೦೦೦ ಸೂ ರಾಯ ...{Loading}...
ಸೂ. ರಾಯ ಕಟಕಾಚಾರ್ಯನಿಂದ ವಿ
ಘಾಯದಲಿ ನೊಂದನಲಮುಖದಲಿ
ರಾಯ ದ್ರುಪದನು ಪಡೆದ ಧೃಷ್ಟದ್ಯುಮ್ನ ದ್ರೌಪದಿಯ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಕೌರವವಂಶದ ರಾಜರ ಸೈನ್ಯಕ್ಕೆ ಗುರುವೆನಿಸಿದ ದ್ರೋಣನಿಂದ ದ್ರುಪದ ರಾಜನು ಕ್ರೂರವಾಗಿ ನೊಂದನು. ಅಗ್ನಿಯ ಮೂಲಕ ದ್ರುಪದನು ದೃಷ್ಟದ್ಯುಮ್ನ ದ್ರೌಪದಿಯರನ್ನು ಪಡೆದನು.
ಪದಾರ್ಥ (ಕ.ಗ.ಪ)
ಕಟಕ-ಸೈನ್ಯ, ಆಚಾರ್ಯ-ಗುರು, ವಿಘಾಯ-ಕ್ರೂರ, ಮುಖ-ಮೂಲಕ
ಟಿಪ್ಪನೀ (ಕ.ಗ.ಪ)
ಧೃಷ್ಟದ್ಯುಮ್ನ - ದ್ರುಪದ ರಾಜನ ಮಗ. ಅಯೋನಿಜ, ಅಗ್ನಿಕುಂಡದಿಂದ ದ್ರೌಪದಿಯ ಸಂಗಡ ಜನಿಸಿದವನು. ಈತ ಅಗ್ನಿಯ ಅಂಶದಿಂದ ಹುಟ್ಟಿದವನು. ತಕ್ಕ ವಯಸ್ಸಿನಿಂದ, ಶಸ್ತ್ರ ಪೂರಿತವಾದ ರಥದಲ್ಲಿ ಕುಳಿತುಕೊಂಡು ಪ್ರಗಲ್ಭನೂ, ಪ್ರಜಾಪಾಲನಚತುರನೂ, ಬಲ, ಕವಚ, ಕುಂಡಲ, ಶಸ್ತ್ರ ಶೌರ್ಯ ಉತ್ಸಾಹಗಳೊಂದಿಗೆ ಜನಿಸಿದವನಾದ್ದರಿಂದ ಧೃಷ್ಟದ್ಯುಮ್ನನೆಂದು ಹೆಸರು.
ದ್ರೌಪದಿ - ಮಹಾರಾಜ ದ್ರುಪದನ ಮಗಳು. ಯಜ್ಞ ಕುಂಡದಲ್ಲಿ ಧೃಷ್ಟದ್ಯುಮ್ನನ ನಂತರ ಪ್ರಕಟವಾದಳು. ಆದುದರಿಂದ ಧೃಷ್ಟದ್ಯುಮ್ನನ ಸೋದರಿಯಾದುದು. ಇವಳು ಅಯೋನಿಜೆ. ಪಾಂಚಾಲಿ ಎಂಬ ಹೆಸರೂ ಅವಳಿಗಿತ್ತು.
ಧೃಷ್ಟದ್ಯುಮ್ನ -ಮಹಾಭಾರತದ ಪ್ರಧಾನ ಪಾತ್ರUಳಲ್ಲಿ ಒಬ್ಬ. ದ್ರೋಣರು ದ್ರುಪದನಿಗೆ ಮಾಡಿದ ಅವಮಾನದ ಮುಯ್ಯಿ ತೀರಿಸಲೆಂದು ದ್ರೋಣವಧೆಗಾಗಿಯೇ ಹುಟ್ಟಿದವನು. ಇಂಥ ದೃಷ್ಟದ್ಯುಮ್ನನು ದ್ರೋಣರಿಂದಲೇ ವಿದ್ಯೆ ಕಲಿತದ್ದು ಆ ಕಾಲದ ಸೋಜಿಗಗಳಲ್ಲಿ ಒಂದು. ಅಗ್ನಿಯ ತೇಜಸ್ಸಿನಿಂದ ಹುಟ್ಟಿದವನಾದ್ದರಿಂದ
ಮೂಲ ...{Loading}...
ಸೂ. ರಾಯ ಕಟಕಾಚಾರ್ಯನಿಂದ ವಿ
ಘಾಯದಲಿ ನೊಂದನಲಮುಖದಲಿ
ರಾಯ ದ್ರುಪದನು ಪಡೆದ ಧೃಷ್ಟದ್ಯುಮ್ನ ದ್ರೌಪದಿಯ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಕಲಿತರು ನಿಮ್ಮ ಪೂರ್ವ ನೃ
ಪಾಲಕರು ಸರಹಸ್ಯ ಸಾಂಗೋಪಾಂಗ ವಿದ್ಯೆಗಳ
ಸ್ಥೂಲದಲಿ ಸೂಕ್ಷ್ಮದಲಿ ಬಹಳ ವಿ
ಶಾಲದಲಿ ಸಂಕೋಚದಲಿ ಲಘು
ಪಾಳಿಯಲಿ ಹಾರದಲಿ ವಿವಿಧಾನುಪ್ರಯೋಗದಲಿ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯ ಮಹಾರಾಜನೇ ಕೇಳು ನಿಮ್ಮ ಹಿಂದಿನ ರಾಜರು ರಹಸ್ಯದಿಂದ ಕೂಡಿದ ಪೂರ್ಣವಾದ ವಿದ್ಯೆಗಳನ್ನು ಕಲಿತರು. ಸ್ಥೂಲವಾಗಿ, ಸೂಕ್ಷ್ಮವಾಗಿ ವಿವgವಾಗಿ, ಸಂಕ್ಷಿಪ್ತವಾಗಿ, ಶೀಘ್ರವಾಗಿ, ಕ್ರಮಬದ್ಧವಾಗಿ, ವಿವಿಧ ಯಥಾಕ್ರಮವಾದ ಪ್ರಯೋಗಗಳಲ್ಲಿ ಅಭ್ಯಾಸ ಮಾಡಿ ಆರಾಮದಲ್ಲಿ ಕಲಿತರು.
ಪದಾರ್ಥ (ಕ.ಗ.ಪ)
ಸಾಂಗೋಪಾಂಗ-ಪೂರ್ಣವಾದ, ಲಘು-ಶೀಘ್ರ, ಪಾಳಿ-ಕ್ರಮಬದ್ಧ, ಹಾರ-ಆರಾಮ,
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಕಲಿತರು ನಿಮ್ಮ ಪೂರ್ವ ನೃ
ಪಾಲಕರು ಸರಹಸ್ಯ ಸಾಂಗೋಪಾಂಗ ವಿದ್ಯೆಗಳ
ಸ್ಥೂಲದಲಿ ಸೂಕ್ಷ್ಮದಲಿ ಬಹಳ ವಿ
ಶಾಲದಲಿ ಸಂಕೋಚದಲಿ ಲಘು
ಪಾಳಿಯಲಿ ಹಾರದಲಿ ವಿವಿಧಾನುಪ್ರಯೋಗದಲಿ ॥1॥
೦೦೨ ಎಡ ಬಲದ ...{Loading}...
ಎಡ ಬಲದ ಮಯಣಾಮ ಹೊಳಹಿನ
ಕಡಲ ತೆರೆವೆರೆಯದತಿ ಬವರಿಯ
ಬಿಡೆಯ ದುವ್ವಾಳಿಗಳ ಸೂಟಿಯ ಸರಳ ಸೋಹಿನಲಿ
ಕಡುಗಲಿಗಳೇರಾಟದಲಿ ಮಿಗೆ
ಝಡಿ ಪವಾಡ ದೃಢಾಯತಿಕೆಗಿದು
ಪಡಿಯ ನಳ ರೇವಂತರೆಂದುದು ರಾವುತಿಕೆಗಳಲಿ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪರಾಕ್ರಮಿಗಳು ಕುದುರೆ ಸವಾರಿ ಮಾಡುವುದರಲ್ಲಿ, ಕುದುರೆಗಳನ್ನು ತ್ವರೆಯಾಗಿ ವೇಗದಿಂದ ಸಲೀಸಾಗಿ ಮುಂದೆ ನಡೆಸುತ್ತಿದ್ದರೆ, ಎಡಬಲದ ಕುದುರೆಗಳ ಒಂದಾನೊಂದು ದಾಪುಗಾಲಿನ ಕಾಂತಿಯು, ಸಮುದ್ರದ ಅಲೆಗಳು ಒಂದನ್ನೊಂದು ಸೇರಿದಾಗ ಸುತ್ತು ತಿರುಗುವಂತೆ ಕಾಣುತ್ತಿತ್ತು. ಅತಿಮಾನುಷ ಕಾರ್ಯವಾದ, ಅಚಲವಾದ ನಿರ್ಧಾರದ ಹೊಡೆತದ ಅವರ ಬಗೆ ಬಗೆಯ ಕುದುರೆ ಸವಾರಿಯಲ್ಲಿ ನಳ, ರೇವಂತರ ಸಮಾನವೆನ್ನಿಸಿಕೊಂಡರು.
ಪದಾರ್ಥ (ಕ.ಗ.ಪ)
ಮಯಣಾಮ-ಕುದುರೆಯ ಒಂದು ನಡೆ, ದಾಪುಗಾಲು, ತೆರೆವೆರೆ-ಅಲೆಗಳು ಒಂದನ್ನೊಂದು ಸೇರಿದಾಗ, ಬವರಿ-ಸುತ್ತು ತಿರುಗುವಿಕೆ, ಬಿಡೆಯ-ಮುಂದೆ ನಡೆಸುವುದು, ದುವ್ವಾಳಿ-ಕುದುರೆಯ ಗತಿಯಲ್ಲಿನೊಂದು ಬಗೆ, ಸೂಟಿ-ವೇಗ, ಸರಳ-ಸಲೀಸು, ಸೋಹು-ಓಡಿಸು, ಕಡುಗಲಿ-ಪರಾಕ್ರಮಿ, ಏರಾಟ-ಸವಾರಿ ಮಾಡುವುದು, ಝಡಿ-ಹೊಡೆತ, ಪವಾಡ-ಅತಿಮಾನುಷ ಕಾರ್ಯ, ದೃಢಾಯತಿಕೆ-ಅಚಲವಾದ ನಿರ್ಧಾರ, ಪಡಿ-ಸಮಾನ, ರಾವುತಿಕೆ-ಕುದುರೆ ಸವಾರಿ.
ಟಿಪ್ಪನೀ (ಕ.ಗ.ಪ)
ಋತುಪರ್ಣ - ಮಹಾಭಾರತದ ವನಪರ್ವದಲ್ಲಿ ಬರುವ ಕಥಾನಕಗಳಲ್ಲಿ ಮಹತ್ವದ್ದೆಂದರೆ ನಳೋಪಾಖ್ಯಾನ. ಅದರಲ್ಲಿ ರಾಜ್ಯವನ್ನೂ ಪತ್ನಿಯನ್ನೂ ಕಳೆದುಕೊಂಡ ನಳನು ಬಾಹುಕನ ವೇಷದಲ್ಲಿದ್ದಾಗ ಋತುಪರ್ಣನು ಅವನಿಗೆ ಆಶ್ರಯಕೊಡುವ ಸಂಗತಿ ವರ್ಣಿತವಾಗಿದೆ. ‘ಋತುಪರ್ಣಸ್ಯ ರಾಜರ್ಷೇಃ ಕೀರ್ತಿತಂ ಪಾಪನಾಶನಂ’ ಎಂದು ಋತುಪರ್ಣನು ಸ್ತುತಿಗೆ ಪಾತ್ರನಾಗಿದ್ದಾನೆ.
ನಳ : ನಿಷಧ ದೇಶಾಧಿಪತಿಯಾದ ವೀರಸೇನ ರಾಜನ ಮಗ. ಅಶ್ವ ವಿದ್ಯೆಯನ್ನು ತಿಳಿದವನು. ದಮಯಂತಿಯ ಪುನಃ ಸ್ವಯಂವರಕ್ಕಾಗಿ ಋತುಪರ್ಣ ಹೊರಟಾಗ ದಾರಿಯಲ್ಲಿ ನಳನು ಋತುಪರ್ಣನಿಗೆ ಅಶ್ವವಿದ್ಯೆಯನ್ನು ತಿಳುಹಿ, ಅವನಿಂದ ಅಕ್ಷವಿದ್ಯೆಯನ್ನು ಕಲಿತನು.
ರೇವಂತ :ಸೂರ್ಯನ ಮಗ, ಅಶ್ವಿನೀದೇವತೆಗಳ ಸೋದರ, ಉತ್ತಮ ಸಾರಥಿ.ಹುಟ್ಟಿನಿಂದಲೇ ಬದುಕಿನ ಹೆದ್ದಾರಿ ತಪ್ಪಿಸಿಕೊಂಡ ನತದೃಷ್ಟ ಕರ್ಣ. ಕರ್ಣನ ದಾನಶೀಲತೆ ಪರಾಕ್ರಮಗಳ ಮತ್ತು ಬೊಗಳೆತನಗಳು ಯಾವುದನ್ನು ಯಾವುದು ಮೀರಿಸುತ್ತದೆ ಎಂದು ಹೇಳಲಾಗದಷ್ಟು ಸಮಪ್ರಮಾಣದಲ್ಲಿ ಹಂಚಿಹೋಗಿವೆ. ಕೌರವನು ಚಿತ್ರಾಂಗಿಯನ್ನು ಸ್ವಯಂವರ ಮಂಟಪದಲಿ
ಮೂಲ ...{Loading}...
ಎಡ ಬಲದ ಮಯಣಾಮ ಹೊಳಹಿನ
ಕಡಲ ತೆರೆವೆರೆಯದತಿ ಬವರಿಯ
ಬಿಡೆಯ ದುವ್ವಾಳಿಗಳ ಸೂಟಿಯ ಸರಳ ಸೋಹಿನಲಿ
ಕಡುಗಲಿಗಳೇರಾಟದಲಿ ಮಿಗೆ
ಝಡಿ ಪವಾಡ ದೃಢಾಯತಿಕೆಗಿದು
ಪಡಿಯ ನಳ ರೇವಂತರೆಂದುದು ರಾವುತಿಕೆಗಳಲಿ ॥2॥
೦೦೩ ನಗವನೊಡ್ಡಿದರೊನ್ದೆ ಸರಳಲಿ ...{Loading}...
ನಗವನೊಡ್ಡಿದರೊಂದೆ ಸರಳಲಿ
ಹುಗಿಲುಗಳೆವ ವಿದೂರ ಪಾತದಿ
ಗಗನ ಯಂತ್ರವನೆಸುವ ಜೋಕೆಯ ಜೋದ ವಿದ್ಯದಲಿ
ಉಗಿವ ಬಿಡುವೆಡ ಬಲನ ಬವರಿಯ
ಲಗಿವ ಲವಣಿಯ ದಂತಿ ಶಿಕ್ಷೆಗೆ
ಮಿಗಿಲು ಭಗದತ್ತಾದಿಗಳಿಗೆಂದುದು ಕುಮಾರಕರ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೆಟ್ಟವನ್ನು ಎದುರಿಗೆ ಒಡ್ಡಿದರೆ ಒಂದೇ ಬಾಣದಲ್ಲಿ ಸೀಳಿ ಬಿಡುವ, ಗಗನದಲ್ಲಿರುವ ಯಂತ್ರವನ್ನು ಅತಿದೂರದಲ್ಲಿ ಬೀಳಿಸುವ ಚಮತ್ಕಾರವನ್ನು ಕಲಿತರು. ಹೊರಕ್ಕೆಳೆಯುವ, ಒಳಕ್ಕೆ ಬಿಡುವ ಎಡಬಲನ ಸುತ್ತುವ ಆನೆಗಳ ಸಮೂಹದ ದಂಡನೆಯ ಮಾವಟಿಗ ವಿದ್ಯೆಯಲ್ಲಿ ಆ ಕುಮಾರಕರು ಭಗದತ್ತನೇ ಮೊದಲಾದವರಿಗೆ ಮಿಗಿಲೆನಿಸಿಕೊಂಡರು.
ಪದಾರ್ಥ (ಕ.ಗ.ಪ)
ನಗ-ಬೆಟ್ಟ, ಹುಗಿಲು-ಸೀಳು, ವಿದೂರ-ಅತಿದೂರ, ಜೋದವಿದ್ಯೆ-ಮಾವಟಿಗನ ವಿದ್ಯೆ, ಉಗಿವ-ಹೊರಕ್ಕೆಳೆಯುವ, ಲವಣಿ-ಸಮೂಹ, ಶಿಕ್ಷೆ-ವಿದ್ಯೆ,
ಟಿಪ್ಪನೀ (ಕ.ಗ.ಪ)
ಭಗದತ್ತ-ಪ್ರಾಗ್ಜೋತಿಷ ಪುರದ ನರಕಾಸುರನ ಮಗ, ಬಾಷ್ಕಲನೆಂಬ ಅಸುರನ ಅಂಶದಿಂದ ಹುಟ್ಟಿದವ. ಗಜವಿದ್ಯೆಯಲ್ಲಿ ನಿಪುಣ, ಬಲಿಷ್ಠವಾದ ಸುಪ್ರತೀಕ ಗಜದ ಸಂಗಡಲೇ ಇರುತ್ತಿದ್ದನು.
ಮೂಲ ...{Loading}...
ನಗವನೊಡ್ಡಿದರೊಂದೆ ಸರಳಲಿ
ಹುಗಿಲುಗಳೆವ ವಿದೂರ ಪಾತದಿ
ಗಗನ ಯಂತ್ರವನೆಸುವ ಜೋಕೆಯ ಜೋದ ವಿದ್ಯದಲಿ
ಉಗಿವ ಬಿಡುವೆಡ ಬಲನ ಬವರಿಯ
ಲಗಿವ ಲವಣಿಯ ದಂತಿ ಶಿಕ್ಷೆಗೆ
ಮಿಗಿಲು ಭಗದತ್ತಾದಿಗಳಿಗೆಂದುದು ಕುಮಾರಕರ ॥3॥
೦೦೪ ರಥವ ರಕ್ಷಿಸಿಕೊಣ್ಡು ...{Loading}...
ರಥವ ರಕ್ಷಿಸಿಕೊಂಡು ನಿಜ ಸಾ
ರಥಿಯ ಕಾಯಿದು ಮುಂದೆ ಹೂಡಿದ
ರಥಹಯಂಗಳ ಮೈಗಳಲಿ ಮಸೆಗಾಣದಂದದಲಿ
ಪ್ರಥಿತರಿಪು ಶಸ್ತ್ರಾಸ್ತ್ರವನು ರಿಪು
ರಥಿಕರನು ಸಮರದಲಿ ಜಯಿಸುವ
ರಥಿಕ ವಿದ್ಯೆದೊಳಿವರ ಸರಿ ಸುರನರರೊಳಿಲ್ಲೆಂದ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಾನೇರಿದ ರಥವನ್ನು ರಕ್ಷಿಸಿಕೊಂಡು, ತನ್ನ ಸಾರಥಿಯನ್ನು ಕಾಪಾಡಿಕೊಂಡು, ಮುಂದೆ ಹೂಡಿರುವ ರಥದ ಕುದುರೆಗಳು ಗಾಯಗೊಳ್ಳದ ರೀತಿಯಲ್ಲಿ, ಪ್ರಸಿದ್ಧರಾದ ಶತ್ರುಗಳ ಶಸ್ತ್ರಾಸ್ತ್ರಗಳನ್ನು, ಶತ್ರುಪಕ್ಷದ ರಥಿಕರನ್ನು, ಯುದ್ಧದಲ್ಲಿ ಜಯಿಸುವ ರಥಿಕ ವಿದ್ಯೆಯಲ್ಲಿ ಇವರ ಸಮಾನ ದೇªತೆ,ಮಾನವರಲ್ಲಿ ಬೇರೆ ಯಾರೂ ಇರಲಿಲ್ಲ.
ಪದಾರ್ಥ (ಕ.ಗ.ಪ)
ಮಸೆಗಾಣ್-ಗಾಯಗೊಳ್ಳು, ಪ್ರಥಿತ-ಪ್ರಸಿದ್ಧರಾದ
ಮೂಲ ...{Loading}...
ರಥವ ರಕ್ಷಿಸಿಕೊಂಡು ನಿಜ ಸಾ
ರಥಿಯ ಕಾಯಿದು ಮುಂದೆ ಹೂಡಿದ
ರಥಹಯಂಗಳ ಮೈಗಳಲಿ ಮಸೆಗಾಣದಂದದಲಿ
ಪ್ರಥಿತರಿಪು ಶಸ್ತ್ರಾಸ್ತ್ರವನು ರಿಪು
ರಥಿಕರನು ಸಮರದಲಿ ಜಯಿಸುವ
ರಥಿಕ ವಿದ್ಯೆದೊಳಿವರ ಸರಿ ಸುರನರರೊಳಿಲ್ಲೆಂದ ॥4॥
೦೦೫ ಇನಿಬರೊಳು ಬಿಲುಗಾರನಾರ ...{Loading}...
ಇನಿಬರೊಳು ಬಿಲುಗಾರನಾರ
ರ್ಜುನನೊ ಕರ್ಣನೊ ಭೀಮ ದುರ್ಯೋ
ಧನರೊ ಮಾದ್ರೀಸುತರೊ ಮೇಣ್ ದುಶ್ಯಾಸನಾದಿಗಳೊ
ಮನದಿ ಕೈಯಲಿ ಕಂಗಳೋ ಲೋ
ಚನವೆ ಕಂಗಳೊ ಕಾಣಬೇಕೆಂ
ದೆನುತ ಗುರು ರಚಿಸಿದನು ಲಕ್ಷ್ಯವನೊಂದು ವೃಕ್ಷದಲಿ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಷ್ಟು ಜನರಲ್ಲಿ ಬಿಲ್ಲುಗಾರರು ಯಾರು ? ಅರ್ಜುನನೊ ? ಕರ್ಣನೊ ? ಭೀಮದುರ್ಯೋಧನರೋ ? ಮಾದ್ರೀಸುತರಾದ ನಕುಲ ಸಹದೇವರೋ ? ಅಥವಾ ದುಶ್ಯಾಸನಾದಿಗಳೋ ? ಮನಸ್ಸಿನ ಕೈಯಲ್ಲಿ ಕಣ್ಣುಗಳೋ ಅಥವಾ ದೃಶ್ಯವೇ ಕಣ್ಣುಗಳೋ ನೋಡಬೇಕೆಂದು ಗುರುದ್ರೋಣರು ಒಂದು ಮರದಲ್ಲಿ ಒಂದು ಗುರಿಯನ್ನು ನಿರ್ಮಿಸಿದರು.
ಪದಾರ್ಥ (ಕ.ಗ.ಪ)
ಲೋಚನ-ದೃಶ್ಯ ಲಕ್ಷ್ಯ-ಗುರಿ, ವೃಕ್ಷ-ಮರ
ಮೂಲ ...{Loading}...
ಇನಿಬರೊಳು ಬಿಲುಗಾರನಾರ
ರ್ಜುನನೊ ಕರ್ಣನೊ ಭೀಮ ದುರ್ಯೋ
ಧನರೊ ಮಾದ್ರೀಸುತರೊ ಮೇಣ್ ದುಶ್ಯಾಸನಾದಿಗಳೊ
ಮನದಿ ಕೈಯಲಿ ಕಂಗಳೋ ಲೋ
ಚನವೆ ಕಂಗಳೊ ಕಾಣಬೇಕೆಂ
ದೆನುತ ಗುರು ರಚಿಸಿದನು ಲಕ್ಷ್ಯವನೊಂದು ವೃಕ್ಷದಲಿ ॥5॥
೦೦೬ ಕಾಣಬಾರದು ಲಕ್ಷ್ಯವಗ್ಗದ ...{Loading}...
ಕಾಣಬಾರದು ಲಕ್ಷ್ಯವಗ್ಗದ
ಜಾಣ ಭಟರಿಗೆ ಕಟ್ಟಿದೊರೆಯಿದು
ಕಾಣಿಸಿದರೈ ಹೂಣಿಸಿದಿರೈ ಹೂಡಿದಂಬಿನಲಿ
ಕಾಣಿರೇ ಕರ್ಣಾದಿ ಸುಭಟ
ಶ್ರೇಣಿಯೆಂಬೀ ಗುರುವಿನಣಕವ
ನಾಣೆಯಿಟ್ಟವೊಲೆಚ್ಚು ಲಕ್ಷ್ಯವ ಕೆಡಹಿದನು ಪಾರ್ಥ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಈ ಗುರಿಯು ಶ್ರೇಷ್ಠರಾದ, ನಿಪುಣರಾದ, ವೀರರಿಗೂ ಕಾಣಲಾಗದ ರೀತಿಯಲ್ಲಿ, ಗುಣದೋಷಗಳ ಪರೀಕ್ಷೆಗಾಗಿ, ಅಳವಡಿಸಿದೆ. ಇದನ್ನು ಕಂಡುಕೊಂಡು, ಬಾಣವನ್ನು ಹೂಡಿ ಪ್ರಯೋಗಿಸಿ ಬಾಣವನ್ನು ಗುರಿಗೆ ನಾಟಿಸಿ. ಕರ್ಣಾದಿ ವೀರರ ಸಮೂಹ ಇದನ್ನು ನೀವು ಕಾಣಿರಾ !” ಎಂದು ಗುರುವಾಡಿದ ಕಟಕಿ ಮಾತನ್ನು ಕೇಳಿ ಅರ್ಜುನನು ಭಾಷೆಯಿಟ್ಟಂತೆ ಆ ಗುರಿಯನ್ನು ಕೆಳಗೆ ಬೀಳಿಸಿದನು.
ಪದಾರ್ಥ (ಕ.ಗ.ಪ)
ಅಗ್ಗ-ಶ್ರೇಷ್ಠ, ಒರೆ-ಗುಣದೋಷಗಳ ಪರೀಕ್ಷೆ, ಹೂಣು-ನಾಟಿಸು ಹೂಡು-ಪ್ರಯೋಗಿಸು, ಅಂಬು-ಬಾಣ, ಶ್ರೇಣಿ-ಸಮೂಹ, ಅಣಕ-ಕಟಕಿ, ಕೆಡಹು-ಬೀಳಿಸು
ಮೂಲ ...{Loading}...
ಕಾಣಬಾರದು ಲಕ್ಷ್ಯವಗ್ಗದ
ಜಾಣ ಭಟರಿಗೆ ಕಟ್ಟಿದೊರೆಯಿದು
ಕಾಣಿಸಿದರೈ ಹೂಣಿಸಿದಿರೈ ಹೂಡಿದಂಬಿನಲಿ
ಕಾಣಿರೇ ಕರ್ಣಾದಿ ಸುಭಟ
ಶ್ರೇಣಿಯೆಂಬೀ ಗುರುವಿನಣಕವ
ನಾಣೆಯಿಟ್ಟವೊಲೆಚ್ಚು ಲಕ್ಷ್ಯವ ಕೆಡಹಿದನು ಪಾರ್ಥ ॥6॥
೦೦೭ ಹಿರಿದು ಮೆಚ್ಚಿ ...{Loading}...
ಹಿರಿದು ಮೆಚ್ಚಿ ಧನಂಜಯನನಾ
ದರಿಸಿ ಕೊಟ್ಟನು ಸಕಲ ವಿದ್ಯವ
ನುರುತರ ಪ್ರೇಮದಲಿ ಸೆಣಸಿದೊಡೇಕಲವ್ಯಕನ
ಬೆರಳ ಕೊಂಡನು ಪಾರ್ಥನನು ಪತಿ
ಕರಿಸಿದನು ತನಗಾದ ನೆಗಳಿನ
ದರಧುರದ ಭೀತಿಯನು ಗೆಲಿದನು ನರನ ದೆಸೆಯಿಂದ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದರಿಂದ ಗುರುವು ಧನಂಜಯನನ್ನು ಹೆಚ್ಚಾಗಿ ಮೆಚ್ಚಿದನು. ಅತಿ ವಿಶೇಷ ಪ್ರೇಮದಿಂದ ಸಕಲ ವಿದ್ಯೆಗಳನ್ನು ಅವನಿಗೆ ಧಾರೆಯೆರೆದನು. ಸ್ಪರ್ಧಿಸಿದ ಏಕಲವ್ಯನೆಂಬವನ ಬೆರಳನ್ನು ತೆಗೆದುಕೊಂಡನು. ತಾನು ಮೊಸಳೆಯ ಬಾಯಿಗೆ ಸಿಕ್ಕಿಕೊಂಡ ತೀವ್ರತೆಯ ಹೆದರಿಕೆಯನ್ನು ನರನ ಸಾಹಸದಿಂದ ಗೆಲಿದನು. ಪಾರ್ಥನನ್ನು ಪ್ರೀತಿಸಿದನು.
ಪದಾರ್ಥ (ಕ.ಗ.ಪ)
ಸೆಣಸು-ಸ್ಪರ್ಧಿಸು, ಪತಿಕರಿಸು-ಪ್ರೀತಿಸು, ನೆಗಳು-ಮೊಸಳೆ, ದರಧುರ-ತೀವ್ರತೆ, ಭೀತಿ-ಹೆದರಿಕೆ, ಧನಂಜಯ, ಪಾರ್ಥ, ನರ-ಅರ್ಜುನನ ಹೆಸರುಗಳು
ಟಿಪ್ಪನೀ (ಕ.ಗ.ಪ)
ಧನಂಜಯ-ಯುಧಿಷ್ಠಿರನ ರಾಜಸೂಯ ಸಮಯದಲ್ಲಿ ವಿಪುಲವಾದ ಧನರಾಶಿಯನ್ನು ಅರ್ಜುನ ಸಂಪಾದಿಸಿ ತಂದನಾಗಿ ಧನಂಜಯನೆಂಬ ಹೆಸರು.
ಪಾರ್ಥ-ಪೃಥೆಯ ಮಗನಾದ ಕಾರಣ ಪಾರ್ಥನೆಂದು ಹೆಸರು.
ನರ-ಸ್ವಾಯಂಭುವ ಮನ್ವಂತರದಲ್ಲಿ ಧರ್ಮ ಮುನಿಯ ಪುತ್ರರಲ್ಲಿ ಹಿರಿಯವ ನರ. ಈತನ ತಮ್ಮ ನಾರಾಯಣ, ನರ ನಾರಾಯಣರಿಬ್ಬರೂ ಅರ್ಜುನ, ಕೃಷ್ಣರಾಗಿ ಜನಿಸಿದರು.
ನೆಗಳಿನ ಧರಧುರದ ಭೀತಿ: - ಇಂದ್ರದ್ಯಮ್ನ ಮಹರಾಜನೆಂಬುವನು ಒಮ್ಮೆ ಮಸಳೆಗೆ ಸಿಕ್ಕಿಕೊಂಡು ವಿಷ್ಣುವಿನಿಂದ ಕಾಪಾಡಲ್ಪಟ್ಟ ಕಥೆ.
ಬೇರೆಡೆ ಟಿಪ್ಪಣಿಯಲ್ಲಿ ಆ ಕಥೆ ಲಭ್ಯವಿದೆ.
ಏಕಲವ್ಯ ; ಹಿರಣ್ಯಧನುವೆಂಬ ಬೇಡನ ಸಾಕು ಮಗ. ಬಿಲ್ಲುಗಾರಿಕೆಯನ್ನು ಕಲಿಯುವುದಕ್ಕಾಗಿ ದ್ರೋಣಾಚಾರ್ಯರನ್ನು ಬೇಡಿ, ತಿರಸ್ಕೃತನಾಗಿ, ಮಣ್ಣಿನಿಂದ ದ್ರೋಣನ ಪ್ರತಿಬಿಂಬವನ್ನು ಮಾಡಿ ಅದನ್ನೇ ಗುರುವೆಂದು ಭಾವಿಸಿ ಅಭ್ಯಾಸ ಕ್ರಮದಿಂದ ಮಹಾಶೂರನೆನಿಸಿದ್ದ. ಒಮ್ಮೆ ಕುರು ಪಾಂಡವರು ಬೇಟೆಗೆ ಹೋಗಿದ್ದಾಗ, ಇವರ ಬೇಟೆ ನಾಯಿ ಏಕಲವ್ಯನನ್ನು ಅಟ್ಟಿಕೊಂಡು ಹೋಗಲಾಗಿ ಇವನು ಅದನ್ನು ಕೊಂದನು. ಕುರು ಪಾಂಡವರು ಇವನ ಧನುರ್ವಿದ್ಯಾ ನೈಪುಣ್ಯಕ್ಕೆ ಮೆಚ್ಚಿ ದ್ರೋಣರಿಗೆ ತಿಳಿಸಿದರು. ದ್ರೋಣರು ಆಮೂಲಾಗ್ರವಾಗಿ ಏಕಲವ್ಯನಿಂದ ತಿಳಿದು ಗುರುದಕ್ಷಿಣೆಗೆ ಪ್ರತಿಯಾಗಿ ಅವನ ಬಲಗೈ ಹೆಬ್ಬೆಟ್ಟನ್ನು ತೆಗೆದುಕೊಂಡರು. ಇವನು ದುರ್ಯೋಧನನ ಪರವಾಗಿ ಯುದ್ಧದಲ್ಲಿ ಹೋರಾಡಿ ಶ್ರೀಕೃಷ್ಣನಿಂದ ಹತನಾದ.
ಮೂಲ ...{Loading}...
ಹಿರಿದು ಮೆಚ್ಚಿ ಧನಂಜಯನನಾ
ದರಿಸಿ ಕೊಟ್ಟನು ಸಕಲ ವಿದ್ಯವ
ನುರುತರ ಪ್ರೇಮದಲಿ ಸೆಣಸಿದೊಡೇಕಲವ್ಯಕನ
ಬೆರಳ ಕೊಂಡನು ಪಾರ್ಥನನು ಪತಿ
ಕರಿಸಿದನು ತನಗಾದ ನೆಗಳಿನ
ದರಧುರದ ಭೀತಿಯನು ಗೆಲಿದನು ನರನ ದೆಸೆಯಿಂದ ॥7॥
೦೦೮ ಇರಲಿರಲು ಫಲುಗುಣನನೆಕ್ಕಟಿ ...{Loading}...
ಇರಲಿರಲು ಫಲುಗುಣನನೆಕ್ಕಟಿ
ಗರೆದು ಶಸ್ತ್ರಾಸ್ತ್ರ ಪ್ರಪಂಚದ
ಪರಮ ಸಿದ್ಧಾಂತವನು ಕಲಿಸಿ ಮಹಾಸ್ತ್ರ ಸಂಗತಿಯ
ಕರುಣಿಸಿದನಾಗ್ನೇಯ ಪೌರಂ
ದರ ಮಹಾ ವಾಯವ್ಯ ವಾರುಣ
ಹರಸಖ ಬ್ರಹ್ಮಾಸ್ತ್ರ ಸೌರೋರಗ ನಗಾದಿಗಳ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗಿರಲು, ಫಲುಗುಣನನ್ನು ದ್ರೋಣರು ರಹಸ್ಯವಾಗಿ ಕರೆದು ಶಸ್ತ್ರಾಸ್ತ್ರ ಪ್ರಪಂಚದ ಪರಮ ಸಿದ್ಧಾಂತವನ್ನು ಕಲಿಸಿ ಆಗ್ನೇಯ, ಇಂದ್ರ, ವಾಯುವ್ಯ, ವಾರುಣ, ಕುಬೇರ, ಬ್ರಹ್ಮಾಸ್ತ್ರ, ಸೌರ, ಉರಗ, ನಗ ಮೊದಲಾದ ಮಹಾಸ್ತ್ರಗಳ ವಿಷಯವನ್ನು ಕಲಿಸಿ ಉಪದೇಶಿಸಿದರು.
ಪದಾರ್ಥ (ಕ.ಗ.ಪ)
ಎಕ್ಕಟಿ-ರಹಸ್ಯ, ಪೌರಂದರ-ಇಂದ್ರ, ಹರಸಖ-ಕುಬೇರ
ಟಿಪ್ಪನೀ (ಕ.ಗ.ಪ)
ಫಲುಗುಣ-ಅರ್ಜುನ; ಉತ್ತರಾಫಲ್ಗುನೀ ನಕ್ಷತ್ರದಲ್ಲಿ ಜನಿಸಿದವನಾದುದರಿಂದ ಫಲುಗುಣ ಎಂದು ಹೆಸರು
ಮೂಲ ...{Loading}...
ಇರಲಿರಲು ಫಲುಗುಣನನೆಕ್ಕಟಿ
ಗರೆದು ಶಸ್ತ್ರಾಸ್ತ್ರ ಪ್ರಪಂಚದ
ಪರಮ ಸಿದ್ಧಾಂತವನು ಕಲಿಸಿ ಮಹಾಸ್ತ್ರ ಸಂಗತಿಯ
ಕರುಣಿಸಿದನಾಗ್ನೇಯ ಪೌರಂ
ದರ ಮಹಾ ವಾಯವ್ಯ ವಾರುಣ
ಹರಸಖ ಬ್ರಹ್ಮಾಸ್ತ್ರ ಸೌರೋರಗ ನಗಾದಿಗಳ ॥8॥
೦೦೯ ಒನ್ದು ದಿನ ...{Loading}...
ಒಂದು ದಿನ ವೊಡ್ಡೋಲಗಕೆ ಗುರು
ಬಂದು ಮನ್ನಿಸಿಕೊಂಡು ನಸುನಗು
ತೆಂದನಾ ಧೃತರಾಷ್ಟ್ರ ಗಂಗಾಸೂನು ವಿದುರರಿಗೆ
ಇಂದು ಪರಿಯಂತರವು ನಿಮ್ಮಯ
ನಂದನರನೋದಿಸಿದೆನವರಭಿ
ನಂದನೀಯರೊ ನಿಂದ್ಯರೋ ನೀವ್ ನೋಡಬೇಕೆಂದ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಂದು ದಿನ ದ್ರೋಣನು ರಾಜಸಭೆಗೆ ಬಂದು, ಗೌರವಿಸಲ್ಪಟ್ಟು, ನಸುನಗುತ್ತ ಧೃತರಾಷ್ಟ್ರ, ಭೀಷ್ಮ, ವಿದುರರಿಗೆ ಬಿನ್ನವಿಸಿದನು. ಇವತ್ತಿನ ತನಕ ನಿಮ್ಮ ಮಕ್ಕಳನ್ನು ಓದಿಸಿದ್ದೇನೆ. ಅವರು ಅಭಿನಂದನೆಗೆ ಅರ್ಹರಾದವರೋ ಅಥವಾ ನಿಂದನೀಯರೋ ಅನ್ನುವುದನ್ನು ನೀವು ನೋಡಬೇಕು ಎಂದು ಹೇಳಿದನು.
ಪದಾರ್ಥ (ಕ.ಗ.ಪ)
ಮನ್ನಿಸಿಕೊಂಡು-ಗೌರವಿಸಲ್ಪಟ್ಟು, ಪರಿಯಂತ-ತನಕ, ಅಭಿನಂದನೀಯರೋ-ಸಂತೋಷವನ್ನುಂಟು ಮಾಡುವರೋ
ಮೂಲ ...{Loading}...
ಒಂದು ದಿನ ವೊಡ್ಡೋಲಗಕೆ ಗುರು
ಬಂದು ಮನ್ನಿಸಿಕೊಂಡು ನಸುನಗು
ತೆಂದನಾ ಧೃತರಾಷ್ಟ್ರ ಗಂಗಾಸೂನು ವಿದುರರಿಗೆ
ಇಂದು ಪರಿಯಂತರವು ನಿಮ್ಮಯ
ನಂದನರನೋದಿಸಿದೆನವರಭಿ
ನಂದನೀಯರೊ ನಿಂದ್ಯರೋ ನೀವ್ ನೋಡಬೇಕೆಂದ ॥9॥
೦೧೦ ಸಕಲ ಶಸ್ತ್ರಾಸ್ತ್ರದಲಿ ...{Loading}...
ಸಕಲ ಶಸ್ತ್ರಾಸ್ತ್ರದಲಿ ಗಜ ಹಯ
ನಿಕರದೇರಾಟದಲಿ ಲೋಕ
ಪ್ರಕಟ ಮಾರ್ಗೀಕೃತ ಚತುರ್ದಶ ವಿಮಲ ವಿದ್ಯದಲಿ
ಸಕಲ ಲಕ್ಷಣ ಗಣಿತ ಗಾರುಡ
ವಿಕಟ ಭರತಾದ್ಯಖಿಲ ಕಳೆಯಲಿ
ವಿಕಳರೋ ಸಂಪೂರ್ಣರೋ ನೀವ್ ನೋಡಬೇಕೆಂದ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಕಲ ಶಸ್ತ್ರಾಸ್ತ್ರಗಳಲ್ಲಿ, ಗಜತುರಗಾದಿಗಳ ಏರಾಟದಲ್ಲಿ, ದೇಶೀ ಮತ್ತು ಮಾರ್ಗಗಳಿಂದ ಕೂಡಿದ ಹದಿನಾಲ್ಕು ವಿದ್ಯೆಗಳಲ್ಲಿ, ಲಕ್ಷಣ ಶಾಸ್ತ್ರಗಳು, ಗಣಿತ, ಗಾರುಡ, ಭರತನಾಟ್ಯ ಮೊದಲಾದ ಕಲೆಗಳಲ್ಲಿ ಕೊರತೆಯುಳ್ಳವರೋ ಅಥವಾ ಸಂಪೂರ್ಣರೋ ಅನ್ನುವುದನ್ನು ನೀವು ನೋಡಬೇಕೆಂದು ದ್ರೋಣರು ಹೇಳಿದರು.
ಪದಾರ್ಥ (ಕ.ಗ.ಪ)
ವಿಕಳ-ಕೊರತೆ
ಮೂಲ ...{Loading}...
ಸಕಲ ಶಸ್ತ್ರಾಸ್ತ್ರದಲಿ ಗಜ ಹಯ
ನಿಕರದೇರಾಟದಲಿ ಲೋಕ
ಪ್ರಕಟ ಮಾರ್ಗೀಕೃತ ಚತುರ್ದಶ ವಿಮಲ ವಿದ್ಯದಲಿ
ಸಕಲ ಲಕ್ಷಣ ಗಣಿತ ಗಾರುಡ
ವಿಕಟ ಭರತಾದ್ಯಖಿಲ ಕಳೆಯಲಿ
ವಿಕಳರೋ ಸಂಪೂರ್ಣರೋ ನೀವ್ ನೋಡಬೇಕೆಂದ ॥10॥
೦೧೧ ಲೇಸನೆನ್ದಿರಿ ಸುತರ ...{Loading}...
ಲೇಸನೆಂದಿರಿ ಸುತರ ವಿದ್ಯಾ
ಭ್ಯಾಸ ರಚಿತ ಶ್ರಮವನಾವರಿ
ದೈಸು ನಿಮಗುತ್ಸವವಲೇ ತಪ್ಪಾವುದುಚಿತವಲೆ
ಈಸು ದಿನವೀ ಮಕ್ಕಳೊಡನಾ
ಯಾಸವಿದು ಸಾಮಾನ್ಯವೇ ನಾ
ವೇಸು ಧನ್ಯರೊ ನಿಮ್ಮ ದೆಸೆಯಿಂದೆಂದನಾ ಭೀಷ್ಮ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಳ್ಳೆಯದು ಹೇಳಿದಿರಿ. ಮಕ್ಕಳ ವಿದ್ಯಾಭ್ಯಾಸ ಸಿದ್ಧ ಮಾಡುವುದರಲ್ಲಿನ ನಿಮ್ಮ ಪರಿಶ್ರಮವನ್ನು ನಾವು ತಿಳಿದುಕೊಳ್ಳುವುದು ನಿಮಗೆ ಸಂತೋಷ ಅಲ್ಲವೇ ! ಅದರಲ್ಲಿ ತಪ್ಪು ಯಾವುದು ? ಯೋಗ್ಯವಾಗಿದೆ. ಇಷ್ಟು ದಿವಸ ಮಕ್ಕಳೊಂದಿಗಿನ ನಿಮ್ಮ ಕಷ್ಟ ಸಾಮಾನ್ಯವೇ ? ನಿಮ್ಮ ದೆಸೆಯಿಂದ ನಾವು ಎಷ್ಟು ಧನ್ಯರೋ ಎಂದು ಭೀಷ್ಮರು ಸಂತೋಷ ವ್ಯಕ್ತ ಪಡಿಸಿದರು.
ಪದಾರ್ಥ (ಕ.ಗ.ಪ)
ರಚಿತ-ಸಿದ್ಧಮಾಡುವುದು, ಆಯಾಸ-ಕಷ್ಟ
ಮೂಲ ...{Loading}...
ಲೇಸನೆಂದಿರಿ ಸುತರ ವಿದ್ಯಾ
ಭ್ಯಾಸ ರಚಿತ ಶ್ರಮವನಾವರಿ
ದೈಸು ನಿಮಗುತ್ಸವವಲೇ ತಪ್ಪಾವುದುಚಿತವಲೆ
ಈಸು ದಿನವೀ ಮಕ್ಕಳೊಡನಾ
ಯಾಸವಿದು ಸಾಮಾನ್ಯವೇ ನಾ
ವೇಸು ಧನ್ಯರೊ ನಿಮ್ಮ ದೆಸೆಯಿಂದೆಂದನಾ ಭೀಷ್ಮ ॥11॥
೦೧೨ ಆದಿಯಲಿ ಪುರವೈರಿ ...{Loading}...
ಆದಿಯಲಿ ಪುರವೈರಿ ಬಳಿಕಿನೊ
ಳಾದನಗ್ಗದ ಪರಶುಧರನೀ
ಮೇದಿನಿಯೊಳೀ ಯುಗದಲನುಪಮ ಶಸ್ತ್ರ ವಿದ್ಯೆದಲಿ
ವೈದಿಕದಲೀ ನಿಮ್ಮವೋಲ್ ದೊರೆ
ಯಾದನಾರು ಕುಮಾರಕರ ಪು
ಣ್ಯೋದಯದ ಕಂದೆರವೆಯೈಸಲೆಯೆಂದನಾ ಭೀಷ್ಮ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಯುಗದಲ್ಲಿ ಮೊದಲು ಪುರವೈರಿಯಾದ ಪರಮಶಿವ, ನಂತರ ಪರಶುರಾಮನು ಅಸಮಾನ ಶಸ್ತ್ರವಿದ್ಯೆಯಲ್ಲಿ ಶ್ರೇಷ್ಠರಾದರು. ವೈದಿಕ ವಿದ್ಯೆಯಲ್ಲಿ ನಿಮಗೆ ಸಮಾನರಾದವರು ಯಾರಿದ್ದಾರೆ ? ಮಕ್ಕಳ ಪುಣ್ಯೋದಯದ ಕಣ್ಣು ತೆರೆಯಿತಲ್ಲವೇ ! ಎಂದು ಭೀಷ್ಮ ಹೇಳಿದನು.
ಪದಾರ್ಥ (ಕ.ಗ.ಪ)
ಕಂದೆರವೆ-ಕಣ್ಣು ತೆರೆಯುವುದು,
ಟಿಪ್ಪನೀ (ಕ.ಗ.ಪ)
ಪುರವೈರಿ : ತಾರಕಾಸುರನ ಮಕ್ಕಳಾದ ತಾರಾಕ್ಷ, ಕಮಲಾಕ್ಷ, ವಿದ್ಯುನ್ಮಾಲಿಗಳು ಅಂತರಿಕ್ಷದಲ್ಲಿ ಕ್ರಮವಾಗಿ ಸುವರ್ಣಪುರ, ರಜತಪುರ, ಆಯಸಪುರಗಳನ್ನು ನಿರ್ಮಿಸಿಕೊಂಡಿದ್ದರು. ಶಿವನು ಭೂಮಿಯನ್ನೆ ರಥವಾಗಿಸಿ, ನಾಲ್ಕು ವೇದಗಳನ್ನು ನಾಲ್ಕು ಕುದುರೆಗಳನ್ನಾಗಿ ಮಾಡಿ ಆ ರಥಕ್ಕೆ ಹೂಡಿ, ಬ್ರಹ್ಮನ ಸಾರಥ್ಯದಲ್ಲಿ ಮಂದರ ಪರ್ವತದ ಬಿಲ್ಲಿನಲ್ಲಿ ವಿಷ್ಣುವನ್ನೇ ಬಾಣವಾಗಿ ಕಲ್ಪಿಸಿಕೊಂಡು ಪುಷ್ಯ ನಕ್ಷತ್ರ ಯೋಗದಲ್ಲಿ ಆಕಾಶದಲ್ಲಿ ಸುತ್ತುತ್ತಿದ್ದ ಆ ಮೂರು ಪುರಗಳೂ ಒಂದು ಕಡೆ ಸೇರಿದ್ದ ಸಂಧಿಯನ್ನು ಕಂಡು ಒಂದೇ ಬಾಣದಿಂದಲೇ ಸುಟ್ಟು ನಾಶಮಾಡಿದ.
ಪರಶುರಾಮ : ನೋಡಿ ಟಿಪ್ಪಣಿ ಪದ್ಯ 26 ಸಂಧಿ 6 ಆದಿಪರ್ವ
ಮೂಲ ...{Loading}...
ಆದಿಯಲಿ ಪುರವೈರಿ ಬಳಿಕಿನೊ
ಳಾದನಗ್ಗದ ಪರಶುಧರನೀ
ಮೇದಿನಿಯೊಳೀ ಯುಗದಲನುಪಮ ಶಸ್ತ್ರ ವಿದ್ಯೆದಲಿ
ವೈದಿಕದಲೀ ನಿಮ್ಮವೋಲ್ ದೊರೆ
ಯಾದನಾರು ಕುಮಾರಕರ ಪು
ಣ್ಯೋದಯದ ಕಂದೆರವೆಯೈಸಲೆಯೆಂದನಾ ಭೀಷ್ಮ ॥12॥
೦೧೩ ಜೋಯಿಸನ ಕರೆದಖಿಳ ...{Loading}...
ಜೋಯಿಸನ ಕರೆದಖಿಳ ದಿವಸದೊ
ಳಾಯಿದರು ಶುಭದಿನವನವಗೆ ಪ
ಸಾಯದುಡುಗೊರೆ ಸಹಿತ ಮನ್ನಿಸಿ ಮನೆಗೆ ಕಳುಹಿಸಿದರು
ರಾಯನಾಜ್ಞೆಯೊಳಿಭ ಪುರದ ಹೊರ
ಗಾಯತದ ಭೂಮಿಯಲಿ ವಾಸ್ತು ವಿ
ಧೇಯವೆನಲಳವಡಿಸಿದರು ಹನ್ನೆರಡು ಯೋಜನವ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜೋಯಿಸನನ್ನು ಕರೆಸಿ, ಎಲ್ಲರೂ ಕುಳಿತು ಒಂದು ಶುಭದಿನವನ್ನು ಆರಿಸಿದರು. ಅವನಿಗೆ ಸಂಭಾವನೆ, ಉಡುಗೊರೆ ಸಹಿತ ಗೌರವಿಸಿ ಮನೆಗೆ ಕಳುಹಿಸಿದರು. ರಾಜನ ಆಜ್ಞೆಯಂತೆ ಹಸ್ತಿನಾಪುರದ ಹೊರಗೆ ವಿಸ್ತಾರವಾದ ಭೂಮಿಯಲ್ಲಿ ವಾಸ್ತುಶಾಸ್ತ್ರಕ್ಕೆ ಅನುಗುಣವಾಗಿ ಹನ್ನೆರಡು ಯೋಜನ ಭೂಮಿಯನ್ನು ಸಿದ್ಧಗೊಳಿಸಿದರು.
ಪದಾರ್ಥ (ಕ.ಗ.ಪ)
ಪಸಾಯ-ಸಂಭಾವನೆ, ಮನ್ನಿಸಿ-ಗೌರವಿಸಿ, ಆಯತ-ವಿಸ್ತಾರ, ವಾಸ್ತುವಿಧೇಯ-ವಾಸ್ತುಶಾಸ್ತ್ರಕ್ಕೆ ಅನುಗುಣವಾಗಿ, ಅಳವಡು-ಹೊಂದಿಸು, ಯೋಜನ-ಸುಮಾರು ಹನ್ನೆರಡು ಮೈಲಿ
ಟಿಪ್ಪನೀ (ಕ.ಗ.ಪ)
ವಾಸ್ತು ವಿಧೇಯಕ -ಆದಿಪರ್ವ, 7-13,
ಶಿಲ್ಪಶಾಸ್ತ್ರದಲ್ಲಿ ಯಾವುದೇ ಭೂಮಿಯನ್ನು ನಿರ್ಮಾಣಕ್ಕಾಗಿ ಅಳವಡಿಸುವ ಮುನ್ನ ಅದನ್ನು ಶುದ್ಧಿಗೊಳಿಸಿ ವಾಸ್ತುಮಂಡಲವನ್ನು ಅಲ್ಲಿ ರಚಿಸಬೇಕು. ಅದನ್ನು ಕುಮಾರವ್ಯಾಸ ವಾಸ್ತುವಿಧೇಯವೆನಲಳವಡಿಸಿದರು ಎಂದು ಸೂಚಿಸಿದ್ದಾನೆ. - ಡಾ.ಜಿ.ಜ್ಞಾನಾನಂದ, ಕನ್ನಡ ಮಹಾಭಾರತಗಳಲ್ಲಿ ಶಿಲ್ಪ ಮತ್ತು ಶಿಲ್ಪಿ , ಸಂಕೃತಿ ಸಾಹಿತ್ಯ ಪ್ರತಿಷ್ಠಾನ, ಬೆಂಗಳೂರು, 2007
ಮೂಲ ...{Loading}...
ಜೋಯಿಸನ ಕರೆದಖಿಳ ದಿವಸದೊ
ಳಾಯಿದರು ಶುಭದಿನವನವಗೆ ಪ
ಸಾಯದುಡುಗೊರೆ ಸಹಿತ ಮನ್ನಿಸಿ ಮನೆಗೆ ಕಳುಹಿಸಿದರು
ರಾಯನಾಜ್ಞೆಯೊಳಿಭ ಪುರದ ಹೊರ
ಗಾಯತದ ಭೂಮಿಯಲಿ ವಾಸ್ತು ವಿ
ಧೇಯವೆನಲಳವಡಿಸಿದರು ಹನ್ನೆರಡು ಯೋಜನವ ॥13॥
೦೧೪ ತರವಿಡಿದು ರಚಿಸಿದರು ...{Loading}...
ತರವಿಡಿದು ರಚಿಸಿದರು ನೆರೆಯು
ಪ್ಪರಿಗೆಗಳ ಹಂತಿಗಳನಂತಃ
ಪುರವ ತತ್ಪಾಶ್ರ್ವದಲಿ ಭಾರಿಯ ಭದ್ರ ಭವನಿಕೆಯ
ಪುರಜನದ ಪರಿಜನದ ನೆಲೆಯು
ಪ್ಪರಿಗೆಗಳ ರಚಿಸಿದರು ಹಸ್ತಿನ
ಪುರದ ಸಿರಿ ಸಾಮಾನ್ಯವೇ ನರನಾಥ ಕೇಳ್ ಎಂದ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕ್ರಮವಿಡಿದು ಉಪ್ಪರಿಗೆಗಳ ಸಮೂಹವನ್ನು ಸಾಲುಗಳಲ್ಲಿ ರಚಿಸಿದರು. ಅವುಗಳ ಪಕ್ಕಗಳಲ್ಲಿ ರಾಣೀವಾಸಕ್ಕಾಗಿ ದೊಡ್ಡದಾದ ಅಂದವಾದ ಪ್ರಾಸಾದಗಳನ್ನು ನಿರ್ಮಿಸಿದರು. ಪಟ್ಟಣದ ಜನರ, ಪರಿವಾರದವರ ನಿವಾಸಕ್ಕಾಗಿ ಸೌಧಗಳನ್ನು ರಚಿಸಿದರು. ಹಸ್ತಿನಾಪುರದ ಐಶ್ವರ್ಯವೇನು ಸಾಮಾನ್ಯವೆ ? ಜನಮೇಜಯನೇ ಕೇಳೆಂದು ವೈಶಂಪಾಯನರು ಹೇಳಿದರು.
ಪದಾರ್ಥ (ಕ.ಗ.ಪ)
ತರ-ಕ್ರಮ, ನೆರೆ-ಸಮೂಹ, ಹಂತಿ-ಸಾಲು, ಭದ್ರ-ಅಂದವಾದ, ಭವನಿಕೆ-ಪ್ರಾಸಾದ, ಪರಿಜನ-ಪರಿವಾರ, ನೆಲೆ-ನಿವಾಸ
ಟಿಪ್ಪನೀ (ಕ.ಗ.ಪ)
ಭದ್ರ ಭವನಿಕೆ ಎಂಬುದು ಶಿಲ್ಪಶಾಸ್ತ್ರಕ್ಕೆ ಸೇರಿದ ಶಬ್ದ. ಒಂದು ಬಗೆಯ ಮಂಟಪ. ಇದನ್ನು ಮಾನಸಾರದಲ್ಲಿ ಏಕಂ ವಾ ದ್ವಿ-ತ್ರಿ-ದಂಡೇನ ನಿಗರ್ಮಮಮಂ ಭದ್ರಂ ಏವ ವ35 ಎಂದು ಹೇಳಿದ್ದು ಇದರಲ್ಲಿ ಹನ್ನೆರಡು ಅಂತಸ್ತುಗಳು ಇರಬಹುದು ಎಂದೂ ಹೇಳಲಾಗಿದೆ. ಇದರ ನಿರ್ಗಮದ ಅಗಲವು ಒಂದು, ಎರಡು ಅಥವಾ ಮೂರು ದಂಡಗಳಷ್ಟಿರಬಹುದು ಎಂದೂ ಹೇಳಲಾಗಿದೆ. ಇಲ್ಲಿ ಈ ಭದ್ರಭವನಿಕೆಯು ಕೇವಲ ರಾಜಕುಟುಂಬಗಳಿಗೆ ಮಾತ್ರ ಎಂಬ ಧೋರಣೆಯು ಇದೆ. ಅಂತಃಪುರವನ್ನು ಇಲ್ಲೂ ಪ್ರತ್ಯೇಕಿಸಲಾಗಿದೆ. ಪುರಜನರು ಮತ್ತು ಸೇವಕರಿಗಾಗಿ ಪ್ರತ್ಯೇಕ ಉಪ್ಪರಿಗೆಯನ್ನು ನಿರ್ಮಿಸಲಾಯಿತಂತೆ. ಇಂತಹ ದೊಡ್ಡ ಕಟ್ಟಡವನ್ನು ನಿರ್ಮಾಣ ಮಾಡುವಷ್ಟು ಶ್ರೀಮಂತಿಕೆ ಹಸ್ತಿನಪುರಕ್ಕೆ ಇತ್ತು ಎಂಬುದನ್ನೂ ಸ್ಪಷ್ಟಪಡಿಸಲಾಗಿದೆ. ಇಲ್ಲಿಯ ನುಡಿಗಟ್ಟು ಕವಿಗೆ ಶಿಲ್ಪಶಾಸ್ತ್ರದ ಪರಿಚಯ ಚನ್ನಾಗಿತ್ತು ಎಂದು ಹೇಳಲೇಬೇಕಾಗುವಷ್ಟು ಬಲವಾಗಿದೆ.
ಡಾ.ಜಿ.ಜ್ಞಾನಾನಂದ, ಕನ್ನಡ ಮಹಾಭಾರತಗಳಲ್ಲಿ ಶಿಲ್ಪ ಮತ್ತು ಶಿಲ್ಪಿ , ಸಂಕೃತಿ ಸಾಹಿತ್ಯ ಪ್ರತಿಷ್ಠಾನ, ಬೆಂಗಳೂರು, 2007
ಮೂಲ ...{Loading}...
ತರವಿಡಿದು ರಚಿಸಿದರು ನೆರೆಯು
ಪ್ಪರಿಗೆಗಳ ಹಂತಿಗಳನಂತಃ
ಪುರವ ತತ್ಪಾಶ್ರ್ವದಲಿ ಭಾರಿಯ ಭದ್ರ ಭವನಿಕೆಯ
ಪುರಜನದ ಪರಿಜನದ ನೆಲೆಯು
ಪ್ಪರಿಗೆಗಳ ರಚಿಸಿದರು ಹಸ್ತಿನ
ಪುರದ ಸಿರಿ ಸಾಮಾನ್ಯವೇ ನರನಾಥ ಕೇಳೆಂದ ॥14॥
೦೧೫ ನೆರೆದುದಗಣಿತ ಕರಿ ...{Loading}...
ನೆರೆದುದಗಣಿತ ಕರಿ ತುರಂಗಮ
ವರವರೂಥ ಪದಾತಿ ಭೂಮೀ
ಶ್ವರರು ಬಂದರು ನೋಡಲೆಂದು ದಿಗಂತ ಸಂಗತಿಯ
ವರ ಮುಹೂರ್ತದ ದಿವಸದಲಿ ಸಾ
ಗರದ ತೆರೆ ಬಿಟ್ಟಂತೆ ಕಳನೊಳು
ನೆರೆದು ನಿಂದುದು ಜನನಿಕರವೇನೆಂಬೆನದ್ಭುತವ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಲೆಕ್ಕ ಮಾಡಲಾಗದಷ್ಟು ಆನೆ, ಕುದುರೆ, ಶ್ರೇಷ್ಠ ರಥಗಳು ಕಾಲಾಳುಗಳು ಬಂದು ಒಟ್ಟುಗೂಡಿದುವು. ನಡೆಯುವ ಘಟನೆಯನ್ನು ನೋಡಲೆಂದು ಎಲ್ಲ ದಿಕ್ಕುಗಳಿಂದಲೂ ಪೃಥಿವೀಶ್ವರರು ಬಂದರು. ಆ ಶ್ರೇಷ್ಠ ಮುಹೂರ್ತದ ದಿವಸದಲ್ಲಿ ಸಿದ್ಧವಾದ ಪ್ರದೇಶದಲ್ಲಿ ಗುಂಪಾಗಿ ಜನಸಮೂಹವು ಸಮುದ್ರದ ಅಲೆಗಳಂತೆ ಸೇರಿದ ಅದ್ಭುತವನ್ನು ಏನೆಂದು ಹೇಳುವುದು !
ಪದಾರ್ಥ (ಕ.ಗ.ಪ)
ಅಗಣಿತ-ಲೆಕ್ಕಮಾಡಲಾಗದಷ್ಟು, ತುರಂಗಮ-ಕುದುರೆ, ತೆರೆ-ಅಲೆ, ನೆರೆ-ಗುಂಪು
ಮೂಲ ...{Loading}...
ನೆರೆದುದಗಣಿತ ಕರಿ ತುರಂಗಮ
ವರವರೂಥ ಪದಾತಿ ಭೂಮೀ
ಶ್ವರರು ಬಂದರು ನೋಡಲೆಂದು ದಿಗಂತ ಸಂಗತಿಯ
ವರ ಮುಹೂರ್ತದ ದಿವಸದಲಿ ಸಾ
ಗರದ ತೆರೆ ಬಿಟ್ಟಂತೆ ಕಳನೊಳು
ನೆರೆದು ನಿಂದುದು ಜನನಿಕರವೇನೆಂಬೆನದ್ಭುತವ ॥15॥
೦೧೬ ಸನ್ದಣಿಸಿ ನೃಪರಾಣಿವಾಸದ ...{Loading}...
ಸಂದಣಿಸಿ ನೃಪರಾಣಿವಾಸದ
ಗೊಂದಣದ ದಂಡಿಗೆಗಳಿಳಿದವು
ಮುಂದೆ ಹೊಯ್ಕಂಬಿಗಳ ಜೋಡಿಯ ಜನ ಪಲಾಯನದ
ಬಂದರಾ ಗಾಂಧಾರಿ ಕುಂತಿಯ
ರಿಂದುಮುಖಿಯರ ಮೇಳದಲಿ ನಡೆ
ತಂದುದಗಣಿತ ಪುರವಧೂ ನಿಕುರುಂಬವೊಗ್ಗಿನಲಿ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜರ ರಾಣಿವಾಸದ ಪಲ್ಲಕ್ಕಿಗಳು ಗುಂಪಾಗಿ ಬಂದು ಒಟ್ಟಾಗಿ ಇಳಿದವು. ಅವುಗಳ ಮುಂದೆ ಜನರನ್ನು ಓಡಿಸುವ, ಹೊಡೆಯುವ ಕೋಲುಗಳನ್ನು ಹಿಡಿದ ಇಬ್ಬರು ಭಟರು ಬಂದರು. ಗಾಂಧಾರಿ ಕುಂತಿಯರು ಚಂದ್ರನಂತೆ ಮುಖವುಳ್ಳ ಸುಂದರಿಯರ ಕೂಟದಲ್ಲಿ ಬಂದರು. ಲೆಕ್ಕವಿಲ್ಲದಷ್ಟು ಪುರಸ್ತ್ರೀ ಸಮೂಹ ಒಟ್ಟುಗೂಡಿ ನಡೆತಂದಿತು.
ಪದಾರ್ಥ (ಕ.ಗ.ಪ)
ಸಂದಣಿಸಿ-ಗುಂಪಾಗಿ, ಗೊಂದಣ-ಗುಂಪು, ದಂಡಿಗೆ-ಪಲ್ಲಕ್ಕಿ, ಹೊಯ್ಕಂಬಿ-ಹೊಡೆಯುವ ಕೋಲು, ಪಲಾಯನ-ಓಡುವಿಕೆ, ಮೇಳ-ಗುಂಪು, ನಿಕುರುಂಬ-ಸಮೂಹ, ಒಗ್ಗು-ಒಟ್ಟುಗೂಡಿ
ಮೂಲ ...{Loading}...
ಸಂದಣಿಸಿ ನೃಪರಾಣಿವಾಸದ
ಗೊಂದಣದ ದಂಡಿಗೆಗಳಿಳಿದವು
ಮುಂದೆ ಹೊಯ್ಕಂಬಿಗಳ ಜೋಡಿಯ ಜನ ಪಲಾಯನದ
ಬಂದರಾ ಗಾಂಧಾರಿ ಕುಂತಿಯ
ರಿಂದುಮುಖಿಯರ ಮೇಳದಲಿ ನಡೆ
ತಂದುದಗಣಿತ ಪುರವಧೂ ನಿಕುರುಂಬವೊಗ್ಗಿನಲಿ ॥16॥
೦೧೭ ವಿದುರ ಧೃತರಾಷ್ಟ್ರರು ...{Loading}...
ವಿದುರ ಧೃತರಾಷ್ಟ್ರರು ಸಹಿತ ಸುರ
ನದಿಯ ಮಗನೈತಂದು ನವ ಭ
ದ್ರದಲಿ ಕುಳ್ಳಿರ್ದನು ಪಸಾಯತ ಸಚಿವ ಜನ ಸಹಿತ
ಒದರುವಗ್ಗದ ವಂದಿಗಳ ಬಿಡೆ
ಸದೆವ ಬಹು ವಿಧ ವಾದ್ಯರವ ಮಿ
ಕ್ಕೊದೆದು ಹೊಯ್ದುದು ಲೋಕ ಮೂರರ ಕರ್ಣಕೋಟರವ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿದುರ ಧೃತರಾಷ್ಟ್ರರೊಡನೆ ಗಂಗೆಯ ಮಗ ಭೀಷ್ಮನು ಬಂದು ಸಾಮಂತರಾಜರು ಮತ್ತು ಮಂತ್ರಿಗಳೊಂದಿಗೆ ಹೊಸ ಉಪ್ಪರಿಗೆಯಲ್ಲಿ ಕುಳಿತಿದ್ದನು. ಶ್ರೇಷ್ಠರಾದ ಸ್ತುತಿಪಾಠಕರ ಕೂಗುವಿಕೆ, ಅಪ್ಪಳಿಸುವ ಬಹು ವಿಧವಾದ ವಾದ್ಯಗಳ ಶಬ್ದ ಹೆಚ್ಚಾಗಿ ಮೂರು ಲೋಕದ ಜನರ ಕಿವಿಗಳ ರಂಧ್ರವನ್ನು ತಾಗಿದವು.
ಪದಾರ್ಥ (ಕ.ಗ.ಪ)
ಪಸಾಯತ-ಸಾಮಂತ ರಾಜ, ವಂದಿ-ಸ್ತುತಿಪಾಠಕ, ಸದೆ-ಅಪ್ಪಳಿಸು, ಕರ್ಣಕೋಟರ-ಕಿವಿಯ ರಂಧ್ರ, ಒದೆ-ಅಪ್ಪಳಿಸು
ಮೂಲ ...{Loading}...
ವಿದುರ ಧೃತರಾಷ್ಟ್ರರು ಸಹಿತ ಸುರ
ನದಿಯ ಮಗನೈತಂದು ನವ ಭ
ದ್ರದಲಿ ಕುಳ್ಳಿರ್ದನು ಪಸಾಯತ ಸಚಿವ ಜನ ಸಹಿತ
ಒದರುವಗ್ಗದ ವಂದಿಗಳ ಬಿಡೆ
ಸದೆವ ಬಹು ವಿಧ ವಾದ್ಯರವ ಮಿ
ಕ್ಕೊದೆದು ಹೊಯ್ದುದು ಲೋಕ ಮೂರರ ಕರ್ಣಕೋಟರವ ॥17॥
೦೧೮ ಪರಿಪರಿಯ ಶೃಙ್ಗಾರದಲಿ ...{Loading}...
ಪರಿಪರಿಯ ಶೃಂಗಾರದಲಿ ನೂ
ರ್ವರು ಸಹಿತ ದುರ್ಯೋಧನನು ನಾ
ಲ್ವರು ಸಹಿತ ಯಮನಂದನನು ತಮ್ಮೆರಡು ಪಾಶ್ರ್ವದಲಿ
ಗುರುತನುಜ ಕೃಪ ಕರ್ಣ ಸುಬಲಾ
ದ್ಯರು ಪುರೋಭಾಗದಲಿ ಭೂಮೀ
ಶ್ವರರಸಂಖ್ಯರು ಹಿಂದೆ ಬರಲೈತಂದನಾ ದ್ರೋಣ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿಧ ವಿಧ ಶೃಂಗಾರದಿಂದ ನೂರ್ವರು ತಮ್ಮಂದಿರೊಂದಿಗೆ ದುರ್ಯೋಧನನು, ನಾಲ್ವರು ತಮ್ಮಂದಿರೊಂದಿಗೆ ಯುಧಿಷ್ಠಿರನು, ಅವನ ಎರಡು ಪಕ್ಕಗಳಲ್ಲಿ ಅಶ್ವತ್ಥಾಮ, ಕೃಪ, ಕರ್ಣ, ಸುಬಲನೇ ಮೊದಲಾದವರು, ಅವರ ಮುಂಭಾಗದಲ್ಲಿ ಅಸಂಖ್ಯ ಭೂಮೀಶ್ವರರು, ಇವರೆಲ್ಲರೂ ಹಿಂದೆ ಬರುತ್ತಿರಲು ದ್ರೋಣನು ಮುಂಭಾಗದಲ್ಲಿ ಬಂದನು.
ಪದಾರ್ಥ (ಕ.ಗ.ಪ)
ಪಾಶ್ರ್ವ-ಪಕ್ಕ, ಪುರೋಭಾಗ-ಮುಂಭಾಗ
ಮೂಲ ...{Loading}...
ಪರಿಪರಿಯ ಶೃಂಗಾರದಲಿ ನೂ
ರ್ವರು ಸಹಿತ ದುರ್ಯೋಧನನು ನಾ
ಲ್ವರು ಸಹಿತ ಯಮನಂದನನು ತಮ್ಮೆರಡು ಪಾಶ್ರ್ವದಲಿ
ಗುರುತನುಜ ಕೃಪ ಕರ್ಣ ಸುಬಲಾ
ದ್ಯರು ಪುರೋಭಾಗದಲಿ ಭೂಮೀ
ಶ್ವರರಸಂಖ್ಯರು ಹಿಂದೆ ಬರಲೈತಂದನಾ ದ್ರೋಣ ॥18॥
೦೧೯ ಹೊಯ್ದು ಕೋಣನ ...{Loading}...
ಹೊಯ್ದು ಕೋಣನ ಕುರಿಯ ಹಿಂಡಿನ
ತೊಯ್ದ ರಕ್ತೋದನದ ರಾಶಿಯ
ನೈದೆ ದೆಸೆದೆಸೆಗಳಲಿ ಬಲಿದರು ಭೂತ ತುಷ್ಟಿಗಳ
ಕೈದುಗಳ ತನಿವೆಳಗು ನೈದಿಲ
ಮೈದುನನ ಮಾರಂಕವೆನೆ ಬಂ
ದೈದೆ ರಂಗಸ್ಥಳವ ಹೊಕ್ಕುದು ರಾಜಸುತನಿಕರ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುರಿಕೋಣಗಳ ಹಿಂಡನ್ನು ಹೊಡೆದು ಆ ರಕ್ತದಿಂದ ನೆನೆಯಿಸಿದ ಅನ್ನದ ರಾಶಿಯನ್ನು ದಿಕ್ಕು ದಿಕ್ಕುಗಳಲ್ಲಿ ಭೂತ ತೃಪ್ತಿಗಾಗಿ ಬಲಿ ಸಮರ್ಪಿಸಿದರು. ಅವರು ಹಿಡಿದ ಆಯುಧಗಳ ಉಜ್ವಲವಾದ ಪ್ರಕಾಶವು ಸೂರ್ಯನ ಪ್ರಕಾಶಕ್ಕೆ ಪ್ರತಿಸ್ಪರ್ಧಿಯೋ ಎನ್ನುವಂತಿರಲು ರಾಜಕುಮಾರರ ಸಮೂಹ ಬಂದು ರಂಗಸ್ಥಳವನ್ನು ಪ್ರವೇಶಿಸಿತು.
ಪದಾರ್ಥ (ಕ.ಗ.ಪ)
ಓದನ-ಅನ್ನ, ತುಷ್ಟಿ-ತೃಪ್ತಿ, ಕೈದು-ಆಯುಧ, ತನಿವೆಳಗು-ಉಜ್ವಲವಾದ ಪ್ರಕಾಶ, ನೈದಿಲ ಮೈದುನ-ಸೂರ್ಯ,( ಹೇಗೆ?) ಮಾರಂಕ-ಪ್ರತಿಸ್ಪರ್ಧೆ
ಮೂಲ ...{Loading}...
ಹೊಯ್ದು ಕೋಣನ ಕುರಿಯ ಹಿಂಡಿನ
ತೊಯ್ದ ರಕ್ತೋದನದ ರಾಶಿಯ
ನೈದೆ ದೆಸೆದೆಸೆಗಳಲಿ ಬಲಿದರು ಭೂತ ತುಷ್ಟಿಗಳ
ಕೈದುಗಳ ತನಿವೆಳಗು ನೈದಿಲ
ಮೈದುನನ ಮಾರಂಕವೆನೆ ಬಂ
ದೈದೆ ರಂಗಸ್ಥಳವ ಹೊಕ್ಕುದು ರಾಜಸುತನಿಕರ ॥19॥
೦೨೦ ಬಾಗಿಲಲಿ ಕಟ್ಟಿಗೆಯ ...{Loading}...
ಬಾಗಿಲಲಿ ಕಟ್ಟಿಗೆಯ ಕೈಗಳ
ಲಾ ಗುರೂದ್ಭವ ಕೃಪರು ನಿಂದರು
ಸೀಗುರಿಯ ಸುಳಿವಿನ ತರಂಗದ ಸಾಲ ಸತ್ತಿಗೆಯ
ಸಾಗರದ ಗಳ ಗರ್ಜನೋದ್ಭಟೆ
ಹೋಗಲಿದಕದು ಪಾಡೆಯೆನೆ ಚಾ
ಪಾಗಮಾಚಾರ್ಯನ ಘಡಾವಣೆ ಘಲ್ಲಿಸಿತು ಜಗವ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಂಗಸ್ಥಳದ ಬಾಗಿಲಲ್ಲಿ ಅಶ್ವತ್ಥಾಮ ಕೃಪರು ಕೈಗಳಲ್ಲಿ ದಂಡವನ್ನು ಹಿಡಿದು ನಿಂತರು. ಗುಂಡಾಗಿ ಸುತ್ತುವ ಚಾಮರಗಳು, ಸಾಲಾಗಿ ಛತ್ರಿಗಳು ತೆರೆ ತೆರೆಯಾಗಿ ಸುಳಿದವು. ಧನುರ್ವಿದ್ಯೆಯಲ್ಲಿ ಪಾರಂಗತರಾದ ದ್ರೋಣರ ಸಡಗರ, ಸಾಗರದ ಅಲೆಗಳ ಅತಿಶಯವಾದ ನಿನಾದಕ್ಕೆ ಹೋಲಿಕೆ ಎನ್ನುವಂತೆ ಜಗತ್ತನ್ನು ವ್ಯಾಪಿಸಿತು.
ಪದಾರ್ಥ (ಕ.ಗ.ಪ)
ಕಟ್ಟಿಗೆ-ದಂಡ, ಗುರೂದ್ಭವ-ಅಶ್ವತ್ಥಾಮ, ಸೀಗುರಿ-ಚಾಮರ, ಸತ್ತಿಗೆ-ಛತ್ರ, ಗಳಗರ್ಜನೆ- ಗಂಟಲ ಗರ್ಜನೆ , ಉದ್ಭಟೆ-ಅತಿಶಯ,
ಪಾಡು-ಹೋಲಿಕೆ, ಚಾಪಾಗಮಾಚಾರ್ಯ-ದ್ರೋಣ, ಧನುರ್ವಿದ್ಯೆಯಲ್ಲಿ ಪಾರಂಗತ, ಗಡಾವಣೆ-ಸಡಗರ, ಘಲ್ಲಿಸು-ವ್ಯಾಪಿಸು
ಮೂಲ ...{Loading}...
ಬಾಗಿಲಲಿ ಕಟ್ಟಿಗೆಯ ಕೈಗಳ
ಲಾ ಗುರೂದ್ಭವ ಕೃಪರು ನಿಂದರು
ಸೀಗುರಿಯ ಸುಳಿವಿನ ತರಂಗದ ಸಾಲ ಸತ್ತಿಗೆಯ
ಸಾಗರದ ಗಳ ಗರ್ಜನೋದ್ಭಟೆ
ಹೋಗಲಿದಕದು ಪಾಡೆಯೆನೆ ಚಾ
ಪಾಗಮಾಚಾರ್ಯನ ಘಡಾವಣೆ ಘಲ್ಲಿಸಿತು ಜಗವ ॥20॥
೦೨೧ ಆ ಮಹಾ ...{Loading}...
ಆ ಮಹಾ ಕಳನೆಂಟು ದಿಕ್ಕಿನ
ಹೋಮ ತೀರಲು ಘಳಿಗೆವಟ್ಟಲ
ಸೌಮುಹೂರ್ತಿಕರಾಯತ ಧ್ವನಿ ಸಾರ ಸಮಯದಲಿ
ಸೋಮ ವಂಶೋದ್ಭವ ನೃಪಾಲ ಲ
ಲಾಮನಗ್ಗದ ಧರ್ಮಸುತನು
ದ್ದಾಮ ಗುರುವಿಂಗೆರಗಿ ನಿಂದನು ನುಡಿಸಿದನು ಧನುವ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಮಹಾರಂಗಭೂಮಿಯ ಎಂಟು ದಿಕ್ಕಿನಲ್ಲೂ ಹೋಮ ಮುಗಿದ ಮೇಲೆ, ಗಳಿಗೆ ಬಟ್ಟಲಿನಿಂದ ಸುಮುಹೂರ್ತವನ್ನು ಘೋಷಿಸುವ ಜೋಯಿಸರ ಸಮ್ಮತವೇ ಎಂದು ಕೇಳುವ ಧ್ವನಿಯ ಶುಭ ಸಮಯದಲ್ಲಿ ಚಂದ್ರವಂಶದಲ್ಲಿ ಹುಟ್ಟಿದ ನೃಪಾಲ ಶ್ರೇಷ್ಠನಾದ ಧರ್ಮಸುತನು ಮುಂದೆ ಬಂದು ಶ್ರೇಷ್ಠ ಗುರುವಿಗೆ ನಮಸ್ಕರಿಸಿ ನಿಂತನು. ಧನುಸ್ಸಿನ ಧ್ವನಿ ಹೊರಡಿಸಿದನು.
ಪದಾರ್ಥ (ಕ.ಗ.ಪ)
ಕಳ-ರಂಗಭೂಮಿ, ಘಳಿಗೆವಟ್ಟಲ-ಗಳಿಗೆ ಬಟ್ಟಲು (ಗಳಿಗೆಯನ್ನು ಗೊತ್ತು ಮಾಡುವ ಸಾಧನ)
ಸೌಮೂಹೂರ್ತಿಕರು-ಜೋಯಿಸರು, ಆಯತ ಧ್ವನಿ-(ಮಂಗಳ ಕಾರ್ಯದಲ್ಲಿ ಸಮ್ಮತವೇ ಎಂದು ಕೇಳುವ ಧ್ವನಿ)
ಲಲಾಮ-ಶ್ರೇಷ್ಠ, ನುಡಿಸಿದನು-ಧ್ವನಿ ಹೊರಡಿಸಿದನು.
ಮೂಲ ...{Loading}...
ಆ ಮಹಾ ಕಳನೆಂಟು ದಿಕ್ಕಿನ
ಹೋಮ ತೀರಲು ಘಳಿಗೆವಟ್ಟಲ
ಸೌಮುಹೂರ್ತಿಕರಾಯತ ಧ್ವನಿ ಸಾರ ಸಮಯದಲಿ
ಸೋಮ ವಂಶೋದ್ಭವ ನೃಪಾಲ ಲ
ಲಾಮನಗ್ಗದ ಧರ್ಮಸುತನು
ದ್ದಾಮ ಗುರುವಿಂಗೆರಗಿ ನಿಂದನು ನುಡಿಸಿದನು ಧನುವ ॥21॥
೦೨೨ ಅರಸ ಕೇಳು ...{Loading}...
ಅರಸ ಕೇಳು ಯುಧಿಷ್ಠಿರನು ಪರಿ
ಪರಿಯಯೆಸುಗೆಯ ಚಾಪವಿದ್ಯಾ
ನಿರತಿಶಯಕೋ ಯೆಂದು ಗರ್ಜಿಸಿತಾ ಸಭಾ ಜಲಧಿ
ಸುರಗಿ ಹಿರಿಯುಬ್ಬಣವಡಾಯುಧ
ಹರಿಗೆ ಚಕ್ರ ಮುಸುಂಡಿ ಮುದ್ಗರ
ಪರಶು ಮೊದಲಾದಖಿಳ ಶಸ್ತ್ರ ಶ್ರಮವ ತೋರಿಸಿದ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುಧಿಷ್ಠಿರನು ತೋರಿಸಿದ ಬಗೆ ಬಗೆಯ ಬಾಣ ಪ್ರಯೋಗದ ಅತಿ ಉತ್ತಮವಾದ ಚಾಪವಿದ್ಯೆಗೆ ಆ ಸಭಾಸಾಗರ ‘ಓ’ ಯೆಂದು ಗಟ್ಟಿಯಾಗಿ ಕೂಗಿತು. ನಂತರ, ಖಡ್ಗ, ದೊಡ್ಡದಾದ ಮೊನಚಾದ ಆಯುಧ, ಒಂದು ಬಗೆಯ ಕತ್ತಿ ಗುರಾಣಿ, ಚಕ್ರ, ಮುಸುಂಡಿ, ಗದೆ, ಕೊಡಲಿ, ಮೊದಲಾದ ಎಲ್ಲಾ ಆಯುಧಗಳ ಪರಿಶ್ರಮವನ್ನು ತೋರಿಸಿದನು.
ಪದಾರ್ಥ (ಕ.ಗ.ಪ)
ನಿರತಿಶಯ-ಅತಿ ಉತ್ತಮ, ಗರ್ಜಿಸಿತು-ಗಟ್ಟಿಯಾಗಿ ಕೂಗಿತು.
ಮೂಲ ...{Loading}...
ಅರಸ ಕೇಳು ಯುಧಿಷ್ಠಿರನು ಪರಿ
ಪರಿಯಯೆಸುಗೆಯ ಚಾಪವಿದ್ಯಾ
ನಿರತಿಶಯಕೋ ಯೆಂದು ಗರ್ಜಿಸಿತಾ ಸಭಾ ಜಲಧಿ
ಸುರಗಿ ಹಿರಿಯುಬ್ಬಣವಡಾಯುಧ
ಹರಿಗೆ ಚಕ್ರ ಮುಸುಂಡಿ ಮುದ್ಗರ
ಪರಶು ಮೊದಲಾದಖಿಳ ಶಸ್ತ್ರ ಶ್ರಮವ ತೋರಿಸಿದ ॥22॥
೦೨೩ ಕರಿ ತುರಗದೇರಾಟ ...{Loading}...
ಕರಿ ತುರಗದೇರಾಟ ಮೊದಲಾ
ಗಿರೆ ಸಮಸ್ತ ನೃಪಾಲ ವಿದ್ಯಾ
ಪರಿಣತಿಗೆ ಹಿಗ್ಗಿದರು ಭೀಷ್ಮಾದಿಗಳು ಹರುಷದಲಿ
ಪರಿವಿಡಿಗಳಲಿ ನಕುಲ ಸಹದೇ
ವರು ವಿವಿಂಶತಿ ಚಿತ್ರಬಲ ದು
ರ್ಮರುಷಣರು ತೋರಿದರು ಶ್ರಮವನು ನೂರ್ವರೊಗ್ಗಿನಲಿ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆನೆ, ಕುದುರೆಗಳನ್ನು ಹತ್ತಿ ಸವಾರಿ ಮಾಡುವ ಮೊದಲಾದ ಎಲ್ಲ ರಾಜ ವಿದ್ಯೆಯ ಪಾಂಡಿತ್ಯಕ್ಕೆ ಭೀಷ್ಮಾದಿಗಳು ಸಂತೋಷದಿಂದ ಹಿಗ್ಗಿದರು. ಯುಧಿಷ್ಠಿರನಾದ ಮೇಲೆ ಅನುಕ್ರಮವಾಗಿ ನಕುಲ, ಸಹದೇವರು, ಹಾಗೂ ವಿವಿಂಶತಿ, ಚಿತ್ರ ಬಲ ದುರ್ಮರುಷಣ ಮೊದಲಾದ ನೂರ್ವರು ಒಟ್ಟಾಗಿ ತಮ್ಮ ಶಸ್ತ್ರಾಭ್ಯಾಸವನ್ನು ತೋರಿಸಿದರು.
ಪದಾರ್ಥ (ಕ.ಗ.ಪ)
ಏರಾಟ-ಸವಾರಿ ಮಾಡುವ, ಪರಿವಿಡಿ-ಅನುಕ್ರಮ, ಪರಿಶ್ರಮ-ಶಸ್ತ್ರಾಭ್ಯಾಸ
ಮೂಲ ...{Loading}...
ಕರಿ ತುರಗದೇರಾಟ ಮೊದಲಾ
ಗಿರೆ ಸಮಸ್ತ ನೃಪಾಲ ವಿದ್ಯಾ
ಪರಿಣತಿಗೆ ಹಿಗ್ಗಿದರು ಭೀಷ್ಮಾದಿಗಳು ಹರುಷದಲಿ
ಪರಿವಿಡಿಗಳಲಿ ನಕುಲ ಸಹದೇ
ವರು ವಿವಿಂಶತಿ ಚಿತ್ರಬಲ ದು
ರ್ಮರುಷಣರು ತೋರಿದರು ಶ್ರಮವನು ನೂರ್ವರೊಗ್ಗಿನಲಿ ॥23॥
೦೨೪ ಈತ ಧರ್ಮಜನಿವರು ...{Loading}...
ಈತ ಧರ್ಮಜನಿವರು ಮಾದ್ರೀ
ಜಾತರೀತ ಸುಲೋಚನನು ಬಳಿ
ಕೀತ ದೀರ್ಘಕವಿಂದನಿವನಿಂತೀತನಿವನೆಂದು
ಈತ ಧನುವಿನಲೀತ ಖಡ್ಗದ
ಲೀತ ಪರಿಘದಲೀತ ಕುಂತದ
ಲೀತ ಬಲುಹೆಂದಂಧ ಭೂಪತಿಗರುಹಿದನು ವಿದುರ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪ್ರದರ್ಶನ ನಡೆಯುತ್ತಿರುವಾಗ ವಿದುರನು ಅಂಧ ಭೂಪತಿ ಧೃತರಾಷ್ಟ್ರನಿಗೆ ಪ್ರತಿಯೊಬ್ಬರ ಪರಿಚಯ ಮಾಡಿಕೊಡುತ್ತಾ, ಈತ ಧರ್ಮಜನು, ಇವರು ಮಾದ್ರೀಪುತ್ರರು, ಈತ ಸುಲೋಚನ, ಈತ ದೀರ್ಘಕ, ವಿಂದನಿವನು ಎಂದು ಮುಂತಾಗಿ ಇಂಥಿಂಥಿವರೆಂದು ಅವರವರ ಹೆಸರನ್ನೂ, ಈತ ಧನುವಿನಲ್ಲಿ, ಈತ ಖಡ್ಗದಲ್ಲಿ, ಈತ ಗದೆಯಲ್ಲಿ ಈತ ಭರ್ಜಿಯಲ್ಲಿ ಪರಾಕ್ರಮಿ ಎಂದು ತಿಳಿಸುತ್ತಿದ್ದನು.
ಪದಾರ್ಥ (ಕ.ಗ.ಪ)
ಪರಿಘ-ಗದೆ, ಕುಂತ-ಭರ್ಜಿ
ಮೂಲ ...{Loading}...
ಈತ ಧರ್ಮಜನಿವರು ಮಾದ್ರೀ
ಜಾತರೀತ ಸುಲೋಚನನು ಬಳಿ
ಕೀತ ದೀರ್ಘಕವಿಂದನಿವನಿಂತೀತನಿವನೆಂದು
ಈತ ಧನುವಿನಲೀತ ಖಡ್ಗದ
ಲೀತ ಪರಿಘದಲೀತ ಕುಂತದ
ಲೀತ ಬಲುಹೆಂದಂಧ ಭೂಪತಿಗರುಹಿದನು ವಿದುರ ॥24॥
೦೨೫ ಬಳಿಕ ನಾನಾ ...{Loading}...
ಬಳಿಕ ನಾನಾ ದೇಶದರಸುಗ
ಳಿಳಿದು ತಮಗಳವಟ್ಟ ಶಸ್ತ್ರಾ
ವಳಿಗಳಲಿ ತೋರಿದರು ಮೆಚ್ಚಿಸಿ ತನ್ಮಹಾಸಭೆಯ
ನೆಲನನಬ್ಬರಿಸುವ ಸಭಾ ಕಳ
ಕಳದ ಮೊರೆಯನು ತಿವಿವ ಪರಿ ವೆ
ಗ್ಗಳದ ಪಾಯವಧಾರು ಮಸಗಿದುದೊಂದು ಥಟ್ಟಿನಲಿ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಳಿಕ ನಾನಾ ದೇಶದ ಅರಸುಗಳು ಕಳಕ್ಕೆ ಇಳಿದು ತಮತಮಗೆ ಹೊಂದಿಸಿಕೊಂಡ ಆಯುಧಗಳಲ್ಲಿ ತಮ್ಮ ಪರಿಶ್ರಮ ತೋರಿಸಿ ಆ ಮಹಾಸಭೆಯನ್ನು ಮೆಚ್ಚಿಸಿದರು. ಭೂಮಿಯನ್ನು ಅಬ್ಬರಿಸುವ ಸಭೆಯ ಕಳಕಳದ ಆರ್ಭಟವನ್ನು ಮೀರಿಸಿದ ‘ಎಚ್ಚರಿಕೆ’ ಯ ಘೋಷ ಒಂದು ಕಡೆಯಲ್ಲಿ ಹೆಚ್ಚಾಗಿ ಕೇಳಿ ಬಂತು.
ಪದಾರ್ಥ (ಕ.ಗ.ಪ)
ಅಳವಟ್ಟ-ಹೊಂದಿಸಿಕೊಂಡ, ಮೊರೆ-ಆರ್ಭಟ, ಥಟ್ಟು-ಗುಂಪು, ಮಸಗು-ಹೆಚ್ಚಾಗು
ಮೂಲ ...{Loading}...
ಬಳಿಕ ನಾನಾ ದೇಶದರಸುಗ
ಳಿಳಿದು ತಮಗಳವಟ್ಟ ಶಸ್ತ್ರಾ
ವಳಿಗಳಲಿ ತೋರಿದರು ಮೆಚ್ಚಿಸಿ ತನ್ಮಹಾಸಭೆಯ
ನೆಲನನಬ್ಬರಿಸುವ ಸಭಾ ಕಳ
ಕಳದ ಮೊರೆಯನು ತಿವಿವ ಪರಿ ವೆ
ಗ್ಗಳದ ಪಾಯವಧಾರು ಮಸಗಿದುದೊಂದು ಥಟ್ಟಿನಲಿ ॥25॥
೦೨೬ ಹಗಲು ಕೈದೀವಿಗೆಯ ...{Loading}...
ಹಗಲು ಕೈದೀವಿಗೆಯ ಬಿರುದಿನ
ವಿಗಡನಿವನಾರೆನಲು ಭೂಪಾ
ಳಿಗಳ ರತ್ನಪ್ರಭೆಯ ಲಹರಿಯ ಲಾವಣಿಗೆ ಮಿಗಿಲು
ಝಗಝಗಿಪ ತನುರುಚಿಯ ಮಿಂಚನು
ಮಿಗುವ ಖಡ್ಗಚ್ಛವಿಯ ತಲೆಯೊ
ತ್ತುಗಳ ಚಾವಡಿಯೊಳಗೆ ಕೌರವ ರಾಯನೈತಂದ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸುಗಳ ಸಮೂಹ ತೊಟ್ಟಿರುವ ಆಭರಣದ ಮಣಿಗಳ ಪ್ರಕಾಶದ ಕಾಂತಿಯ ಸಮೂಹ ಹಗಲು ಕೈ ದೀಪಗಳಂತೆ ಮಿಂಚುತ್ತಿವೆ. ಇವನಾರು ಎಂದು ಎಲ್ಲರೂ ಬೆರಗಾಗುತ್ತಿರಲು ಥಳಥಳಿಸುವ ದೇಹ ಕಾಂತಿಯ, ಮಿಂಚನ್ನು ಮೀರಿಸುವ ಖಡ್ಗಗಳ ಕಾಂತಿಯ ಸಮೂಹದೊಡನೆ ಕೌರವರಾಯನು ಸಭಾ ಭವನಕ್ಕೆ ಬಂದನು.
ಪದಾರ್ಥ (ಕ.ಗ.ಪ)
ಕೈದೀವಿಗೆ-ಕೈದೀಪ, ವಿಗಡ-ಭಯಂಕರ, ಪ್ರಭೆ-ಪ್ರಕಾಶ, ಲಹರಿ-ಕಾಂತಿ, ಲಾವಣಿಗೆ-ಸಮೂಹ, ರುಚಿ-ಕಾಂತಿ, ಛವಿ-ಕಾಂತಿ, ತಲೆಯೊತ್ತು-ಸಮೂಹ
ಮೂಲ ...{Loading}...
ಹಗಲು ಕೈದೀವಿಗೆಯ ಬಿರುದಿನ
ವಿಗಡನಿವನಾರೆನಲು ಭೂಪಾ
ಳಿಗಳ ರತ್ನಪ್ರಭೆಯ ಲಹರಿಯ ಲಾವಣಿಗೆ ಮಿಗಿಲು
ಝಗಝಗಿಪ ತನುರುಚಿಯ ಮಿಂಚನು
ಮಿಗುವ ಖಡ್ಗಚ್ಛವಿಯ ತಲೆಯೊ
ತ್ತುಗಳ ಚಾವಡಿಯೊಳಗೆ ಕೌರವ ರಾಯನೈತಂದ ॥26॥
೦೨೭ ಹೋ ನಿರನ್ತರ ...{Loading}...
ಹೋ ನಿರಂತರ ಗಜಬಜವು ತಾ
ನೇನು ಜೀಯವಧಾರು ಚಿತ್ತವ
ಧಾನವೆಂದುದು ಸಾಲ ಕಂಚುಕಿ ನಿಕರ ಕೈ ನೆಗಹಿ
ಭಾನುವಿನ ಭಾರಣೆಯವೋಲು
ತ್ಥಾನಮುಖ ಚತುರಾಕ್ಷ ಭೂಪನ
ಸೂನು ಹೊಕ್ಕನು ರಂಗವನು ಭೀಷ್ಮಾದಿಗಳಿಗೆರಗಿ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಭೆಯ ಗದ್ದಲವನ್ನಡಗಿಸಲು “ಹೋ ಒಂದೇಸಮನೆ ಗದ್ದಲವಿದೇನು ? ಸ್ವಾಮಿ, ಲಕ್ಷ್ಯಕೊಟ್ಟು ಗಮನದಿಂದ ಕೇಳುವುದು” ಎಂದು ಸಾಲಾಗಿ ನಿಂತಿದ್ದ ಸೇವಕ ಸಮೂಹ ಕೈ ಮೇಲಕ್ಕೆತ್ತಿ ಹೇಳಿತು. ಸೂರ್ಯನ ಹೊಣೆಗಾರಿಕೆಯ ಹೋಲುವಂತೆ ಎತ್ತಿದ ಮುಖದ ಅಂಧಭೂಪನ ಮಗನು ಭೀಷ್ಮಾದಿಗಳಿಗೆ ನಮಸ್ಕರಿಸಿ ರಂಗಸ್ಥಳವನ್ನು ಪ್ರವೇಶಿಸಿದನು.
ಪದಾರ್ಥ (ಕ.ಗ.ಪ)
ಗಜಬಜ-ಗದ್ದಲ,
ನಿರಂತರ- ಒಂದೇ ಸಮನೆ,
ಅವಧಾರು-ಲಕ್ಷ್ಯ ಕೊಡು,
ಅವಧಾನ-ಗಮನ, ಕಂಚುಕಿ-ಸೇವಕ, ಭಾರಣೆ-ಹೊಣೆಗಾರಿಕೆ,
ಚತುರಾಕ್ಷ-ಅಂಧ ( ಚತುರತೆಯನ್ನೇ ಕಣ್ಣಾಗಿ ಉಳ್ಳವನು)
ಮೂಲ ...{Loading}...
ಹೋ ನಿರಂತರ ಗಜಬಜವು ತಾ
ನೇನು ಜೀಯವಧಾರು ಚಿತ್ತವ
ಧಾನವೆಂದುದು ಸಾಲ ಕಂಚುಕಿ ನಿಕರ ಕೈ ನೆಗಹಿ
ಭಾನುವಿನ ಭಾರಣೆಯವೋಲು
ತ್ಥಾನಮುಖ ಚತುರಾಕ್ಷ ಭೂಪನ
ಸೂನು ಹೊಕ್ಕನು ರಂಗವನು ಭೀಷ್ಮಾದಿಗಳಿಗೆರಗಿ ॥27॥
೦೨೮ ಬವರಿಯಲಿ ಪಯಪಾಡಿನಲಿ ...{Loading}...
ಬವರಿಯಲಿ ಪಯಪಾಡಿನಲಿ ಮೈ
ಲವಣಿಯಲಿ ಬಿನ್ನಾಣದಲಿ ಭಾ
ರವಣೆಯಲಿ ದೆಖ್ಖಾಳದಲಿ ವೇಗಾಯ್ಲ ರೇಖೆಯಲಿ
ತಿವಿವ ಮೊನೆಯೊಂದರಲಿ ನೂರಂ
ಗವನು ತೋರ್ಪ ವಿಭೇದದಲಿ ಕೌ
ರವ ಮಹೀಪತಿ ತೋರಿದನು ಶ್ರಮವನು ಕಠಾರಿಯಲಿ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಿರುಗುವಿಕೆ, ಹೆಜ್ಜೆ ಹಾಕುವ ರೀತಿ, ಮೈಕಾಂತಿ, ಚಾತುರ್ಯ, ಅಟಾಟೋಪ, ವಿಲಾಸ, ತ್ವರಿತವಾಗಿ ಚಲಿಸುವ ಅಂದಚಂದ, ತಿವಿಯುವ ತೀಕ್ಷ್ಣತೆ - ಇವುಗಳಲ್ಲೆಲ್ಲಾ ಒಂದೊಂದರಲ್ಲಿಯೂ ನೂರಂದವನ್ನು ತೋರಿಸುವ ಪ್ರಕಾರಗಳಲ್ಲಿ ಭರ್ಜಿಯಲ್ಲಿ ತನ್ನ ಸಾಧನೆಯನ್ನು ಕೌರವ ಮಹೀಪತಿ ತೋರಿಸಿದನು.
ಪದಾರ್ಥ (ಕ.ಗ.ಪ)
ಬವರಿ-ತಿರುಗುವಿಕೆ, ಪಯಪಾಡು-ಹೆಜ್ಜೆ ಹಾಕುವ ರೀತಿ, ಮೈಲವಣಿ-ಮೈಕಾಂತಿ, ಬಿನ್ನಾಣ-ಚಾತುರ್ಯ, ಭಾರವಣೆ-ಅಟಾಟೋಪ, ದೆಖ್ಖಾಳ-ವಿಲಾಸ, ವೇಗಾಯ್ಲ ರೇಖೆ-ತ್ವರಿತವಾಗಿ ಚಲಿಸುವ ಅಂದ ಚೆಂದ, ಮೊನೆ-ತೀಕ್ಷ್ಣತೆ, ಶ್ರಮ-ಸಾಧನೆ
ಮೂಲ ...{Loading}...
ಬವರಿಯಲಿ ಪಯಪಾಡಿನಲಿ ಮೈ
ಲವಣಿಯಲಿ ಬಿನ್ನಾಣದಲಿ ಭಾ
ರವಣೆಯಲಿ ದೆಖ್ಖಾಳದಲಿ ವೇಗಾಯ್ಲ ರೇಖೆಯಲಿ
ತಿವಿವ ಮೊನೆಯೊಂದರಲಿ ನೂರಂ
ಗವನು ತೋರ್ಪ ವಿಭೇದದಲಿ ಕೌ
ರವ ಮಹೀಪತಿ ತೋರಿದನು ಶ್ರಮವನು ಕಠಾರಿಯಲಿ ॥28॥
೦೨೯ ಸುರಗಿಯಲಿ ಚಕ್ರದಲಿ ...{Loading}...
ಸುರಗಿಯಲಿ ಚಕ್ರದಲಿ ಹಲದಲಿ
ಹರಿಗೆಯಲಿ ಕಕ್ಕಡೆಯಲಸಿಯಲಿ
ಪರಿಘದಲಿ ಸಬಳದಲಿ ಗದೆಯಲಿ ಬಿಂಡಿವಾಳದಲಿ
ಪರಿಪರಿಯ ಚಿತ್ರದ ಚಮತ್ಕೃತಿ
ಕರವ ತೋರಿಸಿದನು ಶರಾಸನ
ಶರ ವಿಸರ ಸಂಧಾನದೊಳಗಹುದೆನಿಸಿದನು ಸಭೆಯ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಖಡ್ಗ, ಚಕ್ರ, ನೇಗಿಲು, ಗುರಾಣಿ, ಗರಗಸದಂತೆ ಬಾಯುಳ್ಳ ಆಯುಧ, ಗದೆ, ಈಟಿ, ಕೈಯಿಂದ ಎಸೆಯುವ ಸಣ್ಣ ಭಲ್ಲೆಯಂತಹ ಆಯುಧ- ಈ ಆಯುಧಗಳಲ್ಲಿ ಬಗೆ ಬಗೆಯ ಆಶ್ಚರ್ಯಕರ ಚಮತ್ಕಾರಗಳನ್ನು ತೋರಿಸಿದನು. ಬಿಲ್ಲಿನಲ್ಲಿ ಬಾಣಗಳ ಸಮೂಹವನ್ನು ಪ್ರಯೋಗ ಮಾಡುವುದರಲ್ಲೂ ಸಭಿಕರಿಂದ ಅಹುದೆನಿಸಿಕೊಂಡನು.
ಪದಾರ್ಥ (ಕ.ಗ.ಪ)
ಸುರಗಿ-ಕತ್ತಿ, ಹಲ-ನೇಗಿಲು, ಹರಿಗೆ-ಗುರಾಣಿ, ಕಕ್ಕಡೆ-ಗರಗಸದಂತೆ ಬಾಯುಳ್ಳ ಒಂದು ಆಯುಧ, ಅಸಿ-ಖಡ್ಗ, ಪರಿಘ-ಗದೆ,
ಸಬಳ-ಈಟಿ, ಬಿಂಡಿವಾಳ-ಕೈಯಿಂದ ಎಸೆಯುವ ಸಣ್ಣ ಭಲ್ಲೆಯಂತಹ ಒಂದು ಆಯುಧ, ಶರಾಸನ-ಬಿಲ್ಲು,
ಸಂಧಾನ-ಪ್ರಯೋಗ, ವಿಸರ-ಸಮೂಹ
ಮೂಲ ...{Loading}...
ಸುರಗಿಯಲಿ ಚಕ್ರದಲಿ ಹಲದಲಿ
ಹರಿಗೆಯಲಿ ಕಕ್ಕಡೆಯಲಸಿಯಲಿ
ಪರಿಘದಲಿ ಸಬಳದಲಿ ಗದೆಯಲಿ ಬಿಂಡಿವಾಳದಲಿ
ಪರಿಪರಿಯ ಚಿತ್ರದ ಚಮತ್ಕೃತಿ
ಕರವ ತೋರಿಸಿದನು ಶರಾಸನ
ಶರ ವಿಸರ ಸಂಧಾನದೊಳಗಹುದೆನಿಸಿದನು ಸಭೆಯ ॥29॥
೦೩೦ ಧೀರುರೇ ಜಗಜಟ್ಟಿ ...{Loading}...
ಧೀರುರೇ ಜಗಜಟ್ಟಿ ರಾಜ ಕು
ಮಾರ ಚೌಪಟಮಲ್ಲ ಕುರುಕುಲ
ಕೈರವಾಮೃತಕಿರಣ ಧಿರು ಧಿರು ಭಲರೆ ಭಲರೆನುತ
ಭೂರಿ ಸಭೆಯಲಿ ಸುಲಿದು ಬಿಸುಡುವ
ಸೀರೆಗಳ ತೂಪಿರಿದು ಸುಳಿವು
ಪ್ಪಾರತಿಯ ತನಿ ಹರಕೆ ತಳಿತುದು ತಾಯ ನೇಮದಲಿ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಭಲೇ, ಭಾಪು, ಪ್ರಸಿದ್ಧನಾದ ಮಲ್ಲ, ರಾಜಕುಮಾರ, ನಾಲ್ಕೂ ಕಡೆಯಲ್ಲಿ ಕಾದಾಡಬಲ್ಲ ವೀರ, ಕುರುಕುಲ ಕನ್ನೈದಿಲೆಗೆ ಚಂದ್ರ, ಭಲೆ, ಭಲೆ, ಭಾಪುರೆ” ಎನ್ನುತ್ತ ತುಂಬಿದ ಸಭೆಯಲ್ಲಿ ಉದ್ಘೋಷ ಮಾಡಿದರು. ತಾಯಿಯ ಅಪ್ಪಣೆಯ ಪ್ರಕಾರ, ತಾವು ಹೊದೆದಿದ್ದ ವಸ್ತ್ರಗಳನ್ನು ಮೇಲಕ್ಕೆಸೆದು ದೃಷ್ಟಿ ಪರಿಹಾರಕ್ಕೆ ಉಪ್ಪಾರತಿಯನ್ನು ಎತ್ತಿದರು.
ಪದಾರ್ಥ (ಕ.ಗ.ಪ)
ಜಗಜಟ್ಟಿ-ಪ್ರಸಿದ್ಧನಾದಮಲ್ಲ ಚೌಪಟಮಲ್ಲ- ನಾಲ್ಕು ಕಡೆಯಲ್ಲಿ ಕಾದಾಡಬಲ್ಲವೀರ, ಕೈರವ-ಕನ್ನೈದಿಲೆ, ಅಮೃತಕಿರಣ-ಚಂದ್ರ,
ತೂಪಿರಿ-ದೃಷ್ಟಿ ಪರಿಹಾರ ಮಾಡು
ಪಾಠಾನ್ತರ (ಕ.ಗ.ಪ)
ಧೀರುರೆ, ಧಿರು ಭಲ ಭಲರೆ-ಮೆಚ್ಚುಗೆಯನ್ನು ಸೂಚಿಸುವ ಕೊಂಡಾಟದ ನುಡಿಗಳು, ಧೀರರೇ-ಧೀರುರೆ ಎನ್ನುವ ಪಾಠವನ್ನು ಒಪ್ಪಿಕೊಳ್ಳಲಾಗಿದೆ.
ಮೂಲ ...{Loading}...
ಧೀರುರೇ ಜಗಜಟ್ಟಿ ರಾಜ ಕು
ಮಾರ ಚೌಪಟಮಲ್ಲ ಕುರುಕುಲ
ಕೈರವಾಮೃತಕಿರಣ ಧಿರು ಧಿರು ಭಲರೆ ಭಲರೆನುತ
ಭೂರಿ ಸಭೆಯಲಿ ಸುಲಿದು ಬಿಸುಡುವ
ಸೀರೆಗಳ ತೂಪಿರಿದು ಸುಳಿವು
ಪ್ಪಾರತಿಯ ತನಿ ಹರಕೆ ತಳಿತುದು ತಾಯ ನೇಮದಲಿ ॥30॥
೦೩೧ ಏರಿ ತೋರಿದನಶ್ವ ...{Loading}...
ಏರಿ ತೋರಿದನಶ್ವ ಗಜ ರಥ
ವಾರನೇಳನು ಸಭೆಯೊಳೊಂದನು
ನೂರು ಪರಿಯಲಿ ತೋರಿದನು ಶಸ್ತ್ರಾಸ್ತ್ರ ಕೌಶಲವ
ಮೀರಿ ಹೆಚ್ಚಿದ ಹರುಷದಿಂದು
ಬ್ಬೇರಿದನು ಧೃತರಾಷ್ಟ್ರನುಬ್ಬಿದ
ಳಾರು ಮಡಿಯಲಿ ಜನನಿ ದುರ್ಯೋಧನನ ಪರಿಣತಿಗೆ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುದುರೆ, ಆನೆ, ರಥಗಳು-ಆರೇಳನ್ನು ಏರಿ ತೋರಿಸಿದನು. ಸಭೆಯಲ್ಲಿ ಶಸ್ತ್ರಾಸ್ತ್ರ ಕೌಶಲವನ್ನು ಒಂದನ್ನು ನೂರು ರೀತಿಯಲ್ಲಿ ತೋರಿಸಿದನು. ದುರ್ಯೋಧನನ ಈ ಪರಾಕ್ರಮದ ಪ್ರದರ್ಶನಕ್ಕೆ ಧೃತರಾಷ್ಟ್ರನು ಅತಿಯಾದ ಸಂತೋಷದಿಂದ ಉತ್ಸಾಹಗೊಂಡನು. ತಾಯಿ ಗಾಂಧಾರಿಯು ದುರ್ಯೋಧನನ ನೈಪುಣ್ಯಕ್ಕೆ ಆರು ಪಟ್ಟು ಸಂತೋಷಿಸಿದಳು.
ಪದಾರ್ಥ (ಕ.ಗ.ಪ)
ಉಬ್ಬೇರಿದನು-ಉತ್ಸಾಹಗೊಂಡನು, ಪರಿಣತಿ-ನೈಪುಣ್ಯ
ಮೂಲ ...{Loading}...
ಏರಿ ತೋರಿದನಶ್ವ ಗಜ ರಥ
ವಾರನೇಳನು ಸಭೆಯೊಳೊಂದನು
ನೂರು ಪರಿಯಲಿ ತೋರಿದನು ಶಸ್ತ್ರಾಸ್ತ್ರ ಕೌಶಲವ
ಮೀರಿ ಹೆಚ್ಚಿದ ಹರುಷದಿಂದು
ಬ್ಬೇರಿದನು ಧೃತರಾಷ್ಟ್ರನುಬ್ಬಿದ
ಳಾರು ಮಡಿಯಲಿ ಜನನಿ ದುರ್ಯೋಧನನ ಪರಿಣತಿಗೆ ॥31॥
೦೩೨ ಮಸಗಿದಾನೆಯ ಕುಮ್ಭದಲಿ ...{Loading}...
ಮಸಗಿದಾನೆಯ ಕುಂಭದಲಿ ಝಾ
ಡಿಸುವ ಕೇಸರಿಯಂತೆ ಜಂಭನ
ಜಸದ ಝಾಡಿಗೆ ಬೆದರದಿದಿರಹ ವಜ್ರಧರನಂತೆ
ಪಸರಿಸಿದ ಪರಿವಾರ ಮಧ್ಯದೊ
ಳಸಮಬಲ ಹೊಳಕಿದನು ಮೇಘದ
ಮುಸುಕನುಗಿದಿನನಂತೆ ಮೈದೋರಿದನು ಕಲಿಭೀಮ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೆರಳಿದ ಆನೆಯ ಕುಂಭಸ್ಥಳಕ್ಕೆ ಚಿಮ್ಮುವ ಸಿಂಹನಂತೆ, ಜಂಭಾಸುರನ ಕೀರ್ತಿಯ ಕಂಪನಕ್ಕೆ ಹೆದರದೆ ಇದಿರಾಗುವ ಇಂದ್ರನಂತೆ, ವಿಸ್ತರಿಸಿದ ಪರಿವಾರ ಮಧ್ಯದಿಂದ ಅಸಮಶಕ್ತಿಯ ಕಲಿಭೀಮ ಕಾಣಿಸಿಕೊಂಡನು. ಕವಿದ ಮೋಡದಿಂದ ಭೇದಿಸಿ ಹೊರಬರುವ ಸೂರ್ಯನಂತೆ ಮೈದೋರಿ ಬಂದನು.
ಪದಾರ್ಥ (ಕ.ಗ.ಪ)
ಮಸಗು-ಕೆರಳು, ಕೇಸರಿ-ಸಿಂಹ, ಜಸ-ಕೀರ್ತಿ, ಜಂಭ-ಒಬ್ಬ ರಾಕ್ಷಸ, ವಜ್ರಧರ-ಇಂದ್ರ, ಹೊಳಕು-ಕಾಣಿಸು, ಉಗಿ-ಭೇದಿಸು, ಇನ-ಸೂರ್ಯ
ಟಿಪ್ಪನೀ (ಕ.ಗ.ಪ)
ಜಂಭಾಸುರ-ಒಬ್ಬ ರಾಕ್ಷಸ, ತಾರಕಾಸುರನ ಹತ್ತು ಪ್ರಧಾನರಲ್ಲಿ ಒಬ್ಬ. ಇವನ ಮಗಳಾದ ಕಯಾದು. ಹಿರಣ್ಯ ಕಶಿಪುವನ್ನು ಮದುವೆಯಾಗಿ ಪ್ರಹ್ಲಾದನೇ ಮೊದಲಾದ ನಾಲ್ವರು ಪುತ್ರರನ್ನು ಪಡೆದಳು. ಜಂಭನು ತಾರಕಾಸುರನ ಸಂಹಾರಕಾಲದಲ್ಲಿ ವಿಷ್ಣುವಿನಿಂದ ಹತನಾದ.
ಜಂಭಾಸುರ 2- ಇವನೂ ಒಬ್ಬ ರಾಕ್ಷಸ. ಇವನು ಇಂದ್ರನಿಂದ ಹತನಾದ. ಕುಮಾರವ್ಯಾಸ ದ್ರೋಣಪರ್ವದಲ್ಲಿ ಈ ಜಂಭನನ್ನೂ ಉಲ್ಲೇಖಿಸುತ್ತಾನೆ.
ಮೂಲ ...{Loading}...
ಮಸಗಿದಾನೆಯ ಕುಂಭದಲಿ ಝಾ
ಡಿಸುವ ಕೇಸರಿಯಂತೆ ಜಂಭನ
ಜಸದ ಝಾಡಿಗೆ ಬೆದರದಿದಿರಹ ವಜ್ರಧರನಂತೆ
ಪಸರಿಸಿದ ಪರಿವಾರ ಮಧ್ಯದೊ
ಳಸಮಬಲ ಹೊಳಕಿದನು ಮೇಘದ
ಮುಸುಕನುಗಿದಿನನಂತೆ ಮೈದೋರಿದನು ಕಲಿಭೀಮ ॥32॥
೦೩೩ ಗುರು ನದೀಸುತ ...{Loading}...
ಗುರು ನದೀಸುತ ವಿದುರ ಧೃತರಾ
ಷ್ಟ್ರರಿಗೆ ಕೈಮುಗಿದಾಯುಧದ ಪರಿ
ಪರಿಯ ಚಿತ್ರಶ್ರಮವ ಸಾಂಗೋಪಾಂಗ ಕೌಶಲವ
ಕರಿತುರಗದೇರಾಟ ಮೊದಲಾ
ಗಿರೆ ಸುಯೋಧನ ರಚಿತ ವಿದ್ಯಾ
ಪರಿಣತಿಗೆ ವೆಗ್ಗಳವಿದೆನೆ ತೋರಿದನು ಕಲಿಭೀಮ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಲಿಭೀಮನು, ಗುರುದ್ರೋಣ, ಭೀಷ್ಮ, ವಿದುರ, ಧೃತರಾಷ್ಟ್ರರಿಗೆ ಕೈಮುಗಿದು, ಆಯುಧಗಳ ಬಗೆ ಬಗೆಯ ಅದ್ಭುತ ಸಾಧನೆಯನ್ನು, ಎಲ್ಲ ಅಂಗಗಳಿಂದ ಕೂಡಿದ ಜಾಣತನವನ್ನು, ಆನೆ ಕುದುರೆಗಳ ಏರುವಿಕೆಯನ್ನು ಸುಯೋಧನನು ತೋರಿಸಿದ ವಿದ್ಯಾನೈಪುಣ್ಯಕ್ಕಿಂತಲೂ ಶ್ರೇಷ್ಠವೆನ್ನುವಂತೆ ತೋರಿಸಿದನು.
ಪದಾರ್ಥ (ಕ.ಗ.ಪ)
ಚಿತ್ರ-ಅದ್ಭುತ, ಶ್ರಮ-ಸಾಧನ, ಸಾಂಗೋಪಾಂಗ-ಎಲ್ಲ ಅಂಗಗಳಿಂದ ಕೂಡಿದ, ಕೌಶಲ-ಜಾಣತನ, ಪರಿಣತಿ-ನೈಪುಣ್ಯ, ವೆಗ್ಗಳ-ಶ್ರೇಷ್ಠ
ಮೂಲ ...{Loading}...
ಗುರು ನದೀಸುತ ವಿದುರ ಧೃತರಾ
ಷ್ಟ್ರರಿಗೆ ಕೈಮುಗಿದಾಯುಧದ ಪರಿ
ಪರಿಯ ಚಿತ್ರಶ್ರಮವ ಸಾಂಗೋಪಾಂಗ ಕೌಶಲವ
ಕರಿತುರಗದೇರಾಟ ಮೊದಲಾ
ಗಿರೆ ಸುಯೋಧನ ರಚಿತ ವಿದ್ಯಾ
ಪರಿಣತಿಗೆ ವೆಗ್ಗಳವಿದೆನೆ ತೋರಿದನು ಕಲಿಭೀಮ ॥33॥
೦೩೪ ಕೋಲಗುರು ಚಿತ್ತೈಸು ...{Loading}...
ಕೋಲಗುರು ಚಿತ್ತೈಸು ಕುರು ಭೂ
ಪಾಲ ಸಮ್ಮುಖನಾಗು ಹಿಡಿ ಮಾ
ರ್ಕೋಲನೆನ್ನೊಡನೆನುತ ತಿವಿದನು ಭೀಮ ಕುರುಪತಿಯ
ಮೇಳವಿಸಿತೆರಡಂಕ ಬಂದಿಗೆ
ಕೋಲ ಹೊಯ್ದಾಟದಲಿ ಬಳಿಕಾ
ಕೀಲುಗದೆಗಳ ಹಿಡಿದು ತರುಬಿದರಧಿಕ ರೋಷದಲಿ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೋಲು ಗುರು ದ್ರೋಣರೇ ಗಮನಿಸಿ, ಮಹಾರಾಜ ದುರ್ಯೋಧನನೇ ಎದುರಾಗು, ನನ್ನೊಡನೆ ಪ್ರತಿಯಾಗಿ ಬಿಡುವ ಬಾಣವ ಹಿಡಿಯೆನುತ್ತ ಭೀಮನು ದುರ್ಯೋಧನನನ್ನು ಚುಚ್ಚಿದನು. ರಂಗದಲ್ಲಿ ಎರಡು ಪಕ್ಷವಾಯಿತು. ಮೊದಲು ಬಾಣಗಳ ಹೊಡೆದಾಟದಲ್ಲಿ ನಂತರ ಇಬ್ಬರು ಭಯಂಕರ ಗದೆಗಳನ್ನು ಹಿಡಿದು ಅಧಿಕ ರೋಷದಿಂದ ಒಬ್ಬರನ್ನೊಬ್ಬರು ಅಡ್ಡಗಟ್ಟಿದರು.
ಪದಾರ್ಥ (ಕ.ಗ.ಪ)
ಚಿತ್ತೈಸು-ಕೇಳು, ಗಮನಿಸು, ಸಮ್ಮುಖ-ಎದುರು, ಮಾರ್ಕೋ¯ -ಪ್ರತಿಯಾಗಿ ಬಿಡುವ ಬಾಣ, ಅಂಕ-ಪಕ್ಷ, ತರುಬು-ಅಡ್ಡಗಟ್ಟು,
ಬಂದಿಗೆ ಕೋಲ-ಒಂದು ಬಗೆಯ ಬಾಣ (?)
ಪಾಠಾನ್ತರ (ಕ.ಗ.ಪ)
[ಆ ಕೀಲುಗದೆಗಳ] -> [ಆ ಭೀಳ ಗದೆಗಳ (ಇ)] ಆಭೀಳ (ಭಯಂಕರ) ಎನ್ನುವ ಪಾಠವೂ ಇದೆ.
ಮೂಲ ...{Loading}...
ಕೋಲಗುರು ಚಿತ್ತೈಸು ಕುರು ಭೂ
ಪಾಲ ಸಮ್ಮುಖನಾಗು ಹಿಡಿ ಮಾ
ರ್ಕೋಲನೆನ್ನೊಡನೆನುತ ತಿವಿದನು ಭೀಮ ಕುರುಪತಿಯ
ಮೇಳವಿಸಿತೆರಡಂಕ ಬಂದಿಗೆ
ಕೋಲ ಹೊಯ್ದಾಟದಲಿ ಬಳಿಕಾ
ಕೀಲುಗದೆಗಳ ಹಿಡಿದು ತರುಬಿದರಧಿಕ ರೋಷದಲಿ ॥34॥
೦೩೫ ಹೊಯ್ದರೊಡ್ಡಿದ ರಣದ ...{Loading}...
ಹೊಯ್ದರೊಡ್ಡಿದ ರಣದ ಮೊನೆಯಲಿ
ಹಾಯ್ದರೊಳ ಸುಳಿಯಿಂದ ಕಳೆದರು
ಕಾಯ್ದು ಹೆಣಗಿದರುಪ್ಪರಕೆ ಜಾರಿದರು ಪಡಿತಳಕೆ
ಮೈದೆಗೆದರಡ ಹೊಯ್ಲಿನಲಿ ಬಲು
ಗೈದುಗಾರರು ಮನದ ಖತಿಗಿದಿ
ರೈದುದೆನೆ ಹೊಯ್ದಾಡಿದರು ಕಲಿಭೀಮ ಕೌರವರು ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಲಿಭೀಮ ಕೌರವರು ಇದಿರಾದ ಕಾಳಗದ ಅಗ್ರಭಾಗದಲ್ಲಿ ಒಬ್ಬರನ್ನೊಬ್ಬರು ಹೊಡೆದರು. ಮೇಲೆ ಬಿದ್ದು ಒಳಸುಳಿ ವರಿಸೆಯಿಂದ ಬಿಡಿಸಿಕೊಂಡರು. ರೋಷದಿಂದ ಹೋರಾಡಿದರು. ಮೇಲಕ್ಕೆ ಹೋಗಿ ಕೆಳಗೆ ಇಳಿದರು. ಆಕ್ರಮಣಕ್ಕೆ ಹಿಮ್ಮೆಟ್ಟಿದರು. ಬಹಳ ವೀರರು ಮನದ ಕೋಪಕ್ಕೆ ಎದುರಾದಂತೆ ಹೊಡೆದಾಡಿದರು.
ಪದಾರ್ಥ (ಕ.ಗ.ಪ)
ಮೊನೆ-ಅಗ್ರಭಾಗ, ಒಳಸುಳಿ-ಗದಾಯುದ್ಧದ ಒಂದುವರಿಸೆ, ಹೆಣಗು-ಹೋರಾಡು, ಕಾಯ್ದು-ರೋµಗೊಂಡು, ಉಪ್ಪರಕೆ-ಮೇಲಕ್ಕೆ, ಪಡಿತಳ-ಆಕ್ರಮಣ, ಮೈದೆಗೆ-ಹಿಮ್ಮೆಟ್ಟು, ಅಡಹೊಯ್ಲು-ಹೊಡೆತ, ಕೈದುಗಾರರು-ಆಯುಧಪಾಣಿಗಳು, ಖಾತಿ-ಕೋಪ
ಮೂಲ ...{Loading}...
ಹೊಯ್ದರೊಡ್ಡಿದ ರಣದ ಮೊನೆಯಲಿ
ಹಾಯ್ದರೊಳ ಸುಳಿಯಿಂದ ಕಳೆದರು
ಕಾಯ್ದು ಹೆಣಗಿದರುಪ್ಪರಕೆ ಜಾರಿದರು ಪಡಿತಳಕೆ
ಮೈದೆಗೆದರಡ ಹೊಯ್ಲಿನಲಿ ಬಲು
ಗೈದುಗಾರರು ಮನದ ಖತಿಗಿದಿ
ರೈದುದೆನೆ ಹೊಯ್ದಾಡಿದರು ಕಲಿಭೀಮ ಕೌರವರು ॥35॥
೦೩೬ ಎಲೆಲೆ ಹಿಡಿಹಿಡಿ ...{Loading}...
ಎಲೆಲೆ ಹಿಡಿಹಿಡಿ ಭೀಮನನು ತೆಗೆ
ಕೆಲಕೆ ದುರ್ಯೋಧನನಿದು ಮಂ
ಗಳದ ಬೆಳೆಗಿಂಗಳಿನ ಮಳೆ ಸುರಿದುದೆ ಮಹಾದೇವ
ಕಳವಳಿಸೆ ಭೀಷ್ಮಾದಿಗಳು ನೃಪ
ತಿಲಕರಿಬ್ಬರ ನಡುವೆ ಹಾಯ್ದರು
ಕುಲಗಿರಿಗಳಂದದಲಿ ಕೃಪ ಗುರುಸುತರು ವಹಿಲದಲಿ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲೆಲೆ, ಹಿಡಿ ಹಿಡಿ ಭೀಮನನ್ನು, ದುರ್ಯೋಧನನನ್ನು ಪಕ್ಕಕ್ಕೆ ಸರಿಸು, ಶುಭಕರವಾದ ಬೆಳೆಗೆ ಕೆಂಡದ ಮಳೆ ಸುರಿಯಿತೇ, ಮಹಾದೇವ !” ಎಂದು ಭೀಷ್ಮಾದಿಗಳು ವ್ಯಥೆಪಟ್ಟರು. ತ್ವರೆಯಾಗಿ ಕೃಪ, ಅಶ್ವತ್ಥಾಮರು ಕುಲಗಿರಿಗಳಂತೆ ನೃಪಶ್ರೇಷ್ಠರಿಬ್ಬರ ನಡುವೆ ಅಡ್ಡ ಬಂದರು.
ಪದಾರ್ಥ (ಕ.ಗ.ಪ)
ಇಂಗಳ-ಕೆಂಡ, ಕೆಲ-ಪಕ್ಕ, ವಹಿಲ-ತ್ವರೆ
ಟಿಪ್ಪನೀ (ಕ.ಗ.ಪ)
ಕುಲಗಿರಿಗಳು -ಮಹೇಂದ್ರ, ಮಲಯ, ಸಹ್ಯ, ಶುಕ್ತಿಮಾನೆ, ಋಕ್ಷವಾನ್, ವಿಂಧ್ಯ, ಪಾರಿಯಾತ್ರ
ಮೂಲ ...{Loading}...
ಎಲೆಲೆ ಹಿಡಿಹಿಡಿ ಭೀಮನನು ತೆಗೆ
ಕೆಲಕೆ ದುರ್ಯೋಧನನಿದು ಮಂ
ಗಳದ ಬೆಳೆಗಿಂಗಳಿನ ಮಳೆ ಸುರಿದುದೆ ಮಹಾದೇವ
ಕಳವಳಿಸೆ ಭೀಷ್ಮಾದಿಗಳು ನೃಪ
ತಿಲಕರಿಬ್ಬರ ನಡುವೆ ಹಾಯ್ದರು
ಕುಲಗಿರಿಗಳಂದದಲಿ ಕೃಪ ಗುರುಸುತರು ವಹಿಲದಲಿ ॥36॥
೦೩೭ ತೆಗೆದರೀತನನಿತ್ತಲಾತನ ...{Loading}...
ತೆಗೆದರೀತನನಿತ್ತಲಾತನ
ನುಗಿದರತ್ತಲು ಜನದ ಗಳದಿಂ
ದೊಗೆದ ಗಾಢದ ಗಜಬಜವ ಧಟ್ಟಿಸಿದರಲ್ಲಲ್ಲಿ
ಬೆಗಡು ಮೊಳೆತುದು ಭೀಷ್ಮ ವಿದುರಾ
ದಿಗಳ ಮನದಲಿ ಮೇಲೆ ಹಬ್ಬುವ
ಹಗೆಗಿದುಪಲಕ್ಷಣವಲಾಯೆಂದುದು ಬುಧವ್ರಾತ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇತ್ತ ಕಡೆ ಈತನನ್ನು ಸೆಳೆದರು, ಅತ್ತ ಕಡೆ ಆತನನ್ನು ಹೊರದೆಗೆದರು. ಜನರ ಕೊರಳಿನಿಂದ ಹೊರಟ ದಟ್ಟವಾದ ಗದ್ದಲವನ್ನು ಅಲ್ಲಲ್ಲಿ ದಟ್ಟಿಸಿದರು. ನಿಲ್ಲಿಸಿದರು. ಭೀಷ್ಮ ವಿದುರಾದಿಗಳಿಗೆ ಭಯ ಅಂಕುರಿಸಿತು. “ಮುಂದೆ ಬೆಳೆಯುವ ಹಗೆತನಕ್ಕೆ ಈಗಲೇ ಕಾಣಿಸಿಕೊಳ್ಳುತ್ತಿರುವ ಲಕ್ಷಣಗಳು " ಎಂದು ಪಂಡಿತ ಸಮೂಹ ಭಾವಿಸಿತು.
ಪದಾರ್ಥ (ಕ.ಗ.ಪ)
ಗಳ-ಕೊರಳು, ಗಜಬಜ-ಗದ್ದಲ, ಬೆಗಡು-ಭಯ, ಮೊಳೆ-ಅಂಕುರ, ಬುಧ-ಪಂಡಿತ, ಹಗೆ-ಹಗೆತನ
ಮೂಲ ...{Loading}...
ತೆಗೆದರೀತನನಿತ್ತಲಾತನ
ನುಗಿದರತ್ತಲು ಜನದ ಗಳದಿಂ
ದೊಗೆದ ಗಾಢದ ಗಜಬಜವ ಧಟ್ಟಿಸಿದರಲ್ಲಲ್ಲಿ
ಬೆಗಡು ಮೊಳೆತುದು ಭೀಷ್ಮ ವಿದುರಾ
ದಿಗಳ ಮನದಲಿ ಮೇಲೆ ಹಬ್ಬುವ
ಹಗೆಗಿದುಪಲಕ್ಷಣವಲಾಯೆಂದುದು ಬುಧವ್ರಾತ ॥37॥
೦೩೮ ಘುಳುಘುಳಿಸಿದಮ್ಬುಧಿಯವೋಲ್ ...{Loading}...
ಘುಳುಘುಳಿಸಿದಂಬುಧಿಯವೋಲ್ ಜನ
ಜಲಧಿ ಜಾತ ಕ್ಷೋಭೆಯಲಿ ವೆ
ಗ್ಗಳಿಸಿತಗ್ಗದ ಸಾಧು ವಾದವಿವಾದ ರಭಸದಲಿ
ಮೊಳಗಿದವು ಕಲ್ಪಾಂತ ಮೇಘಾ
ವಳಿಯ ಗುರುವೆನೆ ವಾದ್ಯತತಿ ಕಳ
ಕಳದೊಳರ್ಜುನ ದೇವನೆದ್ದನು ಮುನಿಯ ಸನ್ನೆಯಲಿ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಲ್ಲೋಲ ಕಲ್ಲೋಲವಾದ ಸಮುದ್ರದಂತೆ, ಜನಸಾಗರದಲ್ಲಿ ಹುಟ್ಟಿದ ಉದ್ವೇಗದಲ್ಲಿ ಒಳ್ಳೆಯ ನುಡಿ, ವಾಗ್ವಾದUಳು ರಭಸಗೊಂಡವು. ಪ್ರಳಯಕಾಲದ ಮೋಡಗಳ ಸಮೂಹದ ಗುರುವೋ ಎನ್ನುವಂತೆ ವಾದ್ಯಗಳ ಸಮೂಹ ಶಬ್ದ ಮಾಡಿದುವು. ಈ ಶಬ್ದದ ಗಜಬಜದಲ್ಲಿ ಗುರುವಿನ ಸಂಕೇತದ ಅನುಸಾರ ಅರ್ಜುನ ದೇವನು ಎದ್ದನು.
ಪದಾರ್ಥ (ಕ.ಗ.ಪ)
ಅಳಿ-ತುಂಬಿ, ಅಂಬುಜ-ತಾವರೆ, ಕ್ಷೋಭೆ-ಉದ್ವೇಗ, ಸಾಧುವಾದ-ಒಳ್ಳೆಯ ನುಡಿ, ಕಳಕಳ-ಗಜಬಜೆ
ಪಾಠಾನ್ತರ (ಕ.ಗ.ಪ)
ಅಳಿಮಸಗಿದಂಬುಜದವೋಲ್ –>
ಘುಳುಘುಳಿಸಿದಂಬುಧಿಯವೋಲ್
ಆದಿಪರ್ವ, ಮೈ.ವಿ.ವಿ. ಡಾ. ಕೆ.ಆರ್. ಶೇಷಗಿರಿ
ಮೂಲ ...{Loading}...
ಘುಳುಘುಳಿಸಿದಂಬುಧಿಯವೋಲ್ ಜನ
ಜಲಧಿ ಜಾತ ಕ್ಷೋಭೆಯಲಿ ವೆ
ಗ್ಗಳಿಸಿತಗ್ಗದ ಸಾಧು ವಾದವಿವಾದ ರಭಸದಲಿ
ಮೊಳಗಿದವು ಕಲ್ಪಾಂತ ಮೇಘಾ
ವಳಿಯ ಗುರುವೆನೆ ವಾದ್ಯತತಿ ಕಳ
ಕಳದೊಳರ್ಜುನ ದೇವನೆದ್ದನು ಮುನಿಯ ಸನ್ನೆಯಲಿ ॥38॥
೦೩೯ ಈತನಾರರ್ಜುನನೆ ಹೋ ...{Loading}...
ಈತನಾರರ್ಜುನನೆ ಹೋ ಹೋ
ಮಾತು ಮಾಣಲಿ ಮಾಣಲೆಂಬೀ
ಮಾತು ಹಿಂಚಿತು ಮುನ್ನ ಮೌನದೊಳಿರ್ದುದಾಸ್ಥಾನ
ಭೀತ ಕಳಕಳರಂಗದಲಿ ಪುರು
ಹೂತಸುತ ಮೈದೋರಿದನು ಜನ
ವೀತನನು ಕೊಂಡಾಡುತಿರ್ದುದು ರಾಯ ಕೇಳ್ ಎಂದ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈತನಾರು ? ಅರ್ಜುನನೇ ? ಹೋ ಹೋ ಮಾತು ನಿಲ್ಲಿಸಲಿ, ನಿಲ್ಲಿಸಲಿ ಎಂದು ಹೇಳುವಷ್ಟರಲ್ಲಿಯೇ ಆಸ್ಥಾನ ಮೌನವಾಯಿತು. ಭಯಗೊಂಡ ಗೊಂದಲದ ರಂಗದಲ್ಲಿ ಇಂದ್ರನ ಮಗನಾದ ಅರ್ಜುನನು ಕಾಣಿಸಿಕೊಂಡನು. ಜನವು ಈತನನ್ನು ಕೊಂಡಾಡುತ್ತಿತ್ತು, ರಾಜನ್ ಕೇಳೆಂದು ವೈಶಂಪಾಯನನು ಹೇಳಿದನು.
ಪದಾರ್ಥ (ಕ.ಗ.ಪ)
ಮಾಣಲಿ-ನಿಲ್ಲಿಸಲಿ, ಹಿಂಚಿತು-ಹಿಮ್ಮೆಟ್ಟಿಸಿತು, ಮುನ್ನ-ಮೊದಲೇ, ಭೀತ-ಭಯಗೊಂಡ, ಕಳಕಳ-ಗೊಂದಲ, ಪುರುಹೂತ-ಇಂದ್ರ
ಮೂಲ ...{Loading}...
ಈತನಾರರ್ಜುನನೆ ಹೋ ಹೋ
ಮಾತು ಮಾಣಲಿ ಮಾಣಲೆಂಬೀ
ಮಾತು ಹಿಂಚಿತು ಮುನ್ನ ಮೌನದೊಳಿರ್ದುದಾಸ್ಥಾನ
ಭೀತ ಕಳಕಳರಂಗದಲಿ ಪುರು
ಹೂತಸುತ ಮೈದೋರಿದನು ಜನ
ವೀತನನು ಕೊಂಡಾಡುತಿರ್ದುದು ರಾಯ ಕೇಳೆಂದ ॥39॥
೦೪೦ ದ್ರೋಣ ಕೃಪ ...{Loading}...
ದ್ರೋಣ ಕೃಪ ಮೊದಲಾದ ಮಾನ್ಯ
ಶ್ರೇಣಿಗೆರಗಿದನಮರ ನಿಕರಕೆ
ಗೋಣನೆತ್ತಿದನಿಟ್ಟು ಕರಪುಟವನು ಲಲಾಟದಲಿ
ಪ್ರಾಣ ಪಣವಿದು ನಿಖಿಳ ವಿದ್ಯದ
ಜಾಣತನವಿದು ವಿನಯವೆಂದಿದು
ಕೇಣವಿಲ್ಲದೆ ನೆರವಿ ನೆರೆ ಹೊಗಳಿತು ಧನಂಜಯನ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣ, ಕೃಪ ಮೊದಲಾದ ಪೂಜ್ಯರ ಸಮೂಹಕ್ಕೆ ಅರ್ಜುನನು ನಮಿಸಿದನು. ದೇವತೆಗಳ ಸಮೂಹಕ್ಕೆ ಕತ್ತೆತ್ತಿ ಹಣೆಯಲ್ಲಿ ಮುಗಿದ ಕೈಯನ್ನಿಟ್ಟು ನಮಸ್ಕರಿಸಿದನು. “ಪ್ರಾಣವನ್ನೇ ಒಡ್ಡಿದ ಪ್ರದರ್ಶನವಿದು. ಎಲ್ಲಾ ವಿದ್ಯೆಗಳನ್ನು ಕಲಿತ ಜಾಣತನಕ್ಕೆ ತಕ್ಕ ವಿನಯವಿದು” ಎಂದು ಮತ್ಸರವಿಲ್ಲದ ಗುಂಪೆಲ್ಲ ಧನಂಜಯನನ್ನು ತುಂಬ ಹೊಗಳಿತು.
ಪದಾರ್ಥ (ಕ.ಗ.ಪ)
ಮಾನ್ಯ-ಪೂಜ್ಯ, ಶ್ರೇಣಿ-ಸಮೂಹ, ಎರಗು-ನಮಿಸು, ಕರಪುಟ-ಮುಗಿದಕೈ, ಲಲಾಟ-ಹಣೆ, ಪಣ-ಒಡ್ಡು, ಧನಂಜಯ-ಅರ್ಜುನ, ನಿಕರ-ಸಮೂಹ, ಕೇಣ-ಮತ್ಸರ, ನೆರವಿ-ಗುಂಪು
ಮೂಲ ...{Loading}...
ದ್ರೋಣ ಕೃಪ ಮೊದಲಾದ ಮಾನ್ಯ
ಶ್ರೇಣಿಗೆರಗಿದನಮರ ನಿಕರಕೆ
ಗೋಣನೆತ್ತಿದನಿಟ್ಟು ಕರಪುಟವನು ಲಲಾಟದಲಿ
ಪ್ರಾಣ ಪಣವಿದು ನಿಖಿಳ ವಿದ್ಯದ
ಜಾಣತನವಿದು ವಿನಯವೆಂದಿದು
ಕೇಣವಿಲ್ಲದೆ ನೆರವಿ ನೆರೆ ಹೊಗಳಿತು ಧನಂಜಯನ ॥40॥
೦೪೧ ನಿಲುವಿನಲಿ ಸ್ವಸ್ಥಾನದಲಿ ...{Loading}...
ನಿಲುವಿನಲಿ ಸ್ವಸ್ಥಾನದಲಿ ಕೈ
ಚಳಕದಲಿ ಭಂಗಿಯಲಿ ಭರದಲಿ
ಲುಳಿಯಲೊಯ್ಯಾರದಲಿ ಮೋಡಾಮೋಡಿಯಂದದಲಿ
ಅಳವಿಯಲಿ ಪರಿವಿಡಿಯಲೂಹಾ
ಬಲದಲವಧಾನದಲಿ ಶಸ್ತ್ರಾ
ವಳಿಯ ಸಾಂಗೋಪಾಂಗ ಶ್ರಮವನು ತೋರಿದನು ಪಾರ್ಥ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತನ್ನ ಸ್ಥಾನದೃಢತೆಯಲ್ಲ್ಲಿ, ನಿಲುವಿನಲ್ಲಿ, ಹಸ್ತಕೌಶಲದಲ್ಲಿ, ಭಂಗಿಯಲ್ಲಿ, ವೇಗದಲ್ಲಿ, ಚಾಕಚಕ್ಯತೆಯಲ್ಲಿ, ಅಂದದಲ್ಲಿ, ಕೈಚಳಕದ ರೀತಿಯಲ್ಲಿ, ಪರಾಕ್ರಮದಲ್ಲಿ, ಕ್ರಮದಲ್ಲಿ, ಕಲ್ಪನಾಶಕ್ತಿಯಲ್ಲಿ, ಮನಸ್ಸಿನ ಏಕಾಗ್ರತೆಯಲ್ಲಿ ಶಸ್ತ್ರಗಳ ಸಮೂಹದ ಎಲ್ಲ ಅಂಗಗಳಿಂದ ಕೂಡಿದ ಸಾಧನೆಯನ್ನು ಪಾರ್ಥನು ತೋರಿಸಿದನು.
ಪದಾರ್ಥ (ಕ.ಗ.ಪ)
ನಿಲುವು-ನಿಲ್ಲುವಿಕೆ, ಸ್ವಸ್ಥಾನ-ಸ್ವಂತಸ್ಥಳ, ಕೈಚಳಕ-ಹಸ್ತ ಕೌಶಲ, ಭಂಗಿ-ರೂಪ, ಭರ-ವೇಗ, ಲುಳಿ-ಚಾಕಚಕ್ಯತೆ, ಒಯ್ಯಾರ -ಅಂದ, ಮೋಡಾಮೋಡಿ-ಕೈಚಳಕ, ಅಳವು-ಪರಾಕ್ರಮ, ಪರಿವಿಡಿ-ಕ್ರಮ, ಶ್ರಮ-ಸಾಧನೆ
ಮೂಲ ...{Loading}...
ನಿಲುವಿನಲಿ ಸ್ವಸ್ಥಾನದಲಿ ಕೈ
ಚಳಕದಲಿ ಭಂಗಿಯಲಿ ಭರದಲಿ
ಲುಳಿಯಲೊಯ್ಯಾರದಲಿ ಮೋಡಾಮೋಡಿಯಂದದಲಿ
ಅಳವಿಯಲಿ ಪರಿವಿಡಿಯಲೂಹಾ
ಬಲದಲವಧಾನದಲಿ ಶಸ್ತ್ರಾ
ವಳಿಯ ಸಾಂಗೋಪಾಂಗ ಶ್ರಮವನು ತೋರಿದನು ಪಾರ್ಥ ॥41॥
೦೪೨ ತುರಗಚಯ ರೇವನ್ತ ...{Loading}...
ತುರಗಚಯ ರೇವಂತ ಮದ ಕುಂ
ಜರ ಮಹಾ ದಿವಿಜೇಂದ್ರ ಪಥ ಸಂ
ಚರಣ ವರಮಾರ್ತಾಂಡಯೆಂದಬ್ಬರಿಸೆ ಜನ ನಿಕರ
ತುರಗ ಗಜ ರಥ ವಿವಿಧ ಶಿಕ್ಷಾ
ಪರಿಣತಿಯ ತೋರಿದನು ಗುರು ಕೃಪ
ಸುರನದೀಜರು ಮುಳುಗಿದರು ಪುಳಕಾಂಬು ಪೂರದಲಿ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಸಮೂಹವು, “ಕುದುರೆಗಳ ಸಮೂಹದ ರೇವಂತ, ಮದಿಸಿದ ಆನೆಯ ಮಹಾ ದೇವೇಂದ್ರ, ಪಥ ಸಂಚರಣದಲ್ಲಿ ಶ್ರೇಷ್ಠ ಸೂರ್ಯ” ಎಂದು ಗಟ್ಟಿಯಾಗಿ ಕೂಗಲು, ಕುದುರೆ, ಆನೆ, ರಥ ಮೊದಲಾದವುಗಳಲ್ಲಿ ತನ್ನ ಶಿಕ್ಷಣದ ಸಾಮಥ್ರ್ಯವನ್ನು ಅರ್ಜುನನು ತೋರಿಸಿದನು. ಗುರು, ಕೃಪ, ಗಂಗಾ ಪುತ್ರರಾದ ಭೀಷ್ಮರು ರೋಮಾಂಚಗೊಂಡು ಆನಂದಾಶ್ರುಗಳಲ್ಲ್ಲಿ ಮುಳುಗಿದರು.
ಪದಾರ್ಥ (ಕ.ಗ.ಪ)
ಅಬ್ಬರಿಸು-ಗಟ್ಟಿಯಾಗಿ ಕೂಗು, ಶಿಕ್ಷಾ-ಶಿಕ್ಷಣ, ಪರಿಣತಿ-ಸಾಮಥ್ರ್ಯ, ಪುಳಕ-ರೋಮಾಂಚ, ಅಂಬು-ನೀರು, ಪೂರ-ಪ್ರವಾಹ
ಮೂಲ ...{Loading}...
ತುರಗಚಯ ರೇವಂತ ಮದ ಕುಂ
ಜರ ಮಹಾ ದಿವಿಜೇಂದ್ರ ಪಥ ಸಂ
ಚರಣ ವರಮಾರ್ತಾಂಡಯೆಂದಬ್ಬರಿಸೆ ಜನ ನಿಕರ
ತುರಗ ಗಜ ರಥ ವಿವಿಧ ಶಿಕ್ಷಾ
ಪರಿಣತಿಯ ತೋರಿದನು ಗುರು ಕೃಪ
ಸುರನದೀಜರು ಮುಳುಗಿದರು ಪುಳಕಾಂಬು ಪೂರದಲಿ ॥42॥
೦೪೩ ಮತ್ತೆ ಕೊಣ್ಡನು ...{Loading}...
ಮತ್ತೆ ಕೊಂಡನು ಧನುವ ನೆರವಿಯ
ನತ್ತ ಹೊಯ್ ಹೊಯ್ ಹೋಗ ಹೇಳ್ ದುರ್
ವೃತ್ತರೆದೆ ಜರ್ಝರಿತವಾಗಲು ತೋರ ಬೇಕೆನುತ
ಬತ್ತಳಿಕೆಯಿಂದುಗಿದು ಹೂಡಿ ವಿ
ಯತ್ತಳಕೆ ಹಾಯ್ಸಿದನು ಕರ್ಬೊಗೆ
ಸುತ್ತಿ ದಳ್ಳುರಿ ಸುರಿದುದಾಗ್ನೇಯಾಸ್ತ್ರ ಧಾರೆಯಲಿ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೆಟ್ಟ ನಡತೆಯವರ ಎದೆ ನುಚ್ಚು ನೂರಾಗುವಂತೆ ತನ್ನ ಸಾಮಥ್ರ್ಯ ತೋರಿಸಬೇಕೆಂದು ಮತ್ತೆ ಧನುಸ್ಸನ್ನು ಕೈಗೆತ್ತಿಕೊಂಡನು. ಗುಂಪನ್ನು ಅತ್ತ ಕಡೆ ಹೊಡೆ, ಹೊಡೆ, ಹೋಗ ಹೇಳು ಎಂದು ಹೇಳುತ್ತ ಬತ್ತಳಿಕೆಯಿಂದ ಬಾಣವನ್ನು ಹೊರತೆಗೆದು ಬಿಲ್ಲಿನಲ್ಲಿ ಹೂಡಿ ಆಕಾಶಕ್ಕೆ ಹಾಯಿಸಿದನು. ಆಗ್ನೇಯಾಸ್ತ್ರದ ಧಾರೆಯಲ್ಲಿ ಕಪ್ಪಾದ ಹೊಗೆ ಸುತ್ತಿಕೊಂಡು ದೊಡ್ಡ ಉರಿ ಸುರಿಯಿತು.
ಪದಾರ್ಥ (ಕ.ಗ.ಪ)
ದುರ್ವೃತ್ತ-ಕೆಟ್ಟ ನಡತೆಯ, ಜರ್ಝರ-ನುಚ್ಚು ನೂರಾಗು, ಉಗಿದು-ಹೊರತೆಗೆದು, ವಿಯತ್ತಳ-ಆಕಾಶ, ಕರ್ಬೊಗೆ-ಕಪ್ಪಾದ ಹೊಗೆ, ದಳ್ಳುರಿ-ದೊಡ್ಡ ಉರಿ
ಮೂಲ ...{Loading}...
ಮತ್ತೆ ಕೊಂಡನು ಧನುವ ನೆರವಿಯ
ನತ್ತ ಹೊಯ್ ಹೊಯ್ ಹೋಗ ಹೇಳ್ ದುರ್
ವೃತ್ತರೆದೆ ಜರ್ಝರಿತವಾಗಲು ತೋರ ಬೇಕೆನುತ
ಬತ್ತಳಿಕೆಯಿಂದುಗಿದು ಹೂಡಿ ವಿ
ಯತ್ತಳಕೆ ಹಾಯ್ಸಿದನು ಕರ್ಬೊಗೆ
ಸುತ್ತಿ ದಳ್ಳುರಿ ಸುರಿದುದಾಗ್ನೇಯಾಸ್ತ್ರ ಧಾರೆಯಲಿ ॥43॥
೦೪೪ ತೆಗೆಸಿದನು ಶಿಖಿಶರವ ...{Loading}...
ತೆಗೆಸಿದನು ಶಿಖಿಶರವ ಧನುವಿಂ
ದುಗಿಸಿದನು ವಾರುಣವನಭ್ರವ
ಮೊಗೆದುದದ್ಭುತ ವಾರಿಯುಪಸಂಹರಿಸಿದನು ಮರಳಿ
ಹಗಲನೊಂದೇ ತುತ್ತು ಮಾಡಿದ
ವಿಗಡ ತಿಮಿರಾಸ್ತ್ರದಲಿ ತಿಮಿರವ
ತೆಗೆಸಿದನು ಸೂರ್ಯಾಸ್ತ್ರದಲಿ ಬೆರಗಾಗೆ ಸುರನಿಕರ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ್ನೇಯಾಸ್ತ್ರದಿಂದ ಉಂಟಾದ ಉರಿಯನ್ನು ತಣಿಸಲು, ಬಿಲ್ಲಿನಿಂದ ವಾರುಣಾಸ್ತ್ರವನ್ನು ಪ್ರಯೋಗಿಸಿದನು. ಅದ್ಭುತವಾಗಿ ಆಕಾಶವು ನೀರಿನಿಂದ ತುಂಬಿಕೊಂಡಿತು. ಮತ್ತೆ ಅದನ್ನು ಹಿಂದಕ್ಕೆ ತೆಗೆದುಕೊಂಡನು. ಭಯಂಕರವಾದ ತಿಮಿರಾಸ್ತ್ರದಿಂದ ಹಗಲನ್ನು ಒಂದೇ ತುತ್ತಿನಲ್ಲಿ ನುಂಗುವಂತೆ ಮಾಡಿದನು. ದೇವತೆಗಳ ಸಮೂಹ ಆಶ್ಚರ್ಯ ಪಡುವಂತೆ ಸೂರ್ಯಾಸ್ತ್ರದಿಂದ ಕತ್ತಲನ್ನು ನಿವಾರಿಸಿದನು.
ಪದಾರ್ಥ (ಕ.ಗ.ಪ)
ಅಭ್ರ-ಆಕಾಶ, ವಾರಿ-ನೀರು, ತಿಮಿರ-ಕತ್ತಲೆ
ಮೂಲ ...{Loading}...
ತೆಗೆಸಿದನು ಶಿಖಿಶರವ ಧನುವಿಂ
ದುಗಿಸಿದನು ವಾರುಣವನಭ್ರವ
ಮೊಗೆದುದದ್ಭುತ ವಾರಿಯುಪಸಂಹರಿಸಿದನು ಮರಳಿ
ಹಗಲನೊಂದೇ ತುತ್ತು ಮಾಡಿದ
ವಿಗಡ ತಿಮಿರಾಸ್ತ್ರದಲಿ ತಿಮಿರವ
ತೆಗೆಸಿದನು ಸೂರ್ಯಾಸ್ತ್ರದಲಿ ಬೆರಗಾಗೆ ಸುರನಿಕರ ॥44॥
೦೪೫ ಗಿರಿಶರದಲದ್ರಿಗಳ ಮೇಘದ ...{Loading}...
ಗಿರಿಶರದಲದ್ರಿಗಳ ಮೇಘದ
ಶರದಿನಭ್ರವನುರಗ ಬಾಣದಿ
ನುರು ಭುಜಂಗವನನಿಲ ಶರದಲಿ ತೀವ್ರ ಮಾರುತನ
ಪರುಠವವ ತೋರಿದನು ಜನವು
ಬ್ಬರಿಸಲಡಿಗಡಿಗಂಧ ಭೂಪನ
ಕೊರಳು ಕುಸಿದುದು ನುಡಿಯ ನಾಟಕ ಹರ್ಷಭಾರದಲಿ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪರ್ವತಾಸ್ತ್ರದಿಂದ ಬೆಟ್ಟಗಳನ್ನು, ಮೇಘಾಸ್ತ್ರದಿಂದ ಮೋಡವನ್ನೂ, ಸರ್ಪಾಸ್ತ್ರದಿಂದ ಹೆಚ್ಚಿನ ಸರ್ಪಗಳನ್ನು, ವಾಯುವ್ಯಾಸ್ತ್ರದಿಂದ ಬಿರುಗಾಳಿಯ ಹರಹನ್ನು ತೋರಿಸಿದನು. ಅಡಿಗಡಿಗೆ ಜನರ ಹರ್ಷೋದ್ಗಾರವನ್ನು ಕೇಳಿ ಸಂಗತಿಯನ್ನರಿತ ಅಂಧಭೂಪನ ನಟನೆಯ ನುಡಿಯು ಹರ್ಷವನ್ನು ತೋರುತ್ತಿದ್ದರೂ ಅವನ ಕೊರಳು ಕುಸಿಯಿತು.
ಪದಾರ್ಥ (ಕ.ಗ.ಪ)
ಅದ್ರಿ-ಬೆಟ್ಟ, ಅಭ್ರ-ಮೋಡ, ಭುಜಗ-ಸರ್ಪ, ಪರುಠವ-ಹರಹು
ಮೂಲ ...{Loading}...
ಗಿರಿಶರದಲದ್ರಿಗಳ ಮೇಘದ
ಶರದಿನಭ್ರವನುರಗ ಬಾಣದಿ
ನುರು ಭುಜಂಗವನನಿಲ ಶರದಲಿ ತೀವ್ರ ಮಾರುತನ
ಪರುಠವವ ತೋರಿದನು ಜನವು
ಬ್ಬರಿಸಲಡಿಗಡಿಗಂಧ ಭೂಪನ
ಕೊರಳು ಕುಸಿದುದು ನುಡಿಯ ನಾಟಕ ಹರ್ಷಭಾರದಲಿ ॥45॥
೦೪೬ ಇವರ ಮುಖವರಳಿದವು ...{Loading}...
ಇವರ ಮುಖವರಳಿದವು ಗಂಗಾ
ಭವ ಕೃಪ ದ್ರೋಣಾದಿಗಳ ಬಳಿ
ಕವರ ತಲೆವಾಗಿದವು ಧೃತರಾಷ್ಟ್ರಾದಿ ಕೌರವರ
ಇವರ ಜನನಿಯ ಮುಖದ ಸುಮ್ಮಾ
ನವನು ದುರ್ಯೋಧನನ ಜನನಿಯ
ಜವಳಿ ದುಮ್ಮಾನವನು ಬಣ್ಣಿಸಲರಿಯೆ ನಾನೆಂದ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಂಗಾಪುತ್ರರಾದ ಭೀಷ್ಮರು, ಕೃಪ ದ್ರೋಣಾದಿಗಳು- ಇವರ ಮುಖ ಪ್ರಸನ್ನವಾದವು. ಧೃತರಾಷ್ಟ್ರಾದಿ ಕೌರವರ ತಲೆಗಳು ತಗ್ಗಿದವು. ಇವರ ತಾಯಿ ಕುಂತಿಯ ಮುಖದ ಸಂತೋಷವನ್ನೂ ದುರ್ಯೋಧನನ ತಾಯಿ ಗಾಂಧಾರಿಯ ಎರಡು ಪಟ್ಟು ದುಗುಡವನ್ನು ವರ್ಣಿಸಲು ನನಗೆ ತಿಳಿಯದೆಂದು ವೈಶಂಪಾಯನರು ಹೇಳಿದರು.
ಪದಾರ್ಥ (ಕ.ಗ.ಪ)
ಸುಮ್ಮಾನ-ಸಂತೋಷ, ದುಮ್ಮಾನ-ದುಗುಡ, ಬಣ್ಣಿಸು-ವರ್ಣಿಸು
ಮೂಲ ...{Loading}...
ಇವರ ಮುಖವರಳಿದವು ಗಂಗಾ
ಭವ ಕೃಪ ದ್ರೋಣಾದಿಗಳ ಬಳಿ
ಕವರ ತಲೆವಾಗಿದವು ಧೃತರಾಷ್ಟ್ರಾದಿ ಕೌರವರ
ಇವರ ಜನನಿಯ ಮುಖದ ಸುಮ್ಮಾ
ನವನು ದುರ್ಯೋಧನನ ಜನನಿಯ
ಜವಳಿ ದುಮ್ಮಾನವನು ಬಣ್ಣಿಸಲರಿಯೆ ನಾನೆಂದ ॥46॥
೦೪೭ ಬಾಯ ಹೊಯ್ ...{Loading}...
ಬಾಯ ಹೊಯ್ ಫಲುಗುಣನ ಹೊಗಳುವ
ನಾಯಿಗಳನೇನಾಯ್ತು ಕೌತುಕ
ವಾಯಕಿವದಿರ ಪಕ್ಷಪಾತವ ನೋಡು ನೋಡೆನುತ
ಸಾಯಕವ ತಿರುಹುತ್ತಲಾ ಕ
ರ್ಣಾಯತಾಂಬಕನೆಡಬಲದ ಕುರು
ರಾಯನನುಜರ ಮೇಳದಲಿ ಹೊರವಂಟನಾ ಕರ್ಣ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗಿರುವಾಗ, “ಫಲುಗುಣನನ್ನು ಹೊಗಳುವ ನಾಯಿಗಳ ಬಾಯನ್ನು ಹೊಡೆಯಿರಿ, ಏನಾಯ್ತು ಅಂಥ ಆಶ್ಚರ್ಯ ? ವ್ಯರ್ಥವಾಗಿ ಹೊಗಳುತ್ತಾರೆ ! ಇವರ ಪಕ್ಷಪಾತವನ್ನು ನೋಡು, ನೋಡು” ಎಂದು ನುಡಿಯುತ್ತ, ಕೈಯಲ್ಲಿ ಬಾಣವನ್ನು ಹಿಡಿದು ತಿರುಗಿಸುತ್ತ ಕಿವಿಯವರೆಗೆ ವಿಸ್ತಾರವಾದ ಕಣ್ಣುಳ್ಳ ಕರ್ಣನು ಎಡಬಲದಲ್ಲಿ ಕುರುರಾಯನ ತಮ್ಮಂದಿರ ಗುಂಪಿನೊಂದಿಗೆ ಹೊರಟು ಬಂದನು.
ಪದಾರ್ಥ (ಕ.ಗ.ಪ)
ವಾಯ-ವ್ಯರ್ಥ, ಸಾಯಕ-ಬಾಣ, ಆಕರ್ಣಾಯತಾಂಬಕ-ಕಿವಿಯವರೆಗೆವಿಸ್ತಾರವಾದ ಕಣ್ಣುಳ್ಳ, ಮೇಳ-ಗುಂಪು, ತಿರುಹು-ತಿರುಗಿಸು
ಮೂಲ ...{Loading}...
ಬಾಯ ಹೊಯ್ ಫಲುಗುಣನ ಹೊಗಳುವ
ನಾಯಿಗಳನೇನಾಯ್ತು ಕೌತುಕ
ವಾಯಕಿವದಿರ ಪಕ್ಷಪಾತವ ನೋಡು ನೋಡೆನುತ
ಸಾಯಕವ ತಿರುಹುತ್ತಲಾ ಕ
ರ್ಣಾಯತಾಂಬಕನೆಡಬಲದ ಕುರು
ರಾಯನನುಜರ ಮೇಳದಲಿ ಹೊರವಂಟನಾ ಕರ್ಣ ॥47॥
೦೪೮ ಗುರುಗಳಿಗೆ ಕೈಮುಗಿದು ...{Loading}...
ಗುರುಗಳಿಗೆ ಕೈಮುಗಿದು ಶಿರದಲಿ
ತರಣಿ ಮಂಡಲಕೆರಗಿ ನೋಡುವ
ನೆರವಿಗಿವನಾರೀತನಾರೆಂಬದ್ಭುತವ ಬೀರಿ
ಅರಸ ಕೇಳೈ ವಿವಿಧ ಶಸ್ತ್ರೋ
ತ್ಕರದ ಶ್ರಮವನು ತೋರಿದನು ಕರಿ
ತುರಗ ರಥವಾಹನದ ಶಿಕ್ಷಾ ವಿದ್ಯಗಳು ಸಹಿತ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗುರುಗಳಿಗೆ ಕೈಮುಗಿದು, ಸೂರ್ಯಮಂಡಲಕ್ಕೆ ತಲೆಬಾಗಿ ನಮಸ್ಕಾರ ಮಾಡಿ, ನೋಡುವ ಸಮೂಹಕ್ಕೆ ಇವನು ಯಾರು ? ಈತನಾರೆಂಬ ಅದ್ಭುತವನ್ನುಂಟು ಮಾಡಿದನು. ಮಹಾರಾಜ ಕೇಳು, ಕರ್ಣನು ನಾನಾ ಬಗೆಯ ಆಯುಧ ವಿದ್ಯೆಗಳಲ್ಲೂ ಆನೆ, ಕುದುರೆ ರಥ ಮೊದಲಾದ ವಾಹನಗಳ ವಿದ್ಯೆಗಳಲ್ಲೂ ಸಾಧನೆಯನ್ನು ತೋರಿಸಿದನು.
ಪದಾರ್ಥ (ಕ.ಗ.ಪ)
ನೆರವಿ-ಸಮೂಹ, ಉತ್ಕರ-ಸಮೂಹ, ವಿವಿಧ-ನಾನಾ ಬಗೆಯ, ಶಿಕ್ಷಾ-ವಿದ್ಯೆ, ಶ್ರಮ-ಸಾಧನೆ
ಮೂಲ ...{Loading}...
ಗುರುಗಳಿಗೆ ಕೈಮುಗಿದು ಶಿರದಲಿ
ತರಣಿ ಮಂಡಲಕೆರಗಿ ನೋಡುವ
ನೆರವಿಗಿವನಾರೀತನಾರೆಂಬದ್ಭುತವ ಬೀರಿ
ಅರಸ ಕೇಳೈ ವಿವಿಧ ಶಸ್ತ್ರೋ
ತ್ಕರದ ಶ್ರಮವನು ತೋರಿದನು ಕರಿ
ತುರಗ ರಥವಾಹನದ ಶಿಕ್ಷಾ ವಿದ್ಯಗಳು ಸಹಿತ ॥48॥
೦೪೯ ಆವ ವಿಧದಲಿ ...{Loading}...
ಆವ ವಿಧದಲಿ ಪಾರ್ಥ ತೋರಿದ
ನಾವ ದಿವ್ಯಾಸ್ತ್ರಪ್ರಪಂಚವ
ಪಾವಕಾನಿಲ ವಾರುಣಾದಿಯನೈದೆ ವಿರಚಿಸಿದ
ಆ ವಿಧಾನದಲಾ ವಿಹಾರದ
ಲಾ ವಿಬಂಧದಲರ್ಜುನನ ಬಾ
ಣಾವಳಿಯ ಬಿನ್ನಾಣವನು ತೋರಿದನು ಕಲಿಕರ್ಣ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯಾವ ವಿಧದಲ್ಲಿ ಪಾರ್ಥನು ಪಾವಕ, ಅನಿಲ, ವಾರುಣ ಮೊದಲಾದ ದಿವ್ಯವಾದ ಅಸ್ತ್ರಗಳ ಪ್ರಪಂಚವನ್ನು ರಚಿಸಿದನೋ ಅದೇ ವಿಧಾನದಲ್ಲಿ, ವಿನೋದದಲ್ಲಿ ವಿಶೇಷವಾದ ಬಂಧದಲ್ಲಿ ಅರ್ಜುನನ ಬಾಣಗಳ ಸಮೂಹದ ಚಾತುರ್ಯವನ್ನು ಕಲಿಕರ್ಣನೂ ತೋರಿಸಿದನು
ಪದಾರ್ಥ (ಕ.ಗ.ಪ)
ವಿಹಾರ-ವಿನೋದ, ಬಿನ್ನಾಣ-ಚಾತುರ್ಯ, ವಿಬಂಧ-ವಿಶೇಷವಾದ ಬಂಧ, [ಬಾಣಪ್ರಯೋಗದಿಂದ ಎದುರಾಳಿಯನ್ನು ಬಂಧಿಸುವ, ಕಟ್ಟಿ ಹಾಕುವ ಬಾಣ ಪ್ರಯೋಗ (?)]
ಮೂಲ ...{Loading}...
ಆವ ವಿಧದಲಿ ಪಾರ್ಥ ತೋರಿದ
ನಾವ ದಿವ್ಯಾಸ್ತ್ರಪ್ರಪಂಚವ
ಪಾವಕಾನಿಲ ವಾರುಣಾದಿಯನೈದೆ ವಿರಚಿಸಿದ
ಆ ವಿಧಾನದಲಾ ವಿಹಾರದ
ಲಾ ವಿಬಂಧದಲರ್ಜುನನ ಬಾ
ಣಾವಳಿಯ ಬಿನ್ನಾಣವನು ತೋರಿದನು ಕಲಿಕರ್ಣ ॥49॥
೦೫೦ ಸೆಣಸುವಡೆ ಬಾಯೆನ್ದು ...{Loading}...
ಸೆಣಸುವಡೆ ಬಾಯೆಂದು ಪಾರ್ಥನ
ಕೆಣಕಿದನು ಘನ ರೋಷ ಶಿಖಿಯಲಿ
ಕುಣಿದವಿಬ್ಬರ ಮೀಸೆ ಕಂಗಳೊಳೊಗುವ ಕೆಂಪಿನಲಿ
ಕಣೆಕಣೆಗಳಾಟದಲಿ ಶರ ಖಂ
ಡಣೆಯ ಕೋಲಾಟದಲಿ ಖಣಿ ಖಣಿ
ಖಣಿಲು ಖಣಿ ಖಣಿ ಮಸಗಲೆಚ್ಚಾಡಿದರು ಚಳಕದಲಿ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಹೋರಾಡುವ ಹಾಗಿದ್ದರೆ ಬಾ’ ಎಂದು ಪಾರ್ಥನನ್ನು ಕರ್ಣನು ಕೆರಳಿಸಿದನು. ಅಗಾಧವಾದ ರೋಷಾಗ್ನಿಯಿಂದ ಇಬ್ಬರ ಮೀಸೆಗಳೂ ಕುಣಿದವು. ಕಣ್ಣುಗಳು ಕೆಂಪನ್ನು ಹೊರಸೂಸಿದವು. ಬಾಣ ಬಾಣಗಳ ಆಟದಲ್ಲಿ, ಬಾಣಗಳನ್ನು ಕತ್ತರಿಸುವ ಬಾಣ ಪ್ರಯೋಗದ ಆಟದಲ್ಲಿ ಖಣಿ ಖಣಿ ಖಣಿಲು ಖಣಿ ಖಣಿ ಎಂಬ ದನಿ ವ್ಯಾಪಿಸಲು ಚಾತುರ್ಯದಿಂದ ಬಾಣಪ್ರಯೋಗ ಮಾಡಿದರು.
ಪದಾರ್ಥ (ಕ.ಗ.ಪ)
ಸೆಣಸು-ಹೋರಾಡು, ಒಗುವ-ಹೊರಸೂಸುವ, ಕಣೆ-ಬಾಣ, ಖಂಡಣೆ-ಕತ್ತರಿಸು, ಮಸಗು-ವ್ಯಾಪಿಸು, ಚಳಕ-ಚಾತುರ್ಯ, ಕೋಲಾಟ-ಬಾಣಪ್ರಯೋಗದ ಆಟ
ಮೂಲ ...{Loading}...
ಸೆಣಸುವಡೆ ಬಾಯೆಂದು ಪಾರ್ಥನ
ಕೆಣಕಿದನು ಘನ ರೋಷ ಶಿಖಿಯಲಿ
ಕುಣಿದವಿಬ್ಬರ ಮೀಸೆ ಕಂಗಳೊಳೊಗುವ ಕೆಂಪಿನಲಿ
ಕಣೆಕಣೆಗಳಾಟದಲಿ ಶರ ಖಂ
ಡಣೆಯ ಕೋಲಾಟದಲಿ ಖಣಿ ಖಣಿ
ಖಣಿಲು ಖಣಿ ಖಣಿ ಮಸಗಲೆಚ್ಚಾಡಿದರು ಚಳಕದಲಿ ॥50॥
೦೫೧ ರಾಯಸಭೆ ಕಳವಳಿಸೆ ...{Loading}...
ರಾಯಸಭೆ ಕಳವಳಿಸೆ ಹೋ ಹೋ
ಹೋಯಿದೇನೇನೆನುತ ಹಿಡಿದರು
ವಾಯುಸುತ ಕೃಪ ಗುರುಜ ದ್ರೋಣಾದ್ಯರು ಧನಂಜಯನ
ಆಯಿತೆಲವೋ ಕರ್ಣ ನೀನನು
ನಾಯಕನೊ ನೃಪಹಾರದಲಿ ಮೇಣ್
ನಾಯಕನೊ ನೀನಾವನೆಂದನು ಕೃಪನು ಖಾತಿಯಲಿ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದನ್ನು ಕಂಡು ರಾಜಸಭೆ ಕಳವಳಿಸಿತು. “ಹೋ ಹೋ ಇದೇನು ಏನು ?” ಎನುತ್ತ ಭೀಮಸೇನ, ಕೃಪ, ಅಶ್ವತ್ಥಾಮ, ದ್ರೋಣ ಮೊದಲಾದವರು ಧನಂಜಯನನ್ನು ಹಿಡಿದರು. “ಆಯಿತು, ಎಲವೋ ಕರ್ಣ ನೀನು ರಾಜರ ಶ್ರೇಣಿಯಲ್ಲಿ ನಾಯಕನೋ, ಅಥವಾ ನಾಯಕನನ್ನು ಅನುಸರಿಸಿದ ವಿದೂಷಕನೋ ? ನೀನು ಯಾರು ?” ಎಂದು ಕೃಪನು ಕೋಪದಿಂದ ಕೇಳಿದನು.
ಪದಾರ್ಥ (ಕ.ಗ.ಪ)
ವಾಯುಸುತ-ಭೀಮಸೇನ,
ಗುರುಜ-ಅಶ್ವತ್ಥಾಮ,
ನೃಪಹಾರ-ರಾಜರ ಶ್ರೇಣಿ,
ಅನುನಾಯಕ-ನಾಯಕನನ್ನು ಅನುಸರಿಸಿದವನು,, ಅವನಿಗೆ ಅನುಕೂಲರಾದ ವಿದೂಷಕ ಮುಂತಾದವರು
ಖಾತಿ-ಕೋಪ
ಮೂಲ ...{Loading}...
ರಾಯಸಭೆ ಕಳವಳಿಸೆ ಹೋ ಹೋ
ಹೋಯಿದೇನೇನೆನುತ ಹಿಡಿದರು
ವಾಯುಸುತ ಕೃಪ ಗುರುಜ ದ್ರೋಣಾದ್ಯರು ಧನಂಜಯನ
ಆಯಿತೆಲವೋ ಕರ್ಣ ನೀನನು
ನಾಯಕನೊ ನೃಪಹಾರದಲಿ ಮೇಣ್
ನಾಯಕನೊ ನೀನಾವನೆಂದನು ಕೃಪನು ಖಾತಿಯಲಿ ॥51॥
೦೫೨ ಈತನಾವನು ಕರ್ಣನೆಮ್ಬವ ...{Loading}...
ಈತನಾವನು ಕರ್ಣನೆಂಬವ
ನೀತನರ್ಜುನನೊಡನೆ ತಾ ಮಾ
ರಾತು ಕೈಮಾಡಿದನು ಕೈಕೊಳ್ಳನು ಧನಂಜಯನ
ಈತ ತಪ್ಪಲ್ಲೆನುತ ಮಿಗೆ ಮೈ
ಯಾತನಾ ಧೃತರಾಷ್ಟ್ರನೀತನ
ಮಾತೆ ಕಂಡಳು ಕುಂತಿ ನೆನೆದಳು ಪೂರ್ವಸಂಗತಿಯ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕರ್ಣನೆಂಬುವವನು ಇವನು ಯಾರು ? ಇವನ ಅರ್ಜುನನನ್ನು ಪ್ರತಿಭಟಿಸಿ ಮೇಲೆ ಬಿದ್ದನು. ಇವನು ಅರ್ಜುನನನ್ನು ಲೆಕ್ಕಿಸುವವನಲ್ಲ. ಇವನು ಮಾಡದೇ ಬಿಡುವವನಲ್ಲ” ಎನ್ನುತ ಧೃತರಾಷ್ಟ್ರನು ಹೆಮ್ಮೆಪಟ್ಟನು. ಇವನ ತಾಯಿ ಕುಂತಿಯು ಪೂರ್ವ ಪ್ರಸಂಗವನ್ನು ಸ್ಮರಿಸಿಕೊಂಡಳು.
ಪದಾರ್ಥ (ಕ.ಗ.ಪ)
ಮಾರಾತು-ಪ್ರತಿಭಟಿಸು, ಕೈಮಾಡು-ಮೇಲೆ ಬೀಳು, ಕೈಕೊಳ್-ಲೆಕ್ಕಿಸು, ಮಿಗೆ-ಹೆಚ್ಚಾಗಿ, ಸಂಗತಿ-ಪ್ರಸಂಗ, ನೆನೆ-ಸ್ಮರಿಸು
ಪಾಠಾನ್ತರ (ಕ.ಗ.ಪ)
ಮೈಯಾನ್ ಎಂಬ ಪದದ ಅರ್ಥ ಈ ಸಂದರ್ಭಕ್ಕೆ ಹೊಂದದಿರುವುದರಿಂದ ‘ಮುಯ್ಯಾನ್’ ಎಂಬ ಪದವನ್ನು ಪರಿಗಣಿಸಬಹುದು. ಮುಯ್ಯಾನ್ ಪದಕ್ಕೆ ಹೆಮ್ಮೆ ಪಡು, ಬೀಗು, ಗರ್ವಪಡು ಎಂಬ ಅರ್ಥಗಳಿವೆ. ಗದ್ಯಾನುವಾದದಲ್ಲಿ ಅದರಂತೆ ಅನುಸರಿಸಿದೆ.
ಮೂಲ ...{Loading}...
ಈತನಾವನು ಕರ್ಣನೆಂಬವ
ನೀತನರ್ಜುನನೊಡನೆ ತಾ ಮಾ
ರಾತು ಕೈಮಾಡಿದನು ಕೈಕೊಳ್ಳನು ಧನಂಜಯನ
ಈತ ತಪ್ಪಲ್ಲೆನುತ ಮಿಗೆ ಮೈ
ಯಾತನಾ ಧೃತರಾಷ್ಟ್ರನೀತನ
ಮಾತೆ ಕಂಡಳು ಕುಂತಿ ನೆನೆದಳು ಪೂರ್ವಸಂಗತಿಯ ॥52॥
೦೫೩ ಎನ್ನ ಮಗನೆನೆ ...{Loading}...
ಎನ್ನ ಮಗನೆನೆ ಬಂದುದಿಲ್ಲದು
ತನ್ನ ವಶವೇ ವಿಷ್ಣುಮಾಯೆಯ
ಬಿನ್ನಣವಲೇ ಮಾತು ಬಿಗಿದುದು ಮನವನೊಳಗಿಕ್ಕಿ
ತನ್ನ ತಾನೇ ಮರುಗಿ ಮೂರ್ಛಾ
ಪನ್ನೆಯಾದಳು ಕುಂತಿಯಿತ್ತಲು
ಖಿನ್ನನಾದನು ಕೃಪನ ನುಡಿಯಲಿ ದುಗುಡ ಮಿಗೆ ಕರ್ಣ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆದರೂ “ಇವನು ನನ್ನ ಮಗ’ ಎನ್ನುವುದಕ್ಕಾಗಲಿಲ್ಲ. ಅದು ಅವಳ ವಶವೆ ? ವಿಷ್ಣು ಮಾಯೆಯ ಕೌಶಲವಲ್ಲವೆ? ಮನದಭಿಲಾಷೆಯನ್ನು ಒಳಕ್ಕೆ ಅದುಮಿದುದರಿಂದ ಮಾತು ಕಟ್ಟಿ ಹೋಯಿತು. ತನ್ನ ಸ್ಥಿತಿಗೆ ತಾನೇ ಮರುಗಿದ ಕುಂತಿ ಮೂರ್ಛೆ ಹೊಂದಿದಳು. ಇತ್ತ ಕಡೆ ಕೃಪನ ಮಾತಿನಿಂದ ದುಃಖ ಹೆಚ್ಚಾಗಲು ಕರ್ಣ ನೊಂದನು.
ಪದಾರ್ಥ (ಕ.ಗ.ಪ)
ಬಿನ್ನಣ-ಕೌಶಲ, ಆಪನ್ನ-ಹೊಂದು, ಖಿನ್ನ-ನೊಂದ, ದುಗುಡ-ದುಃಖ
ಮೂಲ ...{Loading}...
ಎನ್ನ ಮಗನೆನೆ ಬಂದುದಿಲ್ಲದು
ತನ್ನ ವಶವೇ ವಿಷ್ಣುಮಾಯೆಯ
ಬಿನ್ನಣವಲೇ ಮಾತು ಬಿಗಿದುದು ಮನವನೊಳಗಿಕ್ಕಿ
ತನ್ನ ತಾನೇ ಮರುಗಿ ಮೂರ್ಛಾ
ಪನ್ನೆಯಾದಳು ಕುಂತಿಯಿತ್ತಲು
ಖಿನ್ನನಾದನು ಕೃಪನ ನುಡಿಯಲಿ ದುಗುಡ ಮಿಗೆ ಕರ್ಣ ॥53॥
೦೫೪ ಈತನರಸಲ್ಲೆನ್ದು ಕೃಪ ...{Loading}...
ಈತನರಸಲ್ಲೆಂದು ಕೃಪ ಪಳಿ
ವಾತನೇ ತಪ್ಪೇನು ರಾಜ್ಯದೊ
ಳೀತನರಸೆನಿಸುವೆನು ಕರೆ ನಮ್ಮಯ ಪುರೋಹಿತರ
ಶಾತ ಕುಂಭಾಸನವ ಮಂಗಳ
ಜಾತ ವಸ್ತುವ ತರಿಸು ತರಿಸೆಂ
ದಾ ತತುಕ್ಷಣದಲಿ ಸುಯೋಧನನೆದ್ದ ರಭಸದಲಿ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಈತನು ರಾಜನಲ್ಲವೆಂದು ಕೃಪ ನಿಂದಿಸುವವನೇ ? ತಪ್ಪೇನು ? ರಾಜ್ಯದಲ್ಲಿ ಈತನನ್ನು ಅರಸನೆನಿಸುತ್ತೇನೆ. ನಮ್ಮ ಪುರೋಹಿತರನ್ನು ಕರೆಯಿರಿ, ಸ್ವರ್ಣ ಪೀಠ, ಮಂಗಳವಸ್ತುಗಳನ್ನು ತರಿಸಿ” ಎಂದು ಆ ತಕ್ಷಣದಲ್ಲಿ ಸುಯೋಧನನು ಉತ್ಸಾಹದಿಂದ ಮೇಲೆದ್ದನು.
ಪದಾರ್ಥ (ಕ.ಗ.ಪ)
ಪಳಿ-ನಿಂದಿಸು, ರಭಸ-ಉತ್ಸಾಹ, ಶಾತಕುಂಭಾಸನ-ಸ್ವರ್ಣಪೀಠ
ಮೂಲ ...{Loading}...
ಈತನರಸಲ್ಲೆಂದು ಕೃಪ ಪಳಿ
ವಾತನೇ ತಪ್ಪೇನು ರಾಜ್ಯದೊ
ಳೀತನರಸೆನಿಸುವೆನು ಕರೆ ನಮ್ಮಯ ಪುರೋಹಿತರ
ಶಾತ ಕುಂಭಾಸನವ ಮಂಗಳ
ಜಾತ ವಸ್ತುವ ತರಿಸು ತರಿಸೆಂ
ದಾ ತತುಕ್ಷಣದಲಿ ಸುಯೋಧನನೆದ್ದ ರಭಸದಲಿ ॥54॥
೦೫೫ ತರಿಸಿ ಭದ್ರಾಸನದೊಳೀತಂ ...{Loading}...
ತರಿಸಿ ಭದ್ರಾಸನದೊಳೀತಂ
ಗರಸು ಪದವಿಯೊಳಂಗ ದೇಶದ
ಸಿರಿಯನಿತ್ತನು ರಚಿಸಿದನು ಮೂರ್ಧಾಭಿಷೇಚನವ
ದರುಶನವನಿತ್ತಖಿಳ ಭೂಮೀ
ಶ್ವರರು ಕಂಡರು ಪೂರ್ವಶೈಲದ
ತರಣಿಯಂತಿರೆ ಕರ್ಣನೆಸೆದನು ರಾಜತೇಜದಲಿ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉತ್ತಮವಾದ ಪೀಠವನ್ನು ತರಿಸಿ ಕರ್ಣನಿಗೆ ಅಂಗ ದೇಶದ ಆಧಿಪತ್ಯವನ್ನು ಕೊಟ್ಟು ಮಸ್ತಕಾಭಿಷೇಕವನ್ನು ಮಾಡಿದನು. ಎಲ್ಲ ರಾಜರು ಭೇಟಿಯಾಗಿ ಕರ್ಣನನ್ನು ಕಂಡರು. ಪೂರ್ವ ಶೈಲದ ಮೇಲಿನ ಸೂರ್ಯನಂತೆ ಕರ್ಣನು ರಾಜ ತೇಜಸ್ಸಿನಿಂದ ಶೋಭಿಸಿದನು.
ಪದಾರ್ಥ (ಕ.ಗ.ಪ)
ಭದ್ರಾಸನ-ಉತ್ತಮವಾದ ಪೀಠ, ಮೂರ್ಧಾಭಿಷೇಚನ-ಮಸ್ತಕಾಭಿಷೇಕ (ಪವಿತ್ರವಾದ ನದಿಗಳ ನೀರಿನಿಂದ ಶಿರಸ್ನಾನ ಮಾಡಿಸುವುದು) ಶೈಲ-ಬೆಟ್ಟ, ತರಣಿ-ಸೂರ್ಯ, ಎಸೆ-ಶೋಭಿಸು
ಮೂಲ ...{Loading}...
ತರಿಸಿ ಭದ್ರಾಸನದೊಳೀತಂ
ಗರಸು ಪದವಿಯೊಳಂಗ ದೇಶದ
ಸಿರಿಯನಿತ್ತನು ರಚಿಸಿದನು ಮೂರ್ಧಾಭಿಷೇಚನವ
ದರುಶನವನಿತ್ತಖಿಳ ಭೂಮೀ
ಶ್ವರರು ಕಂಡರು ಪೂರ್ವಶೈಲದ
ತರಣಿಯಂತಿರೆ ಕರ್ಣನೆಸೆದನು ರಾಜತೇಜದಲಿ ॥55॥
೦೫೬ ಈತನುತ್ಸವ ತನ್ನದೆನ್ದೇ ...{Loading}...
ಈತನುತ್ಸವ ತನ್ನದೆಂದೇ
ಪ್ರೀತಿಯಲಿ ಬರೆ ಸಿಂಹಪೀಠವ
ನೀತನಿಳಿದೆರಗಿದನು ಪದದಲಿ ಬಳಿಕ ಜನಜನಿತ
ಸೂತಸುತನಿವನೆಂದು ಭುವನ
ಖ್ಯಾತವಾದುದು ಬಳಿಕ ನಸುನಗು
ತೀತನನು ಕುಲವೆತ್ತಿ ಭಂಗಿಸಿ ನುಡಿದನಾ ಭೀಮ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈತನ ಉತ್ಸವ ತನ್ನದೆಂದೇ ಭಾವಿಸಿ ಪ್ರೀತಿಯಿಂದ ಸೂತನು ಬರಲು, ಕರ್ಣನು ಸಿಂಹಾಸನದಿಂದಿಳಿದು ಅವನ ಪಾದಗಳಿಗೆ ನಮಸ್ಕರಿಸಿದನು. ಆಗ ಇವನು ಸೂತನ ಮಗನೆಂದು ಪ್ರಚಾರಗೊಂಡಿತು. ನಂತರ ಇದು ಲೋಕ ಪ್ರಸಿದ್ಧವಾಯ್ತು. ಈತನ ಕುಲವನ್ನು ಎತ್ತಿ ಆಡಿ ನಸುನಗುತ್ತ ಅವಮಾನಿಸಿ ಭೀಮನು ನುಡಿದನು.
ಪದಾರ್ಥ (ಕ.ಗ.ಪ)
ಜನಜನಿತ-ಪ್ರಚಾರ, ಭುವನ-ಲೋಕ, ಖ್ಯಾತ-ಪ್ರಸಿದ್ಧ, ಭಂಗಿಸಿ-ಅವಮಾನಿಸಿ
ಪಾಠಾನ್ತರ (ಕ.ಗ.ಪ)
“ಪ್ರೀತಿಯಲಿ ಬರೆ ಸಿಂಹಪೀಠವ
ನೀತನಿಳಿದೆರಗಿದನು” ಎಂಬ ಪಾಠಕ್ಕೆ ಪ್ರತಿಯಾಗಿ “ಪ್ರೀತಿಯಿಂದಾ ಸೂತನೈತರ
ಲೀತನಿಳಿದೆರಗಿದರನು” ಎಂಬ ಪಾಠವೂ ಇದೆ
ಮೂಲ ...{Loading}...
ಈತನುತ್ಸವ ತನ್ನದೆಂದೇ
ಪ್ರೀತಿಯಲಿ ಬರೆ ಸಿಂಹಪೀಠವ
ನೀತನಿಳಿದೆರಗಿದನು ಪದದಲಿ ಬಳಿಕ ಜನಜನಿತ
ಸೂತಸುತನಿವನೆಂದು ಭುವನ
ಖ್ಯಾತವಾದುದು ಬಳಿಕ ನಸುನಗು
ತೀತನನು ಕುಲವೆತ್ತಿ ಭಂಗಿಸಿ ನುಡಿದನಾ ಭೀಮ ॥56॥
೦೫೭ ಇವನ ತನ್ದೆಯದಾರು ...{Loading}...
ಇವನ ತಂದೆಯದಾರು ಪಾಂಡುವೊ
ಪವನನೋ ಕೃಪ ನಿಮ್ಮ ಜನ್ಮವ
ನೆವಗೆ ಹೇಳಿರೆ ಹಿರಿಯಗುರುಗಳ ತಾಯದಾವವಳೊ
ಅವಘಡಿಸದಿರಿ ಹಿರಿಯತನಕಂ
ಜುವೆನು ನಿಮಗೆನುತಡಿಗಡಿಗೆ ಕೌ
ರವ ಮಹೀಪತಿ ಜರಿದು ನುಡಿದನು ಗುರು ಕೃಪಾದಿಗಳ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದನ್ನು ಕೇಳಿ ಕೌರವಮಹೀಪತಿ ಪ್ರತಿಯಾಗಿ “ಇವನ ತಂದೆ ಯಾರು ? ಪಾಂಡುವೋ, ವಾಯುವೋ ? ಕೃಪಾ, ನಿಮ್ಮ ಜನ್ಮವನ್ನು ನಮಗೆ ತಿಳಿಸಿರಿ. ಹಿರಿಯ ಗುರುಗಳಾದ ದ್ರೋಣರ ತಾಯಿ ಅದಾವಳೋ? ಪ್ರತಿಭಟಿಸದಿರಿ ಹಿರಿಯತನಕ್ಕಾಗಿ ನಿಮಗೆ ಹೆದರುತ್ತೇನೆ” ಎಂದು ಗುರುದ್ರೋಣ ಕೃಪಾದಿಗಳ ಬಗ್ಗೆ ಹೀನಾಯವಾಗಿ ಮಾತನಾಡಿದನು.
ಪದಾರ್ಥ (ಕ.ಗ.ಪ)
ಅವಘಡಿಸು-ಪ್ರತಿಭಟಿಸು, ಜರಿ-ಹೀನಾಯಿಸು
ಮೂಲ ...{Loading}...
ಇವನ ತಂದೆಯದಾರು ಪಾಂಡುವೊ
ಪವನನೋ ಕೃಪ ನಿಮ್ಮ ಜನ್ಮವ
ನೆವಗೆ ಹೇಳಿರೆ ಹಿರಿಯಗುರುಗಳ ತಾಯದಾವವಳೊ
ಅವಘಡಿಸದಿರಿ ಹಿರಿಯತನಕಂ
ಜುವೆನು ನಿಮಗೆನುತಡಿಗಡಿಗೆ ಕೌ
ರವ ಮಹೀಪತಿ ಜರಿದು ನುಡಿದನು ಗುರು ಕೃಪಾದಿಗಳ ॥57॥
೦೫೮ ಒಳಗೆ ಗಜಬಜವಾಯ್ತು ...{Loading}...
ಒಳಗೆ ಗಜಬಜವಾಯ್ತು ಕೈದುವ
ಸೆಳೆದುದಲ್ಲಿಯದಲ್ಲಿ ಗುರು ಕೃಪ
ರುಲುಹ ಕೇಳುವರಿಲ್ಲ ಕೈದೊಳಸಾಯ್ತು ಕಳನೊಳಗೆ
ಇಳಿದು ಭೀಷ್ಮಾದಿಗಳು ತಮ್ಮಯ
ನಿಳಯಕೈದಿದರೆರಡು ಬಲ ತ
ಮ್ಮೊಳಗೆ ತಾವೇ ಹಣಿದು ಹರಿದುದು ರಾಯ ಕೇಳ್ ಎಂದ ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಭೆಯೊಳಗೆ ಗದ್ದಲವಾಯ್ತು. ಅಲ್ಲಲ್ಲಿದ್ದವರು ಅಲ್ಲಲ್ಲೇ ಆಯುಧಗಳನ್ನು ಸೆಳೆದುಕೊಂಡರು. ಗುರು, ಕೃಪರ ಧ್ವನಿಯನ್ನು ಕೇಳುವರಿಲ್ಲ. ರಣರಂಗದಲ್ಲಿ ಮುಷ್ಟಿ ಯುದ್ಧವೇ ಆರಂಭವಾಯ್ತು. ಭೀಷ್ಮರೇ ಮೊದಲಾದವರು ಪೀಠಗಳಿಂದ ಇಳಿದು ತಮ್ಮ ತಮ್ಮ ಮನೆಗಳಿಗೆ ಹೊರಟರು. ಎರಡು ಬಲದವರೂ ತಮ್ಮ ತಮ್ಮಲ್ಲೆ ಹೊಡೆದಾಡಿಕೊಂಡು ಹೊರಟು ಹೋದರು.
ಪದಾರ್ಥ (ಕ.ಗ.ಪ)
ಗಜಬಜ-ಗದ್ದಲ, ಕೈದು-ಆಯುಧ, ಉಲುಹು-ಧ್ವನಿ, ಕೈದೊಳಸು-ಮುಷ್ಟಿಯುದ್ಧ, ಹಣಿದು-ಹೊಡೆದು
ಮೂಲ ...{Loading}...
ಒಳಗೆ ಗಜಬಜವಾಯ್ತು ಕೈದುವ
ಸೆಳೆದುದಲ್ಲಿಯದಲ್ಲಿ ಗುರು ಕೃಪ
ರುಲುಹ ಕೇಳುವರಿಲ್ಲ ಕೈದೊಳಸಾಯ್ತು ಕಳನೊಳಗೆ
ಇಳಿದು ಭೀಷ್ಮಾದಿಗಳು ತಮ್ಮಯ
ನಿಳಯಕೈದಿದರೆರಡು ಬಲ ತ
ಮ್ಮೊಳಗೆ ತಾವೇ ಹಣಿದು ಹರಿದುದು ರಾಯ ಕೇಳೆಂದ ॥58॥
೦೫೯ ಕೆಲರು ಭೀಮನನರ್ಜುನನ ...{Loading}...
ಕೆಲರು ಭೀಮನನರ್ಜುನನ ಕೆಲ
ಕೆಲರು ಕರ್ಣನ ಕೌರವೇಂದ್ರನ
ಕೆಲರು ಹೊಗಳುತ ಬಂದು ಹೊಕ್ಕರು ಹಸ್ತಿನಾಪುರವ
ಬಳಿಕಲಾ ಮರುದಿವಸದಲಿ ಮ
ಕ್ಕಳುಗಳೆಲ್ಲರ ಕರೆಸಿ ಗರುಡಿಯ
ನಿಳಯದಲಿ ಕುಳ್ಳಿರ್ದು ಗುರು ನುಡಿದನು ಕುಮಾರರಿಗೆ ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೆಲವರು ಭೀಮನನ್ನು, ಕೆಲವರು ಅರ್ಜುನನನ್ನು, ಕೆಲವರು ಕರ್ಣನನ್ನು ಮತ್ತು ದುರ್ಯೋಧನನನ್ನು ಹೊಗಳುತ್ತಾ ಹಸ್ತಿನಾಪುರಕ್ಕೆ ಬಂದು ಒಳಸೇರಿದರು. ಅನಂತರ ಮಾರನೆಯ ದಿವಸ, ದ್ರೋಣಾಚಾರ್ಯರು ಗರುಡಿಯ ಮನೆಯಲ್ಲಿ ಕುಳಿತು ಮಕ್ಕಳೆಲ್ಲರನ್ನೂ ಕರೆಸಿ ಕುಮಾರರನ್ನು ಕುರಿತು ನುಡಿದರು.
ಮೂಲ ...{Loading}...
ಕೆಲರು ಭೀಮನನರ್ಜುನನ ಕೆಲ
ಕೆಲರು ಕರ್ಣನ ಕೌರವೇಂದ್ರನ
ಕೆಲರು ಹೊಗಳುತ ಬಂದು ಹೊಕ್ಕರು ಹಸ್ತಿನಾಪುರವ
ಬಳಿಕಲಾ ಮರುದಿವಸದಲಿ ಮ
ಕ್ಕಳುಗಳೆಲ್ಲರ ಕರೆಸಿ ಗರುಡಿಯ
ನಿಳಯದಲಿ ಕುಳ್ಳಿರ್ದು ಗುರು ನುಡಿದನು ಕುಮಾರರಿಗೆ ॥59॥
೦೬೦ ಏನಿರೈ ಕುರುವಂಶನಳಿನೀ ...{Loading}...
ಏನಿರೈ ಕುರುವಂಶನಳಿನೀ
ಭಾನುಗಳಿರ ವಿದಗ್ಧ ಜನ ಸುರ
ಧೇನುಗಳಿರಾವಿಂದು ನಿಮ್ಮಲಿ ದಕ್ಷಿಣಾರ್ಥಿಗಳು
ಏನನೀವಿರಿ ನಮಗೆ ಕೊಡೆ ಸಂ
ಪೂರ್ಣರೈ ಕೊಡಲಾಪ ಸತ್ವ ನಿ
ಧಾನವುಂಟೇ ಹೇಳಿಯೆಂದನು ದ್ರೋಣನನಿಬರಿಗೆ ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಏನಿರಯ್ಯಾ ? ಕುರುವಂಶವೆಂಬ ಕಮಲಕ್ಕೆ ಸೂರ್ಯಗಳಿರಾ, ಪಂಡಿತ ಜನರ ಕಾಮಧೇನುಗಳಿರಾ, ನಾವು ಇಂದು ನಿಮ್ಮಲ್ಲಿ ದಕ್ಷಿಣೆಯನ್ನು ಆಶಿಸುವವರಿದ್ದೇವೆ. ನಮಗೆ ಏನು ಕೊಡುತ್ತೀರಿ ? ಕೊಡುವುದಕ್ಕೆ ನೀವು ಸಂಪೂರ್ಣರು. ನಿಮಗೆ ಕೊಡುವ ಶಕ್ತಿ ಸಂಪತ್ತು ಉಂಟೆ ಹೇಳಿ” ಎಂದು ದ್ರೋಣನು ಪ್ರತಿಯೊಬ್ಬರನ್ನು ಕೇಳಿದನು.
ಪದಾರ್ಥ (ಕ.ಗ.ಪ)
ನಳಿನ-ಕಮಲ, ಭಾನು-ಸೂರ್ಯ, ವಿದಗ್ಧ-ಪಂಡಿತ, ಅರ್ಥಿ-ಆಶಿಸುವವ, ಸತ್ವ-ಶಕ್ತಿ, ನಿಧಾನ-ಸಂಪತ್ತು
ಮೂಲ ...{Loading}...
ಏನಿರೈ ಕುರುವಂಶನಳಿನೀ
ಭಾನುಗಳಿರ ವಿದಗ್ಧ ಜನ ಸುರ
ಧೇನುಗಳಿರಾವಿಂದು ನಿಮ್ಮಲಿ ದಕ್ಷಿಣಾರ್ಥಿಗಳು
ಏನನೀವಿರಿ ನಮಗೆ ಕೊಡೆ ಸಂ
ಪೂರ್ಣರೈ ಕೊಡಲಾಪ ಸತ್ವ ನಿ
ಧಾನವುಂಟೇ ಹೇಳಿಯೆಂದನು ದ್ರೋಣನನಿಬರಿಗೆ ॥60॥
೦೬೧ ಆವುದನು ಬಯಸುವಿರಿ ...{Loading}...
ಆವುದನು ಬಯಸುವಿರಿ ನಿಮ್ಮಡಿ
ಯಾವ ಕಾರ್ಯವ ಬೆಸಸಿದುದ ತಂ
ದೀವೆವಿದಕೆ ವಿಚಾರವೇನೆಂದರು ಕುಮಾರಕರು
ತೀವಿದಗ್ಗದ ಹರುಷರಸದಲಿ
ಭಾವ ನೆನೆದುದು ಮುನಿಗೆ ವರ ಶಿ
ಷ್ಯಾವಳಿಗೆ ನುಡಿದನು ನಿಜಾಭಿಪ್ರಾಯ ಸಂಗತಿಯ ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಯಾವುದನ್ನು ಬಯಸುತ್ತೀರಿ ? ನೀವು ಯಾವ ಕೆಲಸವನ್ನು ಅಪ್ಪಣೆ ಕೊಡಿಸಿದರೂ ಅದನ್ನು ನೆರವೇರಿಸುತ್ತೇವೆ. ಇದಕ್ಕೆ ವಿಚಾರವೆಲ್ಲಿಯದು ?” ಎಂದು ಕುಮಾರಕರು ಗುರುವಿಗೆ ಹೇಳಿದರು. ಗುರುವಿಗೆ ಶಿಷ್ಯರ ಮಾತು ಕೇಳಿ ಹರುಷ ತುಂಬಿ ಬಂದಿತು. ಶಿಷ್ಯರ ಸಮೂಹವನ್ನು ಕುರಿತು ತನ್ನ ಅಭಿಪ್ರಾಯದ ವಿಚಾರವನ್ನು ಹೇಳಿದನು.
ಪದಾರ್ಥ (ಕ.ಗ.ಪ)
ಬೆಸಸು-ಅಪ್ಪಣೆಕೊಡಿಸು, ತೀವು-ತುಂಬು, ಸಂಗತಿ-ವಿಚಾರ
ಮೂಲ ...{Loading}...
ಆವುದನು ಬಯಸುವಿರಿ ನಿಮ್ಮಡಿ
ಯಾವ ಕಾರ್ಯವ ಬೆಸಸಿದುದ ತಂ
ದೀವೆವಿದಕೆ ವಿಚಾರವೇನೆಂದರು ಕುಮಾರಕರು
ತೀವಿದಗ್ಗದ ಹರುಷರಸದಲಿ
ಭಾವ ನೆನೆದುದು ಮುನಿಗೆ ವರ ಶಿ
ಷ್ಯಾವಳಿಗೆ ನುಡಿದನು ನಿಜಾಭಿಪ್ರಾಯ ಸಂಗತಿಯ ॥61॥
೦೬೨ ಕೇಳಿ ಬಲ್ಲಿರೆ ...{Loading}...
ಕೇಳಿ ಬಲ್ಲಿರೆ ಗಂಗೆಯುತ್ತರ
ಕೂಲದಲಿ ಪಾಂಚಾಲದೇಶ ನೃ
ಪಾಲನಲ್ಲಿಗೆ ದ್ರುಪದನೆಂಬುವನತುಳ ಭುಜಬಲನು
ಆಳುತನದಂಗದಲಿ ಪರರಿಗೆ
ಸೋಲನವನೊಟ್ಟೈಸಿ ದ್ರುಪದನೃ
ಪಾಲಕನ ಪಿಡಿದೊಪ್ಪಿಸಿದರೆಮಗಹುದು ಪರಿತೋಷ ॥62॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಗಂಗಾನದಿಯ ಉತ್ತರ ದಡದಲ್ಲಿ ಪಾಂಚಾಲ ದೇಶವಿರುವುದನ್ನು ನೀವು ಕೇಳಿರುವಿರೆ ? ಅಲ್ಲಿಗೆ ದ್ರುಪದನೆಂಬುವನು ರಾಜನು. ಅವನು ಬಹಳ ಪರಾಕ್ರಮಿ. ಪರಾಕ್ರಮದಲ್ಲಿ ಇತರರಿಗೆ ಸೋಲುವವನಲ್ಲ. ನೀವೆಲ್ಲ ಒಂದಾಗಿ ದ್ರುಪದಮಹಾರಾಜನನ್ನು ಹಿಡಿದು ತಂದು ಒಪ್ಪಿಸಿದರೆ ನಮಗೆ ಅತಿತೃಪ್ತಿಯಾಗುತ್ತದೆ” ಎಂದು ದ್ರೋಣರು ಹೇಳಿದರು.
ಪದಾರ್ಥ (ಕ.ಗ.ಪ)
ಕೂಲ-ದಡ, ಭುಜಬಲ-ಪರಾಕ್ರಮಿ, ಆಳುತನ-ಪರಾಕ್ರಮ, ಅಂಗ-ರೀತಿ, ಪರರು-ಇತರರು, ಒಟ್ಟೈಸಿ-ಒಂದಾಗಿ, ಪಿಡಿದು-ಹಿಡಿದು, ಪರಿತೋಷ-ಅತಿತೃಪ್ತಿ
ಮೂಲ ...{Loading}...
ಕೇಳಿ ಬಲ್ಲಿರೆ ಗಂಗೆಯುತ್ತರ
ಕೂಲದಲಿ ಪಾಂಚಾಲದೇಶ ನೃ
ಪಾಲನಲ್ಲಿಗೆ ದ್ರುಪದನೆಂಬುವನತುಳ ಭುಜಬಲನು
ಆಳುತನದಂಗದಲಿ ಪರರಿಗೆ
ಸೋಲನವನೊಟ್ಟೈಸಿ ದ್ರುಪದನೃ
ಪಾಲಕನ ಪಿಡಿದೊಪ್ಪಿಸಿದರೆಮಗಹುದು ಪರಿತೋಷ ॥62॥
೦೬೩ ಐಸಲೇ ಗುರುದಕ್ಷಿಣಾರ್ಥವಿ ...{Loading}...
ಐಸಲೇ ಗುರುದಕ್ಷಿಣಾರ್ಥವಿ
ದೇಸು ಘನ ತಂದೀವೆವೆಂದುಪ
ಹಾಸದಲಿ ಕೈವೊಯ್ದು ತಮ್ಮೊಳು ನಗುತ ಕೌರವರು
ಆ ಸುಯೋಧನ ಕರ್ಣಸಹಿತ ಮ
ಹೀಶ ತನುಜರು ಬೀಳುಕೊಂಡರು
ವಾಸಿಬಿದ್ದುದು ಪಾಂಡುಸುತ ಕೌರವ ಕುಮಾರರಿಗೆ ॥63॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಷ್ಟೇ ಅಲ್ಲವೇ, ಗುರುದಕ್ಷಿಣೆಯ ಅಪೇಕ್ಷೆ ? ಇದೇನು ದೊಡ್ಡದು ? ತಂದು ಒಪ್ಪಿಸುತ್ತೇವೆ ಎಂದು ಅಣಕದ ನಗೆಯಲ್ಲಿ ಚಪ್ಪಾಳೆಯಿಕ್ಕಿ ಕೌರವರು ತಮ್ಮ ತಮ್ಮಲ್ಲೇ ನಗುತ್ತಿದ್ದರು. ಆ ಸುಯೋಧನ, ಕರ್ಣರೊಂದಿಗೆ ರಾಜಕುಮಾರರು ಬೀಳುಕೊಂಡರು. ಕೌರವ ಕುಮಾರರಿಗೂ ಪಾಂಡುಸುತರಿಗೂ ಸ್ಪರ್ಧೆ ಬಿದ್ದಿತು.
ಪದಾರ್ಥ (ಕ.ಗ.ಪ)
ಘನ-ದೊಡ್ಡದು, ಉಪಹಾಸ-ಅಣಕದನಗೆ, ವಾಸಿ-ಹಟ
ಮೂಲ ...{Loading}...
ಐಸಲೇ ಗುರುದಕ್ಷಿಣಾರ್ಥವಿ
ದೇಸು ಘನ ತಂದೀವೆವೆಂದುಪ
ಹಾಸದಲಿ ಕೈವೊಯ್ದು ತಮ್ಮೊಳು ನಗುತ ಕೌರವರು
ಆ ಸುಯೋಧನ ಕರ್ಣಸಹಿತ ಮ
ಹೀಶ ತನುಜರು ಬೀಳುಕೊಂಡರು
ವಾಸಿಬಿದ್ದುದು ಪಾಂಡುಸುತ ಕೌರವ ಕುಮಾರರಿಗೆ ॥63॥
೦೬೪ ಧಾಳಿಯಿಟ್ಟುದು ರಾಯದಳ ...{Loading}...
ಧಾಳಿಯಿಟ್ಟುದು ರಾಯದಳ ಪಾಂ
ಚಾಲದೇಶಕೆ ಮುಂದೆ ಹೊಕ್ಕುದು
ಚೂಳಿಕೆಯಲಿ ಸುಯೋಧನಾದಿಗಳೂರನುರವಣಿಸಿ
ಧೂಳಿಗೋಟೆಯ ಕೊಂಡಿವರು ರಾ
ಜಾಲಯಕೆ ಬರೆ ದ್ರುಪದನನುಜರು
ಸೋಲಿಸಿದರೈ ಕೌರವೇಂದ್ರನ ಬಲವ ಬರಿಕೈದು ॥64॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವರಾಯನ ಸೈನ್ಯ ಪಾಂಚಾಲ ದೇಶಕ್ಕೆ ಮುತ್ತಿಗೆ ಹಾಕಿತು. ಅಗ್ರ ಭಾಗದಲ್ಲಿ ಸುಯೋಧನಾದಿಗಳು ನಡೆದು ಊರನ್ನು ಆತುರದಿಂದ ಪ್ರವೇಶಿಸಿ ಕೋಟೆಯನ್ನು ಧ್ವಂಸ ಮಾಡಿ ರಾಜನ ಅರಮನೆಗೆ ಬರಲು ದ್ರುಪದನ ತಮ್ಮಂದಿರು ಕೌರವೇಂದ್ರನ ಸೈನ್ಯವನ್ನು ನಾಶಮಾಡಿ ಸೋಲಿಸಿದರು.
ಪದಾರ್ಥ (ಕ.ಗ.ಪ)
ಧಾಳಿ-ಮುತ್ತಿಗೆ, ಚೂಳಿಕೆ-ಅಗ್ರಭಾಗ, ಉರವಣಿ-ಆತುರ, ಧೂಳಿಗೋಟೆ-ಧ್ವಂಸವಾದ ಕೋಟೆ, ಬರಿಕೈದು-ನಾಶಮಾಡಿ
ಮೂಲ ...{Loading}...
ಧಾಳಿಯಿಟ್ಟುದು ರಾಯದಳ ಪಾಂ
ಚಾಲದೇಶಕೆ ಮುಂದೆ ಹೊಕ್ಕುದು
ಚೂಳಿಕೆಯಲಿ ಸುಯೋಧನಾದಿಗಳೂರನುರವಣಿಸಿ
ಧೂಳಿಗೋಟೆಯ ಕೊಂಡಿವರು ರಾ
ಜಾಲಯಕೆ ಬರೆ ದ್ರುಪದನನುಜರು
ಸೋಲಿಸಿದರೈ ಕೌರವೇಂದ್ರನ ಬಲವ ಬರಿಕೈದು ॥64॥
೦೬೫ ಪುರದ ಹೊರ ...{Loading}...
ಪುರದ ಹೊರ ಬಾಹೆಯಲಿ ತಾವೈ
ವರು ಮಹಾ ಸನ್ನಾಹ ಚಾಪ
ಸ್ಫುರಿತ ತೂಣೀಬದ್ಧ ಕಂಪಿತ ಖಡ್ಗ ಪಾಣಿಗಳು
ಗುರುಸಹಿತಲಿವರಿದ್ದರಿತ್ತಲು
ಪುರಜನಂಗಳ ಮುಸಲ ಹತಿಯಲಿ
ಮುರಿದು ಬಂದುದು ಕೌರವೇಂದ್ರನ ದಳ ವಿಘಾತಿಯಲಿ ॥65॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಗರದ ಹೊರಭಾಗದಲ್ಲಿ ತಾವು ಐವರು ಮಹತ್ವದ ಸಿದ್ಧತೆಯಲ್ಲಿ ಬಿಲ್ಲಿನ ಝೆಂಕಾರ, ಬಿಗಿದ ಬತ್ತಳಿಕೆ, ನಡುಗಿಸುವಂಥ ಖಡ್ಗವನ್ನು ಕೈಯಲ್ಲಿ ಹಿಡಿದು ಗುರುವಿನೊಂದಿಗೆ ಇದ್ದರು. ಇತ್ತಕಡೆ ಕೌರವೇಂದ್ರನ ಸೈನ್ಯವು ಪಟ್ಟಣದ ಜನರ ಒನಕೆಯಂತಹ ದೊಣ್ಣೆಯ ಪೆಟ್ಟಿನ ಹೊಡೆತ ತಿಂದು ಹಿಂತಿರುಗಿ ಬಂದಿತು.
ಪದಾರ್ಥ (ಕ.ಗ.ಪ)
ಹೊರಬಾಹೆ-ಹೊರಭಾಗ, ಸನ್ನಾಹ-ಸಿದ್ಧತೆ, ಸ್ಫುರಿತ-ಹೊಳೆಯುತ್ತಿರುವ, ಕಂಪಿತ-ನಡುಗಿಸುವ, ಮುಸಲ-ಒನಕೆ, ಹತಿ-ಪೆಟ್ಟು,
ವಿಘಾತಿ-ಹೊಡೆತ, ಮುರಿದು-ಹಿಂತಿರುಗಿ, ತೂಣಿ-ಬತ್ತಳಿಕೆ
ಮೂಲ ...{Loading}...
ಪುರದ ಹೊರ ಬಾಹೆಯಲಿ ತಾವೈ
ವರು ಮಹಾ ಸನ್ನಾಹ ಚಾಪ
ಸ್ಫುರಿತ ತೂಣೀಬದ್ಧ ಕಂಪಿತ ಖಡ್ಗ ಪಾಣಿಗಳು
ಗುರುಸಹಿತಲಿವರಿದ್ದರಿತ್ತಲು
ಪುರಜನಂಗಳ ಮುಸಲ ಹತಿಯಲಿ
ಮುರಿದು ಬಂದುದು ಕೌರವೇಂದ್ರನ ದಳ ವಿಘಾತಿಯಲಿ ॥65॥
೦೬೬ ಆತುಕೊಣ್ಡರು ಪಾಣ್ಡು ...{Loading}...
ಆತುಕೊಂಡರು ಪಾಂಡು ಸುತರಭಿ
ಜಾತ ಸಮರವನಿವರ ಕೈಯಲಿ
ಮಾತು ಹಲವಿಲ್ಲೆನುತ ಹೊಕ್ಕರು ಕೊಂದು ಪರಬಲವ
ಘಾತಿಗಾನುವರಿಲ್ಲ ದೊರೆಯೆನು
ತಾತನನು ಮುತ್ತಿದರು ಗುರುಗಳಿ
ಗೀತನೇ ದಕ್ಷಿಣೆಯೆನುತ ಹಿಡಿದರು ಮಹೀಪತಿಯ ॥66॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಪಾಂಡುಸುತರು ಶ್ರೇಷ್ಠ ಸಮರವನ್ನು ಕೈಕೊಂಡರು. ಇವರ ಕೈಯಲ್ಲಿ ಹೆಚ್ಚು ಮಾತಿಲ್ಲವೆನುತ್ತ ಶತ್ರು ಸೈನ್ಯದ ಮೇಲೆ ಬಿದ್ದು ಅವರನ್ನು ಕೊಂದು ಪುರವನ್ನು ಪ್ರವೇಶಿಸಿದರು. ದೊರೆಯು ಹೊಡೆತವನ್ನು ತಾಳಿಕೊಳ್ಳುವುದಿಲ್ಲವೆಂದು ಆತನನ್ನು ಮುತ್ತಿದರು. ಗುರುಗಳಿಗೆ ಈತನೇ ದಕ್ಷಿಣೆ ಎಂದು ಮಹಾರಾಜನನ್ನು ಹಿಡಿದರು.
ಪದಾರ್ಥ (ಕ.ಗ.ಪ)
ಅಭಿಜಾತ-ಶ್ರೇಷ್ಠ, ಘಾತಿ-ಹೊಡೆತ, ಆನು-ತಾಳಿಕೊ
ಮೂಲ ...{Loading}...
ಆತುಕೊಂಡರು ಪಾಂಡು ಸುತರಭಿ
ಜಾತ ಸಮರವನಿವರ ಕೈಯಲಿ
ಮಾತು ಹಲವಿಲ್ಲೆನುತ ಹೊಕ್ಕರು ಕೊಂದು ಪರಬಲವ
ಘಾತಿಗಾನುವರಿಲ್ಲ ದೊರೆಯೆನು
ತಾತನನು ಮುತ್ತಿದರು ಗುರುಗಳಿ
ಗೀತನೇ ದಕ್ಷಿಣೆಯೆನುತ ಹಿಡಿದರು ಮಹೀಪತಿಯ ॥66॥
೦೬೭ ಕೊಣ್ಡು ಬನ್ದರು ...{Loading}...
ಕೊಂಡು ಬಂದರು ದ್ರೋಣನಿದಿರಲಿ
ದಿಂಡುಗೆಡಹಿದರೀತನನು ಕೈ
ಕೊಂಡನೆಲವೋ ದ್ರುಪದ ಸಖ ಪೂರ್ವವನು ನೆನೆಯೆನುತ
ಭಂಡನಿವನನು ಸಾಕು ಬಿಡಿ ಸಲೆ
ಚಂಡಿಯಾದನು ದರ್ಪವಿಷ ಮುಂ
ಕೊಂಡು ಮೂರ್ಛಿತನೇನ ಮಾಡುವೆನೆಂದನಾ ದ್ರೋಣ ॥67॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರುಪದ ಮಹಾರಾಜನನ್ನು ಸೆರೆಹಿಡಿದುಕೊಂಡು ಬಂದರು. ದ್ರೋಣನ ಎದುರಿಗೆ ಈತನನ್ನು ಅಡ್ಡ ಬೀಳಿಸಿದರು. ಶಿಷ್ಯರೊಪ್ಪಿಸಿದ ದಕ್ಷಿಣೆಯನ್ನು ಗುರು ಕೈಕೊಂಡನು. “ಎಲವೋ ದ್ರುಪದ ಸಖ, ಪೂರ್ವವನ್ನು ಸ್ಮರಿಸಿಕೋ” ಎಂದು ಹೇಳಿ, ಆ ಮೇಲೆ ಶಿಷ್ಯರ ಕಡೆ ತಿರುಗಿ “ಇವನು ಲಜ್ಜೆಗೇಡಿ, ಇವನನ್ನು ಬಿಟ್ಟು ಬಿಡಿ, ಒಂದೇ ಸಮನೆ ಹಟಮಾರಿಯಾದನು ದರ್ಪವಿಷಕ್ಕೆ ಮೊದಲೇ ಒಪ್ಪಿಸಿಕೊಂಡು ಮೂರ್ಛೆಯಿಂದ ಮೈಮರೆತವನನ್ನು ಏನು ಮಾಡಲಿ?” ಎಂದು ದ್ರೋಣನು ಹೇಳಿದನು.
ಪದಾರ್ಥ (ಕ.ಗ.ಪ)
ದಿಂಡುಗೆಡಹು-ಅಡ್ಡ ಬೀಳಿಸು, ಮುಂಕೊಂಡು-ಮುಂದಾಗಿ, ಭಂಡ-ಲಜ್ಜೆಗೇಡಿ, ಚಂಡಿ-ಹಟಮಾರಿ
ಮೂಲ ...{Loading}...
ಕೊಂಡು ಬಂದರು ದ್ರೋಣನಿದಿರಲಿ
ದಿಂಡುಗೆಡಹಿದರೀತನನು ಕೈ
ಕೊಂಡನೆಲವೋ ದ್ರುಪದ ಸಖ ಪೂರ್ವವನು ನೆನೆಯೆನುತ
ಭಂಡನಿವನನು ಸಾಕು ಬಿಡಿ ಸಲೆ
ಚಂಡಿಯಾದನು ದರ್ಪವಿಷ ಮುಂ
ಕೊಂಡು ಮೂರ್ಛಿತನೇನ ಮಾಡುವೆನೆಂದನಾ ದ್ರೋಣ ॥67॥
೦೬೮ ಎಲವೊ ಕೊಟ್ಟೆನು ...{Loading}...
ಎಲವೊ ಕೊಟ್ಟೆನು ಜೀವದಾನವ
ನಳಲು ನಿನಗೇಕಿನಿತು ಸಾಹಸ
ದಳವಿಯಲಿ ನೀ ನೆರಹು ಹಗೆಯನು ಭಂಡ ಹೋಗೆಂದು
ಕಳೆದು ಕೊಟ್ಟೆನು ನಿನ್ನ ರಾಜ್ಯದ
ನೆಲದೊಳರ್ಧವನಿತ್ತು ನೀ ನಡೆ
ಬಳಿಕಲೆಂದೊಡಬಡಿಸಿ ದ್ರುಪದನ ಬಿಟ್ಟನಾ ದ್ರೋಣ ॥68॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮತ್ತೆ ದ್ರುಪದನಿಗೆ ದ್ರೋಣನು, “ಎಲವೊ ನಿನಗೆ ಜೀವದಾನವನ್ನು ಕೊಟ್ಟೆನು. ನಿನಗೆ ದುಃಖ ಏಕೆ ? ನಿನ್ನ ಶೌರ್ಯ ಎಷ್ಟಿದೆಯೋ ಅಷ್ಟು ಶಕ್ತಿಯಲ್ಲಿ ಶತ್ರುವನ್ನು ಕೂಡಿಸು, ಭಂಡ, ಹೋಗು,ನಿನ್ನನ್ನು ಬಿಟ್ಟಿದ್ದೇನೆ. ನಿನ್ನ ರಾಜ್ಯದಲ್ಲಿ ಅರ್ಧವನ್ನು ನನಗೆ ಕೊಟ್ಟು ಆಮೇಲೆ ನೀನು ಹೊರಡು” ಎಂದು ಅವನನ್ನು ಒಪ್ಪಿಸಿ ದ್ರುಪದನನ್ನು ಬಿಟ್ಟನು.
ಪದಾರ್ಥ (ಕ.ಗ.ಪ)
ಅಳವಿ-ಶಕ್ತಿ, ಸಾಹಸ-ಶೌರ್ಯ, ಒಡಬಡಿಸು-ಒಪ್ಪಿಸು
ಮೂಲ ...{Loading}...
ಎಲವೊ ಕೊಟ್ಟೆನು ಜೀವದಾನವ
ನಳಲು ನಿನಗೇಕಿನಿತು ಸಾಹಸ
ದಳವಿಯಲಿ ನೀ ನೆರಹು ಹಗೆಯನು ಭಂಡ ಹೋಗೆಂದು
ಕಳೆದು ಕೊಟ್ಟೆನು ನಿನ್ನ ರಾಜ್ಯದ
ನೆಲದೊಳರ್ಧವನಿತ್ತು ನೀ ನಡೆ
ಬಳಿಕಲೆಂದೊಡಬಡಿಸಿ ದ್ರುಪದನ ಬಿಟ್ಟನಾ ದ್ರೋಣ ॥68॥
೦೬೯ ಅರಸ ಕೇಳೈ ...{Loading}...
ಅರಸ ಕೇಳೈ ದ್ರುಪದನೀ ಪರಿ
ಪರಿಭವಕೆ ಗುರಿಯಾಗಿ ತನ್ನಯ
ಪುರವ ಹೊಗದೈತಂದು ಗಂಗಾತೀರ ದೇಶದಲಿ
ಧರಣಿಸುರರಲಿ ಪುತ್ರಕಾಮ್ಯಾ
ಧ್ವರವ ವಿರಚಿಸಲಾಗ ಸತ್ವೋ
ತ್ಕರುಷವಂತರನರಸಿದನು ನಾನಾಗ್ರಹಾರದಲಿ ॥69॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯ ಮಹಾರಾಜನೇ ಕೇಳು, ಈ ರೀತಿ ದ್ರುಪದನು ಅವಮಾನಕ್ಕೆ ಗುರಿಯಾಗಿ, ತನ್ನ ಪುರವನ್ನು ಪ್ರವೇಶಿಸದೆ ಗಂಗಾ ತೀರ ಪ್ರದೇಶಕ್ಕೆ ಬಂದು ಭೂಸುರರ ಮೂಲಕ ಪುತ್ರಕಾಮೇಷ್ಟಿಯನ್ನು ಮಾಡಬೇಕೆಂದು ಸಂಕಲ್ಪಿಸಿ ವಿವಿಧ ಅಗ್ರಹಾರಗಳಲ್ಲಿ ಸಾತ್ವಿಕರಾದ ಉತ್ಕೃಷ್ಟರನ್ನು ಹುಡುಕಿದನು.
ಪದಾರ್ಥ (ಕ.ಗ.ಪ)
ಪರಿಭವ-ಅವಮಾನ, ಪರಿ-ರೀತಿ, ಪುತ್ರ ಕಾಮ್ಯಾಧ್ವರ-ಪುತ್ರರನ್ನು ಪಡೆಯಲು ಇಷ್ಟಪಟ್ಟು ಮಾಡುವ ಯಾಗ, ಪುತ್ರಕಾಮೇಷ್ಟಿಯಾಗ, ಸತ್ತ್ವೋತ್ಕರುಷವಂತರು-ಸಾತ್ತ್ವಿಕರಲ್ಲಿ ಉತ್ಕೃಷ್ಟರಾದವರು.
ಮೂಲ ...{Loading}...
ಅರಸ ಕೇಳೈ ದ್ರುಪದನೀ ಪರಿ
ಪರಿಭವಕೆ ಗುರಿಯಾಗಿ ತನ್ನಯ
ಪುರವ ಹೊಗದೈತಂದು ಗಂಗಾತೀರ ದೇಶದಲಿ
ಧರಣಿಸುರರಲಿ ಪುತ್ರಕಾಮ್ಯಾ
ಧ್ವರವ ವಿರಚಿಸಲಾಗ ಸತ್ವೋ
ತ್ಕರುಷವಂತರನರಸಿದನು ನಾನಾಗ್ರಹಾರದಲಿ ॥69॥
೦೭೦ ದ್ರೋಣಭಯದಲಿ ಸಕಲ ...{Loading}...
ದ್ರೋಣಭಯದಲಿ ಸಕಲ ವಿಪ್ರ
ಶ್ರೇಣಿಯಿರೆ ಯಾಜೋಪಯಾಜರು
ಪ್ರಾಣನಿಸ್ಪೃಹರಾಗಿ ಮಾಡಿಸಿದರು ಮಹಾಕ್ರತುವ
ಕೇಣವಳಿದಾಹುತಿಯನಮರರ
ಬಾಣಸಿಗಗುಣಬಡಿಸೆ ದೇವ
ಶ್ರೇಣಿ ದಣಿದುದು ಸಲಿಸಿದರು ಪಾಂಚಾಲನಭಿಮತವ ॥70॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರುಪದನು ಬಂದು ಕೇಳಿಕೊಂಡರೂ, ದ್ರೋಣನ ಭಯದಿಂದ ಎಲ್ಲ ವಿಪ್ರ ಸಮೂಹದಲ್ಲಿ ಯಾರೊಬ್ಬರೂ ಯಜ್ಞ ಮಾಡಿಸುವುದಕ್ಕೆ ಮುಂದೆ ಬರಲಿಲ್ಲ. ಯಾಜೋಪಯಾಜರೆಂಬವರು ಪ್ರಾಣದ ಮೇಲಿನ ಆಸೆಯನ್ನು ಬಿಟ್ಟು ಆ ಮಹಾ ಯಾಗವನ್ನು ಮಾಡಿಸಿದರು. ಯಾವ ಕೊರತೆಯೂ ಇಲ್ಲದಂತೆ ಅಗ್ನಿಗೆ ಹವಿಸ್ಸನ್ನು ಅರ್ಪಿಸಲು ದೇವ ಸಮೂಹ ತೃಪ್ತಿಗೊಂಡು ಪಾಂಚಾಲನ ಅಭೀಷ್ಟವನ್ನು ಸಲ್ಲಿಸಿದರು.
ಪದಾರ್ಥ (ಕ.ಗ.ಪ)
ಶ್ರೇಣಿ-ಸಮೂಹ, ನಿಸ್ಪೃಹ-ಆಸೆಯಿಲ್ಲದ, ಕ್ರತು-ಯಾಗ, ಕೇಣ-ಕೊರತೆ, ಅಮರರ ಬಾಣಸಿಗ-ಅಗ್ನಿ, ದಣಿ-ತೃಪ್ತಿ
ಟಿಪ್ಪನೀ (ಕ.ಗ.ಪ)
ಯಾಜೋಪಯಾಜ-ಯಾಜ, ಉಪಯಾಜರು ಕಾಶ್ಯಪನ ಸಂತತಿಯಲ್ಲಿ ಜನಿಸಿದ ಸೋದರ ಮಹರ್ಷಿಗಳು, ವಾನಪ್ರಸ್ಥಾಶ್ರಮ ಕೈಕೊಂಡು ಗಂಗಾ ನದಿತೀರದಲ್ಲಿ ವಾಸ ಮಾಡುತ್ತಿದ್ದರು. ದ್ರುಪದನು ಪುತ್ರಕಾಮೇಷ್ಟಿಯನ್ನು ಮಾಡಲು ಸಂಕಲ್ಪಿಸಿ ಇವರನ್ನು ಸಂಪರ್ಕಿಸಿದಾಗ ದ್ರೋಣನ ಕುರಿತಾದ ಭಯವನ್ನು ಲೆಕ್ಕಿಸದೇ ಯಾಜನು ಮುಖ್ಯ ಯಾಜಕನಾಗಿ, ಉಪಯಾಜನು ಉಪಯಾಜಕನಾಗಿ ಪುತ್ರಕಾಮೇಷ್ಟಿಯನ್ನು ಮಾಡಿಸಿದರು.
ಮೂಲ ...{Loading}...
ದ್ರೋಣಭಯದಲಿ ಸಕಲ ವಿಪ್ರ
ಶ್ರೇಣಿಯಿರೆ ಯಾಜೋಪಯಾಜರು
ಪ್ರಾಣನಿಸ್ಪೃಹರಾಗಿ ಮಾಡಿಸಿದರು ಮಹಾಕ್ರತುವ
ಕೇಣವಳಿದಾಹುತಿಯನಮರರ
ಬಾಣಸಿಗಗುಣಬಡಿಸೆ ದೇವ
ಶ್ರೇಣಿ ದಣಿದುದು ಸಲಿಸಿದರು ಪಾಂಚಾಲನಭಿಮತವ ॥70॥
೦೭೧ ಅರಸ ಕೇಳೈ ...{Loading}...
ಅರಸ ಕೇಳೈ ಕುಂಡ ಮಧ್ಯದೊ
ಳುರಿಯ ಕರುವಿಟ್ಟೆರಕಿದರೊ ಭಾ
ಸುರ ಮಹಾನಲನಪರ ರೂಪೋ ತಾನಿದೇನೆನಲು
ಶರವಡಾಯುಧ ಚಾಪ ವರ್ಮೋ
ತ್ಕರಸಹಿತ ರೌದ್ರಾಂಗನಾಗವ
ತರಿಸಿದನು ಪಾಂಚಾಲಭೂಪತಿಭುಜವ ಸೂಳೈಸೆ ॥71॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಗ್ನಿಕುಂಡದ ಮಧ್ಯದಿಂದ ಉರಿಯನ್ನು ಅಚ್ಚಿನಲ್ಲಿ ಎರಕ ಹುಯ್ದರೋ ಎಂಬಂತೆ, ಪ್ರಕಾಶಿಸುವ ಮಹಾಗ್ನಿಯ ಅಪರಾವತಾರವೋ ಎನ್ನುವಂತೆ ಬಿಲ್ಲು, ಬಾಣ, ಖಡ್ಗ ಕವಚಗಳ ಸಹಿತ ಭಯಂಕರವಾದ ದೇಹದೊಂದಿಗೆ ಧೃಷ್ಟದ್ಯುಮ್ನನು ಅವತರಿಸಿದನು. ಪಾಂಚಾಲರಾಜನು ಭುಜವನ್ನು ತಟ್ಟಿದನು.
ಪದಾರ್ಥ (ಕ.ಗ.ಪ)
ಕರು-ಎರಕದ ಅಚ್ಚು, ಭಾಸುರ-ಪ್ರಕಾಶ,
ಅಪರರೂಪೋ-ಅಪರಾವತಾರವೋ, ಶರ-ಬಾಣ, ಅಡಾಯುಧ-ಖಡ್ಗ, ವರ್ಮ-ಕವಚ, ರೌದ್ರ-ಭಯಂಕರ
ಮೂಲ ...{Loading}...
ಅರಸ ಕೇಳೈ ಕುಂಡ ಮಧ್ಯದೊ
ಳುರಿಯ ಕರುವಿಟ್ಟೆರಕಿದರೊ ಭಾ
ಸುರ ಮಹಾನಲನಪರ ರೂಪೋ ತಾನಿದೇನೆನಲು
ಶರವಡಾಯುಧ ಚಾಪ ವರ್ಮೋ
ತ್ಕರಸಹಿತ ರೌದ್ರಾಂಗನಾಗವ
ತರಿಸಿದನು ಪಾಂಚಾಲಭೂಪತಿಭುಜವ ಸೂಳೈಸೆ ॥71॥
೦೭೨ ವೇದಿ ಮಧ್ಯವನೊಡೆದು ...{Loading}...
ವೇದಿ ಮಧ್ಯವನೊಡೆದು ಮೂಡಿದ
ಳಾದರಿಸೆ ಜನವಮಮ ಕಾಮನ
ಕೈದುವೋ ತ್ರೈಲೋಕ್ಯ ಮೋಹನ ಮಂತ್ರ ದೇವತೆಯೊ
ಕಾದುವರೆ ಕರೆ ಹರಿಹರ ಬ್ರ
ಹ್ಮಾದಿಗಳಿಗೊರೆಯೆಂಬ ಹೂಂಕೃತಿ
ಯಾದುದಾ ಕಾಮಂಗೆ ದ್ರುಪದಾತ್ಮಜೆಯ ಜನನದಲಿ ॥72॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯಜ್ಞ ವೇದಿಕೆಯ ಮಧ್ಯವನ್ನು ಭೇದಿಸಿ ಅಮಮ ! ಕಾಮನ ಆಯುಧವೋ, ಮೂರು ಲೋಕಗಳನ್ನು ಮೋಹಗೊಳಿಸುವ ಮಂತ್ರ ದೇವತೆಯೋ ಎನ್ನುವಂತೆ ಪರಮ ಸುಂದರಿಯಾದ ಕುಮಾರಿಯೊಬ್ಬಳು, ಜನರು ಆಶ್ಚರ್ಯಪಡುತ್ತಿರಲು ಮೂಡಿ ಬಂದಳು. ಆ ದ್ರುಪದನ ಮಗಳ ಜನನದಲ್ಲಿ ಕಾಮನಿಗೆ ಕಾದಾಡುವುದಾದರೆ ಹರಿಹರ ಬ್ರಹ್ಮಾದಿಗಳಿಗೆ ಸಮಾನನೆಂಬ ಹೂಂಕೃತಿ ಉಂಟಾಯಿತು.
ಪದಾರ್ಥ (ಕ.ಗ.ಪ)
ವೇದಿ-ಯಜ್ಞಭೂಮಿ, ಕೈದು-ಆಯುಧ, ಆದರಿಸು-ಗೌರವಿಸು, ಒರೆ-ಸಮಾನ
ಮೂಲ ...{Loading}...
ವೇದಿ ಮಧ್ಯವನೊಡೆದು ಮೂಡಿದ
ಳಾದರಿಸೆ ಜನವಮಮ ಕಾಮನ
ಕೈದುವೋ ತ್ರೈಲೋಕ್ಯ ಮೋಹನ ಮಂತ್ರ ದೇವತೆಯೊ
ಕಾದುವರೆ ಕರೆ ಹರಿಹರ ಬ್ರ
ಹ್ಮಾದಿಗಳಿಗೊರೆಯೆಂಬ ಹೂಂಕೃತಿ
ಯಾದುದಾ ಕಾಮಂಗೆ ದ್ರುಪದಾತ್ಮಜೆಯ ಜನನದಲಿ ॥72॥
೦೭೩ ದ್ರೋಣವಧೆಗೀ ಮಗನು ...{Loading}...
ದ್ರೋಣವಧೆಗೀ ಮಗನು ಪಾರ್ಥಗೆ
ರಾಣಿಯೀ ಮಗಳೆಂದು ದ್ರುಪದ
ಕ್ಷೋಣಿಪತಿ ಸಲಹಿದನು ಸುತರನು ಸಾನುರಾಗದಲಿ
ದ್ರೋಣನೀತನ ಕರೆಸಿ ಶಸ್ತ್ರದ
ಜಾಣಿಕೆಯ ಕಲಿಸಿದನು ವಿಗಡರ
ಕಾಣೆನೀ ಕಲಶಜನ ಪರಿಯಲಿ ರಾಯ ಕೇಳ್ ಎಂದ ॥73॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಯಜ್ಞದಲ್ಲಿ ಅಗ್ನಿಕುಂಡದಿಂದ ಮಕ್ಕಳನ್ನು ಪಡೆದ ಆ ದ್ರುಪದ ಮಹಾರಾಜನು, “ದ್ರೋಣನ ವಧೆಗೆ ಈ ಮಗ, ಪಾರ್ಥನಿಗೆ ರಾಣಿ ಈ ಮಗಳು” ಎಂದು ನಿಶ್ಚಯಿಸಿ ಅವರನ್ನು ವಿಶೇಷ ಪ್ರೇಮದಿಂದ ಕಾಪಾಡಿದನು. ದ್ರೋಣನು ದ್ರುಪದ ಪುತ್ರನನ್ನು ಕರೆಸಿಕೊಂಡು ಶಸ್ತ್ರವಿದ್ಯೆಯ ಚಾತುರ್ಯವನ್ನು ಕಲಿಸಿದನು. ದ್ರೋಣನ ರೀತಿಯಲ್ಲಿ ವೀರರನ್ನು ಕಾಣೆನು ಮಹಾರಾಜ ಎಂದು ವೈಶಂಪಾಯನು ಹೇಳಿದನು.
ಪದಾರ್ಥ (ಕ.ಗ.ಪ)
ಸಾನುರಾಗ-ವಿಶೇಷ ಪ್ರೇಮ, ಜಾಣಿಕೆ-ಚಾತುರ್ಯ, ವಿಗಡ-ದೊಡ್ಡ
ಮೂಲ ...{Loading}...
ದ್ರೋಣವಧೆಗೀ ಮಗನು ಪಾರ್ಥಗೆ
ರಾಣಿಯೀ ಮಗಳೆಂದು ದ್ರುಪದ
ಕ್ಷೋಣಿಪತಿ ಸಲಹಿದನು ಸುತರನು ಸಾನುರಾಗದಲಿ
ದ್ರೋಣನೀತನ ಕರೆಸಿ ಶಸ್ತ್ರದ
ಜಾಣಿಕೆಯ ಕಲಿಸಿದನು ವಿಗಡರ
ಕಾಣೆನೀ ಕಲಶಜನ ಪರಿಯಲಿ ರಾಯ ಕೇಳೆಂದ ॥73॥
೦೭೪ ಮಗನು ಧೃಷ್ಟದ್ಯುಮ್ನ ...{Loading}...
ಮಗನು ಧೃಷ್ಟದ್ಯುಮ್ನ ದ್ರೌಪದಿ
ಮಗಳು ಭಾರದ್ವಾಜನೆತ್ತಿದ
ಹಗೆಗೆ ಹರುವಾಯ್ತೆನುತ ಹಿಗ್ಗಿದ ದ್ರುಪದಭೂಪಾಲ
ದುಗುಡದಲಿ ಕುರು ರಾಯನೀ ದಾ
ಯಿಗರ ಬಿರಿದಿನ ಬಿಂಕದಂಕೆಯ
ಬಿಗಿದ ಪರಿಯನು ನೆನೆದು ಮರುಗಿದನರಸ ಕೇಳ್ ಎಂದ ॥74॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮಗನು ಧೃಷ್ಟದ್ಯುಮ್ನ, ಮಗಳು ದ್ರೌಪದಿ, ಭಾರದ್ವಾಜನು ಎತ್ತಿಕೊಂಡ ದ್ವೇಷಕ್ಕೆ ದಾರಿಯಾಯ್ತೆಂದು ದ್ರುಪದ ಮಹಾರಾಜನು ಸಂತೋಷಿಸಿದನು. ಇತ್ತ ಕುರುರಾಯನು ಈ ದಾಯಾದಿಗಳ ಹೊಗಳಿಕೆಯ ಪ್ರತಿಷ್ಠೆಯ ಸ್ವಾಧೀನದ ಹೆಮ್ಮೆಯ ರೀತಿಯನ್ನು ನೆನಪಿಸಿಕೊಂಡು ದುಃಖಪಟ್ಟನು.
ಪದಾರ್ಥ (ಕ.ಗ.ಪ)
ಹರುವು-ದಾರಿ, ಹಿಗ್ಗು-ಸಂತೋಷಿಸು, ಬಿರಿದು-ಹೊಗಳಿಕೆ, ಬಿಂಕ-ಪ್ರತಿಷ್ಠೆ, ಅಂಕ-ಸ್ವಾಧೀನ, ಬಿಗಿ-ಹೆಮ್ಮೆ
ಟಿಪ್ಪನೀ (ಕ.ಗ.ಪ)
ಧೃಷ್ಟದ್ಯುಮ್ನ-ದ್ರುಪದ ರಾಜನ ಮಗ. ಅಯೋನಿಜ, ಅಗ್ನಿಕುಂಡದಿಂದ ದ್ರೌಪದಿಯ ಸಂಗಡ ಜನಿಸಿದವ. ಈತ ಅಗ್ನಿಯ ಅಂಶದಿಂದ ಹುಟ್ಟಿದವನು. ತಕ್ಕ ವಯಸ್ಸಿನಿಂದ, ಶಸ್ತ್ರ ಪೂರಿತವಾದ ರಥದಲ್ಲಿ ಕುಳಿತುಕೊಂಡು ಪ್ರಗಲ್ಭನೂ, ಪ್ರಜಾಪಾಲನ ಚತುರನೂ, ಬಲ, ಕವಚ, ಕುಂಡಲ, ಶಸ್ತ್ರ, ಶೌರ್ಯ, ಉತ್ಸಾಹಗಳೊಂದಿಗೆ ಜನಿಸಿದವನೂ ಆದ್ದರಿಂದ ಈತನಿಗೆ ಧೃಷ್ಟದ್ಯುಮ್ನನೆಂದು ಹೆಸರು. ಈತ ದ್ರೋಣಾಚಾರ್ಯರಲ್ಲಿಯೇ ಅಸ್ತ್ರ ವಿದ್ಯೆಯನ್ನು ಕಲಿತ.
ದ್ರೌಪದೀ-ದ್ರುಪದ ರಾಜನ ಮಗಳು, ಕೃಷ್ಣೆಯೆಂಬುದು ಈಕೆಯ ನಾಮಾಂತರ ಈಕೆ ಅಗ್ನಿಕುಂಡದಿಂದ ಜನಿಸಿದವಳು. ಅಯೋನಿಜೆ, ಪಾಂಚಾಲರಾಜನ ಮಗಳಾದ್ದರಿಂದ ಈಕೆಯನ್ನು ಪಾಂಚಾಲಿ ಎಂದೂ ಕರೆಯುತ್ತಿದ್ದರು.
ಮೂಲ ...{Loading}...
ಮಗನು ಧೃಷ್ಟದ್ಯುಮ್ನ ದ್ರೌಪದಿ
ಮಗಳು ಭಾರದ್ವಾಜನೆತ್ತಿದ
ಹಗೆಗೆ ಹರುವಾಯ್ತೆನುತ ಹಿಗ್ಗಿದ ದ್ರುಪದಭೂಪಾಲ
ದುಗುಡದಲಿ ಕುರು ರಾಯನೀ ದಾ
ಯಿಗರ ಬಿರಿದಿನ ಬಿಂಕದಂಕೆಯ
ಬಿಗಿದ ಪರಿಯನು ನೆನೆದು ಮರುಗಿದನರಸ ಕೇಳೆಂದ ॥74॥