Surapura kRShNaH

ದಿನಕ್ಕೊಬ್ಬ ಮಾಹುಲಿ ವಿದ್ಯಾಸಿಂಹಾಚಾರ್ಯರ ಶಿಷ್ಯರ ಪರಿಚಯ :-

೨) ಪಂ ಕೃಷ್ಣಾಚಾರ್ಯ ಸುರಪೂರ (ನಾಸಿಕ) :-

ಸುರಪೂರ ಮನೆತನದಲ್ಲಿ ರುಕ್ಮಿಣೀಬಾಯಿ ವಿಠಲಾಚಾರ್ಯ ದಂಪತಿಗಳಲ್ಲಿ ಜನಿಸಿದಂಥ ಇವರು ಪರಮಪೂಜ್ಯ ೧೦೦೮ ಶ್ರೀ ಸತ್ಯಧ್ಯಾನತೀರ್ಥರಿಂದ ಅನುಗೃಹೀತವಾದ ಶ್ರೀ ಸತ್ಯಧ್ಯಾನ ವಿದ್ಯಾಪೀಠದಲ್ಲಿ ಪೂಜ್ಯ ಮಾಹುಲಿ ಗೋಪಾಲಾಚಾರ್ಯರರಲ್ಲಿ ಪ್ರಾಥಮಿಕ ತರ್ಕ, ವ್ಯಾಕರಣ, ಸಾಹಿತ್ಯ ಗ್ರಂಥಗಳನ್ನು ಅಧ್ಯಯನ ಮಾಡಿ, ನಂತರ ಪೂಜ್ಯ ಮಾಹುಲಿ ವಿದ್ಯಾಸಿಂಹಾಚಾರ್ಯರಲ್ಲಿ ಸಮಸ್ತ ವೇದಾಂತ ಗ್ರಂಥಗಳನ್ನು ಅಧ್ಯಯನ ಮಾಡಿ, ವಿದ್ಯಾಸಿಂಹಾಚಾರ್ಯರು ಮುಂಬೈ ಮಹಾನಗರದಲ್ಲಿ ಪರಮಪೂಜ್ಯ ೧೦೦೮ ಶ್ರೀ ಸತ್ಯಪ್ರಮೋದತೀರ್ಥರ ಸನ್ನಿಧಿಯಲ್ಲಿ ನಡೆಸಿದಂಥ ಪ್ರಥಮ ಶ್ರೀಮನ್ನ್ಯಾಯಸುಧಾಮಂಗಳದಲ್ಲಿ ತಮ್ಮ ಸುಧಾಮಂಗಳ ನೆರವೇರಿಸಿ ಪಂಡಿತರಾದವರು ಸುರಪೂರ ಕೃಷ್ಣಾಚಾರ್ಯರು. ಸಾತ್ವಿಕರಾದ, ಸದಾಚಾರನಿಷ್ಠರಾದ ಇವರು ಅನೇಕ ವರ್ಷಗಳ ಕಾಲ ನಾಸಿಕ ಕ್ಷೇತ್ರದಲ್ಲಿದ್ದು ಅನೇಕ ಶಿಷ್ಯರನ್ನು ಪಡೆದು, ಪ್ರಕರಣಗ್ರಂಥಗಳು, ಶ್ರೀಮನ್ನ್ಯಾಯಸುಧಾ, ಶ್ರೀಮದ್ಭಾಗವತ ಮೊದಲಾದ ಗ್ರಂಥಗಳನ್ನು ಪಾಠಮಾಡಿ, ಮನೆಯಲ್ಲಿಯೇ ವಿದ್ಯಾರ್ಥಿಯನ್ನು ಇಟ್ಟುಕೊಂಡು ಸುಧಾದಿ ಗ್ರಂಥಗಳ ಪಾಠಮಾಡಿ, ಉತ್ತಮ ವಾಗ್ಮಿಗಳಾಗಿ, ಸ್ತೀಯರಿಗೆ ಶ್ರೀ ಹರಿಕಥಾಮೃತಸಾರ ಮೊದಲಾದ ಪಾಠ ಹೇಳಿ, ತಮ್ಮ ಶಿಷ್ಯರಿಂದ ಸುಮಾರು ಆರು ಕೋಟಿ ಶ್ರೀರಾಮಮಂತ್ರದ ಜಪ ಮಾಡಿಸಿ ಶ್ರೀ ಮಹಾಸ್ವಾಮಿಗಳ ಸನ್ನಿಧಿಯಲ್ಲಿ ಸಮರ್ಪಣೆ ಹೋಮ ಮಾಡಿಸಿ, ಪಾಠಪ್ರವಚನ ಮಾಡ್ತಾ, ಬಂದ ಅತಿಥಿಗಳಿಗೆ ಉತ್ತಮ ವ್ಯವಸ್ಥಾಪಕರಾಗಿ, ಅನೇಕ ಪ್ರಶಸ್ತಿ ಪುರಸ್ಕೃತರಾಗಿ, ಸುವರ್ಣಪದಕ ವಿಜೇತರಾಗಿ, ಅನೇಕ ಸಂಘ ಸಂಸ್ಥೆಗಳಿಂದ ಮಾನಿತರಾಗಿ, ಎಲ್ಲರಿಗೂ ಪ್ರೀತಿಪಾತ್ರರಾಗಿ, ಅನೇಕ ಸ್ವಾಮಿಗಳ ಗುರುಗಳ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ. ಅಂಥ ಕೃಷ್ಣಾಚಾರ್ಯರು ಇವತ್ತು ನಮ್ಮ ಜೊತೆಗೆ ಇಲ್ಲ ಅಂತನ್ನೋದೇ ದುಃಖದ ಸಂಗತಿ.

ಕೃಷ್ಣಾಚಾರ್ಯರ ಅಂತರ್ಯಾಮಿ ವಿದ್ಯಾಸಿಂಹಾಚಾರ್ಯರ ಅಂತರ್ಗತ ಶ್ರೀ ಸತ್ಯಧ್ಯಾನತೀರ್ಥರು ಅಂತರ್ಗತ ಮಧ್ವಮಾಮಾಧವರು ಎಲ್ಲರಿಗೂ ಅನುಗ್ರಹಿಸಲಿ.

ಸರ್ವೇ ಜನಾಃ ಸುಖಿನೋ ಭವಂತು !

ಸುಘೋಷಾಚಾರ್ಯ ಕೊರ್ಲಹಳ್ಳಿ