೦೭

೦೦೦ ಸೂ ರಾಯ ...{Loading}...

ಸೂ. ರಾಯ ಕಟಕಾಚಾರ್ಯನಿಂದ ವಿ
ಘಾಯದಲಿ ನೊಂದನಲಮುಖದಲಿ
ರಾಯ ದ್ರುಪದನು ಪಡೆದ ಧೃಷ್ಟದ್ಯುಮ್ನ ದ್ರೌಪದಿಯ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ಕಲಿತರು ನಿಮ್ಮ ಪೂರ್ವ ನೃ
ಪಾಲಕರು ಸರಹಸ್ಯ ಸಾಂಗೋಪಾಂಗ ವಿದ್ಯೆಗಳ
ಸ್ಥೂಲದಲಿ ಸೂಕ್ಷ್ಮದಲಿ ಬಹಳ ವಿ
ಶಾಲದಲಿ ಸಂಕೋಚದಲಿ ಲಘು
ಪಾಳಿಯಲಿ ಹಾರದಲಿ ವಿವಿಧಾನುಪ್ರಯೋಗದಲಿ ॥1॥

೦೦೨ ಎಡ ಬಲದ ...{Loading}...

ಎಡ ಬಲದ ಮಯಣಾಮ ಹೊಳಹಿನ
ಕಡಲ ತೆರೆವೆರೆಯದತಿ ಬವರಿಯ
ಬಿಡೆಯ ದುವ್ವಾಳಿಗಳ ಸೂಟಿಯ ಸರಳ ಸೋಹಿನಲಿ
ಕಡುಗಲಿಗಳೇರಾಟದಲಿ ಮಿಗೆ
ಝಡಿ ಪವಾಡ ದೃಢಾಯತಿಕೆಗಿದು
ಪಡಿಯ ನಳ ರೇವಂತರೆಂದುದು ರಾವುತಿಕೆಗಳಲಿ ॥2॥

೦೦೩ ನಗವನೊಡ್ಡಿದರೊನ್ದೆ ಸರಳಲಿ ...{Loading}...

ನಗವನೊಡ್ಡಿದರೊಂದೆ ಸರಳಲಿ
ಹುಗಿಲುಗಳೆವ ವಿದೂರ ಪಾತದಿ
ಗಗನ ಯಂತ್ರವನೆಸುವ ಜೋಕೆಯ ಜೋದ ವಿದ್ಯದಲಿ
ಉಗಿವ ಬಿಡುವೆಡ ಬಲನ ಬವರಿಯ
ಲಗಿವ ಲವಣಿಯ ದಂತಿ ಶಿಕ್ಷೆಗೆ
ಮಿಗಿಲು ಭಗದತ್ತಾದಿಗಳಿಗೆಂದುದು ಕುಮಾರಕರ ॥3॥

೦೦೪ ರಥವ ರಕ್ಷಿಸಿಕೊಣ್ಡು ...{Loading}...

ರಥವ ರಕ್ಷಿಸಿಕೊಂಡು ನಿಜ ಸಾ
ರಥಿಯ ಕಾಯಿದು ಮುಂದೆ ಹೂಡಿದ
ರಥಹಯಂಗಳ ಮೈಗಳಲಿ ಮಸೆಗಾಣದಂದದಲಿ
ಪ್ರಥಿತರಿಪು ಶಸ್ತ್ರಾಸ್ತ್ರವನು ರಿಪು
ರಥಿಕರನು ಸಮರದಲಿ ಜಯಿಸುವ
ರಥಿಕ ವಿದ್ಯೆದೊಳಿವರ ಸರಿ ಸುರನರರೊಳಿಲ್ಲೆಂದ ॥4॥

೦೦೫ ಇನಿಬರೊಳು ಬಿಲುಗಾರನಾರ ...{Loading}...

ಇನಿಬರೊಳು ಬಿಲುಗಾರನಾರ
ರ್ಜುನನೊ ಕರ್ಣನೊ ಭೀಮ ದುರ್ಯೋ
ಧನರೊ ಮಾದ್ರೀಸುತರೊ ಮೇಣ್ ದುಶ್ಯಾಸನಾದಿಗಳೊ
ಮನದಿ ಕೈಯಲಿ ಕಂಗಳೋ ಲೋ
ಚನವೆ ಕಂಗಳೊ ಕಾಣಬೇಕೆಂ
ದೆನುತ ಗುರು ರಚಿಸಿದನು ಲಕ್ಷ್ಯವನೊಂದು ವೃಕ್ಷದಲಿ ॥5॥

೦೦೬ ಕಾಣಬಾರದು ಲಕ್ಷ್ಯವಗ್ಗದ ...{Loading}...

ಕಾಣಬಾರದು ಲಕ್ಷ್ಯವಗ್ಗದ
ಜಾಣ ಭಟರಿಗೆ ಕಟ್ಟಿದೊರೆಯಿದು
ಕಾಣಿಸಿದರೈ ಹೂಣಿಸಿದಿರೈ ಹೂಡಿದಂಬಿನಲಿ
ಕಾಣಿರೇ ಕರ್ಣಾದಿ ಸುಭಟ
ಶ್ರೇಣಿಯೆಂಬೀ ಗುರುವಿನಣಕವ
ನಾಣೆಯಿಟ್ಟವೊಲೆಚ್ಚು ಲಕ್ಷ್ಯವ ಕೆಡಹಿದನು ಪಾರ್ಥ ॥6॥

೦೦೭ ಹಿರಿದು ಮೆಚ್ಚಿ ...{Loading}...

ಹಿರಿದು ಮೆಚ್ಚಿ ಧನಂಜಯನನಾ
ದರಿಸಿ ಕೊಟ್ಟನು ಸಕಲ ವಿದ್ಯವ
ನುರುತರ ಪ್ರೇಮದಲಿ ಸೆಣಸಿದೊಡೇಕಲವ್ಯಕನ
ಬೆರಳ ಕೊಂಡನು ಪಾರ್ಥನನು ಪತಿ
ಕರಿಸಿದನು ತನಗಾದ ನೆಗಳಿನ
ದರಧುರದ ಭೀತಿಯನು ಗೆಲಿದನು ನರನ ದೆಸೆಯಿಂದ ॥7॥

೦೦೮ ಇರಲಿರಲು ಫಲುಗುಣನನೆಕ್ಕಟಿ ...{Loading}...

ಇರಲಿರಲು ಫಲುಗುಣನನೆಕ್ಕಟಿ
ಗರೆದು ಶಸ್ತ್ರಾಸ್ತ್ರ ಪ್ರಪಂಚದ
ಪರಮ ಸಿದ್ಧಾಂತವನು ಕಲಿಸಿ ಮಹಾಸ್ತ್ರ ಸಂಗತಿಯ
ಕರುಣಿಸಿದನಾಗ್ನೇಯ ಪೌರಂ
ದರ ಮಹಾ ವಾಯವ್ಯ ವಾರುಣ
ಹರಸಖ ಬ್ರಹ್ಮಾಸ್ತ್ರ ಸೌರೋರಗ ನಗಾದಿಗಳ ॥8॥

೦೦೯ ಒನ್ದು ದಿನ ...{Loading}...

ಒಂದು ದಿನ ವೊಡ್ಡೋಲಗಕೆ ಗುರು
ಬಂದು ಮನ್ನಿಸಿಕೊಂಡು ನಸುನಗು
ತೆಂದನಾ ಧೃತರಾಷ್ಟ್ರ ಗಂಗಾಸೂನು ವಿದುರರಿಗೆ
ಇಂದು ಪರಿಯಂತರವು ನಿಮ್ಮಯ
ನಂದನರನೋದಿಸಿದೆನವರಭಿ
ನಂದನೀಯರೊ ನಿಂದ್ಯರೋ ನೀವ್ ನೋಡಬೇಕೆಂದ ॥9॥

೦೧೦ ಸಕಲ ಶಸ್ತ್ರಾಸ್ತ್ರದಲಿ ...{Loading}...

ಸಕಲ ಶಸ್ತ್ರಾಸ್ತ್ರದಲಿ ಗಜ ಹಯ
ನಿಕರದೇರಾಟದಲಿ ಲೋಕ
ಪ್ರಕಟ ಮಾರ್ಗೀಕೃತ ಚತುರ್ದಶ ವಿಮಲ ವಿದ್ಯದಲಿ
ಸಕಲ ಲಕ್ಷಣ ಗಣಿತ ಗಾರುಡ
ವಿಕಟ ಭರತಾದ್ಯಖಿಲ ಕಳೆಯಲಿ
ವಿಕಳರೋ ಸಂಪೂರ್ಣರೋ ನೀವ್ ನೋಡಬೇಕೆಂದ ॥10॥

೦೧೧ ಲೇಸನೆನ್ದಿರಿ ಸುತರ ...{Loading}...

ಲೇಸನೆಂದಿರಿ ಸುತರ ವಿದ್ಯಾ
ಭ್ಯಾಸ ರಚಿತ ಶ್ರಮವನಾವರಿ
ದೈಸು ನಿಮಗುತ್ಸವವಲೇ ತಪ್ಪಾವುದುಚಿತವಲೆ
ಈಸು ದಿನವೀ ಮಕ್ಕಳೊಡನಾ
ಯಾಸವಿದು ಸಾಮಾನ್ಯವೇ ನಾ
ವೇಸು ಧನ್ಯರೊ ನಿಮ್ಮ ದೆಸೆಯಿಂದೆಂದನಾ ಭೀಷ್ಮ ॥11॥

೦೧೨ ಆದಿಯಲಿ ಪುರವೈರಿ ...{Loading}...

ಆದಿಯಲಿ ಪುರವೈರಿ ಬಳಿಕಿನೊ
ಳಾದನಗ್ಗದ ಪರಶುಧರನೀ
ಮೇದಿನಿಯೊಳೀ ಯುಗದಲನುಪಮ ಶಸ್ತ್ರ ವಿದ್ಯೆದಲಿ
ವೈದಿಕದಲೀ ನಿಮ್ಮವೋಲ್ ದೊರೆ
ಯಾದನಾರು ಕುಮಾರಕರ ಪು
ಣ್ಯೋದಯದ ಕಂದೆರವೆಯೈಸಲೆಯೆಂದನಾ ಭೀಷ್ಮ ॥12॥

೦೧೩ ಜೋಯಿಸನ ಕರೆದಖಿಳ ...{Loading}...

ಜೋಯಿಸನ ಕರೆದಖಿಳ ದಿವಸದೊ
ಳಾಯಿದರು ಶುಭದಿನವನವಗೆ ಪ
ಸಾಯದುಡುಗೊರೆ ಸಹಿತ ಮನ್ನಿಸಿ ಮನೆಗೆ ಕಳುಹಿಸಿದರು
ರಾಯನಾಜ್ಞೆಯೊಳಿಭ ಪುರದ ಹೊರ
ಗಾಯತದ ಭೂಮಿಯಲಿ ವಾಸ್ತು ವಿ
ಧೇಯವೆನಲಳವಡಿಸಿದರು ಹನ್ನೆರಡು ಯೋಜನವ ॥13॥

೦೧೪ ತರವಿಡಿದು ರಚಿಸಿದರು ...{Loading}...

ತರವಿಡಿದು ರಚಿಸಿದರು ನೆರೆಯು
ಪ್ಪರಿಗೆಗಳ ಹಂತಿಗಳನಂತಃ
ಪುರವ ತತ್ಪಾಶ್ರ್ವದಲಿ ಭಾರಿಯ ಭದ್ರ ಭವನಿಕೆಯ
ಪುರಜನದ ಪರಿಜನದ ನೆಲೆಯು
ಪ್ಪರಿಗೆಗಳ ರಚಿಸಿದರು ಹಸ್ತಿನ
ಪುರದ ಸಿರಿ ಸಾಮಾನ್ಯವೇ ನರನಾಥ ಕೇಳ್ ಎಂದ ॥14॥

೦೧೫ ನೆರೆದುದಗಣಿತ ಕರಿ ...{Loading}...

ನೆರೆದುದಗಣಿತ ಕರಿ ತುರಂಗಮ
ವರವರೂಥ ಪದಾತಿ ಭೂಮೀ
ಶ್ವರರು ಬಂದರು ನೋಡಲೆಂದು ದಿಗಂತ ಸಂಗತಿಯ
ವರ ಮುಹೂರ್ತದ ದಿವಸದಲಿ ಸಾ
ಗರದ ತೆರೆ ಬಿಟ್ಟಂತೆ ಕಳನೊಳು
ನೆರೆದು ನಿಂದುದು ಜನನಿಕರವೇನೆಂಬೆನದ್ಭುತವ ॥15॥

೦೧೬ ಸನ್ದಣಿಸಿ ನೃಪರಾಣಿವಾಸದ ...{Loading}...

ಸಂದಣಿಸಿ ನೃಪರಾಣಿವಾಸದ
ಗೊಂದಣದ ದಂಡಿಗೆಗಳಿಳಿದವು
ಮುಂದೆ ಹೊಯ್ಕಂಬಿಗಳ ಜೋಡಿಯ ಜನ ಪಲಾಯನದ
ಬಂದರಾ ಗಾಂಧಾರಿ ಕುಂತಿಯ
ರಿಂದುಮುಖಿಯರ ಮೇಳದಲಿ ನಡೆ
ತಂದುದಗಣಿತ ಪುರವಧೂ ನಿಕುರುಂಬವೊಗ್ಗಿನಲಿ ॥16॥

೦೧೭ ವಿದುರ ಧೃತರಾಷ್ಟ್ರರು ...{Loading}...

ವಿದುರ ಧೃತರಾಷ್ಟ್ರರು ಸಹಿತ ಸುರ
ನದಿಯ ಮಗನೈತಂದು ನವ ಭ
ದ್ರದಲಿ ಕುಳ್ಳಿರ್ದನು ಪಸಾಯತ ಸಚಿವ ಜನ ಸಹಿತ
ಒದರುವಗ್ಗದ ವಂದಿಗಳ ಬಿಡೆ
ಸದೆವ ಬಹು ವಿಧ ವಾದ್ಯರವ ಮಿ
ಕ್ಕೊದೆದು ಹೊಯ್ದುದು ಲೋಕ ಮೂರರ ಕರ್ಣಕೋಟರವ ॥17॥

೦೧೮ ಪರಿಪರಿಯ ಶೃಙ್ಗಾರದಲಿ ...{Loading}...

ಪರಿಪರಿಯ ಶೃಂಗಾರದಲಿ ನೂ
ರ್ವರು ಸಹಿತ ದುರ್ಯೋಧನನು ನಾ
ಲ್ವರು ಸಹಿತ ಯಮನಂದನನು ತಮ್ಮೆರಡು ಪಾಶ್ರ್ವದಲಿ
ಗುರುತನುಜ ಕೃಪ ಕರ್ಣ ಸುಬಲಾ
ದ್ಯರು ಪುರೋಭಾಗದಲಿ ಭೂಮೀ
ಶ್ವರರಸಂಖ್ಯರು ಹಿಂದೆ ಬರಲೈತಂದನಾ ದ್ರೋಣ ॥18॥

೦೧೯ ಹೊಯ್ದು ಕೋಣನ ...{Loading}...

ಹೊಯ್ದು ಕೋಣನ ಕುರಿಯ ಹಿಂಡಿನ
ತೊಯ್ದ ರಕ್ತೋದನದ ರಾಶಿಯ
ನೈದೆ ದೆಸೆದೆಸೆಗಳಲಿ ಬಲಿದರು ಭೂತ ತುಷ್ಟಿಗಳ
ಕೈದುಗಳ ತನಿವೆಳಗು ನೈದಿಲ
ಮೈದುನನ ಮಾರಂಕವೆನೆ ಬಂ
ದೈದೆ ರಂಗಸ್ಥಳವ ಹೊಕ್ಕುದು ರಾಜಸುತನಿಕರ ॥19॥

೦೨೦ ಬಾಗಿಲಲಿ ಕಟ್ಟಿಗೆಯ ...{Loading}...

ಬಾಗಿಲಲಿ ಕಟ್ಟಿಗೆಯ ಕೈಗಳ
ಲಾ ಗುರೂದ್ಭವ ಕೃಪರು ನಿಂದರು
ಸೀಗುರಿಯ ಸುಳಿವಿನ ತರಂಗದ ಸಾಲ ಸತ್ತಿಗೆಯ
ಸಾಗರದ ಗಳ ಗರ್ಜನೋದ್ಭಟೆ
ಹೋಗಲಿದಕದು ಪಾಡೆಯೆನೆ ಚಾ
ಪಾಗಮಾಚಾರ್ಯನ ಘಡಾವಣೆ ಘಲ್ಲಿಸಿತು ಜಗವ ॥20॥

೦೨೧ ಆ ಮಹಾ ...{Loading}...

ಆ ಮಹಾ ಕಳನೆಂಟು ದಿಕ್ಕಿನ
ಹೋಮ ತೀರಲು ಘಳಿಗೆವಟ್ಟಲ
ಸೌಮುಹೂರ್ತಿಕರಾಯತ ಧ್ವನಿ ಸಾರ ಸಮಯದಲಿ
ಸೋಮ ವಂಶೋದ್ಭವ ನೃಪಾಲ ಲ
ಲಾಮನಗ್ಗದ ಧರ್ಮಸುತನು
ದ್ದಾಮ ಗುರುವಿಂಗೆರಗಿ ನಿಂದನು ನುಡಿಸಿದನು ಧನುವ ॥21॥

೦೨೨ ಅರಸ ಕೇಳು ...{Loading}...

ಅರಸ ಕೇಳು ಯುಧಿಷ್ಠಿರನು ಪರಿ
ಪರಿಯಯೆಸುಗೆಯ ಚಾಪವಿದ್ಯಾ
ನಿರತಿಶಯಕೋ ಯೆಂದು ಗರ್ಜಿಸಿತಾ ಸಭಾ ಜಲಧಿ
ಸುರಗಿ ಹಿರಿಯುಬ್ಬಣವಡಾಯುಧ
ಹರಿಗೆ ಚಕ್ರ ಮುಸುಂಡಿ ಮುದ್ಗರ
ಪರಶು ಮೊದಲಾದಖಿಳ ಶಸ್ತ್ರ ಶ್ರಮವ ತೋರಿಸಿದ ॥22॥

೦೨೩ ಕರಿ ತುರಗದೇರಾಟ ...{Loading}...

ಕರಿ ತುರಗದೇರಾಟ ಮೊದಲಾ
ಗಿರೆ ಸಮಸ್ತ ನೃಪಾಲ ವಿದ್ಯಾ
ಪರಿಣತಿಗೆ ಹಿಗ್ಗಿದರು ಭೀಷ್ಮಾದಿಗಳು ಹರುಷದಲಿ
ಪರಿವಿಡಿಗಳಲಿ ನಕುಲ ಸಹದೇ
ವರು ವಿವಿಂಶತಿ ಚಿತ್ರಬಲ ದು
ರ್ಮರುಷಣರು ತೋರಿದರು ಶ್ರಮವನು ನೂರ್ವರೊಗ್ಗಿನಲಿ ॥23॥

೦೨೪ ಈತ ಧರ್ಮಜನಿವರು ...{Loading}...

ಈತ ಧರ್ಮಜನಿವರು ಮಾದ್ರೀ
ಜಾತರೀತ ಸುಲೋಚನನು ಬಳಿ
ಕೀತ ದೀರ್ಘಕವಿಂದನಿವನಿಂತೀತನಿವನೆಂದು
ಈತ ಧನುವಿನಲೀತ ಖಡ್ಗದ
ಲೀತ ಪರಿಘದಲೀತ ಕುಂತದ
ಲೀತ ಬಲುಹೆಂದಂಧ ಭೂಪತಿಗರುಹಿದನು ವಿದುರ ॥24॥

೦೨೫ ಬಳಿಕ ನಾನಾ ...{Loading}...

ಬಳಿಕ ನಾನಾ ದೇಶದರಸುಗ
ಳಿಳಿದು ತಮಗಳವಟ್ಟ ಶಸ್ತ್ರಾ
ವಳಿಗಳಲಿ ತೋರಿದರು ಮೆಚ್ಚಿಸಿ ತನ್ಮಹಾಸಭೆಯ
ನೆಲನನಬ್ಬರಿಸುವ ಸಭಾ ಕಳ
ಕಳದ ಮೊರೆಯನು ತಿವಿವ ಪರಿ ವೆ
ಗ್ಗಳದ ಪಾಯವಧಾರು ಮಸಗಿದುದೊಂದು ಥಟ್ಟಿನಲಿ ॥25॥

೦೨೬ ಹಗಲು ಕೈದೀವಿಗೆಯ ...{Loading}...

ಹಗಲು ಕೈದೀವಿಗೆಯ ಬಿರುದಿನ
ವಿಗಡನಿವನಾರೆನಲು ಭೂಪಾ
ಳಿಗಳ ರತ್ನಪ್ರಭೆಯ ಲಹರಿಯ ಲಾವಣಿಗೆ ಮಿಗಿಲು
ಝಗಝಗಿಪ ತನುರುಚಿಯ ಮಿಂಚನು
ಮಿಗುವ ಖಡ್ಗಚ್ಛವಿಯ ತಲೆಯೊ
ತ್ತುಗಳ ಚಾವಡಿಯೊಳಗೆ ಕೌರವ ರಾಯನೈತಂದ ॥26॥

೦೨೭ ಹೋ ನಿರನ್ತರ ...{Loading}...

ಹೋ ನಿರಂತರ ಗಜಬಜವು ತಾ
ನೇನು ಜೀಯವಧಾರು ಚಿತ್ತವ
ಧಾನವೆಂದುದು ಸಾಲ ಕಂಚುಕಿ ನಿಕರ ಕೈ ನೆಗಹಿ
ಭಾನುವಿನ ಭಾರಣೆಯವೋಲು
ತ್ಥಾನಮುಖ ಚತುರಾಕ್ಷ ಭೂಪನ
ಸೂನು ಹೊಕ್ಕನು ರಂಗವನು ಭೀಷ್ಮಾದಿಗಳಿಗೆರಗಿ ॥27॥

೦೨೮ ಬವರಿಯಲಿ ಪಯಪಾಡಿನಲಿ ...{Loading}...

ಬವರಿಯಲಿ ಪಯಪಾಡಿನಲಿ ಮೈ
ಲವಣಿಯಲಿ ಬಿನ್ನಾಣದಲಿ ಭಾ
ರವಣೆಯಲಿ ದೆಖ್ಖಾಳದಲಿ ವೇಗಾಯ್ಲ ರೇಖೆಯಲಿ
ತಿವಿವ ಮೊನೆಯೊಂದರಲಿ ನೂರಂ
ಗವನು ತೋರ್ಪ ವಿಭೇದದಲಿ ಕೌ
ರವ ಮಹೀಪತಿ ತೋರಿದನು ಶ್ರಮವನು ಕಠಾರಿಯಲಿ ॥28॥

೦೨೯ ಸುರಗಿಯಲಿ ಚಕ್ರದಲಿ ...{Loading}...

ಸುರಗಿಯಲಿ ಚಕ್ರದಲಿ ಹಲದಲಿ
ಹರಿಗೆಯಲಿ ಕಕ್ಕಡೆಯಲಸಿಯಲಿ
ಪರಿಘದಲಿ ಸಬಳದಲಿ ಗದೆಯಲಿ ಬಿಂಡಿವಾಳದಲಿ
ಪರಿಪರಿಯ ಚಿತ್ರದ ಚಮತ್ಕೃತಿ
ಕರವ ತೋರಿಸಿದನು ಶರಾಸನ
ಶರ ವಿಸರ ಸಂಧಾನದೊಳಗಹುದೆನಿಸಿದನು ಸಭೆಯ ॥29॥

೦೩೦ ಧೀರುರೇ ಜಗಜಟ್ಟಿ ...{Loading}...

ಧೀರುರೇ ಜಗಜಟ್ಟಿ ರಾಜ ಕು
ಮಾರ ಚೌಪಟಮಲ್ಲ ಕುರುಕುಲ
ಕೈರವಾಮೃತಕಿರಣ ಧಿರು ಧಿರು ಭಲರೆ ಭಲರೆನುತ
ಭೂರಿ ಸಭೆಯಲಿ ಸುಲಿದು ಬಿಸುಡುವ
ಸೀರೆಗಳ ತೂಪಿರಿದು ಸುಳಿವು
ಪ್ಪಾರತಿಯ ತನಿ ಹರಕೆ ತಳಿತುದು ತಾಯ ನೇಮದಲಿ ॥30॥

೦೩೧ ಏರಿ ತೋರಿದನಶ್ವ ...{Loading}...

ಏರಿ ತೋರಿದನಶ್ವ ಗಜ ರಥ
ವಾರನೇಳನು ಸಭೆಯೊಳೊಂದನು
ನೂರು ಪರಿಯಲಿ ತೋರಿದನು ಶಸ್ತ್ರಾಸ್ತ್ರ ಕೌಶಲವ
ಮೀರಿ ಹೆಚ್ಚಿದ ಹರುಷದಿಂದು
ಬ್ಬೇರಿದನು ಧೃತರಾಷ್ಟ್ರನುಬ್ಬಿದ
ಳಾರು ಮಡಿಯಲಿ ಜನನಿ ದುರ್ಯೋಧನನ ಪರಿಣತಿಗೆ ॥31॥

೦೩೨ ಮಸಗಿದಾನೆಯ ಕುಮ್ಭದಲಿ ...{Loading}...

ಮಸಗಿದಾನೆಯ ಕುಂಭದಲಿ ಝಾ
ಡಿಸುವ ಕೇಸರಿಯಂತೆ ಜಂಭನ
ಜಸದ ಝಾಡಿಗೆ ಬೆದರದಿದಿರಹ ವಜ್ರಧರನಂತೆ
ಪಸರಿಸಿದ ಪರಿವಾರ ಮಧ್ಯದೊ
ಳಸಮಬಲ ಹೊಳಕಿದನು ಮೇಘದ
ಮುಸುಕನುಗಿದಿನನಂತೆ ಮೈದೋರಿದನು ಕಲಿಭೀಮ ॥32॥

೦೩೩ ಗುರು ನದೀಸುತ ...{Loading}...

ಗುರು ನದೀಸುತ ವಿದುರ ಧೃತರಾ
ಷ್ಟ್ರರಿಗೆ ಕೈಮುಗಿದಾಯುಧದ ಪರಿ
ಪರಿಯ ಚಿತ್ರಶ್ರಮವ ಸಾಂಗೋಪಾಂಗ ಕೌಶಲವ
ಕರಿತುರಗದೇರಾಟ ಮೊದಲಾ
ಗಿರೆ ಸುಯೋಧನ ರಚಿತ ವಿದ್ಯಾ
ಪರಿಣತಿಗೆ ವೆಗ್ಗಳವಿದೆನೆ ತೋರಿದನು ಕಲಿಭೀಮ ॥33॥

೦೩೪ ಕೋಲಗುರು ಚಿತ್ತೈಸು ...{Loading}...

ಕೋಲಗುರು ಚಿತ್ತೈಸು ಕುರು ಭೂ
ಪಾಲ ಸಮ್ಮುಖನಾಗು ಹಿಡಿ ಮಾ
ರ್ಕೋಲನೆನ್ನೊಡನೆನುತ ತಿವಿದನು ಭೀಮ ಕುರುಪತಿಯ
ಮೇಳವಿಸಿತೆರಡಂಕ ಬಂದಿಗೆ
ಕೋಲ ಹೊಯ್ದಾಟದಲಿ ಬಳಿಕಾ
ಕೀಲುಗದೆಗಳ ಹಿಡಿದು ತರುಬಿದರಧಿಕ ರೋಷದಲಿ ॥34॥

೦೩೫ ಹೊಯ್ದರೊಡ್ಡಿದ ರಣದ ...{Loading}...

ಹೊಯ್ದರೊಡ್ಡಿದ ರಣದ ಮೊನೆಯಲಿ
ಹಾಯ್ದರೊಳ ಸುಳಿಯಿಂದ ಕಳೆದರು
ಕಾಯ್ದು ಹೆಣಗಿದರುಪ್ಪರಕೆ ಜಾರಿದರು ಪಡಿತಳಕೆ
ಮೈದೆಗೆದರಡ ಹೊಯ್ಲಿನಲಿ ಬಲು
ಗೈದುಗಾರರು ಮನದ ಖತಿಗಿದಿ
ರೈದುದೆನೆ ಹೊಯ್ದಾಡಿದರು ಕಲಿಭೀಮ ಕೌರವರು ॥35॥

೦೩೬ ಎಲೆಲೆ ಹಿಡಿಹಿಡಿ ...{Loading}...

ಎಲೆಲೆ ಹಿಡಿಹಿಡಿ ಭೀಮನನು ತೆಗೆ
ಕೆಲಕೆ ದುರ್ಯೋಧನನಿದು ಮಂ
ಗಳದ ಬೆಳೆಗಿಂಗಳಿನ ಮಳೆ ಸುರಿದುದೆ ಮಹಾದೇವ
ಕಳವಳಿಸೆ ಭೀಷ್ಮಾದಿಗಳು ನೃಪ
ತಿಲಕರಿಬ್ಬರ ನಡುವೆ ಹಾಯ್ದರು
ಕುಲಗಿರಿಗಳಂದದಲಿ ಕೃಪ ಗುರುಸುತರು ವಹಿಲದಲಿ ॥36॥

೦೩೭ ತೆಗೆದರೀತನನಿತ್ತಲಾತನ ...{Loading}...

ತೆಗೆದರೀತನನಿತ್ತಲಾತನ
ನುಗಿದರತ್ತಲು ಜನದ ಗಳದಿಂ
ದೊಗೆದ ಗಾಢದ ಗಜಬಜವ ಧಟ್ಟಿಸಿದರಲ್ಲಲ್ಲಿ
ಬೆಗಡು ಮೊಳೆತುದು ಭೀಷ್ಮ ವಿದುರಾ
ದಿಗಳ ಮನದಲಿ ಮೇಲೆ ಹಬ್ಬುವ
ಹಗೆಗಿದುಪಲಕ್ಷಣವಲಾಯೆಂದುದು ಬುಧವ್ರಾತ ॥37॥

೦೩೮ ಘುಳುಘುಳಿಸಿದಮ್ಬುಧಿಯವೋಲ್ ...{Loading}...

ಘುಳುಘುಳಿಸಿದಂಬುಧಿಯವೋಲ್ ಜನ
ಜಲಧಿ ಜಾತ ಕ್ಷೋಭೆಯಲಿ ವೆ
ಗ್ಗಳಿಸಿತಗ್ಗದ ಸಾಧು ವಾದವಿವಾದ ರಭಸದಲಿ
ಮೊಳಗಿದವು ಕಲ್ಪಾಂತ ಮೇಘಾ
ವಳಿಯ ಗುರುವೆನೆ ವಾದ್ಯತತಿ ಕಳ
ಕಳದೊಳರ್ಜುನ ದೇವನೆದ್ದನು ಮುನಿಯ ಸನ್ನೆಯಲಿ ॥38॥

೦೩೯ ಈತನಾರರ್ಜುನನೆ ಹೋ ...{Loading}...

ಈತನಾರರ್ಜುನನೆ ಹೋ ಹೋ
ಮಾತು ಮಾಣಲಿ ಮಾಣಲೆಂಬೀ
ಮಾತು ಹಿಂಚಿತು ಮುನ್ನ ಮೌನದೊಳಿರ್ದುದಾಸ್ಥಾನ
ಭೀತ ಕಳಕಳರಂಗದಲಿ ಪುರು
ಹೂತಸುತ ಮೈದೋರಿದನು ಜನ
ವೀತನನು ಕೊಂಡಾಡುತಿರ್ದುದು ರಾಯ ಕೇಳ್ ಎಂದ ॥39॥

೦೪೦ ದ್ರೋಣ ಕೃಪ ...{Loading}...

ದ್ರೋಣ ಕೃಪ ಮೊದಲಾದ ಮಾನ್ಯ
ಶ್ರೇಣಿಗೆರಗಿದನಮರ ನಿಕರಕೆ
ಗೋಣನೆತ್ತಿದನಿಟ್ಟು ಕರಪುಟವನು ಲಲಾಟದಲಿ
ಪ್ರಾಣ ಪಣವಿದು ನಿಖಿಳ ವಿದ್ಯದ
ಜಾಣತನವಿದು ವಿನಯವೆಂದಿದು
ಕೇಣವಿಲ್ಲದೆ ನೆರವಿ ನೆರೆ ಹೊಗಳಿತು ಧನಂಜಯನ ॥40॥

೦೪೧ ನಿಲುವಿನಲಿ ಸ್ವಸ್ಥಾನದಲಿ ...{Loading}...

ನಿಲುವಿನಲಿ ಸ್ವಸ್ಥಾನದಲಿ ಕೈ
ಚಳಕದಲಿ ಭಂಗಿಯಲಿ ಭರದಲಿ
ಲುಳಿಯಲೊಯ್ಯಾರದಲಿ ಮೋಡಾಮೋಡಿಯಂದದಲಿ
ಅಳವಿಯಲಿ ಪರಿವಿಡಿಯಲೂಹಾ
ಬಲದಲವಧಾನದಲಿ ಶಸ್ತ್ರಾ
ವಳಿಯ ಸಾಂಗೋಪಾಂಗ ಶ್ರಮವನು ತೋರಿದನು ಪಾರ್ಥ ॥41॥

೦೪೨ ತುರಗಚಯ ರೇವನ್ತ ...{Loading}...

ತುರಗಚಯ ರೇವಂತ ಮದ ಕುಂ
ಜರ ಮಹಾ ದಿವಿಜೇಂದ್ರ ಪಥ ಸಂ
ಚರಣ ವರಮಾರ್ತಾಂಡಯೆಂದಬ್ಬರಿಸೆ ಜನ ನಿಕರ
ತುರಗ ಗಜ ರಥ ವಿವಿಧ ಶಿಕ್ಷಾ
ಪರಿಣತಿಯ ತೋರಿದನು ಗುರು ಕೃಪ
ಸುರನದೀಜರು ಮುಳುಗಿದರು ಪುಳಕಾಂಬು ಪೂರದಲಿ ॥42॥

೦೪೩ ಮತ್ತೆ ಕೊಣ್ಡನು ...{Loading}...

ಮತ್ತೆ ಕೊಂಡನು ಧನುವ ನೆರವಿಯ
ನತ್ತ ಹೊಯ್ ಹೊಯ್ ಹೋಗ ಹೇಳ್ ದುರ್
ವೃತ್ತರೆದೆ ಜರ್ಝರಿತವಾಗಲು ತೋರ ಬೇಕೆನುತ
ಬತ್ತಳಿಕೆಯಿಂದುಗಿದು ಹೂಡಿ ವಿ
ಯತ್ತಳಕೆ ಹಾಯ್ಸಿದನು ಕರ್ಬೊಗೆ
ಸುತ್ತಿ ದಳ್ಳುರಿ ಸುರಿದುದಾಗ್ನೇಯಾಸ್ತ್ರ ಧಾರೆಯಲಿ ॥43॥

೦೪೪ ತೆಗೆಸಿದನು ಶಿಖಿಶರವ ...{Loading}...

ತೆಗೆಸಿದನು ಶಿಖಿಶರವ ಧನುವಿಂ
ದುಗಿಸಿದನು ವಾರುಣವನಭ್ರವ
ಮೊಗೆದುದದ್ಭುತ ವಾರಿಯುಪಸಂಹರಿಸಿದನು ಮರಳಿ
ಹಗಲನೊಂದೇ ತುತ್ತು ಮಾಡಿದ
ವಿಗಡ ತಿಮಿರಾಸ್ತ್ರದಲಿ ತಿಮಿರವ
ತೆಗೆಸಿದನು ಸೂರ್ಯಾಸ್ತ್ರದಲಿ ಬೆರಗಾಗೆ ಸುರನಿಕರ ॥44॥

೦೪೫ ಗಿರಿಶರದಲದ್ರಿಗಳ ಮೇಘದ ...{Loading}...

ಗಿರಿಶರದಲದ್ರಿಗಳ ಮೇಘದ
ಶರದಿನಭ್ರವನುರಗ ಬಾಣದಿ
ನುರು ಭುಜಂಗವನನಿಲ ಶರದಲಿ ತೀವ್ರ ಮಾರುತನ
ಪರುಠವವ ತೋರಿದನು ಜನವು
ಬ್ಬರಿಸಲಡಿಗಡಿಗಂಧ ಭೂಪನ
ಕೊರಳು ಕುಸಿದುದು ನುಡಿಯ ನಾಟಕ ಹರ್ಷಭಾರದಲಿ ॥45॥

೦೪೬ ಇವರ ಮುಖವರಳಿದವು ...{Loading}...

ಇವರ ಮುಖವರಳಿದವು ಗಂಗಾ
ಭವ ಕೃಪ ದ್ರೋಣಾದಿಗಳ ಬಳಿ
ಕವರ ತಲೆವಾಗಿದವು ಧೃತರಾಷ್ಟ್ರಾದಿ ಕೌರವರ
ಇವರ ಜನನಿಯ ಮುಖದ ಸುಮ್ಮಾ
ನವನು ದುರ್ಯೋಧನನ ಜನನಿಯ
ಜವಳಿ ದುಮ್ಮಾನವನು ಬಣ್ಣಿಸಲರಿಯೆ ನಾನೆಂದ ॥46॥

೦೪೭ ಬಾಯ ಹೊಯ್ ...{Loading}...

ಬಾಯ ಹೊಯ್ ಫಲುಗುಣನ ಹೊಗಳುವ
ನಾಯಿಗಳನೇನಾಯ್ತು ಕೌತುಕ
ವಾಯಕಿವದಿರ ಪಕ್ಷಪಾತವ ನೋಡು ನೋಡೆನುತ
ಸಾಯಕವ ತಿರುಹುತ್ತಲಾ ಕ
ರ್ಣಾಯತಾಂಬಕನೆಡಬಲದ ಕುರು
ರಾಯನನುಜರ ಮೇಳದಲಿ ಹೊರವಂಟನಾ ಕರ್ಣ ॥47॥

೦೪೮ ಗುರುಗಳಿಗೆ ಕೈಮುಗಿದು ...{Loading}...

ಗುರುಗಳಿಗೆ ಕೈಮುಗಿದು ಶಿರದಲಿ
ತರಣಿ ಮಂಡಲಕೆರಗಿ ನೋಡುವ
ನೆರವಿಗಿವನಾರೀತನಾರೆಂಬದ್ಭುತವ ಬೀರಿ
ಅರಸ ಕೇಳೈ ವಿವಿಧ ಶಸ್ತ್ರೋ
ತ್ಕರದ ಶ್ರಮವನು ತೋರಿದನು ಕರಿ
ತುರಗ ರಥವಾಹನದ ಶಿಕ್ಷಾ ವಿದ್ಯಗಳು ಸಹಿತ ॥48॥

೦೪೯ ಆವ ವಿಧದಲಿ ...{Loading}...

ಆವ ವಿಧದಲಿ ಪಾರ್ಥ ತೋರಿದ
ನಾವ ದಿವ್ಯಾಸ್ತ್ರಪ್ರಪಂಚವ
ಪಾವಕಾನಿಲ ವಾರುಣಾದಿಯನೈದೆ ವಿರಚಿಸಿದ
ಆ ವಿಧಾನದಲಾ ವಿಹಾರದ
ಲಾ ವಿಬಂಧದಲರ್ಜುನನ ಬಾ
ಣಾವಳಿಯ ಬಿನ್ನಾಣವನು ತೋರಿದನು ಕಲಿಕರ್ಣ ॥49॥

೦೫೦ ಸೆಣಸುವಡೆ ಬಾಯೆನ್ದು ...{Loading}...

ಸೆಣಸುವಡೆ ಬಾಯೆಂದು ಪಾರ್ಥನ
ಕೆಣಕಿದನು ಘನ ರೋಷ ಶಿಖಿಯಲಿ
ಕುಣಿದವಿಬ್ಬರ ಮೀಸೆ ಕಂಗಳೊಳೊಗುವ ಕೆಂಪಿನಲಿ
ಕಣೆಕಣೆಗಳಾಟದಲಿ ಶರ ಖಂ
ಡಣೆಯ ಕೋಲಾಟದಲಿ ಖಣಿ ಖಣಿ
ಖಣಿಲು ಖಣಿ ಖಣಿ ಮಸಗಲೆಚ್ಚಾಡಿದರು ಚಳಕದಲಿ ॥50॥

೦೫೧ ರಾಯಸಭೆ ಕಳವಳಿಸೆ ...{Loading}...

ರಾಯಸಭೆ ಕಳವಳಿಸೆ ಹೋ ಹೋ
ಹೋಯಿದೇನೇನೆನುತ ಹಿಡಿದರು
ವಾಯುಸುತ ಕೃಪ ಗುರುಜ ದ್ರೋಣಾದ್ಯರು ಧನಂಜಯನ
ಆಯಿತೆಲವೋ ಕರ್ಣ ನೀನನು
ನಾಯಕನೊ ನೃಪಹಾರದಲಿ ಮೇಣ್
ನಾಯಕನೊ ನೀನಾವನೆಂದನು ಕೃಪನು ಖಾತಿಯಲಿ ॥51॥

೦೫೨ ಈತನಾವನು ಕರ್ಣನೆಮ್ಬವ ...{Loading}...

ಈತನಾವನು ಕರ್ಣನೆಂಬವ
ನೀತನರ್ಜುನನೊಡನೆ ತಾ ಮಾ
ರಾತು ಕೈಮಾಡಿದನು ಕೈಕೊಳ್ಳನು ಧನಂಜಯನ
ಈತ ತಪ್ಪಲ್ಲೆನುತ ಮಿಗೆ ಮೈ
ಯಾತನಾ ಧೃತರಾಷ್ಟ್ರನೀತನ
ಮಾತೆ ಕಂಡಳು ಕುಂತಿ ನೆನೆದಳು ಪೂರ್ವಸಂಗತಿಯ ॥52॥

೦೫೩ ಎನ್ನ ಮಗನೆನೆ ...{Loading}...

ಎನ್ನ ಮಗನೆನೆ ಬಂದುದಿಲ್ಲದು
ತನ್ನ ವಶವೇ ವಿಷ್ಣುಮಾಯೆಯ
ಬಿನ್ನಣವಲೇ ಮಾತು ಬಿಗಿದುದು ಮನವನೊಳಗಿಕ್ಕಿ
ತನ್ನ ತಾನೇ ಮರುಗಿ ಮೂರ್ಛಾ
ಪನ್ನೆಯಾದಳು ಕುಂತಿಯಿತ್ತಲು
ಖಿನ್ನನಾದನು ಕೃಪನ ನುಡಿಯಲಿ ದುಗುಡ ಮಿಗೆ ಕರ್ಣ ॥53॥

೦೫೪ ಈತನರಸಲ್ಲೆನ್ದು ಕೃಪ ...{Loading}...

ಈತನರಸಲ್ಲೆಂದು ಕೃಪ ಪಳಿ
ವಾತನೇ ತಪ್ಪೇನು ರಾಜ್ಯದೊ
ಳೀತನರಸೆನಿಸುವೆನು ಕರೆ ನಮ್ಮಯ ಪುರೋಹಿತರ
ಶಾತ ಕುಂಭಾಸನವ ಮಂಗಳ
ಜಾತ ವಸ್ತುವ ತರಿಸು ತರಿಸೆಂ
ದಾ ತತುಕ್ಷಣದಲಿ ಸುಯೋಧನನೆದ್ದ ರಭಸದಲಿ ॥54॥

೦೫೫ ತರಿಸಿ ಭದ್ರಾಸನದೊಳೀತಂ ...{Loading}...

ತರಿಸಿ ಭದ್ರಾಸನದೊಳೀತಂ
ಗರಸು ಪದವಿಯೊಳಂಗ ದೇಶದ
ಸಿರಿಯನಿತ್ತನು ರಚಿಸಿದನು ಮೂರ್ಧಾಭಿಷೇಚನವ
ದರುಶನವನಿತ್ತಖಿಳ ಭೂಮೀ
ಶ್ವರರು ಕಂಡರು ಪೂರ್ವಶೈಲದ
ತರಣಿಯಂತಿರೆ ಕರ್ಣನೆಸೆದನು ರಾಜತೇಜದಲಿ ॥55॥

೦೫೬ ಈತನುತ್ಸವ ತನ್ನದೆನ್ದೇ ...{Loading}...

ಈತನುತ್ಸವ ತನ್ನದೆಂದೇ
ಪ್ರೀತಿಯಲಿ ಬರೆ ಸಿಂಹಪೀಠವ
ನೀತನಿಳಿದೆರಗಿದನು ಪದದಲಿ ಬಳಿಕ ಜನಜನಿತ
ಸೂತಸುತನಿವನೆಂದು ಭುವನ
ಖ್ಯಾತವಾದುದು ಬಳಿಕ ನಸುನಗು
ತೀತನನು ಕುಲವೆತ್ತಿ ಭಂಗಿಸಿ ನುಡಿದನಾ ಭೀಮ ॥56॥

೦೫೭ ಇವನ ತನ್ದೆಯದಾರು ...{Loading}...

ಇವನ ತಂದೆಯದಾರು ಪಾಂಡುವೊ
ಪವನನೋ ಕೃಪ ನಿಮ್ಮ ಜನ್ಮವ
ನೆವಗೆ ಹೇಳಿರೆ ಹಿರಿಯಗುರುಗಳ ತಾಯದಾವವಳೊ
ಅವಘಡಿಸದಿರಿ ಹಿರಿಯತನಕಂ
ಜುವೆನು ನಿಮಗೆನುತಡಿಗಡಿಗೆ ಕೌ
ರವ ಮಹೀಪತಿ ಜರಿದು ನುಡಿದನು ಗುರು ಕೃಪಾದಿಗಳ ॥57॥

೦೫೮ ಒಳಗೆ ಗಜಬಜವಾಯ್ತು ...{Loading}...

ಒಳಗೆ ಗಜಬಜವಾಯ್ತು ಕೈದುವ
ಸೆಳೆದುದಲ್ಲಿಯದಲ್ಲಿ ಗುರು ಕೃಪ
ರುಲುಹ ಕೇಳುವರಿಲ್ಲ ಕೈದೊಳಸಾಯ್ತು ಕಳನೊಳಗೆ
ಇಳಿದು ಭೀಷ್ಮಾದಿಗಳು ತಮ್ಮಯ
ನಿಳಯಕೈದಿದರೆರಡು ಬಲ ತ
ಮ್ಮೊಳಗೆ ತಾವೇ ಹಣಿದು ಹರಿದುದು ರಾಯ ಕೇಳ್ ಎಂದ ॥58॥

೦೫೯ ಕೆಲರು ಭೀಮನನರ್ಜುನನ ...{Loading}...

ಕೆಲರು ಭೀಮನನರ್ಜುನನ ಕೆಲ
ಕೆಲರು ಕರ್ಣನ ಕೌರವೇಂದ್ರನ
ಕೆಲರು ಹೊಗಳುತ ಬಂದು ಹೊಕ್ಕರು ಹಸ್ತಿನಾಪುರವ
ಬಳಿಕಲಾ ಮರುದಿವಸದಲಿ ಮ
ಕ್ಕಳುಗಳೆಲ್ಲರ ಕರೆಸಿ ಗರುಡಿಯ
ನಿಳಯದಲಿ ಕುಳ್ಳಿರ್ದು ಗುರು ನುಡಿದನು ಕುಮಾರರಿಗೆ ॥59॥

೦೬೦ ಏನಿರೈ ಕುರುವಂಶನಳಿನೀ ...{Loading}...

ಏನಿರೈ ಕುರುವಂಶನಳಿನೀ
ಭಾನುಗಳಿರ ವಿದಗ್ಧ ಜನ ಸುರ
ಧೇನುಗಳಿರಾವಿಂದು ನಿಮ್ಮಲಿ ದಕ್ಷಿಣಾರ್ಥಿಗಳು
ಏನನೀವಿರಿ ನಮಗೆ ಕೊಡೆ ಸಂ
ಪೂರ್ಣರೈ ಕೊಡಲಾಪ ಸತ್ವ ನಿ
ಧಾನವುಂಟೇ ಹೇಳಿಯೆಂದನು ದ್ರೋಣನನಿಬರಿಗೆ ॥60॥

೦೬೧ ಆವುದನು ಬಯಸುವಿರಿ ...{Loading}...

ಆವುದನು ಬಯಸುವಿರಿ ನಿಮ್ಮಡಿ
ಯಾವ ಕಾರ್ಯವ ಬೆಸಸಿದುದ ತಂ
ದೀವೆವಿದಕೆ ವಿಚಾರವೇನೆಂದರು ಕುಮಾರಕರು
ತೀವಿದಗ್ಗದ ಹರುಷರಸದಲಿ
ಭಾವ ನೆನೆದುದು ಮುನಿಗೆ ವರ ಶಿ
ಷ್ಯಾವಳಿಗೆ ನುಡಿದನು ನಿಜಾಭಿಪ್ರಾಯ ಸಂಗತಿಯ ॥61॥

೦೬೨ ಕೇಳಿ ಬಲ್ಲಿರೆ ...{Loading}...

ಕೇಳಿ ಬಲ್ಲಿರೆ ಗಂಗೆಯುತ್ತರ
ಕೂಲದಲಿ ಪಾಂಚಾಲದೇಶ ನೃ
ಪಾಲನಲ್ಲಿಗೆ ದ್ರುಪದನೆಂಬುವನತುಳ ಭುಜಬಲನು
ಆಳುತನದಂಗದಲಿ ಪರರಿಗೆ
ಸೋಲನವನೊಟ್ಟೈಸಿ ದ್ರುಪದನೃ
ಪಾಲಕನ ಪಿಡಿದೊಪ್ಪಿಸಿದರೆಮಗಹುದು ಪರಿತೋಷ ॥62॥

೦೬೩ ಐಸಲೇ ಗುರುದಕ್ಷಿಣಾರ್ಥವಿ ...{Loading}...

ಐಸಲೇ ಗುರುದಕ್ಷಿಣಾರ್ಥವಿ
ದೇಸು ಘನ ತಂದೀವೆವೆಂದುಪ
ಹಾಸದಲಿ ಕೈವೊಯ್ದು ತಮ್ಮೊಳು ನಗುತ ಕೌರವರು
ಆ ಸುಯೋಧನ ಕರ್ಣಸಹಿತ ಮ
ಹೀಶ ತನುಜರು ಬೀಳುಕೊಂಡರು
ವಾಸಿಬಿದ್ದುದು ಪಾಂಡುಸುತ ಕೌರವ ಕುಮಾರರಿಗೆ ॥63॥

೦೬೪ ಧಾಳಿಯಿಟ್ಟುದು ರಾಯದಳ ...{Loading}...

ಧಾಳಿಯಿಟ್ಟುದು ರಾಯದಳ ಪಾಂ
ಚಾಲದೇಶಕೆ ಮುಂದೆ ಹೊಕ್ಕುದು
ಚೂಳಿಕೆಯಲಿ ಸುಯೋಧನಾದಿಗಳೂರನುರವಣಿಸಿ
ಧೂಳಿಗೋಟೆಯ ಕೊಂಡಿವರು ರಾ
ಜಾಲಯಕೆ ಬರೆ ದ್ರುಪದನನುಜರು
ಸೋಲಿಸಿದರೈ ಕೌರವೇಂದ್ರನ ಬಲವ ಬರಿಕೈದು ॥64॥

೦೬೫ ಪುರದ ಹೊರ ...{Loading}...

ಪುರದ ಹೊರ ಬಾಹೆಯಲಿ ತಾವೈ
ವರು ಮಹಾ ಸನ್ನಾಹ ಚಾಪ
ಸ್ಫುರಿತ ತೂಣೀಬದ್ಧ ಕಂಪಿತ ಖಡ್ಗ ಪಾಣಿಗಳು
ಗುರುಸಹಿತಲಿವರಿದ್ದರಿತ್ತಲು
ಪುರಜನಂಗಳ ಮುಸಲ ಹತಿಯಲಿ
ಮುರಿದು ಬಂದುದು ಕೌರವೇಂದ್ರನ ದಳ ವಿಘಾತಿಯಲಿ ॥65॥

೦೬೬ ಆತುಕೊಣ್ಡರು ಪಾಣ್ಡು ...{Loading}...

ಆತುಕೊಂಡರು ಪಾಂಡು ಸುತರಭಿ
ಜಾತ ಸಮರವನಿವರ ಕೈಯಲಿ
ಮಾತು ಹಲವಿಲ್ಲೆನುತ ಹೊಕ್ಕರು ಕೊಂದು ಪರಬಲವ
ಘಾತಿಗಾನುವರಿಲ್ಲ ದೊರೆಯೆನು
ತಾತನನು ಮುತ್ತಿದರು ಗುರುಗಳಿ
ಗೀತನೇ ದಕ್ಷಿಣೆಯೆನುತ ಹಿಡಿದರು ಮಹೀಪತಿಯ ॥66॥

೦೬೭ ಕೊಣ್ಡು ಬನ್ದರು ...{Loading}...

ಕೊಂಡು ಬಂದರು ದ್ರೋಣನಿದಿರಲಿ
ದಿಂಡುಗೆಡಹಿದರೀತನನು ಕೈ
ಕೊಂಡನೆಲವೋ ದ್ರುಪದ ಸಖ ಪೂರ್ವವನು ನೆನೆಯೆನುತ
ಭಂಡನಿವನನು ಸಾಕು ಬಿಡಿ ಸಲೆ
ಚಂಡಿಯಾದನು ದರ್ಪವಿಷ ಮುಂ
ಕೊಂಡು ಮೂರ್ಛಿತನೇನ ಮಾಡುವೆನೆಂದನಾ ದ್ರೋಣ ॥67॥

೦೬೮ ಎಲವೊ ಕೊಟ್ಟೆನು ...{Loading}...

ಎಲವೊ ಕೊಟ್ಟೆನು ಜೀವದಾನವ
ನಳಲು ನಿನಗೇಕಿನಿತು ಸಾಹಸ
ದಳವಿಯಲಿ ನೀ ನೆರಹು ಹಗೆಯನು ಭಂಡ ಹೋಗೆಂದು
ಕಳೆದು ಕೊಟ್ಟೆನು ನಿನ್ನ ರಾಜ್ಯದ
ನೆಲದೊಳರ್ಧವನಿತ್ತು ನೀ ನಡೆ
ಬಳಿಕಲೆಂದೊಡಬಡಿಸಿ ದ್ರುಪದನ ಬಿಟ್ಟನಾ ದ್ರೋಣ ॥68॥

೦೬೯ ಅರಸ ಕೇಳೈ ...{Loading}...

ಅರಸ ಕೇಳೈ ದ್ರುಪದನೀ ಪರಿ
ಪರಿಭವಕೆ ಗುರಿಯಾಗಿ ತನ್ನಯ
ಪುರವ ಹೊಗದೈತಂದು ಗಂಗಾತೀರ ದೇಶದಲಿ
ಧರಣಿಸುರರಲಿ ಪುತ್ರಕಾಮ್ಯಾ
ಧ್ವರವ ವಿರಚಿಸಲಾಗ ಸತ್ವೋ
ತ್ಕರುಷವಂತರನರಸಿದನು ನಾನಾಗ್ರಹಾರದಲಿ ॥69॥

೦೭೦ ದ್ರೋಣಭಯದಲಿ ಸಕಲ ...{Loading}...

ದ್ರೋಣಭಯದಲಿ ಸಕಲ ವಿಪ್ರ
ಶ್ರೇಣಿಯಿರೆ ಯಾಜೋಪಯಾಜರು
ಪ್ರಾಣನಿಸ್ಪೃಹರಾಗಿ ಮಾಡಿಸಿದರು ಮಹಾಕ್ರತುವ
ಕೇಣವಳಿದಾಹುತಿಯನಮರರ
ಬಾಣಸಿಗಗುಣಬಡಿಸೆ ದೇವ
ಶ್ರೇಣಿ ದಣಿದುದು ಸಲಿಸಿದರು ಪಾಂಚಾಲನಭಿಮತವ ॥70॥

೦೭೧ ಅರಸ ಕೇಳೈ ...{Loading}...

ಅರಸ ಕೇಳೈ ಕುಂಡ ಮಧ್ಯದೊ
ಳುರಿಯ ಕರುವಿಟ್ಟೆರಕಿದರೊ ಭಾ
ಸುರ ಮಹಾನಲನಪರ ರೂಪೋ ತಾನಿದೇನೆನಲು
ಶರವಡಾಯುಧ ಚಾಪ ವರ್ಮೋ
ತ್ಕರಸಹಿತ ರೌದ್ರಾಂಗನಾಗವ
ತರಿಸಿದನು ಪಾಂಚಾಲಭೂಪತಿಭುಜವ ಸೂಳೈಸೆ ॥71॥

೦೭೨ ವೇದಿ ಮಧ್ಯವನೊಡೆದು ...{Loading}...

ವೇದಿ ಮಧ್ಯವನೊಡೆದು ಮೂಡಿದ
ಳಾದರಿಸೆ ಜನವಮಮ ಕಾಮನ
ಕೈದುವೋ ತ್ರೈಲೋಕ್ಯ ಮೋಹನ ಮಂತ್ರ ದೇವತೆಯೊ
ಕಾದುವರೆ ಕರೆ ಹರಿಹರ ಬ್ರ
ಹ್ಮಾದಿಗಳಿಗೊರೆಯೆಂಬ ಹೂಂಕೃತಿ
ಯಾದುದಾ ಕಾಮಂಗೆ ದ್ರುಪದಾತ್ಮಜೆಯ ಜನನದಲಿ ॥72॥

೦೭೩ ದ್ರೋಣವಧೆಗೀ ಮಗನು ...{Loading}...

ದ್ರೋಣವಧೆಗೀ ಮಗನು ಪಾರ್ಥಗೆ
ರಾಣಿಯೀ ಮಗಳೆಂದು ದ್ರುಪದ
ಕ್ಷೋಣಿಪತಿ ಸಲಹಿದನು ಸುತರನು ಸಾನುರಾಗದಲಿ
ದ್ರೋಣನೀತನ ಕರೆಸಿ ಶಸ್ತ್ರದ
ಜಾಣಿಕೆಯ ಕಲಿಸಿದನು ವಿಗಡರ
ಕಾಣೆನೀ ಕಲಶಜನ ಪರಿಯಲಿ ರಾಯ ಕೇಳ್ ಎಂದ ॥73॥

೦೭೪ ಮಗನು ಧೃಷ್ಟದ್ಯುಮ್ನ ...{Loading}...

ಮಗನು ಧೃಷ್ಟದ್ಯುಮ್ನ ದ್ರೌಪದಿ
ಮಗಳು ಭಾರದ್ವಾಜನೆತ್ತಿದ
ಹಗೆಗೆ ಹರುವಾಯ್ತೆನುತ ಹಿಗ್ಗಿದ ದ್ರುಪದಭೂಪಾಲ
ದುಗುಡದಲಿ ಕುರು ರಾಯನೀ ದಾ
ಯಿಗರ ಬಿರಿದಿನ ಬಿಂಕದಂಕೆಯ
ಬಿಗಿದ ಪರಿಯನು ನೆನೆದು ಮರುಗಿದನರಸ ಕೇಳ್ ಎಂದ ॥74॥

+೦೭ ...{Loading}...