೦೧ ಪವಿತ್ರ ದಾರ್ಶನಿಕತೆ

ಅನುವಾದ

ಮಹರ್ಷಿ ವಾಲ್ಮೀಕಿಗಳ ಅದ್ಭುತ ಕವಿತೆ ಹಾಗೂ ಇತರ ಮಹತ್ವಗಳಲ್ಲಿ ಅವರ ತಪಸ್ಸೇ ಕಾರಣವಾಗಿದೆ. ಇದಕ್ಕೆ ವಾಲ್ಮೀಕಿ ರಾಮಾಯಣವೇ ಸಾಕ್ಷಿಯಾಗಿದೆ. ‘ತಪಃ ಸ್ವಾಧ್ಯಾಯನಿರತ ತಪಸ್ವೀ ವಾಗ್ವಿದಾಂ ವರಮ್’ರಿಂದ ಈ ಕಾವ್ಯವು ‘ತಪ’ ಶಬ್ದದಿಂದಲೇ ಪ್ರಾರಂಭವಾಗುತ್ತದೆ. ‘ತಪಸ್ವೀ’ ಶಬ್ದದಿಂದ ಮಹರ್ಷಿಗಳು ಒಂದು ರೀತಿಯಿಂದ ತನ್ನ ಪರಿಚಯವನ್ನು ಬರೆದುಬಿಟ್ಟಿರುವರು. ತಪಸ್ಸಿನಿಂದಲೇ ಅವರು ಬ್ರಹ್ಮದೇವರ ದರ್ಶನ ಪಡೆದು, ರಾಮಾಯಣದ ದಿವ್ಯ ಕಾವ್ಯದ ಆಶೀರ್ವಾದ ಪಡೆದು ರಾಮಚರಿತ್ರನ ದರ್ಶನಮಾಡಿದರು. ಮುಂದೆ ವಿಶ್ವಾಮಿತ್ರರ ವಿಚಿತ್ರ ತಪಸ್ಸಿನ ವರ್ಣನೆ, ಗಂಗೆಯ ಆಗಮನದಲ್ಲಿ ಭಗೀರಥನ ಅದ್ಭುತ ತಪಸ್ಸು, ಚೂಲಿ ಋಷಿಯ ತಪಸ್ಸು, ಭೃಗುವಿನ ತಪಸ್ಸು ಮುಂತಾದವುಗಳ ವರ್ಣನೆಯೂ ಇದೆ. ಇವರ ಮತದಂತೆ ಸ್ವರ್ಗಾದಿ ಸುಖ ಭೋಗಗಳ ಹೇತು ತಪಸ್ಸೇ ಆಗಿದೆ. ಹೆಚ್ಚೇಕೆ ರಾವಣಾದಿಗಳ ರಾಜ್ಯಸುಖ, ಶಕ್ತಿ, ಆಯುಸ್ಸು ಇವುಗಳ ಮೂಲ ತಪಸ್ಸೇ ಆಗಿದೆ. ಶ್ರೀರಾಮನಾದರೋ ಶುದ್ಧ ತಪಸ್ವಿಯೇ ಆಗಿದ್ದಾನೆ. ಅವನು ತಪಸ್ವಿಗಳ ಆಶ್ರಮಗಳನ್ನು ಪ್ರವೇಶಿಸುತ್ತಾನೆ. ಅಲ್ಲಿ ಅವನು ವೈಖಾನಸ, ವಾಲಖಿಲ್ಯ, ಸಂಪ್ರಕ್ಷಾಲ, ಮರೀಚಿಪ (ಕೇವಲ ಚಂದ್ರಕಿರಣಗಳನ್ನು ಪಾನ ಮಾಡುವವರು) ಪತ್ರಾಹಾರಿ, ಉನ್ಮಜ್ಜಕ (ಯಾವಾಗಲೂ ಕಂಠದವರೆಗೆ ನೀರಿನಲ್ಲಿ ಮುಳುಗಿ ತಪಸ್ಸು ಮಾಡುವವರು) ಪಂಚಾಗ್ನಿಸೇವೀ, ವಾಯುಭಕ್ಷೀ, ಜಲಭಕ್ಷಿ, ಸ್ಥಂಡಿಲ ಶಾಯೀ, ಆಕಾಶ ನಿಲಯೀ ಹಾಗೂ ಊರ್ಧ್ವವಾಸೀ, (ಪರ್ವತ, ಶಿಖರ-ವೃಕ್ಷ ಅಟ್ಟ ಇವುಗಳ ಮೇಲೆ ವಾಸಿಸುವವರು) ಇಂತಹ ತಪಸ್ವಿಗಳನ್ನು ನೋಡುತ್ತಾನೆ. ಇವರೆಲ್ಲರೂ ಜಪದಲ್ಲಿ ಲೀನರಾಗಿದ್ದರು (ಅರಣ್ಯಕಾಂಡದ 6ನೆಯ ಸರ್ಗ) ಇವರ ಜಪ ‘ಶ್ರೀರಾಮ’ ಮಂತ್ರ ಇರಬಹುದು ಏಕೆಂದರೆ ಇವರಲ್ಲಿ ಹೆಚ್ಚಿನವರು ಶ್ರೀರಾಮನನ್ನು ನೋಡುತ್ತಲೇ ಯೋಗಾಗ್ನಿಯಲ್ಲಿ ಶರೀರವನ್ನು ತ್ಯಜಿಸುತ್ತಾರೆ. ವಾಸ್ತವವಾಗಿ ಕಾವ್ಯವಿಧಿಯಿಂದ ಕಾಂತಾಸಮ್ಮಿತ ಮಧುರವಾಣಿಯಲ್ಲಿ ವಾಲ್ಮೀಕಿಯವರ ದಾರ್ಶನಿಕ, ಉಪದೇಶ ಇದೇ ಆಗಿದೆ. ಇದರ ಮೂಲತತ್ತ್ವ ಪವಿತ್ರತೆಯಿಂದ ಇದ್ದು ತಪೋನುಷ್ಠಾನ ಮಾಡುತ್ತಾ ಈಶ್ವರನ ಆರಾಧನೆ ಮಾಡುವುದು ಹಾಗೂ ಅಧರ್ಮದಿಂದ ದೂರ ಇರುವುದೇ ಆಗಿದೆ.