ವಾಲ್ಮೀಕಿಮುನಿಗಳ ವಾಗ್ವಿಲಾಸ

Source: prekshaa series

[[ವಾಲ್ಮೀಕಿಮುನಿಗಳ ವಾಗ್ವಿಲಾಸ Source: prekshaa]]

ತಮೃಷಿಂ ಮನುಷ್ಯಲೋಕಪ್ರವೇಶವಿಶ್ರಾಮಶಾಖಿನಂ ವಾಚಾಮ್

ಸುರಲೋಕಾದವತಾರಪ್ರಾಂತರಖೇದಚ್ಛಿದಂ ವಂದೇ

(ಅನರ್ಘರಾಘವ, ೧.೧೦)

(ಮಾತು ದೂರದ ದೇವಲೋಕದಿಂದ ಜೀವಲೋಕಕ್ಕೆ ನೀರು-ನೆರಳಿಲ್ಲದ ಕಷ್ಟದ ಹಾದಿಯಲ್ಲಿ ಹಾಯ್ದುಬರುವಾಗ ಅದಕ್ಕೆ ನೆಮ್ಮದಿಯ ವಿಶ್ರಾಂತಿವೃಕ್ಷವಾಗಿ ಪರಿಣಮಿಸಿದ ಆದಿಕವಿಗೆ ವಂದನೆಗಳು.)

ರಾಮಾಯಣದ ಸ್ವಾರಸ್ಯಗಳು ನೂರಾರು; ಅವುಗಳಲ್ಲೊಂದು ನುಡಿಬೆಡಗು. ಮಾತಿನ ಈ ಪರಿಯ ಸೊಗಸಾದರೋ ಸಮಷ್ಟಿರೂಪದಲ್ಲಿ ರಸವಾಗಿ, ವ್ಯಷ್ಟಿರೂಪದಲ್ಲಿ ವಕ್ರೋಕ್ತಿಯಾಗಿ ಪರಿಣಮಿಸುತ್ತದೆ. ಇಂಥ ವಕ್ರೋಕ್ತಿಯು ವಾಕ್ಯದ ಸ್ತರದಲ್ಲಿ ಅರ್ಥಾಲಂಕಾರದ ಸೊಬಗನ್ನು ಪಡೆದರೆ, ಪದಗಳ ಮತ್ತು ವಾಕ್ಯಖಂಡಗಳ ಸ್ತರದಲ್ಲಿ ಶಬ್ದಾಲಂಕಾರದ ಹಾಗೂ ನುಡಿಗಟ್ಟುಗಳ ಚೆಲುವನ್ನು ತಳೆಯುತ್ತದೆ. ಶಬ್ದಾಲಂಕಾರಗಳನ್ನು ಬದಿಗಿರಿಸಿದರೆ ಈ ಹಂತದಲ್ಲಿ ನಮಗುಳಿಯುವುದು ನುಡಿಗಾರಿಕೆಯ ಅಂದ. ಇದು ಸಾಭಿಪ್ರಾಯವಿಶೇಷಣವಾಗಿ (ಧ್ವನಿಪೂರ್ಣವಾದ ವಿಶೇಷಣ), ವಾಚೋಯುಕ್ತಿಯಾಗಿ (ನುಡಿಗಟ್ಟು ಅಥವಾ ಇಡಿಯಮ್), ಸಾಮತಿ-ಗಾದೆಮಾತುಗಳಾಗಿ, ನಾಟುನುಡಿಯಾಗಿ ಹತ್ತಾರು ಬಗೆಯಿಂದ ವಿಸ್ತರಿಸಿಕೊಳ್ಳುತ್ತದೆ.

ಇಂಥ ಪ್ರಕಾರದ್ದೆಂದು ನಿರ್ದಿಷ್ಟವಾಗಿ ಹೇಳಲಾಗದ ಹಲವು ಬಗೆಯ ವಾಗ್ವಿಲಾಸ ಇವುಗಳಲ್ಲೆಲ್ಲ ತೋರಿಕೊಳ್ಳುವ ಕಾರಣ ಇಲ್ಲಿ ಕಟ್ಟುನಿಟ್ಟಾದ ವಿಭಾಗಕ್ರಮ ಕಷ್ಟಸಾಧ್ಯ. ಸದ್ಯದ ಈ ನಮ್ಮ ಉಪಕ್ರಮವು ಇಂಥ ವಿಭಾಗಗಳ ಪರಿಷ್ಕಾರಕ್ಕಿಂತ ಆದಿಕವಿಗಳ ಉಕ್ತಿವಿಲಾಸದ ಪರಿಯನ್ನಷ್ಟೇ ಲಕ್ಷಿಸುವುದರಿಂದ ನಾವಿಲ್ಲಿ ನೇರವಾಗಿ ರಾಮಾಯಣದ ಪದ-ವಾಕ್ಯಗಳಿಗಷ್ಟೇ ಸೀಮಿತವಾದ ಅಲಂಕಾರೇತರವಾದ ಚೆಲುವನ್ನು ಗಮನಿಸಬಹುದು. ರುಚಿಕಟ್ಟಾದ ಅಡುಗೆಯನ್ನು ಸುಳಿಬಾಳೆಯೆಲೆಯ ಮೇಲೆ ಬಡಿಸುವುದಷ್ಟೇ ಇಲ್ಲಿಯ ಉದ್ದೇಶವಲ್ಲದೆ ಹತ್ತಾರು ಬಟ್ಟಲುಗಳಲ್ಲಿ ಪ್ರತ್ಯೇಕವಾಗಿ ತುಂಬಿಕೊಡುವುದಲ್ಲ. ಏನಿದ್ದರೂ ಆದ್ಯಂತವಾಗಿ ಕಾಂಡಾನುಸಾರವಾದ ಸಹೃದಯಪರಾಮರ್ಶೆಯನ್ನು ಇಲ್ಲಿ ಕಾಣಬಹುದು.

ಬಾಲಕಾಂಡ

ನಾರದರು ವಾಲ್ಮೀಕಿಮುನಿಗಳಿಗೆ ರಾಮನನ್ನು ಮತ್ತು ರಾಮಕಥೆಯನ್ನು ಪರಿಚಯಿಸುವಾಗ ಶ್ರೀರಾಮನನ್ನು ಕೆಲವು ವಿಶೇಷಣಗಳಿಂದ ವರ್ಣಿಸುತ್ತಾರೆ: ಏಕಪ್ರಿಯದರ್ಶನಃ (೧.೩), ಗೂಢಜತ್ರುಃ (೧.೧೦), ಆರ್ಯಭಾವಪುರಸ್ಕೃತಃ (೧.೩೫). ಇಂಥ ಎಷ್ಟೋ ಪದಪುಂಜಗಳನ್ನು ಮೊಟ್ಟಮೊದಲಿಗೆ ಆದಿಕವಿಗಳು ಕಂಡರಿಸಿರುವುದೇ ಇವುಗಳ ಸ್ವೋಪಜ್ಞತೆಗೆ ಸಾಕ್ಷಿ. ಜೊತೆಗೆ, ಮುಂದಿನ ಎಷ್ಟೋ ಕವಿಗಳು ಇವನ್ನು ಬಳಸಿಕೊಂಡಿರುವುದು ಇಂಥ ಪದಪುಂಜಗಳ ವಿಶಿಷ್ಟತೆಗೆ ನಿದರ್ಶನ. ನೋಡಿದೊಡನೆಯೇ ಸಂತೋಷವನ್ನು ಕೊಡುವ ಏಕೈಕವ್ಯಕ್ತಿಯೇ “ಏಕಪ್ರಿಯದರ್ಶನ”. ರಾಮನ ಸಮಗ್ರವ್ಯಕ್ತಿತ್ವವು ನಮ್ಮ ಮೊದಲ ನೋಟಕ್ಕೇ ಆಕರ್ಷಕವೆನಿಸುವುದನ್ನು ಸೂಚಿಸುವ ವಿಶೇಷಣವಿದು. “ಗೂಢಜತ್ರು” ಎಂಬುದು ಆತನ ದೇಹಭಾಗವೊಂದರ ವೈಶಿಷ್ಟ್ಯವನ್ನು ಪ್ರತ್ಯೇಕವಾಗಿ ಎತ್ತಿಹೇಳುವಂಥ ವಿಶೇಷಣ. ಯಾರ ಎದೆ-ಹೆಗಲುಗಳು ಮಾಂಸಲವಾದ ಕಾರಣ ಭುಜಗಳ ಮೂಳೆಗಳು (collar bone) ಎದ್ದುತೋರುವುದಿಲ್ಲವೋ ಅಂಥವನು “ಗೂಢಜತ್ರು”. ಇದು ಏಕಕಾಲದಲ್ಲಿ ರಾಮನ ವ್ಯಾಯಾಮಪರಿಷ್ಕೃತವಾದ ಕಾಯಪಟುತ್ವವನ್ನೂ ನಯವಾದ ಮೈಯ ಚೆಲುವನ್ನೂ ಸೂಚಿಸುವ ಸುಂದರವಿಶೇಷಣ. ಅನಂತರಕಾಲದಲ್ಲಿ ಇದು ಧೀರಗಂಭೀರವಾದ ಪುರುಷಸೌಂದರ್ಯಕ್ಕೆ ಒಂದು ಲಕ್ಷಣವೇ ಆಯಿತು. “ಆರ್ಯಭಾವಪರಿಷ್ಕೃತಃ” ಎಂಬುದು ರಾಮನ ಅಂತರಂಗದ ವ್ಯಕ್ತಿತ್ವ ಮತ್ತದರಿಂದ ಹೊರಹೊಮ್ಮುವ ಎಲ್ಲ ವರ್ತನೆಗಳಿಗೂ ಸಂಬಂಧಿಸಿದ ವಿಶೇಷಣ. “ಆರ್ಯಭಾವ” ಎಂದರೆ ಉದಾತ್ತವೂ ಸುಸಂಸ್ಕೃತವೂ ಆದ ಸಂವೇದನೆ. ಇಂಥ ಸಂವೇದನೆಯಿಂದ ಪರಿಪಾಕಗೊಂಡ ವ್ಯಕ್ತಿತ್ವ ರಾಮನದೆಂಬುದು ಕವಿಯ ಇಂಗಿತ. ಇಷ್ಟು ದೊಡ್ಡ ಭಾವವನ್ನು ಸ್ವೋಪಜ್ಞವಾದ ಸಮಾಸವೊಂದರಲ್ಲಿ ಅಡಿಗಿಸಿರುವುದು ಕವಿಯ ಕೌಶಲಕ್ಕೆ ಸಾಕ್ಷಿ. ಇದೇ ರೀತಿ ಮುಂದೆ ರಾಮನನ್ನು ಧರ್ಮವೀರ್ಯಃ (೩.೪) ಎನ್ನುವಾಗಲೂ ಅರ್ಥಪುಷ್ಟಿಯುಳ್ಳ ವಿಶೇಷಣವನ್ನು ಕಾಣಬಹುದು. ಧರ್ಮವನ್ನೇ ಪರಾಕ್ರಮವಾಗಿ ಉಳ್ಳವನು “ಧರ್ಮವೀರ್ಯ”.

ಆದಿಕವಿಗಳು ಎರಡನೆಯ ಸರ್ಗದಲ್ಲಿ ಸ್ನಾನಕ್ಕೆ ಹೊರಟಾಗ ಶಿಷ್ಯ ಭರದ್ವಾಜನಿಗೆ ಹೀಗೆ ಹೇಳುತ್ತಾರೆ: ನ್ಯಸ್ಯತಾಂ ಕಲಶಸ್ತಾತ ದೀಯತಾಂ ವಲ್ಕಲಂ ಮಮ (೨.೬). ಇಲ್ಲಿ ಬಳಕೆಯಾಗಿರುವ ಕರ್ಮಣಿರೂಪಗಳು (ನ್ಯಸ್ಯತಾಂ, ದೀಯತಾಂ) ತುಂಬ ಗಮನಾರ್ಹ. “ತಂಬಿಗೆಯನ್ನು ಇಡೋಣವಾಗಲಿ”, “ನಾರುಮಡಿಯನ್ನು ಕೊಡೋಣವಾಗಲಿ” ಎಂಬ ಅರ್ಥವುಳ್ಳ ಈ ವಾಕ್ಯವು ಮಹರ್ಷಿಗಳ ನಯ-ವಿನಯಗಳನ್ನಷ್ಟೇ ಅಲ್ಲ, ಸಂಸ್ಕೃತದ ವಾಗ್ರೂಢಿಯ ಸುಸಂಸ್ಕೃತಿಯನ್ನೂ ಧ್ವನಿಸುತ್ತಿದೆ.

ವಾಲ್ಮೀಕಿಮಹರ್ಷಿಗಳು ಇಡಿಯ ರಾಮಾಯಣಕಥೆಯನ್ನು ಅಂಗೈಯ ನೆಲ್ಲಿಯಂತೆ ಕಂಡರೆಂಬ ಮಾತು ಬರುತ್ತದೆ: ಪಾಣಾವಾಮಲಕಂ ಯಥಾ (೩.೬). ಇದು ಮೇಲ್ನೋಟಕ್ಕೆ ಉಪಮಾಲಂಕಾರವಾದರೂ ಮುಂದೆ ಲೋಕರೂಢಿಯ ನುಡಿಗಟ್ಟಾಗಿಯೇ ಪರಿಣಮಿಸಿರುವುದನ್ನು ನಾವು ಮನಗಾಣಬಹುದು.

ಅಯೋಧ್ಯೆಯು ಸುವ್ಯವಸ್ಥಿತವಾದ ಪೇಟೆಬೀದಿಗಳಿಂದ ಕೂಡಿತ್ತೆಂದು ಹೇಳುವಾಗ ಸುವಿಭಕ್ತಾಂತರಾಪಣಾ (೫.೧೦) ಎಂಬ ಮಾತು ಬಳಕೆಯಾಗಿದೆ. ಇದು ಅಡಕವನ್ನಷ್ಟೇ ಅಲ್ಲ, ಅಂದವನ್ನೂ ಒಳಗೊಂಡ ಪದಪುಂಜ. ಭಾಷೆಯೊಂದಕ್ಕೆ ಬಲವನ್ನೀಯುವ ಈ ಬಗೆಯ ಪ್ರಯೋಗಗಳು ಸದಾ ಸ್ವಾಗತಾರ್ಹ.

ದಶರಥನು ಯಜ್ಞಕ್ಕೆ ತೊಡಗುವಾಗ ತನ್ನ ಪರಿವಾರದವರಿಗೆ “ಅತಿಥಿ-ಅಭ್ಯಾಗತರಾದ ವಿದ್ವಾಂಸರೊಡನೆ ಎಚ್ಚರದ ವ್ಯವಹಾರ ಅವಶ್ಯ; ಏಕೆಂದರೆ ಅವರು ಬ್ರಹ್ಮರಾಕ್ಷಸರಂತೆ ಸದಾ ಹುಳುಕನ್ನೇ ಹುಡುಕುತ್ತಿರುತ್ತಾರೆ” ಎಂದು ಹೇಳುತ್ತಾನೆ: ಛಿದ್ರಂ ಹಿ ಮೃಗಯಂತೇऽತ್ರ ವಿದ್ವಾಂಸೋ ಬ್ರಹ್ಮರಾಕ್ಷಸಾಃ (೧೨.೧೮). ಇಲ್ಲಿ ವಿದ್ವಾಂಸರನ್ನು ಬ್ರಹ್ಮರಾಕ್ಷಸರೆಂದು ಹೆಸರಿಸಿರುವುದು ಅತಿಶಯೋಕ್ತಿಯೋ ಆದರೂ ಅದು ಲಕ್ಷಣಾಮೂಲದ ಧ್ವನಿಯಾಗಿ ಪರಿಣಮಿಸಿ ಕಾಲಾಂತರದಲ್ಲಿ ತನ್ನ ಮೊನಚನ್ನು ಕಳೆದುಕೊಂಡು ರೂಢಿಲಕ್ಷಣೆಯೇ ಆಗಿದೆ. ಆದರೆ ಇಂದಿಗೂ ಅದರ ಆಡುನುಡಿಯ ಬೆಡಗು ಮಾಸದಂತಿದೆ.

ರಾಮನನ್ನು ವರ್ಣಿಸುವಾಗ ಆತ ಕಾಕಪಕ್ಷಧರನೆಂದು ಹೇಳಲಾಗಿದೆ (೧೯.೯). “ಕಾಕಪಕ್ಷ” ಎಂಬುದಕ್ಕೆ ಹದಿಹರೆಯದ ಗಂಡುಮಕ್ಕಳ ಮೇಲ್ಗೆನ್ನೆಯ ಕೂದಲೆಂದು ಅರ್ಥ (side locks). ಈ ಮೂಲಕ ಗಂಡುಮಕ್ಕಳು ಕೈಶೋರವನ್ನು ಕಳೆದುಕೊಂಡು ತಾರುಣ್ಯದತ್ತ ತಿರುಗುತ್ತಿದ್ದಾರೆಂಬುದು ಧ್ವನಿತವಾಗುತ್ತದೆ. ಅನಂತರಕಾಲದಲ್ಲಿ ಯಾವುದೇ ಕವಿಯು ಕುಮಾರರನ್ನು ಬಣ್ಣಿಸುವಾಗ ಈ ಪದವನ್ನು ಬಳಸುವುದು ಅನಿವಾರ್ಯವೆಂಬಷ್ಟರ ಮಟ್ಟಿಗೆ ಇದು ಪ್ರಚುರವಾಯಿತು.

ವಸಿಷ್ಠರ ಎದುರಿಗೆ ತನ್ನೆಲ್ಲ ಕ್ಷಾತ್ತ್ರಪೌರುಷವೂ ವ್ಯರ್ಥವಾದಾಗ ವಿಶ್ವಾಮಿತ್ರ ಮಾಡುವ ಉದ್ಗಾರ ಪ್ರಸಿದ್ಧವಾಗಿದೆ: ಧಿಗ್ಬಲಂ ಕ್ಷತ್ತ್ರಿಯಬಲಂ ಬ್ರಹ್ಮತೇಜೋಬಲಂ ಬಲಮ್ (೫೬.೨೩). “ಕ್ಷತ್ತ್ರಿಯಬಲಕ್ಕೆ ಧಿಕ್ಕಾರವಿರಲಿ. ಬ್ರಹ್ಮತೇಜಸ್ಸಿನ ಬಲವೇ ನಿಜವಾದ ಬಲ!” ಎಂಬುದಿದರ ತಾತ್ಪರ್ಯ. ಈ ಮಾತು ಮುಂದೆ ನಾಣ್ನುಡಿಯೆಂಬಷ್ಟು ವ್ಯಾಪಕವಾದುದಲ್ಲದೆ ಬ್ರಾಹ್ಮ-ಕ್ಷಾತ್ತ್ರಗಳ ನಡುವೆ ಸಂಘರ್ಷ ಬಂದಾಗ ಯಾವುದು ಮಿಗಿಲೆಂದು ಹೇಳುವ ಪ್ರಮಾಣವಾಕ್ಯವೂ ಆಯಿತು.

ಇದೇ ವಿಶ್ವಾಮಿತ್ರಪ್ರಕರಣದಲ್ಲಿ ಆತನ ತಪೋಭಂಗಕ್ಕಾಗಿ ಬಂದ ರಂಭೆಯನ್ನು ಮುನಿಗಳು “ಕಲ್ಲಾಗಿಹೋಗು” ಎಂದು ಶಪಿಸುತ್ತಾರೆ: ಶೈಲೀ ಸ್ಥಾಸ್ಯಸಿ (೬೪.೧೨). ಇಲ್ಲಿ “ಶೈಲೀ”ಶಬ್ದವು “ಶಿಲಾಪ್ರತಿಮೆ” ಎಂಬ ಅರ್ಥದಲ್ಲಿ ಬಳಕೆಯಾಗಿದೆ. ಇದು ಬಹಳ ವಿಶಿಷ್ಟವಾದ ಅಪೂರ್ವಪ್ರಯೋಗ. ಇದನ್ನು ಮುಂದಿನ ಕವಿಗಳು ಹೆಚ್ಚಾಗಿ ಬಳಸಿದಂತೆ ತೋರದು. ಆದರೆ “ಶಿಲೆಗೆ ಸಂಬಂಧಿಸಿದ್ದು” ಎಂಬ ಮೂಲಾರ್ಥವನ್ನುಳ್ಳ ಈ ಸ್ತ್ರೀಲಿಂಗದ ಶಬ್ದವು ವಿಗ್ರಹಕ್ಕೆ ಸಂವಾದಿಯಾಗಿ ಬಳಕೆಯಾದ ಬಗೆ ಸೊಗಸಾಗಿದೆ.

ಅಯೋಧ್ಯಾಕಾಂಡ

ಈ ಕಾಂಡದ ಆರಂಭದಲ್ಲಿಯೇ ರಾಮನನ್ನು ಕುರಿತ ರಮಣೀಯವಿಶೇಷಣಗಳು ಸಾಲುಸಾಲಾಗಿ ಬರುತ್ತವೆ: ಮಧುರಾಭಾಷೀ (ಇಂಪಾಗಿ ಮಾತನಾಡುವವನು), ಪೂರ್ವಭಾಷೀ[1] (ತಾನಾಗಿ ಮಾತಿಗೆ ಮುಂದಾಗುವವನು), ಪ್ರಿಯಂವದಃ (ಇಷ್ಟವಾಗುವಂತೆ ಮಾತನಾಡುವವನು) [೧.೧೩]; ಪ್ರಗ್ರಹವಾನ್ (ಸಂಯಮಿ) [೧.೧೫], ಪುರುಷಸಾರಜ್ಞಃ (ವ್ಯಕ್ತಿಗಳ ಯೋಗ್ಯತೆಯನ್ನು ಬಲ್ಲವನು) [೧.೧೮], ಅಮೋಘಕ್ರೋಧಹರ್ಷಣಃ (ವ್ಯರ್ಥವಾಗದ ಕೋಪ-ಸಂತೋಷಗಳನ್ನು ಉಳ್ಳವನು; ಅಂದರೆ, ರಾಮನ ಸುಮ್ಮಾನವಾಗಲಿ, ದುಮ್ಮಾನವಾಗಲಿ ಪರಿಣಾಮಕಾರಿಯಾಗಿಯೇ ಇರುತ್ತಿತ್ತೆಂದು ತಾತ್ಪರ್ಯ), ತ್ಯಾಗಸಂಗ್ರಹಕಾಲವಿತ್ (ಕೊಡುವ ಮತ್ತು ಕೂಡಿಡುವ ಹೊತ್ತು-ಗೊತ್ತುಗಳನ್ನು ಬಲ್ಲವನು) [೧.೨೩]; ಸ್ವದೋಷಪರದೋಷವಿತ್ (ತನ್ನ ಮತ್ತು ಬೇರೆಯವರ ತಪ್ಪುಗಳನ್ನು ಬಲ್ಲವನು) [೧.೨೪]; ಸಂದೃಷ್ಟವ್ಯಯಕರ್ಮವಿತ್ (ಎಚ್ಚರವಿರಿಸಿ ವೆಚ್ಚ ಮಾಡುತ್ತಿದ್ದವನು) [೧.೨೬]; ಅಭಿಯಾತಾ (ದಂಡೆತ್ತಿ ಹೋಗುವಂಥವನು) [೧.೨೯]; ಕ್ಷಾಂತಃ (ಕ್ಷಮಾಗುಣ ಉಳ್ಳವನು), ಸಾಂತ್ವಯಿತಾ (ಸಾಂತ್ವನ ನೀಡುವವನು), ಶ್ಲಕ್ಷ್ಣಃ (ಮೃದುಸ್ವಭಾವದವನು) [೨.೩೧]. ಇವುಗಳೆಲ್ಲ ಪರವರ್ತಿಸಾಹಿತ್ಯದಲ್ಲಿ ಅಚ್ಚುಕಟ್ಟಾದ ವಿಶೇಷಣಗಳಾಗಿ, ವ್ಯಕ್ತಿಲಕ್ಷಣಗಳನ್ನು ವರ್ಣಿಸುವ ನುಡಿಗಟ್ಟುಗಳಾಗಿ ಬಳಕೆಗೆ ಬಂದಿರುವುದ್ನನು ಗಮನಿಸಬಹುದು. ಹೀಗೆ ಆದಿಕವಿಗಳ ವಿಶೇಷಣಗಳು ಇಡಿಯ ಭಾಷೆಗೇ ಭೂಷಣಗಳಾಗಿ ಬೆಳೆದಿವೆ.

ರಾಮನೊಡನೆ ದಶರಥ ಮಾತನಾಡುತ್ತ ಸಜ್ಜನರ ಸ್ವಭಾವವನ್ನು ವರ್ಣಿಸುವಾಗ ಅವರು ಧರ್ಮನಿತ್ಯರೆಂಬ (೪.೨೭) ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾನೆ. ಧರ್ಮವನ್ನೇ ಸದಾ ಅನುಷ್ಠಿಸುವವರು “ಧರ್ಮನಿತ್ಯ”ರು. ಇದೊಂದು ಸುಂದರವಾದ ಸಮಾಸ. ಇಲ್ಲಿಯ ಅರ್ಥಪುಷ್ಟಿಯೂ ಗಮನಾರ್ಹ.

ಮಂಥರೆಯನ್ನು ಪರಿಚಯಿಸುವಾಗ ಆದಿಕವಿಗಳು ಜ್ಞಾತಿದಾಸೀ ಯತೋಜಾತಾ ಎಂಬ ವಿಶೇಷಣಗಳನ್ನು ಬಳಸುತ್ತಾರೆ (೭.೧). ದಾಯಾದವರ್ಗಕ್ಕೆ ಸೇರಿ ದಾಸ್ಯವೃತ್ತಿಯನ್ನು ಕೈಗೊಂಡವಳು “ಜ್ಞಾತಿದಾಸಿ”. ಯಾವಳ ಹುಟ್ಟು ಎಲ್ಲಾಯಿತು, ಹೇಗಾಯಿತು ಎಂಬ ವಿವರಗಳು ಅಲಭ್ಯವೋ ಅಂಥವಳು “ಯತೋಜಾತಾ” (ಹೇಗೋ ಎಲ್ಲಿಯೋ ಹುಟ್ಟಿದವಳು). ಈ ಮಾತುಗಳಿಂದ ಮಂಥರೆ ಕೈಕೇಯಿಯ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರಬಲ್ಲವಳಾಗಿದ್ದಳೆಂದು ಗೊತ್ತಾಗುತ್ತದೆ. ಏಕೆಂದರೆ, ಬಂಧುವರ್ಗದ ನಂಟಿನ ಹಿನ್ನೆಲೆಯುಳ್ಳ ದಾಸಿ ತನ್ನ ಒಡೆಯರಲ್ಲಿ ಸಹಜವಾಗಿಯೇ ಮಿಗಿಲಾದ ಸಲುಗೆಯನ್ನು ಹೊಂದಿರುವಳು.

ಮಂಥರೆಯ ಮಾತು ಕೇಳಿ ಮರುಳಾದ ಕೈಕೇಯಿ ಕಿಶೋರಿಯಂತೆ ಹಳಿತಪ್ಪಿದಳೆಂದು ಒಕ್ಕಣೆಯುಂಟು (೯.೩೭). “ಕಿಶೋರಿ” ಎಂಬ ಶಬ್ದಕ್ಕೆ ಹುಡುಗಿಯೆಂದೂ ಹೆಣ್ಣುಕುದುರೆಯೆಂದೂ ಅರ್ಥಗಳುಂಟು. ಇವು ಕ್ರಮವಾಗಿ ಅಪ್ರಬುದ್ಧತೆ ಮತ್ತು ಚಂಚಲತೆಗಳನ್ನು ಧ್ವನಿಸುತ್ತಿರುವುದು ಗಮನಾರ್ಹ.

ರಾಮನಿಗಾಗಿ ಅಡುಗೆಯವರು ನಾನುತಾನೆಂದು ಮುಂದೆಬಂದು ಅಟ್ಟುಣಿಸುತ್ತಿದ್ದರೆಂದು ರಾಮಾಯಣ ಹೇಳುತ್ತದೆ. ಆಗ ಅಹಂಪೂರ್ವಾಃ ಎಂಬ ಪದ ಬಳಕೆಯಾಗಿದೆ (೧೨.೯೮). ಇದು “ಅಹಮಹಮಿಕಾ”, “ಅಹಂಪೂರ್ವಿಕಾ” ಎಂಬ ಸೊಗಸಾದ ನುಡಿಗಟ್ಟಿನ ಮತ್ತೊಂದು ರೂಪ.

ರಾಮನು ಕಾಡಿಗೆ ಹೋಗಬೇಕೆಂಬ ಕೈಕೇಯಿಯ ಅಪೇಕ್ಷೆಗೆ ತಬ್ಬಿಬ್ಬಾಗಿ ದಿಗ್ಭ್ರಮೆಗೊಂಡ ದಶರಥನು ದುಃಖಿಸುತ್ತ ಅಸಹಾಯಕತೆಯಿಂದ ಗಗನಾಸಕ್ತಲೋಚನನಾದನೆಂದು ಮಹರ್ಷಿಗಳು ತಿಳಿಸುತ್ತಾರೆ (೧೩.೧೭). ಇದು ದಶರಥನ ಹತಾಶಭಾವವನ್ನೂ ಅವನಿಗಿನ್ನು ದೇವರೇ ದಿಕ್ಕೆಂಬ ಅತಂತ್ರಸ್ಥಿತಿಯನ್ನೂ ಧ್ವನಿಸುವ ನುಡಿಗಟ್ಟು.

ರಾಮನ ವ್ಯಕ್ತಿತ್ವವನ್ನು ಕುರಿತು ರಾಮಾಯಣದಲ್ಲಿ ಹಲವೆಡೆ ಬರುವ ವರ್ಣನೆಗಳ ಪೈಕಿ ಒಂದು ರಾಮೋ ದ್ವಿರ್ನಾಭಿಭಾಷತೇ (೧೮.೩೦), “ರಾಮನು ಎರಡು ನುಡಿಯುವುದಿಲ್ಲ”. ಅಂದರೆ, ಅವನು ಮಾತನ್ನು ಮಾರ್ಪಡಿಸುವುದಿಲ್ಲ, ಕೊಟ್ಟ ಮಾತಿಗೆ ತಪ್ಪುವುದಿಲ್ಲವೆಂದು ತಾತ್ಪರ್ಯ. ಇದೊಂದು ನುಡಿಗಟ್ಟಿನ ವ್ಯಾಪ್ತಿಯನ್ನೇ ಪಡೆದುಕೊಂಡಿದೆ.

ರಾಮನು ಕಾಡಿಗೆ ಹೊರಡುವಾಗ ಕೈಕೇಯಿಯನ್ನು ಕುರಿತು ಹೀಗೆನ್ನುತ್ತಾನೆ: ಏವಮಸ್ತು ಗಮಿಷ್ಯಾಮಿ ವನಮ್ (೧೯.೨). ಇಲ್ಲಿ “ಏವಮಸ್ತು” ಎಂಬ ಪದಪುಂಜವು ಲೋಕರೂಢಿಯ ಮಾತಾದ “ಹಾಗೆಯೇ ಆಗಲಿ” ಎಂಬುದಕ್ಕೆ ನೇರವಾದ ಸಂವಾದಿ. ಇದನ್ನು ವಾಕ್ಯದ ಮೊದಲಿಗೆ ತರುವಲ್ಲಿ ವಾಗ್ರೂಢಿಯ ಸೊಗಸಿದೆ.

ಲಕ್ಷ್ಮಣನು ರಾಮನ ವನವಾಸವನ್ನು ಪ್ರತಿಭಟಿಸುತ್ತ ಹತ್ತಾರು ಓಜಸ್ವಿಯಾದ ಮಾತುಗಳನ್ನಾಡುತ್ತಾನೆ. ಅಂಥ ಕೆಲವು ನುಡಿಗಳ ಸ್ವಾರಸ್ಯವನ್ನು ಪರಿಶೀಲಿಸಬಹುದು: ಯಥಾ ಧರ್ಮಮಶೌಂಡೀರಂ ಶೌಂಡೀರ ಕ್ಷತ್ತ್ರಿಯರ್ಷಭ ಕಿಂ ನಾಮ ಕೃಪಣಂ ದೈವಮಶಕ್ತಮಭಿಶಂಸಸಿ (೨೩.೭). “ಮಹಾವೀರನೂ ಕ್ಷತ್ತ್ರಿಯಾಗ್ರಣಿಯೂ ಆದ ನೀನು ಕೈಲಾಗದ, ದಿಕ್ಕಿಲ್ಲದ, ಹೇಡಿಯೂ ಆದ ದೈವವನ್ನು ಯಾವ ಮಹಾಸಂಗತಿಯೆಂದು ಕೊಂಡಾಡುತ್ತಿದ್ದೀಯೆ!” ಎಂಬ ತಾತ್ಪರ್ಯದ ಈ ಮಾತುಗಳ ಓಘ-ಓಜಸ್ಸುಗಳೂ ದೈವವು “ಅಶೌಂಡೀರ”ವೆಂಬ ನುಡಿಯೂ ಹೃದಯಾವರ್ಜಕ. ಆ ಬಳಿಕ ಅವನು ಸ ಹಿ ಧರ್ಮೋ ಮಮ ದ್ವೇಷ್ಯಃ ಪ್ರಸಂಗಾದ್ಯಸ್ಯ ಮುಹ್ಯಸಿ (೨೩.೧೨) ಎನ್ನುತ್ತಾನೆ. “ಯಾವ ಧರ್ಮದ ಕಾರಣ ನೀನು ಮರುಳಾಗಿರುವೆಯೋ ಅದನ್ನು ನಾನು ದ್ವೇಷಿಸುತ್ತೇನೆ” ಎಂಬ ತಾತ್ಪರ್ಯದ ಈ ವಾಕ್ಯ ತನ್ನ ರಚನಾವೈಚಿತ್ರ್ಯದ ಕಾರಣ ಸುಂದರವಾದ ವಾಗ್ರೂಢಿಗೆ ನಿದರ್ಶನವೆನಿಸಿದೆ. ಮತ್ತೆ ಮುಂದುವರಿದ ಲಕ್ಷ್ಮಣ ನ ಶೋಭಾರ್ಥಮಿಮೌ ಬಾಹೂ ನ ಧನುರ್ಭೂಷಣಾಯ ಮೇ ನಾಸಿರಾಬಂಧನಾರ್ಥಾಯ ನ ಶರಾಃ ಸ್ತಂಭಹೇತವಃ (೨೩.೩೧) ಎನ್ನುತ್ತಾನೆ. “ಈ ತೋಳುಗಳು ನನಗೆ ಬರಿಯ ಅಂದಕ್ಕಾಗಿ ಇಲ್ಲ, ಈ ಬಿಲ್ಲು ನನಗೆ ಕೇವಲ ಅಲಂಕಾರವಲ್ಲ, ಈ ಖಡ್ಗ ಸುಮ್ಮನೆ ಸೊಂಟಕ್ಕೆ ಬಿಗಿದು ನಿಲ್ಲುವುದಕ್ಕಲ್ಲ, ಈ ಬಾಣಗಳು ತೆಪ್ಪಗೆ ಕುಳಿತಿರಲಲ್ಲ” ಎಂಬ ತಾತ್ಪರ್ಯವುಳ್ಳ ಲಕ್ಷ್ಮಣನ ಮಾತುಗಳು ಅಪ್ಪಟ ಆಡುನುಡಿಯ ಕಸುವಿನಿಂದ ಕೂಡಿವೆ. ಇದು ಮಹರ್ಷಿಗಳ ಲೋಕಾನುಸಾರಿಯಾದ ವಾಕ್ಕಿನ ಸ್ವಾರಸ್ಯಕ್ಕೆ ಒಂದು ಸಮರ್ಥದೃಷ್ಟಾಂತ.

ಮುನಿದ ಲಕ್ಷ್ಮಣ ಮತ್ತೂ ಮುಂದುವರಿದು “ತಾನು ಗಂಡೆಂದು ಭಾವಿಸಿಕೊಂಡ ಯಾರು ತಾನೇ ಗಂಡರ ಗಂಡನಾದ ನನ್ನನ್ನು ಎದುರಿಸಲು ಸಾಧ್ಯ?” ಎನ್ನುವಾಗ ಪುರುಷಮಾನೀ (೨೩.೩೬) ಎಂಬ ಶಬ್ದದ ಬಳಕೆಯಾಗಿದೆ. “ಮಾನೀ”ಪದವು ಯಾವುದೇ ನಾಮವಾಚಕದ ಬಳಿಕ ಸಮಾಸದಲ್ಲಿ ಬಂದಾಗ ಅದು ನಿರ್ದೇಶಿಸುವ ವ್ಯಕ್ತಿಯಾಗಲಿ, ವಸ್ತುವಾಗಲಿ ಸಾಕ್ಷಾತ್ತಾಗಿ ಆ ವ್ಯಕ್ತಿ-ವಸ್ತುಗಳಲ್ಲ; ಕೇವಲ ಹಾಗೆಂದು ಭ್ರಮಿಸಿಕೊಂಡದ್ದೆಂಬ ತಾತ್ಪರ್ಯವನ್ನು ಹೊಂದಿರುತ್ತದೆ. “ವೀರಮಾನೀ” (ತಾನು ವೀರನೆಂದು ಭಾವಿಸಿಕೊಂಡವನು), “ಪಂಡಿತಮಾನೀ” (ತಾನು ಪಂಡಿತನೆಂದು ಭಾವಿಸಿಕೊಂಡವನು) ಇತ್ಯಾದಿ ಎಷ್ಟೋ ಉದಾಹರಣೆಗಳು ಸಂಸ್ಕೃತದಲ್ಲಿವೆ.

ಕೌಸಲ್ಯೆಯು ರಾಮನನ್ನು ಕಾಡಿಗೆ ಕಳುಹಿಸಿಕೊಡುವಾಗ ಆಗಮಾಸ್ತೇ ಶಿವಾಃ ಸಂತು (೨೫.೨೧) ಎನ್ನುತ್ತಾಳೆ. “ನೀನು ಹೋಗುವ ಹಾದಿ ಹಿತವಾಗಿರಲಿ” ಎಂಬ ತಾತ್ಪರ್ಯವುಳ್ಳ ಈ ಮಾತು ಮುಂದಿನ ಸಾಹಿತ್ಯದಲ್ಲಿ “ಶಿವಶ್ಚ ಪಂಥಾಃ”, “ಶಿವಾಸ್ತೇ ಸಂತು ಪಂಥಾನಃ” ಎಂಬಿವೇ ರೂಪಗಳಿಂದ ಬಳಕೆಯಾಗಿದೆ.

ರಾಮ ತನ್ನನ್ನು ಕಾಡಿಗೆ ಕರೆದೊಯ್ಯುವುದಿಲ್ಲವೆಂದು ತಿಳಿದ ಸೀತೆಯು ಮುನಿದು ಆಕ್ಷೇಪಿಸುವಾಗ ಅವನನ್ನು “ಗಂಡಿನ ರೂಪದಲ್ಲಿರುವ ಹೆಣ್ಣು” ಎಂದು ಹಳಿಯುತ್ತಾಳೆ: ಸ್ತ್ರಿಯಂ ಪುರುಷವಿಗ್ರಹಮ್ (೩೦.೩). ಇದು ಅವಳ ಪ್ರೀತಿಯು ತಳೆದ ಕಠಿನರೂಪವಲ್ಲದೆ ಪತಿನಿಂದೆಯಲ್ಲ. ಆದರೆ ಇಲ್ಲಿಯ ಕಟಕಿ ತನ್ನಂತೆಯೇ ಒಂದು ನುಡಿಗಟ್ಟಾಗಿದೆ.


[[ವಾಲ್ಮೀಕಿಮುನಿಗಳ ವಾಗ್ವಿಲಾಸ - 2 Source: prekshaa]]

ರಾಮನು ತ್ರಿಜಟನೆಂಬ ವಿಪ್ರನಿಗೆ ಗೋದಾನವನ್ನು ಮಾಡಲು ಬಯಸಿ, ಹತ್ತಿರದಲ್ಲಿಯೇ ಮೇಯುತ್ತಿರುವ ಹಸುಗಳ ಮಂದೆಯತ್ತ ಕೈಚಾಚಿ, “ಈ ಮಂದೆಯ ನಡುವೆ ನೀನು ನಿನ್ನ ಕೈಗೋಲನ್ನೆಸೆದರೆ ಅದು ಎಷ್ಟು ದೂರಕ್ಕೆ ಹೋಗಿ ಬೀಳುವುದೋ ಅಷ್ಟರ ಒಳಗೆ ಬರುವ ಹಸುಗಳೆಲ್ಲ ನಿನ್ನವೇ” ಎಂದು ವಿನೋದವಾಗಿ ನುಡಿದಾಗ ಆ ವಿಪ್ರನು ಸರ್ವಶಕ್ತಿಯನ್ನೂ ಬಳಸಿ ತನ್ನ ಕೈಗೋಲನ್ನು ವೇಗವಾಗಿ ಎಸೆಯುತ್ತಾನೆ: ದಂಡಂ ಚಿಕ್ಷೇಪ ಸರ್ವಪ್ರಾಣೇನ ವೇಗಿತಃ (೩೨.೩೮). ಇದು “ಪ್ರಾಣವೇ ಹೋಗುವಷ್ಟು ಬಲದಿಂದ ಎಸೆದ” ಎಂಬ ಲೋಕರೂಢಿಯ ಮಾತಿಗೆ ಸೊಗಸಾದ ಸಂವಾದಿ.

ಕಾಡಿಗೆ ತೆರಳುವ ರಾಮನನ್ನು ಹಿಂಬಾಲಿಸಿದ ಊರಿನ ಜನರು “ನಾವು ಬಿಟ್ಟುಹೋಗುತ್ತಿರುವ ಈ ಊರು ಕಾಡಾಗಲಿ” ಎಂದು ಶಪಿಸುತ್ತಾರೆ: ಅಸ್ಮಾಭಿಶ್ಚ ಪರಿತ್ಯಕ್ತಂ ಪುರಂ ಸಂಪದ್ಯತಾಂ ವನಮ್ (೩೩.೨೨). ಇದು ಜಾನಪದರ ಅಪ್ಪಟಬೈಗುಳನ್ನು ತದ್ವತ್ತಾಗಿ ಪ್ರತಿಫಲಿಸುವ ಮಾತಿನ ವರಸೆ. ಇದೇ ತೆರನಾದದ್ದು ಅವರಾಡುವ ಮತ್ತೊಂದು ಮಾತು: ವಯಂ ತತ್ರ ಗಮಿಷ್ಯಾಮೋ ಯತ್ರ ರಾಮೋ ಗಮಿಷ್ಯತಿ (೩೫.೧೦). “ರಾಮನೆಲ್ಲಿಗೆ ಹೋಗುವನೋ ನಾವೂ ಅಲ್ಲಿಗೆ ಹೋಗುವೆವು” ಎಂದು ಇದರ ಅರ್ಥ. ನೇರವಾದ ಈ ಮಾತಿನಲ್ಲಿರುವುದು ಭಾವತೀವ್ರತೆ ಮತ್ತು ಅದರಿಂದ ಪ್ರೇರಿತವಾದ “ಯತ್ರ”-“ತತ್ರ” ಮತ್ತು “ಗಮಿಷ್ಯತಿ”-“ಗಮಿಷ್ಯಾಮಃ” ಎಂಬ ಸಮಾನಶ್ರುತಿಯ ಶಬ್ದಗಳು. ಇದು ಸಾಕ್ಷಾತ್ತಾಗಿ ಯಾವುದೇ ನುಡಿಗಟ್ಟಿನ ಜಾಡಿನಲ್ಲಿ ಇಲ್ಲದಿದ್ದರೂ ಆಡುನುಡಿಯ ಮೊನಚನ್ನು ಮಾತ್ರ ಅಸಾಧಾರಣವಾಗಿ ಹೊಂದಿದೆ.

ಸುಮಂತ್ರನು ಕೈಕೇಯಿಯನ್ನು ಆಕ್ಷೇಪಿಸುತ್ತ ಅವಳ ತಾಯಿಗೂ ಕೆಟ್ಟ ಹಠವಿದ್ದುದಾಗಿ ನೆನಪಿಸುತ್ತಾನೆ. ಈ ಸಂದರ್ಭದಲ್ಲಿ ಅಸದ್ಗ್ರಾಹಃ (೩೫.೧೬) ಎಂಬ ಶಬ್ದದ ಬಳೆಕೆಯಾಗಿದೆ. ಇದು “ದುರಾಗ್ರಹ”, “ಪೂರ್ವಗ್ರಹ” ಮುಂತಾದ ಪದಗಳಿಗೆ ಸಂವಾದಿ.

ಸೀತೆಯು ನಾಥನಿದ್ದರೂ ಅನಾಥೆಯಂತೆ ನಾರುಮಡಿಯನ್ನುಟ್ಟ ಸನ್ನಿವೇಶವನ್ನು ವರ್ಣಿಸುವಾಗ ಆದಿಕವಿಗಳು ನಾಥವತ್ಯಾಮನಾಥವತ್ (೩೮.೧) ಎಂಬ ವಾಕ್ಯಖಂಡವನ್ನು ಪ್ರಯೋಗಿಸಿದ್ದಾರೆ. ಇದು ತುಂಬ ಹೃದಯಂಗಮವಾದ ಉಕ್ತಿ. ಇದು ಮುಂದೆ ಮಹಾಭಾರತದಲ್ಲಿಯೂ ದ್ರೌಪದಿಯನ್ನು ಅನುಲಕ್ಷಿಸಿ ಪ್ರಯುಕ್ತವಾಗಿರುವುದನ್ನು ನೆನೆಯಬಹುದು. ಉತ್ತರಕಾಲದಲ್ಲಿ ಇದೊಂದು ನಾಣ್ನುಡಿಯಂತೆಯೇ ಬೆಳೆದುಬಂದಿದೆ.

ಶ್ರೀರಾಮನು ವನಕ್ಕೆ ತೆರಳುವಾಗ ತಾಯಿ ಕೌಸಲ್ಯೆಗೆ ಸಮಾಧಾನ ಹೇಳುತ್ತಾನೆ. ಆಗ “ಈ ವನವಾಸವು ಹೆಚ್ಚಿನ ಅವಧಿಯದ್ದೇನೂ ಅಲ್ಲ; ನೀನು ಮಲಗಿ ಏಳುವಷ್ಟರಲ್ಲಿ ಹದಿನಾಲ್ಕು ವರ್ಷಗಳು ಉರುಳಿಹೋಗುತ್ತವೆ” ಎಂದು ನುಡಿಯುವ ಮೂಲಕ ಪರಿಸ್ಥಿತಿಯನ್ನು ಹಗುರಗೊಳಿಸುತ್ತಾನೆ: ಸುಪ್ತಾಯಾಸ್ತೇ ಗಮಿಷ್ಯಂತಿ ನವ ವರ್ಷಾಣಿ ಪಂಚ ಚ (೩೯.೩೫). ಇದು ಅಪ್ಪಟ ಲೋಕರೂಢಿಯ ಮಾತು. ಇಂದಿಗೂ “ಕಣ್ಣು ಮುಚ್ಚಿ ಕಣ್ಣು ತೆರೆಯುವಷ್ಟರಲ್ಲಿ ಮುಗಿದುಹೋಗಿರುತ್ತದೆ” ಇತ್ಯಾದಿ ವಾಗ್ವ್ಯವಹಾರಗಳಲ್ಲಿ ಈ ಮಾತಿನ ಸಂವಾದಿಯನ್ನು ಕಾಣಬಹುದು.

ಕಾಡಿಗೆ ಹೊರಟ ರಾಮನನ್ನು ಕಂಡು ಮರುಗಿದ ಊರಿನವರು “ದೇವಶಿಶುವಿನಂಥ ರಾಮ ಕಾಡಿಗೆ ಹೊರಟಾಗ ಕೌಸಲ್ಯೆಯ ಎದೆ ಒಡೆದುಹೋಗದಿದ್ದುದೇ ಅಚ್ಚರಿ” ಎಂದು ಉದ್ಗರಿಸುತ್ತಾರೆ: ಯದ್ದೇವಗರ್ಭಪ್ರತಿಮೇ ವನಂ ಯಾತಿ ನ ಭಿದ್ಯತೇ (೪೦.೨೩). ಇಲ್ಲಿ “ದೇವಗರ್ಭ” ಎಂಬ ವಿಶಿಷ್ಟವಾದ ಶಬ್ದ ಪ್ರಯುಕ್ತವಾಗಿದೆ. ಇದಕ್ಕೆ “ದೇವರಂಥ ಮಗು” ಎಂಬ ಅರ್ಥವುಂಟು. ಇಂಥ ಪದಗಳನ್ನು ಮುಂದಿನ ಕವಿಗಳು ಹೆಚ್ಚಾಗಿ ಬಳಸಿಲ್ಲದಿರುವುದು ಸಖೇದಾಶ್ಚರ್ಯ.

ರಾಮನ ವನಗಮನವನ್ನು ಕಂಡ ಪುರಜನರೂ ಅಂತಃಪುರದ ಸ್ತ್ರೀಯರೂ ಮಾಡಿದ ಆರ್ತನಾದವನ್ನು ಆದಿಕವಿಗಳು ಹಲಹಲಾಶಬ್ದಃ (೪೦.೩೭) ಎಂದು ನಿರ್ದೇಶಿಸಿದ್ದಾರೆ. ಇದೊಂದು ಸೊಗಸಾದ ಅನುಕರಣಶಬ್ದ.

ಕಾಡಿಗೆ ತೆರಳಿದ ಮಗನನ್ನು ಮತ್ತೆ ಕಾಣಲಾಗದೆ ಹಳಹಳಿಸಿದ ದಶರಥ “ಆತನು ಹೋದ ಹಾದಿಯಲ್ಲಿ ಹೆಜ್ಜೆಗಳು ಕಾಣುತ್ತಿವೆಯಲ್ಲದೆ ಅವನೇ ಕಾಣದಂತಾದನಲ್ಲ!” ಎಂದು ದುಃಖಿಸುತ್ತಾನೆ: ಪದಾನಿ ಪಥಿ ದೃಶ್ಯಂತೇ ಸ ಮಹಾತ್ಮಾ ನ ದೃಶ್ಯತೇ (೪೨.೧೪). ವಿಭಾವನಾಲಂಕಾರದ ಛಾಯೆಯುಳ್ಳ ಈ ಮಾತು ಮಾರ್ಮಿಕವಾಗಿದೆ.

ರಾಮ ತನ್ನನ್ನು ಹಿಂಬಾಲಿಸಿ ಬರುತ್ತಿದ್ದ ವೃದ್ಧವಿಪ್ರರನ್ನು ಕಂಡು ತುಂಬ ಮರಗುತ್ತಾನೆ. ಅದನ್ನು ಬಣ್ಣಿಸುತ್ತ ಮಹರ್ಷಿಗಳು “ರಾಮನು ಕರುಣೆಯ ಕಣ್ಣುಳ್ಳವನು” ಎಂದು ಹೇಳುತ್ತಾರೆ. ಈ ಸಂದರ್ಭದಲ್ಲಿ ಘೃಣಾಚಕ್ಷುಃ (೪೫.೧೯) ಎಂಬ ಶಬ್ದದ ಬಳಕೆಯಾಗಿದೆ. ರೂಪಕಸದೃಶವಾದ ಈ ಮಾತಿನ ಸ್ವಾರಸ್ಯ ಸ್ವಯಂವೇದ್ಯ.

ಹೀಗೆ ಹಿಂಬಾಲಿಸಿ ಬರುತ್ತಿದ್ದ ಬ್ರಾಹ್ಮಣರ ಹೆಗಲಿನ ಮೇಲೆ ಕಾವಡಿಗಳಲ್ಲಿ ಅವರ ತ್ರೇತಾಗ್ನಿಗಳೂ ಸಾಗಿಬರುತ್ತಿದ್ದುವು. ಅದನ್ನು ಅವರ ಬಾಯಿಂದಲೇ ಆದಿಕವಿಗಳು ಹೀಗೆ ಹೇಳಿಸುತ್ತಾರೆ: ದ್ವಿಜಸ್ಕಂಧಾಧಿರೂಢಾಸ್ತ್ವಾಮಗ್ನಯೋऽಪ್ಯನುಯಾಂತ್ಯಮೀ (೪೫.೨೧). ಈ ಮಾತಿನ ಲಾಕ್ಷಣಿಕಸ್ವಾರಸ್ಯ ಗಮನಾರ್ಹ.

ಇದೇ ಸಂದರ್ಭದಲ್ಲಿ ಅವರು “ತಮ್ಮೊಡನೆಯೇ ತಮ್ಮ ವೇದಗಳೂ ಅಗ್ನಿಗಳೂ ಎದೆಗಂಟಿ ಬರುತ್ತವೆ; ಇನ್ನು ಮಡದಿಯರು ತಮ್ಮ ಶೀಲವನ್ನೇ ರಕ್ಷೆಯಾಗಿರಿಸಿಕೊಂಡು ಮನೆಗಳಲ್ಲಿ ಉಳಿಯುತ್ತಾರೆ” ಎಂದು ಹೇಳುವ ಮೂಲಕ ತಾವು ರಾಮನನ್ನು ಅನುಸರಿಸುವಲ್ಲಿ ಯಾವುದೇ ಕಷ್ಟವಿಲ್ಲವೆಂದು ಸ್ಪಷ್ಟೀಕರಿಸುತ್ತಾರೆ. ಆಗ ದಾರಾಶ್ಚಾರಿತ್ರ್ಯರಕ್ಷಿತಾಃ (೪೫.೨೫) ಎಂಬ ಮಾತು ಬಳಕೆಯಾಗಿದೆ. ಇದೊಂದು ಲೋಕೋಕ್ತಿಯಂತೆಯೇ ಮುಂದೆ ಬೆಳೆದುಬಂದಿದೆ.

ರಾಮ ತನ್ನನ್ನು ಹಿಂಬಾಲಿಸುವ ಪೌರರನ್ನು ಹೀಗೆ ವರ್ಣಿಸುತ್ತಾನೆ: “ಇವರು ತಮ್ಮ ಪ್ರಾಣವನ್ನಾದರೂ ಬಿಟ್ಟಾರು, ಆದರೆ ಹಿಂಬಾಲಿಸಿ ಬರುವ ನಿಶ್ಚಯವನ್ನು ಬಿಡುವುದಿಲ್ಲ!” ಅಪಿ ಪ್ರಾಣಾನಸಿಷ್ಯಂತಿ ನ ತು ತ್ಯಕ್ಷಂತಿ ನಿಶ್ಚಯಮ್ (೪೬.೨೦). ಇದು ಇಂದೂ ಲೋಕದಲ್ಲಿ ವ್ಯಾಪಕವಾಗಿರುವ ವಾಗ್ರೂಢಿ. ಇದಕ್ಕೆ ಆದಿಕವಿಗಳು ಇತ್ತಿರುವ ಸಂಸ್ಕೃತರೂಪ ಮರೆಯಲಾಗದಷ್ಟು ಆಕರ್ಷಕವಾಗಿದೆ.

ರಾಮನ ನಿರ್ಗಮನದ ಬಳಿಕ ಊರಿನ ಮಹಿಳೆಯರು “ಮನೆಹಾಳಿಯಾದ ಆ ಕೈಕೇಯಿ ಯಾರನ್ನು ತಾನೆ ಸುಮ್ಮನೆ ಬಿಡುತ್ತಾಳೆ!” ಎಂದೂ “ಕೈಕೇಯಿ ಇರುವ ರಾಜ್ಯದಲ್ಲಿ ನಾವು ಸೇವಕರಂತೆ ಬದುಕಿರಲು ಸಿದ್ಧರಾಗಿಲ್ಲ“ ಎಂದೂ ಆಕ್ರೋಶಿಸುತ್ತಾರೆ: ಕಂ ಸಾ ಪರಿಹರೇದನ್ಯಂ ಕೈಕೇಯೀ ಕುಲಪಾಂಸನೀ (೪೮.೨೨), ಕೈಕೇಯ್ಯಾ ನ ವಯಂ ರಾಜ್ಯೇ ಭೃತಕಾ ನಿವಸೇಮಹಿ (೪೮.೨೩). ಈ ಮಾತುಗಳಲ್ಲಿ “ಪರಿಹರೇತ್” ಎಂಬ ಕ್ರಿಯಾಪದವನ್ನು, “ಕುಲಪಾಂಸನೀ” ಮತ್ತು “ಭೃತಕಾಃ” ಎಂಬ ನಾಮಪದಗಳನ್ನು ವಿಶಿಷ್ಟವಾದ ರೀತಿಯಲ್ಲಿ ಆದಿಕವಿಗಳು ಬಳಸಿರುವುದು ಗಮನಾರ್ಹ. 1

ರಾಮನಿಲ್ಲದ ಅಯೋಧ್ಯೆಯಲ್ಲಿ ಯಾರೂ ಒಲೆಯನ್ನುರಿಸಲಿಲ್ಲ, ವೇದವನ್ನು ಪಠಿಸಲಿಲ್ಲ, ಪುರಾಣಕಥೆಗಳನ್ನು ಹೇಳಿಕೊಳ್ಳಲಿಲ್ಲ, ಅಂಗಡಿಗಳನ್ನು ತೆರೆಯಲಿಲ್ಲ ಎಂಬ ಸಂಗತಿಯನ್ನು ಆದಿಕವಿಗಳು ನಷ್ಟಜ್ವಲನಸಂಪಾತಾ, ಪ್ರಶಾಂತಾಧ್ಯಾಯಸಂಕಥಾ, ಪಿಹಿತಾಪಣೋದಯಾ (೪೮.೩೪,೩೭) ಎಂಬ ವಿಶೇಷಣಗಳನ್ನು ಅಯೋಧ್ಯೆಗೆ ಕೊಡುವ ಮೂಲಕ ಅನ್ಯಾದೃಶವಾಗಿ ವರ್ಣಿಸಿದ್ದಾರೆ. ವಿಶೇಷತಃ “ನಷ್ಟಜ್ವಲನಸಂಪಾತಾ” ಎಂಬ ಮಾತು ಸೊಗಸಾದ ನುಡಿಗಟ್ಟು. ಹರತಾಳಕ್ಕೆ ಸಂವಾದಿಯಾಗಿ ಬಳಕೆಯಾಗಿರುವ “ಪಿಹಿತಾಪಣೋದಯಾ” ಎಂಬ ಪದಪುಂಜ ಸ್ವೋಪಜ್ಞವಾಗಿದೆ.

ಗುಹನು ಆತಿಥ್ಯವನ್ನು ನೀಡಲು ಬಂದಾಗ ವನವಾಸವ್ರತದ ಕಾರಣ ಅದನ್ನೊಲ್ಲದ ರಾಮ ಆತನ ಪ್ರೀತಿಗೆ ಹೀಗೆ ಪ್ರತಿಕ್ರಿಯಿಸುತ್ತಾನೆ: ಸರ್ವಂ ತದನುಜಾನಾಮಿ ನ ಹಿ ವರ್ತೇ ಪ್ರತಿಗ್ರಹೇ (೫೦.೪೪). “ನೀನು ತಂದಿತ್ತ ವಸ್ತುಗಳನ್ನೆಲ್ಲ ನಾನು ಸ್ವೀಕರಿಸಿದಂತೆಯೇ ಭಾವಿಸು. ಆದರೆ ನಾನು ಮಾತ್ರ ಇವನ್ನು ಬಳಸಿಕೊಳ್ಳಬಾರದು” ಎಂಬ ತಾತ್ಪರ್ಯವುಳ್ಳ ಈ ವಾಕ್ಯವು ಆದಿಕವಿಗಳ ಆಡುಮಾತಿನ ರೀತಿಗೆ ಅಂದವಾದ ನಿದರ್ಶನ. ಇದೇ ಸಂದರ್ಭದಲ್ಲಿ ರಾಮನು ಕುದುರೆಗಳಿಗೆ ಮೇವು-ನೀರುಗಳನ್ನು ಮಾತ್ರ ಗುಹನಿಂದ ಬೇಡುತ್ತಾನೆ: ಅಶ್ವಾನಾಂ ಖಾದನೇನಾಹಮರ್ಥೀ ನಾನ್ಯೇನ ಕೇನಚಿತ್ (೫೦.೪೫). ಇಲ್ಲಿ “ಖಾದನೇನ ಅರ್ಥೀ” ಎಂದು ತೃತೀಯಾವಿಭಕ್ತಿಯನ್ನು ಕರಣಾರ್ಥದಲ್ಲಿ ಅಲ್ಲದೆ ಕಾರಣಾರ್ಥದಲ್ಲಿ ಬಳಸಿರುವುದೊಂದು ವೈಶಿಷ್ಟ್ಯ. ಇಲ್ಲಿಯೇ ಬರುವ ಮತ್ತೊಂದು ಶ್ಲೋಕದಲ್ಲಿ ಗುಹನು ಕುದುರೆಗಳಿಗೆ ಹುಲ್ಲು-ನೀರುಗಳನ್ನು ಒದಗಿಸಿದ ಸೂಚನೆಯಿದೆ. ಆಗ ಕುಡಿಯುವ ನೀರಿಗೆ ಪ್ರತಿಪಾನಂ (೫೦.೪೭) ಎಂಬ ಅಪೂರ್ವವಾದ ಪದವನ್ನು ಬಳಸಲಾಗಿದೆ. ಮುಂದೆ ರಾಮನು ನೀರನ್ನೇ ಕುಡಿದು ಹೊಟ್ಟೆ ತುಂಬಿಸಿಕೊಂಡನೆಂಬ ಒಕ್ಕಣೆಯಿದೆ: ಜಲಮೇವಾದದೇ ಭೋಜ್ಯಮ್ (೫೦.೪೯). ಸಾಮಾನ್ಯವಾಗಿ ಭುಜ್-ಧಾತುವಿನಿಂದ ಹೊಮ್ಮುವ ಶಬ್ದಗಳು ಊಟದ ಚೌಕಟ್ಟಿನಲ್ಲಿ ಬಳಕೆಯಾದಾಗ ಘನಾಹಾರವನ್ನೇ ನಿರ್ದೇಶಿಸುತ್ತವೆ. ಆದರೆ ಇಲ್ಲಿ ನೀರನ್ನೇ ಆಹಾರವಾಗಿ ಬಳಸಿಕೊಂಡನೆಂಬ ಅರ್ಥವನ್ನು ಹೊರಡಿಸಲು ಪೇಯವನ್ನೂ ಭೋಜ್ಯವನ್ನಾಗಿ ಮಾರ್ಪಡಿಸಲಾಗಿದೆ. ಇದು ರಾಮನ ಅಪರಿಗ್ರಹವ್ರತಕ್ಕೂ ಒಂದು ದಿಕ್ಸೂಚಿ. ಇಂಥವೆಲ್ಲ ಸಂಸ್ಕೃತದ ಸಹಜಸುಂದರವಾದ ವ್ಯಾವಹಾರಿಕತೆಗೆ ನಿದರ್ಶನಗಳು.

ರಾಮನಿಗಾಗಿ ಮರುಗುವ ಲಕ್ಷ್ಮಣನು ಅವನಿಗಾದ ಅನ್ಯಾಯವನ್ನು ಗುಹನಿಗೆ ತಿಳಿಸುತ್ತ “ಭೂಮಿಯು ಬೇಗದಲ್ಲಿಯೇ ವಿಧವೆಯಾಗುವಳು” ಎನ್ನುತ್ತಾನೆ: ವಿಧವಾ ಮೇದಿನೀ ನೂನಮ್ (೫೧.೧೨). ಇದು ಉಪಚಾರವಕ್ರತೆಗೆ ಸೊಗಸಾದ ದೃಷ್ಟಾಂತ. ಇಲ್ಲಿ ರಾಮನಂಥವನು ರಾಜನಾಗದ ರಾಜ್ಯಕ್ಕೆ ಶೋಭೆಯಿಲ್ಲವೆಂಬ ಧ್ವನಿಯೂ ಒಡೆಯನಾಗಿರುವ ದಶರಥನು ಸದ್ಯದಲ್ಲಿಯೇ ಸಾಯುವನೆಂಬ ಸೂಚನೆಯೂ ಅಡಗಿದೆ.

ಆದಿಕವಿಗಳು ಸಾಮಾನ್ಯದ ವಸ್ತು-ಸಂಗತಿಗಳನ್ನೂ ಅಸಾಮಾನ್ಯವಾಗಿ ಪರಿಣಮಿಸುವಂತೆ ಮಾಡಬಲ್ಲ ವಶ್ಯವಾಕ್ಕುಗಳು. ಹೀಗಾಗಿಯೇ ರಾಮನೇ ಮೊದಲಾದವರು ಗುಹನ ಆತಿಥ್ಯದಲ್ಲಿ ಕಳೆದ ರಾತ್ರಿಯನ್ನು ವರ್ಣಿಸುವಾಗ ಗತಾ ಭಗವತೀ ನಿಶಾ (೫೨.೨) ಎನ್ನುತ್ತಾರೆ. ಇಲ್ಲಿ ರಾತ್ರಿಗೆ “ಭಗವತೀ” ಎಂಬ ವಿಶೇಷಣವನ್ನಿತ್ತಿರುವುದು ಅದೆಷ್ಟು ಹೃದಯಂಗಮವೆಂಬುದನ್ನು ವಿವರಿಸಬೇಕಿಲ್ಲ.

ರಾಮನು ತಾನು ತನ್ನ ತಂದೆಗೆಷ್ಟು ವಿನೀತನೆಂದು ಬಣ್ಣಿಸಿಕೊಳ್ಳುವಾಗ ಛಂದಾನುವರ್ತೀ (೫೩.೧೦) ಎಂಬ ಶಬ್ದ ಬಳಕೆಯಾಗಿದೆ. ಇದೊಂದು ಅಂದವಾದ ವಾಗ್ರೂಢಿಯಾಗಿ ಮುಂದೆ ಪರಿಣಮಿಸಿತು. “ಛಂದಾನುವರ್ತೀ” ಎಂದರೆ ಇಚ್ಛೆಯೊಪ್ಪುವಂತೆ ನಡೆದುಕೊಳ್ಳುವವನು.

ಇದೇ ಸಂದರ್ಭದಲ್ಲಿ ರಾಮನು ತನ್ನ ತಾಯಿಗಾಗಿ ಮರುಗುತ್ತ, “ಯಾವ ಹೆಣ್ಣೂ ತನ್ನಂಥ ಮಗನನ್ನು ಹಡೆಯಬಾರದು” ಎಂದು ಹಳಿದುಕೊಳ್ಳುತ್ತಾನೆ: ಮಾ ಸ್ಮ ಸೀಮಂತಿನೀ ಕಾಚಿಜ್ಜನಯೇತ್ ಪುತ್ರಮೀದೃಶಮ್ (೫೩.೨೧). ಈ ಮಾತುಗಳು ನಮ್ಮಲ್ಲಿ ಇಂದಿಗೂ ಬಳಕೆಯಲ್ಲಿರುವ ಹಳಹಳಿಕೆಗಳನ್ನು ಹೋಲುತ್ತವೆ. ಹೀಗೆ ಲಕ್ಷ್ಮಣನೊಡನೆ ದುಃಖಿಸುವ ರಾಮ ಪ್ರತಿಕ್ರಿಯಾಶೂನ್ಯನಾದ ತನಗಿಂತಲೂ ತನ್ನ ತಾಯಿಯ ಸಾಕುಗಿಳಿಯೇ ಹೆಚ್ಚು ಕ್ರಿಯಾಶೀಲವೆಂದು ಬಿಸುಸುಯ್ಯುತ್ತಾನೆ. ಏಕೆಂದರೆ, ಅದಕ್ಕೆ “ಶತ್ರುಗಳನ್ನು ಕಚ್ಚು, ಪರಚು” ಎಂದು ಹೇಳಿಕೊಟ್ಟರೆ ಆ ಮಾತುಗಳನ್ನೇ ಚ-ತು ತಪ್ಪದೆ ಅದು ಪುನರುಚ್ಚರಿಸುತ್ತದೆ. ಆದರೆ ತಾನೀಗ ಇಂಥ ಮರುಕದ ಮಾತನ್ನಾಡಲೂ ಸಮರ್ಥನಾಗಿಲ್ಲ: ಮನ್ಯೇ ಪ್ರೀತಿವಿಶಿಷ್ಟಾ ಸಾ ಮತ್ತೋ ಲಕ್ಷ್ಮಣ ಸಾರಿಕಾ । ಯಸ್ಯಾಸ್ತಚ್ಛ್ರೂಯತೇ ವಾಕ್ಯಂ ಶುಕ ಪಾದಮರೇರ್ದಶ (೫೩.೨೨). ಈ ಶ್ಲೋಕದ ಉತ್ತರಾರ್ಧವು ಮೇಲ್ನೋಟಕ್ಕೆ ಅಸ್ಪಷ್ಟವಾಗಿದ್ದರೂ ಅದರ ತಾತ್ಪರ್ಯದಿಂದ ಅರ್ಥಪೂರ್ಣತೆಯೊದಗಿದೆ. ಇದು ನಿಜಕ್ಕೂ ಆಡುನುಡಿಯ ಅದ್ಭುತಕ್ರಮವೇ ಹೌದು.

ಇತ್ತ ಅಂತಃಪುರದಲ್ಲಿ ರಾಮನಿಗಾಗಿ ಮರುಗುತ್ತಿರುವ ದಶರಥನನ್ನು ಕೌಸಲ್ಯೆ ವ್ಯಂಗ್ಯವಾಗಿ ತಿವಿಯುವ ಪರಿ ಮಾರ್ಮಿಕವಾಗಿದೆ. ಆಕೆ ಹೇಳುತ್ತಾಳೆ, “ಇಲ್ಲಿ ಕೈಕೇಯಿ ಇಲ್ಲದ ಕಾರಣ ನಿಃಸಂಕೋಚವಾಗಿ ಮಾತನಾಡಬಹುದು”: ನೇಹ ತಿಷ್ಠತಿ ಕೈಕೇಯೀ ವಿಸ್ರಬ್ಧಂ ಪ್ರತಿಭಾಷ್ಯತಾಮ್ (೫೨.೨). ಇದು ಅಪ್ಪಟ ಲೋಕರೂಢಿಯ ವಾಗ್ವ್ಯವಹಾರ. ಇಂಥ ಮಾತುಗಳೇ ರಾಮಾಯಣದ ನೈಸರ್ಗಿಕಸ್ವಾರಸ್ಯವನ್ನು ಹೆಚ್ಚಿಸುವುದು.


[[ವಾಲ್ಮೀಕಿಮುನಿಗಳ ವಾಗ್ವಿಲಾಸ - 3 Source: prekshaa]]

ದಶರಥನು ಶ್ರವಣಕುಮಾರನ ಪ್ರಸಂಗವನ್ನು ನೆನೆಯುವಾಗ ಪ್ರಾಣಿಗಳು ನೀರು ಕುಡಿಯಲೆಂದು ಬರುವ ಗೊತ್ತಾದ ಸ್ಥಳವನ್ನು ಪ್ರಸ್ತಾವಿಸುತ್ತಾನೆ. ಆಗ ಬಳಕೆಯಾಗಿರುವ ಶಬ್ದ ನಿಪಾನಮ್ (೬೩.೨೧). ಇದನ್ನು ಮುಂದೆ ಕಾಳಿದಾಸಾದಿಗಳೂ ಬಳಸಿಕೊಂಡಿದ್ದಾರೆ. ಹೀಗೆ “ನಿ” ಎಂಬ ಉಪಸರ್ಗವೊಂದರಿಂದ “ಪಾನ” ಎಂಬ ಪದಕ್ಕೆ ಬಂದಿರುವ ಅರ್ಥಾಂತರವು ಮತ್ತೆ ಸಂಸ್ಕೃತದ ಆಡುನುಡಿತನವನ್ನೇ ವ್ಯಂಜಿಸುತ್ತಿದೆ.

ದಶರಥನ ಅರಮನೆಯ ನಟ-ಗಾಯಕರನ್ನು ವರ್ಣಿಸುವಾಗ ಪಾಣಿವಾದಕ (೬೫.೪) ಎಂಬ ಪದ ಪ್ರಯುಕ್ತವಾಗಿದೆ. ಇದು ಕೈಗಳಿಂದ ವಾದ್ಯಗಳನ್ನು ನುಡಿಸುವವರ ಹೆಸರು. ಆದರೆ ಅಡಕವಾದ ಈ ಶಬ್ದ ತನ್ನಂತೆಯೇ ಉದ್ದಿಷ್ಟಾರ್ಥವನ್ನು ಕೊಡುವುದಿಲ್ಲ. ವೀಣಾವಾದಕ, ಮೃದಂಗವಾದಕ ಮುಂತಾದ ಶಬ್ದಗಳು ಆಯಾ ವಾದ್ಯಗಳನ್ನು ನುಡಿಸುವವರನ್ನು ನೇರವಾಗಿ ನಿರ್ದೇಶಿಸುತ್ತವೆ. “ಪಾಣಿವಾದಕ”ಶಬ್ದವು ಮೂಲತಃ ಕೈ ತಟ್ಟಿ ತಾಳ ಹಾಕುವ ಚಪ್ಪಾಳೆ ಅಥವಾ ಚರ್ಚರಿಯನ್ನು ಸೂಚಿಸಿದರೂ ಕ್ರಮೇಣ ಅವನದ್ಧವಾದ್ಯಗಳ ವಾದಕರ ಅಭಿಧಾನವಾಯಿತು. ಇದನ್ನು ಈ ಅರ್ಥದಲ್ಲಿ ಇಂದಿಗೂ ಕೇರಳದವರು ಬಳಸುವುದನ್ನು ನೆನೆಯಬಹುದು. (ಉದಾ: ರಾಮ ಪಾಣಿವಾದ.)

ಇದೇ ಸಂದರ್ಭದಲ್ಲಿ ಅರಮನೆಯ ಸೂತರು ಮಂಗಳಗೀತಗಳನ್ನು ಆಲಪಿಸಿದರೆಂದೂ ಶುಭನಾಮಗಳನ್ನು ಹಾಡಿದರೆಂದೂ ಒಕ್ಕಣೆಯಿದೆ: ವ್ಯಾಹೃತಾಃ ಪುಣ್ಯಶಬ್ದಾಃ (೬೫.೬). ಇದೊಂದು ಸೊಗಸಾದ ನುಡಿಗಟ್ಟು. ಪುಣ್ಯವನ್ನು ಸಂಪಾದಿಸಿಕೊಡುವ ಹರಿ, ನಾರಾಯಣ, ಕಾಶಿ, ಗಂಗೆ ಮುಂತಾದ ಪದಗಳೇ ಪುಣ್ಯಶಬ್ದಗಳು.

ದಶರಥನ ಸಾವಿಗಾಗಿ ದುಃಖಿಸುವ ಕೌಸಲ್ಯೆ ಕೈಕೇಯಿಯು ಕಿಂಪಾಕವನ್ನು (೬೬.೬) ತಿಂದು ಗತಿಸಿದ ಲೋಭಿಯಂತೆ ತಾನೂ ಕೆಟ್ಟು ಎಲ್ಲರನ್ನೂ ಕೆಡಿಸಿದಳೆಂದು ಹಳಿಯುತ್ತಾಳೆ. ಇಲ್ಲಿ ಬಳಕೆಯಾದ “ಕಿಂಪಾಕ”ಶಬ್ದವು “ಕುತ್ಸಿತವಾದ ಪಾಕ” (ಕೆಟ್ಟ ಅಡುಗೆ), ವಿಷಾನ್ನ, ವಿಷಬೀಜ ಮುಂತಾದ ಅರ್ಥಗಳನ್ನು ಹೊಂದಿದೆ. ಮುಖ್ಯವಾಗಿ ಇದೊಂದು ನುಡಿಗಟ್ಟೆಂಬುದು ಗಮನಾರ್ಹ.

ಭರತನನ್ನು ಕರೆತರಲು ಹೊರಟ ದೂತರು ಬೊಗಸೆಯಲ್ಲಿ ನೀರನ್ನು ಕುಡಿಯುವ ವಿಪ್ರರನ್ನು ಕಂಡರೆಂದು ಒಕ್ಕಣೆಯಿದೆ: ಅವೇಕ್ಷ್ಯಾಂಜಲಿಪಾನಾಂಶ್ಚ ಬ್ರಾಹ್ಮಣಾನ್ (೬೮.೧೮). ಬೊಗಸೆಯಲ್ಲಿ ನೀರು ಕುಡಿಯುವುದು ಒಂದು ವ್ರತಾಂಗವೆಂದೂ ಅದು ಅನಾಚಾರವೆಂದೂ ಧರ್ಮಶಾಸ್ತ್ರದಲ್ಲಿ ಬಗೆಬಗೆಯಾಗಿ ವಿವರಣೆಯುಂಟು. ಅವನ್ನೆಲ್ಲ ಧ್ವನಿಸುವಂಥದ್ದು ಇಲ್ಲಿಯ ವಾಗ್ರೂಢಿ.

ಸಂಸ್ಕೃತದ ನಾಣ್ನುಡಿಗಳಲ್ಲಿ ಸೇರಿಹೋಗಿರುವ ಒಂದು ವಾಕ್ಯಖಂಡ ವ್ರಣೇ ಕ್ಷಾರಮಿವ (೭೩.೩). ಇದರ ಅರ್ಥ ಗಾಯಕ್ಕೆ ಉಪ್ಪು ಹಚ್ಚಿದಂತೆಂದು. ಭರತನು ತಂದೆಯ ಸಾವನ್ನೂ ಅಣ್ಣನ ವನಗಮನವನ್ನೂ ಕೇಳಿದಾಗ ತನಗೊದಗಿದ ದುಃಸ್ಥಿತಿಯನ್ನು ಈ ಶಬ್ದದ ಮೂಲಕ ವರ್ಣಿಸಿಕೊಂಡಿದ್ದಾನೆ. ಪರವರ್ತಿಸಾಹಿತ್ಯದಲ್ಲಿ ಈ ನುಡಿಗಟ್ಟು ಕ್ಷತೇ ಕ್ಷಾರಮಿವ ಎಂಬ ಮತ್ತೂ ಆಕರ್ಷಕವಾದ ಶಬ್ದರೂಪವನ್ನು ಹೊಂದಿ ವಾಡಿಕೆಯ ಮಾತಾಯಿತು.

ಭರತನು ಕೈಕೇಯಿಯನ್ನು ಹಳಿಯುವಾಗ “ನೀನು ಕೊರಳಿಗೆ ನೇಣು ಬಿಗಿದುಕೋ” ಎನ್ನುತ್ತಾನೆ: ರಜ್ಜುಂ ಬಧಾನ ವಾ ಕಂಠೇ (೭೧.೩೩). ಇದು ಲೋಕಭಾಷೆಗಳಲ್ಲೆಲ್ಲ ಇರುವ ಅನುದಿನದ ಆಕ್ಷೇಪಕ್ಕೆ ಸೊಗಸಾದ ಮೂಲಮಾತೃಕೆ.

ರಾಮನನ್ನು ಕಾಡಿನಿಂದ ಕರೆದೊಯ್ಯಲು ಭರತ ತೆರಳುವಾಗ ಚಿತ್ರಕೂಟದವರೆಗೆ ರಾಜಮಾರ್ಗ ಸಜ್ಜಾಗುತ್ತದೆ. ಅದನ್ನು ಸಜ್ಜು ಮಾಡಿಕೊಡುವ ಕರ್ಮಚಾರಿಗಳ ಪೈಕಿ ಸೂತ್ರಕರ್ಮವಿಶಾರದರೂ (೮೦.೧) ಇದ್ದರು. ಹಗ್ಗದ ಮೂಲಕ ನೆಲವನ್ನು ಅಳೆದು ಹಾದಿಯ ಉದ್ದಗಲಗಳನ್ನು ನಿಶ್ಚಯಿಸಿಕೊಡುವವರು “ಸೂತ್ರಕರ್ಮವಿಶಾರದರು”. ಇದೊಂದು ನುಡಿಗಟ್ಟಿನಂಥ ವೃತ್ತಿವಾಚಕ ಶಬ್ದ. ಇದಕ್ಕೆ ಸಂದರ್ಭೋಚಿತವಾಗಿ ನೇಯ್ಗೆಯವರೇ ಮುಂತಾದ ವಿಭಿನ್ನ ಅರ್ಥಗಳುಂಟು.

ರಾಮ-ಲಕ್ಷ್ಮಣರು ಕಾಡಿನಲ್ಲಿ ಸಂಧ್ಯಾವಂದನೆಯನ್ನು ಮಾಡುತ್ತಿದ್ದ ಕ್ರಮವನ್ನು ಗುಹನು ಭರತನಿಗೆ ಹೇಳುವಾಗ ವಾಗ್ಯತಾಃ (೮೭.೧೮) ಎಂಬ ಶಬ್ದವನ್ನು ಬಳಸುತ್ತಾನೆ. ಮಾತಿನ ಮೇಲೆ ಹತೋಟಿಯುಳ್ಳವರು, ಅರ್ಥಾತ್ ಮೌನಿಗಳು, ವಾಗ್ಯತರು. ಧರ್ಮಶಾಸ್ತ್ರಗಳಲ್ಲಿ ವಾಙ್ನಿಯಮವನ್ನು ಪಾಲಿಸುವವರೇ ವಾಗ್ಯತರೆಂದು ಹೇಳಲಾಗಿದೆ.

ಭರತನ ಆಗಮನವನ್ನು ಶಂಕಿಸಿದ ಲಕ್ಷ್ಮಣ ಅವನನ್ನು ಪೂರ್ವಾಪಕಾರೀ (೯೬.೨೪) ಎಂದು ಆಕ್ಷೇಪಿಸುತ್ತಾನೆ. ಈ ಮಾತಿಗೆ “ಈ ಮುನ್ನ ಅಪಕಾರ ಮಾಡಿದವನು” ಎಂದೂ “ಮೊದಲಿಗೇ ಅಪಕಾರ ಮಾಡಿ ದುಷ್ಟತನವನ್ನು ತೋರಿದವನು” ಎಂದೂ ಅರ್ಥವುಂಟು. ಇದೊಂದು ಬಗೆಯ ನುಡಿಗಟ್ಟೇ ಹೌದು. ಆಗ ರಾಮನು ತಮ್ಮನನ್ನು ಸಮಾಧಾನಿಸುತ್ತ, “ನಾನು ಎಲ್ಲರ ಹಿತಕ್ಕಾಗಿ ಮಾತ್ರ ರಾಜ್ಯವನ್ನು ಬಯಸುವವನಲ್ಲದೆ ಸ್ವಾರ್ಥಕ್ಕಾಗಿ ಅಲ್ಲ; ಇದನ್ನು ನನ್ನ ಆಯುಧದ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ” ಎನ್ನುತ್ತಾನೆ: ಸತ್ಯೇನಾಯುಧಮಾಲಭೇ (೯೭.೬). ಇದಂತೂ ಸೊಗಸಾದ ನುಡಿಗಟ್ಟು.

ಮುಂದೆ ರಾಮನು ವನವಾಸದಲ್ಲಿ ತಾನು ಅನುದಿನವೂ ಬಳಸುವ ಆಹಾರವನ್ನೇ ಗತಿಸಿದ ತಂದೆಗೆ ಪಿಂಡರೂಪದಲ್ಲಿ ಸಮರ್ಪಿಸಿದಾಗ ಅದನ್ನು ಕಂಡ ಕೌಸಲ್ಯೆ ಸಂಕಟಪಡುತ್ತ, “ತಾನು ಯಾವುದನ್ನು ತಿನ್ನುವನೋ ಅದನ್ನೇ ತನ್ನ ದೇವರಿಗೂ ಒಪ್ಪಿಸುವನೆಂಬ ಗಾದೆಯ ಮಾತು ಹೀಗೆ ಸತ್ಯವಾಯಿತಲ್ಲಾ!” ಎಂದು ಹೇಳುತ್ತಾಳೆ: ಯದನ್ನಃ ಪುರುಷೋ ಭವತಿ ತದನ್ನಾಸ್ತಸ್ಯ ದೇವತಾಃ (೧೦೩.೧೫). ಮೂಲದಲ್ಲಿ ಇದನ್ನು “ಲೌಕಿಕೀ ಶ್ರುತಿಃ”, “ಗಾದೆಮಾತು” ಎಂದು ಹೇಳಿರುವುದು ಗಮನಾರ್ಹ.

ಭರತನು ತನ್ನ ಪ್ರಾಮಾಣಿಕತೆಯನ್ನು ನಿವೇದಿಸಿಕೊಳ್ಳುತ್ತ ತಾನೆಂದೂ ರಾಜ್ಯಕ್ಕಾಗಿ ಹಾತೊರೆಯಲಿಲ್ಲ, ತಂದೆ-ತಾಯಿಗಳನ್ನು ಇದಕ್ಕಾಗಿ ಒಡಂಬಡಿಸಲಿಲ್ಲ, ಅಷ್ಟೇಕೆ ಅಣ್ಣನನ್ನು ಕಾಡಿಗೆ ಕಳುಹಲು ಅನುಮತಿಸಲೂ ಇಲ್ಲವೆಂದು ದುಃಖಿಸುತ್ತಾನೆ. ಈ ಸಂದರ್ಭದಲ್ಲಿ ನಾನುಜಾನಾಮಿ ರಾಘವಮ್ (೧೧೧.೨೫) ಎಂಬ ಪದಪುಂಜ ಬಳಕೆಯಾಗಿದೆ. ಇದೊಂದು ಸುಂದರವಾದ ನುಡಿಗಟ್ಟು. “ಅನುಜಾನಾತಿ” ಎಂದರೆ “ಒಪ್ಪಿಗೆಯೀಯುತ್ತಾನೆ” ಎಂದರ್ಥ. “ಅನುಜ್ಞೆ” ಎಂಬ ಪದ ಇದಕ್ಕೆ ಸಂಬಂಧಿಸಿದುದೇ.

ರಾಮನ ಪರವಾಗಿ ತಾನೇ ವನವಾಸವನ್ನು ಮಾಡುವೆನೆಂದು ಹಠತೊಟ್ಟ ಭರತನಿಗೆ ರಾಮನು “ಈ ಬಗೆಯಲ್ಲಿ ಒಬ್ಬರ ಪರವಾಗಿ ಮತ್ತೊಬ್ಬರು ಕರ್ತವ್ಯಗಳನ್ನು ಗುತ್ತಿಗೆ ಹಿಡಿಯುವುದು ಹೀನಾಯ” ಎಂದು ತಿಳಿಯಹೇಳುತ್ತಾನೆ. ಉಪಧಿರ್ನ ಮಯಾ ಕಾರ್ಯಃ (೧೧೧.೨೯). “ಉಪಧಿಃ” ಎಂಬ ಪದಕ್ಕೆ ಕೋಶಗಳಲ್ಲಿ ಕಪಟ, ವಂಚನೆ, ಸುತ್ತುಬಳಸಾದ ವರ್ತನೆ ಎಂಬೆಲ್ಲ ಅರ್ಥಗಳಿದ್ದರೂ ಸದ್ಯದ ಸಂದರ್ಭದಲ್ಲಿ ಇದನ್ನು “ಒಬ್ಬರ ಪರವಾಗಿ ಮತ್ತೊಬ್ಬರು ಮಾಡುವ ಅಡ್ಡದಾರಿಯ ಕೆಲಸ” ಎಂಬರ್ಥದಲ್ಲಿ ಗ್ರಹಿಸುವುದು ಯುಕ್ತ.

ರಾಮ-ಭರತರ ಉದಾರವರ್ತನೆಯನ್ನು ಕಂಡ ಮಹರ್ಷಿಗಳಿಗೆಲ್ಲ ಆನಂದವಾದುದನ್ನು ಆದಿಕವಿಗಳು ರೋಮಹರ್ಷಣ (೧೧೨.೧) ಎಂಬ ಶಬ್ದದ ಮೂಲಕ ಸೂಚಿಸಿದ್ದಾರೆ. ಇದು ರಾಮಾಯಣವೂ ಸೇರಿದಂತೆ ಅನೇಕಕೃತಿಗಳಲ್ಲಿ ಬಳಕೆಗೊಂಡು ಸವಕಲುಮಾತೆನಿಸಿದೆಯಾದರೂ ಮೂಲತಃ ಇಲ್ಲಿ ಸೊಗಸಾದ ಉಪಚಾರವಕ್ರತೆಯಿದೆ. ಆನಂದಾನುಭವದ ಅಭಿವ್ಯಕ್ತಿಗಳ ಪೈಕಿ ರೋಮಾಂಚನವೂ ಒಂದು. ನವಿರು ನಿಮಿರೇಳುವ ಈ ಬಗೆಯ ಸಾತ್ತ್ವಿಕವಿಕ್ರಿಯೆಯನ್ನು ರೋಮಗಳಿಗೇ ಹರ್ಷವಾಯಿತು ಎಂಬಂತೆ ವರ್ಣಿಸುವಲ್ಲಿ ಹೃದ್ಯವಾದ ಕವಿಕಲ್ಪನೆಯಿದೆ.

ರಾಮನು ಪಾದುಕಾಪ್ರದಾನ ಮಾಡುವಾಗ ಭರತನನ್ನು ಮಡಿಲಿನಲ್ಲಿರಿಸಿಕೊಂಡು ಅನುನಯಿಸಿದನೆಂಬ ವರ್ಣನೆಯುಂಟು: ತಮಂಕೇ ಭ್ರಾತರಂ ಕೃತ್ವಾ ರಾಮೋ ವಚನಮಬ್ರವೀತ್ (೧೧೨.೧೫). ಇಲ್ಲಿ “ಮಡಿಲಿಗೇರಿಸಿಕೊಳ್ಳುವುದು” ಎಂಬ ಅಭಿಪ್ರಾಯವನ್ನು “ಅಂಕೇ ಕೃತ್ವಾ” ಎಂಬ ನುಡಿಗಟ್ಟಿನ ಮೂಲಕ ಸಾಧಿಸಲಾಗಿದೆ.

ರಾಮನಿಲ್ಲದ ಅಯೋಧ್ಯೆಯನ್ನು ಆದಿಕವಿಗಳು ಹತ್ತಾರು ಹೃದಯಂಗಮವಾದ ಪದ್ಯಗಳಿಂದ ಬಣ್ಣಿಸಿದ್ದಾರೆ. ಅಲ್ಲೊಂದೆಡೆ ಆ ನಗರವು ಜಡಿಮಳೆ ಬರುತ್ತಿರುವ ಶುಕ್ಲಪಕ್ಷದ ರಾತ್ರಿಯಂತಿತ್ತೆಂದು ಒಕ್ಕಣಿಸುತ್ತಾರೆ: ಸಾಸಾರೇವಾರ್ಜುನೀ ಕ್ಷಪಾ (೧೧೪.೨೮). ಇಲ್ಲಿ ಬಳಕೆಯಾದ “ಆರ್ಜುನೀ ಕ್ಷಪಾ”, “ಬಿಳಿಯಿರುಳು” ಎಂಬ ವಿಶಿಷ್ಟವಾದ ಪದಪುಂಜವು ಶುಕ್ಲಪಕ್ಷದ ರಾತ್ರಿಯನ್ನು ಸೂಚಿಸುವುದು ಗಮನಾರ್ಹ.

ಅನಸೂಯಾದೇವಿಯು ಸೀತೆಗೆ ಪಾತಿವ್ರತ್ಯವನ್ನು ಕುರಿತು ಹೇಳುವಾಗ “ಜಗತ್ತಿನಲ್ಲಿ ಹಲವರು ಹೆಂಗಸರು ತಾವು ತಮ್ಮ ಗಂಡಂದಿರ ಒಡತಿಯರಾಗಬೇಕೆಂದೂ ಅವರು ತಮ್ಮ ಭೋಗಜೀವನವನ್ನು ಈಡೇರಿಸಬೇಕೆಂದೂ ಬಯಸುತ್ತಿರುತ್ತಾರೆ” ಎನ್ನುತ್ತಾಳೆ. ಈ ಎಲ್ಲ ಅರ್ಥವನ್ನೂ ವ್ಯಂಜಿಸಲು ಆದಿಕವಿಗಳು ಭರ್ತೃನಾಥಾಃ (೧೧೭.೨೬) ಎಂಬ ಪದವನ್ನು ಬಳಸಿದ್ದಾರೆ. ಇದು ಬಹ್ವರ್ಥಗ್ರಾಸಿಯಾಗಿ ಶೋಭಿಸಿದೆ. ಇದೇ ಸಂದರ್ಭದಲ್ಲಿ ಆ ತಪೋಧನೆಯು ತನ್ನ ಪಾತಿವ್ರತ್ಯದ ಮಹಿಮೆಯಿಂದ ಸೀತೆಗಾಗಿ ಏನನ್ನಾದರೂ ಸಾಧಿಸಿಕೊಟ್ಟು ಅವಳಿಗೆ ಮುದವನ್ನೀಯಬಲ್ಲೆನೆಂದು ಹೇಳುತ್ತಾಳೆ. ಆಗ ತ್ವಾಂ ಛಂದಯೇ (೧೧೮.೧೪) ಎಂಬ ವಿಶಿಷ್ಟಪ್ರಯೋಗವಿದೆ. ಛಂದಃಶಬ್ದಕ್ಕೆ ಇರುವ ನಾನಾರ್ಥಗಳನ್ನು ಗಮನಿಸಿ ಸದ್ಯದ ತಾತ್ಪರ್ಯವನ್ನು ಹೊರಡಿಸಬಹುದು.

ಅರಣ್ಯಕಾಂಡ

ಈ ಕಾಂಡದ ಮೊದಲಿಗೇ ಋಷ್ಯಾಶ್ರಮಗಳಲ್ಲಿಯ ವೇದಘೋಷವನ್ನು ವರ್ಣಿಸುವಾಗ ಆದಿಕವಿಗಳು ಬ್ರಹ್ಮಘೋಷ (೧.೬) ಎಂಬ ಶಬ್ದವನ್ನು ಬಳಸಿದ್ದಾರೆ. ಬ್ರಹ್ಮವೆಂಬುದಕ್ಕೆ ವೇದವೆಂದೂ ಅರ್ಥವಿದೆ. ಇದು ಹೆಚ್ಚಾಗಿ ಬಳಕೆಯಲ್ಲಿಲ್ಲದ ಸುಂದರಪದ.

ವಿರಾಧನೆಂಬ ರಾಕ್ಷಸನ ವಿಕಟರೂಪವನ್ನು ವರ್ಣಿಸುವಾಗ ಆತನು ಗಂಭೀರಾಕ್ಷನೆಂದೂ ವಿಷಮೋದರನೆಂದೂ (೨.೫) ಆದಿಕವಿಗಳು ಹೇಳುತ್ತಾರೆ. ಈ ಪ್ರಕಾರ ಅವನು ಗುಳಿಬಿದ್ದ ಕಣ್ಣವನು ಮತ್ತು ಅಡ್ಡಾದಿಡ್ಡಿ ಬೆಳೆದ ಹೊಟ್ಟೆಯವನೆಂದು ತಿಳಿಯುತ್ತದೆ. ಕುರೂಪವನ್ನು ಇಷ್ಟು ಸೊಗಸಾಗಿ ವರ್ಣಿಸಿರುವುದು ಒಂದು ಸೊಗಸು.

ಸುತೀಕ್ಷ್ಣಮಹರ್ಷಿಗಳು ರಾಮನನ್ನು ಬೀಳ್ಕೊಡುವಾಗ “ನಿನ್ನ ದಾರಿ ಸುಗಮವಾಗಲಿ”, ಅರಿಷ್ಟಂ ಗಚ್ಛ ಪಂಥಾನಮ್ (೮.೧೧) ಎನ್ನುತ್ತಾರೆ. ಇದೊಂದು ಸೊಗಸಾದ ಬೀಳ್ಕೊಡುಗೆಯ ನುಡಿಬಗೆ. ಆಗ ಅವರು ರಾಮನಿಗೆ “ನೀನು ಕಣ್ಣಿಗೆ ಹಿತವಾಗುವಂಥ ಕಾಡುಮೇಡುಗಳನ್ನು ಕಾಣುವೆ” ಎಂದು ದಾರಿ ತಿಳಿಸುತ್ತಾರೆ. ಆಗ ದೃಷ್ಟಿರಮ್ಯಾಣಿ (೮.೧೫) ಎಂಬ ಪದ ಬಳಕೆಯಾಗಿದೆ. ಇದೊಂದು ಹೃದಯಂಗಮವಾದ ಸಮಾಸ.

ಸೀತೆಯು ರಾಕ್ಷಸವೈರ ತಮಗೆ ಬೇಕಿಲ್ಲವೆಂದು ರಾಮನಿಗೆ ಹೇಳುವಾಗ “ಕೆಲವೊಮ್ಮೆ ನೀನು ಬಾಣಗಳನ್ನು ವೆಚ್ಚ ಮಾಡಬೇಕಾಗಬಹುದು” ಎನ್ನುತ್ತಾಳೆ: ಕಚ್ಚಿತ್ ಕುರ್ಯಾಃ ಶರವ್ಯಯಮ್ (೯.೧೪). ಇಲ್ಲಿ “ಶರವ್ಯಯ” ಎಂದರೆ ಬಾಣಪ್ರಯೋಗವೆಂದು ತಾತ್ಪರ್ಯ. ಅದನ್ನು ಹೀಗೆ ಪರ್ಯಾಯವಾಗಿ ತಿಳಿಸುವಲ್ಲಿ ಮಿಗಿಲಾದ ಸೊಗಸಿದೆ. ಇದೇ ಸಂದರ್ಭದಲ್ಲಿ ಅವಳು ರಾಮನಿಗೆ ತಾನು ಹೇಳುತ್ತಿರುವ ಹಿತವಾಕ್ಯಗಳೆಲ್ಲ ಕೇವಲ ಆತನ ಮೇಲಣ ಪ್ರೀತಿ-ಗೌರವಗಳಿಂದ ಹುಟ್ಟಿವೆ ಹಾಗೂ ಅವು ಕೇವಲ ನೆನಪಿಸಲಲ್ಲದೆ ಕಲಿಸಲಲ್ಲ ಎಂದು ನಿವೇದಿಸುತ್ತಾಳೆ: ಸ್ನೇಹಾಚ್ಚ ಬಹುಮಾನಾಚ್ಚ ಸ್ಮಾರಯೇ ತ್ವಾಂ ನ ಶಿಕ್ಷಯೇ (೯.೨೪). ಇದೊಂದು ಸುಂದರವಾದ ವಾಗ್ರೂಢಿಯಾಗಿ ಇಂದಿಗೂ ಬಳಕೆಯಲ್ಲಿದೆ. ಇದೇ ಸನ್ನಿವೇಶದಲ್ಲಿ ಅವಳು ಮುಂದುವರಿದು ತಾವಿರುವ ನಾಡಿನ ರೀತಿ-ನೀತಿಗಳನ್ನು ಗೌರವಿಸಬೇಕೆಂದು ಹೇಳುತ್ತಾಳೆ: ದೇಶಧರ್ಮಸ್ತು ಪೂಜ್ಯತಾಮ್ (೯.೨೭). ಇದು ಆಯಾ ದೇಶಾಚಾರ-ಕಾಲಾಚಾರಗಳನ್ನು ಪಾಲಿಸಬೇಕೆಂಬ ತಾತ್ಪರ್ಯವನ್ನೇ ಹೊಂದಿದೆ.

ಅಗಸ್ತ್ಯರು ಸೀತೆಯನ್ನು ಕಂಡಾಗ ಆಕೆಯು ಎದ್ದುತೋರುವಂತೆ ಬಳಲಿದ್ದಾಳೆಂದು ಹೇಳುತ್ತಾರೆ. ಈ ಸಂದರ್ಭದಲ್ಲಿ ವ್ಯಕ್ತಮುತ್ಕಂಠತೇ (೧೩.೨) ಎಂಬ ನುಡಿಗಟ್ಟು ಬಳಕೆಯಾಗಿದೆ. ಇದರ ಸ್ವಾರಸ್ಯ ಸುವೇದ್ಯ. ಹಾಗೆಯೇ ಅವರು ಮುಂದುವರಿದು “ಸಾಮಾನ್ಯವಾಗಿ ಸ್ತ್ರೀಯರು ಅನುಕೂಲಪರಿಸ್ಥಿತಿಯಲ್ಲಿರುವ ಗಂಡನನ್ನು ಓಲೈಸುತ್ತ ಪ್ರತಿಕೂಲಪರಿಸ್ಥಿತಿಯಲ್ಲಿ ಇರುವನನ್ನು ಉಪೇಕ್ಷಿಸುತ್ತಾರೆ” ಎಂದು ಒಕ್ಕಣಿಸುತ್ತಾರೆ: ಸಮಸ್ಥಮನುರಜ್ಯಂತಿ ವಿಷಮಸ್ಥಂ ತ್ಯಜಂತಿ ಚ (೧೩.೫). ಇದೂ ಸಹ ಚೆಲುವಾದ ನುಡಿಗಟ್ಟಿನಂತೆ ಬಳಕೆಯಾಗಿದೆ. ಅಂತೆಯೇ ಅವರು ರಾಮನ ವನವಾಸದ ಅವಧಿಯಲ್ಲಿ ಸಾಕಷ್ಟು ಕಾಲ ಕಳೆದಿದೆಯೆಂದು ಹೇಳುತ್ತಾರೆ: ಕಾಲೋऽಯಂ ಗತಭೂಯಿಷ್ಠಃ (೧೩.೧೫). ಇದಂತೂ ಅಪ್ಪಟ ನುಡಿಗಟ್ಟಾಗಿದೆ.

[[ವಾಲ್ಮೀಕಿಮುನಿಗಳ ವಾಗ್ವಿಲಾಸ - 4 Source: prekshaa]]

ಲಕ್ಷ್ಮಣನು ಪರ್ಣಶಾಲೆಯನ್ನು ಪಂಚವಟಿಯಲ್ಲಿ ಕಟ್ಟುವಾಗ ರಾಮನಿಗೆ ಹೀಗೆ ಹೇಳುತ್ತಾನೆ: “ಅಣ್ಣ, ನಾನು ನಿನ್ನ ಅಧೀನ. ನೀನು ಹೇಳಿದೆಡೆ ಪರ್ಣಕುಟಿಯನ್ನು ರೂಪಿಸುವೆ”. ಈ ಸಂದರ್ಭದಲ್ಲಿ ಇಂಥ ಹೃದಯಂಗಮವಾದ ಪರಾಧೀನತೆಯನ್ನು ನಿರ್ದೇಶಿಸಲು ಪರವಾನಸ್ಮಿ (೧೫.೭) ಎಂಬ ಪದಪುಂಜವನ್ನು ಬಳಸಿದ್ದಾರೆ. ಮುಂದ್ದೆ ಸಂಸ್ಕೃತಸಾಹಿತ್ಯದಲ್ಲಿದು ಅನೇಕ ಮಹಾಕವಿಗಳಿಗೆ ಉಪಾದೇಯವಾದ ಪದವಾಯಿತು.

ಹೇಮಂತವರ್ಣನೆಯ ಸಂದರ್ಭದಲ್ಲಿ ಆದಿಕವಿಗಳು ವಾಗ್ವೈಚಿತ್ರ್ಯದ ವಿಶ್ವರೂಪವನ್ನೇ ಮೆರೆದಿದ್ದಾರೆ. ಇರುಳು ಕಳೆದು ಮುಂಜಾನೆಯಾದುದನ್ನು ನಿರೂಪಿಸುತ್ತ ಪ್ರಭಾತಾಯಾಂ ಶರ್ವರ್ಯಾಮ್ (೧೬.೨) ಎಂಬ ನುಡಿಗಟ್ಟನ್ನು ವಾಲ್ಮೀಕಿಗಳು ಬಳಸಿರುವುದಂತೂ ಹೃದಯಹಾರಿ. ಇಲ್ಲೊಂದೆಡೆ “ಚಳಿಯ ಕಾರಣದಿಂದ ಜನರ ಚರ್ಮ ಒಡೆದು ಒರಟಾಗಿದೆ” ಎನ್ನುತ್ತಾರೆ: ನೀಹಾರಪರುಷೋ ಲೋಕಃ (೧೬.೫). ಇದನ್ನು ಇಷ್ಟು ಅಡಕವಾಗಿ ನುಡಿಗಟ್ಟೆಂಬಂತೆ ಹೇಳಿರುವುದೇ ಇಲ್ಲಿಯ ಸ್ವಾರಸ್ಯ. ಅಲ್ಲಿಯೇ “ಬೆಂಕಿ ಈಗ ಹಿತಕರವಾಗಿದೆ”: ಸುಭಗೋ ಹವ್ಯವಾಹನಃ (೧೬.೫) ಎನ್ನುತ್ತಾರೆ. ವಸ್ತುತಃ “ಸುಭಗ” ಎಂದರೆ ಸುಂದರ ಎಂದು ಸಾಮಾನ್ಯಾರ್ಥ. ಆದರೆ ಇಲ್ಲದು ಹೃದ್ಯವೆಂಬ ಅರ್ಥದಲ್ಲಿ ಬಳಕೆಯಾಗಿರುವುದು ಒಂದು ಸ್ವಾರಸ್ಯ. ಇಲ್ಲಿಯೇ ದಿವಸಾಃ ಸುಭಗಾದಿತ್ಯಾಃ (೧೬.೧೦) “ಹಿತಕರವಾದ ಸೂರ್ಯನಿಂದ ದಿನಗಳು ಕೂಡಿವೆ” ಎಂಬ ಪ್ರಯೋಗವಿರುವುದೂ ಗಮನಾರ್ಹ. ಜೊತೆಗೆ “ಸುಭಗ”ಶಬ್ದಕ್ಕೆ ವಿರುದ್ಧವಾದ “ದುರ್ಭಗ”ವೆಂಬ ಶಬ್ದವು ಅಹೃದ್ಯವೆಂಬ ಅರ್ಥದಲ್ಲಿ ಬಳಕೆಯಾಗಿರುವುದು ಪರಿಶೀಲನೀಯ: ಛಾಯಾಸಲಿಲದುರ್ಭಗಾಃ (೧೬.೧೦) “ಹೇಮಂತದಲ್ಲಿ ನೆರಳು ಮತ್ತು ನೀರು ಮಾತ್ರ ಬೇಡವೆನಿಸುತ್ತವೆ”. ಇದು ಕೇವಲ ಸಮಾಸವೃತ್ತಿಯಿಂದ ಅರಿವಾಗುವಂಥದ್ದಲ್ಲ; ಸಂದರ್ಭದಿಂದಲೇ ತಾತ್ಪರ್ಯರೂಪದಿಂದ ತಿಳಿಯಬೇಕಾದುದು.

ಹೇಮಂತದ ದಿವಸಗಳು ಮೃದುವಾದ ಸೂರ್ಯನಿಂದ, ಇಬ್ಬನಿಯಿಂದ, ಹೆಚ್ಚಿನ ಚಳಿಯಿಂದ, ಕುಳಿರ್ಗಾಳಿಯಿಂದ, ಬೋಳಾದ ಮರಗಳಿಂದ ಹಾಗೂ ಹಿಮಪಾತದಿಂದ ಕೂಡಿವೆಯೆಂದು ಉಲ್ಲೇಖವುಂಟು: ಮೃದುಸೂರ್ಯಾಃ ಸನೀಹಾರಾಃ ಪಟುಶೀತಾಃ ಸಮಾರುತಾಃ ಶೂನ್ಯಾರಣ್ಯಾ ಹಿಮಧ್ವಸ್ತಾ ದಿವಸಾ ಭಾಂತಿ ಸಾಂಪ್ರತಮ್ (೧೬.೧೧). ಇಲ್ಲಿ ವಿಶೇಷತಃ “ಮೃದುಸೂರ್ಯ” ಮತ್ತು “ಪಟುಶೀತ” ಎಂಬ ಪದಗಳಲ್ಲಿ ತೋರುವ ಉಪಚಾರವಕ್ರತೆ ಹೃದಯಂಗಮ. ಹೀಗೆಯೇ “ಚಳಿಗಾಲದಲ್ಲಿ ಜನರು ಬಯಲಿನಲ್ಲಿ ಮಲಗುವುದಿಲ್ಲ” ಎಂಬ ಉಕ್ತಿಯೂ ಸೊಗಸಾಗಿದೆ: ನಿವೃತ್ತಾಕಾಶಶಯನಾಃ (೧೬.೧೨). “ಆಕಾಶಶಯನ” ಎಂಬಲ್ಲಿಯ ಮುಕ್ತಾವಕಾಶದಲ್ಲಿ ಮಲಗುವುದೆಂಬ ಇಂಗಿತ ತುಂಬ ಮಾರ್ಮಿಕ.

ಮುಂದೆ ಸೀತೆಯನ್ನೂ ಬೆಳದಿಂಗಳನ್ನೂ ವರ್ಣಿಸುವಾಗ ಬೆಳದಿಂಗಳು ಹಿಮದಿಂದ ಕೊಳೆಯಾಗಿದೆಯೆಂದೂ ಸೀತೆಯು ಮಾಗಿಯ ಬಿಸಿಲಿನಲ್ಲಿ ಕಪ್ಪಾಗಿರುವಳೆಂದೂ ಹೇಳುವ ಬಗೆ ಸೊಗಸಾಗಿದೆ: ತುಷಾರಮಲಿನಾ, ಆತಪಶ್ಯಾಮಾ (೧೬.೧೪). ಚಳಿಗಾಲದ ಸೂರ್ಯನು ಬಲವಿಲ್ಲದವನೆಂಬುದನ್ನು ಅಗ್ರಾಹ್ಯವೀರ್ಯಃ (೧೬.೧೯) ಎಂಬ ಪದದಿಂದ ಸೂಚಿಸಿರುವುದಂತೂ ಅಮೋಘವಾಗಿದೆ.

ಚಳಿಗಾಲದಲ್ಲಿ ನದಿಗಳ ಮೇಲೆ ಹಿಮ ಹಾಸಿರುತ್ತದೆ; ಹೀಗಾಗಿ ಅಲ್ಲಿರುವ ಜಲಪಕ್ಷಿಗಳನ್ನು ಅವುಗಳ ಕಲರವದಿಂದಲೇ ಊಹಿಸಬೇಕು: ರುತವಿಜ್ಞೇಯಸಾರಸಾಃ (೧೬.೨೪). ಇದರ ಸ್ವಾರಸ್ಯವಿರುವುದು ಆದಿಕವಿಗಳ ಕಲ್ಪನಾಸ್ವಾರಸ್ಯದಲ್ಲಿ ಅಷ್ಟೇ ಅಲ್ಲದೆ ಪದಗುಂಫನಚಾತುರ್ಯದಲ್ಲಿಯೂ ಹೌದು.

ಶೂರ್ಪಣಖೆಯ ಕಿವಿ-ಮೂಗುಗಳ ಛೇದನವನ್ನು ನಿರೂಪಿಸುವಾಗ ಕರ್ಣನಾಸಂ (೧೮.೨೧) ಎಂಬ ವಿಶಿಷ್ಟಸಮಾಸವು ನುಡಿಗಟ್ಟೆಂಬಂತೆ ಬಳಕೆಯಾಗಿದೆ. ಆಕೆ ಘೋರವಾಗಿ ಅರಚಿದ ಬಗೆಯನ್ನು ಬಣ್ಣಿಸುವಾಗ ನನಾದ ವಿವಿಧಾನ್ ನಾದಾನ್ (೧೮.೨೩) ಎಂಬ ಮಾತು ಬಂದಿದೆ. “ರವಾನ್” ಎಂಬ ಶಬ್ದವಿದ್ದಲ್ಲಿ ಒರಟಾದ ಕೂಗಿಗೆ ಹೆಚ್ಚಿನ ಸಂವಾದವಿರುತ್ತಿತ್ತು. ಆದರೆ ಇಲ್ಲಿ ಶ್ರುತಿಬದ್ಧತೆಯ ಸೂಚನೆಯುಳ್ಳ “ನಾದ”ಶಬ್ದವನ್ನು ಬಳಸುವ ಮೂಲಕ ಆದಿಕವಿಗಳು ವ್ಯಂಗ್ಯವಾಗಿ ಪರಿಹಾಸ ಮಾಡಿದ್ದಾರೆ. ಇದು ಆಡುನುಡಿಯ ವೈಶಿಷ್ಟ್ಯವೇ ಹೌದು.

ಶೂರ್ಪಣಖೆಯು ಖರ-ದೂಷಣರಿಗೆ ರಾಮ-ಲಕ್ಷ್ಮಣರ ವಿವರಗಳನ್ನೀಯುವಾಗ ಪಾರ್ಥಿವವ್ಯಂಜನಾನ್ವಿತೌ (೧೯.೧೬), “ಕ್ಷತ್ತ್ರಿಯರ ಲಕ್ಷಣವುಳ್ಳವರು” ಎನ್ನುತ್ತಾಳೆ. ಈ ಬಗೆಯ ಪ್ರಯೋಗಗಳು ಆಡುನುಡಿಯ ಕ್ರಮವನ್ನಷ್ಟೇ ಅಲ್ಲದೆ ಶಾಸ್ತ್ರಪರಿಷ್ಕಾರವನ್ನೂ ತೋರುತ್ತವೆ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಗೂಢಚಾರರ ಪ್ರಕಾರಗಳನ್ನು ಹೇಳುವಾಗ “ತಾಪಸವ್ಯಂಜನ” ಎಂಬ ಪರಿಭಾಷೆ ಬರುತ್ತದೆ. ಇದರ ಅರ್ಥ, “ತಾಪಸವೇಷಧಾರಿ” ಎಂದು. ಹೀಗೆಯೇ “ವರ್ಣಿಲಿಂಗೀ”, “ಪಾರ್ಥಿವಲಿಂಗೀ” ಇತ್ಯಾದಿ ಪ್ರಯೋಗಗಳನ್ನು ಭಾರವಿ-ಕಾಳಿದಾಸಾದಿಗಳಲ್ಲಿ ಕಾಣಬಹುದು.

ಖರ-ದೂಷಣರೊಡನೆ ಹೋರಾಡುವಾಗ ರಾಮನು ಲಕ್ಷ್ಮಣನಿಗೆ ಸೀತೆಯ ರಕ್ಷಣಭಾರವನ್ನು ಹೊರಿಸುವುದಲ್ಲದೆ “ನನ್ನ ಪಾದಗಳ ಆಣೆ, ನೀನು ಯುದ್ಧೋದ್ಯಮದಿಂದ ಕೂಡಲೆ ವಿರಮಿಸು” ಎನ್ನುತ್ತಾನೆ: ಶಾಪಿತೋ ಮಮ ಪಾದಾಭ್ಯಾಂ ಗಮ್ಯತಾಂ ವತ್ಸ ಮಾಚಿರಮ್ (೨೪.೧೩). ಇಲ್ಲಿಯ ಆಣೆಯ ಮಾತು ನಿಜಕ್ಕೂ ಒಳ್ಳೆಯ ವಾಗ್ರೂಢಿ. ಅಂತೆಯೇ “ಮಾ ಚಿರಮ್” (ಕೂಡಲೆ, ತಡ ಮಾಡದೆ) ಎಂಬ ನುಡಿಗಟ್ಟೂ ಗಮನಾರ್ಹ.

ರಾವಣನು ಸೀತಾಪಹರಣಕ್ಕಾಗಿ ತಾನೊಬ್ಬನೇ ಹೊರಡುತ್ತಾನೆ. ಆಗ ಅವನು ಅಕಂಪನನಿಗೆ ಹೇಳುವ ಮಾತು ಹೀಗಿದೆ: ಬಾಢಂ ಕಲ್ಯಂ ಗಮಿಷ್ಯಾಮಿ (೩೧.೩೩), “ಒಳ್ಳೆಯದು, ನಾಳೆ ಬೆಳಗ್ಗೆ ಹೊರಡುತ್ತೇನೆ”. ಇದು ಅಪ್ಪಟ ಲೋಕರೂಢಿಯ ನುಡಿ. ಇಂಥವೆಲ್ಲ ಸಂಸ್ಕೃತದ ವ್ಯಹಾರ್ಯತೆಯನ್ನು ಲಕ್ಷಿಸುತ್ತವೆ.

ಶೂರ್ಪಣಖೆಯ ಅಹವಾಲನ್ನು ಕೇಳುತ್ತ ರಾವಣನು ಮುನಿದು “ರಾಮನೆಂದರೆ ಯಾರು? ಅವನ ಶಕ್ತಿ ಏನು? ಅವನು ನೋಡಲು ಹೇಗಿದ್ದಾನೆ? ಅವನ ಪರಾಕ್ರಮ ಎಂಥದ್ದು?” ಎಂದೆಲ್ಲ ಪ್ರಶ್ನಿಸುತ್ತಾನೆ: ಕಶ್ಚ ರಾಮಃ ಕಥಂವೀರ್ಯಃ ಕಿಂರೂಪಃ ಕಿಂಪರಾಕ್ರಮಃ (೩೪.೨). ಇಲ್ಲಿಯ ಕಡೆಯ ಮೂರು ಪ್ರಶ್ನೆಗಳೂ ಸಂಸ್ಕೃತಭಾಷೆಯಲ್ಲಿ ಸೊಗಸಾದ ವಾಗ್ರೂಢಿಗಳೆನಿಸಿವೆ.

ರಾವಣನು ಪುಷ್ಪಕವಿಮಾನದಲ್ಲಿ ಬರುತ್ತ “ಆನೆ-ಕುದುರೆ-ರಥಗಳಿಂದ ಕಿಕ್ಕಿರಿದ ಊರುಗಳನ್ನು ನೋಡಿದನು” ಎನ್ನುವಾಗ ಹಸ್ತ್ಯಶ್ವರಥಗಾಢಾನಿ ನಗರಾಣಿ (೩೫.೩೬) ಎಂಬ ಒಕ್ಕಣೆಯಿದೆ. ಇಲ್ಲಿ “ಕಿಕ್ಕಿರಿದ” ಎಂಬ ಅರ್ಥವನ್ನೀಯುವ “ಗಾಢ”ಶಬ್ದದ ಬಳಕೆ ತುಂಬ ರಸಮಯ.

ರಾಮನ ಹೆಸರನ್ನು ಕೇಳಿದೊಡನೆಯೇ ಮಾರೀಚನ ಬಾಯಿ ಒಣಗಿ ಅವನು ತನ್ನ ತುಟಿಗಳನ್ನು ನಾಲಗೆಯಿಂದ ಸವರಿಕೊಂಡನಂತೆ: ಓಷ್ಠೌ ಪರಿಲಿಹಞ್ ಶುಷ್ಕೌ (೩೬.೨೩). ಇದು ಅಪ್ಪಟವಾಗಿ ಲೋಕಾವೇಕ್ಷಣದ ಫಲ, ಮತ್ತು ಕಂಡದ್ದನ್ನು ಕಂಡಂತೆಯೇ ಹೇಳುವ ಬಗೆ.

ಮಾರೀಚನು ರಾವಣನಿಗೆ ಅಪ್ರಿಯವಾದ ಹಿತವನ್ನು ಹೇಳುವಾಗ್ “ನೀನು ಯುದ್ಧದಲ್ಲಿ ಎಂದಾದರೂ ರಾಮನ ಕಣ್ಣಿಗೆ ಬಿದ್ದರೆ ಅಲ್ಲಿಗೆ ನಿನ್ನ ಕಥೆ ಮುಗಿಯಿತೆಂದು ತಿಳಿ” ಎಂದು ಎಚ್ಚರಿಸುತ್ತಾನೆ: ದೃಷ್ಟಶ್ಚೇತ್ತ್ವಂ ರಣೇ ತೇನ ತದಂತಂ ತವ ಜೀವಿತಮ್ (೩೭.೨೧). ಇದಂತೂ ನಾವೆಲ್ಲ ಇಂದಿಗೂ ಬಳಸುವ ಮಾತುಗಳ ಮೂಲವೇ ಆಗಿದೆ. ಮುಂದೆ, ತಾನು ರಾಮನ ಎಳೆವೆಯಲ್ಲಿಯೇ ಅವನ ಪರಾಕ್ರಮವನ್ನು ಕಂಡವನೆಂದು ಹೇಳುವಾಗ ಪೌಗಂಡವಯಸ್ಸಿನ ರಾಮನನ್ನು ಅಜಾತವ್ಯಂಜನಃ (೩೮.೧೪) ಎಂದು ವರ್ಣಿಸುತ್ತಾನೆ. ಈ ಮಾತಿಗೆ “ಯೌವನದ ಕುರುಹಗಳು ಮೂಡದವನು” ಎಂದರ್ಥ. ಇದೊಂದು ನುಡಿಗಟ್ಟು.

ಖರನು ಅಂಕೆಯಿಲ್ಲದೆ ರಾಮನ ಮೇಲೆ ನುಗ್ಗಿ ಸತ್ತನೆಂದು ಮಾರೀಚ ಹೇಳುವಾಗ ಅತಿವೃತ್ತಃ (೩೯.೨೪) ಎಂಬ ಮಾತು ಬಳಕೆಯಾಗಿದೆ. ಇದು ಎಲ್ಲೆ ಮೀರಿ ವರ್ತಿಸುವುದರ ಸಂಕೇತ. ಹಾಗೆಯೇ ಅವನು ರಾಮನ ನಿಃಸ್ಪೃಹತೆಯನ್ನು ವರ್ಣಿಸುತ್ತ ಆತ ಚಿಕ್ಕಮ್ಮನ ದುರಾಶೆಯ ಮಾತಿಗೂ ತಲೆಬಾಗಿ ಒಮ್ಮೆಲೇ ಕಾಡಿಗೆ ಹೊರಟ ಪರಿಯನ್ನು ನೆನೆಯುತ್ತಾನೆ. ಆಗ ವನಮೇಕಪದೇ ಗತಃ (೪೦.೫) ಎಂಬ ಪದಪುಂಜದ ಬಳಕೆಯಾಗಿದೆ. ಇದೊಂದು ಒಳ್ಳೆಯ ನುಡಿಗಟ್ಟು. ಇದನ್ನೆಲ್ಲ ಕೇಳಿದ ರಾವಣ ಮಾರೀಚನನ್ನು ಮಾಯಾಮೃಗವಾಗಲು ಒಡಂಬಡಿಸುವಾಗ ಬೆದರಿಕೆಯನ್ನೂ ಒಡ್ಡುತ್ತಾನೆ: “ನೀನು ನನ್ನ ಮಾತಿಗೆ ಎದುರಾದರೆ ನಿನ್ನ ಬದುಕೇ ಅತಂತ್ರವಾಗುತ್ತದೆ!” ಆಗ ಜೀವಿತಸಂಶಯಃ (೪೦.೨೭) ಎಂಬ ಪದ ಪ್ರಯುಕ್ತವಾಗಿದೆ. ಇದೊಂದು ಚೆಲುವಾದ ವಾಗ್ರೂಢಿ.

ತನ್ನ ಒಡಂಬಡಿಕೆಯನ್ನು ಒಪ್ಪಿದ ಮಾರೀಚನಿಗೆ ರಾವಣ ಹೀಗೆ ಅಭಿನಂದನೆ ಸಲ್ಲಿಸುತ್ತಾನೆ: ಏತಚ್ಛೌಂಡೀರ್ಯಯುಕ್ತಂ ತೇ ಮಚ್ಛಂದಾದಿವ ಭಾಷಿತಮ್ । ಇದಾನೀಮಸಿ ಮಾರೀಚಃ ಪೂರ್ವಮನ್ಯೋ ನಿಶಾಚರಃ (೪೨.೬). ಇದನ್ನು ವಿದ್ವಾನ್ ರಂಗನಾಥಶರ್ಮರು ಪರಿಣಾಮಕಾರಿಯಾಗಿ ಹೀಗೆ ಭಾಷಾಂತರಿಸಿದ್ದಾರೆ: “ಭಲಾ! ಇದೀಗ ಗಂಡಸುತನದ ಮಾತು! ನನ್ನ ಅಭಿಪ್ರಾಯಕ್ಕೆ ತಕ್ಕಂತಹ ಮಾತು! ಈಗ ನೀನು ನಿಜವಾದ ಮಾರೀಚನಾದೆ! ಇಷ್ಟು ಹೊತ್ತು ಬೇರೊಬ್ಬ ರಾಕ್ಷಸನಾಗಿದ್ದೆ!” ಮಾತಿಗೆ ಈ ಮಟ್ಟದ ನೈಜತೆಯ ಕಸುವನ್ನು ತಂದುಕೊಡುವುದು ಯಾವ ಅಭಿಜಾತಕವಿಗೂ ಕಷ್ಟ.

ಮಾರೀಚನು ರಾಮನನ್ನು ತುಂಬ ದೂರಕ್ಕೆ ಕೊಂಡೊಯ್ದ ಬಳಿಕ, ಇದೇ ಸರಿಯಾದ ಸಮಯವೆಂದು ರಾಮನ ಬಾಣಕ್ಕೆ ತುತ್ತಾಗಿ ಆಕ್ರಂದಿಸುತ್ತಾನೆ. ಆಗ ಪ್ರಾಪ್ತಕಾಲಮ್ (೪೪.೧೯) ಎಂಬ ನುಡಿಗಟ್ಟಿನ ಬಳಕೆಯಾಗಿದೆ. ಮೇಲ್ನೋಟಕ್ಕೆ “ಒದಗಿದ ಕಾಲ” ಎಂಬ ಅರ್ಥವನ್ನು ಹೊಂದಿದ್ದರೂ “ಸರಿಯಾದ ಸಮಯ” ಎಂಬ ತಾತ್ಪರ್ಯವನ್ನುಳ್ಳ ಕಾರಣ ಇದು ಸಂಸ್ಕೃತದ ವಾಗ್ವ್ಯವಹಾರರೀತಿಗೆ ಯುಕ್ತವಾದ ನಿದರ್ಶನ.

ಸೀತೆಯನ್ನು ಅಪಹರಿಸಲು ಮುಂದಾದ ರಾವಣ ಅವಳೆದುರು ತನ್ನ ಪ್ರತಾಪವನ್ನು ಕೊಚ್ಚಿಕೊಳ್ಳುವಾಗ, ರಾಮನು ತನ್ನೊಂದು ಬೆರಳಿಗೂ ಸಮನಲ್ಲವೆಂದು ಹೇಳುತ್ತಾನೆ: ಅಂಗುಲ್ಯಾ ನ ಸಮೋ ರಾಮಃ (೪೮.೧೯). ಇದು ನಾವೆಲ್ಲ ನಿತ್ಯಜೀವನದಲ್ಲಿ ಬಳಸುವ ಮಾತುಗಳಿಗೆ ಸಾಕ್ಷಾತ್ ಸಂವಾದಿ.

ಅಪಹೃತಳಾದ ಸೀತೆಯು ನೆರವಿಗಾಗಿ ಚೀತ್ಕರಿಸುತ್ತ ಪಂಚವಟಿಯ ಮರಗಳನ್ನು ಬೀಳ್ಕೊಟ್ಟು ಬೇಡುವಾಗ ಆಮಂತ್ರಯೇ ಜನಸ್ಥಾನೇ ಕರ್ಣಿಕಾರಾನ್ ಸುಪುಷ್ಪಿತಾನ್ (೪೯.೩೦) ಎನ್ನುತ್ತಾಳೆ. ಇಲ್ಲಿ ಪ್ರಯುಕ್ತವಾದ “ಆಮಂತ್ರಯೇ” ಎಂಬ ಶಬ್ದವು ಆಹ್ವಾನ, ಬೇಡಿಕೆ, ಬೀಳ್ಕೊಡುಗೆ ಮುಂತಾದ ಹಲವು ಅರ್ಥಗಳನ್ನು ಹೊಂದಿದ್ದು ಅವೆಲ್ಲ ಪ್ರಕೃತದಲ್ಲಿ ಸಂಗತವಾಗಿರುವುದು ಒಳ್ಳೆಯ ವಾಗ್ರೂಢಿಗೆ ನಿದರ್ಶನ.

ಜಟಾಯುವನ್ನು ಕಂಡು ಕೆರಳಿದ ರಾವಣನ ಇಪ್ಪತ್ತು ಕಣ್ಣುಗಳೂ ಕೆಂಡವಾದುವಂತೆ. ಇದನ್ನು ಆದಿಕವಿಗಳು ರೇಜುರ್ವಿಂಶತಿದೃಷ್ಟಯಃ (೫೧.೧) ಎಂದು ಬಣ್ಣಿಸಿದ್ದಾರೆ. ಸಂಸ್ಕೃತವ್ಯಾಕರಣವು ಪ್ರಸಿದ್ಧಿಯಿಲ್ಲದ ಸಂಖ್ಯಾವಾಚಕವನ್ನು ಸಮಾಸದಲ್ಲಿ ಬೆಸೆಯುವುದಕ್ಕೆ ಸಂಮತಿ ನೀಡದು. ಆದರೆ ಇಲ್ಲಿ ಆ ನಿಯಮದ ಉಲ್ಲಂಘನೆಯಾಗಿದೆ. ಈ ಬಗೆಯ ನಿಯಮೋಲ್ಲಂಘನವೂ ಆಡುನುಡಿಯ ಒಂದು ವಿಶಿಷ್ಟಲಕ್ಷಣ. ಇಂಥ ಅತಿಕ್ರಮಣವು ಶ್ರುತಿಹಿತವಾಗಿ, ಧ್ವನಿಪೂರ್ಣವಾಗಿ ಸಾಗಿದಲ್ಲಿ ಅದರಲ್ಲಿ ತನ್ನಂತೆಯೇ ಸೊಗಸು ಮೂಡುತ್ತದೆ. ಈ ಅಂಶವನ್ನೂ ಸದ್ಯದ ಪ್ರಯೋಗದಲ್ಲಿ ಪರಿಕಿಸಬಹುದು. ಇದೇ ಸಂದರ್ಭದಲ್ಲಿ ಜಟಾಯುವನ್ನು ಪತ್ತ್ರರಥ (೫೧.೪೬) ಎಂದು ಹೆಸರಿಸಲಾಗಿದೆ. ಇದೊಂದು ಸೊಗಸಾದ ಸಾಧಿತರೂಪ. ರೆಕ್ಕೆಗಳನ್ನೇ ವಾಹನವಾಗಿ ಉಳ್ಳದ್ದು—ಅರ್ಥಾತ್ ಪಕ್ಷಿ—ಎಂಬುದು ಇದರ ತಾತ್ಪರ್ಯ. ಇಂಥ ಹತ್ತಾರು ವಿಶಿಷ್ಟಪ್ರಯೋಗಗಳು ವಾಲ್ಮೀಕಿಮನಿಗಳ ಬತ್ತಳಿಕೆಯಲ್ಲಿವೆ.

ರಾವಣನು ಸೀತೆಯ ಮುಡಿ ಹಿಡಿದು ಕದ್ದೊಯ್ದನೆನ್ನುವಾಗ ಕೇಶೇಷು ಜಗ್ರಾಹ (೫೨.೧೦) ಎಂಬ ಪದಪುಂಜ ಬಳಕೆಯಾಗಿದೆ. ಇದೊಂದು ಸಂಸ್ಕೃತದ ವಾಗ್ರೂಢಿ. ಕಾರಕಪ್ರಕರಣದಲ್ಲಿ ಇದರ ಸ್ವಾರಸ್ಯ ಚರ್ಚಿತವಾಗಿದೆ. ದ್ವಿತೀಯಾವಿಭಕ್ತಿಯ ಕರ್ಮಕಾರಕಕ್ಕೆ ಬದಲಾಗಿ ಸಪ್ತಮೀವಿಭಕ್ತಿಯ ಅಧಿಕರಣಕಾರಕವು ಇಂಥ ಸಂದರ್ಭಗಳಲ್ಲಿ ಬರುವುದು ಆಡುನುಡಿಯ ಬೆಡಗಿಗೊಂದು ಲಕ್ಷಣ.

ಅಶೋಕವನದಲ್ಲಿ ಸೀತೆಯನ್ನು ಪ್ರಲೋಭಿಸುವ ರಾವಣ ತನ್ನನ್ನು ಬ್ರಹ್ಮಮಾನಸಪುತ್ರರಾದ ಮಹರ್ಷಿಗಳ ವಂಶದಲ್ಲಿ ಜನಿಸಿದವನೆಂದು ಬಣ್ಣಿಸಿಕೊಳ್ಳುವ ಬಗೆ ಮೆಚ್ಚುವಂತಿದೆ: ಆರ್ಷೋऽಯಂ ದೈವನಿಷ್ಯಂದಃ (೫೫.೩೫). ಇದನ್ನು ಯಥಾವತ್ತಾಗಿ ಅನುವಾದಿಸುವುದು ಕಷ್ಟ. ಇದರ ಸ್ವಾರಸ್ಯವನ್ನು ಸಂಸ್ಕೃತಭಾಷೆಯ ಬಲ್ಲಿದರಷ್ಟೇ ಬಲ್ಲರು. ಇಂಥ ಉಕ್ತಿವೈಚಿತ್ರ್ಯವನ್ನು ಮುಂದೆ ಭವಭೂತಿಯಂಥ ಗಂಭೀರಪ್ರವೃತ್ತಿಯ ಕವಿಗಳು ಅನುಕರಿಸುದುದನ್ನು ನೆನೆಯಬಹುದು. ಇದೇ ಸಂದರ್ಭದಲ್ಲಿ ಸೀತೆ ರಾವಣನೊಡನೆ ಹುಲ್ಲುಕಡ್ಡಿಯನ್ನು ಅಡ್ಡವಿಟ್ಟುಕೊಂಡು ಮಾತನಾಡಿದುದು ಪ್ರಸಿದ್ಧವಾಗಿದೆ: ತೃಣಮ್ ಅಂತರತಃ ಕೃತ್ವಾ ರಾವಣಂ ಪ್ರತ್ಯಭಾಷತ (೫೬.೧). ಇದರ ಧ್ವನಿಪೂರ್ಣತೆ ಅದೆಷ್ಟು ವಿಖ್ಯಾತವೆಂದರೆ ಮುಂದೆ ಎಲ್ಲ ಭಾಷಗಳಲ್ಲಿಯೂ ಈ ಮಾತು ನುಡಿಗಟ್ಟಂತೆ ಬಳಕೆಯಾಯಿತು.

ಸೀತೆಯನ್ನು ಕಳೆದುಕೊಂಡ ರಾಮ ಸಂಕಟದಿಂದ ಹಲುಬುವಾಗ ಸೀತಾವಿಯೋಗದಲ್ಲಿಯೇ ತಾನು ಅಳಿದರೆ ತಾಯಿ ಕೌಸಲ್ಯೆ ನಿಃಸಹಾಯಳಾಗಿ ಕೈಕೇಯಿಯ ಸೇವೆ ಮಾಡುವ ದುರ್ವಿಧಿ ಬರುವುದಿಲ್ಲ ತಾನೆ! ಎಂದು ಲಕ್ಷ್ಮಣನಲ್ಲಿ ಹೇಳಿಕೊಳ್ಳುತ್ತಾನೆ: ಉಪಸ್ಥಾಸ್ಯತಿ ಕೌಸಲ್ಯಾ ಕಚ್ಚಿತ್ ಸೌಮ್ಯ ನ ಕೈಕಯೀಮ್ (೫೮.೮). ಇಲ್ಲಿ “ಉಪಸ್ಥಾನ”ವೆಂಬುದಕ್ಕೆ ಉಪಾಸನೆ, ಸೇವೆ ಎಂಬೆಲ್ಲ ಅರ್ಥಗಳಿವೆ. ಈ ಇಡಿಯ ವಾಕ್ಯದಲ್ಲಿ ಕಾಕುವಿನ ಮೂಲಕ ರಾಮನು ಇಂಥ ದುಃಸ್ಥಿತಿ ತನ್ನ ತಾಯಿಗೆ ಬರುವುದಿಲ್ಲವಷ್ಟೆ ಎಂಬ ಇಂಗಿತದಿಂದ ಪ್ರಶ್ನಿಸಿದಂತೆ “ಕಚ್ಚಿತ್” ಎಂಬ ಶಬ್ದ ಬಳಕೆಗೊಂಡಿದೆ. ಅಲ್ಲದೆ, ಛಂದಸ್ಸಿಗಾಗಿ “ಕೈಕೇಯೀ” ಎಂಬ ಪದ “ಕೈಕಯೀ” ಎಂದಾಗಿರುವುದು ಗಮನಾರ್ಹ. ಇವೆಲ್ಲ ರಾಮಾಯಣದ ನಿಸರ್ಗರಮಣೀಯವಾದ ಭಾಷೆಗೆ ಸಾಕ್ಷಿ.

ಸೀತೆಯು ತನ್ನನ್ನು ಒತ್ತಾಯದಿಂದ ರಾಮಾನ್ವೇಷಣಕ್ಕಾಗಿ ಕಳುಹಿದ ಕ್ರಮವನ್ನು ಲಕ್ಷ್ಮಣನು ರಾಮನಿಗೆ ಹೇಳುತ್ತಾನೆ. ಆಗ ಅತ್ತಿಗೆಗೆ ತಾನೆಷ್ಟು ಧೈರ್ಯ ಹೇಳಿದರೂ ಅವಳು ಒಪ್ಪಲಿಲ್ಲ; ರಾಮನನ್ನು ಸೋಲಿಸುವಂಥ ವೀರನು ಹಿಂದೆ ಹುಟ್ಟಲಿಲ್ಲ, ಮುಂದೆ ಹುಟ್ಟಲಾರ ಎಂದು ಸಮರ್ಥಿಸಿದರೂ ಸುಮ್ಮನಾಗಲಿಲ್ಲವೆಂದು ನಿವೇದಿಸುವಾಗ ಜಾತೋ ವಾ ಜಾಯಮಾನೋ ವಾ ಸಂಯುಗೇ ಯಃ [ರಾಮಂ] ಪರಾಜಯೇತ್ (೫೯.೧೫) ಎಂಬ ವಾಕ್ಯ ಬರುತ್ತದೆ. ಇದು ಅಪ್ಪಟ ಲೋಕರೂಢಿಯ ಮಾತು. ಇದಕ್ಕಿರುವ ಕಸುವು ಅಪಾರ. ಆಗಲೇ ಮತ್ತೂ ಮುಂದುವರಿದು ಸೀತೆ “ನೀನು ಭರತನೊಡನೆ ಒಳಸಂಚು ಮಾಡಿ ರಾಮನನ್ನು ಹಿಂಬಾಲಿಸಿದ್ದೀಯೆ. ಇಲ್ಲವಾದಲ್ಲಿ ಅವನಿಷ್ಟು ಸಂಕಟ ಪಟ್ಟು ಕೂಗುವಾಗಲೂ ಅದು ಹೇಗೆ ತಾನೆ ಅವನ ಬಳಿ ಹೋಗದೆ ಸುಮ್ಮನಿದ್ದೀಯೆ!” ಎಂದು ತನ್ನನ್ನು ದೂಷಿಸಿದ ಸನ್ನಿವೇಶವನ್ನು ಲಕ್ಷ್ಮಣ ಹೇಳಿಕೊಳ್ಳುತ್ತಾನೆ: ಸಂಕೇತಾದ್ ಭರತೇನ ತ್ವಂ ರಾಮಂ ಸಮನುಗಚ್ಛಸಿ । ಕ್ರೋಶಂತಂ ಹಿ ಯಥಾತ್ಯರ್ಥಂ ನೈನಮಭ್ಯವಪದ್ಯಸೇ (೫೯.೧೮). ಈ ವಾಕ್ಯ ಆಡುನುಡಿಯ ಸೊಗಡನ್ನು ಚೆನ್ನಾಗಿ ತುಂಬಿಕೊಂಡಿದೆ. ಈ ಮೂಲಕವೇ ಮಾತಿಗೆ ಎಲ್ಲಿಲ್ಲದ ಮೊನಚು ದಕ್ಕಿದೆ.

ಶಬರಿಯು ಮತಂಗಮಹರ್ಷಿಗಳ ಮಾಹಾತ್ಮ್ಯವನ್ನು ರಾಮನಿಗೆ ತಿಳಿಸುತ್ತ “ನೀನೀಗ ಕೇಳಬೇಕಾದುದನ್ನು ಕೇಳಿದ್ದೀಯೆ” ಎನ್ನುತ್ತಾಳೆ: ಶ್ರೋತವ್ಯಂ ಚ ಶ್ರುತಂ ತ್ವಯಾ (೭೪.೨೮). ಅನಂತರದ ಸಂಸ್ಕೃತಸಾಹಿತ್ಯದಲ್ಲಿ “ಶ್ರುತಂ ಶ್ರೋತವ್ಯಮ್” ಎಂಬುದೊಂದು ಆಕರ್ಷಕವಾದ ನುಡಿಗಟ್ಟಾಗಿ ಚಿರಂಜೀವಿಯೆನಿಸಿದೆ. ಆ ಬಳಿಕ ಪುಣ್ಯಲೋಕಗಳಿಗೆ ತೆರಳಲಿರುವ ಆಕೆಗೆ ರಾಮ ಹೃದ್ಯವಾದ ವಿದಾಯ ಹೇಳುತ್ತಾನೆ: ಗಚ್ಛ ಕಾಮಂ ಯಥಾಸುಖಮ್ (೭೪.೩೦), “ನಿನ್ನಿಚ್ಛೆ ಬಂದಲ್ಲಿಗೆ ಸುಖವಾಗಿ ಸಾಗು”. ಇದೂ ಸಹ ಮುಂದೆ ಸಮೃದ್ಧವಾಗಿ ಬಳಕೆಯಾಗಿದೆ.

[[ವಾಲ್ಮೀಕಿಮುನಿಗಳ ವಾಗ್ವಿಲಾಸ - 5 Source: prekshaa]]

ಕಿಷ್ಕಿಂಧಾಕಾಂಡ

ಈ ಕಾಂಡದ ಆರಂಭದಲ್ಲಿಯೇ ಸುಗ್ರೀವನು ರಾಮ-ಲಕ್ಷ್ಮಣರನ್ನು ದೂರದಿಂದ ಕಂಡು ಅವರು ವಾಲಿಯ ಗೂಢಚಾರರಾಗಿರಬಹುದೆಂದು ಭ್ರಮಿಸಿ ಕಳವಳಗೊಳ್ಳುತ್ತಾನೆ. “ಇಂಥ ಜನರು ತಾವು ಮಾತ್ರ ನಂಬದೆ ನಮ್ಮಲ್ಲಿ ನಂಬಿಕೆಯನ್ನು ಹುಟ್ಟಿಸಿ ಅನಂತರ ನಮ್ಮ ದುರ್ಬಲಸ್ಥಾನಗಳನ್ನು ಘಾತಿಸುತ್ತಾರೆ” ಎಂದು ಹನೂಮಂತನಿಗೆ ಹೇಳುತ್ತಾನೆ: ವಿಶ್ವಸ್ತಾನಾಮವಿಶ್ವಸ್ತಾ ರಂಧ್ರೇಷು ಪ್ರಹರಂತಿ (೨.೨೨). ಇಡಿಯ ಈ ವಾಕ್ಯವೇ ಒಳ್ಳೆಯ ವಾಚೋಯುಕ್ತಿಗೆ ನಿದರ್ಶನವೆನ್ನಬಹುದು. ಇಂದಿಗೂ ಇಂಥ ಮಾತುಗಳು ಲೋಕರೂಢಿಯಲ್ಲಿವೆ. ಸುಗ್ರೀವನೇ ಮುಂದೆ ವಾಲಿಯ ಧೂರ್ತತೆಯನ್ನು ಪ್ರಸ್ತಾವಿಸುತ್ತ, ದೊರೆಗಳು ಬಗೆಬಗೆಯ ಉಪಾಯಗಳನ್ನು ಬಲ್ಲವರೆನ್ನುತ್ತಾನೆ: ರಾಜಾನೋ ಬಹುದರ್ಶನಾಃ (೨.೨೩). ಇದೊಂದು ಸಶಕ್ತವಾದ ನುಡಿಗಟ್ಟು.

ಸುಗ್ರೀವನು ರಾಮನಲ್ಲಿ ಸಖ್ಯವನ್ನು ಬಯಸುತ್ತ, “ನಿನಗೆ ನನ್ನ ಗೆಳೆತನ ಬೇಕಿದ್ದಲ್ಲಿ, ಇದೋ ನನ್ನ ಕೈ ಚಾಚಿದ್ದೇನೆ” ಎನ್ನುತ್ತಾನೆ: ರೋಚತೇ ಯದಿ ವಾ ಸಖ್ಯಂ ಬಾಹುರೇಷ ಪ್ರಸಾರಿತಃ (೫.೧೨). ಇದಂತೂ ಮೈತ್ರಿಗಾಗಿ ಕೈಕುಲುಕುವ ಭಾವವನ್ನು ಧ್ವನಿಸುವಂಥ ರಸಮಯವಾದ ವಾಗ್ರೂಢಿ. ಮುಂದೆ ಪರಸ್ಪರ ಕೈ-ಕೈ ಬೆಸೆಯುವುದನ್ನೂ ಆದಿಕವಿಗಳು ಹೇಳಿರುವುದು ಗಮನಾರ್ಹ: ಹಸ್ತಂ ಪೀಡಯಾಮಾಸ ಪಾಣಿನಾ (೫.೧೩).

ಸುಗ್ರೀವನು ರಾಮನೊಡನೆ ಮಾತನಾಡುತ್ತ ವಾಲಿಯಿಂದ ತನಗೊದಗಿದ ಭಯವನ್ನು ವಿಸ್ತರಿಸುತ್ತ, “ಭಯಕ್ಕೆ ಎಲ್ಲರೂ ಭಯಪಡುತ್ತಾರೆ” ಎನುತ್ತಾನೆ: ಭಯೇ ಸರ್ವೇ ಹಿ ಬಿಭ್ಯತಿ (೮.೩೫). ಇದೊಂದು ಚಮತ್ಕಾರಪೂರ್ಣವಾದ ನುಡಿಬೆಡಗು. ಇಲ್ಲಿ ಭಯಕಾರಕವಾಗುವ ಸಂಗತಿಯನ್ನೇ ಭಯವೆಂದು ಹೇಳಿರುವುದೊಂದು ಸ್ವಾರಸ್ಯ.

ವಾಲಿ ಮತ್ತು ಮಾಯಾವಿಗಳ ಸೆಣಸಾಟ ಗುಹೆಯೊಳಗೆ ಸಾಗಿದ್ದಾಗ ಅಲ್ಲಿಂದ ರಕ್ತದ ಹೊಳೆ ಹರಿದದ್ದನ್ನು ಕಂಡು ಅಂಜಿದ ಸುಗ್ರೀವ ಗವಿಯ ಬಾಯಿಗೆ ಬೆಟ್ಟದಂಥ ಬಂಡೆಯೊಂದನ್ನಿಟ್ಟು ಓಡಿಬರುತ್ತಾನೆ: ಪಿಧಾಯ ಚ ಬಿಲದ್ವಾರಂ ಶಿಲಯಾ ಗಿರಿಮಾತ್ರಯಾ (೯.೧೯). ಸಾಮಾನ್ಯವಾಗಿ “ಮಾತ್ರ”ಶಬ್ದವನ್ನು ಹೀಗೆ ಸಮಾಸದಲ್ಲಿ ಬಳಿಸಿದಾಗ ಸಣ್ಣ ಪ್ರಮಾಣವನ್ನು ಸೂಚಿಸುತ್ತದೆ. ಆದರೆ ಇಲ್ಲಿ ಬೆಟ್ಟದ ಗಾತ್ರದ ಬಂಡೆಯನ್ನು ವರ್ಣಿಸುವಾಗ ಇಂಥ ಪ್ರಯೋಗವಾಗಿರುವುದು ಚೋದ್ಯ. ಇದು ಸುಗ್ರೀವನ ಗಾಬರಿಯನ್ನು ಧ್ವನಿಸುತ್ತದೆಂದು ಹೇಳಬಹುದು!

ಸುಗ್ರೀವನ ಸಂಕಟವನ್ನೆಲ್ಲ ಕೇಳಿದ ರಾಮನು “ಎಲ್ಲಿಯವರೆಗೆ ವಾಲಿಯು ತನ್ನ ಕಣ್ಣಿಗೆ ಬೀಳುವುದಿಲ್ಲವೋ ಅಲ್ಲಿಯವರೆಗೆ ಮಾತ್ರ ಆ ಕೆಟ್ಟ ನಡತೆಯವನು ಬದುಕಿರುತ್ತಾನೆ” ಎಂದು ಸಮಾಧಾನ ಹೇಳುತ್ತಾನೆ: ಯಾವತ್ತಂ ನಾಭಿಪಶ್ಯಾಮಿ ತವ ಭಾರ್ಯಾಪಹಾರಿಣಮ್ । ತಾವತ್ಸ ಜೀವೇತ್ ಪಾಪಾತ್ಮಾ ವಾಲೀ ಚಾರಿತ್ರ್ಯದೂಷಕಃ (೧೦.೩೩). ಈ ಮಾತು ನಮ್ಮ ಇಂದಿನ ವಾಗ್ರೂಢಿಗಳನ್ನೇ ನೆನಪಿಸುವಂತಿದೆ.

ದುಂದುಭಿಯು ವಾಲಿಯನ್ನು ಗೇಲಿ ಮಾಡುವಾಗ, “ನನ್ನೊಡನೆ ಯುದ್ಧಕ್ಕೆ ಮುನ್ನ ನೀನು ನಿನ್ನ ವಾನರಬಂಧುಗಳನ್ನೆಲ್ಲ ಅಪ್ಪಿ ಬಹೂಕರಿಸಿ ಬೀಳ್ಗೊಟ್ಟು ಬಾ” ಎನ್ನುತ್ತಾನೆ: ದೀಯತಾಂ ಸಂಪ್ರದಾನಂ ಚ ಪರಿಷ್ವಜ್ಯ ಚ ವಾನರಾನ್ ಸರ್ವಶಾಖಾಮೃಗೇಂದ್ರಸ್ತ್ವಂ ಸಂಸಾದಯ ಸುಹೃಜ್ಜನಮ್ (೧೧.೩೪). ಇಲ್ಲಿ “ಸಂಪ್ರದಾನ” ಮತ್ತು “ಸಂಸಾದಯ” ಶಬ್ದಗಳಿಗೆ “ಉಡುಗೊರೆ” ಹಾಗೂ “ಬೀಳ್ಕೊಡು” ಎಂಬ ಅರ್ಥಗಳುಂಟು. ಇವು ಹೆಚ್ಚಾಗಿ ವಾಗ್ರೂಢಿಗೆ ಸಂಬಂಧಿಸಿವೆ. ಎರಡನೆಯ ಶಬ್ದಕ್ಕೆ “ಸಂಸಾಧಯ” ಎಂಬ ಪಾಠಾಂತರವೂ ಉಂಟು. ಇದು ಬೀಳ್ಕೊಡುಗೆಯನ್ನು ನೇರವಾಗಿ ಹೇಳುತ್ತದೆ. ಇಲ್ಲಿಯೇ ವೀರಪಾಣಮ್ (೧೧.೩೮) ಎಂಬ ಶಬ್ದ ಬಳಕೆಯಾಗಿದೆ. ಇದು ಯುದ್ಧದಲ್ಲಿ ವೀರಯೋಧರು ಉತ್ಸಾಹವರ್ಧನೆಗಾಗಿ ಮಾಡುತ್ತಿದ್ದ ಮದ್ಯಪಾನದ ಹೆಸರು. ಯಾವುದು ಕರ್ತವ್ಯಚ್ಯುತರಾಗುವ ಮಟ್ಟಿಗೆ ಅಮಲೇರದ ಹಾಗೆ ಸ್ವೀಕರಿಸಬೇಕಾದ ಉತ್ತೇಜಕಪಾನವೋ ಅದುವೇ “ವೀರಪಾಣ”.

ವಾಲಿಯೊಡನೆ ಸೆಣಸುವ ಸುಗ್ರೀವನು ಬವಳಿ ಬಸವಳಿದು ದಿಕ್ಕುದಿಕ್ಕು ನೋಡುತ್ತಿದ್ದನೆಂಬ ವರ್ಣನೆ ಬರುತ್ತದೆ: ಪ್ರೇಕ್ಷಮಾಣಂ ದಿಶಃ (೧೬.೩೧). ಇದು ಇಂದಿಗೂ ಬಳಕೆಯಲ್ಲಿರುವ ವಾಗ್ರೂಢಿ. ಇದರ ಸ್ವಾರಸ್ಯ ಸರ್ವವೇದ್ಯ.

ವಾಲಿಯು ರಾಮನನ್ನು ಆಕ್ಷೇಪಿಸುವಾಗ “ನೀನು ನಿನ್ನೊಡನೆ ಯುದ್ಧಕ್ಕೆ ಬಾರದಿದ್ದ ನನ್ನನ್ನು ಕೊಂದಿರುವೆ” ಎನ್ನುತ್ತಾನೆ. ಆಗ ಪರಾಙ್ಮುಖವಧ (೧೭.೧೫) ಎಂಬ ಪದ ಬಳಕೆಯಾಗಿದೆ. ಬಹ್ವರ್ಥಗ್ರಾಸಿಯಾದ ಈ ಮಾತು ತನ್ನ ಅಡಕ ಮತ್ತು ಮೊನಚುಗಳಿಂದ ರಸ್ಯವೆನಿಸಿದೆ. ಇಲ್ಲಿಯೇ ಅವನು ರಾಮನನ್ನು ಧರ್ಮಧ್ವಜ (೧೭.೨೦) ಎಂದು ನಿಂದಿಸುತ್ತಾನೆ. ಮನ್ವಾದಿಸ್ಮೃತಿಗಳಲ್ಲಿ ಪ್ರಸಿದ್ಧವಾದ ಈ ಮಾತು ಸಶಕ್ತ ವಾಚೋಯುಕ್ತಿಗಳಲ್ಲಿ ಒಂದು. ಪತಾಕೆಯು ಅಂಗೈಯಗಲದಲ್ಲಿ ನೆಲೆಯೂರಿದ ಕಂಬದ ಮೇಲೆ ನಿಂತು ಹಾರಾಡುತ್ತ ಗಾವುದ-ಗಾವುದ ದೂರದಿಂದಲೂ ತನ್ನ ಅಸ್ತಿತ್ವವನ್ನು ಸಾರುತ್ತದಷ್ಟೆ. ಇದೇ ರೀತಿ ಸ್ವಲ್ಪಮಾತ್ರದ ಒಳಿತಿನಲ್ಲಿ ನಿಂತು ತುಂಬ ಆಡಂಬರ ಮಾಡುವವರನ್ನು “ಧರ್ಮಧ್ವಜ”ರೆಂದು ಹೀಗಳೆಯುವುದುಂಟು. ಇಂಥದ್ದೇ ಅರ್ಥವುಳ್ಳ ಮತ್ತೊಂದು ಮಾತು ಧರ್ಮಲಿಂಗಪ್ರತಿಚ್ಛನ್ನ (೧೭.೨೬). ಧಾರ್ಮಿಕವಾದ ವೇಷದೊಳಗೆ ತಮ್ಮನ್ನು ಮರೆಮಾಚಿಕೊಂಡವರನ್ನು ಹೀಗೆ ಹಳಿಯುತ್ತಾರೆ. ವಾಲಿ ಮತ್ತೂ ಮುಂದುವರಿದು “ರಾಜರ ವರ್ತನೆಗಳು ಗೋಜಲಾಗಬಾರದು” ಎಂದು ಹೇಳುತ್ತಾನೆ: ರಾಜವೃತ್ತಿರಸಂಕೀರ್ಣಾ (೧೭.೩೧). ಇಲ್ಲಿ “ಅಸಂಕೀರ್ಣ” ಎಂಬ ಪದವು ಲಾಕ್ಷಣಿಕವಾಗಿ ಬಳಕೆಯಾಗಿದೆ.

ವಾಲಿ ಸಾಯುವ ಮುನ್ನ ರಾಮನನ್ನು ಹೀಗೆ ಬೇಡಿಕೊಳ್ಳುತ್ತಾನೆ: “ನನ್ನ ತಪ್ಪಿಗಾಗಿ ಸುಗ್ರೀವನು ತಾರೆಯನ್ನು ತಪ್ಪನ್ನೆಸಗಿದವಳೆಂಬಂತೆ ಭಾವಿಸಿಯಾನು; ಹಾಗೆ ಆಗದಂತೆ ನೀನು ದಯಮಾಡಿ ಗಮನಿಸಿಕೋ”. ಈ ಸಂದರ್ಭದಲ್ಲಿ ಮದ್ದೋಷಕೃತದೋಷಾಮ್ (೧೮.೫೬) ಎಂಬ ಸಮಾಸವನ್ನು ಆದಿಕವಿಗಳು ಬಳಿಸಿದ್ದಾರೆ. ಇದರ ಅರ್ಥವನ್ನು ತಾತ್ಪರ್ಯದಿಂದ ಗ್ರಹಿಸಬೇಕು. ಇಲ್ಲಿ ಆಡುನುಡಿಯ ಸಲುಗೆ ಕಾಣಸಿಗುತ್ತದೆ.

ವಾಲಿಯ ಮರಣದ ಬಳಿಕ ವಾನರರು ತಾರೆಗೆ ಹೀಗೆ ಎಚ್ಚರಿಕೆ ಹೇಳುತ್ತಾರೆ: “ನಿನ್ನ ಮಗನಿನ್ನೂ ಬದುಕಿರುವ ಕಾರಣ ನೀನು ಎಲ್ಲಿಗಾದರೂ ಪಲಾಯನ ಮಾಡಿ ಮಗನನ್ನು ಉಳಿಸಿಕೋ”: ಜೀವಪುತ್ರೇ ನಿವರ್ತಸ್ವ ಪುತ್ರಂ ರಕ್ಷಸ್ವ ಚಾಂಗದಮ್ (೧೯.೧೧). ಇಲ್ಲಿ ಬಳಕೆಯಾಗಿರುವ “ಜೀವಪುತ್ರಾ” ಎಂಬ ಸಮಾಸವು ತುಂಬ ವಿಲಕ್ಷಣ. ಇದು ವಾಗ್ರೂಢಿಯತ್ತ ತನ್ನ ತೋರ್ಬೆರಳನ್ನು ಚಾಚುತ್ತದೆ. ಇದೇ ರೀತಿ ವಾಲಿಯನ್ನು ಕುರಿತು ಶೋಕಿಸುವ ತಾರೆ ಅವನನ್ನು ಪ್ರಿಯಪುತ್ರ (೨೦.೨೪) ಎಂದು ಸಂಬೋಧಿಸುವ ಪರಿಯೂ ಗಮನಾರ್ಹ. ಮೇಲ್ನೋಟಕ್ಕಿದು “ಪ್ರೀತಿಪಾತ್ರನಾದ ಮಗನೇ” ಎಂಬ ಕರ್ಮಧಾರಯಸಮಾಸಮೂಲದ ಸಂದರ್ಭೋಚಿತವಲ್ಲದ ಅರ್ಥವನ್ನು ನೀಡಿದರೂ ಬಹುವ್ರೀಹಿಸಮಾಸದ ಮೂಲಕ “ಪ್ರೀತಿಪಾತ್ರನಾದ ಪುತ್ರನನ್ನು ಉಳ್ಳವನೇ” ಎಂಬ ಇಷ್ಟಾರ್ಥವೇ ಸಲ್ಲುತ್ತದೆ.

ವಾಲಿಯ ಸಾವಿಗಾಗಿ ದುಃಖಿಸುತ್ತಿದ್ದ ಸುಗ್ರೀವಾದಿಗಳನ್ನು ಸಾಂತ್ವಯಿಸುತ್ತ ರಾಮನು “ಇನ್ನು ಅತ್ತಿದ್ದು ಸಾಕು” ಎನ್ನುತ್ತಾನೆ: ಕೃತಂ ವೋ ಬಾಷ್ಪಮೋಕ್ಷಣಮ್ (೨೫.೩). “ಕೃತಂ” ಎಂಬ ಶಬ್ದವು ಯಾವುದಾದರೂ ಕ್ರಿಯೆಯೊಡನೆ ಸೇರಿ ಬಂದಾಗ ಆ ಕ್ರಿಯೆಯನ್ನಿನ್ನು ಮುಂದುವರಿಸುವುದು ಬೇಡವೆಂಬ ಅರ್ಥ ಬರುತ್ತದೆ. ಇದು ಸಂಸ್ಕೃತದ ವಿಶಿಷ್ಟವಾಗ್ರೂಢಿಗಳಲ್ಲೊಂದು. ಇದೇ ಸಂದರ್ಭದಲ್ಲಿ ರಾಮನು “ಲೋಕವೆಲ್ಲ ಕರ್ಮಾನುಗುಣವಾಗಿ ಸಾಗುತ್ತದೆ; ಅದಕ್ಕೆ ಕಾಲವೇ ಪರಮಾಶ್ರಯ” ಎನ್ನುತ್ತಾನೆ: ಸ್ವಭಾವೇ ವರ್ತತೇ ಲೋಕಸ್ತಸ್ಯ ಕಾಲಃ ಪರಾಯಣಮ್ (೨೫.೫). ಇಲ್ಲಿ “ಪರಾಯಣ”ವೆಂಬ ಪದವು “ಶ್ರೇಷ್ಠವಾದ ದಾರಿ” ಎಂಬ ಯೌಗಿಕಾರ್ಥವನ್ನು ಹೊಂದಿದ್ದರೂ “ಕೊನೆಯ ನೆಲೆ” ಎಂಬ ಲಕ್ಷ್ಯಾರ್ಥದಲ್ಲಿಯೇ ಪ್ರಸಿದ್ಧ.

ಮುಂದೆ ರಾಮ-ಲಕ್ಷ್ಮಣರು ಮಾಲ್ಯವತ್ಪರ್ವತದ ಪ್ರಸ್ರವಣಗುಹೆಯಲ್ಲಿ ಮಳೆಗಾಲವನ್ನು ಕಳೆಯಬೇಕಾಗಿ ಬರುತ್ತದೆ. ಆಗ ರಾಮನು ಆ ಗುಹೆಯ ಬಳಿ ಪೂರ್ವಾಭಿಮುಖವಾಗಿ ಹರಿಯುವ ನದಿಯನ್ನು ತಮ್ಮನಿಗೆ ತೋರಿಸುತ್ತಾನೆ. ಈ ಸಂದರ್ಭದಲ್ಲಿ ಪ್ರಾಚೀನವಾಹಿನೀ (೨೭.೧೬) ಎಂಬ ಪದ ಪ್ರಯುಕ್ತವಾಗಿದೆ. ಇದರ ಅರ್ಥ ಹಳೆಯ ನದಿಯೆಂದಲ್ಲ, “ಪೂರ್ವದಿಕ್ಕಿನ ಕಡೆ ಹರಿಯುವ ನದಿ” ಎಂದು. ಇಂಥ ಅಪೂರ್ವಪ್ರಯೋಗಗಳು ರಾಮಾಯಣದಲ್ಲಿ ಸಾಕಷ್ಟಿವೆ.

ಸುಗ್ರೀವನು ರಾಮನ ಕಾರ್ಯಕ್ಕೆ ಮುಂದಾಗದೆ ಅಗ್ಗದ ಭೋಗಗಳಲ್ಲಿ ಮಗ್ನನಾಗಿದ್ದಾನೆಂಬುದನ್ನು ಒಕ್ಕಣಿಸುವಾಗ ಗ್ರಾಮ್ಯಸುಖ (೩೦.೭೦) ಎಂಬ ಪದ ಬಳಕೆಯಾಗಿದೆ. ಸಂಸ್ಕೃತದಲ್ಲಿ “ಗ್ರಾಮ್ಯ”ವೆಂಬ ಶಬ್ದಕ್ಕೆ ಹಳ್ಳಿಯಿಂದ ಬಂದದ್ದೆಂಬ ಯೌಗಿಕಾರ್ಥವು ಎಂದೋ ಲುಪ್ತವಾಗಿ “ಅಗ್ಗದ”, “ಅಸಂಸ್ಕೃತವಾದ”, “ಮರ್ಯಾದೆಯಿಲ್ಲದ” ಎಂಬೆಲ್ಲ ಲಾಕ್ಷಣಿಕಾರ್ಥಗಳು ನೆಲೆಯಾಗಿವೆ. ಈ ಹಿನ್ನೆಲೆಯಲ್ಲಿಯೇ ಇದು ನುಡಿಗಟ್ಟೆಂಬಂತೆ ಬಳಕೆಗೊಂಡಿದೆ.

ಸುಗ್ರೀವನ ಉದಾಸೀನತೆಗೆ ಮುನಿದ ರಾಮ ತನ್ನ ರೂಕ್ಷಸಂದೇಶವನ್ನು ಲಕ್ಷ್ಮಣನ ಮೂಲಕ ಕಳಹುವಾಗ “ನನ್ನ ರೋಷಕ್ಕೆ ಅನುಗುಣವಾದ ಈ ಮಾತನ್ನು ಅವನಿಗೆ ಹೇಳು!” ಎಂದು ಆರಂಭಿಸುತ್ತಾನೆ: ಮಮ ರೋಷಸ್ಯ ಯದ್ರೂಪಂ ಬ್ರೂಯಾಶ್ಚೈನಮಿದಂ ವಚಃ (೩೦.೮೦). ವಸ್ತುತಃ ಇಲ್ಲಿ “ಯದ್ರೂಪಂ” ಎಂಬುದು “ಅನುರೂಪಂ” ಎಂಬುದಕ್ಕೆ ಸಂವಾದಿ. ಇದೊಂದು ಆಡುನುಡಿಯ ಸೊಗಸೆನ್ನಬಹುದು.

ಲಕ್ಷ್ಮಣನು ಅಣ್ಣನ ಮಾತನ್ನು ಸುಗ್ರೀವನಿಗೆ ತಿಳಿಸಲು ಹೊರಟಾಗ ಆದಿಕವಿಗಳು ಆತನನ್ನು ಯಥೋಕ್ತಕಾರೀ (೩೧.೧೨) ಎಂದು ವರ್ಣಿಸುತ್ತಾರೆ. “ಹೇಳಿದಂತೆ ಮಾಡುವವನು” ಯಥೋಕ್ತಕಾರಿ. ಹೀಗೆ ದಾಪಿಟ್ಟು ಬರುತ್ತಿದ್ದ ಲಕ್ಷ್ಮಣನನ್ನು ಕಂಡ ಕಿಷ್ಕಿಂಧೆಯ ವಾನರರು ಗೇಲಿ ಮಾಡಿದರಂತೆ. ಅದನ್ನು ಆದಿಕವಿಗಳು ಕಿಲಕಿಲಾಂಚಕ್ರುಃ (೩೧.೩೯) ಎಂದು ಒಕ್ಕಣಿಸಿದ್ದಾರೆ. ಇಲ್ಲಿಯ “ಕಿಲಕಿಲ”ಶಬ್ದ ನಮಗೆಲ್ಲ ಪರಿಚಿತವಾದ, ಎಲ್ಲ ಭಾಷೆಗಳಿಗೂ ಸಲ್ಲುವ ಅನುಕರಣಶಬ್ದ. ಸ್ವಾರಸ್ಯವಿರುವುದು ಕಿಲಕಿಲ ಎಂದು ನಕ್ಕರೆಂಬುದಾಗಿ ಹೇಳದೆ, ಕಿಲಕಿಲ ಮಾಡಿದರೆಂದು ಹೇಳುವಲ್ಲಿ!

ಆದಿಕವಿಗಳು ಮುನಿದ ಲಕ್ಷ್ಮಣನನ್ನು ಕಂಡು ಅಂಜಿದ ಸುಗ್ರೀವನನ್ನು ಬಣ್ಣಿಸುವಾಗ, ಅವನು ಧರಿಸಿದ ಹೂವಿನ ಹಾರಗಳೆಲ್ಲ ಕಳವಳಿಸಿದ್ದವೆಂದು ಚಮತ್ಕರಿಸುತ್ತಾರೆ: ವ್ಯಾಕುಲಸ್ರಗ್ವಿಭೂಷಣಃ (೩೧.೪೧). ಜಡವಾದ ಹಾರಕ್ಕೆ ವ್ಯಾಕುಲತೆಯೆಂಬ ಜೀವಭಾವವನ್ನು ಆರೋಪಿಸಿರುವುದು ಇಲ್ಲಿಯ ಸ್ವಾರಸ್ಯ. ಇದು ಉಪಚಾರವಕ್ರತೆ. ಈ ಸಂದರ್ಭದಲ್ಲಿ ಹನೂಮಂತನು ಬಂದು ಸುಗ್ರೀವನಿಗೆ, “ಗೆಳೆಯರೇನೋ ಸಿಕ್ಕುವುದು ಸುಲಭ. ಆದರೆ ಗೆಳೆತನವನ್ನು ಉಳಿಸಿಕೊಳ್ಳುವುದು ಕಷ್ಟ. ಏಕೆಂದರೆ ಜನರ ಮನಸ್ಸು ಚಂಚಲ. ಅಲ್ಪ-ಸ್ವಲ್ಪ ಕಾರಣಗಳಿಗಾಗಿಯೇ ಮೈತ್ರಿ ಮುರಿಯುತ್ತದೆ” ಎಂದು ವಿವೇಕ ಹೇಳುತ್ತಾನೆ: ಸರ್ವಥಾ ಸುಕರಂ ಮಿತ್ರಂ ದುಷ್ಕರಂ ಪರಿಪಾಲನಮ್ ಅನಿತ್ಯತ್ವಾತ್ತು ಚಿತ್ತಾನಾಂ ಪ್ರೀತಿರಲ್ಪೇऽಪಿ ಭಿದ್ಯತೇ (೩೨.೭). ಇಲ್ಲಿ ಮನಸ್ಸಿಗೆ ಅನಿತ್ಯತ್ವವನ್ನು ಚಂಚಲತೆಗೆ ಬದಲಾಗಿ ಕಲ್ಪಿಸಿರುವುದು ತುಂಬ ಸೊಗಸಾದ ನುಡಿಬೆಡಗು.

ತಾರೆಯು ಮುನಿದು ಬಂದ ಲಕ್ಷ್ಮಣನನ್ನು ಸಂತಯಿಸುವಾಗ “ನಿನಗೆ ಕಾಮದ ಕರಾಮತ್ತು ತಿಳಿಯದು” ಎನ್ನುತ್ತಾಳೆ: ನ ಕಾಮತಂತ್ರೇ ತವ ಬುದ್ಧಿರಸ್ತಿ (೩೩.೫೫). ಇಲ್ಲಿ “ಕಾಮತಂತ್ರ” ಎಂಬ ಪದಕ್ಕೆ ಕಾಮಶಾಸ್ತ್ರ, ಮನ್ಮಥನ ಕಪಟೋಪಾಯಗಳು, ಕಾಮುಕತೆಯ ಬಗೆಗಳು ಮುಂತಾದ ಅನೇಕಾರ್ಥಗಳುಂಟು. ಅನಂತರ ಅವಳು ಆತನನ್ನು ಅಂತಃಪುರದೊಳಗೆ ಕರೆದೊಯ್ಯುತ್ತಾಳೆ. ಲಕ್ಷ್ಮಣನು ಸ್ವಲ್ಪ ಹಿಂಜರಿದಾಗ “ಮಹಾವೀರ, ಅಡ್ಡಿಯಿಲ್ಲ, ಒಳಗೆ ಬಾ. ನಿನ್ನ ನಡತೆ ಶುದ್ಧವಾಗಿದೆ. ಕೆಟ್ಟ ನೋಟವಿಲ್ಲದೆ ಸ್ನೇಹಭಾವದಿಂದ ಸಜ್ಜನರು ಪರಸ್ತ್ರೀಯರನ್ನು ಕಾಣುವುದರಲ್ಲಿ ತಪ್ಪಿಲ್ಲ” ಎಂದು ಅನುನಯಿಸುತ್ತಾಳೆ: ತದಾಗಚ್ಛ ಮಹಾಬಾಹೋ ಚಾರಿತ್ರಂ ರಕ್ಷಿತಂ ತ್ವಯಾ ಅಚ್ಛಲಂ ಮಿತ್ರಭಾವೇನ ಸತಾಂ ದಾರಾವಲೋಕನಮ್ (೩೩.೬೧). ಇಡಿಯ ಈ ಶ್ಲೋಕ ಸೊಗಸಾದ ಸಂವಾದಶೈಲಿಗೆ ಸಾಕ್ಷಿ.

ಸುಗ್ರೀವನನ್ನು ದಬಾಯಿಸುವ ಲಕ್ಷ್ಮಣ ಆತನನ್ನು “ಕಪ್ಪೆಯಂತೆ ವಟಗುಟ್ಟುವ ಸರ್ಪ” ಎಂದು ಹಳಿಯುತ್ತಾನೆ: ಸರ್ಪಂ ಮಂಡೂಕರಾವಿಣಮ್ (೩೪.೧೫). ಈ ಮಾತಿಗೆ ವ್ಯಾಖ್ಯಾನಕಾರರು ಹಲವು ಅರ್ಥಗಳನ್ನು ಮಾಡುತ್ತಾರೆ. ಕಪ್ಪೆಗಳನ್ನು ಕಬಳಿಸಲೆಳಸುವ ಹಾವು ಅವುಗಳನ್ನು ಆಕರ್ಷಿಸಲು ಅವುಗಳಂತೆಯೇ ವಟಗುಟ್ಟಿ ವಂಚಿಸುತ್ತವೆಂಬುದು ಒಂದು ಅರ್ಥ. ಹೀಗಲ್ಲದೆ, ಹಾವಿನ ಬಾಯಲ್ಲಿ ಕಪ್ಪೆ ಸಿಲುಕಿದಾಗ ಮರಣಭೀತಿಯಿಂದ ವಟಗುಟ್ಟುವ ಅದರ ಸದ್ದನ್ನು ಕೇಳಿದ ಜನರು ಹಾವೇ ವಟಗುಟ್ಟುತ್ತಿದೆಯೆಂದು ಭ್ರಮಿಸುವರೆಂಬುದಾಗಿ ಮತ್ತೊಂದು ಅರ್ಥ. ಒಟ್ಟಿನಲ್ಲಿ ಇದೊಂದು ಸ್ವಾರಸ್ಯಕರವಾದ ಲೌಕಿಕನಿದರ್ಶನ.

[[ವಾಲ್ಮೀಕಿಮುನಿಗಳ ವಾಗ್ವಿಲಾಸ - 6 Source: prekshaa]]

ಋಕ್ಷಬಿಲದೊಳಗೆ ಪ್ರವೇಶಿಸಿದ ವಾನರರು ಸ್ವಯಂಪ್ರಭೆಯನ್ನು ಅಲ್ಲಿ ಕಾಣುತ್ತಾರೆ. ಆ ತಪಸ್ವಿನಿಯು ಅವರಿಗೆ ಆತಿಥ್ಯವಿತ್ತು ವಾನರರ ಪೂರ್ವೋತ್ತರವನ್ನು ತಿಳಿಯಬಯಸಿ ಹೀಗೆ ಉಪಕ್ರಮಿಸುತ್ತಾಳೆ: “ನಿಮ್ಮ ವಿಚಾರವನ್ನು ನಾನು ತಿಳಿಯಬಹುದಿದ್ದರೆ ದಯಮಾಡಿ ಹೇಳಿ; ನಾನು ಕೇಳುತ್ತೇನೆ”: ಯದಿ ಚೈತನ್ಮಯಾ ಶ್ರಾವ್ಯಂ ಶ್ರೋತುಮಿಚ್ಛಾಮಿ ಕಥ್ಯತಾಮ್ (೫೨.೨). ಇದು ಹೃದಯಂಗಮವಾದ ಶಿಷ್ಟಾಚಾರವನ್ನು ಧ್ವನಿಸುವ ವಾಕ್ಯ. ಇಂಥ ಮಾತುಗಳು ಸುಸಂಸ್ಕೃತಿಯ ಅಭಿವ್ಯಕ್ತಿಯೇ ಆಗಿ ಪರವರ್ತಿಸಾಹಿತ್ಯದಲ್ಲಿ ಪ್ರಶಸ್ತಿ ಪಡೆದಿವೆ. ಅನಂತರ ಅವಳಿಗೆ ಏನಾದರೂ ಉಪಕಾರವಾಗಬೇಕಿದ್ದಲ್ಲಿ ತಾವೆಲ್ಲ ಸಿದ್ಧರಿರುವುದಾಗಿ ವಾನರರು ಹೇಳುತ್ತಾರೆ. ಆಗ ಅವಳು “ಧರ್ಮದಿಂದ ಬಾಳುತ್ತಿರುವ ನನಗೆ ಯಾರಿಂದಲೂ ಏನೂ ಆಗಬೇಕಾದುದಿಲ್ಲ” ಎನ್ನುತ್ತಾಳೆ: ಚರಂತ್ಯಾ ಮಮ ಧರ್ಮೇಣ ನ ಕಾರ್ಯಮಿಹ ಕೇನಚಿತ್ (೩೨.೭). ಈ ಮಾತುಗಳು ಆತ್ಮತೃಪ್ತರ ಮನೋಧರ್ಮವನ್ನಲ್ಲದೆ ಅದನ್ನು ತಿಳಿಸುವ ನಯವನ್ನೂ ಚೆನ್ನಾಗಿ ಬಿಂಬಿಸಿವೆ.

ಸೀತೆಯನ್ನು ಕಾಣಲಾಗದೆ ನಿರಾಶನಾದ ವಾನರನಾಯಕ ಅಂಗದನಿಗೆ ಎಚ್ಚರ-ಧೈರ್ಯಗಳನ್ನು ತುಂಬುವ ಹನೂಮಂತನ ಮಾತುಗಳಲ್ಲಿ ದುಃಖಶಯ್ಯಾ (೫೪.೧೭) ಎಂಬ ಪದ ಪ್ರಯುಕ್ತವಾಗಿದೆ. ಮುಳ್ಳಿನ ಹಾಸಿಗೆಯೆಂದು ಇದರ ತಾತ್ಪರ್ಯ. ಆದರೆ ಮುಳ್ಳಿನ ಹಾಸಿಗೆಯೆಂಬ ಈ ಅರ್ಥವೂ ಕಷ್ಟದ ಪರಿಸ್ಥಿತಿಯೆಂಬ ಲಕ್ಷ್ಯಾರ್ಥದಲ್ಲಿಯೇ ತಾತ್ಪರ್ಯವನ್ನು ಹೊಂದಿದೆ. ಇವೆಲ್ಲ ಆಡುನುಡಿಯ ಅಂದಗಳು. ಆಗ ಅಂಗದನು ಸುಗ್ರೀವ ತನ್ನನ್ನು ಗುಟ್ಟಾಗಿ ದಂಡಿಸಬಹುದೆಂದು ಅಂಜುತ್ತಾನೆ. ಈ ಸಂದರ್ಭದಲ್ಲಿ ಆದಿಕವಿಗಳು ಉಪಾಂಶುದಂಡಃ (೫೫.೧೦) ಎಂಬ ವಿಶಿಷ್ಟಶಬ್ದವನ್ನು ಪ್ರಯೋಗಿಸಿದ್ದಾರೆ. ಇದೊಂದು ವಾಚೋಯುಕ್ತಿ.

ಮರಣಾಂತ ಉಪವಾಸಕ್ಕೆ (ಪ್ರಾಯೋಪವೇಶ) ಕುಳಿತ ವಾನರರನ್ನು ಕಂಡ ಸಂಪಾತಿಯು “ಒಬ್ಬೊಬ್ಬರನ್ನಾಗಿ ಇವರನ್ನೆಲ್ಲ ಕೊಂದು ತಿನ್ನುವೆ!” ಎಂದು ಹಿಗ್ಗುತ್ತಾನೆ: ಪರಂಪರಾಣಾಂ ಭಕ್ಷಿಕ್ಷ್ಯೇ ವಾನರಾಣಾಂ ಮೃತಂ ಮೃತಮ್ (೫೬.೫). ಇಲ್ಲಿ “ಮೃತಂ ಮೃತಂ” ಎಂಬ ಪದಪುಂಜವು ಅಪ್ಪಟ ನುಡಿಗಟ್ಟು. ಇದಕ್ಕೆ “ತಾವಾಗಿ ಸತ್ತವರು” ಎಂದೂ “ಸಂಪಾತಿಯಿಂದ ಸಾಯಿಸಲ್ಪಟ್ಟವರು” ಎಂದೂ ಅರ್ಥಗಳನ್ನು ವ್ಯಾಖ್ಯಾತೃಗಳು ಮಾಡಿದ್ದಾರೆ.

ಹನೂಮಂತನು ಸಮುದ್ರಲಂಘನಕ್ಕೆ ಸನ್ನದ್ಧನಾದಾಗ ಮಿಕ್ಕ ವಾನರರೆಲ್ಲ “ನೀನು ಮರಳಿ ಬರುವವರೆಗೆ ನಾವೆಲ್ಲ ಒಂಟಿಕಾಲಲ್ಲಿ ನಿಂತು ಕಾಯುವೆವು” ಎನ್ನುತ್ತಾರೆ: ಸ್ಥಾಸ್ಯಾಮಶ್ಚೈಕಪಾದೇನ ಯಾವದಾಗಮನಂ ತವ (೬೭.೩೫). ಇದಂತೂ ಇಂದೂ ನಮ್ಮಲ್ಲಿ ವಾಡಿಕೆಯಲ್ಲಿರುವ ನುಡಿಗಟ್ಟು.

ಸುಂದರಕಾಂಡ

ಮೈನಾಕನನ್ನು ಬೀಳ್ಗೊಟ್ಟು ಹೊರಡುವ ಹನೂಮಂತ “ನಿನ್ನ ಮಾತಿನಿಂದಲೇ ನನಗೆ ಆತಿಥ್ಯವಾಗಿದೆ. ಬೇಸರ ಪಟ್ಟುಕೊಳ್ಳಬೇಡ. ನನ್ನ ಕೆಲಸದ ಕಾಲ ನನ್ನನ್ನು ತ್ವರೆಗೊಳಿಸುತ್ತಿದೆ. ಅಲ್ಲದೆ ಹಗಲೂ ಕಳೆದುಹೋಗುತ್ತಿದೆ” ಎನ್ನುತ್ತಾನೆ: ಪ್ರೀತೋऽಸ್ಮಿ ಕೃತಮಾತಿಥ್ಯಂ ಮನ್ಯುರೇಷೋऽಪನೀಯತಾಮ್ । ತ್ವರತೇ ಕಾರ್ಯಕಾಲೋ ಮೇ ಹ್ಯಹಶ್ಚ ವ್ಯತಿವರ್ತತೇ (೧.೧೩೧). ಈ ಮಾತುಗಳೆಲ್ಲ ಸೊಗಸಾದ ಸಂಭಾಷಣೆಯ ಸಂಸ್ಕೃತಕ್ಕೆ ಸಾಕ್ಷಿ. “ತ್ವರತೇ ಕಾರ್ಯಕಾಲೋ ಮೇ” ಎಂಬ ಮಾತು ಮೂಲತಃ ಅತಿಶಯೋಕ್ತಿಯೇ ಆಗಿದ್ದರೂ ಆಡುನುಡಿಯ ದಟ್ಟವಾದ ಪರಿಮಳದ ಕಾರಣ ಸಹಜವಾದ ನುಡಿಯೆನಿಸಿ ಪರಿಣಾಮವನ್ನು ಹೆಚ್ಚಿಸಿದೆ.

ಹನೂಮಂತನ ವೇಗವನ್ನು ವರ್ಣಿಸುವಾಗ ಮನಃಸಂಪಾತವಿಕ್ರಮಃ (೧.೧೯೩) ಎಂದು ಮನೋವೇಗಕ್ಕೆ ಹೋಲಿಕೆ ನೀಡಲಾಗಿದೆ. ಆದರೆ ಇದು ಲುಪ್ತೋಪಮೆಯಾಗಿ ತೋರದೆ ಹೃದ್ಯವಾದ ವಾಗ್ರೂಢಿಯೆನಿಸಿದೆ. ಇಂಥ ಎಷ್ಟೋ ಪ್ರಸಂಗಗಳಲ್ಲಿ ವಾಲ್ಮೀಕಿಮುನಿಗಳ ಶುದ್ಧಕವಿತ್ವವು ಲೋಕರೂಢಿಯ ಬೆಡಗಿನಲ್ಲಿ ಮತ್ತೂ ಆಕರ್ಷಕವಾಗಿ ತೋರುವುದೊಂದು ಸಾಹಿತ್ಯವೈಚಿತ್ರ್ಯ.

ಸೀತೆ ರಾವಣನನ್ನು ತಿರಸ್ಕರಿಸುತ್ತ “ನಾನು ನಿನ್ನ ಭೋಗಪತ್ನಿಯಲ್ಲ” ಎಂದು ಗದರುತ್ತಾಳೆ: ನಾಹಮೌಪಯಿಕೀ ಭಾರ್ಯಾ (೨೧.೬). ಇಲ್ಲಿ “ಔಪಯಿಕೀ” ಎಂಬ ಶಬ್ದಕ್ಕೆ “ಉಪಯೋಗಾರ್ಹಳಾದ” ಎಂಬ ಅರ್ಥವಿದ್ದರೂ ತಾತ್ಪರ್ಯದಿಂದ “ಭೋಗಾರ್ಹಳಾದ” ಎಂಬ ಅರ್ಥವೇ ಗ್ರಾಹ್ಯ. ಇದು ಮತ್ತೆ ವಾಗ್ರೂಢಿಯತ್ತ ಬೆರಳು ಚಾಚುತ್ತದೆ.

“ಸುತ್ತಲೂ ರಾಕ್ಷಸಿಯರು ಎಡೆಬಿಡಡೆ ಕಾವಲಿರುವ ಕಾರಣ ಸ್ವೇಚ್ಛೆಯಿಂದ ಆತ್ಮಹತ್ಯೆಗೂ ಅವಕಾಶವಾಗುತಿಲ್ಲವಲ್ಲಾ; ಇಂಥ ಮಾನುಷಜನ್ಮಕ್ಕೂ ಪರಾಧೀನತೆಗೂ ಧಿಕ್ಕಾರ!” ಎಂದು ಸೀತೆಯು ಹಲುಬುತ್ತಾಳೆ: ಧಿಗಸ್ತು ಖಲು ಮಾನುಷ್ಯಂ ಧಿಗಸ್ತು ಪರವಶ್ಯತಾಂ ನ ಶಕ್ಯಂ ಯತ್ ಪರಿತ್ಯಕ್ತುಮಾತ್ಮಚ್ಛಂದೇನ ಜೀವಿತಮ್ (೨೫.೨೦). ಇದೊಂದು ಸರಳವಾದ ಸಂಕಟದ ಮಾತಾದರೂ ಇಲ್ಲಿಯ ಸಹಜವಾದ ಕಾವು-ನೋವುಗಳು ಪರಿಣಾಮಕಾರಿ.

ಸೀತೆಗೆ ಉತ್ಸಾಹ-ವಿಶ್ವಾಸಗಳು ಮೂಡುವಂತಾಗಲು ಹನೂಮಂತನು ಹಲವು ಬಗೆಯ ಆಣೆಗಳನ್ನು ಮಾಡುತ್ತಾನೆ. ಆಗ ತಾನು ತಿನ್ನುವ ಹಣ್ಣು-ಗೆಣಸುಗಳ ಮೇಲೆಯೂ ಶಪಥ ಮಾಡುತ್ತಾನೆ: ಶಪೇ ಮೂಲಫಲೇನ ಚ (೩೬.೩೮). ಇದು ಆದಿಕವಿಗಳು ತಮ್ಮ ಪಾತ್ರಗಳ ಅಂತರಂಗವನ್ನು ಹೊಕ್ಕು ನುಡಿಸುವ ಶಕ್ತಿಗೆ ಸಾಕ್ಷಿ. ಇಲ್ಲವಾದಲ್ಲಿ ಮಂಗನ ಬಾಯಿಂದ ಇಂಥ ಆಣೆಮಾತುಗಳನ್ನು ಆಡಿಸಲು ಸಾಧ್ಯವಾಗುತ್ತಿರಲಿಲ್ಲ. ಇದೇ ಸಂದರ್ಭದಲ್ಲಿ ಸೀತಾವಿರಹದಲ್ಲಿ ನವೆಯುತ್ತಿರುವ ರಾಮ ಊಟ-ಉಪಚಾರಗಳನ್ನು ಲೆಕ್ಕಿಸುತ್ತಿಲ್ಲವೆಂದು ಹೇಳುತ್ತಾನೆ. ಮಾತ್ರವಲ್ಲ, “ನಾಲ್ಕು ಹೊತ್ತು ಉಪವಾಸದ ಬಳಿಕ ಐದನೆ ಹೊತ್ತಿಗೆ ಮಾತ್ರ ಒಂದಿಷ್ಟು ಆಹಾರವನ್ನು ಸ್ವೀಕರಿಸುತ್ತಾನೆ” ಎನ್ನುತ್ತಾನೆ: ಭಕ್ತಮಶ್ನಾತಿ ಪಂಚಮಮ್ (೩೬.೪೧). ಇದು ತುಂಬ ವಿಶಿಷ್ಟವಾದ ಪದಪ್ರಯೋಗ. “ಪಂಚಮ”ಶಬ್ದಕ್ಕೆ ಅನೇಕಾರ್ಥಗಳಿದ್ದರೂ ಸದ್ಯದಲ್ಲಿ “ಐದನೆಯ ಹೊತ್ತು” ಎಂಬ ಉದ್ದಿಷ್ಟಾರ್ಥವು ರೂಢಿಯಿಂದ ಲಭ್ಯ.

ಸಾಮಾನ್ಯವಾನರನ ಪುಟ್ಟ ಆಕಾರದಲ್ಲಿ ಇದ್ದ ಹನೂಮಂತ ಸೀತೆಯನ್ನು ತನ್ನ ಹೆಗಲ ಮೇಲೆ ಹೊತ್ತೊಯ್ಯುವೆನೆಂದಾಗ ಅವಳು “ಇದು ನಿನಗೆ ಹೇಗೆ ಸಾಧ್ಯ? ಹೀಗಾಗಿಯೇ ನಿನ್ನನ್ನು ಕಪಿ ಎನ್ನುವುದು” ಎಂದು ವಿಡಂಬಿಸುತ್ತಾಳೆ: ತದೇವ ಖಲು ತೇ ಮನ್ಯೇ ಕಪಿತ್ವಮ್ (೩೭.೨೯). ಇದು ನಮ್ಮ ಅನುದಿನದ ಮಾತುಗಳಲ್ಲಿ ಬಳಕೆಯಾಗುವ ಬಗೆಯದೇ.

ಸೀತೆಯನ್ನು ಕಂಡ ಬಳಿಕ ತನ್ನ ಕೆಲಸ ಮುಗಿದಂತಾಯಿತಾದರೂ ರಾವಣನನ್ನು ಎಚ್ಚರಿಸುವ ಮತ್ತೊಂದು ಚಿಕ್ಕ ಕೆಲಸವಿದೆಯೆಂದು ಹನೂಮಂತ ಭಾವಿಸುತ್ತಾನೆ. ಇದನ್ನು ಆದ್ಕವಿಗಳು: ಅಲ್ಪಶೇಷಮಿದಂ ಕಾರ್ಯಮ್ (೪೧.೨) ಎಂಬ ಶಬ್ದಗಳಿಂದ ತಿಳಿಸಿದ್ದಾರೆ. ಇದೊಂದು ಸೊಗಸಾದ ನುಡಿಗಟ್ಟು. ಹೀಗೆ ನಿಶ್ಚಯಿಸಿದವನೇ “ರಾಕ್ಷಸರೆಲ್ಲ ಕಣ್ಬಿಟ್ಟು ನೋಡುತ್ತಿರುವಾಗಲೇ ನಾನು ಕೃತಾರ್ಥನಾಗಿ ತೆರಳುವೆನು” ಎಂದು ಸಾರುತ್ತಾನೆ: ಸಮೃದ್ಧಾರ್ಥೋ ಗಮಿಷ್ಯಾಮಿ ಮಿಷತಾಂ ಸರ್ವರಕ್ಷಸಾಮ್ (೪೨.೩೬). ಇದು ಅಪ್ಪಟವಾಗಿ ನಮ್ಮ ನುಡಿಗಳ ಮಾತೇ. ಇದರ ಸ್ವಾರಸ್ಯ ಸ್ವಯಂವೇದ್ಯ.

ಹನೂಮಂತನನ್ನು ರಾಕ್ಷಸರು ಕಟ್ಟಿ ಕೊಂಡೊಯ್ಯುವಾಗ ದ್ರುಮಚೀರಗಳಿಂದ (೪೮.೫೩) ಬಂಧಿಸಿದರೆಂದು ಒಕ್ಕಣೆಯಿದೆ. ನಾರು ಮರಗಳ ಬಟ್ಟೆಯೆಂದು ಆದಿಕವಿಗಳ ಕಾಣ್ಕೆ. ಹೀಗಾಗಿ “ದ್ರುಮಚೀರ”ವೆಂದರೆ ನಾರಲ್ಲದೆ ಮತ್ತೇನು? ಮಹಾಕವಿಗಳು ತಾವು ಒಲಿದಂತೆ ಪದಪ್ರಪಂಚಗಳನ್ನು ಸೃಷ್ಟಿಸಿಕೊಳ್ಳುವರು.

ರಾವಣನನ್ನು ಸಭೆಯಲ್ಲಿ ಕಂಡ ಹನೂಮಂತನು ಆತನ ಶೌರ್ಯ-ಸಾಹಸಗಳನ್ನು ಮೆಚ್ಚಿಕೊಳ್ಳುತ್ತ “ಈತ ಮುನಿದರೆ ಜಗತ್ತನ್ನೇ ಸಮುದ್ರದ ಪಾಲು ಮಾಡಿಯಾನು!” ಎಂದು ಉದ್ಗರಿಸುತ್ತಾನೆ: ಅಯಂ ಹ್ಯುತ್ಸಹತೇ ಕ್ರುದ್ಧಃ ಕರ್ತುಮೇಕಾರ್ಣವಂ ಜಗತ್ (೪೯.೨೦). ಈ ಮಾತು ನಾವು ಇಂದಿಗೂ ಬಳಸುವ ವಾಗ್ರೂಢಿಗಳಲ್ಲಿ ಉಳಿದುಬಂದಿದೆ.

ದೂತನನ್ನು ಕೊಲ್ಲಬಾರದೆಂದು ವಿಭೀಷಣ ಪ್ರತಿಪಾದಿಸುವಾಗ ಪ್ರಮಾಪಣಮ್ (೫೨.೬) ಎಂಬ ಪದ ಬಳಕೆಯಾಗಿದೆ. “ಕೊಲ್ಲಿಸುವಿಕೆ” ಎಂಬುದು ಇದರ ಅರ್ಥ. “ಮಾಪನ” ಎಂಬ ಕೃದಂತಕ್ಕೆ “ಅಳತೆ ಮಾಡುವುದು” ಎಂಬ ಅರ್ಥವಿದ್ದರೂ “ಪ್ರ” ಎಂಬ ಉಪಸರ್ಗ ಸೇರಿ ಇಂಥ ವಿನೂತನಾರ್ಥ ಬಂದಿದೆ. ಇವೆಲ್ಲ ಆಡುನುಡಿಯ ಅಂದಗಳು. ಇದಕ್ಕೆ ಬದಲಾಗಿ ಹನೂಮಂತನ ತಲೆ ಬೋಳಿಸಬಹುದು, ಬರೆ ಹಾಕಬಹುದು ಎಂದೆಲ್ಲ ಪರ್ಯಾಯದಂಡಗಳನ್ನು ಸೂಚಿಸುತ್ತಾನೆ: ಮೌಂಡ್ಯಂ ತಥಾ ಲಕ್ಷಣಸನ್ನಿಪಾತಃ (೫೨.೧೫). ಇಲ್ಲಿ “ಮೌಂಡ್ಯ” ಎಂಬ ತದ್ಧಿತಪ್ರಯೋಗವೂ (ಮುಂಡಕ್ಕೆ, ಅಂದರೆ ತಲೆಗೆ ಸಂಬಂಧಿಸಿದುದು. ಅರ್ಥಾತ್, ಮುಂಡನ) ಬರೆಗೆ “ಲಕ್ಷಣಸನ್ನಿಪಾತ” ಎಂಬ ವಿಶಿಷ್ಟಸಂಕೇತವೂ ಗಮನಾರ್ಹ. ಈ ಮಾತಿಗೆ “ಕಾಸಿದ ಮುದ್ರೆಯನ್ನು ಒತ್ತುವುದು” ಎಂಬ ಅರ್ಥವೂ ಉಂಟು.

ಬಾಲಕ್ಕೆ ಬೆಂಕಿ ಬಿದ್ದಾಗಲೂ ಹನೂಮಂತನಿಗೆ ಬಿಸಿ ತಾಕಲಿಲ್ಲವಂತೆ. ಅದು ಬಾಲದ ಮೇಲೆ ಮಂಜುಗಡ್ಡೆಯನ್ನು ಇಟ್ಟಂತೆ ಇತ್ತೆಂದು ಆದಿಕವಿಗಳ ಒಕ್ಕಣೆ: ಶಿಶಿರಸ್ಯೇವ ಸಂಪಾತೋ ಲಾಂಗೂಲಾಗ್ರೇ ಪ್ರತಿಷ್ಠಿತಃ (೫೩.೩೬). ಇಲ್ಲಿ ತಂಪನ್ನು ಮಂಜುಗಡ್ಡೆಯೆಂದು ಸಮೀಕರಿಸಿರುವುದು ಸ್ವಾರಸ್ಯಕರ. ಇದೇ ಸಂದರ್ಭದಲ್ಲಿ ಬಾಲದ ಬೆಂಕಿಯನ್ನು ಕಂಡ ಹನೂಮಂತ “ಈ ಅಗ್ನಿದೇವನಿಗೆ ಲಂಕೆಯ ಮನೆಗಳನ್ನು ಉಣಿಸಿ ಸಂತರ್ಪಣೆ ಮಾಡಿಸುವುದು ಯುಕ್ತ” ಎಂದು ಭಾವಿಸುತ್ತಾನೆ: ಅಸ್ಯ ಸಂತರ್ಪಣಂ ನ್ಯಾಯ್ಯಮ್ (೫೪.೫). ಇಲ್ಲಿ ಲಂಕೆಗೇ ಬೆಂಕಿಯಿಡಬೇಕೆಂಬ ಭಾವ ಅದೆಷ್ಟು ನವುರಾದ ಪರಿಹಾಸ್ಯವಾಗಿ ಪರಿವರ್ತಿತವಾಗಿದೆಯೆಂಬುದು ಗಮನಾರ್ಹ.

ಲಂಕೆಯನ್ನು ಸುಟ್ಟ ಬಳಿಕ “ಇದರೊಳಗೆ ಸೀತೆಯೂ ಇದ್ದಳಲ್ಲ, ಎಂಥ ಕೆಲಸ ಮಾಡಿಬಿಟ್ಟೆ!“ ಎಂದು ಹನೂಮಂತ ಹಳಹಳಿಸಿಕೊಳ್ಳುತ್ತಾನೆ: ಲಂಕಾಂ ಪ್ರದಹತಾ ಕರ್ಮ ಕಿಂಸ್ವಿತ್ ಕೃತಮಿದಂ ಮಯಾ (೫೫.೩). ಇಲ್ಲಿ “ಕಿಂಸ್ವಿತ್” ಎಂಬ ಅವ್ಯಯವು ಎಲ್ಲಿಲ್ಲದ ನುಡಿಬೆಡಗನ್ನು ತಂದಿದೆ. ಲಂಕೆಯಿಂದ ಮರಳಿಬರುತ್ತಿರುವ ಹನೂಮಂತನನ್ನು ಕಂಡ ವಾನರರು ಹಿಗ್ಗಿದ ಪರಿಯನ್ನು ವರ್ಣಿಸುವಾಗ, ಅವರು ಬಾಲಗಳನ್ನು ನೆಲಕ್ಕೆ ಬಡಿದ ಬಗೆ ಕೂಡ ವಿವೃತವಾಗಿದೆ: ಲಾಂಗೂಲಾನಿ ಪ್ರವಿವ್ಯಧುಃ (೩.೩೯.೨೪). ಇಲ್ಲಿಯೂ ಆದಿಕವಿಗಳ ಪರಿಶೀಲನಶಕ್ತಿ ಅಸಾಧಾರಣವೆನಿಸಿದೆ. ಮುಂದೆ ಹನೂಮಂತನು ತನ್ನ ಕಥೆಯನ್ನೆಲ್ಲ ಹೇಳುವಾಗ, ಸಿಂಹಿಕೆಯನ್ನು ಕೊಂದ ಬಳಿಕ ತುರ್ತಿನ ಕೆಲಸವನ್ನು ನೆನೆದು ವೇಗವಾಗಿ ಸಾಗಿದೆನೆಂದು ಹೇಳುತ್ತಾನೆ: ಕೃತ್ಯಮಾತ್ಯಯಿಕಂ ಸ್ಮರನ್ (೫೮.೪೫). ತುರ್ತಿನ ಕೆಲಸಕ್ಕೆ “ಆತ್ಯಯಿಕಕೃತ್ಯ” ಎಂಬ ಶಬ್ದ ಸೊಗಸಾಗಿದೆ. ಅನಂತರ ಸೀತೆಯ ಸೌಶೀಲ್ಯವನ್ನು ಕಂಡ ಬಳಿಕ ತನ್ನ ಮನಸ್ಸು ನಮ್ರವಾದುದನ್ನು ತಿಳಿಸುತ್ತಾನೆ: ಶೀಲಮಾಸಾದ್ಯ ಸೀತಾಯಾ ಮಮ ಚ ಪ್ರವಣಂ ಮನಃ (೫೯.೨). ಇಲ್ಲಿ “ಆಸಾದ್ಯ” ಎಂಬ ಪದವನ್ನು “ಕಂಡ ಬಳಿಕ” ಎಂಬರ್ಥದಲ್ಲಿ ಬಳಸಿರುವುದು ಹೃದಯಂಗಮವಾದ ವಾಗ್ರೂಢಿ.

ಮಧುವನದಲ್ಲಿ ದಾಂಧಲೆ ಮಾಡುತ್ತಿದ್ದ ಕಪಿಗಳು ಜೇನಿನ ಬಣ್ಣದಲ್ಲಿದ್ದರಂತೆ: ಮಧುಪಿಂಗಲಾಃ (೬೧.೧೧); ಅವರು ತಮ್ಮನ್ನು ದಂಡಿಸಲು ಬಂದ ಕಾವಲಿನವರಿಗೆ ದೇವಮಾರ್ಗವನ್ನು (೬೨.೧೬) ತೋರಿಸುತ್ತಿದ್ದರಂತೆ; ಮಧುವನ್ನೇ ಮೂತ್ರಿಸುತ್ತಿದ್ದರಂತೆ: ಮೇಹಮಾನಾನ್ ಮಧೂದಕಮ್ (೬೪.೪). “ದೇವಮಾರ್ಗ”ವೆಂದರೆ ಗುದ! ಮಲದ್ವಾರಕ್ಕೆ ಮಿಥ್ಯಾಗಾಂಭೀರ್ಯದ ಅಭಿಧಾನವಿದು! ಇನ್ನು ಕುಡಿದವರು ಮೂತ್ರಿಸುವ ಪರಿ ಎಂಥದ್ದೆಂಬುದನ್ನು ಪ್ರತ್ಯೇಕಿಸಿ ಹೇಳಬೇಕಿಲ್ಲ. ಇವೆಲ್ಲ ಆದಿಕವಿಗಳ ಅಸಾಧಾರಣವಾದ ಲೋಕಾವೇಕ್ಷಣಕ್ಕೆ ಸಾಕ್ಷಿಗಳು.

ಯುದ್ಧಕಾಂಡ

ಸೀತೆಯನ್ನು ಕಂಡು, ಲಂಕೆಯನ್ನು ಸುಟ್ಟು, ರಾವಣನಿಗೇ ಭಯ ಹುಟ್ಟಿಸಿ ಬಂದ ಹನೂಮಂತನ ವೀರವಿಹಾರವನ್ನರಿತ ರಾಮನು ಆತನಿಗೆ ಉಡುಗೊರೆಯಾಗಿ ಕೊಡಲು ತನ್ನಲ್ಲಿ ಇರುವುದೊಂದು ಆಲಿಂಗನವಲ್ಲದೆ ಮತ್ತೇನೂ ಇಲ್ಲವೆಂದು ಹೇಳಿ ಅಪ್ಪಿಕೊಳ್ಳುತ್ತಾನೆ: ಏಷ ಸರ್ವಸ್ವಭೂತಸ್ತು ಪರಿಷ್ವಂಗಃ (೧.೧೪). “ಇದೋ ನನ್ನ ಸಮಸ್ತಭೂತವೂ ಆದ ಆಲಿಂಗನ” ಎಂಬ ರಾಮನ ಈ ಮಾತಿನಲ್ಲಿ ಎದ್ದುತೋರುವ ನುಡಿಗಟ್ಟಿಲ್ಲದಿದ್ದರೂ ಅಪ್ಪುಗೆಯಲ್ಲದೆ ಮತ್ತೇನೂ ತನ್ನಲ್ಲಿ ಉಳಿದಿಲ್ಲವೆಂಬ ಈ ಮಾತಿನ ಮೂಲಕ ರಾಮನ ಆಲಿಂಗನ ಅದೆಷ್ಟು ಅಮೂಲ್ಯವೆಂಬ ಧ್ವನಿ ಸ್ಫುರಿಸದಿರದು. ಇಂಥ ಧ್ವನಿದೀಪ್ತವಾದ ಮಾತುಗಳು ರಾಮಾಯಣದಲ್ಲಿ ಸಾವಿರಾರು.

ಮಹಾಪಾರ್ಶ್ವನು ರಾವಣನಿಗೆ “ನೀನು ಸೀತೆಯೊಡನೆ ಹುಂಜದಂತೆ ನಡೆದುಕೊಂಡು ಬಲಾತ್ಕರಿಸು” ಎನ್ನುತ್ತಾನೆ: ಬಲಾತ್ ಕುಕ್ಕುಟವೃತ್ತೇನ ವರ್ತಸ್ವ (೧೩.೪). “ಕುಕ್ಕುಟವೃತ್ತ”ವೆಂದರೆ ಹುಂಜಗಳು ಹೇಗೆ ಕೋಳಿಗಳನ್ನು ಬೆಂಬತ್ತಿಹೋಗಿ ಆಕ್ರಮಿಸಿ ಭೋಗಿಸುವುವೋ ಹಾಗೆ ವರ್ತಿಸುವುದೆಂದು ತಾತ್ಪರ್ಯ. ಇದೊಂದು ಪ್ರಸಿದ್ಧವಾದ ನುಡಿಗಟ್ಟು. “ಕುಕ್ಕುಟಾಚಾರ”ವೆಂದೂ ಇದಕ್ಕೆ ಹೆಸರುಂಟು. ಪ್ರಾಣಿ-ಪಕ್ಷಿಗಳ ಸ್ವಭಾವವನ್ನು ಗಮನಿಸಿ ರೂಪಿಸಿದ ವಾಚೋಯುಕ್ತಿಯಿದು.

ರಾವಣನು ವಿಭೀಷಣನನ್ನು ಹಳಿಯುವಾಗ ದಾಯಾದಿಗಳು ತೆರೆದ ಮನದವರಲ್ಲವೆನ್ನುತ್ತಾನೆ: ಪ್ರಚ್ಛನ್ನಹೃದಯಾ ಜ್ಞಾತಯಃ (೧೬.೫). “ಪ್ರಚ್ಛನ್ನಹೃದಯ” ಎಂದರೆ ತಮ್ಮ ಅಂತರಂಗವನ್ನು ತೋರದಿರುವವರೆಂದು ತಾತ್ಪರ್ಯ. ಇದೊಂದು ರೂಢಿಲಕ್ಷಣೆಯ ಪ್ರಯೋಗ.

ತನಗೆ ಸಹಕರಿಸದ ಸಮುದ್ರವನ್ನು ಕಂಡು ಮುನಿದ ರಾಮನು ಲಕ್ಷ್ಮಣನಿಗೆ ಹೀಗೆನ್ನುತ್ತಾನೆ: “ಗುಣಹೀನರ ಪಾಲಿಗೆ ಸಜ್ಜನರ ಗುಣಗಳು ಅವರ ಅಸಮರ್ಥತೆಯೆಂಬಂತೆ ತೋರುತ್ತವೆ”: ಅಸಾಮರ್ಥ್ಯಫಲಾ ಹ್ಯೇತೇ ನಿರ್ಗುಣೇಷು ಸತಾಂ ಗುಣಾಃ (೨೧.೧೫). ಇಲ್ಲಿ ಗುಣಗಳಿಗೆ “ಅಸಾಮರ್ಥ್ಯಫಲಾಃ” ಎಂಬ ವಿಶೇಷಣವನ್ನು ಕಲ್ಪಿಸಿರುವುದು ಮಾತಿಗೆ ಎಲ್ಲಿಲ್ಲದ ಮೊನಚನ್ನು ತಂದಿದೆ. ಇಲ್ಲಿರುವ ವ್ಯಂಗ್ಯವು ಈ ಬಗೆಯ ಸಮಾಸ್ಯದ ನಿರ್ಮಾಣದಿಂದಲೇ ಉಂಟಾಗಿದೆ. ಹೀಗಾಗಿಯೇ ಈ ಮಾತು ಮುಂದೆ ನಾಣ್ನುಡಿಯಂತಾಗಿದೆ.

ಹೀಗೆ ಮುನಿದ ರಾಮನು ಲೋಕದಲ್ಲಿ ದರ್ಪ ಮಾಡಿಕೊಂಡಿರುವವರೇ ಸತ್ಕಾರವನ್ನು ಹೊಂದುವರೆಂದು ಬೇಸರಿಸುತ್ತಾನೆ: ಸರ್ವತ್ರೋತ್ಸೃಷ್ಟದಂಡಂ ಚ ಲೋಕಃ ಸತ್ಕುರುತೇ ನರಮ್ (೨೧.೧೬). ಇಲ್ಲಿ “ಉತ್ಸೃಷ್ಟದಂಡ” ಎಂಬ ಪದಕ್ಕೆ ಕೋಲಾಹಲ ಮಾಡುವವನೆಂದೂ ಅಂಕೆಯಿಲ್ಲದವನೆಂದೂ ತಾತ್ಪರ್ಯ. “ಉತ್ಸೃಷ್ಟದಂಡ” ಎಂಬುದಕ್ಕೆ ದಂಡವನ್ನು ಬಿಟ್ಟವನೆಂಬ ಅರ್ಥವೂ ಇದೆ. ಆದರೆ ದಂಡಾಧಿಕಾರವನ್ನು ಎಲ್ಲೆಡೆ ಎಗ್ಗಿಲ್ಲದೆ ವಿನಿಯೋಗಿಸುವವನೆಂಬ ಅರ್ಥವೇ ಹೆಚ್ಚು ಯುಕ್ತ.

ಇದೇ ಸಂದರ್ಭದಲ್ಲಿ ರಾಮನು ಸಮುದ್ರವನ್ನು ಒಣಗಿಸುವುದಾಗಿ ಹೇಳುತ್ತಾನೆ: ನಿರ್ಮರ್ಯಾದಂ ಕರಿಷ್ಯಾಮಿ (೨೧.೨೪). “ಮರ್ಯಾದೆ” ಎಂಬ ಪದಕ್ಕೆ ಎಲ್ಲೆಯೆಂದು ಅರ್ಥ. ಸಮುದ್ರಕ್ಕೆ ಎಲ್ಲೆಯಿಲ್ಲದಂತೆ ಮಾಡುವುದೆಂದರೆ ಅದನ್ನು ಬತ್ತಿಸಿಬಿಡುವುದೆಂದೇ ತಾತ್ಪರ್ಯ. ಹೀಗಲ್ಲದೆ “ಎಲ್ಲೆಯೇ ಇಲ್ಲದಂತೆ ಸಮುದ್ರವನ್ನು ಭೂಮಿಗೆಲ್ಲ ವಿಸ್ತರಿಸುವುದು” ಎಂಬ ಅರ್ಥವಿಲ್ಲಿ ಸಂಗತವಲ್ಲ. ಆದರೆ “ಮರ್ಯಾದೆ” ಎಂಬ ಶಬ್ದಕ್ಕೆ “ಮಾನ” ಎಂಬ ರೂಢ್ಯರ್ಥವೂ ಲೋಕಪ್ರಸಿದ್ಧ. ಹೀಗೆ ಕಂಡಾಗ “ಸಮುದ್ರದ ಮಾನವನ್ನು ಕಳೆಯುವೆನು” ಎಂಬುದು ಮತ್ತೊಂದು ಸಂಗತಾರ್ಥವಾಗುತ್ತದೆ. ಆದರೆ ಮೊದಲಿನ ಅರ್ಥವೇ ಹೆಚ್ಚು ಸಮುಚಿತ.

ರಾವಣನ ಗೂಢಚಾರರಾದ ಶುಕ-ಸಾರಣರು ವಾನರಸೈನ್ಯದ ಬಲವನ್ನೆಲ್ಲ ತಿಳಿದುಬಂದು ತಮ್ಮೊಡೆಯನಿಗೆ ನಿವೇದಿಸುವಾಗ ಹೀಗೆನ್ನುತ್ತಾರೆ: “ರಾಮ, ಲಕ್ಷ್ಮಣ, ವಿಭೀಷಣ ಮತ್ತು ಸುಗ್ರೀವರು ನಾಲ್ವರೂ ಮಹಾಪರಾಕ್ರಮಿಗಳು. ಅವರಲ್ಲಿ ಮಿಕ್ಕ ಮೂವರು ಹಾಗಿರಲಿ, ರಾಮನೊಬ್ಬನೇ ನಮ್ಮ ಲಂಕೆಯನ್ನು ನಾಶಗೊಳಿಸಬಲ್ಲ!” ವಧಿಷ್ಯತಿ ಪುರೀಂ ಲಂಕಾಮೇಕಸ್ತಿಷ್ಠಂತು ತೇ ತ್ರಯಃ (೨೫.೩೨). ಇದು ನಮ್ಮಲ್ಲಿ ಇಂದೂ ಉಳಿದುಬಂದಿರುವ ವಾಗ್ರೂಢಿಗೆ ಒಳ್ಳೆಯ ನಿದರ್ಶನ.

ನಾಗಾಸ್ತ್ರದಿಂದ ವೈರಿಗಳನ್ನು ಗೆದ್ದ ಹಿಗ್ಗಿನಲ್ಲಿ ಇಂದ್ರಜಿತ್ತನು “ನಮ್ಮ ಬೇರನ್ನೇ ಕತ್ತರಿಸುವ ಅನರ್ಥವನ್ನು ನಾನು ನಿರ್ಮೂಲಿಸಿದ್ದೇನೆ” ಎನ್ನುತ್ತಾನೆ: ಸೋऽಯಂ ಮೂಲಹರೋऽನರ್ಥಃ ಸರ್ವೇಷಾಂ ನಿಹತೋ ಮಯಾ (೨೫.೩೨). ಇಲ್ಲಿ “ಮೂಲಹರ” ಎಂಬ ಶಬ್ದ ಸ್ವಾರಸ್ಯಕರವಾಗಿದೆ. “ನಮ್ಮ ನೆಲೆಯನ್ನೇ ಕತ್ತರಿಸುವಂಥದ್ದು” ಎಂಬ ಅರ್ಥವುಳ್ಳ ಈ ಪದವು ಮುಂದಿನ ಸಾಹಿತ್ಯದಲ್ಲಿ ನುಡಿಗಟ್ಟೆಂಬಂತೆ ಬೆಳೆದುಬಂದಿದೆ.

ವಿಭೀಷಣನು ನಾಗಪಾಶಕ್ಕೆ ಸಿಲುಕಿದ ರಾಮ-ಲಕ್ಷ್ಮಣರನ್ನು ಕಂಡು “ನಾನು ಬದುಕಿಯೂ ಸತ್ತಂತಾಯಿತು. ನನಗೆ ರಾಜ್ಯವು ಸಿಗುವುದೆಂಬ ಆಶೆ ನಾಶವಾಯಿತು” ಎನ್ನುತ್ತಾನೆ: ಜೀವನ್ನದ್ಯ ವಿಪನ್ನೋऽಸ್ಮಿ ನಷ್ಟರಾಜ್ಯಮನೋರಥಃ (೫೦.೧೯). “ಬದುಕಿದ್ದೂ ಸತ್ತಂತಾಯಿತು” ಎಂಬ ಮಾತು ನಮ್ಮೆಲ್ಲರ ನಿತ್ಯದ ವಾಗ್ರೂಢಿಯಾಗಿದೆ.

ರಾವಣನನ್ನು ಯುದ್ಧರಂಗದಲ್ಲಿ ಕಂಡ ರಾಮ “ಇಂದು ಈ ಪಾಪಿ ನನ್ನ ಕಣ್ಣಿಗೆ ಬಿದ್ದ. ಸೀತಾಪಹರಣದಿಂದ ಉಂಟಾದ ಕೋಪವನ್ನು ಇಂದು ಹೊರಚೆಲ್ಲುತ್ತೇನೆ!” ಎನ್ನುತ್ತಾನೆ: ದಿಷ್ಟ್ಯಾಯಮದ್ಯ ಪಾಪಾತ್ಮಾ ಮಮ ದೃಷ್ಟಿಪಥಂ ಗತಃ । ಅದ್ಯ ಕ್ರೋಧಂ ವಿಮೋಕ್ಷ್ಯಾಮಿ ಸೀತಾಹರಣಸಂಭವಮ್ (೫೯.೩೧). ಈ ಶ್ಲೋಕಾದ ಪೂರ್ವಾರ್ಧ ಲೋಕರೂಢಿಯ ಮಾತೇ ಹೌದು; ಉತ್ತರಾರ್ಧದಲ್ಲಿಯ “ಕ್ರೋಧಂ ವಿಮೋಕ್ಷ್ಯಾಮಿ” ಎಂಬ ಮಾತು “ಕೋಪವನ್ನು ಬಿಡುವೆನು” ಎಂಬರ್ಥದಲ್ಲಲ್ಲದೆ “ಕೋಪವನ್ನು ಪ್ರಯೋಗಿಸುವೆನು” ಎಂಬರ್ಥದಲ್ಲಿ ಗ್ರಹಿಸಬೇಕಾದ ವಾಗ್ರೂಢಿ.

ರಾವಣನಿಗೆ ಕುಂಭಕರ್ಣನು ನೀತಿ ಹೇಳಲು ಹೊರಟಾಗ ಅವನು “ಆದದ್ದಾಯಿತು. ನನ್ನಲ್ಲಿ ವಿಶ್ವಾಸವಿದ್ದರೆ ನೀನು ನನಗಾಗಿ ಸೆಣಸು” ಎನ್ನುತ್ತಾನೆ. ಈ ಸಂದರ್ಭದಲ್ಲಿ ಗತಂ ತು ಗತಮೇವ ಹಿ (೬೩.೨೫) ಎಂಬ ಮಾತು ಬಂದಿದೆ. ಇದು ಅಪ್ಪಟ ವಾಗ್ರೂಢಿ. ಸೀತೆಯನ್ನು ಪ್ರಲೋಭಿಸಬೇಕೆಂಬ ಮಹೋದರನ ಮಾತಿನ ನಡುವೆ ಸ್ತ್ರೀಲಘುತ್ವಮ್ (೬೪.೩೩) ಎಂಬ ಮಾತು ಬರುತ್ತದೆ. ಇದು “ಸ್ತ್ರೀಗೆ ಸಹಜವಾದ ಚಾಂಚಲ್ಯ” ಎಂಬರ್ಥದಲ್ಲಿ ಗ್ರಾಹ್ಯ. ಇದು ಲೋಕರೂಢಿಯ ಮಾತೇ ಹೌದು.

ರಾವಣನು ಲಕ್ಷ್ಮಣನ ಬಾಣಪ್ರಯೋಗವನ್ನು ಮೆಚ್ಚಿಕೊಳ್ಳುತ್ತ “ಇಂಥ ಬಾಣಪ್ರಯೋಗದ ಕಾರಣ ನನ್ನ ವೈರಿಯಾದರೂ ನೀನು ಹೊಗಳಿಕೆಗೆ ಅರ್ಹ” ಎನ್ನುತ್ತಾನೆ: ಸಾಧು ಬಾಣನಿಪಾತೇನ ಶ್ಲಾಘನೀಯೋऽಸಿ ಮೇ ರಿಪುಃ (೭೧.೭೬). ಇಲ್ಲಿ “ಬಾಣನಿಪಾತೇನ” ಎಂಬ ತೃತೀಯಾವಿಭಕ್ತಿಯ ಮಾತು ಕಾರಣವನ್ನು ಹೇಳುವಂತಿರುವುದು ಸ್ವಾರಸ್ಯಕರ. ಜೊತೆಗೆ “ಸಾಧು” ಎಂಬ ಅವ್ಯಯವೂ ಆಡುನುಡಿಯ ಸೊಗಡನ್ನು ತುಂಬಿದೆ.

ಮಕರಾಕ್ಷನ ಸಾವಿನ ಸುದ್ದಿಯನ್ನು ಕೇಳಿ ರಾವಣನು ಕೋಪದಿಂದ ಹಲ್ಲುಗಳನ್ನು ಕಟಕಟನೆ ಕಡಿದನಂತೆ: ದಂತಾನ್ ಕಟಕಟಾಪಯನ್ (೮೦.೧). ಇದಂತೂ ಅಪ್ಪಟ ಅನುಕರಣಶಬ್ದ; ಇಂದೂ ದೇಶಭಾಷೆಗಳಲ್ಲಿರುವ ಮಾತು.

ಇಂದ್ರಜಿತ್ತನ್ನು ನಿಕುಂಭಿಲೆಯ ಯಾಗಭೂಮಿಯಲ್ಲಿ ಎದುರಿಸುವಾಗ ವಿಭೀಷಣನು ಹೀಗೆ ಗೇಲಿಯ ಮಾತನ್ನಾಡುತ್ತಾನೆ: “ಯಜ್ಞಕಾರ್ಯವು ಮಧ್ಯದಲ್ಲಿಯೇ ನಿಂತುಹೋಯಿತೆಂದು ಬೇಸರಿಸಬೇಡ. ಲಕ್ಷ್ಮಣನ ಕೈಯಲ್ಲಿ ಸತ್ತ ನೀನು ಯಮಲೋಕದಲ್ಲಿ ಇದನ್ನು ಮುಗಿಸಬಹುದು!” ಹತಸ್ತ್ವಂ ದೇವತಾಕಾರ್ಯಂ ಕರಿಷ್ಯಸಿ ಯಮಕ್ಷಯೇ (೮೭.೩೦). ಈ ಮಾತಿನ ವ್ಯಂಗ್ಯ ಸ್ವಯಂವೇದ್ಯ. ಇಂಥ ವರಸೆಗಳು ಇಂದೂ ನಮ್ಮ ನಡುವೆ ಕೇಳಸಿಗುತ್ತವೆ. ಆಗಲೇ ಮತ್ತಷ್ಟು ಮುಂದುವರಿದು ವಿಭೀಷಣನು “ನೀನು ನಿನ್ನ ಎಲ್ಲ ಆಯುಧಗಳನ್ನೂ ಖಾಲಿ ಮಾಡು” ಎನ್ನುತ್ತಾನೆ: ಕುರುಷ್ವ ಸರ್ವಾಯುಧಸಾಯಕವ್ಯಯಮ್ (೮೭.೩೧). ಇದು ಇಂದ್ರಜಿತ್ತಿನ ಆಯುಧಗಳಷ್ಟೇ ಖಾಲಿಯಾಗುವುವಲ್ಲದೆ ಅವುಗಳಿಂದ ಕೆಲಸ ಮಾತ್ರ ಆಗುವುದಿಲ್ಲವೆಂಬ ಧ್ವನಿಯನ್ನೀಯುವ ಮಾರ್ಮಿಕವಾದ ವಾಗ್ರೂಢಿ.

ಇಂದ್ರಜಿತ್ತಿನ ಸಾವಿನ ಸುದ್ದಿ ಕೇಳಿದ ರಾಮ ಲಕ್ಷ್ಮಣನನ್ನು ಹೀಗೆ ಮೆಚ್ಚಿಕೊಳ್ಳುತ್ತಾನೆ: “ರಾವಣನ ಮಗ ಸತ್ತ ಬಳಿಕ ನಾವಿನ್ನು ಗೆದ್ದೆವೆಂದೇ ತಿಳಿ!” ರಾವಣೇರ್ಹಿ ವಿನಾಶೇನ ಜಿತಮಿತ್ಯುಪಧಾರಯ (೯೨.೮). ಇನ್ನೂ ಆಗಿಲ್ಲದ ಕೆಲಸ ಆಯಿತೆಂಬಂತೆ ಹೇಳುವುದು ಅದರ ಸೌಲಭ್ಯವನ್ನೇ ಧ್ವನಿಸುವುದಷ್ಟೆ. ಇದು ಆಡುನುಡಿಯ ಕಸುವು. ಅದನ್ನಿಲ್ಲಿ ಕಾಣಬಹುದು.

ಮೂರ್ಚ್ಛಿತನಾದ ರಾವಣನನ್ನು ರಣರಂಗದಿಂದ ಲಂಕೆಗೆ ಸಾಗಿಸುತ್ತಿದ್ದ ಸಾರಥಿಯು ತನ್ನ ಒಡೆಯನ ಆಕ್ಷೇಪಕ್ಕೆ ಉತ್ತರವೀಯುತ್ತ, “ನಾನು ಶತ್ರುಗಳೊಡನೆ ಸಂಚು ಹೂಡಿಲ್ಲ” ಎನ್ನುತ್ತಾನೆ: ನೋಪಜಪ್ತೋऽಸ್ಮಿ ಶತ್ರುಭಿಃ (೧೦೬.೧೧). “ಉಪಜಾಪ” ಎಂದರೆ ಚಾಡಿ, ಸಂಚು, ಹುನ್ನಾರ ಎಂದೆಲ್ಲ ಅರ್ಥಗಳುಂಟು. ಇದೊಂದು ಬಲಿಷ್ಠವಾದ ವಾಗ್ರೂಢಿ. ಅನಂತರ ರಾಮ-ರಾವಣರ ಯುದ್ಧ ಮೊದಲಾಗುತ್ತದೆ. ಗೆಲ್ಲಲೆಂದು ರಾಮನೂ ಸಾಯಲೆಂದು ರಾವಣನೂ ಸೆಣಸಿದರಂತೆ: ಜೇತವ್ಯಮಿತಿ ಕಾಕುತ್ಸ್ಥೋ ಮರ್ತವ್ಯಮಿತಿ ರಾವಣಃ (೧೦೯.೭). ಇಂಥ ಮಾತುಗಳನ್ನು ನಾವು ಇಂದೂ ಲೋಕದಲ್ಲಿ ಕೇಳುತ್ತೇವೆ. ಇದು ಆದಿಕವಿಗಳ ಲೋಕಭಾಷಾಪರಿಜ್ಞಾನಕ್ಕೆ ದೀಪಸಾಕ್ಷಿ.

ತನ್ನ ಅಣ್ಣನಿಗೆ ತಾನು ಅಂತ್ಯೇಷ್ಟಿ ಮಾಡುವುದಿಲ್ಲವೆಂದು ಹಿಂಜರಿದ ವಿಭೀಷಣನಿಗೆ ರಾಮನು ತಿಳಿಯಹೇಳುತ್ತ “ಇವನಿಗೆ ನೀನು ಅಂತ್ಯಕ್ರಿಯೆ ಮಾಡು. ರಾವಣ ನಿನಗೆ ಹೇಗೆ ಅಣ್ಣನೋ ಹಾಗೆಯೇ ನನಗೂ” ಎನ್ನುತ್ತಾನೆ: ಕ್ರಿಯತಾಮಸ್ಯ ಸಂಸ್ಕಾರೋ ಮಮಾಪ್ಯೇಷ ಯಥಾ ತವ (೧೧೪.೧೦೨). ಇದರ ಉತ್ತರಾರ್ಧವಂತೂ ಲೋಕರೂಢಿಯ ಮಾತಿಗೆ ಕನ್ನಡಿ ಹಿಡಿದಂತಿದೆ. ಅಷ್ಟೇಕೆ, ಇಡಿಯ ಈ ಶ್ಲೋಕವೇ ರಾಮನ ವ್ಯಕ್ತಿತ್ವಕ್ಕೂ ವಾಲ್ಮೀಕಿಮುನಿಗಳ ಕವಿತ್ವಕ್ಕೂ ಹೃದಯಂಗವಾದ ನಿದರ್ಶನ.

ಹನೂಮಂತನು ರಾಮವಿಜಯದ ವಾರ್ತೆಯನ್ನು ಸೀತೆಗೆ ತಿಳಿಸುವಾಗ ಮಹರ್ಷಿಗಳು ಅವಳನ್ನು ಪತಿದೇವಾ (೧೧೬.೩೧) ಎಂದು ವರ್ಣಿಸುತ್ತಾರೆ. ಯಾರಿಗೆ ಪತಿಯು ದೇವರೋ ಅಂಥವಳು “ಪತಿದೇವಾ” ಎನ್ನಿಸಿಕೊಳ್ಳುತ್ತಾಳೆ. “ಮಾತೃದೇವ”, “ಪಿತೃದೇವ” ಮುಂತಾದ ಉಪನಿಷತ್ತುಗಳ ಸಂವಾದಿಪ್ರಯೋಗಗಳಿಲ್ಲಿ ಸ್ಮರಣೀಯ.

ಇದೇ ಸಂದರ್ಭದಲ್ಲಿ ಸೀತೆಯನ್ನು ತೊಂದರೆಗೆ ಒಳಪಡಿಸಿದ ರಾಕ್ಷಸಿಯರನ್ನು ಹಿಂಸಿಸುವೆನೆಂದು ಹನೂಮಂತ ಹೇಳಿದಾಗ ಅವಳು ಒಪ್ಪುವುದಿಲ್ಲ. “ಆರ್ಯನು ಕರುಣೆ ತೋರಬೇಕು. ಯಾರು ತಾನೆ ತಪ್ಪು ಮಾಡುವುದಿಲ್ಲ?” ಎನ್ನುತ್ತಾಳೆ: ಕಾರ್ಯಂ ಕರುಣಮಾರ್ಯೇಣ ನ ಕಶ್ಚಿನ್ನಾಪರಾಧ್ಯತಿ (೧೧೬.೪೪). ಇಲ್ಲಿಯ ಕಡೆಯ ಮಾತು ನಾಣ್ನುಡಿಯೇ ಆಗಿದೆ.

ಶ್ರೀರಾಮನು ವಿಭೀಷಣನಿಗೆ ಸೀತೆಯ ಬಗೆಗೆ ತಿಳಿಸುವಾಗ “ಹೆಂಗಸರಿಗೆ ಚಾರಿತ್ರ್ಯವೇ ರಕ್ಷೆ” ಎನ್ನುತ್ತಾನೆ: ವೃತ್ತಮಾವರಣಂ ಸ್ತ್ರಿಯಾಃ (೧೦೬.೧೧). ಇದೊಂದು ಗಾದೆಮಾತಿನಂತಾಗಿದೆ. ಇದೇ ಸಂದರ್ಭದಲ್ಲಿ ಸೀತೆಯು ತನ್ನ ಅಸಹಾಯಕತೆಯನ್ನು ನಿವೇದಿಸುವಾಗ ರಾವಣನ ಸೆರೆಯಲ್ಲಿದ್ದ ತನಗೆ ತನ್ನ ಒಡಲ ಮೇಲೆ ಅಧಿಕಾರವಿರಲಿಲ್ಲ, ಹೀಗಾಗಿ ಅಸಹಾಯಳಾದ ತಾನು ಏನು ಮಾಡಬಹುದಿತ್ತು? ಎನ್ನುತ್ತಾಳೆ: ಪರಾಧೀನೇಷು ಗಾತ್ರೇಷು ಕಿಂ ಕರಿಷ್ಯಾಮ್ಯನೀಶ್ವರಾ (೧೧೯.೯). ಇಲ್ಲಿಯ “ಅನೀಶ್ವರಾ” ಎಂಬ ಮಾತು ಸೊಗಸಾದ ನುಡಿಗಟ್ಟಿನ ಸತ್ತ್ವವನ್ನು ಹೊಂದಿದೆ.

ಇಂದ್ರನಿಗೆ ರಾಮನು ತನ್ನ ನಿಲವನ್ನು ಸ್ಪಷ್ಟಪಡಿಸುವಾಗ ತಾನೆಂದೂ ಎರಡು ಮಾತಾಡಿಲ್ಲ ಎನ್ನುತ್ತಾನೆ: ದ್ವಿರ್ಮಯಾ ನೋಕ್ತಪೂರ್ವಂ ಹಿ (೧೦೬.೧೧). ಇದು ತನ್ನಂತೆಯೇ ಸಮರ್ಥವಾದ ನುಡಿಗಟ್ಟು.

ಭರತನು ರಾಮಾಗಮನದ ವಾರ್ತೆಯನ್ನು ಹನೂಮಂತನಿಂದ ತಿಳಿದು ಹರ್ಷಿಸುತ್ತಾನೆ. ಆದರೆ ಸಾಕಷ್ಟು ಹೊತ್ತು ಕಳೆದ ಬಳಿಕವೂ ಅಣ್ಣನ ಜಾಡು ಕಾಣದಿದ್ದಾಗ “ಏನಯ್ಯಾ, ನೀನು ಕಪಿಗಳಿಗೆ ಸಹಜವಾದ ಚಂಚಲತೆಯಿಂದ ಸುಳ್ಳು ಸುದ್ದಿ ಕೊಟ್ಟಿಲ್ಲ ತಾನೆ!” ಎಂದು ಕೇಳುತ್ತಾನೆ: ಕಚ್ಚಿನ್ನ ಖಲು ಕಾಪೇಯೀ ಸೇವ್ಯತೇ ಚಲಚಿತ್ತತಾ (೧೩೦.೨೨). ಇದು ಎಲ್ಲ ಕಾಲಕ್ಕೂ ಒದಗಿಬರಬಲ್ಲ ಪರಿಣಾಮಕಾರಿಯಾದ ವಿಡಂಬನೋಪಕ್ರಮ.

ಉತ್ತರಕಾಂಡ

ಸೀತಾಪವಾದದ ಸುದ್ದಿಯನ್ನು ಹೊತ್ತು ತಂದ ಭದ್ರನಿಗೆ ರಾಮನು “ಎಲ್ಲವನ್ನೂ ಇದ್ದುದು ಇದ್ದಹಾಗೆ ಹೇಳು. ಸ್ವಲ್ಪವನ್ನೂ ಉಳಿಸಿಕೊಳ್ಳಬೇಡ” ಎನ್ನುತ್ತಾನೆ: ಕಥಯಸ್ವ ಯಥಾತತ್ತ್ವಂ ಸರ್ವಂ ನಿರವಶೇಷತಃ (೪೩.೯). ಇಲ್ಲಿ “ಯಥಾತತ್ತ್ವಂ” ಎಂಬ ಮಾತು ಗಮನಾರ್ಹ. ಇಂದೂ ನಾವು ಈ ರೀತಿಯ ನುಡಿಗಟ್ಟನ್ನು ಬಳಸುತ್ತೇವೆ.

ಅಪಾಣಿನೀಯರೂಪಗಳು

ವಾಲ್ಮೀಕಿಮುನಿಗಳ ಕಾಲ ಪಾಣಿನಿಮಹರ್ಷಿಗಳ ಕಾಲಕ್ಕಿಂತ ಹಿಂದಿನದು. ಹೀಗಾಗಿ ಅಷ್ಟಾಧ್ಯಾಯಿಯ ನಿಯಮಗಳು ಆದಿಕವಿಗಳಿಗೆ ಅನ್ವಯಿಸುವುದಿಲ್ಲ. ಜೊತೆಗೆ, ರಾಮಾಯಣವು ಮಹರ್ಷಿಗಳ ರಚನೆ. ಹೀಗಾಗಿ ಆರ್ಷತ್ವದ ಗೌರವ ಇಲ್ಲುಂಟು. ಇವೆಲ್ಲ ಕಾರಣಗಳಿಂದ ಇಲ್ಲಿ ಬರುವ ಅಪಾಣಿನೀಯರೂಪಗಳನ್ನು ಯಾರೂ ವ್ಯಾಕರಣವಿರುದ್ಧವಾದ ಪ್ರಯೋಗಗಳೆಂದು ಭಾವಿಸುವುದಿಲ್ಲ. ಜೀವಂತವಾದ ಭಾಷೆಯೊಂದರ ಬೆಳೆವಣಿಗೆ ಹೇಗೆ ಆಯಿತೆಂಬ ತಥ್ಯವನ್ನು ಬಲ್ಲವರಿಗೆ ವ್ಯಾಕರಣದ ಸಾಧುತ್ವ-ಅಸಾಧುತ್ವಗಳಿಗಿಂತ ಮಿಗಿಲಾಗಿ ಇಂಥ ವ್ಯತ್ಯಾಸಗಳು ಉದ್ಬೋಧಕ ಮತ್ತು ಆಸ್ವಾದ್ಯ. ಈ ದೃಷ್ಟಿಯಿಂದ ಕೆಲವೊಂದು ಪದಗಳ ಪಟ್ಟಿಯನ್ನು ನಾವಿಲ್ಲಿ ಪರಿಶೀಲಿಸಬಹುದು:

(ಪಾಣಿನಿಸಮ್ಮತವಾದ ರೂಪಗಳನ್ನು ಪಕ್ಕದಲ್ಲಿಯೇ ಕೊಡಲಾಗಿದೆ ಕೊಡಲಾಗಿದೆ.)

ತ್ರಾಹಿ (೧.೬೦.೧೯) - ತ್ರಾಯಸ್ವ; ಆನಯಸ್ವ (೧.೬೧.೮) - ಆನಯ; ಶುಷ್ರೂಷ (೨.೨.೨೩) - ಶುಷ್ರೂಷಸ್ವ; ಕುರ್ಮಿ (೨.೧೨.೩೬) - ಕರೋಮಿ; ಸಹಿತುಮ್ (೨.೨೩.೧೧) - ಸೋಢುಮ್; ರುಷ್ಯ (೨.೯೭.೧೨) - ಪ್ರರುಷ್ಯ; ಲೋಭಯಾನಮ್ (೩.೪೪.೫) - ಲೋಭಯಂತಮ್; ಪ್ರಸ್ಫುರಮಾಣೋಷ್ಠಃ (೩.೫೯.೨೦) - ಪ್ರಸ್ಫುರದೋಷ್ಠಃ; ವಾಲುಕಸೇತವಃ (೩.೬೯.೫೦) - ವಾಲುಕಾಸೇತವಃ; ಶ್ಯಾಮೀಕೃತ್ವಾ (೪.೩೦.೨೪) - ಶ್ಯಾಮೀಕೃತ್ಯ; ಕ್ಷಮಿತವ್ಯಮ್ (೪.೩೬.೧೧) - ಕ್ಷಂತವ್ಯಮ್; ನಯಿತುಮ್ (೫.೩೭.೩೭) - ನೇತುಮ್; ದಾಶರಥಾಯ (೫.೯.೨೨) - ದಾಶರಥಯೇ; ಕಾಮಯಾನಸ್ಯ (೬.೫.೧೦) - ಕಾಮಯಮಾನಸ್ಯ; ಬ್ರೂಮಿ (೬.೯.೨೧) - ಬ್ರವೀಮಿ; ಗೃಹ್ಯ (೬.೧೬.೧೩) - ಪ್ರಗೃಹ್ಯ; ಚಿಂತಯಾನಸ್ಯ (೬.೪೬.೧೬) - ಚಿಂತಯಮಾನಸ್ಯ; ಪಶ್ಯಸ್ವ (೬.೪೮.೩೧) - ಪಶ್ಯ; ಅನುಶಾಸಸಿ (೬.೬೩.೨೩) - ಅನುಶಾಸ್ಸಿ; ಸೀದತೇ (೬.೮೪.೧೭) - ಸೀದತಿ; ಸಂಚೋದಯಾನಃ (೬.೯೦.೭) - ಸಂಚೋದಯಮಾನಃ; ಸ್ವಪ್ನಯಾನಃ (೬.೧೦೨.೭) - ಸ್ವಪ್ನಾಯಮಾನಃ; ಕರೇಣ್ವಃ (೬.೧೧೩.೫) - ಕರೇಣವಃ.

ಇಲ್ಲಿ ಸೂಚಿತವಾದ ಹಾಗೂ ತತ್ಸದೃಶವಾದ ಹಲಕೆಲವು ಪದಗಳನ್ನು ಭಾಸ-ಕಾಳಿದಾಸಾದಿಗಳೂ ತಮ್ಮ ಕೃತಿಗಳಲ್ಲಿ ಆಗೀಗ ಬಳಸಿರುವುದುಂಟು. ಈಚಿನವರಾದ ಶ್ರೀಧರ ಭಾಸ್ಕರ ವರ್ಣೇಕರ್, ರಾಧಾವಲ್ಲಭ ತ್ರಿಪಾಠಿ ಮುಂತಾದ ಎಷ್ಟೋ ಕವಿಗಳೂ ಪ್ರಯೋಗಿಸಿದ್ದಾರೆ. ಹೀಗೆ ಅಪಾಣಿನೀಯರೂಪಗಳನ್ನು ತಮಗೆ ಸರಿಕಂಡಂತೆ ಮುಂದಿನ ಕವಿಗಳು ಬಳಸಿಕೊಳ್ಳುವಲ್ಲಿಯೂ ವಾಲ್ಮೀಕಿಮುನಿಗಳ ಉಪಜೀವಿತೆಯನ್ನು ನಾವು ಗಮನಿಸಬಹುದು.

ಆದಿಕವಿಗಳ ಪದಸಂಪತ್ತಿ

ವಾಲ್ಮೀಕಿಮುನಿಗಳ ಕಥಾನಿರ್ವಾಹ ಅದೆಷ್ಟು ವಿಸ್ಮಯಾವಹವೋ ಕಾವ್ಯಕೌಶಲ ಅದೆಷ್ಟು ಹೃದಯಂಗಮವೋ ಬಗೆಬಗೆಯ ಪದಗಳನ್ನು ಬಳಸುವಲ್ಲಿ ಅವರು ತೋರುವ ಶ್ರೀಮಂತಿಕೆಯೂ ಅಷ್ಟೇ ಸ್ತವನೀಯ. ಮೂಲತಃ ಋಷಿಗಳಾಗಿ ವೈದಿಕಜೀವನವನ್ನು ಕೈಗೊಂಡಿದ್ದ ಅವರಿಗೆ ಆಶ್ರಮ, ಅಧ್ಯಯನ, ಅರಣ್ಯ, ಪ್ರಾಣಿಜೀವನ ಮುಂತಾದುವೆಲ್ಲ ತುಂಬ ನಿಕಟ, ಸಹಜ. ಹೀಗಾಗಿ ಇವುಗಳ ವರ್ಣನೆಯಲ್ಲಿ ಪದಸಮೃದ್ಧಿ ಕಂಡಲ್ಲಿ ಅದು ಅಚ್ಚರಿಯ ಸಂಗತಿಯಲ್ಲ. ಆದರೆ ಅರಮನೆಗಳು, ರಾಜಧಾನಿಗಳು, ನಗರವಾಸಿಗಳ ಜೀವನೋಪಯೋಗಿಯಾದ ವಸ್ತುಗಳು, ಯುದ್ಧದ ವಿವರಗಳು, ರಾಜನೀತಿಯ ಪರಿಭಾಷೆಗಳು ಮುಂತಾದ ಮತ್ತೆಷ್ಟೋ ಸಂಗತಿಗಳು ಅವರಲ್ಲಿ ಸಾರ್ಥಕವಾದ ಪದಪ್ರಯೋಗಗಳ ಮೂಲಕ ಪರಿಣಾಮಕಾರಿಯಾಗಿ ಬಂದಿವೆ. ಇದನ್ನು ಕಂಡಾಗ ಮಹಾಕವಿಯ ವಿದ್ಯಾವ್ಯಾಪ್ತಿ ಎಷ್ಟಿರಬೇಕೆಂಬ ಒಂದು ಅಂದಾಜು ನಮಗಾಗುತ್ತದೆ. ಈ ತಥ್ಯವನ್ನು ದಿಕ್ಸೂಚಿಯಾಗಿ ತೋರಲು ಆದಿಕವಿಗಳು ಬಳಸಿರುವ ಕೆಲವು ಪದಗಳ ಪಟ್ಟಿಯನ್ನಿಲ್ಲಿ ಕೊಡಲಾಗಿದೆ. ಆಸಕ್ತರು ಹೆಚ್ಚಿನ ವಿವರಗಳನ್ನು ಮೂಲದಲ್ಲಿಯೇ ಗಮನಿಸಿಕೊಳ್ಳಬಹುದು.

ಬೃಸೀ (೧.೪.೨೨) - ಚಾಪೆ; ಅಭಿಗೀತಮ್ (೧.೪.೨೭) - ಅತಿಶಯವಾಗಿ ಕೊಂಡಾಡಲ್ಪಟ್ಟದ್ದು; ವಧೂನಾಟಕಸಂಘಃ (೧.೫.೧೨) - ಸ್ತ್ರೀಯರಿಂದಲೇ ಸಾಗುತ್ತಿದ್ದ ನಾಟಕಮಂಡಲಿ; ಅಷ್ಟಾಪದಮ್ (೧.೫.೧೬) - ಪಗಡೆಯ ಹಾಸು; ಔಪವಾಹ್ಯಮ್ (೨.೧೬.೪೭) - ರಾಜನ ವಾಹನ; ಕ್ರೋಧಾಗಾರಮ್ (೨.೯.೨೨) - ಕೋಪಗೃಹ; ಕಿಶೋರೀ (೨.೯.೩೭) - ಹೆಣ್ಣು ಕುದುರೆ; ಕುಥಾಸ್ತರಣಮ್ (೨.೩೦.೧೪) - ರತ್ನಗಂಬಳಿ; ಭದ್ರಕಃ (೨.೩೨.೨೦) - ಕಡಲೆ; ಮೇಖಲೀ (೨.೩೨.೨೧) - ಬ್ರಹ್ಮಚಾರಿ; ವ್ಯಂಜನಮ್ (೨.೩೨.೨೧) - ನಂಚಿಕೆಯ ಪದಾರ್ಥ; ದುಶ್ಛದಃ (೨.೩೨.೩೨) - ಹರಕು ಬಟ್ಟೆ; ಏಕಪದೀ (೨.೬೩.೪೪) - ಕಾಲುದಾರಿ; ವರ್ಷವರಃ (೨.೬೫.೭) - ನಪುಂಸಕ; ದಮ್ಯಃ (೨.೭೩.೧೬) - ಎಳೆಯ ಕರು; ಭೂಮಿಪ್ರದೇಶಜ್ಞಃ (೨.೮೦.೧) - ನೆಲದ ಸ್ಥಿತಿ-ಗತಿ ಬಲ್ಲವನು; ಖನಕಃ (೨.೮೦.೧) - ಅಗೆಯುವವನು; ಯಂತ್ರಕಃ (೨.೮೦.೧) - ನೌಕೆ ಮುಂತಾದ ಯಂತ್ರಗಳನ್ನು ನಡಸುವವನು; ಕರ್ಮಾಂತಿಕಃ (೨.೮೦.೨) - ಕೂಲಿಯ ಕೆಲಸದವನು; ವರ್ಧಕಿಃ (೨.೮೦.೨) - ಬಡಗಿ; ಮಾರ್ಗೀ (೨.೮೦.೨) - ರಸ್ತೆ ಮಾಡುವವನು; ವೃಕ್ಷತಕ್ಷಕಃ (೨.೮೦.೨) - ಮರ ಕಡೆಯುವವನು; ಕೂಪಕಾರಃ (೨.೮೦.೩) - ಬಾವಿ ಅಗೆಯುವವನು; ಸುಧಾಕಾರಃ (೨.೮೦.೩) - ಸುಣ್ಣಗೆಲಸದವನು; ವಂಶಕರ್ಮಕೃತ್ (೨.೮೦.೩) - ಮೇದರವನು; ವೀರಣಸ್ತಂಬಃ (೨.೮೦.೮) - ಬಲವಾಗಿ ಬೇರುಬಿಟ್ಟ ಹುಲ್ಲಿನ ಪೊದೆ; ಗಣವಲ್ಲಭಃ (೨.೮೧.೧೨) - ಸೇನಾಪತಿ; ಗೋರಥಃ (೨.೮೨.೨೬) - ಎತ್ತಿನ ಬಂಡಿ; ಗಂಗಾನೂಪಃ (೨.೮೫.೪) - ಗಂಗಾನದಿಯ ಜೌಗು; ಸ್ವಸ್ತಿಕವಿಜ್ಞೇಯಃ (೨.೮೯.೧೧) - ಸ್ವಸ್ತಿಕಾಕಾರದ ನೌಕೆ; ಲೌಹೀ (೨.೯೧.೬೮) - ಲೋಹದ ಪಾತ್ರೆ; ಲಘುಮೂಲಮ್ (೨.೧೦೦.೧೯) - ಅಲ್ಪಪ್ರಯತ್ನದಿಂದ ಸಾಧ್ಯವಾದ ವ್ಯವಸ್ಥೆ; ಮಹೋದಯಃ (೨.೧೦೦.೧೯) - ದೊಡ್ಡ ಫಲವನ್ನು ಕೊಡುವ ವ್ಯವಸ್ಥೆ; ಅರ್ಥಕೃಚ್ಛ್ರಃ (೨.೧೦೦.೨೨) - ಆರ್ಥಿಕವಾದ ಸಂಕಟ; ಮಿಥ್ಯಾಭಿಶಸ್ತಃ (೨.೧೦೦.೫೯) - ಸುಳ್ಳು ಆಪಾದನೆಗೆ ಗುರಿಯಾದವನು; ಪಿಣ್ಯಾಕಃ (೨.೧೦೩.೧೪) - ಹಿಂಡಿ; ವ್ಯಾದಿತಾಸ್ಯಮ್ (೩.೨.೬) - ತೆರೆದ ಬಾಯಿ; ಮೃಧಮ್ (೩.೨.೧೪) - ಯುದ್ಧ; ಅವಟಃ (೩.೪.೨೨) - ಹಳ್ಳ; ನಾಲೀಕಃ (೩.೨೫.೨೫) - ಉಕ್ಕಿನ ತುದಿಯುಳ್ಳ ಬಾಣ; ನಾರಾಚಃ (೩.೨೫.೨೫) - ಉಕ್ಕಿನಿಂದಲೇ ನಿರ್ಮಿತವಾದ ಬಾಣ; ವಿಕರ್ಣೀ (೩.೨೫.೨೫) - ಅಂಕುಶದಂತೆ ತುದಿಯುಳ್ಳ ಬಾಣ; ಕಾದಲೀ, ಪ್ರಿಯಕೀ, ಪ್ರವೇಣೀ (೩.೪೩.೩೫) - ಬಗೆಬಗೆಯ ಜಿಂಕೆಯ ಚರ್ಮಗಳು; ಕೋಯಷ್ಟಿಕಃ (೩.೭೫.೧೮) - ಚಿಕ್ಕ ಬಿಳಿಯ ಕೊಕ್ಕರೆ; ಅರ್ಜುನಕಃ (೩.೭೫.೧೮) - ಬಿಳಿಯ ನವಿಲು; ಶತಪತ್ರಃ (೩.೭೫.೧೮) - ಮರಕುಟಕ; ರಾಜಹಾ (೪.೧೭.೩೪) - ರಾಜನನ್ನು ಕೊಂದವನು; ಬ್ರಹ್ಮಹಾ (೪.೧೭.೩೪) - ವಿಪ್ರನನ್ನು ಕೊಂದವನು; ಗೋಘ್ನಃ (೪.೧೭.೩೪) - ಗೋವನ್ನು ಕೊಂದವನು; ಪರಿವೇತ್ತಾ (೪.೧೭.೩೫) - ಅಣ್ಣನಿಗಿಂತ ಮುನ್ನ ಮದುವೆ ಮಾಡಿಕೊಂಡವನು ಅಥವಾ ಯಜ್ಞ ಮಾಡಿದವನು; ಸೂಚಕಃ (೪.೧೭.೩೫) - ಚಾಡಿಕೋರ; ಗುರುತಲ್ಪಗಃ (೪.೧೭.೩೫) - ತನಗೆ ಮಾತೃಸಮಾನರಾದ ಸ್ತ್ರೀಯರನ್ನು ಭೋಗಿಸಿದವನು; ಶಲ್ಯಕಃ (೪.೧೭.೩೮) - ಮುಳ್ಳುಹಂದಿ; ಶ್ವಾವಿಧಃ (೪.೧೭.೩೮) - ಕಾಡುಹಂದಿ; ಗೋಧಾ (೪.೧೭.೩೮) - ಉಡ; ಕಿಟ್ಟಃ (೪.೨೪.೧೮) - ಲೋಹಸಂಸ್ಕರಣದ ಬಳಿಕ ಉಳಿಯವ ಗಸಿ; ಕುಲಿಂಗಃ (೪.೫೮.೨೬) - ಗುಬ್ಬಚ್ಚಿಯಂಥ ಧಾನ್ಯಜೀವಿಯಾದ ಒಂದು ಬಗೆಯ ಪಕ್ಷಿ; ಬಲಿಭೋಜೀ (೪.೫೮.೨೬) - ಕಾಗೆ ಮತ್ತು ಅದರಂತೆಯೇ ಹಣ್ಣುಗಳನ್ನು ಕುಕ್ಕಿ ತಿನ್ನಬಲ್ಲ ಹಕ್ಕಿಗಳು; ಭಾಸಃ (೪.೫೮.೨೭) - ಹದ್ದು ಮತ್ತು ಅದರಂತೆಯೇ ಪ್ರಾಣಿಗಳ ಮಾಂಸವನ್ನು ಕುಕ್ಕಿ, ಕಿತ್ತು ತಿನ್ನಬಲ್ಲ ಹಕ್ಕಿಗಳು; ಕುರರಃ (೪.೫೮.೨೭) - ಹಾವಸೆಯನ್ನು ತಿಂದು ಬದುಕುವ ಒಂದು ಬಗೆಯ ಜಲಪಕ್ಷಿ; ಚರಣಯೋಧೀ (೪.೫೮.೩೨) - ಕೋಳಿ ಹಾಗೂ ಕಾಲಿನಿಂದ ಕೆದಕಿ ಆಹಾರವನ್ನು ಹುಡುಕಿಕೊಳ್ಳುವ ಹಕ್ಕಿಗಳು; ಮಡ್ಡುಕಃ (೫.೧೦.೩೮) - ಒಂದು ಬಗೆಯ ಮದ್ದಳೆ; ಪಟಹಃ (೫.೧೦.೩೯) - ತಮಟೆ; ಪಣವಃ (೫.೧೦.೪೩) - ಹಲಗೆ; ಡಿಂಡಿಮಃ (೫.೧೦.೪೪) - ನಗಾರಿ; ಆಪಾನಶಾಲಾ (೫.೧೨.೧೩) - ಹೆಂಡದಂಗಡಿ; ಪುಷ್ಪಗೃಹಮ್ (೫.೧೨.೧೩) - ಹೂವಿನ ಅಲಂಕಾರ ಮಾಡಿದ ಕೋಣೆ; ನಿಷ್ಕುಟಾಂತರರಥ್ಯಾ (೫.೧೨.೧೪) - ಉದ್ಯಾನದ ನಡುವಿನ ಬೀದಿ.

ಬಾಲಕಾಂಡದ ಇಪ್ಪತ್ತೇಳನೆಯ ಸರ್ಗದಲ್ಲಿ (೧.೨೭.೪-೨೦) ರಾಮನಿಗೆ ವಿಶ್ವಾಮಿತ್ರರು ಅನುಗ್ರಹಿಸಿದ ಅನೇಕ ಆಯುಧಗಳ ವಿವರಗಳು ಬರುತ್ತವೆ. ಉದಾಹರಣೆಗೆ: ದಂಡಚಕ್ರ, ಕಾಲಚಕ್ರ, ವಿಷ್ಣುಚಕ್ರ, ಬ್ರಹ್ಮಶಿರಸ್, ಐಷೀಕ, ಮೋದಕೀ, ಶಿಖರೀ, ವರುಣಾಸ್ತ್ರ, ಪಿನಾಕಾಸ್ತ್ರ, ನಾರಾಯಣಾಸ್ತ್ರ, ಆಗ್ನೇಯಾಸ್ತ್ರ, ಶಿಖರಾಸ್ತ್ರ, ವಾಯವ್ಯಾಸ್ತ್ರ, ಕಂಕಾಲ, ಮುಸಲ, ಕಾಪಾಲ, ವಿದ್ಯಾಧರಾಸ್ತ್ರ, ಗಾಂಧರ್ವಾಸ್ತ್ರ, ಪ್ರಸ್ವಾಪನಾಸ್ತ್ರ, ಮಾನವಾಸ್ತ್ರ, ಸೌರಾಸ್ತ್ರ ಮುಂತಾದುವು. ಇವುಗಳ ವಿವರಗಳನ್ನು ಮೂಲದಲ್ಲಿಯೇ ಗಮನಿಸಬಹುದು.

ಅಯೋಧ್ಯಾಕಾಂಡದ ನೂರನೆಯ ಸರ್ಗವಾದ ಕಚ್ಚಿತ್ಸರ್ಗದಲ್ಲಿ (೨.೧೦೦.೬೮-೬೯) ರಾಜನೀತಿಯ ಎಷ್ಟೋ ಅಂಶಗಳು ಬರುತ್ತವೆ. ದಶವರ್ಗ, ಪಂಚವರ್ಗ, ಚತುರ್ವರ್ಗ, ಸಪ್ತವರ್ಗ, ಅಷ್ಟವರ್ಗ ಮತ್ತು ತ್ರಿವರ್ಗಗಳು; ತ್ರಿವಿದ್ಯೆ, ಷಾಡ್ಗುಣ್ಯ, ದೈವ-ಮಾನುಷವ್ಯಸನಗಳು, ಭೇದಕೃತ್ಯ, ವಿಂಶತಿವರ್ಗ, ಪಂಚಪ್ರಕೃತಿ, ದ್ವಾದಶಮಂಡಲ ಮುಂತಾದ ಹತ್ತಾರು ಪರಿಭಾಷೆಗಳಿವೆ. ಇವುಗಳಲ್ಲಿ ಒಂದೊಂದರಲ್ಲಿಯೂ ಅನೇಕ ಉಪವಿಭಾಗಗಳಿವೆ. ಇವನ್ನೆಲ್ಲ ವಿದ್ವಾನ್ ಎನ್. ರಂಗನಾಥಶರ್ಮರು ತಮ್ಮ ಅನುವಾದದಲ್ಲಿ ನೀಡಿರುವ ಅನುಬಂಧಗಳ ಮೂಲಕ ಆಸಕ್ತರು ತಿಳಿಯಬಹುದು.

ಆದಿಕವಿಗಳು ಸರ್ವಾರ್ಥದಲ್ಲಿಯೂ ವಶ್ಯವಾಕ್ಕುಗಳು. ಭಾಷೆ ಅವರು ನಡೆಸಿದಂತೆ ನಡೆಯುತ್ತದೆ, ನುಡಿಸಿದಂತೆ ನುಡಿಯುತ್ತದೆ. ಯಾವುದೇ ಕಲ್ಪನೆಯನ್ನಾಗಲಿ, ಎಂಥದ್ದೇ ಕ್ರಿಯೆಯನ್ನಾಗಲಿ ಅನಾಯಾಸವಾಗಿ ಮಾತಿನ ಮೂಲಕ ಅವರು ಮುಂದಿರಿಸಬಲ್ಲರು. ಕಲ್ಪನೆಯನ್ನು ಸಾಕಾರಗೊಳಿಸುವುದು ಅಲಂಕಾರವಾದರೆ ಕ್ರಿಯೆಯನ್ನು ಕಂಡರಿಸುವುದು ಆಖ್ಯಾತರೂಪಗಳು. ವಿಶೇಷತಃ ನಮ್ಮ ಕಾಲಕ್ಕಿಂತ ತುಂಬ ಹಿಂದೆ ನಡೆದುಹೋದ ಘಟನೆಗಳನ್ನು ಹೇಳುವಾಗ ಸಂಸ್ಕೃತದಲ್ಲಿ ಸಾಮಾನ್ಯವಾಗಿ “ಲಿಟ್-ಲಕಾರ”ದ ಬಳಕೆಯುಂಟು. ಇದನ್ನು “ಪರೋಕ್ಷ-ಅನದ್ಯತನ-ಭೂತಕಾಲ”ವೆಂದು ಹೇಳುತ್ತಾರೆ. ಇಂಥ ಕ್ರಿಯೆಗಳ ನಿರೂಪಣೆಯಲ್ಲಿ ಆದಿಕವಿಗಳು ಶ್ರುತಿಹಿತಕರವಾದ ಎಷ್ಟೋ ಸಾರ್ಥಕಪದಗಳನ್ನು ಬಳಸಿದ್ದಾರೆ. ಅಂಥವಲ್ಲಿ ಕೆಲವನ್ನಿಲ್ಲಿ ಮಾದರಿಯಾಗಿ ನೋಡಬಹುದು:

ದುಧುವೇ (೫.೧.೩೨) - ಕೊಡವಿಕೊಂಡನು; ಚಕಂಪೇ (೫.೧.೩೨) - ನಡುಗಿದನು; ದದೃಶೇ (೫.೧.೩೪) - ನೋಡಲ್ಪಟ್ಟನು; ಸಿಷೇವೇ (೫.೧.೮೪) - ಸೇವಿಸಿದನು; ಪುಪ್ಲುವೇ (೫.೫೭.೪) – ತೇಲಿದನು. ಇವೇ ಮುಂತಾದವು ಆತ್ಮನೇಪದಿಯ ಪ್ರಥಮಪುರುಷ-ಏಕವಚನದ ರೂಪಗಳು. ನನಾದ (೫.೧.೩೨) - ನಾದ ಮಾಡಿದನು; ತತಾಪ (೫.೧.೮೪) - ತಪಿಸಿದನು; ಶುಶ್ರಾವ (೫.೪.೧೧) – ಕೇಳಿದನು. ಇವೇ ಮುಂತಾದವು ಪರಸ್ಮೈಪದಿಯ ಪ್ರಥಮಪುರುಷ-ಏಕವಚನದ ರೂಪಗಳು. ವಿವ್ಯಧುಃ (೫.೫೭.೪೨) - ಚುಚ್ಚಿದರು; ಚೇಲುಃ (೬.೬೯.೫೩) - ಚಲಿಸಿದರು; ಪೇತುಃ (೬.೬೯.೫೩) - ಬಿದ್ದರು; ನೇದುಃ (೬.೬೯.೫೩) - ಸದ್ದು ಮಾಡಿದರು; ಬಿಭಿದುಃ (೬.೬೯.೫೩) - ಭೇದಿಸಿದರು; ಜಘ್ನುಃ (೬.೬೯.೫೪) - ಹೊಡೆದರು; ಶೇಕುಃ (೬.೬೯.೭೭) – ಶಕ್ತರಾದರು. ಇವೇ ಮುಂತಾದವು ಪರಸ್ಮೈಪದಿಯ ಪ್ರಥಮಪುರುಷ-ಬಹುವಚನದ ರೂಪಗಳು.

ಹೀಗೆ ಬೇರೆ ಬೇರೆ ಲಕಾರಗಳಲ್ಲಿ, ಬೇರೆ ಬೇರೆ ಪುರುಷ-ವಚನಗಳಲ್ಲಿ ಧಾರಾಳವಾಗಿ ಕ್ರಿಯೆಗಳನ್ನು ಬಣ್ಣಿಸಬಲ್ಲ ಚಾತುರಿ ಮಹರ್ಷಿಗಳದು. ಒಂದೇ ಪದ್ಯದಲ್ಲಿ ಹತ್ತಾರು ಕ್ರಿಯೆಗಳನ್ನು ಅಡಕವಾಗಿ ಹೇಳುವ ಮೂಲಕವೇ ಅದೊಂದು ಬಗೆಯ ತುಮುಲದ ಸಂಕೀರ್ಣತೆಯನ್ನು ಚಿತ್ರಿಸಬಲ್ಲ ಕೌಶಲ ಅವರದು. ಇವೆಲ್ಲ ಆವರಣನಿರ್ಮಾಣಕ್ಕೂ ಶ್ರವಣಾಭಿರಾಮತೆಗೂ ಒದಗಿಬರಬಲ್ಲ ಸಾಧನಗಳು. ಇಂಥ ಬಾಣಗಳು ಆದಿಕವಿಗಳ ಬತ್ತಳಿಕೆಯಲ್ಲಿ ಅಸಂಖ್ಯ.

ಉಪಸಂಹಾರ

ಹೀಗೆ ವಾಗ್ರೂಢಿಯಿಂದಾಗಲಿ, ವಾಚೋಯುಕ್ತಿಯಿಂದಾಗಲಿ, ಸುಬಂತ-ತಿಙಂತ-ಕೃದಂತಗಳಿಂದಾಗಲಿ ತಮ್ಮ ಕಾವ್ಯನೌಕೆಯನ್ನು ಸಮರ್ಥವಾಗಿ ರಸಿಕರ ಹೃದಯತೀರಗಳಿಗೆ ತಲಪಿಸಿಬಲ್ಲ ಶಕ್ತಿ ಆದಿಕವಿಗಳಲ್ಲಿ ಅನ್ಯಾದೃಶವಾಗಿದೆ. ಅವರ ಮಹಾಕೃತಿಯನ್ನು ಸಂಗ್ರಹಾನುವಾದಗಳ ಮೂಲಕ, ಯಥಾವತ್ತಾದ ವಿಸ್ತೃತಾನುವಾದಗಳ ಮೂಲಕ ಬೇರೆ ಬೇರೆ ಭಾಷೆಗಳಲ್ಲಿ ಓದಿಕೊಂಡವರಿಗೆ ಕೈತಪ್ಪಿ ಹೋಗುವ ಇಂಥ ಸ್ವಾರಸ್ಯಗಳು ಎಷ್ಟೋ ಬಾರಿ ಮೂಲವನ್ನು ಓದುವವರ ಕಣ್ಣುಗಳಿಂದಲೂ ಮರೆಯಾಗುವ ಸಾಧ್ಯತೆಯುಂಟು. ಶುಷ್ಕಪಾರಾಯಣಕ್ಕೆ ತೆತ್ತುಕೊಂಡವರಿಗೆ ಇಂಥ ನಷ್ಟ ತುಂಬ ಸಂಭಾವ್ಯ. ಹೀಗಲ್ಲದೆ ಶ್ರೀಮದ್ರಾಮಾಯಣವನ್ನು ಏಕಕಾಲದಲ್ಲಿ ಜೀವನಸಂಹಿತೆಯಾಗಿ, ರಸವತ್ಕಾವ್ಯವಾಗಿ, ಸಂಸ್ಕೃತಿವಿಶ್ವಕೋಶವಾಗಿ, ಭಾಷಾಕೌತುಕವಾಗಿ ಕಾಣಬಲ್ಲವರಿಗೆ ಈ ಎಲ್ಲ ಸೂಕ್ಷ್ಮಗಳೂ ತಾವಾಗಿ ತೆರೆದುಕೊಳ್ಳುತ್ತವೆ. ಅಂಥ ಆಸಕ್ತರಿಗಾಗಿ ಪ್ರಾಥಮಿಕ ಅವಲಂಬನವೆಂಬೆಂತೆ ಹವಣಿಸಿಕೊಟ್ಟ ಈ ಪ್ರವೇಶಿಕೆ ರಾಮಾಯಣವನ್ನು ಮತ್ತಷ್ಟು ನಿಕಟವಾಗಿ ನೋಡುವಲ್ಲಿ ಸಹಕರಿಸಲೆಂದು ಆಶಿಸುತ್ತೇನೆ.

Concluded.


  1. ಈ ಕಾಂಡದಲ್ಲಿ ಮತ್ತೂ ಹಲವೆಡೆ ಕೈಕೇಯಿಯನ್ನು ಪರಿಪರಿಯಾಗಿ ಹಳಿಯಲಾಗಿದೆ. ಅಂಥ ಒಂದು ಪದ ಪಂಡಿತಮಾನಿನೀ (೭೨.೪೭). ತಾನು ಪ್ರಾಜ್ಞೆಯೆಂದು ಭಾವಿಸಿಕೊಂಡವಳು ಪಂಡಿತಮಾನಿನೀ. ಆದರೆ ವಸ್ತುತಃ ಅವಳು ಪ್ರಾಜ್ಞಳಲ್ಲವೆಂಬುದು ಈ ಶಬ್ದದ ಅರ್ಥ. ಮತ್ತೊಂದು ಸಂದರ್ಭದಲ್ಲಿ ಭರತನು ತನ್ನ ತಾಯನ್ನು ಮಾತೃಗಂಧಿನೀ (೭೯.೧೨) ಎಂದು ನಿಂದಿಸುತ್ತಾನೆ. ಸಾಕ್ಷಾತ್ತಾಗಿ ತಾಯಿಯೆನಿಸದೆ ತಾಯಿಯನ್ನು ಅಲ್ಪಾಂಶದಿಂದ ಹೋಲುವಂಥವಳು—ಅರ್ಥಾತ್ ಕೆಟ್ಟ ತಾಯಿ—ಎಂಬುದು ಈ ಶಬ್ದದ ಅರ್ಥ. ಇದೊಂದು ಮೊನಚಾದ ನುಡಿಗಟ್ಟು. ಲಕ್ಷ್ಮಣನು ಅರಣ್ಯಕಾಂಡದಲ್ಲಿ ಈಕೆಯನ್ನು ಕ್ರೂರದರ್ಶಿನೀ (೧೬.೩೫) ಎಂದು ಹಳಿಯುತ್ತಾನೆ. ಕೈಕೇಯಿಯು ಕೆಟ್ಟ ನಡವಳಿಕೆಯವಳೆಂದು ಇದರ ತಾತ್ಪರ್ಯ. ಇದರ ಶಬ್ದಶಕ್ತಿಯು “ಕೆಟ್ಟದ್ದನ್ನೇ ಕಾಣುವವಳು” ಎಂಬ ಅರ್ಥವನ್ನೂ ಹೊರಡಿಸಬಲ್ಲುದು. ↩︎