೦೯

೦೦೦ ಸೂ ಬೆಮ್ಬಿಡದೆ ...{Loading}...

ಸೂ. ಬೆಂಬಿಡದೆ ಕಲಿಭೀಮ ಹಿಡಿದು ಹಿ
ಡಿಂಬಕನ ಮುರಿದವನ ತಂಗಿ ಹಿ
ಡಿಂಬಿಯನು ಕೂಡಿದನು ಪಡೆದನು ಕಲಿ ಘಟೋತ್ಕಚನ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ಯಮನಂದನನ ಪಾರ್ಥನ
ಕಾಲೊಡೆದು ಬಸಿವರುಣ ಜಲದಲಿ ಬಟ್ಟೆ ಕೆಸರಾಯ್ತು
ಮೇಲೆ ಯಮಳರ ಕುಂತಿಯರನೇ
ವೇಳುವೆನು ಬೇಗದಲಿ ಕುರು ಭೂ
ಪಾಲ ಹಿಡಿಯಲಿ ಕೊಲಲೆನುತ ಕುಳ್ಳಿರ್ದರಡವಿಯಲಿ ॥1॥

೦೦೨ ಉರಿಯ ಮನೆಯಲಿ ...{Loading}...

ಉರಿಯ ಮನೆಯಲಿ ಸಾಯಲೀಯದೆ
ಸೆರಗ ಹಿಡಿದೆಳತಂದು ಕೊಯ್ದನು
ಕೊರಳನಕಟಾ ಭೀಮನೇ ಹಗೆಯೆಂದಳಾ ಕುಂತಿ
ಅರಸ ಹಿಡಿಯಲಿ ದಾನವರು ನಿಂ
ದಿರಿಕೆಯಲಿ ನುಂಗಲಿ ಕೃತಾರ್ಥರು
ಧರೆಯೊಳಾವೆಂದೊದರಿದರು ಮಾದ್ರೀಕುಮಾರಕರು ॥2॥

೦೦೩ ಸಾಕು ಸಾಕಾನಿರಲು ...{Loading}...

ಸಾಕು ಸಾಕಾನಿರಲು ಹೆಕ್ಕಳ
ವೇಕೆ ಹೋ ಹೋಯೆನುತ ಹೊತ್ತನು
ನೂಕಿ ಹೆಗಲೆರಡರಲಿ ಕುಂತಿಯ ಧರ್ಮನಂದನನ
ಆ ಕಿರೀಟಿಯನೆಡದಲಾ ಮಾ
ದ್ರೀ ಕುಮಾರರ ಬಲದ ಬದಿಯೊಳ
ಗೌಕಿ ನಡೆದನು ಭೀಮನೊಡೆಹಾಯ್ದೊದೆದು ಕಲು ಮರನ ॥3॥

೦೦೪ ಬನ್ದನೀ ಪರಿ ...{Loading}...

ಬಂದನೀ ಪರಿ ಹಲವು ಯೋಜನ
ದಿಂದ ಹೇರಡವಿಯಲಿ ಬಳಲಿದೆ
ನೆಂದನೇ ನೀರಡಿಸಿದನೆ ಮೇಣ್ ನಿದ್ರೆಗೆಳಸಿದನೆ
ತಂದು ಕಾನನ ಮಧ್ಯದಲಿ ತರು
ವೃಂದದಡಿಯೊಳಗಿಳುಹಿ ಬಳಿಕರ
ವಿಂದದೆಲೆಯಲಿ ನೀರ ತಂದೆರೆದನು ಮಹೀಶರಿಗೆ ॥4॥

೦೦೫ ತಳಿರ ತರಿದೊಟ್ಟಿದನು ...{Loading}...

ತಳಿರ ತರಿದೊಟ್ಟಿದನು ತರುವಿನ
ನೆಳಲೊಳಗೆ ವಿಶ್ರಮಿಸಿದರು ತನು
ಬಳಲಿಕೆಯ ಭಾರಣೆಯ ಕಡು ಜೋಡಿಸಿದ ಝೋಂಪಿನಲಿ
ಝಳಕೆ ಕಂದಿದ ಮೈಯ ಬಾಡಿದ
ಲಲಿತವದನದ ಮಾಸಿ ಕೆದರಿದ
ತಲೆಯೊಳಿರೆ ತನ್ನೈವರನು ಕಂಡಳಲಿದನು ಭೀಮ ॥5॥

೦೦೬ ತಾಯೆ ನೀ ...{Loading}...

ತಾಯೆ ನೀ ದಿಟ ನಾಗ ನಗರಿಯ
ರಾಯನರಸಿಯೆ ನಿನ್ನ ಮಕ್ಕಳು
ರಾಯರೆದೆ ದಲ್ಲಣರೆ ಭಾರಿಯ ಬಾಹುವಿಕ್ರಮರೆ
ಈಯವಸ್ಥೆಗೆ ಸೋಮವಂಶದ
ರಾಯತನವೆಂತಹುದು ಹೇಳೌ
ತಾಯೆ ಹೇಳೆನ್ನಾಣೆ ಹೇಳೆಂದಳಲಿದನು ಭೀಮ ॥6॥

೦೦೭ ಜನನಿಯಙ್ಘ್ರಿಯನೊತ್ತಿ ಯಮನಂ ...{Loading}...

ಜನನಿಯಂಘ್ರಿಯನೊತ್ತಿ ಯಮನಂ
ದನನ ಚರಣವ ಮುರಿದು ಬಳಿಕ
ರ್ಜುನನ ಯಮಳರ ಪದವೆನಚ್ಚರದಂತೆ ಹಿಡಿಕಿಸುತ
ಅನಿಬರಿರವನು ನೋಡಿ ಪೂರ್ವವ
ನೆನೆದು ಬಿರಿಬಿರಿದಳುತ ಘನ ಕಾ
ನನದ ಮಧ್ಯದಲೀತನಿದ್ದನು ಹಿರಿದು ಚಿಂತಿಸುತ ॥7॥

೦೦೮ ಔಕುವುದು ಬಲು ...{Loading}...

ಔಕುವುದು ಬಲು ನಿದ್ರೆ ನಿದ್ರೆಯ
ನೂಕುವನು ಕಣ್ಣೆವೆಗಳಲಿ ನಸು
ತೂಕಡಿಕೆ ತೋರಿದೊಡೆ ಮೈಗೆದರುವನು ಕೈಯೊಡನೆ
ಸೋಕುವುದು ಮೈಮರವೆ ಮರವೆಯ
ನೋಕರಿಸುವುದು ಚಿತ್ತ ವೃತ್ತಿ ನಿ
ರಾಕುಲಾಂತಃಕರಣನಾದನು ಬಳಿಕ ಕಲಿಭೀಮ ॥8॥

೦೦೯ ವ್ಯಾಳ ಗಜ ...{Loading}...

ವ್ಯಾಳ ಗಜ ಭೂದಾರ ವೃಕ ಶಾ
ರ್ದೂಲ ಸಿಂಹಾದಿಗಳ ಭಯವಾ
ಕೀಳ ದೈತ್ಯ ಪ್ರಕರ ಭಯವಹುದೆನ್ನ ಮರವೆಯಲಿ
ಹೇಳಲೇನದನಿನ್ನು ನಿದ್ರಾ
ವ್ಯಾಳ ವಿಷವನು ಮೊಗೆದು ಸೂಸಿ ವಿ
ಶಾಲ ಮತಿಯವಧಾನದಲಿ ಕಾದಿರ್ದನೈವರನು ॥9॥

೦೧೦ ಧರಣಿಪತಿ ಕೇಳೊನ್ದು ...{Loading}...

ಧರಣಿಪತಿ ಕೇಳೊಂದು ಮಾರಿಯ
ಮುರಿವನಿವರಿಗೆ ತದ್ವನಾಂತರ
ದರಸು ದೈತ್ಯ ಹಿಡಿಂಬನೆಂಬವನತುಲ ಭುಜಬಲನು
ಮುರಿಮುರಿದು ಮೇಗಾಳಿಯಲಿ ಮೂ
ಗರಳಿ ಮಾನವ ಗಂಧವಿದು ಗೋ
ಚರಿಸಿತೆತ್ತಣದೋ ಮಹಾದೇವೆನುತ ಬೆರಗಾದ ॥10॥

೦೧೧ ತಾಯೆ ಬಾರೌ ...{Loading}...

ತಾಯೆ ಬಾರೌ ತಂಗಿ ಗಂಧದ
ವಾಯುವಿದೆ ಹೊಣೆಗಾರನಾಗಿ ನ
ವಾಯ ಭೋಜನವಿಂದು ದೊರಕಿತು ಮನುಜ ಮಾಂಸದಲಿ
ಸಾಯಲವದಿರ ಬಡಿದು ತಾ ತಮ
ಗಾಯವಿದು ಕೃತಪುಣ್ಯಫಲವೆನೆ
ಮಾಯಗಾತಿ ಹಸಾದವೆನುತ ಹಿಡಿಂಬಿ ಗಮಿಸಿದಳು ॥11॥

೦೧೨ ಬನ್ದಳವಳತಿ ರೌದ್ರರೂಪಿನೊ ...{Loading}...

ಬಂದಳವಳತಿ ರೌದ್ರರೂಪಿನೊ
ಳಂದು ಕಂಡಳು ದೂರದಲಿ ಹರಿ
ನಂದನನ ಸುಳಿದಲೆಯ ಕೆಮ್ಮೀಸೆಗಳ ಕರ್ಕಶದ
ಕೆಂದಳದ ಕೇಸರಿಯ ಕಂಗಳ
ಕುಂದ ರದನಚ್ಛವಿಯಲಿರೆ ಮನ
ಸಂದಳಾ ಖಳನನುಜೆ ಸೋತಳು ಭೀಮಸೇನಂಗೆ ॥12॥

೦೧೩ ಇವನ ರಮಣನ ...{Loading}...

ಇವನ ರಮಣನ ಮಾಡಿಕೊಂಡೋ
ಡುವೆನು ವಿಪಿನಾಂತರಕೆ ಮುನಿದವ
ನಿವದಿರೈವರ ತಿನಲಿ ಮರದಡಿಯಲಿ ಮಲಗಿದರ
ಇವನು ತನ್ನಯ ರೌದ್ರಮಯ ರೂ
ಪವನು ಕಂಡರೆ ಹೆದರುವನಲಾ
ಯುವತಿಯಹೆನೆಂದಸುರೆ ಸುಳಿದಳು ದಿವ್ಯರೂಪಿನಲಿ ॥13॥

೦೧೪ ಹೊಳೆವ ಕಙ್ಗಳ ...{Loading}...

ಹೊಳೆವ ಕಂಗಳ ಕಾಂತಿ ಮರಗ
ತ್ತಲೆಯ ಮೊತ್ತವ ಬಿಗಿಯೆ ಮೈ ಪರಿ
ಮಳಕೆ ತೂಳುವ ತುಂಬಿಗಳ ತನುಲತೆಯ ಚೆಲುವಿಕೆಯ
ಲಲನೆ ಸುಳಿದಳು ಕುಚದ ಭಾರಕೆ
ಬಳುಕೆ ನಡು ಬಿಡದೊಲೆದು ಮೇಲುದು
ತಳಿಯೆ ಸುಳಿಗುರುಳೊಲೆಯಲಾ ಕಲಿ ಭೀಮನಿದಿರಿನಲಿ ॥14॥

೦೧೫ ಭೀಮ ನೋಡನು ...{Loading}...

ಭೀಮ ನೋಡನು ನುಡಿಸನೊಯ್ಯನೆ
ತಾಮರಸಮುಖಿ ಹೊದ್ದಿದಳು ನಿ
ಸ್ಸೀಮನೈ ನೀನಾರು ಮಲಗಿದ ಮತ್ರ್ಯರಿವರಾರು
ಈ ಮಹಾರಣ್ಯದಲಿ ಬರವಿದು
ಕಾಮಿತವೆ ಕೋಮಲರಿಗೆನೆ ನಿ
ಷ್ಕಾಮ ಮನದಲಿ ಸತಿಯ ನುಡಿಸಿದನಾರು ನೀನೆಂದು ॥15॥

೦೧೬ ವನ ಹಿಡಿಮ್ಬನದಾ ...{Loading}...

ವನ ಹಿಡಿಂಬನದಾ ಹಿಡಿಂಬಕ
ನನುಜೆ ತಾನು ಹಿಡಿಂಬಿಯೀ ಕಾ
ನನವಿದೆಮ್ಮಾಶ್ರಮವಗಮ್ಯವು ದಿವಿಜ ಮನುಜರಿಗೆ
ನಿನಗೆ ಕಾಮಿಸಿ ಬಂದೆನಣ್ಣನು
ಮುನಿದೊಡಿವದಿರ ತಿನಲಿ ನೀನೇ
ಳೆನಗೆ ವಲ್ಲಭನಾಗು ಕೊಂಡೊಯ್ವೆನು ಹಿಮಾಚಲಕೆ ॥16॥

೦೧೭ ನಿನ್ನನೊಲ್ಲೆನು ...{Loading}...

ನಿನ್ನನೊಲ್ಲೆನು ಮುನಿದೆಯಾದಡೆ
ನಿನ್ನ ದೈತ್ಯನ ಕೊಂಡು ಬಾ ಹೋ
ಗೆನ್ನ ಬಲುಹನು ನೋಡು ನೀನೆನಲಸುರೆ ವಿನಯದಲಿ
ಮುನ್ನಲೇ ಮನುಮಥನ ಶರದಲಿ
ಖಿನ್ನೆಯಾಗಿಹೆ ಮರೆಯ ಹೊಕ್ಕೆನು
ತನ್ನನೀ ಪರಿ ಮುರಿದು ನುಡಿವರೆ ಎಂದಳಿಂದುಮುಖಿ ॥17॥

೦೧೮ ಅನುಜೆ ತಳುವಿದಳೆನ್ದು ...{Loading}...

ಅನುಜೆ ತಳುವಿದಳೆಂದು ರೋಷ
ಸ್ತನಿತ ಗದ್ಗದ ಕಂಠನೊದೆದೆ
ದ್ದನು ಮಹೀಮಂಡಲವನುಗ್ರಾಂಬಕನ ಡೊಂಬಿನಲಿ
ಅನಿಲಸುತನಿದಿರೆದ್ದನೀತನೆ
ದನುಜೆ ನಿನ್ನವನಾಯ್ತು ತಪ್ಪೇ
ನೆನುತ ಹಳಚಿದೊಡಾ ಹಿಡಿಂಬಕ ಜಡಿದು ಬೊಬ್ಬಿರಿದ ॥18॥

೦೧೯ ಒರಲ ಬೇಡವೊ ...{Loading}...

ಒರಲ ಬೇಡವೊ ಕುನ್ನಿ ಮೆಲ್ಲನೆ
ತರುಬಿ ಕಾದುವುದೆಲವೊ ಮೈಮರ
ದೊರಗಿದವರೇಳ್ವರು ಕಣಾ ಸತ್ತಂತೆ ಸಾರೆನುತ
ತರುಬಿ ಹಿಡಿದಾ ಭೀಮ ಬೆನ್ನಿನೊ
ಳೆರಗಿದನು ಹೆಮ್ಮರಕೆ ಹಾಯಿದು
ಮುರಿದು ಹೊಯ್ದು ಹಿಡಿಂಬ ಕೊಡಹಿದನನಿಲ ನಂದನನ ॥19॥

೦೨೦ ಎದ್ದು ತಿವಿದನು ...{Loading}...

ಎದ್ದು ತಿವಿದನು ಖಳನ ಬದಿಯೊಳ
ಗದ್ದುದೀತನ ಮುಷ್ಟಿ ಮುರಿದೊಡ
ನೆದ್ದು ನಿಮಿಷಕೆ ಸಂತವಿಸಿ ಹೆಮ್ಮರನ ಕೊಂಬಿನಲಿ
ಗೆದ್ದೆಯಿದ ಕೊಳ್ಳೆನುತ ಖಳನು
ಬ್ಬೆದ್ದು ಹೊಯ್ದರೆ ಮರ ಸಹಿತ ಹಿಡಿ
ದುದ್ದಿ ನೆಲದೊಳಗೊರಸಿ ಕೊಂದನು ಕಲಿ ಹಿಡಿಂಬಕನ ॥20॥

೦೨೧ ಕಳಕಳದೊಳಿವರೆದ್ದುಯಿವನತಿ ಬಳ ...{Loading}...

ಕಳಕಳದೊಳಿವರೆದ್ದುಯಿವನತಿ
ಬಳ ಮಹಾದೇವೆಮ್ಮನೆಬ್ಬಿಸಿ
ಬಳಿಕ ಕಾದದೆ ತಮ್ಮ ಕೆಡಿಸಲು ಕಾಕ ಬಳಸಿದೆಲ
ಬಳಲಿದೆಮ್ಮನು ಹೊತ್ತು ತೊಳಲಿದ
ಬಳಲಿಕೆಯಲೀ ಕೇಡು ಲೇಸಾ
ಯ್ತುಳಿದೆ ಪುಣ್ಯವಿದೆಂದರಾ ಯಮನಂದನಾದಿಗಳು ॥21॥

೦೨೨ ಖಳ ಮಡಿಯಲಲವನನುಜೆ ...{Loading}...

ಖಳ ಮಡಿಯಲಲವನನುಜೆ ಭೀಮನ
ನೊಲಿಸಲರಿಯದೆ ಕುಂತಿಗೆಲ್ಲವ
ತಿಳುಹಿ ನುಡಿದಳು ತನ್ನ ಪೂರ್ವಾಪರದ ಸಂಗತಿಯ
ಹಲವು ಪರಿಯಲಿಯಿವರನವಳಂ
ಡಲೆದು ಭೀಮಗೆ ಹೇಳಿಸಿದಳಾ
ಫಲುಗುಣನ ಕೈಯಿಂದ ಧರ್ಮಜನಿಂದ ನುಡಿಸಿದಳು ॥22॥

೦೨೩ ಆರು ನುಡಿಯಲು ...{Loading}...

ಆರು ನುಡಿಯಲು ಸರ್ವಥಾ ಖಳ
ನಾರಿಯನು ಕೈಕೊಳ್ಳೆನೆಂದೇ
ವೀರ ಬಲಿದನು ಬಳಿಕ ವೇದವ್ಯಾಸಮುನಿ ಬಂದು
ಸಾರ ನಯದಲಿ ತೋರಿ ತಿಳುಹಿ ಕು
ಮಾರ ಸಂಭವದವಧಿಯೆಂದಾ
ನಾರಿಯನು ಗಂಟಿಕ್ಕಿದನು ಮುನಿ ಭೀಮಸೇನಂಗೆ ॥23॥

೦೨೪ ಎಲ್ಲಿ ಉಪವನ ...{Loading}...

ಎಲ್ಲಿ ಉಪವನ ವರ ಸರೋವರ
ವೆಲ್ಲಿ ಕೇಳೀ ಶೈಲ ಹಿಮಗೃಹ
ವೆಲ್ಲಿ ರಮ್ಯೋದ್ಯಾನವೆಲ್ಲಿ ವಿಹಾರ ವನಭೂಮಿ
ಅಲ್ಲಿಗಲ್ಲಿಗೆ ಹರಿದು ಮಾರುತಿ
ವಲ್ಲಭೆಯ ರಮಿಸಿದನು ಚೌಪಟ
ಮಲ್ಲ ಜನಿಸಿದ ಕಲಿ ಘಟೋತ್ಕಚನಾ ಹಿಡಿಂಬಿಯಲಿ ॥24॥

೦೨೫ ನುಡಿದ ಸಮಯಕೆ ...{Loading}...

ನುಡಿದ ಸಮಯಕೆ ತನ್ನ ರಮಣಿಯ
ನೊಡಬಡಿಸಿ ಹೈಡಿಂಬ ರಾಜ್ಯದ
ವೊಡೆತನವ ನೆರೆ ಮಾಡಿ ನಿಲಿಸಿದನಾ ಘಟೋತ್ಕಚನ
ನಡೆದು ಬಂದರು ಶಾಲಿಹೋತ್ರನ
ನಡುವೆ ಕಂಡುಪಚರಿಸಿ ಕೊಂಡರು
ಪಡುವಲಭಿಮುಖರಾದರನಿಬರು ವಿಪ್ರವೇಷದಲಿ ॥25॥

+೦೯ ...{Loading}...