೆಗಳಖಿಳ ಭೂಮೀ
ಶ್ವರರಿಗುಡುಗೊರೆಸಹಿತ ದೂತರು
ಹರಿದರುತ್ತರ ಪೂರ್ವ ದಕ್ಷಿಣ ಪಶ್ಚಿಮಂಗಳಿಗೆ
ಧರೆಯ ಕನ್ಯಾಜನ ಶಿರೋಮಣಿ
ವರ ದ್ರುಪದ ತನುಜಾ ಸ್ವಯಂವರ
ಕರಸುಗಳು ಬಹುದೆಂದು ವಾಚಿಸಿತಖಿಳ ಲೇಖಾರ್ಥ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪತ್ರಗಳನ್ನು ಉಡುಗೊರೆ ಜೊತೆಗೆ ಎಲ್ಲ ರಾಜರಿಗೆ, ತಲಪಿಸಲು ಉತ್ತರ, ಪೂರ್ವ, ದಕ್ಷಿಣ, ಪಶ್ಚಿಮ ದಿಕ್ಕುಗಳಿಗೆ ದೂತರು ಧಾವಿಸಿದರು. ಭೂಮಂಡಲದ ಕನ್ಯೆಯರಲ್ಲಿ ಶ್ರೇಷ್ಠಳೆನಿಸಿದ ದ್ರುಪದನ ಪುತ್ರಿ ದ್ರೌಪದಿಯ ಸ್ವಯಂವರಕ್ಕೆ ಅರಸುಗಳು ಬರುವುದೆಂದು ಪತ್ರದ ಬರೆಹ ವಿವರಿಸಿತು.
ಪದಾರ್ಥ (ಕ.ಗ.ಪ)
ಹರಿ-ಧಾವಿಸು, ಶಿರೋಮಣಿ-ಶ್ರೇಷ್ಠ, ವಾಚಿಸಿತು-ವಿವರಿಸಿ ಹೇಳಿತು
ಮೂಲ ...{Loading}...
ಬರೆದ ವೋಲೆಗಳಖಿಳ ಭೂಮೀ
ಶ್ವರರಿಗುಡುಗೊರೆಸಹಿತ ದೂತರು
ಹರಿದರುತ್ತರ ಪೂರ್ವ ದಕ್ಷಿಣ ಪಶ್ಚಿಮಂಗಳಿಗೆ
ಧರೆಯ ಕನ್ಯಾಜನ ಶಿರೋಮಣಿ
ವರ ದ್ರುಪದ ತನುಜಾ ಸ್ವಯಂವರ
ಕರಸುಗಳು ಬಹುದೆಂದು ವಾಚಿಸಿತಖಿಳ ಲೇಖಾರ್ಥ ॥15॥
೦೧೬ ಮಾಡಿದರೆ ಶತಯಾಗವನು ...{Loading}...
ಮಾಡಿದರೆ ಶತಯಾಗವನು ಕೈ
ಗೂಡುವಳು ಶಚಿ ಮಖಸಹಸ್ರವ
ಮಾಡಿ ಮೇಣ್ ಜನಿಸಿದೊಡೆ ಬಹಳೇ ದ್ರೌಪದಾದೇವಿ
ನೋಡುವೆವು ನಡೆ ಜನ್ಮ ಶತದಲಿ
ಕೂಡಿ ಕೊಬ್ಬಿದ ಪುಣ್ಯಫಲ ಕೈ
ಗೂಡುವುದೊ ತಪ್ಪೇನೆನುತ ನೆರೆದುದು ನೃಪಸ್ತೊಮ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನೂರು ಯಾಗಗಳನ್ನು ಮಾಡಿದರೆ ಶಚಿಯು ದೊರಕುವಳು. ಸಾವಿರ ಯಾಗಗಳನ್ನು ಮಾಡಿ ಮತ್ತೆ ಹುಟ್ಟಿ ಬಂದರೆ ತಾನೆ ದ್ರೌಪದಾದೇವಿ ದೊರೆಯತ್ತಾಳೆಯೇ ? ನೂರು ಜನ್ಮಗಳಿಂದ ಸಂಚಿತವಾದ ಪುಣ್ಯದ ಫಲದಿಂದ ದೊರಕುವುದೋ ? ನಡೆ, ಅದರಲ್ಲಿ ತಪ್ಪೇನು ?” ಎನ್ನುತ್ತ ರಾಜರ ಸಮೂಹ ಸೇರಿತು.
ಪದಾರ್ಥ (ಕ.ಗ.ಪ)
ಮಖ-ಯಾಗ, ಕೊಬ್ಬು-ಅಧಿಕ, ನೆರೆ- ಸೇರು
ಮೂಲ ...{Loading}...
ಮಾಡಿದರೆ ಶತಯಾಗವನು ಕೈ
ಗೂಡುವಳು ಶಚಿ ಮಖಸಹಸ್ರವ
ಮಾಡಿ ಮೇಣ್ ಜನಿಸಿದೊಡೆ ಬಹಳೇ ದ್ರೌಪದಾದೇವಿ
ನೋಡುವೆವು ನಡೆ ಜನ್ಮ ಶತದಲಿ
ಕೂಡಿ ಕೊಬ್ಬಿದ ಪುಣ್ಯಫಲ ಕೈ
ಗೂಡುವುದೊ ತಪ್ಪೇನೆನುತ ನೆರೆದುದು ನೃಪಸ್ತೊಮ ॥16॥
೦೧೭ ಆ ಪುರೋಹಿತ ...{Loading}...
ಆ ಪುರೋಹಿತ ವಚನದಲಿ ನಿ
ವ್ರ್ಯಾಪಿತಾಂತವ್ರ್ಯಥೆಯಲವನಿಪ
ನಾ ಪುರಪ್ರಾಂತ್ಯದಲಿ ಸುತ್ತಲು ಮೂರು ಯೋಜನದ
ತೋಪಿನಲಿ ಕಟ್ಟಿಸಿದನಗ್ಗದ
ಭೂಪರಿಗೆ ಭವನವನು ಕೇಳೈ
ದ್ರೌಪದಿಯ ವೈವಾಹ ರಚನಾ ರಾಮಾಣೀಯಕವ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಪುರೋಹಿತನ ಮಾತುಗಳಿಂದ ದ್ರುಪದನ ಮನಸ್ಸಿನಲ್ಲಿ ವ್ಯಾಪಿಸಿದ್ದ ದುಃಖವು ನಿವಾರಣೆಯಾಗಲು, ಮಹಾರಾಜನು ಆ ಪಟ್ಟಣದಲ್ಲಿ ಮೂರು ಯೋಜನದಷ್ಟು ಪ್ರದೇಶದಲ್ಲಿ ರಾಜರಿಗೆ ಶ್ರೇಷ್ಠವಾದ ಸೌಧಗಳನ್ನು ಕಟ್ಟಿಸಿದನು. ದ್ರೌಪದಿಯ ವಿವಾಹಕ್ಕೆ ಏರ್ಪಡಿಸಿದ ಸಿದ್ಧತೆಯ ಸೌಂದರ್ಯವನ್ನು ಕೇಳು ಎಂದು ಆ ಬ್ರಾಹ್ಮಣನು ಹೇಳಿದನು.
ಪದಾರ್ಥ (ಕ.ಗ.ಪ)
ಅಂತವ್ರ್ಯಥೆ-ಮನಸ್ಸಿನ ದುಃಖ, ನಿವ್ರ್ಯಾಪಿತ-ವ್ಯಾಪಿಸಿದ್ದು ನಿವಾರಣೆ, ಪ್ರಾಂತ್ಯ-ಒಂದು ಭಾಗ, ತೋಪು-ಮರಗಳ ಗುಂಪು, ಭವನ-ಸೌಧ, ರಾಮಣೀಯಕ-ಸೌಂದರ್ಯ
ಮೂಲ ...{Loading}...
ಆ ಪುರೋಹಿತ ವಚನದಲಿ ನಿ
ವ್ರ್ಯಾಪಿತಾಂತವ್ರ್ಯಥೆಯಲವನಿಪ
ನಾ ಪುರಪ್ರಾಂತ್ಯದಲಿ ಸುತ್ತಲು ಮೂರು ಯೋಜನದ
ತೋಪಿನಲಿ ಕಟ್ಟಿಸಿದನಗ್ಗದ
ಭೂಪರಿಗೆ ಭವನವನು ಕೇಳೈ
ದ್ರೌಪದಿಯ ವೈವಾಹ ರಚನಾ ರಾಮಾಣೀಯಕವ ॥17॥
೦೧೮ ನೆರವುತಿದೆ ನಾನಾ ...{Loading}...
ನೆರವುತಿದೆ ನಾನಾ ದಿಗಂತದ
ಧರಣಿಪರು ಕನ್ಯಾರ್ಥಿಗಳು ಭೂ
ಸುರಸಮೂಹದ ಸಾಲು ನೆರದುದು ದಕ್ಷಿಣಾರ್ಥದಲಿ
ಎರಡರೊಳು ನಿಮಗೇನು ಕನ್ಯಾ
ವರಣವೋ ಮೇಣ್ ದಕ್ಷಿಣಾರ್ಥವೊ
ಬರವು ನಿಮಗುಂಟೇಯೆನುತ ದ್ವಿಜನಿವರ ಬೆಸಗೊಂಡ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಾನಾ ದಿಕ್ಕುಗಳಿಂದ ಕನ್ಯೆಯನ್ನು ಮದುವೆಯಾಗಲು ಇಚ್ಛಿಸಿ ಭೂಪತಿಗಳು ಬಂದು ಸೇರುತ್ತಿದ್ದಾರೆ. ದಕ್ಷಿಣೆಯ ಅಪೇಕ್ಷಿಗಳಾಗಿ ಬ್ರಾಹ್ಮಣರು ಸಾಲು ಸಾಲಾಗಿ ಒಟ್ಟುಗೂಡುತ್ತಿದ್ದಾರೆ. ಈ ಎರಡರಲ್ಲಿ ನಿಮ್ಮ ಬಯಕೆ ಯಾವುದು ? ಕನ್ಯೆಯನ್ನು ವರಿಸುವುದೋ ? ದಕ್ಷಿಣೆಯ ಅಪೇಕ್ಷಿಗಳೋ ? ನೀವು ಬರುವುದುಂಟೋ ?” ಎನುತ್ತ ಬ್ರಾಹ್ಮಣನು ಇವರನ್ನು ವಿಚಾರಿಸಿದನು.
ಪದಾರ್ಥ (ಕ.ಗ.ಪ)
ಕನ್ಯಾವರಣ-ಕನ್ಯೆಯನ್ನುವರಿಸುವುದು, ಬೆಸಗೊಳ್-ವಿಚಾರಿಸು
ಮೂಲ ...{Loading}...
ನೆರವುತಿದೆ ನಾನಾ ದಿಗಂತದ
ಧರಣಿಪರು ಕನ್ಯಾರ್ಥಿಗಳು ಭೂ
ಸುರಸಮೂಹದ ಸಾಲು ನೆರದುದು ದಕ್ಷಿಣಾರ್ಥದಲಿ
ಎರಡರೊಳು ನಿಮಗೇನು ಕನ್ಯಾ
ವರಣವೋ ಮೇಣ್ ದಕ್ಷಿಣಾರ್ಥವೊ
ಬರವು ನಿಮಗುಂಟೇಯೆನುತ ದ್ವಿಜನಿವರ ಬೆಸಗೊಂಡ ॥18॥
೦೧೯ ಈಸು ಪರಿಯಲಿ ...{Loading}...
ಈಸು ಪರಿಯಲಿ ನಮ್ಮನೀವಪ
ಹಾಸ ಮಾಡುವಿರಾವು ಭಿಕ್ಷುಕ
ರೈಸಲೇ ಕನ್ಯಾರ್ಥದಲಿ ನಾವೆತ್ತ ನೃಪರೆತ್ತ
ಐಸೆ ನಿಮ್ಮೊಡೆ ನಾವು ಬಹೆವೀ
ಭೂಸುರರ ನೆರವುಂಟಲಾ ಶುಭ
ವಾಸರವ ಬೆಸೆಗೊಂಬೆನೆಂದನು ಧರ್ಮಸುತ ನಗುತ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇಷ್ಟು ರೀತಿಯಲ್ಲಿ ನೀವು ನಮ್ಮನ್ನು ಅಣಕ ಮಾಡುವಿರಾ? ನಾವು ಭಿಕ್ಷುಕರಲ್ಲವೇ ? ಕನ್ಯೆಯನ್ನು ಆಶಿಸುವಲ್ಲಿ ನಾವೆಲ್ಲಿ ? ರಾಜರೆಲ್ಲಿ? ಸರಿ, ನಿಮ್ಮ ಜೊತೆ ಬರುತ್ತೇವೆ. ಬ್ರಾಹ್ಮಣರ ಸಮೂಹವು ಇರುತ್ತದೆಯಲ್ಲಾ. ಶುಭ ದಿನವನ್ನು ವಿಚಾರಿಸುವೆನು” ಎಂದನು ನಗುತ್ತ ಧರ್ಮಸುತನು.
ಪದಾರ್ಥ (ಕ.ಗ.ಪ)
ಈಸು-ಇಷ್ಟು, ಪರಿ-ರೀತಿ, ಅಪಹಾಸ-ಅಣಕ, ವಾಸರ-ದಿನ
ಮೂಲ ...{Loading}...
ಈಸು ಪರಿಯಲಿ ನಮ್ಮನೀವಪ
ಹಾಸ ಮಾಡುವಿರಾವು ಭಿಕ್ಷುಕ
ರೈಸಲೇ ಕನ್ಯಾರ್ಥದಲಿ ನಾವೆತ್ತ ನೃಪರೆತ್ತ
ಐಸೆ ನಿಮ್ಮೊಡೆ ನಾವು ಬಹೆವೀ
ಭೂಸುರರ ನೆರವುಂಟಲಾ ಶುಭ
ವಾಸರವ ಬೆಸೆಗೊಂಬೆನೆಂದನು ಧರ್ಮಸುತ ನಗುತ ॥19॥
೦೨೦ ಇವನು ಬಳಿಕ ...{Loading}...
ಇವನು ಬಳಿಕ ನಿಜ ಪ್ರಯೋಜನ
ಭವನಕೈದಿದನಖಿಳ ವಾರ್ತಾ
ವಿವರಣ ವ್ಯಾಖ್ಯಾನ ಸಮನಂತರದ ಸಮಯದಲಿ
ಇವರು ತಮ್ಮೊಳಗೆಂದರವನೀ
ದಿವಿಜಪುರದಲಿ ದೈನ್ಯವೃತ್ತಿಯ
ನಿವಹ ನಿಲಲಿ ನಿರೀಕ್ಷಿಸುವೆವಾ ದ್ರುಪದ ಪಟ್ಟಣವ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಬ್ರಾಹ್ಮಣನು ಎಲ್ಲ ಸುದ್ದಿಯ ವಿವರವನ್ನು ವರ್ಣಿಸಿದ ತರುವಾಯದ ಸಮಯದಲ್ಲಿ ಭೋಜನ ಶಾಲೆಗೆ ಹೊರಟು ಹೋದನು. ಇವರು ತಮ್ಮ ತಮ್ಮಲ್ಲೇ ಈ ಕುರಿತು ಮಾತನಾಡಿಕೊಂಡರು. ಈ ವಿಪ್ರ ನಗರದಲ್ಲಿನ ದೈನ್ಯಜೀವನ ನಿಲ್ಲಲಿ. ಆ ದ್ರುಪದನ ಪಟ್ಟಣವನ್ನು ನೋಡೋಣ ಎಂದು ಕೊಂಡರು.
ಪದಾರ್ಥ (ಕ.ಗ.ಪ)
ಪ್ರಯೋಜನ ಭವನ-ಭೋಜನಶಾಲೆ, ಸಮನಂತರ-ತರುವಾಯ, ಅವನೀದಿವಿಜ-ವಿಪ್ರ, ದೈನ್ಯ-ದೀನತನ, ವೃತ್ತಿ-ಇರುವಿಕೆಯ ರೀತಿ
ಮೂಲ ...{Loading}...
ಇವನು ಬಳಿಕ ನಿಜ ಪ್ರಯೋಜನ
ಭವನಕೈದಿದನಖಿಳ ವಾರ್ತಾ
ವಿವರಣ ವ್ಯಾಖ್ಯಾನ ಸಮನಂತರದ ಸಮಯದಲಿ
ಇವರು ತಮ್ಮೊಳಗೆಂದರವನೀ
ದಿವಿಜಪುರದಲಿ ದೈನ್ಯವೃತ್ತಿಯ
ನಿವಹ ನಿಲಲಿ ನಿರೀಕ್ಷಿಸುವೆವಾ ದ್ರುಪದ ಪಟ್ಟಣವ ॥20॥
೦೨೧ ಆ ಲತಾಙ್ಗಿಯ ...{Loading}...
ಆ ಲತಾಂಗಿಯ ಮದುವೆಗವನೀ
ಪಾಲ ವರ್ಗದ ಬರವು ಗಡ ಹರ
ನೂಳಿಗದ ಹೆಚ್ಚಾಳು ಮಕರಧ್ವಜನ ಮೌಳಿ ಗಡ
ಮೇಳವಹ ಕಿವಿಗಳಿಗೆ ಹಂಗಹ
ವಾಲಿಗಳು ಪರಿವಿಡಿಯ ವೇಧೆಗೆ
ಸೋಲುವವೆಯೆಂದೈವರಾಳೋಚಿಸಿದರೊಳಗೊಳಗೆ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಸುಂದರಿಯ ಮದುವೆಗೆ ರಾಜರ ಗುಂಪು ಬರುತ್ತದಲ್ಲವೇ ! ದ್ರೌಪದಿಯು ಮನ್ಮಥನ ಸ್ವರೂಪಳಲ್ಲವೆ ! ವಳ ರೂಪದ ವರ್ಣನೆಯನ್ನು ಕೆಳಿದ ಕಿವಿಗಳಿಗೆ ಕಣ್ಣುಗಳು ಋಣಿಯಾಗಿವೆ.( ಇನ್ನೂ ದ್ರೌಪದಿಯನ್ನು ಅವರು ಇನ್ನೂ ನೋಡಿಲ್ಲ) ಇವು ಸ್ವಯಂವರದ ವಿವರಗಳಿಗೆ ಕಾಯುತ್ತವೆಯೇ? ಎಂದು ಐವರೂ ತಮ್ಮ ಅಂತರಂಗದಲ್ಲಿಯೇ ಯೋಚಿಸಿದರು.
ಪದಾರ್ಥ (ಕ.ಗ.ಪ)
ಲತಾಂಗಿ-ಬಳ್ಳಿಯಂತೆ ಕೋಮಲವಾದ ಶರೀರವುಳ್ಳವಳು, ಸುಂದರಿ, ಅವನೀಪಾಲರು-ರಾಜರು, ಊಳಿಗ-ಸೇವೆ, ಹೆಚ್ಚಾಳು-ಹಿರಿಮೆಯುಳ್ಳವನು, ಮಕರಧ್ವಜ-ಮೀನಿನ ಗುರುತುಳ್ಳ ಬಾವುಟ ಉಳ್ಳವನು, ಮನ್ಮಥ,
ಮೌಳಿ-ಮುಖದ ಸೌಂದರ್ಯ (?) ಕಿರೀಟ
ಮೇಳ-ಹೊಂದಾಣಿಕೆ, ಹಂಗು-ಋಣ,
ಆಲಿ-ಕಣ್ಣು, ಪರಿವಿಡಿ-ಕ್ರಮ,
ವೇಧೆ-ಬಾಧೆ, ಆಲೋಚಿಸು-ಯೋಚಿಸು
ಮೂಲ ...{Loading}...
ಆ ಲತಾಂಗಿಯ ಮದುವೆಗವನೀ
ಪಾಲ ವರ್ಗದ ಬರವು ಗಡ ಹರ
ನೂಳಿಗದ ಹೆಚ್ಚಾಳು ಮಕರಧ್ವಜನ ಮೌಳಿ ಗಡ
ಮೇಳವಹ ಕಿವಿಗಳಿಗೆ ಹಂಗಹ
ವಾಲಿಗಳು ಪರಿವಿಡಿಯ ವೇಧೆಗೆ
ಸೋಲುವವೆಯೆಂದೈವರಾಳೋಚಿಸಿದರೊಳಗೊಳಗೆ ॥21॥
೦೨೨ ಅರಸ ಚಿತ್ತೈಸಮಳ ...{Loading}...
ಅರಸ ಚಿತ್ತೈಸಮಳ ಲಗ್ನಾಂ
ತರದಲಿವರುದಯದಲಿ ಹೊರವಂ
ಟರು ಸುವಿದ್ಯಾ ಪರಿಣತರ ಪಂಡಿತರ ಗಡಣದಲಿ
ಬರುತ ಕಂಡರು ಕಳಶ ಕನ್ನಡಿ
ವರ ಯುವತಿ ಖಗಮೃಗದ ಬಲು ಸು
ಸ್ವರ ಸುಗಂಧಾನಿಲ ಸುಸಂಗತ ಶಕುನ ಸೂಚಕವ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನೇ ಕೇಳು, “ಆಮೇಲೆ, ಶುಭಲಗ್ನದ ಅವಧಿಯಲ್ಲಿ ಇವರು ಉದಯಕಾಲದಲ್ಲಿ ಒಳ್ಳೆಯ ವಿದ್ಯಾನಿಪುಣರು, ಪಂಡಿತರ ಸಮೂಹದೊಂದಿಗೆ ಹೊರಟರು. ಕಳಶ, ಕನ್ನಡಿ, ಯುವತಿಯರು, ಪಕ್ಷಿ ಪ್ರಾಣಿಗಳ ಇಂಪಾದ ಧ್ವನಿ ಪರಿಮಳ ಭರಿತವಾದ ಗಾಳಿ ಮೊದಲಾದ ಒಳ್ಳೆಯ ಶಕುನ ಸೂಚನೆಗಳನ್ನು ದಾರಿಯಲ್ಲಿ ನೋಡಿದರು.” ಎಂದು ವೈಶಂಪಾಯನನು ಹೇಳಿದನು.
ಪದಾರ್ಥ (ಕ.ಗ.ಪ)
ಅಂತರ-ಸಮಯ, ಸಂದರ್ಭ, ಅವಧಿ, ಪರಿಣತ-ನೈಪುಣ್ಯ, ಖಗ-ಪಕ್ಷಿ, ಮೃಗ-ಪ್ರಾಣಿ, ಸುಸ್ವರ-ಇಂಪಾದ ಧ್ವನಿ, ಸುಗಂಧಾನಿಲ-ಪರಿಮಳಭರಿತವಾದಗಾಳಿ, ಸುಸಂಗತ-ಒಳ್ಳೆಯ
ಮೂಲ ...{Loading}...
ಅರಸ ಚಿತ್ತೈಸಮಳ ಲಗ್ನಾಂ
ತರದಲಿವರುದಯದಲಿ ಹೊರವಂ
ಟರು ಸುವಿದ್ಯಾ ಪರಿಣತರ ಪಂಡಿತರ ಗಡಣದಲಿ
ಬರುತ ಕಂಡರು ಕಳಶ ಕನ್ನಡಿ
ವರ ಯುವತಿ ಖಗಮೃಗದ ಬಲು ಸು
ಸ್ವರ ಸುಗಂಧಾನಿಲ ಸುಸಂಗತ ಶಕುನ ಸೂಚಕವ ॥22॥
೦೨೩ ಚಾರು ಶಕುನವಿದುತ್ತರೋತ್ತರ ...{Loading}...
ಚಾರು ಶಕುನವಿದುತ್ತರೋತ್ತರ
ವಾರಿಗಿದು ಫಲಿಸುವುದೊ ನಮ್ಮೊಳು
ಹಾರುವರ ಹುಲು ಮೊತ್ತ ಕನ್ಯಾಲಾಭ ಫಲವಿದಕೆ
ಭೂರಿ ಭಾಗ್ಯನು ನಮ್ಮ ವಿಪ್ರರೊ
ಳಾರೆನುತ ತತ್ ಶಕುನಫಲ ವಿ
ಸ್ತಾರವನು ನೆರೆ ವಿವರಿಸುತ ನಡೆದುದು ಬುಧಸ್ತೋಮ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಪಂಡಿತರು “ಇದು ಬಹಳ ಒಳ್ಳೆಯ ಶಕುನ. ಇದಕ್ಕೆ ಕನ್ಯಾಲಾಭವೇ ಫಲ. ಮುಂದೆ ನಮ್ಮ ಈ ಬ್ರಾಹ್ಮಣರ ಸಣ್ಣ ಗುಂಪಿನಲ್ಲಿ ಯಾರಿಗೆ ಇದು ಫಲಿಸುತ್ತದೆಯೋ ! ಅಷ್ಟು ದೊಡ್ಡ ಭಾಗ್ಯವಂತ ನಮ್ಮ ವಿಪ್ರ ಸಮೂಹದಲ್ಲಿ ಯಾರಿರಬಹುದೋ ?” ಎನುತ್ತ ಆ ಶಕುನ ಫಲಗಳನ್ನು ವಿಸ್ತಾರವಾಗಿ ವಿವರಿಸುತ್ತ ಮುಂದೆ ನಡೆದರು.
ಪದಾರ್ಥ (ಕ.ಗ.ಪ)
ಹಾರುವರು-ಬ್ರಾಹ್ಮಣರು, ಹುಲು-ಸಣ್ಣ, ಮೊತ್ತ-ಗುಂಪು
ಮೂಲ ...{Loading}...
ಚಾರು ಶಕುನವಿದುತ್ತರೋತ್ತರ
ವಾರಿಗಿದು ಫಲಿಸುವುದೊ ನಮ್ಮೊಳು
ಹಾರುವರ ಹುಲು ಮೊತ್ತ ಕನ್ಯಾಲಾಭ ಫಲವಿದಕೆ
ಭೂರಿ ಭಾಗ್ಯನು ನಮ್ಮ ವಿಪ್ರರೊ
ಳಾರೆನುತ ತತ್ ಶಕುನಫಲ ವಿ
ಸ್ತಾರವನು ನೆರೆ ವಿವರಿಸುತ ನಡೆದುದು ಬುಧಸ್ತೋಮ ॥23॥
೦೨೪ ಧರಣಿಯಮರರ ಗಡಣದಲಿ ...{Loading}...
ಧರಣಿಯಮರರ ಗಡಣದಲಿ ನಾ
ಲ್ಕೆರಡು ಪಯಣಾಂತರದಲವನೀ
ಸುರರನುಳಿದಾಶ್ರಮದೊಳಗೆ ಪಾರಾಶರವ್ರತಿಯ
ದರುಶನವ ಮಾಡಿದರು ಬಕಸಂ
ಹರಣ ವೃತ್ತಾಂತವನು ನೆರೆ ವಿ
ಸ್ತರಿಸಿದರು ವಿನಯದಲಿ ಬೀಳ್ಕೊಂಡರು ಮುನೀಶ್ವರನ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಬ್ರಾಹ್ಮಣರ ಗುಂಪಿನಲ್ಲಿ ಎಂಟು ಮಜಲು ಪ್ರಯಾಣ ಮಾಡಿ ಅವರ ಜೊತೆಯನ್ನು ಬಿಟ್ಟು ಪಾಂಡವರು ಆಶ್ರಮದೊಳಗೆ ಹೋಗಿ ವ್ಯಾಸರ ದರ್ಶನ ಮಾಡಿದರು. ಬಕಾಸುರನ ಸಂಹಾರದ ಘಟನೆಯನ್ನು ವಿವರಿಸಿದರು. ವಿನಯದಿಂದ ಮುನೀಶ್ವರರನ್ನು ಬೀಳ್ಕೊಂಡರು.
ಪದಾರ್ಥ (ಕ.ಗ.ಪ)
ಪಾರಾಶರವ್ರತಿ-ವ್ಯಾಸಮುನಿ, ವೃತ್ತಾಂತ-ಘಟನೆ
ಮೂಲ ...{Loading}...
ಧರಣಿಯಮರರ ಗಡಣದಲಿ ನಾ
ಲ್ಕೆರಡು ಪಯಣಾಂತರದಲವನೀ
ಸುರರನುಳಿದಾಶ್ರಮದೊಳಗೆ ಪಾರಾಶರವ್ರತಿಯ
ದರುಶನವ ಮಾಡಿದರು ಬಕಸಂ
ಹರಣ ವೃತ್ತಾಂತವನು ನೆರೆ ವಿ
ಸ್ತರಿಸಿದರು ವಿನಯದಲಿ ಬೀಳ್ಕೊಂಡರು ಮುನೀಶ್ವರನ ॥24॥
೦೨೫ ಗಮನ ಭರದಲಿ ...{Loading}...
ಗಮನ ಭರದಲಿ ಭಾರಿಯಧ್ವ
ಶ್ರಮವ ನೋಡದೆ ಭೂಮಿ ನಭದಲಿ
ತಮದ ಚಾವಡಿಯಿಕ್ಕಿದರೆ ಗತಿ ಚಾಪಳವ ಬಿಡದೆ
ದ್ಯುಮಣಿ ಕೈಸೆರೆಯಾಗಲಟವೀ
ಭ್ರಮಣದಲಿ ಬೆಳಗಡಗೆ ಭೂಪೋ
ತ್ತಮರು ಬಂದರು ಬಹಳ ಗಮನದೊಳರ್ಧ ರಾತ್ರಿಯಲಿ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಡೆಯ ವೇಗದಲ್ಲಿ ಬಹಳವಾದ ಮಾರ್ಗಾಯಾಸವನ್ನು ಲೆಕ್ಕಿಸದೆ, ಭೂಮ್ಯಾಕಾಶದಲ್ಲಿ ಕತ್ತಲೆಯ ಆಶ್ರಯ ಸ್ಥಾನವಾದರೂ, ನಡಿಗೆಯಲ್ಲಿ ಆಸಕ್ತಿ ಬಿಡದೆ ಪಾಂಡವರು ಮುಂದುವರೆಯುತ್ತಿರುವಾಗ, ಕತ್ತಲೆಯಲ್ಲಿ ಸೂರ್ಯನ ಬಂಧನವಾಗಿ, ಕಾಡಿನ ಅಲೆದಾಟದಲ್ಲಿ ಬೆಳಕು ಅಡಗಿ ಹೋಗಲು, ಅಂಥ ಅರ್ಧರಾತ್ರಿಯ ಸಮಯದಲ್ಲಿ ರಾಜೋತ್ತಮರು ಅತಿಶಯ ಸಂಚಾರದಲ್ಲಿ ಬಂದರು.
ಪದಾರ್ಥ (ಕ.ಗ.ಪ)
ಗಮನ-ನಡೆ, ಭರ-ವೇಗ, ಭಾರಿ-ಬಹಳ, ಅಧ್ವಶ್ರಮ-ಮಾರ್ಗಾಯಾಸ, ನಭ-ಆಕಾಶ, ತಮ-ಕತ್ತಲೆ, ಚಾವಡಿ-ಆಶ್ರಯಸ್ಥಾನ, ಚಾಪಳ-ಆಸಕ್ತಿ, ದ್ಯುಮಣಿ-ಸೂರ್ಯ, ಕೈಸೆರೆ-ಬಂಧನ, ಅಟವಿ-ಕಾಡು, ಭ್ರಮಣ-ಅಲೆದಾಟ
ಮೂಲ ...{Loading}...
ಗಮನ ಭರದಲಿ ಭಾರಿಯಧ್ವ
ಶ್ರಮವ ನೋಡದೆ ಭೂಮಿ ನಭದಲಿ
ತಮದ ಚಾವಡಿಯಿಕ್ಕಿದರೆ ಗತಿ ಚಾಪಳವ ಬಿಡದೆ
ದ್ಯುಮಣಿ ಕೈಸೆರೆಯಾಗಲಟವೀ
ಭ್ರಮಣದಲಿ ಬೆಳಗಡಗೆ ಭೂಪೋ
ತ್ತಮರು ಬಂದರು ಬಹಳ ಗಮನದೊಳರ್ಧ ರಾತ್ರಿಯಲಿ ॥25॥
೦೨೬ ಮುನ್ದೆ ಪಾರ್ಥನ ...{Loading}...
ಮುಂದೆ ಪಾರ್ಥನ ಬೀಸುಗೊಳ್ಳಿಗ
ಳಿಂದ ತಮದಾವಳಿ ಮುರಿಯೆ ಬಳಿ
ಸಂದು ಕುಂತೀದೇವಿ ಧರ್ಮಜನಕುಲ ಸಹದೇವ
ಹಿಂದೆ ಭೀಮನ ಕೈಯ ಕೊಳ್ಳಿಯ
ಬಿಂದು ಬೆಳಗಿನಲನಿಬರಟವೀ
ವೃಂದದಲಿ ಬರುತಿರ್ದರಿರುಳವನೀಶ ಕೇಳ್ ಎಂದ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಂದುಗಡೆ ಪಾರ್ಥನು ಹಿಡಿದ ದೊಂದಿಯ ಬೆಳಕಿನಿಂದ ಕತ್ತಲೆಯ ಸಮೂಹ ಚದುರಲು, ಅವನನ್ನು ಕುಂತೀದೇವಿ, ಧರ್ಮಜ, ನಕುಲಸಹದೇವರು ಅನುಸರಿಸಲು ಅವರ ಹಿಂದೆ ಭೀಮನ ಕೈಯಲ್ಲಿರುವ ಉರಿಯ ಕಟ್ಟಿಗೆಯ ಚುಕ್ಕೆಯ ಬೆಳಕಿನಲ್ಲಿ ಅಷ್ಟೂ ಜನರು ದಟ್ಟವಾದ ಕಾಡಿನಲ್ಲಿ ಆ ರಾತ್ರಿಯಲ್ಲಿ ಬರುತ್ತಿದ್ದರು.
ಪದಾರ್ಥ (ಕ.ಗ.ಪ)
ಬೀಸುಗೊಳ್ಳಿ-ಅತ್ತಿತ್ತ ಅಲುಗಾಡಿಸುತ್ತಿರುವ ಕೊಳ್ಳಿ, ದೊಂದಿ, ಆವಳಿ-ಸಮೂಹ, ಬಳಿಸಂದು-ಅನುಸರಿಸು, ಕೊಳ್ಳಿ-ಉರಿಯುವ ಕಟ್ಟಿಗೆ, ಬಿಂದು-ಚುಕ್ಕಿ
ಮೂಲ ...{Loading}...
ಮುಂದೆ ಪಾರ್ಥನ ಬೀಸುಗೊಳ್ಳಿಗ
ಳಿಂದ ತಮದಾವಳಿ ಮುರಿಯೆ ಬಳಿ
ಸಂದು ಕುಂತೀದೇವಿ ಧರ್ಮಜನಕುಲ ಸಹದೇವ
ಹಿಂದೆ ಭೀಮನ ಕೈಯ ಕೊಳ್ಳಿಯ
ಬಿಂದು ಬೆಳಗಿನಲನಿಬರಟವೀ
ವೃಂದದಲಿ ಬರುತಿರ್ದರಿರುಳವನೀಶ ಕೇಳೆಂದ ॥26॥
೦೨೭ ಬರುತ ಕಣ್ಡರು ...{Loading}...
ಬರುತ ಕಂಡರು ಮುಂದೆ ಗಂಧ
ರ್ವರ ವಧೂ ನಿಕುರುಂಬವನು ನೇ
ವುರದ ಝಣ ಝಣ ರವದ ಝೇಂಕೃತಿ ಧ್ವನಿಯ
ಅರಳುಗಂಗಳ ಬೆಳಗಿನಲಿ ತಮ
ವಿರುಳು ಬೀತುದು ಬೆಸುವುದಾಗಲೆ
ಕುರುಳ ಕಾಳಿಕೆಯಿಂದ ತತ್ಕಾಂತಾ ಕದಂಬದಲಿ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರು ಮುಂದೆ ಬರುತ್ತ ಗಂಧರ್ವ ಸ್ತ್ರೀ ಸಮೂಹವನ್ನು ಕಂಡರು. ಅವರ ಕಾಲ್ಕಡಗದ ಝಣ ಝಣ ಶಬ್ದದ ಝೇಂಕಾರ ಧ್ವನಿಯನ್ನು ಕೇಳಿದರು. ಅವರ ಹೂವಿನಂತಹ ವಿಶಾಲವಾದ ಕಣ್ಣುಗಳ ಬೆಳಕಿನಲ್ಲಿ ರಾತ್ರಿಯ ಕತ್ತಲೆ ಮರೆಯಾಗುವುದು. ಆ ಕೂಡಲೆ ಆ ಅವರ ತಲೆಯ ಕೂದಲ ಕಪ್ಪಿನಿಂದ ಮತ್ತೆ ಕತ್ತಲೆ ದಟ್ಟವಾಗುವುದು.
ಪದಾರ್ಥ (ಕ.ಗ.ಪ)
ನಿಕುರುಂಬ-ಸಮೂಹ, ನೇವುರ-ಕಾಲ್ಗಡಗ, ರವ-ಶಬ್ದ, ಬೀತುದು-ಮರೆಯಾಗುವುದು, ಕುರುಳು -ತಲೆಕೂದಲು, ಕಾಳಿಕೆ-ಕಪ್ಪು, ಕಾಂತಾ-ಸ್ತ್ರೀ, ಕದಂಬ-ಸಮೂಹ
ಮೂಲ ...{Loading}...
ಬರುತ ಕಂಡರು ಮುಂದೆ ಗಂಧ
ರ್ವರ ವಧೂ ನಿಕುರುಂಬವನು ನೇ
ವುರದ ಝಣ ಝಣ ರವದ ಝೇಂಕೃತಿ ಧ್ವನಿಯ
ಅರಳುಗಂಗಳ ಬೆಳಗಿನಲಿ ತಮ
ವಿರುಳು ಬೀತುದು ಬೆಸುವುದಾಗಲೆ
ಕುರುಳ ಕಾಳಿಕೆಯಿಂದ ತತ್ಕಾಂತಾ ಕದಂಬದಲಿ ॥27॥
೦೨೮ ಲಲಿತ ತನುಕಾನ್ತಿಗಳ ...{Loading}...
ಲಲಿತ ತನುಕಾಂತಿಗಳ ಮೊಗೆದರು
ತಿಳಿಗೊಳನ ಜಲವೆಂದು ಕಂಗಳು
ಹೊಳೆಯೆ ಮರಿಮೀನೆಂದು ಹೆಕ್ಕಳಿಸಿದರು ಹಿಡುಹಿನಲಿ
ಅಲರಿದಂಬುಜವೆಂದು ವದನಕೆ
ನಿಲುಕಿ ತುಂಬಿಗಳೆಂದು ಕುರುಳಿಂ
ಗಳುಕಿ ಕೈಗಳ ತೆರೆದರತಿ ಮುಗುದೆಯರು ಖಚರಿಯರು ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಗ್ಧರಾದ, ಚೆಲುವೆಯರಾದ ಗಂಧರ್ವ ಸ್ತ್ರೀಯರು, ತಮ್ಮ ಸುಂದರ ಶರೀರದ ಹೊಳಪನ್ನು ನಿರ್ಮಲವಾದ ಕೊಳದ ನೀರೆಂದು ಭಾವಿಸಿ ಕುಡಿಯಲು ಹೊರಟರು. ಕಣ್ಣುಗಳು ಹೊಳೆದರೆ ಮರಿಮೀನುಗಳೆಂದು ಮುಷ್ಠಿಯಲ್ಲಿ ಹಿಡಿದು ಹೆಮ್ಮೆಪಟ್ಟರು. ಅರಳಿದ ಕಮಲವೆಂದು ಮುಖಕ್ಕೆ ಕೈಚಾಚಿದರು. ಗುಂಗುರು ಕೂದಲನ್ನು ತುಂಬಿಗಳೆಂದು ಹೆದರಿ ಕೈಗಳನ್ನು ಹಿಂದಕ್ಕೆ ತೆಗೆದರು.
ಪದಾರ್ಥ (ಕ.ಗ.ಪ)
ಲಲಿತ-ಸುಂದರವಾದ, ಕಾಂತಿ-ಹೊಳಪು, ಮೊಗೆ-ಕುಡಿ, ತಿಳಿ-ನಿರ್ಮಲ, ಹಿಕ್ಕಳಿಸು-ಹೆಮ್ಮೆ ಪಡು, ಹಿಡುಹು-ಮುಷ್ಠಿ, ಅಲರು-ಅರಳು ನಿಲುಕು- ಚಾಚು, ಕುರುಳು-ಗುಂಗುರು ಕೂದಲು, ಮುಗುದೆ-ಚೆಲುವೆ, ಖಚರಿ-ಗಂಧರ್ವಸ್ತ್ರೀ
ಮೂಲ ...{Loading}...
ಲಲಿತ ತನುಕಾಂತಿಗಳ ಮೊಗೆದರು
ತಿಳಿಗೊಳನ ಜಲವೆಂದು ಕಂಗಳು
ಹೊಳೆಯೆ ಮರಿಮೀನೆಂದು ಹೆಕ್ಕಳಿಸಿದರು ಹಿಡುಹಿನಲಿ
ಅಲರಿದಂಬುಜವೆಂದು ವದನಕೆ
ನಿಲುಕಿ ತುಂಬಿಗಳೆಂದು ಕುರುಳಿಂ
ಗಳುಕಿ ಕೈಗಳ ತೆರೆದರತಿ ಮುಗುದೆಯರು ಖಚರಿಯರು ॥28॥
೦೨೯ ಅವರ ಮುಖಕಾನ್ತಿಗಳಲಙ್ಗ ...{Loading}...
ಅವರ ಮುಖಕಾಂತಿಗಳಲಂಗ
ಚ್ಛವಿಗಳಲಿ ಕಂಕಣದ ಹಾರದ
ವಿವಿಧ ರತ್ನಾಭರಣ ಕಿರಣದ ಲಲಿತ ಲಹರಿಯಲಿ
ಸವೆದುದಗ್ಗದ ತಿಮಿರವವದಿರ
ನಿವರು ಕಂಡರು ಜಲವಿಹಾರದ
ದಿವಿಜಸತಿಯರಲಾಯೆನುತ ಬರುತಿರ್ದರಡವಿಯಲಿ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಗಂಧರ್ವಸ್ತ್ರೀಯರ ಮುಖಗಳ ಹೊಳಪಿನಲ್ಲಿ, ದೇಹಗಳ ಕಾಂತಿಯಲ್ಲಿ, ಅವರು ತೊಟ್ಟಿದ್ದ ಬಳೆ, ಹಾರ, ವಿವಿಧ ರತ್ನಾಭರಣಗಳ ಕಿರಣಗಳ ಸುಂದರವಾದ ಮಿಂಚಿನ ಕಾಂತಿಯಲ್ಲಿ, - ಇವುಗಳ ಬೆಳಕಿನಲ್ಲಿ ಕಗ್ಗತ್ತಲೆಯ ಶಕ್ತಿ ಕುಂದಿತು, ಅವರನ್ನು ಪಾಂಡವರು ಕಂಡರು. “ಜಲವಿಹಾರಕ್ಕಾಗಿ ಬಂದ ದೇವತಾಸ್ತ್ರೀಯರಲ್ಲವೇ ?” ಎಂದುಕೊಂಡು ಕಾಡಿನಲ್ಲಿ ಬರುತ್ತಿದ್ದರು.
ಪದಾರ್ಥ (ಕ.ಗ.ಪ)
ಛವಿ-ಕಾಂತಿ, ಕಂಕಣ-ಬಳೆ, ಲಹರಿ-ಕಾಂತಿಯುಳ್ಳ ಮಿಂಚು, ಸವೆ-ಶಕ್ತಿಗುಂದು, ದಿವಿಜ-ದೇವತೆ
ಮೂಲ ...{Loading}...
ಅವರ ಮುಖಕಾಂತಿಗಳಲಂಗ
ಚ್ಛವಿಗಳಲಿ ಕಂಕಣದ ಹಾರದ
ವಿವಿಧ ರತ್ನಾಭರಣ ಕಿರಣದ ಲಲಿತ ಲಹರಿಯಲಿ
ಸವೆದುದಗ್ಗದ ತಿಮಿರವವದಿರ
ನಿವರು ಕಂಡರು ಜಲವಿಹಾರದ
ದಿವಿಜಸತಿಯರಲಾಯೆನುತ ಬರುತಿರ್ದರಡವಿಯಲಿ ॥29॥
೦೩೦ ನಾರಿಯರು ಕಣ್ಡರು ...{Loading}...
ನಾರಿಯರು ಕಂಡರು ಸುಲಜ್ಜಾ
ಭಾರದಲಿ ತಡಿಗಡೆಗೆ ಹಾಯಿದು
ಸೀರೆಗಳ ತೆರೆವಿಡಿದರಂಗೋಪಾಂಗ ಲತೆಗಳಿಗೆ
ಆರಿವರು ನಡುವಿರಳು ದರ್ಪ ವಿ
ಕಾರದಲಿ ಕೈಕೊಳ್ಳಿರೆನುತಂ
ಗಾರವರ್ಮನು ಧನುವ ಕೊಂಡನು ನುಡಿಸಿದನು ನರನ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಗಂಧರ್ವ ಸ್ತ್ರೀಯರು ಪಾಂಡವರನ್ನು ನೋಡಿದರು. ನಾಚಿಕೆಯ ಹೊರೆಯಿಂದ ದಡದ ಕಡೆಗೆ ದಾಟಿ ಬಂದು ತಮ್ಮ ಅವಯವಗಳ ಬಳ್ಳಿಗಳಿಗೆ ಸೀರೆಗಳ ತೆರೆಯನ್ನು ಹಿಡಿದರು. “ಯಾರಿವರು ? ಈ ಮಧ್ಯರಾತ್ರಿಯಲ್ಲಿ ಅಹಂಕಾರದ ವಿರೂಪದಲ್ಲಿ ಬರುತ್ತಿರುವರು. ಹಿಡಿದುಕೊಳ್ಳಿ” ಎಂದು ನುಡಿಯುತ್ತ ಅಂಗಾರವರ್ಮನು ಧನುಸ್ಸನ್ನು ಕೈಗೆತ್ತಿಕೊಂಡು ಬಂದು ಅರ್ಜುನನನ್ನು ಮಾತನಾಡಿಸಿದನು.
ಪದಾರ್ಥ (ಕ.ಗ.ಪ)
ಲಜ್ಜೆ-ನಾಚಿಕೆ, ತಡಿ-ದಡ, ಅಂಗೋಪಾಂಗ-ದೇಹ ಮತ್ತು ಅವಯವಗಳು
ಟಿಪ್ಪನೀ (ಕ.ಗ.ಪ)
ಅಂಗಾರವರ್ಮ - ಪಾಂಡವರು ತಮ್ಮ ಅಭ್ಯುದಯಕ್ಕೆ ಧೌಮ್ಯರನ್ನು ಕುಲಪುರೋಹಿತರನ್ನಾಗಿ ಮಾಡಿಕೊಡುವಂತೆ ಸಲಹೆಯಿತ್ತ ಕೀರ್ತಿ ಅಂಗಾರಪರ್ಣನಿಗೆ ಸಲ್ಲುತ್ತದೆ. ಚಿತ್ರರಥನೆಂದೂ ಇವನನ್ನು ಕರೆಯುತ್ತಾರೆ. ಇವನ ತೋಟಕ್ಕೂ ಇದೇ ಹೆಸರಿದೆ. ಅಂಗಾರಪರ್ಣ ಒಬ್ಬ ಗಂಧರ್ವರಾಜ. ಕಶ್ಯಪ ಪ್ರಜಾಪತಿ ಹಾಗೂ ಮುನಿ ಈತನ ತಂದೆ-ತಾಯಿಗಳು ಆದಿಪರ್ವದ ಅರವತ್ತೈದನೆಯ ಅಧ್ಯಾಯದಲ್ಲಿ ಈತನ ಬಗೆಗೆ ವಿವರಗಳಿವೆ.
ಅರಗಿನ ಮನೆಯಿಂದ ತಪ್ಪಿಸಿಕೊಂಡು ಬಂದು ಪಾಂಡವರು ಏಕಚಕ್ರನಗರದಲ್ಲಿ ಇದ್ದರಷ್ಟೆ. ಅಲ್ಲಿ ದ್ರೌಪದಿಯ ಸ್ವಯಂವರದ ವಿಷಯ ತಿಳಿದು ಪಾಂಡವರು ದ್ರುಪದನಗರಿಗೆ ಹೋದರು. ಕೈಯಲ್ಲಿ ಪಂಜು ಹಿಡಿದು ಗಂಗೆಯ ತಟದಲ್ಲಿ ಅರ್ಧರಾತ್ರಿಯ ಸಮಯದಲ್ಲಿ ಅರ್ಜುನನು ಸೋಮಶ್ರವ ಎಂಬ ತೀರ್ಥದ ಬಳಿ ಸ್ನಾನ ಮಾಡಲು ಬರುತ್ತಿದ್ದಾಗ ಅಂಗಾರಪರ್ಣ ಕುಂಭೀನಸಿಯಲ್ಲಿ ಸ್ನಾನ ಮಾಡುತ್ತಿದ್ದನು.
ಇಡೀ ರಾತ್ರಿಯ ಕಾಲವು ಗಂಧರ್ವರಿಗೆ ಸೇರಿದ್ದು ಗಂಗಾನದಿ ಎಂಬುದು ಅಂಗಾರಪರ್ಣನ ವಾದವಾದರೆ, ನದಿ ಯಾರ ಸ್ವತ್ತೂ ಅಲ್ಲ ಎಂದು ಪಾಂಡವರು ವಾದಿಸಿದರು. ಕೊನೆಗೆ ಇಬ್ಬರಿಗೂ ಘೋರ ಯುದ್ಧವಾಯಿತು. ಸೋಲು ಎಂಬುದನ್ನೇ ಕಂಡರಿಯದ ಅಂಗಾರಪರ್ಣನು ಯುದ್ಧದಲ್ಲಿ ಸೋತ. ಅವನ ಪ್ರಸಿದ್ಧ ರಥವು ಸುಟ್ಟು ಬೂದಿಯಾಯಿತು. ಕೊನೆಗೆ ಅರ್ಜುನನು ಆಗ್ನೇಯಾಸ್ತ್ರವನ್ನು ಉಪಯೋಗಿಸಿ ಅಂಗಾರಪರ್ಣನ ಕೈಕಾಲುಗಳನ್ನು ಕಟ್ಟಿ ಧರ್ಮರಾಯನ ಎದುರಿಗೆ ಇರಿಸಿದನು.
ಆಗ ಅಂಗಾರಪರ್ಣನ ಪತ್ನಿ ಕುಂಭೀನಸಿ ಗೋಳಿಡುತ್ತಾ ಧರ್ಮರಾಯನ ಕಾಲಿಗೆ ಬಿದ್ದಳು. (ತ್ರಾಹಿತ್ವಂ ಮಹಾರಾಜ ಪತಿಂ ‘ಚೇಮಂ ವಿಮುಂಚಯೇ’ ಎಂದಳು) ಅವನಿಗೆ ಬಿಡುಗಡೆಯಾಯಿತು. ಅಂಗಾರಪರ್ಣ ಪಾಂಡವರ ಗೆಳೆಯನಾದ. ಮೂರು ಲೋಕಗಳಲ್ಲಿ ಏನನ್ನು ಬೇಕಾದರೂ ಕಾಣಬಲ್ಲ, ಗುರುತಿಸಬಲ್ಲ ಚಾಕ್ಷುಷೀ ವಿದ್ಯೆಯನ್ನು ಅಂಗಾರಪರ್ಣನು ಅರ್ಜುನನಿಗೆ ಹೇಳಿಕೊಟ್ಟ. ತಾನು ವಿಶ್ವಾವಸುವಿನಿಂದ ಕಲಿತಿದ್ದ ದಿವ್ಯ ವಿದ್ಯೆ ಅದು. ಇದಕ್ಕೆ ಪ್ರತಿಯಾಗಿ ಅರ್ಜುನನು ಅಂಗಾರಪರ್ಣನಿಗೆ ‘ಅಗ್ನಿಶಿರ’ ಎಂಬ ದಿವ್ಯಸ್ತ್ರದ ರಹಸ್ಯವನ್ನು ಬೋಧಿಸಿದ. ತನ್ನ ರಥ ಸುಟ್ಟು ಹೋದರೂ ಅಂಗಾರಪರ್ಣನು ಇನ್ನೊಂದು ರತ್ನಖಚಿತವಾದ ರಥವನ್ನು ನಿರ್ಮಾಣ ಮಾಡಿಕೊಂಡು ತನ್ನ ಹೆಸರನ್ನು ಚಿತ್ರರಥ ಎಂದು ಬದಲಾಯಿಸಿಕೊಂಡ. ತನ್ನ ಎಲ್ಲ ರಥಗಳು ಸುಟ್ಟು ಹೋದದ್ದರಿಂದ ‘ಭಗ್ನರಥ’ (ದಗ್ಧರಥ ಎಂಬ ಹೆಸರು ಬಂದಿದೆ) ಎಂದು ಹೆಸರು ಬಂದಿದ್ದರಿಂದ ಹೀಗೆ ಮಾಡಬೇಕಾಯಿತು. ಚಿತ್ರರಥನು ಒಬ್ಬೊಬ್ಬರಿಗೆ ನೂರರಂತೆ ವೇಗಶಾಲಿಗಳಾದ ಕಾಮವರ್ಣಿಗಳಾದ ಕಾಮಗಮನಿಗಳಾದ ಗಂಧರ್ವಾಶ್ವಗಳನ್ನು ಪಾಂಡವರಿಗೆ ಕಾಣಿಕೆಯಾಗಿ ನೀಡಿದ. ತಪತಿ ಸಚಿವರಣರ ಕಥೆ ಹೇಳಿ ವಸಿಷ್ಠರ ಸಹಾಯದಿಂದ ಸಚಿವರಣನಿಗಾದ ಉಪಕಾರವನ್ನು ತಿಳಿಸಿ ಉತ್ಕೋಚವೆಂಬ ಪುಣ್ಯತೀರ್ಥದಲ್ಲಿ ತಪಸ್ಸು ಮಾಡುತ್ತಿದ್ದ ಧೌಮ್ಯರ ಬಳಿಗೆ ಕಳುಹಿಸಿದ.
ಚಿತ್ರರಥ ಸೊಗಸಾದ ಕಥೆಗಾರ ಕೂಡ. ಈತ ಪಾಂಡವರಿಗೆ ತಪತೀ ಸಚಿವರಣರ ಪ್ರಣಯಕಥೆ, ಪರಾಶರ, ಕಲ್ಮಾಷಪಾದ, ಆದೃಶ್ಯಂತಿಯರ ಕಥೆ, ವಸಿಷ್ಠ ವಿಶ್ವಾಮಿತ್ರರ ಕಥೆಗಳನ್ನು ವಿವರವಾಗಿ ತಿಳಿಸುತ್ತಾನೆ. ಪಂಪನು ಈತನನ್ನು ‘ಅಂಗದಪರ್ಣ’ ಎಂದಿದ್ದಾನೆ.
ಮೂಲ ...{Loading}...
ನಾರಿಯರು ಕಂಡರು ಸುಲಜ್ಜಾ
ಭಾರದಲಿ ತಡಿಗಡೆಗೆ ಹಾಯಿದು
ಸೀರೆಗಳ ತೆರೆವಿಡಿದರಂಗೋಪಾಂಗ ಲತೆಗಳಿಗೆ
ಆರಿವರು ನಡುವಿರಳು ದರ್ಪ ವಿ
ಕಾರದಲಿ ಕೈಕೊಳ್ಳಿರೆನುತಂ
ಗಾರವರ್ಮನು ಧನುವ ಕೊಂಡನು ನುಡಿಸಿದನು ನರನ ॥30॥
೦೩೧ ಈಸು ಭರದಲಿ ...{Loading}...
ಈಸು ಭರದಲಿ ಗಮನವೆಲ್ಲಿಗೆ
ದೇಶಕಾಲವ ನೋಡದೀ ಸ
ರ್ವಾಸುರದ ಸೌರಂಭವೇನೆನೆ ಪಾರ್ಥ ನಸುನಗುತ
ದೇಶವಿದು ವನ ಕಾಲ ನಡುವಿರು
ಳೈಸಲೇ ನಿಜಕಾರ್ಯ ಸಂಗತಿ
ಗೋಸುಗವೆ ಗತಿಯೆಂದನಾ ಗಂಧರ್ವ ರಾಜಂಗೆ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದೇಶಕಾಲವನ್ನು ನೋಡದೆ ಇಷ್ಟೊಂದು ರಭಸದಲ್ಲಿ ಎಲ್ಲಿಗೆ ಹೋಗುವಿರಿ ? ಅಸುರರಿಗೆ ತಕ್ಕ ಈ ಎಲ್ಲ ಸಂಭ್ರಮವೇನು ?” ಎಂದು ಕೇಳಲು, ಪಾರ್ಥನು ನಸುನಗುತ್ತ” ದೇಶವಿದು ಕಾಡು. ಕಾಲವಿದು ಮಧ್ಯರಾತ್ರಿ, ನಮ್ಮ ಕಾರ್ಯಕ್ಕೋಸ್ಕರವಾಗಿಯೇ ಈ ಸಂಚಾರ" ಎಂದು ಗಂಧರ್ವರಾಜನಿಗೆ ಉತ್ತರ ಕೊಟ್ಟನು.
ಪದಾರ್ಥ (ಕ.ಗ.ಪ)
ಭರ-ರಭಸ, ಸೌರಂಭ-ಸಂಭ್ರಮ, ಸಂಗತಿ-ವಿಚಾರ, ಗತಿ-ಸಂಚಾರ
ಮೂಲ ...{Loading}...
ಈಸು ಭರದಲಿ ಗಮನವೆಲ್ಲಿಗೆ
ದೇಶಕಾಲವ ನೋಡದೀ ಸ
ರ್ವಾಸುರದ ಸೌರಂಭವೇನೆನೆ ಪಾರ್ಥ ನಸುನಗುತ
ದೇಶವಿದು ವನ ಕಾಲ ನಡುವಿರು
ಳೈಸಲೇ ನಿಜಕಾರ್ಯ ಸಂಗತಿ
ಗೋಸುಗವೆ ಗತಿಯೆಂದನಾ ಗಂಧರ್ವ ರಾಜಂಗೆ ॥31॥
೦೩೨ ನರರು ಸುಳಿವುದು ...{Loading}...
ನರರು ಸುಳಿವುದು ಪೂರ್ವಭಾಗದ
ಲಿರುಳಿನುತ್ತರ ಭಾಗದಲಿ ಖೇ
ಚರರು ಸುಳಿವುದು ಸೀಮೆ ಚತುರಾನನನ ಸೃಷ್ಟಿಯಲಿ
ಇರುಳಿನುತ್ತರ ಭಾಗವಿದು ನೀವ್
ನರರು ಬಹುದುದ್ದಂಡ ದರ್ಪ
ಜ್ವರಿತವಿದಕೌಷಧಿಯನೆರೆವೆನೆನುತ್ತ ತೆಗೆದೆಚ್ಚ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾತ್ರಿಯ ಪೂರ್ವಭಾಗದಲ್ಲಿ ಮಾನವರು ತಿರುಗಾಡುವುದು. ಉತ್ತರ ಭಾಗದಲ್ಲಿ ಗಂಧರ್ವರು ತಿರುಗಾಡುವುದು - ಇದು ಬ್ರಹ್ಮಸೃಷ್ಟಿಯ ಕಟ್ಟಳೆ. ರಾತ್ರಿಯ ಉತ್ತರಭಾಗವಿದು. ನೀವು ಮಾನವರು. ಈ ಸಮಯದಲ್ಲಿ ಬರುವುದು ಪ್ರಬಲವಾದ ಸೊಕ್ಕಿನ ಜ್ವರದಿಂದ ಪೀಡಿತವಾಗಿದೆ. ಇದಕ್ಕೆ ತಕ್ಕ ಔಷಧಿಯನ್ನು ಹೊಯ್ಯುತ್ತೇನೆ ಎಂದು ಹೇಳುತ್ತಾ ಗಂಧರ್ವನು ಬಾಣವನ್ನು ಹೊಡೆದನು.
ಪದಾರ್ಥ (ಕ.ಗ.ಪ)
ಸೀಮೆ-ಕಟ್ಟಳೆ, ಚತುರಾನನ-ಬ್ರಹ್ಮ, ಉದ್ದಂಡ-ಪ್ರಬಲ, ದರ್ಪ-ಸೊಕ್ಕು, ಜ್ವರಿತ-ಜ್ವರದಿಂದ ಪೀಡಿತವಾದುದು, ಎರೆ-ಹೊಯ್ಯು
ಮೂಲ ...{Loading}...
ನರರು ಸುಳಿವುದು ಪೂರ್ವಭಾಗದ
ಲಿರುಳಿನುತ್ತರ ಭಾಗದಲಿ ಖೇ
ಚರರು ಸುಳಿವುದು ಸೀಮೆ ಚತುರಾನನನ ಸೃಷ್ಟಿಯಲಿ
ಇರುಳಿನುತ್ತರ ಭಾಗವಿದು ನೀವ್
ನರರು ಬಹುದುದ್ದಂಡ ದರ್ಪ
ಜ್ವರಿತವಿದಕೌಷಧಿಯನೆರೆವೆನೆನುತ್ತ ತೆಗೆದೆಚ್ಚ ॥32॥
೦೩೩ ಕನಲಿ ಫಲುಗುಣನಾದಡಿದ ...{Loading}...
ಕನಲಿ ಫಲುಗುಣನಾದಡಿದ ಕೊ
ಳ್ಳೆನುತ ಕೊಳ್ಳಿಯೊಳಿಟ್ಟನಗ್ನಿಯ
ನೆನೆದು ಮಂತ್ರಿಸಲುರಿಮುಖದ ಕಾರ್ಬೊಗೆಯ ಮೊಬ್ಬಿನಲಿ
ಹೊನಲುಗಿಡಿಗಳ ತಗಡುರಿಯ ಕೊಂ
ಡಿನಲಿ ಮುತ್ತಿತು ರಥವನಾತನ
ಧನುವನಾತನ ತನುವನಾತನ ಸರಳ ಸಾರಥಿಯ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಫಲುಗುಣನು ರೇಗಿ, “ಸಾಧ್ಯವಾದರೆ ಇದನ್ನು ತೆಗೆದುಕೋ” ಎನ್ನುತ್ತ ಅಗ್ನಿಯನ್ನು ನೆನೆದು ಮಂತ್ರಿಸಿ ಉರಿಯುವ ಕಟ್ಟಿಗೆಯಿಂದ ಹೊಡೆದನು. ಆ ಕ್ಷಣವೇ ಜ್ವಾಲೆಯ ಮುಂಭಾಗದ ಕಪ್ಪು ಹೊಗೆಯ ಮಬ್ಬಿನಲ್ಲಿ ಕಿಡಿಗಳ ಪ್ರವಾಹ ಹೊರಟು ದಟ್ಟವಾದ ಉರಿಯ ಕೊಕ್ಕೆಯಲ್ಲಿ ಆತನ ರಥವನ್ನು, ಧನುಸ್ಸನ್ನು, ದೇಹವನ್ನು, ಸರಳನ್ನೂ ಸಾರಥಿಯನ್ನು ಆವರಿಸಿತು.
ಪದಾರ್ಥ (ಕ.ಗ.ಪ)
ಉರಿ-ಜ್ವಾಲೆ, ಮುಖ-ಮುಂಭಾಗ, ಕಾರ್ಬೊಗೆ-ಕಪ್ಪು ಹೊಗೆ, ಮೊಬ್ಬು-ಮಬ್ಬು, ಹೊನಲುಗಿಡಿ-ಕಿಡಿಗಳ ಪ್ರವಾಹ, ತಗಡುರಿ-ದಟ್ಟವಾದ ಉರಿ, ಕೊಂಡಿ-ಕೊಕ್ಕೆ, ಮುತ್ತಿತು-ಆವರಿಸಿತು.
ಮೂಲ ...{Loading}...
ಕನಲಿ ಫಲುಗುಣನಾದಡಿದ ಕೊ
ಳ್ಳೆನುತ ಕೊಳ್ಳಿಯೊಳಿಟ್ಟನಗ್ನಿಯ
ನೆನೆದು ಮಂತ್ರಿಸಲುರಿಮುಖದ ಕಾರ್ಬೊಗೆಯ ಮೊಬ್ಬಿನಲಿ
ಹೊನಲುಗಿಡಿಗಳ ತಗಡುರಿಯ ಕೊಂ
ಡಿನಲಿ ಮುತ್ತಿತು ರಥವನಾತನ
ಧನುವನಾತನ ತನುವನಾತನ ಸರಳ ಸಾರಥಿಯ ॥33॥
೦೩೪ ಉರಿದುದಾ ರಥವವನ ...{Loading}...
ಉರಿದುದಾ ರಥವವನ ಮೈಯಲಿ
ಕರಿಕುವರಿತರಲೋಡಿ ಹೊಕ್ಕನು
ಸರಸಿಯನು ಶಿಖಿಯೊಡನೆ ಹೊಕ್ಕುದು ನೀರನುರೆ ಸುರಿದು
ತರುಣಿ ಹಾಹಾ ಕೆಟ್ಟನೆಂದ
ಬ್ಬರಿಸಲಾ ಗಂಧರ್ವನಂಗನೆ
ಹರಿದಳೆಡಗೈಯಿಂದ ಸಂವರಿಸುತ್ತ ಬಿಡುಮುಡಿಯ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ರಥ ಉರಿದು ಹೋಯಿತು. ಅವನ ಮೈಸುಟ್ಟು ಕಪ್ಪಾಗಲು, ಅವನು ಓಡಿಹೋಗಿ ಸರೋವರವನ್ನು ಹೊಕ್ಕನು. ಬೆಂಕಿಯೂ ಜೊತೆಯಲ್ಲಿ ನೀರನ್ನು ಹೊಕ್ಕಿತು. ಗಂಧರ್ವನು ಉರಿಗೆ ನೀರೆರುಚುತ್ತಾ “ತರುಣೀ ಅಯ್ಯೋ ಅಯ್ಯೋ ಕೆಟ್ಟೆನು” ಎಂದು ಕೂಗಿಕೊಳ್ಳಲು, ಆ ಗಂಧರ್ವನ ಹೆಂಡತಿ ಎಡಗೈಯಿಂದ ಬಿಚ್ಚಿದ ಮುಡಿಯನ್ನು ಸರಿಪಡಿಸಿಕೊಳ್ಳುತ್ತ ಓಡಿ ಬಂದಳು.
ಪದಾರ್ಥ (ಕ.ಗ.ಪ)
ಕರಿಕು-ಕಪ್ಪಾಗು, ಶಿಖಿ-ಬೆಂಕಿ, ಬಿಡುಮುಡಿ-ಬಿಚ್ಚಿದ ಮುಡಿ, ಹರಿದಳು-ಓಡಿ ಬಂದಳು
ಮೂಲ ...{Loading}...
ಉರಿದುದಾ ರಥವವನ ಮೈಯಲಿ
ಕರಿಕುವರಿತರಲೋಡಿ ಹೊಕ್ಕನು
ಸರಸಿಯನು ಶಿಖಿಯೊಡನೆ ಹೊಕ್ಕುದು ನೀರನುರೆ ಸುರಿದು
ತರುಣಿ ಹಾಹಾ ಕೆಟ್ಟನೆಂದ
ಬ್ಬರಿಸಲಾ ಗಂಧರ್ವನಂಗನೆ
ಹರಿದಳೆಡಗೈಯಿಂದ ಸಂವರಿಸುತ್ತ ಬಿಡುಮುಡಿಯ ॥34॥
೦೩೫ ಬನ್ದು ಯಮನನ್ದನನ ...{Loading}...
ಬಂದು ಯಮನಂದನನ ಚರಣ
ದ್ವಂದ್ವದಲಿ ಚಾಚಿದಳು ನೊಸಲನು
ತಂದೆ ಕರುಣಿಸು ಕಾಂತಭಿಕ್ಷವ ಕರುಣಿಸೆನಗೆನಲು
ಮುಂದುವರಿಯದಿರೆಲೆ ಧನಂಜಯ
ಕೊಂದರೆನ್ನಾಣೀಕೆಯರಸನ
ತಂದು ಕೊಡು ಬೇಗದಲಿ ಉಪಸಂಹರಿಸು ಶಿಖಿಶರವ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಗಂಧರ್ವನ ಹೆಂಡತಿ ಬಂದು ಯಮನಂದನನ ಪಾದಯುಗಳದಲ್ಲಿ ಹಣೆಯನ್ನು ಮುಂದೊಡ್ಡಿದಳು " ತಂದೇ, ಪತಿಭಿಕ್ಷವನ್ನು ನನಗೆ ಕರುಣಿಸು" ಎಂದು ಬೇಡಿಕೊಂಡಳು. ಆಗ ಧರ್ಮರಾಜನು ಅರ್ಜುನನನ್ನು ಕುರಿತು “ಮುಂದುವರೆಯಬೇಡ ಧನಂಜಯಾ, ಕೊಂದರೆ ನನ್ನಾಣೆ. ಈಕೆಯ ಅರಸನನ್ನು ತಂದುಕೊಡು. ಬೇಗದಲ್ಲಿ ಅಗ್ನ್ಯಸ್ತ್ರವನ್ನು ಹಿಂದಕ್ಕೆ ತೆಗೆದುಕೋ” ಎಂದು ಹೇಳಿದನು.
ಪದಾರ್ಥ (ಕ.ಗ.ಪ)
ಚಾಚು-ಮುಂದೊಡ್ಡು, ಕಾಂತ-ಪತಿ, ಉಪಸಂಹರಿಸು-ಹಿಂದಕ್ಕೆ ತೆಗೆದುಕೋ
ಮೂಲ ...{Loading}...
ಬಂದು ಯಮನಂದನನ ಚರಣ
ದ್ವಂದ್ವದಲಿ ಚಾಚಿದಳು ನೊಸಲನು
ತಂದೆ ಕರುಣಿಸು ಕಾಂತಭಿಕ್ಷವ ಕರುಣಿಸೆನಗೆನಲು
ಮುಂದುವರಿಯದಿರೆಲೆ ಧನಂಜಯ
ಕೊಂದರೆನ್ನಾಣೀಕೆಯರಸನ
ತಂದು ಕೊಡು ಬೇಗದಲಿ ಉಪಸಂಹರಿಸು ಶಿಖಿಶರವ ॥35॥
೦೩೬ ಎನೆ ಹಸಾದವೆನುತ್ತ ...{Loading}...
ಎನೆ ಹಸಾದವೆನುತ್ತ ನಿಮಿಷದೊ
ಳನಲನನು ನಂದಿಸಿದನಿತ್ತಲು
ಮನದ ದುಮ್ಮಾನದಲಿ ಲಜ್ಜಾವನತ ಮುಖನಾಗಿ
ಮನುಜರಲ್ಲಿವರಾರೊ ನೋಡುವೆ
ನೆನುತ ಹತ್ತಿರೆ ಬಂದು ನೀವಾ
ರಿನಿತು ಸಾಹಸ ಮಲ್ಲರೆಂದರ್ಜುನನ ಬೆಸಗೊಂಡ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಜನು ಆ ರೀತಿ ಹೇಳಲು. ಅರ್ಜುನನು ಅಣ್ಣನ ಅಪ್ಪಣೆಯೆನುತ್ತ ನಿಮಿಷದೊಳಗೆ ಬೆಂಕಿಯನ್ನು ಶಾಂತಪಡಿಸಿದನು. ಇತ್ತ ಕಡೆ, ಗಂಧರ್ವನು ಮನಸ್ಸಿನ ದುಃಖದಲ್ಲಿ ನಾಚಿಕೆಯಿಂದ ಬಾಗಿದ ಮುಖದವನಾಗಿ, “ಇವರು ಮನುಷ್ಯರಲ್ಲ, ಯಾರೋ ನೋಡುವೆನು” ಎಂದುಕೊಂಡು ಹತ್ತಿರ ಬಂದು “ನೀವು ಯಾರು ? ಇಷ್ಟೊಂದು ಮಹಾಪರಾಕ್ರಮಿಗಳು” ಎಂದು ಅರ್ಜುನನನ್ನು ಕೇಳಿದನು.
ಪದಾರ್ಥ (ಕ.ಗ.ಪ)
ಹಸಾದ-ಅಪ್ಪಣೆ, ನಂದಿಸು-ಶಾಂತಪಡಿಸು, ಅವನತ-ಬಾಗು, ಸಾಹಸಮಲ್ಲ-ಮಹಾಪರಾಕ್ರಮಿ
ಮೂಲ ...{Loading}...
ಎನೆ ಹಸಾದವೆನುತ್ತ ನಿಮಿಷದೊ
ಳನಲನನು ನಂದಿಸಿದನಿತ್ತಲು
ಮನದ ದುಮ್ಮಾನದಲಿ ಲಜ್ಜಾವನತ ಮುಖನಾಗಿ
ಮನುಜರಲ್ಲಿವರಾರೊ ನೋಡುವೆ
ನೆನುತ ಹತ್ತಿರೆ ಬಂದು ನೀವಾ
ರಿನಿತು ಸಾಹಸ ಮಲ್ಲರೆಂದರ್ಜುನನ ಬೆಸಗೊಂಡ ॥36॥
೦೩೭ ನರರು ವೈದೇಶಿಗರು ...{Loading}...
ನರರು ವೈದೇಶಿಗರು ಕಾರ್ಯಾ
ತುರರು ನಾವೆನಲರ್ಜುನನನುಪ
ಚರಿಸಿ ವಿವಿಧ ಗುಣಾನುಮುಖದಲ್ಲಿವರನಂಡಲೆಯೆ
ಧರೆಯೊಳುಂಟೇ ಪಾಂಡುಸುತರೆಂ
ಬರಸುಗಳು ನೀಕೇಳಿ ಬಲ್ಲೈ
ನಿರುತವಾವವರೆಂದು ನುಡಿದನು ನಗುತ ಕಲಿಪಾರ್ಥ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಾವು ಮಾನವರು, ಪರದೇಶಿಗಳು, ಮುಂದಿನ ಕೆಲಸದಲ್ಲಿ ತವಕವಿರುವವರು” ಎಂದು ಅರ್ಜುನನು ಉತ್ತರ ಕೊಟ್ಟನು. ಗಂಧರ್ವನು ಅರ್ಜುನನನ್ನು ಉಪಚಾರ ಮಾಡಿ ಬಗೆ ಬಗೆಯ ಗುಣಗಳ ಅನುಸಾರ ಅವರನ್ನು ಪೀಡಿಸಲು, “ಭೂಮಂಡಲದಲ್ಲಿ ಪಾಂಡುಸುತರು ಎಂಬ ಅರಸುಗಳಿಲ್ಲವೆ ? ನೀನು ಕೇಳಿ ಬಲ್ಲೆಯಾ ? ಸತ್ಯವಾಗಿಯೂ ನಾವೇ ಅವರು” ಎಂದು ನಗುತ್ತ ಕಲಿಪಾರ್ಥನು ಹೇಳಿದನು.
ಪದಾರ್ಥ (ಕ.ಗ.ಪ)
ವೈದೇಶಿಗರು-ಪರದೇಶಿಗಳು, ನಿರುತ-ಸತ್ಯ
ಪಾಠಾನ್ತರ (ಕ.ಗ.ಪ)
ನಿರುತವಾದವರೆಂದು- ನಿರುತವಾವವರೆಂದು : ಆದಿಪರ್ವ, ಮೈ.ವಿ.ವಿ.- ಡಾ.ಕೆ.ಆರ್.ಶೇಷಗಿರಿ
ಮೂಲ ...{Loading}...
ನರರು ವೈದೇಶಿಗರು ಕಾರ್ಯಾ
ತುರರು ನಾವೆನಲರ್ಜುನನನುಪ
ಚರಿಸಿ ವಿವಿಧ ಗುಣಾನುಮುಖದಲ್ಲಿವರನಂಡಲೆಯೆ
ಧರೆಯೊಳುಂಟೇ ಪಾಂಡುಸುತರೆಂ
ಬರಸುಗಳು ನೀಕೇಳಿ ಬಲ್ಲೈ
ನಿರುತವಾವವರೆಂದು ನುಡಿದನು ನಗುತ ಕಲಿಪಾರ್ಥ ॥37॥
೦೩೮ ಶಿವ ಶಿವಾದೊಡೆ ...{Loading}...
ಶಿವ ಶಿವಾದೊಡೆ ಯಮ ಪುರಂದರ
ಪವನನಶ್ವಿನಿಯರಿಗೆ ನೀವ್ ಸಂ
ಭವಿಸಿದವರೇ ನೀವೆಮಗೆ ಸಂಭಾವನೀಯರಲ
ಇವೆ ಸಹಸ್ರ ತುರಂಗ ದಿವ್ಯೋ
ದ್ಭವವನಘ್ರ್ಯಾಭರಣರತ್ನ
ಪ್ರವರವಿವೆ ಕಾರುಣ್ಯದಲಿ ಕೈಕೊಂಬುದಿವನೆಂದ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಶಿವ ಶಿವಾ ! ಹಾಗಾದರೆ, ಯಮ, ಇಂದ್ರ, ವಾಯು, ಅಶ್ವಿನಿ ದೇವತೆಗಳಿಗೆ ಹುಟ್ಟಿದವರೇ ನೀವು ? ನಮಗೆ ನೀವು ಗೌರವಾರ್ಹರು. ದೇವಲೋಕದಲ್ಲಿ ಹುಟ್ಟಿದ , ಸಾವಿರ ಕುದುರೆಗಳಿವೆ. ಅಮೂಲ್ಯವಾದ ಆಭರಣಗಳೂ ಉತ್ತಮವಾದ ರತ್ನಗಳೂ ಇವೆ. ಕರುಣದಿಂದ ಇವುಗಳನ್ನು ತೆಗೆದುಕೊಳ್ಳುವುದು” ಎಂದು ಆ ಗಂಧರ್ವನು ಪ್ರಾರ್ಥಿಸಿದನು.
ಪದಾರ್ಥ (ಕ.ಗ.ಪ)
ಪುರಂದರ-ಇಂದ್ರ, ಪವನ-ವಾಯು, ಸಂಭವಿಸು-ಹುಟ್ಟು, ದಿವ್ಯ-ದೇವಲೋಕದ , ಉದ್ಭವ-ಹುಟ್ಟಿದ, ಅನಘ್ರ್ಯ-ಅಮೂಲ್ಯ, ಪ್ರವರ-ಉತ್ತಮ, ಸಂಭಾವನೀಯ - ಗೌರವಾರ್ಹ
ಮೂಲ ...{Loading}...
ಶಿವ ಶಿವಾದೊಡೆ ಯಮ ಪುರಂದರ
ಪವನನಶ್ವಿನಿಯರಿಗೆ ನೀವ್ ಸಂ
ಭವಿಸಿದವರೇ ನೀವೆಮಗೆ ಸಂಭಾವನೀಯರಲ
ಇವೆ ಸಹಸ್ರ ತುರಂಗ ದಿವ್ಯೋ
ದ್ಭವವನಘ್ರ್ಯಾಭರಣರತ್ನ
ಪ್ರವರವಿವೆ ಕಾರುಣ್ಯದಲಿ ಕೈಕೊಂಬುದಿವನೆಂದ ॥38॥
೦೩೯ ಬನ್ದವೆಮಗಿವು ನಿನ್ನ ...{Loading}...
ಬಂದವೆಮಗಿವು ನಿನ್ನ ನಾವ್ ಬೇ
ರೆಂದು ಕಾಣೆವು ಪರಮ ಬಾಂಧವ
ರಿಂದು ಮೊದಲಾಗೆಮಗೆ ನೀನೇ ಮೌಲ್ಯಧನವೆಂದ
ಇಂದು ನಿಜರೂಪಡಗಿ ರಾಯರ
ವೃಂದವನು ನೋಡುವೆವು ದ್ರುಪದನ
ನಂದನೆಯ ವೈವಾಹ ರಚನೆಯೊಳೆಂದನಾ ಪಾರ್ಥ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದಕ್ಕೆ ಪಾರ್ಥನು, “ಇವು ನಮಗೆ ಸೇರಿದುವು. ನಿನ್ನನ್ನು ನಾವು ಬೇರೆಯೆಂದು ನೋಡೆವು. ಇವತ್ತು ಮೊದಲಾಗಿ ನೀವು ನಮಗೆ ಪರಮಬಾಂಧವರು. ನೀನೇ ನಮಗೆ ಮೌಲಿಕವಾದ ಸಂಪತ್ತು. ಈಗ ನಾವು ನಿಜರೂಪವನ್ನು ಅಡಗಿಸಿಕೊಂಡು ದ್ರುಪದನ ಮಗಳ ವಿವಾಹ ಸಂದರ್ಭದ ಸಿದ್ಧತೆಯಲ್ಲಿ ರಾಜರ ಸಮೂಹವನ್ನು ನೋಡುತ್ತೇವೆ” ಎಂದು ಹೇಳಿದನು.
ಪದಾರ್ಥ (ಕ.ಗ.ಪ)
ಮೌಲ್ಯ-ಮೂಲಭೂತವಾದ, ನಂದನೆ-ಮಗಳು
ಮೂಲ ...{Loading}...
ಬಂದವೆಮಗಿವು ನಿನ್ನ ನಾವ್ ಬೇ
ರೆಂದು ಕಾಣೆವು ಪರಮ ಬಾಂಧವ
ರಿಂದು ಮೊದಲಾಗೆಮಗೆ ನೀನೇ ಮೌಲ್ಯಧನವೆಂದ
ಇಂದು ನಿಜರೂಪಡಗಿ ರಾಯರ
ವೃಂದವನು ನೋಡುವೆವು ದ್ರುಪದನ
ನಂದನೆಯ ವೈವಾಹ ರಚನೆಯೊಳೆಂದನಾ ಪಾರ್ಥ ॥39॥
೦೪೦ ಇವು ಮದೀಯ ...{Loading}...
ಇವು ಮದೀಯ ಸುವಸ್ತು ನಿನ್ನಯ
ಭವನದೊಳಗಿರಲೊಂದು ಸಮಯದೊ
ಳಿವನು ತರಿಸುವೆವೆಂದು ಬಳಿಕಂಗಾರವರ್ಮಂಗೆ
ಇವರು ವಿನಯವ ಮಾಡಿ ಗಮನೋ
ತ್ಸವದಲಿರೆ ಗಂಧರ್ವ ನಸು ನಗು
ತಿವರಿಗೆಂದನು ಧರ್ಮಶಾಸ್ತ್ರದ ಸಾರ ಸಂಗತಿಯ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಮ್ಮ ಈ ಒಳ್ಳೆಯ ವಸ್ತುಗಳು ನಿನ್ನ ಅರಮನೆಯೊಳಗಿರಲಿ. ಬೇಕಾದ ಸಮಯದಲ್ಲಿ ಇವುಗಳನ್ನು ತರಿಸಿಕೊಳ್ಳುತ್ತೇವೆ” ಎಂದು ಹೇಳಿ, ಅಂಗಾರವರ್ಮನಿಗೆ ವಿನಯೋಪಚಾರ ಮಾಡಿ ಪಾಂಡವರು ಹೊರಡುವ ಸಂತೋಷದಲ್ಲಿದ್ದರು. ಆಗ ಗಂಧರ್ವನು ನಸುನಗುತ್ತ ಧರ್ಮಶಾಸ್ತ್ರದ ಮುಖ್ಯ ವಿಚಾರವನ್ನು ಪಾಂಡವರಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಮದೀಯ-ನಮ್ಮ, ಉತ್ಸವ-ಸಂತೋಷ, ಸಾರ-ಮುಖ್ಯ, ಸಂಗತಿ-ವಿಚಾರ
ಮೂಲ ...{Loading}...
ಇವು ಮದೀಯ ಸುವಸ್ತು ನಿನ್ನಯ
ಭವನದೊಳಗಿರಲೊಂದು ಸಮಯದೊ
ಳಿವನು ತರಿಸುವೆವೆಂದು ಬಳಿಕಂಗಾರವರ್ಮಂಗೆ
ಇವರು ವಿನಯವ ಮಾಡಿ ಗಮನೋ
ತ್ಸವದಲಿರೆ ಗಂಧರ್ವ ನಸು ನಗು
ತಿವರಿಗೆಂದನು ಧರ್ಮಶಾಸ್ತ್ರದ ಸಾರ ಸಂಗತಿಯ ॥40॥
೦೪೧ ಮುನಿಯದಿರು ಕಲಿಪಾರ್ಥ ...{Loading}...
ಮುನಿಯದಿರು ಕಲಿಪಾರ್ಥ ನಿನ್ನಯ
ಘನತರದ ವಿಕ್ರಮಕೆ ದಿವಿಜರು
ದನುಜ ಭುಜಗರು ನೆರೆಯರುಳಿದೀ ನರರ ಪಾಡೇನು
ಅನುಪಮಾನ ಕ್ಷತ್ರವಹ್ನಿಗೆ
ವಿನುತ ವಿಮಲ ಬ್ರಹ್ಮತೇಜೋ
ಘನ ಸಮೀರ ಸಹಾಯವಾಗಲಸಾಧ್ಯವೇನೆಂದ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕಲಿಪಾರ್ಥಾ, ಕೋಪಿಸಿಕೊಳ್ಳಬೇಡ, ನಿನ್ನ ಅಧಿಕವಾದ ಪರಾಕ್ರಮಕ್ಕೆ ದೇವತೆಗಳು, ದಾನವರು, ಭುಜಗರು ಸಮರ್ಥರಲ್ಲ. ಇನ್ನು ಉಳಿದ ಮನುಷ್ಯರ ಪಾಡೇನು ? ಅಸಾಮಾನ್ಯವಾದ ಕ್ಷಾತ್ರ ತೇಜಸ್ಸು ಎಂಬ ಬೆಂಕಿಗೆ, ಪವಿತ್ರವಾದ ಬ್ರಹ್ಮತೇಜಸ್ಸು ಎಂಬ ಅಧಿಕ ವಾಯು ಸಹಾಯವಾದರೆ ಅಸಾಧ್ಯ ಯಾವುದಿದೆ ?” ಎಂದು ಗಂಧರ್ವನು ಹೇಳಿದನು.
ಪದಾರ್ಥ (ಕ.ಗ.ಪ)
ಮುನಿ-ಕೋಪಿಸು, ಅನುಪಮಾನ-ಅಸಾಮಾನ್ಯ, ನೆರೆ-ಸಮರ್ಥ, ವಿಮಲ-ಪವಿತ್ರ, ಸಮೀರ-ವಾಯು ಭುಜಗರು- ನಾಗರು
ಮೂಲ ...{Loading}...
ಮುನಿಯದಿರು ಕಲಿಪಾರ್ಥ ನಿನ್ನಯ
ಘನತರದ ವಿಕ್ರಮಕೆ ದಿವಿಜರು
ದನುಜ ಭುಜಗರು ನೆರೆಯರುಳಿದೀ ನರರ ಪಾಡೇನು
ಅನುಪಮಾನ ಕ್ಷತ್ರವಹ್ನಿಗೆ
ವಿನುತ ವಿಮಲ ಬ್ರಹ್ಮತೇಜೋ
ಘನ ಸಮೀರ ಸಹಾಯವಾಗಲಸಾಧ್ಯವೇನೆಂದ ॥41॥
೦೪೨ ಅರಸ ನಿಮ್ಮೊಳು ...{Loading}...
ಅರಸ ನಿಮ್ಮೊಳು ಪೂರ್ವದಲಿ ಸಂ
ವರಣನೆಂಬನು ಸೂರ್ಯತನುಜೆಗೆ
ಮರುಳುಗೊಂಡನು ಮರೆದು ಕಳೆದನು ರಾಜವೈಭವವ
ಬರಿಯ ಪಾರ್ಥಿವತೇಜದಲಿ ಗೋ
ಚರಿಸದಿರೆ ತತ್ಸತಿ ವಿವಾಹೋ
ತ್ಕರುಷವಾಯ್ತು ವಸಿಷ್ಠನಮಲ ಬ್ರಹ್ಮತೇಜದಲಿ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸಾ, ನಿಮ್ಮಲ್ಲಿ ಪೂರ್ವದಲ್ಲಿ ಸಂವರಣನೆಂಬುವನು ಸೂರ್ಯನ ಮಗಳಿಗೆ ಮೋಹಗೊಂಡನು. ರಾಜವೈಭವವನ್ನು ಮರೆತು ಬಿಟ್ಟನು. ಬರಿಯ ಕ್ಷಾತ್ರ ತೇಜಸ್ಸಿಗೆ ಆಕೆ ಕಾಣಿಸಿಕೊಳ್ಳಲಿಲ್ಲ. ಆಗ ವಸಿಷ್ಠನ ನಿರ್ಮಲ ಬ್ರಹ್ಮ ತೇಜಸ್ಸಿನ ಮಹಿಮೆಯಿಂದ ಆ ಮೆಚ್ಚಿದ ಸತಿಯೊಂದಿಗೆ ವಿವಾಹವಾಗಿ ಏಳಿಗೆಯಾಯಿತು.
ಪದಾರ್ಥ (ಕ.ಗ.ಪ)
ತನುಜೆ-ಮಗಳು, ಮರುಳು-ಮೋಹ, ಪಾರ್ಥಿವ-ಕ್ಷತ್ರಿಯ, ಉತ್ಕರ್ಷ-ಏಳಿಗೆ
ಟಿಪ್ಪನೀ (ಕ.ಗ.ಪ)
ಸಂವರಣ-ಪುರುವಂಶದ ಅಜಮೀಢನ ಸಂತತಿಯವನಾದ ಋಕ್ಷರಾಜನ ಮಗ, ಸೂರ್ಯಪುತ್ರಿಯಾದ ತಪತಿಯನ್ನು ಮದುವೆಯಾಗಿ ಕುರುರಾಜನನ್ನು ಪಡೆದ.
ತಪತಿ-ಸೂರ್ಯನಿಂದ ಛಾಯಾದೇವಿಯಲ್ಲಿ ಜನಿಸಿದವಳು, ಶನೈಶ್ಚರನೂ, ಸಾವರ್ಣಿಯೂ ಈಕೆಯ ಒಡಹುಟ್ಟಿದವರು.
ಮೂಲ ...{Loading}...
ಅರಸ ನಿಮ್ಮೊಳು ಪೂರ್ವದಲಿ ಸಂ
ವರಣನೆಂಬನು ಸೂರ್ಯತನುಜೆಗೆ
ಮರುಳುಗೊಂಡನು ಮರೆದು ಕಳೆದನು ರಾಜವೈಭವವ
ಬರಿಯ ಪಾರ್ಥಿವತೇಜದಲಿ ಗೋ
ಚರಿಸದಿರೆ ತತ್ಸತಿ ವಿವಾಹೋ
ತ್ಕರುಷವಾಯ್ತು ವಸಿಷ್ಠನಮಲ ಬ್ರಹ್ಮತೇಜದಲಿ ॥42॥
೦೪೩ ಆ ವಸಿಷ್ಠನ ...{Loading}...
ಆ ವಸಿಷ್ಠನ ಕೌಶಿಕನ ಯು
ದ್ಧಾವಲಂಬನವೇನನೆಂಬೆನು
ದೇವಕುಲವಂಜುವುದು ವಿಶ್ವಾಮಿತ್ರನುಬ್ಬಟೆಗೆ
ಆ ವಿವಿಧ ಮಂತ್ರಾಸ್ತ್ರವನು ಶತ
ಸಾವಿರವನಾ ಬ್ರಹ್ಮದಂಡದ
ಢಾವರದಲೇ ಗೆಲಿದನೊಬ್ಬ ವಸಿಷ್ಠಮುನಿಯೆಂದ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ವಸಿಷ್ಠ ವಿಶ್ವಾಮಿತ್ರರ ಯುದ್ಧದ ಕಥನವನ್ನು ಏನೆಂದು ಹೇಳೋಣ ! ವಿಶ್ವಾಮಿತ್ರನ ಪರಾಕ್ರಮಕ್ಕೆ ದೇವಕುಲವೇ ಹೆದರುವುದು. ಅವನ ನೂರು ಸಾವಿರ ಮಂತ್ರಾಸ್ತ್ರಗಳನ್ನು ಒಬ್ಬ ವಸಿಷ್ಠ ಮುನಿ ಬ್ರಹ್ಮದಂಡದ ತೀವ್ರತೆಯಲ್ಲಿ ಗೆದ್ದನು.
ಪದಾರ್ಥ (ಕ.ಗ.ಪ)
ಅವಲಂಬನ-ಕಥನ , ಉಬ್ಬಟೆ-ಪರಾಕ್ರಮ, ಢಾವರ-ತೀವ್ರತೆ, ಕೌಶಿಕ-ವಿಶ್ವಾಮಿತ್ರ (ಕುಶಿಕವಂಶದವನು)
ಮೂಲ ...{Loading}...
ಆ ವಸಿಷ್ಠನ ಕೌಶಿಕನ ಯು
ದ್ಧಾವಲಂಬನವೇನನೆಂಬೆನು
ದೇವಕುಲವಂಜುವುದು ವಿಶ್ವಾಮಿತ್ರನುಬ್ಬಟೆಗೆ
ಆ ವಿವಿಧ ಮಂತ್ರಾಸ್ತ್ರವನು ಶತ
ಸಾವಿರವನಾ ಬ್ರಹ್ಮದಂಡದ
ಢಾವರದಲೇ ಗೆಲಿದನೊಬ್ಬ ವಸಿಷ್ಠಮುನಿಯೆಂದ ॥43॥
೦೪೪ ಒದಗಲಾರದೆ ತನ್ನ ...{Loading}...
ಒದಗಲಾರದೆ ತನ್ನ ಸುಕ್ಷ
ತ್ರದ ಮಹತ್ವವ ಬಿಸುಟು ಸುಬ್ರಾ
ಹ್ಮದಲಿ ಹೊಕ್ಕನು ವಿಗಡ ವಿಶ್ವಾಮಿತ್ರಮುನಿಯಂದು
ಅದರಿನಿಂದೀ ಕ್ಷತ್ರತೇಜದೊ
ಳುದಿತ ವಿಮಲಬ್ರಹ್ಮವನು ಕೂ
ಡಿದೊಡೆ ಕೌತುಕವೆಂದನಾ ಗಂಧರ್ವನರ್ಜುನಗೆ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ವಿಶ್ವಾಮಿತ್ರ ತನ್ನ ಒಳ್ಳೆಯ ಕ್ಷಾತ್ರದ ಮಹತ್ವವನ್ನು ಬಿಟ್ಟು ಪರಬ್ರಹ್ಮ ವಿಷಯಕವಾದುದರಲ್ಲಿ ಪ್ರವೇಶಿಸಿ ಶ್ರೇಷ್ಠ ವಿಶ್ವಾಮಿತ್ರ ಮುನಿಯಾದನು. ಆದ್ದರಿಂದ ಈ ಕ್ಷಾತ್ರ ತೇಜಸ್ಸಿನಲ್ಲಿ ಹುಟ್ಟಿದ ಪವಿತ್ರ ಬ್ರಹ್ಮ ತೇಜಸ್ಸು ನಿಮ್ಮನ್ನು ಕೂಡಿಕೊಂಡರೆ ಸಂತೋಷವಾಗುತ್ತದೆ ಎಂದು ಗಂಧರ್ವನು ಅರ್ಜುನನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ವಿಗಡ-ಶ್ರೇಷ್ಠ, ಬ್ರಾಹ್ಮ-ಪರಬ್ರಹ್ಮ ವಿಷಯಕವಾದದು, ಕೌತುಕ-ಸಂತೋಷ
ಮೂಲ ...{Loading}...
ಒದಗಲಾರದೆ ತನ್ನ ಸುಕ್ಷ
ತ್ರದ ಮಹತ್ವವ ಬಿಸುಟು ಸುಬ್ರಾ
ಹ್ಮದಲಿ ಹೊಕ್ಕನು ವಿಗಡ ವಿಶ್ವಾಮಿತ್ರಮುನಿಯಂದು
ಅದರಿನಿಂದೀ ಕ್ಷತ್ರತೇಜದೊ
ಳುದಿತ ವಿಮಲಬ್ರಹ್ಮವನು ಕೂ
ಡಿದೊಡೆ ಕೌತುಕವೆಂದನಾ ಗಂಧರ್ವನರ್ಜುನಗೆ ॥44॥
೦೪೫ ಇಲ್ಲಿಗಿದೆ ನಾಲ್ಕೈದು ...{Loading}...
ಇಲ್ಲಿಗಿದೆ ನಾಲ್ಕೈದು ಯೋಜನ
ದಲ್ಲಿ ಧೌಮ್ಯಾಶ್ರಮ ವಸಿಷ್ಠಂ
ಗಲ್ಲಿ ಸನ್ನಿಧಿಯಾ ವಸಿಷ್ಠಂಗಾತನನುಜಾತ
ಅಲ್ಲಿ ಪೌರೋಹಿತ್ಯವನು ನಿಮ
ಗೊಲ್ಲೆನೆನ್ನದೆ ಮುನಿಪ ಮಾಡಿದ
ಡೆಲ್ಲ ಲೇಸಹುದೆಂದು ಕಳುಹಿದನಿವರನಾ ಖಚರ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಲ್ಲಿಗೆ ನಾಲ್ಕೈದು ಯೋಜನೆಗಳ ದೂರದಲ್ಲಿ ಧೌಮ್ಯರ ಆಶ್ರಮವಿದೆ. ವಸಿಷ್ಠನಿಗೆ ಅಲ್ಲಿ ಸಾನ್ನಿಧ್ಯವುಂಟು. ಧೌಮ್ಯನು ವಸಿಷ್ಠನಿಗೆ ತಮ್ಮನಾಗಬೇಕು. ಆ ಧೌಮ್ಯಮುನಿ ನಿಮಗೆ ಪುರೋಹಿತ ಕೆಲಸವನ್ನು ಒಲ್ಲೆನೆನ್ನದೆ ಮಾಡಿದರೆ ಎಲ್ಲ ಒಳ್ಳೆಯಾಗುವುದೆಂದು ಹೇಳಿ ಆ ಗಂಧರ್ವನು ಪಾಂಡವರನ್ನು ಕಳುಹಿಸಿಕೊಟ್ಟನು.
ಪದಾರ್ಥ (ಕ.ಗ.ಪ)
ಅನುಜಾತ-ತಮ್ಮ, ಪೌರೋಹಿತ್ಯ-ಪುರೋಹಿತ ಕೆಲಸ, ಖಚರ-ಗಂಧರ್ವ
ಮೂಲ ...{Loading}...
ಇಲ್ಲಿಗಿದೆ ನಾಲ್ಕೈದು ಯೋಜನ
ದಲ್ಲಿ ಧೌಮ್ಯಾಶ್ರಮ ವಸಿಷ್ಠಂ
ಗಲ್ಲಿ ಸನ್ನಿಧಿಯಾ ವಸಿಷ್ಠಂಗಾತನನುಜಾತ
ಅಲ್ಲಿ ಪೌರೋಹಿತ್ಯವನು ನಿಮ
ಗೊಲ್ಲೆನೆನ್ನದೆ ಮುನಿಪ ಮಾಡಿದ
ಡೆಲ್ಲ ಲೇಸಹುದೆಂದು ಕಳುಹಿದನಿವರನಾ ಖಚರ ॥45॥
೦೪೬ ಗಮಿಸಿದರು ಬಳಿಕವರು ...{Loading}...
ಗಮಿಸಿದರು ಬಳಿಕವರು ಧೌಮ್ಯಾ
ಶ್ರಮಕೆ ಬಂದರು ಮುನಿಪನಘ್ರ್ಯಾ
ದ್ಯಮಲ ಸತ್ಕಾರೋಚಿತವ ಕೈಕೊಂಡು ವಿನಯದಲಿ
ಎಮಗೆ ಪೌರೋಹಿತ್ಯದಲಿ ಸಂ
ಕ್ರಮಿಸಬೇಕೆಂದೊಡಬಡಿಸಿ ಭೂ
ರಮಣರಲ್ಲಿಂದೈದಿದರು ಪಾಂಚಾಲಪಟ್ಟಣವ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಂತರ ಪಾಂಡವರು ಹೊರಟರು. ಧೌಮ್ಯರ ಆಶ್ರಮಕ್ಕೆ ಬಂದರು. ಆ ಮುನಿ ಮಾಡಿದ ಅಘ್ರ್ಯಾದಿ ಉಚಿತವಾದ ಮರ್ಯಾದೆಯನ್ನು ಕೈಗೊಂಡು ವಿನಯದಿಂದ ಕೈಕೊಂಡರು. “ನಮ್ಮನ್ನು ನೀವು ನೀವು ಪೌರೋಹಿತರೊಡನೆ ಸೇರಿಸಬೇಕು” ಎಂದು ಅವರನ್ನು ಒಪ್ಪಿಸಿ ಅಲ್ಲಿಂದ ಈ ಭೂರಮಣರು ಹೊರಟು ಪಾಂಚಾಲ ಪಟ್ಟಣವನ್ನು ಸೇರಿದರು.
ಪದಾರ್ಥ (ಕ.ಗ.ಪ)
ಸಂಕ್ರಮಿಸು-ಸೇರಿಸು
ಒಡಂಬಡು-ಒಪ್ಪು
ಟಿಪ್ಪನೀ (ಕ.ಗ.ಪ)
ಧೌಮ್ಯ-ಉತ್ಕೋಚಕ ತೀರ್ಥದಲ್ಲಿ ತಪಸ್ಸು ಮಾಡುವ ಒಬ್ಬ ಮಹರ್ಷಿ. ದೇವಲ ಮಹರ್ಷಿಯ ಒಡಹುಟ್ಟಿದವ. ಪ್ರತ್ಯೂಷನಮಗ. ಈತನೇ ಪಾಂಡವರ ಪುರೋಹಿತ. ಗಂಧರ್ವ ಅಂಗಾರವರ್ಮನ ಸೂಚನೆಯ ಪ್ರಕಾರ ಪಾಂಡವರು ಇವನನ್ನು ತಮ್ಮ ಪುರೋಹಿತನನ್ನಾಗಿ ಸ್ವೀಕರಿಸಿದರು. ವಸಿಷ್ಠ-ಬ್ರಹ್ಮ ಮಾನಸ ಪುತ್ರ. ಅರುಂಧತೀ ದೇವಿಯ ಪತಿ, ಇಂದ್ರಿಯಗಳನ್ನು ವಶಪಡಿಸಿಕೊಂಡ ಕಾರಣ ‘ವಶಿಷ್ಠ’ನೆಂದು ಕರೆಯಲ್ಪಡುತ್ತಾನೆ. ರಾಜಾ ಸಂವರಣನು ಸೂರ್ಯ ಕನ್ಯೆ ತಪತಿಗೆ ಮೋಹಗೊಂಡಿರುವುದನ್ನು ತಿಳಿದು ಊಧ್ರ್ವ ಲೋಕಕ್ಕೆ ಹೋದುದು. ಇವನಿಂದ ಸೂರ್ಯನ ಸ್ತುತಿ. ಸಂವರಣನಿಗೋಸ್ಕರ ತಪತಿಯನ್ನು ಸ್ವೀಕರಿಸಿ, ಕರೆದುಕೊಂಡು ಬಂದು ರಾಜನೊಂದಿಗೆ ವಿವಾಹವಾಗುವಂತೆ ಏರ್ಪಡಿಸಿದುದು.
ವಿಶ್ವಾಮಿತ್ರ-ಮಹಾರಾಜ ಗಾಧಿಯ ಪುತ್ರ, ಕುಶಿಕ ವಂಶದವನಾದ್ದರಿಂದ ಕೌಶಿಕನೆಂದೂ ಹೆಸರು. ವಸಿಷ್ಠರ ಆಶ್ರಮದಲ್ಲಿದ್ದ ನಂದಿನಿ ಧೇನುವನ್ನು ಅಪೇಕ್ಷಿಸಿ ಯಾಚಿಸಿದ್ದು, ತಿರಸ್ಕೃತನಾಗಿ ನಂದಿನಿ ಧೇನುವಿನ ಅಪಹರಣಕ್ಕೆ ಪ್ರಯತ್ನ. ಆ ಕಾರಣ ವಸಿಷ್ಠ ವಿಶ್ವಾಮಿತ್ರರ ಯುದ್ಧ ಉಂಟಾದದ್ದು. ವಸಿಷ್ಠರ ಮೇಲೆ ವಿವಿಧ ಅಸ್ತ್ರಗಳ ಪ್ರಹಾರ ಮಾಡಿದ್ದು, ವಸಿಷ್ಠನ ಬ್ರಹ್ಮ ತೇಜಸ್ಸಿನಿಂದ ಪರಾಜಿತನಾಗಿ ಇವನು ಕ್ಷತ್ರ್ರ ಬಲವನ್ನು ಧಿಕ್ಕರಿಸಿದುದು. ಉಗ್ರ ತಪಸ್ಸಿನ ಬಲದಿಂದ ಇವನಿಗೆ ಬ್ರಾಹ್ಮಣತ್ವ ಲಭಿಸಿದುದು.
ಮೂಲ ...{Loading}...
ಗಮಿಸಿದರು ಬಳಿಕವರು ಧೌಮ್ಯಾ
ಶ್ರಮಕೆ ಬಂದರು ಮುನಿಪನಘ್ರ್ಯಾ
ದ್ಯಮಲ ಸತ್ಕಾರೋಚಿತವ ಕೈಕೊಂಡು ವಿನಯದಲಿ
ಎಮಗೆ ಪೌರೋಹಿತ್ಯದಲಿ ಸಂ
ಕ್ರಮಿಸಬೇಕೆಂದೊಡಬಡಿಸಿ ಭೂ
ರಮಣರಲ್ಲಿಂದೈದಿದರು ಪಾಂಚಾಲಪಟ್ಟಣವ ॥46॥