धीरेन्द्र-कौशलम्

ಶ್ರೀಧೀರೇಂದ್ರ ಸ್ವಾಮಿಗಳ ವ್ಯಾಖ್ಯಾನ ಕೌಶಲಕ್ಕೊಂದು ಉದಾಹರಣೆ

ಶ್ರೀಧೀರೇಂದ್ರತೀರ್ಥರ ಅನೇಕ‌ ವ್ಯಾಖ್ಯಾನಗಳಲ್ಲಿ ವಾದೀಂದ್ರತೀರ್ಥರಿಂದ ರಚಿತವಾದ ಗುರುಗುಣಸ್ತವನ ವ್ಯಾಖ್ಯಾನವೂ ಒಂದು .

ಇದನ್ನು ಧೀರೇಂದ್ರತೀರ್ಥರು ಜಯರಾಮಾಚಾರ್ಯರಾಗಿದ್ದಾಗಲೇ ರಚಿಸಿದ್ದಾರೆ ಎಂದು ಮಂಗಳಾಚರಣೆಯಿಂದ ತಿಳಿಯುತ್ತದೆ.

ಶ್ರೀಮದ್ರಾಮಹಯಾಸ್ಯಕೃಷ್ಣನೃಹರಿವ್ಯಾಸಾದಿರೂಪಂ ಹರಿಂ| ಶ್ರೀಮಧ್ವಾರ್ಯಗುರೂಂಸ್ತಥಾ ನಿಜಗುರೂನ್ವಾದೀಂದ್ರವರ್ಯಾನ್ನಮನ್|| ತಚ್ಛಿಷ್ಯೋ ಜಯರಾಮನಾಕಸುಧೀಃ ಸಚ್ಛ್ರಗ್ಧರಾವೃತ್ತಷಟ್| ತ್ರಿಂಶತ್ಪದ್ಯಮಯೀಂ ಗುರೋರ್ಗುಣನುತಿಂ ವ್ಯಾಕರ್ತುಮುತ್ಕಂಠತೇ ||

ಇದರಲ್ಲಿ ವಾದೀಂದ್ರಸ್ವಾಮಿಗಳು ವಿಬುಧೇಂದ್ರತೀರ್ಥರನ್ನು ವರ್ಣಿಸುತ್ತಾ ಸೇನಾನಾಸೀರಸೀಮಾ ಸಮುದಿತವಿದಿತಾಬಾಧಯೋಧಾದಿನೇತಾ ಎಂದು ಇದಕ್ಕೆ ಅರ್ಥ ವಿಬುಧೇಂದ್ರತೀರ್ಥರು ಸೈನ್ಯಮುಖ್ಯಪ್ರದೇಶದಲ್ಲಿರುವ, ಸೇನೆಯ ಮರ್ಯಾದೆಯ‌ನ್ನು ಅರಿತಿರುವ, ಅಪ್ರತಿಹತರಾದ ಯೋಧರಿಗೆ (ಭಟರಿಗೆ) ನಾಯಕನಂತಿದ್ದಾರೆ ಎಂದು

ಇಲ್ಲಿ ಗಮನಿಸಬೇಕಾದ ಅಂಶ “ಸೇನಾನಾಸೀರಸೀಮಾ” ಎಂಬ ಶಬ್ಧ

ಇದರ ಮೇಲೊಂದು ಆಕ್ಷೇಪ ಹೀಗೆ ಬರುತ್ತದೆ

ನಾಸೀರ ಶಬ್ಧವೇ ಸೇನೆಯನ್ನು ಸೂಚಿಸುತ್ತಿರುವಾಗ ಮತ್ತೆ ಸೇನಾ ಶಬ್ಧವನ್ನು ಬಳಸುವ ಅಗತ್ಯ ಏನಿತ್ತು ?? ಎಂದು

ಇದಕ್ಕೆ ಧೀರೇಂದ್ರತೀರ್ಥರು ಹೇಗೆನ್ನುತ್ತಾರೆ

“ಯದ್ಯಪಿ ನಾಸೀರ ಶಬ್ಧ ಏವ ಸೇನಾಮುಖವಾಚೀ ತಥಾಪಿ ಸೇನಾಶಬ್ಧಾಭಿವ್ಯಾಹಾರಾತ್ ಮುಖ್ಯಮಾತ್ರಪರಃ ಗಂಜಾಗೇಹಮಿತಿ ನ್ಯಾಯಾತ್” ಎಂದು

ಇದರ ಅರ್ಥ ಹೀಗಿದೆ

ಹೌದು. ನಾಸೀರ ಶಬ್ಧವು ಮುಖ್ಯವಾಗಿ ಸೇನೆಯನ್ನು ಸೂಚಿಸಿದ್ದರೂ, ಗುರುಗಳು ಸೇನಾ ಶಬ್ಧವನ್ನು ಅಭಿವ್ಯಾಹರಣ ಮಾಡಿರುವುದರಿಂದ (ಸ್ವೀಕರಿಸಿರುವುದರಿಂದ), ನಾಸೀರ ಶಬ್ಧಕ್ಕೆ ಕೇವಲ ಮುಖ್ಯ ಎಂದು ಅರ್ಥ ಮಾಡಬೇಕು. ಸೀಮಾ ಶಬ್ಧಕ್ಕೆ ಪ್ರದೇಶ ಎಂದರ್ಥ. ಒಟ್ಟುಗೂಡಿಸಿ ಸೇನೆಯ ಮುಖ್ಯ ಪ್ರದೇಶ ಎಂದರ್ಥವಾಗುತ್ತದೆ. ಹೇಗೆ ವ್ಯಾಖ್ಯಾನಿಸುವುದರಿಂದ ಯಾವ ಶಬ್ಧಗಳೂ ವ್ಯರ್ಥವೆನಿಸುವುದಕ್ಕೆ ಅವಕಾಶವಿಲ್ಲ.

ಸರಿ. ಈ ರೀತಿ ಪ್ರಯೋಗ ಮಾಡಲಿಕ್ಕೆ ಪ್ರಮಾಣವೇನು ? ಅಥವಾ ಈ ರೀತಿ ಪ್ರಯೋಗ ಬೇರೆ ಕಡೆ ಕಂಡುಬಂದಿದೆಯಾ ? ಎಂದು ಪ್ರಶ್ನಿಸಿದರೆ ಧೀರೇಂದ್ರ ಸ್ವಾಮಿಗಳು ಉತ್ತರಿಸಿದ್ದು

ಗಂಜಾಗೇಹಮಿತಿ ನ್ಯಾಯಾತ್ ಎಂದು

ಇಲ್ಲಿ ಗಂಜಾ ಎಂದರೇನೆ ಮದಿರೆಯ ಗೃಹ ಎಂದರ್ಥ. “ಗಂಜಾ ತು ಮದಿರಾಗೃಹಮ್ ಎಂದಿರುವುದರಿಂದ

ಮತ್ತೆ ಗಂಜಾಗೃಹಮ್ ಎನ್ನುವುದು ಯಾಕೆ ? ಇಲ್ಲೂ ಗೃಹ ಶಬ್ದ ವ್ಯರ್ಥ ಎಂದಾಗಬೇಕಾಗುತ್ತದೆ. ಅದಕ್ಕೆ ಸಮಾಧಾನ, ಗೃಹ ಶಬ್ಧಕ್ಕೆ ಮುಖ್ಯ ಎಂದಷ್ಟೇ ಅರ್ಥ ಮಾಡಬೇಕು. ಆಗ ಮದಿರೆಯ ಮುಖ್ಯವಾದ ಮನೆ ಅಥವಾ ಆಶ್ರಯ ಸ್ಥಾನ ಎಂದಾಗುತ್ತದೆ. ಆಗ ಯಾವ ಶಬ್ಧಗಳೂ ವ್ಯರ್ಥವಾಗುದಿಲ್ಲ.

ಹೀಗೆ ಸಂವಾದಿಯಾದ ಪ್ರಮಾಣವು ಕಂಡುಬಂದಿದೆಯಾದ್ದರಿಂದ

ಸೇನಾನಾಸೀರಸೀಮಾ ಎಂಬುದಾಗಿ ಹೇಳಿದ್ದು ಸಮಂಜಸವೇ ಆಗಿದೆ ಎಂದು ಗುರುಗಳ ಮಾತನ್ನು ಸಮರ್ಥವಾಗಿ ವ್ಯಾಖ್ಯಾನಿಸಿದ್ದಾರೆ ಪೂಜ್ಯರಾದ ಶ್ರೀ ಧೀರೇಂದ್ರ ಸ್ವಾಮಿಗಳು

ಸಮಗ್ರವಾಗಿ ಹೇಳುತ್ತಾ ವಿಬುಧೇಂದ್ರತೀರ್ಥರನ್ನು ಶ್ರೀಮಧ್ವತಂತ್ರಪ್ರತಿಷ್ಠಾಪನಧುರೀಣರು ಎಂದು ವಾದೀಂದ್ರತೀರ್ಥರು ಕರೆದಿದ್ದಾರೆ ಎಂದು ಧೀರೇಂದ್ರತೀರ್ಥರು ಅರ್ಥೈಸಿದ್ದಾರೆ.

ಅವರ ಆರಾಧನಾ ಸಂದರ್ಭದಲ್ಲಿ ಅವರ ಅಡಿದಾವರೆಗಳಲ್ಲೊಂದು ಸಣ್ಣ ಪುಷ್ಪ

ಭಾರತೀಶ.ಅ. ಶ್ರೀನಗರ