೧೦

೦೦೦ ಸೂ ವಿಕಟ ...{Loading}...

ಸೂ. ವಿಕಟ ಭುಜಬಲರೇಕಚಕ್ರದೊ
ಳಕುಟಿಲರು ಭೂಸುರರ ರಕ್ಷಿಸಿ
ಬಕನ ಮುರಿದರು ಮೆರೆದರಮಲ ಗುಣಾಗ್ರಹಾರದಲಿ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಮಹೀಪತಿ
ಶಾಲಿಹೋತ್ರಾಶ್ರಮವನನಿಬರು
ಬೀಳುಕೊಂಡರು ಮತ್ತೆ ಕಂಡರು ಬಾದರಾಯಣನ
ಹೇಳಿದನು ನಿಮಗೇಕಚಕ್ರ ವಿ
ಶಾಲಪುರದೊಳಗಾರು ತಿಂಗಳು
ಕಾಲ ಸವೆಯಲಿ ಬಳಿಕ ಬಳಸುವಿರುತ್ತರೋತ್ತರವ ॥1॥

೦೦೨ ಎನ್ದು ಮುನಿ ...{Loading}...

ಎಂದು ಮುನಿ ತಿರುಗಿದನು ಕುಂತೀ
ನಂದನರು ಸುಕ್ಷಾತ್ರ ತೇಜೋ
ವೃಂದವನು ಮುಸುಕಿದರು ವಿಮಲ ಬ್ರಹ್ಮ ರಶ್ಮಿಯಲಿ
ಅಂದವೇರಿದ ಗಡ್ಡ ದರ್ಭೆಗ
ಳಿಂದ ನೆರಿಯುಡಿಗೆಗಳ ನಾಟಕ
ದಿಂದ ಮಟ್ಟಿಯ ಧಟ್ಟು ನೊಸಲಲಿ ದೇಶಿ ಪರಿ ಮೆರೆಯೆ ॥2॥

೦೦೩ ಅವನಿಪತಿ ಕೇಳೇಕಚಕ್ರವ ...{Loading}...

ಅವನಿಪತಿ ಕೇಳೇಕಚಕ್ರವ
ನಿವರು ಹೊಕ್ಕರು ವಿಪ್ರನೊಬ್ಬನ
ಭವನದಲಿ ಮಾಡಿದರು ಬೀಡಾರವನು ವಿನಯದಲಿ
ಇವರು ಯಾಚಕ ವಿಷಯದಾತಿ
ಥ್ಯವನು ಕೈಕೊಂಡಲ್ಲಿ ಕತಿಪಯ
ದಿವಸವನು ನೂಕಿದರು ಭಿಕ್ಷಾ ವಿಹಿತ ವೃತ್ತಿಯಲಿ ॥3॥

೦೦೪ ತನ್ದ ಭಿಕ್ಷಾಶನವನೈವರು ...{Loading}...

ತಂದ ಭಿಕ್ಷಾಶನವನೈವರು
ನಂದನರು ತಾಯಿಗೆ ನಿವೇದಿಸ
ಲಿಂದುಮುಖಿ ಭಾಗದ್ವಯವ ಸಾನಂದದಲಿ ಮಾಡಿ
ಒಂದು ಭಾಗ ವೃಕೋದರಂಗುಳಿ
ದೊಂದು ಭಾಗವ ತಾನು ನಾಲ್ವರು
ನಂದನರು ವಿನಿಯೋಗಿಸುವರವನೀಶ ಕೇಳ್ ಎಂದ ॥4॥

೦೦೫ ಸಿರಿಯ ಹೇಳ್ವರೆ ...{Loading}...

ಸಿರಿಯ ಹೇಳ್ವರೆ ಹಸ್ತಿನಾಪುರ
ದರಸುಗಳ ಸಂತಾನ ಶೌರ್ಯದ
ಪರಿಯ ನೋಳ್ಪರೆ ಶಕ್ರ ಸೂರ್ಯರ ತೇಜಕುರೆ ಮಿಗಿಲು
ತಿರಿದ ಕೂಳನು ತಾಯಿ ಹಸುಗೆಯ
ಲೆರಡು ಭಾಗವ ಮಾಡಿ ಮಕ್ಕಳ
ಹೊರೆದಳಿನ್ನುಳಿದವರ ಪಾಡೇನರಸ ಕೇಳ್ ಎಂದ ॥5॥

೦೦೬ ಉದಯವಾಗದ ಮುನ್ನ ...{Loading}...

ಉದಯವಾಗದ ಮುನ್ನ ಸುಬ್ರಾ
ಹ್ಮ್ಯದ ಮುಹೂರ್ತದಲೆದ್ದು ಜನನಿಯ
ಪದಯುಗಕ್ಕಭಿನಮಿಸಿ ಸಂಧ್ಯಾಮಠಕೆ ನಡೆತಂದು
ವಿದಿತ ಸಂಧ್ಯೋಪಾಸ್ಥೆ ಜಪ ನಿಯ
ಮದ ಪುರಾಣಶ್ರವಣ ಮಧ್ಯಾ
ಹ್ನದಲಿ ಭಿಕ್ಷಾಟನಗಳಿವರಿಗೆ ನಿತ್ಯ ವಿಧಿಯೆಂದ ॥6॥

೦೦೭ ಭೋಜನೋತ್ತರ ವೇಳೆಯಲಿ ...{Loading}...

ಭೋಜನೋತ್ತರ ವೇಳೆಯಲಿ ನೃಪ
ರಾಜವಾರ್ತಾ ಕಥನದಿಂದ ಮ
ಹಾಜನಂಗಳೊಳಾಡುತಿರ್ದರು ನಿಜವಿನೋದದಲಿ
ರಾಜತನವನು ಮರೆದರಾ ದ್ವಿಜ
ರಾಜತೇಜದಿ ಮೆರೆದರಾ ನರ
ರಾಜರಾಜರ ನೀತಿಯಿದು ಭೂಪಾಲ ಕೇಳ್ ಎಂದ ॥7॥

೦೦೮ ಇರಲಿರಲು ಮಾಸಾನ್ತರದಲಾ ...{Loading}...

ಇರಲಿರಲು ಮಾಸಾಂತರದಲಾ
ನೆರೆಮನೆಯ ಶೋಕಾರ್ತರವದ
ಬ್ಬರವ ಕೇಳಿದು ಕುಂತಿ ಸಾಯಂಕಾಲ ಸಮಯದಲಿ
ಭರದಿನೈತಂದಕಟ ಭೂಸುರ
ವರ ನಿರೋಧವಿದೇನು ದುಃಖೋ
ತ್ಕರುಷವಾಕಸ್ಮಿಕವದೆಂದಳು ಕುಂತಿ ವಿನಯದಲಿ ॥8॥

೦೦೯ ನಾಳೆ ವೈವಾಹೋತ್ಸವದ ...{Loading}...

ನಾಳೆ ವೈವಾಹೋತ್ಸವದ ದೆ
ಖ್ಖಾಳವಿದು ಮೊದಲೀ ವಸಂತದ
ಬಾಲಿಕೆಯರೋಕುಳಿಯ ಮಳೆಯಲಿ ಸಿಡಿಲು ಸುಳಿದುದೆನೆ
ಹೇಳಿರೇ ನಿಮಗಾದವಸ್ಥೆಯ
ಕೇಳಲಾಗದೆಯೆನಲು ದ್ವಿಜನಿದ
ಕೇಳಿ ಫಲವೇನವ್ವಯೆಂದನು ಸುಯ್ದು ದುಗುಡದಲಿ ॥9॥

೦೧೦ ಹೇಳ ಬೇಹುದು ...{Loading}...

ಹೇಳ ಬೇಹುದು ತನ್ನನಿಷ್ಟವ
ನಾಳಿಗೊಳ್ಳದ ಸುಜನ ನಿಕರಕೆ
ಕೇಳ ಬೇಹುದು ದೀನರಹ ವಿಪ್ರೇಂದ್ರರುಪಹತಿಯ
ಹೇಳು ನೀನೆಲೆ ವಿಪ್ರ ತಾನಿದ
ಕೇಳಿ ದುಃಖಿತಯಾಗಲಾಗದೆ
ಹೇಳ್ “ನ ದುಃಖಂ ಪಂಚಭಿಸ್ಸಹ” ವೆನ್ನದೇ ವಚನ ॥10॥

೦೧೧ ತಾಯೆ ಕೇಳೀ ...{Loading}...

ತಾಯೆ ಕೇಳೀ ವಿಪ್ರಪುರದೊಳ
ಗಾಯವುಂಟೆನಗೆಂದು ರಕ್ಕಸ
ನಾಯಿ ನೆಲಸಿಹನೂರ ಹೊರಗಣ ಶೈಲಶಿಖರದಲಿ
ಆಯಿದೊಬ್ಬನ ಮನೆಮನೆಗೆ ಮೇ
ಲಾಯಿ ಮಹಿಷದ್ವಯ ಸಹಿತ ನಿ
ರ್ದಾಯದಲಿ ಹನ್ನೆರಡು ಕಂಡುಗದಕ್ಕಿಯೋಗರವ ॥11॥

೦೧೨ ಇನಿತುವನು ಮನೆಮನೆಗೆ ...{Loading}...

ಇನಿತುವನು ಮನೆಮನೆಗೆ ಬಾರಿಯ
ದಿನಕೆ ತೆತ್ತಡೆ ತುಷ್ಟನಿಲ್ಲದ
ದಿನಕೆ ನುಂಗುವನೂರನೀ ಪರಿ ಹಲವು ಕಾಲದಲಿ
ಎನಗೆ ಬಂದುದು ತಾಯೆ ನಾಳಿನ
ದಿನದ ಬಾರಿಯಿದಕ್ಕೆ ತನ್ನಯ
ತನುಜ ತಾನುಳಿದಂತೆ ಮಾನಿಸರಿಲ್ಲ ತನಗೆಂದ ॥12॥

೦೧೩ ಮಗನನೀವೆನೆ ಪಾರಲೌಕಿಕ ...{Loading}...

ಮಗನನೀವೆನೆ ಪಾರಲೌಕಿಕ
ವಗಡಹುದಪಖ್ಯಾತಿ ತನ್ನನು
ತಗುಹುದೈಹಿಕದಲ್ಲಿ ಬಳಿಕೀ ಸಂತತಿಚ್ಛೇದ
ಬಗೆಯದೆನ್ನೊಡಲಸುರ ಘಾತಿಗೆ
ಮಿಗೆ ವಿಭಾಡಿಸಿ ಕೊಡುವೆನೆಂದೆನೆ
ನಗುತ ಕುಂತೀದೇವಿ ನುಡಿದಳು ವಿಪ್ರ ಕೇಳ್ ಎಂದು ॥13॥

೦೧೪ ಐಸಲೇ ನಿಮಗಾದ ...{Loading}...

ಐಸಲೇ ನಿಮಗಾದ ಗಸಣಿಯಿ
ದೇಸರಾಪತ್ತಂಜಬೇಡ ಮ
ಹಾಸುರನ ಬಾಣಸದ ಬೀಯಕೆ ರಪಣವುಂಟೆಮಗೆ
ಏಸು ಕಂಡುಗದಕ್ಕಿಯೋಗರ
ವೈಸ ನೀನಳವಡಿಸು ಮೇಲುಂ
ಟೇಸು ಸಾಧನವನಿತುವನು ತೆಗೆಸೆಂದಳಾ ಕುಂತಿ ॥14॥

೦೧೫ ತಿರುಗಿ ನಿಮ್ಮೂರೊಳಗೆ ...{Loading}...

ತಿರುಗಿ ನಿಮ್ಮೂರೊಳಗೆ ಕೂಳನು
ತಿರಿದು ಸಲಹುವೆನೆನ್ನ ಮಕ್ಕಳು
ಧರೆಯನಾಳುವ ಸತ್ಯ ಸಹಸಿಗಳಿದ್ದು ಫಲವೇನು
ಹೊರೆಯಲರಿಯೆನು ದುರುಳನೆರಡೆಂ
ಟರಿಯನದರೊಳಗೊಬ್ಬನುದರಕೆ
ನೆರಹಲಾರೆನು ಕೂಳನೆಂದಳು ಕುಂತಿ ನಸುನಗುತ ॥15॥

೦೧೬ ಸಾಕಲಾರೆನು ಮಗನನಾತನ ...{Loading}...

ಸಾಕಲಾರೆನು ಮಗನನಾತನ
ನೂಕುವೆನು ನಿಮ್ಮಸುರನೂಟಕೆ
ಸಾಕು ತನಗುಳಿದವರೆನಲು ದ್ವಿಜನದಕೆ ಬೆರಗಾಗಿ
ಸಾಕಲಾರದೆ ಮಗನನುರಿಯಲಿ
ನೂಕಿದವರುಂಟೇ ಮಹಾಸತಿ
ಯಾಕೆವಾಳತನಕ್ಕೆ ನಮಿಸಿದೆನೆನುತ ಕೈಮುಗಿದ ॥16॥

೦೧೭ ಮರುಳಲಾ ಬ್ರಾಹ್ಮಣ ...{Loading}...

ಮರುಳಲಾ ಬ್ರಾಹ್ಮಣ ವೃಥಾ ವಿ
ಸ್ತರಣ ವಾಕ್ಯವೆ ತನ್ನ ನುಡಿ ಸಂ
ವರಿಸು ಬಂಡಿಯ ನಡೆಸು ಭಕ್ಷ್ಯವ ಸೂಪದಂಶಕವ
ತರಿಸು ತುಪ್ಪದ ಕೊಡನನೊದವಿಸು
ಹರವಿಗಳ ಪಾಲ್ಮೊಸರನೆನೆ ಭೂ
ಸುರನು ಕುಂತಿಗೆ ಕೈಯ್ಯ ಮುಗಿದನು ತಾಯೆ ಬೇಡೆನುತ ॥17॥

೦೧೮ ಎರವು ಮುಯಿಮುಟ್ಟುಣ್ಟು ...{Loading}...

ಎರವು ಮುಯಿಮುಟ್ಟುಂಟು ವಸ್ತೂ
ತ್ಕರದೊಳಗೆ ಭಾವಿಸಲು ಮಕ್ಕಳ
ನೆರೆವ ಕೊಟ್ಟವರುಂಟೆ ಮಾರಿಯ ನಾಲಿಗೆಯ ಸವಿಗೆ
ನೆರವಿ ನಗದೇ ನಮ್ಮನಿಹಪರ
ವೆರಡರಲಿ ಕೇಡಹುದು ಕಷ್ಟವು
ಗರುವೆಯಹುದೌ ತಾಯಿ ನೀ ದಿಟ ಮನುಜೆಯಲ್ಲೆಂದ ॥18॥

೦೧೯ ಏನನಿತ್ತು ದಧೀಚಿ ...{Loading}...

ಏನನಿತ್ತು ದಧೀಚಿ ಲೋಗರ
ಹಾನಿಯನು ಕಾಯಿದನು ಶಿಬಿ ತಾ
ನೇನನಿತ್ತನು ಕೇಳಿದೈ ಜೀಮೂತವಾಹನನು
ಏನ ಮಾಡಿದನೆಂದು ನೀನಿದ
ನೇನುವನು ಕೇಳ್ದರಿಯಲಾ ಮ
ತ್ಸೂನುವನು ನಿನ್ನವಸರಕೆ ಕೊಳ್ಳೆಂದಳಾ ಕುಂತಿ ॥19॥

೦೨೦ ಆವನರ್ಥ ಪರಾರ್ಥದಲಿ ...{Loading}...

ಆವನರ್ಥ ಪರಾರ್ಥದಲಿ ಸಂ
ಜೀವನಿಯನೈದಿತು ಪರಾರ್ಥದೊ
ಳಾವನಸು ನಿರ್ವಾಣಮಾದುದು ಲೋಕ ಮೂರರಲಿ
ಆ ವಿರಿಂಚಿ ಪುರಂದರಾದಿಯ
ದೇವತತಿಗಿವರಿಬ್ಬರೇ ಸಂ
ಭಾವನೀಯರು ಕೇಳು ಭೂಸುರಯೆಂದಳಾ ಕುಂತಿ ॥20॥

೦೨೧ ಬಲುಹಿನಲಿ ಭೂಸುರನ ...{Loading}...

ಬಲುಹಿನಲಿ ಭೂಸುರನ ಚಿತ್ತವ
ತಿಳುಹಿ ಬಂದಳು ಮನೆಗೆ ಭೀಮನ
ಕೆಲಕೆ ಕರೆದಳು ಹೇಳಿದಳು ಹೇರಾಳದೌತಣವ
ಉಲಿದು ಮುದದಲಿ ಭೀಮ ಬಾಹ
ಪ್ಪಳಿಸಿದನು ಯಮನಂದನಾದಿಗ
ಳಳಲಿ ನುಡಿದರು ದೈತ್ಯಜಯ ಸಂಶಯದ ಭೇದದಲಿ ॥21॥

೦೨೨ ಮರುಳುಗಳು ನೀವೆನ್ದವರ ...{Loading}...

ಮರುಳುಗಳು ನೀವೆಂದವರ ಚ
ಪ್ಪರಿಸಿದನು ಕಲಿಭೀಮನಾ ನಡು
ವಿರುಳು ತೊಡಗಿತು ವಿಪ್ರ ಭವನದ ಪಾಕಮಯ ರಭಸ
ಹೊರೆದಳೆನ್ನನು ತಾಯಿ ಕುಂತಿಯ
ಹರಸುವೆನು ಪಾರಣೆಯ ಹೊತ್ತಿನೊ
ಳರಸು ನಾಳಿನೊಳಾನೆನುತ ಹಿಗ್ಗಿದನು ಕಲಿಭೀಮ ॥22॥

೦೨೩ ಪರಿಪರಿಯ ಬಹುಭಕ್ಷ್ಯ ...{Loading}...

ಪರಿಪರಿಯ ಬಹುಭಕ್ಷ್ಯ ಪಾಕದ
ಪರಿಮಳದ ಶಾಕಾದಿಗಳ ವೊ
ಗ್ಗರಣೆಗಳ ಸೌರಭಕೆ ತಿಳಿದುದು ನಿದ್ರೆ ಪವನಜನ
ತರಣಿ ಸುಳಿದನು ಪೂರ್ವ ಶೈಲದ
ಶಿರದ ಬಳಿಯಲಿ ಭೀಮ ಕುಂತಿಯ
ಕರೆದು ಕಳುಹಿದನಾ ಮಹೀಸುರಗೃಹಕೆ ವಹಿಲದಲಿ ॥23॥

೦೨೪ ಏನು ಬನ್ದಿರಿ ...{Loading}...

ಏನು ಬಂದಿರಿ ತಾಯೆ ಚಾಪಳ
ವೇನೆನಲು ತೆಗೆ ಹೂಡು ಬಂಡಿಯ
ನೇನು ಜಂಜಡ ಬೇಡ ಭಕ್ಷ್ಯವ ಹಿಡಿಸು ಕುನಿಕಿಲಲಿ
ಭಾನುವುದಿಸಿದನೆನಲು ಘನ ಸು
ಮ್ಮಾನದಲಿ ಸಾಧನಸಮಗ್ರವ
ಸೂನುಸಹಿತಡಕಿದನು ಭಾರಿಯ ಬಂಡಿ ಜವ ಜಡಿಯೆ ॥24॥

೦೨೫ ನಳನಳಿಪ ಬಹುವಿಧದ ...{Loading}...

ನಳನಳಿಪ ಬಹುವಿಧದ ಭಕ್ಷ್ಯಾ
ವಳಿಯ ಹೆಡಗೆಗಳೋರಣಿಸಿ ಮಂ
ಡಳಿಸಿ ಕೂಡಿದ ಹಾಲು ತುಪ್ಪದ ಹಲವು ಹರವಿಗಳ
ಬಳಸಿ ಮುಚ್ಚಿದ ವಿವಿಧ ಶಾಕಾ
ವಳಿಯ ಬೋನದ ಬಿಗಿದ ಕುನಿಕಿಲ
ಕಳವೆಯಕ್ಕಿಯ ಕೂಳ ರಾಶಿಯ ಬಂಡಿ ಜೋಡಿಸಿತು ॥25॥

೦೨೬ ಮರಳಿ ಬನ್ದಳು ...{Loading}...

ಮರಳಿ ಬಂದಳು ಕುಂತಿ ಭೀಮನ
ಕರೆದಳೇಳೈ ಪಾರಣೆಗೆ ಕಾ
ತರಿಸದಿರು ಖಳನೊಡನೆ ಸದೆವುದು ಸತ್ವದನುವರಿದು
ಬರವ ಬರಿದೇ ಬೀಯ ಮಾಡದಿ
ರುರುವಣೆಯನರಿದಾನುವುದು ಸಂ
ಹರಿಸು ದೈತ್ಯನನೆಂದು ತಾಯ್ ಹರಸಿದಳು ನಂದನನ ॥26॥

೦೨೭ ಬೆರಳ ದರ್ಭೆಯ ...{Loading}...

ಬೆರಳ ದರ್ಭೆಯ ಹರಿದು ಧೌತಾಂ
ಬರವನುಟ್ಟನು ಬಿಗಿದು ಕುಂತಿಯ
ಚರಣ ರಜವನು ಕೊಂಡು ಧರ್ಮಜನಂಘ್ರಿಗಭಿನಮಿಸಿ
ಹರುಷ ಮಿಗೆ ಹರಿತಂದು ಬಂಡಿಯ
ಶಿರದ ಹಲಗೆಯನಡರಿದನು ಬಲು
ಹುರಿಯ ಹಗ್ಗವ ಹಿಡಿದು ಜಡಿದನು ಹೂಡಿದೆತ್ತುಗಳ ॥27॥

೦೨೮ ಪುರದೊಳಗೆ ಭಿಕ್ಷಾನ್ನದಿನ್ದೈ ...{Loading}...

ಪುರದೊಳಗೆ ಭಿಕ್ಷಾನ್ನದಿಂದೈ
ವರು ಮಹಾಪಂಡಿತರು ನಿರ್ಧನ
ಪುರುಷರವರೊಳಗೊಬ್ಬನನು ನಮ್ಮೂರ ದಾನವನ
ಪರಿವಿಡಿಯ ಭೋಜನಕೆ ತದ್ಭೂ
ಸುರನ ತಾಯ್ಕೊಟ್ಟಳು ಗಡೇನ
ಚ್ಚರಿಯೆನುತ ಪವನಜನ ಮುತ್ತಿತು ನೋಟಕರ ನೆರವಿ ॥28॥

೦೨೯ ಪೌರ ಜನವೈತರಲು ...{Loading}...

ಪೌರ ಜನವೈತರಲು ಬಂಡಿಯ
ನೂರ ಹೊರವಂಡಿಸಿದನೆಲ್ಲರು
ದೂರದಲ್ಲಿರಿ ಸಾವವನೆ ತಾ ಸಾಕು ದೈತ್ಯನಲಿ
ಸಾರಿ ನೀವೆಂದೆನುತ ಹೂಡಿದ
ಹೋರಿಗಳ ಹೊಯ್ದುಬ್ಬರಿಸಿ ರಣ
ಧೀರ ಮಾರುತಿ ಮಿಕ್ಕು ಹರಿಸಿದನಸುರನಿದ್ದಡೆಗೆ ॥29॥

೦೩೦ ಎಡೆಯಲೇ ಭಕ್ಷ್ಯಾದಿಗಳ ...{Loading}...

ಎಡೆಯಲೇ ಭಕ್ಷ್ಯಾದಿಗಳ ಬರಿ
ಹೆಡಗೆಯುಳಿದವು ಕೂಳೊಳರ್ಧವ
ಹೊಡೆದು ಸುರಿದನು ಹಾಲುತುಪ್ಪದ ಹರವಿಯೋಜೆಯಲಿ
ಕುಡಿದು ಪಕ್ಕಲೆ ನೀರನೊಯ್ಯನೆ
ನಡೆಸಿ ತಂದನು ಕಂಡು ದನುಜನ
ನುಡಿದನೆಲವೋ ಕುನ್ನಿ ಕೂಳಿದೆ ತಿನ್ನು ಬಾರೆನುತ ॥30॥

೦೩೧ ಕಣ್ಡು ಖಳ ...{Loading}...

ಕಂಡು ಖಳ ಬೆರಗಾದನಿವನು
ದ್ದಂಡತನವಚ್ಚರಿಯಲಾ ಹರಿ
ಖಂಡಪರಶುಗಳಳುಕುವರು ತನ್ನೊಡನೆ ತೊಡಕುವರೆ
ಬಂಡಿ ತುಂಬಿದ ಕೂಳನಿವನಿಂ
ದುಂಡು ಬದುಕಲಿ ಊರ ಪಾರ್ವರ
ಹಿಂಡುವೆನುಯಿವ ಸಹಿತೆನುತ ಹಲು ಮೊರೆದನಮರಾರಿ ॥31॥

೦೩೨ ಮತ್ತೆ ಶೇಷಾನ್ನದಲಿ ...{Loading}...

ಮತ್ತೆ ಶೇಷಾನ್ನದಲಿ ತೋರುತ
ತುತ್ತುಗಳ ತೂಗುತ್ತ ಮಾರುತಿ
ಮೆತ್ತಿಕೊಂಡನು ಬಾಯೊಳವನನು ಬೆರಳಲೇಡಿಸುತ
ಇತ್ತಲೆನ್ನಯ ಹಸಿವು ಹೆಚ್ಚಿದೆ
ತುತ್ತು ಹೊಗದೊಳಗಿವನ ತೊಡಗಲ
ದೆತ್ತಲಕಟಾ ವಿಧಿಯೆನುತ ಮುರಿದೆದ್ದನಮರಾರಿ ॥32॥

೦೩೩ ಎರಡು ಕೈಯನು ...{Loading}...

ಎರಡು ಕೈಯನು ಬಲಿದು ಮುಷ್ಟಿಯೊ
ಳೆರಗಿದನು ಖಳ ಬೆನ್ನನೇನಂ
ದರಿಯನಿತ್ತಲು ಭೀಮ ಬಲುದುತ್ತುಗಳ ತೋಟಿಯಲಿ
ಮರನ ಮುರಿದೆರಗಿದರೆ ಪುನರಪಿ
ಮುರಿದು ನೋಡಿದು ಬಹೆನು ನಿಲ್ಲೆನು
ತರೆಗೆಲಸ ಪೂರೈಸಲೆಂದನು ನಗುತ ಕಲಿಭೀಮ ॥33॥

೦೩೪ ಅರಸ ಕೇಳೈ ...{Loading}...

ಅರಸ ಕೇಳೈ ನಿಮ್ಮ ಭೀಮನ
ಪರಿಯನಾ ಪರಿ ಬಂಡಿ ತುಂಬಿದ
ಸರಕನೆಲ್ಲವ ಸಂತವಿಟ್ಟನು ತನ್ನ ಜಠರದಲಿ
ವರ ಸಮಾಧಾನದಲಿ ಕೈದೊಳೆ
ದುರವಣಿಪ ತೇಗಿನ ತರಂಗದ
ಪರಬಲಾಂತಕನೆದ್ದು ನಿಂದನು ಸಿಂಹನಾದದಲಿ ॥34॥

೦೩೫ ಉಣ್ಡೆವೈ ಸಮಚಿತ್ತದಲಿ ...{Loading}...

ಉಂಡೆವೈ ಸಮಚಿತ್ತದಲಿ ನೀವ್
ಕೊಂಡಿರೈ ಘಾಯಗಳನೆಡೆಯಲಿ
ಹಿಂಡುವಿರಲೈ ನಾವು ಸಹಿತೀ ಊರ ಹಾರುವರ
ಉಂಡೆವೈ ಹಲ ಕಾಲಕಿಂದಿನ
ಲುಂಡದೂಟ ಕಣಾ ನಿಧಾನವು
ಖಂಡಪರಶುವಿನಾಣೆನುತ ಮದವೇರಿದನು ಭೀಮ ॥35॥

೦೩೬ ಖಾತಿಗೊಳ್ಳದ ಮುನ್ನ ...{Loading}...

ಖಾತಿಗೊಳ್ಳದ ಮುನ್ನ ಪವನಜ
ನೋತು ಕೊಟ್ಟನು ತನ್ನ ಹೊಯ್ಗಳ
ನಾತನೀತನು ಮುಳಿದು ಬಳಿಕಿವನೇನ ಮಾಡುವನೊ
ಈತನೆದ್ದನು ಗಜರಿ ಬಳಿಕಿನೊ
ಳಾತನಿದಿರಾದನು ಸುರಾರಿಯ
ವಾತಜನ ಹೋರಟೆಗೆ ಕೊರಳಳುಕಿದುದು ವಾಸುಕಿಯ ॥36॥

೦೩೭ ಹಿಡಿದರೊಬ್ಬರನೊಬ್ಬರುರದಲಿ ...{Loading}...

ಹಿಡಿದರೊಬ್ಬರನೊಬ್ಬರುರದಲಿ
ಹೊಡೆದು ಹಿಂಗಿದರುಲಿದು ಹೆಮ್ಮರ
ನುಡಿಯೆ ಹೊಯ್ದಾಡಿದರು ತಿವಿದರು ತೋಳು ಬಲುಹಿನಲಿ
ಕೊಡಹಿದನು ಕಲಿ ಭೀಮನವನು
ಗ್ಗಡದ ಸತ್ವದಿಯುಂಡ ಕೂಳಿನ
ಕಡುಹ ತೋರೆಂದೊರಲಿ ತುಡಿಕಿದನನಿಲ ನಂದನನ ॥37॥

೦೩೮ ಸಿಕ್ಕಿದನು ಕಲಿಭೀಮನೆನೆ ...{Loading}...

ಸಿಕ್ಕಿದನು ಕಲಿಭೀಮನೆನೆ ಕೈ
ಯಿಕ್ಕಿ ಕೊಟ್ಟನು ಮೈಯನಸುರನ
ಹೊಕ್ಕು ತಿವಿದನು ತಿರುಗಿ ಬದಿಯೆಲು ನುಗ್ಗು ನುಸಿಯಾಗೆ
ಬಿಕ್ಕುಳಿಯ ತಾಳಿಗೆಯ ಮೂಗಿನೊ
ಳೊಕ್ಕು ರುಧಿರದ ಧಾರೆ ಬಿಗಿದುರೆ
ಡೊಕ್ಕರಿಸಲಸು ನೀಗಿತಸುರನ ತನುವ ನಿಮಿಷದಲಿ ॥38॥

೦೩೯ ಕೊನ್ದು ದನುಜನ ...{Loading}...

ಕೊಂದು ದನುಜನ ಪೆಣನ ಬಂಡಿಯ
ಹಿಂದೆ ಬಂಧಿಸಿ ಪುರದ ಬಾಹೆಗೆ
ತಂದು ಬಿಟ್ಟನು ತನತನಗೆ ಜನಜಾಲ ಜೋಡಿಯಲಿ
ಬಂದು ಕಂಡುದು ಹೆಣನ ಭೂಸುರ
ರಿಂದು ಧನ್ಯರು ವಿಪ್ರಜಾತಿಗೆ
ಸಂದುದಿನ್ನಗ್ಗಳಿಕೆಯೆಂದುದು ನೆರದ ಪೌರಜನ ॥39॥

೦೪೦ ಈ ಅಮಾನುಷ ...{Loading}...

ಈ ಅಮಾನುಷ ಶಕ್ತಿಯಮರರ
ರಾಯಗಳವಲ್ಲೆಂದು ವಿಪ್ರ ನಿ
ಕಾಯಕಿದು ಸಾಮಾನ್ಯವೇ ನಮ್ಮಗ್ರಹಾರದಲಿ
ಕಾಯಿದವರಿವರೆಂದು ವಿಪುಲ
ಶ್ರೇಯ ಪದ್ಮಜ ಸೋಮಧರ ನಾ
ರಾಯಣರು ಕೊಡಲೆಂದು ಹರಸಿತು ಭೂಸುರ ವ್ರಾತ ॥40॥

+೧೦ ...{Loading}...