೦೪

೦೦೦ ಸೂ ಭರತ ...{Loading}...

ಸೂ. ಭರತ ವಂಶದೊಳೈದು ಮಿಗೆ ನೂ
ರ್ವರು ಕುಮಾರರು ಪಾಂಡು ಧೃತರಾ
ಷ್ಟ್ರರಿಗೆ ಜನಿಸಿದರಮಲ ಮುನಿ ಮಂತ್ರೋಪದೇಶದಲಿ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ಕುಂತೀಭೋಜ ಭೂಪತಿ
ಯಾಲಯದೊಳೀ ಕುಂತಿ ಮೆರೆದಳು ವಿವಿಧ ವಿಭವದಲಿ
ಕೇಳಿದನು ಗಾಂಗೇಯನಾ ನೀ
ಲಾಳಕಿಯ ಕುಲರೂಪು ಲಕ್ಷಣ
ಶೀಲವನು ಪಾಂಡುವಿಗೆ ಪಾಸಟಿಯೆಂದು ರಾಗದಲಿ ॥1॥

೦೦೨ ಕರೆಸಿ ಕುನ್ತೀಭೋಜನನು ...{Loading}...

ಕರೆಸಿ ಕುಂತೀಭೋಜನನು ಸ
ತ್ಕರಿಸಿ ಕುಂತಿಯ ಪಾಂಡುವಿಗೆ ಭೂ
ಸುರರ ಮತದಿಂದಗ್ನಿ ಸಾಕ್ಷಿಕ ವರವಿವಾಹವನು
ಪರಮ ವಿಭವದಲೆಸಗಿ ಮದ್ರೇ
ಶ್ವರನನುಜೆ ಮಾದ್ರಿಯನು ಪಾಂಡುವಿ
ಗರಸಿಯನು ಮಾಡಿದನು ವೈವಾಹಿಕಮುಹೂರ್ತದಲಿ ॥2॥

೦೦೩ ವರ ವಿವಾಹ ...{Loading}...

ವರ ವಿವಾಹ ಮುಹೂರ್ತ ಸಮನಂ
ತರ ಸುಲಗ್ನದೊಳಖಿಳ ರಾಜ್ಯದ
ಧುರದ ನಿರ್ವಾಹಕ ಮಹಾಪಟ್ಟಾಭಿಷೇಚನವ
ಸುರನದೀಸುತ ಪಾಂಡುವಿಗೆ ವಿ
ಸ್ತರಿಸಿದನು ಧೃತರಾಷ್ಟ್ರ ವಿದುರರ
ಪರಮ ಪರಿತೋಷಾನುಮತದಲಿ ಮೆರೆದುದಾ ವಿಭವ ॥3॥

೦೦೪ ಸೋಮಕುಲದವರಲಿ ಭವತ್ ...{Loading}...

ಸೋಮಕುಲದವರಲಿ ಭವತ್ ಪ್ರಪಿ
ತಾಮಹನವೋಲ್ ಧರ್ಮದಲಿ ಸಂ
ಗ್ರಾಮದಲಿ ಸತ್ಯದಲಿ ಸಾಹಿತ್ಯದಲಿ ವಿನಯದಲಿ
ಸಾಮದಲಿ ಶೌರ್ಯದಲಿ ಸುಜನ
ಪ್ರೇಮದಲಿ ನೀತಿಯಲಿ ಧೃಡದಲಿ
ಭೂಮಿಯಲಿ ನಾ ಕಾಣೆನವನೀಪಾಲ ಕೇಳ್ ಎಂದ ॥4॥

೦೦೫ ಪಸರಿಸಿದ ಪರಿಧೌತಕೀರ್ತಿ ...{Loading}...

ಪಸರಿಸಿದ ಪರಿಧೌತಕೀರ್ತಿ
ಪ್ರಸರದಲಿ ಬೆಳುಪಾಯ್ತು ಜಗ ನಿ
ಪ್ಪಸರದಲಿ ಝಳಪಿಸುವ ಖಂಡೆಯ ಸಿರಿಯ ಸೊಂಪಿನಲಿ
ಮಸಗಿತಗ್ಗದ ಕೆಂಪು ಪರಬಲ
ವಿಸರ ದಳನ ಕ್ರೋಧಮಯ ತಾ
ಮಸದಿನಸಿತಾಭಾಸಮಾದುದು ಭುವನವಿಸ್ತಾರ ॥5॥

೦೦೬ ಓಲಗಿಸುವುದು ಮಿತ್ರ ...{Loading}...

ಓಲಗಿಸುವುದು ಮಿತ್ರ ರಾಯರ
ಮೌಳಿಮಣಿ ಪಾಂಡುವಿನ ಚರಣ ನ
ಖಾಳಿಯನು ಸೆಣಸುವ ಮಹೀಶ್ವರ ಮೌಳಿಮಣಿ ಕಿರಣ
ಓಲಗಿಸಿತು ಪ್ರಣಯದಮರೀ
ಬಾಲೆಯರ ಪದನಖವನದನೇ
ವೇಳುವೆನು ಪಾಂಡುವಿನ ಖಂಡೆಯ ಸಿರಿಯ ಸಡಗರವ ॥6॥

೦೦೭ ಓಲಗಿಸಿ ಕೊಮ್ಬಾತನನ್ಧ ...{Loading}...

ಓಲಗಿಸಿ ಕೊಂಬಾತನಂಧ ನೃ
ಪಾಲನುಳಿದಂತಖಿಳ ಧರಣೀ
ಪಾಲಕತ್ವವೆ ಪಾಂಡುಭೂಪತಿಗೀ ಕುಮಾರಕರ
ಲಾಲಿಸುವ ಕುಲನೀತಿ ವಿಧದಲಿ
ಪಾಲಿಸುವ ಭರ ಭೀಷ್ಮನದು ಸಂ
ಬಾಳಿಸಿತು ನಳ ನಹುಷಚರಿತವನಿವರ ಪರಿಪಾಟಿ ॥7॥

೦೦೮ ನೃಪ ಪರಮ್ಪರೆಯಿನ್ದ ...{Loading}...

ನೃಪ ಪರಂಪರೆಯಿಂದ ಬಂದೀ
ವಿಪುಳ ವಂಶಸ್ಥಿತಿ ವಿಸರ್ಗವ
ನಪಹರಿಸಿದನು ಹಿಂದೆ ವೇದವ್ಯಾಸಮುನಿ ಬಂದು
ಕೃಪೆಯ ಮಾಡನೆ ತನ್ನ ಸಂತತಿ
ಕೃಪಣವಾಯ್ತೆಂದನವರತ ಕುರು
ನೃಪತಿ ಚಿಂತಾಭಾರದಲಿ ಬಳಲುವನು ಧೃತರಾಷ್ಟ್ರ ॥8॥

೦೦೯ ಅರಸ ಚಿತ್ತೈಸೊನ್ದು ...{Loading}...

ಅರಸ ಚಿತ್ತೈಸೊಂದು ದಿನ ಮುನಿ
ವರನು ಬಿಜಯಂಗೈದು ಹಸ್ತಿನ
ಪುರವ ಹೊಕ್ಕನು ರಾಜಭವನಕೆ ಬಂದು ಹರ್ಷದಲಿ
ಸುರನದೀತನುಜಾದಿಗಳ ಸ
ತ್ಕರಣೆಯನು ಕೈಕೊಂಡು ಮಕ್ಕಳ
ಮುರಿದ ವಿಭವಕೆ ಮೈಯನಾಂತು ಮುನೀಂದ್ರನಿಂತೆಂದ ॥9॥

೦೧೦ ಭರತಕುಲದಲಿ ಮಕ್ಕಳಿಲ್ಲದ ...{Loading}...

ಭರತಕುಲದಲಿ ಮಕ್ಕಳಿಲ್ಲದ
ಕೊರತೆ ಕೋಮಲ ಸೌಖ್ಯಲತೆಗಿದು
ಕರಗಸವಲಾ ತಂದೆ ಬಾ ಧೃತರಾಷ್ಟ್ರ ಬಾಯೆನುತ
ಕರೆದು ಕಟ್ಟೇಕಾಂತದಲಿ ನಿ
ನ್ನರಸಿಗನುಪಮ ಪುತ್ರ ಶತವವ
ತರಿಸುವುದು ಕೊಳ್ಳೆಂದು ಕೊಟ್ಟನು ಮಂತ್ರ ಪಿಂಡಕವ ॥10॥

೦೧೧ ಧರಿಸಿದಳು ಗಾನ್ಧಾರಿ ...{Loading}...

ಧರಿಸಿದಳು ಗಾಂಧಾರಿ ಗರ್ಭೋ
ತ್ಕರವನಿತ್ತ ನಿಜಾಶ್ರಮಕೆ ಮುನಿ
ತಿರುಗಿದನು ದಿನದಿನದೊಳುಬ್ಬಿತು ರಾಯನಭ್ಯುದಯ
ಅರಸ ಕೇಳೈ ಬೇಂಟೆಗಾರರು
ಕರೆಯಬಂದರು ಮೃಗನಿಕಾಯದ
ನೆರವಿಗಳ ನೆಲೆಗೊಳಿಸಿ ಪಾಂಡು ನೃಪಾಲನೋಲಗಕೆ ॥11॥

೦೧೨ ಕೇಳಿದನು ಮೃಗದಿಕ್ಕೆ ...{Loading}...

ಕೇಳಿದನು ಮೃಗದಿಕ್ಕೆ ಹಕ್ಕೆಯ
ಗಾಳಿಯನು ಕೊಂಬುಗಳನಾಗಳೆ
ಬೀಳು ಕೊಟ್ಟನು ರಾಜಸಭೆಯನು ರಾಯನುಚಿತದಲಿ
ಬೋಳೆ ಕವಲಂಬುಗಳ ಹದವಿಲು
ತಾಳಿಕೆಯ ಕುಪ್ಪಸದ ಬೇಂಟೆಯ
ಮೇಳದಲಿ ಭೂಪಾಲ ಹೊರವಂಟನು ನಿಜಾಲಯವ ॥12॥

೦೧೩ ಏನನೆಮ್ಬೆನು ನಿಮ್ಮನು ...{Loading}...

ಏನನೆಂಬೆನು ನಿಮ್ಮನು ಪಿಶಾ
ಚೋನ್ನೃಪಾಲಕರೆಂಬವೋಲ್ ವ್ಯಸ
ನಾನುಬಂಧದ ಬೇಗೆ ಕೊಂಡೊಯ್ದುದು ಮಹೀಪತಿಯ
ಕಾನನದೊಳಾಯತದ ಶರ ಸಂ
ಧಾನ ಕಲಿತ ಶರಾಸನನು ಮೃಗ
ಹಾನಿಗಳ ಹೆಕ್ಕಳದೊಳೋಲಾಡಿದನು ಬೇಂಟೆಯಲಿ ॥13॥

೦೧೪ ಬನ್ದುದಾ ಪಾಣ್ಡುವಿಗೆ ...{Loading}...

ಬಂದುದಾ ಪಾಂಡುವಿಗೆ ನಿನ್ನಯ
ತಂದೆಗಾದ ವಿಪತ್ತಿನಂದದ
ಲೊಂದು ಠಾವಿನಲೊಬ್ಬ ಮುನಿ ಮೃಗ ಮಿಥುನ ರೂಪಿನಲಿ
ನಿಂದು ರಮಿಸುತ್ತಿರೆ ಮೃಗದ್ವಯ
ವೆಂದು ಹೂಡಿದನಂಬನಿಬ್ಬರಿ
ಗೊಂದು ಶರದಲಿ ಕೀಲಿಸಿದಡೊರಲಿದರು ನರರಾಗಿ ॥14॥

೦೧೫ ಹಾ ಮಹಾದೇವಯೆನುತ್ತೆ ...{Loading}...

ಹಾ ಮಹಾದೇವಯೆನುತ್ತೆ ಸ
ನಾಮಮುನಿ ತೆತ್ತಿಸಿದ ಬೆನ್ನಿನ
ತೋಮರದ ಮರುಮೊನೆಯ ಕಿಬ್ಬಸುರಿನ ನಿಜಾಂಗನೆಯ
ಕಾಮಿನಿಯೆ ಕಡುನೊಂದೆಲಾ ಮುಖ
ತಾಮರಸವನು ತೋರು ತೋರೆನು
ತಾ ಮುನೀಶ್ವರನಪ್ಪಿ ಮುಂಡಾಡಿದನು ನಿಜಸತಿಯ ॥15॥

೦೧೬ ಕಾತರಿಪ ಮುನಿಮಿಥುನವನು ...{Loading}...

ಕಾತರಿಪ ಮುನಿಮಿಥುನವನು ನಿ
ನ್ನಾತ ಕಂಡನು ಬಿಲ್ಲಕೊಪ್ಪಿನ
ಲಾತ ಕದಪಿನ ಮಕುಟದೊಲವಿನ ಬೆರಳ ಬಿರುದನಿಯ
ಬೀತಸೊಂಪಿನ ತಳಿತ ಬೆರಗಿನ
ಪಾತಕದ ಪರುಠವದ ಮುಖದ ಮ
ಹೀತಳಾಧಿಪ ಸುಯ್ದು ನೊಂದನು ಶಿವ ಶಿವಾಯೆನುತ ॥16॥

೦೧೭ ಅರಿಯೆ ನಾನಿವರೆನ್ದು ...{Loading}...

ಅರಿಯೆ ನಾನಿವರೆಂದು ಮೃಗವೆಂ
ದಿರಿದೊಡಿದು ಮತ್ತೊಂದು ಪರಿಯಾ
ಯ್ತುರುವ ಮಾಣಿಕವೆಂದು ಕೊಂಡಡೆ ಕೆಂಡವಾದುದಲ
ಸರವಿಯೇ ಹಾವಾದುದೇನೆಂ
ದರಿಯೆನೀ ಕೌತುಕವನುರೆ ಮೈ
ಮರೆಸಿ ಕೊಂದುದೆ ವಿಧಿಯೆನುತ ಹರಿತಂದನಾ ಸ್ಥಳಕೆ ॥17॥

೦೧೮ ಉಗಿದು ಬಿಸುಟನು ...{Loading}...

ಉಗಿದು ಬಿಸುಟನು ಸರಳ ಮಗ್ಗುಲ
ಮಗುಚಿ ನೆತ್ತರ ಹೊನಲಿನೀಚೆಗೆ
ತೆಗೆದು ತೊಳೆತೊಳೆದೊರಸಿದನು ಸಗ್ಗಳೆಯ ನೀರಿನಲಿ
ಮೃಗವಹರೆ ಮಾನಿಸರಕಟ ಪಾ
ಪಿಗಳಿಗೆತ್ತಣ ತಪವಿದೆತ್ತಣ
ಮೃಗ ವಿನೋದಕ್ರೀಡೆ ಕೊಂದಿರೆನುತ್ತ ಬಿಸುಸುಯ್ದ ॥18॥

೦೧೯ ಮತ್ತೆ ನಾವೇ ...{Loading}...

ಮತ್ತೆ ನಾವೇ ಪಾಪಿಗಳೆ ನೀ
ನುತ್ತಮನಲಾ ಸಾಕಿದೇತಕೆ
ನುತ್ತ ಮರಳುವ ಕಂಗಳಡಿಗಡಿಗುಗಿವ ಮೇಲುಸುರ
ಎತ್ತಿ ಹಾಯ್ಕುವ ಕೊರಳ ಬಿಕ್ಕುಳ
ತೆತ್ತುವಧರದ ರೋಷದಲಿ ಹೊಗೆ
ಸುತ್ತಿದುರಿವಾತುಗಳ ಸೂಸಿದರವನಿಪನ ಮೇಲೆ ॥19॥

೦೨೦ ಎಲವೊ ರಾಜಬ್ರುವನೆ ...{Loading}...

ಎಲವೊ ರಾಜಬ್ರುವನೆ ತನ್ನಯ
ಲಲನೆಯೊಡನಿರೆ ಕೊಂದೆ ನಿನ್ನಯ
ಲಲನೆಯನು ನೀ ಕೂಡಿದಾಗಲೆ ಮರಣ ನಿನಗಹುದು
ಹಲವು ಮಾತೇಕೆನುತ ಹರಣವ
ಕಳೆದುದಾ ಮುನಿ ಮಿಥುನವವನಿಪ
ತಿಲಕ ದುಮ್ಮಾನದಲಿ ಬಂದನು ಹಸ್ತಿನಾಪುರಕೆ ॥20॥

೦೨೧ ಆದ ಹದನನು ...{Loading}...

ಆದ ಹದನನು ಭೀಷ್ಮ ಧೃತರಾ
ಷ್ಟ್ರಾದಿಗಳಿಗರುಹಿದರೆ ಹಯ ಮೇ
ಧಾದಿ ಯಜ್ಞದಲೀ ಮಹಾ ಪಾತಕ ವಿಘಾತಕವ
ವೈದಿಕೋಕ್ತಿಯ ಮಂತ್ರದಲಿ ಸಂ
ಪಾದಿಸುವೆವೆನೆ ಶಿರವ ಬಿದುರಿ ಮ
ಹಾದುರಾಗ್ರಹ ಬುದ್ಧಿಯಲಿ ಹೊರವಂಟನರಮನೆಯ ॥21॥

೦೨೨ ಸಕಲ ಭಣ್ಡಾರವನು ...{Loading}...

ಸಕಲ ಭಂಡಾರವನು ಭೂಸುರ
ನಿಕರದಲಿ ಚೆಲ್ಲಿದನು ಸುಜನ
ಪ್ರಕರವನು ಗಾಂಗೇಯ ಧೃತರಾಷ್ಟ್ರರಿಗೆ ಕೈಗೊಳಿಸಿ
ಚಕಿತ ಚಿತ್ತನು ಮುನಿಹತಿಯ ಪಾ
ತಕದ ನೆತ್ತಿಯ ಸಬಳವಾವುದೊ
ಸಕಲ ಯೋಗಾವಳಿಯೊಳೆನುತೈದಿದನು ಕಾನನವ ॥22॥

೦೨೩ ಅರಸ ಕೇಳ್ ...{Loading}...

ಅರಸ ಕೇಳ್ ಶತಶೃಂಗ ಶೈಲದ
ವರತಪೋಧನರಾಶ್ರಮಕೆ ನಿ
ಮ್ಮರಸ ಬಂದನು ವಂದಿಸಿದನಾ ಪರಮಮುನಿವರರ
ಹರುಷದಲಿ ಜಾಬಾಲಿ ಗಾಗ್ರ್ಯಾಂ
ಗಿರಸ ಗಾಲವ ಗೌತಮಾದ್ಯರು
ಧರಣಿಪನ ಸಂಭಾವಿಸಿದರಘ್ರ್ಯಾಸನಾದಿಯಲಿ ॥23॥

೦೨೪ ಈತನಮಲಾಷ್ಟಾಙ್ಗಯೋಗವಿ ಧೂತ ...{Loading}...

ಈತನಮಲಾಷ್ಟಾಂಗಯೋಗವಿ
ಧೂತ ಕಿಲ್ಬಿಷನಾಗಿ ಬಳಿಕ ಮ
ಹಾ ತಪಸ್ವಿಗಳೊಳಗೆ ಸಂದನು ತೀವ್ರ ತೇಜದಲಿ
ಆ ತಪೋನಿಷ್ಠಂಗೆ ತಾವತಿ
ಭೀತಿ ಭಕ್ತಿಯೊಳಧಿಕ ಶುಶ್ರೂ
ಷಾತಿಶಯದಲಿ ಮನವಹಿಡಿದರು ಕುಂತಿ ಮಾದ್ರಿಯರು ॥24॥

೦೨೫ ಪರಮ ವೈರಾಗ್ಯದಿ ...{Loading}...

ಪರಮ ವೈರಾಗ್ಯದಿ ನಿರಂತಃ
ಕರಣ ನಿರುಪಮ ಭಾವ ಶುದ್ಧಿಯ
ಮುರಹರ ಧ್ಯಾನೈಕ ಪೀಯೂಷಾಭಿಷೇಕದಲಿ
ಹೊರೆದು ಹೊಂಗಿದ ನಿಷ್ಪ್ರಪಂಚೋ
ತ್ಕರದ ಸುಖದುನ್ನತಿಯಲಿದ್ದನು
ಧರಣಿಪತಿ ಮುನಿಪನ ಮಹಾಪಾತಕವ ಕೆಡೆಯೊದೆದು ॥25॥

೦೨೬ ನಾರಿಯರು ಮರುಗಿದರಕಟ ...{Loading}...

ನಾರಿಯರು ಮರುಗಿದರಕಟ ಮುದಿ
ಹಾರುವನ ತನಿಬೇಂಟ ನಮ್ಮಯ
ಬೇರುಗೊಲೆಯಾಗಿರ್ದುದೇ ಹಾಯೆನುತ ಬಿಸುಸುಯ್ದ
ವಾರಿಜಾನನೆ ಕುಂತಿ ಮೆಲ್ಲನೆ
ಸಾರಿದಳು ನಯದಲಿ ರಹಸ್ಯದ
ಲಾರುವರಿಯದವೋಲು ಬಿನ್ನಹ ಮಾಡಿದಳು ಪತಿಗೆ ॥26॥

೦೨೭ ಭರತ ವಂಶಕೆ ...{Loading}...

ಭರತ ವಂಶಕೆ ಪುತ್ರಶತವವ
ತರಿಸುವುದು ಗಾಂಧಾರಿ ದೇವಿಗೆ
ವರಮುನೀಶ್ವರನಿತ್ತ ವರವದು ನಿಮ್ಮಡಿಗಳರಿಯೆ
ದುರುಳ ಮುನಿಪನ ಶಾಪವೇ ಸ್ತ್ರೀ
ಪುರುಷ ಸಂಗವಿರೊಧ ನಮಗಿ
ನ್ನರಸ ನಾಪುತ್ರಸ್ಯಗತಿಯೆಂದಿರದೆ ಶ್ರುತಿವಚನ ॥27॥

೦೨೮ ಧರೆಯ ರಾಜ್ಯಸ್ಥಿತಿಗೆ ...{Loading}...

ಧರೆಯ ರಾಜ್ಯಸ್ಥಿತಿಗೆ ಸುತರವ
ತರಿಸುವರು ಗಾಂಧಾರಿಗಾ ಪು
ತ್ರರಿಗೆ ಸುತರಾ ಸುತರ ಸುತರಾ ಸುತರ ಸೂನುಗಳು
ಧರೆ ಪರಂಪರೆಯಿಂದಲತ್ತಲೆ
ಸರಿವುದೀ ನಿಮ್ಮಡಿಗೆ ದರ್ಭಾ
ಸ್ತರಣ ಸಮಿಧಾಧಾನವೇ ಕಡೆಗೆಂದಳಾ ಕುಂತಿ ॥28॥

೦೨೯ ವನಜಮುಖಿ ಕೇಳ್ ...{Loading}...

ವನಜಮುಖಿ ಕೇಳ್ ಪುತ್ರಮುಖ ದ
ರ್ಶನವು ಸುಲಭವೆ ಪುಣ್ಯಹೀನರಿ
ಗೆನಿತು ಹಲುಬಿದರೇನು ಹಂಗಿಗರಾವು ದುಷ್ಕೃತಿಗೆ
ಮುನಿಯ ಬೇಟದ ಬೇಳುವೆಯ ಮಾ
ತಿನ ಹವಣ ನೀ ಬಲ್ಲೆ ಹೇಳಿ
ನ್ನೆನಗೆ ಕರ್ತವ್ಯವನು ಮಾನಿನಿ ಭೀತಿ ಬೇಡೆಂದ ॥29॥

೦೩೦ ನಾರಿಯರು ಮತ್ತಲ್ಲಿ ...{Loading}...

ನಾರಿಯರು ಮತ್ತಲ್ಲಿ ರಾಜ ಕು
ಮಾರಿಯರು ಛಲವಾದಿಗಳು ಗಾಂ
ಧಾರಿಗಾದುದು ಪುತ್ರ ಸಂತತಿಯೆಂಬ ಭೇದದಲಿ
ಧೀರ ಬಿನ್ನವಿಸಿದೆನು ಕಾರ್ಯದ
ಭಾರವನು ನೀ ಬಲ್ಲೆಯಿವಳು ವಿ
ಕಾರಿಯೆನ್ನದಿರೆಂದು ರಾಯನ ಚರಣಕೆರಗಿದಳು ॥30॥

೦೩೧ ಲೋಲಲೋಚನೆ ದೃಢ ...{Loading}...

ಲೋಲಲೋಚನೆ ದೃಢ ಪತಿವ್ರತೆ
ಯೇಳು ದುಃಖಿಸಬೇಡ ಭೃಗು ಜಾ
ಬಾಲಿ ಜಮದಗ್ನ್ಯಾದಿ ದಿವ್ಯ ಮುನೀಂದ್ರ ಗಣವಿದೆಲ
ಓಲಗಿಸುವುದು ದುಷ್ಕೃತಿಗೆ ನಿ
ಷ್ಪಾಳೆಯವು ಬಳಿಕಹುದು ಮಂತ್ರವಿ
ಶಾಲ ಬೀಜದಿಯಹುದು ಸಂತತಿ ಕಾಂತೆ ಕೇಳ್ ಎಂದ ॥31॥

೦೩೨ ಭವದನುಗ್ರಹದಿನ್ದ ಸುತರು ...{Loading}...

ಭವದನುಗ್ರಹದಿಂದ ಸುತರು
ದ್ಭವಿಸಿದರೆ ಲೇಸನ್ಯಥಾ ಸಂ
ಭವಿಸಿದರೆ ದುಷ್ಕೀರ್ತಿವಧುವೆಂಜಲಿಸಳೇ ಕುಲವ
ಅವನಿಪತಿ ಕೇಳ್ ನಹುಷ ನಳ ಪೌ
ರವ ಸುಹೋತ್ರಾದ್ಯರ ನಿಜಾತ್ಮೋ
ದ್ಭವರ ಪಾರಂಪರೆಗೆ ಗತಿಯೇನಂದಳಾ ಕುಂತಿ ॥32॥

೦೩೩ ಅರಸಿ ಕೇಳ್ ...{Loading}...

ಅರಸಿ ಕೇಳ್ ತದ್ಬೀಜ ಪಾರಂ
ಪರೆ ಮುರಿಯೆ ತತ್ ಕ್ಷೇತ್ರದಲಿ ಮುನಿ
ವರರ ಕಾರುಣ್ಯದಲಿ ಪುತ್ರೋದ್ಭವವದೇ ವಿಹಿತ
ಪರಮ ವೈದಿಕ ಸಿದ್ಧವಿದು ಸರ
ಸಿರುಹಮುಖಿ ನಿಶ್ಯಂಕೆಯಲಿ ನೀ
ಧರಿಸು ಮುನಿಮಂತ್ರೋಪದೇಶವನಿದುವೆ ನಿರ್ದೋಷ ॥33॥

೦೩೪ ಆದಡವನಿಪ ಬಿನ್ನಹವು ...{Loading}...

ಆದಡವನಿಪ ಬಿನ್ನಹವು ತನ
ಗಾದಿಯಲಿ ದೂರ್ವಾಸಮುನಿ ಕರು
ಣೋದಯಲಿತ್ತೈದು ಮಂತ್ರಾಕ್ಷರದ ವರವುಂಟು
ನೀ ದಯಾಂಬುಧಿ ನಿನ್ನನುಗ್ರಹ
ವಾದುದಾದರೆ ತದ್ವಿಧಾನದ
ಲಾದರಿಸುವೆನು ಪುತ್ರಕಾಮ್ಯವನೆಂದಳಾ ಕುಂತಿ ॥34॥

೦೩೫ ಲೇಸನಾಡಿದೆ ಕುನ್ತಿ ...{Loading}...

ಲೇಸನಾಡಿದೆ ಕುಂತಿ ಮುನಿಯುಪ
ದೇಶಿಸಿದನೇ ನಮ್ಮ ಭಾಗ್ಯವಿ
ದೈಸಲೇ ನೀ ಧೃಡಪತಿವ್ರತೆಯೆನ್ನನುಜ್ಞೆಯಲಿ
ಭಾಸುರರ ನೀ ಭರತವಂಶ ವಿ
ಲಾಸರನು ಕೃತಶತ್ರು ಪಕ್ಷವಿ
ನಾಶರನು ಬೆಸಲಾಗು ಹೋಗೆನ್ನಾಣೆ ಹೋಗೆಂದ ॥35॥

೦೩೬ ತರುಣಿ ಪಾಣ್ಡುವಿನಾಜ್ಞೆಯನು ...{Loading}...

ತರುಣಿ ಪಾಂಡುವಿನಾಜ್ಞೆಯನು ನಿಜ
ಶಿರದೊಳಾಂತು ಸಮಸ್ತಮುನಿ ಮು
ಖ್ಯರಿಗೆ ವಂದಿಸಿ ಹರಿಹರಬ್ರಹ್ಮಾದಿಗಳಿಗೆರಗಿ
ಸರಸಿಯಲಿ ಮಿಂದಳು ಮುನೀಂದ್ರನ
ಪರಮ ಮಂತ್ರಾಕ್ಷರವ ತಾನು
ಚ್ಚರಿಸಿ ನೆನೆದಳು ಯಮನನಾಕ್ಷಣವಾತನೈತಂದ ॥36॥

೦೩೭ ಸತಿಯ ಸಮ್ಮುಖನಾಗಿ ...{Loading}...

ಸತಿಯ ಸಮ್ಮುಖನಾಗಿ ವೈವ
ಸ್ವತನು ನುಡಿದನಿದೇಕೆ ನಮ್ಮ
ಕ್ಷಿತಿಗೆ ಬರಿಸಿದೆಯೆನಲು ಲಜ್ಜಾವನತಮುಖಿಯಾಗಿ
ಸುತನ ಕರುಣಿಪುದೆನಲು ಭಯಪರಿ
ವಿತತ ವಿಮಲ ಸ್ವೇದಜಲ ಕಂ
ಪಿತೆಯ ಮುಟ್ಟಿ ತಥಾಸ್ತುವೆನುತ ಕೃತಾಂತ ಬೀಳ್ಕೊಂಡ ॥37॥

೦೩೮ ಧಾರುಣೀಪತಿ ಕೇಳು ...{Loading}...

ಧಾರುಣೀಪತಿ ಕೇಳು ಕುಂತೀ
ನಾರಿಗಾದುದು ಗರ್ಭ ಹರುಷದ
ಭಾರದಲಿ ಸತಿ ತಗ್ಗಿದಳು ನವ ಪೂರ್ಣಮಾಸದಲಿ
ಚಾರುತರ ನಕ್ಷತ್ರ ಶುಭದಿನ
ವಾರ ಲಗ್ನದೊಳಿಂದುಕುಲ ವಿ
ಸ್ತಾರಕನು ಸುಕುಮಾರನವತರಿಸಿದನು ಧರಣಿಯಲಿ ॥38॥

೦೩೯ ನಿರ್ಮಲಿನವಾಯ್ತಖಿಲ ದೆಸೆ ...{Loading}...

ನಿರ್ಮಲಿನವಾಯ್ತಖಿಲ ದೆಸೆ ದು
ಷ್ಕರ್ಮತತಿ ಬೆಚ್ಚಿದುದು ಸಾಕ್ಷಾತ್
ಧರ್ಮವೇ ಧರಣಿಯಲಿ ನೃಪ ರೂಪಾಗಿ ಜನಿಸಿತಲ
ದುರ್ಮಹೀಶರ ಹೊತ್ತಭಾರದ
ಕರ್ಮ ವೇದನೆ ಧಾತ್ರಿಗಿಳಿದುದು
ಧರ್ಮವಿನ್ನೆಮಗಹುದೆನುತ ಹೆಚ್ಚಿದುದು ಮುನಿನಿಕರ ॥39॥

೦೪೦ ಧರಣಿಪತಿ ಧರ್ಮಜನ ...{Loading}...

ಧರಣಿಪತಿ ಧರ್ಮಜನ ಮುಖ ಸಂ
ದರುಶನವ ಮಾಡಿದನು ಹೆಚ್ಚಿದ
ಹರುಷ ಭಾರಕೆ ಚಿತ್ತ ತಗ್ಗಿತು ಮುಗ್ಗಿತಡಿಗಡಿಗೆ
ಹರಿದು ಪುತ್ರೋತ್ಸವದ ನುಡಿ ಗಜ
ಪುರದೊಳಬ್ಬರವಾಯ್ತು ಪಾಂಡುವಿ
ನರಸಿಯಲಿ ಸಂತಾನ ಜನಿಸಿದುದೆಂದು ಜನಜನಿತ ॥40॥

೦೪೧ ಕೇಳಿದಳು ಗಾನ್ಧಾರಿ ...{Loading}...

ಕೇಳಿದಳು ಗಾಂಧಾರಿ ಕುಂತಿಗೆ
ಬಾಲ ಕೇಳಿ ವಿನೋದವೇ ಕೈ
ಮೇಳವಿಸಿತೇ ಮುನ್ನ ಹಾ ತಪ್ಪೇನು ತಪ್ಪೇನು
ಕಾಳು ಮಾಡಿದನೆನಗೆ ಮುನಿಪತಿ
ಠೌಳಿಕಾರನಲಾ ಸುಡೀ ಗ
ರ್ಭಾಳಿಗಳನೆಂದಬಲೆ ಹೊಸೆದಳು ಬಸುರನೊಡೆ ಮುರಿದು ॥41॥

೦೪೨ ಉದುರಿದವು ಧರಣಿಯಲಿ ...{Loading}...

ಉದುರಿದವು ಧರಣಿಯಲಿ ಬಲು ಮಾಂ
ಸದ ಸುರಕ್ತದ ಘಟ್ಟಿಗಳು ಖಂ
ಡದ ಸುಢಾಳದ ಜಿಗಿಯ ಪೇಸಿಕೆ ನಿಕರ ನೂರೊಂದು
ಕೆದರಿದಳು ವಾಮಾಂಘ್ರಿಯಲಿ ನೂ
ಕಿದಳು ಹಾಯ್ಕಿವ ಹೊರಗೆನುತ ನೋ
ಡಿದಳು ಕರೆ ಕೈನೆಯರನೆನುತ ಕಠೋರ ಕೋಪದಲಿ ॥42॥

೦೪೩ ತನ ತನಗೆ ...{Loading}...

ತನ ತನಗೆ ನಡು ನಡುಗಿ ಕಾಂತಾ
ಜನವು ಬಂದುದು ತಾಯೆ ಬೆಸನೇ
ನೆನಲು ಬಿಸುಡಿವ ನೂರ ಹೊರಗೆಂಬಾ ಮುಹೂರ್ತದಲಿ
ಮುನಿಪವೇದವ್ಯಾಸನಾಕೆಯ
ಮನೆಗೆ ಬಂದನು ಕಂಡನೀ ಕಾ
ಮಿನಿಯ ಕೋಲಾಹಲವಿದೇನೇನೆಂದು ಬೆಸೆಗೊಂಡ ॥43॥

೦೪೪ ಭರತ ಸನ್ತಾನಕೆ ...{Loading}...

ಭರತ ಸಂತಾನಕೆ ಕುಮಾರರ
ಹೆರುವೆ ನಾ ಮುನ್ನೆಂದು ಗರ್ಭವ
ಧರಿಸಿದೆನು ನಿಮ್ಮಡಿಯ ಕೃಪೆಯಲಿ ಮಂತ್ರ ಭಾವಿತವ
ವರುಷವೆರಡಾಯ್ತಿದರ ಭಾರವ
ಧರಿಸಿದೆನು ದಾಯಾದ್ಯರೊಳಗವ
ತರಿಸಿದನು ಮಗನೆನುತ ಮುಖದಿರುಹಿದಳು ಗಾಂಧಾರಿ ॥44॥

೦೪೫ ಮರುಳು ಹೆಙ್ಗುಸಲಾ ...{Loading}...

ಮರುಳು ಹೆಂಗುಸಲಾ ಮಹಾತ್ಮರ
ಪರಿಯ ನೀನೆಂತರಿವೆ ಗರ್ಭೋ
ತ್ಕರವ ಕೆಡಿಸಿದೆ ಪಾಪಿ ನೀ ಸಾರೆನುತ ಮುನಿ ಮುಳಿದು
ತರಿಸಿದನು ಘೃತಪೂರಿತದ ಕೊ
ಪ್ಪರಿಗೆಗಳನೊಂದೊಂದನೊಂದರೊ
ಳಿರಿಸಿ ಮಂತ್ರಿಸಿ ನೀರ ತಳಿದನು ರಕ್ಷೆಗಳ ರಚಿಸಿ ॥45॥

೦೪೬ ಚಿನ್ತೆಯಿಲ್ಲದೆ ನೂರುದಿನ ...{Loading}...

ಚಿಂತೆಯಿಲ್ಲದೆ ನೂರುದಿನ ಪರಿ
ಯಂತ ರಕ್ಷಿಸು ಬಳಿಕ ನಿನ್ನಯ
ಸಂತತಿಯ ಸಾಮಥ್ರ್ಯವನು ಗಾಂಧಾರಿ ನೋಡೆಂದು
ಕಂತುಪಿತ ಸನ್ನಿಭನು ಸತಿಯನು
ಸಂತವಿಸಿ ಮರಳಿದನು ಧರಣೀ
ಕಾಂತ ಕೇಳೈ ಬನದೊಳಿತ್ತಲು ಭೀಮನುದ್ಭವವ ॥46॥

೦೪೭ ನಿಯಮದಲಿ ಕಾಮಿನಿ ...{Loading}...

ನಿಯಮದಲಿ ಕಾಮಿನಿ ಸರೋವಾ
ರಿಯಲಿ ಮಿಂದಳು ಬೀಜಮಂತ್ರ
ವ್ಯಯವ ಮಾಡಿದಳಮರ ನಿಕರವ ನೋಡಿ ಕೈಮುಗಿದು
ಬಯಸಿದಳು ವಾಯುವನು ನಿಜ ಮೂ
ರ್ತಿಯಲಿ ಬಂದು ಸಮೀರನಾ ಕುಂ
ತಿಯನು ನುಡಿಸಿದನೆಮ್ಮ ಬರಿಸಿದ ಹದನದೇನೆಂದು ॥47॥

೦೪೮ ಬರಿಸಿದುದು ಬೇರೇನು ...{Loading}...

ಬರಿಸಿದುದು ಬೇರೇನು ಸುತನನು
ಕರುಣಿಸುವುದೈಸಲೆಯೆನಲು ಸಂ
ಸ್ಪರುಶನದಿ ಭವದಿಷ್ಟಮಸ್ತುಯೆನುತ್ತಲಂಬರಕೆ
ಮರಳಿದನು ಪವಮಾನನೀ ಪಂ
ಕರುಹಮುಖಿ ಬೆಸಲಾದಳೊಂದೇ
ವರುಷ ಗರ್ಭವ ಧರಿಸಿ ಪರಬಲ ಕಾಲ ಭೈರವನ ॥48॥

೦೪೯ ಅವನಿಸುತವಾರ ತ್ರಯೋದಶಿ ...{Loading}...

ಅವನಿಸುತವಾರ ತ್ರಯೋದಶಿ
ದಿವದ ಮಧ್ಯದೊಳರ್ಕನಿರೆ ಸಂ
ಭವಿಸಿದನು ಮಘೆಯಲಿ ಶುಭಗ್ರಹ ಲಗ್ನದುದಯದಲಿ
ಭವದ ಮಾತ್ರದೊಳಹಿತ ಪಾರ್ಥಿವ
ನಿವಹ ನಡುಗಿತು ಭೂಮಿಪತಿ ಹೇ
ಳುವೆನದೇನನು ಭೀಮಸೇನನ ಜನನದದ್ಭುತವ ॥49॥

೦೫೦ ಭೀಮನುದಯಿಸಿದಿರುಳು ಕೌರವ ...{Loading}...

ಭೀಮನುದಯಿಸಿದಿರುಳು ಕೌರವ
ಭೂಮಿಪತಿ ಜನಿಸಿದನೆಲೈ ನಿ
ಮ್ಮಾ ಮಹಾತ್ಮನ ಹುಟ್ಟು ಬೆದರಿಸಿತಖಿಳಜನಮನವ
ಭೂಮಿ ನಡುಗಿತು ದೆಸೆಗೆ ಹರಿದವು
ಧೂಮಕೇತುಗಳೊದರಿದವು ಬಳಿ
ಕಾ ಮಹಾನಗರದಲಿ ಭರದಲಿ ಭೂರಿ ಗೋಮಾಯು ॥50॥

೦೫೧ ಕರೆಸಿದನು ಧೃತರಾಷ್ಟ್ರನವನೀ ...{Loading}...

ಕರೆಸಿದನು ಧೃತರಾಷ್ಟ್ರನವನೀ
ಸುರರ ಬೆಸಗೊಂಡನು ಕುಮಾರನ
ದರುಶನದ ಸಮನಂತರದಲುತ್ಪಾತ ಫಲಗತಿಯ
ಭರತವಂಶವನುಳಿದ ಭೂಮೀ
ಶ್ವರರನಂತವನೀತನೇ ಸಂ
ಹರಿಸುವನು ಸಂದೇಹವಿದಕೇನೆಂದರಾ ದ್ವಿಜರು ॥51॥

೦೫೨ ಕುಲಕೆ ಕಣ್ಟಕನಾದಡೊಬ್ಬನ ...{Loading}...

ಕುಲಕೆ ಕಂಟಕನಾದಡೊಬ್ಬನ
ಕಳೆವುದೂರಳಿವಿನಲಿ ಕಳೆವುದು
ಕುಲವನೊಂದನು ದೇಶದಳಿವಿನಲೂರ ಕೆಡಿಸುವುದು
ಇಳೆಯನಖಿಳವ ಬಿಸುಡುವುದು ತ
ನ್ನುಳಿವ ಮಾಡುವುದೆಂಬ ವಚನವ
ತಿಳಿವುದೀತನ ಬಿಸುಟು ಕಳೆ ನೀನೆಂದನಾ ವಿದುರ ॥52॥

೦೫೩ ಸುತನ ಮೋಹದ ...{Loading}...

ಸುತನ ಮೋಹದ ತಿಮಿರವಾ ದು
ಸ್ಥಿತಿಯನೀಕ್ಷಿಸಲೀವುದೇ ದು
ರ್ಮತಿಯೊಳೀತನ ಬಿಸುಡಲೀಸಿದುದಿಲ್ಲ ಗಾಂಧಾರಿ
ಸುತನಿರೀಕ್ಷಣ ಜಾತಕರ್ಮೋ
ಚಿತದ ದಾನಂಗಳಲಿ ಭೂಸುರ
ತತಿಯ ದಣಿಸಿದನನಿಬರಿಗೆ ಗುಣನಾಮಕರಣದಲಿ ॥53॥

೦೫೪ ಜನಪ ದುರ್ಯೋಧನನು ...{Loading}...

ಜನಪ ದುರ್ಯೋಧನನು ದುಶ್ಯಾ
ಸನ ವಿಕರ್ಣ ಸುಬಾಹು ದುಸ್ಸಹ
ಕನಕವರ್ಣ ಸುಷೇಣ ದೀರ್ಘೋದರ ಮಹೋದರನು
ಜನವಿಜಯ ಜಲಸಂದ ದೃಢವಾ
ಹನ ವಿವಿಂಶತಿ ಕುಂಡಧಾರಕ
ನೆನಲು ನೂರ್ವರ ನಾಮಕರಣವನರಸ ಮಾಡಿಸಿದ ॥54॥

೦೫೫ ಜನಪತಿಗೆ ಬಳಿಕೊಬ್ಬ ...{Loading}...

ಜನಪತಿಗೆ ಬಳಿಕೊಬ್ಬ ವೇಶ್ಯಾಂ
ಗನೆಯ ಸುತನು ಯುಯುತ್ಸು ನೂರೊಂ
ದೆನಿಸಿತರಸು ಕುಮಾರಕರು ಗಾಂಧಾರಿಯುದರದಲಿ
ಜನಿಸಿದರು ನೂರೊಂದು ನೂರ್ವರಿ
ಗನುಜೆ ದುಸ್ಸಳೆಯಾದಳಾ ಮಾ
ನಿನಿ ಜಯದ್ರಥನರಸಿಯಾದಳು ರಾಯ ಕೇಳ್ ಎಂದ ॥55॥

೦೫೬ ಅತ್ತಲಾ ಹದನಾಯ್ತು ...{Loading}...

ಅತ್ತಲಾ ಹದನಾಯ್ತು ಬಳಿಕಿನ
ಲಿತ್ತ ಧರ್ಮಜ ಭೀಮಸೇನರ
ಹೆತ್ತ ಹರುಷದೊಳಿವರು ಮೆರೆದರು ಪಾಂಡು ಕುಂತಿಯರು
ಮತ್ತೆ ಕೇಳದ್ಭುತವನುರೆ ಮೊರೆ
ವುತ್ತ ಹೆಬ್ಬುಲಿ ವರತಪೋಧನ
ರತ್ತಲೈತರೆ ಪಾಂಡು ಕೆಡಹಿದನಾ ಮೃಗಾಂತಕನ ॥56॥

೦೫೭ ಆ ಮಹಾ ...{Loading}...

ಆ ಮಹಾ ರಭಸಕ್ಕೆ ಮುನಿಪ
ಸ್ತೋಮವಂಜಿತು ಪರ್ವತಾಗ್ರದ
ಲಾ ಮಹೀಪತಿಯರಸಿ ನಡುಗಿದಳಹಹ ಶಿವಯೆನುತ
ಭೀಮ ಬಿದ್ದನು ತೊಡೆಯ ಮೇಲಿಂ
ದೀ ಮಹಿಗೆ ತಚ್ಚೈಲ ಶಿಲೆ ನಿ
ರ್ನಾಮವಾದುದು ಹಸುಳೆ ಹೊರಳಿದು ಬಿದ್ದ ಭಾರದಲಿ ॥57॥

೦೫೮ ಶಿಶುವ ತೂಪಿರಿದಳು ...{Loading}...

ಶಿಶುವ ತೂಪಿರಿದಳು ನಿವಾಳಿಸಿ
ಬಿಸುಟು ರಜವನು ಮಂತ್ರ ರಕ್ಷಾ
ಪ್ರಸರವನು ಮುನಿಗಳಲಿ ಮಾಡಿಸಿದಳು ಕುಮಾರಂಗೆ
ವಸುಧೆಗತಿ ಬಲನೊಬ್ಬ ಕಂದನ
ಬೆಸಲಹೆನುಯೆಂದೆನುತ ಸಾರಸ
ಲಸಿತ ಕಮಲಾಕರದ ತೀರಕೆ ಬಂದಳಾ ಕುಂತಿ ॥58॥

೦೫೯ ಮಿನ್ದು ಕಡು ...{Loading}...

ಮಿಂದು ಕಡು ಶುಚಿಯಾಗಿ ಸುಮನೋ
ವೃಂದದೊಳಗಾರೈದು ನೋಡಿ ಪು
ರಂದರನ ನೆನೆದಳು ಮುನೀಂದ್ರನ ಮಂತ್ರ ಶಕ್ತಿಯಲಿ
ಬಂದನಲ್ಲಿಗೆ ಬಯಕೆಯೇನರ
ವಿಂದಲೋಚನೆ ಹೇಳೆನಲು ಪೂ
ರ್ಣೇಂದುಮುಖಿ ತಲೆವಾಗಿದಳು ಲಜ್ಜಾನುಭಾವದಲಿ ॥59॥

೦೬೦ ಸುತನನಿತ್ತೆನು ನಿನಗೆ ...{Loading}...

ಸುತನನಿತ್ತೆನು ನಿನಗೆ ಲೋಕ
ತ್ರಿತಯದಲಿ ಬಲುಗೈ ಕಣಾ ಪಶು
ಪತಿಗೆ ಪುರುಷೋತ್ತಮಗೆ ಸರಿಮಿಗಿಲೆಂಬ ಸಂದೇಹ
ಶತಭವಾಂತರ ಪುಣ್ಯತರು ಕಾ
ಮಿತವ ಫಲಿಸಿತು ಹೋಗೆನುತ ಸುರ
ಪತಿ ಲತಾಂಗಿಗೆ ವರವನಿತ್ತಡರಿದನು ಗಗನವನು ॥60॥

೦೬೧ ತೀವಿದವು ನವಮಾಸ ...{Loading}...

ತೀವಿದವು ನವಮಾಸ ವಿಮಲ ವಿ
ಭಾವಸುವಿನುದಯದಲಿ ಶುಭ ಲ
ಗ್ನಾವಲಂಬನ ತಾರೆಯುತ್ತರೆ ಫಲುಗುಣಾಹ್ವಯದ
ಜೀವ ಕೇಂದ್ರ ಸ್ಥಿತಿ ದಶಾ ದಿ
ಗ್ಭಾವಿತ ಗ್ರಹರಾಶಿಯಿರೆ ಗಾಂ
ಡೀವಿ ಜನಿಸಿದನೊಡನೆ ಜನಿಸಿತು ಜನದ ಸುಮ್ಮಾನ ॥61॥

೦೬೨ ದೇವ ದುನ್ದುಭಿ ...{Loading}...

ದೇವ ದುಂದುಭಿ ಮೊಳಗಿದುವು ಕುಸು
ಮಾವಳಿಯ ಮಳೆ ಸುರಿದುದಾಡುವ
ದೇವವಧುಗಳ ಹೊಳೆವ ಕಂಗಳ ಢಾಳ ಮಿಂಚಿದವು
ತೀವಿದುತ್ಸಹವುಬ್ಬರಿಸೆ ಭುವ
ನಾವಳಿಯೊಳಿಂದ್ರಾದಿ ನಿಖಿಳ ಸು
ರಾವಳಿಗಳುರೆ ಕೂಡೆ ಕೊಂಡಾಡಿತು ಧನಂಜಯನ ॥62॥

೦೬೩ ರಣಭಯಙ್ಕರನರ್ಜುನನು ಧಾ ...{Loading}...

ರಣಭಯಂಕರನರ್ಜುನನು ಧಾ
ರುಣಿಯೊಳುದಿಸದ ಮುನ್ನ ತಿಂಗಳ
ನೆಣಿಸಿದರೆ ಆರಾಯ್ತು ಮಧುರೆಯ ರಾಜಭವನದಲಿ
ಗುಣರಹಿತನಚ್ಯುತನು ವರ ಶ್ರಾ
ವಣ ಬಹುಳದಷ್ಟಮಿಯಿರುಳು ರೋ
ಹಿಣಿಯಲವತರಿಸಿದನಲೈ ದೇವಕಿಯ ಜಠರದಲಿ ॥63॥

೦೬೪ ಈತ ನರ ...{Loading}...

ಈತ ನರ ಋಷಿ ನಿಖಿಳ ಭುವನ
ಖ್ಯಾತ ನಾರಾಯಣನಲೈ ಬಳಿ
ಕಾತನುರ್ವೀಭಾರ ಸಂಹರಣದ ವಿನೋದದಲಿ
ಭೂತಪತಿ ಮೊದಲಾದ ದಿವಿಜ
ವ್ರಾತವೇ ನರರೂಪದಲಿ ಸಂ
ಭೂತವಾದುದು ಕೇಳು ನೃಪ ಕೃಷ್ಣಾವತಾರದಲಿ ॥64॥

೦೬೫ ಸಾಕು ಮೂವರು ...{Loading}...

ಸಾಕು ಮೂವರು ಸುತರು ತನಗೆಂ
ದೀಕೆ ಮಾದ್ರೀದೇವಿಗಗ್ಗದ
ಶೋಕಿತೆಗೆ ಮಂತ್ರೋಪದೇಶ ವಿಧಾನವನು ಕಲಿಸಿ
ನಾಕ ನಿಲಯರ ವೊಲಿಸೆನಲು ಬಂ
ದಾಕೆ ಕೃತನಿಯಮದಲಿ ನೆನೆದಳು
ಲೋಕವಿಶ್ರುತರಶ್ವಿನೀ ದೇವರನು ಹರ್ಷದಲಿ ॥65॥

೦೬೬ ಬನ್ದರವರಿಬ್ಬರು ಮಹೀತಳ ...{Loading}...

ಬಂದರವರಿಬ್ಬರು ಮಹೀತಳ
ಕಿಂದುವದನೆಗೆ ಸುತರನಿತ್ತರು
ಮಂದಗಮನೆಯ ಕಳುಹಿ ಹಾಯ್ದರು ಗಗನ ಮಂಡಲಕೆ
ಒಂದು ವರುಷಕೆ ಕಿರಿಯರರ್ಜುನ
ಗಿಂದ ಬಳಿಕವತರಿಸಿದರು ಮುನಿ
ವೃಂದ ನೆರೆ ಪತಿಕರಿಸಿ ಕೊಂಡಾಡಿತು ಕುಮಾರಕರ ॥66॥

೦೬೭ ಕರಿತುರಗ ನಿಕರವನು ...{Loading}...

ಕರಿತುರಗ ನಿಕರವನು ಕುಲ ಭೃ
ತ್ಯರ ವಿಲಾಸಿನಿಯರನು ರತ್ನಾ
ಭರಣ ವಸನ ಹಿರಣ್ಯ ಗೋ ಮಹಿಷಾದಿ ವಸ್ತುಗಳ
ತರಿಸಿದನು ಕಶ್ಯಪನು ಯದು ರಾ
ಯರ ಪುರೋಹಿತನಲ್ಲಿಗಾತನ
ಪರುಠವಿಸಿ ಕಳುಹಿದನು ಪಾಂಡುನೃಪಂಗೆ ವಸುದೇವ ॥67॥

೦೬೮ ಬನ್ದನಾ ಕಶ್ಯಪನು ...{Loading}...

ಬಂದನಾ ಕಶ್ಯಪನು ಕುಂತೀ
ನಂದನರ ಕಂಡಖಿಳ ವಸ್ತುವ
ನಂದು ಕಾಣಿಕೆಯಿತ್ತು ಕಂಡನು ಪಾಂಡುಭೂಪತಿಯ
ಅಂದು ವಸುದೇವಾದಿ ಯಾದವ
ವೃಂದ ರೋಹಿಣಿ ದೇವಕಿಯರಾ
ನಂದ ಸುಕ್ಷೇಮವನು ಕುಶಲವನರಸ ಬೆಸಗೊಂಡ ॥68॥

೦೬೯ ಯಾದವರ ಸುಕ್ಷೇಮ ...{Loading}...

ಯಾದವರ ಸುಕ್ಷೇಮ ಕುಶಲವ
ನಾದರಿಸಿ ಬಳಿಕಾದ ಪರಮಾ
ಹ್ಲಾದದಲಿ ಕಶ್ಯಪನೊಳಾಲೋಚಿಸಿ ಮಹೀಪಾಲ
ವೈದಿಕೋಕ್ತಿಯ ಚೌಲವುಪನಯ
ನಾದಿ ಸಕಲ ಕ್ರಿಯೆಗಳನು ಗಾ
ಗ್ರ್ಯಾದಿ ಋಷಿಗಳನುಜ್ಞೆಯಲಿ ಮಾಡಿಸಿದನನಿಬರಿಗೆ ॥69॥

೦೭೦ ಈತನೇ ಧರ್ಮಜನು ...{Loading}...

ಈತನೇ ಧರ್ಮಜನು ಯೆರಡನೆ
ಯಾತ ಭೀಮನು ಬಳಿಕ ಮೂರನೆ
ಯಾತನರ್ಜುನ ನಕುಲನೈದನೆಯಾತ ಸಹದೇವ
ಈತಗಳು ಕೌಂತೇಯ ಮಾದ್ರೇ
ಯಾತಿಶಯ ಪರಿಭೇದ ರಹಿತ
ಖ್ಯಾತರೆಂದರು ಪರಮಮುನಿಗಳು ಪಾಂಡುನಂದನರ ॥70॥

+೦೪ ...{Loading}...